ಅರ್ಥಶಾಸ್ತ್ರ

ವಿಕಿಸೋರ್ಸ್ದಿಂದ

                                                                               ಅರ್ಥಶಾಸ್ತ್ರ
          ಕೊಡುವುದೂ ಅನುಭವಿಸಿದ್ಧವೆಂದು ಕುಮಾರಿಲಭಟ್ಟರೇ ಮುಂತಾದ ಪೂರ್ವಮೀಮಾಂಸಕರ ಸಿದ್ಧಾಂತ.ಇದಕ್ಕೆ ಅಭಿಹಿತನ್ವಯವಾದವೆಂದೂ ಹೆಸರಿದೆ.ಮೀಮಾಂಸಕರಲ್ಲೇ ಇನ್ನೊಂದು ಸಂಪ್ರದಾಯವನ್ನು ಆರಂಭಿಸಿದ ಪ್ರಭಾಕರಭಟ್ಟನ ಪ್ರಕಾರ ಪದಾರ್ಥಜ್ಞಾನದ ಆನಂತರ ವಾಕ್ಯಾರ್ಥ ಜ್ಞಾನ ಬರುವುದಿಲ್ಲ.ವಾಕ್ಯಾರ್ಥ ಜ್ಞಾನದ ಮೂಲಕವೇ ಪದಾರ್ಥಪ್ರತೀತಿಯುಂಟಾಗುತ್ತದೆ. ಭಾಷೆಯನ್ನು ಮೊತ್ತ ಮೊದಲು ಕಲಿಯಾರಂಭಿಸುವ ಬಾಲಕ ಹಿರಿಯರ ವಾಕ್ಯ ಪ್ರಯೋಗಗಲ ಸಂಸ್ಕಾರದಿಂದ ಈ ಶಬ್ದಕ್ಕೆ ಈ ಅರ್ಥವೆಂದು ಗ್ರಹಿಸುತ್ತಾನೆಂದು ಪ್ರಭಾಕರನ ವಾದ.ಇದಕ್ಕೆ ಅನ್ವಿತಾಭಿದಾನವಾದವೆಂದೂ ಹೆಸರಿದೆ.ಕುಮಾರಿಲನಿಗೆ ವಾಕ್ಯರ್ಥ ಪ್ರತೀತಿಯನ್ನು ವಿವರಿಸಲು ತಾತ್ಪರ್ಯವೆಂಬ ಶಕ್ತಿಯನ್ನು ಕಲ್ಪಿಸಬೇಕಾಗುತ್ತದೆ.ಪ್ರಭಾಕರನ ಅನುಯಾಯಿಗಳಿಗೆ ಅದನ್ನು ಬಿಟ್ಟರೂ ನಡೆಯುತ್ತದೆ.ವೇದಾಂತಿಗಳು ಕೂಡ ಸ್ಫೋಟನಿರಾಕರಣೆಯಲ್ಲಿ ಮೀಮಾಂಸಕರನ್ನು ಅನುಸರಿಸುತ್ತಾರೆ.
         ಶಬ್ದ-ಅರ್ಥ ಇವುಗಳು ಸಂಬಂಧವನ್ನು ವಿವರಿಸಲು ಅಭಿಧಾ,ಲಕ್ಷಣಾ ಮತ್ತು ವ್ಯಂಜನಾ ಎಂಬ ಶಬ್ದಶಕ್ತಿಗಳನ್ನು(ಅಥವಾ ಶಬ್ದವೃತ್ತಿ ಅಥವಾ ಶಬ್ದ ವ್ಯಾಪಾರ)ಉಲ್ಲೇಖಿಸುವುದು ಭಾರತೀಯ ದಾರ್ಶನಿಕರ ವೈಶಿಷ್ಟ್ಯ.ಒಂದು ಭಾಷೆಯನ್ನಾಡುವ ಸಮಾಜದಲ್ಲಿ ಬಹು ಜನರು ಒಪ್ಪಿರುವ ಮುಖ್ಯಾರ್ಥವನ್ನು ಭೋಧಿಸುವ ಶಬ್ದ ಶಕ್ತಿಯೇ ಅಭಿಧೆ.ಈ ಅರ್ಥಕ್ಕೆ ವಾಚ್ಯಾರ್ಥ,ಅಭಿಧೇಯ,ಸಂಕೇತಿತಾರ್ಥ ಎಂದೂ ನಾಮಾಂತರಗಳುಂಟು.ಈ ಶಕ್ತಿ ಈಶ್ವರನ ಇಚ್ಛಾಧೀನವೆಂದು ಮತ್ತೆ ತಾರ್ಕಿಕರಲ್ಲಿ ಕೆಲವರು ಹೇಳಿದರೆ,ಪುರುಷರ ಇಚ್ಛಾಧೀನವೆಂದು ಮತ್ತೆ ಕೆಲವರು ಹೇಳುತ್ತಾರೆ.ಮುಖ್ಯಾರ್ಥ ಅನ್ವಿತವಾಗದಂತಿದ್ದ ಪ್ರಯೊಗದಲ್ಲಿ ಅದಕ್ಕೆ ಸಂಬಂಧಿಸಿದ ಅಥವಾ ಹೋಲಿಕೆಯಿರುವ ಮತ್ತೊಂದು ಅರ್ಥವನ್ನು ಗ್ರಹಿಸಬೇಕಾಗುತ್ತದೆ.ಇಲ್ಲಿ ಕಾಣುವುದು ಲಕ್ಷಣಾಶಕ್ತಿ.ಈ ಹುಡುಗನೊಬ್ಬ ಕತ್ತೆಯೆಂಬಲ್ಲಿ ಕತ್ತೆಯೆಂದರೆ ದಡ್ಡನೆಂಬುದು ಲಕ್ಶ್ಗ್ಯಾರ್ಥ.ಇವೆರಡನ್ನು ಪ್ರಾಯಿಕವಾಗಿ ಸಕಲ ದಾರ್ಶನಿಕರೂ ಒಪ್ಪುತ್ತಾರೆ.ಆದರೆ ವಕ್ತೃವಿನ ವೈಯಕ್ತಿಕ ಚಿತ್ತವೃತ್ತಿಗಳನ್ನೂ ಶ್ರೋತೃವಿನಲ್ಲುದಯಿಸುವ ಚಿತ್ತವೃತ್ತಿವಿಶೆಷಗಳನ್ನೂ ಇವೆರಡು ವಿವರಿಸಲಾರವು.ಇವುಗಳಿಂದಲೇ ಕಾವ್ಯಭಾಷೆ ತುಂಬಿರುವುದನ್ನು ರಸಿಕರು ಬಲ್ಲರು.ಆದ್ದರಿಂದ ಆನಂದವರ್ಧನನೇ ಮುಂತಾದ ಆಲಂಕಾರಿಕರು ವ್ಯಂಜಕತ್ವ ಅಥವಾ ಧ್ವನಿ ಎಂಬ ಮೂರನೆಯ ಶಬ್ದ ಶಕ್ತಿಯನ್ನು ಒಪ್ಪಬೇಕೆಂದು ಪ್ರಬಲವಾಗಿ ಸಾಧಿಸಿದ್ದಾರೆ.ಹೀಗೆ ಅರ್ಥದಲ್ಲಿ ವಾಚ್ಯಾರ್ಥ,ಲಕ್ಷ್ಯಾರ್ಥ,ವ್ಯಂಗ್ಯಾರ್ಥಗಳೆಂಬ ಮೂರು ಪ್ರಕಾರಗಳನ್ನು ಭಾರತೀಯರು ಗುರುತಿಸಿದ್ದಾರೆ.
        ಬೌದ್ಧ ದಾರ್ಶನಿಕರು ಕ್ಷಣಿಕವಾದಿಗಳಾದ್ದರಿಂದ ಇದಾವುದನ್ನೂ ಒಪ್ಪುವಂತಿಲ್ಲ.ಒಂದು ಶಬ್ದಕ್ಕೆ ಅದು ಇನ್ನೊಂದಿಲ್ಲವೆನ್ನುವುದೇ ಅರ್ಥವೆಂದು ಇವರು ವಾದಿಸುತ್ತಾರೆ.ಇದಕ್ಕೆ ಆಪೋಹವಾದವೆಂದು ಹೆಸರು.ಹಸುವೆಂದರೆ ಆಡಲ್ಲದು,ಕುರಿಯಲ್ಲದು,ಇತ್ಯಾದಿಯೇ ಎಂದು ಇವರ ವಿವರಣೆ.
        ಸಂಕೇತ ಅಥವಾ ಅಭಿಧಾಶಕ್ತಿ ಯಾವ ಯಾವ ರೀತಿಯ ಶಬ್ದಗಳಿಗೆ ಹೇಗೆ ಅನ್ವಯಿಸುತ್ತದೆಂಬ ಪ್ರಶ್ನೆಗೆ ಮೀಮಾಂಸಕರು ಎಲ್ಲ ಶಬ್ದಗಳಿಗೂ ಜಾತಿ ಅಥವಾ ಸಾಮಾನ್ಯವೇ(ಮನುಷ್ಯನಲ್ಲಿ ಮನುಷ್ಯತ್ವ,ಕಪಿಯಲ್ಲಿ ಕಪಿತ್ವ ಇತ್ಯಾದಿ)ಮುಖ್ಯಾರ್ಥವೆನ್ನುತ್ತಾರೆ.ಜಾತಿಭೋಧೆಯಲ್ಲಿ ವ್ಯಕ್ತಿಭೋಧೆ ಅಂತರ್ಗವೆಂದು ಅವರ ಅಭಿಪ್ರಾಯ.ಜಾತಿ,ಗುಣ,ಕ್ರಿಯೆ,ದ್ರವ್ಯ-ನಾಲ್ಕೂ ಮುಖ್ಯಾರ್ಥ ವಿಷಯಗಳೆಂದು ವೈಯಾಕರಣರ ಮತ.ಜಾತಿ,ಆಕೃತಿ,ವ್ಯಕ್ತಿ-ಈ ಮೂರು ಶಬ್ದಬೋಧದಲ್ಲಿ ಉಂಟೆಂದು ಪ್ರಾಚೀನ ನೈಯಾಯಿಕರ ಹೇಳಿಕೆ. (ಕೆ.ಕೆ)
       ಅರ್ಥಶಾಸ್ತ್ರ: ಸಂಪತ್ತು ಮತ್ತು ಕ್ಷೆಮಾಭ್ಯುದಯಶಾಸ್ತ್ರ ಎಂದು ಕೆಲವರ ಮತ;ಮಾನವ ತನ್ನ ಬಯಕೆಗಳನ್ನು ಪೂರೈಸಿಕೊಳ್ಳುವಲ್ಲಿ ಅನುಸರಿಸುವ ರೀತಿಯ ಅಧ್ಯಯನ ಎಂದು ಇತರರ ಮತ(ಎಕನಾಮಿಕ್ಸ್).ಸಮಾಜವಿಜ್ಞಾನಗಳಲ್ಲಿ ಅರ್ಥಶಾಸ್ತ್ರಕ್ಕೆ ಪ್ರಮುಖ ಸ್ಥಾನವಿದೆ.ಮಾನವನ ಆರ್ಥಿಕ ಸಮಸ್ಯೆಗಳ ಕೂಲಂಕಷಾಭ್ಯಾಸ ಮತ್ತು ಪರಿಹಾರಾನ್ವೇಷಣೆ ಅದರ ಧ್ಯೇಯ.ಮನುಷ್ಯನ ಬಯಕೆಗಳು ನಿರಂತರವಾಗಿ ಬೆಳೆಯುತ್ತವೆ. ಆಹಾರ,ವಸತಿ,ಬಟ್ಟೆ,ಅನುಕೂಲತೆ ವಿಶಿಷ್ಟದರ್ಜೆಯ ಸೇವೆ ಇತ್ಯಾದಿ.ಈ ಬಯಕೆಗಳ ತೃಪ್ತಿಗೋಸ್ಕರ ಪ್ರಕೃತಿಯ ಕೊಡುಗೆ,ಮನುಷ್ಯ ಪ್ರಯತ್ನ ಪರಸ್ಪರ ಪೂರಕವಾಗಿ ಮುಂದುವರಿಯಬೇಕು.ಬಯಕೆ,ಪ್ರಯತ್ನ,ತೃಪ್ತಿ ಈ ನಿರಂತರ ಚಕ್ರದ ಅಂಗವಾಗಿ ಉತ್ಪಾದನೆ,ವಿನಿಮಯ,ಅನುಭೋಗ ಇವೆ.ಇವುಗಳಿಂದ ಉಂಟಾಗುವ ಸಮಸ್ಯೆಗಳ ಅಭ್ಯಾಸ ಅರ್ಥಶಾಸ್ತ್ರ.
          ಸಂಪತ್ತು ಮತ್ತು ಕ್ಷೇಮಾಭ್ಯುದಯ ವ್ಯಾಖ್ಯೆ:ಆಡಮ್ ಸ್ಮಿತ್ ಮತ್ತು ಇನ್ನೂ ಇತರ ಪ್ರಾಚೀನ ಪಂಥದ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರಕ್ಕೆ ಈ ವ್ಯಾಖ್ಯೆ ನೀಡಿದರು.ಆಡಮ್ ಸ್ಮಿತ್ ತಾನು ಬರೆದ ಗ್ರಂಥವನ್ನು ರಾಷ್ಟ್ರಗಳ ಸಂಪತ್ತಿನ ಬಗ್ಗೆ ವಿಚಾರಮಥನ ಎಂದು ಕರೆದಿದ್ದಾನೆ.ಸಂಪತ್ತಿನ ಉತ್ಪಾದನೆ,ವಿನಿಮಯ ಮತ್ತು ವಿತರಣೆಗೆ ಸಂಬಂಧಿಸಿದ ಶಾಸ್ತ್ರ ಅರ್ಥಶಾಸ್ತ್ರ ಎಂದು ಅವನು ವ್ಯಾಖ್ಯಾನಿಸಿದ್ದಾನೆ.ಸಂಪತ್ತಿನ ಕ್ರೋಡೀಕರಣೆಯೇ ಪ್ರಮುಖ ಗುರಿಯಾಗಿದ್ದ ಅರ್ಥಶಾಸ್ತ್ರವನ್ನು ೧೯ ನೆಯ ಶತಮಾನದ ಆದಿಯಲ್ಲಿ ಧಾರ್ಮಿಕ ಬರೆಹಗಾರರುಗಳಾದ ಕಾರ್ಲೈಲ್,ರಸ್ಕಿನರೇ ಮೊದಲಾದವರು ನಿರುತ್ಸಾಹಿ ವಿಜ್ಞಾನ ಮತ್ತು ಐಶ್ವರ್ಯದೂತ ಎಂದು ವರ್ಣಿಸಿದರು. ಸಂಪತ್ತೇ ಪ್ರಧಾನ;ಮನುಷ್ಯ ಕೇವಲ ಸಂಪತ್ತನ್ನು ಆಶಿಸುವ ಆರ್ಥಿಕ ವ್ಯಕ್ತಿ ಎಂಬ ವಿಚಾರ ಸರಣಿ ಅನೇಕರಿಗೆ ಒಪ್ಪಿಗೆಯಾಗದೆ ಜನರು ಅರ್ಥವಿಜ್ಞಾವನ್ನು ಕೀಳಾಗಿ ನೋಡತೊಡಗಿದರು.ಆಡಮ್ ಸ್ಮಿತ್ ನವರ ವ್ಯಾಖ್ಯೆಯ ಲೋಪದೋಷಗಳನ್ನು ತೆಗೆದು ಹಾಕಿ ದಾರ್ಶನಿಕರ ಕಟುಟೀಕೆಯಿಂದ ಅದನ್ನು ವಿಮುಕ್ತಿಗೊಳಿಸಲು ಮಾರ್ಷಲ್,ಪಿಗೊ ಮುಂತಾದ ಅರ್ಥಶಾಸ್ತ್ರಜ್ಞರು ಪ್ರಯತ್ನಪಟ್ಟರು.ಮಾನವ ಕಲ್ಯಾಣವನ್ನು ಸಾಧಿಸಲು ಸಂಪತ್ತನ್ನು ಯಾವ ರೀತಿಯಲ್ಲಿ ಉಪಯೊಗಿಸಬೇಕೆಂದು ತಿಳಿಸುವ ಶಾಸ್ತ್ರ ಅರ್ಥಶಾಸ್ತ್ರ ಎಂದು ಇವರು ವಾದಿಸಿದರು.ಮಾರ್ಷಲ್ ಹೇಳಿರುವಂತೆ ಐಹಿಕ ಸಂಪತ್ತಿನ ಸಾಧನೆ ಮತ್ತು ಅದರ ಅನುಭೋಗ ಇವೇ ಅರ್ಥಶಾಸ್ತ್ರದ ಅಧ್ಯಯನ ವಿಷಯಗಳು.ಅರ್ಥಶಾಸ್ತ್ರ ಸಂಪತ್ತಿನ ವಿಜ್ಞಾನ ಮಾತ್ರವಲ್ಲ;ಮೂಲತಃ ಒಂದು ಮಾನವೀಯ ವಿಜ್ಞಾನ.ಮಾನವ ಸಂಪತ್ತು ಗಳಿಸಿ ತನ್ನ ಸುಖಕ್ಕಾಗಿಯೇ ಅದನ್ನು ಉಪಯೋಗಿಸುತ್ತಾನೆ.ಈ ಸಂಪಾದನೆ ಹಾಗೂ ಉಪಯೋಗಗಳನ್ನು ಅರ್ಥಶಾಸ್ತ್ರ ಪರಿಶೀಲಿಸುತ್ತದೆ.ಹೀಗೆ ಒಂದು ಕಡೆ ಸಂಪತ್ತಿನ ಪರಿಶೀಲನೆ ಮತ್ತು ಇನ್ನೊಂದು ಕಡೆ ಮುಖ್ಯವಾಗಿ ಮಾನವನ ಪರಿಶೀಲನೆ ಮಾಡುತ್ತದೆ.ಸಂಪತ್ತು ಮಾನವನಿಗೋಸ್ಕರ;ಮಾನವ ಸಂಪತ್ತಿಗೋಸ್ಕರವಲ್ಲ.ಸಂಪತ್ತು ಮಾನವಕಲ್ಯಾಣವನ್ನು ಸಾಧಿಸಲು ಒಂದು ಸಾಧನ.ಇದೇ ಮಾರ್ಷಲ್ ನ ವ್ಯಾಖ್ಯೆಯ ಸಾರಂಶ.ಮಾರ್ಷಲ್ ಮತ್ತು ಅವನ ಅನುಯಾಯಿಗಳು ಕೊಟ್ಟ ಕ್ಷೇಮಾಭ್ಯುದಯ ವ್ಯಾಖ್ಯೆ ಅರ್ಥಶಾಸ್ತ್ರದಲ್ಲಿ ಇದ್ದ ಕೆಲವು ತಪ್ಪುಭಾವನೆಗಳನ್ನು ಹೋಗಲಾಡಿಸಿ ಅದು ಮನುಷ್ಯನ ಸುಖ ಸಂಪತ್ತನ್ನು ಮತ್ತು ಕ್ಷೇಮಾಭ್ಯುದಯವನ್ನು ಸಾಧಿಸುವ ಶಾಸ್ತ್ರವಾಯಿತು.
      ವಿರಳತೆ ವ್ಯಾಖ್ಯೆ:ಬಯಕೆಗಳ ಪೂರೈಕೆ ಎಂದು ವಿವರಿಸುವ ಎರಡನೆಯ ಮತಕ್ಕೆ ಈ ಹೆಸರಿದೆ.ಲಯೋನಲ್ ರಾಬಿನ್ಸ್ ನ ಅರ್ಥಶಾಸ್ತ್ರದ ಸ್ವರೂಪವನ್ನು ಕುರಿತ ಪ್ರಸಿದ್ಧ ಪ್ರಬಂಧ(೧೯೩೨)ಅರ್ಥಶಾಸ್ತ್ರದ ವ್ಯಾಖ್ಯೆ ಮತ್ತು ವ್ಯಾಪ್ತಿಯ ಬಗ್ಗೆ ಹೊಸ ಚರ್ಚೆಯನ್ನು ಆರಂಭಿಸಿತು. ಹಿಂದಿನ ಲೇಖಕರಂತೆ ಸಂಪತ್ತಿನ ಅಥವಾ ಕ್ಷೇಮಾಭ್ಯುದಯದ ಗೊಡವೆಗೆ ರಾಬಿನ್ಸ್ ಹೋಗದೆ,ಒಂದು ನೂತನ ವಿಚಾರಸರಣಿಯನ್ನೇ ಮುಂದಿಟ್ಟ.ಮಾನವನ ಬಯಕೆಗಳು ಆಮಿತ;ಸಂತೃಪ್ತಿಸಬಲ್ಲ ಸಾಮಗ್ರಿಗಳು ವಿರಳ.ಈ ವಿರಳ ಸಾಮಗ್ರಿಗಳಿಂದ ಅತ್ಯಂತ ಹೆಚ್ಚಿನ ತೃಪ್ತಿಯನ್ನು ಪಡೆಯಲು ಮಾನವ ತನ್ನ ಅನೇಕ ಬಯಕೆಗಳಲ್ಲಿ ಆಯ್ಕೆ ಮಾಡಬೇಕಾಗುತ್ತದೆ.ಆದ್ದರಿಂದ ಆದ್ಯತೆ ಪಟ್ಟಿ ಮಾಡಬೇಕಾದ ಸಮಸ್ಯೆಗಳು ಉದ್ಭವಿಸುತ್ತದೆ.ಇವೇ ಮುಖ್ಯ ಆರ್ಥಿಕ ಸಮಸ್ಯೆಗಳು.ಅತ್ಯಂತ ಹೆಚ್ಚಿನ ತೃಪ್ತಿಯನ್ನು ಹೊಂದಲು ಸರಿಯಾದ ದಾರಿ ಯಾವುದೆಂಬುದು ಮಾನವನ ಆರ್ಥಿಕ ಸಮಸ್ಯೆ.ಅವನಿಗಿರುವ ಬಯಕೆಗಳು ಮಿತಿಯುಳ್ಳ ಮತ್ತು ವಿವಿಧ ಉಪಯೊಗಗಳಿಗೆ ಆಗುವ ಸಾಧನಗಳು.ಈ ಕಾರಣಗಳಿಂದ ಉದ್ಭವಿಸುವ ಆಯ್ಕೆ-ಈ ಪರಿಸ್ಥಿತಿಯಲ್ಲಿ ಮನುಷ್ಯ ನಡೆದುಕೊಳ್ಳುವ ರೀತಿಯನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರದ ಹೆಗ್ಗುರಿಯಾಗಿದೆ.ಇದು ರಾಬಿನ್ಸ್ ನ ವ್ಯಾಖ್ಯೆ ಒಳಗೊಂಡಿರುವ ಮುಖ್ಯಾಂಶ.
          ಅರ್ಥಶಾಸ್ತ್ರದ ಕ್ಷೇತ್ರ ನಿರೂಪಣೆಯಲ್ಲಿ ಈಗ ಮಾರ್ಷಲ್ ನ ದಾರಿಯನ್ನು ಅನುಸರಿಸುವವರೂ ಇದ್ದಾರೆ;ರಾಬಿನ್ಸ್ ದಾರಿಯನ್ನು ಅನುಸರಿಸುವವರೂ ಇದ್ದಾರೆ. ಕ್ಷೇಮಾಭ್ಯುದಯ ಮತ್ತು ಮಾನವನ ಸಾಮಾಜಿಕ ಸ್ವಭಾವ ಇವುಗಳಿಗೆ ಸರಿಯಾದ ಸ್ಥಾನವನ್ನು ರಾಬಿನ್ಸ್ ಕೊಟ್ಟಿಲ್ಲ;ಇದರಿಂದ ಮಾರ್ಷಲ್ ನ ವಿತರಣೆಯ ದೃಷ್ಟಿಕೋನವೇ ಸರಿ ಎಂದು ಕೆಲವು ಅರ್ಥವಿಜ್ಞಾನಿಗಳು ವಾದಿಸುತ್ತಾರೆ.ವಿರಳತೆ ಅಥವಾ ದುರ್ಬಲತೆ ಮತ್ತು ಇದರಿಂದ ಉದ್ಭವಿಸುವ ಸಮಸ್ಯೆಗಳ ಪರಿಶೀಲನೆಗೆ ಮಿತಿಗೊಳಿಸಿದ ಅರ್ಥಶಾಸ್ತ್ರ ವ್ಯಾಸಂಗಕ್ಷೇತ್ರದಲ್ಲಿ ಒಂದು ಏಕತೆ ಇದೆ.ಆದ್ದರಿಂದ ರಾಬಿನ್ಸ್ ನ ಮೇಲ್ಪಂಕ್ತಿ ಉತ್ತಮವಾದುದೆಂದು ಅನೇಕ ಅರ್ಥಶಾಸ್ತ್ರ ಬರೆಹಗಾರರ ಅಭಿಪ್ರಾಯ.ಇಂಥ ಭಿನ್ನಭಿಪ್ರಾಯಗಳು ಅನಿವಾರ್ಯ.ಮನುಷ್ಯ ಮತ್ತು ಸಮಾಜಕ್ಕೆ ಸಂಬಂಧಿಸಿದ ಅಧ್ಯಯನ ಅರ್ಥಶಾಸ್ತ್ರ;ಮಾನವನ ನಡವಳಿಕೆ,ಸಮಾಜದ ನ್ಯಾಯ,ನೀತಿ ಮತ್ತು ಆಗುಹೋಗುಗಳನ್ನು ನಿರ್ದಿಷ್ಟವಾಗಿ ಆರ್ಥಿಕ,ರಾಜಕೀಯ,ನೈತಿಕ ಇತ್ಯಾದಿಯಾಗಿ ಬೇರ್ಪಡಿಸುವುದು ಅಸಾಧ್ಯ.ಆದ್ದರಿಂದ ವಿವಿಧ ಸಮಾಜ ಶಾಸ್ತ್ರಗಳ ಎಲ್ಲೆಗಳೂ ಒಂದರೊಡನೆ ಒಂದು ಸೇರಿಹೋಗುವುವು.ಈ ಕಾರಣದಿಂದ ಅರ್ಥಶಾಸ್ತ್ರಕ್ಕೆ ಸರ್ವಸಮ್ಮತ ವ್ಯಾಖ್ಯೆಯನ್ನು ನೀಡುವುದಾಗಲಿ,ಎಲ್ಲೆಯನ್ನು ಮಿತಗೊಳಿಸುವುದಾಗಲಿ ಸುಲಭ ಕಾರ್ಯವಲ್ಲ.
         ಅರ್ಥಶಾಸ್ತ್ರ ಅತ್ಯಂತ ಉಪಯುಕ್ತವಾದ ಅಧ್ಯಯನಗಳಲ್ಲಿ ಒಂದು ಎಂಬ ಮನ್ನಣೆ ಪಡೆದಿದೆ.ಇದು ಕೇವಲ ಜ್ಞಾನಪ್ರಕಾರವಷ್ಟೇ ಆಗಿರದೆ ಫಲದಾಯಕವೂ ಆಗಿದೆ.ತಾತ್ತ್ವಿಕ ಅರ್ಥಶಾಸ್ತ್ರ(ಥಿಯೊರೆಟಿಕಲ್ ಇಕನಾಮಿಕ್ಸ್)ಸಮಸ್ಯಾ ವಿಶ್ಲೇಷಣೆಗೆ ಹೆಚ್ಚು ನಿರ್ಧಿಷ್ಟ ಮಾರ್ಗಗಳನ್ನು ತೋರಿಸಿದೆ.ಈ ಎರಡು ವಿಭಾಗಗಳ ಅಧ್ಯಯನದ ಮುನ್ನಡೆಯ ಫಲವಾಗಿ ಇಂದು ಅರ್ಥಶಾಸ್ತ್ರದ ಮಹತ್ತ್ವ ಹೆಚ್ಚಿದೆ.ವಿವಿಧ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ಅನುಕೂಲ ಪ್ರತಿಕೂಲಗಳನ್ನು ತಿಳಿಸಿ ಯೋಗ್ಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ನಮಗೆ ಸಹಾಯಕವಾಗಿದೆ.ಆಧುನಿಕ ಪ್ರಪಂಚದಲ್ಲಿ ಸುಶಿಕ್ಷಿತ ನಾಗರಿಕರು ಅವರ ಜವಾಬ್ದಾರಿಗಳನ್ನು ಯೋಗ್ಯವಾಗಿ ನಿರ್ವಹಿಸಲು ತಿಳಿಯಬೇಕಾದ ವಿಷಯಗಳಲ್ಲಿ ಆರ್ಥಿಕಜ್ಞಾನ ಮುಖ್ಯವಾದುದು.