ಮಂಕುತಿಮ್ಮನ ಕಗ್ಗ - ಬ್ರಹ್ಮವಸ್ತು ಊಸರಬಳ್ಳಿಯೇ

ವಿಕಿಸೋರ್ಸ್ದಿಂದ

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ
ಬ್ರಹ್ಮವಸ್ತು ಊಸರವಳ್ಳಿಯೇ?

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ವವೆಲ್ಲಿಯೊ ಬೆದಕಿ ನರನು ||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೋ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ || ೩೪

(kakakakಕಷ್ಟಪಡುತಿರಲು+ಎನ್ನುವುದೇ)

ಈ ಸೃಷ್ಟಿಯ ಬಗ್ಗೆ ನಾವೆಷ್ಟು ಯೋಚಿಸಿದರೂ ಸಹ, ನಮ್ಮಲ್ಲಿ ಒಂದು ವಿಧವಾದ, ಸಂದೇಹ ಮತ್ತು ಅಳುಕು ಬೆಳೆಯುತ್ತ ಹೋಗುತ್ತದೆ.
ಇದರಲ್ಲಿ ಏನಾದರು ಸಿದ್ಧಾಂತವಿದೆಯೆಂದು ಹುಡುಕುತ್ತ ಹೋದರೆ, ಈ ಬ್ರಹ್ಮ ವಿಧಿಯ ಪ್ರಕಾರ ನಾವು ಕಷ್ಟಪಡುತ್ತಲೇ ಇರಬೇಕು. ಇಷ್ಟೇ ನಮ್ಮ ಅವಸ್ಥೆಯೆಂದೆನಿಸುತ್ತದೆ.

ಇರಬೊಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ || ೩೫

ಬಹಳಷ್ಟು ಕಾಲ ಯೋಚನೆ ಮಾಡಿ, ಕೆಲಸವನ್ನೂ ಮಾಡಿ, ಬ್ರಹ್ಮ ಈ ಜಗತ್ತನ್ನು ಸೃಷ್ಟಿ ಮಾಡಿದ.
ಅವನು ಅಷ್ಟು ಕಾಲ ಕಳೆದು ಕಷ್ಟಪಟ್ಟು ರಚಿಸಿ(ನಿರವಿಸು) ದ್ದುದನ್ನು, ಒಬ್ಬ ಮೃತಿ ಹೊಂದುವ ಮನುಷ್ಯ(ಮರ್ತ್ಯನರನು),
ಅರ್ಥಮಾಡಿಕೊಂಡು ಬಿಟ್ಟರೆ, ಇದನ್ನು ರೂಪಿಸಿದ ಅವನ ಹೆಚ್ಚುಗಾರಿಕೆಗೆ, ಒಂದು ಕೊರತೆ ಉಂಟಾಗುತ್ತದಲ್ವೆ? ಆದುದರಿಂದಲೇ
ಈ ಸೃಷ್ಟಿಯ ರಹಸ್ಯವನ್ನು ಪರಿಪೂರ್ನವಾಗಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು, ಅವನು ನಮಗೆ ಕೊಡಲಿಲ್ಲ.

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ? - ಮಂಕುತಿಮ್ಮ || ೩೬

(ಗೆಲ್ಲಲಿಲ್ಲ+ಇವನು+ಆ) (ಪರೀಕ್ಷೆ+ಓಳಗೆ+ಎಂದು)

ಈ ಜಗತ್ತಿನ ಸುತ್ತ ಮುಟ್ಟಲೂ ಆಡಂಬರ ಮತ್ತು ವೈಭವಗಳನ್ನು ಮುಚ್ಚಿಟ್ಟು (ಕವಿಸಿ).
ಯೋಗ್ಯವಲ್ಲದ ಕೆಟ್ಟ ದಾರಿಗಳಲ್ಲಿ(ಸಲ್ಲದ ಕುಮಾರ್ಗದೊಳು). ಮನುಷ್ಯನನ್ನು ನಡೆಸಿ, ನಂತರ, ಈ ಪ್ರೀಕ್ಷೆಯಲ್ಲಿ ನೀನು ಗೆಲ್ಲಲಿಲ್ಲವೆಂದು ಹೇಳುವುದು(ಸೊಲ್ಲಿಪುದು) ಸರಿಯೇನು?

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೋ? - ಮಂಕುತಿಮ್ಮ || ೩೭

(ವಿಷ್ವ+ದೇಹದ+ಒಳು+ಎನ್ನ) (ಮಾರ್ಪಡುತಲು+ಇಹವು) (ತವಕಪಡನು+ಏತಕೊ) (ಅವಿತುಕೊಂಡು+ಇಹುದು+ಏಕೋ)

ಈ ಸ್ರೂಷ್ಟಿಅಯ್ ಪ್ರತಿಯೊಂದರಲ್ಲೂ ಬ್ರಹ್ಮ ತಳೆದು ಬಂದಿದ್ದನ್ನೆಉವುದಾದರೆ, ಅವನ ವೇಷಗಳೇತಕ್ಕೋಸ್ಕರ ಬದಲಾವಣೆಯಾಗುತ್ತಿವೆ?
ತನ್ನ ಗುರುತನ್ನು(ಕುರುಹ) ನಮಗೆ ತೋರಿಸಲು ಆತುರಪಡದೆ, ಏತಕ್ಕಾಗಿ ಬಚ್ಚಿಟ್ಟುಕೊಂಡಿದ್ದಾನೇಯೋ, ನಮಗ ಅರ್ಥವಾಗುತಿಲ್ಲ.

ಬೇರೆಯಿಸಿ ನಿಮಿಷನಿಮಿಷಕಮೋಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯಂಶಾವ |
ತಾರದಿಂದಾರ್ಗೇನು? - ಮಂಕುತಿಮ್ಮ || ೩೮

(ನಿಮಿಷ+ನಿಮಿಷಕಂ+ಒಡಲ+ಬಣ್ಣಗಳ) (ಕಪಟಿಯ+ಅಂಶಾವತಾರದಿಂದ+ಆರ್ಗೆ+ಏನು)

ಪ್ರತಿಯೋಮ್ದು ನಿಮಿಷಕ್ಕು ಬಣ್ಣ ಬದಲಾಯಿಸುವ ಊಸರವಳ್ಳಿಯ ತರಹವೇನು ಈ ಪರಬ್ರಹ್ಮ?
ಈ ರೀತಿಯಾಗಿ ತನ್ನ ಪೂರ್ತಿದೇಹವನ್ನು ತೋರಿಸದಿರುವ, ಮೋಸದವನ ಒಂದು ಭಾಗ ಮಾತ್ರ ಕಾಣಿಸಿಕೊಳ್ಳುವಿಕೆಯಿಂದ(ಅಂಶಾವತಾರ), ನಮಗ ಆಗಬೇಕಾದುದ್ದೇನಿಲ್ಲ.


ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ