ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿನಿಬಿಸ್ಸಾವು

ವಿಕಿಸೋರ್ಸ್ದಿಂದ


ಪಶ್ಚಿಮ ಆಫ್ರಿಕ ತೀರದಲ್ಲಿರುವ ಒಂದು ದೇಶ. 1974ಕ್ಕೆ ಮೊದಲು ಇದು ಪೋರ್ಚುಗೀಸ್ ಸಾಗರೋತ್ತರ ಪ್ರಾಂತವಾಗಿತ್ತು. ಉ.ಅ. 10°52'-12°14' ಮತ್ತು ಪ.ರೇ. 13ಲಿ38'-16°43' ನಡುವೆ ಇದೆ. ಉತ್ತರದಲ್ಲಿ ಸೆನೆಗಲ್, ಪೂರ್ವ ಹಾಗೂ ದಕ್ಷಿಣದಲ್ಲಿ ಗಿನಿ ಗಣರಾಜ್ಯ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಇವೆ. ಇದರ ಸಮೀಪದಲ್ಲಿರುವ ಬಿಜಾಗೋಸ್ (ಬಿಸ್ಸಾಗೋಸ್) ದ್ವೀಪಸ್ತೋಮ ಮತ್ತು ಇತರ ದ್ವೀಪಗಳೂ ಇದರ ಆಡಳಿತಕ್ಕೆ ಒಳಪಟ್ಟಿವೆ. ವಿಸ್ತೀರ್ಣ 36,125 ಚ.ಕಿಮೀ ಜನಸಂಖ್ಯೆ 15,96,677 (2011) ರಾಜಧಾನಿ ಬಿಸ್ಸಾವು.


ಭೌತಲಕ್ಷಣ[ಸಂಪಾದಿಸಿ]

ಈ ಪ್ರದೇಶ ಉತ್ತರ-ದಕ್ಷಿಣ 193 ಕಿಮೀ ಪೂರ್ವ-ಪಶ್ಚಿಮ 322 ಕಿಮೀ ಮತ್ತು ತೀರಪ್ರದೇಶ 398 ಕಿಮೀ ಇದೆ. ಬಹುಭಾಗ ತಗ್ಗಿನಲ್ಲಿರುವ ಜೌಗಿನಿಂದ ಕೂಡಿದೆ. ಅತ್ಯುನ್ನತ ಪ್ರದೇಶ ಆಗ್ನೇಯ ಭಾಗದಲ್ಲಿ ಸು. 244 ಮೀ ಎತ್ತರದಲ್ಲಿದೆ. ಇದಕ್ಕೆ ಸೇರಿದ ದ್ವೀಪಗಳಲ್ಲಿ ಪ್ರಮುಖವಾದವು ಕಯೋ, ಪೆಸಿಕ್ಸ್, ಬಿಸ್ಸಾವು, ಏರಿಯೀಸ್, ಬೋಲಾಮ, ಕೋಮಾ ಮತ್ತು ಮೆಲೊ. ಹಿಂದೆ ಪೋರ್ಚುಗೀಸರು ಒಳಭಾಗಕ್ಕೆ ಹೋಗುವ ಮೊದಲು ತಂಗುದಾಣವಾಗಿ ಈ ದ್ವೀಪಗಳನ್ನು ಉಪಯೋಗಿಸುತ್ತಿದ್ದರು. 1890-1914ರ ವರೆಗೆ ಬೊಲಾಮ ದ್ವೀಪದಲ್ಲಿನ ಬೊಲಾಮ ಇದರ ರಾಜಧಾನಿಯಾಗಿತ್ತು. ಇಲ್ಲಿಗೆ ದೂರದಲ್ಲಿರುವ ವಿಷಗಾಸ್ ದ್ವೀಪಗಳು ದಟ್ಟವಾದ ಕಾಡುಗಳಿಂದ ಕೂಡಿದ್ದರಿಂದ ಅನೇಕ ವರ್ಷಗಳ ಕಾಲ ಆಫ್ರಿಕನ್ ಕಡಲ್ಗಳ್ಳರ ನೆಲೆಗಳಾಗಿದ್ದವು. ಬೈಬಾಕ್, ರೂಬೇನ್, ಅರಂಗೋಜಿನೊ, ರೋಕ್ಸಾ, ಗಾಲಿನಾಸ್, ಮೈಯೋ, ಪೊಲಿಲಾವೊ, ಉನೋ, ಅರಾಂಗೋ ಮತ್ತು ಉರಾಕೇನ್. ಇವು ವಿಷಗಾಸ್ ದ್ವೀಪಸ್ತೋಮದ ದ್ವೀಪಗಳಲ್ಲಿ ಪ್ರಮುಖವಾದವು ಈ ದೇಶದ ನದಿಗಳಲ್ಲಿ ಚಪ್ಪಟೆ ತಳದ ದೋಣಿಗಳ ಸಂಚಾರ ಸಾಧ್ಯವಿದೆ. ಪ್ರಮುಖ ನದಿಗಳು ಸೆನೆಗಲ್, ಗೇಬಾ, ಕಾಜೆವು, ಮನಸೋವ, ಕೋರುಬಲ್, ರೀಯೋಗ್ರ್ಯಾಂಡ್ ಡಿ ಬುಬಾ ಮತ್ತು ಕ್ಯಾಸೈನ್.


ವಾಯುಗುಣ, ಸಸ್ಯ, ಪ್ರಾಣಿಸಂಪತ್ತು[ಸಂಪಾದಿಸಿ]

ಇಲ್ಲಿಯ ವಾಯುಗುಣ ಸೆಕೆ ಮತ್ತು ತೇವದಿಂದ ಕೂಡಿದ್ದು ಜೂನ್-ನವೆಂಬರ್ವರೆಗೆ ಮಳೆಗಾಲ. ಡಿಸೆಂಬರ್-ಮೇ ವರೆಗೆ ಒಣಹವೆ ಇರುತ್ತದೆ. ತೀರಪ್ರದೇಶದಲ್ಲಿ ಮಾನ್ಸೂನ್ ವಾಯುಗುಣವಿರುತ್ತದೆ. ಇಲ್ಲಿಯ ಮಳೆ ಹಾಗೂ ಉಷ್ಣತೆಯಲ್ಲಿ ತೀವ್ರ ಏರುಪೇರುಗಳಿರುತ್ತವೆ. ಡಿಸೆಂಬರ್-ಮೇ ತಿಂಗಳುಗಳಲ್ಲಿ ಸರಾಸರಿ ಉಷ್ಣತೆ 23° ಸೆ (74° ಫ್ಯಾ), ಜೂನ್-ನವೆಂಬರ್ ವರೆಗೆ ಸರಾಸರಿ ಉಷ್ಣತೆ 28ಲಿ ಸೆ (83° ಫ್ಯಾ). ತೀರಪ್ರದೇಶದಲ್ಲಿ ವರ್ಷಕ್ಕೆ 241 ಸೆಂಮೀ ಮತ್ತು ಒಳನಾಡಿನಲ್ಲಿ 140 ಸೆಂಮೀ ಮಳೆಯಾಗುತ್ತದೆ. ಮೂರು ಸಸ್ಯವಲಯಗಳಿವೆ ತೀರದ ಜವುಗು ನೆಲ ಮತ್ತು ಬಯಲು ನೆಲ ಒಂದು ವಲಯ. ಇಲ್ಲಿ ಗುಲ್ಮ ಮತ್ತು ತಾಳೆ ಮರಗಳು ಬೆಳೆಯುತ್ತವೆ. ಕೆಲವು ಕಡೆ ಬತ್ತವನ್ನು ಬೆಳೆಯುತ್ತಾರೆ. ಒಳಭಾಗದ ಬಯಲು ಎರಡನೆಯ ವಲಯ. ಇದು ದಟ್ಟವಾದ ಕಾಡುಗಳಿಂದ ಕೂಡಿದೆ. ಮೂರನೆಯದು ಸವಾನ ಹುಲ್ಲುಗಾವಲು ವಲಯ. ಇಲ್ಲಿನ ಕಾಡುಗಳಲ್ಲಿ ಪೆಲಿಕನ್, ಫ್ಲೆಮಿಂಗೋ, ಮೊಸಳೆ, ಹಾವು, ಕಾಡೆಮ್ಮೆ, ಗೆಜ಼ಲ್, ಜಿಂಕೆ, ಚಿರತೆ ಮತ್ತು ಹಲವು ಬಗೆಯ ಕಡಲ ಹಕ್ಕಿಗಳಿವೆ. ಸಿಂಹಗಳು ಅಪರೂಪವಾಗಿ ಕಾಣಸಿಗುತ್ತವೆ. ನದಿಯ ಅಳಿವೆಗಳಲ್ಲಿ ಶಾರ್ಕ್ಗಳಿವೆ.


ಆರ್ಥಿಕತೆ[ಸಂಪಾದಿಸಿ]

ಈ ದೇಶದ ಆರ್ಥಿಕತೆ ಕೃಷಿ ಮತ್ತು ಪಶು ಸಂಪತ್ತನ್ನು ಅವಲಂಬಿಸಿದೆ. ಬತ್ತ ಇಲ್ಲಿಯ ಮುಖ್ಯ ಆಹಾರ. ದ್ವೀಪಗಳಲ್ಲಿ ಹಾಗೂ ತೀರಪ್ರದೇಶದಲ್ಲಿ ಬತ್ತದ ಜೊತೆಗೆ ತಾಳೆಯ ಎಣ್ಣೆಯನ್ನೂ ಉತ್ಪಾದಿಸಲಾಗುತ್ತದೆ. ಫರೀಮ್ ಮತ್ತು ನೋವಾಲಾ ಮೆಗೊಗಳ ಸುತ್ತ ನೆಲಗಡಲೆ ಬೆಳೆಯುತ್ತಾರೆ. ಇದು ಪ್ರಮುಖ ಆರ್ಥಿಕ ಬೆಳೆ. ಇದರ ರಫ್ತು ದೇಶದ ಒಟ್ಟು ರಫ್ತಿನ ಶೇ. 60ರಷ್ಟಿದೆ. ಇಲ್ಲಿಂದ ರಫ್ತಾಗುವ ಕೆಲವು ಸರಕುಗಳು ಮರ, ತೆಂಗು, ಜೇನುಮೇಣ ಮತ್ತು ಚರ್ಮ.


ಕೈಗಾರಿಕೆ[ಸಂಪಾದಿಸಿ]

ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿದೆ. ಬಿಸ್ಸಾವಿನಲ್ಲಿ ಕೆಲವು ತೈಲ ಸಂಸ್ಕರಣ ಕೇಂದ್ರಗಳಿವೆ. ಇಲ್ಲಿ ತೈಲ ಹಾಗೂ ಬಾಕ್ಸೈಟ್, ತಾಮ್ರ, ರಂಜಕ ಮತ್ತು ಸತುವು ಇವುಗಳ ನಿಕ್ಷೇಪ ಹೆಚ್ಚಾಗಿದ್ದರೂ ಇದರ ಪರಿಶೋಧನ ಕಾರ್ಯ ಇನ್ನೂ ನಡೆಯಬೇಕಾಗಿದೆ. ಇಲ್ಲಿಯ ಇತರ ಕೆಲವು ಕೈಗಾರಿಕೆಗಳೆಂದರೆ ನೆಲಗಡಲೆ, ಅಕ್ಕಿ, ರಬ್ಬರ್, ಕಬ್ಬು, ಇವುಗಳ ಸಂಸ್ಕರಣ; ಸಾಬೂನು, ಕಾಗದ, ಸೆರಾಮಿಕ್ ಮತ್ತು ಇಟ್ಟಿಗೆ ತಯಾರಿಕೆ. ನೆಲಗಡಲೆ ಹಾಗೂ ಇತರ ಸರಕುಗಳನ್ನು ನದಿಗಳ ಮೇಲೆ ಸಾಗಿಸಲಾಗುತ್ತದೆ. ದೇಶದ ಪ್ರಮುಖ ಹೆದ್ದಾರಿ ಬಿಸ್ಸಾವಿನಿಂದ ಬಾಗಟವರೆಗೆ ಇದೆ. ಆಧುನಿಕ ಬಂದರು ಬಿಸ್ಸಾವಿನಲ್ಲಿದೆ. ಬಿಸ್ಸಾವಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಬಾಗಟ, ನೋವಾ, ಲೊಮೇಗೊ ಪಟ್ಟಣಗಳಲ್ಲಿ ವಿಮಾನ ನಿಲ್ದಾಣಗಳಿವೆ.


ಇಲ್ಲಿ ಅನೇಕ ಬುಡಕಟ್ಟುಗಳಿಗೆ ಸೇರಿದ ಜನರು ನೆಲಸಿದ್ದಾರೆ. ಬಲಾಂಟಿಗಳು ಶೇ. 30ರಷ್ಟಿದ್ದಾರೆ. ಇವರಲ್ಲದೆ ಫುಲಾನಿ (ಶೇ. 20), ಮಂಡ್ಯಾಕೋ (ಶೇ. 14), ಮಾಲಿಂಕೆ (ಶೇ. 12.5), ಪೆಪಲ್ (ಶೇ. 7), ಇತರರು (ಶೇ. 16.5) ಇದ್ದಾರೆ. ಇವರಲ್ಲಿ ಬಲಾಂಟಿಗಳು ವಿಸ್ತರಣಾಕಾಂಕ್ಷಿಗಳಾಗಿದ್ದು ರಾಷ್ಟ್ರೀಯತಾವಾದಿಗಳಾಗಿದ್ದಾರೆ, ಫುಲಾನಿಗಳು, ಮುಸ್ಲಿಮ್ ಸಂಪ್ರದಾಯವಾದಿಗಳು. ಇಲ್ಲಿಯ ಪ್ರಮುಖ ಧರ್ಮ ಇಸ್ಲಾಂ. ಸ್ಥಳೀಯ ಧರ್ಮದವರೂ ಕೆಥೊಲಿಕರೂ ಇದ್ದಾರೆ.


ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ಇಲ್ಲಿ 7 ರಿಂದ 13 ವರ್ಷದವರಿಗೆ ವಿದ್ಯಾಭ್ಯಾಸ ಕಡ್ಡಾಯ. ಶಾಲೆಗೆ ಬಾಲಕಿಯರಿಗಿಂತ ಬಾಲಕರ ದಾಖಲಾತಿ ಅಧಿಕವಾಗಿದೆ. ಅಲ್ಪ ಸಂಖ್ಯೆಯಷ್ಟು ಮಾತ್ರ ಅನಕ್ಷರಸ್ಥರಿದ್ದಾರೆ. ಅನೇಕ ಶಾಲೆಗಳಿವೆ. ಇಲ್ಲಿ ಅನೇಕ ಸ್ವಾಯತ್ತಾಧಿಕಾರದ ವಿಶ್ವವಿದ್ಯಾಲಯಗಳಿರುವುದು ವಿಶೇಷ. ಬಿಸ್ಸಾವಿನಲ್ಲಿ ಒಂದು ವಸ್ತು ಸಂಗ್ರಹಾಲಯವೂ ಒಂದು ಗ್ರಂಥಾಲಯವೂ ಇದೆ.


ಇತಿಹಾಸ[ಸಂಪಾದಿಸಿ]

ಈ ಪ್ರದೇಶದಲ್ಲಿ ಪ್ರ.ಶ.ಸು.1000 ವರ್ಷಗಳಿಗಿಂತ ಹಿಂದೆ ಕಡಲ ತೀರದಲ್ಲಿ ಕಬ್ಬಿಣದ ಉಪಕರಣಗಳನ್ನು ಉಪಯೋಗಿಸುತ್ತಿದ್ದ ರೈತರು ವಾಸಿಸುತ್ತಿದ್ದರು. ಇವರು ಬತ್ತವನ್ನು ಬೆಳೆದು ಅಕ್ಕಿಯನ್ನು ಉಪಯೋಗಿಸುತ್ತಿದ್ದರು. ಇದು ಮಾಲಿ ಸಾಮ್ರಾಜ್ಯದ, ಗಬು ರಾಜ್ಯದ ಭಾಗವಾಗಿತ್ತು. ಪೋರ್ಚುಗೀಸ್ ಅನ್ವೇಷಕರು 1446ರಲ್ಲಿ ಬರುವುದಕ್ಕೆ ಮೊದಲು ಇಲ್ಲಿ ಆಫ್ರಿಕದ ಕರಿಜನರ ಅನೇಕ ಗುಂಪುಗಳು ವಾಸಿಸುತ್ತಿದ್ದವು. ಇದು 1600 ರಿಂದ 1800ರ ವರೆಗೆ ಪೋರ್ಚುಗೀಸರ ಗುಲಾಮರ ವ್ಯಾಪಾರದ ನೆಲೆಯಾಗಿತ್ತು. 1879ರಲ್ಲಿ ಪೋರ್ಚುಗೀಸ್ ಗಿನಿ ಎಂಬ ವಸಾಹತಾಯಿತು. ಇದು 1951ರಲ್ಲಿ ಪೋರ್ಚುಗೀಸ್ ಸಾಗರೋತ್ತರ ಪ್ರಾಂತವಾಯಿತು.


ಆಫ್ರಿಕದಲ್ಲಿ 1950 ಮತ್ತು 1960ರ ದಶಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭವಾಯಿತು. 1956ರಲ್ಲಿ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯವಾದಿ ನಾಯಕರು ಆಫ್ರಿಕನ್ ಪಾರ್ಟಿ ಫಾರ್ ಇಂಡಿಪೆಂಡೆನ್ಸ್ ಆಫ್ ಗಿನಿ ಅಂಡ್ ಕೇಪ್ವರ್ಡೆ (ಪಿಎಐಜಿಸಿ) ಎಂಬ ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷವು ಪೋರ್ಚುಗೀಸ್ ಗಿನಿ ಮತ್ತು ಕೇಪ್ವರ್ಡೆ ದ್ವೀಪಸ್ತೋಮದ ಸ್ವಾತಂತ್ರ್ಯಕ್ಕೆ ಹೋರಾಟ ಪ್ರಾರಂಭಿಸಿತು. ಕೇಪ್ವರ್ಡೆ ದ್ವೀಪಸ್ತೋಮವು ಗಿನಿ ಬಿಸ್ಸಾವಿನ ವಾಯವ್ಯಕ್ಕೆ 764ಕಿಮೀ ದೂರದಲ್ಲಿದೆ. 1960ರ ಮೊದಲಲ್ಲಿ ಪಕ್ಷವು ಅನೇಕ ರೈತರಿಗೆ ಗೆರಿಲ ಕಾಳಗದ ತರಬೇತಿ ನೀಡಿತು. ಈ ಹೋರಾಟಕ್ಕೆ ಆಫ್ರಿಕದ ಎಡಪಂಥಿಯ ದೇಶಗಳು, ಕ್ಯೂಬ, ಚೀನ ಮತ್ತು ರಷ್ಯ ದೇಶಗಳಿಂದ ಶಸ್ತ್ರಾಸ್ತ್ರಗಳು ಗಿನಿ ಬಿಸ್ಸಾವು ದೇಶದ ನೆರೆಹೊರೆ ದೇಶಗಳ ಮೂಲಕ ಸರಬರಾಜು ಆಗುತ್ತಿತ್ತು. ರಾಷ್ಟ್ರೀಯವಾದಿ ಹೋರಾಟಗಾರರು ಅಧಿಕ ಪ್ರದೇಶವನ್ನು ವಶಪಡಿಸಿಕೊಂಡರು. ಈ ಹೋರಾಟಕ್ಕೆ 1973ರ ಜನವರಿಯಲ್ಲಿ ನಾಯಕ ಅಮಿಲ್ಕಾರ್ ಕಬ್ರಾಲ್ನ ಹತ್ಯೆಯಿಂದ ಸ್ವಲ್ಪ ಹಿನ್ನಡೆ ಉಂಟಾಯಿತು. 1973ರ ಸೆಪ್ಟೆಂಬರ್ 24ರಂದು ಸ್ವಾತಂತ್ರ್ಯ ಹೋರಾಟಗಾರರು ಏಕ ಪಕ್ಷವಾಗಿ ಸ್ವಾತಂತ್ರ್ಯವನ್ನು ಘೋಷಿಸಿದರು. ಪೋರ್ಚುಗಲ್ ಇದರ ಸ್ವಾತಂತ್ರ್ಯವನ್ನು 1974ರ ಏಪ್ರಿಲ್ 25ರಂದು ಒಪ್ಪಿಕೊಂಡಿತು. ಅಮಿಲ್ಕಾರ್ ಕಬ್ರಾಲ್ನ ಸಹೋದರ ಲೂಯಿಸ್ ಕಬ್ರಾಲ್ ಮೊದಲ ಅಧ್ಯಕ್ಷನಾದ. ಕೇಪ್ವರ್ಡೆ 1975ರಲ್ಲಿ ಸ್ವಾತಂತ್ರ್ಯ ಪಡೆಯಿತು. ಪಿಎಐಜಿಸಿ ಪಕ್ಷವು ಗಿನಿ ಬಿಸ್ಸಾವು ಮತ್ತು ಕೇಪ್ವರ್ಡೆ ದ್ವೀಪಸ್ತೋಮವನ್ನು ಒಂದೇ ಸರ್ಕಾರದ ಅಡಿಯಲ್ಲಿ ಒಂದು ಗೂಡಿಸಲು ಪ್ರಯತ್ನಿಸಿತು. ಸ್ವಾತಂತ್ರ್ಯಾನಂತರ ಪೋರ್ಚುಗೀಸ್ ಸೈನಿಕರ ಜೊತೆಗೂಡಿ ರಾಷ್ಟ್ರೀಯ ವಾದಿಗಳ ವಿರುದ್ಧ ಹೋರಾಡಿದ ಕರಿ ಜನಾಂಗದ ಸೈನಿಕರನ್ನು ಗೆರಿಲ ಸೈನಿಕರು ಹತ್ಯೆಮಾಡಿದರು. ಬಿಸ್ಸಾವು ನಗರದಲ್ಲಿ ಸಾಮೂಹಿಕ ಕಗ್ಗೊಲೆ ನಡೆಯಿತು. ಸರ್ಕಾರ ಅನೇಕರನ್ನು ಮರಣ ದಂಡನೆಗೆ ಗುರಿಪಡಿಸಿ ದೇಹಗಳನ್ನು ಗುಮೆರ, ಪೋರ್ಟೊಗೋಲಿ ಮತ್ತು ಮನ್ಸಬ ಅರಣ್ಯಗಳಲ್ಲಿ ಗೌಪ್ಯವಾಗಿ ಸಾಮೂಹಿಕ ಸಮಾಧಿ ಮಾಡಿತೆಂಬ ವಿಚಾರ ತಿಳಿದುಬರುತ್ತದೆ. 1980ರಲ್ಲಿ ಸೈನ್ಯದ ನಾಯಕರು ಸರ್ಕಾರವನ್ನು ಕಿತ್ತೊಗೆದು, ನ್ಯಾಷನಲ್ ಅಸ್ಲೆಂಬಿಯನ್ನು ರದ್ದು ಪಡಿಸಿದರು. ಸೈನ್ಯದ ಆಡಳಿತ ಮಂಡಲಿಯ ಅಧಿಕಾರವನ್ನು ಸ್ಥಾಪಿಸಿದರು. ಸೈನ್ಯದ ಸರ್ಕಾರ ಗಿನಿ ಬಿಸ್ಸಾವು ಮತ್ತು ಕೇಪ್ವರ್ಡೆ ದ್ವೀಪಸ್ತೋಮ ಒಂದಾಗುವುದನ್ನು ವಿರೋಧಿಸಿತು. ಸೈನ್ಯದ ಆಡಳಿತ ಮಂಡಲಿಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಜೊವೊ ಬೆರ್ನಾರ್ಡೊವಿಈರ ಅಧ್ಯಕ್ಷ. 1984ರಲ್ಲಿ ಸಂವಿಧಾನವನ್ನು ರಚಿಸಿ ಹೊಸ ನ್ಯಾಷನಲ್ ಅಸ್ಲೆಂಬಿಯನ್ನು ಪ್ರಾರಂಭಿಸಿದರು. ಜೊವೊ ಬೆರ್ನಾರ್ಡೊವಿಈರ ಅಧ್ಯಕ್ಷನಾಗಿ ಚುನಾಯಿತನಾದ. 1991ರ ವರೆಗೆ ಪಿಎಐಜಿಸಿ ಒಂದೇ ರಾಜಕೀಯ ಪಕ್ಷವಾಗಿತ್ತು. ಅದೇ ವರ್ಷ ಬೇರೆ ಪಕ್ಷಗಳಿಗೂ ಅವಕಾಶ ಕಲ್ಪಿಸಲಾಯಿತು. 1994ರ ಚುನಾವಣೆಯಲ್ಲಿ ಪ್ರಥಮವಾಗಿ ಅನೇಕ ಪಕ್ಷಗಳ ಚುನಾವಣೆ ನಡೆದು ವಿಈರ ಜಯಗಳಿಸಿ ಅಧ್ಯಕ್ಷನಾದ. ಬಂಡಾಯಗಾರರು 1999ರ ಮೇ ತಿಂಗಳಲ್ಲಿ ಇವನನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳಿಸಿದರು. ಆಗ ಅಸ್ಲೆಂಬಿಯ ಮುಖ್ಯಸ್ಥ ನಾಗಿದ್ದ ಮಲನ್ ಬಕೈ ಸಿನ್ಹ ಹಂಗಾಮಿ ಅಧ್ಯಕ್ಷನಾದ. 1999ರ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದು ಸೋಶಿಯಲ್ ಪಾರ್ಟಿಯ ಅಧಿಕ ಸದಸ್ಯರು ಚುನಾಯಿತರಾದರು. 2000ರ ಜನವರಿಯಲ್ಲಿ ಅನೇಕ ಪಕ್ಷದ ಕುಂಬ ಯಿಯಾಲ ಅಧ್ಯಕ್ಷನಾದ. ಪುನಃ 2003ರ ಸೆಪ್ಟೆಂಬರ್ನಲ್ಲಿ ದಂಗೆ ನಡೆದು ಈತನನ್ನು ಪದಚ್ಯುತಿ ಗೊಳಿಸಿದರು. 2004ರ ಮಾರ್ಚ್ನಲ್ಲಿ ಚುನಾವಣೆ ನಡೆಯಿತು. ಅಕ್ಟೋಬರ್ನಲ್ಲಿ ಸೈನ್ಯದ ಪಂಗಡಗಳ ದಂಗೆಯ ಸಮಯದಲ್ಲಿ ಸೈನ್ಯದ ಮುಖ್ಯಸ್ಥ ನಿಧನವಾದ. ವ್ಯಾಪಕ ಅಶಾಂತಿಗೆ ಕಾರಣವಾಯಿತು. 2005ರ ಜೂನ್ನಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಚುನಾವಣೆ ನಡೆದು ವಿಈರ ಅಧ್ಯಕ್ಷನಾದ. ಸೈನ್ಯದಲ್ಲಿ ಕೆಲವರು ಅಧ್ಯಕ್ಷನ ವಿರೋಧಿಗಳಿದ್ದರು. 2009ರ ಮಾರ್ಚ್ 1 ರಂದು ಭಾನುವಾರ ಸೈನ್ಯದ ಜಂಟಿ ಮುಖ್ಯಸ್ಥ ಜನರಲ್ ಬಟಿಸ್ಟ ಟಗ್ಮೆ ನ ವೈ ಬಾಂಬ್ ಸ್ಪೋಟದಿಂದ ಹತನಾದ. ಇದರಿಂದ ಉದ್ರಿಕ್ತಗೊಂಡ ಸೈನಿಕರ ಒಂದು ಗುಂಪು ಸೇಡು ತೀರಿಸಿಕೊಳ್ಳಲು ಅಧ್ಯಕ್ಷನನ್ನು ಹತ್ಯೆಗೈದಿತು. ನ್ಯಾಷನಲ್ ಅಸೆಂಬ್ಲಿಯ ಅಧ್ಯಕ್ಷನನ್ನು 2009ರ ಜೂನ್ 28ರ ಚುನಾವಣೆವರೆಗೆ ಹಂಗಾಮಿ ಅಧ್ಯಕ್ಷನಾಗಿ ಮಾಡಿದರು. ಚುನಾವಣೆಯಲ್ಲಿ ಮಲಮ್ ಬಕೈ ಸಿನ್ಹ ಅಧ್ಯಕ್ಷನಾಗಿ ಚುನಾಯಿತನಾದ. ಈತ 2012ರ ಜನವರಿ 9 ರಂದು ನಿಧನವಾದ ಅನಂತರ 2012ರ ಮೇ 11 ರಿಂದ ಮಾನ್ಯುಎಲ್ಸೆರಿಫೊ ನಹ್ಮದ್ಗೊ ಅಧ್ಯಕ್ಷರಾಗಿದ್ದಾರೆ.