ಪುಟ:ಕಥಾಸಂಗ್ರಹ ಸಂಪುಟ ೨.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ವಿಕಟ ಸಂಪಾತಿ ಶುಕ ಸಾರಣರೆಂಬುವರೇ ಮೊದಲಾದ ತನ್ನ ಮಕ್ಕಳು ಮೊಮ್ಮಕ್ಕಳು ಮಗಳ ಮಕ್ಕಳು ದಾಯಾದರು ನೆಂಟರು ಇಷ್ಟರು ಇವರುಗಳೊಡನೆ ಕೂಡಿ ರಸಾತ ಲದಿಂದ ಹೊರಟು ಭೂಲೋಕಕ್ಕೆ ಬಂದು ದಶಾನನನೇ ಮೊದಲಾದ ಮರು ಜನ ದೌಹಿತ್ರರನ್ನೂ ಕಾಣಿಸಿಕೊಳ್ಳಲು ಅವರು ತಮ್ಮ ಮಾತಾಮಹನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ ವಿನಯದಿಂದ ನಿಂತಿರಲು ಆಗ ಸುಮಾಲಿಯು ಸಂತೋಷ ದಿಂದ ಅವರನ್ನು ಬಿಗಿದಪ್ಪಿ ಹರಿಸಿ ಅವರಲ್ಲಿ ಜೇಷ್ಠನಾದ ದಶಮುಖನನ್ನು ನೋಡಿ ತಂದೆಯೇ ! ನೀನು ತಮ್ಮಂದಿರೊಡನೆ ಕೂಡಿ ಉಗ್ರವಾದ ತಪಸ್ಸನ್ನು ಮಾಡಿ ಬ್ರಹ್ಮ ದೇವನಿಂದ ವರವನ್ನು ಪಡೆದು ಈ ವರಿಗೂ ಭಯವೆಂಬ ಸಮುದ್ರದಲ್ಲಿ ಮುಳುಗಿ ಹೋಗಿದ್ದ ಅಶೇಷರಾಕ್ಷಸಕುಲವನ್ನೂ ಉದ್ಧಾರಮಾಡಿದೆ. ಇದೂ ಇವನು ಮಹೋ ದರನು ಇವನು ಪ್ರಹಸ್ತನು ಇವನು ಮಾರೀಚನು ಅವನು ಸುಪಾರ್ಶ್ವನು ಇವರು ನಾಲ್ಕು ಮಂದಿಯ ನಿನಗೆ ಸೋದರಮಾವಂದಿರು. ಈ ಸರ್ವರೂ ಸಾಮಾದು ಪಾಯಗಳಲ್ಲಿ ಸಮರ್ಥರು. ಇಲ್ಲಿಂದ ಮುಂದೆ ಇವರೆಲ್ಲರೂ ನಿನಗೆ ವಿಧೇಯರೂ ಸಹಾಯಕರೂ ಆಗಿರುವರು. ಲಂಕಾಪಟ್ಟಣವು ಮೊದಲು ನಾವು ಕಟ್ಟಿ ದುದು. ಆದರೂ ವಿಷ್ಣು ವಿನ ಭಯ ದಿಂದ ಅಲ್ಲಿ ನಿಲ್ಲಲಾರದೆ ನಾವೆಲ್ಲರೂ ಒಂದು ಕಾಲದಲ್ಲಿ ರಸಾತಲಕ್ಕೆ ಓಡಿಹೋದೆವು. ಅದೇ ಕಾಲದಲ್ಲಿ ನಿನ್ನ ಬಲತಾಯಿಯ ಮಗನಾದ ಕುಬೇರನು ಆ ಲಂಕಾನಗರವನ್ನು ಪ್ರವೇಶಿಸಿ ಅಲ್ಲಿ ವಾಸಮಾಡಿಕೊಂಡಿದ್ದಾನೆ. ನೀನು ನನಗೆ ದೌಹಿತ್ರನಾದುದರಿಂದ ಹೋಗಿ ಆತನನ್ನು ಅಲ್ಲಿಂದ ಹೊರಡಿಸಿ ಆ ಲಂಕಾನಗರ ವನ್ನು ಸ್ವಾಧೀನಮಾಡಿಕೊಂಡು ಅಲ್ಲಿಯೇ ರಾಜ್ಯಭಾರ ಮಾಡಿಕೊಂಡಿರು ಎಂದು ಹೇಳಿದನು. ಆ ಮಾತನ್ನು ಕೇಳಿ ದಶಮುಖನು-ಎಲೈ ಮಾತಾಮಹನೇ ! ನೀನು ಹೇಳಿದ ಮಾತು ನಿಜವೇ ಸರಿ. ಆದರೂ ಕುಬೇರನು ನನ್ನ ಅಣ್ಣನಲ್ಲವೇ ? ಆತನನ್ನು ಹೊರಡಿಸಿ ನಾನು ಅಲ್ಲಿರುವುದು ಉಚಿತವೇ ? ಹೇಳು ಎನಲು ಆಗ ಸುಮಾಲಿಯು ಗಹಗಹಿಸಿ ನಗುತ್ತ-ನೀನಿಂಥ ಮಾತುಗಳನ್ನಾ ಡಬಹುದೇ ? ಸಪಪುತ್ರರಿಗೆ ಸ್ವಭಾವವೆರವುಂ ಟೆಂದು ನೀತಿಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಅದು ಕಾರಣ ಕುಬೇರನು ನಿನಗೆ ವಿರೋಧಿಯೇ ಹೊರತು ಅಣ್ಣನೆಂದು ಎಂದಿಗೂ ಬಗೆಯದಿರು. ಇದೋ ಈ ಸಾಮ್ಯವನ್ನು ಕೇಳು. ಕಶ್ಯಪಮುನಿಗೆ ದಿತಿ ಅದಿತಿ ಎಂಬುವರಿಬ್ಬರೂ ಪತ್ನಿಯರು. ಅವರೊಳಗೆ ದಿತಿಯಲ್ಲಿ ದೈತ್ಯರೂ ಅದಿತಿಯಲ್ಲಿ ಆದಿತೇಯರೂ ಹುಟ್ಟಿದರು. ಈಗ ಅವರವರ ಭ್ರಾತೃತ್ವವು ಹೇಗಿದೆ, ನೋಡು. ದೇವತೆಗಳು ತಮಗಿಂತಲೂ ಅಗ್ರಜರೆಂದು ಭಾವಿಸಿ ದೈತ್ಯರನ್ನು ಸಂಹರಿಸದೆ ಬಿಟ್ಟರೇ ? ಈಗ ನೀನು ಅಣ್ಣನೆಂದು ಭಕ್ತಿಯಿಂದ ಹಿಂದೆಗೆದರೆ ಆ ಮೇಲೆ ಕುಬೇರನು ನಿನ್ನನ್ನು ಕೊಲ್ಲದೆ ಬಿಡುವನೇ ? ಇಲ್ಲವು. ಅದು ಕಾರಣ ನೀನು ಈಗಲೇ ನಾನು ಹೇಳಿದಂತೆ ಮಾಡು ಎಂದನು. ಆ ಮೇಲೆ ಖಳನಾದ ದಶಕಂಧರನು ಅವನ ಮಾತಿಗೆ ಒಪ್ಪಿಕೊಂಡು ಕೂಡಲೆ ಪ್ರಹಸ್ತನನ್ನು ಕರೆದು-ಎಲೈ ಸೋದರಮಾವನೇ ! ನೀನು ಮೊದಲು ನಮ್ಮಣ್ಣನ ಬಳಿಗೆ ಹೋಗಿ-ನೀನಿರುವ ಈ ಲಂಕಾನಗರವು ನಮ್ಮ