ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಕಥಾಸಂಗ್ರಹ-೫ ನೆಯ ಭಾಗ ಪಡೆದ ಮಹಾವರಗಳಿಗೆ ಸಾಫಲ್ಯವುಂಟಾಗದೆ ಹೋಗುವುದು ಎಂದು ಹೇಳಿದನು. ಅದನ್ನು ಕೇಳಿ ಬಲಿಯು ಯೋಚಿಸಿ ಯುಕ್ತವೆಂದು ತಿಳಿದು ಆಚಾರ್ಯರನ್ನು ಕುರಿತು ಸ್ವಾಮಿಾ ! ಪುತ್ರನಾದ ನನ್ನಲ್ಲಿ ನಿರಂತರವೂ ಪೂರ್ಣದಯೆಯುಳ್ಳವರಾದ ನೀವೇ ಸುರಲೋಕಕ್ಕೆ ಬಿಜಯಂಗೆಯು ಮೊದಲು ಸುರಗುರುಗಳಾದ ಬೃಹಸ್ಪತಾಚಾರ್ಯ ರನ್ನು ಕಂಡು ಅವರಡಿದಾವರೆಗಳಿಗೆ ನನ್ನ ಭಯಭಕ್ತಿಪೂರ್ವಕಗಳಾದ ವಂದನೆಗಳನ್ನು ತಿಳಿಸಿ ಅನಂತರದಲ್ಲಿ ಈ ಮಾತುಗಳನ್ನು ತಿಳಿಸಬೇಕು. ಅವು ಯಾವುವೆಂದರೆ--ಮಹಾ ತ್ಮರಾದ ನೀವು ದೇವೇಂದ್ರನಿಗೆ ಗುರುಗಳಾಗಿ ಹೇಗೆ ಮಾನ್ಯರಾಗಿದ್ದೀರೋ ಅದೇ ಮೇರೆಗೆ ನನಗೂ ಗುರುಗಳ ಮಾನ್ಯರೂ ಆಗಿದ್ದೀರಿ. ದೇವತೆಗಳಿಗೂ ದೈತ್ಯರಿಗೂ ಆ ಜನ್ಮ ಸಿದ್ದವಾದ ವೈರವುಂಟೆಂದು ಸರ್ವಜ್ಞರಾದ ತಮಗೆ ವೇದ್ಯವಾಗಿಯೇ ಇದೆ. ನಮ್ಮ ಮುತ್ತಜ್ಜನಾದ ಹಿರಣ್ಯಕಶಿಪುವು ಸ್ವಾತಂತ್ರ್ಯದಿಂದ ಆಳುತ್ತಿದ್ದ ತ್ರಿಲೋಕಾಧಿಪತ್ಯವನ್ನು ಆತನು ಸತ್ತು ಹೋದ ಮೇಲೆ ದೇವೇಂದ್ರನು ಬಲಾತ್ಕಾರದಿಂದ ಆಳುತ್ತ ಬಂದಿದ್ದಾನೆ. ಈಗ ದೇವರ ದಯೆಯಿಂದ ಆ ಸುರೇಂದ್ರನನ್ನು ಜಯಿಸಿ ಆ ತ್ರಿಲೋಕಾಧಿಪತ್ಯವನ್ನು ಅನುಭವಿಸುವುದಕ್ಕೆ ಯೋಗ್ಯವಾದ ಶಕ್ತಿಯು ನನಗೆ ಉಂಟಾಗಿದೆ. ಸಾಮಾನಭೇ ದಂಡಗಳೆಂಬ ಚತುರುಪಾಯಗಳು ರಾಜನೀತಿಯಲ್ಲಿ ಹೇಳಲ್ಪಟ್ಟಿರುವುವು. ಬುದ್ದಿ ಶಾ ಲಿಗಳಾದ ಅರಸುಗಳು ಅವುಗಳಲ್ಲಿ ಮೊದಲನೆಯದಾದ ಸಾಮೋಪಾಯವನ್ನೇ ವಿಶೇಷ ವಾಗಿ ಉಪಯೋಗಿಸಿ ರಾಜ್ಯಗಳನ್ನು ಸಂಪಾದಿಸಬೇಕೆಂದೂ ಅದು ವ್ಯರ್ಥವಾದರೆ ದಾನೋಪಾಯ ಅದೂ ನಿಷ್ಪಲವಾಗುವ ಪಕ್ಷದಲ್ಲಿ ಭೇದೋಪಾಯ ಕಡೆಗೆ ಅದೂ ನಡೆಯದೆಹೋಗುವ ಪಕ್ಷದಲ್ಲಿ ದಂಡೋಪಾಯವನ್ನು ಆಚರಣೆಗೆ ತರತಕ್ಕುದೆಂದು ತಮ್ಮಂಥ ಮಹನೀಯರು ಅಪ್ಪಣೆ ಕೊಡಿಸಿರುವರು. ಅದು ಕಾರಣ ಈಗ ನಾನು ತಮ್ಮ ಚರಣಸನ್ನಿಧಿಯಲ್ಲಿ ಬಿನ್ನವಿಸುವುದೇನೆಂದರೆ ದೇವೇಂದ್ರನು ತನ್ನ ಪುತ್ರ ಮಿತ್ರ ಕಳ ತಾದಿಗಳೊಡನೆ ಕೂಡಿ ಭಗವಂತನಿಂದ ಇಂದ್ರಪದವಿಗೆ ನೇಮಿಸಲ್ಪಟ್ಟಿರುವ ಐರಾವತ ಕಾಮಧೇನು ಕಲ್ಪವೃಕ್ಷ ವಜ್ರಾಯುಧ ಇವು ಮೊದಲಾದ ವಸ್ತುಗಳನ್ನು ಬಿಟ್ಟು ಸ್ವಕೀಯವಾದ ಪದಾರ್ಥಗಳನ್ನು ಮಾತ್ರ ತೆಗೆದುಕೊಂಡು ತನಗೆ ಬೇಕಾದ ಕಡೆಗೆ ಹೋಗಿ ಸುಖವಾಗಿ ಬಾಳುವುದು ಉತ್ತಮ ಪಕ್ಷವು. ಅದು ಆತನ ಮನಸ್ಸಿಗೆ ಒಡಂಬ ಡದೆ ಹೋದರೆ ನನ್ನೊಡನೆ ಯುದ್ಧಕ್ಕೆ ನಿಂತು ತನಗೆ ಸೇರಿದ ಜನರಿಗೂ ವೃಥಾಶ್ರಮ ವನ್ನು ಕೊಟ್ಟು ನನ್ನಿಂದ ತಾನೂ “ಪರಾಜಿತನಾಗಿ ಕಾರಾಗೃಹದಲ್ಲಿ ಸೇರಿ ಕಷ್ಟವನ್ನೂ ಅಪಮಾನವನ್ನೂ ಅನುಭವಿಸುವುದು ಎರಡನೆಯ ಪಕ್ಷವು. ತಾವು ಈ ಎರಡು ಪಕ್ಷ ಗಳನ್ನೂ ಇಂದ್ರನಿಗೆ ತಿಳಿಸಿ ಆತನಿಗೆ ಸಮ್ಮತವಾದ ಪಕ್ಷವನ್ನು ನನಗೆ ಅಪ್ಪಣೆ ಕೊಟ್ಟು ಕಳುಹಿಸಬೇಕೆಂದು ನಾನು ಹೇಳಿದುದಾಗಿ ತಿಳಿಸಿ ಅವರ ಮನೋಭಿಪ್ರಾಯಗಳನ್ನು ತಿಳಿದು ಬಂದು ನನಗೆ ಅಪ್ಪಣೆ ಕೊಡಿಸಬೇಕೆಂದು ಹೇಳಿ ಶುಕಾಚಾರ್ಯನನ್ನು ಸುರ ಲೋಕಕ್ಕೆ ಕಳುಹಿಸಿಕೊಟ್ಟನು. ಅನಂತರದಲ್ಲಿ ಶುಕ್ರಾಚಾರ್ಯರು ಶಿಷ್ಯನಾದ ಬಲಿಯ ನಯಭಯೋಕ್ತಿಗಳನ್ನು ಕೇಳಿ ಮನಸ್ಸಿನಲ್ಲಿ ಸಂಪೂರ್ಣವಾಗಿ ಸಂತೋಷಪಡುತ್ತ ಇಂದ್ರನಿವಾಸಸ್ಥಾನವಾದ