ಮಹಾಕ್ಷತ್ರಿಯ/ಬಲಿತ ದುಗುಡು

ವಿಕಿಸೋರ್ಸ್ದಿಂದ

೨.ಬಲಿತ ದುಗುಡು[ಸಂಪಾದಿಸಿ]

ಧ್ಯಾನಬಲದಿಂದ ಪೂರ್ಣಯೋಗವನ್ನು ಋಷಿಗಣಗಳಿಗೆ ಉಪದೇಶ ಮಾಡಿದ ಇಂದ್ರನು ಅಂತಃಪುರದಲ್ಲಿ ಶಚೀಸಮೇತನಾಗಿ ಕುಳಿತಿದ್ದಾನೆ. ದೇವಗುರುವು ಸಭೆಗೆ ಬಂದುದು, ಆತನು ಅಲ್ಲಿಯೇ ಅಂತರ್ಧಾನವಾದುದು, ಆತನನ್ನು ಹುಡುಕಿಕೊಂಡು ಹೋದ ಮರುತನು ಆತನು ಎಲ್ಲಿಯೂ ಸಿಕ್ಕಲಿಲ್ಲವೆಂದು ಬಂದು ಹೇಳಿದುದು ಎಲ್ಲವೂ ಆತನ ಮನಸ್ಸಿನ ಮೇಲೆ ಪರಿಣಾಮ ಮಾಡಿವೆ. ಆತನು ಯೋಚಿಸುತ್ತಿದ್ದಾನೆ ; “ ಇಂದೇಕೆ ನನ್ನ ಮನಸ್ಸು ಹೀಗೆ ಮಾಡಿತು ? ದೇವಸಭೆಯಲ್ಲಿದ್ದಾಗ ಬಂದ ಋಷಿಗಳನ್ನು ‘ಇದು ಧರ್ಮ ಬ್ರಹ್ಮಪ್ರಶ್ನೆ, ಧರ್ಮಾಂಗಣಕ್ಕೆ ಬನ್ನಿ. ಅಲ್ಲಿ ಅದರ ವಿಮರ್ಶೆ ಎನ್ನದೆ, ನಾನೇಕೆ ಅದರ ವಿಮರ್ಶೆಯನ್ನು ಅಲ್ಲಿಯೇ ಆರಂಭಿಸಿದೆ ? ಅಥವಾ ‘ದೇವಗುರುಗಳು ಇದ್ದಾರೆ. ಅವರ ಬಳಿಗೆ ಹೋಗಿ’ ಎಂದೇಕೆ ಕಳುಹಿಸಲಿಲ್ಲ ?.... ಇಲ್ಲ. ಈ ಪುರಂದರಪ್ರಶ್ನವನ್ನು ನಾನಲ್ಲದೆ ಇನ್ನು ಯಾರೂ ಬಿಡಿಸುವಂತಿಲ್ಲ. ಆಯಿತು. ಆಗ ನಾನು ಪೂರ್ಣಧ್ಯಾನದಲ್ಲಿ ನಿಂತು ಆ ಪ್ರಶ್ನಕ್ಕೆ ಉತ್ತರ ಹೇಳುತ್ತಿರುವಾಗಲೇ ಬೃಹಸ್ಪತಿಯು ಬರಬೇಕೆ? ಆಗ ನಾನು ತಾನೇ ಏನು ತಪ್ಪÅ ಮಾಡಿದೆ? ಪೂರ್ಣಧ್ಯಾನ ದಲ್ಲಿರುವವನು ಯಾವನು ತಾನೇ ಆ ತನ್ನೆದುರು ಬಂದವರನ್ನು ಎದ್ದು ಗೌರವಿಸುವನು? ಅಥವಾ ಆಗ ಸಭಾಪತಿತ್ವವನ್ನು ವಹಿಸಿದ್ದೆನಾಗಿ ಗೌರವಿಸಲೇ ಬೇಕಾಗಿತ್ತೋ? ಆಗಿಹೋಯಿತು. ಈಗ ಏನಾದರೂ ಮಾಡಿ ಈ ತಪ್ಪÅ ತಿದ್ದಿಕೊಳ್ಳಬೇಕು. ಧರ್ಮಾಚಾರ್ಯನಲ್ಲದೆ ತ್ರಿಲೋಕಾಧಿಪತ್ಯವನ್ನು ಕಾಪಾಡಿಕೊಳ್ಳುವುದೆಂತು? ಕಾಲಧರ್ಮವನ್ನರಿತು, ಆಗಾಗ ಕಾಲೋಚಿತವಾದ ಕರ್ಮಗಳನ್ನು ನನ್ನಿಂದ ಮಾಡಿಸುವುದಕ್ಕೆ ಒಬ್ಬರೂ ಇಲ್ಲದಿದ್ದರೆ ಕರ್ಮಲೋಪವಾಗುವುದು. ಕರ್ಮಲೋಪವು ಆದರೆ ಧರ್ಮಲೋಪವಾಗುವುದು. ಧರ್ಮಲೋಪವಾದರೆ ಅಧರ್ಮದ ಪ್ರಾದುರ್ಭಾವವಾಗಿ ಅಸುರರಿಗೆ ಉಚ್ಛ್ರಾಯಕಾಲವು ಬರುವುದು. ಹಾಗೆ ಮಾಡಿದರೆ ನಮ್ಮ ದೇವತೆಗಳ ಕರ್ತವ್ಯಕ್ಕೆ ಹಾನಿ ಬರುವುದು. ಈ ಲೋಕವನ್ನು ಸೃಷ್ಟಿಸಿದಾಗ ಲೋಕದಲ್ಲಿ ಇರುವ ಭೋಗಗಳನ್ನೆಲ್ಲ, ಭೋಗ ಸಾಮಗ್ರಿಗಳನ್ನೆಲ್ಲ ಪ್ರಜಾಪತಿಯು ನಮ್ಮ ವಶಕ್ಕೆ ಕೊಟ್ಟಿರುವನು. ನಾವು, ಭೋಗಗಳಿಂದ ಸುಖವಾಗಲೆಂದು ಲೋಕಲೋಕದಲ್ಲಿರುವ ಪ್ರಜೆಗಳು ಪ್ರತಿಯೊಬ್ಬರಿಗೂ ಭೋಗಗಳನ್ನೂ ಭೋಗಸಾಧನೆಗಳನ್ನೂ ಭೋಗಫಲವಾದ ಸುಖ-ದುಃಖಗಳನ್ನೂ ಹಂಚುವೆವು. ಅಸುರರೋ? ಅಸುರ ಸಾಮ್ರಾಜ್ಯವಾದರೆ ತಪ್ಪೇನು?”

“ದೇವತೆಗಳು ಸುಖವನ್ನು ವರ್ಧಿಸುವವರು. ಅಸುರರು ದುಃಖವನ್ನು ವರ್ಧಿಸುವವರು. ಹಸುವು ಹುಲ್ಲು ತಿನ್ನಲಿ, ಸೊಪ್ಪÅ ತಿನ್ನಲಿ, ಹೊಟ್ಟು ತಿನ್ನಲಿ, ಹಿಂಡಿ ತಿನ್ನಲಿ ಅದರಲ್ಲಿ ಹಾಲೇ ಹೆಚ್ಚುವುದು. ಬೇವಿನ ಗಿಡಕ್ಕೆ ಏನು ಹಾಕಿ ಪೋಷಿಸಿದರೂ ಅದರ ರಸವು ಕಹಿಯಾಗಿಯೇ ಇರುವುದು. ಹಾಗೆ ಹವ್ಯಾದಿಗಳಿಂದ ಆರಾಧಿತರಾದರೆ ದೇವತೆಗಳು ಸುಖವನ್ನೂ, ಸುಖವನ್ನು ಅನುಭವಿಸುವ ಶಕ್ತಿಯನ್ನೂ, ಅದು ಕೊನೆಯಲ್ಲಿ ಆನಂದವಾಗುವ ಶಕ್ತಿಯನ್ನೂ ಬೆಳೆಸುವರು. ಅಸುರರು ಹವ್ಯಾಸಿಗಳಿಂದ ಆರಾಧಿತರಾದರೂ, ದುಃಖವನ್ನೂ, ಎಲ್ಲವೂ ದುಃಖದಲ್ಲೇ ಪರ್ಯವಸಾನವಾಗುವಂತೆ ಮಾಡುವ ಶಕ್ತಿಯನ್ನೂ ಹೇಗೆ ಹೇಗೊ, ಕೊನೆಗೆ ದುಃಖವೇ ಆಗುವಂತಹ ಶಕ್ತಿಯನ್ನೂ ಬೆಳೆಸುವರು. ಅದರಿಂದಲೇ ನಿಸರ್ಗವು ಅವರನ್ನು ತುಳಿದಿರಿಸಿ, ದೇವತೆಗಳಿಗೆ ಅಜರಾಮರತ್ವವನ್ನು ಕೊಟ್ಟಿರುವುದು.ನಿಸರ್ಗದತ್ತವಾದ ಈ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲೇಬೇಕು. ಈ ಸ್ಥಿತಿಯನ್ನು ಕಾಪಾಡಲು ಧರ್ಮಾಚಾರ್ಯನು ಇದ್ದೇ ಇರಬೇಕು” ಎಂದು ಮುಂತಾಗಿ ಯೋಚಿಸುತ್ತಿದ್ದನು.

ಶಚಿಯು ಮಗ್ಗುಲಲ್ಲಿ ಕುಳಿತು ಗಂಡನಿಗೆ ಬೀಸಣಿಗೆಯಿಂದ ಸಣ್ಣಗೆ ಗಾಳಿ ಹಾಕುತ್ತಿದ್ದಾಳೆ. ಆತನ ಮುಖವು ತೇಜೋವಿಹೀನವಾಗಿರುವುದರಿಂದಲೇ ಆಕೆಯು ಊಹಿಸಿಕೊಂಡಿದ್ದಾಳೆ. ಸಾಲದುದ್ದಕ್ಕೆ ದೇವಲೋಕದಲ್ಲೆಲ್ಲಾ ಗುಸುಗುಂಪಾಲಾಗಿ ಆಡಿಕೊಳ್ಳುತ್ತಿರುವ ಮಾತು ಆಕೆಯ ಕಿವಿಗೂ ಬಿದ್ದಿದೆ. “ದೇವೇಂದ್ರನು ದೇವಗುರುಗಳಿಗೆ ಮರ್ಯಾದೆಯನ್ನು ತೋರಲಿಲ್ಲವೆಂದು ಅವರು ಎಲ್ಲಿಯೋ ಹೊರಟೇ ಹೋಗಿರುವರಂತೆ ! ಅದರಿಂದ ಏನೇನು ಅನರ್ಥಗಳಾದಾವೊ !” ಎಂದು ಭೀತಿ ಪಡುವವರು ಕೆಲವರು. “ಉಂಟೇನು ? ದೇವತೆಗಳೆಲ್ಲರ ಸಮಷ್ಟಿ ಕಾರ್ಯ ಲೋಕಕ್ಷೇಮವನ್ನು ನೋಡಿಕೊಳ್ಳುವುದು. ಅದರಿಂದ ದೇವಗುರುವು ಬಹುದಿನ ಎಲ್ಲಿಯೂ ತಲೆ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲಿದ್ದರೂ ಬಂದೇ ಬರಬೇಕು” ಎಂದು ಇನ್ನು ಕೆಲವರು.

“ಒಂದು ವೇಳೆ ಅಧಿಕಾರದಲ್ಲಿರುವವರು ಕಾರಣಾಂತರಗಳಿಂದ ತಪ್ಪಿ ನಡೆದರೂ ಗುರುಗಳಾದವರು ಅದನ್ನು ಸಹಿಸಿಕೊಂಡು ನಡೆದರೆ ಏನು ತಪು ? ನಮಗೇನೋ ಬೃಹಸ್ಪತ್ಯಾಚಾರ್ಯರು ಮಾಡಿದುದು ಕೊಂಚವೂ ಒಪ್ಪಿತವಿಲ್ಲ. ಇದರಿಂದ ಏನೇನು ಅನರ್ಥವಾಗುವುದೋ ?” ಎಂದು ಇನ್ನು ಕೆಲವರು.

“ಅಂತಹ ಕಾಲ ಬಂದರೆ ದೇವರಾಜನು ಹೋಗಿ ಇನ್ನೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಂಡು ಬರುವನು. ಏನು ಮಹಾ!” ಎಂದು ಇನ್ನು ಕೆಲವರು.

ಹೀಗೆ ನಾನಾವಿಧವಾಗಿ ಆಡಿಕೊಳ್ಳುತ್ತಿರುವ ಮಾತುಗಳೆಲ್ಲ ಆಕೆಯ ಕಿವಿಗೂ ಬಿತ್ತು. ತನ್ನ ಕಿವಿಗೆ ಬಿದ್ದುದು ಇಂದ್ರನ ಕಿವಿಗೂ ಬಿದ್ದೇ ಇರಬೇಕು. ಅದರಿಂದ ಅದನ್ನೇಕೆ ಪ್ರಸ್ತಾಪಿಸಿ, ಆತನ ಮನಸ್ಸಿಗೆ ನೋವುಂಟು ಮಾಡಬೇಕು ಎಂದು ಆಕೆಯು ಸುಮ್ಮನಿದ್ದಾಳೆ. ಆದರೂ ಪ್ರಸ್ತಾಪಿಸುವುದೇ ಒಳ್ಳೆಯದೇನೋ ಎಂದು ಇನ್ನೊಂದು ಮನಸ್ಸು.

ಆ ವೇಳೆಗೆ ಪ್ರಹರಿಯು ತೇಜೋಮಂಡಲವಾಗಿ ಸನ್ನಿಧಾನಕ್ಕೆ ಪ್ರವೇಶಿಸಿ, ‘ಚಿತ್ರರಥನೆಂಬ ಗಂಧರ್ವಪತಿಯು ಬಂದಿರುವನು’ ಎಂದು ಬಿನ್ನವಿಸಿದನು. ಶಚಿಯು ಸುರಪತಿಯ ಮುಖವನ್ನು ನೋಡಿ, ಆತನ ಇಂಗಿತದಂತೆ ‘ಗಂಧರ್ವಪತಿಯನ್ನು ಬರಮಾಡು’ ಎಂದು ಪ್ರಹರಿಗೆ ಸೂಚಿಸಿದಳು. ಆತನು ಚಿತ್ರರಥನನ್ನು ಬರಮಾಡಿದನು.

ಚಿತ್ರರಥನು ಬಂದು ತ್ರಿಲೋಕಾಧಿಪತಿಗೆ ಸಲ್ಲಿಸಬೇಕಾದ ಮರ್ಯಾದೆಗಳನ್ನೆಲ್ಲಾ ಸಲ್ಲಿಸಿ ಅಪ್ಸರೋಗಂಧರ್ವರು ಸೇವೆಗಾಗಿ ಬಂದಿರುವುದನ್ನು ನಿವೇದಿಸಿದನು. ದೇವೇಂದ್ರನ ಮುಖದ ತೇಜಸ್ಸಿನಿಂದಲೇ ಆತನು ಆ ದಿನ ಘನಸಂಗೀತ ನರ್ತನಗಳಿಗೆ ಸಿದ್ಧನಾಗಿಲ್ಲವೆಂದು ತಿಳಿದು, ತನ್ನ ಗಣಗಳನ್ನು ಕರೆಸಿ, ಲಘುಗೀತ ನರ್ತನಗಳಿಂದ ಅಮರಪತಿಯನ್ನು ಓಲೈಸಿ, ಕರ್ತವ್ಯ ನಿರ್ವಾಹಮಾಡಿ ಹೋದನು.

ಎಂದಿನಂತೆ ಆಗಿದ್ದರೆ ದೇವರಾಜನು ಆ ಕೂಡಲೇ ಏಳಬೇಕಾಗಿತ್ತು. ಅಂದು ಏಕೋ ಇನ್ನೂ ಅಲ್ಲಿಯೇ ಕುಳಿತಿದ್ದನು. ಗೂಢಚಾರದ ಪಡೆಯ ಮುಖಂಡನು ಬಂದು ಕಾಣಿಸಿಕೊಂಡನು. ಏನೆಂದು ವಿಚಾರಿಸಲು, ಅವರು “ಜೀಯಾ, ಅಸುರಲೋಕದಲ್ಲಿ ಎಂದೂ ಇಲ್ಲದ ಸಂಭ್ರಮವು ಕಂಡುಬರುತ್ತಿದೆ. ಎಲ್ಲರೂ ಆಯುಧಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅವರ ವಾಹನಗಳು ತೇಜಸ್ವಿಗಳಾಗಿವೆ. ಅಸುರ ಸೇನಾಡಂಬರವು ಕಡಲಿನಂತೆ ಉಕ್ಕುತ್ತಿದೆ” ಎಂದನು.

ಇಂದ್ರನು ತಲೆದೂಗಿದನು. “ಹೌದು, ಹೌದು. ನಮ್ಮ ದುರ್ಬಲತೆಯೇ ಇತರರ ಬಲ. ಇರಲಿ, ಪ್ರಭಾವದಿಂದ ಸೋಲಿಸಿದ್ದವರನ್ನು ಇನ್ನು ಮೇಲೆ ಪ್ರತಾಪದಿಂದ ಸೋಲಿಸಬೇಕು. ದಿಕ್ಪಾಲಕರನ್ನೆಲ್ಲ ಸಿದ್ಧವಾಗಿರಬೇಕೆಂದು ಓಲೆಯನ್ನು ಬರೆಸು. ನಮ್ಮ ಸೇನೆಯು ಯಾವಾಗಲೆಂದರೆ ಆಗ ಮುನ್ನುಗ್ಗಲು ಸಿದ್ಧವಾಗಿರಲಿ” ಎಂದನು.

ಗೂಢಚಾರನು ಕೈಮುಗಿದು ಹೋದನು. ಧರ್ಮಾಚಾರ್ಯರ ಇಲ್ಲದಿರುವಿಕೆಯು ಆಗಲೇ ಕಾರ್ಯಕಾರಿಯಾಯಿತೇ ? ಎಂದು ಶಚಿಯು ಆಶ್ಚರ್ಯಪಡುತ್ತಿದ್ದು, ಎದ್ದು ಗಂಡನ ಹಿಂದೆ ಹೊರಟಳು.

* * * *