ಪುಟ:Kannadigara Karma Kathe.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನ್ನಡಿಗರ ಕರ್ಮಕಥೆ

ತರುಣಿ- ಇದೇನು ಮಾತು ? ಅನಾಥಳಾದ ನಾನು ನಿಮ್ಮನ್ನು ಹ್ಯಾಗೆ ರಕ್ಷಿಸುವೆನು ?
ರಾಮರಾಜ-ಈಗ ನೀವು ಅನಾಥರಾಗಿರುವಿರಾ ! ಹೀಗೆ ನುಡಿಯಲಾಗದು. ನಿಮ್ಮ ಸಂರಕ್ಷಣಕ್ಕಾಗಿ ಈಗೊಂದು ಸಾರಿ ನನ್ನ ಪ್ರಾಣವನ್ನು ಸಂಕಟಕ್ಕೆ ಗುರಿಮಾಡಿದ್ದೆನು. ಇನ್ನು ಮೇಲೆ ನನ್ನ ಜೀವಮಾನವಿರುವ ತನಕ ನಿಮ್ಮ ಸಂರಕ್ಷಣಕ್ಕಾಗಿ ಜೀವವನ್ನಾದರೂ ಕೊಟ್ಟೆನು; ನಿಮ್ಮ ಕೂದಲು ಕೊಂಕಗೊಡಲಿಕ್ಕಿಲ್ಲ. ಇನ್ನು ಮೇಲೆ ಇಲ್ಲಿಂದ ಹೋಗುವ ಮಾತು ಮಾತ್ರ ನೀವು ತೆಗೆಯಬೇಡಿರಿ.
ತರುಣೀ- ಏನು ! ನನ್ನನ್ನು ನೀವು ಇಲ್ಲಿಯೇ ಇಟ್ಟುಕೊಳ್ಳುವಿರೋ ?
ರಾಮರಾಜ- ನಾನು ಇಟ್ಟುಕೊಳ್ಳುವುದಿಲ್ಲ. ನೀವೇ ಇದ್ದು, ನನ್ನ ಪ್ರಾಣವನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಿರಿ.
ಈ ಮಾತುಗಳಿಗೆ ಏನೆಂದು ಉತ್ತರಕೊಡಬೇಕೆಂಬುದು ಆ ತರುಣಿಗೆ ಗೊತ್ತಾಗದ್ದರಿಂದ, ಸುಮ್ಮನೆ ನಿಂತುಕೊಂಡಳು. ಸ್ವಲ್ಪಹೊತ್ತಿನ ಮೇಲೆ ತುಸು ಧೈರ್‍ಯ ತಾಳಿ -
ತರುಣಿ- ನನ್ನ ಅತ್ತೆ, ನನ್ನ ಸೋದರಮಾವ, ನನ್ನ ಮಾರ್ಜೀನೆ, ನನ್ನ ಅಣ್ಣ ಇವರು ಏನಂದಾರು ?
ರಾಮರಾಜ-ಹುಲಿಯು ತಿಂದಿತೆಂದು ಅಂದಾರು ! ನಾಲ್ಕೂ ಕಡೆಯಲ್ಲಿ ಹುಡುಕಿ, ನಿರಾಶೆಪಟ್ಟು, ಈಗ ಮುಂದೆ ಹೋಗಬೇಕೆಂದು ಹೊರಟಿರುವ ಸ್ಥಳಕ್ಕೆ, ಅಥವಾ ಹಿಂದಕ್ಕೆ ತಿರುಗಿ ತಮ್ಮ ಊರಿಗೆ ಹೋದಾರು.
ತರುಣಿ- ಹಾಗಾದರೆ ನಾನು ಹುಲಿಯ ಬಾಯೊಳಗಿಂದ ಪಾರಾಗಿ ಏನು ಉಪಯೋಗವಾದ ಹಾಗಾಯಿತು.
ರಾಮರಾಜ- ನೀವು ಪಾರಾದದ್ದರ ಉಪಯೋಗವು ಅವರಿಗೆ ಇರಲಿಕ್ಕಿಲ್ಲ; ಆದರೆ ನನಗಂತೂ ಇರುತ್ತದಷ್ಟೆ? ನನಗೆ ಒಬ್ಬ ಸುಂದರ ದೇವತೆಯು ಲಭಿಸಿದ್ದೇನು ಸಾಮಾನ್ಯ ಭಾಗ್ಯವೇನು ? ಈವರೆಗೆ ಮುಸುಲ್ಮಾನರು ಅಪ್ಪರೆಯರಂಥ ನಮ್ಮ ಎಷ್ಟೋ ಹಿಂದೂ ತರುಣಿಯರನ್ನು ಅಪಹರಿಸಿಕೊಂಡು ಹೋದರು. ಇಂದು ನಾನು ಅವರ ಒಬ್ಬ ಅಪ್ಸರೆಯನ್ನು ಸಂಪಾದಿಸಿರುತ್ತೇನೆ. ಆ ಅಪ್ಸರೆಯ ಪ್ರಾಣರಕ್ಷಣದ ಕಾವ್ಯದಲ್ಲಿ ನನ್ನ ಪ್ರಾಣವನ್ನು ಒಡ್ಡಿ ಪಾರಾಗಲು, ಅದರ ಫಲವನ್ನು ಅನುಭವಿಸುವದಕ್ಕೂ ನನಗೆ ಆಸ್ಪದವಿರಬಾರದೇನು ? ಮಾರ್ಜೀನೆಯು ಯಾರು?
ತರುಣಿ - ಅದೇಕೆ ? ಮಾರ್ಜೀನೆಯನ್ನೇ ಕೇಳುವದೇಕೆ ? ಮಾರ್ಜೀನೆಯೆಂದರೆ ನನ್ನ ಎರಡನೆಯ ತಾಯಿಯೇ ಸರಿ. ತಾಯಿಗಿಂತ ಹೆಚ್ಚಾಗಿ