ಪುಟ:Kannadigara Karma Kathe.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಕನ್ನಡಿಗರ ಕರ್ಮಕಥೆ


ರಾಮರಾಜನು ಮಾರ್ಜಿನೆಯನ್ನು ಹೀಗೆ ಬೆದರಿಸಿ ಕಳಿಸಿದರೂ ಆ ಸ್ಪಷ್ಟಮಾತಿನ ಹೆಣ್ಣುಮಗಳು ಮೆಹರ್ಜಾನಳ ಮನಸ್ಸನ್ನು ಎಲ್ಲಿ ತಿರುಗಿಸುವಳೋ ಎಂದು ಆತನು ಶಂಕಿಸುತ್ತಲಿದ್ದನು. ರಾಮರಾಜನು ಹುಟ್ಟಾ ಚತುರನು, ಕಾರ್ಯಸಾಧಕನು. ಆತನು ಮೆಹರ್ಜಾನಳ ಮನಸ್ಸು ಮೋಹಿಸುವಂಥ ಹಲವು ಹಂಚಿಕೆಗಳನ್ನು ಮೊದಲೇ ಮಾಡಿದ್ದನು ಆತನ ಸೂಚನೆಯಂತೆ ಆತನ ವೃದ್ದ ದಾಸಿಯು ರಾಮರಾಜನ ಗುಣಗಳನ್ನೂ, ಪರಾಕ್ರಮವನ್ನೂ, ವೈಭವವನ್ನು ಉಪ್ಪುಕಾರ ಹಚ್ಚಿ ಮೆಹರ್ಜಾನಳ ಮುಂದೆ ಹೇಳಿದ್ದಳು. ಯುದ್ಧದಲ್ಲಿ ಅದ್ಭುತ ಪರಾಕ್ರಮವನ್ನು ತೋರಿಸಿ ವಿಜಯನಗರದ ಕೃಷ್ಣದೇವರಾಜರಿಂದ ಉಚಿತವಾಗಿ ಸಂಪಾದಿಸಿದ ಪದಾರ್ಥಗಳು ಇವೆಂದು ಹರಳುಕಲ್ಲಿನ ಅನೇಕ ದಿವ್ಯಾಲಂಕಾರಗಳನ್ನು ಆಕೆಗೆ ಆ ದಾಸಿಯು ತೋರಿಸಿದ್ದಳು. ಅಂಥ ಅಲಂಕಾರಗಳನ್ನು ಮೆಹರ್ಜಾನಳು ಈವರೆಗೆ ನೋಡಿದ್ದಿಲ್ಲವೆಂದು ಹೇಳಬಹುದು. ಆಗ ವಿಜಯನಗರದ ರಾಜರ ಐಶ್ವರ್ಯ ಸಂಪನ್ನನಾದ ಪ್ರಭುವಿನ ಪ್ರೀತಿಯ ಸರದಾರನೆಂದ ಬಳಿಕ, ರಾಮರಾಜನ ಸಂಗ್ರಹದಲ್ಲಿ ಉತ್ತಮೋತ್ತಮ ಅಲಂಕಾರಗಳಿದ್ದದ್ದೇನು ಆಶ್ಚರ್ಯವಲ್ಲ. ದಾಸಿಯು ರಾಮರಾಜನ ಒಂದೊಂದು ಪರಾಕ್ರಮದ ಕೃತಿಗಳನ್ನು ಕಥೆ ಮಾಡಿ ಹೇಳಿದಳು; ಅದರಂತೆ ಹಿಂದೂ ಧರ್ಮದ ಹಲವು ಸುಂದರಿಯರು ರಾಮರಾಜನನ್ನು ಲಗ್ನವಾಗಲಿಚ್ಛಿಸಿ ನಿರಾಶೆಪಟ್ಟದ್ದನ್ನು ಬಗೆಬಗೆಯಾಗಿ ಬಣ್ಣಿಸಿದಳು; ಹಾಗೆಯೇ ಆ ಚತುರದಾಸಿಯು, ಇಂಥ ಸುಂದರ ತರುಣನ ಕೈ ಹಿಡಿದ ಸುಂದರಿಯು ಪುಣ್ಯವಂಥಳೇ ಸರಿಯೆಂದು ಮೆಹರ್ಜಾನಳಿಗೆ ಸ್ಪಷ್ಟವಾಗಿ ಹೇಳಿದಳು ಮೊದಲೇ ರಾಮರಾಜನಿಗೆ ಮರುಳಾಗಿದ್ದ ಮೆಹರ್ಜಾನಳ ಮನೋಭೂಮಿಯಲ್ಲಿ ಉತ್ಪನ್ನವಾಗಿದ್ದ ಪ್ರೇಮಾಂಕುರವು, ತಾರುಣ್ಯವೆಂಬ ಗೊಬ್ಬರದಿಂದಲೂ ರಸಭರಿತ ವರ್ಣನವೆಂಬ ಜಲಸೇಚನದಿಂದಲೂ ಪರಿಪುಷ್ಟವಾಗಿ ಭರದಿಂದ ಬೆಳೆಯಹತ್ತಿತು. ಈ ಸ್ಥಿತಿಯಲ್ಲಿ ರಾಮರಾಜನ ಸುಂದರ ಮೂರ್ತಿಯು ಆಕೆಯ ಮನಸ್ಸಿನಲ್ಲಿ ನೆಲೆಸಲು, ತದೇಕ ಧ್ಯಾನವೆಂಬ ಗೆಯ್ತದಿಂದ ಆ ಪ್ರೇತವೃಕ್ಷವು ಫಲಿಸಿ ರಾಮರಾಜನ ಪ್ರಾಪ್ತಿ ರೂಪವಾದ ಫಲವು ಬಹು ಸ್ವಾದಿಷ್ಟವಾಗಿ ಆ ಮೆಹರ್ಜಾನಳಿಗೆ ತೋರಹತ್ತಿತು! ಮೆಹರ್ಜಾನಳ ಮನಸ್ಥಿತಿಯು ಅಲ್ಪಾವಕಾಶದಲ್ಲಿ ಇಷ್ಟು ರೂಪಾಂತರ ಹೊಂದಿದ್ದು ಆಶ್ಚರ್ಯವಲ್ಲ ತರುಣರ ಮನಸ್ಸಿನ ಪ್ರಭಾವವೇ ಅಂತಹದಿರುತ್ತದೆ! ಅದರಲ್ಲಿ ಬಿತ್ತಿದ ಬೀಜವು ಅಷ್ಟು ಬೇಗ ಫಲಿಸುತ್ತದೆ ! ತರುಣರಿಗೆ ಬಲುಬೇಗ ಸಿಟ್ಟು ಬರಲಿಕ್ಕೂ, ಅವರು ಬಲು ಬೇಗ ನಗಲಿಕ್ಕೂ ಬಹುಬೇಗ ಅಳಲಿಕ್ಕೂ. ಮನಸ್ಸಿಗೆ ಬಂದಕೂಡಲೆ ಅವರು ಯಾವದೊಂದು ಕಾರ್‍ಯಕ್ಕೆ ತಟ್ಟನೆ ಕೈ ಹಾಕಲಿಕ್ಕೂ