ಪುಟ:ಕ್ರಾಂತಿ ಕಲ್ಯಾಣ.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೦

ಕ್ರಾಂತಿ ಕಲ್ಯಾಣ

ತಳಹದಿಯ ಮೇಲೆ ಭದ್ರವಾಗಿ ನಿಲ್ಲುವುದೆಂಬುದನ್ನು ಅವನು ಅರಿತಿದ್ದನು.

ಮರುದಿನ ಪ್ರಕಟವಾದ ಇನ್ನೊಂದು ಆಜ್ಞೆ ಕರ್ಣದೇವನ ಅಸಮಾಧಾನಕ್ಕೆ ಕಾರಣವಾಯಿತು. ಬಿಜ್ಜಳನು ಅದರಲ್ಲಿ ಮಾಧವನೆಂಬ ಹಿರಿಯ ಸಾಮಂತರನ್ನು ಮುಖ್ಯ ದಂಡನಾಯಕನನ್ನಾಗಿ ಮಾಡಿ ಕರ್ಣದೇವನನ್ನು ಮೊದಲಿನಂತೆ ರಾಜಗೃಹದ ರಕ್ಷಣಾಧಿಕಾರಿಯಾಗಿ ನಿಯಮಿಸಿದ್ದನು.

ಬಿಜ್ಜಳನ ಅನಂತರ ಚಾಲುಕ್ಯರಾಜ್ಯದ ಸರ್ವಾಧಿಕಾರದ ಕನಸು ಕಾಣುತ್ತಿದ್ದ ಕರ್ಣದೇವನಿಗೆ ಇದರಿಂದ ತುಂಬ ನಿರಾಶೆಯಾಯಿತು. ಅಸಮಾಧಾನ ಪ್ರಕಟರೂಪ ತಳೆದಾಗ ಬಿಜ್ಜಳನು ಸಹೋದರನನ್ನು ಕರೆಸಿ, "ಮುಂದೆ ನಗರದಲ್ಲಿ ಗಲಭೆ ಆರಂಭವಾದರೆ ಶರಣರ ಮೇಲೆ ಉಗ್ರಕ್ರಮ ಕೈಗೊಳ್ಳಬೇಕಾಗುತ್ತದೆ. ಅದು ನಿನ್ನಿಂದಾಗುವುದಿಲ್ಲ. ವೈದಿಕ ಧರ್ಮದ ನಿಷ್ಠಾವಂತ ಅನುಯಾಯಿಯೆಂದು ಹೆಸರಾಗಿ ಮೊದಲಿಂದ ಶರಣರ ಮೇಲೆ ವೈರ ಸಾಧಿಸುತ್ತಿರುವ ಮಾಧವನೇ ಈ ಸಂದರ್ಭದಲ್ಲಿ ಸರಿಯಾದ ದಂಡನಾಯ. ಹಿಂದಿನಂತೆ ಮುಂದೆಯೂ ನಾವು ಚಾಲುಕ್ಯ ವಂಶೀಯನೊಬ್ಬನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅವನ ಹೆಸರಿನಲ್ಲಿ ಸರ್ವಾಧಿಕಾರ ನಡೆಸಬೇಕಾಗುವುದು. ರಾಜಗೃಹದಲ್ಲಿ ಬಂಧಿಯಾಗಿರುವ ಜಗದೇಕಮಲ್ಲನು ನಿನ್ನ ಗೆಳೆಯ. ನನ್ನ ಅನಂತರ ಸರ್ವಾಧಿಕಾರಿಯಾಗಬೇಕಾದ ನೀನು ಅವನ ರಕ್ಷಕನಾಗಿದ್ದರೆ ಒಳ್ಳೆಯದು," ಎಂದು ಸಮಾಧಾನ ಹೇಳಿದ್ದನು.

ಪ್ರಕಟವಾದ ಎರಡು ವಾರಗಳ ಅನಂತರ ಮರಣದಂಡನೆಯ ಆಜ್ಞೆಗಳನ್ನು ಕಾರ್ಯಗತ ಮಾಡುವುದು ಆಗ ಆಡಳಿತ ಪದ್ಧತಿಯಾಗಿತ್ತು. ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ಧರ್ಮಾಧಿಕರಣದ ಮುಖ್ಯಾಧಿಕಾರಿಯಾಗಿದ್ದ ವಿಜ್ಞಾನೇಶ್ವರ ಪಂಡಿತನು ವಧಾದಂಡಕ್ಕೆ ಗುರಿಯಾದವರ ಅನುಕೂಲಕ್ಕಾಗಿ ಆಚರಣೆಗೆ ತಂದ ಈ ಸುಧಾರಣೆ ಬಿಜ್ಜಳನ ಕಾಲದಲ್ಲಿಯೂ ಪ್ರಚಾರದಲ್ಲಿತ್ತು.

ಧರ್ಮಾಧಿಕರಣದ ನಿಬಂಧನೆಯಂತೆ ದೊರಕಿದ ಈ ಅವಕಾಶವನ್ನು ಬಿಜ್ಜಳನು ತನ್ನ ದುರುದ್ದೇಶದ ಸಾಧನೆಗಾಗಿ ಉಪಯೋಗಿಸಿಕೊಂಡನು. ಅಪರಾಧಿಗಳ ಪರವಾಗಿ ಸಲ್ಲಿಸಿದ ಮನವಿ ಪತ್ರಕ್ಕೆ ಒಪ್ಪಿಗೆ ಹಾಕಿದ್ದ ಶರಣರಲ್ಲದ ನಾಗರಿಕರಲ್ಲಿ ಇಬ್ಬರು ಪ್ರಮುಖರ ವಿರುದ್ಧ ಮೋಸ, ವ್ಯಭಿಚಾರ, ಅಗಮ್ಯಾಗಮನ ಮುಂತಾದ ಸುಳ್ಳು ಆಪಾದನೆಗಳ ಸೃಷ್ಟನೆ ನಡೆದು ಧರ್ಮಾಧಿಕರಣಕ್ಕೆ ವರದಿಯಾಯಿತು. ವಿಚಾರಣೆ ಪ್ರಾರಂಭವಾಗುವ ಸೂಚನೆ ತಿಳಿದು ನಾಗರಿಕರು ಕ್ರಮಿತನ ಬಳಿ ಬಂದಾಗ ಅವನು, "ಮನವಿಪತ್ರಕ್ಕೆ ನೀವು ಒಪ್ಪಿಗೆ ಹಾಕಿರುವಿರೆಂದು ಕೇಳಿ ಪ್ರಭುಗಳು ಕೋಪಗೊಂಡಿದ್ದಾರೆ. ನೀವು ಒಬ್ಬೊಬ್ಬರು ಒಂದು ಸಾವಿರ ವರಹಗಳ