ಪುಟ:ಕ್ರಾಂತಿ ಕಲ್ಯಾಣ.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦೬

ಕ್ರಾಂತಿ ಕಲ್ಯಾಣ


ವಧಾಪೀಠದ ಬಳಿ ನಿಂತಳು. ಶೂಲಕ್ಕೇರಿಸಿದ ದೇಹಗಳು ಅಸ್ಫುಟವಾಗಿ ಕಾಣುತ್ತಿದ್ದವು. ಅವು ಯಾರ ದೇಹಗಳೆಂಬುದನ್ನು ಗುರುತು ಹಿಡಿಯುವುದು ಸಾಧ್ಯವಿರಲಿಲ್ಲ. ಆದರೂ ಪತಿಪ್ರಾಣೆಯಾದ ಹೆಣ್ಣಿಗೆ ಸಹಜವಾದ ಜಾಣೆಯಿಂದ ಲಾವಣ್ಯವತಿ ಅರಿತಳು, ಅವು ತನ್ನ ತಂದೆ ಮಾವಂದಿರ ದೇಹಗಳೆಂದು, ಶಿಲವಂತನ ದೇಹವಲ್ಲವೆಂದು.

ಹಾಗಾದರೆ ಶೀಲವಂತ ಏನಾದರು? ವಧಾಪೀಠದ ಮೇಲೆ ಹೆಪ್ಪುಗಟ್ಟಿದ್ದ ರಕ್ತದಕಲೆಗಳಿಂದ ತನ್ನ ಪತಿಯ ಘೋರ ಅಂತ್ಯವನ್ನು ಲಾವಣ್ಯವತಿ ಊಹಿಸಿದಳು.... ದೇಹವೇನಾಯಿತು?.... ಅಂತ್ಯಸಂಸ್ಕಾರಕ್ಕಾಗಿ ಭಟರು ತೆಗೆದುಕೊಂಡು ಹೋಗಿರಬಹುದೆ?.....

ದುಃಖಾವೇಗದಿಂದ ಅವಳು ವಧಾಪೀಠದ ಮೇಲೆ ತಲೆಯಿಟ್ಟು ಅಳುತ್ತಿದ್ದಂತೆ ಪೀಠದಡಿಯ ಮಣ್ಣಿನ ಮರೆಯಲ್ಲಿ ಯಾವುದೋ ವಸ್ತು ಮಿರುಗುತ್ತಿರುವುದನ್ನು ಕಂಡಳು. ಅದು ತನ್ನ ಪತಿಯ ಬೆರಳಲ್ಲಿದ್ದ ವಜ್ರದ ಉಂಗುರ. ಲಾವಣ್ಯವತಿ ಚಕಿತೆಯಾಗಿ, ಕೈಯಿಂದ ಮಣ್ಣನ್ನು ಸರಿಸಿ, ಹುದುಗಿಸಿಟ್ಟಿದ್ದ ತೋಳೊಂದನ್ನು ಹೊರಗೆ ತೆಗೆದಳು. ಅದು ತನ್ನ ಪತಿಯ ತೋಳೆಂಬುದರಲ್ಲಿ ಅವಳಿಗೆ ಯಾವ ಸಂದೇಹವೂ ಉಳಿಯಲಿಲ್ಲ.

ವಧಕನು ಉಂಗುರದ ಆಸೆಯಿಂದ ಕಡಿದ ತೋಳನ್ನು ಮಣ್ಣಿನಲ್ಲಿ ಹುದುಗಿಸಿಟ್ಟು ಹೋಗಿದ್ದನು. ಸೈನಿಕರು ಹೋದಮೇಲೆ ಅಲ್ಲಿಗೆ ಬಂದು ಅದನ್ನು ತೆಗೆದುಕೊಳ್ಳುವುದು ಅವನ ಉದ್ದೇಶವಾಗಿತ್ತು. ತುಸುಹೊತ್ತಿನ ಮೊದಲು ಇನ್ನೊಬ್ಬ ವಧಕನು ದೇಹವಿದ್ದ ಬಿದಿರು ಬುಟ್ಟಿಯನ್ನು ಗಾಡಿಯಲ್ಲಿ ಅಡವಿಗೆ ಸಾಗಿಸಿದ್ದನು.

ಲಾವಣ್ಯವತಿ ತೋಳನ್ನು ಉಡಿಯಲ್ಲಿ ಅವಿಚಿಟ್ಟುಕೊಂಡು ಅಲ್ಲಿಂದ ಹೊರಟಳು. ತಂದೆ, ಪತಿ, ಮಾವ ಮೂವರೂ ಮೃತರಾದ ಮೇಲೆ ತಾನೇಕೆ ಬದುಕಿರಬೇಕು ? ಪತಿಯ ತೋಳನ್ನು ಉಡಿಯಲ್ಲಿಟ್ಟುಕೊಂಡು ನೀರಿಗೆ ಬೀಳಲು ನಿರ್ಧರಿಸಿಕೊಂಡು ಅಲ್ಲಿಂದ ಹೊರಟಳು.

ಅವಳು ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿ ಶಿಬಿರಾಗ್ನಿಯ ಸುತ್ತ ಕುಳಿತಿದ್ದ ಸೈನಿಕರು ಅವಳನ್ನು ನೋಡಿದರು. ಹೋ! ಹೋ! ಎಂದು ಕೂಗುತ್ತ ಅವರಲ್ಲಿಬ್ಬರು ಲಾವಣ್ಯವತಿಯ ಕಡೆ ಧಾವಿಸಿದರು.

ಲಾವಣ್ಯವತಿ ಸೈನಿಕರನ್ನು ಕಂಡು ಬೆದರಿದಳು. ಬೇಟೆಗಾರನನ್ನು ಕಂಡ ಜಿಂಕೆಯಂತೆ ಓಡಿದಳು. ಕೊಂಚ ದೂರ ಹೋಗಿ ಅವಳು ಎಡವಿ ಬಿದ್ದಾಗ, ಸೈನಿಕರು ಹತ್ತಿರ ಬಂದು ಕೈಯಲ್ಲಿದ್ದ ಬಲ್ಲೆಯಗಳೀಂದ ಅವಳನ್ನು ಬಲವಾಗಿ ಇರಿದರು. ಅನುಮತಿಯಿಲ್ಲದೆ ವಧಾಸ್ಥಾನಕ್ಕೆ ಬರುವವರು ಯಾರೇ ಆಗಲಿ,