ಪುಟ:ಕ್ರಾಂತಿ ಕಲ್ಯಾಣ.pdf/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೧೯


ವಾರಗಳಲ್ಲಿ ಪರಿಸ್ಥಿತಿ ಇಷ್ಟೊಂದು ಕೆಡುವುದೆಂದು ಅವನು ನಿರೀಕ್ಷಿಸಿರಲಿಲ್ಲ.

“ಈ ಎಲ್ಲ ಕಾರಣಗಳಿಂದ ಜಗದೇಕಮಲ್ಲರಸರನ್ನು ನೋಡುವುದು ಸಾಧ್ಯವಾಗದೆ ಹೋದರೆ ಮುಂದೇನು ಮಾಡುವುದು?” ಎಂದು ಯೋಚಿಸುತ್ತ ಅಗ್ಗಳನು, ಮರುದಿನ ಮಧ್ಯಾಹ್ನ ಮಹಮನೆಯ ಅತಿಥಿಶಾಲೆಯಲ್ಲಿ ಕುಳಿತಿದ್ದಾಗ ಮಾಚಿದೇವರು ಅಲ್ಲಿಗೆ ಬಂದು “ಕರ್ಹಾಡಕ್ಕೆ ಹೋಗಲು ರಕ್ಷಕರನ್ನು ಗೊತ್ತು ಮಾಡಿದ್ದೇನೆ. ಅವರು ಜನಸಂಚಾರವಿಲ್ಲದ ಅರಣ್ಯ ಮಾರ್ಗಗಳಿಂದ ಪ್ರಯಾಣಮಾಡಿ ಪ್ರೇಮಾರ್ಣವನನ್ನು ಒಂದೇ ವಾರದಲ್ಲಿ ಮಾವನ ಮನೆ ಸೇರಿಸುವರು. ರಾಣಿಯ ದಾಸಿ ಸಿದ್ಧವಾಗಿದ್ದರೆ ನಾಳೆಯೇ ಹೊರಡಬಹುದು,” ಎಂದು ಹೇಳಿದರು.

“ಅಣ್ಣನವರು ತಮ್ಮ ಹೊಣೆ ನಿರ್ವಹಿಸಿದಂತಾಯಿತು. ಆದರೆ ಜಗದೇಕಮಲ್ಲರಸರನ್ನು ನೋಡದೆ ದಾಸಿ ಇಲ್ಲಿಂದ ಹೊರಡುವುದಿಲ್ಲ.” ಎಂದನು ಅಗ್ಗಳ.

ಮಾಚಿದೇವರ ಕಣ್ಣುಗಳು ಹಠಾತ್ತಾಗಿ ಕೆಂಪೇರಿದವು. ಕೋಪಗೊಂಡವರಂತೆ ಅವರು, “ನೀವು ಜಗದೇಕಮಲ್ಲರಸರನ್ನು ನೋಡುವುದು ರಾಜಕೀಯ ವಿಚಾರ. ಶರಣರು ಅದರಲ್ಲಿ ಪ್ರವೇಶಿಸುವುದಿಲ್ಲ. ನನ್ನ ಪರೋಕ್ಷದಲ್ಲಿ, ನನಗೆ ತಿಳಿಯದಂತೆ ಅದು ನಡೆದರೆ ಒಳ್ಳೆಯದು. ರಾಜಗೃಹದ ತಮ್ಮಡಿಯೊಬ್ಬನು ಬಿಲ್ವಪತ್ರೆಗಾಗಿ ಅಗಾಗ ಇಲ್ಲಿಗೆ ಬರುತ್ತಾನೆ. ಅವನನ್ನು ನಿಮ್ಮ ಹತ್ತಿರ ಕಳುಹಿಸುತ್ತೇನೆ. ಅವನಿಂದ ನಿಮಗೆ ಸಹಾಯವಾದರೆ ನನ್ನ ಅಭ್ಯಂತರವಿಲ್ಲ,” ಎಂದು ಹೇಳಿ ಉತ್ತರಕ್ಕಾಗಿ ಎದುರು ನೋಡದೆ ಅಲ್ಲಿಂದ ಹೊರಟು ಹೋದರು.

ವ್ಯಂಗ್ಯದ ಮಿದುನಗೆಯಿಂದ ಅರಳಿತು ಅಗ್ಗಳನ ಮುಖ. "ಎಂತಹ ನಿಷ್ಠುರ ಖಂಡಿತವಾದಿ ಈ ವೃದ್ಧ ಜಂಗಮ! ಬಲಗೈ ಮಾಡುವ ದಾನ ಎಡದ ಕೈಗೆ ಕೂಡ ತಿಳಿಯಕೂಡದೆಂಬುದು ಅವನ ಇಚ್ಚೆ,” ಎಂದು ಭಾವಿಸಿ ತಮ್ಮಡಿಗಾಗಿ ಕಾಯುತ್ತ ಕುಳಿತನು.

ರಾಜಗೃಹದಿಂದ ಬಿಲ್ವದಳಗಳಿಗಾಗಿ ಬರುವ ವ್ಯಕ್ತಿ ಯಾರೆಂಬುದು ಅಗ್ಗಳನಿಗೆ ತಿಳಿಯದು. ಪ್ರಹರಾನಂತರ ಧೋತ್ರ ಕಪಿನಿ ಮುಂಡಾಸುಗಳನ್ನು ಧರಿಸಿ ಅರ್ಧ ಜಂಗಮನಂತೆ ಕಾಣುತ್ತಿದ್ದ ಬ್ರಹ್ಮಶಿವ, ಪತ್ರೆ ತುಂಬಿದ ಜೋಳಿಗೆಯನ್ನು ಕಂಕುಳಿಗೆ ಹಾಕಿಕೊಂಡು ಎದುರಿಗೆ ಬಂದು ನಿಂತಾಗ ಅವನಿಗೆ ಆಶ್ಚರ್ಯವೆನಿಸಿತು.

ವಾಸ್ತವದಲ್ಲಿ ಆಶ್ಚರ್ಯಚಕಿತನಾದವನು ಬ್ರಹ್ಮಶಿವ. ಚಾಲುಕ್ಯರಾಣಿಯ ಮನೆಹೆಗ್ಗಡೆಯನ್ನು ಮಹಮನೆಯ ಅತಿಥಿಶಾಲೆಯಲ್ಲಿ ನೋಡುವುದಾಗಿ ಅವನು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಮನಸ್ಸಿನಲ್ಲಿ ಹುಟ್ಟಿ ಮುಖದಲ್ಲಿ ಅರಳುತ್ತಿದ್ದ