ಪುಟ:ಕ್ರಾಂತಿ ಕಲ್ಯಾಣ.pdf/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೮

ಕ್ರಾಂತಿ ಕಲ್ಯಾಣ

ಅದು ತನ್ನಲ್ಲಿಲ್ಲದಿರುವುದು ಒಳ್ಳೆಯದೇ ಆಯಿತು ಎಂದು ಭಾವಿಸಿ ಅವಳು ಮೊದಲಿಗಿಂತ ಹೆಚ್ಚು ವೇಗದಲ್ಲಿ ತಲೆಯಾಡಿಸಿದಳು.

"ನಿಜವಾಗಿ ಮೂಕಳೆಂದು ಕಾಣುತ್ತದೆ. ಇವಳು ಇಲ್ಲಿಗೆ ಬಂದದ್ದು ಹೇಗೆ? ಈಗಿವಳನ್ನು ಏನು ಮಾಡುವುದು?" ಎಂದು ನಾಯಕನು ಯೋಚಿಸುತ್ತ ನಿಂತನು. ನಾಯಕನು ತಬ್ಬಿಬ್ಬಾದುದನ್ನು ಕಂಡು ವಿಲಾಸಿನಿಯರ ತಂಡ ಗೊಳ್ಳೆಂದು ನಕ್ಕಿತು.

ಗುಂಪಿನಲ್ಲಿದ್ದ ಹಿರಿಯ ಹೆಗ್ಗಡಿತಿ ತನ್ನ ಸಹವೇಶಿನಿಯರನ್ನು ದುರುಗುಟ್ಟಿ ನೋಡಿ, ನಾಯಕನ ಕಡೆ ತಿರುಗಿ, "ಈ ರ೦ಕಲಾಡಿ ಹೆಣ್ಣುಗಳ ಒರಟುತನಕ್ಕಾಗಿ ನಾನು ನಿಮ್ಮ ಕ್ಷಮೆ ಬೇಡುತ್ತೇನೆ, ನಾಯಕರೆ. ಈ ಹೆಂಗಸು ಯಾರೋ ನಮಗೆ ತಿಳಿಯದು. ಗಣಿಕಾವಾಸಕ್ಕೆ ಸೇರಿದವಳಲ್ಲವೆಂದು ನಾನು ಖಚಿತವಾಗಿ ಹೇಳಬಲ್ಲೆ. ನಿಜವಾಗಿ ಮೂಕಳೇ ಆಗಿರಬಹುದು; ಅಲ್ಲದಿರಬಹುದು. ಚಾವಡಿಯಲ್ಲಿ ಕೂಡಿ ಚಡೀ ಏಟು ಕೊಟ್ಟರೆ ಬಾಯಿ ಬಿಡುತ್ತಾಳೆ," ಎಂದಳು.

"ಅದು ಸರಿಯಾದ ಸಲಹೆ," ಎಂದು ನಾಯಕನು ಉಷಾವತಿಯ ಕೈಹಿಡಿದೆಳೆದು ಕೊಂಡು ಅರಮನೆಯ ಚಾವಡಿಗೆ ಹೋದನು. ಹೆಂಗಸನ್ನು ಮನೆಹೆಗ್ಗಡೆಯ ವಶಕ್ಕೊಪ್ಪಿಸಿ ಕೈ ತೊಳೆದುಕೊಳ್ಳುವುದು ಅವನ ಉದ್ದೇಶವಾಗಿತ್ತು.

'ಇವನು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುವನೋ ನೋಡೋಣ. ಕೊನೆಗೆ ಉಂಗುರದ ವಿಷ ಇದ್ದೇ ಇದೆ. ಸದ್ಯದಲ್ಲಿ ಮೂಕಳಂತೆ ನಟಿಸುವುದೇ ಸರಿಯಾದ ಉಪಾಯ.' ಎಂದು ಭಾವಿಸಿ ಉಷಾವತಿ ಸಂಗಡ ಹೋದಳು.

ರಾಜಗೃಹದ ಮನೆಹೆಗ್ಗಡೆ ಚಾವಡಿಯಲ್ಲಿ ಚಿಂತಿಸುತ್ತ ಕುಳಿತಿದ್ದನು. ಕರ್ಣದೇವ ಮಂಗಳವೇಡೆಯಲ್ಲಿ ಇದ್ದಷ್ಟು ದಿನವೂ ರಾಜಗೃಹದ ಎಲ್ಲ ಅಧಿಕಾರಗಳೂ ಹೆಗ್ಗಡೆಯ ಅಧೀನವಾಗಿದ್ದವು. ಈಗ ಕರ್ಣದೇವ ಹಿಂದಿರುಗಿ ಅಧಿಕಾರ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡದ್ದರಿಂದ ಮನೆಹೆಗ್ಗಡೆ ಮತ್ತೆ ಆಜ್ಞಾಧೀನ ಕರ್ಮಚಾರಿಯಾಗಿದ್ದನು. ಕೆಲವು ವಾರಗಳಿಂದ ನಿಂತಿದ್ದ ಪಾನಗೋಷ್ಠಿ ಈ ದಿನ ಪುನರಾರಂಭವಾಗಿತ್ತು. ಬ್ರಹ್ಮೇಂದ್ರ ಶಿವಯೋಗಿಗಳ ಪ್ರವಚನ ಕಳೆದೆರಡು ದಿನಗಳಿಂದ ನಡೆದಿರಲಿಲ್ಲ. ಶರಣ ದೀಕ್ಷೆಯಾದ ಮೇಲೆ ಜಗದೇಕಮಲ್ಲರಸರು ಇಂದೇ ಮೊದಲಸಾರಿ ಪಾನಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಎಲ್ಲ ಘಟನೆಗಳಿಂದ ಮನೆಹೆಗ್ಗಡೆ ಕಳವಳಕ್ಕೀಡಾಗಿದ್ದನು.

ಎಲ್ಲಕ್ಕಿಂತ ಮುಖ್ಯವಾಗಿ ಪಾನಗೋಷ್ಠಿಯನ್ನು ಕುರಿತ ಕರ್ಣದೇವನ ಮತ್ತೊಂದು ಸುಗ್ರೀವಾಜ್ಞೆಹೆಗ್ಗಡೆಗೆ ಹೆಚ್ಚು ಕಳವಳವನ್ನುಂಟುಮಾಡಿತ್ತು. ಗಣಿಕಾವಾಸದ ಹೆಗ್ಗಡಿತಿಯರಾರನ್ನೂ ಇಂದು ಪಾನಗೋಷ್ಠಿಗೆ ಕಳುಹಿಸಲಾಗದು. ಅವರ ಕಂಗೆಟ್ಟ