ಪುಟ:ಭಾರತ ದರ್ಶನ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೨

ಭಾರತ ದರ್ಶನ

ನಿರಂಕುಶಾಧಿಕಾರಕ್ಕೆ ಪ್ರೋತ್ಸಾಹ ಕೊಡುತ್ತಿರುವಾಗ ರಾಜರುಗಳು ಭಾರತ ಒಕ್ಕೂಟದಿಂದ ದೂರ ನಿಲ್ಲುವ ಸಂಭವವೇ ಹೆಚ್ಚು ಇತ್ತು; ತಮ್ಮ ಪ್ರಜೆಗಳನ್ನು ಮಟ್ಟ ಹಾಕಲು ಬ್ರಿಟಿಷ್ ಸೈನ್ಯವನ್ನೇ ನೆಚ್ಚಿಕೊಳ್ಳುವ ಸಂಭವವಿತ್ತು, ಅವಶ್ಯ ಬಿದ್ದರೆ ಬ್ರಿಟಿಷ್ ಸೈನ್ಯಪಡೆಗಳನ್ನು ದೇಶೀಯ ಸಂಸ್ಥಾನಗಳಲ್ಲಿ ಇಡಲು ಸಿದ್ಧರಿರುವುದಾಗಿ ಸಹ ನಮಗೆ ತಿಳಿದು ಬಂದಿತ್ತು. ಈ ಸಂಸ್ಥಾನಗಳೆಲ್ಲ ಭಾರತ ಒಕ್ಕೂಟದ ಚೌಕಟ್ಟಿನಲ್ಲಿ ನಡುಗಡ್ಡೆಗಳಾಗಿ ಇದ್ದುದರಿಂದ ಒಂದು ದೇಶೀಯ ಸಂಸ್ಥಾನದಲ್ಲಿನ ವಿದೇಶೀ ಸೈನ್ಯ ಇನ್ನೊಂದು ಸಂಸ್ಥಾನದೊಳಗಿನ ಸೈನ್ಯದೊಡನೆ ವ್ಯವಹರಿಸುವುದು ಹೇಗೆ, ಅವರೊಂದಿಗೆ ಸಂಪರ್ಕ ಹೇಗೆ ಎಂಬ ಪ್ರಶ್ನೆ ಸಹ ಎದ್ದಿತ್ತು. ಭಾರತ ಒಕ್ಕೂಟದ ಆವರಣದಲ್ಲಿ ವಿದೇಶೀ ಸೈನ್ಯ ಚಲನೆಗೆ ಒಂದು ಹಕ್ಕು ಬೇಕೆನ್ನುವ ಪ್ರಶ್ನೆ ಉದ್ಭವಿಸಿತ್ತು!

ರಾಜರು ತಮಗೆ ಶತ್ರುಗಳಲ್ಲ ಎಂದು ಗಾಂಧಿಜಿ ಪದೇ ಪದೇ ಸಾರಿದ್ದರು. ರಾಜರ ಆಡಳಿತ ನೀತಿಯನ್ನೂ, ಪ್ರಜೆಗಳ ಸಾಮಾನ್ಯ ಮೂಲಭೂತ ಹಕ್ಕುಗಳಿಗೆ ಇರುವ ಲೋಪವನ್ನೂ ಗಾಂಧಿಜಿ ಉಗ್ರ ಟೀಕಿಸಿದ್ದರೂ ಗಾಂಧಿಜಿ ಯಾವಾಗಲೂ ಅವರಿಗೆ ತುಂಬ ಸ್ನೇಹಪರರಿದ್ದರು. ಸಂಸ್ಥಾನಗಳ ಜನರೇ ಸ್ವಯಂ ಪ್ರೇರಿತರಾಗಿ ಆತ್ಮವಿಶ್ವಾಸವನ್ನೂ ಶಕ್ತಿಯನ್ನೂ ಬೆಳೆಸಿಕೊಂಡು ತಮ್ಮ ಕಾಲಮೇಲೆ ತಾವು ನಿಲ್ಲುವುದು ಉತ್ತಮವೆಂದು ಅವರು ನಂಬಿದ್ದರಿಂದ ಕಾಂಗ್ರೆಸ್ಸು ಪ್ರತ್ಯಕ್ಷವಾಗಿ ಸಂಸ್ಥಾನಗಳ ವಿಷಯದಲ್ಲಿ ಪ್ರವೇಶಿಸ ಬಾರದೆಂದು ಅನೇಕ ವರ್ಷ ಕಾಂಗ್ರೆಸ್ಸನ್ನು ತಡೆದರು. ಈ ಅವರ ನೀತಿ ನಮ್ಮಲ್ಲಿ ಅನೇಕರಿಗೆ ಸರಿಬೀಳಲಿಲ್ಲ. ಆದರೆ ಆ ನೀತಿಯ ಹಿಂದೆ ಒಂದು ದೊಡ್ಡ ತತ್ವವಿತ್ತು. "ಬ್ರಿಟಿಷ್ ಭಾರತದ ಸ್ವಾತಂತ್ರ್ಯಕ್ಯಾಗಿ ಸಂಸ್ಥಾನಗಳ ಹಕ್ಕು ಮಾರುವ ಯಾವ ಪ್ರಯತ್ನದಲ್ಲೂ ತಾವು ಭಾಗಿಗಳಾಗಬಾರದೆಂದು" ಅನೇಕ ಬಾರಿ ಹೇಳಿದ್ದರು. ಕಾಮನ್‌ವೆಲ್ ಮತ್ತು ಭಾರತ ರಾಜ್ಯಶಾಸನ ವಿಷಯಗಳಲ್ಲಿ ಮಹಾ ವಿದ್ವಾಂಸನಾದ ಪ್ರೊಫೆಸರ್ ಬೆರಿಡೇಲ್‌ಕೀತ್‌ ಗಾಂಧಿಜಿಯ ಅಂದರೆ ಕಾಂಗ್ರೆಸ್ಸಿನ ಈ ಅಭಿಪ್ರಾಯ ಸಮರ್ಥಿಸಿದನು. "ಪ್ರಾಂತ ಭಾರತೀಯರಿಗೆ ದೊರೆಯುವ ರಾಜಕೀಯ ಸ್ವಾತಂತ್ರ್ಯವನ್ನು ದೇಶೀಯ ಸಂಸ್ಥಾನಗಳ ಪ್ರಜೆಗಳಿಗೆ ಕೊಡಲಾಗದೆಂದು ಬ್ರಿಟಿಷ್ ಸಲಹೆಗಾರರು ವಾದಮಾಡಲು ಸಾಧ್ಯವೇ ಇಲ್ಲ. ಪ್ರಜಾ ಸರಕಾರ ಸ್ಥಾಪ ನೆಗೆ ಅವಶ್ಯವಾದ ರಾಜಕೀಯ ಸುಧಾರಣೆಗಳನ್ನು, ಆದಷ್ಟು ಬೇಗ ಆಚರಣೆಗೆ ತರಲು ರಾಜರಿಗೆ ನಿರೂಪ ಕೊಡಲು ಬ್ರಟಿಷ್ ದೊರೆಗೆ ಸಲಹೆ ಮಾಡಬೇಕಾದ್ದು ಅವರ ಕರ್ತವ್ಯ, ಪ್ರಾಂತ ಪ್ರತಿನಿಧಿಗಳು ಬೇಜವಾ ಬ್ದಾರಿಯುತ ರಾಜರು ನಾಮಕರಣ ಮಾಡಿದ ಸದಸ್ಯರ ಜೊತೆ ಕುಳಿತು ರಚಿಸಿದ ಸಂಯುಕ್ತ ರಾಜ್ಯ ಪದ್ಧತಿ ಯಿಂದ ಭಾರತಕ್ಕೆ ಯಾವ ಪ್ರಯೋಜನವೂ ಇಲ್ಲ. ಬ್ರಿಟಿಷ್ ದೊರೆ ಬ್ರಿಟಿಷ್ ಭಾರತದ ಪ್ರಜೆಗಳಿಗೆ ಅಧಿಕಾರ ವಹಿಸಿಕೊಟ್ಟಂತೆ ರಾಜರು ತಮ್ಮ ಪ್ರಜೆಗಳ ಪ್ರತಿನಿಧಿಗಳಿಗೆ ಅಧಿಕಾರ ವಹಿಸಿಕೊಡಬೇಕು ಎಂಬ ಗಾಂಧಿಜಿಯ ವಾದಕ್ಕೆ ಉತ್ತರ ಹೇಳಲು ಸಾಧ್ಯವಿಲ್ಲ.” ಎಂದು ಆತನು ಹೇಳಿದ್ದಾನೆ. ಬ್ರಿಟಿಷ್ ಸರಕಾರ ೧೯೩೫ ರಲ್ಲಿ ಸಂಯುಕ್ತ ರಾಜ್ಯಾಂಗ ವ್ಯವಸ್ಥೆ ಸಲಹೆ ಮಾಡಿದಾಗಲೇ ಕೀತ್ ಈ ಅಭಿಪ್ರಾಯ ಕೊಟ್ಟನು. ಸರ್ ಸ್ಟಾಫರ್ ಕ್ರಿಪ್ಸ್ ಸಲಹೆಗಳಿಗೆ ಅದು ಇನ್ನೂ ಚೆನ್ನಾಗಿ ಅನ್ವಯಿಸುತ್ತದೆ.

ಈ ಸಲಹೆಗಳು ಯೋಚಿಸಿದಷ್ಟೂ ಹೆಚ್ಚು ವಿಚಿತ್ರ ಕಂಡವು. ಭಾರತಕ್ಕೆ ನೆಪಮಾತ್ರ ಅಥವ ಅರೆ ಬರೆ ಸ್ವಾತಂತ್ರ ಮಾತ್ರ ಸಾಧ್ಯವಿತ್ತು ; ಮತ್ತು ತಮ್ಮ ನಿರಂಕುಶಾಧಿಕಾರ ರಕ್ಷಣೆಗೆ ಬ್ರಿಟಿಷ್ ಸೈನ್ಯದ ಸಹಾಯವನ್ನೇ ಸದಾ ಆಶ್ರಯಿಸಿರಬೇಕಾದ ಅಸಂಖ್ಯಾತ ಸಣ್ಣ ಪುಟ್ಟ ಸಂಸ್ಥಾನಗಳ ಚದುರಂಗವಾಗುತ್ತಿತ್ತು. ರಾಜಕೀಯ ಅಥವ ಆರ್ಥಿಕ ಐಕ್ಯತೆ ಸಾಧ್ಯವಿರಲಿಲ್ಲ. ತನ್ನ ಅಧೀನದ ಸಣ್ಣ ಪುಟ್ಟ ಸಂಸ್ಥಾನಗಳ ಮೂಲಕ ರಾಜಕೀಯ ಮತ್ತು ಆರ್ಥಿಕ ನೀತಿ ಎರಡರಲ್ಲೂ ಬ್ರಿಟನ್ನಿನ ಪರಮಾಧಿಕಾರವು ಚ್ಯುತಿಯಿಲ್ಲದೆ ಮುಂದುವರಿಯಲು ಅವಕಾಶವಿತ್ತು. ಬ್ರಿಟನ್ನಿನ ಯುದ್ಧ ಮಂತ್ರಿಮಂಡಲ ಭವಿಷ್ಯದ ಯಾವ ಚಿತ್ರವನ್ನು ಕಲ್ಪಿಸಿಕೊಂಡಿತ್ತೊ ನಾನರಿಯೆ, ಸರ್ ಸ್ಟಾಫರ್ ಕ್ರಿಪ್ಸ್ ಭಾರತದ ಸ್ನೇಹಿತನೆಂದೂ ಭಾರತವೂ ಅಖಂಡವಿದ್ದು ಸ್ವತಂತ್ರವಾಗಬೇಕೆಂದು ಇರಾದೆಯುಳ್ಳವನೆಂದೂ ಭಾವಿಸಿದ್ದೆ. ಆದರೆ ವೈಯಕ್ತಿಕ ದೃಷ್ಟಿ, ಅಭಿಪ್ರಾಯ ಅಥವ ಸೌಜನ್ಯತೆಯ ಪ್ರಶ್ನೆಗಳಿಗೆ ಇದರಲ್ಲಿ ಅವಕಾಶ ಇರಲಿಲ್ಲ. ಉದ್ದೇಶ್ಯಪಟ್ಟು ಬಹಳ ಎಚ್ಚರಿಕೆಯಿಂದ ಅನುಮಾನಾಸ್ಪದ ಮಾತು ಜೋಡಿಸಿ ಸಿದ್ಧಮಾಡಿದ ಒಂದು ಹೊಸ ರಾಜ್ಯ ಸಲಹೆಯನ್ನು ನಾವು ಯೋಚಿಸಬೇಕಾಗಿತ್ತು ; ಒಪ್ಪಿದರೆ ಪೂರ್ತಿ ಒಪ್ಪಬೇಕು, ಇಲ್ಲ