ಪುಟ:ಭಾರತ ದರ್ಶನ.djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪೮

ಭಾರತ ದರ್ಶನ

ಮೇಲಿನ ಅತ್ಯಲ್ಪ ಜನರ ಒಣ ಅಟ್ಟಹಾಸದ ಶ್ರೀಮಂತಿಕೆಯನ್ನು ಬಿಟ್ಟರೆ ಬ್ರಿಟಿಷರ ಆಳ್ವಿಕೆಯು ಆರಂಭವಾಗಿ ಅನೇಕ ಪೀಳಿಗೆಗಳಾದರೂ ದೇಶದಲ್ಲಿ ಬೇರೂರಿರುವುದು ಭೀಕರ ಬಡತನ ಮತ್ತು ಮಾನವೀಯತೆಯ ಶೋಷಣೆ ಎಂಬ ಭಯಂಕರ ಚಿತ್ರ ಈ ಕಾಮದಿಂದ ಸ್ಪಷ್ಟವಾಯಿತು. ಭಾರತದಲ್ಲಿ ಬ್ರಿಟಿಷರು ಆಳಿ ಸಾಧಿಸಿದ ಕೀರ್ತಿ ಕಲಶ ಮತ್ತು ಪರಿಪೂರ್ಣತೆ ಎಂದರೆ ಇದೇ. ಈ ಕ್ಷಾಮ ಒದಗಿದ್ದು ಪ್ರಕೃತಿಯ ವಿಕೋಪ ಅಥವ ಪ್ರಕೃತಿ ಶಕ್ತಿಗಳ ಭೀಕರ ಪ್ರಳಯನೃತ್ಯದಿಂದ ಅಲ್ಲ; ಯುದ್ಧಾಚರಣೆ ಅಥವ ಶತ್ರುಗಳ ಮುತ್ತಿಗೆಯಿಂದಲೂ ಅಲ್ಲ. ಸ್ವಲ್ಪ ಮುಂದಾಲೋಚನೆಯಿಂದ ಉಚಿತ ಕಾರ್ಯಕ್ರಮ ತೆಗೆದುಕೊಂಡಿದ್ದರೆ ನಿವಾರಣೆಯು ಸಾಧ್ಯವಿತ್ತೆಂದು ಎಲ್ಲರೂ ಒಪ್ಪುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಅಕ್ಷಮ್ಯ ರೀತಿಯಲ್ಲಿ ಅಲಕ್ಷೆಮಾಡಿದರೆಂದೂ, ದಕ್ಷತೆಯಿಂದ ವರ್ತಿಸಲಿಲ್ಲವೆಂದೂ, ಮಾನಸಿಕರಿದ್ದರೆಂದೂ ಎಲ್ಲರೂ ಒಪ್ಪಿದ್ದಾರೆ. ರಸ್ತೆಗಳಲ್ಲಿ ಸಹಸ್ರಗಟ್ಟಲೆ ಜನರು ಸಾಯುವವರೆಗೆ ಕೊನೆಯವರೆಗೂ ಕ್ಷಾಮವಿದೆ ಎಂದು ಒಪ್ಪಲಿಲ್ಲ; ಕ್ಷಾಮದ ವಿಷಯ ಬಂದ ಸುದ್ದಿ ಯಾವುದನ್ನೂ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟಿಸಲಾಗದೆಂದು ಸರಕಾರ ನಿರೋಧಿಸಿತು. ಕಲ್ಕತ್ತ ನಗರದ ಬೀದಿಗಳಲ್ಲಿ ಹಸಿವಿನಿಂದ ಸಾಯುತ್ತಿದ್ದ ಹೆಂಗಸರು ಮಕ್ಕಳ ಭೀಕರ ದಾರುಣ ಚಿತ್ರಗಳನ್ನು ಕಲ್ಕತ್ರನಗರದ “ಸ್ಟೇಟ್ಸ್ ಮನ್” ಪತ್ರಿಕೆಯು ಪ್ರಕಟಿಸಿದಾಗ ಇಂಡಿಯಾ ಸರಕಾರದ ಅಧಿಕಾರಿಯು ಕೇಂದ್ರ ಶಾಸನ ಸಭೆಯಲ್ಲಿ ಮಾತನಾಡುತ್ತ 'ಪರಿಸ್ಥಿತಿಯನ್ನು ಆ ರೀತಿ ನಾಟಕೀಯವಾಗಿ ಮಾಡಿದ್ದಕ್ಕೆ ಪ್ರತಿಭಟಿಸಿದನು. ಭಾರತದಲ್ಲಿ ಆ ರೀತಿ ಹಸಿವಿನಿಂದ ಸಾವಿರಗಟ್ಟಲೆ ಜನ ಸಾಯುವುದು ಆತನಿಗೆ ನಿತ್ಯದ ಸಾಮಾನ್ಯ ವಿಷಯವಾಗಿತ್ತು. ಲಂಡನ್‌ನಲ್ಲಿ ಇಂಡಿಯಾ ಕಛೇರಿಯ ಕಾರ್ಯದರ್ಶಿ ಅಮೆರಿ ತನ್ನ ಹೇಳಿಕೆಗಳಿಂದ ಎಲ್ಲವನ್ನೂ ನಿರಾಕರಿಸಿ ಪ್ರಖ್ಯಾತನಾದನು. ಆದರೆ ದೇಶಾದ್ಯಂತ ಪ್ರಳಯ ತಾಂಡವವಾಡುತ್ತಿದ್ದ ಭಯಂಕರ ಕ್ಷಾಮ ಪರಿಸ್ಥಿತಿ ಮುಚ್ಚಿಡಲು ಅಸಾಧ್ಯವೆಂದಾಗ ಅಧಿಕಾರಿಗಳ ಒಂದು ಗುಂಪು ಇನ್ನೊಂದು ಗುಂಪನ್ನು ನಿಂದಿಸಲಾರಂಭಿಸಿತು. ಇಂಡಿಯಾ ಸರಕಾರ ಪ್ರಾಂತ ಸರಕಾರದ ಮೇಲೆ ತಪ್ಪನ್ನು ಹೊರಿಸಿತು. ಪ್ರಾಂತ ಸರಕಾರವೇ ಗೌರ್ನರ್ ಮತ್ತು ಸಿವಿಲ್ ಸರ್ವಿಸ್‌ ಅಧಿಕಾರಿಗಳ ಆಡಳಿತದಲ್ಲಿ ಕೇಂದ್ರ ಸರಕಾರದ ಕೈಗೊಂಬೆಯಾಗಿತ್ತು. ಎಲ್ಲರೂ ನಿಂದಾರ್ಹರೆ; ಆದರೆ ಭಾರತದಲ್ಲಿ ಎಲ್ಲಿ ಏನಾದರೂ ಮಾಡಬಲ್ಲ ಒಬ್ಬ ವ್ಯಕ್ತಿ ವೈಸ್‌ರಾಯ್. ಕೈಯಲ್ಲಿ ಕೇಂದ್ರೀಕೃತ ವಾಗಿದ್ದ ಸರ್ವಾಧಿಕಾರಿ ಸರಕಾರವು ಇದೆಲ್ಲದರ ಜವಾಬ್ದಾರಿ ಹೊರಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಅಥವ ಅರೆಬರೆ ಪ್ರಜಾಸತ್ತಾತ್ಮಕವಿದ್ದ ರಾಷ್ಟ್ರದಲ್ಲಿ ಏನಾದರೂ ಇಂತಹ ವಿಪತ್ತು ಒದಗಿದ್ದರೆ ಆ ಎಲ್ಲ ಸರಕಾರಗಳೂ ಉರುಳಿ ಮಣ್ಣು ಮುಕ್ಕುತ್ತಿದ್ದವು. ಆದರೆ ಭಾರತದಲ್ಲಿ ಆ ಅವಕಾಶ ಯಾವುದೂ ಇಲ್ಲದೆ ಎಲ್ಲವೂ ಮೊದಲಿನಂತೆಯೇ ನಡೆಯುತ್ತಿತ್ತು.

ಯುದ್ಧದ ದೃಷ್ಟಿಯಿಂದ ಸಹ ಈ ಕ್ಷಾಮ ಒದಗಿದ್ದು ಯುದ್ಧರಂಗಕ್ಕೆ ಅತಿ ಸಮೀಪವಿದ್ದ ಮತ್ತು ಎಂದಾದರೂ ಯುದ್ಧರಂಗವಾಗಬಹುದಾದ ಪ್ರಾಂತದಲ್ಲಿಯೇ ಇತ್ತು. ದೇಶಾದ್ಯಂತ ಕ್ಷಾಮ ಹರಡಿ, ಆರ್ಥಿಕ
——————
ಹೇಳುತ್ತಾರೆ. ಕಲ್ಕತ್ತ ವಿಶ್ವವಿದ್ಯಾನಿಲಯ ಮಾನವಶಾಸ್ತ್ರ ಶಾಖೆಯ ನಿಪುಣರು ಕ್ಷಾಮಪೀಡಿತ ಸ್ಥಳಗಳ ಜನರಲ್ಲಿ ವೈಜ್ಞಾನಿಕ ರೀತಿಯಿಂದ ಕೆಲವು ಮಾದರಿ ಅಂಕಿಗಳನ್ನು ಸಂಗ್ರಹ ಮಾಡಿದರು. ಅವರ ಪ್ರಕಾರ ಬಂಗಾಲ ಕ್ಷಾಮದಲ್ಲಿ ೩೪ ಲಕ್ಷ ಜನ ಮಡಿದಿರಬೇಕೆಂದು ತಿಳಿದುಬಂದಿದೆ. ಅದೂ ಅಲ್ಲದೆ ೧೯೪೩ ಮತ್ತು ೪೪ ರಲ್ಲಿ ಬಂಗಾಲದಲ್ಲಿ ಶೇಕಡ ೪೬ ಜನರು ಸಾಂಕ್ರಾಮಿಕ ಜಾಡ್ಯಗಳಿಂದ ನರಳುತ್ತಿದ್ದರೆಂದು ತಿಳಿದು ಬಂದಿದೆ. ಗ್ರಾಮಗಳ ಸರಕಾರಿ ಪಟೇಲರು ಮತ್ತು ಶಾನುಭೋಗರಿಂದ ಬಂದ ವರದಿಯಂತೆ ಬಂಗಲ ಸರಕಾರ ಕೊಟ್ಟ ಸಂಖ್ಯೆಯು ಬಹಳ ಕಡಮೆ ಇತ್ತು. ಸರ್ ಜಾನ್‌ವುಡ್ ಹೆಡ್‌ರ ಅಧ್ಯಕ್ಷತೆಯಲ್ಲಿ ಸರಕಾರವೇ ಏರ್ಪಡಿಸಿದ್ದ ಕ್ಷಾಮ ವಿಚಾರಣಾ ಸಮಿತಿಯ ವರದಿಯಂತ ಬಂಗಾಲದ ಕ್ಷಾಮ ಮತ್ತು ಅನಂತರ ಬಂದ ಸಾಂಕ್ರಾಮಿಕ ರೋಗಗಳಿಂದ ೧೫ ಲಕ್ಷ ಜನ ಸತ್ತರೆಂದು ಗೊತ್ತಾಗುತ್ತದೆ. ಈ ಎಲ್ಲ ಅಂದಾಜು ಬಂಗಾಲ ಒಂದಕ್ಕೆ ಮಾತ್ರ. ದೇಶದ ಇತರ ಭಾಗಗಳಲ್ಲಿ ಅನೇಕ ಕಡೆಗಳಲ್ಲಿ ಸಹ ಕ್ಷಾಮ ಮತ್ತು ರೋಗಗಳಿಂದ ಆನೇಕ ಜನರು ನೊಂದರು.