ಈ ಪುಟವನ್ನು ಪರಿಶೀಲಿಸಲಾಗಿದೆ
174 ಮಿಂಚು
“ಬರಿಗೈಲಿ ಬಂದಿರಿ !" “ದಿಲ್ಲಿಯಲ್ಲಿ ದೋಚಿದ್ರು." "ಸೆಂಟ್ ಬಾಟಲ್ ?” “ಅದನ್ನೂ__” ರಾಷ್ಟ್ರಪಕ್ಷದ ಅಧ್ಯಕ್ಷರು ರಂಗಧಾಮನಿಗೆ ಹೇಳಿದ್ದರು: “ನಿನಗಿನ್ನೂ ಚಿಕ್ಕ ವಯಸ್ಸು, ಒಂದು ದಿವಸ ಕಿಷ್ಕಂಧೆಯ ಮುಖ್ಯಮಂತ್ರಿ ಯಾಗಿಯೇ ಆಗ್ತೀಯಾ, ನಿನ್ನ ಪ್ರಗತಿಯ ದಾಖಲೆಯನ್ನ ಕುತೂಹಲದಿಂದ ಓದ್ತಿರ್ತೀನಿ. ಈ ದೇಶ ಉಳಿದಿರೋದು ರಾಷ್ಟ್ರಪಕ್ಷದಿಂದಾಗಿ, ಎಲ್ಲಕ್ಕಿಂತ ದೊಡ್ಡದು ಪಕ್ಷ. ನನ್ನ ಪೂರ್ಣ ಆಶೀರ್ವಾದ ನಿನಗಿದೆ." ಇಂದಿನ ಅವನ ಸಲಿಗೆಯ ಮಾತಿಗೂ ನಸುನಗೆಗೂ ಹಿನ್ನೆಲೆ, ರಾಷ್ಟ್ರಪಕ್ಷದ ಅಧ್ಯಕ್ಷರು ಆಡಿದ್ದ ಮಾತು. “ನಿಮ್ಮ ಮಾವನ ಮನೆಯಿಂದ ಸುದ್ದಿ ಇಲ್ಲವೊ ?” "ಇಲ್ಲ." “ಜರ್ಮನಿಯಿಂದ ಟರ್ಬೈನ್ ಬಂದ ಮೇಲೆಯೇ ತಾಯ್ತನ ಅಂತ ನಿಮ್ಮ
ರಮಣಿ ಕಾದಿರ್ಬೇಕು, ಚಿತ್ರಾವತಿಗೆ ಯಾವಾಗ ಹೊರಡ್ತೀರಾ ?”
“ಮುಖ್ಯಮಂತ್ರಿಯವರು ಅನುಮತಿ__” "ಮಾತಾಜಿ ಮರೆತಿರಾ ?” . “ಮಾತಾಜಿ ಅನುಮತಿ ಕೋಡೋದಾದ್ರೆ ಈಗಲೇ.” “ಈಗಲೇ ಹೊರಡಬಹುದು, ನಿಕಾಲೆಯಾಗಬೇಕಾದ ಫೈಲುಗಳು, ಟಪಾಲು ರಾಶಿ ಇಷ್ಟನ್ನು ನೀವು ಒಯ್ಬೇಕು. ಜತೆಗೆ ನಿಮ್ಮ ಪಿ.ಎ.ಯನ್ನೂ ಕರೆದುಕೊಂಡು ಹೋಗಿ." “ಬರ್ತೀನಿ. ನಮಸ್ಕಾರ.” ಸಿಟ್ಟಿನಿಂದ ಕೆಂಪಡರಿದ್ದ ಸೌದಾಮಿನಿ ನಿರ್ಗಮಿಸುತ್ತಿದ್ದ ರಂಗಧಾಮನನ್ನು ನೋಡಿದಳು. ...ಗುಪ್ತಚಾರ ದಳದ ಮುಖ್ಯಸ್ಥ ಭೇಟಿಗೆ ಬಂದ. ಕುರ್ನೀಸು ಮಾಡಿ, ಆಜ್ಞಪ್ತನಾದ ಬಳಿಕ ಕುಳಿತು, ಅವನೆಂದ: “ಕೇಂದ್ರ ಸರಕಾರದ ಗೂಢಚಾರ ದಳದ ಒಂದು ತಂಡ ದಕ್ಷಿಣದ ರಾಜ್ಯಗಳ ಪ್ರವಾಸ ಕೈ ಗೊಂಡಿದೆ." ಸೌದಾಮಿನಿಯ ವಕ್ಷಸ್ಥಲ ಮುದುಡಿತು. “ಪಕ್ಷದ ಗೂಢಚಾರರೂ ಒಬ್ಬಿಬ್ಬರು ಈ ತಂಡದಲ್ಲಿರಬಹುದೊ ?” “ಇರುವುದು ಸಾಧ್ಯ, ಇದ್ದರೆ, ಕೇಂದ್ರಕ್ಕೆ ಅವರು ಬೇರೆ ಬೇರೆ ವರದಿ ಸಲ್ಲಿಸ್ತಾರೆ."