ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅವರನ್ನು ಬೆರಗುಗೊಳಿಸಿ, ತನ್ನ ಗಂಡನಿಗೆ ಯೌವನವನ್ನು ದೊರಕಿಸಿಕೊಟ್ಟಳು.
ಪ್ರತ್ಯುಪಕಾರಾರ್ಥವಾಗಿ ಚ್ಯವನ ಋಷಿಯು ಮಾವನ ಮನೆಗೆ ಹೋಗಿ ಒಂದು
ಯಜ್ಞವನ್ನು ಆಚರಿಸಿ, ಅಶ್ವಿನೀಕುಮಾರರಿಗೆ ಹವಿರ್ಭಾಗವನ್ನು ಅರ್ಪಿಸಿದನು.
ಇಂದ್ರನಿಗೆ ಈ ಸಂಗತಿಯು ಹಿಡಿಸಲಿಲ್ಲ. ಚ್ಯವನನನ್ನು ವಧಿಸಬೇಕೆಂದು ಇಂದ್ರನು
ವಜ್ರಾಯುಧವನ್ನು ಕೈಗೆತ್ತಿ ಕೊಂಡಾಗ ಚ್ಯವನನು ಕೂಡಲೇ ಮದ ಎಂಬ
ರಾಕ್ಷಸನನ್ನು ನಿರ್ಮಿಸಿದನು. ಇದನ್ನು ಕಂಡ ಇಂದ್ರನು ಭಯಗೊಂಡನು.
ಹವಿರ್ಭಾಗವನ್ನು ಅಶ್ವಿನೀ ಕುಮರರಿಗೆ ಅರ್ಪಿಸಲು ಅನಂತರ ವಿರೋಧಿಸಲಿಲ್ಲ.
ಪ್ರಯಾಗ ಕ್ಷೇತ್ರದಲ್ಲಿ ಹಗಲಿರುಳು ನೀರಿನಲ್ಲಿ ನಿಂತು 'ಉದವಾಸ' ಎಂಬ ವ್ರತವನ್ನು
ಚ್ಯವನನು ಆಚರಿಸಿದನು. ಆಗ ಬೆಸ್ತರವನೊಬ್ಬ ನೀರಿನಲ್ಲಿ ಬಿಟ್ಟ ಬಲೆಗೆ ಮೀನುಗಳ
ಜೊತೆಗೆ ಈ ಋಷಿಯೂ ಸಿಕ್ಕಿಕೊಂಡನು; ಇದನ್ನು ಕಂಡ ಬೆಸ್ತರು ಭಯಗೊಂಡು,
ನಹುಷರಾಜನ ಬಳಿ ಹೋಗಿ ನಡೆದುದೆಲ್ಲವನ್ನೂ ತಿಳಿಸಿದರು. ನಹುಷರಾಜನು
ಚ್ಯವನಋಷಿಯನ್ನು ಷೋಡಶೋಪಚಾರದಿಂದ ಪೂಜಿಸಿ, ಚ್ಯವನನ ಇಷ್ಟಾರ್ಥವನ್ನು
ಕೇಳಬಯಸಿದನು. ಆಗ ಚ್ಯವನನು ತನ್ನ ಮೌಲ್ಯದಷ್ಟು ಹಣವನ್ನು ಬೆಸ್ತರಿಗೆ
ಕೊಡಲು ತಿಳಿಸಿದನು. ನಹುಷನು ತನ್ನ ಸಮಸ್ತ ರಾಜ್ಯವನ್ನೇ ಅರ್ಪಿಸಿದರೂ
ಯೋಗ್ಯವಾದ ಬೆಲೆಯಾಗಲಿಲ್ಲ. ಆಗ ಒಬ್ಬ ಋಷಿಯು ಗೋಧನವನ್ನು ಅರ್ಪಿಸಲು
ಹೇಳಿದನು. ಆಗ ಬೆಲೆಯು ಸರಿಹೋಯಿತು. ತನ್ನ ಕುಲಕ್ಕೆ ಭಿನ್ನಜಾತಿಯ
ದೋಷವು ತಗಲುವದಿದೆ ಎಂಬ ಭವಿಷ್ಯವನ್ನು ಚ್ಯವನನು ಅರಿತಿದ್ದನು. ಅದಕ್ಕೆ
ಕುಶಿಕನು ಕಾರಣನಾಗಲಿರುವನು ಎಂಬ ಸಂಗತಿಯೂ ಗೊತ್ತಿತ್ತು. ಆ ಕಾರಣ
ಕುಶಿಕನನ್ನು ನಾಶಗೊಳಿಸಲು ಆತನಿಗೆ ವಿಪರೀತ ಹಿಂಸೆ ಮಾಡಲಾಯಿತು;
ಆದರೆ ಪ್ರಯೋಜನವಾಗಲಿಲ್ಲ. ತದ್ವಿರುದ್ದ ಇವನ ಸೇವೆಯಿಂದ ಕುಶಿಕನು
ಸಂತುಷ್ಟನಾಗಿ 'ನಿನ್ನ ಕುಲದಲ್ಲಿ ಬ್ರಾಹ್ಮಣನು ಹುಟ್ಟುವನು' ಎಂಬ ವರವನ್ನು
ನೀಡಿ, ಆತನಿಗೆ ಸ್ವರ್ಗಸುಖದ ದಾರಿ ಮಾಡಿಕೊಟ್ಟನು. ಮನುವಿನ ಕನ್ಯೆಯಾದ
ಅರುಷಿಯಿಂದ ಈತನಿಗೆ ಔರ್ವನೆಂಬ ಮಗನಾದನು. ಅವನು ಒಳ್ಳೆಯ
ಭಾಷಣಕಾರ, ಮಂತ್ರಕಾರನಾಗಿದ್ದನು. ಈತನನ್ನು ಸಪ್ತರ್ಷಿಗಳಲ್ಲಿ ಒಬ್ಬನೆಂದು
ಎಣಿಸಲಾಗುತ್ತದೆ.

೪೪. ಜಯಾ, ಸುಪ್ರಭಾ

ಇವರಿಬ್ಬರೂ ದಕ್ಷಪ್ರಜಾಪತಿಯ ಕನ್ಯೆಯರಾಗಿದ್ದರು. ರಾಕ್ಷಸರನ್ನು
ಸಂಹರಿಸಲೋಸುಗ, ಜಯಳಿಗೆ, ಇಷ್ಟವಿದ್ದ ಹಾಗೆ ಅದೃಶ್ಯರಾಗಬಲ್ಲ ಐವತ್ತು