ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಕ್ಷಿಣಾಮೂರ್ತಿ

ವಿಕಿಸೋರ್ಸ್ದಿಂದ

ದಕ್ಷಿಣಾಮೂರ್ತಿ -

	ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ವೀಣಾ ಸಾಂಬ ಯೋಗ ಸಂಹಾರ ಶಕ್ತಿ ಜ್ಞಾನ ಅನುಷ್ಠಾನ ವ್ಯಾಖ್ಯಾನ ವಿದ್ಯಾ ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ. ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ (ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ)- ಎಂದು ಈ ದೇವತೆಯನ್ನು ಪ್ರಾರ್ಥಿಸುವುದು ರೂಢಿಯಲ್ಲಿದೆ. ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡುವುದಿಲ್ಲ. ಆದಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೌನವಷ್ಟೇ. ಶಿಷ್ಯರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇತರ ದೇವತೆಗಳಿಗೆ ಪುರಾಣಪ್ರಸಿದ್ಧಿ ಇರುವಂತೆ ಈ ದೇವತೆಯ ವಿಚಾರ ಪುರಾಣಗಳಲ್ಲಿ ಅಧಿಕವಾಗಿ ಕಂಡುಬರುವುದಿಲ್ಲ. ಮಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ಉಪಾಸನಾದಿ ವಿಭಾಗದಲ್ಲಿ ಈ ದೇವತೆಯ ವಿಚಾರವಿದೆ. ಜ್ಞಾನವನ್ನು ಬಯಸುವವರು ಈ ದೇವತೆಯನ್ನು ಉಪಾಸನೆ ಮಾಡುತ್ತಾರೆ. ಅನೇಕ ಮರಗಳ ನೆರಳುಗಳಿಂದ ಬಿಸಿಲಿಲ್ಲದೆ ತಂಪಾದ ಗಿರಿತೊರೆಗಳಿಂದ ಕೂಡಿರುವ ಲತಾಪುಷ್ಪ ಸಮೃದ್ಧವಾದ ದುಂಬಿಗಳ ಝೇಂಕಾರ ನವಿಲುಗಳ ನರ್ತನ ಕೋಗಿಲೆಗಳ ಇಂಪಾದಧ್ವನಿ, ಹಾವು-ಮುಂಗುಸಿ, ಹಸು-ಹುಲಿ ಮೊದಲಾದ ವೈರ ಪ್ರಾಣಿಗಳೂ ತಮ್ಮ ವೈರವನ್ನು ಮರೆತು ವಿಹರಿಸುತ್ತಿರುವ ಶುಕನೇ ಮೊದಲಾದ ಮುನಿಗಳು ಮತ್ತು ಇಂದ್ರಾದಿ ದೇವತೆಗಳಿಂದ ಸೇವಿತರಾದ ಸಿದ್ಧ  ಕಿನ್ನರರ ವಾಸಸ್ಥಳವಾದ ಮೇರುಪರ್ವತ ಪ್ರದೇಶದಲ್ಲಿ ಗರುಡ ಶಿಲೆಯ ಎಲೆಗಳು ಪದ್ಮರಾಗದ ಹಣ್ಣುಗಳು ನವರತ್ನದ ಬಿಳಿಲುಗಳು ಹಾಗೂ ಸುಗಂಧವನ್ನು ಬೀರುವ ಹೂಗಳಿಂದ ಕೂಡಿದ ಎತ್ತರವಾದ ಒಂದು ಆಲದ ಮರವಿದೆ. ಆ ಮರದ ಕೆಳಗೆ ರತ್ನಸಿಂಹಾಸನದ ಮೇಲೆ ಶರತ್ಕಾಲದ ಚಂದ್ರಕಾಂತಿಯನ್ನು ಬೀರುವ ಮುಖದಿಂದ ಕೂಡಿದ ದಕ್ಷಿಣಾಮೂರ್ತಿ ಮಂಡಿಸಿದ್ದಾನೆ. ಮುನಿಗಳ ಗುಂಪು ಈತನನ್ನು ಯಾವಾಗಲೂ ಸ್ತುತಿಸುತ್ತಿದ್ದಾರೆ. ಈ ಸ್ವರೂಪದಿಂದ ಜಗತ್ತಿಗೇ ಮೊದಲಿಗನಾದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕು ಎಂದು ಶಾರದಾತಿಲಕದಲ್ಲಿ ಹೇಳಿದೆ. ಕರ್ಪೂರದಂತೆ ಶುಭ್ರನೂ ತರ್ಕಮುದ್ರೆಯನ್ನು ಧರಿಸಿ ಬ್ರಹ್ಮತತ್ತ್ವವನ್ನು ತಿಳಿಸುವವನೂ ಯೋಗಾಸನದಲ್ಲಿ ಮಂಡಿತನೂ ಆದ ದಕ್ಷಿಣಾಮೂರ್ತಿಯನ್ನು ಧ್ಯಾನಿಸಬೇಕೆಂದು ಶ್ರೀಮಾನಸೋಲ್ಲಾಸ ಗ್ರಂಥ ಹೇಳುತ್ತದೆ. 

ಬ್ರಹ್ಮತತ್ತ್ವವನ್ನು ಬಯಸುವ ವೃದ್ಧರಾದ ಋಷಿಗಳ ಗುಂಪಿನಿಂದ ಆವೃತನಾದ ಜ್ಞಾನಮುದ್ರೆಯನ್ನು ಧರಿಸಿ ಆನಂದಮೂರ್ತಿಯೂ ಮೌನರೂಪ ವ್ಯಾಖ್ಯಾನದಿಂದ ಬ್ರಹ್ಮತತ್ತ್ವವನ್ನು ಪ್ರಕಟಿಸುತ್ತಿರುವ ತರುಣನೂ ಆದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕೆಂದು ಶ್ರೀತತ್ತ್ವಸುಧೆ ತಿಳಿಸುತ್ತದೆ.

ವೀಣೆ ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.

ಜ್ಞಾನಾಧಿದೈವವಾದುದರಿಂದ ಮೇಧಾ ದಕ್ಷಿಣಮೂರ್ತಿ ಎಂಬ ಹೆಸರು ಮಂತ್ರೋದ್ಧಾರದಲ್ಲಿ ಕಂಡುಬರುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮಾನಂದ ಸುಖದಲ್ಲಿ ವಿಹರಿಸುವ ಈಶ್ವರನ ಸ್ವರೂಪವೇ ದಕ್ಷಿಣಾಮೂರ್ತಿ. ಈ ದಕ್ಷಿಣ ಮುಖನಾದ ಶಿವ ಪ್ರತ್ಯಕ್ಷನಾದರೆ ತತ್ತ್ವಜ್ಞಾನ ಸಿದ್ಧಿಸುತ್ತದೆ. (ಎಸ್.ಎನ್.ಕೆ.)