ಪುಟ:ಅಲ್ಲಮಪ್ರಭು ವಚನಸಂಪುಟ - ೨.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xii

ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ . ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ , ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳೂ ಬಾಳಿದುದು, ಬರೆದುದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ- ಸಾಹಿತ್ಯಗಳ ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ ; ಇವರ ಸಾಹಿತ್ಯಸಂಪತ್ತನ್ನು ರಕ್ಷಿಸುವುದು, ಪ್ರಸಾರಮಾಡುವುದು ನಮ್ಮ ಕರ್ತವ್ಯ. ಈ ಕರ್ತವ್ಯದ ಭಾಗವಾಗಿ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ"ಯನ್ನು ಕರ್ನಾಟಕ ಸರಕಾರ ಕೈಗೆತ್ತಿಕೊಂಡಿತು.

ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು, ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನು ಕ್ರೋಢೀಕರಿಸಿ ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ. ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ, ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ ಮಂಡಳಿ ಸದಸ್ಯರ ಸಂಯುಕ್ತ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು ಸಂತೋಷದ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹಾಸಿಕ ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸುತ್ತೇನೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಈ ಪರಿಷ್ಕತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.