ಪುಟ:ಯಶೋಧರ ಚರಿತೆ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಯಶೋಧರ ಚರಿತೆ

ಅಕಾಮಾಂ ಕಾಮಯಾನಸ್ಯ ಶರೀರಮುಖತಪ್ಯತೇ |
ಇಚ್ಛತಾಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ||
(ವಾಲ್ಮೀಕಿ ರಾಮಾಯಣ : ಸರ್ಗ ೨೨, ಶ್ಲೋ ೪೨)
(ಕಾಮವಿಲ್ಲದವಳನ್ನು ಕಾಮಿಸುವುದರಿಂದ ದೇಹಕ್ಕೆ ಸಂಕಟವೇ ಹೊರತು
ಸುಖವಿಲ್ಲ. ತಾನಾಗಿ ಇಷ್ಟಪಟ್ಟು ಕಾಮಿಸಿ ಬಂದವಳನ್ನು ಆದರಿಸುವುದರಿಂದ
ಸಂತೋಷವೂ ಹೆಚ್ಚು)
ಅಮೃತಮತಿ ತಾನಾಗಿ ಕಾಯಿಸಿ ಬಂದಳೆಂದು ಅಷ್ಟವಂಕನು ಅವಳನ್ನು
ಆದರಿಸಲಿಲ್ಲವೆಂದಾದಮೇಲೆ ಅವನಿಗೆ ಸಂತೋಷವೂ ಇದ್ದಿರಲಾರದು.
ವಾಮಃ ಕಾಮೋ ಮನುಷ್ಯಾಣಾಂ ಯಸ್ಮಿನ್ ಕಿಲ ನಿಬಧ್ಯತೇ |
ಜನೇ ತಸ್ಮಿನ್ಸ್ತ್ವನುಕ್ರೋಶ : ಸ್ನೇಹಶ್ಚ ಕಿಲ ಜಾಯತೇ||
(ವಾಲ್ಮೀಕಿರಾಮಾಯಣ: ಸುಂದರಕಾಂಡ, ಸರ್ಗ ೨೨ಶ್ಲೋ ೪೨)
(ಮನುಷ್ಯರಿಗೆ ಕಾಮವೆಂಬುದು ಬಹಳ ವಕ್ರವಾದುದು. ಆ ಕಾಮವು
ಯಾರಲ್ಲಿ ಪ್ರವರ್ತಿಸುವುದೋ ಆ ಜನ್ಮದಲ್ಲಿ ದಯೆಯೂ ಸ್ನೇಹವೂ ಹುಟ್ಟಿ
ಬಿಡುವುದು). ಎಂಬ ಮಾತಿನಂತೆ ಆ 'ಜಾರ'ನಿಗೆ ಅವಳಲ್ಲಿ ದಯೆಯೂ ಇರಲಿಲ್ಲ.
ಇಷ್ಟರಿಂದ ಸಿದ್ಧವಾಗುವುದು ಒಂದೇ ಒಂದು : ಅಮೃತಮತಿ ಬರಿಯ ಕಾಮುಕಸ್ತ್ರೀ;
ಜಾರೆ; ಜಾರಿದವಳು; ತಾನಾಗಿಯೇ ಜಾರುವುದಕ್ಕೆ ಹೋದವಳು; ಅದನ್ನೆ
ಮೆಚ್ಚಿದವಳು. ಅವಳ ವರ್ತನೆ ಸರ್ವಥಾ ನಿಂದನೀಯ; ಸರ್ವಾತ್ಮನಾ
ಖಂಡನೀಯ!
ಈ ಕೃತಿಯಲ್ಲಿ ಬರುವ ಬೇರೆ ಕೆಲವು ಸಮಸ್ಯೆಗಳನ್ನು ಇನ್ನು ನೋಡ
ಬಹುದು : ಯಶೋಧರ ಮತ್ತು ಚಂದ್ರಮತಿ ಸಂಕಲ್ಪ ಹಿಂಸೆಯಿಂದ ಆರು
ಬಾರಿ ತಿರ್ಯಗ್ಯೋನಿಯಲ್ಲಿ ಜನ್ಮವೆತ್ತಿ ಸತ್ತು, ಕೋಳಿಯ (ಆರನೆಯ) ಜನ್ಮದಲ್ಲಿದ್ದಾಗ
ವ್ರತವನ್ನು ಧರಿಸಿದ ಕಾರಣದಿಂದ ಮನುಷ್ಯ ಜನ್ಮವನ್ನು ಪಡೆಯುತ್ತಾರೆ; ಅಭಯರುಚಿ
ಅಭಯಮತಿಗಳಾಗಿ ಹುಟ್ಟುತ್ತಾರೆ. ಎಳವೆಯಲ್ಲಿ ಅವರು ಸುದತ್ತಾಚಾರ್ಯರ
ಶಿಷ್ಯರಾಗಿ, ಮರಣಾನಂತರ ಈಶಾನಕಲ್ಪದಲ್ಲಿ ಜನಿಸುತ್ತಾರೆ. ಈಶಾನಕಲ್ಪವೆಂದರೆ
ಜೈನರ ಪ್ರಕಾರ, ಹದಿನಾರು ಸ್ವರ್ಗಗಳಲ್ಲಿ ಎರಡನೆಯದು. ಮೂರನೆಯ ಸ್ವರ್ಗವು
ಇದಕ್ಕಿಂತ ಮೇಲಿರಬೇಕು ತಾನೆ. ಹಲವು ಪ್ರಾಣಿಗಳನ್ನು ಪ್ರತಿವರ್ಷವೂ ಹಿಂಸೆ
ಮಾಡುತ್ತಿದ್ದ ಮಾರಿದತ್ತನು ಅಭಯರುಚಿ ಹೇಳಿದ 'ಯಶೋಧರ ಚರಿತೆ'ಯನ್ನು
ಕೇಳಿದ ಮೇಲೆ ಉಗ್ರತಪವನ್ನಾಚರಿಸಿ, ಸಮಾಧಿ ಮರಣದ ಬಳಿಕ ಈ ಮೂರನೆಯ
ಸ್ವರ್ಗದಲ್ಲಿ ದೇವನೆ ಆಗುತ್ತಾನೆ.