ಪುಟ:ಯಶೋಧರ ಚರಿತೆ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಯಶೋಧರ ಚರಿತೆ

ಒದಗಿದಾಗ, ಸರ್ವಸ್ವವೂ ಅಪಹಾರವಾಗುತ್ತಿರುವಾಗ, ವಿಪ್ರರಿಗೋಸ್ಕರವಾಗಿ
ಅನೃತವನ್ನು ಹೇಳಬಹುದು. ಬಲ್ಲವರು ಈ ಐದು ಅನೃತಗಳು ಪಾಪವಲ್ಲ
ಎಂದು ಹೇಳುತ್ತಾರೆ.) ಇನ್ನೊಂದು ಸುಭಾಷಿತವು ಹೀಗಿದೆ:-
ಸ್ತ್ರೀಷು ನರ್ಮವಿವಾಹೇಚ ವೃತ್ಯರ್ಥೇ ಪ್ರಾಣಸಂಕಟೇ
ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಯಾಜ್ಜುಗುಪ್ಸಿತಂ
(ಹೆಂಗಸರಲ್ಲಿ, ನರ್ಮವಿವಾಹದಲ್ಲಿ ವೃತ್ತಿಗಾಗಿ, ಪ್ರಾಣಸಂಕಟದಲ್ಲಿ,
ಗೋಬ್ರಾಹ್ಮಣರ ಸಲುವಾಗಿ, ಹಿಂಸೆಯಲ್ಲಿ, ಸುಳ್ಳು ಜುಗುಪ್ಸೆಗೆ ಒಳಗಾಗುವುದಿಲ್ಲ.)
ಯಶೋಧರನಿಗೆ ಈ ಕಾರಣಗಳಲ್ಲಿ ಯಾವುದಾದರೊಂದು ಅನುಕೂಲವಾಗಿ
ಅವನನ್ನು ಪಾಪಕ್ಕೆ ಪಕ್ಕಾಗದಂತೆ ಮಾಡಿದೆಯೆನ್ನೊಣವೆ? ಹಾಗಿದ್ದರೆ ಒಂದಿಲ್ಲೊಂದು
ಕಾರಣವನ್ನು ನಮ್ಮ ನಮ್ಮ ಅನುಕೂಲತೆಗೆ ಹೊಂದಿಸಿಕೊಂಡು ಸುಳ್ಳು
ಹೇಳುವುದನ್ನು ಅಂಗೀಕರಿಸಬಹುದು.

ಇನ್ನೂ ಒಂದು ಕಾರಣವನ್ನು ಊಹಿಸಬಹುದು : ಯಶೋಧರನು
ನವಿಲಿನ ಜನ್ಮದಲ್ಲಿದ್ದಾಗ ಅಷ್ಟವಂಕನ ಕಣ್ಣನ್ನು ಕುಕ್ಕಿ ಪಾಪಕ್ಕೆ ಪಕ್ಕಾಗಿದ್ದಾನೆ.
ಇದು ಅವನಿಗೆ ಅರಿವಿಲ್ಲದೆ ಆದುದಲ್ಲ ; ಭವರೋಷದಿಂದ. ಎಂದರೆ
ಯಶೋಧರನಾಗಿದ್ದಾಗ ಬಂದ ಧೃತಿ ಅವನಿಗೆ ನವಿಲಾಗಿದ್ದಾಗ ಬರಲಿಲ್ಲ ;
ಇಲ್ಲಿ ಹಿಂಸಾ ಬುದ್ದಿಯೇ ಉಳಿಯಿತು. “ಜೀವದಯೆ ಜೈನಧರ್ಮಂ” ಎಂಬುದರಲ್ಲಿ
ಗಟ್ಟಿ ಮಾಡಿಕೊಂಡಿದ್ದವನಿಗೆ ತಾಯಿಯ ಹಿಂಸಾಬುದ್ಧಿಯನ್ನು
ನಿವಾರಿಸಲಾಗಲಿಲ್ಲವೆ? ಆಗಿತ್ತು ಎನ್ನೋಣ. ಏಕೆಂದರೆ ಅವಳು ಹಿಟ್ಟಿನ
ಕೋಳಿಯನ್ನು ಬಲಿಯಿತ್ತರೆ ಸಾಕು ಎಂಬಲ್ಲಿಯವರೆಗೆ ಬಂದಿದ್ದಳು. ಆದರೆ
ಯಶೋಧರನ ಮಗ ಯಶೋಮತಿಗೆ ಹಿಂಸಾ ಬುದ್ದಿಯೇ ಇರುವುದನ್ನು
ಕಾಣುವಾಗ ಅವನು ಇತರರನ್ನು ತಿದ್ದುವುದರಲ್ಲಿ ಸಮರ್ಥನಾಗಿದ್ದನೆನ್ನುವುದಕ್ಕೆ
ಆಧಾರ ಸಾಕಾಗದು ಅಥವಾ “ಮಾತೃದೇವ"ನಾಗಿ ತಾಯಿಯ ಮಾತಿಗೆ
ಅನುಮೋದನೆಯಿತ್ತನೆಂದರೆ 'ಗುರೋರಪ್ಯವಲಿಪ್ತಸ್ಯ ಕಾರ್ಯಕಾರ್ಯಮಜಾನತಃ
ಉತ್ಪಥಂ ಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಂ'||* (ಕಾರ್ಯಕಾರ್ಯಗಳನ್ನು ತಿಳಿಯದ
ಹಾಗೂ ಸನ್ಮಾರ್ಗವನ್ನು ಮೀರಿದ ಗರ್ವಿಷ್ಠನಾದ ಗುರುವಿಗೂ ಶಿಕ್ಷೆಯನ್ನು
ಮಾಡಬೇಕು) ಎಂಬುದಕ್ಕೆ ಬೆಲೆಯೇ ಇಲ್ಲವೆಂದಾಗುತ್ತದೆ. ಕಾರ್ಯಕಾರ್ಯ
ವಿವೇಚನೆಯಿಲ್ಲದೆ, ತಾಯಿ ಹೇಳಿದ್ದಾಳೆಂದು ಅವನು ನಡೆದುದು ಅವನ


*ವಾಲ್ಮೀಕಿರಾಮಾಯಣ- ಅಯೋಧ್ಯಾಕಾಂಡ; ಸರ್ಗ ೨೧-ಶ್ಲೋ ೧೩.