ಪುಟ:Abhaya.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೪೩

ಏಳು ಘಂಟೆಯ ಹೊತ್ತಿಗೆಲ್ಲಾ ಹಾರ್ನ್ ಮಾಡುತ್ತಲೇ ಕಾರು
ಬಂತು
"ನೆನ್ನೇನೇ ಯಾಕೆ ತಿಳಿಸ್ಲಿಲ್ಲ?" ಎನ್ನುತ್ತಲೇ ಕಾರ್ಯದರ್ಶಿನಿಯೂ
ಲೇಡಿ ಡಾಕ್ಟರೂ ಆಕೆಯ ನರ್ಸೂ ಜಲಜ - ಲಲಿತೆಯರೂ ಒಳಬಂದರು.
ಹಿಂದಿನ ಸಂಜೆರಾತ್ರೆಯೆಲ್ಲ ಡಾಕ್ಟರನ್ನು ಕರೆಯಲು ತಾವು ಮಾಡಿದ್ದ ಯತ್ನ
ವನ್ನು ಸರಸಮ್ಮ ವಿವರಿಸ ಹೋಗಲಿಲ್ಲ
ಉಸಿರಿಗಾಗಿ ಉಬ್ಬಸವಡುತ್ತ ನರಳುತ್ತ ಇದ್ದ ತುಂಗಮ್ಮ,
ಕಾರ್ಯೋನ್ಮುಖರಾದ ಡಾಕ್ಟರು, ನೆರವಿಗೆ ನಿಂತ ನರ್ಸು- ಈ ಮೂವರನ್ನು
ಒಳಗಿಟ್ಟುಕೊಂಡು, ಕೊಠಡಿಯ ಬಾಗಿಲು ಮುಚ್ಚಿಕೊಂಡಿತು.
ಇಪ್ಪತ್ತು ನಿಮಿಷಗಳ ಮೇಲೆ ಆ ಲೇಡಿ ಡಾಕ್ಟರು ಹೊರಬಂದರು,
ಅಲ್ಲಿ ಮುಳ್ಳಿನಮೇಲೆ ನಿಂತಿದ್ದ ಗಂಡನಿರಲಿಲ್ಲ. ಎಂಥ ಮಗುವೆಂದು
ತಿಳಿಯಲು ಅತುರ ಪಡುತ್ತಿದ್ದ ಸಂಬಂಧಿಕರಿರಲಿಲ್ಲ ಆದರೂ ಎಷ್ಟೊಂದು
ಜನರಿದ್ದರು ಆಲ್ಲಿ! ಕಂಬಗಳಾಗಿದ್ದರು ಕೆಲವು ಹುಡುಗಿಯರು. ಕುಳಿತಲ್ಲೆ
ನಿಂತಲ್ಲೆ ನಿಶ್ಚಲವಾದ ವಿಗ್ರಹಗಳಾಗಿದ್ದರು ಕೆಲವರು ಮೂಗಿ ಕಲ್ಯಾಣಿ
ಎಲ್ಲರಿಗಿಂತಲೂ ದೂರ ಮೂಲೆಯಲ್ಲಿ ಮೌನವಾಗಿದ್ದಳು ಕುರುಡಿ
ಸುಂದ್ರಾಳ ಕಣ್ಣುಗಳು ಮಾತನಾಡುತಿದ್ದುವು ಆ ಘಳಿಗೆಯಲ್ಲಿ ಎಷ್ಟೊಂದು
ಜನ ಸಂಬಂಧಿಕರು ಒಳಗಿದ್ದ ಒಂದು ಜೀವಕ್ಕೆ! ಆ ಲೇಡಿ ಡಾಕ್ಟರು ಒಂದು
ಮಾತು ಹೇಳಿದರೆ ಸಾಕು, ಅವರೆಲ್ಲ ಗೋಳೋ ಎಂದು ಅಳುವುದಕ್ಕೂ
ಸಿದ್ದ; ಓಹೋ ಎಂದು ನಗುವುದಕ್ಕೂ ಸಿದ್ದ
ಆದರೆ ಆ ಡಾಕ್ಟರರು ಏನನ್ನೂ ಅನ್ನಲಿಲ್ಲ ಕೈ ಸನ್ನೆಯಿಂದಲೆ
ಸರಸಮ್ಮನನ್ನೂ ಕಾರ್ಯದರ್ಶಿನಿಯನ್ನೂ ಕರೆದುಕೊಂಡು ಪಕ್ಕದ ಕೊಠಡಿಗೆ
ಹೋದರು. ಅಲ್ಲಿ ಒಂದು ನಿಮಿಷ-ಅಲ್ಲಿ ಒಂದು ಯುಗ ಮಾತುಕತೆ.
ಮತ್ತೊಮ್ಮೆ ತುಂಗಮ್ಮನ ಕೊಠಡಿಯ ಬಾಗಿಲು, ಡಾಕ್ಟರನ್ನು
ಬರಗೊಟ್ಟು, ಮುಚ್ಚಿಕೊಂಡಿತು.
ಅನಂತ ಕಾಲದಂತೆ ಕಂಡ ಅನಂತರದ ಹದಿನೈದು-ಇಪ್ಪತ್ತು-
ಇಪ್ಪತ್ತೆದು ನಿಮಿಷ....
ಡಾಕ್ಟರು ಬಾಗಿಲು ತೆರೆದು ಸರಸಮ್ಮನನ್ನು ಒಳಗೆ ಕರೆದರು.