ಪುಟ:Mysore-University-Encyclopaedia-Vol-1-Part-1.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಸ್ತಾರವಾದ ಭೂಮಿಯನ್ನು ಪೋ‍ಷಿಸುತ್ತಿದ್ದಾನೆ. ಸೋಮಪಾನದಿಂದಾದ ಹರ್ಷದಿಂದ ಈತ ಇದೆಲ್ಲವನ್ನೂ ಮಾವಿದನು. ಇವನ ವೀರ್ಯವನ್ನು ಅತ್ಯಧಿಕವಾಗಿ ಕೊಂಡಾಡಿದ್ದಾರೆ. ಅಸಮಾನ್ಯ ವೀರನಾದ ಇವನು ಅನೇಕಾನೇಕ ಅಸುರರನ್ನು ದ್ವಂಸಮಾಡಿದ್ದಾನೆ. ವೃತ್ರರೊಡನೆ ಹೋರಾಡಿ ಅವನನ್ನು ವಧಿಸಿದ್ದಾನೆ. ಇವನ ಅನೇಕ ಸಾಹಸಕರ್ಮಗಳಲ್ಲಿ ವೃತ್ರವಧೆ ಮುಖ್ಯವಾದುದು. ಇಂದ್ರನಂತೆ ಆಂತರಿಕ್ಷಸ್ಥಾನಕ್ಕೆ ಸೇರಿದವರಲ್ಲಿ ವಾಯುವೂ ಮುಖ್ಯ ವಾಯು ನಿತ್ಯವೂ ಕಾಣಿಸಿಕೊಳ್ಳುತ್ತಾನೆ. ಮಾನವನ ಜೀವನ ವಾಯುವಿನ ಕೃಪೆಯಿಲ್ಲದೆ ಸಾಧ್ಯವಿಲ್ಲ. ನಮಗೆ ಕಾಣುವ ವಾಯುವನ್ನು ಅಧಿಷ್ಠಾನವಾಗಿ ಉಳ್ಳ ಈ ದೇವತೆಯನ್ನು ವೇದಗಳಲ್ಲಿ ಸುತ್ತಿಸಿದ್ದಾರೆ. ವಾಯುವಿನ ರೂಪ ಮನೋಹರವಾದುದು, ಉನ್ನತವಾದುದು. ಮನೋವೇಗ ಇವನದು. ಇವನು ಇಂದ್ರನಂತೆ ನೂರಾರು ಕುದುರೆಗಳು ಹೂಡಿದ ರಥದಲ್ಲಿ ಸಂಚರಿಸುವವನು. ವಾಯುವಿನ ರಥ ಗುಡಿಗಿನಂತೆ ಶಬ್ದ ಮಾಡುವುದು. ಈ ರಥದ ವೇಗಕ್ಕೆ ಸಿಕ್ಕ ಸ್ಥಾವರ ಜಂಗಮಾದಿಗಳು ನುಚ್ಚುನೂರಾಗುವುವು. ಪರ್ವತಗಳು ವಾಯುವಿನುಗುಣವಾಗಿ ಕಂಪಿಸುವುವು. ವಿಶ್ವದಲ್ಲಿರುವುದೆಲ್ಲವೂ ಇವನ ಆಳ್ವಿಕೆಗೊಳಪಟ್ಟಿವೆ. ಇವನು ಒಂದು ಕ್ಷಣವೂ ಒಂದೆಡೆಯಲ್ಲಿ ನಿಲ್ಲುವುದಿಲ್ಲ್. ಎಲ್ಲ ಪ್ರಾಣಿಗಳಿಗಿಂತ ಮೊದಲು ಹುಟ್ಟಿದವನಿವನು. ಇವನ ಉತ್ಪತ್ತಿಯನ್ನಾಗಲೀ ವ್ಯಾಪ್ತಿಯನ್ನಾಗಲೀ ಯಾರೂ ತಿಳಿಯಲಾರರು. ದೇವತೆಗಳಿಗೂ ಇವನು ಆತ್ಮನಾಗಿದ್ದಾನೆ. ಎಲ್ಲ ಪ್ರಾಣಿಗಳಿಗೂ ಇವನು ಜೀವನಾಧಾರ್. ಇವನ ರೂಪ ಕಾಣಿಸಿದು. ಶಬ್ದದಿಂದ ಇವನ ಬರವನ್ನು ಊಹಿಸಬಹುದು. ಇಂಥ ವಾಯುದೇವ ರೋಗನಿವಾರಕ, ಆಯುರ್ವರ್ಧಕನಾಗಿದ್ದಾನೆ. ಮಳೆಗೆ ನೇರವಾಗಿ ಸಂಬಂಧಿಸಿದವನು ಪರ್ಜನ್ಯ. ಇವನೂ ಅಂತರಿಕ್ಷದೇವತೆ. ಗರ್ಜನೆ ಮಾಡುತ್ತ ಸಸ್ಯಗಳಲ್ಲಿ ಅಂಕುರಗಳನ್ನು ಇವನು ಸ್ಥಾಪಿಸುತ್ತಾನೆ. ಲೋಕ ಇವನಿಂದಲೇ ಬದುಕಿದೆ. ಜಲರಥದಲ್ಲಿ ಕುಳಿತು ಇವನು ಮೇಘದ ಸುತ್ತಲೂ ಸುತ್ತುತ್ತ ಮೇಘಕೋಶವನ್ನು ಸಡಿಲಿಸಿ ಕೆಳಮೊಗನಾಗಿ ಬಗ್ಗಿಸಿ ಮಳೆ ಸುರಿಸುತ್ತಾನೆ. ಹೀಗೆ ಮಳೆಯಾದಾಗ ಹಳ್ಳ ತಗ್ಗುಗಳೆಲ್ಲ್ ನೀರಿನಿಂದ್ ತುಂಬಿಹೋಗಿ ಒಂದೇ ಸಮನಾಗಿ ಕಾಣುತ್ತವೆ. ಪರ್ಜನ್ಯನಿಗೆ ಅನೇಕ ದೂತರಿದ್ದಾರೆ. ಇವರು ಮಳೆಯನ್ನು ಸುರಿಸುತ್ತಾರೆ. ಸಾರಥಿ ಕುದುರೆಗಳನ್ನು ಚಾವಟಿಯಿಂದ ಹೊಡೆವಂತೆ ತನ್ನ ದೂತರಾದಮೋಡಗಳನ್ನು ಹೊಡೆಯುತ್ತಾನೆ. ಮಳೆ ಸುರಿಸುವಾಗ ದೂರದ ಸಿಂಹಗಳ ಗರ್ಜನೆ ಕೇಳಿಸುವುದು. ಪರ್ಜನ್ಯ ಲೋಕದ ಚರಾಚರಗಳಿಗೆ ಸುಖಕರ. ಜಲದೇವತೆಗಳೂ ಅಂತರಿಕ್ಷಸ್ಥಾನಕ್ಕೆ ಸೇರಿದವರು. ಅಂತರಿಕ್ಷದಿಂದ ಮಳೆಯ ರೂಪದಲ್ಲಿ ಭೂಮಿಗೆ ಜಲ ಸುರಿಯುವುದು. ಈ ಜಲವನ್ನು ಹೀರಿ ಅಬ್ದೇವತೆಯನ್ನು ಬೆಳೆಸುತ್ತಾನೆ.ಇಂದ್ರ ವಜ್ರಾಯುಧದಿಂದ ಮೇಘಗಳನ್ನು ಬಡಿದು ಒಳಗೆ ಸೆರೆಯಾಗಿದ್ದ ಜಲ ಹರಿಯುವಂತೆ ಮಾಡುತ್ತಾನೆ. ಭೂಮಿಯ ಮೇಲೆ ಅನೇಕ ರೂಪದಲ್ಲಿ ಜಲ ಇರುವುದಾದರೂ ಆಕಾಶದಿಂದ ಜಲದ ವರ್ಷವಾಗುವ ಕಾರಣ ಅಬ್ದೇವತೆಯನ್ನು ಅಂತರಿಕ್ಷಸ್ಥಾನದಲ್ಲಿ ಸೇರಿಸಿರುವಂತೆ ಕಾಣುತ್ತದೆ. ಅಂಪಾನಪಾತ್ ಎಂಬ ದೇವತೆ ಅಗ್ನಿಯ ಒಂದು ರೂಪ. ಈ ದೇವತೆ ಜಲದೊಳಗೆ ಇರುತ್ತ ತೇಜಸ್ವಿಯಾಗಿದೆ. ಇದನ್ನೂ ಅಂತರಿಕ್ಷಸ್ಥಾನದಲ್ಲಿ ಸೇರಿಸಿದ್ದಾರೆ. ಸರ್ಪ ಲೋಕವನ್ನು ಇದು ಸೃಜಿಸಿತೆಂದು ಹೇಳಿದೆ. ಮೇಘದ ಮಧ್ಯದಲ್ಲಿ ಉದಕಗಳ ನಡುವೆ ಇರುವ ಈ ತೇಜೋರೂಪಿ ವೃಷ್ಟಿಗೆ ಕಾರಣವಾಗಿ ತನ್ಮೂಲಕ ಎಲ್ಲ ಲೋಕಗಳ ಜನ್ಮಕ್ಕೂ ಕಾರಣವಾಗಿದೆ. ಇದು ಮಳೆ ಸುರಿಸುತ್ತದೆ. ಮಳೆಯೊಡನೆ ಭೂಮಿಯನ್ನು ಸೇರುತ್ತದೆ. ಸರ್ವತ್ರ ದೀಪ್ತವಾಗಿ ವ್ಯಾಪಿಸಿರುತ್ತದೆ. ಅಂತರಿಕ್ಷದೇವತೆಗಳಲ್ಲಿ ರುದ್ರನೂ ಸೇರಿದ್ದಾನೆ. ಇಂದ್ರ ಮಳೆಯನ್ನು ಸುರಿಸಿದರೆ ಇವನು ಇಷ್ಟಾರ್ಥಗಳನ್ನು ವರ್ಷಿಸುವ ವೃಷಭನಾಗಿದ್ದಾನೆ. ರೋಗ ಪರಿಹರಕವಾದ ಔಷಧಗಳನ್ನು ಇವನು ಕೊಡುವನೆಂದು ಹೇಳಿದೆ. ಈ ಔಷಧಗಳು ಪ್ರಾಯಶಃ ಮಳೆಯೇ ಇರಬೇಕೆಂದು ವಿಮರ್ಶಕರು ಹೇಳುತ್ತಾರೆ. ಶತ್ರುನಾಶಕನೂ ಅರಿಭ್ಯಂಕರನೂ ಆದವನಿವನು. ಪ್ರಕೃತಿಯ ರೌದ್ರ ಸ್ವರೂಪವನ್ನು ಇವನು ಪ್ರತಿನಿಧಿಸುತ್ತಾನೆ. ಈ ಮೇಲೆ ಹೇಳಿದ ದೇವತೆಗಳಂತೆಅಂತರಿಕ್ಷಸ್ಥಾನಕ್ಕೆ ಮರುದ್ದೇವತೆಗಳೂ ಸೇರಿದ್ದಾರೆ. ಇವರು ವೀರರು, ಸ್ವರ್ಣವರ್ಣದವರು. ಇವರಿಗೂ ವಿದ್ಯತ್ತುಗಳಿಗೂ ನಿಕಟಸಂಬಂಧವಿದೆ. ಇವರು ಮಳೆಯನ್ನು ಸುರಿಸುವರೆಂದು ಹೇಳಿದೆ. ಈ ಮರುತ್ತುಗಳು ವರ್ಷಿಸುವಾಗ ವಿದ್ಯುತ್ತುಗಳು ಶಬ್ದ ಮಾಡುತ್ತವೆ. ಇವರು ಸರ್ವಾಭರಣಗಳಿಂದಲೂ ಉದಕಗಳಿಂದಲು ಕೂಡಿದ್ದಾರೆ. ಇವರಿಗೆ ಮನುಷ್ಯರಂತೆ ರೂಪವಿದೆ. ಹೆಗಲುಗಳ ಮೇಲೆ ಆಯುಧಗಳೂ ಪಾದಗಳಲ್ಲಿ ಕಾಲ್ಬಳೆಗಳೂ ವಕ್ಷಃಸ್ಥಳದಲ್ಲಿ ಚಿನ್ನದ ಹಾರಗಳೂ ಕೈಗಳಲ್ಲಿ ಜ್ವಲಿಸುವ ಮಿಂಚುಗಳೂ ಶಿರ್ಸ್ಸುಗಳಲ್ಲಿ ಸ್ವರ್ಣಕಿರೀಟಗಳೂ ಇವೆ. ಇವರ ರಥದಲ್ಲಿ ಮಧುರವಾದ ಉದಕ ಪ್ರಕಾಶಿಸುತ್ತದೆ. ಮರುದ್ದೇವತೆಗಳಿಗೆ ಭಯಂಕರ ರೂಪವಿರುವಂತೆ ಸೌಮ್ಯ ರೂಪವೂ ಇದೆ. ನೀರಿನಿಂದ ತುಂಬಿದ ಮೇಘದಿಂದ ಸೂರ್ಯನ ಪ್ರಕಾಶವನ್ನು ಮುಚ್ಚಿ ಹಗಲಿನಲ್ಲಿಯೂ ಕತ್ತಲೆಯುನ್ನುಂಟು ಮಾಡುತ್ತಾರೆ. ಇವರು ಲೋಕಹಿತಕಾರಕರು. ತಮ್ಮನ್ನು ಸೇವಿಸುವವರಿಗೆ ಬಹು ವಿಧವಾದ ಅನುಗ್ರಹವನ್ನು ಮಾಡುತ್ತಾರೆ. ಅಂತರಿಕ್ಷಸ್ಥಾನದ ದೇವತೆಗೆ ಪ್ರಧಾನವಾದ ಕರ್ಮ ವರ್ಷಕರ್ಮ. ಈ ಕೆಲಸ ಇಂದ್ರ, ಪರ್ಜನ್ಯ ಮೊದಲಾದವರುಗಳಿಂದ ಆಗುತ್ತದೆ. ಇತರ ದೇಶಗಳಲ್ಲಿ ಹೇಗೋ ಹಾಗೆ ನಮ್ಮಲ್ಲಿಯೂ ಅಂತರಿಕ್ಷಸ್ಥಾನದ ದೇವತೆಗೆ ವಿಶಿಷ್ಱ ಸ್ಥಾನವಿದೆ. ಈ ಒಂದೊಂದು ದೇವತೆಯೂ ಪರತತ್ತ್ವ ಸ್ವರೂಪವೆಂದು ಪ್ರತಿಪಾದಿಸಿರುವುದು ವೈದಿಕ ಧರ್ಮದ್ ವೈಶಿಷ್ಱ್ಯ. (ಎನ್.ಎಸ್.ಎ) ಅಂತರಿಕ್ಷ ಮೋಜಣಿ : ವಿಮಾನಗಳಲ್ಲಿ ಬಿಂಬಗ್ರಾಹಿಗಳನ್ನು (ಕ್ಯಾಮರ್) ಕೊಂಡೊಯ್ದು ಅಂತರಿಕ್ಷದಿಂದ ಒಂದು ಭೂ ಪ್ರದೇಶದ ಛಾಯಾಚಿತ್ರಗಳನ್ನು ಪಡೆದು ಆ ಚಿತ್ರಗಳ ಆಧಾರದಮೇಲೆ ಆ ಪ್ರದೇಶದ ಮೇಲ್ಮೈಲಕ್ಷಣದ ನಕ್ಷೆಯನ್ನು (ಟೊಪಾಗ್ರಫಿಕ್ ಮ್ಯಾಪ್) ತಯಾರಿಸಬಹುದು. ಇಂಥ ಮೋಜಣಿಗೆ ಅಂತರಿಕ್ಷ ಮೋಜಣಿ (ಏರಿಯಲ್ ಸರ್ವೇಯಿಂಗ್) ಎಂದು ಹೆಸರು. ಬಿಂಬ ಗ್ರಾಹಿ ತಟ್ಟೆಯ (ಸೆನ್ಸಿಟಿವ್ ಪ್ಲೇಟ್) ಮೇಲೆ ಬೀಳುವ ಛಾಯೆಯ ಅಳತೆಗಳಿಗೂ ಮತ್ತು ಅದರ ಮೂಲ ವಸ್ತುವಿನ ಅಳತೆಗಳಿಗೂ ಇರುವ ಪ್ರಮಾಣ (ರೇಷಿಯೋ) ಬಿಂಬ ಗ್ರಾಹಿಯ ಮಸೂರ (ಲೆನ್ಸ್), ತಟ್ಟೆ ಮತ್ತು ಮೂಲವಸ್ತು ಇವುಗಳ ಅಂತರದ ಪ್ರಮಾಣದಷ್ಟೇ ಇರುತ್ತದೆ. ಈ ತತ್ತ್ವವನ್ನುಸರಿಸಿ ವಿಮಾನದ ಮಟ್ಟವನ್ನು ವಾಯುಭಾರಮಾಪಕಯಂತ್ರದಿಂದ ನಿರ್ಧರಿಸುವುದರಿಂದಾಗಲೀ ಛಾಯಾಚಿತ್ರದಲ್ಲಿ ಕಾಣುವ ಎರಡು ಸ್ಥಳಗಳ ವಾಸ್ತವ ದೂರಾಂತರವನ್ನು ಸೂಕ್ಷ್ಮವಾದ ಸಲಕರಣೆಗಳಿಂದ ಅಳೆಯುವುದರಿಂದಾಗಲೀ ವಿ‍ಷಯವನ್ನು ಸಂಗ್ರಹಿಸಿ ಒಂದು ನಕ್ಷೆಯನ್ನು ತಯಾರಿಸಬಹುದು. ನೀರಾವ್ರಿ ಯೋಜನೆ, ಸಮುದ್ರತೀರದ ಮೋಜಣಿ, ದಟ್ಟವಾಗಿಯೂ ವಿಶಾಲವಾಗಿಯೂ ಬೆಳೆದಿರುವ ನಗರದ ಮೋಜಣಿ, ಖನಿಜ ಪ್ರದೇಶದ ಮೋಜಣಿ ಮುಂತಾದವುಗಳಿಗೆ ಅಂತರಿಕ್ಷ ಮೋಜಣಿಯ ಕ್ರಮವನ್ನು ಪ್ರಯೋಗಿಸುವುದರ ಮೂಲಕ ಅತ್ಯಲ್ಪ ಕಾಲಾವಧಿಯಲ್ಲಿ ಯೋಗ್ಯವಾದ ನಕ್ಷೆಯನ್ನು ತಯಾರಿಸಬಹುದು. ಅತಿ ವಿಶಾಲವಾದ ಪ್ರದೇಶದ ಮೋಜಣಿಯಲ್ಲಿ ಅನೇಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಈ ವಿಧವಾದ ಕ್ರಮ ಹೆಚ್ಚು ಬಳಕೆಯಲ್ಲಿದೆ (ನೋಡಿ-ಮೋಜಣಿ) (ಕೆ.ಎಸ್.ಕೆ.) ಅಂತರಿಕ್ಷ ಸಂಶೋಧನೆ : ಬಾಹ್ಯಾಕಾಶದ ಭೈತವೃತ್ತಾಂಶ ಕುರಿತ ಸಮಗ್ರ ಅಧ್ಯಯನ (ಸ್ಟೇಸ್ ರಿಸರ್ಚ್). ಅನಾದಿಕಾಲದಿಂದಲೂ ಮಾನವ ಅಂತರಿಕ್ಷವನ್ನು ವೀಕ್ಷಿಸಿ ಅಚ್ಚರಿಪಟ್ಟಿದ್ದಾನೆ. ಅಂತರಿಕ್ಷದಲ್ಲಿಯ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ದೇವತ್ವವನ್ನು ಕಂಡಿದ್ದಾನೆ. ಅವನ್ನು ಸಾಧ್ಯವಾದ ಮಟ್ಟಿಗೂ ಅಧ್ಯಯನ ಮಾಡಿದ್ದಾನೆ. ಈ ಖಗೋಳವಿಜಾನಾಧ್ಯಯನ ಚೀನ, ಭಾರತ, ಈಜಿಪ್ಟ್, ಗ್ರೀಸ್ ಮುಂತಾದ ದೇಶಗಳಲ್ಲಿ ನಡೆಯುತ್ತ ಬಂತು. ಮುಂದೆ ಯುರೋಪಿನ ಹಲವು ದೇಶಗಳಲ್ಲಿ ನಡೆಯುತ್ತ ಬಂತು. ಮುಂದೆ ಅಲ್ಲಿಯ ವಿವಿಧ ವಿಜ್ನಾನಿಗಳ ಅಧ್ಯಯನದ ಫಲವಾಗಿ ೧೮ನೆಯ ಶತಮಾನ ಪ್ರಾರಂಭವಾಗುವ ಹೊತ್ತಿಗೆ ಸೌರವ್ಯೂಹದ ರಚನೆ ಸುಮಾರಾಗಿ ಅರಿವಾಯಿತು. ಈ ಅರಿವಿಗೆ ಕೊಪರ್ನಿಕಸ್, ಟೈಕೊಬ್ರಾಹೆ, ಕೆಪ್ಲರ್ ಪ್ರತಿಪಾದಿಸಿದ ಗ್ರಹಚಲನ ನಿಯಮಗಳು, ನ್ಯೂಟನ್ನನ ಚಲನನಿಯಮಗಳು ಹಾಗೂ ಗುರುತ್ವಾಕರ್ಷಣ ನಿಯಮಗಳು ೨೦ನೆಯ ಶತಮಾನದ ಅಂತರಿಕ್ಷಯಾನಕ್ಕೆ ಬುನಾದಿಯಾಗಿವೆ. ೧೯ನೆಯ ಶತಮಾನದ ಆದಿಯಲ್ಲಿ ಮಾನವ ಸಾಧ್ಯವಾದ ಮಟ್ಟಿಗೆ ಭೂಮಿಯಿಂದ ಮೇಲಕ್ಕೆ ಹೋಗಿ ಇದನ್ನು ಆವರಿಸಿರುವ ವಾತಾವರಣದ ಅಧ್ಯಯನವನ್ನು ಪ್ರಾರಂಭಿಸಿದ. ೧೮೦೩ ರಲ್ಲಿ ಗ್ಯಾಸ್ ಪಾಲ್ಟ್, ರಾಬಿನ್ ಸನ್ ಮತ್ತು ಲೋಯೆಸ್ಟ್ ಎನ್ನುವವರು ವಾಯು ತುಂಬಿದ ದೊಡ್ಡ ಬೆಲೂನಿಗೆ (ಇದನ್ನು ಗಂಡೋಲ ಎನ್ನುತ್ತಿದ್ದರು) ಕಟ್ಟಿದ ಬುಟ್ಟಿಯಲ್ಲಿ ಕುಳಿತು ಸು. ೭೪೦೦ಮೀ ಎತ್ತರದವರೆಗೂ ಹೋದರು. ಹೀಗೆ ಹೋಗುತ್ತ ವಿವಿಧ ಎತ್ತರಗಳಲ್ಲಿ ವಾತಾವರಣದ ಒತ್ತಡ, ಉಷ್ಣತೆ, ಅದರ ಅನಿಲ ಸಂಯೋಜನೆ ಮುಂತಾದವನ್ನು ಶೋಧಿಸಿದರು. ಮುಂದೆಯೂ ಇಂಥ ಪ್ರಯತ್ನಗಳು ನಡೆದು ಸು. ೧೦೫೧೫ ಮೀ ವರೆಗೂ ಹೋಗಲು ಸಾಧ್ಯವಾಯಿತು. ಆದರೆ ತೆರೆದ ಬುಟ್ಟಿಗಳಲ್ಲಿ ಕುಳಿತು ಮೇಲುಮೇಲಕ್ಕೆ ಹೋದಂತೆ ವಾಯು ಒತ್ತಡ ಕಡಿಮೆಯಾಗುತ್ತ ಬಂದು ಆಕ್ಸಿಜನ್ ಹಾಗೂ ಉಷ್ಣತೆ ಕಡಿಮೆಯಾಗುತ್ತ ಹೋಗುತ್ತವೆ. ಆದ್ದರಿಂದಲೇ ಅತಿ ಎತ್ತರಕ್ಕೆ ಹೋದವರಲ್ಲನೇಕರು ಮೂರ್ಛೆ ಹೋಗುತ್ತಿದ್ದರು. ಇಲ್ಲವೇ ಸಾಯುತ್ತಿದ್ದರು. ಆದ್ರೂ ಇಂಥ ಪ್ರಯಾಣಗಳಿಂದ ನಮ್ಮ ವಾತಾವರಣದ ಕೆಲವು ಮುಖ್ಯ ಅಂಶಗಳು ಹೊರಬಿದ್ದುವು. ಇನ್ನೂ ಎತ್ತರಕ್ಕೆ ಹೋಗಲು ಸಾಧ್ಯವೆಂದು ತಿಳಿದಮೇಲೆ ಮಾನವನ ಬದಲು ಬರಿ ಉಪಕರಣಗಳನ್ನೇ ಕಳುಹಿಸಲಾಯಿತು. ಅವು ಮಾಹಿತಿಗಳನ್ನು ಒಂದು ಗ್ರಾಫ್ ಕಾಗದದ ಮೇಲೆ ವಕ್ರರೇಖೆಯನ್ನು ಪರಿಶೀಲಿಸುತ್ತಿದ್ದರು. ಇಂಥ ಉಪಕರಣಗಳನ್ನು ಹೊತ್ತ ಬೆಲೂನುಗಳ ಹಾರಾಟಕ್ಕೆ ಬೆಲೂನ್ ಸೋಂಡ್ ಎಂದು ಹೆಸರು. ಬೆಲೂನ್ ಸೋಂಡ್ ಗಳನ್ನು ಸು. ೩೦೪೮೦ ಮೀ ಎತ್ತರದವರೆಗೂ ಹಾರಿಸಿದರು. ಈ ಬೆಲೂನ್ ಸೋಂಡ್ ಗಳಲ್ಲೂ ಒಂದು ತೊಂದರೆಯಿತ್ತು. ಅದು ಯಾವ ಸ್ಥಳದಲ್ಲಿ ಬಿದ್ದಿದೆಯೆಂದು ಹೇಳುವುದು ಕಷ್ಟವಾಗಿತ್ತು. ದಟ್ಟಡವಿಯಲ್ಲಾಗಲಿ ಸಮುದ್ರದಲ್ಲಾಗಲಿ ಬಿದ್ದು ಹಾಳಾಗಬಹುದಾಗಿತ್ತು. ಹೀಗಾಗಿ ಬೆಲೂನ್ ಸೋಂಡ್ ಗಳಲ್ಲನೇಕವು ನಷ್ಟವಾದುವು.