ಪುಟ:Duurada Nakshhatra.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವ, ಜಮಖಾನದೊಳಗೆ ಸುತ್ತಿದ್ದ ಪುಟ್ಟ ಹಾಸಿಗೆಯನ್ನು ಒಂದು ಕೈಯಲ್ಲೂ ಪುಸ್ತಕಗಳು ತುಂಬಿದ್ದ ಚೀಲವನ್ನು ಇನ್ನೊಂದು ಕೈಯಲ್ಲೂ ಹಿಡಿದುಕೊಂಡು, ರೈಲುನಿಲ್ದಾಣದಿಂದ ಹೊರಬಂದ. ಆಗಿನ್ನೂ ಬೆಳಗ್ಗೆ ಏಳು ಘಂಟೆ. ಮುಖಕ್ಕೆ ಒಂದಿಷ್ಟು ನೀರು ಹನಿಸಿ, ಗುಟುಕು ಕಾಫಿ ಕುಡಿದು, ಮುಂದಿನ ಪ್ರಯಾಣ ಬೆಳೆಸಬೇಕೆಂಬುದು ಆತನ ಆಪೇಕ್ಷೆಯಾಗಿತ್ತು.

ಆದರೆ ಸ್ವಲ್ಪ ದೂರದಲ್ಲೆ ನಿಂತಿದ್ದ ಬಸ್ಸು, ಅದರತ್ತ ಓಡುತಿದ್ದ ಜನರು, ತನ್ನ ಮುಂದಿನ ಪ್ರಯಾಣದ ಹೊರತಾಗಿ ಬೇರೇನನ್ನು ಯೋಚಿಸುವುದಕ್ಕೂ ಜಯದೇವನಿಗೆ ಅವಕಾಶಕೊಡಲಿಲ್ಲ. ಎಲ್ಲರಂತೆ ಆತನೂ ಬಸ್ಸಿನತ್ತ ಓಡಿದ. ಟಿಕೆಟು ಪಡೆದುಕೊಳ್ಳಲು ಯಾವ ವ್ಯವಸ್ಯೆಯೂ ಇದ್ದಂತೆ ತೋರಲಿಲ್ಲ ಆ ಖಾಸಗಿ ಬಸ್ಸಿನಲ್ಲಿ. ಮೊದಲು ಸ್ಥಾನದ ಆಕ್ರಮಣ. ಆ ಬಳಿಕ ಟಿಕೆಟಿನ ಮಾತು. ಪುಟ್ಟ ಪುಟ್ಟ ಬಾಗಿಲುಗಳ ಮೂಲಕ ಒಳಹೊಗಲು ಸ್ಪರ್ಧೆಯೇ ನಡೆದಿತ್ತು. ಗದ್ದಲ ಕಡಮೆಯಾಗಲೆಂದು ದೂರ ನಿಂತರೆ ಸೀಟು ಸಿಗದೇ ಹೋಗಬಹುದು. 'ಬಲವಿದ್ದರೇ ಬದುಕು'-ಇದೊಂದೇ ಅಲ್ಲಿದ್ದ ತತ್ವ ಬೇರೆ ಉಪಾಯವಿಲ್ಲದೆ, ಬಸ್ಸನ್ನು ಮುತ್ತಿದ ಯೋಧರಲ್ಲಿ ಜಯದೇವನೂ - ಒಬ್ಬನಾದ. ಹೃಷ್ಟಪುಷ್ಟನಾದ ಇಪ್ಪತ್ತೆರಡರ ನವಯುವಕ ಜಯದೇವ ಬಸ್ಸನ್ನೇರುವುದರಲ್ಲಿ ಯಶಸ್ವಿಯಾಗದಿರಲಿಲ್ಲ.

ಮೂರನೆಯ ಸಾಲಿನ ಮೂಲೆಯಲ್ಲಿ ಬಾಗಿಲ ಬಳಿಯಲ್ಲೆ ಕುಳಿತು, ಸೀಟಿನ ಕೆಳಗೆ ಹಾಸಿಗೆ ಕೈಚೀಲಗಳನ್ನು ತಳ್ಳಿ, ಕ್ರಾಪಿನಮೇಲೆ ಕೈಯೋಡಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಾಗ, ಒಮ್ಮೆಲೆ ಜಯದೇವನಿಗೆ ಕೆಡುಕೆನಿಸಿತು. ತನಗಿಂತ ಕಡಮೆ ಶಕ್ತಿಯವರನ್ನೋ ಕೈಲಾಗದವರನ್ನೋ ಬದಿಗೆ ತಳ್ಳಿ ಆತ ಒಳಗೆ ಬಂದಿದ್ದನಲ್ಲವೆ? ತಾನು ಹಾಗೆಮಾಡಿದ್ದು ಸರಿ ಎಂದು ಸಮರ್ಥಿಸುವುದು ಸಾಧ್ಯವಿತ್ತೆ? ಸದ್ವರ್ತನೆ ಶಿಷ್ಟಾಚಾರಗಳ ಸಂಪತ್ತು ತನ್ನಲ್ಲಿದೆಯೆಂದು ತಾನು ಭಾವಿಸಿದ್ದು ಸುಳ್ಳಾಯಿತಲ್ಲವೆ?