ಅಭಯ
೧೯೫
ಹುಚ್ಚಿಗೆ, ಎರಡುನಿಮಿಷ ಮೌನವಾಗಿರಬೇಕೆಂದು ತೋರಿತು-ಎರಡು ನಿಮಿಷ ಮಾತ್ರ.
"ನಿಮ್ಮ ತಂದೆ ಒಳ್ಳೆಯೋರು, ಅಲ್ವ ತುಂಗಕ್ಕ?"
ಗಂಟಲು ಕಟ್ಟಿಕೊಂಡಿತ್ತು ತುಂಗಮ್ಮನಿಗೆ ಆಕೆ ಉತ್ತರನೀಯಲಿಲ್ಲ ಕುಳಿತಿದ್ದ ಚುವೆಯಲ್ಲೆ ತುಂಗಮ್ಮನ ತೊಡೆಯಮೇಲೆ ತಲೆ ಇರಿಸಿ, ಮೈ ಮುದುಡಿಸಿ, ಆಕೆ ಮಲಗಿಕೊಂಡಳು?
ಆ ಸಂಜೆ ಸರಸಮ್ಮನೂ ಉಲ್ಲಾಸವಾಗಿದ್ದರು. ಹುಡುಗಿಯರೊಡನೆ ತಾವೂ ಹೂವಿನ ಗಿಡಗಳಿಗೆ ವಾತಿಗಳಿಗೆ ನೀರೆರೆದರು.
ಕತ್ತಲಾದಾಗ ಭಜನೆಯಾಯಿತು.
ವರ್ಷವೆಲ್ಲಾ ದಿನಗಳು ಹೀಗೆಯೇ ಇರಬಾರದೆ-ಎನಿಸಿತು ಸರಸಮ್ಮನಿಗೆ-ಅವರು, ಜಲಜ-ಲಲಿತ-ಸಾವಿತ್ರಿಯರನ್ನು, ಸುಂದ್ರಾ-ಕಲ್ಯಾಣಿಯರನ್ನು, ತಮ್ಮ ಆಫೀಸು ಕೊಠಡಿಗೆ ಕರೆಸಿ ರವಕೆ ಕಣಗಳನ್ನು ಕೊಟ್ಟರು.
ಮೂಗಿ ತನಗೆ ಅರ್ಥವಾಯಿತೆಂದು ಸನ್ನೆಮಾಡಿದಳು:
"ಯಾಕ್ರನ್ವಾ ಇದು"
"ತುಂಗಮ್ನ ತಂದೆ ಬಂದಿದ್ರು ನೋಡು-"
"ಊಂ. ಅಂಗೇಂತ ಅಂದ್ಲು ವಾರೋತಿ"
"ಅವರ್ಕೊಟ್ಟದ್ದು"
"ತುಂಗಕ್ಕ ಕೊಡಿಸಿದ್ಲೂ ಅನ್ನಿ!"
ಕುರುಡಿಯ ಕೈ ಬೆರಳು, ರವಕೆ ಕಣದ ಮೇಲಿನ ಹೂವಿನ ಚಿತ್ರಗಳನ್ನು ಬಟ್ಟೆಯಿಂದ ಬೇರೆಯಾಗಿಯೆ ಗುರುತಿಸಲು ಯತ್ನಿಸುತಿತ್ತು.
ಅದಾದ ಮೇಲೆ ಸರಸಮ್ಮ, ಎಲ್ಲ ಹುಡುಗಿಯರನ್ನೂ ಒಬ್ಬೊಬ್ಬರಾಗಿ ಕರೆದು ಒಂದು ಕಿತ್ತಳೆ ಹಣ್ಣು-ಎರಡೆರಡು ಬಿಸ್ಕತ್ತು ಕೊಟ್ಟರು. ಒಬ್ಬಳು ಹುಡುಗಿ ಮಾತ್ರ ಎರಡನೆಯ ಬಾರಿ ಪಡೆಯಲೆತ್ನಿಸಿ ಸಿಕ್ಕಿಬಿದ್ದಳು. ತುಂಗಮ್ಮ ಗದರಿಸಲಿಲ್ಲ. "ಕೆಟ್ಟ ಹುಡುಗಿ!" ಎಂದು ನಗುತ್ತ ಛೀಮಾರಿ ಹಾಕಿ ಹಾಕಿ ಹಾಗೆಯೇ ಓಡಿಸಿದರು.