ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆನುಕೊಂಡ

ವಿಕಿಸೋರ್ಸ್ದಿಂದ

ಪೆನುಕೊಂಡ - ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಒಂದು ತಾಲ್ಲೂಕು : ಆ ತಾಲ್ಲೂಕಿನ ಆಡಳಿತ ಕೇಂದ್ರ. ದೊಡ್ಡ ಬೆಟ್ಟ ಎಂದು ಇದರ ಅರ್ಥ, ತಾಲ್ಲೂಕಿನ ಉತ್ತರದಲ್ಲಿ ಧರ್ಮಾವರಂ, ಪೂರ್ವಭಾಗದಲ್ಲಿ ಕದಿರಿ ಮತ್ತು ಕಡಪಾ, ಪಶ್ಚಿಮದಲ್ಲಿ ಕರ್ನಾಟಕದ ಪಾವಗಡ, ದಕ್ಷಿಣದಲ್ಲಿ ಹಿಂದೂಪುರ ತಾಲ್ಲೂಕುಗಳಿವೆ. ತಾಲ್ಲೂಕಿನ ಬಹುಭಾಗ ಬಂಜರು. ಕೆಂಪು ಹಾಗೂ ಪುಡಿಗಲ್ಲಿನಿಂದ ಕೂಡಿದ ನೆಲವಿದೆ. ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಪೆನ್ನಾರ್ ಮತ್ತು ಪೂರ್ವಭಾಗದಲ್ಲಿ ಚಿತ್ರಾವತಿ ನದಿಗಳು ಹರಿಯುತ್ತವೆ. ಇವುಗಳ ನೆರೆಯಲ್ಲಿ ಅಲ್ಲಲ್ಲಿ ಬತ್ತ ಮತ್ತು ಕಬ್ಬು ಬೆಳೆಯುತ್ತವೆ. ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ ಮತ್ತು ಹುರುಳಿ. ಬುರಾಪಟ್ಣಂ ಬಳಿ ಚಿತ್ರಾವತಿ ನದಿಗೆ ಅಣೆಕಟ್ಟಿದೆ. ತಾಲ್ಲೂಕಿನಲ್ಲಿ ಬೇಸಾಯಕ್ಕೆ ಏತದ ಬಾವಿಗಳು ಹಾಗೂ ಕೆರೆಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ. ತಾಲ್ಲೂಕಿನ ಜನಸಂಖ್ಯೆ 1,66,269 (1971).

ಪೆನುಕೊಂಡ ಪಟ್ಟಣ ಅನಂತಪುರದಿಂದ 66 ಕಿ.ಮೀ. ಬಳ್ಳಾರಿಯಿಂದ 138 ಕಿ.ಮೀ. ಮತ್ತು ಮದರಾಸಿನಿಂದ 312 ಕಿ.ಮೀ. ದೂರದಲ್ಲಿ, ಉ.ಆ. 1405' ಮತ್ತು ಪೂ.ರೇ. 77036' ಮೇಲೆ ಇದೆ. ಇದು ಬೆಂಗಳೂರು-ಗುಂತಕಲ್ ಮೀಟರ್‍ಗೇಜ್ ರೈಲ್ವೇ ನಿಲ್ದಾಣ ಪೆನುಕೊಂಡ ತಾಲ್ಲೂಕ್ಕೇ ಅಲ್ಲದೆ ಉಪವಿಭಾಗಕ್ಕೂ ಆಡಳಿತ ಕೇಂದ್ರವಿದು. ಜನಸಂಖ್ಯೆ 9,264 (19-1). (ವಿ.ಜಿ.ಕೆ.)

ಪೆನುಕೊಂಡ ಪಟ್ಟಣದ ಸುತ್ತ ಬಲವಾದ ಕೋಟೆ ಇದೆ. ಬೆಟ್ಟದ ಮೇಲೆ ಒಂದು ಬಂಗಲೆ ಹಾಗೂ ಬೆಟ್ಟದ ಇಳುಕಲ್ಲುಗಳಲ್ಲಿ ಮಂಟಪಗಳಿವೆ. ಕರಿಯ ಶಿಲೆಯಿಂದ ರಚಿತವಾದ ಶೇರ್‍ಖಾನ್ ಮಸೀದಿ, ಫಕೀಜನಾದ ಅರಸನೊಬ್ಬನ ಸ್ಮಾರಕವಾಗಿ ಕಟ್ಟಿದ ಬಾಬಯ್ಯನ ದರ್ಗ, ಗಂಗಮಹಲ್ ಎಂಬ ಹಳೆಯ ಅರಮನೆ. ಎರಡು ಜೈನ ದೇವಾಲಯಗಳು-ಇವು ಇಲ್ಲಿರುವ ಪ್ರಮುಖ ಕಟ್ಟಡಗಳು. ಕೋಟೆಯ ಉತ್ತರ ಬಾಗಿಲ ಬಳಿ ಹನುಮಂತನ ದೊಡ್ಡ ವಿಗ್ರಹವಿದೆ. ಬಾಬಯ್ಯನ ಉರುಸ್ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಪೆನುಕೊಂಡ ವ್ಯಾಪಾರ ಸ್ಥಳ. (ಜೆ.ಬಿ.)

ಪೆನುಕೊಂಡವನ್ನು ಸ್ಥಾಪಿಸಿದವನು ಕ್ರಿಯಾಶಕ್ತಿ ಒಡೆಯ. ವಿಜಯನಗರದ 1 ನೆಯ ಬುಕ್ಕ ಪೆನುಕೊಂಡ ರಾಜ್ಯವನ್ನು ತನ್ನ ಮಗ ವೀರ ವಿರೂಪಣ್ಣ ಒಡೆಯನಿಗೆ ವಹಿಸಿದನೆಂಬುದು ಊರಿನ ಕೋಟೆಯ ಉತ್ತರ ದ್ವಾರದ ಬಳಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಈ ಕೋಟೆಯನ್ನು ಕಟ್ಟಿಸಿದವನು ವಿರೂಪಣ್ಣ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಪ್ರಾರಂಭದಲ್ಲೇ ಪೆನುಕೊಂಡ ಅದಕ್ಕೆ ಸೇರಿದ್ದು. ಸ್ವಲ್ಪಕಾಲ ಕೃಷ್ಣದೇವರಾಯ ಅಲ್ಲಿದ್ದನೆಂದು ಹೇಳಲಾಗಿದೆ. ತಾಳಿಕೋಟೆ ಯುದ್ಧದ ತರುವಾಯ (1565) ಪೆನುಕೊಂಡ ವಿಜಯನಗರದ ರಾಜಧಾನಿಯಾಗಿತ್ತು. 1577 ರಲ್ಲಿ ಬಿಜಾಪುರದ ಸುಲ್ತಾನ ಅದಕ್ಕೆ ಮುತ್ತಿಗೆ ಹಾಕಿದಾಗ ಅವನಿಗೆ ಕಪ್ಪ ಕಳುಹಿಸಲಾಯಿತು. ವಿಜಯನಗರದ ಅರಸರು ಈ ನೆಲೆಯನ್ನು ಬಿಟ್ಟು 1585 ರಲ್ಲಿ ಚಂದ್ರಗಿರಿಯನ್ನು ರಾಜಧಾನಿಯಾಗಿ ಮಾಡಿಕೊಂಡರು. 1589 ರಲ್ಲಿ ಗೋಲ್ಕೊಂಡದ ಸುಲ್ತಾನ ಪೆನುಕೊಂಡದ ಮೇಲೆ ದಾಳಿ ನಡೆಸಿದಾಗ ಜಗದೇವರಾಯ ಈ ಪಟ್ಟಣವನ್ನು ರಕ್ಷಿಸಿದ. 1652 ರಲ್ಲಿ ಇದು ಬಿಜಾಪುರ ಸುಲ್ತಾನನ ವಶವಾಯಿತು. ಒಂದು ಶತಮಾನದ ತರುವಾಯ ಮರಾಠರ ಮುರಾರಿರಾಯನ ಕೈಸೇರಿ, 1762 ರಲ್ಲಿ ಹೈದರನ ಪಾಲಾಯಿತು. ಟೀಪು ಸುಲ್ತಾನನ ಮರಣದ ವರೆಗೆ (1799) ಇದು ಮೈಸೂರು ರಾಜ್ಯದ ಅಧೀನದಲ್ಲಿದ್ದು, ಅನಂತರ ಬ್ರಿಟಿಷರಿಗೆ ಸೇರಿತ್ತು. ಪೆನುಕೊಂಡ, ಮದರಾಸು ಪ್ರಾಂತ್ಯದಲ್ಲಿ ಅನಂತಪುರ ಜಿಲ್ಲೆಯ ಒಂದು ತಾಲ್ಲೂಕಾಯಿತು. ರಾಜ್ಯ ಮರುವಿಂಗಡಣೆಯಾದಾಗ (1956) ಅನಂತಪುರ ಜಿಲ್ಲೆಯ ಭಾಗವಾದ ಪೆನುಕೊಂಡವೂ ಆಂಧ್ರ ಪ್ರದೇಶಕ್ಕೆ ಸೇರಿತು. (ವಿ.ಜಿ.ಕೆ.ಜಿ.ಆರ್.ಕೆ.)