"ಒಳ್ಳೆಯ ಗ್ರಹಚಾರ! ನಾನಾದರೂ ಏನ್ಮಾಡ್ಲೇ? ದಾಕ್ಷಿಣ್ಯಕ್ಕೆ
ಒಪ್ಕೊಂಡಿದ್ದಾಯ್ತು ಇನ್ನು ಸ್ವಲ್ಪ ದಿವ್ಸ"....
"ಹೌದು, ಇನ್ನು ಸ್ವಲ್ಪ ದಿವ್ಸ!"
"ಆಕೆ ತಂದೆ, ಹೋದ ತಿಂಗಳು ಬಂದಾಗ ಹೇಳಿರ್ಲಿಲ್ಲ? ಒಂಭತ್ನೇ
ತಿಂಗಳಿರ್ಬೇಕು ಈಗ. ಇನ್ನೊಂದ್ಸಲಿ ಡಾಕ್ಟರಿಗೆ ತೋರಿಸಿ ಆಸ್ಪತ್ರೆ ಸೇರಿಸ್ಬಿಡೋಣ."
"ಸೇರ್ಸಿ. ನಾನು ಅಲ್ಹೋಗಿ ಆಕೆ ಚಾಕ್ರಿ ಮಾಡ್ತೀನಿ."
"ನೀನ್ಯಾಕೆ ಮಾಡ್ಬೇಕು? ದಿನಕ್ಕೊಮ್ಮೆ ಹೋಗ್ಬಿಟ್ಟು ಬಾ
ಅಷ್ಟೆ."
"ಹೆರಿಗೆ ಆದ್ಮೇಲೆ ತಾಯಿ ಮಗು ಇಲ್ಲಿಗೇ ತಾನೇ ವಾಪ್ಸು?"
"ಏನೂ ಇಲ್ಲ. ಆಕೆ ತಂದೆಗೆ ಬರೆದ್ಬಿಡ್ತೀನಿ...ಏನ್ಬೇಕಾದರೂ
ಮಾಡ್ಕೊಳ್ಳಿ....ಇಷ್ಟು ಸಮಯ ನಾವು ಮಾಡಿದ್ಸೇವೇನೇ ಸಾಕು!"
....ನೋವು,ವ್ಯಂಗ್ಯ,ಕನಿಕರವೆಲ್ಲವೂ ಬೆರೆತಿದ್ದ ಮಾತುಗಳು.
ಆ ರಾತ್ರೆ ನಿದ್ದೆ ಬರಲಿಲ್ಲ ತುಂಗಮ್ಮನಿಗೆ.
ಮಾರನೆ ದಿನ ತಿರಸ್ಕಾರದ ನೋಟವನ್ನೂ ಕುಹಕದ ಮಾತುಗಳನ್ನೂ
ಆಕೆ ಇದಿರುನೋಡಿದಳು. ಆದರೆ ಆ ದಂಪತಿಗಳು ಎಂದಿನಂತೆಯೇ ಇದ್ದರು. ಮಾಮೂಲಿನ ವ್ಯವಹಾರದ ಮಾತುಗಳು..."ಆಯಾಸವೆ? ಹ್ಯಾಗನಿಸುತ್ತೆ?" ಎನ್ನುವ ಪ್ರಶ್ನೆಗಳು.
ಅವೆಲ್ಲವೂ ಎಷ್ಟೊಂದು ಕೃತಕ, ಅಸಹಜ!
ತುಂಗಮ್ಮನಿಗೆ ಅವರನ್ನು ದ್ವೇಷಿಸಬೇಕೆಂದು ತೋರಿತು, ಕ್ಷಣಕಾಲ.
ಆದರೆ ಹಾಗೆ ಮಾಡಲು ಹಕ್ಕಿತ್ತೆ ಅವಳಿಗೆ? ಇಷ್ಟು ಕಾಲ ಆಶ್ರಯವಿತ್ತುದಕ್ಕೆ ಅದೇ ಏನು ಕೃತಜ್ಞತೆ ಸಲ್ಲಿಸುವ ರೀತಿ?....ತುಂಗಮ್ಮ ಉಗುಳು ನುಂಗಿ ಸುಮ್ಮನಾದಳು.
ಆಮೇಲೆ ಆಕೆ ಆ ತೀರ್ಮಾನಕ್ಕೆ ಬರಲು ಹೆಚ್ಚು ದಿನ ಹಿಡಿಯಲಿಲ್ಲ.
....ಇಷ್ಟು ದೂರ ನಡೆದು ಬಂದಿದಾಳೆ ತುಂಗಮ್ಮ, ತನ್ನ ತೀರ್ಮಾನ
ವನ್ನು ಕೃತಿಗಿಳಿಸುತ್ತ.