ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಥಾರ್ ಮರುಭೂಮಿ

ವಿಕಿಸೋರ್ಸ್ದಿಂದ

ಥಾರ್ ಮರುಭೂಮಿ - ಭಾರತದ ರಾಜಸ್ಥಾನ್ ರಾಜ್ಯದಲ್ಲಿ ಬಿಕಾನೇರ್, ಜೈಸಲ್ಮೇರ್, ಜೋಧ್‍ಪುರ, ಜಿಲ್ಲೆಗಳನ್ನೂ ಜಯಪುರ ಜಿಲ್ಲೆಯ ಕೆಲವು ಭಾಗಗಳನ್ನೂ ಪಾಕಿಸ್ತಾನದ ಬಹವಾಲ್‍ಪುರ ಮತ್ತು ಪೂರ್ವ ಸಿಂಧನ್ನೂ ಆವರಿಸಿರುವ ಮರುಭೂಮಿ. ಇದರ ಪಶ್ಚಿಮದಲ್ಲಿ ಸಿಂಧೂ ನದಿಯ ನೀರಾವರಿ ಬಯಲು, ದಕ್ಷಿಣದಲ್ಲಿ ಕಚ್ಛ್‍ನ ರಣ್, ಆಗ್ನೇಯದಲ್ಲಿ ಅರಾವಳಿ ಶ್ರೇಣಿ, ಉತ್ತರ ಮತ್ತು ಈಶಾನ್ಯದಲ್ಲಿ ಪಂಜಾಬಿನ ಬಯಲು ಇವೆ. 2,00,000 ಚಕಿಮೀ. (77,000 ಚಮೈ) ವಿಸ್ತಾರವಾಗಿರುವ ಈ ಮರುಭೂಮಿಗೆ ಭಾರತದ ಮಹಾ ಮರುಭೂಮಿ ಎಂದೂ ಹೆಸರಿದೆ. ಮರಳು ಗುಡ್ಡಗಳು ಎಂಬರ್ಥದ ಶಬ್ದದಿಂದ ಥಾರ್ ಎಂಬ ಹೆಸರು ಬಂದಿದೆ. ಇದರ ಮೇಲೆ ಬೀಸುವ ಮಾನ್ಸೂನ್ ಮಾರುತಗಳು ಸಾಕಷ್ಟು ಮಳೆ ತರುವುದಿಲ್ಲವಾದ್ದರಿಂದ ಮರುಭೂಮಿ ಸಂಭವಿಸಿದೆ. ಥಾರ್‍ನಲ್ಲಿ ಸು. 70,00,000 ವಾಸಿಸುತ್ತಾರೆ. 460 ಕೋಟಿ ವರ್ಷಗಳ ಹಿಂದೆ ಆರಂಭವಾದ ಅತ್ಯಂತ ಪ್ರಾಚೀನ ಭೂವೈe್ಞÁನಿಕ ಯುಗದಲ್ಲಿ ರೂಪುಗೊಂಡ ಪ್ರಿ - ಕೇಂಬ್ರಿಯನ್ ನೀಸ್ ಶಿಲೆಗಳು (ಗ್ರಾನೈಟ್‍ನಂಥ ರೂಪಾಂತರಿತ ಶಿಲೆಗಳು). 57 ಕೋಟಿ - 25 ಕೋಟಿ ವರ್ಷಗಳಷ್ಟು ಹಳೆಯದಾದ ಅವಸಾಧಿ ಶಿಲೆಗಳು ಮತ್ತು ಇತ್ತೀಚೆಗೆ ನದಿಗಳು ತಂದು ತುಂಬಿದ ಮೆಕ್ಕಲು ಮಣ್ಣು - ಇವುಗಳ ಮೇಲೆ ಮರಳಿನ ಹೊದಿಕೆಯಿದೆ. ಅತ್ಯಂತ ಇತ್ತೀಚಿನದಾದ- ಎಂದರೆ 70 ವರ್ಷಗಳ ಹಿಂದೆ ಆರಂಭವಾದ - ಚತುರ್ಥ ಕಲ್ಪದಲ್ಲಿ ಗಾಳಿಯಿಂದಾಗಿ ಈ ಪ್ರದೇಶದ ಮೇಲೆ ಮರಳು ತುಂಬಿಕೊಂಡಿತು.

ಇಡೀ ಮರುಭೂಮಿ ಅಲೆಯಲೆಯಾಗಿದೆ. ಎತ್ತರದ ಮತ್ತು ತಗ್ಗಿನ ಮರಳು ದಿಬ್ಬಗಳ ನಡುವೆ ಮರಳು ಮೈದಾನಗಳಿವೆ. ಅಲ್ಲಿಲ್ಲ ತಗ್ಗಾದ ಬರಡು ಬೆಟ್ಟಗಳುಂಟು. ಮರಳು ದಿಬ್ಬಗಳು ಆಗಿಂದಾಗ್ಗೆ ಚಲಿಸುತ್ತ ವಿವಿಧ ಆಕಾರ ಹಾಗೂ ಗಾತ್ರ ತಳೆಯುತ್ತವೆ. ಹಳೆಯ ಗುಡ್ಡಗಳು ಹೆಚ್ಚು ಕಡಿಮೆ ಸ್ಥಿರವಾದಂಥವು. ಈ ಪ್ರದೇಶದಲ್ಲಿ ಅಲ್ಲಲ್ಲಿ ಉಪ್ಪುನೀರಿನ ಸರೋವರಗಳುಂಟು. (ಬಿ.ಎ.ಎಸ್.)

ಪಶ್ಚಿಮದಲ್ಲಿರುವ ಸಿಂಧೂ ನದಿಯನ್ನೂ ಆಗ್ನೇಯದಲ್ಲಿರುವ ಲೂನಿ ನದಿಯನ್ನೂ ಬಿಟ್ಟರೆ ಮಿಕ್ಕಂತೆ ಇಲ್ಲಿಯ ಜಲೋತ್ಸಾರಣ ಒಳಮುಖವಾದ್ದು. ಮಳೆಗಾಲದಲ್ಲಿ ಇಲ್ಲಿಯ ಎತ್ತರದ ಸ್ಥಳಗಳಲ್ಲಿ ಶ್ರಾಯೀಣವಾಗಿ ಹೊಳೆಗಳು ಹುಟ್ಟಿ ಹರಿಯುತ್ತವೆ. ಆದರೆ ತುಸ ದೂರ ಸಾಗುವುದರಲ್ಲೇ ಮರಳಿನಲ್ಲಿ ಇಂಗಿ ಹೋಗುತ್ತದೆ. ಇಲ್ಲಿಯ ಮಣ್ಣುಗಳಲ್ಲಿ ಏಳು ಬಗೆ: ಮರುಭೂಮಿಯ ಮಣ್ಣು, ಮರಳು ಮಿಶ್ರಿತ ಮಣ್ಣು, ಕಪ್ಪುಕಂದು ಬೂದು ಮಣ್ಣು, ಅಡಿಬೆಟ್ಟಗಳ ಕೆಂಪು ಹಳದಿ ಮಣ್ಣು, ಅವನತ ಪ್ರದೇಶಗಳ ಉಪ್ಪು ಮಣ್ಣು, ಗಾಳಿಮಳೆಗಳಿಗೆ ಪಕ್ಕಾದ ತೆಳು ಮಣ್ಣು ಮತ್ತು ಬೆಟ್ಟಗಳ ಮೇಲಣ ಮೆದು ಮಣ್ಣು, ಇದೆಲ್ಲ ಸುಣ್ಣ ಮಿಶ್ರಿತ ನೆಲ; ಸಾಮಾನ್ಯವಾಗಿ ಫಲವತ್ತಾದ್ದಲ್ಲ. ಇದು ಗಾಳಿಯಿಂದ ಸವೆತಕ್ಕೆ ಒಳಗಾಗಿ ಮರಳಿನಿಂದ ಕೂಡಿದೆ.

ಮರುಭೂಮಿ ಪ್ರದೇಶದಲ್ಲಿ ವಾರ್ಷಿಕ ಮಳೆ, ಸಾಮಾನ್ಯವಾಗಿ ಬಹು ಅಲ್ಪ. ಪಶ್ಚಿಮದಲ್ಲಿ 4" ಇಂದ ಪೂರ್ವದಲ್ಲಿ 20" ವರೆಗೆ ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಬಹಳ ಮಟ್ಟಿಗೆ ಅನಿಶ್ಚಿತ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ-ಮುಂಗಾರಿನಲ್ಲಿ-ಸೇ. 90 ರಷ್ಟು ಮಳೆ. ಉಳಿದ ಕಾಲದಲ್ಲಿ ಈಶಾನ್ಯದ ಕಡೆಯಿಂದ ಗಾಳಿ ಬೀಸುತ್ತದೆ. ಮೇ, ಜೂನ್, ತಿಂಗಳುಗಳಲ್ಲಿ ಉಷ್ಣತೆ ಅತ್ಯಧಿಕ; 500 ಅ. (122 ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಆಗ ಮಾಧ್ಯ ಕನಿಷ್ಠ ಉಷ್ಣತೆ 50 - 100 ಅ. (410 - 500ಈ) ಮೇ - ಜೂನ್ ತಿಂಗಳುಗಳಲ್ಲಿ 140 - 150 ಕಿಮೀ (87 - 93 ಮೈ) ವೇಗದಲ್ಲಿ ದೂಳಿನಿಂದ ತುಂಬಿದ ಗಾಳಿ ಬೀಸುತ್ತದೆ.

ಮರಭೂಮಿಯಲ್ಲಿ ಬೆಳೆಯುವ ಸಸ್ಯ ಬಹುತೇಕ ಮೂಲಿಕೆ ಜಾತಿಯದು; ಅಥವಾ ಮೋಟು ಕಂಟಿ. ಅಲ್ಲಲ್ಲಿ ಮರಗಳಿವೆ. ಬೆಟ್ಟಗಳ ಮೇಲೆ ಗೊಬ್ಬಳಿ, ಕಳ್ಳಿ ಬೆಳೆಯುತ್ತವೆ. ಎಲ್ಲೆಲ್ಲೂ ವುನ್ನೆ ಮರಗಳಿವೆ. ಎಲಚಿ ಮುಂತಾದ ಇತರ ಮರಗಳೂ ಪೊದೆಗಳೂ ಉಂಟು. ಗಟ್ಟಿಯಾದ ಮರಳುದಿಣ್ಣೆಯಲ್ಲಿ ಹುಲ್ಲು, ಪೊದೆ, ಮರ ಬೆಳೆಯುತ್ತವೆ. ಕಾಡು ಸೋರೆ ತುಂಬ ವ್ಯಾಪಕವಾಗಿದೆ. ಹುಲ್ಲು ಬೆಳೆಯುವಲ್ಲಿ ಹುಲ್ಲೆಕರ ಮತ್ತು ಚಿಂಕಾರಗಳೂ ಫ್ರಾಂಕೊಲಿನ್, ಲಾವುಗೆ ಮುಂತಾದ ಪಕ್ಷಿಗಳೂ ಇವೆ. ವಲಸೆಗಾರ ಹಕ್ಕಿಗಳು ಮರಳುವಕ್ಕಿ, ಬಾತು ಕೋಳಿ ಮುಂತಾದವು. ನಷ್ಟಜೀವಿಯಾಗುತ್ತಿರುವ ಗುನಾ ಹದ್ದಿಗೂ ಇದು ವಾಸಸ್ಥಳ. ಇಲ್ಲಿ ಐದು ಬಗೆಯ ದನಗಳನ್ನೂ ಕುರಿ ಒಂಟೆಗಳನ್ನೂ ಸಾಕುತ್ತಾರೆ.

ಇಲ್ಲಿಯ ಜನ ಬಹುತೇಕ ಗ್ರಾಮಸ್ಥರು. ಜನಸಾಂದ್ರತೆ ಚ.ಮೈ.ಗೆ 4ರಿಂದ 104ರವರೆಗೆ ವ್ಯತ್ಯಾಸವಾಗುತ್ತದೆ. ಹಿಂದೂಗಳೂ ಮುಸ್ಲಿಮರೂ ಇದ್ದಾರೆ. ಅಲೆಮಾರಿಗಳು ಸಾಮಾನ್ಯವಾಗಿ ದನಗಾಹಿಗಳು.

ಇಲ್ಲಿ ಬೆಳೆಯುವ ಹುಲ್ಲು ದನಗಳಿಗೆ ಮೇವು. ಇದನ್ನು ಔಷಧಿಗಳ ತಯಾರಿಕೆಗೂ ಉಪಯೋಗಿಸಲಾಗುತ್ತಿದೆ. ನೀರು ಬಲು ವಿರಳ. ಕೆರೆ ಕೊಳಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಾರೆ. ನೆಲದಡಿಯ ನೀರು ಕ್ಷಾರಯುಕ್ತವಾದ್ದರಿಂದ ಅಷ್ಟು ಉಪಯುಕ್ತವಲ್ಲ. ಮರುಭೂಮಿಯ ಮಧ್ಯದಲ್ಲಿ ಬಂಡೆಗಳಲ್ಲಿ ಜಲಮೂಲಗಳು ಈಚೆಗೆ ಸಿಕ್ಕಿವೆ.

ಇಲ್ಲಿ ಹಲವು ಖನಿಜ ನಿಕ್ಷೇಪಗಳಿವೆ. ಬಿಕಾನೀರ್ ಬಳಿ ಪಲನಾದಲ್ಲಿ ಲಿಗ್ನೈಟ್ ತೆಗೆಯುತ್ತಾರೆ. ಜೈಸಲ್ಮೇರ್‍ಗೆ ವಾಯುವ್ಯದಲ್ಲಿ, ಕಮ್ಲಿ ತಾಲ್‍ನಲ್ಲಿ ನೈಸರ್ಗಿಕ ಅನಿಲವಿದೆ. ನಾಗೌರ್, ಜೈಸಲ್ಮೇರ್, ಬಿಕಾನೇರ್, ಬಾರ್ಮೇರ್ ಜಿಲ್ಲೆಗಳಲ್ಲಿ ಜಿಪ್ಸಮ್ ತೆಗೆಯಲಾಗುತ್ತದೆ. ಸುಣ್ಣಕಲ್ಲು, ಬೆಂಟೊನೈಟ್ (ಜ್ವಾಲಾಮುಖಿಯ ಬೂದಿಯ ವಿಘಟನೆಯಿಂದ ಪರಿಣಮಿಸಿದ ಒಂದು ಜೇಡುಮಣ್ಣು), ಗಾಜು ಮರಳು, ಸಿಂಗಾಣಿ ಮಣ್ಣು, ಉಪ್ಪು ನೀರಿನ ಸರೋವರಗಳಿಂದ ದೊರಕುವ ಉಪ್ಪು -ಇವು ಇತರ ಖನಿಜಗಳು.

ನೀರು ದೊರಕುವೆಡೆಯಲ್ಲಿ ಗೋದಿ, ಹತ್ತಿ, ಕಬ್ಬು, ಎಳ್ಳು, ಹರಳು, ಮೆಣಸಿನಕಾಯಿ ಮುಂತಾದವನ್ನು ಬೆಳೆಯುತ್ತಾರೆ. ಬಾವಿ, ಕೆರೆ, ನಾಲೆ ನೀರಾವರಿ ಅಲ್ಲಲ್ಲಿ ಉಂಟು. ಸಿಂಧೂ ನದಿಗೆ ಅಡ್ಡಲಾಗಿ ನಿರ್ಮಿಸಿದ ಸುಕ್ಕೂರ್ ಜಲಾಶಯದಿಂದ ಪಾಕಿಸ್ತಾನದ ದಕ್ಷಿಣ ಪ್ರದೇಶದಲ್ಲಿ ನೀರಾವರಿ ಏರ್ಪಟ್ಟಿದೆ. ಸಟ್ಲೆಜ್ ನದಿಯಿಂದ ನಿರ್ಮಿಸಲಾಗಿರುವ ಗಂಗಾ ಕಾಲುವೆಯಿಂದ ದಕ್ಷಿಣ ಭಾಗಕ್ಕೆ ನೀರಾವರಿ ಸೌಲಭ್ಯ ಉಂಟಾಗಿದೆ. ರಾಜಸ್ಥಾನ ಕಾಲುವೆ ನಿರ್ಮಾಣ ಮುಗಿದಾದ ಮುಖ್ಯವಾಗಿ ಬಿಕಾನೇರ್ ಮತ್ತು ಜೈಸಲ್ಮೇರ್ ಜಿಲ್ಲೆಗಳಲ್ಲೂ ನೆರೆಯ ಪ್ರದೇಶದಲ್ಲೂ ಸು. 24,70,000 ಎಕರೆ ನೀರಾವರಿಗೆ ಒಳಪಡುತ್ತದೆ. ಈ ಯೋಜನೆ ಪೂರೈಸಿದಾಗ 22,000 ಕಿಲೋವಾಟ್ ಜಲವಿದ್ಯುತ್ತು ಒದಗುವ ನಿರೀಕ್ಷೆಯಿದೆ. ಇವೆಲ್ಲ ಪೂರೈಸಿದಾಗ ಮರುಭೂಮಿಯ ಬಹುಭಾಗ ಸಂಪದ್ಯುಕ್ತವಾಗಿ ಪರಿಣಮಿಸುತ್ತದೆ.

ಈ ಪ್ರದೇಶದಲ್ಲಿ ರಸ್ತೆ ಹಾಗೂ ರೈಲ್ವೆ ವ್ಯವಸ್ಥೆ ಅಷ್ಟೇನೂ ಬೆಳೆದಿಲ್ಲ. ದಕ್ಷಿಣ ಭಾಗದಲ್ಲಿ ಭಾರತದ ಲೂನಿ ಜಂಕ್ಷನ್‍ನಿಂದ ಪಾಕ್ ಹೈದರಾಬಾದಿಗೂ ಮೆರ್ಟಾರೋಡ್‍ನಿಂದ ಸೂರತ್‍ಗಢಕ್ಕೂ ಜೋಧಪುರದಿಂದ ಜೈಸಲ್ಮೇರ್‍ಗೂ ಪಾಕಿಸ್ತಾನದ ಬಹುವಾಲ್‍ಪುರದಿಂದ ಹೈದರಾಬಾದಿಗೂ ರೈಲು ಮಾರ್ಗಗಳಿವೆ. ಕೆಲವು ರಸ್ತೆಗಳೂ ಉಂಟು.