ಪುಟ:Abhaya.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂವರು ಹುಡುಗಿಯರೂ ರಾಜಮ್ಮನ ಮುಖ ನೋಡಿದರು. ಅವರತ್ತ ಕ್ಷಣಕಾಲ ದೃಷ್ಟಿ ಹಾಯಿಸಿ ರಾಜಮ್ಮ ಹೊರ ಹೊರಟರು

ಅಧ್ಯಾಪಿಕೆಯನ್ನು ಕಳುಹಿಸಿಕೊಟ್ಟು ಅಭಯಧಾಮಕ್ಕೆ ಒಳಗಿನಿಂದ

ಬೀಗ ತಗಲಿಸುವ ಜವಾಬ್ದಾರಿ ಜಲಜೆಯ ಮೇಲೆ ಬಿತ್ತು .

ಆದರೆ, ತುಂಗಮ್ಮನ ಹೆರಿಗೆಯ ನೋವಿನ ರೀತಿ ವಿಚಿತ್ರವಾಗಿತ್ತು.

ಮಧ್ಯಾಹ್ನದ ಹೊತ್ತಿಗೆ ಆಕೆ ಸುಧಾರಿಸಿಕೊಂಡಳು. ಹುಡುಗಿಯರು ಹಲವರಿಗೆ ನಿರಾಶೆಯಾಯಿತು. ಉಳಿದವರು ಆ ಪ್ರಕರಣವನ್ನು ಮರೆತುದೂ ಆಯಿತು.

ಬಳಿಕ ಎಂದಿನಂತೆ ಬದುಕು.

ಸಂಜೆ, ನೋವು ಮತ್ತೆ ಕಾಣಿಸಿಕೊಂಡಿತು....

ತುಂಗಮ್ಮ ಪದೇ ಪದೇ ಕೂಗಿಕೊಂಡಳು:

"ಅಯ್ಯೋ ಸತ್ತೆನಲ್ಲೇ ! ಅಮ್ಮಾ--ಅಮ್ಮಾ!"

ನಾಳೆಯ ದಿನ ತನ್ನನ್ನು 'ಅಮ್ಮಾ' ಎಂದು ಕರೆಯಲಿದ್ದ ಕೂಸನ್ನು ಪಡೆಯಲೆಂದು ಚಡವಡಿಸುತಿದ್ದ ತುಂಗಮ್ಮ, ನೋವನ್ನು 'ಅಮ್ಮ'ಎಂದು ಹಿಂದೆ ತನ್ನನ್ನು ಹೆತ್ತಾವಳನ್ನು ನೆರವಿಗೆ ಕರೆಯುತಿದ್ದಳು.

ಆಕೆಯೋ ತನ್ನ ಬಾಲ್ಯದಲ್ಲಿಯೇ ತೀರಿಕೊಂಡಿದ್ದ ಅಮ್ಮ. ಆ

ತಾಯಿ ನೆರವಿಗೆ ಬರುವ ಪ್ರಶ್ನೆ ಇರಲಿಲ್ಲ.

ಸರಸಮ್ಮನೇ ತಾಯಿಯಾಗಿ ದಾದಿಯಾಗಿ ಸೂಲಗಿತ್ತಿಯಾಗಿ

ಸಂತವಿಟ್ಟರು.

"ಏನೂ ಆಗಲ್ಲ ಮಗೂ. ಇನ್ನೂ ಸ್ಪಲ್ಪ ಹೊತ್ತು ಸಹಿನ್ಕೋಮ್ಮ..."

"ಅಯ್ಯೋ...ನಾನು ಬದುಕೋಲ್ಲ ದೊಡ್ಡಮ್ಮ..."

ಆದರ ಜತೆಯಲ್ಲಿ ನರಳಾಟ.

"ಹುಚ್ಚಿ! ಹಾಗನ್ಬಾರದು ತುಂಗಾ. ನಿಂಗೇನೂ ಆಗಲ್ಲ... ಮುದ್ದು

ಮುದ್ದಾದ ಗಂಡು ಮಗ ಬರ್ತನೆ..!"

"ಅಯ್ಯೋ....!"

ದೊಡ್ದಮ್ಮನೆಂದೂ ಹೆರಿಗೆಯ ನೋವಿನಿಂದ ನರಳಿದವರಲ್ಲ. ತಾಯಿ

ಯಾಗುವ ಭಾಗ್ಯವಿರಲಿಲ್ಲ ಅವರಿಗೆ. ಗಂಡನಿದ್ದಷ್ಟು ಕಾಲವೂ ಯುವತಿ