ಪುಟ:Banashankari.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦ ಬನಶಂಕರಿ ಎಚ್ಚರಗೊಂಡ ಎಳೆಯ ಹುಡುಗರು ತಾಯಿ–ಅಮ್ಮಿಯರ ರೋದನ ಕೇಳುತ್ತಲೆ ತಾವೂ ಅಳುತ್ತ ಬ೦ದರು...... ....ಚೇತರಿಸಿಕೊಂಡ ಮಾವ ಹೇಳುತ್ತಿದ್ದರು: "ಅಳಬೇಡಿ, ಯಾರೂ ಅಳಬೇಡಿ!ಅಳಬಾರದು, ಯಾರೂ ಅಳಬಾರದು ! " ಹಾಗೆ ಹೇಳುತ್ತ ಅವರು ಮಾತ್ರ ಅಳುತ್ತಿದ್ದರು ಗೋಳೋ ಎಂದು. ಮುನಿಯನೊಬ್ಬನೇ ಮಾತು ಬಂದವನಂತೆ ತಿರುತಿರುಗಿ ಹೇಳಿದ: "ಮೂರೇ ದಿವಸದ ಜ್ವರ...ದಾಕ್ದಾರು ಬಂದ್ರು--ಎಲ್ಲಾ ಬಂದ್ರು-ನಮ್ಮಪ್ಪ ಉಳೀಲಿಲ್ಲಪ್ಪೋ ಉಳೀಲಿಲ್ಲ.....ಎಂಗ್ಮಾಡ್ದ ಆ ಪರಮಾತ್ಮ !..." ಆ ಎಲ್ಲ ಕಂಠಗಳಿಂದ ರೋದನದ ಸ್ವರಗಳು ಹೊರಟು ಒಂದರಲ್ಲೊಂದು ಬೆರೆತು ಏಕ ಸ್ವರವಾಗಿ ಗಗನ ಭೇದಿಸುತ್ತ ಮೇಲೇರಿದುವು. ನಗುತ್ತಲೇ ಇದ್ದುವು ಸಾಲು ದೀಪಗಳು. ಆ ಸೊಡರುಗಳೆಲ್ಲ ಕಿರುನಾಲಗೆಗಳನ್ನು ಅತ್ತಿತ್ತ ಚಾಚುತ್ತ ಅಳುವವರನ್ನು ಅಣಕಿಸುತ್ತಿದ್ದುವು. ದೀಪಾವಳಿಯ ಸಂಭ್ರಮದಲ್ಲಿ ಮೈಮರೆತಿದ್ದ ಆ ಪುಟ್ಟ ಹಳ್ಳಿ ಅಯ್ಯನವರ ಮನೆಯ ರೋದನ ಕೇಳಿ ಗಾಬರಿಗೊಂಡಿತು. ಜನರು ಒಬ್ಬರ ಮೇಲೊಬ್ಬರಾಗಿ ನಾಲ್ಕೂ ಮೂಲೆಗಳಿಂದ ಅಲ್ಲಿಗೆ ಬಂದರು. ಯಾರೋ ಎಲ್ಲಿಂದಲೋ ಎಸೆದೆ ಆಕಾಶ ಬಾಣವೊಂದು ಸುಯ್ ಎಂದು ಎತ್ತರಕ್ಕೆ ಹೋಗಿ, ತಿರಿ-ತಿ-ತ್ತಿರಿ-ತಿರಿ ಎಂದು ಸ್ವರ ಅಡಗಿ, ಬೆಳಕು ಅಳಿದು. ಕತ್ತಲೆಯೊಡನೆಲೀನವಾಯಿತು.


" ಲಕ್ಷ್ಮಕ್ಕಾ, ಓ ಲಕ್ಷ್ಮಕ್ಕಾ." ಸಂಜೆಯಾಗಿ ಕತ್ತಲು ಕವಿದ ಆ ಮನೆಯೊಳಗಿನಿಂದ ನರಳುವ ಕ್ಷೀಣ ಸ್ವರ ಮಾತ್ರ ಕೇಳಿಸುತ್ತಿತ್ತು. ಹಳ್ಳಿಯ ಜೋಯಿಸರ ಮೂರನೆಯ ಹೆಂಡತಿ ಹೊರಗೆ ನಿಂತು ಕರೆಯುತ್ತಿದ್ದರು: " ಲಕ್ಷ್ಮಕ್ಕಾ-ಓ ಲಕ್ಷ್ಮಕ್ಕಾ..." ಅಮ್ಮಿ ,ಮೂಗು ಬರಿದುಗೊಳಿಸಿ ಕಣ್ಣೊರೆಸಿ ಬಾಗಿಲ ಹಿಂಬದಿಯಿಂದಲೇ ಕೇಳಿದಳು: "ಯಾರು ?" "ನಾನು,ಸರಸ್ವತಿ-ಹ್ಯಾಗಿದೆ ನಿಮ್ಮತ್ತೆಗೆ ?" ಉಸಿರು ಕಟ್ಟಿ ಬಂದು ಉತ್ತರ ಕೊಡಲಾರದೆ ಅಮ್ಮಿ ಒಂದು ಕ್ಷಣ ನಿಂತಳು. "ಈಗ ಸ್ವಲ್ಪ ವಾಸೀನಾ? ಔಷಧಿ ಕೊಟ್ಟಿದೀರಾ ?" "ಕೊಟ್ಟಿದೆ. ಕಾಯಿಲೆ ಹಾಗೇ ಇದೆ ಸರಸ್ವತಮ್ನೋರೆ." "ಅಳಬೇಡವಮ್ಮ ಎಲ್ಲಾ ಗ್ರಹಚಾರ. ಏನ್ಮಾಡೋಕಾಗುತ್ತೆ ?"