ಆ ಮಾತುಗಳಿಗಾಗಿ ಕೃತಜ್ಞ ಎಂಬರ್ಥದ ನೋಟವನ್ನು ಬೀರಿ ರಂಗರಾಯರು ಹೊರಟೇ ಹೋದರು. ಜಯದೇವ ಎರಡನೆ ತರಗತಿಯತ್ತ ಕಾಲು ಹಾಕಿದ.
ತರಗತಿಗಳು ಮುಗಿದು ಉಪಾಧ್ಯಾಯರೆಲ್ಲ ಮತ್ತೆ ಕಲೆತಾಗ ರಂಗರಾಯರ ಪ್ರಸ್ತಾಪವೇ ಬಂತು.
“ಆಸಾಮಿ ಇಷ್ಟೆಲ್ಲ ತೊಂದರೆ ಕೊಟ್ಟ ಅಲ್ವೆ?”
ವೆಂಕಟರಾಯರ ಆ ಧನಿಯಲ್ಲಿ ಮೂದಲಿಕೆಯಿತ್ತು, ರಂಗರಾಯರನ್ನು ಏಕವಚನದಲ್ಲಿ ಆಸಾಮಿ' ಎಂದೆಲ್ಲ ಕರೆದುದು ಜಯದೇವನಿಗೆ ಮೆಚ್ಚಿಗೆಯಾಗಲಿಲ್ಲ.
ನಂಜುಂಡಯ್ಯ ತಾವು ಅನುಭವಿಸಿದ ತೊಂದರೆಯನ್ನು ವಿವರಿಸಿದರು.
“ಏನ್ಮಾಡೋಣ ಹೇಳಿ? ಆರು ತಿಂಗಳು ಹಿಡಿಯಿತು-ಇಷ್ಟಾಗ್ಬೇಕಾದ್ರೆ. ನಮ್ಮ ಡಿ.ಇ.ಒ ಅಂತೂ ಮೃದು ಮನುಷ್ಯ. ಆ ಗುಣಾನ ಉಪಯೋಗಿಸ್ಕೊಂಬಿಟ್ರು ಈ ರಂಗರಾಯರು.ಹೀಗಾಗಿ ತಡವಾಯ್ತು.”
“ವಿದ್ಯಾಸಚಿವರೇ ಸ್ವತಃ ದೂರು ಸ್ವೀಕರಿಸಿ ತನಿಖೆಯಾಗಲೀಂತ ಆಜ್ಞೆ ಕೊಟ್ರಂತೆ.."
"ಹೌದು;ಹೌದು"
“ಡಿ, ಪಿ. ಐ ಆಫೀಸ್ನಲ್ಲಿ ತಿಳೀತು—ಸಸ್ಪೆಂಡ್ ಮಾಡ್ಬೇಕೂಂತ್ಲೆ ಇದ್ರಂತೆ. ಆದರೆ ನಿವೃತ್ತಿ ಹೊಂದೋ ಸಮಯ— ಹಾಳಾಗಿ ಹೋಗ್ಗಿಂತ ಬಿಟ್ಬಿಟ್ರಂತೆ. ”
ಜಯದೇವನಿದ್ದುದನ್ನು ಅಪರಿಬ್ಬರೂ ಗಮನಿಸಲಿಲ್ಲ. ಎಳೆಯನಾದ ಹೊಸಬನಾದ ಜಯದೇವ ತಮ್ಮ ಅಭಿಪ್ರಾಯವನ್ನು ವಿನೀತನಾಗಿ ಒಪ್ಪಿಕೊಳ್ಳಲೇಬೇಕು ಎಂದು ಅವರು ಭಾವಿಸಿದಂತೆ ತೋರಿತು.'ನಿನಗೂ ಒಂದು ಅಭಿಪ್ರಾಯವುಂಟೇ?" ಎಂದು ಜಯದೇವನ್ನನು ಅವರು ಕೇಳಲೂ ಇಲ್ಲ.
ನಂಜುಂಡಯ್ಯ ಒಂದು ಮಾತಂದರು:
"ನನ್ನ ಮನಸ್ನಲ್ಲೇನಿತ್ತು ಗೊತ್ತೆ ಸಾರ್? ಏನಾದರೂ ವಿಚಾರಣೆಯಾಗಿ ಒಂದು ಇಲ್ಲವೆ ಎರಡು ರೂಪಾಯಿ ಜುಲ್ಮಾನೆ ಆಗ್ಬೇಕೂಂತ--"