ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಗಾಸ್ತನೀಸ್

ವಿಕಿಸೋರ್ಸ್ದಿಂದ

ಮೆಗಾಸ್ತನೀಸ್

	ಚಂದ್ರಗುಪ್ತಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ. ಇವನನ್ನು ಕಳಿಸಿದಾತ ಸೆಲ್ಯೂಕಸ್ ನೀಕೆಟರ್.

ಚಂದ್ರಗುಪ್ತನ ಆಸ್ಥಾನದಲ್ಲಿ ಈತ ಪ್ರತಿಷ್ಠಿತ ರಾಯಭಾರಿಯಾಗಿದ್ದ. ರಾಜನೊಂದಿಗೆ ಆಪ್ತನಾಗಿದ್ದ. ತಾನು ಭಾರತದಲ್ಲಿ ಕಂಡು ಭಾರತದಲ್ಲಿ ಕಂಡು ಕೇಳಿದ ಸಂಗತಿಗಳನ್ನು ಇಂಡಿಕಾ ಎಂಬ ಗ್ರಂಥದಲ್ಲಿ ಬರೆದ. ಈ ಗ್ರಂಥದ ಮೂಲ ಪ್ರತಿ ಈಗ ಲಭ್ಯವಿಲ್ಲದಿದ್ದರೂ ಅನಂತರದ ಇತಿಹಾಸಕಾರರಾದ ಅರಿಯನ್ ಮತ್ತು ಡಿಯೊಡರಸ್ ಮೊದಲದವರು ಈ ಕೃತಿಯ ಕೆಲವು ಭಾಗಗಳನ್ನು ಉಲ್ಲೇಖಿಸಿದ್ದಾರೆ. ಈ ಕೃತಿ ಮೌರ್ಯರ ಕಾಲದ ಜನಜೀವನ ಮತ್ತು ರಾಜಧರ್ಮ ತಿಳಿಯಲು ಮುಖ್ಯ ಆಕರ.

ಮೆಗಾಸ್ತನೀಸ್ ನೀಡಿರುವ ವಿವರಗಳಲ್ಲಿ ಕೆಲವು ಸಂಗತಿಗಳು ಹೀಗಿವೆ: ಯುದ್ಧಕಾಲದಲ್ಲಿ ಸಾಗುವಳಿಯಾದ ಭೂಮಿಯನ್ನು ಶತ್ರು ಸೈನ್ಯಗಳು ಹಾನಿ ಮಾಡುವುದಿಲ್ಲ. ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಂಕಿಯಿಡುವ ಅಥವಾ ಮರಗಳನ್ನು ಕತ್ತರಿಸಿ ಹಾಕುವ ದುಷ್ಕ್ರತ್ಯಕ್ಕೆ ಶತ್ರುಗಳು ಕೈಹಾಕುವುದಿಲ್ಲ. ಹಿಂದೂಸ್ಥಾನದಲ್ಲಿ ಗಜದಳ ಸೈನ್ಯದ ಪ್ರಮುಖ ಅಂಗ. ಈ ದಳಕ್ಕೆ ಅಲೆಕ್ಸಾಂಡರ್ ಸಹ ಹೆದರಿದ್ದ. ಜನರಲ್ಲಿ ಶಿಸ್ತಿದೆ. ಕಳ್ಳತನ ಬಲು ಕಡಿಮೆ. ನ್ಯಾಯಾಲಯಗಳಿಗೆ ಹೋಗುವವರ ಸಂಖ್ಯೆ ವಿರಳ. ಪರಸ್ಪರ ನಂಬಿಕೆಯ ಮೇಲೆ ವ್ಯವಹಾರ ನಡೆಯುವುದು, ಸ್ತ್ರೀಯರೇ ರಾಜನ ಅಂಗರಕ್ಷರು.

ಮೆಗಾಸ್ತನೀಸ್ ಕೊಟ್ಟಿರುವ ವಿವರಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆ ಒದಗಿಸಿವೆ.

                             (ಡಿ.ಎಸ್.ಜೆ.)