ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಬೂಜ

ವಿಕಿಸೋರ್ಸ್ದಿಂದ

ಕರಬೂಜ : ಜನಪ್ರಿಯವೆನಿಸಿರುವ ಬೇಸಗೆಯ ಹಣ್ಣಿನ ಸಸ್ಯ. ಇದರ ಕಾಯಿಗಳನ್ನು ತರಕಾರಿಯಾಗಿ ಉಪಯೋಗಿಸುವುದೂ ಉಂಟು. ಕರಬೂಜದ ಹಣ್ಣಿನಿಂದ ತಂಪಾದ ಪಾನಕ ಮಾಡುತ್ತಾರೆ. ಇದನ್ನು ಏನನ್ನೂ ಹಾಕದೆ ತಿನ್ನಬಹುದು ಅಥವಾ ಸಕ್ಕರೆಯೊಡನೆ ತಿನ್ನಬಹುದು. ಹಳದಿ ಬಣ್ಣದ ಕರಬೂಜ ತಳಿಗಳಲ್ಲಿ ಸಿ ಜೀವಸತ್ವ ಇತರ ತಳಿಗಳಿಗಿಂತ ಅಧಿಕವಾಗಿದೆ. ಇದರ ಬೀಜಗಳನ್ನೂ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಕರಬೂಜ ಕೇವಲ ಹಿತಕರ ಆಹಾರ ಮಾತ್ರವಲ್ಲದೆ, ಮನುಷ್ಯನಿಗೆ ಆರೋಗ್ಯ ಕೊಡುವ ಪುಷ್ಟಿಕರವಾದ ಆಹಾರವೂ ಹೌದು. ಇದರ ಹಣ್ಣಿನಲ್ಲಿರುವ ಆಹಾರಾಂಶಗಳು, ಈ ರೀತಿ ಇವೆ: ತೇವಾಂಶ ಶೇ. 92.76 ಪ್ರೋಟೀನುಗಳು ಶೇ. 0.6 ಕೊಬ್ಬು ಶೇ. 0.2 ಬೂದಿ ಶೇ. 0.6 ಕ್ಯಾಲ್ಸಿಯಂ ಶೇ. 0.016 ನಾರು ಶೇ. 0.5 ಸಕ್ಕರೆ ಶೇ. 0.5 ಕಬ್ಬಿಣ ಶೇ. 0.0004 ಹಾಗೂ ಪ್ರತಿ 100 ಗ್ರಾಮಿಗೆ ಎ ಜೀವಾತು 2400 ಐ. ಯು; ಬಿ ಜೀವಾತು 130 ಗ್ರಾಂ; ಸಿ ಜೀವಾತು 25 ಮಿ. ಗ್ರಾಂ. ಗಳಷ್ಟಿವೆ.

ಕರಬೂಜ ಸಸ್ಯದ ಉಗಮಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಾಮಾನ್ಯವಾಗಿ ಇದು ಇರನ್ ಕಣಿವೆ ಮತ್ತು ಭಾರತದ ವಾಯವ್ಯ ದೇಶಗಳ ಮೂಲವಾಸಿ ಎಂಬುದನ್ನು ಬಹಳಮಂದಿ ಸಂಶೋಧಕರು ಒಪ್ಪುತ್ತಾರೆ.

ಕರಬೂಜ ಕುಕುರ್ಬಿಟೇಸೀ ಕುಟುಂಬದ ಕುಕುಮಿಸ್ ಜಾತಿಯ ಮೆಲೊ ಪ್ರಭೇದಕ್ಕೆ ಸೇರಿದೆ. ಇದರ ಕಾಂಡ ಬಲಹೀನವಾಗಿದ್ದು ನೇರವಾಗಿ ಮೇಲಕ್ಕೆ ಬೆಳೆಯಲಾರದು. ಇದು ನೆಲದ ಮೇಲೆಯೇ ಹರಡಿ ಬೆಳೆಯುವ ಹಂಬು ಸಸ್ಯ. ಹಲವಾರು ಏಣುಗಳಿಂದ ಕೂಡಿದ ಇದರ ಮೇಲೆಲ್ಲ ಮೃದುವಾದ ಹಾಗೂ ನವುರಾದ ಕೂದಲುಗಳಿವೆ. ಎಲೆ ವೃತ್ತಾಕಾರ. ಕರನೆಯಾಕಾರ ಅಥವಾ ಮೂತ್ರ ಪಿಂಡಾಕಾರ; ಎಲೆಯಲಗು ನಿರ್ದಿಷ್ಟವಾದ ಭಾಗಗಳಾಗಿ ಸೀಳಿಲ್ಲ. ಅಂಚು ಗರಗಸದಂತೆ; ಎಲೆಯಮೇಲೆ ಕೂದಲುಗಳಿವೆ. ಎಲೆಯ ಕಂಕುಳಲ್ಲಿ ಒಂಟಿಹೂಗಳು ಅರಳುತ್ತವೆ. ಅವು ಭಿನ್ನಲಿಂಗಿಗಳು. ಹೂದಳಗಳು 5. ಪರಸ್ಪರ ಕೂಡಿಕೊಂಡಿವೆ. ಹೂದಳ ಸಮೂಹ ಗಂಟೆಯಾಕಾರದ್ದು, ಅದರ ಬಣ್ಣ ಹಳದಿ. ಗಂಡು ಹೂವಿನಲ್ಲಿ 5 ಕೇಸರಗಳಿವೆ. ಹೆಣ್ಣು ಹೂವಿನಲ್ಲಿ ನೀಚಸ್ಥಾನದ ಅಂಡಾಶಯವಿದೆ. ಮೂರು ಕಾರ್ಪೆಲುಗಳಿರುವ ಇದರಲ್ಲಿ ಹಲವಾರು ಅಂಡಕಗಳಿವೆ. ಫಲ ಗುಂಡು ಅಥವಾ ಆಯತಾಕಾರವೂ ರಸಭರಿತವೂ ಆಗಿದೆ. ಇದನ್ನು ಪೆಪು ಎನ್ನತ್ತಾರೆ. ಇದಕ್ಕೆ ಒರಟಾದ ಸಿಪ್ಪೆಯೂ ಮೆದುವಾದ ತಿರುಳೂ ಇವೆ.

ಬೇಸಾಯ: ಕರಬೂಜದ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ವಾತಾವರಣ ಅಗತ್ಯ. ಸು. 300 ಸೆಂ. ಉಷ್ಣತೆಯ ಉತ್ತಮ ತಂಪಾದ ಹವಾಗುಣದಲ್ಲಿ ಹಲವಾರು ರೋಗಗಳಿಗೆ ಬಲಿಯಾಗುತ್ತದೆ. ಕಾಯಿಗಳು ಹಣ್ಣಾಗುವ ಸಮಯದಲ್ಲಿ ಮಣ್ಣಿನಲ್ಲಿ ಅಧಿಕ ತೇವಾಂಶವಿದ್ದರೆ ಕೀಳುದರ್ಜೆಯ ಫಲವನ್ನು ಕೊಡುತ್ತದೆ. ಈ ಬೆಳೆ ಯಾವ ಹಂತದಲ್ಲಿಯೂ ಹಿಮವನ್ನು ಸಹಿಸುವುದಿಲ್ಲ. ಸಾಮಾನ್ಯವಾಗಿ ಕರಬೂಜವನ್ನು ನದಿ, ಕೆರೆ ಮುಂತಾದವುಗಳ ದಡದಲ್ಲಿರುವ ಮರಳು ಅಥವಾ ಮರಳು ಗೋಡು ಮಣ್ಣಿನಲ್ಲಿ ಬೆಳೆಸುತ್ತಾರೆ. ಆದರೆ ಇದನ್ನು ರೇವೆಗೋಡು, ಜೇಡಿ ಗೋಡು ಮಣ್ಣುಗಳಲ್ಲಿ ಸಹ ಬೆಳೆಸಬಹುದು. ಆದರೆ ಜಿಗಟಾಗಿರುವ ಜೇಡಿ ಮಣ್ಣಿನಲ್ಲಿ ಇದರ ಬೇಸಾಯ ಯಶಸ್ವಿಯಾಗುವುದಿಲ್ಲ. ಇದರ ಬೇಸಾಯಕ್ಕೆ ಠಿh 6.0 ರಿಂದ 6.7ರವರೆಗಿನ ಕ್ಷಾರೀಯ ಮಣ್ಣು ಯೋಗ್ಯವಾದದ್ದು.

ಕರಬೂಜದ ಅನೇಕ ತಳಿಗಳು ಬೇಸಾಯದಲ್ಲಿವೆ. ಸ್ಥಾನೀಯ ತಳಿಗಳು ಇಳುವರಿ ದೃಷ್ಟಿಯಿಂದ ಉತ್ತಮವಲ್ಲ. ಹಣ್ಣಿನ ಗಾತ್ರ, ಆಕಾರ ಮತ್ತು ಬಣ್ಣದ ಮೇಲೆ ತಳಿಗಳ ವಿಂಗಡಣೆ ಮಾಡಿದೆ. ಪಿ. ಎಂ. ಆರ್., 45. ಜುಕುಂಬ ಕ್ಯಾಂಪೊ ಮುಂತಾದ ಹೆಚ್ಚು ಇಳುವರಿ ಕೊಡುವ ವಿದೇಶಿ ತಳಿಗಳು ಹೆಚ್ಚಿನ ಜನಪ್ರಿಯತೆಗಳಿಸಿವೆ. ಆಘ್ಘಾನಿಸ್ತಾನದ ಸರ್ದ ಮೆಲನ್ ಎಂಬ ತಳಿ ಸಿಹಿಯಾದ ದಪ್ಪ ತಿರುಳು ಮತ್ತು ಮಧುರ ವಾಸನೆಯಿಂದ ಕೂಡಿದ್ದೂ ಹೆಚ್ಚು ಇಳುವರಿ ಕೊಡುವುದರಿಂದ ಅದರ ಬೇಸಾಯ ಅಧಿಕ ಪ್ರಮಾಣದಲ್ಲಿ ನಡೆದಿದೆ. ಲಕ್ನೊ ಸಫೇದ್, ಅಲಹಾಬಾದ್, ಹರಿದ್ವಾರ್, ಫೈಜಾಬಾದ್, ಕನೂಜ್ ಮುಂತಾದವುಗಳು ಭಾರತ ದೇಶದ ತಳಿಗಳು. ಕರ್ನಾಟಕ ರಾಜ್ಯದಲ್ಲಿ ಕಾವೇರಿ, ಗಂಜಾಂ ಜಾಮ್ ಮತ್ತು ಬನಾ ಸ್ಪತ್ರಿ ಎಂಬ ತಳಿಗಳು ಬೇಸಾಯದಲ್ಲಿವೆ.

ಬಿತ್ತನೆ ಪ್ರಮಾಣ: ಎಕರೆಗೆ ಸು. 750 ಗ್ರಾಂಗಳಿಂದ 1 ಕಿಗ್ರಾಂ ಬೀಜ ಬೇಕಾಗುತ್ತದೆ. ಈ ಪ್ರಮಾಣ ಬೀಜದ ಗಾತ್ರ ಮತ್ತು ತೂಕವನ್ನು ಅನುಸರಿಸಿ ಇದೆ.

ಕರಬೂಜ ಅಪ್ಪಟ ಬೇಸಗೆ ಬೆಳೆ. ಸಾಮಾನ್ಯವಾಗಿ ನವಂಬರ್-ಫೆಬ್ರವರಿ ವರೆಗೆ ಇದರ ಬೀಜವನ್ನು ಬಿತ್ತುವರು. ಉತ್ತರ ಭಾರತದಲ್ಲಿ ಹೆಚ್ಚು ಹಿಮ ಬೀಳುವುದರಿಂದ ಬಿತ್ತನೆಯ ಅವಧಿ ಫೆಬ್ರವರಿ ಮಾರ್ಚ್ ತಿಂಗಳುಗಳಿಗೆ ಸೀಮಿತವಾಗಿದೆ. ಮಣ್ಣನ್ನು 6' ಅಂತರದಲ್ಲಿ 2'-3' ಅಗಲ ಮತ್ತು ಅಷ್ಟೇ ಎತ್ತರದ ದಿಂಡುಗಳನ್ನು ಮಾಡಿ ಅದರ ಮೇಲೆ 1' ಅಂತರದ ಸಾಲುಗಳಲ್ಲಿ ಬೀಜವನ್ನು ಬಿತ್ತುತ್ತಾರೆ. ಕೆರೆ ಮತ್ತು ನದಿಗಳ ಅಂಗಳದಲ್ಲಿ ಇದರ ಬೇಸಾಯ ಮಾಡುವಾಗ ಎಕರೆಗೆ 30-35 ಗಾಡಿ ಕೊಟ್ಟಿಗೆ ಗೊಬ್ಬರವನ್ನು ತಳಗೊಬ್ಬರವಾಗಿ ಹಾಕಿ, ಅನಂತರ ಮಧ್ಯವರ್ತಿ ಬೇಸಾಯ ಮಾಡುವಾಗ ಎಕರೆಗೆ 25 ಕಿಗ್ರಾಂ ಸಾರಜನಕ, 10 ಕಿಗ್ರಾಂ ರಂಜಕ, 45 ಕಿಗ್ರಾಂ ಪೊಟ್ಯಾಷ್ ಮತ್ತು 30 ಕಿಗ್ರಾಂ ಸುಣ್ಣ ಹಾಕಬೇಕು. ತೋಟಗಳಲ್ಲಿ ಬೇಸಾಯ ಮಾಡುವಾಗ 6' ಅಂತರದ ಸಾಲುಗಳಲ್ಲಿ 4' ಅಂತರದಲ್ಲಿ 2' ಅಗಲದ ಗುಣಿಗಳನ್ನು ತೋಡಿ, ಪ್ರತಿ ಗುಣಿಯಲ್ಲಿ 4-5 ಬೀಜಗಳನ್ನು ಬಿತ್ತಬೇಕು. ಕರಬೂಜದ ತೋಟದಲ್ಲಿ ಕಾಲಕಾಲಕ್ಕೆ ಕಳೆ ತೆಗೆಯಬೇಕು. ಸಸಿಗಳ ಹಂಬು ಹರಿಯಲು ಪ್ರಾರಂಭಿಸಿದಾಗ ಹೆಚ್ಚು ನೀರು ನಿಲ್ಲುವಂತೆ ವಿಶಾಲವಾಗಿ ಪಾತಿಮಾಡಬೇಕು.

ಬೀಜ ಬಿತ್ತಿದ ಒಂದುವರೆ ತಿಂಗಳ ಅನಂತರ ಕರಬೂಜದಹಂಬು ಹೂ ಬಿಡುತ್ತದೆ. ಅನಂತರ ಒಂದು ತಿಂಗಳಿಗೆ ಹಣ್ಣು ಕುಯ್ಲಿಗೆ ಬರುತ್ತದೆ. ಕಾಯಿ ಬಲಿತು ಹಣ್ಣಾಗುವ ಕಾಲ ಸಮೀಪಿಸಿದಾಗ ಕಾಯಿಗಳು ಮೊದಲಿನ ಬಣ್ಣವನ್ನು ಬದಲಾಯಿಸಿ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತವೆ. ಪಕ್ವವಾದಾಗ ತೊಟ್ಟಿನ ಸುತ್ತಲೂ ತಗ್ಗು ಕಾಣಿಸಿಕೊಳ್ಳುತ್ತದೆ. ಆಗ ಹರಿತವಾದ ಚಾಕುವಿನಿಂದ ತೊಟ್ಟುಗಳನ್ನು ಕೊಯ್ದು ಹಣ್ಣುಗಳನ್ನು ಹಂಬಿನಿಂದ ಬೇರ್ಪಡಿಸಬೇಕು.

ಇಳುವರಿ: ಕರಬೂಜದ ಇಳುವರಿಯ ಪ್ರಮಾಣ ಅವುಗಳ ತಳಿ ಮತ್ತು ಬೇಸಾಯ ಕ್ರಮವನ್ನು ಅನುಸರಿಸಿ ಇದೆ. ಆದರೆ ಸರಾಸರಿ ಇಳುವರಿ 8,000-12,000 ಕಿ.ಗ್ರಾಂ ವರೆಗಿನ ಅಂತರವಿದೆ.

ಕರಬೂಜದ ಕೀಟ ಮತ್ತು ರೋಗಗಳ ಬಗ್ಗೆ (ನೋಡಿ- ಕುಂಬಳ). (ಡಿ.ಎಂ.)