ಪುಟ:Mysore-University-Encyclopaedia-Vol-1-Part-1.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಸ್ಥಶಿಲೆ-ಅಂತಿಮಗತಿ ಶಾಸ್ತ್ರ

ಸಭೆಯಲ್ಲಿ ಪ್ರತಿಸದಸ್ಯರಾಷ್ಟ್ರದಿಂದ ಒಬ್ಬೊಬ್ಬ ಸದಸ್ಯವಿರುವನು.ಐವರು ಸದಸ್ಯರನ್ನುಳ್ಳ ಕಾರ್ಯಕಾರಿ ಸಮಿತಿಯೊಂದು ಸಭೆಯ ಕರ್ತವ್ಯನಿರ್ವಹಣೆಗೆ ಸಹಾಯಕವಾಗಿದೆ.ನ್ಯಾಯವಾದ ಬೆಲೆಯಲ್ಲಿ ಸಕ್ಕರೆಯ ಮಾರಟ ಮತ್ತು ಕೊಳ್ಳಾಟಕ್ಕೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವುದೇ ಈ ಒಪ್ಪಂದದ ಮುಖ್ಯ ಉದ್ದೇಶ.ಪರ್ತಿ ಸದಸ್ಯ ರಫ಼್ತುರಾಷ್ಟ್ರದ ರಫ಼್ತು ದೇಯಾಂಶವನ್ನು ನಿಗದಿ ಮಾಡಲಾಗಿದೆ.ಒಂದು ಪೌಂಡ್ ಸಕ್ಕರೆಗೆ ನ್ಯಾಯಬೆಲೆ ೩.೨೫-೪.೩೩ ಸೆಂಟ್ ಗಳೆಂದು ೧೯೪೫ರ ಒಪ್ಪಂದದ ಪ್ರಕಾರ ತೀರ್ಮಾನಿಸಲಾಯಿತು.ಬೆಲೆ ಮಾರುಕಟ್ಟೆಯಲ್ಲಿ ಪೌಂಡಿಗೆ ೪.೩೩ಸೆಂಟ್ ಗಿಂತ ಹೆಚ್ಚದರೆ ಬೇಡಿಕೆ ಹೆಚ್ಚಿದೆ ಎಂಬ ಸೂಚನೆ ದೊರಕುವುದರಿಂದ,ಸದಸ್ಯರಾಷ್ಟ್ರಗಳ ರಫ಼್ತು ಪಾಲನ್ನು ಹೆಚ್ಚಿಸಿ ನೀಡಿಕೆಯನ್ನು ಹೆಚ್ಚಿಸುವುದರ ಮೂಲಕ ಬೆಲೆ ಮೇಲ್ಮಿತಿಯನ್ನು ಮೀರದಂತೆ ತಡೆಯಬೇಕೆಂದೂ ಬೆಲೆ ಮಾರುಕಟ್ಟೆಯಲ್ಲಿ ೩.೨೫ಸೆಂಟ್ ಗಿಂತ ಕಡಿಮೆ ಯಾದಾಗ ನೀಡಿಕೆ ಹೆಚ್ಚಿದೆ ಎಂಬ ಸೂಚನೆ ದೊರಕುವುದರಿಂದ ರಫ಼್ತು ಪಾಲನ್ನು ಕಡಿಮೆ ಮಾಡಿ ನೀಡಿಕೆಯನ್ನು ತಗ್ಗಿಸಿ ಬೆಲೆ ಕೆಳಮಿತಿಗಿಂತ ಕಡಿಮೆಯಾಗದಂತೆ ತಡೆಯಬೇಕೆಂದೂ ತೀರ್ಮಾನಿಸಿ ಬೆಲೆಯ ಸ್ತಿಮಿತತೆಯನ್ನು ಕಾಪಾಡಲು ಈ ಕ್ರಮವನ್ನು ಅನುಸರಿಸಲಾಯಿತು.

ಅಂತಾರಾಷ್ಟ್ರೀಯ ತವರ ಒಪ್ಪಂದ:ಎರಡೆನೆಯ ಮಹಾಯುದ್ಧಪೂರ್ವದಲ್ಲಿಯೂ ಒಪ್ಪಂದಗಳ ಮೂಲಕ ತವರದ ಬೆಲೆಯ ಸ್ತಿಮಿತತ್ತೆಯನ್ನು ಕಾಪಡಲು ಪರಯತ್ನಗಳು ನಡೆದುವು.೧೯೨೧ರಲ್ಲಿ ಮಲಯ,ನೆದರ್ಲೆಂಡ್ಸ್ ಮತ್ತು ಈಸ್ಟ್ ಇಂಡೀಸ್ಗಳು ಸೇರಿ ಬಾಂಡೂಂಗ್ ಪೂಲ್ ಎಂಬ ವ್ಯವಸ್ಥೆಯನ್ನು ಮಾಡಿದ್ದವು.೧೯೨೯ರಲ್ಲಿ ತವರ ತಯಾರಿಕೆಗಾರರ ಸಂಘವೊಂದನ್ನು ಬ್ರಿಟನ್,ನೆದರ್ಲೆಂಡ್ಸ್ ಮತ್ತು ಬೊಲಿವಿಯಗಳು ಸ್ಥಾಪಿಸಿದುವು.೧೯೩೧ರಲ್ಲಿ ಒಂದು ಅಂತಾರಾಷ್ಟ್ರೀಯ ತವರ ಒಪ್ಪಂದವೇ ಜಾರಿಗೆ ಬಂದಿತು.೧೯೩೭ರಲ್ಲಿ ಈ ಒಪ್ಪಂದಕ್ಕೆ ಪ್ರತಿಯಾಗಿ ಹೊಸ ಒಪ್ಪಂದವೊಂದು ಜಾರಿಗೆ ಬಂದಿತು.ಎರಡೆನೆಯ ಮಹಾಯುದ್ಧದ ಆನಂತರ ತವರದ ಬೇಡಿಕೆ-ನೀಡಿಕೆಯ ಮೇಲೆ ಹತೋಟಿಯನ್ನಿಟ್ಟು ಬೆಲೆಯನ್ನು ಸ್ತಿಮಿತದಲ್ಲಿಡಲು ಹೆಚ್ಚು ವ್ಯಾಪಕವಾದ ಪ್ರಯತ್ನ ನಡೆಯಿತು.ವಿಶ್ವಸಂಸ್ಥ್ಯೆಯ ಆಶ್ರಯದಲ್ಲಿ ನಡೆದ ಸಮ್ಮೇಳನಗಳ ಫಲವಾಗಿ ೧೯೫೩ರಲ್ಲಿ ಅಂತಾರಾಷ್ಟ್ರೀಯ ತವರ ಒಪ್ಪಂದ ಜಾರಿಗೆ ಬಂದಿತು.ಇದರ ಆಡಳಿತ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ತವರ ಸಭೆಯೊಂದು ಲಂಡನ್ ನಲ್ಲಿ ಸ್ಥಾಪಿತವಾಯಿತು.

ಯುದ್ಧಪೂರ್ವ ವ್ಯವಸ್ಥೆ ಮತ್ತು ಯುದ್ಧೋತ್ತರ ವ್ಯವಸ್ಥೆಗಳೆರಡರಲ್ಲೂ ಬೆಲೆಗಳ ಸ್ತಿಮಿತತೆಯನ್ನು ಕಾಪಡಲು ಅನುಸರಿಸದ ಮುಖ್ಯಕ್ರಮಗಳು ಮೂರು ವಿಧವಾದುವು.೧.ಬಫರ್ ದಾಸ್ತಾನು;೨.ರಫ಼್ತುಪಾಲು ನಿಗದಿ ಮಾಡುವುದು;೩.ಬೆಲೆಯ ಮೇಲ್ಮಿತಿ ಮತ್ತು ಕೆಳಮಿತಿಯನ್ನು ನಿಗದಿ ಮಾಡುವುದು.ತವರದ ನೀಡಿಕೆ ಹೆಚ್ಚಿದಾಗ ಹೆಚ್ಚಳವನ್ನು ದಾಸ್ತಾನು ಮಾಡಿಕೊಂಡು ಬೆಲೆ ಇಳಿಯದಂತೆ ಮಾಡುವುದು ಬಫರ್ ದಾಸ್ತಾನುವ್ಯ್ವಸ್ಥೆಯ ಉದ್ದೇಶ.ಪ್ರತಿ ಸದಸ್ಯ ರಾಷ್ಟ್ರದ ರಫ಼್ತು ಕೋಟಾವನ್ನು ನಿಗದಿ ಮಾಡಿ ಅದಕ್ಕೆ ಖಾತರಿಯಾದ ಮಾರುಕಟ್ಟೆ ದೊರಕುವಂತೆ ಮಾಡುವುದೇ ರಫ಼್ತುಪಾಲು ನಿಗದಿವ್ಯವಸ್ಥೆಯ ಉದ್ದೇಶ.ಬೆಲೆಯ ಮೇಲ್ಮಿತಿ ಮತ್ತು ಕೆಳಮಿತಿಯನ್ನು ನಿಗದಿ ಮಾಡುವ ವ್ಯವಸ್ಥೆಯೂ ಬೆಲೆಯ ಸ್ತಿಮಿತತೆಯನ್ನು ಕಾಪಾಡುವುದರಲ್ಲಿ ನೆರವು ನೀಡುತ್ತದೆ.

ಅಂತಾರಾಷ್ಟ್ರೀಯ ಸರಕುಒಪ್ಪಂದಗಳು ಮುಖ್ಯವಾದ ಸರಕುಗಳು ಉತ್ಪನ್ನ,ಬೇಡಿಕೆ,ನೀಡಿಕೆ,ಬೆಲೆ ಮುಂತಾದುವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವ ಆದರ್ಶ ಧ್ಯೇಯಗಳನ್ನಿಟ್ಟುಕೊಂಡು ನಿಯೋಜಿಸಲ್ಪಟ್ಟಿವೆ.ಆದರೆ ಕೆಲವು ಸಮಸ್ಯೆಗಳಿಂದಾಗಿ ಇವು ಹೆಚ್ಚು ಫಲಪ್ರದವಾಗಿಲ್ಲ. ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಸಾರ್ಥಕವಾಗಬೇಕಾದರೆ ಅವು ಹೆಚ್ಚು ವ್ಯಾಪಕವಾದ ಸದಸ್ಯತ್ವವನ್ನು ಹೊಂದಿರಬೇಕು.ಕೆಲವೇ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿ ಉಳಿದವು ಒಪ್ಪಂದದ ವ್ಯಾಪ್ತಿಗೆ ಸೇರದಿದ್ದರೆ,ಇಂಥ ವ್ಯವಸ್ಥೆ ಪೂರ್ಣವಾಗಿ ಯಶಸ್ವಿಯಾಗುವುದಿಲ್ಲ.ಅಷ್ಟೇ ಅಲ್ಲದೆ ಇದುವರೆಗೆ ರೂಪಿತವಾಗಿರುವ ಒಪ್ಪಂದಗಳು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಸರಕಿಗೆ ಸಂಬಂಧಿಸಿದಂತಿದ್ದು ಸಮಗ್ರವಾದ ಸರಕು ಒಪ್ಪಂದ ವ್ಯವಸ್ಥೆಯ ಪ್ರಯತ್ನ ಇನ್ನೂ ನಡೆದಿಲ್ಲ.ಇಂಥ ಕೆಲವು ಕುಂದುಕೊರತೆಗಳಿಂದಾಗಿ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಅಷ್ಟಾಗಿ ಯಶಸ್ವಿಯಾಗಿಲ್ಲವೆಂಬ ಅಂಶ ಕಂಡುಬರುತ್ತಿದೆ. (ಬಿ.ಎಸ್.ಎಸ್.ಎ.)

ಅಂತಿಚಕ್:ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿರುವ ಬೌದ್ಧವಿಹಾರ.೯ನೆಯ ಶತಮಾನದ ಆರಂಭದಲ್ಲಿ ಪಾಲ ದೊರೆ ಧರ್ಮಪಾಲಿನಿಂದ ನಿರ್ಮಿಸಲ್ಪಟ್ಟಿತು.೧೩ನೆಯ ಶತಮಾನದಲ್ಲಿ ನಾಶವಾಯಿತು.ಗಂಗಾ ನದಿ ದಡದ ಮೇಲೆ ಈ ವಿಹಾರವಿದೆಯೆಂದೂ ಇದು ವಿಶಾಲವಾದ ಪೌಳಿ ಗೋಡೆಗಳಿಂದ ಆವೃತವಾಗಿದೆಯೆಂದೂ ಇದರ ಮಧ್ಯಭಾಗದಲ್ಲಿ ಒಂದು ದೊಡ್ಡ ಬೌದ್ಧ ಅಧ್ಯಯನ ಸಭಾಂಗಣವಿದೆಯೆಂದೂ ಟಿಬೆಟ್ ಆಕರಗಳಲ್ಲಿ ಉಲ್ಲೇಖವಿದೆ.ಇಲ್ಲಿಗೆ ಭಾರತದ ವಿವಿಧ ಭಾಗಗಳಿಂದ ವಿದ್ವಾಂಸರು ಅಧ್ಯಯನಕ್ಕೆ ಬರುತ್ತಿದ್ದರೆಂದು ತಿಳಿದುಬರುತ್ತದೆ.

ಈ ನೆಲೆಗೆ ೧೮೧೧ರಲ್ಲಿ ಮೊದಲ ಬಾರಿಗೆ ಫ್ರಾನ್ಸಿಸ್ ಬುಕನನ್ ಭೇಟಿನೀಡಿದ್ದ.ವಿಕ್ರಮಶೀಲ ಇಲ್ಲಿರುವ ಹತ್ತಿರದ ಪತರ್ ಘಟ್ಟಾಕ್ಕೆ ಹೊಂದಿಕೊಂಡಿತ್ತು ಇತ್ತೀಚೆಗೆ ಪಟಣ ವಿಶ್ವವಿದ್ಯಾಲಯದ ಬಿ.ಪಿ.ಸಿನ್ಹ ಅಂತಿಚಕ್ ನಲ್ಲಿ ೧೯೬೦-೬೯ರವರೆಗೆ ಉತ್ಖನನ ನಡೆಸಿ ಇದರ ಸಂಬಂಧವನ್ನು ವಿಕ್ರಮಶೀಲದೊಂದಿಗೆ ಗುರುತಿಸಿದ್ದಾರೆ.ಇಲ್ಲಿರುವ ಚೈತ್ಯತ್ರಿಕೋಟ ವಿನ್ಯಾಸದಲ್ಲಿದೆ.೯-೧೩ನೆಯ ಶತಮಾನದ ಅವಧಿಯಲ್ಲಿ ೩ ಹಂತಗಳಲ್ಲಿ ಈ ಚೈತ್ಯದ ನಿರ್ಮಾಣವಾಯಿತು.ಭೂಮಿಯ ತಳಮಟ್ಟದಿಂದ ಅಧಿಷ್ಠಾನ ೧೫ಮೀ ಎತ್ತರವಿದ್ದು,ಅದರ ಸುತ್ತಳತೆ ೧೦೦ಮೀ ಇದೆ.ಈ ಚೈತ್ಯ ಇಟ್ಟಿಗೆಗಳಿಂದ ನಿರ್ಮಾಣಗೊಂಡಿದೆ.ಇದರಲ್ಲಿ ವಿಶಾಲವಾದ ಹಾಗೂ ಸಣ್ಣ ಕೋಣೆಗಳಿವೆ.ಚೈತ್ಯದ ನಡುವೆ ದಾರಿಗಳಿದ್ದು ಇವುಗಳ ನಡುವೆ ಓಡಾಡಬಹುದಾಗಿದೆ.ಮೇಲಿನ ದಾರಿ ಕೆಳಗಿನ ದಾರಿಗಿಂತ ೨ಮೀ ಎತ್ತರದಲ್ಲಿದೆ.ಬಾಂಗ್ಲಾದೇಶದ ಪಹರಪುರ್ ನಲ್ಲಿರುವ ಸೋಮಪುರ ಮಹಾ ವಿಹಾರದಂತಿರುವ ಈ ವಿಹಾರದ ಗೋಡೆಗಳು ಸುಂದರವಾದ ಸುಡಾವೆ ಮಣ್ಣಿನ ಫಲಕಗಳಿಂದ ಶೋಭಿತವಾಗಿವೆ.೧೯೭೨ರಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ ೩೩೦ ಚ.ಮೀ ನ ಬೌದ್ಧ ವಿಹಾರ ಲಭ್ಯವಾಗಿದ್ದು,ಇದು ೨೦೮ ಸಣ್ಣ ಕೋಣೆಗಳನ್ನು ಹೊಂದಿರುವುದು ಕಂಡುಬಂದಿದೆ.ವಿಹಾರದ ಉತ್ತರ ದ್ವಾರದಲ್ಲಿ ಚೌಕಾಕಾರದ ಮತ್ತು ವೃತ್ತಾಕಾರದ ರಚನೆಗಳು ಒಳ ಹಾಗೂ ಹೊರ ಗೋಡೆಗಳ ಮೇಲೆ ರಚಿತಗೊಂಡಿವೆ.ಈ ಕೋಣೆಗಳ ನಡುವೆ ಸಾಮಾನ್ಯವಾದ ಅಂಗಳವಿದೆ.ಮುಖ್ಯದ್ವಾರದ ಚಾವಣಿಗೆ ಆಧಾರವಾಗಿ ೭.೮ಮೀ ಎತ್ತರದ ಎಕಶಿಲಾ ಸ್ತಂಭಗಳನ್ನು ನಿಲ್ಲಿಸಲಾಗಿದೆ.ದಕ್ಷಿಣ ವಿಹಾರದ ದ್ವಾರವನ್ನೂ ಶೋಧಿಸಲಾಗಿದೆ.ಅಲ್ಲದೆ ಈಶಾನ್ಯದ ಮೂಲೆಯಲ್ಲಿ ಒಂದು ದೊಡ್ಡ ಚರಂಡಿಯೂ ತಳಪಾಯದಲ್ಲಿ ಕೆಲವು ಕೋಣೆಗಳೂ ಕಂಡುಬಂದಿದೆ.

ವಿಕ್ರಮಶೀಲದಲ್ಲಿ ದೊರೆತಿರುವ ಅವಶೇಷಗಳು ಬೌದ್ಧ ಮತ್ತು ವೈಧಿಕಧರ್ಮದ ದೇವತೆಗಳು,ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಒಳಗೊಂಡಿವೆ.ಬುದ್ಧ.ಮೈತ್ರೇಯ,ವಜ್ರಪಾಣಿ ಅವಲೋಕಿತೇಶ್ವರ ಮತ್ತು ಮಂಜುಶ್ರೀ ಮೊದಲಾದ ಹಿತ್ತಾಳೆಯ ವಿಗ್ರಹಗಳೂ ದೊರೆತಿವೆ.ಜೊತೆಗೆ ಕಲ್ಲು,ಕಬ್ಬಿಣ,ತಾಮ್ರ,ಬೆಳ್ಳಿ,ಹಿತ್ತಾಳೆಯ ವಸ್ತುಗಳೂ ಕೆಲವು ಬೆಳ್ಳಿ ಮತ್ತು ತಾಮ್ರದ ನಾಣ್ಯಗಳೂ ಸಿಕ್ಕಿವೆ.ಕೆಂಪು ಹಾಗೂ ಬೂದುಬಣ್ಣದ ಮಣ್ಪಾತ್ರೆಗಳೂ ಇಲ್ಲಿವೆ.(ಎನಾಆರ್.)

ಅಂತಿಮಗತಿ ಶಾಸ್ತ್ರ:ಮಾನವನ ಸಾವಿನೊಂದಿಗೆ ಅವನ ಅಸ್ತಿತ್ವ ಪೂರ್ಣವಾಗಿ ಅಳಿಸಿ ಹೋಗುತ್ತದೆಂದು ಮತಧರ್ಮಗಳಾಗಲಿ,ಅನೇಕ ದಾರ್ಶನಿಕರಾಗಲಿ ನಂಬುವುದಿಲ.ಸಾವಿನಿಂದ ಭೌತಿಕ ಶರೀರ ಅಳಿಯುವುದು ನಿಜ;ಆದರೆ ಜೀವ ಸಾವಿನಿಂದಾಚೆಗೂ ಉಳಿಯುತ್ತದೆಂಬುದು ಎಲ್ಲ ಧರ್ಮಗಳ ನಂಬಿಕೆಯಾಗಿದೆ.ಸಾವಿನಿಂದಾಚೆಗೆ ಜೀವಿಯ ಸ್ಥಿತಿ ಏನೆಂಬುದರ ವಿಚಾರದಲ್ಲಿ ನಡೆದಿರುವ ಚಿಂತನೆಯನ್ನು ಅಂತಿಮಗತಿ ಶಾಸ್ತ್ರದ ವಸ್ತುವೆಂದು ಕರೆಯಲಾಗಿದೆ.

ಅಂತಿಮಗತಿಶಾಸ್ತ್ರಕ್ಕೆ ಆಧಾರರೂಪವಾದ ಅಂಶವೆಂದರೆ ಆತ್ಮ ಅಥವಾ ಚೀತನದ ಇರುವಿಕೆಯ ನಂಬಿಕೆ.ಚಾರ್ವಾಕರು ಇಲ್ಲವೆ ಆಧುನಿಕ ಲೌಕಿಕವಾದಿಗಳು ಆತ್ಮದ ಇರವನ್ನು ಒಪ್ಪುವುದಿಲ್ಲ.ಅವರ ಪ್ರಕಾರ ಚೇತನವೆಂಬುದು ಭೌತಿಕ ತತ್ತ್ವಗಳ ಸಂಯೋಗದಿಂದ ಮತ್ತು ರಾಸಾಯನಿಕ ಅಂಶಗಳಿಂದ ಆದ ಒಂದು ಗುಣವಿಶೇಷ ಮಾತ್ರ.ಅವುಗಳಲ್ಲುಂಟಾಗುವ ವಿಷಮತೆಯಿಂದ ಈ ಚೇತನ ಇಲ್ಲದಾಗುತ್ತದೆ.ಅಂದಮೇಲೆ ಹುಟ್ಟು ಸಾವುಗಳೆಂಬುವು ಜಡತತ್ತ್ವವಾದ ಭೌತಿಕ ವಸ್ತುಗಳ ಅವಸ್ಥಾ ವಿಶೇಷವೇ ಹೊರತು ಮತ್ತೇನಲ್ಲ ಎಂದು ಅವರು ನಂಬುತ್ತಾರೆ.ಆದ್ದರಿಂದ ಅಂತಿಮಗತಿ ಶಾಸ್ತ್ರಕ್ಕೆ ಅವರ ಕೊಡುಗೆ ಬಹಳ ಕಡಿಮೆ.

ಆತ್ಮವನ್ನು ನಂಬುವ ಮಿಕ್ಕೆಲ್ಲ ಧರ್ಮಗಳು ಮತ್ತು ದರ್ಶನಗಳು ಆತ್ಮ ಅವಿನಾಶಿಯೆಂದೂ ಭೌತಿಕವಸ್ತುವಿಗಿಂತ ಭಿನ್ನವಾದದ್ದೆಂದೂ ಒಪ್ಪುತ್ತಾರೆ.ಅಂದಮೇಲೆ ಶರೀರದ ನಾಶದೊಂದಿಗೆ ಆತ್ಮನಾಶವಾಗುವುದಿಲ್ಲ.ಆತ್ಮ ಶರೀರದಿಂದ ಬೇರ್ಪಟ್ಟ ಸ್ಥಿತಿಯನ್ನೇ ಮರಣ ಎಂದು ಕರೆಯುತ್ತಾರೆ.ಹಾಗಾದರೆ ಆತ್ಮದ ಮುಂದಿನ ಗತಿ ಏನು?ಅದರ ಮುಂದಿನ ಗತಿಯನ್ನು ನಿರ್ಣಯಿಸುವ ನಿಯಮವಾದರೂ ಏನು?

ಅಂತಿಮಗತಿ ಶಾಸ್ತ್ರದಲ್ಲಿ ಮತ್ತೊಂದು ತತ್ತ್ವವೆಂದರೆ ವಿಧಿವಾದ ಅಥವಾ ಅದೃಷ್ಟದಲ್ಲಿ ಮಾನವನಿಗಿರುವ ನಂಬಿಕೆ.ವಿಶ್ವದ ವ್ಯಾಪಾರವನ್ನು ಅರಿಯಲು ಬೇಕಾಗುವ ವೈಜ್ಞಾನಿಕ ತತ್ತ್ವದ ಕಾರ್ಯಕಾರಣನಿಯಮವನ್ನು ಇಲ್ಲಿ ಬಳಸಲಾಗಿದೆ.ಕಾರಣವಿಲ್ಲದೆ ಕಾರ್ಯವಿಲ್ಲ. ಕಾರ್ಯ ಫಲವಾದರೆ ಕಾರಣವೇ ಅದರ ಬೀಜ.ಇದಕ್ಕೆ ಹೊಂದಿದಂತೆ ನೀತಿನಡೆತೆಗೆ ಸಂಬಂಧಪಟ್ಟ ಒಂದು ತತ್ತ್ವವಿದೆ.ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಮ್ಮ ಮುಂದಿನ ಬಾಳಿಗೆ ಬುತ್ತಿಯಾಗುತ್ತದೆ.ಪಾಪಪುಣ್ಯಗಳ ಒಟ್ಟು ಸಮೂಹವೇ ಕರ್ಮ.ಇಂದ್ರಿಯಕ್ಕೆ ಗೋಚಾರವಾಗದಂಥ ಒಂದು ನಿಯಮವಾದ್ದರಿಂದ ಇದು ಅದೃಷ್ಟವೂ ಹೌದು.ಇದರಲ್ಲಿ ಸಂಚಿತ,ಆಗಮ,ಪ್ರಾರಬ್ಧ ಮುಂತಾದ ಬಗೆಗಳುಂಟು.ಅಂತೂ ಇವುಗಳಿಂದಲೇ ಆತ್ಮದ ಅಂತಿಮಗತಿ ನಿರ್ಣಯವಾಗಬೇಕು.