ಪುಟ:Mysore-University-Encyclopaedia-Vol-1-Part-1.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪.ಅಂತಾರಾಷ್ಟ್ರೀಯ ಭಾಷೆ:ಅಂತಾರಾಷ್ಟ್ರೀಯ ವ್ಯವಹಾರ ಮಾಧ್ಯಮವಾಗಿ ವಿಶ್ವಭಾಷೆಯೊಂದನ್ನು ರೂಪಿಸುವ ಕೆಲಸ ನಡೆದಿದೆ. ೫.ಅಂತಾರಾರಾಷ್ಟ್ರೀಯ ನ್ಯಾಯ:ಅಂತಾರಷ್ಟ್ರೀಯ ವ್ಯವಹಾರಗಳು ಯಾವ ರೀತಿಯಲ್ಲೂ ತೊಡಕಿಲ್ಲದೆ ಸಾಗಲು,ಒದಗಬಹುದಾದ ಸಮಸ್ಯೆಗಳನ್ನು ಒಡಂಬಡಿಕೆಯ ಮೂಲಕ ಪರಿಹಾರ ಮಾಡಿಕೊಳ್ಳಲು,ಕಾಯಿದೆಗಳಿಗೆ ಮಾನ್ಯತೆ ಕೊಟ್ಟು ಪರಸ್ಪರ ಕೀರ್ತಿಗೌರವಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ತಯಾರಾದ ನ್ಯಾಯಸೂತ್ರಗಳಿವು.೧೯೪೫ರಲ್ಲಿ ವಿಶ್ವಸಂಸ್ಥೆ ಈ ಬಗ್ಗೆ ಒಂದು ನ್ಯಾಯ ಪ್ರಣಾಳಿಕೆಗಳನ್ನು ಹೊರತಂದಿದೆ.ನ್ಯಾಯಪರಿಪಾಲನೆ,ಪ್ರತಿಭಟನೆಗಳಿಗೆ ಸಂಬಂಧಿಸಿದ ವಿಷಯಗಳು ಇಲ್ಲಿ ಅಡಕವಾಗಿವೆ. ೬.ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ(ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್):ಪತ್ರಿಕಾ ಸ್ವಾತಂತ್ರ್ಯ,ಸಂಬಂಧಿಗಳಿಗೆ ಸಂಬಂಧಪಟ್ಟ ಸಂಸ್ಥೆ(ನೋಡಿ-ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ).

ಅಂತಾರಾಷ್ಟ್ರೀಯ ಸಮ್ಮೇಳನಗಳು:ಸಮ್ಮೇಳನಗಳು ಒಂದನೆಯ ಮಹಾಯಯುದ್ಧದಿಂದೀಚೆಗೆ ರೂಢಿಗೆ ಬಂದವು.೧೯೬೪ರಲ್ಲಂತೂ ಇಂಥ ನೂರಾರು ಸಮ್ಮೇಳನಗಳು ಜರುಗಿದುವು.ಇವುಗಳನ್ನು ಸರ್ಕಾರಿ ಸಮ್ಮೇಳನಗಳು(ಉದಾ:ಕೈರೋ ನಗರದಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಮ್ಮೇಳನ)ಮತ್ತು ಖಾಸಗಿ ಸಮ್ಮೇಳನಗಳು(ಉದಾ:ಜರ್ಮನಿಯ ಹೋಹೆನ್ ಬೀಸ್ಟೀನ್ ನಲ್ಲಿ ಜರುಗಿದ ಕ್ರೈಸ್ತವಿದ್ಯಾ ಸಮ್ಮೇಳನ)ಎಂದು ಎರಡು ವಿಭಾಗ ಮಾಡಬಹುದು.ಅಂತರಸರ್ಕಾರೀ ಸಮ್ಮೇಳನಗಳನ್ನು ಮಾತ್ರ ಅಂತಾರಾಷ್ಟ್ರೀಯ ಎಂದು ಹೇಳುವುದು ತಪ್ಪಾಗುತ್ತದೆ.ಮೂರು ಅಥವಾ ಹೆಚ್ಚು ರಾಷ್ಟ್ರಗಳ ಪ್ರತಿನಿಗಳನ್ನೋಳಗೊಂಡು,ಧ್ಯೇಯದಲ್ಲಿ,ಕಾರ್ಯಕ್ರಮಗಳಲ್ಲಿ,ಅಂತಾರಾಷ್ಟ್ರೀಯ ಸಮ್ಮೆಳನಗಳೆಂದು ಕರೆಯುವುದು ಸೂಕ್ತ.

ಆದರೂ ಸಾಮಾನ್ಯ ಜನರ ಭಾವನೆಯಲ್ಲಿ ಮಾತ್ರ,ಅಂತಾರಾಷ್ಟ್ರೀಯ ಸಂಸ್ಥೆಗಳೆಂದರೆ:೧.ರಾಷ್ಟ್ರಗಳಿಗೆ ಸಮಾನವಾಗಿ ಸಂಬಂಧಿಸಿದ ವಿಷಯಗಳನ್ನು,ಸಮಸ್ಯೆಗಳನ್ನು,ಚರ್ಚಿಸಿ ನಿರ್ಧರಿಸಲು ಆ ದೇಶಗಳ ಪ್ರತಿನಿಧಿಗಳನ್ನೋಳಗೊಂಡ ಸಮ್ಮೇಳನಗಳು.೨.ವ್ಯವಸ್ಥಿತ ಅಂತಾರಾಷ್ಟ್ರೀಯ ಸಂಸ್ಥೆಗಳು.ಇಂಥ ಸಮ್ಮೇಳನಗಳನ್ನು ಕರೆಯಲು ಕಾರಣವಾದ ಮುಖ್ಯ ವಿಷಯಗಳೆಂದರೆ,ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು,ನಡೆಯಬಹುದಾದ ಯುದ್ಧಗಳನ್ನು ತಡೆಗಟ್ಟುವುದು.೧೯೧೯ರಲ್ಲಿ ವಿಶ್ವಸಮರವನ್ನು ನಿಲ್ಲಿಸುವುದಕ್ಕೆಂದು ಆಹ್ವಾನಿಸಿದ ಪ್ಯಾರಿಸ್ ಶಾಂತಿ ಸಮ್ಮೇಳನ ಮೊದಲನೆಯದಕ್ಕೆ ಉದಾಹರಣೆ;ಶಾಂತಿಯುತವಾಗಿ ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವುದಕ್ಕಾಗಿ ೧೯೦೭ರಲ್ಲಿ ಕರೆದ ಹೇಗ್ ಸಮ್ಮೇಳನ ಎರಡನೆಯದಕ್ಕೆ ಉದಾಹರಣೆ.ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಕಾರಣವಾದ ಇತರ ವಿಷಯಗಳೆಂದರೆ ವಾಣಿಜ್ಯ,ಆರೋಗ್ಯ,ಕಾರ್ಮಿಕರ ಸ್ಥಿತಿ,ಶಿಕ್ಷಣ ಮತ್ತು ಶಿಶುಪೋಷಣೆ.

ಅಂತಾರಾಷ್ಟ್ರೀಯ ಸಮ್ಮೇಳನಗಳು ಯಶಸ್ವಿಯಾಗಬೇಕಾದರೆ,ಎರಡು ವಿಧದ ಸಿದ್ಧತೆಗಳನ್ನು ನಡೆಸಬೇಕಾಗುತ್ತದೆ:೧.ಆಡಳಿತ ಇಲಾಖೆ ಮತ್ತು ನೌಕರ ವರ್ಗದವರು ಮಾಡುವ ಏರ್ಪಾಡುಗಳು.೨.ಸಮ್ಮೇಳನಕ್ಕೆ ಸಂಬಂಧಿಸಿದ ತಾಂತ್ರಿಕ ರೀತಿಯ ಏರ್ಪಾಡುಗಳು.

೧.ಆಡಳಿತ ವರ್ಗದ ಏರ್ಪಾಡಿನಲ್ಲಿ ವಾಹನಸೌಕರ್ಯ,ವಾಸಸ್ಥಳದ ಅನುಕೂಲತೆಗಳು,ಆಡಲಳಿತ ಶಾಖೆಗೆ,ಸಮ್ಮೇಳನಕ್ಕೆ ಬೇಕಾದ ಸ್ಥಳಾವಕಾಶಗಳನ್ನು ಒದಗಿಸುವುದು ಸಮಾಚಾರ ಸಾಗಣೆ,ಭಾಷಾಂತರೀಕರಣಕ್ಕೆ,ಅರ್ಥವಿವರಣೆಗೆ ಬೇಕಾದ ಸೌಲಭ್ಯಗಳು,ಅವಶ್ಯಸಾಮಾಗ್ರಿಗಳ ಸರಬರಾಜು,ಬ್ಯಾಂಕು ವ್ಯವಸ್ಥೆ ಸಮ್ಮೇಳನದ ಕಾರ್ಯಕಲಾಪಗಳು ಸೌಹಾರ್ದದಿಂದ ಯಶಸ್ವಿಯಾಗಿ ಪೂರೈಸಬೇಕಾದರೆ ಈ ಸೌಲಭ್ಯಗಳು ದೋಷರರಿತವಾಗಿರಬೇಕು.ಉದಾಹರಣೆಗೆ:ಸಮಿತಿಗಳ ಕೋಠಡಿಗಳಲ್ಲಿ ನಿರಾಳವಾಗಿ ಕೊಡುವ ವ್ಯವಸ್ಥೆ ಇಲ್ಲದಿದ್ದರೆ,ಶ್ರವಣ ಸಾಧನಗಳ ಏರ್ಪಾಡು ಸರಿಯಾಗಿಲ್ಲದೆ ಇದ್ದರೆ,ಸದಸ್ಯರು ಗಮನವಿಟ್ಟು ವ್ಯವಹರಿಸುವುದು ಸಾಧ್ಯವಿಲ್ಲ.

೨.ತಾಂತ್ರಿಕ ರೀತಿಯ ಏರ್ಪಾಡುಗಳಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳ ನಿಷ್ಕೃಷ್ಟ ನಿರೂಪಣೆ,ಸಮ್ಮೇಳನ ಸಾಧಿಸಬೇಕಾದ ಧ್ಯೇಯಗಳು(ಅಜೆಂಡ ಅಥವಾ ಕಾರ್ಯಸೂಚಿ),ಕಾರ್ಯಕ್ರಮದ ಸ್ವರೂಪ ಮತ್ತು ಸಾಧನಗಳ ನಿರ್ಣಯ ಅಂದರೆ ಸರ್ವಸದಸ್ಯಸಮ್ಮೇಳನಗಳು ಎಷ್ಟು ಬಾರಿ ಸೇರಬೇಕು,ಸಮಿತಿಗಳೆಷ್ಟಿರಬೇಕು ಎಂಬುದು ಮತ್ತ್ತು ಚರ್ಚೆಗಳಲ್ಲಿ ಭಾಗವಹಿಸುವವರಿಗೆ ಬೇಕಾದ ಆಧಾರ ಕಾಗದ ಪತ್ರಗಳನ್ನೊದಗಿಸುವುದು-ಇತ್ಯಾದಿ.

ಅಂತಾರಾಷ್ಟ್ರೀಯ ಸಮ್ಮೇಳನಗಳು ಈ ಮೂರರಲ್ಲಿ ಯಾವುದಾದರೊಂದು ರೀತಿಯಲ್ಲಿ ಮುಕ್ತಾಯಗೊಳ್ಳಬಹುದು.೧.ಸಾಂಪ್ರದಾಯಿಕ ಅಥವಾ ಔಪಚಾರಿಕ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಎಲ್ಲರೂ ಸಹಿ ಹಾಕಬಹುದು;ಉದಾ:೧೯೧೯ರಲ್ಲಿ ನಡೆದ ಪ್ಯಾರಿಸ್ ಸಮ್ಮೇಳನದ ಫಲವಾಗಿ ಎಲ್ಲರ ಒಪ್ಪಿಗೆ ಪಡೆದ ವರ್ಸೆಲ್ಸ್ ಕರಾರು;೨.ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ಮಾತ್ರ ಹೊರಬೀಳಬಹುದು;೩.ಸದಸ್ಯರ ಒಟ್ಟು ಅಭಿಪ್ರಾಯವನ್ನೊಳಗೊಂಡ ಅಧಿಕಾರಯುತ ಪ್ರಕಟನೆಯನ್ನು ಕೊಡಬಹುದು;ಉದಾ:೧೯೫೩ರ ಬಾಂಡುಂಗ್ ಸಮ್ಮೇಳನದ ವರದಿ.(ಎ.ಎ.)

ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು:೧೯೩೦ರ ದಶಕದಲ್ಲಿ ಗೋದಿ,ಸಕ್ಕರೆ,ತವರ ಮುಂತಾದ ವಸ್ತುಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳು ಜಾರಿಗೆ ಬಂದವು.ಸರಕುಗಳ ನಿಯಂತ್ರಣ ಪ್ರಯತ್ನ ಈ ಮೊದಲೇ ಕಂಡು ಬಂದಿದ್ದರೂ ಇದು ಪ್ರಾಮುಖ್ಯ ಗಳಿಸಿ ನಿರ್ದಿಷ್ಟ ರೂಪವನ್ನು ಪಡೆದದ್ದು ಇದೇ ಅವಧಿಯಲ್ಲಿ.

ಮುಖ್ಯವಾದ ಕಚ್ಚಾವಸ್ತುಗಳ ಮತ್ತು ಕೆಲವು ವಿಶೇಷ ಆಹಾರ ವಸ್ತುಗಳ ಬೆಲೆ ಬಹಳವಾಗಿ ಏರಿತಕ್ಕೊಳಗಾಗಿ ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ಕಷ್ಟ ಪರಿಸ್ಥಿಯನ್ನುಂಟು ಮಾಡುತಿದ್ದುದನ್ನು ತಪ್ಪಿಸುವುದಕ್ಕಾಗಿ ಸರಕು ಒಪ್ಪಂದಗಳನ್ನು ರೂಪಿಸಲಾಯಿತು.ಬೇಡಿಕೆ ಮತ್ತು ನೀಡಿಕೆಗಳಲ್ಲಿ ಆಗುವ ಬದಲಾವಣೆಗಳು ಬೆಲೆಗಳ ಏರಿಳಿತಕ್ಕೆ ಕಾರಣವಾಗುವುದರಿಂದ ಸರಕುಗಳ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಅಂತಾರಾಷ್ಟ್ರೀಯ ಹತೋಟಿ ಅವಶ್ಯಕವೆಂಬುದನ್ನು ಮನಗಂಡು ಒಪ್ಪಂದಗಳ ಮೂಲಕ ಮುಖ್ಯವಾದ ಕಚ್ಚವಸ್ತುಗಳು ಮತ್ತು ಆಹಾರ ವಸ್ತುಗಳ ಉತ್ಪಾದನೆ ಮತ್ತು ವ್ಯಾಪರದ ಮೇಲೆ ಹತೋಟಿ ಇಡಲು ಯತ್ನಿಸಲಾಯಿತು.ಉತ್ಪಾದನೆಯನ್ನು ನಿಗದಿ ಮಾಡಿ ಅಧಿಕ ಉತ್ಪಾದನೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ತಡೆಯಲು ಮತ್ತು ನಿಗಧಿಯಾದ ಬೆಲೆಗೆ ಕೊಳ್ಳಲು ಮತ್ತು ಮಾರಲು ಒಪ್ಪಂದ ಮಾಡಿಕೊಂಡು ಉತ್ಪಾದಕರಿಗೆ ಒದಗಬಹುದಾದ ನಷ್ಟವನ್ನು ತಪ್ಪಿಸುವುದು-ಇವೇ ಅಂತಾರಾಷ್ಟ್ರೀಯ ಸರಕು ಒಪ್ಪಂದಗಳ ಮೂಲಭೂತ ಉದ್ದೇಶಗಳು.

ಅಂತಾರಾಷ್ಟ್ರೀಯ ಗೋದಿ ಒಪ್ಪಂದ:ಹಲವಾರು ವರ್ಷಗಳ ಪ್ರಯತ್ನದ ಫಲವಾಗಿ ೧೯೩೩ರಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಗೋದಿ ಒಪ್ಪಂದ ಜಾರಿಗೆ ಬಂದಿತು.ಕೆಲವು ವರ್ಷಗಳಿಗೆ ಮಾತ್ರ ಅನ್ವಯಿಸುವಂತೆ ಒಪ್ಪಂದವನ್ನು ಮಾಡಿಕೊಂಡು ಅದರ ಅವಧಿ ಮುಗಿದ ಕೂಡಲೆ ಸೂಕ್ತ ಮಾರ್ಪಾಡುಗಳೊಂದಿಗೆ ಮುಂದಿನ ಕೆಲವು ವರ್ಷಹಳಿಗೆ ಅನ್ವಯಿಸುವಂತೆ ಮತ್ತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು.೧೯೪೯ರ ಒಪ್ಪಂದ ೧೯೫೨ರ ವರೆಗೆ ಜಾರಿಯಲ್ಲಿದ್ದು,೧೯೫೩ರಲ್ಲಿ ಅದನ್ನು ೧೯೫೭ರ ವರೆಗೂ ಆನಂತರ ೧೯೬೨ರ ವರೆಗೂ ಮುಂದುವರಿಸಲಾಯಿತು.ಈ ಒಪ್ಪಂದಗಳ ಪ್ರಕಾರ,ಸ್ಥಿರವಾದ ಬೆಲೆಯಲ್ಲಿ ಆಮದು ರಫ಼್ತು ವ್ಯಾಪಾರ ನಿರಾತಂಕವಾಗಿ ನಡೆಯುವಂತೆ ಭರವಸೆ ನೀಡಲಾಯಿತು.ಒಂದೊಂದು ಅವಧಿಯ ಒಪ್ಪಂದದಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳು ಕಂಡು ಬಂದರೂ ಎಲ್ಲದರ ಸಾಮಾನ್ಯ ನಿಬಂಧನೆಗಳು ಈ ರೀತಿ ಇದ್ದುವು:೧.ರಫ಼್ತು ರಾಷ್ಟ್ರಗಳು ನಿಗದಿಯಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಅಧಿಕತಮ ಬೆಲೆಯನ್ನು ಮೀರದಂತೆ ಖಾತರಿಯಾಗಿ ಒದಗಿಸಬೇಕು.೨.ಆಮದು ರಾಷ್ಟ್ರಗಳು ಗೊತ್ತಾದ ಪ್ರಮಾಣದ ಗೋದಿಯನ್ನು ನಿಗದಿಯಾದ ಕನಿಷ್ಠತಮ ಬೆಲೆಗೆ ಕಡಿಮೆ ಇಲ್ಲದಂತೆ ರಫ಼್ತುರಾಷ್ಟ್ರಗಳಿಂದ ಖಾತರಿಯಾಗಿ ಕೊಳ್ಳಬೇಕು.೩.ಒಪ್ಪಂದಕ್ಕೆ ಸಹಿಹಾಕಿದ ರಾಷ್ಟ್ರಗಳು ಗೋದಿಯ ಅಂತಾರಾಷ್ಟ್ರೀಯ ಬೆಲೆಯ ಕನಿಷ್ಠತಮ ಮತ್ತು ಅಧಿಕತಮ ಮಟ್ಟವನ್ನು ನಿಗದಿ ಮಾಡಬೇಕು ಆಂತರಿಕ ಬೆಲೆಗೆ ಈ ನಿಯಂತ್ರಣ ಅನ್ವಯಿಸಕೂಡದು.

ಗೋದಿ ಒಪ್ಪಂದ ಆಡಳಿತವನ್ನು ನಿರ್ವಹಿಸಲು ಒಂದು ಅಂತಾರಾಷ್ಟ್ರೀಯ ಗೋದಿ ಸಭೆಯನ್ನು ನಿಯಮಿಸಲಾಯಿತು.ಗೋದಿಬೆಳೆ ಮತ್ತು ವ್ಯಾಪರಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿ ಸದಸ್ಯರಾಷ್ಟ್ರಗಳಿಗೆ ಒದಗಿಸುವುದು,ವಾರ್ಷಿಕ ವರದಿಗಳನ್ನು ಪ್ರಕಟಿಸುವುದು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸುವುದರಿಂದ ಸಂಭವಿಸುವ ವಿವಾದಗಳನ್ನು ಪರಿಹರಿಸುವುದು-ಮುಂತಾದವು ಇದರ ಮುಖ್ಯ ಕರ್ತವ್ಯಗಳು.ಈ ಸಭೆಗೆ ಪ್ರತಿಸದಸ್ಯ ರಾಷ್ಟ್ರದಿಂದ ಒಬ್ಬೊಬ್ಬ ಪ್ರತಿನಿಧಿ ಇರಬೇಕೆಂದು ತೀರ್ಮಾನಿಸಲಾಯಿತು.ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ನೆರವಾಗಲು ಒಂದು ಕಾರ್ಯಕಾರಿ ಸಮಿತಿ ಮತ್ತು ಒಂದು ಬೆಲೆ ಸಲಹಾ ಸಮಿತಿ ನೇಮಕವಾದುವು.

ಅಂತಾರಾಷ್ಟ್ರೀಯ ಸಕ್ಕರೆ ಒಪ್ಪಂದ:ಇದರ ಉದ್ದೇಶವೂ ಬೆಲೆಯ ಸ್ತಿಮಿತತೆಯನ್ನು ಕಾಪಡುವುದೇ ಆಗಿದೆ.ಈ ದಿಶೆಯಲ್ಲಿ ೧೯೨೦ರಲ್ಲಿ ಪ್ರಥಮ ಪ್ರಯತ್ನ ನಡೆಯಿತು.೧೯೩೧ರಲ್ಲಿ ರೂಪುಗೊಂಡ ಜಾಡ್ಬೋರ್ನ್ ಯೋಜನೆ ಈ ದಿಶೆಯಲ್ಲಿ ಮತ್ತೊಂದು ಪ್ರಯತ್ನ.ಆದರೆ ಇವು ಅಷ್ಟೇನೂ ಫಲಕಾರಿಯಾಗಲಿಲ್ಲ ಸಕ್ಕರೆಯ ಅಂತಾರಾಷ್ಟ್ರೀಯ ಬೆಲೆಯನ್ನು ಸಿಮಿತದಲ್ಲಿಡುವ ಪ್ರಯತ್ನಗಳೆಲ್ಲ ಮಹತರವಾದುದು ೧೯೪೫ರಲ್ಲಿ ಜಾರಿಗೆ ಬಂದ ಅಂತಾರಾಷ್ಟ್ರೀಯ ಸಕ್ಕರೆ ಒಪ್ಪಂದ.೧೯೫೩ರಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಲಂಡನ್ನಿನಲ್ಲಿ ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ಸೇರಿದ್ದ ಸಭೆಯಲ್ಲಿ ಆದ ತೀರ್ಮಾನಕ್ಕನುಗುಣವಾಗಿ ಈ ಒಪ್ಪಂದ ಜಾರಿಗೆ ಬಂದಿತು.೨೨ ರಫ಼್ತುರಾಷ್ಟ್ರಗಳು ಮತ್ತು ೧೬ ಆಮದುರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿದವು.ಈ ಒಪ್ಪಂದದ ಆಡಳಿತವನ್ನು ನಿರ್ವಹಿಸಲು ಅಂತಾರಾಷ್ಟ್ರೀಯ ಸಕ್ಕರೆ ಸಭೆಯೊಂದು ನೇಮಕವಾಯಿತು.