ಪುಟ:Mysore-University-Encyclopaedia-Vol-1-Part-1.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗಸೆನಾರು ಹೀಗೆ ತೆಗೆದ ಎಣ್ಣೆಯನ್ನು ಶೇಕರಿಸಿಟ್ಟಿದರೆ ಅದರಲ್ಲಿರುವ ತೇವ ಮತ್ತು ಅಂಟು ಪದಾರ್ಥಗಳು ತಳದಲ್ಲಿ ನಿಲ್ಲುತ್ತವೆ. ಹಲವು ವರ್ಷಗಳು ಹೀಗೆ ಇಟ್ಟ ಎಣ್ಣೆಗೆ ಟ್ಯಾಂಕ್ಡ್ ಆಯಿಲ್ ಎನ್ನುತ್ತಾರೆ. ವಾರ್ನಿಷ್ ತಯಾರಿಕೆಯಲ್ಲಿ ಇದಕ್ಕೆ ಬಹು ಬೆಲೆಯಿದೆ, ಆದರೆ ಈ ರೀತಿಯ ಶುದ್ಧೀಕರಣ ಬಹು ನಿಧಾನ. ಆದ್ದರಿಂದ ಸಾಮಾನ್ಯವಾಗಿ ಕಚ್ಚಾ ಎಣ್ಣೆಗೆ ಶೇ.1 ಅಥವ ಶೇ.2 ಭಾಗದಷ್ಟು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸುತ್ತಾರೆ. ಕಶ್ಮಲಗಳ ಬಹುಭಾಗ ಇದರಿಂದ ಕರಿಕಾಗಿ ಕೆಳಗೆ ನಿಲ್ಲುತ್ತದೆ. ಚಿತ್ರಕಾರರ ಎಣ್ಣೆಯನ್ನು ತಯಾರಿಸಲು ಈ ರೀತಿ ಶುದ್ಧಮಾಡಿದ ಎಣ್ಣೆಯನ್ನು ಆಳವಿಲ್ಲದ ಅಗಲವಾದ ತಟ್ಟೆಗಳಲ್ಲಿ ಹಾಕಿ ಗಾಜಿನ ಮುಚ್ಚಳಗಳಿಂದ ಮುಚ್ಚಿ ಬಿಸಿಲಿಗೆ ಇಡುತ್ತಾರೆ. ಇದರಿಂದ ಬಂದ ಎಣ್ಣೆ ಅತ್ಯಂತ ಪರಿಶುದ್ಧವಾಗಿರುತ್ತದೆ. ಇನ್ನೂ ಅನೇಕ ಶುದ್ಧೀಕರಣ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಳೆಯ ವಿಧಾನಗಳೇ ಹೆಚ್ಚಾಗಿ ಬಳಕೆಯಲ್ಲಿವೆ. ಎಣ್ಣೆಗೆ ಫುಲ್ಲರ್ಸ್ ಆರ್ತ್ ಅಥವಾ ಚುರುಕುಗೊಳಿಸಿದ ಇಂಗಾಲವನ್ನು ಹಾಕಿ ಶೋಧಿಸಿದರೆ ಬಣ್ಣ ಉತ್ತಮಗೊಳ್ಳುತ್ತದೆ. ಅಲೋಹ ಪಾತ್ರೆಗಳಲ್ಲಿ ಹಾಕಿ ಗಾಳಿ ಬೆಳಕುಗಳ ಸಂಪರ್ಕವಿಲ್ಲದಂತೆ ಇಟ್ಟರೆ ಎಣ್ಣೆ ಬಹುಕಾಲ ಕೆಡದೆ ನಿಲ್ಲುತ್ತದೆ. ಈ ಎಣ್ಣೆಯ ಮುಖ್ಯ್ ಉಪಯೋಗ ವಾರ್ನಿಷ್ ಮತ್ತು ಬಣ್ಣಗಳ ತಯಾರಿಕೆಯಲ್ಲಿ. ಮೆರುಗು ಎಣ್ಣೆ ಅಥವಾ ಆರುವ ಎಣ್ಣೆಗಳಲ್ಲೆಲ್ಲಾ ಇದೇ ಅತಿ ಮುಖ್ಯವಾದುದು. ಲಿನೋಲಿಯಮ್ ಮತ್ತು ಮೇಣಗಪಟದ ಬಟ್ಟೆ, ಮುದ್ರಣ ಮತ್ತು ಲಿಥೋಗ್ರಫಿ ಮಸಿಗಳು, ಮೆತುಸಾಬೂನು, ಪಾಲೀಷ್ ಗಳು, ಬಾಣಬಿರುಸುಗಳು-ಇವುಗಳ ತಯಾರಿಕೆಯಲ್ಲಿಯೂ ಚರ್ಮ ನಯ ಮಾಡುವಾಗಲೂ ಸೆಣಬಿನ ನೇಯ್ಗೆಯ ಬಾಬಿನ್ ಗಳನ್ನೂ ಕ್ರಿಕೆಟ್ ಬ್ಯಾಟುಗಳನ್ನು ಹದಮಾಡುವುದಕ್ಕೂ ಸ್ವಚ್ಛ ಎಣ್ಣೆ ಉಪಯೋಗವಾಗುತ್ತದೆ. ಹಸಿಬೀಜದಿಂದ ತಗೆದ ಎಣ್ಣೆಯನ್ನು ಪೂರ್ವ ಯುರೋಪಿನಲ್ಲಿಯೂ ಕಾಶ್ಮೀರ, ಬಿಹಾರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿಯೂ ಆಹಾರದಲ್ಲಿ ಬಳಸುತ್ತಾರೆ. ಚರ್ಮದ ಮೇಲೆ ಔಷಧವಾಗಿ ಹಚ್ಚುವುದಕ್ಕೂ ಕುದುರೆಗಳಿಗೆ ಭೇಧಿ ಔಷಧವಾಗಿಯೂ ಇದನ್ನು ಉಪಯೋಗಿಸುವುದುಂಟು. ಎಣ್ಣೆ ತೆಗೆದ ಅನಂತರ ಉಳಿವ ಹಿಂಡಿ ದನಗಳಿಗೆ ಒಳ್ಳೆಯ ಮೇವು. ಅಗಸೆನಾರು : ಲೈನೇಸೀ ಸಸ್ಯ ಕುಟುಂಬದ ಲೈನಮ್ ಯುಸಿಟಾಸಿಮಮ್ ಜಾತಿಗೆ ಸೇರಿದ ಸಸ್ಯ(ಲಿನ್ಸೀಡ್).ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರುಗಸೆ (ಫ್ಲಾಕ್ಸ್) ಎಂದೂ ತೂಗಟೆಯ ನಾರನ್ನು ಬ್ಯಾಸ್ಟ್ ನಾರೆಂದೂ ಕರೆಯುತ್ತಾರೆ. ಅಗಸೆನಾರು ಒಂದು ವಾರ್ಷಿಕ ಬೆಳೆ. ಸಮಶೀತೋಷ್ಣ ವಾಯುಗುಣವಿದ್ದೆಡೆಯಲ್ಲ ಚನ್ನಾಗಿ ಬೆಳೆಯುತ್ತದೆ. ಇದನ್ನು ನಾರಿಗಾಗಿಯೂ ಬೀಜಕ್ಕಾಗಿಯೂ ಬೆಳೆಸುತ್ತಾರೆ. ಬೀಜದೀಂದ ಉತ್ತಮ ಎಣ್ಣೆ (ಲಿನ್ಸೀಡ್ ಆಯಿಲ್) ಮತ್ತು ಹಿಂಡಿ ಉತ್ಪನ್ನವಾಗುತ್ತದೆ. ಗಿಡ್ಡನೆಯ ಸಸ್ಯಜಾತಿಗೆ ಸೇರಿದ ಈ ಗಿಡ 30-120ಸೆಂಮೀ ಎತ್ತರ ಬೆಳೆಯುತ್ತದೆ. ತಾಯಿ ಬೇರಿದ್ದರೂ ಇತರ ಬೇರುಗಳು ಗುಚ್ಚವಾಗಿ ಮೇಲ್ಪದರದಲ್ಲೇ ಹರಡಿರುತ್ತವೆ. ತೆಳ್ಳಗಿನ ನೀಳಕಾಂಡದಲ್ಲಿ ಅನೇಕ ಕೊಂಬೆಗಳಿರುತ್ತದೆ. ಬೀಜದಿಂದಲೇ ಬೆಳೆ. ಎಲೆಗಳು ಅತಿ ಕಿರಿದಾಗಿರುತ್ತವೆ. ಹೂಗಳು ಬಿಳುಪು ಅಥವಾ ನೀಲಿ ಬಣ್ಣವಿದ್ದು ಸಮಮಿತಿಯುಳ್ಳ ಸ್ವಪರಾಗಸಂಪರ್ಕದವಾಗಿವೆ. ಹೂವಿನ 5 ಪುಷ್ಪಪತ್ರಗಳೂ 5 ಪುಷ್ಪದಳಗಳೂ 10 ಕೇಸರಗಳೂ 10 ಬೀಜ ಉತ್ಪನ್ನಮಾಡುವ 5 ವಿಭಾಗದ ಅಂಡಕೋಶವೂ ಇರುತ್ತವೆ. ಬೀಜ ಹೊಳಪುಕಂದು ಅಥವಾ ಕಪ್ಪು ಬಣ್ಣದ್ದು. ಈ ಜಾತಿಯ ಗಿಡಗಳಲ್ಲಿ ದೇಶದ ವಾಯುಗುಣ ಮತ್ತು ಭೂಗುಣಕ್ಕೆ ಹೊಂದಿಕೊಂಡಂಥ ಅನೇಕ ಪ್ರಭೇದಗಳಿವೆ. ನಾರಿನ ಜಾತಿಯನ್ನು ಒತ್ತಾಗಿ ಬಿತ್ತಬೇಕು. ಅದರ ಕಾಂಡ ನೇರ, ರೆಂಬೆಗಳು ಕಡಿಮೆ. ಕೇವಲ ನಾರಿಗಾಗಿ ಬೆಳೆಸುವ ಈ ಗಿಡದಲ್ಲಿ ಬೀಜದ ಉತ್ಪತ್ತಿ ಕಡಿಮೆ. ಬೀಜದ ಜಾತಿಯನ್ನು ಸ್ವಲ್ಪ ವಿರಳವಾಗಿ ಬಿತ್ತಬೇಕು; ಗಿಡ ಗಿಡ್ಡ; ರೆಂಬೆಗಳು ಹೆಚ್ಚು; ನಾರು ಒರಟು; ಬೀಜ ಹೆಚ್ಚು. ಅಗಸೆ ಬಹುಶಃ ಭೂಮಧ್ಯಪ್ರದೇಶದ ಆಗ್ನೇಯ ರಾಷ್ಟ್ರಗಳಲ್ಲಿ ಮೊದಲು ಹುಟ್ಟಿ ಆ ಪ್ರದೇಶದಲ್ಲೆಲ್ಲ ಹರಡಿ ಅಲ್ಲಿಂದ ಕ್ರಮೇಣ ಯುರೋಪ್, ಅಮೆರಿಕ ಮತ್ತು ಆಸ್ಟೇಲಿಯಗಳಿಗೆ ಪ್ರಸರಿಸಿದೆ. ಅಲ್ಲದೆ ಏಷ್ಯ ಮತ್ತು ಆಫ್ರಿಕದಲ್ಲೂ ಈಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ನಾರಿನ ಮಾದರಿಗಳು ಸ್ವಿಟ್ಸರ್ ಲೆಂಡ್ ದೇಶದ ಸರೋವರಗಳ ವಸಾಹತುಗಳಲ್ಲೂ ಈಜಿಪ್ಟ್ಡೇಶದ ಪುರಾತನ ಸಮಾಧಿಗಳಲ್ಲೂ ಕಂಡುಬಂದಿದೆ. ಅಲ್ಲದೆ ಶಿಲಾಯುಗದಲ್ಲೂ ಇದರ ಬಳಕೆ ಹೆಚ್ಚಾಗಿತ್ತೆಂಬುದಕ್ಕೆ ಪುರಾವೆಗಳಿವೆ. ಇದರಿಂದ ಬಹುಶಃ ಯುರೋಪ್ ಪ್ರದೇಶದಲ್ಲಿ ಅಗಸೆನಾರೂ ಏಷ್ಯಖಂಡದಲ್ಲಿ ಸಣಬುನಾರು ಮಾನವೇತಿಹಾಸದಲ್ಲಿ ಆದಿಯಿಂದಲೂ ಬಳಕೆಯಲ್ಲಿದ್ದಿರಬಹುದೆಂದು ಊಹಿಸಲಾಗಿದೆ. ಅರ್ಜೆಂಟೈನ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಅಗಸೆನಾರಿನ ಬೀಜವನ್ನು ಶರತ್ಕಾಲದಲ್ಲಿ ಬಿತ್ತುತ್ತಾರೆ. ಅದು ಐದು ತಿಂಗಳ ಕಾಲಾವಧಿಯಲ್ಲಿ ಮಾಗುತ್ತದೆ. ಉತ್ತರವಲಯದಲ್ಲಿ ವಸಂತಕಾಲದಲ್ಲಿ ಬಿತ್ತುತ್ತಾರೆ.100-120 ದಿನಗಳಲೇ ಅದು ಕೊಯಿಲಿಗೆ ಸಿದ್ದವಾಗುತ್ತದೆ. ಅಲ್ಲಿ ಅವುಗಳ ಬೇಸಾಯ ಸಾಮಾನ್ಯವಾಗಿ ಗೋದಿ ಮತ್ತಿತರ ಸಣ್ಣಕಾಳುಗಳಂತೆಯೇ ಇದು, ಅವೆಲ್ಲಕ್ಕೂ ಒಂದೇ ರೀತಿಯ ಯಾಂತ್ರಿಕ ಉಪಕರಣಗಳು ಬಳಕೆಯಲ್ಲಿವೆ. ಭಾರತದ ಅಗಸೆನಾರಿನ ಗಿಡ ಗಿಡ್ಡಜಾತಿಯದು. ಅಬಿಸೀನಿಯ ದೇಶದ್ದಕ್ಕೆ ದಪ್ಪಕಾಂಡವಿದ್ದು ಎಲೆಗಳು ದಟ್ಟವಾಗಿರುತ್ತವೆ. ಭೂಮಧ್ಯಪ್ರ್ದೇಶದಲ್ಲಿ ಗಿಡದ ಬೀಜ ದಪ್ಪವಾಗಿದ್ದು ನಾರು ಹಳದಿ ಅಥವಾ ಬಂಗಾರದ ಬಣ್ಣದ್ದಾಗಿದ್ದು ನೀಳವಾಗಿರುತ್ತದೆ. ಯುರೋಪ್ ಖಂಡದಲ್ಲಿ ಮಾತ್ರ ನಾರಿನ ಬೆಳೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿದೆ. ರಷ್ಯವೊಂದರಲ್ಲೇ ಪ್ರಪಂಚದಲ್ಲಿನ ಉತ್ಪನ್ನದ ಅಧಿಕಭಾಗ ಬೆಳೆಯುವುದು. ಆದರೆ ಅದು ಉತ್ತಮ ದರ್ಜೆಯದಲ್ಲ. ಎಕರೆಯೊಂದಕ್ಕೆ ಬರುವ ಉತ್ಪನ್ನವೂ ಕಡಿಮೆ. ಉತ್ತಮದರ್ಜೆಯ ನಾರು ಫ್ರಾನ್ಸ್, ಬೆಲ್ಜಿಯಂ ಮತ್ತು ಹಾಲೆಂಡ್ ದೇಶಗಳಲ್ಲಿ ಉತ್ಪಾದನೆಯಾಗುತ್ತದೆ. ಐರ್ ಲೆಂಡ್ ಮತ್ತು ಕೆನಡಗಳಲ್ಲೂ ಸ್ವಲ್ಪಮಟ್ಟಿಗೆ ಈಗ ಇದನ್ನು ಬೆಳೆಸಲಾಗುತ್ತಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡ ಮತ್ತು ಅರ್ಜೆಂಟೈನ ದೇಶದಲ್ಲಿ ಅದು ಈಚೆಗೆ ಹೆಚ್ಚು ಪ್ರಮುಖವಾಗುತ್ತಿದೆ. ಮುಖ್ಯವಾಗಿ ಸಮಶೀತೋಷ್ಣವಲಯದ ಬೆಳೆಯಾಗಿದ್ದರೂ ಅಗಸೆ ಬೇರೆ ಯಾವ ಪ್ರದೇಶದಲ್ಲಾದರೂ ಅನುಕೂಲವೇರ್ಪಡಿಸಿದಲ್ಲಿ ಹೊಂದಿಕೊಂಡು ಬೆಳೆಯಬಲ್ಲುದು. ಅದನ್ನು ಭಿನ್ನ ಭಿನ್ನ ವಾಯುಗುಣ, ಭೂಗುಣಗಳ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದೆ. ಹೆಚ್ಚಿನ ಉಷ್ಣಾಂಶ ಮತ್ತು ಅತಿ ಹೆಚ್ಚಿನ ಮಳೆ ಇದಕ್ಕೆ ಅನುಕೂಲವಲ್ಲ. ನಾರಿನ ವ್ಯವಸಾಯ ದೇಶಕ್ಕನುಗುಣವಾಗಿ ಮಾರ್ಪಾಟು ಹೊಂದುತ್ತದೆ. ಜೇಡಿಮಣ್ಣು ಮತ್ತು ಹೆಚ್ಚಿನ ಸಾವಯವವಸ್ತುಗಳಿದ್ದಲ್ಲಿ ಬೆಳೆ ಚೆನ್ನಾಗಿ ಬಾರದು. ಹಾಗೂ ಕರಲು ಅಥವಾ ಕಲ್ಲು ಭೂಮಿಗಳೂ ಅದರ ಬೆಳಸಿಗೆ ಯೋಗ್ಯವಲ್ಲ. ಭೂಮಿ ಸ್ವಲ್ಪ ಫಲವತ್ತಾಗಿದ್ದರೂ ಮರಳುಮಿಶ್ರಿತ ಲಘು ಜೇಡಿಮಣ್ಣಿದ್ದರೂ ಗಿಡ ಹಸನಾಗಿ ಬೆಳೆಯುತ್ತದೆ. ಬಿತ್ತನೆಗೆ ಮೊದಲು ಭೂಮಿಯನ್ನು ಅನೇಕ ಸಲ ಉತ್ತು ಹದಗೊಳಿಸಬೇಕು. ರಾಸಾಯನಿಕ ಗೊಬ್ಬರ ಕೊಟ್ಟಲ್ಲಿ ಒಂದೇ ಎತ್ತರಕ್ಕೆ ಗಿಡ ಬೆಳೆಯುವುದಿಲ್ಲ್ವಾದ್ದರಿಂದ ಅದನ್ನು ಬಳಸುವುದಿಲ್ಲ. ಆದರೆ ಅದರ ಹಿಂದಿನ ಬೆಳೆಗೆ ಹೆಚ್ಚು ಗೊಬ್ಬರ ಒದಗಿಸಿದ್ದಲ್ಲಿ ಉಳಿದ ಗೊಬ್ಬರ ಭೂಮಿಯಲ್ಲಿ ಹರಡಿಕೊಂಡು ಸಹಾಯಕವಾಗುತ್ತದೆ. ಬೀಜವನ್ನು ಎರಚಬಹುದು, ಸಾಲಾಗಿ ಬಿತ್ತಬಹುದು, ಕೂರಿಗೆ ಹೊಡೆಯಬಹುದು. ಭೂಮಿಯನ್ನು ಸಣ್ಣ ಪಾತಿಗಳನ್ನಾಗಿಸಿ, ಬಿತ್ತಿ, ಮೇಲೆ ಭಾರವಾದ ಕಲ್ಲು ಮುಂತಾದುವನ್ನು ಆಡಿಸಿ ಗಟ್ಟಿಗೊಳಿಸುವುದರಿಂದ ಉತ್ತಮ ಮೊಳಕೆ ಉತ್ಪನ್ನವಾಗುತ್ತದೆ. ಬಿತ್ತನೆ ಪ್ರಮಾಣ ಸು. 40-65 ಕಿಗ್ರಾಂ. ಬೆಳೆಯ ಅವಧಿಯಲ್ಲಿ ಕಳೆತೆಗೆದು ಉಪಬೇಸಾಯ ಕೈಗೊಳ್ಳುತ್ತಾರೆ. ಬೀಜ ಅರ್ಧ ಬಲಿತಿರುವಾಗ ಅದು ಕೊಯಿಲಿಗೆ ಸಿದ್ಧ. ಗಿಡವನ್ನು ಭೂಮಟ್ಟಕ್ಕೆ ಕತ್ತರಿಸಬಹುದು ಅಥವಾ ಬೇರು ಸಮೇತ ಕೀಳಲೂಬಹುದು. ಈಗ ಯಂತ್ರಗಳಿಂದ ಕೊಯಿಲುಮಾಡುವುದು ಅಮೆರಿಕ ಸಂಯುಕ್ತಸಂಸ್ಥಾನ ಮುಂತಾದ ರಾಅಷ್ಟ್ರಗಳಲ್ಲಿ ಸಾಮಾನ್ಯ. ಕೊಯಿಲು ಅದೊಡನೆ ಗಿಡಗಳನ್ನು ಅದೇ ಹೊಲದಲ್ಲಿ ಗುಂಪು ಗುಂಪಾಗಿ ಶೇಕರಿಸಿ ನಿಲ್ಲೊಟ್ಟಲು ಹಾಕಿ ಒಣಗಿಸುತ್ತಾರೆ. ಬೀಜವನ್ನು ಒಣಗಿಸಿ ಅನಂತರ ಶೇಕರಿಸುತ್ತಾರೆ. ಅದರ ಶೇಕರಣೆಯಲ್ಲೂ ವೈವಿಧ್ಯವಿದೆ. ಬಿತ್ತನೆಗೂ ದನದ ಮೇವಿಗೂ ಎಣ್ಣೆಗೂ ಅದನ್ನು ಬಳಸಲಾಗುತ್ತದೆ. ವಿವಿಧ ದೇಶಗಳಲ್ಲಿ ಅಲ್ಲಿನ ಅನುಕೂಲಕ್ಕೆ ತಕ್ಕಂತೆ ನಾರನ್ನು ಕಾಂಡದಿಂದ ಬೇರ್ಪಡಿಸುತ್ತಾರೆ ಇದರಲ್ಲಿ ಎರಡು ಮುಖ್ಯ ವಿಧಾನಗಳಿವೆ. ಮೊದಲನೆಯದರಲ್ಲಿ, ಕಾಂಡವನ್ನು ಇಬ್ಬನಿಯಲ್ಲಿ ದೀರ್ಘಕಾಲ ನೆನೆಸುತ್ತಾರೆ. ಎರಡನೆಯದರಲ್ಲಿ, ಬೇಗ ನೆನೆಯುವಂತೆ ನೀರಿನಲ್ಲಿ ಕೊಳೆಹಾಕುತ್ತರೆ. ಮೊದಲನೆಯ ವಿಧಾನ ರಷ್ಯದಲ್ಲಿ ಹೆಚ್ಚು.. ಇಬ್ಬನಿ ಮಳೆ ಮತ್ತು ಹಿಮದ ನೀರು, ಸೂಕ್ಷ್ಮಾಣುಗಳು ಮತ್ತು ಬೂಷ್ಟುಗಳ ಕಾರ್ಯಾಚರಣೆಗಳನ್ನವಲಬಿಸಿ ಅವು ಅಷ್ಟು ಚೆನ್ನಾಗಿ ಅಷ್ಟು ಬೇಗನೆ ಗಿಡ ನೆನೆದು ಹದವಾಗುತ್ತದೆ. ನೀರಿನಲ್ಲೇ ಆದರೆ ಗಿಡ ಬಹು ಬೇಗ ಹದವಾಗುತ್ತದೆ. ಕಾಂಡದ ಮಧ್ಯಭಾಗ ಮೃದುವಾಗಿ, ಸುಲಭವಾಗಿ ಸೀಳಬಹುದಾದಾಗ ನಾರು ತೆಗೆಯಲು ಬರುತ್ತದೆ. ನೀರಿನಲ್ಲಿ ಕೊಳೆಹಾಕುವ ಮಾರ್ಗವನ್ನೇ ಅನೇಕ ಮುಕ್ಯ ರಾಷ್ಟ್ರಗಳು ಅನುಸರಿಸುತ್ತಿವೆ. ನೀರಿನಲ್ಲಿ ನಾರಿನ ಮಧ್ಯೆ ಹಾಗೂ ಮೇಲ್ಭಾಗದ ಅಂಗಾಂಶಗಳು ಪೂರ್ಣ ಕೊಳೆಯುತ್ತವೆ. ಹೊಣ್ಡ, ಕೆರೆ, ತೆಳ್ಳಗೆ ಹರಿಯುವ ಝರಿ, ಸರೋವರ ಮತ್ತು ಸಾಧ್ಯವಾದಡೆ ದೊಡ್ಡ ದೊಡ್ಡ ಕೊಪ್ಪರಿಗೆಗಳಲ್ಲೂ ಅದನ್ನು ನೆನೆಹಾಕಬಹುದು. ಈ ಕೊನೆಯ ವಿಧಾನದಲ್ಲಿ ಉಷ್ಣತೆಯನ್ನು ನಿಯಂತ್ರಣಗೊಳಿಸಿಡಲು ಸಾದ್ಯವಾದ ಪಶ್ಚಿಮ ಮತ್ತು ಮಧ್ಯ ಯುರೋಪ್ ಹಾಗೂ ಸಂಯುಕ್ತಸಂಸ್ಥಾನಗಳಲ್ಲಿ ಬಳಕೆಯಲ್ಲಿದ್ದ. ಅದಕ್ಕೆ ಬೇಕಾದ ನಿರ್ದಿಷ್ಟ ಸೂಕ್ಷ್ಮಾಣುಗಳನ್ನು ಹೆಚ್ಚಾಗಿ ಬೆಳೆಸಿ ರಾಸಾಯನಿಕ ಪ್ರಯೋಗದ ಸಹಾಯದಿಂದ ನಾರು ಬಿಡಿಸುವ ಮಾರ್ಗ ಸಂಶೋಧನೆಗಳಿಂದ ಸಿದ್ಧಿಸಿದ್ದರೂ ಸಾಮಾನ್ಯವಾಗಿ ಬಳಕೆಯಲ್ಲಿಲ್ಲ. ಹೀಗೆ ಕೊಳೆಸಿ ಒಣಗಿಸಿದ ಹುಲ್ಲನ್ನು ಚೆನ್ನಾಗಿ ಜಜ್ಜಬೇಕು. ನಾರು ತುಂಡಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ವಿವಿಧ ಯಾಂತ್ರಿಕ ಸಲಕರಣೆಗಳ ಸಹಾಯದಿಂದ ಅದನ್ನು ನಿರ್ವಹಿಸಲಾಗುತ್ತದೆ. ಜಜ್ಜಿದ ಹುಲ್ಲಿನ ಬೆಂಡು ಮತ್ತು ಸ್ವಚ್ಛನಾರುಗಳನ್ನು ಬೇರ್ಪಡಿಸಿ ಎಳೆಗಳು ಮುದ್ದೆಯಾಗದೆ ಸರಳವಾಗಿರುವಂತೆ ಹಣಿಗೆಯ ಸಹಾಯದಿಂದ