ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರೂನೈ

ವಿಕಿಸೋರ್ಸ್ದಿಂದ

ಬ್ರೂನೈ ಮಲೇಷ್ಯಾದ ಸಾರವಾಕ್ ರಾಜ್ಯದ ಉತ್ತರ ತೀರದಲ್ಲಿರುವ ಒಂದು ಸ್ವತಂತ್ರ ರಾಜ್ಯ. 1984 ಜನವರಿ 1ರಂದು ಸ್ವಾತಂತ್ರ್ಯಗಳಿಸಿ ಆಗ್ನೇಯ ಏಷ್ಯಾರಾಷ್ಟ್ರಗಳ ಆರನೆಯ ಸದಸ್ಯರಾಷ್ಟ್ರವೆನಿಸಿಕೊಂಡಿತು. ಸಾರವಾಕಿಗೆ ಸೇರಿದ ಲಿಂಬಾನ್ ನದಿ ಕಣಿವೆ ಬ್ರೂನೈದರುಸ್ಸಲ್ ಇಂದಿನ ಅಧಿಕೃತನಾಮ. ಇದನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದೆ. ರಾಜ್ಯದ ಎರಡೂ ಭಾಗಗಳ ಉತ್ತರಕ್ಕೆ ದಕ್ಷಿಣ ಚೀನ ಸಮುದ್ರವಿದ್ದು ಮಿಕ್ಕ ಮೂರು ಕಡೆಗಳಲ್ಲೂ ಸಾರವಾಕ್ ರಾಜ್ಯ ಸುತ್ತುವರಿದಿದೆ. ಬ್ರೂನೈ ರಾಜ್ಯದ ಪಶ್ಚಿಮ ಭಾಗ ದೊಡ್ಡದು. ರಾಜ್ಯದ ವಿಸ್ತೀರ್ಣ 5.765 ಚಕಿಮೀ. ಜನಸಂಖ್ಯೆ 2,15,000 (1980). ರಾಜಧಾನಿ ಬಂದರ್ ಸೆರೀ ಬಗವನ್ ಬ್ರೂನೈ ನದಿಯ ಮುಖದಿಂದ ಸುಮಾರು 14 ಮೀ ದೂರಗಳಲ್ಲಿದೆ. ಇದರ ಹಿಂದಿನ ಹೆಸರು ಸಿಟಿ ಆಫ್ ಬ್ರೂನೈ ಎಂದಿತ್ತು. ಜನಸಂಖ್ಯೆ 80,000 (1979).

ರಾಜ್ಯದ ಅಧಿಕೃತ ಭಾಷೆ ಮಲಯ್. ಆದರೆ ಸರ್ಕಾರಿ ವ್ಯವಹಾರಗಳಿಗೆ ಇಂಗ್ಲಿಷನ್ನು ಬಳಸಬಹುದಾಗಿದೆ. ಬ್ರಿಟಿಷ್ ಕಾಮನ್‍ವೆಲ್ತಿನ ತೈಲೋತ್ಪಾದನ ರಾಜ್ಯಗಳಲ್ಲಿ ಕೆನಡವನ್ನು ಬಿಟ್ಟರೆ ಇದೇ ಮುಖ್ಯವಾದದ್ದು. ಆಗ್ನೇಯ ಏಷ್ಯಾದಲ್ಲಿ ಉನ್ನತ ಜೀವನಮಟ್ಟ ಹಾಗೂ ವೈಯಕ್ತಿಕ ಆದಾಯ ತೆರಿಗೆಯಿಲ್ಲದ ಕೆಲವೇ ರಾಜ್ಯಗಳಲ್ಲಿ ಇದು ಒಂದಾಗಿದೆ.

ಬ್ರೂನೈ 121 ಕಿಮೀ ಸಮುದ್ರತೀರ ಪಡೆದಿದೆ. ಈ ಪ್ರದೇಶ ನದಿಗಳಿಂದ ತಂದುಹಾಕಲ್ಪಟ್ಟ ಮೆಕ್ಕಲುಮಣ್ಣು ಮತ್ತು ಸಸ್ಯಾಂಗಾರದಿಂದ ಕೂಡಿದ್ದು ಸಮತಲವಾಗಿದೆ. ರಾಜ್ಯ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಇವು ಕೆಂಪು ಜೇಡಿ ಮಣ್ಣಿನಿಂದಾದುವು. ರಾಜ್ಯದ ಆಗ್ನೇಯ ಭಾಗ ಸಮುದ್ರಮಟ್ಟಕ್ಕೆ ಸುಮಾರು 914 ಮೀಟರ್ ಎತ್ತರದಲ್ಲಿದೆ. ಬೆಲಾಯಿಟ್, ಟುಟೋಂಗ್, ಬ್ರೂನೈ ಮತ್ತು ಟೆಬುರಾಂಗ್ ನದಿಗಳು ಎಲ್ಲವೂ ಉತ್ತರದಿಕ್ಕಿಗೆ ಹರಿದು ದಕ್ಷಿಣ ಚೀನ ಸಮುದ್ರವನ್ನು ಸೇರುತ್ತದೆ.

ರಾಜ್ಯ ಉಷ್ಣವಲಯದಲ್ಲಿದ್ದು ಸರಾಸರಿ ಉಷ್ಣತೆ 240 ಸೆ. ನಿಂದ 300 ಸೆ. ನಡುವೆ ಇರುತ್ತದೆ. ನವೆಂಬರ್ ಮತ್ತು ಮಾರ್ಚ್‍ಗಳ ನಡುವೆ ಬೀಸುವ ಈಶಾನ್ಯ ಮಾನ್‍ಸೂನ್ ಮಾರುತಗಳಿಂದ ಬಹುಪಾಲು ಮಳೆ ಆಗುತ್ತದೆ. ಜೂನ್ ಮತ್ತು ಆಗಸ್ಟ್‍ಗಳ ನಡುವೆ ಬೀಸುವ ನೈಋತ್ಯ ಮಾನ್‍ಸೂನ್ ಮಾರುತಗಳು ಒಣಹವೆಯಿಂದ ಕೂಡಿರುತ್ತವೆ. ರಾಜ್ಯದ ಸುಮಾರು ಮುಕ್ಕಾಲು ಭಾಗ ಉಷ್ಣವಲಯದ ಕಾಡುಗಳಿಂದ ಕೂಡಿದ್ದು ಅನೇಕ ಕಡೆ ಮನುಷ್ಯ ಪ್ರವೇಶ ಅಸಾಧ್ಯವೆನಿಸುವಷ್ಟು ದಟ್ಟವಾಗಿವೆ. ಈ ಕಾಡುಗಳಲ್ಲಿ ಗಟ್ಟಿಯಾದ ಚೌಬೀನೆ ಮರಗಳು ಹೆಚ್ಚಾಗಿವೆ. ಸಮುದ್ರತೀರದುದ್ದಕ್ಕೂ ಮರಳು ಭೂಮಿಯಲ್ಲಿ ಕ್ಯಾಸರಿನಾ ಅಥವಾ ಸರ್ವೆಮರಗಳು ಬೆಳೆಯುತ್ತವೆ. ಪಶ್ಚಿಮ ಬ್ರೂನೈನಲ್ಲಿರುವ ಮುವಾರಾ ಪಟ್ಟಣ ಹಾಗೂ ಬೆಲಾಯಿಟ್ ಮತ್ತು ಟುಟೋಂಗ್ ನದಿಗಳ ಮೇಲ್ಭಾಗದಲ್ಲಿ ಮ್ಯಾಂಗ್ರೋವ್ ಮತ್ತು ಸಸ್ಯಾಂಗಾರಗಳಿಂದ ಕೂಡಿದ ಜೌಗುಪ್ರದೇಶವಿದೆ. ಕಾಡುಗಳಲ್ಲಿ ಹುಲಿ, ಕೋತಿ ಮೊದಲಾದ ಪ್ರಾಣಿಗಳೂ ಅನೇಕ ರೀತಿಯ ಪಕ್ಷಿಗಳೂ ಇವೆ. ಇತ್ತೀಚೆಗೆ ಶೇಕಡಾ 20ರಷ್ಟು ಕಾಡನ್ನು ಕಡಿದು ಸ್ಥಳೀಯ ಜನರ ಬೇಸಾಯಕ್ಕೆ ಅನುವು ಮಾಡಲಾಗಿದೆ. ಇಲ್ಲಿಯ ಪ್ರಮುಖ ಉತ್ಪನ್ನಗಳು ಬತ್ತ, ಮೆಣಸು, ಸೀಮೆ ಅಕ್ಕಿ, ತೆಂಗು, ಹಣ್ಣುಗಳು ಮತ್ತು ರಬ್ಬರ್. ತೀರ ಪ್ರದೇಶದಲ್ಲಿ ಬೇಸಾಯದ ಜೊತೆಗೆ ಮೀನುಗಾರಿಕೆಯೂ ನಡೆಯುತ್ತದೆ. ಇಲ್ಲಿ ಬೇಸಾಯದ ಉತ್ಪನ್ನ ಕಡಿಮೆ.

ಆಗ್ನೇಯ ಏಷ್ಯದ ಅನೇಕ ಜನಾಂಗಗಳ ಜನರು ಇಲ್ಲಿ ವಾಸಿಸುತ್ತಾರೆ. ಇದರಲ್ಲಿ ಶೇಕಡಾ ಸುಮಾರು 50ರಷ್ಟು ಮಲಯನ್ನರು, 28ರಷ್ಟು ಚೀನೀಯರು. 16ರಷ್ಟು ಇಬಾನ್ ಅಥವಾ ಕಡಾಜನ್ ಮತ್ತು 5ರಷ್ಟು ಇಂಡಿಯನ್ನರು ಅಥವಾ ಯೂರೊಪಿಯನ್ನರು ಇದ್ದಾರೆ. ಹೆಚ್ಚು ಮಂದಿ ಮುಸ್ಲಿಮರಿದ್ದು ಒಳಭಾಗದ ಪ್ರದೇಶಗಳಲ್ಲಿ ಇಂದಿಗೂ ಭೂತಾರಾಧಕರು ಇದ್ದಾರೆ. ಸ್ಥಳೀಯ ಕ್ರೈಸ್ತರಿದ್ದಾರೆ. ಚೀನೀಯರಲ್ಲಿ ಸಾಮಾನ್ಯವಾಗಿ ಬೌದ್ಧರು ಅಥವಾ ಟಾವೊ ಮತಸ್ಥರಿದ್ದಾರೆ. ಜನಸಂಖ್ಯೆಯ ವಾರ್ಷಿಕ ಹೆಚ್ಚಳ ಶೇಕಡಾ 16ರಷ್ಟಿದ್ದು ಇದರಲ್ಲಿ ಬಹುಭಾಗ ಹೊರಗಿನಿಂದ ವಲಸೆ ಬಂದವರಾಗಿದ್ದಾರೆ. ವಲಸೆ ಬರುವವರಲ್ಲಿ ಹೆಚ್ಚಿನವರು ಮಲೇಷ್ಯಾದ ಚೀನೀಯರು, ಮಲಯನ್ನರು, ಡಾಯಕರು ಹಾಗೂ ಸಿಂಗಪುರ ಮತ್ತು ಇಂಗ್ಲೆಂಡಿನಿಂದ ಬರುವ ಜನರು.

ಇಲ್ಲಿಯ ಜನರಲ್ಲಿ ಹೆಚ್ಚು ಭಾಗ ಸೆರಿಯಾ ಹಾಗೂ ಕುವಾಲಾ ಜಿಲಾಯಿಟ್‍ನಲ್ಲಿರುವ ತೈಲಬಾವಿಗಳ ಬಳಿ ವಾಸಿಸುತ್ತಾರೆ. ಪಟ್ಟಣವಾಸಿಗಳಲ್ಲಿ ಬಹುಪಾಲು ಜನ ರಾಜಧಾನಿಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನ ಎತ್ತರಿಸಿದ ಸ್ಥಳಗಳಲ್ಲಿ ಕಟ್ಟಲಾದ ಹುಲ್ಲು ಚಾವಣಿಯಿರುವ ಮರ ಅಥವಾ ಬೊಂಬಿನ ಮನೆಯಲ್ಲಿ ವಾಸಿಸುತ್ತಾರೆ. ನಗರದಲ್ಲಿ ಆಧುನಿಕ ಕಟ್ಟಡಗಳೂ ಅಪಾರ್ಟ್‍ಮೆಂಟ್‍ಗಳೂ ಹೋಟೆಲುಗಳೂ ವ್ಯಾಪಾರ ಕೇಂದ್ರಗಳೂ ಇವೆ. ನಗರದ ಆಧುನಿಕ ಭಾಗದ ಜೊತೆಯಲ್ಲಿಯೇ ಕಾಂಪೋಂಗ್ ಆಯೆರ್ ಎಂಬ ಹಳೆಯ ಭಾಗದಲ್ಲಿ ನದಿಯ ಉದ್ದಕ್ಕೂ ಎತ್ತರಿಸಿದ ಸ್ಥಳಗಳಲ್ಲಿ ಕಟ್ಟಲಾಗಿರುವ ಚಿಕ್ಕ ಚಿಕ್ಕ ಮನೆಗಳಲ್ಲಿ 10,000ಕ್ಕೂ ಹೆಚ್ಚು ಬ್ರೂನೈ ಮಲಯನ್ನರು ವಾಸಿಸುತ್ತಾರೆ. ಈ ಮನೆಗಳು ಕಾಲ್ನಡೆಯ ಸೇತುವೆಗಳು ಮತ್ತು ಸಣ್ಣ ಕೋಣೆಗಳ ಮೂಲಕ ಪರಸ್ಪರ ಸಂಪರ್ಕ ಪಡೆದಿವೆ.

ಸಮೃದ್ಧ ತೈಲನಿಕ್ಷೇಪವೇ ಬ್ರೂನೈದ ಆರ್ಥಿಕ ಪ್ರಗತಿಯ ಬೆನ್ನೆಲುಬಾಗಿದೆ. ರಾಜ್ಯದ ಆದಾಯದ ಪ್ರಮುಖ ಮೂಲಗಳು ತೈಲ ಗ್ಯಾಸೊಲಿನ್ ಮೇಲಿನ ತೆರಿಗೆಗಳು, ತೈಲದ ಮೇಲಿನ ರಾಜಾದಾಯ ಮತ್ತು ವಿದೇಶಗಳಲ್ಲಿ ಬಂಡವಾಳ ತೊಡಗಿಸುವಿಕೆ. 1929ರಲ್ಲಿ ತೈಲನಿಕ್ಷೇಪವನ್ನು ಕಂಡುಹಿಡಿಯಲಾಗಿದ್ದು ಭೂಮಿಯ ಮೇಲಿನ ಹಾಗೂ ಸಮುದ್ರದಲ್ಲಿಯ ತೈಲಬಾವಿಗಳಲ್ಲಿ 1971ರಲ್ಲಿ ದಿನಕ್ಕೆ ಸುಮಾರು ಎರಡುಲಕ್ಷ ಬ್ಯಾರಲ್ಲುಗಳಷ್ಟು ತೈಲ ಉತ್ಪಾದಿಸಲಾಗುತ್ತಿತ್ತು. ಕಚ್ಚಾತೈಲವನ್ನು ಕೊಳವೆಗಳ ಮೂಲಕ ಸಾರವಾಕ್‍ನಲ್ಲಿಯ ಲಟೋಂಗ್ ತೈಲ ಶುದ್ಧೀಕರಣ ಕೇಂದ್ರಕ್ಕೆ ಒಯ್ಯಲಾಗುತ್ತದೆ. ಇಲ್ಲಿ ತೈಲನಿಕ್ಷೇಪಗಳ ಶೋಧನೆ ನಡೆಯುತ್ತಲಿದ್ದು ಇಲ್ಲಿರುವ ಒಟ್ಟು ತೈಲನಿಕ್ಷೇಪವೆಷ್ಟೆಂಬುದು ಇನ್ನೂ ನಿರ್ಧಾರವಾಗಿಲ್ಲ. ತೈಲದ ರಫ್ತಿನಿಂದ ಬರುವ ಆದಾಯ ದೇಶದ ಒಟ್ಟು ರಫ್ತಿನ ಆದಾಯದ ಶೇಕಡಾ 99ರಷ್ಟಿದೆ. ಇನ್ನುಳಿದುದು ಶೇಕಡಾ 1ರಷ್ಟು ರಫ್ತಾಗುವ ರಬ್ಬರ್, ಮೆಣಸು, ಮರ, ಕಾರ್ಕ್, ಮೊದಲಾದವುಗಳಿಂದ ಲಭ್ಯ. ಇತರ ಬೇಸಾಯದ ಉತ್ಪನ್ನಗಳಾದ ಬತ್ತ, ಸೀಮೆಅಕ್ಕಿ ಮತ್ತು ಹಣ್ಣುಗಳು ಬಹಳ ಸಣ್ಣ ಪ್ರಮಾಣದಲ್ಲಿದ್ದು ಸ್ಥಳೀಯ ಬೇಡಿಕೆಯನ್ನೇ ಪೂರೈಸಲಾರವು.

ಬ್ರೂನೈ ತೀವ್ರವಾಗಿ ಅಭಿವೃದ್ಧಿ ಹೊಂದುತ್ತಲಿರುವ ರಾಜ್ಯವಾಗಿದ್ದು 1974ರಲ್ಲಿ ಜನರ ಆರ್ಥಿಕ ಸಾಮಾಜಿಕ ಜೀವನವನ್ನು ಉತ್ತಮಪಡಿಸಲು ಮೂರನೆಯ ಪಂಚವಾರ್ಷಿಕ ರಾಷ್ಟ್ರೀಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು. ತರಬೇತಾದ ಕಾರ್ಮಿಕ ವರ್ಗದ ಕೊರತೆಯಿಂದಾಗಿ ಇಲ್ಲಿಯ ಅಭಿವೃದ್ಧಿ ಸಲ್ಪಮಟ್ಟಿಗೆ ಕುಂಠಿತವಾಗಿದೆ.

ರಸ್ತೆಸಾರಿಗೆ ಹೆಚ್ಚು ಅಭಿವೃದ್ಧಿಯಾಗಿಲ್ಲ. ರಾಜ್ಯದಲ್ಲಿ ಒಟ್ಟು ರಸ್ತೆಗಳ ಉದ್ದ ಕೇವಲ 125 ಕಿಮೀಗಳು. ರಾಜಧಾನಿಯಿಂದ ತೈಲೋತ್ಪಾದನ ಪ್ರದೇಶಗಳಾದ ಸೆರಿಯಾ ಹಾಗೂ ಕುವಾಲಾ ಜಿಲಾಯಿಟ್‍ಗಳಿಗೆ ಪ್ರಮುಖ ಹೆದ್ದಾರಿ ಇವೆ. ಒಳನಾಡಿನಲ್ಲಿ ನದಿಗಳೇ ಪ್ರಮುಖ ಸಂಪರ್ಕ ಸಾಧನ. ಬಂದಾರ್ ಸೆರಿ ಬೆಗಾವನ್ ಮತ್ತು ಕುವಾಲ ಜಿಲಾಯಿಟ್‍ಗಳಲ್ಲಿ ಸರಕು ಕಟ್ಟೆಗಳಿಂದ ಕೂಡಿದ ಬಂದರುಗಳಿವೆ. ಇಲ್ಲಿಂದ ಅನೇಕ ಕಡೆಗಳಿಗೆ ಪ್ರಯಾಣಿಕರ ದೋಣಿ ಸಂಚಾರವಿದೆ. ರಾಜಧಾನಿಯಲ್ಲಿ ವಿಮಾನ ನಿಲ್ದಾಣವಿದ್ದು ಇತರ ಅನೇಕ ಕಡೆಗಳಲ್ಲಿ ಅನುಕೂಲವಾದ ಹೆಲಿಕಾಪ್ಟರ್ ತಾಣಗಳಿವೆ. ಇಲ್ಲಿಂದ ಸಾರವಾಕ್, ಸಾಬಾ, ಮಲೇಷ್ಯಾ, ಸಿಂಗಪುರ, ಹಾಂಗ್‍ಕಾಂಗ್, ಇಂಗ್ಲೆಂಡ್, ಮನಿಲಾಗಳಿಗೆ ವಿಮಾನ ಸೌಕರ್ಯವಿದೆ. ಅಂತರಿಕ ವಿಮಾನ ಸಂಚಾರವ್ಯವಸ್ಥೆ ರಕ್ಷಣಾ ಇಲಾಖೆಯ ಅಧೀನದಲ್ಲಿದೆ.

1959 ಸೆಪ್ಟೆಂಬರ್ 29ರಂದು ಸುಲ್ತಾನನಿಂದ ಜಾರಿಗೆ ತರಲ್ಪಟ್ಟ ಸಂವಿಧಾನದಂತೆ ರಾಜ್ಯದಲ್ಲಿ ಆಪ್ತಮಂತ್ರಿಮಂಡಲ, ಕಾರ್ಯಾಂಗ ಮತ್ತು ಶಾಸಕಾಂಗಗಳಿವೆ. 1965 ಜನವರಿ 6ರಂದು ಮಾಡಲಾದ ತಿದ್ದುಪಡಿಯಿಂದ ಶಾಸಕಾಂಗಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಲು ಅವಕಾಶ ನೀಡಲಾಯಿತು. ಎಕ್ಸಿಕ್ಯೂಟಿವ್ ಕೌನ್ಸಿಲ್‍ಗೆ ಮಂತ್ರಿಮಂಡಲ ಎಂದು ಹೆಸರಿಡಲಾಯಿತು. ಶಾಸಕಾಂಗದಲ್ಲಿ 20 ಸದಸ್ಯರಿದ್ದು ಸುಲ್ತಾನದಿಂದ ನೇಮಿಸಲ್ಟಟ್ಟ ಸಭಾಪತಿಯಿರುತ್ತಾನೆ. ಮಂತ್ರಿ ಬೇಸರ್ ರಾಜ್ಯದ ಆಡಳಿತ ನಿರ್ವಹಣೆ ನಡೆಸುತ್ತಾನೆ ಮತ್ತು ಸುಲ್ತಾನನಿಗೆ ಜವಾಬ್ದಾರನಾಗಿರುತ್ತಾನೆ. ಚುನಾವಣೆ 5 ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದು 1970ರಿಂದೀಚೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಬ್ರೂನೈ 1971 ನವೆಂಬರಿನಲ್ಲಿ ಬ್ರಿಟನ್ನಿನೊಡನೆ ಹೊಸ ಒಪ್ಪಂದ ಮಾಡಿಕೊಂಡಿತು. ಬ್ರಿಟಿಷರ ರಕ್ಷಣೆಯಲ್ಲಿದ್ದ ಬ್ರೂನೈ 1978ರಲ್ಲಿ ಮತ್ತೊಂದು ಹೊಸ ಒಪ್ಪಂದ ಮಾಡಿಕೊಂಡಿತು.

ಇತಿಹಾಸ : 16ನೆಯ ಶತಮಾನದ ಮೊದಲ ಭಾಗದಲ್ಲಿ ಬ್ಯೂನೈ ಶಕ್ತಿಯುತವೂ ಪ್ರಭಾವಶಾಲಿಯೂ ಆಗಿದ್ದು ಅದರ ವ್ಯಾಪ್ತಿ ಬೊರ್ನಿಯೋ ದ್ವೀಪದ ಪೂರ್ತಾ ಮತ್ತು ಸುಲುದ್ವೀಪ ಹಾಗೂ ಫಿಲಿಪೀನ್ಸಿನ ಕೆಲವು ಭಾಗಗಳಿಗೆ ವಿಸ್ತರಿಸಿತ್ತು. 49ನೆಯ ಶತಮಾನದಲ್ಲಿ ಕಡಲ್ಗಳ್ಳರ ಹಾವಳಿ ಮತ್ತು ಅನಾಯಕತ್ವವನ್ನು ಎದುರಿಸಲು ಬೋರ್ನಿಯೋ ಸುಲ್ತಾನ ಗ್ರೇಟ್ ಬ್ರಿಟನ್ ಮತ್ತು ಸಾರವಾಕ್‍ನ ದೊರೆಗೆ ಹಾಗೂ ಬ್ರಿಟಿಷ್ ಸಾರ್ತ ಬೋರ್ನಿಯೋ ಕಂಪನಿಗಳಿಗೆ ರಾಜ್ಯದ ಅನೇಕ ಭಾಗಗಳನ್ನು ಬಿಟ್ಟುಕೊಡಬೇಕಾಯಿತು. 1847ರಲ್ಲಿ ಬ್ರೂನೈದ ಸುಲ್ತಾನ ಗ್ರೇಟ್ ಬ್ರಿಟನ್ನಿನೊಡನೆ ವ್ಯಾಪಾರ ಸಂಬಂಧ ಅಭಿವೃದ್ಧಿಪಡಿಸಲು ಮತ್ತು ಕಡಲ್ಗಳ್ಳರ ಹಾವಳಿ ತಡೆಗಟ್ಟಲು ಒಂದು ಒಪ್ಪಂದಮಾಡಿಕೊಂಡ. 1888ರಲ್ಲಿ ಆದ ಮತ್ತೊಂದು ಒಪ್ಪಂದ ಪ್ರಕಾರ ರಾಜ್ಯ ಬ್ರಿಟಿಷ್ ರಕ್ಷಣೆಗೊಳಪಟ್ಟಿತು. 19ನೆಯ ಶತಮಾನದ ಮಧ್ಯಭಾಗದ ವೇಳೆಗೆ ರಾಜ್ಯ ಈಗಿನ ಸ್ಥಿತಿಗೆ ಬಂದು ಮುಟ್ಟಿತು.

1963 ಮಲೇಷ್ಯಾ ಒಕ್ಕೂಟ ಏರ್ಪಟ್ಟಾಗ ಇಲ್ಲಿ ಮಲಯನ್ನರು ವಾಸವಿದ್ದರೂ ಅದಕ್ಕೆ ಸೇರಲು ನಿರಾಕರಿಸಿದರು. (ಜೆ.ಎಸ್.ಎಸ್)