ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಜಾತಶತ್ರು

ವಿಕಿಸೋರ್ಸ್ದಿಂದ

ಅಜಾತಶತ್ರು

 (ಕ್ರಿ.ಪೂ. 500-470) ಬಿಂಬಸಾರನ ಮಗ. ಕ್ರಿ.ಪೂ. 6ನೆಯ ಶತಮಾನದಲ್ಲಿ ಮಗಧ ಸಿಂಹಾಸನವನ್ನೇರಿದ ಶಿಶುನಾಗನ ವಂಶದವನು. ಇವನ ಆಳ್ವಿಕೆಯ ಘಟನೆಗಳನ್ನು ತಿಳಿಯಲು ಪುರಾಣಗಳೂ ಜೈನ ಹಾಗೂ ಬೌದ್ಧ ಮತಗ್ರಂಥಗಳೂ ಸಹಕಾರಿಯಾಗಿವೆ. ಜೈನಗ್ರಂಥಗಳ ಪ್ರಕಾರ ಅಜಾತಶತ್ರು ತಂದೆಯಾದ ಬಿಂಬಸಾರನನ್ನು ಸೆರೆಯಲ್ಲಿಟ್ಟು ಸಿಂಹಾಸನವನ್ನು ಆಕ್ರಮಿಸಿದನೆಂದೂ, ಬೌದ್ಧ ಗ್ರಂಥಗಳ ಪ್ರಕಾರ ತಂದೆಯನ್ನು ಸಂಹರಿಸಿ ರಾಜನಾದನೆಂದೂ ತಿಳಿದು ಬರುತ್ತದೆ. ಅಲ್ಲದೆ ತನ್ನ ಈ ತಪ್ಪಿಗಾಗಿ ಬುದ್ಧನಲ್ಲಿ ಕ್ಷಮೆ ಯಾಚಿಸಿದನೆಂದೂ ಪ್ರತೀತಿ.

 ಪರಾಕ್ರಮಿಯಾದ ಅಜಾತಶತ್ರು, ಮಗಧ ರಾಜ್ಯವನ್ನು ವಿಸ್ತರಿಸಿದ. ಕೋಸಲಾಧಿಪತಿಯಾದ ಪ್ರಸೇನಜಿತನನ್ನು ಸೋಲಿಸಿ ಕಾಶಿಯನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಲಿಚ್ಛವಿ, ವಿಜ್ಜಿ ಮುಂತಾದ ಗಣರಾಜ್ಯಗಳನ್ನು ಸೋಲಿಸಿದ. ವೈಶಾಲಿ ರಾಜ್ಯದ ಮೇಲೆ ಯುದ್ಧ ಹೂಡಿ ವಶಪಡಿಸಿಕೊಂಡ. ಅಲ್ಲದೆ ಸೌವೀರ, ವತ್ಸ್ಯ ಮತ್ತು ಆವಂತಿ ರಾಜ್ಯಗಳೊಡನೆ ವೈವಾಹಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನೇರ್ಪಡಿಸಿಕೊಂಡು ಮಗಧ ರಾಜ್ಯದ ಪ್ರಭಾವವನ್ನು ದ್ವಿಗುಣಗೊಳಿಸಿದ. ಈತನ ಪೂರ್ವಿಕರ ಕಾಲದಲ್ಲಿ ರಾಜಗೃಹ ಮಗಧ ರಾಜ್ಯದ ರಾಜಧಾನಿಯಾಗಿತ್ತು. ಅಜಾತಶತ್ರು ಇತಿಹಾಸಪ್ರಸಿದ್ಧವಾದ ಪಾಟಲೀಪುತ್ರ ನಗರವನ್ನು ಕಟ್ಟಿ, ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಬುದ್ಧದೇವನ ಹೆಸರನ್ನಿಟ್ಟ. ಕ್ರಿ.ಪೂ. 2ನೆಯ ಶತಮಾನದಲ್ಲಿ ಬಾರಹಟ್‍ನ ಚಿತ್ರಕಲೆಯಲ್ಲಿ ಅಜಾತಶತ್ರು ಬುದ್ಧನನ್ನು ಸ್ವಾಗತಿಸುವ ಚಿತ್ರವಿದೆ. ಬುದ್ಧನ ನಿರ್ವಾಣಾನಂತರ ಪಾಟಲೀಪುತ್ರದಲ್ಲಿ ಸಮಾವೇವಾಗಿದ್ದ ಬೌದ್ಧ ಮಹಾಸಮ್ಮೇಳನದಲ್ಲಿ ಬೌದ್ಧಭಿಕ್ಷುಗಳಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಟ್ಟ. ಇವನ ಅನಂತರ ಮಗನಾದ ಉದಯನ ಮಗಧರಾಜ್ಯದ ಚಕ್ರವರ್ತಿಯಾದ.       

 (ಜಿ.ಆರ್.ಆರ್.)