ಪಂಪಭಾರತ ಅಷ್ಠಮಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ಅಷ್ಠಮಾಶ್ವಾಸಂ[ಸಂಪಾದಿಸಿ]

  • (XV.IV.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಅರ್ಜುನ ಶಿವನಿಂದ ಪಾಶುಪತಾಸ್ತ್ರ ಪಡೆದುದು
ಕಂ|| ಶ್ರೀಯಂ ಭುಜಬಳದಿಂ ನಿ
ರ್ದಾಯಾದ್ಯಂ ಮಾೞ್ಪ ಬಗೆಯಿನವಿಕಳನಿಯಮ|
ಶ್ರೀಯನಳವಡಿಸಿ ನಿಂದ ಧ
ರಾಯುವತೀಶನನುದಾತ್ತನಾರಾಯಣನಂ|| ೧ ||
ಪದ್ಯ-೦೧:ಪದವಿಭಾಗ-ಅರ್ಥ:ಶ್ರೀಯಂ (ರಾಜ್ಯಲಕ್ಷ್ಮಿಯನ್ನು) ಭುಜಬಳದಿಂ ನಿರ್ದಾಯಾದ್ಯಂ ಮಾೞ್ಪ ಬಗೆಯಿಂ (ತನ್ನ ಬಾಹುಬಲದಿಂದ ರಾಜ್ಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಆಸೆಯಿಂದ) ಅವಿಕಳ ನಿಯಮಶ್ರೀಯಂ ಅಳವಡಿಸಿ (ಸ್ವಲ್ಪವೂ ದೋಷವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯನ್ನು ಕೂಡಿಕೊಂಡು) ನಿಂದ ಧರಾಯುವತಿ ಈಶನನು (ಭೂಮಿಪತಿಯನ್ನು ಅಂದರೆ) ಉದಾತ್ತನಾರಾಯಣನಂ (ಅರ್ಜುನನ್ನು-)
ಪದ್ಯ-೧:ಅರ್ಥ:ತನ್ನ ಬಾಹುಬಲದಿಂದ ರಾಜ್ಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಆಸೆಯಿಂದ ಸ್ವಲ್ಪವೂ ದೋಷವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯನ್ನು ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು- (ಇಂದ್ರನು ಕಂಡನು).
ಕಂಡು ನಿಜತನಯನಳವೆರ್ದೆ
ಗೊಂಡಿರೆ ಮುದುಪಾರ್ವನಾಗಿ ಮೆಲ್ಲನೆ ಸಾರ್ವಾ|
ಖಂಡಳನಂ ಕಾಣಲೊಡಂ
ಗಾಂಡಿವಿಗಿರದುರ್ಚಿ ಪಾಯ್ದುವಶ್ರುಜಲಂಗಳ್|| ೨ ||
ಪದ್ಯ-೨:ಪದವಿಭಾಗ-ಅರ್ಥ:ಕಂಡು ನಿಜ ತನಯನ ಅಳವು ಎರ್ದೆಗೊಂಡಿರೆ (ತನ್ನ ಮಗನ ಪರಾಕ್ರಮವನ್ನು ನೋಡಿ ಇಂದ್ರನ ಎದೆಯು ಮೆಚ್ಚಿಕೊಂಡಿತು) ಮುದುಪಾರ್ವನಾಗಿ (ಮುದಿಬ್ರಾಹ್ಮಣನ ವೇಷದಲ್ಲಿ) ಮೆಲ್ಲನೆ ಸಾರ್ವಾ ಖಂಡಳನಂ ಕಾಣಲು (ಬರುತ್ತಿದ್ದ ಇಂದ್ರನನ್ನು ನೋಡಲು) ಒಡಂ ಗಾಂಡಿವಿಗೆ ಇರದುರ್ಚಿ(ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿ) ಪಾಯ್ದುವಶ್ರುಜಲಂಗಳ್(ಕಣ್ಣೀರು)
ಪದ್ಯ-೨:ಅರ್ಥ: ೨. ತನ್ನ ಮಗನ ಪರಾಕ್ರಮವನ್ನು ನೋಡಿ ಇಂದ್ರನ ಎದೆಯು ಮೆಚ್ಚಿಕೊಂಡಿತು. ಮುದಿಬ್ರಾಹ್ಮಣನ ವೇಷದಲ್ಲಿ ಬರುತ್ತಿದ್ದ ಇಂದ್ರನನ್ನು ನೋಡಲು ಅರ್ಜುನನಿಗೆ ಕಣ್ಣೀರು ಥಟ್ಟನೆ ಚಿಮ್ಮಿತು.
ವ|| ಅಂತು ಮನದೊಳಾದ ಮೋಹರಸಮೆ ಕಣ್ಣಿಂ ತುಳುಂಕುವಂತೆ ಪೊಱಪೊಣ್ಮುವ ನಯನಜಲಂಗಳನುತ್ತರೀಯವಲ್ಕಲವಸ ನೋಪಾಂತದೊಳೊತ್ತುತ್ತುಮತಿಥಿಗತಿಥಿಸತ್ಕಾರಮೆಲ್ಲಮಂ ನೆಯೆ ಮಾಡಿದಾಗಳಿಂದ್ರಂನರೇಂದ್ರತಾಪಸನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಮನದೊಳು ಆದ ಮೋಹರಸಮೆ (ಹಾಗೆ ಮನಸ್ಸಿನಲ್ಲುಂಟಾದ ಪ್ರೀತಿರಸವೇ) ಕಣ್ಣಿಂ ತುಳುಂಕುವಂತೆ ಪೊಱಪೊಣ್ಮುವ (ಹೊರಹೊಮ್ಮುವ) ನಯನಜಲಂಗಳನು (ಕಣ್ಣೀರನ್ನು) ಉತ್ತರೀಯ ವಲ್ಕಲವಸನ ಉಪಾಂತದೊಳು ಒತ್ತುತ್ತಂ (ಕಣ್ಣೀರನ್ನು ಮೇಲೆ ಹೊದೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ) ಅತಿಥಿಗೆ ಅತಿಥಿಸತ್ಕಾರಮೆಲ್ಲಮಂ ನೆಯೆ (ಅತಿಥಿ ಸತ್ಕಾರವೆಲ್ಲವನ್ನೂ ಮಾಡಿದಾಗ) ಮಾಡಿದಾಗಳ್ ಇಂದ್ರಂ ನರೇಂದ್ರ ತಾಪಸನನು ಇಂತೆಂದಂ(ಇಂದ್ರನು ರಾಜ ತಪಸ್ವಿಯನ್ನು ಕುರಿತು ಹೀಗೆ ಹೇಳಿದನು.)
ವಚನ:ಅರ್ಥ:ವ|| ಹಾಗೆ ಮನಸ್ಸಿನಲ್ಲುಂಟಾದ ಪ್ರೀತಿರಸವೇ ಕಣ್ಣಿನಿಂದ ತುಳುಕುವಂತೆ ಹೊರಹೊಮ್ಮುವ ಕಣ್ಣೀರನ್ನು ಮೇಲೆ ಹೊದೆದಿದ್ದ ನಾರುಮಡಿಯ ಅಂಚಿನಿಂದ ಒರೆಸಿಕೊಳ್ಳುತ್ತ ಅತಿಥಿಯಾದ ಇಂದ್ರನಿಗೆ ಅತಿಥಿ ಸತ್ಕಾರವೆಲ್ಲವನ್ನೂ ಮಾಡಿದಾಗ ಇಂದ್ರನು ರಾಜ ತಪಸ್ವಿಯನ್ನು ಕುರಿತು ಹೀಗೆ ಹೇಳಿದನು.
ಕಂ|| ನೀನಾರ್ಗೆ ನಿನ್ನ ಪೆಸರೇ
ನೀ ನಿಯಮಕ್ಕೆಂತು ಮೆಯ್ಯನೊಡ್ಡಿದೆಯಿದು ದಲ್|
ತಾನಾಶ್ಚರ್ಯಮಿದೇನ
ಜ್ಞಾನಿಯವೋಲ್ ತಪಕೆ ಬಿಲ್ಲುಮಂಬುಂ ದೊರೆಯೇ|| ೩ ||
ಪದ್ಯ-೦೩:ಪದವಿಭಾಗ-ಅರ್ಥ:ನೀನಾರ್ಗೆ ನಿನ್ನ ಪೆಸರೇನು ಈ ನಿಯಮಕ್ಕೆಂತು ಮೆಯ್ಯನು ಒಡ್ಡಿದೆ (ನೀನು ಯಾರು? ನಿನ್ನ ಹೆಸರೇನು? ಈ ನಿಯಮಕ್ಕೆ ಶರೀರವನ್ನು ಏಕೆ ಒಡ್ಡಿದೆ) ಯಿದು ದಲ್ ತಾನಾಶ್ಚರ್ಯಂ (ಇದು ದಲ್-ನಿಜವಾಗಿಯೂ ತನಗೆ ಆಶ್ಚರ್ಯ.) ಇದೇನು ಅಜ್ಞಾನಿಯವೋಲ್ ತಪಕೆ ಬಿಲ್ಲುಂ ಅಂಬುಂ ದೊರೆಯೇ (ಬಿಲ್ಲು ಬಾಣಗಳು ಅಗತ್ತ್ಯವೇ?)
ಪದ್ಯ-೩:ಅರ್ಥ: ನೀನು ಯಾರು? ನಿನ್ನ ಹೆಸರೇನು? ಈ ನಿಯಮಕ್ಕೆ ಶರೀರವನ್ನು ಏಕೆ ಒಡ್ಡಿದೆ. ಇದು ನಿಜವಾಗಿಯೂ ತನಗೆ ಆಶ್ಚರ್ಯ. ಅಜ್ಞಾನಿಯ ಹಾಗೆ ಇದೇನು ತಪಸ್ಸಿಗೆ ಯೋಗ್ಯವಲ್ಲದ ಬಿಲ್ಲು ಬಾಣಗಳು ಅಗತ್ತ್ಯವೇ? ಎಂದನು ಇಂದ್ರ.
ವ||ಎನೆ ಸಾಹಸಾಭರಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ ಸಾಹಸಾಭರಣನು (ಅರ್ಜುನನು)ಇಂತು ಎಂದಂ-
ವಚನ:ಅರ್ಥ:ಎನ್ನಲು ಸಾಹಸಾಭರಣನಾದ ಅರ್ಜುನನು ಹೀಗೆಂದನು.
ಕಂ|| ನಿನ್ನೆಂದಂತುಟೆ ಮೋಕ್ಷ
ಕ್ಕೆನ್ನಿರ್ಪಿರವಘಟಮಾನವೈಹಿಕದ ತೊಡ|
ರ್ಪೆನ್ನಿರವಿನೊಳುಂಟಱಿಪದೆ
ನಿನ್ನಂ ಪುಸಿಯಾಡಿ ಕಾಡೆನಗೇಂ ದೊರೆಯೇ|| ೪||
ಪದ್ಯ-೪:ಪದವಿಭಾಗ-ಅರ್ಥ:ನಿನ್ನೆಂದಂತುಟೆ (ನೀನು ಹೇಳಿದ ಹಾಗೆಯೇ) ಮೋಕ್ಷಕ್ಕೆ ಎನ್ನಿರ್ಪಿರವು ಅಘಟಮಾನಂ (ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ) ಐಹಿಕದ ತೊಡರ್ಪು ಎನ್ನಿರವಿನೊಳುಂಟು ಅಱಿಪದೆ ನಿನ್ನಂ ಪುಸಿಯಾಡಿ ಕಾಡೆ ಎನಗೇಂ ದೊರೆಯೇ (ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವೇ? ಅಲ್ಲ.)
ಪದ್ಯ-೪:ಅರ್ಥ:ನೀನು ಹೇಳಿದ ಹಾಗೆಯೇ ನನ್ನ ಸ್ಥಿತಿ ಮೋಕ್ಷಸಾಧನೆಗೆ ಹೊಂದಿಕೊಳ್ಳತಕ್ಕುದಲ್ಲ; ಇದು ಇಹಲೋಕದ ಬಂಧನಕ್ಕೊಳಗಾದುದು. ಅದನ್ನು ಹೇಳದೆ ಸುಳ್ಳು ಹೇಳಿ ನಿಮ್ಮನ್ನು ಕಾಡುವುದು ನನಗೆ ಯೋಗ್ಯವೇ? ಅಲ್ಲ.
ಮ|| ನಿನಗಂ ಪೇೞ್ವೊಡೆ ಪಾಂಡುರಾಜತನಯಂ ಗಾಂಡೀವಿಯೆಂ ದಾಯಿಗಂ
ಗೆ ನೆಲಂ ಜೂದಿನೊಳೊತ್ತೆವೋಗೆ ಬನಮಂ ಪೊಕ್ಕಣ್ಣನೆಂದೊಂದು ಮಾ|
ತನಣಂ ಮೀಱದೆ ನಿಂದು ಶಂಕರನ ನೀನಾರಾಧಿಸೆಂದಿಂತಿದಂ
ಮುನಿ ಪಾರಾಶರನೊಲ್ದು ಪೇೞೆ ಹರ ಬರ್ಪನ್ನಂ ತಪಂಗೆಯ್ದಪೆಂ|| ೫||
ಪದ್ಯ-೫:ಪದವಿಭಾಗ-ಅರ್ಥ:ನಿನಗಂ ಪೇೞ್ವೊಡೆ ಪಾಂಡುರಾಜತನಯಂ ಗಾಂಡೀವಿಯೆಂ (ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯು.) ದಾಯಿಗಂಗೆ ನೆಲಂ ಜೂದಿನೊಳು ಒತ್ತೆವೋಗೆ ಬನಮಂ ಪೊಕ್ಕ (ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ವನವಾಸಕ್ಕೆ ಹೋದ) ಅಣ್ಣನೆಂದ ಒಂದು ಮಾತನು ಅಣಂ ಮೀಱದೆ ನಿಂದು (ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯ ಪ್ರವೇಶಮಾಡಿ ಸ್ಥಿರವಾಗಿ ನಿಂತೆವು-) ಶಂಕರನ ನೀನು ಆರಾಧಿಸು ಎಂದಿಂತಿದಂ ಮುನಿ ಪಾರಾಶರನು ಒಲ್ದು ಪೇೞೆ (ಶಂಕರನನ್ನು ಆರಾಧಿಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ ಅದರ ಪ್ರಕಾರ) ಹರ ಬರ್ಪನ್ನಂ ತಪಂ ಗೆಯ್ದಪೆಂ
ಪದ್ಯ-೫:ಅರ್ಥ: ನಿನಗೆ ಹೇಳುವುದಾದರೆ ನಾನು ಪಾಂಡುರಾಜನ ಮಗ, ಗಾಂಡೀವಿಯು. ರಾಜ್ಯವು ಜೂಜಿನಲ್ಲಿ ದಾಯಾದಿಯಾದ ದುರ್ಯೋಧನನಿಗೆ ಒತ್ತೆಯಾಗಿ ಹೋಗಲು ವನವಾಸಕ್ಕೆ ಹೋದ ಅಣ್ಣನ ಮಾತನ್ನು ಸ್ವಲ್ಪವೂ ಮೀರದೆ ಅರಣ್ಯ ಪ್ರವೇಶಮಾಡಿ ಸ್ಥಿರವಾಗಿ ನಿಂತೆವು. ಶಂಕರನನ್ನು ಆರಾಧಿಸು ಎಂದು ವ್ಯಾಸಮಹರ್ಷಿಯು ಪ್ರೀತಿಯಿಂದ ಹೇಳಲಾಗಿ, ಈಶ್ವರನು ಪ್ರತ್ಯಕ್ಷವಾಗುವವರೆಗೆ ತಪಸ್ಸನ್ನು ಮಾಡುವೆನು ಎಂದನು ಅರ್ಜುನ.
ವ|| ಅಂತುಮಲ್ಲದೆ-
ವಚನ:ಪದವಿಭಾಗ-ಅರ್ಥ:ಅಂತುಂ ಅಲ್ಲದೆ-
ವಚನ:ಅರ್ಥ:ಅಷ್ಟೇ ಅಲ್ಲದೆ
ಚಂ|| ಸ್ಪುರಿತ ತಪೋಮಯಾನಳನಿನೀಯೊಡಲಂ ನೆಗಳ್ದೀ ಗಿರೀಂದ್ರ ಕಂ
ದರದೊಳಗಿಂತೆ ದಲ್ ಕರಗಿಪೆಂ ಪೆಱತೇಂ ಪಡೆಮಾತೊ ಮೇಣ್ ಪುರಂ|
ದರನೊಸೆದಿತ್ತುದೊಂದು ಬರದಿಂದುಱದೆನ್ನ ವಿರೋಧಿವರ್ಗಮಂ
ಕರಗಿಪೆನಲ್ಲದಿಲ್ಲಿ ಸೆರಗಂ ಬೆರಗಂ ಬಗೆಯೆಂ ದ್ವಿಜೋತ್ತಮಾ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಸ್ಪುರಿತ ತಪೋಮಯ ಆನಳನಿಂ (ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ) ಈ ಒಡಲಂ ನೆಗಳ್ದ ಈ ಗಿರೀಂದ್ರ ಕಂದರದೊಳಗೆ ಇಂತೆ ದಲ್ ಕರಗಿಪೆಂ(ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ದಲ್ -ದಿಟವಾಗಿ ಕರಗಿಸುತ್ತೇನೆ) ಪೆಱತೇಂ ಪಡೆಮಾತೊ ಮೇಣ್ ಪುರಂದರನು (ಶಿವನು) ಒಸೆದಿತ್ತ ಅದೊಂದು ಬರದಿಂದ ಉಱದೆ (ವರದಿಂದ ಬಿಡದೆ) ಎನ್ನ ವಿರೋಧಿವರ್ಗಮಂ ಕರಗಿಪೆನು (ನನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ:) ಅಲ್ಲದಿಲ್ಲಿ (ಹಾಗಲ್ಲದೆ ಇಲ್ಲಿ) ಸೆರಗಂ ಬೆರಗಂ ಬಗೆಯೆಂ (ಬಗೆಯೆನು - ಯೊಚಿಸೆನು) ದ್ವಿಜೋತ್ತಮಾ (ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ)
ಪದ್ಯ-೬:ಅರ್ಥ: ಎಲೈ ಬ್ರಾಹ್ಮಣಶ್ರೇಷ್ಠನೇ ಪ್ರಕಾಶಮಾನವಾದ ತಪಸ್ಸೆಂಬ ಬೆಂಕಿಯಿಂದ ಈ ನನ್ನ ಶರೀರವನ್ನು ಪ್ರಸಿದ್ಧವಾದ ಈ ಕಣಿವೆಯಲ್ಲಿ ಹೀಗೆಯೇ ಕರಗಿಸುತ್ತೇನೆ ನನಗೆ ಬೇರೆ ಮಾತೇ ಇಲ್ಲ. ಮತ್ತು ಆ ಶಿವನು ಪ್ರೀತಿಯಿಂದ ಕೊಡುವ ಒಂದು ವರದಿಂದ ಬಿಡದೆ ನನ್ನ ಶತ್ರುಸಮೂಹವನ್ನು ಕರಗಿಸುತ್ತೇನೆ: ಹಾಗಲ್ಲದೆ ಇಲ್ಲಿ ನಾನು ಅಪಾಯ ಉಪಾಯಗಳಾವುದನ್ನೂ ಯೋಚನೆಮಾಡುವುದಿಲ್ಲ
ಚಂ||ಎನೆಯನೆ ರತ್ನ ರಶ್ಮಿ ಜಟಿಳಂ ಮಕುಟಂ ಮಣಿಕುಂಡಳಂ ಕನ
ತ್ಕನಕ ಪಿಶಂಗ ದೇಹರುಚಿ ನೀಳಸರೋಜವನಂಗಳಾಗಳು|
ಳ್ಳನಿತುಮರಲ್ವವೋಲ್ ಪೊಳೆವ ಕಣ್ಗಳುಮೞ್ಕಱನೀಯೆ ವಿಕ್ರಮಾ
ರ್ಜುನನ ಮನಕ್ಕೆ ತೋಱಿದನಿಳಾಮರನಂದಮರೇಂದ್ರರೂಪಮಂ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಎನೆಯನೆ (ಎನ್ನುತ್ತಿರುವಾಗಲೇ) ರತ್ನ ರಶ್ಮಿ ಜಟಿಳಂ ಮಕುಟಂ (ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ) ಮಣಿಕುಂಡಳಂ ಕನತ್ಕನಕ ಪಿಶಂಗ ದೇಹರುಚಿ (ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ) ನೀಳಸರೋಜ ವನಂಗಳು ಆಗಳು ಉಳ್ಳ ಅನಿತುಂ ಅರಲ್ವವೋಲ್ (ಕನ್ನೆ ದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ) ಪೊಳೆವ ಕಣ್ಗಳುಂ ಅೞ್ಕಱನು (ಪ್ರೀತಿಯನ್ನು) ಈಯೆ ವಿಕ್ರಮಾರ್ಜುನನ ಮನಕ್ಕೆ (ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು) ತೋಱಿದನು ಇಳಾಮರಂ (ಇಳೆಯ ಅಮರ- ಭೂಸುರ, ಬ್ರಾಹ್ಮಣ) ಅಂದು ಅಮರೇಂದ್ರ ರೂಪಮಂ (ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು).
ಪದ್ಯ-೭:ಅರ್ಥ:ಎನ್ನುತ್ತಿರುವಾಗಲೇ, ರತ್ನಗಳ ಕಾಂತಿಯು ಹೆಣೆದಿರುವ ಕಿರೀಟವೂ, ರತ್ನಖಚಿತವಾದ ಕಿವಿಯಾಭರಣವೂ ಹೊಳೆಯುವ ಚಿನ್ನದಂತೆ ಕೆಂಪುಮಿಶ್ರವಾದ ಹೊಂಬಣ್ಣದ ದೇಹಕಾಂತಿಯೂ ಕನ್ನೆ ದಿಲೆಯ ವನಗಳನ್ನು ಪೂರ್ಣವಾಗಿ ಅರಳುವ ಹಾಗೆ ಮಾಡುವ ಸಾವಿರ ಕಣ್ಣುಗಳೂ ವಿಕ್ರಮಾರ್ಜುನನ ಮನಸ್ಸಿಗೆ ಪ್ರೀತಿಯನ್ನುಂಟುಮಾಡುತ್ತಿರಲು ಆ ಬ್ರಾಹ್ಮಣನ ವೇಷದಲ್ಲಿದ್ದ ಇಂದ್ರನು ತನ್ನ ನಿಜಸ್ವರೂಪವನ್ನು ತೋರಿಸಿದನು.
ವ|| ಅಂತು ತನ್ನ ಸಹಜರೂಪಮಂ ತೋಱಿ ಮನದೞ್ಕಱಂ ತೋಱಲೆಂದು ಮಗನನಪ್ಪಿಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ತನ್ನ ಸಹಜರೂಪಮಂ ತೋಱಿ (ತೋರೆ- ತೋರಿಸಲು)ಮನದ ಅೞ್ಕಱಂ (ಮನಸ್ಸಿನ ಪ್ರೀತಿಯನ್ನು) ತೋಱಲೆಂದು ಮಗನನಪ್ಪಿಕೊಂಡು-
ವಚನ:ಅರ್ಥ: ಹಾಗೆ ತನ್ನ ನಿಜ ರೂಪವನ್ನು ತೋರಿಸಿ, ಮನಸ್ಸಿನ ಪ್ರೀತಿಯನ್ನು ತೋರಬೇಕೆಂದು ಮಗನನ್ನು ತಬ್ಬಿಕೊಂಡು -
ಕಂ|| ಸಾಧಿಸುವೊಡಮರಿನೃಪಂ
ಸಾಧಿಸುವೊಡಮಸ್ತ್ರಚಯಮನಿನ್ನುಂ ತನುವಂ|
ಬಾಧಿಸು ತಪೋಗ್ನಿಯಿಂದಾ
ರಾಧಿಸು ನೀಂ ಮಗನೆ ದುರಿತಹರನಂ ಹರನಂ|| ೮ ||
ಪದ್ಯ-೮:ಪದವಿಭಾಗ-ಅರ್ಥ:ಸಾಧಿಸುವೊಡಂ ಅರಿನೃಪಂ ಸಾಧಿಸುವೊಡಂ ಅಸ್ತ್ರಚಯಮನು (ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತ್ರ) ಸಮೂಹವನ್ನು ಪಡೆಯಬೇಕಾದರೆ) ಇನ್ನುಂ ತನುವಂ ಬಾಧಿಸು ತಪೋಗ್ನಿಯಿಂದ (ಇನ್ನೂ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು) ಆರಾಧಿಸು ನೀಂ ಮಗನೆ ದುರಿತಹರನಂ ಹರನಂ (ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು)
ಪದ್ಯ-೮:ಅರ್ಥ: ಮಗನೇ ನೀನು ಶತ್ರುರಾಜರನ್ನು ಗೆಲ್ಲುವುದಕ್ಕಾಗಿ ಬಾಣ(ಅಸ್ತ್ರ) ಸಮೂಹವನ್ನು ಪಡೆಯಬೇಕಾದ ಪಕ್ಷದಲ್ಲಿ ಇನ್ನೂ ತಪೋಗ್ನಿಯಿಂದ ನಿನ್ನ ಶರೀರವನ್ನು ಇನ್ನೂ ದಂಡಿಸು. ಪಾಪವನ್ನು ಹೋಗಲಾಡಿಸುವ ಶಿವನನ್ನು ನೀನು ಆರಾಧನೆ ಮಾಡು, ಎಂದನು ಇಂದ್ರ.
ಕಂ||ಎಂದು ತಿರೋಹಿತನಾಗಿ ಪು
ರಂದರನುಂ ಪೋದನಿತ್ತ ತಪದೊಳ್ ನರನಿಂ|
ತೊಂದಿ ನಿಲೆ ತಪದ ಬಿಸುಪಿಂ
ಬೆಂದೞಿದುದು ವನದೊಳುಳ್ಳ ತಪಸಿಯರ ತಪಂ|| ೯||
ಪದ್ಯ-೯:ಪದವಿಭಾಗ-ಅರ್ಥ:ಎಂದು ತಿರೋಹಿತನಾಗಿ (ಅದೃಶ್ಯನಾಗಿ) ಪುರಂದರನುಂ ಪೋದನು ಇತ್ತ (ಇಂದ್ರನು ಹೋದನು)ಇತ್ತ ತಪದೊಳ್ ನರನು ಇಂತೊಂದಿ ನಿಲೆ (ಇತ್ತ ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾಗಿರಲು) ತಪದ ಬಿಸುಪಿಂ ಬೆಂದು ಅೞಿದುದು (ತಪಸ್ಸಿನ ಬೇಗೆಯಿಂದ ಬೆಂದು ನಾಶವಾದುವು) ವನದೊಳುಳ್ಳ ತಪಸಿಯರ ತಪಂ (ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ)
ಪದ್ಯ-೯:ಅರ್ಥ: ಎಂಬುದಾಗಿ ಹೇಳಿ ಇಂದ್ರನು ಅದೃಶ್ಯನಾಗಿ ಹೋದನು. ಇತ್ತ ಈ ಕಡೆ ಅರ್ಜುನನು ತಪಸ್ಸಿನಲ್ಲಿ ನಿರತನಾಗಿರಲು, ತಪಸ್ಸಿನ ಬೇಗೆಯಿಂದ ಆ ಕಾಡಿನಲ್ಲಿದ್ದ ತಪಸ್ವಿಗಳ ತಪಸ್ಸೆಲ್ಲವೂ ಬೆಂದು ನಾಶವಾದುವು.
ಕಂ||ಖರಕರಕಿರಣಾವಳಿಯಂ
ಪರಿದೆೞ್ಬಟ್ಟಿದುವು ಪಗಲಿರುಳ್ ಶಶಿರುಚಿಯಂ|
ಪರಿಭವಿಸಿ ನಭಮನಡರ್ದುವು
ನರೇಂದ್ರತಾಪಸತಪೋಮಯೂಖಾವಳಿಗಳ್|| ೧೦||
ಪದ್ಯ-೧೦:ಪದವಿಭಾಗ-ಅರ್ಥ:ಖರಕರ (ಸೂರ್ಯ) ಕಿರಣಾವಳಿಯಂ ಪರಿದೆೞ್ಬಟ್ಟಿದುವು ಪಗಲ್ (ಅರ್ಜುನನ ತಪಸ್ಸಿನ ಕಿರಣಸಮೂಹಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು) ಇರುಳ್ ಶಶಿರುಚಿಯಂ ಪರಿಭವಿಸಿ ನಭಮನು ಅಡರ್ದುವು (ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು) ನರೇಂದ್ರತಾಪಸ ತಪೋ ಮಯೂಖ ಆವಳಿಗಳ್ (ಅರ್ಜುನನ ತಪಸ್ಸಿನ ಕಿರಣಸಮೂಹಗಳು )
ಪದ್ಯ-೧೦:ಅರ್ಥ: . ರಾಜತಪಸ್ವಿ ಅರ್ಜುನನ ತಪಸ್ಸಿನ ಕಿರಣಜ್ವಾಲೆಗಳು ಹಗಲಿನಲ್ಲಿ ಸೂರ್ಯಕಿರಣಗಳ ಸಮೂಹವನ್ನು ಹಿಮ್ಮೆಟ್ಟಿ ಎಬ್ಬಿಸಿ ಓಡಿಸಿದುವು. ರಾತ್ರಿಯಲ್ಲಿ ಚಂದ್ರನ ಕಾಂತಿಯನ್ನು ಹಿಯ್ಯಾಳಿಸಿ ಆಕಾಶಕ್ಕೇರಿದುವು.
ವ|| ಅಂತುಗ್ರೋಗ್ರತಪಂಗೆಯ್ಯೆ ತತ್ತಪತ್ಸಪನವಿಪುಳಮರೀಚಿಗಳ್ ತಮಗೆ ತಪವಿಘಾತಮಂ ಮಾಡುವುದುಮಿಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ಕೈಲಾಸದೊಳ್ ವಿಳಾಸಂಬೆರಸು ಗಿರಿಜೆಯೊಳ್ ತಳ್ತಿರ್ದ ಬಾಳೇಂದುಚೂಡಾಮಣಿಗೆ ಸಾಮಂತಚೂಡಾಮಣಿಯ ತಪಪ್ರಭಾವಮನಿಂತೆಂದು ಬಿನ್ನಪಂಗೆಯ್ದರ್-
ವಚನ:ಪದವಿಭಾಗ-ಅರ್ಥ:ಅಂತುಉ ಉಗ್ರೋಗ್ರ ತಪಂಗೆಯ್ಯೆ ತತ್ತಪತ್ಸಪನವಿಪುಳ (ತತ್ ತಪಸ್ ಸಪನ(ತಪನ) ವಿಪುಳ) ಮರೀಚಿಗಳ್ (ಆ ತಪೋಗ್ನಿಯ ವಿಶೇಷ ಕಿರಣಗಳು) ತಮಗೆ ತಪವಿಘಾತಮಂ ಮಾಡುವುದುಂ ಇಂದ್ರಕೀಲನಗೇಂದ್ರದ ತಪೋಧನರೆಲ್ಲಂ ನೆರೆದು ಬಂದು ( ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು) ಕೈಲಾಸದೊಳ್ ವಿಳಾಸಂಬೆರಸು (ಕೈಲಾಸಪರ್ವತದಲ್ಲಿ ವಿಲಾಸದಿಂದ ಸೇರಿ,) ಗಿರಿಜೆಯೊಳ್ ತಳ್ತಿರ್ದ ಬಾಳೇಂದುಚೂಡಾಮಣಿಗೆ (ಪಾರ್ವತಿಯೊಡನಿದ್ದ ಶಿವನಿಗೆ) ಸಾಮಂತಚೂಡಾಮಣಿಯ ತಪಪ್ರಭಾವಮನು ಇಂತೆಂದು ಬಿನ್ನಪಂಗೆಯ್ದರ್ (ಸಾಮಂತಚೂಡಾಮಣಿ ಅರ್ಜುನನ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆ ಮಾಡಿದರು-)-
ವಚನ:ಅರ್ಥ:ವ|| ಹಾಗೆ ಅತ್ಯುಗ್ರಹವಾದ ತಪಸ್ಸನ್ನು ಮಾಡಲು ಆ ತಪೋಗ್ನಿಯ ವಿಶೇಷ ಕಿರಣಗಳು ತಮ್ಮ ತಪಸ್ಸಿಗೆ ಹಾನಿಯನ್ನುಂಟುಮಾಡಲು ಇಂದ್ರಕೀಲಪರ್ವತದಲ್ಲಿದ್ದ ತಪೋಧನರೆಲ್ಲರೂ ಒಟ್ಟುಗೂಡಿ ಬಂದು ಕೈಲಾಸಪರ್ವತದಲ್ಲಿ ವಿಲಾಸದಿಂದ ಸೇರಿ, ಪಾರ್ವತಿಯೊಡನಿದ್ದ ಶಿವನಿಗೆ ಸಾಮಂತಚೂಡಾಮಣಿ ಅರ್ಜುನನ ತಪಸ್ಸಿನ ಪ್ರಭಾವವನ್ನು ಹೀಗೆಂದು ವಿಜ್ಞಾಪನೆ ಮಾಡಿದರು-

ಶಿವನಲ್ಲಿ ಮುನಿಗಳ ದೂರು[ಸಂಪಾದಿಸಿ]

ಮಲ್ಲಿಕಾಮಾಲೆ|| ಆವನೆಂದಱಿಯಲ್ಕೆ ಬಾರದಪೂರ್ವನೊರ್ವನರಾತಿವಿ
ದ್ರಾವಣಂ ತಪಕೆಂದು ನಿಂತೊಡೆ ತತ್ತಪೋಮಯಪಾವಕಂ|
ದಾವಪಾವಕನಂತೆವೋಲ್ ಸುಡೆ ಬೆಂದುವೆಮ್ಮ ತಪಂಗಳಿ
ನ್ನಾವ ಶೈಳದೊಳಿರ್ಪೆವಿರ್ಪೆಡೆವೇೞ ನೀಂ ತ್ರಿಪುರಾಂತಕಾ|| ೧೧ ||
ಪದ್ಯ-೧೧:ಪದವಿಭಾಗ-ಅರ್ಥ: ಆವನೆಂದು ಅಱಿಯಲ್ಕೆ ಬಾರದು ಅಪೂರ್ವನೊರ್ವಂ ಅರಾತಿವಿದ್ರಾವಣಂ ತಪಕೆಂದು ನಿಂತೊಡೆ (ಹಿಂದೆಂದೂ ಕಾಣದಿರುವ ಒಬ್ಬ ಅಪೂರ್ವ ವ್ಯಕ್ತಿ, ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಂತಾಗ) ತತ್ ತಪೋಮಯಪಾವಕಂ (ಅವನ ತಪಸ್ಸಿನಿಂದುಂಟಾದ ಜ್ವಾಲೆಯಿಂದ) ದಾವ ಪಾವಕನಂತೆವೋಲ್ ಸುಡೆ (ಬೆಂಕಿಯು ಕಾಡಕಿಚ್ಚನಂತೆ ಸುಡಲು ಹಾಗೆ ) ಬೆಂದುವೆಮ್ಮ ತಪಂಗಳು ಇನ್ನಾವ (ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಇನ್ನು ಯಾವ-) ಶೈಳದೊಳು ಇರ್ಪೆವು, ಇರ್ಪೆಡೆ ವೇೞ ನೀಂ ತ್ರಿಪುರಾಂತಕಾ (ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು)
ಪದ್ಯ-೧೧:ಅರ್ಥ:ಯಾರೆಂದು ತಿಳಿಯಲು ಆಗುವುದಿಲ್ಲ. ಹಿಂದೆಂದೂ ಕಾಣದಿರುವ ಒಬ್ಬ ಅಪೂರ್ವ ವ್ಯಕ್ತಿ, ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಂತಾಗ ಅವನ ತಪಸ್ಸಿನಿಂದುಂಟಾದ ಜ್ವಾಲೆಯಿಂದ ಬೆಂಕಿಯು ಕಾಡಕಿಚ್ಚನಂತೆ ಸುಡಲು ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು
ಕಂ|| ಆರೊಪಿತಚಾಪಂ ಸಂ
ಧಾರಿತಕವಚಂ ಧೃತೋಗ್ರಶರಯುಗಂ ತಾ|
ನಾರಂದಮಲ್ಲವಂ ತ್ರಿಪು
ರಾರೀ ಕೇಳ್ ತ್ರಿಪುರಮಿಸುವ ನಿನ್ನನೆ ಪೋಲ್ವಂ|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಆರೊಪಿತಚಾಪಂ ಸಂಧಾರಿತಕವಚಂ (ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ) ಧೃತೋಗ್ರ ಶರಯುಗಂ ತಾನು ಆರಂದಂ ಅಲ್ಲ ಅವಂ ತ್ರಿಪುರಾರೀ ಕೇಳ್ (ಇವನ್ನುಳ್ಳ ಅವನು ಯಾವ ರೀತಿಯವನೂ ಅಲ್ಲ. ಪರಶಿವನೇ ಕೇಳು,) ತ್ರಿಪುರಂ ಇಸುವ ನಿನ್ನನೆ ಪೋಲ್ವಂ (ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ) ಎಂದರು.
ಪದ್ಯ-೧೨:ಅರ್ಥ:ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ, ಬೆನ್ನಲ್ಲಿ ಧರಿಸಿರುವ ಭಯಂಕರವಾದ ಎರಡು ಬತ್ತಳಿಕೆಗಳು. ಇವನ್ನುಳ್ಳ ಅವನು ಯಾವ ರೀತಿಯವನೂ ಅಲ್ಲ. ಪರಶಿವನೇ ಕೇಳು, ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ ಎಂದರು.
ವ|| ಎಂಬುದುಮದೆಲ್ಲಮಂ ಕೇಳ್ದಾತನಾವನೆಂಬುದನಱಿಯಲೆಂದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಅದೆಲ್ಲಮಂ ಕೇಳ್ದು ಆತನು ಆವನು ಎಂಬುದನು ಅಱಿಯಲೆಂದು(ತಿಳಿಯಬೇಕೆಂದು)-
ವಚನ:ಅರ್ಥ:ಎಂದುದೆಲ್ಲವನ್ನೂ ಕೇಳಿ ಅವನು ಯಾರೆಂಬುದನ್ನು ತಿಳಿಯಬೇಕೆಂದು-
ಕಂ|| ಧ್ಯಾನದೊಳಭವಂ ನೆರೆದಿನಿ
ಸಾನುಮನರೆ ಮುಚ್ಚಿ ಕಣ್ಗಳಂ ನಿಶ್ಚಳಿತಂ|
ತಾನಿರ್ದು ಮರೆದು ಕೆಂದಿದ
ಮೀನಂ ತಳ್ತಾಡದಿರ್ದ ಮಡುವಂ ಪೋಲ್ತಂ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಧ್ಯಾನದೊಳು ಅಭವಂ (ಶಿವನು) ನೆರೆದು ಇನಿಸಾನುಮಂ (ಬಹಳ ಸ್ವಲ್ಪ) ಅರೆ ಮುಚ್ಚಿ ಕಣ್ಗಳಂ ನಿಶ್ಚಳಿತಂ ತಾನಿರ್ದು (ತಾನು ನಿಶ್ಚಲನಾಗಿದ್ದು) ಮರೆದು ಕೆಂದಿದಮೀನಂ ತಳ್ತು ಆಡದಿರ್ದ ಮಡುವಂ ಪೋಲ್ತಂ (ಮೈಮರೆತು ಮಲಗಿರುವ ಮೀನುಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವನ್ನು ಹೋಲುತ್ತಿದ್ದನು)
ಪದ್ಯ-೧೩:ಅರ್ಥ:ಶಿವನು ಧ್ಯಾನದಲ್ಲಿ ಪೂರ್ಣ ಕಣ್ಣುಗಳನ್ನು ಅರ್ಧಮುಚ್ಚಿ ತಾನು ನಿಶ್ಚಲನಾಗಿದ್ದು ಮೈಮರೆತು ಮಲಗಿರುವ ಮೀನುಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವನ್ನು ಹೋಲುತ್ತಿದ್ದನು
ವ|| ಅಂತು ಪೋಲ್ತು ದಿವ್ಯಜ್ಞಾನದೊಳ್ ಮಹೇಶ್ವರನುದಾರಮಹೇಶ್ವರನಪ್ಪುದನಱಿದು ಬೆರಲಂ ಮಿಡಿದು ಮುಗುಳ್ನಗೆ ನಕ್ಕು ನೆನೆದಾತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೇೞ್ದು ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆಯ್ದುದನವಧಾರಿಸಿ ಮೂಕದಾನವನಾದಿವರಾಹರೂಪದೊಳಿರ್ದುದುಮನಱಿದು ಮನುಜ ಮಾಂಧಾತನಿಂದಮಾ ದೈತ್ಯನಂ ಕೊಲಿಸಲುಂ ಸಾಹಸಾಭರಣನೊಳೇನಾನುಮೊಡಂಬಡಂ ಮಾಡಿ ಮಾಯಾಯುದ್ಧದೊಳಾತನ ಸಾಹಸದ ಬಲದ ಬಿಲ್ಲಾಳ್ತನದಳವಿಗಳನಳೆದು ನೋಡಿ ವರದನಪ್ಪೆನೆಂಬುದುಮಂ ಬಗೆದು-
ವಚನ:ಪದವಿಭಾಗ-ಅರ್ಥ:ಅಂತು ಪೋಲ್ತು ದಿವ್ಯಜ್ಞಾನದೊಳ್ ಮಹೇಶ್ವರನು (ಹಾಗೆ ಹೋಲಿಕೆಹೊಂದಿ ತನ್ನ ದಿವ್ಯಜ್ಞಾನದಿಂದ ಶಿವನು) ಉದಾರಮಹೇಶ್ವರನು ಅಪ್ಪುದನು ಅಱಿದು (ಅರ್ಜುನನು ಎಂದು ಅರಿತು) ಬೆರಲಂ ಮಿಡಿದು (ಚಿಟಿಕೆ ಹೊಡೆದು) ಮುಗುಳ್ನಗೆ ನಕ್ಕು ನೆನೆದ ಆತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೇೞ್ದು (ಹೋಗಲು ಹೇಳಿ-) ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆಯ್ದುದನು ಅವಧಾರಿಸಿ (ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡುದನ್ನು ಜ್ಞಾಪಿಸಿಕೊಂಡು) ಮೂಕದಾನವನ ಆದಿವರಾಹರೂಪದೊಳು ಇರ್ದುದುಮಂ ಅಱಿದು (ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು) ಮನುಜ ಮಾಂಧಾತನಿಂದಂ ಆ ದೈತ್ಯನಂ ಕೊಲಿಸಲುಂ (ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸಲೂ,) ಸಾಹಸಾಭರಣನೊಳು ಏನಾನುಂ ಒಡಂಬಡಂ ಮಾಡಿ (ಅರ್ಜುನನೊಡನೆ ಏನಾದರೂ ಕೀಟಲೆ ಮಾಡಿ) ಮಾಯಾಯುದ್ಧದೊಳು ಆತನ ಸಾಹಸದ ಬಲದ ಬಿಲ್ಲಾಳ್ತನದ ಅಳವಿಗಳನು ಅಳೆದು ನೋಡಿ (ಮಾಯಾಯುದ್ಧದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳ್ತನದ ಶಕ್ತಿಯನ್ನು ಅಳೆದು ನೋಡಿ,) ವರದನು ಅಪ್ಪೆನೆಂಬುದುಮಂ ಬಗೆದು (ವರವನ್ನು ಕೊಡುವವನಾಗುತ್ತೇನೆ ಎಂದು ನಿಶ್ಚಯಿಸಿ)-
ವಚನ:ಅರ್ಥ:ಹಾಗೆ ಹೋಲಿಕೆಹೋದಿ ತನ್ನ ದಿವ್ಯಜ್ಞಾನದಿಂದ ಶಿವನು, ತಪಸ್ಸು ಮಾಡುತ್ತಿದ್ದವನು ಉದಾರಮಹೇಶ್ವರನಾದ ಅರ್ಜುನನು ಎಂದು ತಿಳಿದನು. (ಸಂತೋಷದಿಂದ) ಬೆರಳನ್ನು ಚಿಟಿಕೆಹೊಡೆದು, ಹುಸಿನಗೆ ನಕ್ಕು ಜ್ಞಾಪಿಸಿಕೊಂಡು ಆತನಿಗೆ ಯೋಗ್ಯವಾದುದನ್ನು ಮಾಡುವುದಕ್ಕೆ ನಾನು ಬಲ್ಲೆ, ಎಂದು ಋಷಿಶ್ರೇಷ್ಠರ ಸಮೂಹವನ್ನು ಹೋಗಲು ಹೇಳಿದನು. ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡುದನ್ನು ಜ್ಞಾಪಿಸಿಕೊಂಡನು. ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸಲೂ, ಅರ್ಜುನನೊಡನೆ ಏನಾದರೂ ಕೀಟಲೆ ಮಾಡಿ ಮಾಯಾಯುದ್ಧದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳ್ತನದ ಶಕ್ತಿಯನ್ನು ಅಳೆದು ನೋಡಿ ; ಅನಂತರ ಅವನಿಗೆ ವರದ (ವರವನ್ನು ಕೊಡುವವ)ನಾಗುತ್ತೇನೆ ಎಂದು ನಿಶ್ಚಯಿಸಿ- (ನಿಶ್ಚಯಿಸಿದನು).

ಶಿವನು ಕಿರಾತನಾಗಿ ಇಂದ್ರಕೀಲ ವನಕ್ಕೆ ಬೇಟೆಗಾಗಿ ಮುತ್ತಿಗೆ[ಸಂಪಾದಿಸಿ]

ಚಂ|| ವನಚರನಾಗಿ ಶಂಭು ಗಿರಿಜಾತೆಯನೋತು ಪುಳಿಂದಿ ಮಾಡಿ ನ
ಚ್ಚಿನ ಗುಹನ ಕಿರಾತಬಲ ನಾಯಕನಾಗಿರೆ ಮಾಡಿ ಭೂತಮು|
ಳ್ಳನಿತುಮನೆಯ್ದೆ ಬೇಡವಡೆ ಮಾಡಿ ಯುಗಾಂತ ಪಯೋಧರಾಳಿ ಭೋಂ
ಕೆನೆ ಕವಿವಂದದಿಂ ಕವಿದನಾ ಬನಮಂ ಮೃಗಯಾನಿಧಾನಮಂ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ವನಚರನಾಗಿ ಶಂಭು, ಗಿರಿಜಾತೆಯನೋತು ಪುಳಿಂದಿ ಮಾಡಿ, (ಈಶ್ವರನು ತಾನು ಬೇಡನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯಾಗಿಯೂ ಮಾಡಿ) ನಚ್ಚಿನ ಗುಹನ ಕಿರಾತಬಲ ನಾಯಕನಾಗಿರೆ (ತನ್ನ ನಂಬಿಕೆಗೆ ಪಾತ್ರನಾದ ಷಣ್ಮುಖನು ಬೇಡರ ಸೈನ್ಯಕ್ಕೆ ನಾಯಕನಾಗಿರುವಂತೆ ಮಾಡಿ) ಭೂತಮುಳ್ಳ ಅನಿತುಮನ ಎಯ್ದೆ ಬೇಡವಡೆ ಮಾಡಿ (ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿ ಮಾಡಿದನು.) ಯುಗಾಂತ ಪಯೋಧರಾಳಿ ಭೋಂಕೆನೆ ಕವಿವ ಅಂದದಿಂ (ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ) ಕವಿದನು ಆ ಬನಮಂ ಮೃಗಯಾನಿಧಾನಮಂ (ಬೇಟೆಗೆ ಆಕರವಾದ ಆ ಕಾಡನ್ನು ಮುತ್ತಿದನು.)
ಪದ್ಯ-೧೪:ಅರ್ಥ:ಈಶ್ವರನು ತಾನು ಬೇಡನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯಾಗಿಯೂ ಮಾಡಿ, ತನ್ನ ನಂಬಿಕೆಗೆ ಪಾತ್ರನಾದ ಷಣ್ಮುಖನು ಬೇಡರ ಸೈನ್ಯಕ್ಕೆ ನಾಯಕನನಾಗಿರಲು, ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿ ಮಾಡಿದನು. ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ ಬೇಟೆಗೆ ಆಕರವಾದ ಆ ಕಾಡನ್ನು ಶಿವನು ಮುತ್ತಿದನು
ವ|| ಅಂತು ಕವಿದೊಡಾ ಕಳಕಳಕ್ಕೇವಯಿಸಿ ವರಾಹರೂಪದ ಮೂಕದಾನವಂ-
ವಚನ:ಪದವಿಭಾಗ-ಅರ್ಥ:ಅಂತು ಕವಿದೊಡೆ ಆ ಕಳಕಳಕ್ಕೆ ಏವಯಿಸಿ (ಆ ಕೋಲಾಹಲಶಬ್ದಕ್ಕೆ ಬೇಸರಿಸಿ) ವರಾಹರೂಪದ ಮೂಕದಾನವಂ-
ವಚನ:ಅರ್ಥ:ವ||ಕಾಡನ್ನು ಶಿವನ ಪಡೆ, ಹಾಗೆ ಮುತ್ತಿದಾಗ ಆ ಕೋಲಾಹಲಶಬ್ದಕ್ಕೆ ಬೇಸರಿಸಿ ಹಂದಿಯ ರೂಪದಲ್ಲಿದ್ದ ಆ ಮೂಕದಾನವನು
ತರಳ|| ಪೊರಳೆ ವಾರಿಗಳ್ ಕಲಂಕಿದುವುರ್ದೆ ಮೆಯ್ಯನುದಗ್ರಮಂ
ದರಮದಂದಲುಗಿತ್ತು ಬಾಯ್ಗೆಯೆ ದಿಗ್ಗಜಂ ಪೆಱಗಿಟ್ಟುವಾಂ|
ತರದೆ ತೊಟ್ಟನೆ ದಾಡೆಗುಟ್ಟೆ ಕೞಲ್ದು ತಾರಗೆಗಳ್ ನಭಂ
ಬೆರಸು ಬಿೞ್ದುವು ಪೆಂಪಿದೇಂ ಪಿರಿದಾಯ್ತೊ ದೈತ್ಯವರಾಹನಾ|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ಪೊರಳೆ ವಾರಿಗಳ್ ಕಲಂಕಿದುವು (ಹೊರಳಲು ಸಮುದ್ರಗಳು ಕಲಕಿದವು) ಉರ್ದೆ ಮೆಯ್ಯನು ಉದಗ್ರ ಮಂದರಂ ಅದಂದು ಅಲುಗಿತ್ತು (ಮೆಯ್ಯನ್ನು ಉಜ್ಜಲು ಎತ್ತರದ ಮಂದರಪರ್ವತವು ಅಂದು ಅಲುಗಾಡಿತು) ಬಾಯ್ಗೆಯೆ (ಬಾಯಿಂದ ಡುರ್ರೆಂದು ಕೂಗಿದರೆ) ದಿಗ್ಗಜಂ ಪೆಱಗಿಟ್ಟುವು ಆಂತರದೆ ( ದಿಗ್ಗಜಗಳು ಸ್ವಲ್ಪ ಹಿಮ್ಮೆಟ್ಟಿದುವು.) ತೊಟ್ಟನೆ ದಾಡೆಗುಟ್ಟೆ ಕೞಲ್ದು ತಾರಗೆಗಳ್ ನಭಂ ಬೆರಸು ಬಿೞ್ದುವು (ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು) ಪೆಂಪಿದೇಂ ಪಿರಿದಾಯ್ತೊ ದೈತ್ಯವರಾಹನಾ (ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತೋ)
ಪದ್ಯ-೧೫:ಅರ್ಥ: ಹೊರಳಲು ಸಮುದ್ರಗಳು ಕಲಕಿದವು, ಮೆಯ್ಯನ್ನು ಉಜ್ಜಲು ಎತ್ತರದ ಮಂದರಪರ್ವತವು ಅಂದು ಅಲುಗಾಡಿತು. ಬಾಯಿಂದ ಡುರ್ರೆಂದು ಕೂಗಿದರೆ ದಿಗ್ಗಜಗಳು ಸ್ವಲ್ಪ ಹಿಮ್ಮೆಟ್ಟಿದುವು. ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು. ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತೋ
ವ|| ಅಂತಾ ವರಾಹನಾದಿವರಾಹನಾದ ಮುರಾಂತಕನುಮನಿೞಸಿ ನೆಲಂ ಕಪ್ಪಂಗವಿಯು ಮಾಗೆ ಬರೆ ಪೆಱಗೆ ಕೃತಕ ಕಿರಾತನಟ್ಟುತ್ತುಂ ಬರೆ ತನ್ನತ್ತ ಮೊಗದೆ ಬರ್ಪುದಂ ಕಂಡಮೋಘಾಸ್ತ್ರ ಧನಂಜಯನೊಂದಮೋಘಾಸ್ತ್ರಮನಕ್ಷೂಣಬಾಣಧಿಯಿಂದಮುರ್ಚಿಕೊಂಡು ಗಾಂಡೀವದೊಳ್ ಪೂಡಿ-
ವಚನ:ಪದವಿಭಾಗ-ಅರ್ಥ:ಅಂತು ಆ ವರಾಹನು ಆದಿವರಾಹನಾದ ಮುರಾಂತಕನುಮಂ ಇೞಿಸಿ (ಆದಿವರಾಹಾವತಾರ ಮಾಡಿದವಿಷ್ಣುವನ್ನು ಮೀರಿಸಿ (ತಿರಸ್ಕರಿಸಿ)) ನೆಲಂ ಕಪ್ಪಂಗವಿಯು ಮಾಗೆ ಬರೆ (ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ ನೆಲವನ್ನು ನಡುಗಿಸುತ್ತ ಬರುತ್ತಿರಲು) ಪೆಱಗೆ ಕೃತಕ ಕಿರಾತನು ಅಟ್ಟುತ್ತುಂ ಬರೆ (ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬರಲು,) ತನ್ನತ್ತ ಮೊಗದೆ ಬರ್ಪುದಂ ಕಂಡ ಅಮೋಘಾಸ್ತ್ರ ಧನಂಜಯನು ಒಂದು ಅಮೋಘಾಸ್ತ್ರಮನು ಅಕ್ಷೂಣಬಾಣಧಿಯಿಂದಂ ಉರ್ಚಿಕೊಂಡು(ಬಾಣವನ್ನು ತನ್ನ ಅಕ್ಷಯ ಬತ್ತಳಿಕೆಯಿಂದ ಸೆಳೆದುಕೊಂಡು) ಗಾಂಡೀವದೊಳ್ ಪೂಡಿ (ಹೂಡಿ)-
ವಚನ:ಅರ್ಥ:|| ಆ ಹಂದಿಯು ಆದಿವರಾಹಾವತಾರ ಮಾಡಿದವಿಷ್ಣುವನ್ನು ಮೀರಿಸಿ (ತಿರಸ್ಕರಿಸಿ) ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ (ನೆಲವನ್ನಲ್ಲಾಡಿಸುತ್ತ) ಬರುತ್ತಿರಲು ಹಿಂಭಾಗದಿಂದ ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬರಲು, ತನ್ನ ಕಡೆಗೆ ಬರುತ್ತಿರುವುದನ್ನು ಧನಂಜಯನು ಕಂಡು ಒಂದು ಅಮೋಘವಾದ ಬಾಣವನ್ನು ತನ್ನ ಅಕ್ಷಯ ಬತ್ತಳಿಕೆಯಿಂದ ಸೆಳೆದುಕೊಂಡು ಗಾಂಡೀವದಲ್ಲಿ ಹೂಡಿ- (ಹೂಡಿದನು).
ಮ|| ತೆಗೆದೆಚ್ಚರ್ಜುನನಂಬು ತೀವೆ ತುದಿಯಿಂ ಬಾಲಂಬರಂ ಪಂದಿ ಸೌ
ಳಗೆವೋಪಂತಿರೆ ನೋಡ ಸಂಬಳಿಗೆವೋಯ್ತೆಂಬನ್ನೆಗಂ ಕೊಂಡುದೊ|
ಯ್ಯಗೆ ಪಾರ್ದೆಚ್ಚ ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು ತೊ
ಟ್ಟಗೆ ವೈಮಾನಿಕಕೋಟಿಗಂದು ಪಿರಿದೊಂದುತ್ಸಾಹಮಪ್ಪನ್ನೆಗಂ|| ೧೬||
ಪದ್ಯ-೧೬:ಪದವಿಭಾಗ-ಅರ್ಥ:ತೆಗೆದೆಚ್ಚ ಅರ್ಜುನನ ಅಂಬು ತೀವೆ ತುದಿಯಿಂ ಬಾಲಂಬರಂ (ಹೆದೆಯೆಳೆದು ಪ್ರಯೋಗ ಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ಹೊಕ್ಕು) ಪಂದಿ ಸೌಳಗೆ ವೋಪಂತಿರೆ ನೋಡ ಸಂಬಳಿಗೆವೋಯ್ತೆಂಬನ್ನೆಗಂ (ಸೌಳೆಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿತೆನ್ನುವಾಗ), ಕೊಂಡುದು ಒಯ್ಯಗೆ (ಮೆಲ್ಲಗೆ) ಪಾರ್ದು ಎಚ್ಚ ವೃಷಾಂಕನ ಅಂಬು ತನುವಂ ಪಚ್ಚಂತೆ ಕೊಂಡತ್ತು ತೊಟ್ಟಗೆ(ಕೂಡಲೆ)(ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಕೂಡಲೆ ಒಳಹೊಕ್ಕಿತು.) ವೈಮಾನಿಕಕೋಟಿಗೆ ಅಂದು ಪಿರಿದೊಂದು ಉತ್ಸಾಹಮಪ್ಪ ಅನ್ನೆಗಂ (ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳಿಗೆ ಅಂದು ಅದು ಒಂದು ದೊಡ್ಡ ಉತ್ಸವವಾಯಿತು) ಅನ್ನೆಗಂ- ಅಷ್ಟುಹೊತ್ತಿಗೆ-
ಪದ್ಯ-೧೬:ಅರ್ಥ: ಹೆದೆಯೆಳೆದು ಪ್ರಯೋಗ ಮಾಡಿದ ಅರ್ಜುನನ ಬಾಣವು ತುದಿಯಿಂದ ಬಾಲದವರೆಗೂ ಹೊಕ್ಕು, ಸೌಳೆಂದು ಶಬ್ದಮಾಡುತ್ತ ಸೀಳಿಕೊಂಡು ಹೋಗಿ ಸಂಪುಟದಲ್ಲಿ ಸೇರುವಂತೆ ಮೆಯ್ಯಲ್ಲಿಯೇ ಅಡಗಿತೆನ್ನುವಾಗ. ಇದನ್ನು ನೋಡುತ್ತಿದ್ದ ಶಿವನು ನಿಧಾನವಾಗಿ ಗುರಿಯಿಟ್ಟು ಹೊಡೆದ ಬಾಣವು ಶರೀರವನ್ನು ಭಾಗಮಾಡಿದ ಹಾಗೆ ಕೂಡಲೆ ಒಳಹೊಕ್ಕಿತು. ವಿಮಾನದಲ್ಲಿ ಕುಳಿತು ನೋಡುತ್ತಿದ್ದ ದೇವತೆಗಳ ಸಮೂಹಕ್ಕೆ ವಿಶೇಷ ಸಂತೋಷವಾಯಿತು. ಅಷ್ಟುಹೊತ್ತಿಗೆ-
ವ|| ಅಂತು ಮೂಕದಾನವನನಾ ನೆವದೊಳೆ ಕೊಂದು ವರಾಹಾರುಣಜಲಧಾರಾರುಣ ಮಾಗಿರ್ದಾತ್ಮೀಯಬಾಣಮಂ ಪರಾಕ್ರಮ ಧವಳನೊಯ್ಯನೆ ಕೊಂಡು ಬಾಣಧಿಯೊಳಿಟ್ಟು ಪೋಗಿ ಪೊಗೊಳದೊಳ್ ಕರಚರಣಪ್ರಕ್ಷಾಳನಂಗೆಯ್ದು ಮಗುೞ್ದುಮೇಕಪಾದ ತಪದೊಳ್ ನಿಲೆ ಗೀರ್ವಾಣನಾಥಾತ್ಮಜನಲ್ಲಿಗೆ ಗುಹನನಹಿಭೂಷಣನೆಂಬಂ ಬೇಡಿಯಟ್ಟಿದೊಡಾತಂ ಬಂದು-
ವಚನ:ಪದವಿಭಾಗ-ಅರ್ಥ:ಅಂತು ಮೂಕದಾನವನನು ಆ ನೆವದೊಳೆ ಕೊಂದು, ವರಾಹ ಅರುಣಜಲ ಧಾರಾ ಅರುಣ ಮಾಗಿರ್ದ ಆತ್ಮೀಯಬಾಣಮಂ (ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು) ಪರಾಕ್ರಮ ಧವಳನು ಒಯ್ಯನೆ ಕೊಂಡು ಬಾಣಧಿಯೊಳಿಟ್ಟು (ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಇಟ್ಟು) ಪೋಗಿ ಪೊಗೊಳದೊಳ್ ಕರ ಚರಣ ಪ್ರಕ್ಷಾಳನಂ ಗೆಯ್ದು (ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು) ಮಗುೞ್ದುಂ ಏಕಪಾದ ತಪದೊಳ್ ನಿಲೆ (ಪುನ ಏಕಪಾದತಪಸ್ಸಿನಲ್ಲಿ ನಿಲ್ಲಲು) ಗೀರ್ವಾಣನಾಥನ ಆತ್ಮಜನಲ್ಲಿಗೆ (ಇಂದ್ರನಮಗ ಅರ್ಜುನನಲ್ಲಿಗೆ) ಗುಹನನು ಅಹಿಭೂಷಣನ ಎಂಬಂ (ಅಂಬಂ) ಬೇಡಿಯಟ್ಟಿದೊಡೆ (ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಅಟ್ಟಿದೊಡೆ- ಕಳುಹಿಸಿದಾಗ-) ಆತಂ ಬಂದು-
ವಚನ:ಅರ್ಥ:ಹಾಗೆ ಮೂಕದಾನವನನ್ನು ಆ ನೆಪದಿಂದ ಕೊಂದ ಹಂದಿಯ ರಕ್ತಧಾರೆಯಿಂದ ಕೆಂಪಾಗಿದ್ದ ತನ್ನ ಬಾಣವನ್ನು ಪರಾಕ್ರಮಧವಳನು ನಿಧಾನವಾಗಿ ತೆಗೆದುಕೊಂಡು ಬಂದು ಬತ್ತಳಿಕೆಯಲ್ಲಿ ಇಟ್ಟು, ಪಕ್ಕದಲ್ಲಿದ್ದ ಹೂಗೊಳದಲ್ಲಿ ಕೈ ಕಾಲುಗಳನ್ನು ತೊಳೆದು ಪುನ ಏಕಪಾದತಪಸ್ಸಿನಲ್ಲಿ ನಿಲ್ಲಲು ಅರ್ಜುನನ ಹತ್ತಿರಕ್ಕೆ ಸರ್ಪಾಭರಣನಾದ ಶಿವನು ತನ್ನ ಬಾಣವನ್ನು ಬೇಡಲು ಗುಹನನ್ನು ಕಳುಹಿಸಿದನು. ಅವನು ಬಂದು
ಚಂ|| ಗೊರವರೆ ಬೂದಿಯುಂ ಜಡೆಯುಮಕ್ಕೆ ತಪಕ್ಕೆ ತನುತ್ರಮೀ ಭಯಂ
ಕರ ಧನು ಖೞ್ಗಮತ್ತಪರಮಿಂತೆರಡುಂ ದೊಣೆ ತೀವಿದಂಬುಮೊಂ|
ದಿರವು ತಪಕ್ಕಿದೆಂತುಟೊ ತಪಂಗಳುಮಿಲ್ಲಮವುಳ್ಳೊಡೀಗಳೆ
ಮ್ಮರಸರ ನಚ್ಚಿತೆಚ್ಚ ಶರಮಂ ಸೆರಗಿಲ್ಲದೆ ಕೊಂಡು ಬರ್ಪಿರೇ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಗೊರವರೆ (ತಪಸ್ವಿಗಳೇ) ಬೂದಿಯುಂ ಜಡೆಯುಂ ಅಕ್ಕೆ ತಪಕ್ಕೆ (ಬೂದಿಯೂ ಜಡೆಯೂ ತಪಸ್ಸಿಗೆ ಅಕ್ಕೆ- ಸರಿ) ತನುತ್ರಂ (ಕವಚ) ಭಯಂಕರ ಧನು ಖೞ್ಗಂ (ಖಡ್ಗ) ಅತ್ತಪರಂ (ಗುರಾಣಿ) ಇಂತೆರಡುಂ ದೊಣೆ (ಬತ್ತಳಿಕೆ) ತೀವಿದಂಬು (ತುಂಬಿದ ಬಾಣ) ಒಂದಿರವು (ಒಂದು ಸ್ಥಿತಿ?- ಹೊಂದಿಕೊಳ್ಳಲಾರವು) ತಪಕ್ಕೆ ಇದೆಂತುಟೊ (ಇದು ಹೇಗೊ) ತಪಂಗಳುಂ ಇಲ್ಲಂ ಅವು ಉಳ್ಳೊಡೆ (ತಪಸ್ಸು ಕೂಡ ಇಲ್ಲ, ಅದು ಇದ್ದ ಪಕ್ಷದಲ್ಲಿ) ಈಗಳು ಎಮ್ಮ ಅರಸರ ನಚ್ಚಿತ ಎಚ್ಚ ಶರಮಂ (ನಮ್ಮ ರಾಜರು ನಂಬಿಕೆಯಿಂದ ಹೊಡೆದ ಬಾಣವನ್ನು) ಸೆರಗಿಲ್ಲದೆ ಕೊಂಡು ಬರ್ಪಿರೇ (ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ?)
ಪದ್ಯ-೧೭:ಅರ್ಥ: ತಪಸ್ವಿಗಳೇ, ಬೂದಿಯೂ ಜಡೆಯೂ ತಪಸ್ಸಿಗೆ ಸರಿ; ಕವಚ, ಈ ಭಯಂಕರವಾದ ಬಿಲ್ಲು ಕತ್ತಿ ಗುರಾಣಿ, ಬಾಣದಿಂದ ತುಂಬಿದ ಈ ಎರಡು ಬತ್ತಳಿಕೆಗಳು -ಇವು ತಪಸ್ಸಿಗೆ ಹೊಂದಿಕೊಳ್ಳಲಾರವು. ಇದು ಹೇಗೊ! ತಪಸ್ಸು ಕೂಡ ಇಲ್ಲ, ಅದು ಇದ್ದ ಪಕ್ಷದಲ್ಲಿ, ನಮ್ಮ ರಾಜರು ನಂಬಿಕೆಯಿಂದ (ಗುರಿಯಿಟ್ಟು) ಹೊಡೆದ ಬಾಣವನ್ನು ಭಯವಿಲ್ಲದೆ ಕೊಂಡು ಬರುತ್ತಿದ್ದಿರಾ? ಎಂದನು ಗಹನನ ವೇಶದಲ್ಲಿದ್ದ ಷಣ್ಮುಖನು.
ಕಂ|| ಅಱಿಯದೆ ತಂದೊಡಮೇನೆ
ಮ್ಮೆರೆಯಂಗದನೆಮ್ಮ ಕೆಯ್ಯೊಳಟ್ಟಿಂ ನೀಮಿಂ|
ತಱೆಯುತ್ತುಂ ಪೆಱರೊಡಮೆಯ
ನುರೆ ಸೆವಿಡಿದಿರ್ಪಿರಿನ್ನರುರ್ವಿಯೊಳೊಳರೇ|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ: ಅಱಿಯದೆ ತಂದೊಡಂ ಏಂ ( ತಿಳಿಯದೆ ತಂದರೆ ತಾನೆ ಏನು? (ದೋಷವಿಲ್ಲ)) ಎಮ್ಮೆರೆಯಂಗದನು ಎಮ್ಮ ಕೆಯ್ಯೊಳ್ ಅಟ್ಟಿಂ (ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ.) ನೀಂ ಇಂತು ಅಱಿಯುತ್ತುಂ (ಅರಿತವರಾಗಿ) ಪೆಱರ ಒಡಮೆಯನು ಉರೆ ಸೆವಿಡಿದಿರ್ಪಿರಿ (ನೀವು ಹೀಗೆ ಅರಿತವರಾಗಿದ್ದರೂ ಇತರರ ವಸ್ತುವನ್ನು ವಶಪಡಿಸಿಟ್ಟಿದ್ದೀರಲ್ಲ!) ಇನ್ನರ್ ಉರ್ವಿಯೊಳ್ ಒಳರೇ (ಇಂತಹವರೂ ಭೂಮಿಯಲ್ಲಿ ಇದ್ದಾರೆಯೇ? )
ಪದ್ಯ-೧೮:ಅರ್ಥ: . ತಿಳಿಯದೆ ತಂದರೆ ತಾನೆ ಏನು? (ದೋಷವಿಲ್ಲ). ನಮ್ಮ ಯಜಮಾನರಿಗೆ ಅದನ್ನು ನನ್ನ ಕಯ್ಯಲ್ಲಿ ಕಳುಹಿಸಿಕೊಡಿ. ನೀವು ಹೀಗೆ ಅರಿತವರಾಗಿದ್ದರೂ ಇತರರ ವಸ್ತುವನ್ನು ವಶಪಡಿಸಿಟ್ಟಿದ್ದೀರಲ್ಲ! ಇಂತಹವರೂ ಭೂಮಿಯಲ್ಲಿ ಇದ್ದಾರೆಯೇ?
ವ|| ಎಂದು ಕಿರಾತದೂತಂ ತನ್ನನತಿಕ್ರಮಿಸಿ ನುಡಿದುದರ್ಕೆ ಮುಳಿದು ಪರಾಕ್ರಮಧವಳನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಕಿರಾತದೂತಂ ತನ್ನನು ಅತಿಕ್ರಮಿಸಿ ನುಡಿದುದರ್ಕೆ ಮುಳಿದು (ಮಾತನಾಡಿದುದಕ್ಕೆ ಕೋಪಿಸಿ)ಪರಾಕ್ರಮಧವಳನು (ಅರ್ಜುನನು ) ಇಂತೆಂದಂ-
ವಚನ:ಅರ್ಥ:ಎಂದು ಆ ಬೇಡನ ದೂತನಾದ ಗುಹನು ತನ್ನನ್ನು ಮೀರಿ ಮಾತನಾಡಿದುದಕ್ಕೆ ಕೋಪಿಸಿ ಪರಾಕ್ರಮಧವಳನಾದ ಅರ್ಜುನನು ಹೀಗೆಂದನು-
ಕಂ|| ದಸಿಕೊಂದಕ್ಕುಂ ಬೇಡಂ
ಗಿಸಲ್ಕೆ ದೊರೆ ಮೃಗಮನೀ ಜಗಂಗಳನಳ್ಳಾ|
ಡಿಸುವ ಮದೀಯೋಗ್ರಾಸ್ತ್ರಂ
ಪೆಸರ್ಗೊಳಲೇಂ ತನಗೆ ದೊರೆಯೆ ಖಳನಳವಱಿಯಂ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ದಸಿಕೆ ಒಂದು ಅಕ್ಕುಂ ದೊರೆ(ಸಮಾನ)(ದಸಿಕೆ-ಚೂಪಾದ ಕಡ್ಡಿ, ಮೊಳೆಯ ಸಮಾನವಸ್ತು ಒಂದು ಸಾಕು) ಬೇಡಂಗೆ ಇಸಲ್ಕೆ ಮೃಗಮನು(ಬೇಡನಿಗೆ 'ಹಂದಿಯನ್ನು' ಹೊಡೆಯಲು), ಈ ಜಗಂಗಳನು ಅಳ್ಳಾಡಿಸುವ ಮದೀಯ ಉಗ್ರಾಸ್ತ್ರಂ (ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಅಸ್ತ್ರದ ) ಪೆಸರ್ಗೊಳಲ್ (ಹೆಸರು ಹೇಳಲು ) ಏಂ ತನಗೆ ದೊರೆಯೆ ಖಳನ ಅಳವ ಅಱಿಯಂ (ಅರಿಯನು).(ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ. ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ.)
ಪದ್ಯ-೧೯:ಅರ್ಥ: ಬೇಡನಿಗೆ (ಶಿವನಿಗ ಈ) ಒಂದು ಪ್ರಾಣಿಯನ್ನು ಹೊಡೆಯಲು ಒಂದು ಕಡ್ಡಿ ಸಾಕು. ಈ ಲೋಕಗಳನ್ನೇ ನಡುಗಿಸುವಂತೆ ಮಾಡುವ ನನ್ನ ಭಯಂಕರವಾದ ಅಸ್ತ್ರದ ಹೆಸರು ಹೇಳಲು ತಾನೆ ಅವನಿಗೆ (ಆ ನಿನ್ನ ಒಡೆಯನಿಗೆ) ಸಾಧ್ಯವೇ. ಆ ದುಷ್ಟನು ನನ್ನ ಶಕ್ತಿಯನ್ನು ಇನ್ನೂ ತಿಳಿದಿಲ್ಲ.
ಉ|| ಏಱನೆ ಸೂಗೊಂಡು ನುಡಿವೀ ನುಡಿಯಲ್ಲದೆ ಮತ್ತಮಾಸನಂ
ದೋಱುವ ಬಲ್ಪುದೋಱುವೆರ್ದೆದೋಱುವ ಕಯ್ಪೆಸರಂಗಳೆಮ್ಮನುಂ|
ತೇಱವು ಬೇಡ ಬೇಡದಿರು ಬೇಡ ಚಲಂಬೆರಸಂಬನಂಬನಿನ್
ಕಾಱುತೆ ಮೋದಲಾಟಿಪೊಡೆ ನೀಂ ಬರವೇೞ್ವುದು ನಿನ್ನನಾಳ್ದನಂ|| ೨೦ ||
ಪದ್ಯ-೨೦:ಪದವಿಭಾಗ-ಅರ್ಥ:ಏಱನೆ ಸೂರೆಗೊಂಡು ನುಡಿವ ಈ ನುಡಿಯಲ್ಲದೆ (ಕೇವಲ ಕಲಹವನ್ನೇ ಉದ್ದೇಶಮಾಡಿಕೊಂಡು ಹೇಳುವ ಈ ಮಾತಲ್ಲದೇ) ಮತ್ತಂ ಆಸನಂದೋಱುವ (ಉಪೇಕ್ಷೆ ತೋರಿಸುವ) ಬಲ್ಪುದೋಱುವ ಎರ್ದೆದೋಱುವ (ಬಲುಹು ತೋರಿಸುವ, ಧೈರ್ಯಮೆರೆಯುವ) ಕಯ್ಪೆಸರಂಗಳಯ ಎಮ್ಮನುಂ (ಕಹಿಮಾತುಗಳು ನಮ್ಮನ್ನು)ಉಂತೆ ಏಱವು (ನಮ್ಮಲ್ಲಿ ನೆಡೆಯವು.) ಬೇಡ ಬೇಡದಿರು ಬೇಡ ಚಲಂ ಬೆರಸಿ ಅಂಬನು (ಎಲೋ ಬೇಡ, ಬೇಡ ನಿನಗೆ, ಹಟಹಿಡಿದು ಬಾಣವನ್ನು ಕೇಳದಿರು.) ಅಂಬನು ಇನ್ಕಾಱುತೆ (ಬಾಣವನ್ನು ಇನ್ನು ಕಾರುತ್ತಾ) ಮೋದಲು ಆಟಿಪೊಡೆ (ಅಟಕಾಯಿಸುವುದಾದರೆ- ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ಧಮಾಡುವ ಅಪೇಕ್ಷೆಯೇ ಇದ್ದರೆ) ನೀಂ ಬರವೇೞ್ವುದು ನಿನ್ನನು ಆಳ್ದನಂ (ನೀನು ನಿನ್ನ ಯಜಮಾನನನ್ನು ಬರಹೇಳು)
ಪದ್ಯ-೨೦:ಅರ್ಥ: . ಕೇವಲ ಕಲಹವನ್ನೇ ಉದ್ದೇಶಮಾಡಿಕೊಂಡು ಹೇಳುವ ಈ ಮಾತಲ್ಲದೇ ಮತ್ತೆ ಬಲುಹು ತೋರಿಸುವ, ಧೈರ್ಯಮೆರೆಯುವ ಇಂತಹ ಕಹಿಮಾತುಗಳು ನಮ್ಮಲ್ಲಿ ನೆಡೆಯವು. ಈ ಕಹಿಯಾದ ಮಾತುಗಳು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಲಾರವು (ನಮ್ಮನ್ನು ಹೆದರಿಸಲಾರವು). ಎಲೋ ಬೇಡ ನಿನಗೆ ಹಟಬೇಡ, ಬಾಣವನ್ನು ಕೇಳದಿರು. ಬಾಣದ ಮೇಲೆ ಬಾಣವನ್ನು ಕಾರಿಸುತ್ತ ಯುದ್ಧಮಾಡುವ ಅಪೇಕ್ಷೆಯೇ ಇದ್ದರೆ, ನೀನು ನಿನ್ನ ಯಜಮಾನನನ್ನು ಬರಹೇಳು, ಎಂದನು ಅರ್ಜುನ.

ಶಿವ ಅರ್ಜುಹರ ಯುದ್ಧ[ಸಂಪಾದಿಸಿ]

ವ|| ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ ಬಗ್ಗಿಸಿದೊಡಾ ಮಾತೆಲ್ಲಮನಾ ಮಾೞ್ಕೆಯೊಳೆ ಪೋಗಿ ಕಪಟ ಕಿರಾತಂಗಱಪಿದೊಡಾತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು ಹಸ್ತ್ಯಶ್ವರಥಪದಾತಿಬಲಂಗಳನೆನಿತಾನುಮನಿದಿರೊಳ್ ತಂದೊಡ್ಡಿದಾಗಳ್ ಪರಸೈನ್ಯಭೈರವಂ ಮಹಾಪ್ರಳಯಭೈರವಾಕಾರಮಂ ಕೆಯ್ಕೊಂಡು ಸೆರಗಿಲ್ಲದೆ ಬಂದು ತಾಗಿ-
ವಚನ:ಪದವಿಭಾಗ-ಅರ್ಥ:ಎಂದು ಬಂದ ಕಿರಾತದೂತನಂ ವಿಕ್ರಾಂತತುಂಗಂ (ಅರ್ಜುನನು) ಬಗ್ಗಿಸಿದೊಡೆ (ಗದರಿಸಿದರೆ) ಆ ಮಾತೆಲ್ಲಮನು ಆ ಮಾೞ್ಕೆಯೊಳೆ ಪೋಗಿ ಕಪಟ ಕಿರಾತಂಗೆ ಅಱಪಿದೊಡೆ (ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದಾಗ,) ಆತನುಂ ಮಾಯಾಯುದ್ಧಮಂ ಪೊಣರ್ಚಲ್ ಬಗೆದು (ಆತನು ಮಾಯಾಯುದ್ಧವನ್ನು ಹೂಡಲು ಯೋಚಿಸಿ,) ಹಸತಿ ಅಶ್ವ ರಥ ಪದಾತಿ ಬಲಂಗಳನು ಎನಿತಾನುಮಂ (ಅಸಂಖ್ಯಾತ) ಇದಿರೊಳ್ ತಂದೊಡ್ಡಿದಾಗಳ್ (ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದಾಗ,) ಪರಸೈನ್ಯಭೈರವಂ ಮಹಾಪ್ರಳಯಭೈರವಾಕಾರಮಂ ಕೆಯ್ಕೊಂಡು (ಅರ್ಜುನನು ಪ್ರಳಯಕಾಲದ ಭೈರವನ ಆಕಾರವನ್ನು ತಾಳಿ) ಸೆರಗಿಲ್ಲದೆ ಬಂದು ತಾಗಿ (ಭಯವಿಲ್ಲದೆ ಬಂದು ಎದುರಿಸಿ)-
ವಚನ:ಅರ್ಥ:ಎಂದು ಬಂದ ದೂತನಾದ ಗುಹನನ್ನು ವಿಕ್ರಾಂತತುಂಗನಾದ ಅರ್ಜುನನು ಗದರಿಸಿ ಕಳುಹಿಸಿದನು. ಅವನು ಆ ಮಾತೆಲ್ಲವನ್ನೂ ಆ ರೀತಿಯಲ್ಲಿಯೇ ಹೋಗಿ ಆ ಕಪಟಕಿರಾತನಾದ ಶಿವನಿಗೆ ತಿಳಿಸಿದಾಗ, ಆತನು ಮಾಯಾಯುದ್ಧವನ್ನು ಹೂಡಲು ಯೋಚಿಸಿ, ಅಸಂಖ್ಯಾತ ಆನೆ, ಕುದುರೆ, ತೇರು ಮತ್ತು ಕಾಲಾಳು ಸೈನ್ಯವನ್ನು ಇದಿರಿನಲ್ಲಿ ತಂದೊಡ್ಡಿದನು. ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ ಆಕಾರವನ್ನು ತಾಳಿ ಭಯವಿಲ್ಲದೆ ಬಂದು ಎದುರಿಸಿ- (ಎದುರಿಸಿದನು).
ಚಂ|| ಕೆದರೆ ಚತುರ್ಬಲಂ ಬೆದರೆ ತಳ್ತ ದೞಂ ಕೆಡೆದೆೞ್ಗಿ ತೞ್ಗಿ ಮಾ
ಣದೆ ಪೆಱಗಿಟ್ಟು ಬಾಯ್ಬಿಡೆ ಘಟಾಳಿ ಗುರ್ಣಾವನಂಬು ಲಕ್ಕಲೆ|
ಕ್ಕದೆ ಕೊಳೆ ಚಾತುರಂಗಬಲಮಂತೞಿದೞ್ಗೆ ಕನಲ್ದೊನಲ್ದು ಮಾ
ಣದೆ ಪೆಣೆದಂ ಹರಂ ದಿಗಿಭದೊಳ್ ದಿಗಿಭಂ ಪೆಣೆವಂತೆ ಪಾರ್ಥನೊಳ್|| ೨೧||
ಪದ್ಯ-೨೧:ಪದವಿಭಾಗ-ಅರ್ಥ:ಕೆದರೆ ಚತುರ್ಬಲಂ (ಚತುರಂಗಸೈನ್ಯವು ಚದುರಿತು; ಚದುರಲು,) ಬೆದರೆ ತಳ್ತ ದೞಂ (ನೆರೆದಿದ್ದ ಸೈನ್ಯವು ಬೆದರಿತು. ಬೆದರಲು,) ಕೆಡೆದು ಅೞ್ಗಿ ತೞ್ಗಿ ಮಾಣದೆ ಪೆಱಗಿಟ್ಟು ಬಾಯ್ಬಿಡೆ ಘಟಾಳಿ (ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು.) ಗುರ್ಣಾವನ ಅಂಬು ಲಕ್ಕಲೆಕ್ಕದೆ ಕೊಳೆ (ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ) ಚಾತುರಂಗಬಲಂ ಅಂತು ಅೞಿದು ಅೞ್ಗೆ ಕನಲ್ದ ಒನಲ್ದು (ಚತುರಂಗಸೈನ್ಯವೂ ನಾಶವಾಗಿ ಕುಗ್ಗಲು,ಶಿವನು ವಿಶೇಷವಾಗಿ ಕೋಪಿಸಿಕೊಂಡು) ಮಾಣದೆ ಪೆಣೆದಂ ಹರಂ ದಿಗಿಭದೊಳ್ ದಿಗಿಭಂ ಪೆಣೆವಂತೆ ಪಾರ್ಥನೊಳ್ (ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜನೊಡನೆ ಹೆಣೆದುಕೊಳ್ಳುವಂತೆ ಅರ್ಜುನನೊಡನೆ ಶಿವನು ಹೆಣೆದುಕೊಂಡು ಹೋರಾಡಿದನು. )
ಪದ್ಯ-೨೧:ಅರ್ಥ:ಚತುರಂಗಸೈನ್ಯವು ಚದುರಿತು. ನೆರೆದಿದ್ದ ಸೈನ್ಯವು ಬೆದರಿತು. ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು. ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ ಚತುರಂಗಸೈನ್ಯವೂ ನಾಶವಾಗಿ ಕುಗ್ಗಲು, ಶಿವನು ವಿಶೇಷವಾಗಿ ಕೋಪಿಸಿಕೊಂಡು, ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜನೊಡನೆ ಹೆಣೆದುಕೊಳ್ಳುವಂತೆ ಅರ್ಜುನನೊಡನೆ ಶಿವನು ಹೆಣೆದುಕೊಂಡು ಹೋರಾಡಿದನು.
ವ|| ಅಂತು ಶೂನ್ಯಹಸ್ತದೊಳಿರ್ವರುಂ ಪೆಣೆದು ಪಲವುಂ ಗಾಯದೊಳಾಯಂದಪ್ಪದೆ ಪಿರಿದುಂ ಪೊೞ್ತು ಸಂತರ್ಪಿನಂ (?) ಪೋರೆ ದೇವರೆಲ್ಲರುಮಂಬರತಳದೊಳಿರ್ದು ತಮ್ಮಂ (?)ನೋೞ್ಪಂತೆ ನೋಡೆ-
ವಚನ:ಪದವಿಭಾಗ-ಅರ್ಥ:ಅಂತು ಶೂನ್ಯಹಸ್ತದೊಳು (ನಿರಾಯುಧರಾಗಿ) ಇರ್ವರುಂ ಪೆಣೆದು ಪಲವುಂ ಗಾಯದೊಳ್ ಆಯಂದಪ್ಪದೆ ಪಿರಿದುಂ ಪೊೞ್ತು (ಹಲವು ಪಟ್ಟುಗಳಲ್ಲಿ ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು) ಸಂತರ್ಪಿನಂ (ಸಂತೃಪ್ತಿಯಾಗುವಂತೆ?) ಪೋರೆ (ಹೋರೆ- ಹೋರಾಡಲು) ದೇವರೆಲ್ಲರುಂ ಅಂಬರ ತಳದೊಳಿರ್ದು ತಮ್ಮಂ ನೋೞ್ಪಂತೆ ನೋಡೆ (ದೇವತೆಗಳು ಆಕಾಶಪ್ರದೇಶದಲ್ಲಿ ಇದ್ದುಕೊಂಡು ಅವರ ದ್ವಂದ್ವ ಯುದ್ಧವನ್ನು ತಮ್ಮದೇ ಯುದ್ಧವೆಂಬಂತೆ ನೋಡುತ್ತಿದ್ದರು.)
ವಚನ:ಅರ್ಥ:ಹಾಗೆ ನಿರಾಯುಧರಾಗಿ ಇಬ್ಬರೂ ಹೆಣೆದುಕೊಂಡು ಹಲವು ಪಟ್ಟುಗಳಲ್ಲಿ ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು ಕಾದಿದರು. ದೇವತೆಗಳು ಆಕಾಶಪ್ರದೇಶದಲ್ಲಿದ್ದುಕೊಂಡು ಅವರ ದ್ವಂದ್ವ ಯುದ್ಧವನ್ನು ನೋಡುತ್ತಿದ್ದರು.
ಕಂ|| ಇಕ್ಕಿದನಭವಂ ಪಾರ್ಥನ
ನಿಕ್ಕಿದನಾ ತ್ರಿಪುರಹರನನರ್ಜುನನೆನೆ ಗೆ|
ಲ್ಲಕ್ಕೆ ಮುಡಿಗಿಕ್ಕುವಂತೆವೊ
ಲಿಕ್ಕಿದನವಯವದೆ ನೆಲದೊಳರಿಗಂ ಹರನಂ|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಇಕ್ಕಿದನು ಅಭವಂ(ಶಿವ) ಪಾರ್ಥನನು (ಶಿವನು ಪಾರ್ಥನನ್ನು ಬೀಳಿಸಿದನು;), ಇಕ್ಕಿದನು ಆ ತ್ರಿಪುರಹರನನ ಅರ್ಜುನನು ಎನೆ ಗೆಲ್ಲಕ್ಕೆ ಮುಡಿಗಿಕ್ಕುವಂತೆವೊಲ್ (ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮವಿಲ್ಲದೆ ನೆಲದಲ್ಲಿ ಬೀಳಿಸಿ) ಇಕ್ಕಿದ ಅವಯವದೆ (ಶ್ರಮವಿಲ್ಲದೆ) ನೆಲದೊಳು ಅರಿಗಂ ಹರನಂ (ರ್ಜುನನು ಶಿವನನ್ನು ಶ್ರಮವಿಲ್ಲದೆ ನೆಲದಲ್ಲಿ ಬೀಳಿಸಿದನು)
ಪದ್ಯ-೨೨:ಅರ್ಥ:ಶಿವನು ಪಾರ್ಥನನ್ನು ಬೀಳಿಸಿದನು; ಪಾರ್ಥನು ಶಿವನನ್ನು ಬೀಳಿಸಿದನು. ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮವಿಲ್ಲದೆ ನೆಲದಲ್ಲಿ ಬೀಳಿಸಿದನು.
ವ|| ಅಂತು ನೆಲಕ್ಕಿಕ್ಕಿ ಗಂಟಲಂ ಮೆಟ್ಟಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ನೆಲಕ್ಕೆ ಇಕ್ಕಿ ಗಂಟಲಂ ಮೆಟ್ಟಿದಾಗಳ್-
ವಚನ:ಅರ್ಥ:ವ|| ಹಾಗೆ ನೆಲಕ್ಕೆ ಹಾಕಿ ಅವನ ಗಂಟಲನ್ನು ಮೆಟ್ಟಿದಾಗ-

ಅರ್ಜುನನಿಗೆ ಪಾಶುಪತಾಸ್ತ್ರ ಪ್ರದಾನ[ಸಂಪಾದಿಸಿ]

ಕಂ|| ಪೊಱಕಣ್ಗಂ ಮುನ್ನಂ ತಾಂ
ಮಱಸಿದ ನೊಸಲೊಂದು ಕಣ್ಣುಮಾಗಳ್ ನೊಸಲಿಂ|
ಪೊಱಮಟ್ಟಂತಿರೆ ತೋಱಿದ
ನೆಱಕದೆ ಹರಿಗಂಗೆ ರುದ್ರನಗ್ಗಳಗಣ್ಣಂ||೨೩||
ಪದ್ಯ-೨೩:ಪದವಿಭಾಗ-ಅರ್ಥ:ಪೊಱಕಣ್ಗಂ ಮುನ್ನಂ ತಾಂ ಮಱಸಿದ (ಕಣ್ಣುಗಳಿಗೆ ಹೊರಗೆ ಕಾಣದಂತೆ ಮೊದಲೇ ಮರಮಾಡಿದ್ದ) ನೊಸಲೊಂದು ಕಣ್ಣುಮಾಗಳ್ (ಹಣೆಗಣ್ಣೊಂದು) ನೊಸಲಿಂ ಪೊಱಮಟ್ಟಂತಿರೆ (ಆಗ ಹಣೆಯಿಂದ ಹೊರ ಹೊರಟ ಹಾಗಿರಲು) ತೋಱಿದಂ ಎಱಕದೆ (ಪ್ರೀತಿಯಿಂದ - ತೋರಿದನು) ಹರಿಗಂಗೆ ರುದ್ರನು ಅಗ್ಗಳಗಣ್ಣಂ (ಶ್ರೇಷ್ಠವಾದ ಕಣ್ಣನ್ನು) (ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು)
ಪದ್ಯ-೨೩:ಅರ್ಥ: ಕಣ್ಣುಗಳಿಗೆ ಹೊರಗೆ ಕಾಣದಂತೆ ಮೊದಲೇ ಮರಮಾಡಿದ್ದ ಹಣೆಗಣ್ಣೊಂದು ಆಗ ಹಣೆಯಿಂದ ಹೊರ ಹೊರಟ ಹಾಗಿರಲು ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು.
ಉರದೊಳ್ ಫಣಿ ಕರದೊಳ್ ಬಿಲ್
ಶಿರದೊಳ್ ತೊರೆ ತೊರೆಯ ಕೆಲದೊಳೆಸೆದಿರೆ ಪೆರೆ ಮುಂ|
ಗೊರಲೊಳ್ ಕರೆ ಮರೆಯಿಲ್ಲದೆ
ದೊರೆಕೊಳೆ ಮೃಡನಡಿಗೆ ಹರಿಗನೆಱಗಿದನಾಗಳ್|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ:ಉರದೊಳ್ ಫಣಿ (ಎದೆಯಲ್ಲಿ ಹಾವು,) ಕರದೊಳ್ ಬಿಲ್ (ಕಯ್ಯಲ್ಲಿ ಬಿಲ್ಲು,) ಶಿರದೊಳ್ ತೊರೆ (ತಲೆಯಲ್ಲಿ ಗಂಗಾನದಿ,) ತೊರೆಯ ಕೆಲದೊಳ್ ಎಸೆದಿರೆ ಪೆರೆ (ನದಿಯ ಪಕ್ಕದಲ್ಲಿ ಚಂದ್ರ ಶೋಭಿಸಿರಲು,) ಮುಂಗೊರಲೊಳ್ ಕರೆ (ಮುಂಭಾಗದ ಕೊರಳಿನಲ್ಲಿ ಕಪ್ಪುಕಲೆ) ಮರೆಯಿಲ್ಲದೆ ದೊರೆಕೊಳೆ (ಅಡಗದೆ ಕಾಣಿಸಿಕೊಳ್ಳಲು), ಮೃಡನಡಿಗೆ ಹರಿಗನು ಎಱಗಿದನು ಆಗಳ್ (ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು)
ಪದ್ಯ-೨೪:ಅರ್ಥ:ಎದೆಯಲ್ಲಿ ಹಾವು, ಕಯ್ಯಲ್ಲಿ ಬಿಲ್ಲು, ತಲೆಯಲ್ಲಿ ಗಂಗಾನದಿ, ನದಿಯ ಪಕ್ಕದಲ್ಲಿ ಚಂದ್ರ,ಶೋಭಿಸಿರಲು, ಮುಂಭಾಗದ ಕೊರಳಿನಲ್ಲಿ ಕಪ್ಪುಕಲೆ, ಅಡಗದೆ ಕಾಣಿಸಿಕೊಳ್ಳಲು ಶಿವನ ಪಾದಕ್ಕೆ ಅರ್ಜುನನು ತಕ್ಷಣ ನಮಸ್ಕರಿಸಿದನು.
ವ|| ಅಂತೆಱಗಿ ಪೊಡವಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಎಱಗಿ ಪೊಡವಟ್ಟು-
ವಚನ:ಅರ್ಥ: ಹಾಗೆ ಬಗ್ಗಿ ನಮಸ್ಕಾರಮಾಡಿ-
ಕಂ|| ನೀನಪ್ಪುದನಣಮಱಿಯದೆ
ದಾನವ ಮಾನವ ಸುರೇಂದ್ರ ಮಣಿಮಕುಟತಟಾ|
ವ್ಯಾನಪದಂಗಾ ನೆಗೞ್ದುದ
ನಾನೇತರೊಳೆಂತು ನೀಗುವೆಂ ನೀಂ ಬೆಸಸಾ|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ನೀನಪ್ಪುದಂ ಅಣಂ ಅಱಿಯದೆ, ದಾನವ ಮಾನವ ಸುರೇಂದ್ರ (ಇಂದ್ರ) ಮಣಿಮಕುಟತಟ ಆವ್ಯಾನ(ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ) ಪದಂಗೆ (ಪಾದಗಳುಳ್ಳ ಶಿವನಾದ ನಿನಗೆ) ನೆಗೞ್ದುದನು (ಹಾಗೆ ಮಾಡಿದ್ದನ್ನು) ಆನು ಏತರೊಳ್ ಎಂತು ನೀಗುವೆಂ (ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ) ನೀಂ ಬೆಸಸಾ (ನೀನೇ ಹೇಳು- ಅಪ್ಪಣೆ ಕೊಡಿಸು.)
ಪದ್ಯ-೨೫:ಅರ್ಥ: . (ನನ್ನನ್ನು ಪ್ರತಿಭಟಿಸಿದವನು ಶಿವನಾದ) ನೀನು ಎಂಬುದನ್ನು ತಿಳಿಯದೆ ರಾಕ್ಷಸ, ಮನುಷ್ಯ, ದೇವೇಂದ್ರ ಇವರುಗಳ ರತ್ನಖಚಿತವಾದ ಕಿರೀಟಪ್ರದೇಶಗಳಿಂದ ಆವರಿಸಲ್ಪಟ್ಟ ಪಾದಗಳುಳ್ಳ ಶಿವನಾದ ನಿನಗೆ ನಾನು ಮಾಡಿದ ಅಪಚಾರವನ್ನು ಯಾವುದರಲ್ಲಿ ಹೇಗೆ ಕಳೆಯಲಿ ಎಂಬುದನ್ನು ನೀನೇ ಹೇಳು- ಅಪ್ಪಣೆ ಕೊಡಿಸು.
ವ|| ಎಂದು ವಿನಯವಿನಮಿತೋತ್ತಮಾಂಗನಾಗಿ ಕರಕಮಳಂಗಳಂ ಮುಗಿದು ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ ಮೆಚ್ಚಿದೆಂ ಬರವಂ ಬೇಡಿಕೊಳ್ಳೆನೆ ಮಹಾಪ್ರಸಾದಂ ಪೆಱತೇನುಮನೊಲ್ಲೆನೆನಗೆ ನಿಮ್ಮಡಿ ಪಾಶುಪತಾಸ್ತ್ರಮಂ ದಯೆಗೆಯ್ವುದೆನೆ ನಿನ್ನ ತಪಶ್ಶಕ್ತಿಗಂ ಭಕ್ತಿಗಂ ಮೆಚ್ಚಿತ್ತೆನೆಂದು-
ವಚನ:ಪದವಿಭಾಗ-ಅರ್ಥ:ಎಂದು ವಿನಯ ವಿನಮಿತ ಉತ್ತಮಾಂಗನಾಗಿ (ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ) ಕರಕಮಳಂಗಳಂ ಮುಗಿದು (ಎರಡೂ ಕೈಗಳನ್ನು ಮುಗಿದು) ತನ್ನ ಮುಂದಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ವಿನಯಕ್ಕಂ ಮೆಚ್ಚಿ (ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ / ಅರ್ಜುನನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ,) ಮೆಚ್ಚಿದೆಂ ಬರವಂ ಬೇಡಿಕೊಳ್ಳ್ ಎನೆ (‘ಮೆಚ್ಚಿದ್ದೇನೆ ವರವನ್ನು ಕೇಳಿಕೊ’ ಎನ್ನಲು,) ಮಹಾಪ್ರಸಾದಂ ಪೆಱತೇನುಮನು ಒಲ್ಲೆನು ಎನಗೆ ನಿಮ್ಮಡಿ (ನಿಮ್ಮ ಪಾದದ) ಪಾಶುಪತಾಸ್ತ್ರಮಂ ದಯೆಗೆಯ್ವುದು ಎನೆ (ಬೇರೆಯೇನೂ ಬೇಡ, ನನಗೆ ತಮ್ಮ ಪಾಶುಪತಾಸ್ತ್ರವನ್ನು ದಯಮಾಡಿ ಕೊಡಬೇಕು ಎನ್ನಲು-) ನಿನ್ನ ತಪಶ್ಶಕ್ತಿಗಂ ಭಕ್ತಿಗಂ ಮೆಚ್ಚಿ ಇತ್ತೆನು ಎಂದು-(ನಿನ್ನ ತಪ್ಪಶ್ಶಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು.)
ವಚನ:ಅರ್ಥ:ಎಂದು ವಿನಯದಿಂದ ಬಗ್ಗಿದ ತಲೆಯುಳ್ಳವನಾಗಿ (ನಮಸ್ಕರಿಸಿ) ಎರಡೂಕೈಗಳನ್ನು ಮುಗಿದು, ತನ್ನ ಮುಂದುಗಡೆ ನಿಂತಿದ್ದ ಪರಾಕ್ರಮಧವಳನ ಪರಾಕ್ರಮಕ್ಕೂ ವಿನಯಕ್ಕೂ ಮೆಚ್ಚಿ ಶಿವನು ‘ಮೆಚ್ಚಿದ್ದೇನೆ ವರವನ್ನು ಕೇಳಿಕೊ’ ಎಂದನು. ಅರ್ಜುನನು ಮಹಾಪ್ರಸಾದ, ಬೇರೆಯೇನೂ ಬೇಡ, ನನಗೆ ತಮ್ಮ ಪಾಶುಪತಾಸ್ತ್ರವನ್ನು ದಯಮಾಡಿ ಕೊಡಬೇಕು ಎಂದಾಗ, ನಿನ್ನ ತಪ್ಪಶ್ಶಕ್ತಿಗೂ ಭಕ್ತಿಗೂ ಮೆಚ್ಚಿ ಕೊಟ್ಟಿದ್ದೇನೆ ಎಂದು ಶಿವನು ಹೇಳಿದನು.
ಕಂ|| ಕ್ಲೇಶದ ಫಳಮೆರ್ದೆಗೊಳ್ಳದೆ
ಈಶಂ ಮನಮೊಸೆದು ನೆಗೞ್ದ ದಿವ್ಯಾಸ್ತ್ರಮನಾ.
ಪಾಶುಪತಾಸ್ತ್ರಮನಿತ್ತು ವಿ
ನಾಶಿತರಿಪುವಕ್ಕೆ ಹರಿಗನೆಂದಂ ದಯೆಯಿಂ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ಕ್ಲೇಶದ ಫಳಮ್ ಎರ್ದೆಗೊಳ್ಳದೆ (ಕಷ್ಟದಿಂದ ಬರುವ ಫಲ ಹೃದ್ಯವಾಗದೇ ಇರುವುದೆ?) ಈಶಂ ಮನಮ್ ಒಸೆದು ನೆಗೞ್ದ ದಿವ್ಯಾಸ್ತ್ರಮನು ಆ ಪಾಶುಪತಾಸ್ತ್ರಮನು ಇತ್ತು (ಈಶ್ವರನು ಮನಪ್ರೀತಿಯಿಂದ ಪ್ರಸಿದ್ಧವಾದ ದಿವ್ಯಾಸ್ತ್ರವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು) ವಿನಾಶಿತ ರಿಪುವಕ್ಕೆ ಹರಿಗನು ಎಂದಂ ದಯೆಯಿಂ (ಅರ್ಜುನನನ್ನು ‘ಶತ್ರುಗಳನ್ನು ನಾಶಮಾಡಿದವನಾಗು’ ಎಂದು ಹರಸಿದನು.)
ಪದ್ಯ-೨೬:ಅರ್ಥ:ಕಷ್ಟದಿಂದ ಬರುವ ಫಲ ಹೃದ್ಯವಾಗದೇ ಇರುವುದೆ? ಈಶ್ವರನು ಮನಪ್ರೀತಿಯಿಂದ ಪ್ರಸಿದ್ಧವಾದ ದಿವ್ಯಾಸ್ತ್ರವಾದ ಪಾಶುಪತಾಸ್ತ್ರವನ್ನು ದಯೆಯಿಂದ ಕೊಟ್ಟು ಅರ್ಜುನನನ್ನು ‘ಶತ್ರುಗಳನ್ನು ನಾಶಮಾಡಿದವನಾಗು’ ಎಂದು ಹರಸಿದನು
ವ|| ಆಗಳೀಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು ಗೌರಿದೇವಿಯುಮಂಜರಿಕಾಸ್ತ್ರಮೆಂಬ ಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ ಮೂವತ್ತುಮೂದೇವರುಂ ತಂತಮ್ಮ ನಚ್ಚಿನಂಬುಗಳಂ ತಂದೀಯೆ ಗುಣಾರ್ಣವಂ ಸಂಪೂರ್ಣ ಮನೋರಥನಾಗಿರ್ದಾಗಳಿಂದ್ರಂ ಪರಾಕ್ರಮಧವಳನ ಪರಾಕ್ರಮಕ್ಕಮೇಗೆಯ್ವ ತೆಱನುಮಱಯದೆಯುಮತಿಸ್ನೇಹದಿಂ ಪುಷ್ಪವೃಷ್ಟಿಯುಮನಾನಂದಬಾಷ್ಪ ವೃಷ್ಟಿಯುಮನೊಡನೊಡನೆ ಸುರಿದು ಪಲವು ದಿವಸಮುಗ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶ್ರಮಂ ಪೋಗೆ ಕೆಲವು ದಿವಸಮನೆಮ್ಮ ಲೋಕದೊಳ್ ವಿಶ್ರಮಿಸಿ ಬರ್ಪೆ ಬಾ ಪೋಪಮೆಂದು ತನ್ನೊಡನೆ ರಥಮನೇಱಿಸಿಕೊಂಡು ಗಗನತಳಕ್ಕೊಗೆದು ತನ್ನಮರಾವತೀಪುರಮನೆಯ್ದಿ ಮಗಂ ಬಂದೊಸಗೆಗೆ ಪೊೞಲೊಳಷ್ಟ ಶೋಭೆಯಂ ಮಾಡಿಸಿ ಪೊೞಲಂ ಪೊಕ್ಕಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಈಶ್ವರಂ ಕೊಟ್ಟುದರ್ಕೆ ತೆಲ್ಲಂಟಿಯೆಂದು (ಬಹುಮಾನವೆಂದು) ಗೌರಿದೇವಿಯುಂ ಅಂಜರಿಕಾಸ್ತ್ರಮೆಂಬ ಅಮೋಘಾಸ್ತ್ರಮಂ ವಿಕ್ರಮಾರ್ಜುನಂಗೆ ಕುಡೆ (ಗೌರೀದೇವಿಯು ಅಂಜರಿಕಾಸ್ತ್ರವೆಂಬ ಅಮೋಘವಾದ ಅಸ್ತ್ರವನ್ನು ವಿಕ್ರಮಾರ್ಜುನನಿಗೆ ಕೊಡಲು, - ಕೊಟ್ಟಳು) ಮೂವತ್ತುಮೂದೇವರುಂ ತಂತಮ್ಮ ನಚ್ಚಿನಂಬುಗಳಂ ತಂದು ಈಯೆ (ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತ್ರಗಳನ್ನು ತಂದು) ಗುಣಾರ್ಣವಂ ಸಂಪೂರ್ಣ ಮನೋರಥನಾಗಿಇರ್ದು(ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನಸ್ಸಿನ ಆಸೆ ನೆರವೇರಿದವನಾದನು.) ಆಗಳು ಇಂದ್ರಂ ಪರಾಕ್ರಮಧವಳನ (ಅರ್ಜುನನ) ಪರಾಕ್ರಮಕ್ಕ ಮೇಗೆಯ್ವ ತೆಱನುಂ ಅಱಿಯದೆಯುಂ (ಗೌರವಿಸುವ ಬಗೆಯನ್ನು ತಿಳಿಯದೆ) ಅತಿಸ್ನೇಹದಿಂ ಪುಷ್ಪವೃಷ್ಟಿಯುಮಂ ಆನಂದಬಾಷ್ಪ ವೃಷ್ಟಿಯುಮನು ಒಡನೊಡನೆ ಸುರಿದು ಒಟ್ಟಿಗೆ ಸುರಿಸಿ (ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು); ಪಲವು ದಿವಸಂ ಉಗ್ರೋಗ್ರತಪದೊಳ್ ಮೆಯ್ಯಂ ದಂಡಿಸಿದ ಪರಿಶ್ರಮಂ ಪೋಗೆ (‘ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸ ಹೋಗಲು,) ಕೆಲವು ದಿವಸಮನು ಎಮ್ಮ ಲೋಕದೊಳ್ ವಿಶ್ರಮಿಸಿ ಬರ್ಪೆ ಬಾ ಪೋಪಮೆಂದು (ಕೆಲವು ಕಾಲ ನಮ್ಮ ಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ’ ಎಂದು) ತನ್ನೊಡನೆ ರಥಮನೇಱಿಸಿಕೊಂಡು ಗಗನತಳಕ್ಕೊಗೆದು ತನ್ನ ಅಮರಾವತೀಪುರಮನು ಎಯ್ದಿ,(ತನ್ನ ಜೊತೆಯಲ್ಲಿಯೇ ರಥವನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು) ಮಗಂ ಬಂದ ಒಸಗೆಗೆ ಪೊೞಲೊಳಷ್ಟ ಶೋಭೆಯಂ ಮಾಡಿಸಿ ಪೊೞಲಂ ಪೊಕ್ಕಾಗಳ್ ( ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು- ಮಾಡಿಸಿದಾಗ)-
ವಚನ:ಅರ್ಥ:ಆಗ ಈಶ್ವರನು ಕೊಟ್ಟುದಕ್ಕೆ ಬಹುಮಾನವೆಂದು ಗೌರೀದೇವಿಯು ಅಂಜರಿಕಾಸ್ತ್ರವೆಂಬ ಅಮೋಘವಾದ ಅಸ್ತ್ರವನ್ನು ವಿಕ್ರಮಾರ್ಜುನನಿಗೆ ಕೊಟ್ಟಳು. ಮೂವತ್ತು ಮೂರು ದೇವರುಗಳು ತಮ್ಮ ಪ್ರಧಾನಾಸ್ತ್ರಗಳನ್ನು ತಂದುಕೊಡಲು, ಗುಣಾರ್ಣವನಾದ ಅರ್ಜುನನು ಸಂಪೂರ್ಣ ಮನಸ್ಸಿನ ಆಸೆ ನೆರವೇರಿದವನಾದನು. ಇಂದ್ರನು ಪರಾಕ್ರಮಧವಳನಾದ ಅರ್ಜುನನ ಶೌರ್ಯಪರಾಕ್ರಮಗಳಿಗೆ ಯಾವ ರೀತಿಯ ಗೌರವ ಸತ್ಕಾರಗಳನ್ನು ಮಾಡಬೇಕೆಂಬುದನ್ನು ತಿಳಿಯದೆ ವಿಶೇಷವಾದ ಸ್ನೇಹದಿಂದ ಪುಷ್ಪವೃಷ್ಟಿಯನ್ನೂ ಆನಂದಬಾಷ್ಪವನ್ನೂ ಜೊತೆಜೊತೆಯಲ್ಲಿಯೇ ಸುರಿಸಿದನು. ‘ಅನೇಕ ದಿನ ಬಹು ಕಠಿಣವಾದ ತಪಸ್ಸಿನಲ್ಲಿ ಶರೀರವನ್ನು ದಂಡಿಸಿದ್ದೀಯೆ. ಆಯಾಸ ಹೋಗಲು, ಹಾಗೆ ಕೆಲವು ಕಾಲ ನಮ್ಮ ಲೋಕದಲ್ಲಿ ವಿಶ್ರಾಂತಿಯನ್ನು ಪಡೆದು ಬರುವೆಯಂತೆ ಹೋಗೋಣ ಬಾ’ ಎಂದು ತನ್ನ ಜೊತೆಯಲ್ಲಿಯೇ ರಥವನ್ನು ಹತ್ತಿಸಿಕೊಂಡು ಆಕಾಶ ಪ್ರದೇಶಕ್ಕೆ ನೆಗೆದು ತನ್ನ ರಾಜಧಾನಿಯಾದ ಅಮರಾವತೀಪಟ್ಟಣವನ್ನು ಸೇರಿದನು. ಮಗನು ಬಂದ ಸಂತೋಷಕ್ಕಾಗಿ ಪಟ್ಟಣವನ್ನು ತಳಿರು ತೋರಣಾದಿ ಎಂಟುಬಗೆಯ ಅಲಂಕಾರಗಳಿಂದ ಸಿಂಗರಿಸಿ ಪುರಪ್ರವೇಶ ಮಾಡಿಸಿದನು- ಮಾಡಿಸಿದಾಗ

ಅಮರಾವತಿಯಲ್ಲಿ ಅರ್ಜುನ- ನಿವಾತ ಕವಚರ ಸಂಹಾರ[ಸಂಪಾದಿಸಿ]

ಮ|| ಪರಿತಂದಂದಮರಾವತೀಪುರದ ವಾರಸ್ತ್ರೀಯರೇನೀತನೇ
ನರನಾ ಖಾಂಡವಮೆಲ್ಲಮಂ ಶಿಖಿಗುಣಲ್ ಕೊಟ್ಟಾತನೀಗಳ್ ಮಹೇ|
ಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತಮಂ ಪೆತ್ತಾತನೇ ಸಾಹಸಂ
ಪಿರಿದುಂ ಚೆಲ್ವನುಮಪ್ಪನೆಂದು ಮನದೊಳ್ ಸೋಲ್ತೞ್ಕಱಿಂ ನೋಡಿದರ್|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ಪರಿತಂದು (ಓಡಿಬಂದು) ಅಂದು ಅಮರಾವತೀಪುರದ ವಾರಸ್ತ್ರೀಯರು ಏನು ಈತನೇ ನರನಾ!, ಆ ಖಾಂಡವಮೆಲ್ಲಮಂ ಶಿಖಿಗೆ ಉಣಲ್ ಕೊಟ್ಟಾತನ್ (ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು) ಈಗಳ್ ಮಹೇಶ್ವರನಂ ಮೆಚ್ಚಿಸಿ ಮಿಕ್ಕ ಪಾಶುಪತಮಂ ಪೆತ್ತಾತನೇ (ಪಡೆದವನೆ) ಸಾಹಸಂ ಪಿರಿದುಂ ಚೆಲ್ವನುಮ್ ಅಪ್ಪನೆಂದು (ಪರಾಕ್ರಮಶಾಲಿಯೂ ವಿಶೇಷ ಸುಂದರನೂ ಆಗಿದ್ದಾನೆ) ಮನದೊಳ್ ಸೋಲ್ತು ಅೞ್ಕಱಿಂ ನೋಡಿದರ್(ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು)
ಪದ್ಯ-೨೭:ಅರ್ಥ: . ಅಮರಾವತೀ ಪಟ್ಟಣದ ವೇಶ್ಯಾಸ್ತ್ರೀಯರು ಓಡಿಬಂದು ಇವನೇ ಅರ್ಜುನನೇನು! ಅಗ್ನಿಗೆ ಖಾಂಡವವನವೆಲ್ಲವನ್ನೂ ಉಣ್ಣಲು ಕೊಟ್ಟನೇನು, ಈಗ ಮಹೇಶ್ವರನನ್ನು ಮೆಚ್ಚಿಸಿ ಶ್ರೇಷ್ಠವಾದ ಪಾಶುಪತಾಸ್ತ್ರವನ್ನು ಪಡೆದವನೆ. ಪರಾಕ್ರಮಶಾಲಿಯೂ ವಿಶೇಷ ಸುಂದರನೂ ಆಗಿದ್ದಾನೆ. ಎಂದು ಮನಸ್ಸಿನಲ್ಲಿ ಸೋತು ಪ್ರೀತಿಯಿಂದ ನೋಡಿದರು
ವ|| ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಗಳಪ್ಪ ಶೇಷಾಕ್ಷತಂಗಳನೀಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳುತ್ತುಂ ದೇವರಾಜನೊಡನೆ ದೇವಾಪ್ಸರೋನಿಚಯನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯಾಹಾರಂಗಳನೊಡನಾರೋಗಿಸಿ ತಂಬುಲಂಗೊಂಡು ತನ್ನ ತುಡುವ ತುಡುಗೆಗಳೆಲ್ಲಮಂ ತುಡಿಸಿ ಕಿರೀಟಿಯಂ ಕೋಟಿ ಮಾೞ್ಕೆಯಿಂ ಕೊಂಡಾಡಿ ಕೆಲವು ದಿವಸಮನಿರ್ದು ತನಗವಧ್ಯರುಮಸಾಧ್ಯರುಮಾಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರೆಂಬಱುವತ್ತು ಕೋಟಿ ರಕ್ಕಸರನೆನಗೆ ಗೆಲ್ದೀಯಲ್ವೇೞ್ಕುಮೆಂದು ಮಾತಳಿಯೆಂಬ ಸಾರಥಿವೆರಸು ವಿವಿಧಾಸ್ತ್ರಗರ್ಭಮಪ್ಪ ರಥಮಂ ಕೊಟ್ಟೊಡದನೇಱಿ ಪೋಗಿ-
ವಚನ:ಪದವಿಭಾಗ-ಅರ್ಥ:ಅಂತು ನೋಡಿ ಕಡೆಗಣ್ಣ ಚೆಲ್ಲಂಬೆರಸು ಸೂಸುವ (ಕಡಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಬೀಸುವ, ಕುಡಿನೋಟದ) ವಾಸವಸ್ತ್ರೀಯರ ಮುಖಾಬ್ಜಾಸವ ಸಂಬಂಗಳಪ್ಪ (ಮುಖಕಮಲದ ವಧುವಿನ ಸಂಬಂಧವುಳ್ಳ) ಶೇಷಾಕ್ಷತಂಗಳನು ಈಶ್ವರನಂ ಗೆಲ್ದ ಗೆಲ್ಲಕ್ಕೆ ಸೇಸೆಗೊಳ್ವಂತೆ ಸೇಸೆಗೊಳುತ್ತುಂ (ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ), ದೇವರಾಜನೊಡನೆ ದೇವ ಅಪ್ಸರೋನಿಚಯ ನಿಚಿತಮಪ್ಪ ದೇವವಿಮಾನಮಂ ಪೊಕ್ಕಾಗಳ್ (ದೇವೇಂದ್ರನೊಡನೆ ದೇವಲೋಕದ ಅಪ್ಸರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು; ಆಗ) ದೇವೇಂದ್ರಂ ತನ್ನೊಡನೆ ಮಜ್ಜನಂಬುಗಿಸಿ ದಿವ್ಯ ಆಹಾರಂಗಳನು ಒಡನೆ ಆರೋಗಿಸಿ (ಉಂಡು) ತಂಬುಲಂಗೊಂಡು ತನ್ನ ತುಡುವ (ತೊಡುವ)ತುಡುಗೆಗಳೆಲ್ಲಮಂ ತುಡಿಸಿ, ಕಿರೀಟಿಯಂ ಕೋಟಿ ಮಾೞ್ಕೆಯಿಂ (ಕೋಟಿ ರೀತಿಯಿಂದ) ಕೊಂಡಾಡಿ ಕೆಲವು ದಿವಸಮಂ ಇರ್ದು, ತನಗೆ ಅವಧ್ಯರುಂ ಅಸಾಧ್ಯರುಮ್ ಆಗಿರ್ದ ನಿವಾತಕವಚ ಕಾಳಕೇಯ ಪೌಲೋಮ ತಳತಾಳುಕರು ಎಂಬ ಅಱುವತ್ತು ಕೋಟಿ ರಕ್ಕಸರನು (ಅರುವತ್ತು ಕೋಟಿ ರಾಕ್ಷಸರನ್ನು) ಎನಗೆ ಗೆಲ್ದು ಈಯಲ್ವೇೞ್ಕುಂ (ಗೆದ್ದು ಕೊಡಬೇಕು) ಎಂದು ಮಾತಳಿಯೆಂಬ ಸಾರಥಿವೆರಸು (ಮಾತಲಿಯೊಡನೆ) ವಿವಿಧಾಸ್ತ್ರಗರ್ಭಮಪ್ಪ (ಅನೇಕ ರೀತಿಯ ಅಸ್ತ್ರ ಬಾಣಗಳಿಂದ ತುಂಬಿದ) ರಥಮಂ ಕೊಟ್ಟೊಡೆ ಅದನೇಱಿ ಪೋಗಿ-
ವಚನ:ಅರ್ಥ:ಹಾಗೆ ಕಡಗಣ್ಣಿನ ವಿಲಾಸದಿಂದ ಕೂಡಿದ ಇಂದ್ರಲೋಕ ಸ್ತ್ರೀಯರ ಮುಖಕಮಲದ ವಧುವಿನ ಸಂಬಂಧವುಳ್ಳ ಮಂತ್ರಾಕ್ಷತೆಯನ್ನು ಈಶ್ವರನನ್ನು ಜಯಿಸಿದ ಜಯಕ್ಕೆ ಸೇಸೆಯೆಂಬಂತೆ ಸ್ವೀಕರಿಸುತ್ತ ದೇವೇಂದ್ರನೊಡನೆ ದೇವಲೋಕದ ಅಪ್ಸರಸ್ತ್ರೀಯರ ಸಮೂಹದಿಂದ ತುಂಬಿದ್ದ ದೇವವಿಮಾನವನ್ನು ಪ್ರವೇಶಿಸಿದನು. ದೇವೇಂದ್ರನು ಅರ್ಜುನನಿಗೆ ತನ್ನೊಡನೆ ಸ್ನಾನಮಾಡಿಸಿ ದಿವ್ಯಾಹಾರಗಳ ಸಹಪಂಕ್ತಿ ಭೋಜನವನ್ನು ಮಾಡಿದನು. ಜೊತೆಯಲ್ಲಿಯೇ ತಾಂಬೂಲವನ್ನು ಸ್ವೀಕರಿಸಿದನು. ತಾನು ಧರಿಸುವ ಎಲ್ಲ ಆಭರಣಗಳನ್ನು ತೊಡಿಸಿ ಅರ್ಜುನನನ್ನು ಕೋಟಿ ರೀತಿಯಿಂದ ಹೊಗಳಿ, ಕೆಲವು ದಿನಗಳಿದ್ದು ತಾನು ಕೊಲ್ಲಲು ಅಸಾಧ್ಯರಾಗಿದ್ದ ನಿವಾತಕವಚ ಕಾಲಕೇಯ ಪೌಲೋಮ ತುಳುತಾಳುಕರೆಂಬ ಅರುವತ್ತು ಕೋಟಿ ರಾಕ್ಷಸರನ್ನು ಗೆದ್ದು ಕೊಡಬೇಕು ಎಂದು ಕೇಳಿದನು. ಅರ್ಜುನನು ಸಾರಥಿಯಾದ ಮಾತಲಿಯೊಡನೆ ಕೂಡಿ ಅನೇಕ ರೀತಿಯ ಅಸ್ತ್ರ ಬಾಣಗಳಿಂದ ತುಂಬಿದ ತೇರನ್ನು ಹತ್ತಿ ಹೋಗಿ-
ಮ|| ದನುಜಾನೀಕದ ನಿಂದದೊಂದು ನೆಲೆಯಂ ಮುಟ್ಟುತ್ತೆ ಮಾದೇವನಿ
ತ್ತ ನಿಜೋಗ್ರಾಸ್ತ್ರದೆ ದೈತ್ಯರೆಂಬ ಪೆಸರಿಲ್ಲೆಂಬಂತುಟಂ ಮಾಡಿ ಬಂ|
ದೆನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದೊಂದು ಪೆಂಪಿಂದಮಿಂ
ದ್ರನೊಳರ್ಧಾಸನಮೇಱಿದೊಳ್ಪು ಹರಿಗಂಗಕ್ಕುಂ ಪೆಱಂಗಕ್ಕುಮೇ|| ೨೮ ||
ಪದ್ಯ೨೮:ಪದವಿಭಾಗ-ಅರ್ಥ:ದನುಜಾನೀಕದ (ರಾಕ್ಷಸ ಸಮೂಹವು ಇರುವ) ನಿಂದ ಅದೊಂದು ನೆಲೆಯಂ ಮುಟ್ಟುತ್ತೆ (ಒಂದೊಂದು ಸ್ಥಳವನ್ನು ತಲುಪಿ) ಮಾದೇವನು ಇತ್ತ ನಿಜ ಉಗ್ರಾಸ್ತ್ರದೆ ದೈತ್ಯರೆಂಬ ಪೆಸರಿಲ್ಲೆಂಬಂತುಟಂ ಮಾಡಿ (ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತ್ರದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ) ಬಂದು ಎನಿತಾನುಂ ಮಹಿಮಾಗುಣಕ್ಕೆ ಕಣಿಯಾಗಿರ್ದ ಒಂದು ಪೆಂಪಿಂದಂ ಇಂದ್ರನೊಳು ಅರ್ಧಾಸನಂ ಏಱಿದ ಉಳ್ಪು (ವಿಶೇಷ ಮಹಾತ್ಮೆಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಒಂದೇ ಸಿಂಹಾಸನದಲ್ಲಿ ಕೂರುವ)ವನ್ನು ಹತ್ತುವ ಸೌಭಾಗ್ಯವು) ಹರಿಗಂಗೆ ಅಕ್ಕುಂ ಪೆಱಂಗೆ ಅಕ್ಕುಮೇ (ಅರ್ಜುನನಿಗಲ್ಲದೆ ಬೇರೆಯವರಿಗೆ ಸಾಧ್ಯವಾಗುವುದೇ!)
ಪದ್ಯ-೨೮:ಅರ್ಥ:ರಾಕ್ಷಸ ಸಮೂಹವು ಇರುವ ಒಂದೊಂದು ಸ್ಥಳವನ್ನು ತಲುಪಿ ಮಹಾದೇವನು ತನಗೆ ಕೊಟ್ಟ ಭಯಂಕರವಾದ ಪಾಶುಪತಾಸ್ತ್ರದಿಂದ ಆ ರಾಕ್ಷಸರನ್ನು ಹೆಸರಿಲ್ಲದಂತೆ ಮಾಡಿ ಬಂದು ವಿಶೇಷ ಮಹಾತ್ಮೆಗೆ ಆಕರವಾದ ಗೌರವದಿಂದ ಇಂದ್ರನೊಡನೆ ಅರ್ಧಾಸನ (ಸಮಪೀಠ)ವನ್ನು ಹತ್ತುವ ಸೌಭಾಗ್ಯವು ಅರ್ಜುನನಿಗಲ್ಲದೆ ಬೇರೆಯವರಿಗೆ ಸಾಧ್ಯವಾಗುವುದೇ!.
ರಂಬೆಯ ಶಾಪ
ವ|| ಅಂತು ದೇವಲೋಕದೊಳ್ ತನ್ನ ಮಾತೆ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ ರಂಭೆ ಸೋಲ್ತು ಸೈರಿಸಲಾಱದೇಕಾಂತದೊಳ್ ಮೇಲೆ ಬಿೞ್ದೊಡೆ-
ವಚನ:ಪದವಿಭಾಗ-ಅರ್ಥ: ಅಂತು ದೇವಲೋಕದೊಳ್ ತನ್ನ ಮಾತೆ ಮಾತಾಗಿರ್ದ ಪರಾಕ್ರಮಧವಳನ ಪರಾಕ್ರಮಕ್ಕಂ ಗಂಡಗಾಡಿಗಂ (ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ) ರಂಭೆ ಸೋಲ್ತು ಸೈರಿಸಲಾಱದೇ ಏಕಾಂತದೊಳ್ ಮೇಲೆ ಬಿೞ್ದೊಡೆ- ()
ವಚನ:ಅರ್ಥ:ಹಾಗೆ ದೇವಲೋಕದಲ್ಲಿ ತನ್ನ ಮಾತೇ ಮಾತಾಗಿದ್ದ ಪರಾಕ್ರಮಧವಳನ ಪೌರುಷಕ್ಕೂ ಸೌಂದರ್ಯಕ್ಕೂ ರಂಭೆಯು ಸೋತು ಸಹಿಸಲಾರದೆ ರಹಸ್ಯವಾಗಿ ಬಂದು ಮೇಲೆ ಬಿದ್ದು ತನ್ನನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದಳು
ಕಂ|| ಎಂದು ಪುರಂದರನರಸಿಯ
ಯಂದು ದಲೆನಗಬ್ಬೆಯೇ ತೊದಳ್ ನುಡಿಯದೆ ಪೋ|
ಗೆಂದೊಡದೊಂದಬ್ಬದೊಳೆ ಬೃ
ಹಂದಳೆಯಾಗೆಂದು ಮುನಿದು ಶಾಪವನಿತ್ತಳ್|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ:ಎಂದು ಪುರಂದರನ ಅರಸಿಯಯ್ ಅಂದು ದಲ್ (ನಿಜಕ್ಕೂ) ಎನಗೆ ಅಬ್ಬೆಯೇ(ಎಲ್ಲಿಯವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ) ತೊದಳ್ ನುಡಿಯದೆ ಪೋಗೆಂದೊಡೆ (ಕೆಟ್ಟ ಮಾತನಾಡದೆ ಹೋಗಿ ಎಂದು ಹೇಳಿದರೆ ಅರ್ಜುನನು,) ಅದೊಂದು ಅಬ್ಬದೊಳೆ ಬೃಹಂದಳೆಯಾಗೆಂದು ಮುನಿದು ಶಾಪವನಿತ್ತಳ್ (ಒಂದು ವರ್ಷಕಾಲ ಬೃಹಂದಳೆಯಾಗು’ ಎಂದು ಶಾಪವನ್ನು ಕೊಟ್ಟಳು)
ಪದ್ಯ-೨೯:ಅರ್ಥ: ‘ಎಲ್ಲಿಯವರೆಗೆ ನೀನು ಇಂದ್ರನ ರಾಣಿಯಾಗಿದ್ದೀಯೋ ಅಲ್ಲಿಯವರೆಗೆ ನೀನು ನಿಜವಾಗಿಯೂ ನನಗೆ ತಾಯಿಯಾಗಿದ್ದೀಯೆ. ಕೆಟ್ಟ ಮಾತನಾಡದೆ ಹೋಗಿ ಎಂದು ಹೇಳಿದರೆ ಅರ್ಜುನನು, ರಂಭೆಗೆ ಕೋಪ ಬಂದಿತು. ‘ಒಂದು ವರ್ಷಕಾಲ ಬೃಹಂನ್ನಳೆಯಾಗು’ ಎಂದು ಶಾಪವನ್ನು ಕೊಟ್ಟಳು
ವ|| ಇತ್ತೊಡೆಂತುಮಾನ್ ಪರಸ್ತ್ರೀಯರ ದೆಸೆಯೊಳಮಣ್ಣನ ನನ್ನಿಯ ವರ್ಷಾವಧಿಯೊಳಮೋತು ಪಿಡಿವೆಂ ನಿನ್ನ ನುಡಿಯೊಳೇ ದೋಷಮೆಂದು ತನ್ನ ಶೌಚದ ಮೇಗಣ ಕಲಿತನಮುಮಂ ಸೌಭಾಗ್ಯದ ಮೇಗಣ ಬಲ್ಲಾಳ್ತನಮುಮನಿಂದ್ರಲೋಕದಿಂ ಪೊಗೞಿಸಿ ಸುಖಮಿರ್ಪನ್ನೆಗಮಿತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಷ್ಠಿರ ಭೀಮಸೇನ ನಕುಳ ಸಹದೇವರುಂ ದ್ರೌಪದಿಯುಂ ವ್ಯಾಕುಳಚಿತ್ತರಾಗಿ-
ವಚನ:ಪದವಿಭಾಗ-ಅರ್ಥ:ಇತ್ತೊಡೆ ಎಂತುಮ್ ಆನ್ ಪರಸ್ತ್ರೀಯರ ದೆಸೆಯೊಳಂ ಅಣ್ಣನ ನನ್ನಿಯ ವರ್ಷಾವಧಿಯೊಳಂ ಓತು ಪಿಡಿವೆಂ,(ನಮ್ಮಣ್ಣನ ಪ್ರತಿಜ್ಞೆಯ ವರ್ಷಾವಧಿಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ವ್ರತವಾಗಿ ಸಂತೋಷದಿಂದ ಅಂಗೀಕಾರ ಮಾಡುತ್ತೇನೆ) ನಿನ್ನ ನುಡಿಯೊಳೇ ದೋಷಂ (ನಿನ್ನ ಮಾತಿನಲ್ಲಿ ದೋಷವೇನು? ಇಲ್ಲ ಎಂದನು.) ಎಂದು ತನ್ನ ಶೌಚದ ಮೇಗಣ ಕಲಿತನಮುಮಂ ಸೌಭಾಗ್ಯದ ಮೇಗಣ ಬಲ್ಲಾಳ್ತನಮುಮನು (ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ) ಇಂದ್ರಲೋಕದಿಂ ಪೊಗೞಿಸಿ ಸುಖಂ ಇರ್ಪ ಅನ್ನೆಗಂ (ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ) ಇತ್ತ ವಿಕ್ರಾಂತತುಂಗನ ತಡೆದುದರ್ಕೆ ಯುಷ್ಠಿರ ಭೀಮಸೇನ ನಕುಳ ಸಹದೇವರುಂ ದ್ರೌಪದಿಯುಂ ವ್ಯಾಕುಳಚಿತ್ತರಾಗಿ (ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದ್ರೌಪದಿ ಮೊದಲಾದವರು ಚಿಂತಾಕ್ರಾಂತರಾಗಿ)-
ವಚನ:ಅರ್ಥ:ಶಾಪವನ್ನು ಕೊಟ್ಟರೆ, ಹೇಗೂ ನಮ್ಮಣ್ಣನ ಪ್ರತಿಜ್ಞೆಯ ವರ್ಷಾವಧಿಯಲ್ಲಿ ಪರಸ್ತ್ರೀಯರ ಬಳಿ ಇರಬೇಕಾಗಿ ಬರುವ ಸಂದರ್ಭಕ್ಕಾಗಿ ಈ ಶಾಪವನ್ನು ವ್ರತದಂತೆ ಸಂತೋಷದಿಂದ ಅಂಗೀಕಾರ ಮಾಡುತ್ತೇನೆ ಎಂದನು. ನಿನ್ನ ಮಾತಿನಲ್ಲಿ ದೋಷವೇನು? ಇಲ್ಲ ಎಂದನು. ಹೀಗೆ ತನ್ನ ಶುದ್ಧನಡತೆಯೊಡನೆ ಕೂಡಿದ ಪೌರುಷವನ್ನೂ ಸೌಭಾಗ್ಯದಿಂದ ಕೂಡಿದ ಪರಾಕ್ರಮವನ್ನೂ ಇಂದ್ರಲೋಕದವರಿಂದ ಹೊಗಳಿಸಿಕೊಂಡು ಕೆಲವುಕಾಲ ಇಂದ್ರಲೋಕದಲ್ಲಿ ಸುಖವಾಗಿದ್ದನು. ಅಷ್ಟರಲ್ಲಿ ಈ ಕಡೆ ವಿಕ್ರಾಂತತುಂಗನಾದ ಅರ್ಜುನನು ಹಿಂತಿರುಗುವುದಕ್ಕೆ ಸಾವಕಾಶಮಾಡಿದುದಕ್ಕಾಗಿ ಧರ್ಮರಾಜ, ಭೀಮ, ನಕುಳ, ಸಹದೇವ, ದ್ರೌಪದಿ ಮೊದಲಾದವರು ಚಿಂತಾಕ್ರಾಂತರಾದರು.ಆಗ
ಉಳಿದ ಪಾಂಡವರು ದ್ರೌಪದಿ ಅರ್ಜುನನ ಸುಳಿವು ಕಾಣದೆ ಚಿಂತೆ
ಸ್ರ|| ಆ ದಿವ್ಯಾಸ್ತ್ರಂಗಳಂ ಸಾಧಿಸಲೆ ನೆಗೞ್ದ ಪಾರಾಸರಂ ಪೇೞೆ ಮುನ್ನಂ
ಪೋದಂ ಸಂದಿಂದ್ರಕೀಲಕ್ಕದನಱಿವಮದೇನಾದುದೋ ಕಾರ್ಯಸಿದ್ಧಿ|
ಪ್ರಾದುರ್ಭಾವಕ್ಕೆ ವಿಘ್ನಂ ಪಲವೊಳವಱಿಯಲ್ಬುರ್ಕುಮೇ ಬಾರದಲ್ಲಿಂ
ಪೋದಂ ವಿಕ್ರಾಂತತುಂಗಂ ಗಡಮದನಱಿಯಲ್ಕಾಗದಿನ್ನೆಲ್ಲಿ ಕಾಣ್ಬಂ|| ೩೦ ||
ಪದ್ಯ-೩೦:ಪದವಿಭಾಗ-ಅರ್ಥ:ಆ ದಿವ್ಯಾಸ್ತ್ರಂಗಳಂ ಸಾಧಿಸಲೆ ನೆಗೞ್ದ ಪಾರಾಸರಂ ಪೇೞೆ (ಆ ದಿವ್ಯಾಸ್ತ್ರಗಳನ್ನು ಪಡೆಯಲೇಬೇಕು ಎಂದು ಪ್ರಸಿದ್ಧನಾದ ವ್ಯಾಸಮಹರ್ಷಿಯು ಹೇಳಲು) ಮುನ್ನಂ ಪೋದಂ ಸಂದ ಇಂದ್ರಕೀಲಕ್ಕೆ (ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು.) ಅದನು ಅಱಿವಂ ಅದೇನಾದುದೋ (ಅದೇನಾಯಿತೋ ಅದನ್ನು ಅರಿಯೋಣ) ಕಾರ್ಯಸಿದ್ಧಿ ಪ್ರಾದುರ್ಭಾವಕ್ಕೆ ವಿಘ್ನಂ ಪಲವು ಒಳವು ಅಱಿಯಲ್ ಬರ್ಕುಮೇ (ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವೇ? ಆಗುವುದಿಲ್ಲ) ಬಾರದೆ ಅಲ್ಲಿಂ ಪೋದಂ ವಿಕ್ರಾಂತತುಂಗಂ ಗಡ (ಅರ್ಜುನನು ಇಲ್ಲಿ ಬರದೆ ಇಂದ್ರಕೀಲದಿಂದ ಮುಂದೆ ಎಲ್ಲಿ ಹೋದನೋ ಗಡ!) ಅದನು ಅಱಿಯಲ್ಕಾಗದು ಇನ್ನೆಲ್ಲಿ ಕಾಣ್ಬಂ (ಅದನ್ನು ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ.)
ಪದ್ಯ-೩೦:ಅರ್ಥ: ಪರಾಶರನಮಗ ಪ್ರಸಿದ್ಧನಾದ ವ್ಯಾಸಮಹರ್ಷಿಯು ಆ ದಿವ್ಯಾಸ್ತ್ರಗಳನ್ನು ಪಡೆಯಲೇಬೇಕು ಎಂದು ಹೇಳಲು ಅರ್ಜುನನು ಪ್ರಸಿದ್ಧವಾದ ಇಂದ್ರಕೀಲಕ್ಕೆ ಹೋದನು. ಅದೇನಾಯಿತೋ ಫಲಪ್ರಾಪ್ತಿಯಾಗುವುದಕ್ಕೆ ಅನೇಕ ವಿಘ್ನಗಳಿವೆ. ಅದನ್ನು ತಿಳಿಯಲೂ ನಮಗೆ ಸಾಧ್ಯವಾಗುವುದಿಲ್ಲ. ಅರ್ಜುನನು ಇಲ್ಲಿ ಬರದೆ ಇಂದ್ರಕೀಲದಿಂದ ಮುಂದೆ ಎಲ್ಲಿ ಹೋದನೋ! ಅದನ್ನು ತಿಳಿಯಲಾಗುವುದಿಲ್ಲ; ಅವನನ್ನು ಇನ್ನೆಲ್ಲಿ ಹುಡುಕೋಣ.
ಗಂದಮಾದನ ಪರ್ವತದಲ್ಲಿ
ವ|| ಎಂದು ಪೋದ ದೆಸೆಯನಱಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವ್ಯೋಪದೇಶದೊಳಯ್ವರುಂ ಗಂಧಮಾದನಗಿರಿಗೆವಂದು ತದ್ಗಿರೀಂದ್ರದೊಳ್ ಭೀಮಸೇನಂ ದ್ರೌಪದಿಯ ಬಯಕೆಗೆ ಧನದನ ಕೊಳದೊಳಗಣ ಕನಕಕಮಳಂಗಳಂ ತರಲೆಂದು ಪೋಗಿ-
ವಚನ:ಪದವಿಭಾಗ-ಅರ್ಥ: ಎಂದು ಪೋದ ದೆಸೆಯನು ಅಱಿಯದೆ (ಅರಿಯದೆ) ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಗಳ ದಿವ್ಯೋಪದೇಶದೊಳು ಅಯ್ವರುಂ (ಐವರು) ಗಂಧಮಾದನಗಿರಿಗೆ ವಂದು (ಬಂದು) ತತ್ ಗಿರೀಂದ್ರದೊಳ್ ಭೀಮಸೇನಂ ದ್ರೌಪದಿಯ ಬಯಕೆಗೆ ಧನದನ (ಕುಬೇರನ) ಕೊಳದೊಳಗಣ ಕನಕಕಮಳಂಗಳಂ (ಚಿನ್ನದ ಕಮಲಗಳನ್ನು ) ತರಲೆಂದು ಪೋಗಿ-
ವಚನ:ಅರ್ಥ:ಎಂದು ಅರ್ಜುನನು ಹೋದ ದಿಕ್ಕನ್ನು ತಿಳಿಯದೆ ಚಿಂತಾಕ್ರಾಂತರಾಗಿ ಮಾರ್ಕಂಡೇಯನೆಂಬ ದಿವ್ಯಜ್ಞಾನಿಯ ದಿವ್ಯೋಪದೇಶದಿಂದ ಅಯ್ದು ಮಂದಿಯೂ ಗಂಧಮಾದನಪರ್ವತಕ್ಕೆ ಬಂದರು. ಆ ಶ್ರೇಷ್ಠಪರ್ವತದಲ್ಲಿ ಭೀಮಸೇನನು ದ್ರೌಪದಿಯ ಆಶೆಯನ್ನು ತೀರಿಸುವುದಕ್ಕಾಗಿ ಕುಬೇರನ ಸರೋವರದಲ್ಲಿದ್ದ ಚಿನ್ನದ ಕಮಲಗಳನ್ನು ತರಲು ಹೋಗಿ-
ಕಂ|| ಪ್ರಕಟಿತ ಸಾಹಸನಱುವ
ತ್ತು ಕೋಟಿ ಧನದಾನುಚರರನತಿ ರೌದ್ರಭಯಾ|
ನಕಮಾಗೆ ಕೊಂದು ಸೌಗಂ
ಕಕಾಂಚನಕಮಳಹರಣಪರಿಣತನಾದಂ|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಪ್ರಕಟಿತ ಸಾಹಸನು ಅಱುವತ್ತು ಕೋಟಿ ಧನದಾ ಅನುಚರರನು ಅತಿ ರೌದ್ರ ಭಯಾನಕಮ್ ಆಗೆ ಕೊಂದು (ಬೀಮನು ಸಾಹಸವನ್ನು ತೊರಿ ಕುಬೇರನ ಅರವತ್ತು ಕೋಟಿ ಭಟರನ್ನು ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು) ಸೌಗಂಕ ಕಾಂಚನ ಕಮಳ ಹರಣ ಪರಿಣತನಾದಂ (ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು (ಪರಿಣತ-ಜಾಣನಾಗಿ) ಬಂದನು.)
ಪದ್ಯ-೩೧:ಅರ್ಥ: ಬೀಮನು ಸಾಹಸವನ್ನು ತೊರಿ ಕುಬೇರನ ಅರವತ್ತು ಕೋಟಿ ಭಟರನ್ನು ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು ಬಂದನು.
ವ|| ಮತ್ತಂ ಜಟಾಸುರನೆಂಬಸುರನನಾ ಗಿರೀಂದ್ರಕಂದರದೊಳ್ ಸೀಳ್ದು ಸೀಱುಂಬುಳಾಡಿ ಕೆಲವು ದಿವಸಮನಿರ್ದೊಂದು ದಿವಸಮೊರ್ವನೆ ಬೇಂಟೆಯ ನೆವದಿಂದಲ್ಲಿಂ ತಳರ್ದು ಬಟ್ಟೆಯ ಕಣ್ಣೊಳಡ್ಡಂಬಿೞ್ದಿರ್ದ ವೃದ್ಧ ವಾನರನಂ ಕಂಡು-
ವಚನ:ಪದವಿಭಾಗ-ಅರ್ಥ:ಮತ್ತಂ ಜಟಾಸುರನೆಂಬ ಅಸುರನನು ಆ ಗಿರೀಂದ್ರಕಂದರದೊಳ್ ಸೀಳ್ದು (ಆ ಪರ್ವತದ ಗುಹೆಯಲ್ಲಿ ಸೀಳಿ) ಸೀಱುಂಬುಳಾಡಿ (ಚೆಲ್ಲಾಪಿಲ್ಲಿ ಮಾಡಿ) ಕೆಲವು ದಿವಸಮನು ಇರ್ದು, ಒಂದು ದಿವಸಂ ಓರ್ವನೆ ಬೇಂಟೆಯ ನೆವದಿಂದ ಅಲ್ಲಿಂ ತಳರ್ದು (ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು) ಬಟ್ಟೆಯ ಕಣ್ಣೊಳು (ನಡು ದಾರಿಯಲ್ಲಿ) ಅಡ್ಡಂ ಬಿೞ್ದಿರ್ದ ವೃದ್ಧ ವಾನರನಂ ಕಂಡು (ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು)-
ವಚನ:ಅರ್ಥ:. ಮತ್ತು ಜಟಾಸುರನೆಂಬ ರಾಕ್ಷಸನನ್ನು ಆ ಪರ್ವತದ ಗುಹೆಯಲ್ಲಿ ಸೀಳಿ ಚೆಲ್ಲಾಪಿಲ್ಲಿ ಮಾಡಿ ಅಲ್ಲಿ ಕೆಲವು ದಿವಸವಿದ್ದನು. ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು ನಡುದಾರಿಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು

ಭೀಮ ಮಾರುತಿ ಸಮಾಗಮ[ಸಂಪಾದಿಸಿ]

ಚಂ|| ತೊಲಗೆನೆ ಬಟ್ಟೆಯಿಂ ತೊಲಗಲಾನಶಕ್ತನೆನಾರ್ಪೊಡೆನ್ನನಿನ್
ತೊಲಗಿಸಿ ಪೋಗು ನೀನೆನೆ ವೃಕೋದರನೊಯ್ಯನೆ ನಕ್ಕು ಬಾಲಮಂ|
ಸಲೆ ಮುರಿದೆತ್ತಲಾಟಿಸೆ ಧರಿತ್ರಿಗೆ ಕೀಲಿಸಿದಂತುಟಾಗೆ ದೋ
ರ್ವಲದ ಪೊಡರ್ಪುಗೆಟ್ಟು ನಡೆ ನೋಡಿ ಮರುತ್ಸುತನಂ ಮರುತ್ಸುತಂ|| ೩೨||
ಪದ್ಯ-೩೨:ಪದವಿಭಾಗ-ಅರ್ಥ:ತೊಲಗು ಎನೆ ಬಟ್ಟೆಯಿಂ (ಬಟ್ಟೆಯಿಂ- ದಾರಿಯಿಂದ ಹೊರಟುಹೋಗು) ತೊಲಗಲು ಆನು ಅಶಕ್ತನೆಂ ಆರ್ಪೊಡೆ ಎನ್ನಂ ಇನ್ ತೊಲಗಿಸಿ ಪೋಗು ನೀನು ಎನೆ ('ನಾನು ತೊಲಗಲು ಅಶಕ್ತನಾಗಿದ್ದೇನೆ. ನೀನು ನನ್ನನ್ನು ತೊಲಗಿಸಿ ಹೋಗು’ ಎಂದಾಗ) ವೃಕೋದರನು ಒಯ್ಯನೆ ನಕ್ಕು ಬಾಲಮಂ ಸಲೆ ಮುರಿದೆತ್ತಲು (ಚನ್ನಾಗಿ ತಿರುಚಿ ಎತ್ತಲು) ಆಟಿಸೆ (ಭೀಮನು ಮೆಲ್ಲನೆ ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ತಿರುಚಿ ಎತ್ತಲು ಪ್ರಯತ್ನಿಸಿದರೂ) ಧರಿತ್ರಿಗೆ ಕೀಲಿಸಿದಂತುಟಾಗೆ (ಭೂಮಿಗೆ ಬೆಸೆದಿರುವಂತಿರಲು) ದೋರ್ವಲದ ಪೊಡರ್ಪುಗೆಟ್ಟು (ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೆನಿಸಿದಾಗ)ನಡೆ ನೋಡಿ ಮರುತ್ಸುತನಂ ಮರುತ್ಸುತಂ (ಭೀಮಸೇನನು ಆ ವಾನರನಾದ ಆಂಜನೇಯನನ್ನು ದೀರ್ಘವಾಗಿ ನೋಡಿ-)
ಪದ್ಯ-೩೨:ಅರ್ಥ:ಭೀಮನು ಕಪಿಗೆ ‘ದಾರಿಯಿಂದ ತೊಲಗು’ ಎಂದನು ಅದಕ್ಕೆ ಆ ಕಪಿಯು 'ನಾನು ತೊಲಗಲು ಅಶಕ್ತನಾಗಿದ್ದೇನೆ. ನೀನು ನನ್ನನ್ನು ತೊಲಗಿಸಿ ಹೋಗು’ ಎಂದಿತು. ಭೀಮನು ಮೆಲ್ಲನೆ ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ಬಗ್ಗಿಸಿ ಎತ್ತಲು ಪ್ರಯತ್ನಿಸಿದರೂ, ಭೂಮಿಗೆ ಬೆಸೆದಿರುವಂತಿರಲು ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೆನಿಸಿದಾಗ, ಭೀಮಸೇನನು ಆ ವಾನರನಾದ ಆಂಜನೇಯನನ್ನು ದೀರ್ಘವಾಗಿ ನೋಡಿ-
ಕಂ|| ನೀನೆಮ್ಮಣ್ಣನೆ ವಂಶದ
ವಾನರನಲ್ಲಯ್ ವಲಂ ಮಹಾಬಲ ಪೇೞೇ|
ಕೀ ನಗದೊಳಿರ್ದೆಯೆನೆ ತ
ದ್ವಾನರನೞ್ಕರ್ತು ಭೀಮನೆಂಬಂ ನೀನೇ|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ನೀನು ಎಮ್ಮಣ್ಣನೆ ವಂಶದ ವಾನರನಲ್ಲಯ್ ವಲಂ ಮಹಾಬಲ (ನೀನು ವಲಂ-ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ ಅಲ್ಲವೇ? ಬಲಶಾಲಿಯೇ) ಪೇೞ್ ಏಕೀ ನಗದೊಳು ಇರ್ದೆ ಎನೆ (ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು’ ಎಂದಾಗ) ತತ್ ವಾನರನು ಅೞ್ಕರ್ತು ಭೀಮನೆಂಬಂ ನೀನೇ (ಆ ವಾನರನು ಪ್ರೀತಿಯಿಂದ ನೋಡಿ ಓಹೋ ಭೀಮನೆಂಬುವವನು ನೀನೆಯೊ ಎಂದನು.)
ಪದ್ಯ-೩೩:ಅರ್ಥ: ನೀನು ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ (ಆಂಜನೇಯನೇ) ಅಲ್ಲವೇ? ಬಲಶಾಲಲಿಯೇ ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು’ ಎಂದು ಕೇಳಿದನು. ಆ ವಾನರನು ಪ್ರೀತಿಯಿಂದ ನೋಡಿ ಓಹೋ ಭೀಮನೆಂಬುವವನು ನೀನೆಯೊ ಎಂದನು.
ವ|| ಎಂಬುದುಮಪ್ಪೆನೆಂದೊಡೆ ನಿಮ್ಮಣ್ಣನಪ್ಪಣುವನೆ ನಾನಪ್ಪೆನೆಂದು ಪೇೞ್ವುದುಮಾಗಳ್ ಸಾಷ್ಟಾಂಗಮೆಱಗಿ ಪೊಟವಟ್ಟ ಭೀಮಸೇನನಂ ಪರಸಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಪ್ಪೆನೆಂದೊಡೆ (ಎನ್ನಲು ‘ನಾನು ಭೀಮನೇ’ ಎಂದಾಗ) ನಿಮ್ಮಣ್ಣನು ಅಪ್ಪ ಅಣುವನೆ (ನಿಮ್ಮಣ್ಣನಾದ ಹನುಮಂತನೆ) ನಾನಪ್ಪೆನೆಂದು (ನಾನೇ ಅಪ್ಪೆನು-ಆಗಿರುವೆನು, ನಾನೇಸರಿ ಎಂದನು) ಪೇೞ್ವುದುಂ ಆಗಳ್ ಸಾಷ್ಟಾಂಗಮೆಱಗಿ ಪೊಟವಟ್ಟ ಭೀಮಸೇನನಂ (ಆಗ ಸಾಷ್ಟಾಂಗ ನಮಸ್ಕಾರ ಮಾಡಿದ ಭೀಮನನ್ನು) ಪರಸಿ-ಹರಸಿ-
ವಚನ:ಅರ್ಥ:|| ಎನ್ನಲು ‘ನಾನು ಭೀಮನೇ ಹೌದು,’ ಎಂದನು. ಹಾಗಾದರೆ ನಿಮ್ಮಣ್ಣನಾದ ಹನುಮಂತನೆ ನಾನೇಸರಿ ಎಂದನು, ಆಗ ಸಾಷ್ಟಾಂಗ ನಮಸ್ಕಾರ ಮಾಡಿದ ಭೀಮನನ್ನು ಆಂಜನೇಯನು ಹರಸಿದನು. ಆಗ-
ಕಂ|| ಎನ್ನಂತಪ್ಪೊಡವುಟ್ಟಿದ
ರಿನ್ನಿನಗೊಳರಾಗಲಹಿತರಿದಿರಾಂಪರೆ ಪೇೞು|
ನಿನ್ನಂ ಪಗೆವರ ಬೇರೊಳ್
ಬೆನ್ನೀರಂ ಪೊಯ್ದು ನಿನಗೆ ಮಾೞ್ಪೆಂ ಧರೆಯಂ|| ೩೪ ||
ಪದ್ಯ-೩೪:ಪದವಿಭಾಗ-ಅರ್ಥ:ಎನ್ನಂತಪ್ಪ ಒಡವುಟ್ಟಿದರ್ ಇಂ ನಿನಗೊಳರಾಗಲ್ ಅಹಿತರು ಇದಿರಾಂಪರೆ ಪೇೞು(ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ) ನಿನ್ನಂ ಪಗೆವರ ಬೇರೊಳ್ ಬೆನ್ನೀರಂ ಪೊಯ್ದು (ನಿನ್ನ ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಸುರಿದು) ನಿನಗೆ ಮಾೞ್ಪೆಂ ಧರೆಯಂ (ರಾಜ್ಯವನ್ನು ದೊರಕಿಸುತ್ತೇನೆ ಎಂದನು)
ಪದ್ಯ-೩೪:ಅರ್ಥ: ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ. ನಿನ್ನ ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಸುರಿದು ನಿನಗೆ ರಾಜ್ಯವನ್ನು ದೊರಕಿಸುತ್ತೇನೆ ಎಂದನು.
ವ|| ಎಂಬುದುಂ ಭೀಮಸೇನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಭೀಮಸೇನನು ಇಂತು ಎಂದಂ-
ವಚನ:ಅರ್ಥ: ಅದಕ್ಕೆ ಭೀಮಸೇನನು ಹೀಗೆ ಹೇಳಿದನು.
ಮ|| ಬೆಸನಂ ಪೂಣ್ದು ಕಡಂಗಿ ಪಾಯ್ದು ಕಡಲಂ ಮುಂ ಪೂಣ್ದರಂ ಕೊಂದು ಪೊ
ಕ್ಕು ಸಮಂತಾಗಡೆ ಲಂಕೆಯಂ ಬನಮನಾಟಂದುರ್ಕಿ ಕಿೞ್ತಿಕ್ಕಿ ಸಂ|
ತಸಮಂ ಸೀತೆಗೆ ಮಾಡಿ ಸುಟ್ಟು ಪೊೞಲಂ ಕಾಳಾನಳಂಗಿತ್ತು ಬೇ
ವಸಮಂ ರಾಮನಿನುಯ್ದ ನೀಂಬರೆಗಮೇನಾ ಕೌರವರ್ ಗಂಡರೇ|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಬೆಸನಂ ಪೂಣ್ದು ಕಡಂಗಿ ಪಾಯ್ದು ಕಡಲಂ (ಹೇಳಿದಕಾರ್ಯಕ್ಕಾಗಿ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ) ಮುಂ ಪೂಣ್ದರಂ ಕೊಂದು (ಮೊದಲು ಪೂಣ್ -ಎದುರಿಸು, ಎದುರಿಸಿದವರನ್ನು ಕೊಂದೆ) ಪೊಕ್ಕು ಸಮಂತು ಆಗಡೆ ಲಂಕೆಯಂ ಬನಮನು ಆಟಂದು (ಆಗಲೇ ಚೆನ್ನಾಗಿ ಲಂಕೆಯನ್ನು ಪ್ರವೇಶಮಾಡಿದೆ, ಅಶೋಕವನ್ನು ಅಕ್ರಮಿಸಿ ) ಉರ್ಕಿ ಕಿೞ್ತಿಕ್ಕಿ (ಉತ್ಸಾಹದಿಂದ ಉಬ್ಬಿ (ವನವನ್ನು) ನಾಶಪಡಿಸಿದೆ) ಸಂತಸಮಂ ಸೀತೆಗೆ ಮಾಡಿ ಸುಟ್ಟು ಪೊೞಲಂ ಕಾಳಾನಳಂಗೆ ಇತ್ತು (ಲಂಕಾ ಪಟ್ಟಣವನ್ನು ಸುಟ್ಟು ಹಾಕಿದೆ) ಬೇವಸಮಂ (ದುಖವನ್ನು) ರಾಮನಿಂ ಉಯ್ದ ನೀಂ (ನೀನು ರಾಮನ ದುಖವನ್ನು ಪರಿಹಾರಮಾಡಿದೆ.) ಬರೆಗಂ ಏನು ಆ ಕೌರವರ್ ಗಂಡರೇ (ಎದುರಿಸಿ ಬರಲು ಆ ಕೌರವರು ಅಷ್ಟು ಶೂರರೇ)
ಪದ್ಯ-೩೫:ಅರ್ಥ: ಅಣ್ಣಾ ; ಹೇಳಿದಕಾರ್ಯಕ್ಕಾಗಿ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ, ಮೊದಲು ಎದುರಿಸಿದವರನ್ನು ಕೊಂದೆ, ಆಗಲೇ ಚೆನ್ನಾಗಿ ಲಂಕೆಯನ್ನು ಪ್ರವೇಶಮಾಡಿದೆ, ಅಶೋಕವನ್ನು ಅಕ್ರಮಿಸಿ ಉತ್ಸಾಹದಿಂದ ಉಬ್ಬಿ (ವನವನ್ನು) ನಾಶಪಡಿಸಿದೆ. ಸೀತಾದೇವಿಗೆ ಸಂತೋಷವನ್ನುಂಟುಮಾಡಿದೆ. ಲಂಕಾ ಪಟ್ಟಣವನ್ನು ಸುಟ್ಟು ಹಾಕಿದೆ (ಕಾಲಾಗ್ನಿಗೆ ಕೊಟ್ಟು) ನೀನು ರಾಮನ ದುಖವನ್ನು ಪರಿಹಾರಮಾಡಿದೆ. ನಿನ್ನನ್ನು ಎದುರಿಸಿ ಬರಲು ಆ ಕೌರವರು ಅಷ್ಟು ಶೂರರೇ!
ಕಂ|| ಎನಗೆ ದಯೆಗೆಯ್ವುದೊಂದನೆ
ಮೊನೆಯೊಳ್ ವಿಜಯಂಗೆ ವಿಜಯಮಾಗಿರೆ ನೀಮಾ|
ತನ ಕೇತನದೊಳ್ ಫಣಿಕೇ
ತನಬಲಕುತ್ಪಾತಕೇತುವಪ್ಪುದೆ ಸಾಲ್ಗುಂ|| ೩೬||
ಪದ್ಯ-೩೬:ಪದವಿಭಾಗ-ಅರ್ಥ:ಎನಗೆ ದಯೆಗೆಯ್ವುದು ಒಂದನೆ (ನನಗೆ ದಯಮಾಡಿ ಒಂದನ್ನು ಕರುಣಿಸಬೇಕು) ಮೊನೆಯೊಳ್ (ಯುದ್ಧದಲ್ಲಿ) ವಿಜಯಂಗೆ ವಿಜಯಮಾಗಿರೆ ನೀಂ ಆತನ ಕೇತನದೊಳ್ (ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು) ಫಣಿಕೇತನ ಬಲಕೆ ಉತ್ಪಾತ ಕೇತುವಪ್ಪುದೆ ಸಾಲ್ಗುಂ (ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು)|
ಪದ್ಯ-೩೬:ಅರ್ಥ: ನನಗೆ ದಯಮಾಡಿ ಒಂದನ್ನು ಕರುಣಿಸಬೇಕು; ಯುದ್ಧದಲ್ಲಿ ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು; ಎಂದು ಬೇಡಿದನು.
ವ|| ಎಂದು ಬೇಡಿಕೊಂಡೊಡದೇವಿರಿದಿತ್ತೆನೆಂದಣುವನದೃಶ್ಯಮಾದನಾಗಳ್ ಭೀಮಸೇನಂ ಬೀಡಿಂಗೆ ವಂದು ಧರ್ಮಪುತ್ರಂಗಾ ಮಾತೆಲ್ಲಮಂ ಪೇೞ್ದು ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪನ್ನೆಗಮಿತ್ತ ವಿಬುಧವನಜವನಕಳಹಂಸನುಂ ಪಲವುಂ ದಿವಸಮಗಲ್ದಿರ್ದ ತನ್ನೊಡವುಟ್ಟಿದರಂ ನೆನೆದು ಪೋಪೆನೆಂದಿಂದ್ರನಂ ಬೀೞ್ಕೊಂಡು ತನಗೆ ದೇವೇಂದ್ರನಿತ್ತ ಐಂದ್ರಮೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯ್ಕೊಂಡು ದೇವಸ್ತ್ರೀಯರ ಮನಮನಿೞ್ಕುಳಿಗೊಂಡಿಂದ್ರಂ ತನ್ನ ಪುಷ್ಪಕಮನೇಱಿಸಿ ಮಾತಳಿಯಂ ಸಾರಥಿಯಾಗಲ್ವೇೞ್ದು ಕೞಿಪೆ ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆವಂದು ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ತನ್ನ ಬರವನೆ ಪಾರುತ್ತಿರ್ದ ಧರ್ಮಪುತ್ರನ ಮರುತ್ಸುತನ ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಮರ್ಚಿಸಿ ತದೀಯಾಶೀರ್ವಚನಮನಾಂತು ತನಗ ಪೊಡವಟ್ಟ ನಕುಳ ಸಹದೇವರಿರ್ಬರುಮನೞ್ಕಱಂ ಪರಸಿ ಬೞಿಯಮಿಂದ್ರಕೀಲನಗೇಂದ್ರದೊಳೀಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತ್ರಮಂ ತೋಱಿ ತನ್ನನಿಂದ್ರನೊಡಗೊಂಡು ಪೋದುದುಮನಿಂದ್ರಲೋಕದೊಳಾತನಲ್ಲಿ ಪಡೆದ ಮಹಿಮೆಯುಮನಱಿಯೆ ಪೇೞ್ದು ನಾವಿಲ್ಲಿರಲ್ಬೇಡ ದ್ವೈತವನದೊಳಿರ್ಪಂ ಬನ್ನಿಮೆಂದು ಮಾತಳಿಯಂ ಬೀೞ್ಕೊಟ್ಟು ಕೞಿಪಿ ನಿಜಪರಿಜನಸಹಿತಂ ಬಂದು ಸುಖಮಿರ್ಪನ್ನೆಗಮೊಂದು ದಿವಸಮೊಂದು ಮಾಯಾ ಮತ್ತಹಸ್ತಿ-
ವಚನ:ಪದವಿಭಾಗ-ಅರ್ಥ:ಎಂದು ಬೇಡಿಕೊಂಡೊಡೆ ಅದೇಂ ವಿರಿದು ಇತ್ತೆನು (‘ಅದೇನು ದೊಡ್ಡದು ಕೊಟ್ಟೆನು, ಆಗಬಹುದು’) ಎಂದು ಅಣುವನು (ಹನುಮಂತನು) ಅದೃಶ್ಯಮಾದನು ಆಗಳ್ |ಭೀಮಸೇನಂ ಬೀಡಿಂಗೆ ವಂದು (ಬೀಡಿಗೆ/ಕುಟೀರಕ್ಕೆ ಬಂದು) ಧರ್ಮಪುತ್ರಂಗೆ ಆ ಮಾತೆಲ್ಲಮಂ ಪೇೞ್ದು (ಹೇಳಿ )ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪ ಅನ್ನೆಗಂ (ಬರವನ್ನೇ ಇದಿರುನೋಡುತ್ತಿರುವಾಗ) ಇತ್ತ ವಿಬುಧವನಜ ವನಕಳಹಂಸನುಂ (ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನು) ಪಲವುಂ ದಿವಸಂ ಅಗಲ್ದಿರ್ದ ತನ್ನ ಒಡವುಟ್ಟಿದರಂ ನೆನೆದು ಪೋಪೆನೆಂದು ಇಂದ್ರನಂ ಬೀೞ್ಕೊಂಡು (ಹೋಗುವೆನೆಂದು ಹೇಳಿ, ಇಂದ್ರನನ್ನು ಬೀಳ್ಕೊಟ್ಟು) ತನಗೆ ದೇವೇಂದ್ರನಿತ್ತ ಐಂದ್ರಮೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯ್ಕೊಂಡು (ಪಡೆದು,) ದೇವಸ್ತ್ರೀಯರ ಮನಮನು ಇೞ್ಕುಳಿಗೊಂಡು (ಅಪ್ಸರೆಯರನ್ನು ಮನವನ್ನು ಸೆಳೆದು) ಇಂದ್ರಂ ತನ್ನ ಪುಷ್ಪಕಮನು ಏಱಿಸಿ ಮಾತಳಿಯಂ ಸಾರಥಿಯಾಗಲು ವೇೞ್ದು ಕೞಿಪೆ (ಕಳುಹಿಸಲು) ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆ ವಂದು (ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದು,) ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ (ಮಳೆಗಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ) ತನ್ನ ಬರವನೆ ಪಾರುತ್ತಿರ್ದ ಧರ್ಮಪುತ್ರನ ಮರುತ್ಸುತನ (ಧರ್ಮರಾಜ ಮತ್ತು ಭೀಮರ) ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಂ ಅರ್ಚಿಸಿ (ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ - ನಮಿಸಿ) ತದೀಯ ಆಶೀರ್ವಚನಮನು ಆಂತು (ಪಡೆದು) ತನಗೆ ಪೊಡವಟ್ಟ ನಕುಳ ಸಹದೇವರಿರ್ಬರುಮನು ಅೞ್ಕಱಂ ಪರಸಿ (ಪ್ರೀತಿಯಿಂದ ಆಶೀರ್ವಾದ ಮಾಡಿ) ಬೞಿಯಂ ಇಂದ್ರಕೀಲ ನಗೇಂದ್ರದೊಳು (ಪರ್ವತದಲ್ಲಿ) ಈಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತ್ರಮಂ ತೋಱಿ ತನ್ನನು ಇಂದ್ರನೊಡಗೊಂಡು ಪೋದುದುಮನು ಇಂದ್ರಲೋಕದೊಳು ಆತನಲ್ಲಿ ಪಡೆದ ಮಹಿಮೆಯುಮು ಅಱಿಯೆ ಪೇೞ್ದು (ಮಹಿಮೆಯನ್ನು (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿ) ನಾವು ಇಲ್ಲಿರಲ್ಬೇಡ (ನಾವು ಇಲ್ಲಿರುವುದು ಬೇಡ) ದ್ವೈತವನದೊಳಿರ್ಪಂ ಬನ್ನಿಮೆಂದು ಮಾತಳಿಯಂ ಬೀೞ್ಕೊಟ್ಟು ಕೞಿಪಿ (ಕಳುಹಿಸಿ) ನಿಜ-ತನ್ನ ಪರಿಜನಸಹಿತಂ ಬಂದು ಸುಖಂ ಇರ್ಪನ್ನೆಗಂ ಒಂದು ದಿವಸಂ ಒಂದು ಮಾಯಾ ಮತ್ತಹಸ್ತಿ (ಮಾಯಾಗಜವು ಬಂದಿತು! -)-
ವಚನ:ಅರ್ಥ:‘ ‘ಅದೇನು ದೊಡ್ಡದು ಕೊಟ್ಟೆನು, ಆಗಬಹುದು’ ಎಂದು ಹೇಳಿ ಹನುಮಂತನು ಆಗ ಅದೃಶ್ಯನಾದನು. ಭೀಮಸೇನನು ಬೀಡಿಗೆ/ಕುಟೀರಕ್ಕೆ ಬಂದು ಧರ್ಮರಾಜನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿದನು. ಎಲ್ಲರೂ ವಿಕ್ರಮಾರ್ಜುನನ ಬರವನ್ನೇ ಇದಿರುನೋಡುತ್ತಿರುವಾಗ, ಈ ಕಡೆ ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನು ಅನೇಕಕಾಲ ಅಗಲಿದ್ದ ತನ್ನ ಸಹೋದರರನ್ನು ನೆನಸಿಕೊಂಡು ಹಿಂದಿರುಗಿ ಹೋಗುವೆನೆಂದು ಹೇಳಿ, ಇಂದ್ರನನ್ನು ಬೀಳ್ಕೊಟ್ಟು ತನಗೆ ದೇವೇಂದ್ರನು ಕೊಟ್ಟ ಐಂದ್ರವೆಂಬ ದಿವ್ಯಾಸ್ತ್ರವನ್ನೂ ನೈಷ್ಠಿಕವೆಂಬ ಮುಷ್ಟಿಯನ್ನೂ ಪಡೆದು, ಅಪ್ಸರೆಯರನ್ನು ಮನವನ್ನು ಸೆಳೆದು ಹೊರಟನು, ಇಂದ್ರನು ಅವನನ್ನು ಪುಷ್ಪಕವಿಮಾನವನ್ನು ಹತ್ತಿಸಿ, ಮಾತಲಿಯನ್ನು ಸಾರಥಿಯಾಗಿರ ಹೇಳಿ ಕಳುಹಿಸಲು ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದನು. ಮಳೆಗಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ, ತನ್ನ ಬರವನ್ನೇ ಎದುರು ನೋಡುತ್ತಿದ್ದ ಧರ್ಮರಾಜ ಮತ್ತು ಭೀಮರ ಪಾದಕಮಲಗಳನ್ನು ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ ಅವರ ಆಶೀರ್ವಾದವನ್ನು ಪಡೆದು, ತನಗೆ ನಮಸ್ಕಾರಮಾಡಿದ ನಕುಲಸಹದೇವರಿಬ್ಬರನ್ನೂ ಪ್ರೀತಿಯಿಂದ ಆಶೀರ್ವಾದ ಮಾಡಿದನು. ಆನಂತರ ಇಂದ್ರಕೀಲಪರ್ವತದಲ್ಲಿ ಈಶ್ವರನ ವರಪ್ರಸಾದದಿಂದ ಪಡೆದ ದಿವ್ಯಾಸ್ತ್ರ (ಪಾಶುಪತಾಸ್ತ್ರ)ವನ್ನು ತೋರಿ ತನ್ನನ್ನು ಇಂದ್ರನು ಜೊತೆಯಲ್ಲಿ ಕರೆದುಕೊಂಡು ಹೋದುದನ್ನೂ ಇಂದ್ರಲೋಕದಲ್ಲಿ ಇಂದ್ರನಿಂದ ಪಡೆದ ಮಹಿಮೆಯನ್ನು (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿದನು. ನಾವು ಇಲ್ಲಿರುವುದು ಬೇಡ ದ್ವೆತವನದಲ್ಲಿರೋಣ ಬನ್ನಿ ಎಂದು ಹೇಳಿ, ಮಾತಲಿಯನ್ನು ಕಳುಹಿಸಿಕೊಟ್ಟು ತನ್ನ ಬಂಧುಗಳ ಸಮೇತ ದ್ವೆ ತವನಕ್ಕೆ ಬಂದು ಸುಖವಾಗಿದ್ದನು. ಹಾಗೆ ಇರುವಾಗ ಮಾಯಾಗಜವು ಬಂದಿತು!- ಅದು-

ದ್ವೈತವನದಲ್ಲಿ ಯಕ್ಷ ಪ್ರಸಂಗ[ಸಂಪಾದಿಸಿ]

ಮ|| ಮಸಕಂ ಕಾಯ್ಪು ಜವಂ ಜವಂಗಮಿದಿರೊಳ್ ನೋಡಲ್ಕಗುರ್ವಾಗೆ ಮಾಂ
ದಿಸಿಮೀ ವಂದುದು ಕೊಂದುದೆಂದು ಭಯದಿಂ ವಿಪ್ರರ್ ತೆರಳ್ದೋಡೆ ತಾ|
ಪಸರಂ ಬೆರ್ಚಿಸಿ ತೂಳ್ದಿ ಬೇಳ್ವರಣಿಯಂ ಕೊಂಡಾಶ್ರಮಕ್ಕಿಂತು ಬೇ
ವಸಮಂ ಮಾಡುವುದಾಯ್ತದೊಂದು ವಿಭವಂ ಮತ್ತೇಭವಿಕ್ರೀಡಿತಂ|| ೩೭||
ಪದ್ಯ-೩೭:ಪದವಿಭಾಗ-ಅರ್ಥ:ಮಸಕಂ ಕಾಯ್ಪು ಜವಂ (ರಭಸ ಕೋಪ ಮತ್ತು ವೇಗದಲ್ಲಿ) ಜವಂಗಂ ಇದಿರೊಳ್ ನೋಡಲ್ಕೆ ಅಗುರ್ವ್ ಆಗೆ (ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ ಹಾಗೆ) ಮಾಂದಿಸಿಂ (ತಡೆಯಿರಿ) ಈ ವಂದುದು ಕೊಂದುದು ಎಂದು ಭಯದಿಂ ವಿಪ್ರರ್ ತೆರಳ್ದು ಓಡೆ ( ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಲು) ತಾಪಸರಂ ಬೆರ್ಚಿಸಿ ತೂಳ್ದಿ ಬೇಳ್ವ (ಹೋಮದ) ಅರಣಿಯಂ ಕೊಂಡು (ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು ತೆಗೆದುಕೊಂಡು ಹೋಯಿತು-) ಆಶ್ರಮಕ್ಕೆ ಇಂತು ಬೇವಸಮಂ ಮಾಡುವುದಾಯ್ತು ಅದೊಂದು ವಿಭವಂ ಮತ್ತೇಭವಿಕ್ರೀಡಿತಂ (ಹೀಗೆ ಮದಿಸಿದ ಆನೆಯು ಒಂದು ಆಟದ ವೈಭವದಲ್ಲಿ ಆಶ್ರಮಕ್ಕೆ ಸಂಕಟವನ್ನು ಉಂಟುಮಾಡಿತು.)
ಪದ್ಯ-೩೭:ಅರ್ಥ: ಹಾಗಿರುವಾಗ ಆ ಮದವೇರಿದ ಆನೆ- ‘ರಭಸ ಕೋಪ ಮತ್ತು ವೇಗದಲ್ಲಿ ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ (ಹಾಗೆ ಇರುವ ಮಾಯಾಗಜವು) ಬಂದಿತು! ತಡೆಯಿರಿ, ಕೊಂದುಹಾಕುತ್ತಿದೆ’ ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಲು, ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು (ಅಗ್ನಿಯನ್ನುಂಟುಮಾಡುವ ಕಡೆಗೋಲು) ಕೊಂಡು ಓಡಿತು. ಹೀಗೆ ಮದಿಸಿದ ಆನೆಯು ಒಂದು ಆಟದ ವೈಭವದಲ್ಲಿ ಆಶ್ರಮಕ್ಕೆ ಸಂಕಟವನ್ನು ಉಂಟುಮಾಡಿತು.
ವ|| ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್ ಬಂದು ಯುಷ್ಠಿರಂಗಱಪಿ ನೀಮೆಮಗದಱ ಕೈಗೆ ಪೋದರಣಿಯಂ ತಂದೀಯದಾಗಳಿಷ್ಟಿ ವಿಘ್ನಂಗಳಂ ಮಾಡಿದಿರೆಂದೊಡಯ್ವರುಂ ಪ್ರಚಂಡಕೋದಂಡಹಸ್ತರ್ ಕಾಳಕಾಳಸ್ವರೂಪಮಂ ಕೆಯ್ಕೊಂಡು ಮದಾಂಧಗಂಧಸಿಂಧುರದ- ಬೞಿಯಂ ನಿರ್ವಂದದಿಂ ತಗುಳ್ವುದುಮಾ ಮಾಯಾ ಮತ್ತಹಸ್ತಿಯುಂ ಮೂಱು ಜಾವರಂಬರಂ ರೂಪುದೋಱಿ ಪರಿದು ಬೞಿಯಮದೃಶ್ಯಮಾದೊಡಯ್ವರುಂ ಚೋದ್ಯಂ ಬಟ್ಟು ಘರ್ಮಕಿರಣಸಂತಾಪತಾಪಿತಶರೀರರೊಂದಾಲದ ಮರದ ಕೆಳಗೆ ವಿಶ್ರಮಿಸೆ ಧರ್ಮ ಪುತ್ರಂ ನೀರಡಸಿ ಸಹದೇವನನೆಲ್ಲಿಯಾದೊಡಂ ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದುದು ಮಂತೆಗೆಯ್ವೆನೆಂದು ಕೂಜಜ್ಜಳಚರಕುಳಕಳರವದೊಳಂ ಕಮಳಕುವಳಯರಜಕಷಾಯ ಪರಿಮಿಳದಳಿಪಟಳಜಟಿಳಮಾಗಿ ಬಂದು ತೀಡುವ ಮಂದಾನಿಳನಿಂ ನೀರ ದೆಸೆಯನಱಿದು ಪೋಗೆ ವೋಗೆ-
ವಚನ:ಪದವಿಭಾಗ-ಅರ್ಥ:ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್ ಬಂದು ಯುಷ್ಠಿರಂಗೆ ಅಱಿಪಿ (ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ) ನೀಂ ಎಮಗೆ ಅದಱ ಕೈಗೆ ಪೋದ ಅರಣಿಯಂ ತಂದು ಈಯದಾಗಳು ಇಷ್ಟಿ ವಿಘ್ನಂಗಳಂ ಮಾಡಿದಿರಿ ಎಂದೊಡೆ (ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ ತಂದುಕೊಡದಿದ್ದರೆ ಯಜ್ಞಕ್ಕೆ ವಿಘ್ನಮಾಡಿದವರಾಗುತ್ತೀರಿ ಎಂದಾಗ) ಅಯ್ವರುಂ ಪ್ರಚಂಡಕೋದಂಡ ಹಸ್ತರ್ (ಅಯ್ದು ಜನವೂ ಭಯಂಕರವಾದ ಬಿಲ್ಲನ್ನು ಕೈಯಲ್ಲಿ ಹಿಡಿದು) ಕಾಳಕಾಳಸ್ವರೂಪಮಂ ಕೆಯ್ಕೊಂಡು ಮದಾಂಧಗಂಧಸಿಂಧುರದ- ಬೞಿಯಂ ( ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ) ನಿರ್ವಂದದಿಂ ತಗುಳ್ವುದುಂ (ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು) ಆ ಮಾಯಾ ಮತ್ತಹಸ್ತಿಯುಂ ಮೂಱು ಜಾವರಂಬರಂ (ಆ ಮಾಯಾಮದಗಜವು ಮೂರು ಜಾವದವರೆಗೂ) ರೂಪುದೋಱಿ ಪರಿದು ಬೞಿಯಂ ಅದೃಶ್ಯಮಾದೊಡೆ (ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು.) ಅಯ್ವರುಂ ಚೋದ್ಯಂ ಬಟ್ಟು (ಅಯ್ದು ಜನವೂ ಆಶ್ಚರ್ಯಪಟ್ಟು) ಘರ್ಮಕಿರಣಸಂತಾಪ ತಾಪಿತ ಶರೀರರು (ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ) ಒಂದು ಆಲದ ಮರದ ಕೆಳಗೆ ವಿಶ್ರಮಿಸೆ ಧರ್ಮ ಪುತ್ರಂ ನೀರಡಸಿ ( ಬಾಯಾರಿ) ಸಹದೇವನನು ಎಲ್ಲಿಯಾದೊಡಂ ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದುದುಂ(ಬಾ ಎಂದು ಹೇಳಿದನು), ಅಂತೆ ಗೆಯ್ವೆನೆಂದು ಕೂಜಜ್ಜಳ ಚರಕುಳಕಳ ರವದೊಳಂ (ಶಬ್ದಮಾಡುತ್ತಿರುವ ಜಲಚರ ಪ್ರಾಣಿಗಳ ಕಲಕಲ ಶಬ್ದದಿಂದಲೂ) ಕಮಳಕುವಳಯ ರಜಕಷಾಯ ಪರಿಮಿಳದ ಅಳಿಪಟಳ ಜಟಿಳಮಾಗಿ (ಕುಮಲ ಕನ್ನೆದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ) ಬಂದು ತೀಡುವ ಮಂದಾನಿಳನಿಂ (ಬಂದು ಬೀಸುವ ಮಂದಮಾರುತದಿಂದಲೂ) ನೀರ ದೆಸೆಯನು ಅಱಿದು ಪೋಗೆ ವೋಗೆ (ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದಾಗ)-
ವಚನ:ಅರ್ಥ: ಆಗ ಆ ಮದ್ದಾನೆಯು ಮಾಡಿದ ಕೋಲಾಹಲವನ್ನು ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ ತಂದುಕೊಡದಿದ್ದರೆ ಯಜ್ಞಕ್ಕೆ ವಿಘ್ನಮಾಡಿದವರಾಗುತ್ತೀರಿ ಎಂದರು. ಅಯ್ದು ಜನವೂ ಭಯಂಕರವಾದ ಬಿಲ್ಲನ್ನು ಕೈಯಲ್ಲಿ ಹಿಡಿದು, ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ ಹಿಂದೆ ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು ಆ ಮಾಯಾಮದಗಜವು ಮೂರು ಜಾವದವರೆಗೂ ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು. ಅಯ್ದು ಜನವೂ ಆಶ್ಚರ್ಯಪಟ್ಟು ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ ಒಂದು ಆಲದಮರದ ಕೆಳಗೆ ವಿಶ್ರಮಿಸಿಕೊಂಡರು ಧರ್ಮರಾಜನು ಬಾಯಾರಿ ಸಹದೇವನನ್ನು ಎಲ್ಲಿಂದಲಾದರೂ ಬೇಗ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಮಾಡುತ್ತೇನೆ ಎಂದು ಶಬ್ದಮಾಡುತ್ತಿರುವ ಜಲಚರಪ್ರಾಣಿಗಳ ಕಲಕಲಶಬ್ದದಿಂದಲೂ ಕುಮಲ ಕನ್ನೆದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ಬಂದು ಬೀಸುವ ಮಂದಮಾರುತದಿಂದಲೂ ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದನು. ಹಾಗೆ ಹೋದಾಗ-
ಕಂ|| ಬಕ ಕಲಹಂಸ ಬಲಾಕ
ಪ್ರಕರ ಮೃದುಕ್ವಣಿತರಮ್ಯಮಿದಿರೊಳ್ ತೋಱಿ|
ತ್ತು ಕೊಳಂ ಪರಿ ವಿಕಸಿತ ಕನ
ಕ ಕಂಜಕಿಂಜಲ್ಕಪುಂಜಪಿಂಜರಿತಜಳಂ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಬಕ ಕಲಹಂಸ ಬಲಾಕ ಪ್ರಕರ (ಸಮೂಹ) ಮೃದುಕ್ವಣಿತ (ಮೃದುವಾದ ಶಬ್ದದಿಂದಲೂ) ರಮ್ಯಂ ಇದಿರೊಳ್ ತೋಱಿತ್ತು ಕೊಳಂ (ರಮ್ಯವಾದ ಸರೋವರವೊಂದು ಇದಿರಿನಲ್ಲಿ ಕಾಣಿಸಿಕೊಂಡಿತು.- ಅದು-) ಪರಿ ವಿಕಸಿತ ಕನಕ ಕಂಜ ಕಿಂಜಲ್ಕಪುಂಜ (ಕೇಸರಗಳ ರಾಶಿ) ಪಿಂಜರಿತ ಜಳಂ (ಚೆನ್ನಾಗಿ ಅರಳಿದ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಬಣ್ಣವನ್ನುಳ್ಳ ಜಲದ - ಕೊಳಂ ಇದಿರೊಳ್ ತೋಱಿತ್ತು )
ಪದ್ಯ-೩೮:ಅರ್ಥ: ಆ ಕೊಳದಲ್ಲಿ, ಬಕ, ಹಂಸ ಮತ್ತು ಬೆಳ್ಳಕ್ಕಿಗಳ ಸಮೂಹದ ಮೃದುವಾದ ಶಬ್ದದಿಂದಲೂ ರಮ್ಯವಾಗಿ ಅರಳಿರುವ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಹಳದಿಯ ಬಣ್ಣವನ್ನುಳ್ಳ ನೀರಿನಿಂದ ಕೂಡಿದ ಸರೋವರವೊಂದು ಇದಿರಿನಲ್ಲಿ ಕಾಣಿಸಿತು.
ವ|| ಅಂತು ಸೊಗಯಿಸುವ ಸರೋವರಮಂ ಕಂಡು ತಾನುಂ ನೀರಡಸಿದನಪ್ಪುದಱಿಂದದಱ ಕೆಲದ ಲತೆಯ ಮೆಳೆಯೊಳ್ ಬಿಲ್ಲುಮಂಬುಮಂ ಸಾರ್ಚಿ ಕೊಳನಂ ಪೊಕ್ಕು ಕರಚರಣ ವದನಪ್ರಕ್ಷಾಲನಂಗೆಯ್ದು ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳೊಂದು ದಿವ್ಯವಚನಮಾಕಾಶದೊಳ್-
ವಚನ:ಪದವಿಭಾಗ-ಅರ್ಥ:ಅಂತು ಸೊಗಯಿಸುವ ಸರೋವರಮಂ ಕಂಡು, ತಾನುಂ ನೀರಡಸಿದನ್ ಅಪ್ಪುದಱಿಂದ ಅದಱ ಕೆಲದ (ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ) ಲತೆಯ ಮೆಳೆಯೊಳ್ ಬಿಲ್ಲುಂ ಅಂಬುಮಂ ಸಾರ್ಚಿ (ಸಾಚಿ ಇಟ್ಟು) ಕೊಳನಂ ಪೊಕ್ಕು ಕರ ಚರಣ ವದನ ಪ್ರಕ್ಷಾಲನಂಗೆಯ್ದು (ಕೈಕಾಲುಮುಖವನ್ನು ತೊಳೆದುಕೊಂಡು) ನೀರಂ ಕುಡಿಯಲೆಂದು ನಿಜಾಂಜಲಿಪುಟಮಂ (ಕೈಬೊಗಸೆಯನ್ನು) ನೀಡಿದಾಗಳ್ ಒಂದು ದಿವ್ಯವಚನಂ ಆಕಾಶದೊಳ್-(ಆಕಾಶದಲ್ಲಿ ಒಂದು ಅಶರೀರವಾಣಿಯು ಹೀಗೆಂದಿತು)
ವಚನ:ಅರ್ಥ:ಹಾಗೆ ಸೊಗಯಿಸಾಗಿ ಶೋಭಿಸುವ ಸರೋವರವನ್ನು ಕಂಡು, ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ ಬಳ್ಳಿಯ ಮೆಳೆಯಲ್ಲಿ ಬಿಲ್ಲನ್ನೂ ಬಾಣವನ್ನೂ ಇಟ್ಟು ಸರೋವರವನ್ನು ಪ್ರವೇಶಿಸಿ ಕೈಕಾಲುಮುಖವನ್ನು ತೊಳೆದುಕೊಂಡು ನೀರನ್ನು ಕುಡಿಯುವುದಕ್ಕೋಸ್ಕರ ತನ್ನ ಕೈಬೊಗಸೆಯನ್ನು ನೀಡಿದಾಗ ಆಕಾಶದಲ್ಲಿ ಒಂದು ಅಶರೀರವಾಣಿಯು ಹೀಗೆಂದಿತು.
ಕಂ|| ತೋಯಜಷಂಡಮನಿದನಾ
ನಾಯತಿಯಿಂ ಕಾವೆನೆನ್ನ ಮಾತಿಂಗಲೆ ಕೌಂ|
ತೇಯ ಮಱುಮಾತನಿತ್ತು ಮ
ದೀಯ ಸರೋವರದ ತೋಯಮಂ ಕುಡಿ ಕೊಂಡುಯ್|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ:ತೋಯಜ ಷಂಡಮನು ಇದಂ ಆನ್ ಆಯತಿಯಿಂ ಕಾವೆನು (ಈ ಸರೋವರವನ್ನು ನಾನು ಶೋಭೆಯಿಂದ/ಎಚ್ಚರದಿಂದ ಕಾಯುತ್ತಿದ್ದೇನೆ) ಎನ್ನ ಮಾತಿಂಗೆ ಎಲೆ ಕೌಂತೇಯ ಮಱುಮಾತನಿತ್ತು (ಪ್ರತ್ಯುತ್ತರವನ್ನು ಕೊಟ್ಟು) ಮದೀಯ ಸರೋವರದ (ನನ್ನ ಸರೋವರದ) ತೋಯಮಂ (ನೀರನ್ನು) ಕುಡಿ ಕೊಂಡುಯ್
ಪದ್ಯ-೩೯:ಅರ್ಥ: . ‘ಈ ಸರೋವರವನ್ನು ನಾನು ಶೋಭೆಯಿಂದ/ಎಚ್ಚರದಿಂದ ಕಾಯುತ್ತಿದ್ದೇನೆ. ಎಲೈ ಕೌಂತೇಯನೆ ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟು ನನ್ನ ಸರೋವರದ ನೀರನ್ನು ಕುಡಿದು, ತೆಗದುಕೊಂಡು ಹೋಗು’
ವ|| ಎಂಬುದುಮಾ ದಿವ್ಯವಚನಮನುಲ್ಲಂಘಿಸಿ ನೀರೞ್ಕೆಪೋಪಿನಂ ನೀರಂ ಕುಡಿದು ಪದ್ಯಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂ ಪೊಱಮಟ್ಟೊಂದೆರಡಡಿಯನಿಡುತೆ ಗತಪ್ರಾಣನಾಗಿ ಬಿೞರ್ದನಿತ್ತ ಧರ್ಮಪುತ್ರಂ ಸಹದೇವಂ ತಡೆದುದರ್ಕುಮ್ಮಳಿಸಿ ನಕುಲನ ಮೊಗಮಂ ನೋಡಿ ಸಹದೇವನೊಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದೊಡಂತೆಗೆಯ್ವೆನೆಂದು ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿೞರ್ದ ತಮ್ಮನಂ ಕಂಡು ಚೋದ್ಯಂಬಟ್ಟು-
ವಚನ:ಪದವಿಭಾಗ-ಅರ್ಥ:ಎಂಬುದುಂ ಆ ದಿವ್ಯವಚನಮನು ಉಲ್ಲಂಘಿಸಿ ನೀರೞ್ಕೆ ಪೋಪಿನಂ (ಬಾಯಾರಿಕೆ ಹೋಗಲು) ನೀರಂ ಕುಡಿದು ಪದ್ಯಪತ್ರೌಘಂಗಳಿಂ (ಕಮಲಪತ್ರಗಳ ಸಮೂಹದಲ್ಲಿ) ತಮ್ಮಣ್ಣಂಗೆ ನೀರಂ ತೀವಿಕೊಂಡು (ತುಂಬಿಕೊಂಡು) ಸರೋವರದಿಂ ಪೊಱಮಟ್ಟು (ಹೊರಟು) ಒಂದೆರಡು ಅಡಿಯನು ಇಡುತೆ ಗತಪ್ರಾಣನಾಗಿ ಬಿೞಿರ್ದನು (ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು), ಇತ್ತ ಧರ್ಮಪುತ್ರಂ ಸಹದೇವಂ ತಡೆದುದರ್ಕೆ ಉಮ್ಮಳಿಸಿ (ಬರದಿದ್ದುದರಿಂದ ಕಳವಳಪಟ್ಟು) ನಕುಲನ ಮೊಗಮಂ ನೋಡಿ ಸಹದೇವನು ಒಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇೞ್ದೊಡೆ ಅಂತೆಗೆಯ್ವೆನೆಂದು (ಹಾಗೇ ಮಾಡುವೆನೆಂದು) ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿೞಿರ್ದ ತಮ್ಮನಂ ಕಂಡು ಚೋದ್ಯಂಬಟ್ಟು-
ವಚನ:ಅರ್ಥ:|| ಎನ್ನಲು ಆ ದಿವ್ಯವಚನವನ್ನುಲಂಘನೆ ಮಾಡಿ ಬಾಯಾರಿಕೆ ಹೋಗಲು ನೀರು ಕುಡಿದು ಕಮಲಪತ್ರಗಳ ಸಮೂಹದಲ್ಲಿ ತಮ್ಮಣ್ಣನಿಗೆ ನೀರನ್ನು ತುಂಬಿಕೊಂಡು ಸರೋವರದಿಂದ ಹೊರಟನು. ಒಂದೆರಡು ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು. ಎಷ್ಟು ಹೊತ್ತಾದರೂ ಸಹದೇವನು ಹಿಂತಿರುಗಿ ಬರದಿದ್ದುದರಿಂದ ಕಳವಳಪಟ್ಟು ಯುಧಿಷ್ಠಿರನು ನಕುಲನನ್ನು ನೋಡಿ ಸಹದೇವನನ್ನು ಕರೆದುಕೊಂಡು ನೀರನ್ನು ತೆಗೆದುಕೊಂಡು ಬಾ, ಎಂದು ಹೇಳಲು, ಹಾಗೇ ಮಾಡುವೆನೆಂದು ಸಹದೇವನ ಹೋದ ಹೆಜ್ಜೆಯನ್ನು ಅನುಸರಿಸಿ ಹೋಗಿ ಕೊಳದ ತಡಿಯಲ್ಲಿ ಬಿದ್ದಿದ್ದ ತಮ್ಮನನ್ನು ಕಂಡು ಚಕಿತನಾಗಿ-
ಕಂ|| ತಾನುಂ ಸರೋಜಷಂಡಮ
ನಾನತರಿಪು ಪೊಕ್ಕು ದಿವ್ಯವಚನಮನದನಂ|
ತೇನು ಬಗೆಯದೆ ಕುಡಿದ
ಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ|| ೪೦||
ಪದ್ಯ-೪೦:ಪದವಿಭಾಗ-ಅರ್ಥ:ತಾನುಂ ಸರೋಜಷಂಡಮನು ಆನತರಿಪು (ಶತ್ರುಗಳನ್ನು ಆನತ-ಅಧೀನಮಾಡಿಕೊಂಡಿದ್ದ ನಕುಲನು) ಪೊಕ್ಕು ದಿವ್ಯವಚನಮನು ಅದನಂತೆ ಏನು ಬಗೆಯದೆ (ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ) ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ (ನಂಜು-ವಿಷ,ವಿಷಪಾನ ಮಾಡಿದವರ ಹಾಗೆ ಬಿದ್ದನು. )
ಪದ್ಯ-೪೦:ಅರ್ಥ: ಅವನೂ ಸರೋವರವನ್ನು ಪ್ರವೇಶಿಸಿ ಶತ್ರುಗಳನ್ನು ಆನತ-ಅಧೀನಮಾಡಿಕೊಂಡಿದ್ದ ಆ ನಕುಲನು ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ಅಜ್ಞಾನತೆಯಿಂದ ಕುಡಿದು ವಿಷಪಾನ ಮಾಡಿದವರ ಹಾಗೆ ಬಿದ್ದನು.
ವ|| ಅನ್ನೆಗಂ ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನೊಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂತೆಗೆಯ್ವೆನೆಂದು ಬಂದು ಕೊಳನ ತಡಿಯೊಳಚೇತನರಾಗಿ ಬಿೞರ್ದ ತಮ್ಮಂದಿರಿರ್ವರುಮಂ ಕಂಡು ವಿಸ್ಮಯಂಬಟ್ಟು-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಯಮನಂದನನು ಇರ್ವರ ಬರವುಮಂ ಕಾಣದೆ ಶಂಕ ಆಕುಳಿತ ಚಿತ್ತನಾಗಿ (ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ) ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನು ಒಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂ ಅಂತೆಗೆಯ್ವೆನೆಂದು (ಹಾಗೆಯೇ ಮಾಡುತ್ತೇನೆ ಎಂದು) ಬಂದು ಕೊಳನ ತಡಿಯೊಳು ಅಚೇತನರಾಗಿ ಬಿೞಿರ್ದ (ಸತ್ತು ಬಿದ್ದಿದ್ದ) ತಮ್ಮಂದಿರು ಇರ್ವರುಮಂ(ಇಬ್ಬರು ತಮ್ಮಂದಿರನ್ನು) ಕಂಡು ವಿಸ್ಮಯಂಬಟ್ಟು-
ವಚನ:ಅರ್ಥ:ಆಗ ಧರ್ಮಜನು ಇಬ್ಬರ ಬರುವಿಕೆಯನ್ನೂ ಕಾಣದೆ ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ ಅರ್ಜುನನನ್ನು ನೀನು ಬೇಗಹೋಗಿ ಆ ಮಕ್ಕಳುಗಳನ್ನೊಳಗೊಂಡು ನೀರನ್ನೂ ತೆಗೆದುಕೊಂಡು ಸಾವಕಾಶಮಾಡದೆ ಬಾ ಎಂದನು. ಹಾಗೆಯೇ ಮಾಡುತ್ತೇನೆ ಎಂದು ಅರ್ಜುನನು ಬಂದು ಕೊಳದ ದಡದಲ್ಲಿ ಸತ್ತು ಬಿದ್ದಿದ್ದ ಇಬ್ಬರು ತಮ್ಮಂದಿರನ್ನು ನೋಡಿ ಆಶ್ಚರ್ಯಪಟ್ಟು-.
ಕಂ|| ಆ ಕಮಳಾಕರಮಂ ಪೊ
ಕ್ಕಾಕಾಶಧ್ವನಿಯನುಱದೆ ಕುಡಿದರಿಭೂಪಾ|
ನೀಕಭಯಂಕರನುಂ ಗಡ
ಮೇಕೆಂದಱಯೆಂ ಬೞಲ್ದು ಜೋಲ್ದಂ ಧರೆಯೊಳ್|| ೪೧ ||
ಪದ್ಯ-೪೧:ಪದವಿಭಾಗ-ಅರ್ಥ: ಆ ಕಮಳಾಕರಮಂ (ಕಮಲಾಕರ - ಸರೋವರ) ಪೊಕ್ಕು ಆಕಾಶಧ್ವನಿಯನು ಉಱದೆ (ಲಕ್ಷಮಾಡದೆ) ಕುಡಿದು ಅರಿಭೂಪ ಆನೀಕಭಯಂಕರನುಂ(ಶತ್ರುರಾಜರ ಸಮೂಹಕ್ಕೆ ಭಯವನ್ನುಂಟುಮಾಡುವ) ಗಡಂ-ಅಬ್ಬಾ ಕುಡಿದನು ಏಕೆಂದಱಿಯೆಂ (ಏಕೆಂದು ತಿಳಿಯೆನು!) ಬೞಿಲ್ದು ಜೋಲ್ದಂ ಧರೆಯೊಳ್ (ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು)
ಪದ್ಯ-೪೧:ಅರ್ಥ: ಅರ್ಜುನನು ಆ ಸರೋವರವನ್ನು ಪ್ರವೇಶಿಸಿ ಆಕಾಶಧ್ವನಿಯನ್ನು ಲಕ್ಷಮಾಡದೆ, ಏಕೆಂದು ತಿಳಿಯೆನು, ನೀರು ಕುಡಿದು ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು
ವ|| ಅನ್ನೆಗಮತ್ತ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ ಭೀಮಸೇನನಂ ನೀಂ ಪೋಗಿ ಮೂವರುಮನೊಡಂಗೊಂಡು ನೀರಂ ಕೊಂಡು ಬಾಯೆಂದೊಡಂತೆಗೆಯ್ವೆನೆಂದು ವಾಯುವೇಗದಿಂ ಬಂದು ಪುಂಡರೀಕಷಂಡೋಪಾಂತದೊಳ್ ವಿಗತಜೀವಿತರಾಗಿರ್ದ ಮೂವರನುಜರುಮಂ ಕಂಡಿದು ಮನುಜರಿಂದಾದುಪದ್ರವಮಲ್ಲ ಮೇನಾನುಮೊಂದು ದೇವತೋಪದ್ರವಮಾಗಲೆ ವೇೞ್ಕುಮೆಂದು
ವಚನ:ಪದವಿಭಾಗ-ಅರ್ಥ:ಅನ್ನೆಗಮತ್ತ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ (ಕೆಟ್ಟುಹೋದ/ ಒಡೆದ ಮನಸ್ಸುಳ್ಳವನಾಗಿ) ಭೀಮಸೇನನಂ ನೀಂ ಪೋಗಿ (ನೀನು ಹೊಗಿ) ಮೂವರುಮನು ಒಡಂಗೊಂಡು ನೀರಂ ಕೊಂಡು ಬಾಯೆಂದೊಡೆ ಅಂತೆಗೆಯ್ವೆನೆಂದು (ಹಾಗೆಯೇ ಮಾಡುತ್ತೇನೆ) ವಾಯುವೇಗದಿಂ ಬಂದು, ಪುಂಡರೀಕಷಂಡ ಉಪಾಂತದೊಳ್ ವಿಗತಜೀವಿತರು ಆಗಿರ್ದ ಮೂವರು ಅನುಜರುಮಂ (ಸರೋವರದ ಸಮೀಪದಲ್ಲಿ ಜೀವವಿಲ್ಲದೆ ಬಿದ್ದಿದ್ದ ಮೂವರು ತಮ್ಮಂದಿರನ್ನು ನೋಡಿ) ಕಂಡು ಇದು ಮನುಜರಿಂದಾದ ಉಪದ್ರವಂ ಅಲ್ಲಂ ಏನಾನುಮೊಂದು (ಯಾವುದಾದರೂ ಒಂದು) ದೇವತ ಉಪದ್ರವಂ ಆಗಲೆ ವೇೞ್ಕುಂ (ದೇವತೆಯ ಹಿಂಸೆಯಾಗಿರಬೇಕೆಂದು) ಎಂದು
ವಚನ:ಅರ್ಥ:ಅಷ್ಟರಲ್ಲಿ ಆ ಕಡೆ ಧರ್ಮಜನು ಮೂವರು ತಮ್ಮಂದಿರ ಬರವನ್ನು ಕಾಣದೆ ಒಡೆದ ಮನಸ್ಸುಳ್ಳವನಾಗಿ ಭೀಮಸೇನನನ್ನು ‘ನೀನು ಹೋಗಿ ಮೂವರನ್ನೂ ಕೂಡಿಕೊಂಡು ನೀರನ್ನೂ ತೆಗೆದುಕೊಂಡು ಬಾ’ ಎಂದನು, ‘ಹಾಗೆಯೇ ಮಾಡುತ್ತೇನೆ’ ಎಂದು, ವಾಯುವೇಗದಿಂದ ಬಂದು ಸರೋವರದ ಸಮೀಪದಲ್ಲಿ ಜೀವವಿಲ್ಲದೆ ಬಿದ್ದಿದ್ದ ಮೂವರು ತಮ್ಮಂದಿರನ್ನು ನೋಡಿ ಇದು ಮನುಷ್ಯರಿಂದಾದ ಕೇಡಲ್ಲ; ಯಾವುದಾದರೂ ಒಂದು ದೇವತೆಯ ಹಿಂಸೆಯಾಗಿರಬೇಕೆಂದು ಊಹಿಸಿ-
ಕಂ|| ಬಿಡದೆ ಕಡುಕೆಯ್ದ ದಿವ್ಯದ
ನುಡಿಗೆ ಕಿವುೞ್ಕೇಳ್ದು ಕುಡಿದು ನೀರಂ ಭೀಮಂ|
ಪಿಡಿದ ಗದೆವೆರಸು ಭೋಂಕೆನೆ
ಕೆಡೆದಂ ಗಿರಿಶಿಖರದೊಡನೆ ಕೆಡೆವಂತಾಗಳ್|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ:ಬಿಡದೆ ಕಡುಕೆಯ್ದ (ಕಟುವಾದ ಎಚ್ಚರಿಕೆಗೆ) ದಿವ್ಯದನುಡಿಗೆ ಕಿವುೞ್ಕೇಳ್ದು (ಕಿವುಡಾಗಿ)ಕುಡಿದು ನೀರಂ ಭೀಮಂ ಪಿಡಿದ ಗದೆವೆರಸು (ಹಿಡಿದ ಗದೆಯೊಡನೆಯೇ) ಭೋಂಕೆನೆ ಕೆಡೆದಂ ಗಿರಿಶಿಖರದೊಡನೆ ಕೆಡೆವಂತಾಗಳ್
ಪದ್ಯ-೪೨:ಅರ್ಥ:ಭೀಮನು, ತನಗೂ ಅವಕಾಶಕೊಡದೆ ತಡೆದ ದೇವತೆಯ ಕಟುವಾದ ಎಚ್ಚರಿಕೆ ದಿವ್ಯಮಾತಿಗೆ ಕಿವುಡಾಗಿ ಉದಾಸೀನಮಾಡಿ ನೀರನ್ನು ಕುಡಿದು ಹಿಡಿದ ಗದೆಯೊಡನೆಯೇ ಶಿಖರಸಹಿತವಾಗಿ ಪರ್ವತವು ಉರುಳುವಂತೆ ತಟಕ್ಕನೆ ಬಿದ್ದನು.
ವ|| ಅಂತು ನಾಲ್ವರುಂ ವಿಳಯಕಾಲವಾತಾಹತಿಯಿಂ ಕೆಡೆದ ಕುಲಗಿರಿಗಳಂತೆ ಕೆಡೆದು ವಿಗತಜೀವಿತರಾಗಿರ್ದ ಪದದೊಳತ್ತ ದುರ್ಯೋಧನನ ಬೆಸದೊಳಾತನ ಪುರೋಹಿತಂ ಕನಕಸ್ವಾಮಿಯೆಂಬಂ ಪಾಂಡವರ್ಗಾಭಿಚಾರಮಾಗೆ ಬೇಳ್ವ ಬೇಳ್ವೆಯ ಕೊಂಡದೊಳಗಣಿಂದ ಮಂಜನ ಪುಂಜದಂತಪ್ಪ ಮೆಯ್ಯುಂ ಸಿಡಿಲನಡಸಿದಂತಪ್ಪ ದಾಡೆಯುಮುರಿಯುರುಳಿಯಂತಪ್ಪ ಕಣ್ಣುಂ ಕೃತಾಂತನಂತಾಕಾರಮಾಗಿ ತೞತೞಸಿ ಪೊಳೆವ ಕತ್ತಿಗೆಯುಂ ಬೆರಸು ಪೊಱಮಟ್ಟು ಕೀರ್ತಿಗೆಯೆಂಬುಗ್ರದೇವತೆ ಬೆಸಸು ಬೆಸಸೆಂದು ಬೆಸನಂ ಬೇಡೆ ಪಾಂಡವರನೆಲ್ಲಿವೊಕ್ಕೊಡಂ ಕೊಲ್ಲೆಂದೊಡಂತೆ ಗೆಯ್ವೆನೆಂದು ಪೋಗೆಲ್ಲಿಯುಮಱಸಿ ಕಾಣದೆ ಕೊಳನ ತಡಿಯೊಳ್ ಬಿೞರ್ದ ನಾಲ್ವರುಮಂ ಕಂಡು ಬಾಪ್ಪು ಬೞ್ದೆನೆಂದು ತಿನಲ್ ಸಾರ್ವಾಗಳವರ್ಗಳ್ಗನಿತಂ ಮಾಡಿದ ದೈವಂ ಪ್ರತ್ಯಕ್ಷಮಾಗಿ ಗಜಱ ಗರ್ಜಿಸುತ್ತುಂ ಬಂದು-
ವಚನ:ಪದವಿಭಾಗ-ಅರ್ಥ: ಅಂತು ನಾಲ್ವರುಂ ವಿಳಯಕಾಲ ವಾತಾಹತಿಯಿಂ (ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ) ಕೆಡೆದ ಕುಲಗಿರಿಗಳಂತೆ ಕೆಡೆದು (ಬಿದ್ದು) ವಿಗತಜೀವಿತರಾಗಿರ್ದ ಪದದೊಳು ಅತ್ತ (ಪ್ರಾಣಹೋದವರಾಗಿದ್ದ ಸ್ಥಿತಿಯಲ್ಲಿ,) ದುರ್ಯೋಧನನ ಬೆಸದೊಳು ಆತನ (ಆಜ್ಞೆಯಿಂದ ಅವನ) ಪುರೋಹಿತಂ ಕನಕಸ್ವಾಮಿಯೆಂಬಂ (ಕನಕಸ್ವಾಮಿಯೆಂಬುವವನು) ಪಾಂಡವರ್ಗೆ ಅಭಿಚಾರಮಂ ಆಗೆ ಬೇಳ್ವ ಬೇಳ್ವೆಯ ಕೊಂಡದೊಳಗಣಿಂದ (ಮಾಟಮಾಡಲು ಒಂದು ಹೋಮಮಾಡುತ್ತಿದ್ದು ಅದರ ಹೋಮಕುಂಡದಿಂದ) ಮಂಜನ ಪುಂಜದಂತಪ್ಪ ಮೆಯ್ಯುಂ (ಕತ್ತಲೆಯ ಸಮೂಹದಂತಿರುವ ಶರೀರವೂ) ಸಿಡಿಲನು ಅಡಸಿದಂತಪ್ಪ ದಾಡೆಯುಂ (ಸಿಡಿಲನ್ನು ತುಂಬಿಕೊಂಡ ಹಾಗಿದ್ದ ಕೋರೆಹಲ್ಲುಗಳೂ) ಮುರಿಯುರುಳಿಯಂತಪ್ಪ ಕಣ್ಣುಂ (ಬೆಂಕಿಯ ಉಂಡೆಯ ಹಾಗಿದ್ದ ಕಣ್ಣೂ) ಕೃತಾಂತನಂತೆ ಆಕಾರಮಾಗಿ ತೞತೞಸಿ ಪೊಳೆವ ಕತ್ತಿಗೆಯುಂ ಬೆರಸು (ಯಮನ ಹಾಗಿರುವ ಸ್ವರೂಪವೂ ಇವುಗಳನ್ನು ತಾಳಿ ಥಳಥಳನೆ ಹೊಳೆಯುತ್ತಿರುವ ಕತ್ತಿಯಿಂದ ಕೂಡಿ) ಪೊಱಮಟ್ಟು (ಹೊರಟು) ಕೀರ್ತಿಗೆಯೆಂಬ ಉಗ್ರದೇವತೆ- ಬೆಸಸು ಬೆಸಸೆಂದು ಬೆಸನಂ ಬೇಡೆ (ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆಕೇಳಲು’) ಪಾಂಡವರನು ಎಲ್ಲಿವೊಕ್ಕೊಡಂ ಕೊಲ್ಲೆಂದೊಡೆ (ಪಾಂಡವರು ಎಲ್ಲಿ ಹೊಕ್ಕಿದ್ದರೂ ಕೊಲ್ಲು ಎಂದಾಗ) ಅಂತೆ ಗೆಯ್ವೆನು ಎಂದು (ಹಾಗೆಯೇ ಮಾಡುತ್ತೇನೆ ಎಂದು) ಪೋಗಿ ಎಲ್ಲಿಯುಂ ಅಱಸಿ ಕಾಣದೆ (ಹೋಗಿ ಅರಸಿ-ಹುಡುಕಿ ಎಲ್ಲಿಯೂ ಕಾಣದೆ) ಕೊಳನ ತಡಿಯೊಳ್ ಬಿೞ್ದಿರ್ದ ನಾಲ್ವರುಮಂ ಕಂಡು (ಕೊಳದ ದಡದಲ್ಲಿ ಬಿದ್ದಿದ್ದ ನಾಲ್ವರನ್ನೂ ಕಂಡು) ಬಾಪ್ಪು ಬೞ್ದೆನೆಂದು ( ‘ಶಹಭಾಸ್ ಬದುಕಿದೆನು’ ಎಂದು) ತಿನಲ್ ಸಾರ್ವಾಗಳ್ ಅವರ್ಗಳ್ಗೆ ಅನಿತಂ ಮಾಡಿದ ದೈವಂ ಪ್ರತ್ಯಕ್ಷಮಾಗಿ (ಅವರುಗಳಿಗೆ ಆ ಸ್ಥಿತಿಯನ್ನುಂಟು ಮಾಡಿದ ದೈವವು ಎದುರಿಗೆ ಕಾಣಿಸಿಕೊಂಡು) ಗಜಱ ಗರ್ಜಿಸುತ್ತುಂ ಬಂದು (ರೇಗಿ ಆರ್ಭಟಮಾಡುತ್ತ ಬಂದು)-
ವಚನ:ಅರ್ಥ:ಹಾಗೆ ನಾಲ್ಕು ಮಂದಿಯೂ ಪ್ರಳಯಕಾಲದ ಗಾಳಿಯ ಹೊಡೆತದಿಂದ ಬಿದ್ದ ಕುಲಪರ್ವತಗಳಂತೆ ಬಿದ್ದು, ಪ್ರಾಣಹೋದವರಾಗಿದ್ದ ಸ್ಥಿತಿಯಲ್ಲಿ ಆ ಕಡೆ ದುರ್ಯೋಧನನ ಆಜ್ಞೆಯಿಂದ ಆತನ ಪುರೋಹಿತನಾದ ಕನಕಸ್ವಾಮಿಯೆಂಬುವವನು ಪಾಂಡವರಿಗೆ ಮಾಟಮಾಡಲು ಒಂದು ಹೋಮಮಾಡುತ್ತಿದ್ದು, ಆ ಹೋಮಕುಂಡದಿಂದ ಕತ್ತಲೆಯ ಸಮೂಹದಂತಿರುವ ಶರೀರವೂ ಸಿಡಿಲನ್ನು ತುಂಬಿಕೊಂಡ ಹಾಗಿದ್ದ ಕೋರೆಹಲ್ಲುಗಳೂ ಬೆಂಕಿಯ ಉಂಡೆಯ ಹಾಗಿದ್ದ ಕಣ್ಣೂ (ಇವುಗಳಿಂದ ಕೂಡಿ) ಯಮನ ಹಾಗಿರುವ ಸ್ವರೂಪವೂ ಇವುಗಳನ್ನು ತಾಳಿ ಥಳಥಳನೆ ಹೊಳೆಯುತ್ತಿರುವ ಕತ್ತಿಯಿಂದ ಕೂಡಿ ಹೊರಟು ಕೀರ್ತಿಗೆಯೆಂಬ ಒಂದು ಭಯಂಕರವಾದ ದೇವತೆಯು ‘ಹೇಳು ಹೇಳು, ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆಕೇಳಲು’ ಎಂದು ಆ ಶಕ್ತಿ ಕೇಳಲು. ‘ಪಾಂಡವರು ಎಲ್ಲಿ ಹೊಕ್ಕಿದ್ದರೂ ಕೊಲ್ಲು’ ಎಂದು ಆಣತಿಯಿತ್ತನು. ಹಾಗೆಯೇ ಮಾಡುತ್ತೇನೆ ಎಂದು ಹೋಗಿ ಹುಡುಕಿ ಎಲ್ಲಿಯೂ ಕಾಣದೆ ಕೊಳದ ದಡದಲ್ಲಿ ಬಿದ್ದಿದ್ದ ನಾಲ್ವರನ್ನೂ ಕಂಡು ‘ಶಹಭಾಸ್ ಬದುಕಿದೆನು’ ಎಂದು ತಿನ್ನುವುದಕ್ಕೆ ಬಂದಾಗ ಅವರುಗಳಿಗೆ- ಪಾಂಡು ಪುತ್ರರಿಗೆ, ಆ ಸ್ಥಿತಿಯನ್ನುಂಟು ಮಾಡಿದ ದೈವವು ಎದುರಿಗೆ ಕಾಣಿಸಿಕೊಂಡು ರೇಗಿ ಆರ್ಭಟಮಾಡುತ್ತ ಬಂದು-ಹೀಗೆ ಹೇಳಿತು-
ಕಂ|| ಎಲೆ ಪಿಱಿತಿನಿ ಪೋ ಮುಟ್ಟದೆ
ತೊಲಗೀ ನಾಲ್ವರ್ಕಳಸುವನವರ್ಗಳ ಮೆಯ್ಯಿಂ|
ತೊಲಗಿಸಿ ಮುನ್ನಮೆ ಕಾದಿ
ರ್ದಲಂಘ್ಯಬಲನೆನಿಸಿದೆನಗೆ ನೀನಗ್ಗಳಮೇ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಎಲೆ ಪಿಱಿತಿನಿ (ಮಾಂಸಭಕ್ಷಕ ಪಿಶಾಚಿಯೇ) ಪೋ (ಹೋಗು) ಮುಟ್ಟದೆತೊಲಗು, ಈ ನಾಲ್ವರ್ಕಳ ಅಸುವನು ಅವರ್ಗಳ ಮೆಯ್ಯಿಂ ತೊಲಗಿಸಿ ಮುನ್ನಮೆ ಕಾದಿರ್ದ ( ಈ ನಾಲ್ಕು ಜನರ ಪ್ರಾಣವನ್ನು ಅವರ ಶರೀರದಿಂದ ತೊಲಗಿಸಿದ ಮೊದಲಿಂದ ಕಾದಿರುವ,) ಅಲಂಘ್ಯಬಲನು ಎನಿಸಿದ ಎನಗೆ ನೀನು ಅಗ್ಗಳಮೇ (ಯಾರಿಗೂ ಮೀರಲಾಗದ ಶಕ್ತಿಯುಳ್ಳವನು ಎನಿಸಿಕೊಂಡಿರುವ ನನಗೆ ನೀನು ಹೆಚ್ಚಿನವಳೇ? )
ಪದ್ಯ-೪೩:ಅರ್ಥ: ಎಲೆ ಮಾಂಸಭಕ್ಷಕ ಪಿಶಾಚಿಯೆ, ತೊಲಗಿಹೋಗು. ಈ ನಾಲ್ಕು ಜನರ ಪ್ರಾಣವನ್ನು ಅವರ ಶರೀರದಿಂದ ತೊಲಗಿಸಿದ ಮೊದಲಿಂದ ಕಾದಿರುವ, ಯಾರಿಗೂ ಮೀರಲಾಗದ ಶಕ್ತಿಯುಳ್ಳವನು ಎನಿಸಿಕೊಂಡಿರುವ ನನಗೆ ನೀನು ಹೆಚ್ಚಿನವಳೇ?
ವ|| ಅದಲ್ಲದೆಯುಂ ನೀನೆ ಜಾತಿದೇವತೆಯಪ್ಪೊಡೆನ್ನೆಂಜಲನೆಂತು ತಿಂಬೆಯೆಂಬುದುಂ ಪಾಂಡವರ್ ಮುನ್ನಮೆ ನಿನ್ನ ಕೆಯ್ಗೆ ವಂದರೆನಗಮಾ ಬೆಸಂ ತಪ್ಪಿದುದಾನಾರಂ ತಿಂಬೆಂ ಪೇೞೆನೆ ನಿನ್ನನಾವನೊರ್ವನಕಾರಣಂ ಪುಟ್ಟಿಸಿದನಾತನನೆ ತಿನ್ನೆಂಬುದುಮಂತೆಗೆಯ್ವೆನೆಂದು ಪೋಗಿ-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ನೀನೆ ಜಾತಿದೇವತೆಯಪ್ಪೊಡೆ ಎನ್ನ ಎಂಜಲನು ಎಂತು ತಿಂಬೆಯೆಂಬುದುಂ (ಉತ್ತಮಜಾತಿಯ ದೇವತೆಯೇ ಆಗಿದ್ದ ಪಕ್ಷದಲ್ಲಿ ನನ್ನ ಎಂಜಲನ್ನು ಹೇಗೆ ತಿನ್ನುತ್ತೀಯೆ) ಪಾಂಡವರ್ ಮುನ್ನಮೆ ನಿನ್ನ ಕೆಯ್ಗೆ ವಂದರೆ (ಪಾಂಡವರು ಮೊದಲೇ ನಿನ್ನ ಕೈಗೆ ಸಿಕ್ಕಿ ಆಹಾರದಾವರು) ಎನಗಂ ಆ ಬೆಸಂ ತಪ್ಪಿದುದು (ಆದುದರಿಂದ ನನಗೆ ಆ ಕಾರ್ಯವು ತಪ್ಪಿಹೋಯಿತು) ಆನು ಆರಂ ತಿಂಬೆಂ ಪೇೞೆನೆ (ನಾನು ಈಗ ಯಾರನ್ನು ತಿನ್ನಲಿ ಹೇಳು ಎಂದು ಕೇಳಿತು ಕೀರ್ತಿಯೆಂಬ ಶಕ್ತಿ), ನಿನ್ನನು ಆವನು ಒರ್ವನ ಅಕಾರಣಂ ಪುಟ್ಟಿಸಿದನು ಆತನನೆ ತಿನ್ನು ಎಂಬುದುಂ ಅಂತೆ ಗೆಯ್ವೆನೆಂದು ಪೋಗಿ (ನಿನ್ನನ್ನು ಯಾವನು ಅಕಾರಣವಾಗಿ ಹುಟ್ಟಿಸಿದನೋ ಅವನನ್ನೇ ತಿನ್ನು ಎಂದು ಹೇಳಲು, ಹಾಗೆಯೇ ಮಾಡುತ್ತೇನೆ ಎಂದು ಹೋಗಿ )-
ವಚನ:ಅರ್ಥ:ಹಾಗೆಲ್ಲದೆ ‘ನೀನು ಉತ್ತಮಜಾತಿಯ ದೇವತೆಯೇ ಆಗಿದ್ದ ಪಕ್ಷದಲ್ಲಿ ನನ್ನ ಎಂಜಲನ್ನು ಹೇಗೆ ತಿನ್ನುತ್ತೀಯೆ’ ಎಂದಿತು. ಪಾಂಡವರು ಮೊದಲೇ ನಿನ್ನ ಕೈಗೆ ಸಿಕ್ಕಿ ಆಹಾರದಾವರು; ಆದುದರಿಂದ ನನಗೆ ಆ ಕಾರ್ಯವು ತಪ್ಪಿಹೋಯಿತು. ನಾನು ಈಗ ಯಾರನ್ನು ತಿನ್ನಲಿ ಹೇಳು ಎಂದು ಕೇಳಿದಳು. ನಿನ್ನನ್ನು ಯಾವನು ಅಕಾರಣವಾಗಿ ಹುಟ್ಟಿಸಿದನೋ ಅವನನ್ನೇ ತಿನ್ನು ಎಂದು ಹೇಳಲು ಹಾಗೆಯೇ ಮಾಡುತ್ತೇನೆ ಎಂದು ಹೋಗಿ
ಕಂ|| ಕನಕನ ಬೇಳ್ವೆ ತಗುಳ್ದುದು
ಕನಕನನೆಂಬೊಂದು ಮಾತು ಧರೆಗೆಸೆಯೆ ಸುಯೋ|
ಧನನ ಪುರೋಹಿತನಪ್ಪಾ
ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್|| ೪೪ ||
ಪದ್ಯ-೪೪:ಪದವಿಭಾಗ-ಅರ್ಥ:ಕನಕನ ಬೇಳ್ವೆ (ಯಜ್ಞ) ತಗುಳ್ದುದು ಕನಕನನು ಎಂಬೊಂದು ಮಾತು ಧರೆಗೆ ಎಸೆಯೆ (ಪ್ರಖ್ಯಾತವಾಗುವ ಹಾಗೆ) ಸುಯೋಧನನ ಪುರೋಹಿತನಪ್ಪ ಆ ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್ (ಕನಕಸ್ವಾಮಿಯನ್ನೇ ಕೋಪಿಸಿಕೊಂಡು ಕೀರ್ತಿಯೇ ತಿಂದುಹಾಕಿದಳು)
ಪದ್ಯ-೪೪:ಅರ್ಥ: . ‘ಕನಕನ ಯಜ್ಞ ಕನಕನನ್ನೇ ಬೆನ್ನುಹತ್ತಿತು’ ಎಂಬ ಒಂದು ಗಾದೆಮಾತು ಭೂಮಿಯಲ್ಲಿ ಪ್ರಖ್ಯಾತವಾಗುವ ಹಾಗೆ ದುರ್ಯೋಧನನ ಪುರೋಹಿತನಾದ ಆ ಕನಕಸ್ವಾಮಿಯನ್ನೇ ಕೋಪಿಸಿಕೊಂಡು ಕೀರ್ತಿಗಯೇ ತಿಂದುಹಾಕಿದಳು.
ವ|| ಅನ್ನೆಗಮಿತ್ತ ಕೃತಾಂತನಂದನಂ ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಇತ್ತ ಕೃತಾಂತನಂದನಂ(ಧರ್ಮಜನು) ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ-
ವಚನ:ಅರ್ಥ:ಅಷ್ಟರಲ್ಲಿ ಈ ಕಡೆ ಧರ್ಮಜನು ತನ್ನ ನಾಲ್ಕು ತಮ್ಮಂದಿರೂ ಬರದೆ ತಡ ಮಾಡಿದುದಕ್ಕಾಗಿ ಚಿಂತಿತನಾಗಿ-
ಕಂ|| ಪೋದರನೊಡಗೊಂಡು ಬರಲ್
ಪೋದರುಮಾ ಪೋದ ಪೋಗೆ ಪೋದರ್ ತಡೆಯಲ್|
ಪೋದವರಲ್ತೆಂದು ಮನ
ಖೇದಂಬೆರಸೆಯ್ದವಂದನಬ್ಜಾಕರಮಂ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ಪೋದರನು ಒಡಗೊಂಡು ಬರಲ್ ಪೋದರುಂ ಆ ಪೋದ ಪೋಗೆ ಪೋದರ್ (ಹೋದಂತೆಯೇ ಹೋದರು), ತಡೆಯಲ್ ಪೋದವರು ಅಲ್ತು ಎಂದು (ಅವರು ಹಾಗೆ ತಡ ಮಾಡುವವರಲ್ಲ ಎಂದು) ಮನಖೇದಂ ಬೆರಸೆ ಎಯ್ದವಂದನ್ ಅಬ್ಜಾಕರಮಂ (ಮನಸ್ಸಿನಲ್ಲಿ ಖೇದಹೊಂದಿ ತಾನೇ ಸರೋವರದ ಸಮೀಪಕ್ಕೆ ಬಂದನು)
ಪದ್ಯ-೪೫:ಅರ್ಥ: ಹೋದವರನ್ನು ಒಡಗೊಂಡು ಬರಲು ಹೋದವರೂ ಅವರು ಹೋದಂತೆಯೇ ಹೋದರು. ಅವರು ಹಾಗೆ ತಡ ಮಾಡುವವರಲ್ಲ, ಎಂಬ ಮನಸ್ಸಿನ ಖೇದದಿಂದ ತಾನೇ ಸರೋವರದ ಸಮೀಪಕ್ಕೆ ಬಂದನು.
ವ||ಅಂತೆಯ್ದೆವಂದು ಬಱಸಿಡಿಲ್ ಪೊಡೆಯೆ ಕೆಡೆದ ಶಾಲತರುಗಳಿರ್ಪಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಎಯ್ದೆವಂದು ಬಱಸಿಡಿಲ್ ಪೊಡೆಯೆ ಕೆಡೆದ (ಸಮೀಪಿಸಿ ಬರಸಿಡಿಲು ಹೊಡೆಯಲು ಬಿದ್ದ) ಶಾಲತರುಗಳು ಇರ್ಪಂತೆ ಇರ್ದ (ಸಾಲವೃಕ್ಷಗಳಂತಿದ್ದ) ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು- (ಆಶ್ಚರ್ಯಪಟ್ಟು-)
ವಚನ:ಅರ್ಥ:ಹಾಗೆ ಸಮೀಪಿಸಿ ಬರಸಿಡಿಲು ಹೊಡೆಯಲು ಬಿದ್ದ ಸಾಲವೃಕ್ಷಗಳಂತಿದ್ದ ನಾಲ್ವರು ತಮ್ಮಂದಿರನ್ನೂ ನೋಡಿ ಆಶ್ಚರ್ಯಪಟ್ಟನು.
ಕಂ|| ಆರಿಂದಮಿವರ್ಗಿದಾಯ್ತೆಂ
ದಾರಯ್ವೆಂ ಬೞಿಯಮಾದೊಡೇನಾಯ್ತೆಂದಂ|
ಭೋರುಹರಜಪಟಾವೃತ
ವಾರಿಯನಾ ನೃಪತಿ ಕುಡಿಯಲೊಡರಿಸಿದಾಗಳ್|| ೪೬||
ಪದ್ಯ-೪೬:ಪದವಿಭಾಗ-ಅರ್ಥ: ಆರಿಂದಂ ಇವರ್ಗಿದಾಯ್ತೆಂದು ಆರಯ್ವೆಂ (ಯಾರಿಂದ ಇವರಿಗೆ ಈ ರೀತಿಯಾಯಿತು ಎಂಬುದನ್ನು ಅನಂತರ ವಿಚಾರಿಸುತ್ತೇನೆ) ಬೞಯಂ ಆದೊಡೆ ಏನಾಯ್ತೆಂದು ಅಂಭೋರುಹ ರಜಪಟಾವೃತ ವಾರಿಯನು (ಕಮಲದಪರಾಗ ಧೂಳೆಂಬ ಬಟ್ಟೆಯಿಂದ ಮುಚ್ಚಿದ ನೀರನ್ನು) ಆ ನೃಪತಿ ಕುಡಿಯಲು ಒಡರಿಸಿದಾಗಳ್ (ತೊಡಗಿದಾಗ)
ಪದ್ಯ-೪೬:ಅರ್ಥ:ಯಾರಿಂದ ಇವರಿಗೆ ಈ ರೀತಿಯಾಯಿತು ಎಂಬುದನ್ನು ಅನಂತರ ವಿಚಾರಿಸುತ್ತೇನೆ. ಆದರೆ ಏನಾಯ್ತು ಎಂದು ಕಮಲದಪರಾಗ ಧೂಳೆಂಬ ಬಟ್ಟೆಯಿಂದ ಮುಚ್ಚಿದ ನೀರನ್ನು ಆ ರಾಜನು ಕುಡಿಯಲು ತೊಡಗಿದಾಗ-
ಮರುಳಾಗದೆನ್ನ ನುಡಿಗು
ತ್ತರಮಂ ಮುನ್ನಿತ್ತು ಕುಡಿಯೆ ಕಜ್ಜಂ ನಿನಗು|
ತ್ತರಿಸುಗುಮಂತಲ್ಲದಿವಂ
ದಿರಂತೆ ನೀನುಂತೆ ಮೂರ್ಖನಾಗದಿರರಸಾ|| ೪೭||
ಪದ್ಯ-೪೭:ಪದವಿಭಾಗ-ಅರ್ಥ:ಮರುಳಾಗದೆ ಎನ್ನ ನುಡಿಗೆ ಉತ್ತರಮಂ ಮುನ್ನ ಇತ್ತು ಕುಡಿಯೆ ಕಜ್ಜಂ (ಮೊದಲು ಉತ್ತರವನ್ನು ಕೊಟ್ಟು ನೀರು ಕುಡಿಯುವುದು ನಿನ್ನ ಕರ್ತವ್ಯ,) ನಿನಗೆ ಉತ್ತರಿಸುಗುಂ (ಉತ್ತರೋತ್ತರ ಅಭಿವೃದ್ಧಿಯಾಗುವುದು) ಅಂತಲ್ಲದೆ ಇವಂದಿರಂತೆ ನೀನು ಉಂತೆ (ಎಲೈ ರಾಜನೇ, ಇವರುಗಳ ಹಾಗೆ ನೀನೂ ಸುಮ್ಮನೆ ಮೂರ್ಖನಾಗಬೇಡ) ಮೂರ್ಖನಾಗದಿರು ಅರಸಾ.
ಪದ್ಯ-೪೭:ಅರ್ಥ:ಧರ್ಮಜನೇ, ವಿವೇಕವಿಲ್ಲದ ಮರುಳನಾಗದೆ ನನ್ನ ಮಾತಿಗೆ ಮೊದಲು ಉತ್ತರವನ್ನು ಕೊಟ್ಟು ನೀರು ಕುಡಿಯುವುದು ನಿನ್ನ ಕರ್ತವ್ಯ, ಉತ್ತರೋತ್ತರ ಅಭಿವೃದ್ಧಿಯಾಗುವುದು. ಹಾಗಲ್ಲದೆ ಎಲೈ ರಾಜನೇ ಇವರುಗಳ ಹಾಗೆ ನೀನೂ ಸುಮ್ಮನೆ ಮೂರ್ಖನಾಗಬೇಡ’
ವ||ಎಂಬುದುಮೆನ್ನ ತಮ್ಮಂದಿರ್ಗಿನಿತಂ ಮಾಡಿದ ದಿವ್ಯಮೀ ದಿವ್ಯಮಕ್ಕುಮೆಂದದಱ ಬೆಸಗೊಂಡುದರ್ಕೆಲ್ಲಂ ಮಱುಮಾತುಗುಡುವುದುಂ ಮೆಚ್ಚಿ ತನ್ನ ಸ್ವರೂಪಮಂ ತೋಱಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಎನ್ನ ತಮ್ಮಂದಿರ್ಗೆ ಇನಿತಂ ಮಾಡಿದ ದಿವ್ಯಮು ಈ ದಿವ್ಯಮಕ್ಕುಮೆಂದು (ನನ್ನ ತಮ್ಮಂದಿರಿಗೆ ಇಷ್ಟು ಮಾಡಿದೆ ದೇವತೆಯಿದೇ ಆಗಿರಬಹುದೆಂದು ತಿಳಿದು) ಅದಱ ಬೆಸಗೊಂಡುದರ್ಕೆ ಎಲ್ಲಂ (ಅದು ಹಾಕಿದ ಪ್ರಶ್ನೆಗಳಿಗೆಲ್ಲ) ಮಱುಮಾತುಗುಡುವುದುಂ ಮೆಚ್ಚಿ (ಪ್ರತ್ಯುತ್ತರವನ್ನಿತ್ತುದಕ್ಕೆ ತೃಪ್ತಿಪಟ್ಟು) ತನ್ನ ಸ್ವರೂಪಮಂ ತೋಱಿ-
ವಚನ:ಅರ್ಥ:ಎನ್ನಲು ನನ್ನ ತಮ್ಮಂದಿರಿಗೆ ಇಷ್ಟು ಮಾಡಿದೆ ದೇವತೆಯಿದೇ ಆಗಿರಬಹುದೆಂದು ತಿಳಿದು ಅದು ಹಾಕಿದ ಪ್ರಶ್ನೆಗಳಿಗೆಲ್ಲ ಪ್ರತ್ಯುತ್ತರವನ್ನಿತ್ತುದಕ್ಕೆ ತೃಪ್ತಿಪಟ್ಟು. ಮೆಚ್ಚಿ ದೈವವು ಹೀಗೆ ಹೇಳಿತು.
ಚಂ|| ಕನಕನ ಬೇಳ್ವೆಯಿಂದೊಗೆದ ಕೀರ್ತಿಗೆಯಿಂ ನಿನಗಪ್ಪಪಾಯಮಂ
ನೆನೆದು ಮದೇಭರೂಪಮನೆ ತೋಱಿ ನಿಜಾಶ್ರಮದಿಂದಗಲ್ಚಿ ನಿ|
ನ್ನನುಜರನೀಯುಪಾಯದೊಳೆ ಕೀರ್ತಿಗೆಯೊಡ್ಡಿಸೆ ಕಾದೆನಾಂ ಕೃತಾಂ
ತನೆನೆನಗಮ್ಮ ನೀಂ ಮಗನೆಯಿನ್ ಪೆಱತೇಂ ನಿನಗುತ್ತರೋತ್ತರಂ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಕನಕನ ಬೇಳ್ವೆಯಿಂದ ಒಗೆದ ಕೀರ್ತಿಗೆಯಿಂ (ಕನಕನ ಯಜ್ಞದಿಂದ ಹುಟ್ಟಿದ ಕೀರ್ತಿಗೆಯೆಂಬ ಶಕ್ತಿಯಿಂದ) ನಿನಗಪ್ಪ ಅಪಾಯಮಂ ನೆನೆದು ಮದೇಭರೂಪಮನೆ ತೋಱಿ (ಮದಗಜದ ಆಕಾರವನ್ನು ತೋರಿಸಿ) ನಿಜ ಆಶ್ರಮದಿಂದ ಅಗಲ್ಚಿ (ನಿಮ್ಮ ಆಶ್ರಮದಿಂದ ಆಗಲಿಸಿ) ನಿನ್ನ ಅನುಜರನು ಈ ಉಪಾಯದೊಳೆ ಕೀರ್ತಿಗೆ ಒಡ್ಡಿಸೆ ಕಾದೆ (ಆ ಶಕ್ತಿಗೆ ಪ್ರತೀಕಾರ ಮಾಡಿ ನಿನ್ನ ತಮ್ಮಂದಿರನ್ನು ರಕ್ಷಿಸಿದೆ)ನಾಂ ಕೃತಾಂತನು ಎನೆ ಎನಗೆ ಅಮ್ಮ (ನಾನು ಯಮ ಎನ್ನಲು, ನಾನು ತಂದೆ.) ನೀಂ ಮಗನೆಯಿನ್ (ನೀನು ನನ್ನ ಮಗನಯ್ಯಾ,) ಪೆಱತೇಂ ನಿನಗೆ ಉತ್ತರೋತ್ತರಂ (ಇದಕ್ಕಿಂತ ಬೇರೆಯೇನು? ನಿನಗೆ ಉತ್ತರೋತ್ತರಂ ಅಭಿವೃದ್ಧಿಯಾಗಲಿ ಎಂದನು ಯಮ.)
ಪದ್ಯ-೪೮:ಅರ್ಥ:ಕನಕನ ಯಜ್ಞದಿಂದ ಹುಟ್ಟಿದ ಕೀರ್ತಿಗೆಯೆಂಬ ಶಕ್ತಿಯಿಂದ ನಿನಗಾಗಬಹುದಾದ ಅಪಾಯವನ್ನು ತಿಳಿದು, (ಅದನ್ನು ತಪ್ಪಿಸಬೇಕೆಂದು ಹೀಗೆ ಮಾಡಿದೆ) ಮದಗಜದ ಆಕಾರವನ್ನು ತೋರಿಸಿ ನಿಮ್ಮ ಆಶ್ರಮದಿಂದ ಆಗಲಿಸಿ (ಬೇರೆ ಮಾಡಿ) ಈ ಉಪಾಯದಿಂದ ಕೀರ್ತಿಗೆಯೆಂಬ ಆ ಶಕ್ತಿಗೆ ಪ್ರತೀಕಾರ ಮಾಡಿ ನಿನ್ನ ತಮ್ಮಂದಿರನ್ನು ರಕ್ಷಿಸಿದೆ. ನಾನು ಯಮ ಎನ್ನಲು, ನಾನು ತಂದೆ. ನೀನು ನನ್ನ ಮಗನಯ್ಯಾ!. ನಿನಗೆ ಉತ್ತರೋತ್ತರಂ ಅಭಿವೃದ್ಧಿಯಾಗಲಿ ಎಂದನು ಯಮ.
ವ|| ಎಂದು ಮಱಕೆಂದಿದರನೆತ್ತುವಂತೆ ನಾಲ್ವರುಮನೆತ್ತಿ ತಾಂ ಮುನ್ನಂ ತಂದರಣಿಯಂ ಕೊಟ್ಟು ಕೃತಾಂತನಂತರ್ಧಾನಕ್ಕೆ ಸಂದಂ ಧರ್ಮತನೂಜನುಮನುಜರ್ ಸಹಿತಂ ನಿಜನಿವಾಸಕ್ಕೆ ವಂದರಣಿಯಂ ಪಾರ್ವರ್ಗೆ ಕೊಟ್ಟು ಕೆಲವು ದೆವಸಮಿರ್ದು ಧೌಮ್ಯ ಪುರೋಹಿತಂಬೆರಸಯ್ವರು ಮಾಳೋಚಿಸಿ-
ವಚನ:ಪದವಿಭಾಗ-ಅರ್ಥ:ಎಂದು ಮಱಕೆಂದಿದರನು ಎತ್ತುವಂತೆ (ಮೈಮರೆತುಮಲಗಿದ್ದವರನ್ನು ಎಬ್ಬಿಸುವ ಹಾಗೆ) ನಾಲ್ವರುಮನು ಎತ್ತಿ,(ಎಬ್ಬಿಸಿ) ತಾಂ ಮುನ್ನಂ ತಂದ ಅರಣಿಯಂ ಕೊಟ್ಟು ಕೃತಾಂತನು ಅಂತರ್ಧಾನಕ್ಕೆ ಸಂದಂ (ಯಮನು ಅದೃಶ್ಯನಾದನು.) ಧರ್ಮತನೂಜನುಂ ಅನುಜರ್ ಸಹಿತಂ (ಧರ್ಮಜನು ಸೋದರರೊಡನೆ) ನಿಜನಿವಾಸಕ್ಕೆ ವಂದು ಅರಣಿಯಂ ಪಾರ್ವರ್ಗೆ (ಬ್ರಾಹ್ಮಣರಿಗೆ) ಕೊಟ್ಟು ಕೆಲವು ದೆವಸಂ ಇರ್ದು ಧೌಮ್ಯ ಪುರೋಹಿತಂ ಬೆರಸು ಅಯ್ವರುಂ ಆಳೋಚಿಸಿ (ಧೌಮ್ಯನೆಂಬ ಪುರೋಹಿತನೊಡಗೂಡಿ ಅಯ್ದು ಜನರೂ ಆಲೋಚಿಸಿ)-
ವಚನ:ಅರ್ಥ:|| ಎಂಬುದಾಗಿ ಹೇಳಿ, ಯಕ್ಷನು, ಮೈಮರೆತು ಮಲಗಿದ್ದವರನ್ನು ಎಬ್ಬಿಸುವ ಹಾಗೆ ನಾಲ್ಕು ಜನರನ್ನೂ ಎಬ್ಬಿಸಿ ತಾನು ತಂದಿದ್ದ ಅರಣಿಯನ್ನು ಕೊಟ್ಟು ಯಮನು ಅದೃಶ್ಯನಾದನು. ಧರ್ಮರಾಜನೂ ತಮ್ಮಂದಿರೊಡನೆ ತನ್ನ ವಾಸಸ್ಥಳಕ್ಕೆ ಬಂದು ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟನು. ಕೆಲವು ದಿನಗಳಿದ್ದು ಧೌಮ್ಯನೆಂಬ ಪುರೋಹಿತನೊಡಗೂಡಿ ಅಯ್ದು ಜನರೂ ಆಲೋಚಿಸಿ-

ವಿರಾಟನಗರದಲ್ಲಿ ಪಾಂಡವರ ಅಜ್ಞಾತವಾಸ[ಸಂಪಾದಿಸಿ]

ಚಂ|| ನೆರೆದುವು ಪನ್ನೆರೞ್ಬರಿಸಮುಗ್ರವಿರೋಧಿಜನಕ್ಕೆ ಮಿೞ್ತುಗಳ್
ನೆರೆವವೊಲಾಗದಿನ್ನಱಿದಿರಲ್ ನಮಗಬ್ದಮನೊಂದನಿರ್ದೊಡೇ|
ತಱ ಪಡೆಮಾತೊ ಮತ್ತಮಿರವೇೞ್ಪುದು ಪನ್ನೆರಡಬ್ದಮಂ ಮನಂ
ಮಱುಗೆ ಬನಂಗಳೊಳ್ ನುಡಿದ ನನ್ನಿಗೆ ಪೇೞಿಮಿದರ್ಕೆ ಕಜ್ಜಮಂ|| ೪೯||
ಪದ್ಯ-೪೯:ಪದವಿಭಾಗ-ಅರ್ಥ:ನೆರೆದುವು ಪನ್ನೆರೞ್ಬರಿಸಂ (ಹನ್ನೆರಡು ವರ್ಷಗಳು ನೆರೆದವು- ತುಂಬಿದುವು.) ಉಗ್ರವಿರೋಧಿರೋಜನಕ್ಕೆ ಮಿೞ್ತುಗಳ್ ನೆರೆವವೊಲ್ (ಶತ್ರುಗಳಿಗೆ ಮೃತ್ಯುಗಳು ಪೂರ್ಣವಾಗುವ/ ಹತ್ತಿರವಾಗುವಂತೆ) ಆಗದು ಇನ್ನು ಅಱಿದು ಇರಲ್ (ಇನ್ನು ಅರೆದು-ಮರೆಯಾಗಿ ಇರಲ್ ಆಗದು- ಅಡಗದೆ ಇದ್ದ ಪಕ್ಷದಲ್ಲಿ ) ನಮಗೆ ಅಬ್ದಮನು ಒಂದನು (ಇನ್ನು ಒಂದು ವರ್ಷ ನಾವು ಯಾರೂ ತಿಳಿಯದಂತೆ ಇರಬೇಕು) ಇರ್ದೊಡೆ (ಅಡಗದೆ ಇದ್ದರೆ- ಇದ್ದ ಪಕ್ಷದಲ್ಲಿ - ನಾವು ಇರುವುದು ಗೊತ್ತಾದರೆ) ಏತಱ ಪಡೆಮಾತೊ (ಆ ಕಡೆ ಏನು ಸುದ್ದಿಯೊ) ಮತ್ತಂ ಇರವೇೞ್ಪುದು ಪನ್ನೆರಡಬ್ದಮಂ (ಇನ್ನೂ ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿರಬೇಕಾಗುತ್ತದೆ) ಮನಂ ಮಱುಗೆ ಬನಂಗಳೊಳ್ ನುಡಿದ ನನ್ನಿಗೆ (ನನ್ನಿ-ಸತ್ಯ)(ಮನಸ್ಸಿಗೆ ದುಖವಾಗುವ ಹಾಗೆ ಕಾಡಿನಲ್ಲಿ ಇರಕಾಗುತ್ತದೆ, ಕೊಟ್ಟ ಸತ್ಯವಚನಕ್ಕಾಗಿ) ಪೇೞಿಂ ಇದರ್ಕೆ ಕಜ್ಜಮಂ (ಇದಕ್ಕೆ ಮಾಡಬೇಕಾದ ಕಾರ್ಯವನ್ನು ತಿಳಿಸಿ)
ಪದ್ಯ-೪೯:ಅರ್ಥ: ಪಾಂಡವ ಸೋದರರಲ್ಲಿ ಒಬ್ಬನು ಹೇಳಿದನು; ಕ್ರೂರಿಗಳಾದ ಶತ್ರುಗಳಿಗೆ ಮೃತ್ಯುಪೂರ್ಣವಾಗುವ ಹಾಗೆ ಹನ್ನೆರಡು ವರ್ಷಗಳು ತುಂಬಿದುವು. ಇನ್ನು ಒಂದು ವರ್ಷ ನಾವು ಯಾರೂ ತಿಳಿಯದಂತೆ ಇರಬೇಕು. ಅದು ತಪ್ಪಿದರೆ ಆಡಿದ ಸತ್ಯವಾಕ್ಕಿಗೆ ಅನುಗುಣವಾಗಿ ಮನಸ್ಸಿಗೆ ದುಃಖವಾಗುವ ಹಾಗೆ ಇನ್ನೂ ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿರಬೇಕಾಗುತ್ತದೆ. ಇದಕ್ಕೆ ಮಾಡಬೇಕಾದ ಕಾರ್ಯ (ಉಪಾಯ)ವನ್ನು ತಿಳಿಸಿ.
ವ|| ಎನೆ ಯಮನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ ಯಮನಂದನನು ಇಂತೆಂದಂ-
ವಚನ:ಅರ್ಥ:ಎನ್ನಲು ಧರ್ಮರಾಯನು ಹೀಗೆಂದನು-
ಮ|| ಅಪವಾದಂ ಪೆಱತೊಂದುಮಿಲ್ಲ ನಮಗಿನ್ನುಂ ಪೊಕ್ಕಿರಲ್ಕಿಂಬು ಮ
ತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯನದಱಿಂದಜ್ಞಾತವಾಸಕ್ಕೆ ಚಿಂ|
ತಿಪೊಡಿನ್ನನ್ನವು ತಾಣಮಿಲ್ಲದಱಿನುಂತಾರ್ಗಪ್ಪೊಡಂ ಮಿಕ್ಕ ರೂ
ಪ ಪರಾವರ್ತನದಿಂ ವಿರಾಟಪುರಮಂ ಪೊಕ್ಕಿರ್ದದಂ ನೀಗೆಮೇ|| ೫೦||
ಪದ್ಯ-೫೦:ಪದವಿಭಾಗ-ಅರ್ಥ:ಅಪವಾದಂ ಪೆಱತೊಂದುಮಿಲ್ಲ ನಮಗಿನ್ನುಂ (ನಮಗೆ ಇದುವರೆಗೆ ಯಾವುದೇ ಅಪವಾದವೂ ಇಲ್ಲ) ಪೊಕ್ಕಿರಲ್ಕೆ ಇಂಬು (ಹೊಕ್ಕು ಅಡಗಲು ತಾಣ- ಆಶ್ರಯ) ಮತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯನು(ಮತ್ಸ್ಯಪುರವು ಆಶ್ರಯವು. ನಮ್ಮ ಶತ್ರು ಕೌರವನಿಗೆ ಮತ್ಸ್ಯರಾಜನು ಶತ್ರು) ಅದಱಿಂದ ಅಜ್ಞಾತವಾಸಕ್ಕೆ ಚಿಂತಿಪೊಡೆ ಇನ್ನು ಅನ್ನವು ತಾಣಮಿಲ್ಲ ಅದಱಿಂ (ನು) ಉಂತೆ ಆರ್ಗಪ್ಪೊಡಂ ಮಿಕ್ಕ ರೂಪ ಪರಾವರ್ತನದಿಂ(ಉಂತೆ ಯಾರಿಗಾದರೂ ಮೀರಿದ/ ತಿಳಿಯದ ರೂಪ ಬದಲಾಯಿಸುವುದರಿಂದ) ವಿರಾಟಪುರಮಂ ಪೊಕ್ಕಿಉ ಇರ್ದದಂ ನೀಗೆಮೇ (ನೀಗಲಾರವೇ- ಕಳೆಯಲಾರೆವೇ? )
ಪದ್ಯ-೫೦:ಅರ್ಥ: ‘ನಮಗೆ ಇದುವರೆಗೆ ಯಾವುದೇ ಅಪವಾದವೂ ಇಲ್ಲ ; ಸುಖವಾಗಿರುವುದಕ್ಕೆ ಮತ್ಸ್ಯಪುರವು ಆಶ್ರಯವಾಗಿರುತ್ತದೆ. ನಮ್ಮ ಶತ್ರುವಾದ ಕೌರವನಿಗೆ ಮತ್ಸ್ಯರಾಜನು ಶತ್ರು ; ಆದುದರಿಂದ ಅಜ್ಞಾತವಾಸದ ವಿಷಯವಾಗಿ ಯೋಚಿಸುವುದಾದರೆ ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ಆದುದರಿಂದ ಯಾರಿಗೂ ತಿಳಿಯದಂತೆ ವೇಷವನ್ನು ಮರೆಸಿಕೊಂಡು ವಿರಾಟಪುರವನ್ನು ಪ್ರವೇಶಿಸಿ ಇರೋಣ; ನೀಗಲಾರವೇ- ಕಳೆಯಲಾರೆವೇ?
ವ|| ಎಂದು ಯುಷ್ಠಿಧಿರಂ ನಿಷ್ಠಿತಕಾರ್ಯಮನನನುಷ್ಠಿಸೆ ನಿಜ ಪರಿಜನಮೆಲ್ಲಮನೀಯೊಂದು ವರುಷಮುಂ ನಿಮ್ಮ ನಿಮ್ಮ ಬಲ್ಲಂದದೊಳಿರಿಮೆಂದು ಧೌಮ್ಯಸಮೇತಂ ಪೋಗಲ್ವೇೞ್ದು ತಮ್ಮಯ್ವರುಂ ಪಾಂಚಾಳಿವೆರಸು ಪೋದ ದೆಸೆಯನಾರುಮಱಿಯದಂತು ದ್ವೈತವನಮಂ ಪೊಱಮಟ್ಟು ಜಗುನೆಯಂ ಪಾಯ್ದು ಮೂಡಮೊಗದೆ ಪಯಣಂಬೋಗಿ ಮತ್ಸ್ಯದೇಶಮಂ ಪುಗುತಂದರದೆಂತಪ್ಪುದೆಂದೊಡೆ- ಬ
ವಚನ:ಪದವಿಭಾಗ-ಅರ್ಥ:ಎಂದು ಯುಧಿಷ್ಠಿರಂ ನಿಷ್ಠಿತಕಾರ್ಯಮನು ಅನನುಷ್ಠಿಸೆ (ಮಾಡಬೇಕಾದ ಕಾರ್ಯವನ್ನು ಸೂಚಿಸಲು) ನಿಜ ಪರಿಜನಂ ಎಲ್ಲಮನು ಈಯೊಂದು ವರುಷಮುಂ ನಿಮ್ಮ ನಿಮ್ಮ ಬಲ್ಲ ಅಂದದೊಳು ಇರಿಮೆಂದು (ನಿಮಗೆ ತಿಳಿದ ರೀತಿಯಲ್ಲಿ ಇರಿ ಎಂದು) ಧೌಮ್ಯಸಮೇತಂ ಪೋಗಲ್ವೇೞ್ದು (ಧೌಮ್ಯನೊಡನೆ ಹೋಗಲು ಹೇಳಿದನು.) ತಮ್ಮ ಐಯ್ವರುಂ ಪಾಂಚಾಳಿವೆರಸು ಪೋದ ದೆಸೆಯನು ಆರುಂ ಅಱಿಯದಂತು ದ್ವೈತವನಮಂ ಪೊಱಮಟ್ಟು (ತಾವೈದು ಜನರೂ ದ್ರೌಪದಿಯೊಡಗೂಡಿ ತಾವು ಹೋದ ದಿಕ್ಕನ್ನು ಯಾರೂ ತಿಳಿಯದಂತೆ ದ್ವೆತವನದಿಂದ ಹೊರಟು) ಜಗುನೆಯಂ ಪಾಯ್ದು (ಯಮುನಾ ನದಿಯನ್ನು ದಾಟಿ ) ಮೂಡಮೊಗದೆ ಪಯಣಂಬೋಗಿ (ಪೂರ್ವಾಭಿಮುಖವಾಗಿ ಪ್ರಯಾಣಮಾಡಿ) ಮತ್ಸ್ಯದೇಶಮಂ ಪುಗುತಂದರು (ಮತ್ಸ್ಯದೇಶವನ್ನು ಪ್ರವೇಶಮಾಡಿದರು.); ಅದೆಂತಪ್ಪುದು ಎಂದೊಡೆ (ಅದು ಹೇಗಾಯಿತೆಂದರೆ)-
ವಚನ:ಅರ್ಥ:|| ಎಂದು ಧರ್ಮಜನು ಮಾಡಬೇಕಾದ ಕಾರ್ಯವನ್ನು ಸೂಚಿಸಲು, ತನ್ನ ಪರಿವಾರದವರನ್ನೆಲ್ಲ ಈ ಒಂದು ವರ್ಷ ಕಾಲ ನಿಮಗೆ ತಿಳಿದ ರೀತಿಯಲ್ಲಿ ಇರಿ ಎಂದು ಧೌಮ್ಯನೊಡನೆ ಹೋಗಲು ಹೇಳಿದನು. ತಾವೈದು ಜನರೂ ದ್ರೌಪದಿಯೊಡಗೂಡಿ ತಾವು ಹೋದ ದಿಕ್ಕನ್ನು ಯಾರೂ ತಿಳಿಯದಂತೆ ದ್ವೆತವನದಿಂದ ಹೊರಟು, ಯಮುನಾ ನದಿಯನ್ನು ದಾಟಿ ಪೂರ್ವಾಭಿಮುಖವಾಗಿ ಪ್ರಯಾಣಮಾಡಿ ಮತ್ಸ್ಯದೇಶವನ್ನು ಪ್ರವೇಶಮಾಡಿದರು. ಅದು ಹೇಗಾಯಿತೆಂದರೆ-
ಕಂ|| ಇಂಚೆಯ ಪಸವಿನ ಬಱದ ಕ
ಳಿಂಚಿನ ಡಾವರದ ಬಾಧೆಯಿಲ್ಲದ ಪದದೊಳ್|
ಮುಂಚದೆ ಪಿಂಚದೆ ಬಳೆದು ವಿ
ರಿಂಚಿಯ ಕೆಯ್ಪಿಡಿವೊಲಾದುವಾ ನಾಡೂರ್ಗಳ್||| ೫೧ ||
ಪದ್ಯ-೫೧:ಪದವಿಭಾಗ-ಅರ್ಥ:ಇಂಚೆಯ ಪಸವಿನ (ಹಿಂಸೆಯ, ಹಸಿವಿನ/ ಕ್ಷಾಮದ) ಬಱದ (ಬರಗಾಲದ) ಕಳಿಂಚಿನ (ಮೋಸದ) ಡಾವರದ (ಕ್ಷೋಭೆಯ)ಬಾಧೆಯಿಲ್ಲದ ಪದದೊಳ್ (ಸ್ಥಿತಿಯಲ್ಲಿ) ಮುಂಚದೆ ಪಿಂಚದೆ ಬಳೆದು (ಹೆಚ್ಚು ಕಡಿಮೆಯಿಲ್ಲದೆ ಅಭಿವೃದ್ಧಿಯಾಗಿ) ವಿರಿಂಚಿಯ ಕೆಯ್ಪಿಡಿವೊಲು ಆದುವು ಆ ನಾಡ ಊರ್ಗಳ್ (ಆ ನಾಡಿನ ಊರುಗಳು ಬ್ರಹ್ಮನ ಕೈಗನ್ನಡಿಯ ಹಾಗಿದ್ದುವು.)
ಪದ್ಯ-೫೧:ಅರ್ಥ: ಆ ನಾಡಿನ ಊರುಗಳು ಹಿಂಸೆಯ, ಕ್ಷಾಮದ, ಬರಗಾಲದ, ಮೋಸದ, ಕ್ಷೋಭೆಗಳ ಉಪದ್ರವವಿಲ್ಲದ ಸ್ಥಿತಿಯಲ್ಲಿ ಯಾವ ಹೆಚ್ಚು ಕಡಿಮೆಯಿಲ್ಲದೆ ಅಭಿವೃದ್ಧಿಯಾಗಿ ಆ ನಾಡಿನ ಊರುಗಳು ಬ್ರಹ್ಮನ ಕೈಗನ್ನಡಿಯ ಹಾಗಿದ್ದುವು.
ವ|| ಆ ನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಂ ಬಂದು-
ವಚನ:ಪದವಿಭಾಗ-ಅರ್ಥ:ಆ ನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಂ (ವಿಶೇಷವಾಗಿ ಮೆಚ್ಚುತ್ತಾ) ಬಂದು-
ವಚನ:ಅರ್ಥ:ವ|| ಆ ದೇಶವನ್ನು ನೋಡಿ ವಿಶೇಷವಾಗಿ ಮೆಚ್ಚುತ್ತಾ ಬಂದು,
ಕಂ|| ಧ್ವನದಳಿಕುಳಾಕುಳೀಕೃತ
ವನಂಗಳಿಂದೆಸೆವ ಪದ್ಮಷಂಡಂಗಳ ಚೆ|
ಲ್ವಿನೊಳಂ ಕಣ್ಣಂ ಮನಮುಮ
ನನುವಿಸುವ ವಿರಾಟಪುರಮನೆಯ್ದಿದರವರ್ಗಳ್|| ೫೨||
ಪದ್ಯ-೫೨:ಪದವಿಭಾಗ-ಅರ್ಥ:ಧ್ವನದ ಅಳಿಕುಳ ಆಕುಳೀಕೃತ ವನಂಗಳಿಂದ ಎಸೆವ (ಘೇಂಕಾರದ ಸದ್ದು ಮಾಡುತ್ತಿರುವ ದುಂಬಿಗಳ ಸಮೂಹದಿಂದ ಆವರಿಸಲ್ಪಟ್ಟ ವನಗಳಿಂದ ಶೋಭಿಸುತ್ತಿರುವ) ಪದ್ಮಷಂಡಂಗಳ ಚೆಲ್ವಿನೊಳಂ (ಕಮಲಗಳಿಂದ ಕೂಡಿದಸರೋವರಗಳ ಸೌಂದರ್ಯದಿಂದ) ಕಣ್ಣಂ ಮನಮುಮನು ಅನುವಿಸುವ (ಕಣ್ಣಿಗೂ ಮನಸ್ಸಿಗೂ ಸಂತೋಷವನ್ನುಂಟು ಮಾಡುವ ) ವಿರಾಟಪುರಮನು ಎಯ್ದಿದರು ಅವರ್ಗಳ್ (ವಿರಾಟಪುರವನ್ನು ಅವರು ಬಂದು ಸೇರಿದರು.)
ಪದ್ಯ-೫೨:ಅರ್ಥ: ಘೇಂಕಾರದ ಸದ್ದು ಮಾಡುತ್ತಿರುವ ದುಂಬಿಗಳ ಸಮೂಹದಿಂದ ಆವರಿಸಲ್ಪಟ್ಟ ವನಗಳಿಂದ ಶೋಭಿಸುತ್ತಿರುವ, ಕಮಲಗಳಿಂದ ಕೂಡಿದಸರೋವರಗಳ ಸೌಂದರ್ಯದಿಂದ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ವಿರಾಟಪುರವನ್ನು ಅವರು ಬಂದು ಸೇರಿದರು.
ವ|| ಅಂತೆಯ್ದೆವಂದು ತಮ್ಮ ದಿವ್ಯಾಯುಧಂಗಳನೆಲ್ಲಮನಾ ಪುರೋಪವನದ ಪಿತೃವನದ ಕೆಲದ ಶವಿವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಗಟ್ಟಿ ಕೆಲದ ಪೆಣಂಗಳೆಲ್ಲಮನವಱ ಮೇಲೊಟ್ಟಿ ಪರೆದೋರೊರ್ವರೊಂದೊಂದು ಬಟ್ಟೆಯೊಳ್ ಪೋಗಿ ಬೇರೆ ಬೇರೆ ಪೊೞಲಂ ಪೊಕ್ಕು ಧರ್ಮಪುತ್ರಂ ಧರಾಮರವೇಷದೊಳ್ ವಿರಾಟನಂ ಕಂಡಾಶೀರ್ವಾದಮಂ ಕುಡೆ ವಿರಾಟಂ ನೀಮೆತ್ತಣಿಂ ಬಂದಿರೆಂಬುದುಮಾಂ ಧರ್ಮರಾಜನ ಸಮೀಪದೊಳಿರ್ಪೆವರಸಂಗೆ ಪೋೞ್ತು ಪೋಗದಾಗಳೆಮ್ಮೊಡನೆ ನೆತ್ತಮನಾಡುವನದಲ್ಲದೆಯುಂ-
ವಚನ:ಪದವಿಭಾಗ-ಅರ್ಥ:ಅಂತು ಎಯ್ದೆವಂದು (ಹಾಗೆ ಬಂದು) ತಮ್ಮ ದಿವ್ಯಾಯುಧಂಗಳನೆಲ್ಲಮನು ಆ ಪುರ ಉಪವನದ ಪಿತೃವನದ ಕೆಲದ (ಆ ಪಟ್ಟಣದ ಸಮೀಪದ ಸ್ಮಶಾನದ ಪಕ್ಕದಲ್ಲಿದ್ದ) ಶವಿವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಗಟ್ಟಿ (ಬನ್ನಿಮರದ ಮೇಲೆ ಮನುಷ್ಯಾಕೃತಿಯಾಗಿ ಮಾಡಿ ನೇತುಹಾಕಿದರು) ಕೆಲದ ಪೆಣಂಗಳೆಲ್ಲಮನು ಅವಱ ಮೇಲೆ ಒಟ್ಟಿ (ಪಕ್ಕದಲ್ಲಿದ್ದ ಹೆಣಗಳೆಲ್ಲವನ್ನೂ ಅದರ ಮೇಲೆ ರಾಶಿ ಹಾಕಿ) ಪರೆದು ಓರೊರ್ವರು ಒಂದೊಂದು ಬಟ್ಟೆಯೊಳ್ ಪೋಗಿ ಬೇರೆ ಬೇರೆ ಪೊೞಲಂ ಪೊಕ್ಕು (ಚದುರಿ-ಒಬ್ಬೊಬ್ಬರೂ ಒಂದೊಂದು ದಾರಿಯಲ್ಲಿ ಬೇರೆಬೇರೆವಾಗಿ ಪುರಪ್ರವೇಶಮಾಡಿ-) ಧರ್ಮಪುತ್ರಂ ಧರಾಮರ (ಧರೆಯ ಅಮರ- ಬ್ರಾಹ್ಮಣ)ವೇಷದೊಳ್ ವಿರಾಟನಂ ಕಂಡು ಆಶೀರ್ವಾದಮಂ ಕುಡೆ (ನೋಡಿ ಆಶೀರ್ವಾದವನ್ನು ಕೊಡಲು- ಮಾಡಲು) ವಿರಾಟಂ ನೀಂ ಎತ್ತಣಿಂ ಬಂದಿರೆಂಬುದುಂ (‘ನೀವೆಲ್ಲಿಂದ ಬಂದಿರಿ’ ಎನ್ನಲು) ಆಂ ಧರ್ಮರಾಜನ ಸಮೀಪದೊಳು ಇರ್ಪೆವು (ನಾವು ಧರ್ಮರಾಜನ ಸಮೀಪದಲ್ಲಿದ್ದೆವು) ಅರಸಂಗೆ ಪೋೞ್ತು ಪೋಗದಾಗಳು ಎಮ್ಮೊಡನೆ ನೆತ್ತಮನಾಡುವನು(ರಾಜನಿಗೆ ಹೊತ್ತುಹೋಗದೆ ಇರುನಾಗ ಅವನು ನಮ್ಮೊಡನೆ ಪಗೆಯಾಡುತ್ತಿದ್ದನು) ಅದಲ್ಲದೆಯುಂ-
ವಚನ:ಅರ್ಥ:ಹಾಗೆ ಬಂದು, ತಮ್ಮ ದಿವ್ಯಾಯುಧಗಳೆಲ್ಲವನ್ನೂ ಆ ಪಟ್ಟಣದ ಸಮೀಪದ ಸ್ಮಶಾನದ ಪಕ್ಕದಲ್ಲಿದ್ದ ಬನ್ನಿಮರದ ಮೇಲೆ ಮನುಷ್ಯಾಕೃತಿಯಾಗಿ ಮಾಡಿ ನೇತುಹಾಕಿದರು. ಪಕ್ಕದಲ್ಲಿದ್ದ ಹೆಣಗಳೆಲ್ಲವನ್ನೂ ಅದರ ಮೇಲೆ ರಾಶಿ ಹಾಕಿದರು. ಚದುರಿ ಬೇರೆಬೇರೆಯಾಗಿ ಒಬ್ಬೊಬ್ಬರೂ ಒಂದೊಂದು ದಾರಿಯಲ್ಲಿ ಬೇರೆಬೇರೆವಾಗಿ ಪುರಪ್ರವೇಶಮಾಡಿದರು. ಧರ್ಮರಾಯನು ಬ್ರಾಹ್ಮಣವೇಷದಲ್ಲಿ ವಿರಾಟನನ್ನು ನೋಡಿ ಆಶೀರ್ವಾದ ಮಅಡಲು, ವಿರಾಟನು ‘ನೀವೆಲ್ಲಿಂದ ಬಂದಿರಿ’ ಎನ್ನಲು ನಾವು ಧರ್ಮರಾಜನ ಸಮೀಪದಲ್ಲಿದ್ದೆವು. ರಾಜನಿಗೆ ಹೊತ್ತುಹೋಗದೆ ಇರುದಾಗ ಅವನು ನಮ್ಮೊಡನೆ ಪಗೆಯಾಡುತ್ತಿದ್ದನು. ಅದಲ್ಲದೆ
ಕಂ|| ಕನವರಿಸೆ ನಾಲ್ಕು ವೇದಮು
ಮೆನಗೆ ಮುಖೋದ್ಗತಮದಲ್ಲದಾಱಂಗದ ಮಾ|
ತನಿತೆ ಗಡ ನೃಪತಿ ಬಂದೆಂ
ನಿನಗಾಳಾಗಲ್ಕೆ ಕಂಕಭಟ್ಟನೆನೆಂಬೆಂ|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಕನವರಿಸೆ ನಾಲ್ಕು ವೇದಮುಂ ಎನಗೆ ಮುಖೋದ್ಗತಂ (ನನಗೆ ಕನಸಿನಲ್ಲಿಯೂ ನಾಲ್ಕು ವೇದಗಳನ್ನು ಹೇಳವಷ್ಟು ಬಾಯಿಪಾಠವಾಗಿದೆ.) ಅದಲ್ಲದೆ ಆಱು ಅಂಗದ ಮಾತು ಅನಿತೆ ಗಡ (ಅದಲ್ಲದೆ ಶಿಕ್ಷಾ ಮೊದಲಾದ ಆರು ವೇದಾಂಗಗಳೂ ಹಾಗೆಯೇ ಕಂಠಪಾಠವಾಗಿವೆ. ಗಡ! ) ನೃಪತಿ ಬಂದೆಂ ನಿನಗೆ ಆಳಾಗಲ್ಕೆ ಕಂಕಭಟ್ಟನು ಎನೆ ಎಂಬೆಂ (ನಿನಗೆ ಆಳಾಗಿರುವುದಕ್ಕೆ ಬಂದಿದ್ದೇನೆ. ಕಂಕಭಟ್ಟನೆಂದು ನನ್ನ ಹೆಸರು)
ಪದ್ಯ-೫೩:ಅರ್ಥ: ನನಗೆ ಕನಸಿನಲ್ಲಿಯೂ ನಾಲ್ಕು ವೇದಗಳನ್ನು ಹೇಳವಷ್ಟು ಬಾಯಿಪಾಠವಾಗಿದೆ. ಅದಲ್ಲದೆ ಶಿಕ್ಷಾ ಮೊದಲಾದ ಆರು ವೇದಾಂಗಗಳೂ ಹಾಗೆಯೇ ಕಂಠಪಾಠವಾಗಿವೆ. ನಿನಗೆ ಆಳಾಗಿರುವುದಕ್ಕೆ ಬಂದಿದ್ದೇನೆ. ಕಂಕಭಟ್ಟನೆಂದು ನನ್ನ ಹೆಸರು, ಎಂದನು.
ವ|| ಎಂಬುದುಂ ವಿರಾಟನಾತನ ಭದ್ರಾಕಾರಮುಮಂ ಮೃದುಮಧುರಗಂಭೀರ ವಾಣಿಯುಮಂ ಕಂಡು ಕರಂ ಮನದೆಗೊಂಡು ಕರೆಮೊಳ್ಳಿತೆಂದು ಕಂಕಭಟ್ಟನನಿರಿಸಿದನನನ್ನೆಗಂ ಭೀಮಸೇನನುಂ ಬೋನವೇಳಿಗೆಯಂ ಸಟ್ಟುಗಮುಮನೊರ್ವ ಪರಿಚಾರಕನಿಂ ಪಿಡಿಯಿಸಿಕೊಂಡು ಬಂದು ನಿಂದನಂ ಕಂಡು ವಿರಾಟಂ ನಿನ್ನ ಬಿನ್ನಾಣಮೇನೆಂದು ಬೆಸಗೊಳೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ವಿರಾಟನು ಆತನ ಭದ್ರಾಕಾರಮುಮಂ ಮೃದುಮಧುರಗಂಭೀರ ವಾಣಿಯುಮಂ (ಗಂಭೀರವಾದ ಮಾತನ್ನೂ ) ಕಂಡು ಕರಂ (ವಿಶೇಷವಾಗಿ) ಮನದೆಗೊಂಡು ಕರೆಮು ಒಳ್ಳಿತೆಂದು ಕಂಕಭಟ್ಟನನು ಇರಿಸಿದನಂ(+ನ; ಇರಿಸಿಕೊಂಡನು). ಅನ್ನೆಗಂ ಭೀಮಸೇನನುಂ ಬೋನ ವೇಳಿಗೆಯಂ ಸಟ್ಟುಗಮುಮಂ ಓರ್ವ ಪರಿಚಾರಕನಿಂ ಪಿಡಿಯಿಸಿಕೊಂಡು(ಊಟದ ಪೆಟ್ಟಿಗೆಯನ್ನೂ ಸೌಟನ್ನೂ ಒಬ್ಬ ಆಳಿನ ಕಯ್ಯಲ್ಲಿ ತೆಗೆಸಿಕೊಂಡು) ಬಂದು ನಿಂದನಂ ಕಂಡು ವಿರಾಟಂ ನಿನ್ನ ಬಿನ್ನಾಣಮೇನೆಂದು ಬೆಸಗೊಳೆ (ವಿಶೇಷವೇನು ಎಂದು ಪ್ರಶ್ನೆಮಾಡಲು)-
ವಚನ:ಅರ್ಥ: ವಿರಾಟನು ಆತನ ಮಂಗಳ ರೂಪವನ್ನೂ ಮೃದುಮಧುರ ಮತ್ತು ಗಂಭೀರವಾದ ಮಾತನ್ನೂ ನೋಡಿ ವಿಶೇಷವಾಗಿ ಸಂತೋಷಪಟ್ಟು ಬಹಳ ಒಳ್ಳೆಯದು ಎಂದು ಕಂಕಭಟ್ಟನನ್ನು ತನ್ನಲ್ಲಿ ಇರಿಸಿಕೊಂಡನು. ಅಷ್ಟರಲ್ಲಿ ಭೀಮಸೇನನು ಊಟದ ಪೆಟ್ಟಿಗೆಯನ್ನೂ ಸೌಟನ್ನೂ ಒಬ್ಬ ಆಳಿನ ಕಯ್ಯಲ್ಲಿ ತೆಗೆಸಿಕೊಂಡು ಬಂದು ನಿಂತನು. ಅವನನ್ನು ನೋಡಿ ನಿನ್ನ ವಿದ್ಯೆಯೇನು/ ವಿಶೇಷವೇನು ಎಂದು ಪ್ರಶ್ನೆಮಾಡಲು -(ಪ್ರಶ್ನೆಮಾಡಿದನು)
ಕಂ|| ಎನ್ನಟ್ಟಡುಗೆಯನುಂಡೊಡೆ
ಬಿನ್ನಣಮೇನರಸ ನರೆಗಳಾಗವು ಸವಿಯೊಳ್|
ನಿನ್ನಂ ಮೆಚ್ಚಿಪೆನೆಡಱಿದೊ
ಡೆನ್ನರೊಳಂ ಮಲ್ಲನೊರ್ವ ವಲ್ಲಲನೆಂಬೆಂ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ:ಎನ್ನ ಅಟ್ಟ ಅಡುಗೆಯನು ಉಂಡೊಡೆ (ನಾನು ಮಾಡಿದ ಅಡಿಗೆಯನ್ನು ಊಟಮಾಡಿದರೆ) ಬಿನ್ನಣಮೇನು (ವಿಶೇಷವೇನು? ಎಂದರೆ-) ಅರಸ ನರೆಗಳಾಗವು (ಅರಸನೇ ತಲೆಯಲ್ಲಿ ನರೆಕೂದಲೇ ಬರುವುದಿಲ್ಲ- ಮುಪ್ಪು ಬರುವುದಿಲ್ಲ) ಸವಿಯೊಳ್ ನಿನ್ನಂ ಮೆಚ್ಚಿಪೆನು ಎಡಱಿದೊಡೆ (ಎದುರುಬಿದ್ದರೆ) ಎನ್ನರೊಳಂ ಮಲ್ಲನೊರ್ವ ವಲ್ಲಲನೆಂಬೆಂ
ಪದ್ಯ-೫೪:ಅರ್ಥ: ಅದಕ್ಕೆ ಭೀಮನು ವಿರಾಟನಿಗೆ ಹೇಳಿದ, ನಾನು ಮಾಡಿದ ಅಡಿಗೆಯನ್ನು ಊಟಮಾಡಿದರೆ ವಿಶೇಷವೇನು ಎಂದರೆ, ಮುಪ್ಪು ಬರುವುದಿಲ್ಲ. ಎಲೈ ರಾಜನೆ ರುಚಿಯಲ್ಲಿ ನಾನು ನಿಮ್ಮನ್ನು ತೃಪ್ತಿಪಡಿಸಬಲ್ಲೆ, ಎದರಿಸಿ ಬಂದರೆ ಎಂತಹವರಿಗೂ ಮಲ್ಲನು, ಸಮರ್ಥನಾದ ಒಬ್ಬ ಜಟ್ಟಿ ನಾನು, ವಲಲನೆಂಬುದು ನನ್ನ ಹೆಸರು ಎಂದನು.
ವ|| ಎಂಬುದುಂ ನಿನ್ನನಾಳ್ವೆನೆಂದು ಬಾಣಸಿನ ಕರಣಕ್ಕೆ ನಿರೂಪಣಂಗೆಯ್ದನನ್ನೆಗಂ ನಕುಳನುಮಂಕವಣಿಯುಂ ಬಾಳುಂ ಬಾರುಂ ಚಮ್ಮಟಿಗೆಯುಮನೊರ್ವ ಕೀೞೂಳಿಂ ಪಿಡಿಯಿಸಿಕೊಂಡು ಬಂದು ವಿರಾಟನಂ ಕಂಡೆಂತಪ್ಪ ದುಷ್ಟಾಶ್ವಂಗಳುಮನೇಱಲುಂ ತೀರ್ದಲುಂ ಬಲ್ಲೆನೆಂದು ಪೇೞ್ದಾಳಾಗಿ ತಂತ್ರಪಾಳ ವೆಸರೊಳ್ ಮಾಸಾದಿಯಾಗಿರ್ದಂ ಸಹದೇವನುಂ ಗೋಪಾಳವೇಷದೊಳ್ ಬಂದು ಕಂಡವನ ಗೋಮಂಡಳಾಧ್ಯಕ್ಷನಾಗಿರ್ದಾಗಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ (ಎಂದಾಗ) ನಿನ್ನನು ಆಳ್ವೆನು ಎಂದು ಬಾಣಸಿನ ಕರಣಕ್ಕೆ ನಿರೂಪಣಂ ಗೆಯ್ದನು (ನಿನ್ನನ್ನು ಆಳು ಮಾಡಿಕೊಳ್ಲುವೆನು ಎಂದು ವಿರಾಟನು ಅವನನ್ನು ಅಡುಗೆಯವನ ಕೆಲಸಕ್ಕೆ ನೇಮಿಸಿ ಆಜ್ಞೆಮಾಡಿದನು.) ಅನ್ನೆಗಂ(ಅಷ್ಟರಲ್ಲಿ) ನಕುಳನು ಅಂಕವಣಿಯುಂ (ಕುದುರೆಯ ರಿಕಾಪು,) ಬಾಳುಂ ಬಾರುಂ (ಕತ್ತಿಯನ್ನೂ ಚರ್ಮದ ಲಗಾಮನ್ನೂ) ಚಮ್ಮಟಿಗೆಯುಮನು ಓರ್ವ ಕೀೞೂಳಿಂ ಪಿಡಿಯಿಸಿಕೊಂಡು (ಒಬ್ಬ ಆಳಿನ ಕೈಯಲ್ಲಿ ಹಿಡಿಸಿಕೊಂಡು) ಬಂದು ವಿರಾಟನಂ ಕಂಡು ಎಂತಪ್ಪ ದುಷ್ಟ ಅಶ್ವಂಗಳುಮನು ಏಱಲುಂ ತೀರ್ದಲುಂ ಬಲ್ಲೆನೆಂದು ಪೇೞ್ದು ಆಳಾಗಿ (ಎಂತಹ ದುಷ್ಟಕುದುರೆಯನ್ನಾದರೂ ಹತ್ತಲು ತಿದ್ದಲೂ ಬಲ್ಲೆ ಎಂದು ಹೇಳಿ ಆತನಲ್ಲಿ ಆಳಾಗಿ) ತಂತ್ರಪಾಳ ವೆಸರೊಳ್ ಮಾಸಾದಿಯಾಗಿರ್ದಂ (ತಂತ್ರಪಾಲನೆಂಬ ಹೆಸರಿನಿಂದ ಕುದುರೆಯ ರಕ್ಷಕನಾಗಿದ್ದನು) ಸಹದೇವನುಂ ಗೋಪಾಳವೇಷದೊಳ್ ಬಂದು ಕಂಡವನ ಗೋಮಂಡಳ ಅಧ್ಯಕ್ಷನಾಗಿರ್ದಾಗಳ್ (ಸಹದೇವನೂ ದನಕಾಯುವವನ ವೇಷದಲ್ಲಿ ಬಂದು ಕಂಡು ಅವನ ಗೋಸಮೂಹದ ಮುಖ್ಯಾಕಾರಿಯಾಗಿದ್ದನು)-
ವಚನ:ಅರ್ಥ:ಭೀಮನು ಹೀಗೆ ಎಂದಾಗ, ವಿರಾಟನು ನಿನ್ನನ್ನು ಆಳು ಮಾಡಿಕೊಳ್ಲುವೆನು ಎಂದು ಅವನನ್ನು ಅಡುಗೆಯವನ ಕೆಲಸಕ್ಕೆ ನೇಮಿಸಿ ಆಜ್ಞೆಮಾಡಿದನು. ಅಷ್ಟರಲ್ಲಿ ನಕುಳನು ಕುದುರೆಯ ಮೇಲಿನ ತಡಿಯನ್ನೂ ಕತ್ತಿಯನ್ನೂ ಚರ್ಮದ ಲಗಾಮನ್ನೂ ಚಾವಟಿಯನ್ನೂ ಒಬ್ಬ ಸೇವಕನಿಂದ ತೆಗೆಯಿಸಿಕೊಂಡು ಬಂದು ವಿರಾಟನನ್ನು ಕುರಿತು ಎಂತಹ ದುಷ್ಟಕುದುರೆಯನ್ನಾದರೂ ಹತ್ತಲು ತಿದ್ದಲೂ ಬಲ್ಲೆ ಎಂದು ಹೇಳಿ ಆತನಲ್ಲಿ ಆಳಾಗಿ ಸೇರಿ ತಂತ್ರಪಾಲನೆಂಬ ಹೆಸರಿನಿಂದ ಕುದುರೆಯ ರಕ್ಷಕನಾಗಿದ್ದನು. ಸಹದೇವನೂ ದನಕಾಯುವವನ ವೇಷದಲ್ಲಿ ಬಂದು ಕಂಡು ಅವನ ಗೋಸಮೂಹದ ಮುಖ್ಯಾಕಾರಿಯಾಗಿದ್ದನು. ಆಗ
ಮ|| ಎಳೆಯಂ ವಿಕ್ರಮದಿಂ ತರಲ್ ಮಹಿಧರಂ ಮುನ್ ಪಂದಿಯಾದಂತೆ ಪೋ
ದೆಳೆಯಂ ದಾಯಿಗರಂ ಪಡಲ್ವಡಿಸಿ ಕೊಂಡಾಳಲ್ಕಮಾದೇವದಿಂ|
ಮುಳಿಸಿಂ ರಂಭೆಯ ಕೊಟ್ಟ ಶಾಪಮನದಂ ನೀಗಲ್ಕಮಾಗಳ್ ಬೃಹಂ
ದಳೆಯಾದಂ ನರನಾತ್ಮಕಾರ್ಯವಶದಿಂ ಶುದ್ಧಾಂತದೊಳ್ ಮತ್ಸ್ಯನಾ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:ಎಳೆಯಂ (ಭೂಮಿಯನ್ನು) ವಿಕ್ರಮದಿಂ ತರಲ್ (ಪೌರುಷದಿಂದ ತರಲು) ಮಹಿಧರಂ (ವಿಷ್ಣುವು) ಮುನ್ ಪಂದಿಯಾದಂತೆ (ಹಿಂದೆ ಹಂದಿಯಾದಂತೆ) ಪೋದ ಎಳೆಯಂ (ಹೋದ ರಾಜ್ಯವನ್ನು) ದಾಯಿಗರಂ ಪಡಲ್ವಡಿಸಿ ಕೊಂಡು ಆಳಲ್ಕಮ್, ಆದ ಏವದಿಂ (ದಾಯಾದಿಗಳಿಂದ ಬಿಡಿಸಿಕೊಂಡು ಆಳುವುಕ್ಕೂ, ತನಗುಂಟಾದ ಅವಮಾನದಿಂದಲೂ) ಮುಳಿಸಿಂ ರಂಭೆಯ ಕೊಟ್ಟ ಶಾಪಮನು ಅದಂ ನೀಗಲ್ಕಮ್ ಆಗಳ್ (ರಂಭೆಯು ಕೊಟ್ಟ ಶಾಪವನ್ನು ನೀಗುವುದಕ್ಕೂ, ಆಗ) ಬೃಹಂದಳೆಯಾದಂ ನರನು ಆತ್ಮಕಾರ್ಯವಶದಿಂ(ಆಗ ಅರ್ಜುನನು ತನ್ನ ಕಾರ್ಯಸಾಧನೆಗಾಗಿ ಬೃಹಂದಳೆಯೆಂಬ ನಪುಂಸಕನಾದನು) ಶುದ್ಧಾಂತದೊಳ್ ಮತ್ಸ್ಯನಾ (ಮತ್ಸ್ಯರಾಜ ವಿರಾಟನ ಅಂತಪುರದಲ್ಲಿ)
ಪದ್ಯ-೫೫:ಅರ್ಥ: ವಿಷ್ಣುವು ಭೂಮಿಯನ್ನು ಪೌರುಷದಿಂದ ತರಲು ಹಿಂದೆ ಹಂದಿಯಾದಂತೆ (ವರಾಹವತಾರವನ್ನೆತ್ತಿದ ಹಾಗೆ) ಹೋದ ರಾಜ್ಯವನ್ನು ದಾಯಾದಿಗಳಿಂದ ಬಿಡಿಸಿಕೊಂಡು ಆಳುವುಕ್ಕೂ ತನಗುಂಟಾದ ಅವಮಾನದಿಂದಲೂ ಕೋಪದಿಂದಲೂ, ರಂಭೆಯು ಕೊಟ್ಟ ಶಾಪವನ್ನು ನೀಗುವುದಕ್ಕೂ, ಆಗ ಅರ್ಜುನನು ತನ್ನ ಕಾರ್ಯಸಾಧನೆಗಾಗಿ ಮತ್ಸ್ಯರಾಜ ವಿರಾಟನ ಅಂತಪುರದಲ್ಲಿ ಬೃಹಂದಳೆಯೆಂಬ ನಪುಂಸಕನಾದನು.
ವ|| ಅಂತು ಬೃಹಂದಳೆಯಾಗಿ ಗಾಂಡೀವ ಜ್ಯಾಘಾತದೊಳಿಂದ್ರನೀಲಂಗಳನಡಸಿದಂತಿರ್ದೆರಡುಂ ಮುಂಗೆಯ್ಗಳ ಕರ್ಪಂ ತೀವೆ ತೊಟ್ಟ ಬಳೆಗಳ್ ಮಱಸೆ ವಿರಾಟನ ಮಗಳಪ್ಪುತ್ತರೆ ಮೊದಲಾಗೆ ಪಲವುಂ ಪಾತ್ರಂಗಳನಾಡಿಸುತ್ತುಂ ಮಹಾ ಭಾರವತಾರದೊಳಪ್ಪ ಸಂಗ್ರಾಮರಂಗದೊಳರಾತಿನಾಯಕರ ಕಬಂಧಪಾತ್ರಂಗಳನಾಡಿಸುವುದನುದಾಹರಿಸುವಂತಿರ್ದಂ ಪಾಂಚಾಳ ರಾಜತನೂಜೆಯುಂ ರೂಪುಗರೆದು ಸೈರಂವೇಷದೊಳ್ ಪೋಗಿ ವಿರಾಟನ ಮಹಾದೇವಿ ಸುದೇಷ್ಣೆಯಂ ಕಾಣ್ಬುದುಮಾಕೆಯುಂ ಕೃಷ್ಣೆಯ ರೂಪಂ ಕಂಡು ಚೋದ್ಯಂಬಟ್ಟು ಸಾಮಾನ್ಯೆಯಲ್ಲೆ ನೀನಾರ್ಗೇನೆಂಬೆಯೆಂದು ಬೆಸಗೊಳೆ-
ವಚನ:ಪದವಿಭಾಗ-ಅರ್ಥ:ಅಂತು ಬೃಹಂದಳೆಯಾಗಿ ಗಾಂಡೀವ ಜ್ಯಾಘಾತದೊಳ್ ಇಂದ್ರನೀಲಂಗಳನು ಅಡಸಿದಂತೆ ಇರ್ದ ಎರಡುಂ ಮುಂಗೆಯ್ಗಳ ಕರ್ಪಂ (ಅರ್ಜುನನ, ಗಾಂಡೀವ ಧನುಸ್ಸಿನ ಹೆದೆಯ ಪೆಟ್ಟಿನಿಂದಾದ ಇಂದ್ರನೀಲಮಣಿಗಳನ್ನು ಕೆತ್ತಿಸಿದ ಹಾಗಿದ್ದ ಎರಡು ಮುಂಗೈಗಳ ಕಪ್ಪನ್ನು) ತೀವೆ ತೊಟ್ಟ ಬಳೆಗಳ್ ಮಱಸೆ (ಪೂರ್ಣವಾಗಿ ತೊಟ್ಟುಕೊಂಡಿದ್ದ ಬಳೆಗಳು ಮರೆಮಾಡಲು-) ವಿರಾಟನ ಮಗಳ್ ಪ್ಪುತ್ತರೆ ಮೊದಲಾಗೆ ಪಲವುಂ ಪಾತ್ರಂಗಳನು ಆಡಿಸುತ್ತುಂ (ವಿರಾಟನ ಮಗಳಾದ ಉತ್ತರೆಯೇ ಮೊದಲಾದವರಿಗೆ ಅನೇಕ ಪಾತ್ರಗಳನ್ನು ನಾಟ್ಯವಾಡಿಸುತ್ತಿರುವಾಗ ಅದು) ಮಹಾ ಭಾರವತಾರದೊಳಪ್ಪ ಸಂಗ್ರಾಮರಂಗದೊಳ್ ಅರಾತಿನಾಯಕರ ಕಬಂಧಪಾತ್ರಂಗಳನು (ಕಬಂಧ-ರುಂಡವಿಲ್ಲದ ದೇಹ) ಆಡಿಸುವುದನು ಉದಾಹರಿಸುವಂತಿರ್ದಂ (ಶತ್ರುನಾಯಕರ ದೇಹಗಳೆಂಬ ಪಾತ್ರಗಳನ್ನು ಈ ರೀತಿಯಲ್ಲಿ ಆಡಿ ತೋರಿಸುತ್ತೇನೆ ಎನ್ನುವಂತಿದ್ದಿತು) ಪಾಂಚಾಳ ರಾಜತನೂಜೆಯುಂ (ದ್ರೌಪದಿಯೂ) ರೂಪುಗರೆದು ಸೈರಂವೇಷದೊಳ್ (ದ್ರೌಪದಿಯೂ ರೂಪವನ್ನು ಮರೆಸಿಕೊಂಡು ಸೈರಂವೇಷದಿಂದ) ಪೋಗಿ ವಿರಾಟನ ಮಹಾದೇವಿ ಸುದೇಷ್ಣೆಯಂ ಕಾಣ್ಬುದುಂ (ಸುದೇಷ್ಣೆಯನ್ನು ಕಂಡಾಗ) ಆಕೆಯುಂ ಕೃಷ್ಣೆಯ ರೂಪಂ ಕಂಡು ಚೋದ್ಯಂಬಟ್ಟು (ರೂಪವನ್ನು ನೋಡಿ ಆಶ್ಚರ್ಯಪಟ್ಟು) ಸಾಮಾನ್ಯೆಯಲ್ಲೆ ನೀನಾರ್ಗೆ ಏನೆಂಬೆಯೆಂದು ಬೆಸಗೊಳೆ (‘ನೀನು ಸಾಮಾನ್ಯಳಲ್ಲ, ನೀನು ಯಾರವಳು? ನಿನ್ನ ಹೆಸರೇನು?’ ಎಂದು ಪ್ರಶ್ನೆಮಾಡಲು)-
ವಚನ:ಅರ್ಥ:ಅರ್ಜುನನ, ಗಾಂಡೀವ ಧನುಸ್ಸಿನ ಹೆದೆಯ ಪೆಟ್ಟಿನಿಂದಾದ ಇಂದ್ರನೀಲಮಣಿಗಳನ್ನು ಕೆತ್ತಿಸಿದ ಹಾಗಿದ್ದ ಎರಡು ಮುಂಗೈಗಳ ಕಪ್ಪನ್ನು ಪೂರ್ಣವಾಗಿ ತೊಟ್ಟುಕೊಂಡಿದ್ದ ಬಳೆಗಳು ಮರೆಮಾಡಿದುವು. ವಿರಾಟನ ಮಗಳಾದ ಉತ್ತರೆಯೇ ಮೊದಲಾದವರಿಗೆ ಅನೇಕ ಪಾತ್ರಗಳನ್ನು ನಾಟ್ಯವಾಡಿಸುತ್ತಿರುವಾಗ ಅದು; ಮುಂದೆ ಅದು ಬರುವ ಮಹಾಭಾರತ ಯುದ್ಧಭೂಮಿಯಲ್ಲಿ ಶತ್ರುನಾಯಕರ ದೇಹಗಳೆಂಬ ಪಾತ್ರಗಳನ್ನು ಈ ರೀತಿಯಲ್ಲಿ ಆಡಿ ತೋರಿಸುತ್ತೇನೆ ಎನ್ನುವಂತಿದ್ದಿತು. ದ್ರೌಪದಿಯೂ ರೂಪವನ್ನು ಮರೆಸಿಕೊಂಡು ಸೈರಂವೇಷದಿಂದ ಹೋಗಿ ವಿರಾಟನ ಮಹಾರಾಣಿಯಾದ ಸುದೇಷ್ಣೆಯನ್ನು ಕಂಡಾಗ ಅವಳು ದ್ರೌಪದಿಯ ರೂಪವನ್ನು ನೋಡಿ ಆಶ್ಚರ್ಯಪಟ್ಟು ‘ನೀನು ಸಾಮಾನ್ಯಳಲ್ಲ, ನೀನು ಯಾರವಳು? ನಿನ್ನ ಹೆಸರೇನು?’ ಎಂದು ಪ್ರಶ್ನೆಮಾಡಿದಳು-
ಕಂ|| ನವ ಮೃಗಮದ ಪರಿಮಳಮುಮ
ನಿವು ಮಸುಳಿಪುವೆನಿಪ ವಿವಿಧ ಗಂಧಂಗಳನಾ|
ನವಯವದೊಳ್ ಮಾಡುವ ಘ
ಟ್ಟಿವಳ್ತಿಯೆಂ ದೇವಿ ಗಂಡವಳ್ತಿಯೆನಲ್ಲೆಂ|| ೫೬||
ಪದ್ಯ-೫೬:ಪದವಿಭಾಗ-ಅರ್ಥ:ನವ ಮೃಗಮದ ಪರಿಮಳಮುಮನು (ಹೊಸದಾದ ಕಸ್ತೂರಿಯ ಪರಿಮಳವನ್ನೂ) ಇವು ಮಸುಳಿಪುವು ಎನಿಪ (ಕಂದಿಸುವ - ಅವನ್ನು ಮೀರಿಸುವ ಹಾಗಿರುವ ) ವಿವಿಧ ಗಂಧಂಗಳನ ಆಂ ಅವಯವದೊಳ್ ಮಾಡುವ ( ಶ್ರಮವಿಲ್ಲದೆ ಅರೆದು ಸಿದ್ಧಪಡಿಸಬಲ್ಲ) ಘಟ್ಟಿಗಿತ್ತಿಯು, ದೇವಿ ಗಂಡವಳ್ತಿಯು ಅಲ್ಲೆಂ(ಗಂಡನಿಲ್ಲದವಳು)
ಪದ್ಯ-೫೬:ಅರ್ಥ:ದ್ರೌಪದಿಯು ಹೇಳಿದಳು, ಹೊಸದಾದ ಕಸ್ತೂರಿಯ ಪರಿಮಳವನ್ನೂ ಮೀರಿಸುವ ಹಾಗಿರುವ ನಾನಾಬಗೆಯಾದ ಗಂಧಗಳನ್ನು ಶ್ರಮವಿಲ್ಲದೆ ಅರೆದು ಸಿದ್ಧಪಡಿಸಬಲ್ಲ ಗಟ್ಟಿವಳ್ತಿಯು ನಾನು. ದೇವಿ ಗಂಡನಿಲ್ಲದವಳು ತಾನು ಎಂದಳು-

ಕೀಚಕನು ದ್ರೌಪದಿಯ ಅಂದಕ್ಕೆ ಸೋತುದು - ಕೀಚಕ ವಧೆ[ಸಂಪಾದಿಸಿ]

ಪೆಸರೊಳ್ ಸೈರಂಧ್ರಿಯೆನೞಿ
ವೆಸನದ ದೆಸೆಯಱಿಯೆನೆನಗೆ ಗಂಧರ್ವರ ಕಾ|
ಪಸದಳಮುಂಟಿರಿಸುವೊಡಾಂ
ಬೆಸಕೆಯ್ವೆಂ ನಿನ್ನ ಬೆಸಸಿದಂದದೊಳಿರ್ಪೆಂ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ಪೆಸರೊಳ್ ಸೈರಂಧ್ರಿಯೆನೆ (ಹೆಸರಿನಲ್ಲಿ ಸೈರಂಯೆಂಬುದು) ಅೞಿವೆಸನದ ದೆಸೆಯಱಿಯೆನು ( ನೀಚಕಾರ್ಯದ ವಿಷಯ ತಿಳಿಯೆನು) ಎನಗೆ ಗಂಧರ್ವರ ಕಾಪು ಅಸದಳಮುಂಟು (ನನಗೆ ಗಂಧರ್ವರ ರಕ್ಷಣೆ ಪೂರ್ಣವಾಗುಂಟು) ಇರಿಸುವೊಡೆ ಆಂ ಬೆಸಕೆಯ್ವೆಂ (ಇರಿಸಿಕೊಂಡರೆ ದಾಸಿಯಾಗಿರುತ್ತೇನೆ) ನಿನ್ನ ಬೆಸಸಿದ ಅಂದದೊಳು ಇರ್ಪೆಂ (ನಿನ್ನ ಆಜ್ಞೆಯ ಪ್ರಕಾರ ನಡೆದುಕೊಳ್ಳುತ್ತೇನೆ.)
ಪದ್ಯ-೫೭:ಅರ್ಥ: ನನ್ನ ಹೆಸರು ಸೈರಂಯೆಂಬುದು . ನೀಚಕಾರ್ಯದ ವಿಷಯ ತಿಳಿಯೆನು, ನನಗೆ ಗಂಧರ್ವರ ರಕ್ಷಣೆ ಪೂರ್ಣವಾಗುಂಟು. ಇರಿಸಿಕೊಂಡರೆ ದಾಸಿಯಾಗಿರುತ್ತೇನೆ. ನಿನ್ನ ಆಜ್ಞೆಯ ಪ್ರಕಾರ ನಡೆದುಕೊಳ್ಳುತ್ತೇನೆ.
ವ||ಎಂದು ವಿರಾಟನ ಮಹಾದೇವಿಗಾವಗಮಣುಗೆಯಾಗಿ ಪಾಂಚಾಳಿಯಿರ್ದಳಂತು ಪಾಂಡವರೀ ಮಾೞ್ಕೆಯಿಂದಿರ್ಪನ್ನೆಗಮೊಂದು ದೆವಸಂ ವಿರಾಟಂ ನೆಲದೊಳುಳ್ಳಮಲ್ಲರೆಲ್ಲರುಮಂಬರಿಸಿ ಮಲ್ಲಯುದ್ಧಮಂ ನೋಡಿ ಸುಯೋಧನನಮಲ್ಲಂ ವಿಷಖರ್ಪರನೆಂಬಂ ತನ್ನ ಮಲ್ಲರೆಲ್ಲರು ಮಂ ಕೊಂದೊಡೆ ಸಿಗ್ಗಾಗಿ ತನ್ನ ಬಾಣಸಿಗನಾಗಿರ್ದ ವಲ್ಲಲನಂ ಕರೆದು ಪೇೞುಗಳ್-
ವಚನ:ಪದವಿಭಾಗ-ಅರ್ಥ:ಎಂದು ವಿರಾಟನ ಮಹಾದೇವಿಗೆ ಆವಗಂ ಅಣುಗೆಯಾಗಿ (ಪ್ರೀತಿಪಾತ್ರಳಾಗಿ) ಪಾಂಚಾಳಿಯಿರ್ದಳು, ಅಂತು ಪಾಂಡವರ ಈ ಮಾೞ್ಕೆಯಿಂದ ಇರ್ಪನ್ನೆಗಂ (ಪಾಂಡವರು ಈ ರೀತಿಯಿಂದಿರುವಾಗ ಒಂದುದಿನ) ಓಂದು ದೆವಸಂ ವಿರಾಟಂ ನೆಲದೊಳುಳ್ಳ ಮಲ್ಲರೆಲ್ಲರುಮಂ ಬರಿಸಿ (ಭೂಮಿಯಲ್ಲಿರುವ ಜಟ್ಟಿಗಳೆಲ್ಲರನ್ನೂ ಬರಮಾಡಿ) ಮಲ್ಲಯುದ್ಧಮಂ ನೋಡಿ ಸುಯೋಧನನ ಮಲ್ಲಂ ವಿಷಖರ್ಪರನೆಂಬಂ(ದುರ್ಯೋಧನನ ಜಟ್ಟಿಯಾದ ವಿಷಖರ್ಪರನೆಂಬುವನು ) ತನ್ನ ಮಲ್ಲರು ಎಲ್ಲರುಮಂ ಕೊಂದೊಡೆ (ವಿರಾಟನ ಜಟ್ಟಿಗಳೆಲ್ಲರನ್ನೂ ಕೊಲ್ಲಲು) ಸಿಗ್ಗಾಗಿ ತನ್ನ ಬಾಣಸಿಗನಾಗಿರ್ದ ವಲ್ಲಲನಂ ಕರೆದು ಪೇೞುಗಳ್ (ಅಡುಗೆಯವನಾಗಿದ್ದ ವಲಲನನ್ನು ಕರೆದು ಕಾದಲು ಹೇಳಿದನು)-
ವಚನ:ಅರ್ಥ:ಎಂದು ದ್ರೌಪದಿಯು ವಿರಾಟನ ಮಹಾರಾಣಿಗೆ ಅತ್ಯಂತ ಪ್ರೀತಿಪಾತ್ರಳಾಗೆ ದ್ರೌಪದಿ ದಾಸಿಯಾಗಿದ್ದಳು. ಪಾಂಡವರು ಈ ರೀತಿಯಿಂದಿರುವಾಗ ಒಂದುದಿನ ವಿರಾಟನು ಭೂಮಿಯಲ್ಲಿರುವ ಜಟ್ಟಿಗಳೆಲ್ಲರನ್ನೂ ಬರಮಾಡಿ ಜಟ್ಟಿಕಾಳಗವನ್ನು ಆಡಿಸಿ ನೋಡಿದನು. ದುರ್ಯೋಧನನ ಜಟ್ಟಿಯಾದ ವಿಷಖರ್ಪರನೆಂಬುವನು ವಿರಾಟನ ಜಟ್ಟಿಗಳೆಲ್ಲರನ್ನೂ ಕೊಲ್ಲಲು ಅವಮಾನಿತನಾಗಿ ತನ್ನ ಅಡುಗೆಯವನಾಗಿದ್ದ ವಲಲನನ್ನು ಕರೆದು ಕಾದಲು ಹೇಳಿದನು;
ಕಂ|| ಪರ್ಪರಿಕೆಗಿಡದೆ ಕಲಿ ವಿಷ
ಖರ್ಪರನಿದಿರಾಂತೊಡಾಂತು ವಲಲಂ ತಳಮಂ|
ಮಾರ್ಪೊಸೆದು ತಳ್ತು ಕಣ್ತಿರಿ
ತರ್ಪಿನೆಗಮವುಂಕಿ ಸಿಂಹನಾದದಿನಾರ್ದಂ|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ: ಪರ್ಪರಿಕೆ ಗಿಡದೆ ಕಲಿ ವಿಷಖರ್ಪರನು (ಕ್ರೂರಶೌರ್ಯ ಕೆಡದೆ ಕಲಿ ವಿಷಖರ್ಪರನು) ಇದಿರಾಂತೊಡೆ ಆಂತು ವಲಲಂ ತಳಮಂ ಮಾರ್ಪೊಸೆದು ತಳ್ತು (ವಲಲನು ಭೂಮಿಯನ್ನು ಕಯ್ಯಿಂದ ಉಜ್ಜಿ, ಎದುರಿಸಿ) ಕಣ್ತಿ ತರಿತರ್ಪಿನೆಗಂ ಅವುಂಕಿ (ಕಣ್ಣುಗಳು ಅವನ ತಿರುಗುವಂತೆ ಅವುಕಿಕೊಂಡು) ಸಿಂಹನಾದದಿಂ ಆರ್ದಂ (ಸಿಂಹನಾದದಿಂದ ಘರ್ಜಿಸಿದನು)|
ಪದ್ಯ-೫೮:ಅರ್ಥ: ಕ್ರೂರಶೌರ್ಯ ಕೆಡದೆ ಕಲಿ ವಿಷಖರ್ಪರನು ತನ್ನ ವಿಶೇಷ ಕ್ರೌರ್ಯದಿಂದ ಪ್ರತಿಭಟಿಸಲು ವಲಲನು ಭೂಮಿಯನ್ನು ಕಯ್ಯಿಂದ ಉಜ್ಜಿ, ಎದುರಿಸಿ ಕಣ್ಣುಗಳು ತಿರುಗುವ ಹಾಗೆ ಅವುಕಿಕೊಂಡು ಸಿಂಹನಾದದಿಂದ ಘರ್ಜಿಸಿದನು
ವ|| ಅಂತು ಸುಯೋಧನನ ಮಲ್ಲನಂ ಕೊಂದು ವಲಲಂ ವಿರಾಟನ ಮನೆಯೊಳ್ ತನ್ನ ಮಾತೆ ಮಾತಾಗಿರ್ದನನ್ನೆಗಂ ವಿರಾಟನ ಮೈದುನಂ ಸುದೇಷ್ಣೆಯೊಡವುಟ್ಟಿದನೊರ್ವಂ ಸಿಂಹಬಲಂ ಕೀಚಕನೆಂಬಂ ಸುಯೋಧನನ ದಂಡೆಲ್ಲಮನಿರಿದೋಡಿಸಿ ಬಂದು ವಿರಾಟನಂ ಕಂಡು ತಮ್ಮಕ್ಕನಂ ಕಾಣಲ್ ಪೋದಾತನಾ ಮಹಾದೇವಿಯ ಕೆಲದೊಳಿರ್ದ-
ವಚನ:ಪದವಿಭಾಗ-ಅರ್ಥ:ಅಂತು ಸುಯೋಧನನ ಮಲ್ಲನಂ ಕೊಂದು ವಲಲಂ ವಿರಾಟನ ಮನೆಯೊಳ್ ತನ್ನ ಮಾತೆ ಮಾತಾಗಿರ್ದನು (ವಿರಾಟನ ಮನೆಯಲ್ಲಿ ವಲಲನ-ಅವನ ಸುದ್ದಿಯ ಮಾತೇ ಮಾತಾಗಿದ್ದನು) ಅನ್ನೆಗಂ ವಿರಾಟನ ಮೈದುನಂ ಸುದೇಷ್ಣೆಯೊಡವುಟ್ಟಿದನು ಒರ್ವಂ ಸಿಂಹಬಲಂ ಕೀಚಕನೆಂಬಂ (ಸುದೇಷ್ಣೆಯ ಸೋದರನು ಸಿಂಹಬಲವುಳ್ಳವನು) ಸುಯೋಧನನ ದಂಡೆಲ್ಲಮನು (ಸೈನ್ಯವನ್ನು) ಇರಿದು ಓಡಿಸಿ ಬಂದು ವಿರಾಟನಂ ಕಂಡು ತಮ್ಮ ಅಕ್ಕನಂ ಕಾಣಲ್ ಪೋದ ಆತನು ಆ ಮಹಾದೇವಿಯ ಕೆಲದೊಳಿರ್ದ (ಮಹಾರಾಣಿಯ ಸಮೀಪದಲ್ಲಿದ್ದ)-
ವಚನ:ಅರ್ಥ:ದುರ್ಯೋಧನನ ಜಟ್ಟಿಯನ್ನು ಕೊಂದು ವಲಲನು ವಿರಾಟನ ಮನೆಯಲ್ಲಿ ವಲಲನ-ಅವನ ಸುದ್ದಿಯ ಮಾತೇ ಮಾತಾಗಿದ್ದನು. ಅಷ್ಟರಲ್ಲಿ ವಿರಾಟನ ಮೈದುನನು ಸುದೇಷ್ಣೆಯ ಸೋದರನು ಸಿಂಹಬಲವುಳ್ಳವನು ಆದ ಕೀಚಕನೆಂಬುವನು ದುರ್ಯೋಧನನ ಸೈನ್ಯವನ್ನೆಲ್ಲ ಶೀಘ್ರವಾಗಿ ಓಡಿಸಿ ಬಂದು ವಿರಾಟನನ್ನು ನೋಡಿಯಾದ ಮೇಲೆ ತಮ್ಮಕ್ಕನನ್ನು ನೋಡಲು ಹೋದನು. ಆ ಮಹಾರಾಣಿಯ ಸಮೀಪದಲ್ಲಿದ್ದ- (ದ್ರೌಪದಿಯನ್ನು ಕಂಡನು).
ಚಂ|| ಸೊಗಯಿಸೆ ತೋಳ ಮೊತ್ತಮೊದಲೊಳ್ ಪೊಗರ್ವಟ್ಟೆಸೆವೊಂದು ನುಣ್ಪು ಸಾ
ವಗಿಸುವ ಮೇಲುದಂ ಮೊಲೆಗಳಳ್ಳಿಱಿಯುತ್ತಿರೆ ಪೊಣ್ಮೆ ಘರ್ಮ ಬಿಂ|
ದುಗಳಲರಂಬುವೋಲೆಳಸೆ ಪಾಟಲಲೋಲವಿಲೋಚನಂ ಮನಂ
ಬುಗೆ ನಳಿತೋಳ ಕೋಳೆಸೆಯೆ ಘಟ್ಟಿಮಗುೞ್ಚುವ ಘಟ್ಟಿವಳ್ತಿಯಂ|| ೫೯ ||
ಪದ್ಯ-೫೯:ಪದವಿಭಾಗ-ಅರ್ಥ:ಸೊಗಯಿಸೆ ತೋಳ ಮೊತ್ತ ಮೊದಲೊಳ್ (ತೋಳ ಮೊತ್ತಮೊದಲಿನಲ್ಲಿ- ಮೇಲೆ) ಪೊಗರ್ವಟ್ಟು ಎಸೆವೊಂದು ನುಣ್ಪು (ವಿಶೇಷಸೊಗಸಿನಲ್ಲಿ ಪೊಗರಾಗಿ-ಎದ್ದು ನುಣುಪು ಎಸೆಯುತ್ತು) ಸಾವಗಿಸುವ ಮೇಲುದಂ ಮೊಲೆಗಳ್ ಅಳ್ಳಿಱಿಯುತ್ತಿರೆ (ಸಾವರಿಸಿ-ಸರಿಪಡಿಸಿ ಹೊದೆಯುವ ಮೇಲು ಸೆರಗನ್ನು ಅವಳ ಮೊಲೆಗಳು ಇರಿದು ನಡುಗಿಸುತ್ತಿರಲು) ಪೊಣ್ಮೆ ಘರ್ಮ ಬಿಂದುಗಳ್ (ಬೆವರಹನಿಗಳು ಹೊರಹೊಮ್ಮುತ್ತಿರಲು) ಅಲರಂಬುವೋಲ್ (ಪುಷ್ಪಬಾಣದಂತೆ) ಎಳಸೆ (ವ್ಯಾಪಿಸಿ) ಪಾಟಲಲೋಲ ವಿಲೋಚನಂ ಮನಂಬುಗೆ(ನಸುಗೆಂಪಾದ ಕಣ್ಣುಗಳನೋಟ, ಪುಷ್ಪಬಾಣದಂತೆ ಮನಸ್ಸನ್ನು ಆಕರ್ಷಿಸುತ್ತಿದ್ದುವು) ನಳಿತೋಳ ಕೋಳ್ ಎಸೆಯೆ ಘಟ್ಟಿಮಗುೞ್ಚುವ ಘಟ್ಟಿವಳ್ತಿಯಂ (ಗಂದ ತೇಯುವಾಗ ಗಟ್ಟಿಯಾಗಿ ಮಗಚುವ ಸಮಯದಲ್ಲಿ ಕೋಮಲವಾದ ತೋಳಿನ ಹಿಡಿತವು ಶೋಭಿಸಿರಲು ಆ ಘಟ್ಟಿವಳ್ತಿಯನ್ನು )
ಪದ್ಯ-೫೯:ಅರ್ಥ:ದ್ರೌಪದಿಯ ತೋಳ ಮೊತ್ತಮೊದಲಿನ ಮೇಲೆ, ವಿಶೇಷಸೊಗಸಿನಲ್ಲಿ ಪೊಗರಾಗಿ-ಎದ್ದು ನುಣುಪು ಎಸೆಯುತ್ತು. ಸರಿಪಡಿಸಿ ಹೊದೆಯುವ ಮೇಲು ಸೆರಗನ್ನು ಅವಳ ಮೊಲೆಗಳು ಇರಿದು ನಡುಗಿಸುತ್ತಿರಲು, ಬೆವರಹನಿಗಳು ಹೊರಹೊಮ್ಮುತ್ತಿರಲು, ನಸುಗೆಂಪಾದ ಕಣ್ಣುಗಳು ಪುಷ್ಪಬಾಣದಂತೆ ಮನಸ್ಸನ್ನಾಕರ್ಷಿಸುತ್ತಿದ್ದುವು. ಗಂದ ತೇಯುವಾಗ ಗಟ್ಟಿಯಾಗಿ ಮಗಚುವ ಸಮಯದಲ್ಲಿ ಕೋಮಲವಾದ ತೋಳಿನ ಹಿಡಿತವು ಶೋಭಿಸಿರಲು ಆ ಘಟ್ಟಿವಳ್ತಿಯನ್ನು ಸೈರಂಧಿಯನ್ನು ಕೀಚಕನು ನೋಡಿದನು.)
ವ|| ಭೋಂಕನೆ ಕಂಡು ಕೀಚಕಂ ಕಾಮದೇವಂ ಮಾಡಿದ ಯಾಚಕನಂತೆ ಕರಮೆ ನಾಣ್ಗೆಟ್ಟು ಮನಂಗಾಪೞಿದಳಿಪಿ ನೋಡಿ ತನ್ನ ಮನದೊಳಿಂತೆಂದು ಬಗೆದಂ-
ವಚನ:ಪದವಿಭಾಗ-ಅರ್ಥ:ಭೋಂಕನೆ ಕಂಡು ಕೀಚಕಂ ಕಾಮದೇವಂ ಮಾಡಿದ ಯಾಚಕನಂತೆ (ಭಿಕ್ಷುಕನಂತೆ) ಕರಮೆ ನಾಣ್ಗೆಟ್ಟು (ಪೂರಾ ನಾಚಿಕೆಗೆಟ್ಟು) ಮನಂಗಾಪು ಅೞಿದು ಅಳಿಪಿ (ಮನಸ್ಸಿನ ಕಾಪು-ಎಚ್ಚರಿಗೆ ಹೋಗಿ,ಆಸೆಪಟ್ಟು)ನೋಡಿ ತನ್ನ ಮನದೊಳಿಂತೆಂದು ಬಗೆದಂ-
ವಚನ:ಅರ್ಥ:ಅನಿರೀಕ್ಷಿತವಾಗಿ ಅವಳನ್ನು ನೋಡಿ ಕೀಚಕನು ಕಾಮದೇವನು ಮಾಡಿದ ಭಿಕ್ಷುಕನಂತೆ ಪೂರಾ ನಾಚಿಕೆಗೆಟ್ಟು ಮನಸ್ಸಿನ ಹಿಡಿತ ತಪ್ಪಿ ಆಸೆಪಟ್ಟು ನೋಡಿ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದನು
ಚಂ|| ಸುರಿಯೆ ಬೆಮರ್ ಕುರುಳ್ವಿಡಿದು ಮುತ್ತುಗಳಂ ಮಱದುಂಬಿ ಕಾಱುವಂ
ತಿರೆ ನಳಿತೋಳ ಬಳ್ವಳಿಕೆ ಕಣ್ಗೊಳೆ ಘಟ್ಟಿಮಗುೞ್ಚುವಂದಮ|
ಲ್ತರೆದು ಮಗುೞ್ಚುವಂದಮೆ ದಲೆನ್ನೆರ್ದೆಯಂ ಪೆಱತೇನದೆಂತು ಪೇೞು
ಪರಿಕಿಪೆನೀ ಮೃಗೋದ್ಭವದ ಕಂಪುಮನೀಕೆಯ ಸುಯ್ಯ ಕಂಪುಮಂ|| ೬೦||
ಪದ್ಯ-೬೦:ಪದವಿಭಾಗ-ಅರ್ಥ:ಸುರಿಯೆ ಬೆಮರ್ ಕುರುಳ್ವಿಡಿದು (ಮುಂಗುರುಳುಗಳನ್ನು ಅನುಸರಿಸಿ) ಮುತ್ತುಗಳಂ ಮಱದುಂಬಿ ಕಾಱುವಂತಿರೆ (ಮರಿದುಂಬಿಗಳು ಮುತ್ತುಗಳನ್ನು ಕಾರುವ ಹಾಗೆ ಬೆವರು ಮುಂಗುರುಳುಗಳನ್ನು ಅನುಸರಿಸಿ ಸುರಿಯುತ್ತಿರಲು,) ನಳಿತೋಳ ಬಳ್ವಳಿಕೆ ಕಣ್ಗೊಳೆ (ದುಂಡಾದ ತೋಳಿನ ಸೌಂದರ್ಯವು ಆಕರ್ಷಕವಾಗಿರಲು,) ಘಟ್ಟಿಮಗುೞ್ಚುವಂದಮಲ್ತು ಅರೆದು ಮಗುೞ್ಚುವಂದಮೆ ದಲ್ ಎನ್ನೆರ್ದೆಯಂ (ನನ್ನ ಎದೆಯನ್ನು ಅರೆದು ಹಿಂದುಮುಂದು ಮಾಡುವ ರೀತಿಯೇ ಸರಿ) ಪೆಱತೇನ್ ಅದೆಂತು ಪೇೞು (ಬೇರೆಯೇನು) ಪರಿಕಿಪೆನು ಈ ಮೃಗೋದ್ಭವದ ಕಂಪುಮನು ಈಕೆಯ ಸುಯ್ಯ (ಉಸಿರಿನ) ಕಂಪುಮಂ (ನಾನು ಈ ಕಸ್ತೂರಿಯ ಪರಿಮಳವನ್ನೂ ಈಕೆಯ ಉಸುರಿನ ಗಾಳಿಯ ಸುವಾಸನೆಯನ್ನೂ ಹೇಗೆ ಪರೀಕ್ಷಿಸಲಿ?)
ಪದ್ಯ-೬೦:ಅರ್ಥ:ದ್ರೌಪದಿಯ ದೇಹದಲ್ಲಿ ಮರಿದುಂಬಿಗಳು ಮುತ್ತುಗಳನ್ನು ಕಾರುವ ಹಾಗೆ ಬೆವರು ಮುಂಗುರುಳುಗಳನ್ನು ಅನುಸರಿಸಿ ಸುರಿಯುತ್ತಿವೆ. ದುಂಡಾದ ತೋಳಿನ ಸೌಂದರ್ಯವು ಆಕರ್ಷಕವಾಗಿದೆ. ಇದು ಗಂಧವನ್ನು ತೇಯುವ ಕ್ರಮವಲ್ಲ; ಆದರೆ ನನ್ನ ಎದೆಯನ್ನು ಅರೆದು ಹಿಂದುಮುಂದು ಮಾಡುವ ರೀತಿಯೇ ಸರಿ. ನಾನು ಈ ಕಸ್ತೂರಿಯ ಪರಿಮಳವನ್ನೂ ಈಕೆಯ ಉಸುರಿನ ಗಾಳಿಯ ಸುವಾಸನೆಯನ್ನೂ ಹೇಗೆ ಪರೀಕ್ಷಿಸಲಿ?

ಕುಮಾರವಸ-ವ್ಯಾಸ ಭಾರತದಲ್ಲಿ
ಕೀಚಕನ ಮೊದಲ ದ್ರೌಪದಿಯ ದರ್ಶನ:
(ಪರ್ವ-೪||ಸಂ.೨||)
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ||
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ||8||

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು ||
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ||9||

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದದು ಕರಣದಲಿ ಕಳವಳದ ಬೀಡಾಯ್ತು||

ದ್ರೌಪದಿ - ಕೀಚಕನ ಮನೆಗೆ ಹೋದ ಸಂದರ್ಭ
(ಪರ್ವ-೪||ಸಂ-೩||)
ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವುವರಕಟಾಕ್ಷದ ಮಿಂಚು ಥಳಥಳಿಸೆ |
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಲಂಗನೆ ಕೀಚಕಾಲಯಕೆ||೭||

ಮನುಮಥನ ಮದದಾನೆ ಕಂದ
ರ್ಪನ ಮಹಾ ಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸ್ಖತಿಸುಖದ ಸಾಕಾರೆ|
ಮನಸಿಜನ ಮಸೆದಲಗು ಮುನಿಮೋ
ಹನ ತಿಲಕ ಲಾವಣ್ಯ ಸಾಗರ
ಜನಿತ ಲಕ್ಷಿ ಲತಾಂಗಿ ಬಂದಳು ಕೀಚಕನ ಮನೆಗೆ||೮||

ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ಗಮನದ ಮೌಳಿಕಾತಿ ಪಯೋಜ ಪರಿಮಳದ
ಕಡುಚೆಲುವೆ ಬರಲವನ ತನು ನಡ
ನಡುಗಿ ನಿಂದುದದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ ||೯ ||

ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ ||೧೦||
 
ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ||೧೨||

ಕಂ|| ಇದೆ ಮದನಭವನಮಿಂತಿದೆ
ಮದನಾಮೃತಮಿದುವೆ ಮದನಸಾಯಕಮಿದೆ ಪೋ|
ಮದನಮಹೋತ್ಸವ ಪದಮೆನಿ
ಸಿದುದು ಕಟ್ಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ|| ೬೧ ||
ಪದ್ಯ-೬೧:ಪದವಿಭಾಗ-ಅರ್ಥ:ಇದೆ ಮದನಭವನಂ (ಕಡೆಗಣ್ಣಿನ ನೋಟವೇ ಮದನನ ಮನೆ) ಇಂತು ಇದೆ ಮದನ ಅಮೃತಂ (ಇದೇ ಮದನನ ಕಾಮದ ಅಮೃತ,) ಇದುವೆ ಮದನಸಾಯಕಂ (ಇದೇ ಮದನನ ಬಾಣ), ಇದೆ ಪೋ ಮದನ ಮಹೋತ್ಸವ ಪದಂ ಎನಿಸಿದುದು (ಹೊಗು! ಇದೇ ಮದನಮಹೋತ್ಸವದ ತಾಣ ಎನ್ನಿಸಿತು ಕೀಚಕನಿಗೆ). <-ಕಟ್ಟಾಕ್ಷೇಕ್ಷಣಂ (ಕಡೆಗಣ್ಣುನೊಟವು) ವಿಲೋಲೇಕ್ಷಣೆಯಾ (ಚಂಚಲವಾದ ಕಣ್ಣನೋಟದ)
ಪದ್ಯ-೬೧:ಅರ್ಥ: ಈ ಚಂಚಲಾಕ್ಷಿಯ ಕಡೆಗಣ್ಣಿನ ನೋಟವೇ ಮನ್ಮಥನ- ಮದನನ ಮನೆ, ಇದೇ ಮದನನ ಕಾಮದ ಅಮೃತ, ಇದೇ ಮದನಬಾಣ. ಹೋಗು! ಇದೇ ಮದನಮಹೋತ್ಸವದ ತಾಣ ಎನ್ನಿಸಿತು ಕೀಚಕನಿಗೆ.
ಉ|| ಮಾಸಿದ ರೂಪು ನೋಳ್ಪೊಡರೆ ಮಾಸಿದ ಚಿತ್ರದ ಪೆಣ್ಣ ರೂಪುಮಂ
ಮಾಸಿಸೆ ನಾಡೆ ಮಾಸದಿಕೆಯಂ ಪಡೆದಪ್ಪುದು ಕಂಡ ಕಣ್ಗಳೊಳ್|
ಸೂಸುವ ಮಾೞ್ಕೆಯಿಂ ಪೊಱಗೆ ಪೊಣ್ಮುವುದಂದಮಿದೆಂತೊ ಕಾಯ್ದು ಕೈ
ವೀಸುವ ಕಾವನಂದಮಿವಳೇಂ ಕುಲನಾರಿಯೊ ವಾರನಾರಿಯೋ|| ೬೨ ||
ಪದ್ಯ-೬೨:ಪದವಿಭಾಗ-ಅರ್ಥ:ಮಾಸಿದ ರೂಪು ನೋಳ್ಪೊಡೆ (ಇವಳ ಮಲಿನವಾದ ರೂಪವನ್ನು ನೋಡಿದರೆ) ಅರೆ ಮಾಸಿದ ಚಿತ್ರದ ಪೆಣ್ಣ ರೂಪುಮಂ(ಅರ್ಧಕೊಳೆಯಾದ ಚಿತ್ರಪಟದಲ್ಲಿರುವ ಸುಂದರವಾದ ಹೆಣ್ಣಿನ ರೂಪವನ್ನು) ಮಾಸಿಸೆ (ಕೀಳುಮಾಡಿ ಮೀರಿಸುವಂತಿರಲು.) ನಾಡೆ ಮಾಸದಿಕೆಯಂ ಪಡೆದಪ್ಪುದು (ಚೆನ್ನಾಗಿ ಮಾಸದೆ ಇರುವ ರೂಪವನ್ನು ಪಡೆಯುವುದು) ಕಂಡ ಕಣ್ಗಳೊಳ್ ಸೂಸುವ ಮಾೞ್ಕೆಯಿಂ (ಇವಳನ್ನು ಕಂಡ ಕಣ್ಣುಗಳಲ್ಲಿ ಸೂಸುವ ಇವಳ ರೂಪು) ಪೊಱಗೆ ಪೊಣ್ಮುವುದು ಅಂದಮು ಇದೆಂತೊ (ಇದೇನಪ್ಪಾ ಹೊರಗೆ ಹೊಮ್ಮುತ್ತಿರುವ ಸೌಂದರ್ಯವು ;) ಕಾಯ್ದು ಕೈವೀಸುವ ಕಾವನಂದಂ (ಕೆರಳಿ ಕೈಬೀಸಿಕರೆಯುವ ಕಾಮನ ರೀತಿ ಇದೆ) ಇವಳೇಂ ಕುಲನಾರಿಯೊ ವಾರನಾರಿಯೋ (ಇವಳೇನು ಕುಲಸ್ತ್ರೀಯೋ ಅಥವಾ ವೇಶ್ಯಾಸ್ತ್ರೀಯೋ?)
ಪದ್ಯ-೬೨:ಅರ್ಥ:ಇವಳ ಮಲಿನವಾದ ರೂಪವನ್ನು ನೋಡಿದರೆ ಅರ್ಧಕೊಳೆಯಾದ ಚಿತ್ರಪಟದಲ್ಲಿರುವ ಸುಂದರವಾದ ಹೆಣ್ಣಿನ ರೂಪವನ್ನು ಕೀಳುಮಾಡಿ ಮೀರಿಸುವಂತಿದೆ. ಇವಳನ್ನು ಕಂಡ ಕಣ್ಣುಗಳಲ್ಲಿ ಸೂಸುವ ಇವಳ ರೂಪು, ನೋಡಿದರೆ ಮನ್ಮಥನೇ ವಿಲಾಸದಿಂದ ಕೆರಳಿ ಕೈಬೀಸಿಕರೆಯುವ ರೀತಿ ಇದೆ. ಇವಳೇನು ಕುಲಸ್ತ್ರೀಯೋ ಅಥವಾ ವೇಶ್ಯಾಸ್ತ್ರೀಯೋ? ಎಂದು ಕೀಚಕ ಅವಳ ರೂಪು ನೊಡಿ ದಿಗ್‍ಭ್ರಮೆಗೊಡ.
ಮಲ್ಲಿಕಾಮಾಲೆ|| ಆವಳಪ್ಪೊಡಮಕ್ಕೆ ಪೋ ತಲೆಯಿಂದೆ ಪೋದೊಡಮಿಂದೆ ಮಾ
ದೇವನಾರ್ತೆಡೆಗೋದೊಡಂ ಲಯಮಿಂದೆ ಬರ್ಪೊಡಮೆನ್ನುರಂ|
ತೀವಿ ತಳ್ತಿವಳೀ ಕುಚಂಗಳನೞ್ಕಱಂದಮರ್ದಪ್ಪಿ ಪೋ
ಗಾವುಪಾಯದೊಳಾದೊಡಂ ನೆರೆದಲ್ಲದಿನ್ನಿರೆನೀಕೆಯೊಳ್|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಆವಳು ಅಪ್ಪೊಡಂ ಅಕ್ಕೆ (ಯಾರಾದರೂ ಆಗಿರಲಿ), ಪೋ (ಹೋಗು) ತಲೆ ಯಿಂದೆ ಪೋದೊಡಂ (ಈ ದಿನವೇ ತಲೆಹೋದರೂ) ಇಂದೆ ಮಾದೇವನು ಆರ್ತು ಎಡೆಗೋದೊಡಂ (ಎಡೆಗೊಂಡೊಡಂ- ಮಹಾದೇವನೇ ಸಮರ್ಥವಾಗಿ ಮಧ್ಯ ಪ್ರವೇಶಿಸಿದರೂ, ಇಂದೆ) ಲಯಂ ಇಂದೆ ಬರ್ಪೊಡಂ, (ಈ ದಿನವೇ ನಾಶವು ಬಂದರೂ) ಎನ್ನ ಉರಂ (ನನ್ನ ಎದೆ) ತೀವಿ ತಳ್ತು ಇವಳ ಈ ಕುಚಂಗಳನು (ಕುಚಾಗ್ರಗಳನು- ಮೊಲೆಗಳತುದಿಗಳನ್ನು/ ಎಂಬಪಾಠವೂ ಇದೆ-ಡಿ.ಎಲ್.ಎನ್.)(ನನ್ನ ಎದೆ ತುಂಬಿ ಸೇರಿದ ಇವಳ ಮೊಲೆಗಳನ್ನು) ಅೞ್ಕಱಿಂದ (ಪ್ರೀತಿಯಿಂದ) ಅಮರ್ದು ಅಪ್ಪಿ (ಪ್ರೀತಿಯಿಂದ ಗಟ್ಟಿಯಾಗಿ ಅಪ್ಪಿಕೊಂಡು) ಅ ಪೋಗ್ (ಹೋಗು) ಆವ ಉಪಾಯದೊಳಾದೊಡಂ (ಯಾವ ಉಪಾಯದಿಂದಲಾದರೂ) ನೆರೆದಲ್ಲದೆ(ನರೆದು ಅಲ್ಲದೆ -ಸೇರಿ- ಕೂಡಿ ಅಲ್ಲದೆ ಇರೆನು,) ಇನ್ನಿರೆನು ಈಕೆಯೊಳ್ (ಈಕೆಯೊಡನೆ ಕೂಡಿಯಲ್ಲದೆ ಇರುವುದಿಲ್ಲ)
ಪದ್ಯ-೬೩:ಅರ್ಥ: ಅವಳು ಯಾವಳಾದರೂ ಆಗಲಿ. ಹೋಗು, ಈ ದಿನವೇ ತಲೆಹೋದರೂ ಮಹಾದೇವನೇ ಸಮರ್ಥವಾಗಿ ಮಧ್ಯ ಪ್ರವೇಶಿಸಿದರೂ ಈ ದಿನವೇ ನಾಶವು ಬಂದರೂ, ನನ್ನ ಎದೆ ತುಂಬಿ ಸೇರಿದ ಇವಳ ಮೊಲೆಗಳನ್ನು ಪ್ರೀತಿಯಿಂದ ಗಟ್ಟಿಯಾಗಿ ಅಪ್ಪಿಕೊಂಡು ಯಾವ ಉಪಾಯದಿಂದಲಾದರೂ ಈಕೆಯೊಡನೆ ಕೂಡಿಯಲ್ಲದೆ ಇರುವುದಿಲ್ಲ, ಎಂದು ಕೀಚಕನು ನಿರ್ಧರಿಸಿದನು.
ವ||ಎಂದು ಸೈರಂಧ್ರಿಯಂ ನೋಡಿ ಸೈರಿಸಲಾಱದೆ ಸಿಂಹಬಲನಂತನಂಗಮತ್ತಮಾತಂಗ ಕೋಳಾಹಳೀಕೃತಾಂತರಂಗನಾಗಿ ತಮ್ಮಕ್ಕನನೀಕೆಯಾರ್ಗೆಂದು ಬೆಸಗೊಂಡೊಡಾತನ ಸೋಲ್ತ ಕಣ್ಣಱದೀಕೆ ಸಾಮಾನ್ಯವನಿತೆಯಲ್ಲಿವಳ್ ಗಂಧರ್ವವನಿತೆಯೆನ್ನೊಳಾದ ಮಚ್ಚುಂ ಮೋಹಮುಂ ಕಾರಣಮಾಗಿರ್ಪಳೆಂಬುದುಮಾ ಮಾತಿನೊಳ್ ಬೇಟಮಗ್ಗಳಿಸೆ ನಿಜನಿವಾಸಕ್ಕೆ ಬಂದಕ್ಕನೆನಗೆ ತನ್ನ ಘಟ್ಟಿವಳ್ತಿಯಂ ಕೆಯ್ಯೊಳಪೂರ್ವ ವಿಲೇಪನಂಗಳನಟ್ಟುವುದೆಂದಟ್ಟುವುದುಂ ತಮ್ಮನುಪರೋಧಕ್ಕಾಱದೆ ಸೈರಂಧ್ರಿಯಂ ಪೋಗಲ್ವೇೞ್ವುದುಮಾಕೆಯವನ ಮನದ ಪೞುವಗೆಯನಱಿಯದಂತೆಗೆಯ್ವೆನೆಂದು-
ವಚನ:ಪದವಿಭಾಗ-ಅರ್ಥ:ಎಂದು ಸೈರಂಧ್ರಿಯಂ ನೋಡಿ ಸೈರಿಸಲಾಱದೆ (ಸಹಿಸಲಾರದೆ) ಸಿಂಹಬಲನು ಅಂತು (ಸಿಂಹಬಲನು ಆ ರೀತಿ) ಅನಂಗ ಮತ್ತಮಾತಂಗ ಕೋಳಾಹಳೀ ಕೃತ ಅಂತರಂಗನಾಗಿ (ಮನ್ಮಥನೆಂಬ ಮದವೇರಿದ ಆನೆಯಿಂದ ಗಲಭೆಯುಳ್ಳ ಮನಸ್ಸುಳ್ಳವನಾಗಿ) ತಮ್ಮಕ್ಕನನು ಈಕೆ ಯಾರ್ಗೆಂದು ಬೆಸಗೊಂಡೊಡೆ (ತಮ್ಮ ಅಕ್ಕನನ್ನು ಈಕೆ ಯಾರವಳು ಎಂದು ಕೇಳಿದಾಗ,) ಆತನ ಸೋಲ್ತ ಕಣ್ಣ ಅಱಿದು ಈಕೆ ಸಾಮಾನ್ಯ ವನಿತೆಯಲ್ಲಿವಳ್ ಗಂಧರ್ವವನಿತೆ (ಅವನ ಮೋಹಪರವಶವಾದ ಕಣ್ಣನ್ನು ತಿಳಿದು ಈಕೆಯು ಸಾಮಾನ್ಯ ಸ್ತ್ರೀಯಲ್ಲ, ಇವಳು ಗಂಧರ್ವಪತ್ನಿ) ಎನ್ನೊಳು ಆದ ಮಚ್ಚುಂ ಮೋಹಮುಂ ಕಾರಣಮಾಗಿರ್ಪಳು ಎಂಬುದುಂ (ನನ್ನಲ್ಲಾದ ಮೆಚ್ಚಿಗೆಯಿಂದಲೂ ಪ್ರೀತಿಯಿಂದಲೂ ಇಲ್ಲಿ ಇದ್ದಾಳೆ ಎಂದಾಗ) ಆ ಮಾತಿನೊಳ್ ಬೇಟಂ ಅಗ್ಗಳಿಸೆ(ಆ ಮಾತಿನಿಂದ ಅವನ ಪ್ರೀತಿಯೂ ಮೋಹವೂ ಮತ್ತೂ ಅಧಿಕವಾಗಲು,) ನಿಜ ನಿವಾಸಕ್ಕೆ ಬಂದು(ತನ್ನ ಮನೆಗೆ ಬಂದು) ಅಕ್ಕನೆ ಎನಗೆ ತನ್ನ ಘಟ್ಟಿವಳ್ತಿಯಂ ಕೆಯ್ಯೊಳು (ಅಕ್ಕನನ್ನು ತನ್ನ ಗಂಧ ಅರೆಯುವವಳ ಕಯ್ಯಲ್ಲಿ) ಅಪೂರ್ವ ವಿಲೇಪನಂಗಳನು ಅಟ್ಟುವುದೆಂದು ಅಟ್ಟುವುದುಂ(ಅಪೂರ್ವವಾದ ಸುಗಂಧದ್ರವ್ಯವನ್ನು ಕಳುಹಿಸಿಕೊಡುವುದು ಎಂದು ದೂತರನ್ನು ಕಳಿಸಿದಾಗ,) ತಮ್ಮನ ಉಪರೋಧಕ್ಕಾಱದೆ (ತಮ್ಮನ ಒತ್ತಾಯಕ್ಕೆ ತಡೆಯಲಾರದೆ) ಸೈರಂಧ್ರಿಯಂ ಪೋಗಲ್ವೇೞ್ವುದುಂ (ತಮ್ಮನ ಒತ್ತಾಯಕ್ಕೆ ತಡೆಯಲಾರದೆ ಸೈರಂಧ್ರಿಯನ್ನು ಹೋಗಲು ಹೇಳಲು,) ಆಕೆಯು ಅವನ ಮನದ ಪೞುವಗೆಯನು (ಕೆಟ್ಟಬುದ್ಧಿಯನ್ನು) ಅಱಿಯದೆ ಅಂತೆ ಗೆಯ್ವೆನೆಂದು (ಅವಳು ಅವನ ಮನಸ್ಸಿನ ಕೆಟ್ಟಬುದ್ಧಿಯನ್ನು ತಿಳಿಯದೆ ಹಾಗೆಯೇ ಮಾಡುವೆನೆಂದು)-
ವಚನ:ಅರ್ಥ:ಎಂದು (ಕೀಚಕನು ಹಾಗೆ ನಿಶ್ಚಯಿಸಿ,) ಸೈರಂಧ್ರಿಯನ್ನು ನೋಡಿ ಸಹಿಸಲಾರದೆ ಸಿಂಹಬಲನು ಆ ರೀತಿ ಮನ್ಮಥನೆಂಬ ಮದವೇರಿದ ಆನೆಯಿಂದ ಗಲಭೆಯುಳ್ಳ ಮನಸ್ಸುಳ್ಳವನಾಗಿ ತಮ್ಮ ಅಕ್ಕನನ್ನು ಈಕೆ ಯಾರವಳು ಎಂದು ಕೇಳಿದಾಗ, ಸುದೇಷ್ಣೆಯು ಅವನ ಮೋಹಪರವಶವಾದ ಕಣ್ಣನ್ನು ತಿಳಿದು ಈಕೆಯು ಸಾಮಾನ್ಯಸ್ತ್ರೀಯಲ್ಲ, ಇವಳು ಗಂಧರ್ವಪತ್ನಿ ; ನನ್ನಲ್ಲಾದ ಮೆಚ್ಚಿಗೆಯಿಂದಲೂ ಪ್ರೀತಿಯಿಂದಲೂ ಇಲ್ಲಿ ಇದ್ದಾಳೆ ಎಂದಾಗ, ಆ ಮಾತಿನಿಂದ ಅವನ ಪ್ರೀತಿಯೂ ಮೋಹವೂ ಮತ್ತೂ ಅಧಿಕವಾಗಲು, ತನ್ನ ಮನೆಗೆ ಬಂದು, ಅಕ್ಕನನ್ನು ತನ್ನ ಗಂಧ ಅರೆಯುವವಳ ಕಯ್ಯಲ್ಲಿ ಅಪೂರ್ವವಾದ ಸುಗಂಧದ್ರವ್ಯವನ್ನು ಕಳುಹಿಸಿಕೊಡುವುದು ಎಂದು ದೂತರನ್ನು ಕಳಿಸಿದಾಗ, ತಮ್ಮನ ಒತ್ತಾಯಕ್ಕೆ ತಡೆಯಲಾರದೆ ಸೈರಂಧ್ರಿಯನ್ನು ಹೋಗಲು ಹೇಳಲು, ಅವಳು ಅವನ ಮನಸ್ಸಿನ ಕೆಟ್ಟಬುದ್ಧಿಯನ್ನು ತಿಳಿಯದೆ ಹಾಗೆಯೇ ಮಾಡುವೆನೆಂದು- (ಅವನ ಅರಮನೆಗೆ ಹೋದಳು)
ಚಂ|| ಸ್ಮರನರಲಂಬು ಕೈಬರ್ದುಕಿ ಬರ್ಪವೊಲೊಯ್ಯನೆ ಬಂದು ನಿಂದ ಸುಂ
ದರಿಯನೊಱಲ್ದು ಸಿಂಹಬಳನಂತಿರು ಮಾಸಿದೆಯಾದೆ ಮೇಣುಡಲ್|
ತರಿಪೆನೆ ತಂಬುಲಂಬಿಡಿ ಮನೋಜಶಿಖಾಳಿಗಳೞ್ವೆ ಮುನ್ನಮೆ
ನ್ನುರಿವೆರ್ದೆ ಕಂಡು ನಿನ್ನನಿನಿಸಾಱಿದುದಂಬುಜಲೋಲಲೋಚನೇ|| ೬೪ ||
ಪದ್ಯ-೦೬೪:ಪದವಿಭಾಗ-ಅರ್ಥ:ಸ್ಮರನ ಅರಲಂಬು ಕೈಬರ್ದುಕಿ ಬರ್ಪವೊಲ್ ಒಯ್ಯನೆ ಬಂದು ನಿಂದ (ಮನ್ಮಥನ (ಅಲರ್ =ಹೂವು, ಅಂಬು ಬಾಣ, ಅಲರಂಬು, ಮನ್ಮಥನ ಬಾಣ)ಪುಷ್ಪಬಾಣವೇ ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ ಮೆಲ್ಲಗೆ ಬಂದು ನಿಂತ) ಸುಂದರಿಯನು ಒಱಲ್ದು (ಒಲಿದು- ಸ್ನೇಹದಿಂದ) ಸಿಂಹಬಳನು ಅಂತೆ ಇರು (ಆ ಸುಂದರಿಯನ್ನು ಸಿಂಹಬಲನು ಪ್ರೀತಿಯಿಂದ ಎಲ್ಲಿ, ಹಾಗೆಯೇ ಇರು), ಮಾಸಿದೆಯಾದೆ (ಮಲಿನವಾಗಿದ್ದೀಯಲ್ಲ!) ಮೇಣ್ ಉಡಲ್ ತರಿಪೆನೆ (ಮತ್ತೆ ಉಡುವುದಕ್ಕೆ ಹೊಸ- ವಸ್ತ್ರವನ್ನು ತರಿಸಲೇ?), ತಂಬುಲಂಬಿಡಿ (ತಾಂಬೂಲವನ್ನು ಹಿಡಿ ತೆಗೆದುಕೊ,) ಮನೋಜ ಶಿಖಾಳಿಗಳ ಅೞ್ವೆ (ಮನ್ಮಥನ ಬಾಣಜ್ವಾಲೆಗಳ ಸಮೂಹ ಸುಡಲು) ಮುನ್ನಮೆ ಎನ್ನುರಿವ ಎರ್ದೆ ಕಂಡು ನಿನ್ನನು (ನನ್ನ ಉರಿಯುವ ಎದೆಯು ನಿನ್ನನ್ನು ನೋಡಿ) ಇನಿಸು ಆಱಿದುದು ಅಂಬುಜಲೋಲಲೋಚನೇ (ಹೇ ಕಮಲದಂತಿರುವ ಚಂಚಲ ಕಣ್ಣಿನವಳೇ ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು.) ಎಂದನು ಕೀಚಕ|
ಪದ್ಯ-೬೪:ಅರ್ಥ: ಮನ್ಮಥನ ಪುಷ್ಪಬಾಣವೇ ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ ಮೆಲ್ಲಗೆ ಬಂದು ನಿಂತ ಆ ಸುಂದರಿಯನ್ನು ಸಿಂಹಬಲನು ಪ್ರೀತಿಯಿಂದ ನೋಡಿ ಹಾಗೆಯೇ ಇರು, ಮಲಿನವಾಗಿದ್ದೀಯಲ್ಲ!, ಉಡುವುದಕ್ಕೆ ವಸ್ತ್ರವನ್ನು ತರಿಸಲೇ? ತಾಂಬೂಲವನ್ನು ಹಿಡಿ ತೆಗೆದುಕೊ, ಮೊದಲು ಮನ್ಮಥನ ಬಾಣಗಳ ಸಮೂಹವು ಸುಡುತ್ತಿರಲು, ಹೇ ಕಮಲದಂತಿರುವಚಂಚಲಮಣ್ನಿವಳೇ ನನ್ನ ಉರಿಯುವ ಎದೆಯು ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು.(ಎಂದನು ಕೀಚಕ)
ಕಂ|| ಪರೆದ ಕುರುಳಲುಗೆ ಘಟ್ಟಿಯ
ನರೆಯುತ್ತುಂ ನಾಣ್ಚಿ ತೆಗೆದು ನೋೞ್ಪುದುಮೆನ್ನಂ|
ಸ್ಮರ ಕುಳಿಕಾಗ್ನಿಯೆ ಕೊಂಡಂ
ತಿರೆ ಕೊಂಡುದು ನೋಡ ನಿನ್ನ ನೋಡಿದ ನೋಟಂ|| ೬೫||
ಪದ್ಯ-೬೫:ಪದವಿಭಾಗ-ಅರ್ಥ:ಪರೆದ ಕುರುಳು ಅಲುಗೆ ಘಟ್ಟಿಯನ ಅರೆಯುತ್ತುಂ (ಗಂಧವನ್ನು ಅರೆಯುತ್ತಿರುವಾಗ ನಿನ್ನ ಚದುರಿದ ಮುಂಗುರುಳು ಅಲುಗುತ್ತಾ) ನಾಣ್ಚಿ ತೆಗೆದು ನೋೞ್ಪುದು ಎನ್ನಂ(ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡುವುದು.) ಸ್ಮರ ಕುಳಿಕಾಗ್ನಿಯೆ (ಕುಳಿಕ / ಕುಲಿಕ -ಎಂಟು ವಿಷಸರ್ಪಗಳಲ್ಲಿ ಒಂದು) ಕೊಂಡಂತಿರೆ ಕೊಂಡುದು ನೋಡ (ಮನ್ಮಥನೆಂಬ/ ಕಾಮವೆಂಬ ಸರ್ಪದ ವಿಷಾಗ್ಮಿಯೇ ಸುಟ್ಟ ಹಾಗೆ ಸುಟ್ಟಿತು ನೋಡು) ನಿನ್ನ ನೋಡಿದ ನೋಟಂ (ನೋಡಿದ ಆ ನಿನ್ನ ನೋಟ!)
ಪದ್ಯ-೬೫:ಅರ್ಥ:ಕೀಚಕ ಹೇಳಿದ, ನೀನು ಗಂಧವನ್ನು ಅರೆಯುತ್ತಿರುವಾಗ ನಿನ್ನ ಚದುರಿದ ಮುಂಗುರುಳು ಅಲುಗುತ್ತಾ ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡುವುದು. ನೋಡಿದ ಆ ನಿನ್ನ ನೋಟ, ನನ್ನನ್ನು ಮನ್ಮಥನೆಂಬ ಸರ್ಪದ ವಿಷಾಗ್ಮಿಯೇ ಸುಟ್ಟ ಹಾಗೆ ಸುಟ್ಟಿತು ನೋಡು!
ಮ|| ಮದನಾಸ್ತ್ರಂ ಕರ ಸಾಣೆಗಾಣಿಸಿದುದೆಂಬಂತಾಗೆ ನಿನ್ನೊಂದು ಕಂ
ದಿದ ಮೆಯ್ಯೆನ್ನಯ ತೋಳೊಳೊಂದೆ ಸಿರಿಯಂ ನೀನುಯ್ದು ತೊೞ್ತಾಳ್ದು ರಾ|
ಗದಿನೆನ್ನೊಳ್ ಸುಕಮಿರ್ಪುದೆನ್ನ ನುಡಿಯಂ ನೀಂ ಕೇಳ್ದುಮೊಂದಂಚೆಯಂ
ಪೊದೆಯೊಂದಂಚೆಯನುಟ್ಟ ನಿನ್ನಿರವಿದೇನಂಭೋಜಪತ್ರೇಕ್ಷಣೇ|| ೬೬ ||
ಪದ್ಯ-೬೬:ಪದವಿಭಾಗ-ಅರ್ಥ:ಮದನಾಸ್ತ್ರಂ ಕರ ಸಾಣೆಗಾಣಿಸಿದುದು ಎಂಬಂತೆ ಆಗೆ (ಮದನನ ಬಾಣವು ಅತಿಯಾಗಿ ಹರಿತಮಾಡಿ ಮಸೆದಂತೆ ಆಗಲು) ನಿನ್ನೊಂದು ಕಂದಿದ ಮೆಯ್ಯೆ ಎನ್ನಯ ತೋಳೊಳು ಒಂದಿ (ನಿನ್ನ ಕಂದಿದ ಶರೀರವು ನನ್ನ ತೋಳಿನಲ್ಲಿ ಸೇರಿ) ಸಿರಿಯಂ ನೀನು ಉಯ್ದು ತೊೞ್ತಾಳ್ದು (ನನ್ನ ಈ ಐಶ್ವರ್ಯವನ್ನು ತೆಗೆದುಕೊಂಡು ನಿನ್ನ ತೊತ್ತನ್ನಾಗಿನ ಮಾಡಿಕೊ) ರಾಗದಿಂ ಎನ್ನೊಳ್ ಸುಕಮಿರ್ಪುದು; (ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು) ಎನ್ನ ನುಡಿಯಂ ನೀಂ ಕೇಳ್ದುಂ ಒಂದಂಚೆಯಂ ಪೊದೆಯೆ (ನನ್ನ ಮಾತನ್ನು ಕೇಳಿಯೂ, ಒಂದೇ ವಸ್ತ್ರ ಹೊದೆಯಲು,) ಒಂದು ಅಂಚೆಯನು ಉಟ್ಟ (ಒಂದೇ ವಸ್ತ್ರ ಉಡಲು- ಬಡತನ ಏಕೆ?) ನಿನ್ನ ಇರವು ಇದೇನ ಅಂಭೋಜಪತ್ರೇಕ್ಷಣೇ (ಈ ನಿನ್ನ ಬಡತನದ ಇರವು ಇದೇನು ಕಮಲದಳದಂತೆ ಕಣ್ಣುಳ್ಳವಳೇ? )|
ಪದ್ಯ-೬೬:ಅರ್ಥ:ಮದನನ ಬಾಣವು ಅತಿಯಾಗಿ ಹರಿತಮಾಡಿ ಮಸೆದಂತೆ ಆಗಲು. ನಿನ್ನ ಕಂದಿದ ಶರೀರವು ನನ್ನ ತೋಳಿನಲ್ಲಿ ಸೇರಿ ನನ್ನ ಈ ಐಶ್ವರ್ಯವನ್ನು ತೆಗೆದುಕೊಂಡು ನಿನ್ನ ತೊತ್ತನ್ನಾಗಿ ನನ್ನ ಮಾಡಿಕೊ, ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು. ನನ್ನ ಮಾತನ್ನು ಕೇಳಿಯೂ, ಒಂದು ವಸ್ತ್ರ ಹೊದೆಯಲು, ಒಂದೇ ವಸ್ತ್ರ ಉಡಲು- ಬಡತನ ಏಕೆ? ಈ ನಿನ್ನ ಬಡತನದ ಇರವು, ದುರವಸ್ಥೆಯಿದೇನು? ಕಮಲದಳದಂತೆ ಕಣ್ಣುಳ್ಳವಳೇ! (ಬಡತನ ಏಕೆ? ನೀನು ಒಪ್ಪಿದರೆ ನನ್ನ ಐಶ್ವರ್ಯವನ್ನೆಲ್ಲಾ ನಿನಗೆ ಕೊಡಲು ಸಿದ್ಧನು, ಎಂದರ್ಥ)
ಕಂ|| ಬಿಗಿದೊಲೆದ ನಿನ್ನ ಮೊಲೆಗಳ
ಮೃಗಮದದ ಪುಳಿಂಚುಗಳ್ ಪಗಿಲ್ತಿರಲೆಡೆಯಾ|
ದಗಲುರಮನೆನಗೆ ಪಡೆದಜ
ನೊಗಸುಗಮಲ್ತೆಲಗೆ ನಿನ್ನನೆನಗೆಯೆ ಪಡೆದಂ|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಬಿಗಿದ ಒಲೆದ ನಿನ್ನ ಮೊಲೆಗಳ ಮೃಗಮದದ ಪುಳಿಂಚುಗಳ್ ಪಗಿಲ್ತಿರಲು (ಬಿಗಿದುಕೊಂಡು ಪಕ್ಕಕ್ಕೆ ಒಲೆದು ಹೊರಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಹನಿಗಳು/ ಗುಳ್ಳೆಗಳು ಅಂಟಿಕೊಂಡಿರುವ,) (ಅದಕ್ಕೆ) ಎಡೆಯಾದ ಅಗಲ ಉರಮನು ಎನಗೆ ಪಡೆದ ಅಜನು (ಅದಕ್ಕೆ ಇರಲು ತಾಣವಾದ ನನ್ನ ಎದೆಯನ್ನು ಬ್ರಹ್ಮನು ವಿಶಾಲವಾಗಿ) ಒಗಸುಗಮಲ್ತು(ಅತಿಶಯವಲ್ಲ) ಎಲಗೆ (ಎಲೆ ಸುಂದರಿ) ನಿನ್ನನು ಎನಗೆಯೆ ಪಡೆದಂ (ನಿನ್ನನು ನನಗಾಗಿಯೇ ಸೃಷ್ಟಿಸಿದನು, ಇದು ಅತಿಶಯವಲ್ಲ.)
ಪದ್ಯ-೬೭:ಅರ್ಥ: ಬಿಗಿದುಕೊಂಡು ಪಕ್ಕಕ್ಕೆ ಒಲೆದು ಹೊರಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಗುಳ್ಳೆಗಳು ಅಂಟಿಕೊಂಡಿರುವ ಅದಕ್ಕೆ ಇರಲುತಾಣವಾದ ನನ್ನ ಎದೆಯನ್ನು ಬ್ರಹ್ಮನು ವಿಶಾಲವಾಗಿ ಸೃಷ್ಟಿಸಿದ್ದಾನೆ. ಎಲೆ ಸುಂದರಿ ನಿನ್ನನ್ನು ಬ್ರಹ್ಮನು ನನಗಾಗಿಯೇ ಸೃಷ್ಟಿಸಿದನು, ಇದು ಅತಿಶಯವಲ್ಲ.
ಕಂ|| ಎನಗರಸಿಯಾಣೆ ನಿನ್ನೊಡ
ನೆನಗೇಗೆಟ್ಟಪುದಿದೆಂದು ರೋಡಾಡಲ್ ಕೆ|
ಮ್ಮನೆ ನುಡಿದೊಡೆನ್ನ ಕಣ್ಗಂ
ಮನಕ್ಕೆ ವಂದಿರ್ದ ನಿನ್ನೊಳೆನಗೆರಡುಂಟೇ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ಎನಗೆ ಅರಸಿಯಾಣೆ (ನನಗೆ ರಾಣಿಯಾದ ಸುದೇಷ್ಣೆಯಾಣೆ.) ನಿನ್ನೊಡನೆ ಎನಗೆ ಏಗೆಟ್ಟಪುದು ಇದು ಎಂದು ರೋಡಾಡಲ್ (ನಿನ್ನೊಡನೆ ಪರಿಹಾಸ್ಯ ಮಾಡಲು ನನಗೆ ಯಾಕಾಗಿ ಕೆಡುಕು ಮಾಡಬೇಕು? ಪರಿಹಾಸ್ಯ ಮಾಡುವುದಕ್ಕಲ್ಲ) ಕೆಮ್ಮನೆ ನುಡಿದೊಡೆ ಎನ್ನ ಕಣ್ಗಂ ಮನಕ್ಕೆ ವಂದಿರ್ದ ನಿನ್ನೊಳು ಎನಗೆ ಎರಡುಂಟೇ(ಮೋಸಮಾಡುವುದುಂಟೇ)
ಪದ್ಯ-೬೮:ಅರ್ಥ: ರಾಣಿಯಾದ ಸುದೇಷ್ಣೆಯಾಣೆ. ಇಂದು ನಾನು ಸುಮ್ಮನೆ ನಿನ್ನೊಡನೆ ಹೇಳಿದರೆ ಆದೀತೇ?, ನನ್ನ ಕಣ್ನಿಗೂ ಮನಸ್ಸಿಗೂ ಒಪ್ಪಿಗೆಯಾಗಿರುವ ನಿನ್ನಲ್ಲಿ ನನಗೆ (ಕಪಟವುಂಟೇ?) ಮೋಸಮಾಡುವುದುಂಟೇ?
ಬಾಯೞಿದೆನಿತೆರೆದೊಡಮಾ
ಹಾಯೆನ್ನಯ ಕರಮೆ ಮಱುಗೆ ಮೆಯ್ವಿಡಿದುರಿವೆ|
ನ್ನೀ ಯೆರ್ದೆಯನಾಱಿಸಲ್ ನೀಂ
ಬಾಯೊಳ್ದಂಬುಲಮನಪ್ಪೊಡಂ ದಯೆಗೆಯ್ವೋ|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ಬಾಯೞಿದು ಎನಿತೆರೆದೊಡಂ ಆಹಾ ಯೆನ್ನಯ (ಬಾಯಿಸೋಲುವಷ್ಟು ಬೇಡಿದರೂ ಆಹಾ! ಎಂದು ಮೆಚ್ಚಲಾರೆಯಲ್ಲ!) ಕರಮೆ ಮಱುಗೆ (ಬಹಳ ವ್ಯಥೆಪಟ್ಟು ) ಮೆಯ್ವಿಡಿದು ಉರಿವ ಎನ್ನ ಈ ಯೆರ್ದೆಯನು ಆಱಿಸಲ್ (ದೇಹವನ್ನು ವ್ಯಾಪಿಸಿ ಉರಿಯುತ್ತಿರುವ ನನ್ನ ಎದೆಯನ್ನು ಆರಿಸಲು) ನೀಂ ಬಾಯೊಳ್ ತಂಬುಲಮನಪ್ಪೊಡಂ ದಯೆಗೆಯ್ವೋ (ನಿನ್ನ ಬಾಯಿ ತಾಂಬುಲವನ್ನಾದರೂ ದಯಮಾಡಿ ಕೊಡುವೆಯೋ!)
ಪದ್ಯ-೬೯:ಅರ್ಥ: ಬಾಯಿಸೋಲುವಷ್ಟು ಬೇಡಿದರೂ ಅಯ್ಯೋ ಎಂದು ಹೇಳಲಾರೆಯಲ್ಲ. ಬಹಳ ವ್ಯಥೆಪಟ್ಟು ದೇಹವನ್ನು ವ್ಯಾಪಿಸಿ ಉರಿಯುತ್ತಿರುವ ನನ್ನ ಎದೆಯನ್ನು ಆರಿಸಲು/ ಸಮಾಧಾನಮಾಡಲು ನಿನ್ನ ಬಾಯಿ ತಾಂಬುಲವನ್ನಾದರೂ ದಯಮಾಡಿ ಕೊಡುವೆಯೋ!
ವ|| ಎಂದು ಮತ್ತೆಮೆನಿತಾನುಂ ತೆಱದ ಲಲ್ಲೆಯಿನಳಿಪಂ ತೋಱಿ ಬಾಯೞಿದು ತನ್ನ ನುಡಿಗಳಳಿಪಿಳಿವೋಗೆ ಸೈರಿಸಲಾಱದೆ ಪಿಡಿವುದುಂ ಪಾಂಚಾಲರಾಜತನೂಜೆಯಿಂತೆಂದಳ್-
ವಚನ:ಪದವಿಭಾಗ-ಅರ್ಥ: ಎಂದು ಮತ್ತೆಂ ಎನಿತಾನುಂ ತೆಱದ ಲಲ್ಲೆಯಿಂ ಅಳಿಪಂ ತೋಱಿ (ಮತ್ತೆ ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ) ಬಾಯೞದು (ಬಾಯಿ ಸೋಲುವಷ್ಟು ಗೋಗರೆದು) ತನ್ನ ನುಡಿಗಳ ಅಳಿಪಿ ಇಳಿವೋಗೆ (ತನ್ನ ಮಾತುಗಳ ಬಯಕೆಯು ತಿರಸ್ಕೃತವಾಗಲು) ಸೈರಿಸಲಾಱದೆ ಪಿಡಿವುದುಂ (ಸಹಿಸಲಾರದೆ ಕೀಚಕನು ಅವಳನ್ನು ಹಿಡಿಕೊಳ್ಳಲು) ಪಾಂಚಾಲರಾಜತನೂಜೆ ಯಿಂತೆಂದಳ್ (ದ್ರೌಪದಿಯು ಹೀಗೆಂದಳು)-
ವಚನ:ಅರ್ಥ:ಎಂದು ಮತ್ತೆ ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ ಬಾಯಿ ಸೋಲುವಷ್ಟು ಗೋಗರೆದು ತನ್ನ ಮಾತುಗಳ ಬಯಕೆಯು ತಿರಸ್ಕೃತವಾಗಲು ಸಹಿಸಲಾರದೆ ಕೀಚಕನು ಅವಳನ್ನು ಹಿಡಿಕೊಳ್ಳಲು, ದ್ರೌಪದಿಯು ಹೀಗೆಂದಳು-
ಮ|| ಸ್ರ|| ನುಡಿಯಲ್ಬೇಡೆನ್ನೊಳಿಂತಪ್ಪಳಿಪಿನ ನುಡಿಯಂ ನಿನ್ನ ಮಾತಿಂಗೆ ಚಿ ಮೆ
ಳ್ಪಡುವಂತಪ್ಪಾಕೆಯಲ್ಲೆಂ ಬಿಡು ಗಡ ಬಿಡದಂದೆನ್ನ ಗಂಧರ್ವರಿಂದಂ|
ಮಡಿವಯ್ ನೀನೆಂದೊಂಡಂತಪ್ಪೊಡೆ ಬಿಡೆನೆನಗಂ ಮೇಗುವೇೞ್ದಪ್ಪೆಯಿಲ್ಲಾ
ರ್ಪೊಡೆ ನಿನ್ನಂ ಕಾವ ಗಂಧರ್ವರೆ ಬಿಡಿಸುಗೆ ಪೋಗೆಂದು ಪೊಯ್ದಂ ದುರಾತ್ಮಂ|| ೭೦
ಪದ್ಯ-೭೦:ಪದವಿಭಾಗ-ಅರ್ಥ:ನುಡಿಯಲ್ಬೇಡ ಎನ್ನೊಳು ಇಂತಪ್ಪ ಅಳಿಪಿನ ನುಡಿಯಂ (ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ.) ನಿನ್ನ ಮಾತಿಂಗೆ ಚಿ ಮೆಳ್ಪಡುವಂತಪ್ಪಾಕೆಯಲ್ಲೆಂ (ಚಿ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ) ಬಿಡು ಗಡ (ಬಿಡೋ! ) ಬಿಡದಂದು ಎನ್ನ ಗಂಧರ್ವರಿಂದಂ ಮಡಿವಯ್ (ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುವೆಯೊ) ನೀನೆಂದೊಡೆ ಅಂತಪ್ಪೊಡೆ ಬಿಡೆನು (ನೀನು ಹಾಗೆಂದರೆ ಹಾಗೇ ಆಗಲಿ- ಬಿಡುವುದಿಲ್ಲ.) ಎನಗಂ ಮೇಗುವೇೞ್ದಪ್ಪೆ (ನನಗೂ ಮೋಸದ ಮಾತುಗಳನ್ನು ಹೇಳುತ್ತಿರುವೆ) ಇಲ್ಲ (ಇಲ್ಲವೇ) ಆರ್ಪೊಡೆ ನಿನ್ನಂ ಕಾವ ಗಂಧರ್ವರೆ ಬಿಡಿಸುಗೆ (ಸಾದ್ಯವಾದರೆ ನಿನ್ನನ್ನು ರಕ್ಷಿಸುವ ಗಂಧರ್ವರೆ ಬಿಡಿಸಿಕೊಳ್ಳಲಿ,) ಪೋಗೆಂದು ಪೊಯ್ದಂ ದುರಾತ್ಮಂ (ಹೋಗು ಎಂದು ದುರಾತ್ಮನಾದ ಅವನು ಅವಳನ್ನು ಹೊಡೆದನು. )
ಪದ್ಯ-೭೦:ಅರ್ಥ: ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ. ಚಿ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ. ಬಿಡೋ, ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುವೆಯೊ ಎಂದಳು. ನೀನು ಹಾಗೆಂದರೆ ಹಾಗೇ ಆಗಲಿ- ಬಿಡುವುದಿಲ್ಲ. ನನಗೂ ಮೋಸದ ಮಾತುಗಳನ್ನು ಹೇಳುತ್ತಿರುವೆ; ಸಾದ್ಯವಾದರೆ ನಿನ್ನನ್ನು ರಕ್ಷಿಸುವ ಗಂಧರ್ವರೆ ಬಿಡಿಸಿಕೊಳ್ಳಲಿ, ಹೋಗು ಎಂದು ದುರಾತ್ಮನಾದ ಅವನು ಅವಳನ್ನು ಹೊಡೆದನು.
ವ|| ಪೊಯ್ದೊಡೆ ಬಱುಬಂ ಪೊಯಿಲ್ವೆತ್ತೆಂತೇನುಮನಱಯದೆ ಪರಿಭವಾನಿಲನಿಂ ಶೋಕಾನಲನಿರ್ಮಡಿಸೆ ನಡನಡುಗಿ ಕಾಯ್ಪಿನೊಳ್ ಪಿಡುಗಿ ತಳೋದರಿ ವೃಕೋದರನಲ್ಲಿಗೆ ವಂದು ಕಟ್ಟೇಕಾಂತದೊಳಿಂತೆಂದಳ್-
ವಚನ:ಪದವಿಭಾಗ-ಅರ್ಥ:ಪೊಯ್ದೊಡೆ ಬಱುಬಂ (ಹೊಡೆದಾಗ ದುರ್ಬಲನು) ಪೊಯಿಲ್‍ ವೆತ್ತೆಂತೆ (ಕೂಗಿ ಹೊಯಿಲು ಇಟ್ಟಂತೆ) ಏನುಮನು ಅಱಿಯದೆ (ಏನು ಮಾಡಲೂ ತಿಳಿಯದೆ) ಪರಿಭವ ಅನಿಲನಿಂ (ಅವಮಾನದ ಗಾಳಿಯಿಂದ) ಶೋಕ ಅನಲನು ಇರ್ಮಡಿಸೆ (ದುಖಾಗ್ನಿಯು ಇಮ್ಮಡಿಯಾಗಲು) ನಡನಡುಗಿ ಕಾಯ್ಪಿನೊಳ್ ಪಿಡುಗಿ (ಕೋಪದಿಂದ ನಡುನಡುಗಿ, ಸಿಡಿದು) ತಳೋದರಿ ವೃಕೋದರನಲ್ಲಿಗೆ ವಂದು ( ದ್ರೌಪದಿಯು ಭೀಮನ ಬಳಿಗೆ) ಕಟ್ಟೇಕಾಂತದೊಳ್ ಇಂತೆಂದಳ್-(ಅತ್ಯಂತ ರಹಸ್ಯವಾಗಿ -) ಹೀಗೆಂದು ಹೇಳಿದಳು-
ವಚನ:ಅರ್ಥ:ಹೊಡೆದಾಗ ಪೆಟ್ಟುತಿಂದ ದುರ್ಬಲನುನು ಕೂಗಿಕೊಳ್ಳುವಂತೆ, ಏನು ಮಾಡಲೂ ತಿಳಿಯದೆ ಅವಮಾನದ ಗಾಳಿಯಿಂದ ದುಖಾಗ್ನಿಯು ಇಮ್ಮಡಿಯಾಗಲು, ಕೋಪದಿಂದ ನಡುನಡುಗಿ, ಸಿಡಿದು, ದ್ರೌಪದಿಯು ಭೀಮನ ಬಳಿಗೆ ಬಂದು ಅತ್ಯಂತ ರಹಸ್ಯವಾಗಿ ಹೀಗೆಂದು ಹೇಳಿದಳು-
ಮ||ಸ್ರ|| ಪೆಱನಿಕ್ಕುಂಗೂೞೊಳಂ ಕೀೞಲೊಳಮಳವಿಗೆಟ್ಟಿರ್ಪ ನಿಮ್ಮಿರ್ಪುದರ್ಕಂ
ಮಱುಗುತ್ತಿರ್ಪಳ್ಗೆ ನೋಡಾದೞಲನೆನಗೆ ಕಣ್ಸೋಲದಿಂ ಕೀಚಕಂ ಬಂ|
ದುಱದೆನ್ನಂ ಕಾಡಿ ಕೈಗೆಲ್ದುಗಿದನವನದೊಂದುರ್ಕನೇವೇೞ್ವೆನಿನ್ನೀ
ನಱಿವಯ್ ಪೂಣ್ದೆನ್ನದೊಂದಂ ಪರಿಭವಮನಿದಂ ನೀಗು ನೀಂ ಭೀಮಸೇನಾ|| ೭೧
ಪದ್ಯ-೭೧:ಪದವಿಭಾಗ-ಅರ್ಥ:ಪೆಱನ ಇಕ್ಕುಂಗೂೞೊಳಂ (ಪರರು ಇಕ್ಕುವ ಕೂಳಿನಲ್ಲೂ) ಕೀೞಿಲೊಳಂ ಅಳವಿಗೆಟ್ಟು ಇರ್ಪ (ಕೀಳುಜನರ ಮನೆಯಲ್ಲಿ ಗೌರವವಿಲ್ಲದೆ ಇರುವ) ನಿಮ್ಮ ಇರ್ಪುದರ್ಕಂ ಮಱುಗುತ್ತಿರ್ಪಳ್ಗೆ ನೋಡು ಅದ ಅೞಲನು ಎನಗೆ (ನಿಮ್ಮ ದುಸ್ಥಿತಿಯನ್ನು ನೋಡಿ ದುಃಖಪಡುತ್ತಿರುವ ನನಗೆ ಉಂಟಾದ ದು:ಖವನ್ನು ನೋಡು.) ಕಣ್ಸೋಲದಿಂ ಕೀಚಕಂ ಬಂದು ಉಱದೆ ಎನ್ನಂ ಕಾಡಿ (ನನ್ನನ್ನು ನೋಡಿ ಮೋಹಿಸಿ ಬಂದು, ಸುಮ್ಮನಿರದೆ ಕಾಟಕೊಟ್ಟು) ಕೈಗೆಲ್ದು ಉಗಿದನು (ಕೈಯಿಂದ ಹೊಡೆದು, ಹಿಡಿದು ಎಳೆದಾಡಿದನು) ಅವನದೊಂದು ಉರ್ಕಂ ಏವೇೞ್ವೆಂ (ಅವನ ದೊಂದು ಸೊಕ್ಕನ್ನು ಏನು ಹೇಳಲಿ?) ಇನ್ನು ನೀನು ಅಱಿವಯ್, ಪೂಣ್ದ ಎನ್ನದೊಂದಂ ಪರಿಭವಮನು,(ಇನ್ನು ನೀನು ತಿಳಿದೆಯಲ್ಲವೇ, ಅರಿವಾಯಿತೇ- ನಾನು ಅನುಭವಿಸಿದ ನನ್ನದೊಂದು ಅವಮಾನವನ್ನು.) ಇದಂ ನೀಗು ನೀಂ ಭೀಮಸೇನಾ ()
ಪದ್ಯ-೭೧:ಅರ್ಥ: ಪರರು ಇಕ್ಕುವ ಕೂಳಿನಲ್ಲೂ ಕೀಳುಜನರ ಮನೆಯಲ್ಲಿ ಗೌರವವಿಲ್ಲದೆ ಇರುವ ನಿಮ್ಮ ದುಸ್ಥಿತಿಯನ್ನು ನೋಡಿ ದುಃಖಪಡುತ್ತಿರುವ ನನಗೆ ಉಂಟಾದ ದು:ಖವನ್ನು ನೋಡು. ಕೀಚಕನು ನನ್ನನ್ನು ನೋಡಿ ಮೋಹಿಸಿ ಬಂದು, ಸುಮ್ಮನಿರದೆ ಕಾಟಕೊಟ್ಟು, ಕೈಯಿಂದ ಹೊಡೆದು, ಹಿಡಿದು ಎಳೆದಾಡಿದನು; ಅವನದೊಂದು ಸೊಕ್ಕನ್ನು ಏನು ಹೇಳಲಿ? ಇಷ್ಟನ್ನೂ ನೀನು ತಿಳಿದೆಯಲ್ಲವೇ, ಅರಿವಾಯಿತೇ- ನಾನು ಅನುಭವಿಸಿದ ನನ್ನದೊಂದು ಅವಮಾನವನ್ನು. ಭೀಮಸೇನಾ ಇದನ್ನು ನೀನು ಪರಿಹಾರಮಾಡು, ಎಂದಳು.
ವ|| ಎಂಬುದುಂ ಭೀಮಸೇನನೇದೊಳ್ ಕಣ್ಗಾಣದಿವನೊರ್ವಂ ದುಶ್ಶಾಸನನ ನಂಟನಕ್ಕುಮಾದೊಡೇನಾಯ್ತು-
ವಚನ:ಪದವಿಭಾಗ-ಅರ್ಥ:ಎಂಬುದುಂ ಭೀಮಸೇನು ಏವದೊಳ್ (ಕೋಪದಲ್ಲಿ) ಕಣ್ಗಾಣದ ಇವನೊರ್ವಂ ದುಶ್ಶಾಸನನ ನಂಟನಕ್ಕುಂ ಆದೊಡೇನಾಯ್ತು-
ವಚನ:ಅರ್ಥ:ಭೀಮಸೇನನು ಕೋಪದಿಂದ, ಕುರುಡನಾಗಿರುವ ಇವನು ಮತ್ತೊಬ್ಬ ದುಶ್ಶಾಸನನ ನೆಂಟನಾಗಿರಬೇಕು, ಆದರೇನಾಯ್ತು? ಎಂದನು-
ಕಂ|| ಮುಳಿಸೆಂಬುದೆನಗೆ ಕೌರವ
ರೊಳೆ ಪಿರಿದಾ ಬಲಿದ ಬಯಕೆಯಂ ಮಾದುರದೊಳ್|
ಕಳೆವಂತನ್ನೆಗಮಿವನೊಳ್
ಕಳೆವೆಂ ನಿನ್ನೊಂದು ಮುಳಿಸನಬ್ಜದಳಾಕ್ಷೀ|| ೭೨ ||
ಪದ್ಯ-೭೨:ಪದವಿಭಾಗ-ಅರ್ಥ:ಮುಳಿಸೆಂಬುದು ಎನಗೆ ಕೌರವರೊಳೆ ಪಿರಿದು (ನನಗೆ ಕೌರವರಲ್ಲಿ ಬಹಳ ಸಿಟ್ಟು ಎಂಬುದು ಇದೆ,) ಆ ಬಲಿದ ಬಯಕೆಯಂ (ಮಾ) ಆ ದುರದೊಳ್ ಕಳೆವಂತ ಅನ್ನೆಗಂ (ಆ ಬಲಿತಸಿಟ್ಟಿನ ಬಯಕೆಯನ್ನು ಮಹಾಯುದ್ಧದಲ್ಲಿ ಕಳೆಯುವವರೆಗೆ) ಇವನೊಳ್ ಕಳೆವೆಂ ನಿನ್ನೊಂದು ಮುಳಿಸನಬ್ಜದಳಾಕ್ಷೀ (ಎಲೌ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ)
ಪದ್ಯ-೭೨:ಅರ್ಥ:ನನಗೆ ಕೌರವರಲ್ಲಿ ಬಹಳ ಸಿಟ್ಟು ಎಂಬುದು ಇದೆ. ಆ ಬಲಿತಸಿಟ್ಟಿನ ಬಯಕೆಯನ್ನು ಮಹಾಯುದ್ಧದಲ್ಲಿ ಕಳೆಯುವವರೆಗೆ ನಿನ್ನ ಒಂದು ಸಿಟ್ಟಿನ ಪರಿಹಾರಕ್ಕಾಗಿ, ಎಲೌ ಕಮಲದಳನೇತ್ರೇ ಇವನಲ್ಲಿ ತೀರಿಸಿಕೊಳ್ಳುತ್ತೇನೆ.
ವ|| ಎಂದು ನೀನೀ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ ನೇಸರ್ಪಡಲೊಡಮೆನ್ನಿಂ ಮುನ್ನಮೆ ಪೋಗಿರ್ಪುದಾನಲ್ಲಿಗೆ ವರ್ಪೆನೆಂದಾ ಪಾಣ್ಬನಂ ನಂಬೆ ನುಡಿದಾ ಪೋೞಗೆನ್ನನಲ್ಲಿಗೆ ವರಿಸವಂಗೆ ತಕ್ಕುದನಾನೆ ಬಲ್ಲೆನೆಂದು ನುಡಿದು ಕೞಿಪಲಾ ದ್ರೌಪದಿ ಸಂತಸಂಬಟ್ಟಂತೆಗೆಯ್ವೆನೆಂದು ಪೋಗಿ-
ವಚನ:ಪದವಿಭಾಗ-ಅರ್ಥ:ಎಂದು ನೀನು ಈ ವಿರಾಟನ ನಾಟಕಶಾಲೆಯನೆ ಸಂಕೇತನಿಕೇತನಂ ಮಾಡಿ (ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ತಾಣವನ್ನಾಗಿ ಮಾಡಿಕೊಂಡು) ನೇಸರ್ ಪಡಲೊಡಂ ಎನ್ನಿಂ ಮುನ್ನಮೆ ಪೋಗಿರ್ಪುದು; (ಸೂರ್ಯ ಮುಳುಗಿದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು,) ಆನು ಅಲ್ಲಿಗೆ ವರ್ಪೆನೆಂದು (ನಾನು ಅಲ್ಲಿಗೆ ಬರುತ್ತೇನೆಂದು) ಆ ಪಾಣ್ಬನಂ ನಂಬೆ ನುಡಿದು (ಕಾಮುಕನನ್ನು ನಂಬಿಕೆ ಬರುವಂತೆ ಹೇಳಿ,) ಆ ಪೋೞ್ತಿಂಗೆ ಎನ್ನನು ಅಲ್ಲಿಗೆ ವರಿಸವಂಗೆ (ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು) ತಕ್ಕುದನು ಆನೆ ಬಲ್ಲೆನೆಂದು ನುಡಿದು ಕೞಿಪಲು (ಅವನಿಗೆ ತಕ್ಕುದನ್ನು ಮಾಡಲು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು), ಆ ದ್ರೌಪದಿ ಸಂತಸಂಬಟ್ಟು ಅಂತೆಗೆಯ್ವೆನೆಂದು ಪೋಗಿ (ದ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋಗಿ-)-
ವಚನ:ಅರ್ಥ:ನೀನು ಈ ವಿರಾಟನ ನಾಟಕಶಾಲೆಯನ್ನೇ ರಹಸ್ಯವಾಗಿ ಕೂಡುವ ತಾಣವನ್ನಾಗಿ ಮಾಡಿಕೊಂಡು, ಸೂರ್ಯ ಮುಳುಗಿದ ಕೂಡಲೇ ನಮಗಿಂತ ಮುಂಚೆಯೇ ನೀನು ಹೋಗಿರು; ನಾನು ಅಲ್ಲಿಗೆ ಬರುತ್ತೇನೆಂದು, ಕಾಮುಕನನ್ನು ನಂಬಿಕೆ ಬರುವಂತೆ ಹೇಳಿ, ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು. ಅವನಿಗೆ ತಕ್ಕುದನ್ನು ಮಾಡಲು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು. ದ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋಗಿ-
ಚಂ|| ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈ
ಸೆರೆಯೆನಿಪಂಗರಾಗಮನಿಳೇಶ್ವರವಲ್ಲಭೆಯಟ್ಟಲುಯ್ದೊಡಾ|
ನಱಿಯದೆ ನಿನ್ನೆ ನೋಯಿಸಿದೆನಿಂದೆನಗೆಂಬುದನೆಂಬುದೆಂದು ಕಾ
ಲ್ಗೆಱಗಿದೊಡೊಳ್ಳಿತಾಗೆ ನಿನಗಿಂತಿನಿತೊಂದೊಲವುಳ್ಳೊಡೊಲ್ಲೆನೇ|| ೭೩ |
ಪದ್ಯ-೭೩:ಪದವಿಭಾಗ-ಅರ್ಥ:ಮಱುದೆವಸಂ ಲತಾಲಲಿತೆ ಕೀಚಕನಲ್ಲಿಗೆ ಕಾಮನೊಂದು ಕೈಸೆರೆಯೆನಿಪ ಅಂಗರಾಗಮಂ (ಮರುದಿನ ಲತೆಯಂತೆ ಕೋಮಲವಾದ ದ್ರೌಪದಿಯ ಕಯ್ಯಲ್ಲಿ ಮಹಾರಾಣಿ ಸುದೇಷ್ಣೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು) ನಿಳೇಶ್ವರವಲ್ಲಭೆಯು ಅಟ್ಟಲು (ಮಹಾರಾಣಿ ಸುದೇಷ್ಣೆಯು ಕಳಿಸಲು,) ಉಯ್ದೊಡೆ (ಅದನ್ನು ತೆಗೆದುಕೊಂಡು ಹೋದಾಗ), ಆನ್ ಅಱಿಯದೆ ನಿನ್ನೆ ನೋಯಿಸಿದೆನು (‘ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋಯಿಸಿದೆ.) ಇಂದು ಎನಗೆ ಎಂಬುದನು ಎಂಬುದೆಂದು ಕಾಲ್ಗೆ ಎಱಗಿದೊಡೆ (ಈ ದಿನ ನನಗೆ ಹೇಳಬೇಕಾದುದನ್ನು ಹೇಳು’ ಎಂದು ಅವಳ ಕಾಲಿಗೆ ಬಿದ್ದನು.) ಒಳ್ಳಿತಾಗೆ ನಿನಗೆ ಇತಿನಿತೊಂದು ಒಲವು ಉಳ್ಳೊಡೆ ಒಲ್ಲೆನೇ?(‘ಒಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ?’ ಎಂದಳು)
ಪದ್ಯ-೭೩:ಅರ್ಥ: ಮರುದಿನ ಲತೆಯಂತೆ ಕೋಮಲವಾದ ದ್ರೌಪದಿಯ ಕಯ್ಯಲ್ಲಿ ಮಹಾರಾಣಿ ಸುದೇಷ್ಣೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು ಮಹಾರಾಣಿ ಸುದೇಷ್ಣೆಯು (ಕೀಚಕನಿಗೆ) ಕಳಿಸಲು. ಕೀಚಕನು ದ್ರೌಪದಿಯನ್ನು ಕುರಿತು ‘ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋಯಿಸಿದೆ. ಈ ದಿನ ನನಗೆ ಹೇಳಬೇಕಾದುದನ್ನು ಹೇಳು’ ಎಂದು ಅವಳ ಕಾಲಿಗೆ ಬಿದ್ದನು. ‘ಒಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ?’ ಎಂದಳು.

ಕೀಚಕ ವಧೆ[ಸಂಪಾದಿಸಿ]

ವ|| ಎಂದು ನಂಬೆ ನುಡಿದು ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತಕ್ರಮದೊಳ್ ಕುಱುಪುವೇೞ್ದು ಸೂರ್ಯಾಸ್ತಮಯಸಮಯದೊಳ್ ಭೀಮಸೇನಂಗೆ ತದ್ವೃ ತ್ತಕಮನಱಪಿದೊಡೆ ಬಾಹುಯುದ್ಧಸನ್ನದ್ಧನಾಗಿ ಕಲಿಗಂಟಿಕ್ಕಿ ಗಂಡುಡೆಯುಮನುಟ್ಟು ಮೇಲುದನಿೞಯೆ ಮುಸುಕಿಟ್ಟು ಪೋಗಿ ಗುಣಣೆಯ ಬಾಗಿಲೊಳ್ ದ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೊಳಪೊಕ್ಕು-
ವಚನ:ಪದವಿಭಾಗ-ಅರ್ಥ:ಎಂದು ನಂಬೆ ನುಡಿದು (ನಂಬುವ ಹಾಗೆ ಮಾತನಾಡಿ) ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತ ಕ್ರಮದೊಳ್ ಕುಱುಪುವೇೞ್ದು (ಗುರುತು ಹೇಳಿ) ಸೂರ್ಯಾಸ್ತಮಯ ಸಮಯದೊಳ್ ಭೀಮಸೇನಂಗೆ ತದ್ ವೃತ್ತಕಮನು ಅಱಪಿದೊಡೆ (ಆ ಸಮಾಚಾರವನ್ನು ತಿಳಿಸಿದಾಗ) ಬಾಹುಯುದ್ಧ ಸನ್ನದ್ಧನಾಗಿ ಕಲಿಗಂಟಿಕ್ಕಿ (ವೀರಗಚ್ಚೆಯನ್ನು ಹಾಕಿ) ಗಂಡುಡೆಯುಮನುಟ್ಟು ಮೇಲುದನಿೞಿಯೆ ಮುಸುಕಿಟ್ಟು ಪೋಗಿ (ಮೇಲುಹೊದಿಕೆಯನ್ನು ಮುಸುಕುಹಾಕಿಕೊಂಡು ಹೋಗಿ) ಗುಣಣೆಯ (ನಾಟ್ಯಶಾಲೆಯ) ಬಾಗಿಲೊಳ್ ದ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೆ ಒಳಪೊಕ್ಕು-
ವಚನ:ಅರ್ಥ:(ದ್ರೌಪದಿಯು ಕೀಚಕನಿಗೆ), ಎಂದು ನಂಬುವ ಹಾಗೆ ಮಾತನಾಡಿ ಹಿಂದೆಯೇ ಸೂಚಿತವಾದಂತೆ ವಿರಾಟನ ನಾಟಕಶಾಲೆಯನ್ನೇ ಗುರುತು ಹೇಳಿ ಸೂರ್ಯನು ಮುಳುಗುವ ವೇಳೆಯಲ್ಲಿ ಭೀಮಸೇನನಿಗೆ ಆ ಸಮಾಚಾರವನ್ನು ತಿಳಿಸಿದಾಗ, ಭೀಮಸೇನನು ಮಲ್ಲಯುದ್ಧಮಾಡುವುದಕ್ಕೆ ಸಿದ್ಧನಾಗಿ ವೀರಗಚ್ಚೆಯನ್ನು ಹಾಕಿ ಗಂಡಸಿನ ಉಡುಪನ್ನು ಧರಿಸಿ ಮೇಲುಹೊದಿಕೆಯನ್ನು ಮುಸುಕುಹಾಕಿಕೊಂಡು ಹೋಗಿ ದ್ರೌಪದಿಯನ್ನು ನಾಟ್ಯಶಾಲೆಯ ಬಾಗಿಲಿನಲ್ಲಿ ದ್ರೌಪದಿಯನ್ನು ಇರಿಸಿ ವೀರಲಕ್ಷ್ಮಿಯ ವಿವಾಹಮಂಟಪವನ್ನು ಪ್ರವೇಶಮಾಡುವ ಹಾಗೆ ಒಳಹೊಕ್ಕು- (ಒಳಹೊಕ್ಕನು)
ಕಂ|| ಸಿಂಗಬಲನೆಂಬಗುರ್ವಿನ
ಸಿಂಗಮನಸಿಧೇನುಕಿರಣಕೇಸರಮಾಲಾ|
ಸಂಗತಮನಡಸಿ ನುಂಗಲ್
ಸಂಗತಬಲನೊಂದು ಶರಭಮಿರ್ಪಂತಿರ್ದಂ|| ೭೪ ||
ಪದ್ಯ-೭೪:ಪದವಿಭಾಗ-ಅರ್ಥ: ಸಿಂಗಬಲನೆಂಬ ಅಗುರ್ವಿನ ಸಿಂಗಮನು (ಸಿಂಹಬಲನೆಂಬ ಅಹಂಕಾರದ ಸಿಂಹವನ್ನು) ಅಸಿಧೇನು ಕಿರಣ(ಕಠಾರಿಯ ಕಿರಣಗಳೆಂಬ) ಕೇಸರಮಾಲಾ ಸಂಗತಮನು ಅಡಸಿ (ಕೇಸರ ಕೂದಲಿನ ಮಾಲೆಯಿಂದ ಕೂಡಿರುವ ಆ ಕೀಚಕನೆಂಬ ಸಿಂಹವನ್ನು ಅಡಸಿ- ಹಿಡಿದು) ನುಂಗಲ್ ಸಂಗತಬಲನು (ನುಂಗಲು ಶಕ್ತಿಯುಳ್ಳ ಭೀಮನು) ಒಂದು ಶರಭಂ ಇರ್ಪಂತೆ ಇರ್ದಂ (ಶರಭಮೃಗವಿರುವ ಹಾಗಿದ್ದನು.)
ಪದ್ಯ-೭೪:ಅರ್ಥ: . ಕತ್ತಿಯ ಕಿರಣಗಳೆಂಬ ಕೇಸರದ ಮಾಲೆಯಿಂದ ಕೂಡಿರುವ ಸಿಂಹಬಲ (ಕೀಚಕ)ನೆಂಬ ಸಿಂಹವನ್ನು ಹಿಡಿದು ನುಂಗಲು ಭೀಮನು ಶಕ್ತಿಯುತವಾದ ಶರಭಮೃಗವಿರುವ ಹಾಗಿದ್ದನು. (ಶರಭವು ಎಂಟು ಕಾಲಿನ ಆನೆಯ ತಲೆ ಸಿಂಹದ ದೇಹವಿರುವ ಸಿಂಹವನ್ನೂ ಆನೆಯನ್ನೂ ಸೋಲಿಸುವ ಕಾಲ್ಪನಿಕ ಪ್ರಾಣಿ; ಕೆಲವೊಮ್ಮೆ ಸಿಂಹದ ತಲೆಯನ್ನೂ ಸೇರಿಸುವರು. ಕರ್ನಾಟಹದ ಗಂಡಬೇರುಂಡ ಚಿಹ್ನೆಯನ್ನು ಎರಡು ಶರಭಗಳು ಎತ್ತಿ ಹಿಡಿದಿವೆ.)
ಕರ್ನಾಟಕದ ಮುದ್ರೆಯ ಚಹ್ನೆ -ಗಂಡಬೇರುಂಡ ಚಿಹ್ನೆಯನ್ನು ಎರಡು ಶರಭಗಳು ಎತ್ತಿ ಹಿಡಿದಿವೆ

ವ|| ಅನ್ನೆಗಮಿತ್ತ ಕೀಚಕನೆಂಬ ಪಾಣ್ಬಂ-

ವಚನ:ಪದವಿಭಾಗ-ಅರ್ಥ: ಅನ್ನೆಗಮಿತ್ತ ಕೀಚಕನೆಂಬ ಪಾಣ್ಬಂ-
ವಚನ:ಅರ್ಥ: ಆಷ್ಟುಹೊತ್ತಿಗೆ ಈ ಕಡೆ ಕೀಚಕನೆಂಬ ಜಾರನು-
ಉ|| ಅಚ್ಚಿಗದಿಂದೞಲ್ದಿನನಡಂಗದ ಬೇಸಳಂತೆ ನೀರೊಳಂ
ಕಿಚ್ಚಿನೊಳಂ ಪೊರಳ್ದು ಪಗಲಂದಿರುಳಾದೊಡೆ ರಾಜ್ಯಮಾದವೋಲ್|
ಪೆರ್ಚಿ ಮನಕ್ಕೆ ಬಿಚ್ಚತಿಕೆವಂದಿರೆ ನಾಟಕಶಾಲೆವೊಕ್ಕು ವಿ
ದ್ಯುಚ್ಚಪಳಂ ಮನೋಜಪರಿತಾಪದಿನೋಪಳೆಗತ್ತು ಭೀಮನಂ|| ೭೫||
ಪದ್ಯ-೭೫:ಪದವಿಭಾಗ-ಅರ್ಥ: ಅಚ್ಚಿಗದಿಂದ ಅೞಲ್ದು ಇನನು ಅಡಂಗದ ಬೇಸಳಂತೆ (ಕೀಚಕನು, ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರದಿಂದ ಅಳಲ್ದು- ವ್ಯಥೆಪಟ್ಟು) ನೀರೊಳಂ ಕಿಚ್ಚಿನೊಳಂ ಪೊರಳ್ದು (ನೀರಿನಲ್ಲಿಯೂ ಉರಿಯಲ್ಲಿಯೂ ಹೊರಳಾಡಿ) ಪಗಲು ಅಂದು ಇರುಳಾದೊಡೆ (ಹಗಲು ಕಳೆದು ರಾತ್ರಿಯಾದ ತಕ್ಷಣ) ರಾಜ್ಯಮಾದವೋಲ್ ಪೆರ್ಚಿ(ರಾಜ್ಯಪ್ರಾಪ್ತಿಯಾದ ಹಾಗೆ ಹೆಚ್ಚಿ- ಉಬ್ಬಿ ) ಮನಕ್ಕೆ ಬಿಚ್ಚತಿಕೆ ವಂದಿರೆ (ಮನಸ್ಸಿಗೆ ಬಿಚ್ಚುವಿಕೆ ಬಂದಿರಲು, ಹಿಗ್ಗಿರಲು, ಅರಳಿರಲು- ಸಂತೋಷವುಂಟಾಗಿರಲು) ನಾಟಕಶಾಲೆ ವೊಕ್ಕು ವಿದ್ಯುತ್ ಚಪಳಂ ಮನೋಜಪರಿತಾಪದಿನ್ (ಮಿಂಚಿನ ಹಾಗೆ ಚಪಲನಾದ ಕೀಚಕನು) ಓಪಳೆಗತ್ತು ಭೀಮನಂ (ಓಪಳೆ- ಪ್ರಿಯೆ ಗತ್ತು) (ಭೀಮನನ್ನು ಪ್ರಿಯೆಯೆಂದೇ ಭಾವಿಸಿ-)
ಪದ್ಯ-೭೫:ಅರ್ಥ: (ಕೀಚಕನು) ಸೂರ್ಯನು ಇನ್ನೂ ಅಸ್ತಮಯವಾಗದ ಬೇಸರದಿಂದ, ವ್ಯಥೆಪಟ್ಟು, ನೀರಿನಲ್ಲಿಯೂ ಉರಿಯಲ್ಲಿಯೂ ಹೊರಳಾಡಿ ಹಗಲು ಕಳೆದು ರಾತ್ರಿಯಾದ ತಕ್ಷಣ ರಾಜ್ಯಪ್ರಾಪ್ತಿಯಾದ ಹಾಗೆ ಉಬ್ಬಿ ಮನಸ್ಸಿಗೆ ಸಂತೋಷವುಂಟಾಗಿರಲು ನಾಟಕಶಾಲೆಯನ್ನು ಪ್ರವೇಶಿಸಿ ಮಿಂಚಿನ ಹಾಗೆ ಚಪಲನಾದ ಕೀಚಕನು ಕಾಮತಾಪದಿಂದ ಭೀಮನನ್ನು ಪ್ರಿಯೆಯೆಂದೇ ಭಾವಿಸಿ-
ಚಂ|| ನುಡಿಯದೆ ಕೆಮ್ಮನಿರ್ಪಿರವಿದಾವುದು ಕಾರಣಮಾವುದೀ ಮೊಗಂ
ಗುಡದಿರವಿಂತು ಕಣ್ಬಡಿಗರಪ್ಪರೆ ಮಾನಸರಪ್ಪರೆದು ಮೆ|
ಳ್ಪಡೆ ನುಡಿದೆಯ್ದೆವಂದು ಮುಸುಕಂ ತೆಗೆದಾಗಡೆ ಮೇಲೆವಾಯ್ದು ಬ
ಲ್ದಡಿಗನವುಂಕಿ ಬಲ್ದಡಿಗನಂ ಪಿಡಿದೊರ್ಮೆಯೆ ಮಲ್ಲಯುದ್ಧದೊಳ್|| ೭೬ ||
ಪದ್ಯ-೭೬:ಪದವಿಭಾಗ-ಅರ್ಥ:ನುಡಿಯದೆ ಕೆಮ್ಮನಿರ್ಪ ಇರವು ಇದಾವುದು ಕಾರಣಂ ಆವುದು (ಮಾತನಾಡದೆ ಸುಮ್ಮನೆ ಇರುವ ಈ ಸ್ಥಿತಿ ಇದಕ್ಕೆ ಕಾರಣವೇನು?) ಈ ಮೊಗಂಗುಡದೆ ಇರವಿಂತು (ಮುಖವನ್ನು ತೋರಿಸದೇ ಇರುವ ಈ ಸ್ಥಿತಿ ಇಂತು ಏಕೆ?) ಕಣ್ಬಡಿಗರಪ್ಪರೆ (ಕಣ್ಣುಕಟ್ಟುಮಾಡುವರು ಅಪ್ಪರೇ? ಮೋಸಗಾರರಾಗುವುದುಂಟೇ?) ಮಾನಸರಪ್ಪರೆದು ಮೆಳ್ಪಡೆ(ಮನುಷ್ಯರಾದವರು ಕಪಟವೇ) ನುಡಿದು ಎಯ್ದೆವಂದು (ಹೇಳಿ ಸಮೀಪಕ್ಕೆ ಬಂದು) ಮುಸುಕಂ ತೆಗೆದಾಗಡೆ ಮೇಲೆವಾಯ್ದು (ಮುಸುಕನ್ನು ತೆಗೆದ ತಕ್ಷಣ ಮೇಲೆಬಿದ್ದು) ಬಲ್ದಡಿಗನು ಅವುಂಕಿ (ಒತ್ತಿ) ಬಲ್ದಡಿಗನಂ ಪಿಡಿದು (ಬಲುದಾಂಡಿಗನಾದ ಭೀಮನು ಬಲುದಾಂಡಿಗನಾದ ಕೀಚಕನನ್ನು ಒತ್ತಿ ಹಿಡಿದುಕೊಂಡು) ಒರ್ಮೆಯೆ ಮಲ್ಲಯುದ್ಧದೊಳ್ (ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ- )
ಪದ್ಯ-೭೬:ಅರ್ಥ: (ಇದೇನಿದು ಪ್ರಿಯೆ) ಮಾತನಾಡದೆ ಸುಮ್ಮನೆ ಇರುವ ಈ ಸ್ಥಿತಿ ಇದಕ್ಕೆ ಕಾರಣವೇನು? ಮುಖವನ್ನು ತೋರಿಸದೇ ಇರುವ ಈ ಸ್ಥಿತಿ ಇಂತು ಏಕೆ? ಮನುಷ್ಯರಾದವರು ಈ ಸ್ಥಿತಿಯಲ್ಲಿ ಮೋಸಗಾರರಾಗುವುದುಂಟೇ?’ ಎಂದು ಹೇಳಿ ಸಮೀಪಕ್ಕೆ ಬಂದು ಮುಸುಕನ್ನು ತೆಗೆದ ತಕ್ಷಣ ಬಲುದಾಂಡಿಗನಾದ ಭೀಮನು ಬಲುದಾಂಡಿಗನಾದ ಕೀಚಕನನ್ನು ಅಮುಕಿ ಹಿಡಿದುಕೊಂಡು ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ-
ವ|| ಪೋರ್ದು ಮಲ್ಲಾಮಲ್ಲಿಯಾಗೆ ಪಲವುಂ ಗಾಯಗಳೊಳಾಯಂದಪ್ಪದೆ ತನಗವಂ ಸಮಾನಬಳನಪ್ಪುದಱಂ ಪಿರಿದು ಪೊೞ್ತು ಸಂತರ್ಪಿನಂ (?) ಪೋರ್ದು ಬಳೆಯ ಪೇಱನಾನೆ ಮೆಟ್ಟಿದಂತೆ ನುರ್ಚುನೂಱಪ್ಪಿನಮವುಂಕಿ ಪಿಡಿದಡಸಿಯಗುರ್ವು ಪರ್ವೆ ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಮಾಸ್ಪೋಟಿಸಿ ತಾಟಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಪೋರ್ದು (ಹೋರಾಡಿ) ಮಲ್ಲಾಮಲ್ಲಿಯಾಗೆ (ದ್ವಂದ್ವ ಮಲ್ಲಯುದ್ಧವಾಗಲು) ಪಲವುಂ ಗಾಯಗಳೊಳು ಆಯಂದಪ್ಪದೆ ( ಅನೇಕ ಪಟ್ಟುಗಳಲ್ಲಿ ತಂತ್ರಗಳನ್ನು ತಪ್ಪದೆ) ತನಗವಂ ಸಮಾನ ಬಳನಪ್ಪುದಱಿಂ (ತನಗೆ ಅವನು ಸಮಾನಬಲನಾದುದರಿಂದ) ಪಿರಿದು ಪೊೞ್ತು ಸಂತರ್ಪಿನಂ ಪೋರ್ದು(ಬಹಳ ಹೊತ್ತು ಸಮಾನನಾಗಿ ಹೋರಾಡಿ) ಬಳೆಯ ಪೇಱನು ಆನೆ ಮೆಟ್ಟಿದಂತೆ (ಬಳೆಯ ಪೇರು- ಹೇರು- ರಾಶಿಯನ್ನು ಆನೆಯು ತುಳಿದ ಹಾಗೆ ) ನುರ್ಚುನೂಱಪ್ಪಿನಂ ಅವುಂಕಿ (ನುಚ್ಚುನೂರಾಗುವಂತೆ ಅಮುಕಿ) ಪಿಡಿದು ಅಡಸಿಯು ಅಗುರ್ವು ಪರ್ವೆ (ಹಿಡಿದು ಬಿಗಿಯಾಗಿ ಒತ್ತಿ ಭಯವು ಹಬ್ಬಲು) ಬೀಸಿ ಗುಣಣೆಯ ಕಂಭಂಗಳೊಳಂ ಕೇರ್ಗಳೊಳಂ (ಬೀಸಿ ನಾಟ್ಯಶಾಲೆಯ ಕಂಭಗಳಿಗೂ ಗೋಡೆಗಳಿಗೂ) ಮಾಸ್ಪೋಟಿಸಿ ತಾಟಿಸಿದಾಗಳ್- (ದೇಹ ಒಡೆಯುವಂತೆ ಬಡಿದಾಗ)
ವಚನ:ಅರ್ಥ:ಹೋರಾಡಿ ದ್ವಂದ್ವ ಮಲ್ಲಯುದ್ಧವಾಗಲು ಅನೇಕ ಪಟ್ಟುಗಳಲ್ಲಿ ತಂತ್ರಗಳನ್ನು ತಪ್ಪದೆ ತನಗೆ ಅವನು ಸಮಾನಬಲನಾದುದರಿಂದ ಬಹಳ ಹೊತ್ತು ಸಮಾನನಾಗಿ ಕಾದಿ ಬಳೆಯ ರಾಶಿಯನ್ನು ಆನೆಯು ತುಳಿದ ಹಾಗೆ ನುಚ್ಚುನೂರಾಗುವಂತೆ ಅಮುಕಿ ಹಿಡಿದು ಬಿಗಿಯಾಗಿ ಒತ್ತಿ ಭಯವು ಹಬ್ಬಲು, ಬೀಸಿ ನಾಟ್ಯಶಾಲೆಯ ಕಂಭಗಳಿಗೂ ದೇಹ ಒಡೆಯುವಂತೆ ಬಡಿದಾಗ-
ಕಂ|| ಬಿಸುನೆತ್ತರ್ ನೆಣನಡಗೆ
ಲ್ವು ಸಮಸ್ತಂ ಸುರಿಯೆ ಕೈಗೆ ತೊವಲುೞಿಯಲಗು|
ರ್ವಿಸಿದುದು ತೀವಿದ ಗುಳ್ಳೆಯ
ಪಸುಬೆಂಯಂ ಸೋರ್ಚಿದಂತೆ ತನು ಕೀಚಕನಾ|| ೭೭ ||
ಪದ್ಯ-೭೭:ಪದವಿಭಾಗ-ಅರ್ಥ:ಬಿಸುನೆತ್ತರ್ ನೆಣನ್ ಅಡಗು ಎಲ್ವು ಸಮಸ್ತಂ ಸುರಿಯೆ (ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದುಹೋಗಲು) ಕೈಗೆ ತೊವಲು ಉೞಿಯಲು (ಕೈಯಲ್ಲಿ ಚರ್ಮ ಮಾತ್ರ ಉಳಿಯಲು) ಅಗುರ್ವಿಸಿದುದು (ಭಯಂಕರವಾಯಿತು) ತೀವಿದ ಗುಳ್ಳೆಯ ಪಸುಬೆಂಯಂ ಸೋರ್ಚಿದಂತೆ ತನು ಕೀಚಕನಾ (ತುಂಬಿ ಉಬ್ಬಿಕೊಂಡಿದ್ದ ದೇಹವು ಹಸುಬೆಯ ಚೀಲವನ್ನು ಅದರಲ್ಲಿದ್ದ ವಸ್ತುವನ್ನು ಸುರುಗಿದಂತೆ) (ಕೀಚಕನ ದೇಹವು ಭಯಂಕರವಾಯಿತು)
ಪದ್ಯ-೭೭:ಅರ್ಥ: ಬಿಸಿರಕ್ತ, ಕೊಬ್ಬು, ಮಾಂಸ, ಎಲುಬು ಎಲ್ಲವೂ ಸುರಿದುಹೋಗಲು, ಕೈಯಲ್ಲಿ ಚರ್ಮ ಮಾತ್ರ ಉಳಿಯಿತು. (ಪದಾರ್ಥದಿಂದ) ತುಂಬಿ ಉಬ್ಬಿಕೊಂಡಿದ್ದ ಹಸುಬೆಯ ಚೀಲವನ್ನು ಅದರಲ್ಲಿದ್ದ ವಸ್ತುವನ್ನು ಖಾಲಿಮಾಡಿದಂತೆ ಕೀಚಕನ ದೇಹವು ಭಯಂಕರವಾಯಿತು.
ಉ|| ಆಂ ಜಗದೊಳ್ ಬಲಸ್ಥನೆನಿದಿರ್ಚುವರಾರೆನಗೆಂದು ಸೋಲದಿಂ
ಕಂಜದಳಾಕ್ಷಿಯಂ ಪಿಡಿದನೀ ಖಳನೆಂಬೞಲಿಂದಮತ್ತಮಿ|
ತ್ತಂ ಜವನೊಕ್ಕಲಿಕ್ಕಿದೊಡೆ ನಾಟಕಶಾಲೆಯೊಳೆಯ್ದೆ ರಕ್ತ ಪು
ಷ್ಪಾಂಜಳಿಗೆಯ್ದ ಮಾೞ್ಕೆಯವೊಲಿರ್ದುವು ಸೂಸಿದ ಖಂಡದಿಂಡೆಗಳ್|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ: ಆಂ ಜಗದೊಳ್ ಬಲಸ್ಥನೆಂ ಇದಿರ್ಚುವರಾರು ಎನಗೆಂದು ( ಜಗತ್ತಿನಲ್ಲಿ ನಾನೇ ಬಲಿಷ್ಠನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು) ಸೋಲದಿಂ (ಮೋಹದಿಂದ) ಕಂಜದಳಾಕ್ಷಿಯಂ(ವಿಶಾಲಕಣ್ಣಿನ ದ್ರೌಪದಿಯನ್ನು) ಪಿಡಿದನು ಈ ಖಳನೆಂಬ ಅೞಲಿಂದಂ- ಅಳಲು (ಈ ದುಷ್ಟನು ಹಿಡಿದನು ಎಂಬ ದುಖದಿಂದ) ಅತ್ತ ಮಿತ್ತಂ ಜವನು ಒಕ್ಕಲಿಕ್ಕಿದೊಡೆ (ಯಮನು ಆ ಕಡೆ ಈ ಕಡೆಗೆ ಬಡಿದುಹಾಕಲಾಗಿ) ನಾಟಕಶಾಲೆಯೊಳು ಎಯ್ದೆ ರಕ್ತ ಪುಷ್ಪಾಂಜಳಿಗೆಯ್ದ ಮಾೞ್ಕೆಯವೊಲ್ ಇರ್ದುವು ಸೂಸಿದ ಖಂಡದಿಂಡೆಗಳ್ (ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು)
ಪದ್ಯ-೭೮:ಅರ್ಥ: ಜಗತ್ತಿನಲ್ಲಿ ನಾನೇ ಬಲಿಷ್ಠನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು ಮೋಹದಿಂದ ಕಮಲದಳನೇತ್ರೆಯಾದ ದ್ರೌಪದಿಯನ್ನು ಈ ದುಷ್ಟನು ಹಿಡಿದನು ಎಂಬ ದುಖದಿಂದ ಯಮನು ಆ ಕಡೆ ಈ ಕಡೆಗೆ ಬಡಿದುಹಾಕಲಾಗಿ ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು.
ವ|| ಅಂತು ಸಂಧಿ ಸಂಧಿಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನು ಅಶ್ರಮದೊಳೆ ಬಾಣಸಿನ ಮನೆಯೊಳ್ ಬಂದಿರ್ದನಿತ್ತ ದ್ರೌಪದಿಯುಮುಪಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು-
ವಚನ:ಪದವಿಭಾಗ-ಅರ್ಥ: ಅಂತು ಸಂಧಿ ಸಂಧಿಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನು ಶ್ರಮದೊಳೆ (ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ - ಕೊಂದು- 'ಅಧ್ಯಾಹಾರವಾಗಿದೆ') ಬಾಣಸಿನ ಮನೆಯೊಳ್ ಬಂದಿರ್ದನು (ಅಡುಗೆಮನೆಯನ್ನು ಸೇರಿದನು). ಇತ್ತ ದ್ರೌಪದಿಯುಂ ಉಪಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು-
ವಚನ:ಅರ್ಥ:ಹಾಗೆ ಭೀಮನು ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ ಕೊಂದು, ಅಡುಗೆಮನೆಯನ್ನು ಸೇರಿದನು. ಈ ಕಡೆ ದ್ರೌಪದಿಯು ಉಪಾಯದಿಂದ ನಾಟ್ಯಶಾಲೆಯ ಮುಂದುಗಡೆ ನಿಂತುಕೊಂಡು-
ಕಂ|| ಗಂಧರ್ವವನಿತೆಯೆಂ ನಿ
ರ್ಬಂಧಂ ಬೇಡಳಿಪೆ ಸಾವೆಯೆನೆ ಮಾಣದೆ ಕಾ|
ಮಾಂಧಂ ಕೀಚಕನಾಟಿಸಿ
ಗಂಧರ್ವರಿನೞಿದನೆನಗೆ ದೂಱಪ್ಪಿನೆಗಂ|| ೭೯ ||
ಪದ್ಯ-೦೦:ಪದವಿಭಾಗ-ಅರ್ಥ:ಗಂಧರ್ವವನಿತೆಯೆಂ ನಿರ್ಬಂಧಂ ಬೇಡ (ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ;) ಅಳಿಪೆ ಸಾವೆಯೆನೆ (ನನಗೆ ಅಳುಕಿದರೆ ಸಾಯುವೆ ಎನ್ನಲು,) ಮಾಣದೆ ಕಾಮಾಂಧಂ ಕೀಚಕನು (ಬಿಡದೆ ಕಾಮಾಂಧನಾದ ಕೀಚಕನು) ಆಟಿಸಿ (ಬಯಸಿ) ಗಂಧರ್ವರಿಂ ಅೞಿದಂ ಎನಗೆ ದೂಱಪ್ಪಿನೆಗಂ -ದೂರು ಅಪ್ಪುವಹಾಗೆ (ನನಗೆ ಅಪವಾದ ಬರುವಹಾಗೆ ಗಂಧರ್ವರಿಂದ ಮರಣಹೊಂದಿದನು.)
ಪದ್ಯ-೦೦:ಅರ್ಥ: ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ; ನನಗೆ ಅಳುಕಿದರೆ ಸಾಯುವೆ ಎಂದರೂ, ಬಿಡದೆ ಕಾಮಾಂಧನಾದ ಕೀಚಕನು ಬಯಸಿ ನನಗೆ ಅಪವಾದ ಬರುವಹಾಗೆ ಗಂಧರ್ವರಿಂದ ಮರಣಹೊಂದಿದನು.(ಎಂದು ದ್ರೌಪದಿ ಕೂಗಿಕೊಂಡಳು.)
ವ|| ಎಂದು ಗಗ್ಗರಿಕೆಗೊಳ್ವ ಸರಮಂ ಕರ್ಣಪರಂಪರೆಯಂ ಕೇಳ್ದು ಸಿಂಹಬಲನೊಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್ ಕಣ್ಗಾಣದೆಲ್ಲಮೀಡಾಮರ ಡಾಕಿನಿಯಿಂದಮಾದುದೀಕೆಗಮೆಮ್ಮಣ್ಣಂಗಮೊಂದೆ ವಿಧಿಯಂ ಮಾೞ್ತೆಮೆಂದಾಕೆಯಂ ಮುಂದಿಟ್ಟು ಪೋದರಿವನನಿರುಳೊಳೆ ಸಂಸ್ಕರಿಸಲ್ವೇೞ್ಕುಮೆಂದು ಕೊಂಡುಪೋಪಾಗಳಾ ಕಳಕಳಮಂ ಭೀಮಸೇನಂ ಕೇಳ್ದವಂದಿರೊಡನೆ ರೂಪುಗರೆದು ಪೊೞಲಂ ಪೊಱಮಟ್ಟು ಬಱಸಿಡಿಲೆಱಗುವಂತೆ ನಿಜಭುಜಶಿಖರಾಸ್ಫಾಲನಂಗೆಯ್ದು-
ವಚನ:ಪದವಿಭಾಗ-ಅರ್ಥ:ಎಂದು ಗಗ್ಗರಿಕೆಗೊಳ್ವ ಸರಮಂ ಕರ್ಣಪರಂಪರೆಯಂ ಕೇಳ್ದು (ದುಃಖದಿಂದ ಗದ್ಗದಿಸುತ್ತಿರುವ ಕೂಗಿಕೊಳ್ಳುವ ದನಿಯನ್ನು ಕಿವಿಯಿಂದ ಕಿವಿಗೆ ಕೇಳಿ,) ಸಿಂಹಬಲನ್ ಒಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು (ಸಿಂಹಬಲರಾದ ಕೀಚಕನ ಸಹೋದರರು ನೂರುಜನ ಕೀಚಕರು ಓಡಿಬಂದು) ಮುಳಿಸಿನೊಳ್ ಕಣ್ಗಾಣದೆ ಎಲ್ಲಂ ಈ ಡಾಮರ ಡಾಕಿನಿಯಿಂದಂ ಆದುದು ಈಕೆಗಂ ಎಮ್ಮಣ್ಣಂಗಂ ಒಂದೆ ವಿಧಿಯಂ ಮಾೞ್ತೆಮೆಂದು (ಕೋಪದಿಂದ ಕುರುಡರಾಗಿ ಎಲ್ಲವೂ ಈ ಕಷ್ಟಕೊಡುವ ಡಾಕಿನಿಯಿಂದಾಯಿತು, ಇವಳಿಗೂ ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು) ಆಕೆಯಂ ಮುಂದಿಟ್ಟು ಪೋದರು (ಅವಳನ್ನು ಮುಂದಿರಿಸಿಕೊಂಡು ಹೋದರು.) ಇವನನು ಇರುಳೊಳೆ ಸಂಸ್ಕರಿಸಲ್ವೇೞ್ಕುಂ ಎಂದು ಕೊಂಡುಪೋಪಾಗಳ್ (ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ) ಆ ಕಳಕಳಮಂ ಭೀಮಸೇನಂ ಕೇಳ್ದು ಅವಂದಿರೊಡನೆ ರೂಪುಗರೆದು (ಆ ಗಲಭೆಯ ಶಬ್ದವನ್ನು ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು) ಪೊೞಲಂ ಪೊಱಮಟ್ಟು (ಪಟ್ಟಣದಿಂದ ಹೊರಟು) ಬಱಸಿಡಿಲ್ ಎಱಗುವಂತೆ ನಿಜಭುಜಶಿಖರ ಆಸ್ಫಾಲನಂಗೆಯ್ದು (ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು)-
ವಚನ:ಅರ್ಥ:ಎಂದು ದುಃಖದಿಂದ ಗದ್ಗದಿಸುತ್ತಿರುವ ಕೂಗಿಕೊಳ್ಳುವ ದನಿಯನ್ನು ಕಿವಿಯಿಂದ ಕಿವಿಗೆ ಕೇಳಿ, ಸಿಂಹಬಲರಾದ ಕೀಚಕನ ಸಹೋದರರು ನೂರುಜನ ಕೀಚಕರು ಓಡಿಬಂದು ಕೋಪದಿಂದ ಕುರುಡರಾಗಿ ಎಲ್ಲವೂ ಈ ಪಿಶಾಚಿಯಿಂದಾಯಿತು, ಇವಳಿಗೂ ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು, ಅವಳನ್ನು ಮುಂದಿರಿಸಿಕೊಂಡು ಹೋದರು. ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ ಆ ಗಲಭೆಯ ಶಬ್ದವನ್ನು ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು ಪಟ್ಟಣದಿಂದ ಹೊರಟು ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು-
ಮ|| ವನಿತಾಹೇತುವೆ ಕೇತುವಾಯ್ತು ನಿಮಗಂ ಗಾಂಧರ್ವರಿಂದಿಂದು ನಿ
ಮ್ಮ ನಿಷೇಕಂ ನೆರೆದತ್ತು ಸತ್ತಿರೆನುತ್ತುಂ ಪೊಕ್ಕಾರ್ದು ಕಾಳಾಂಬುದ|
ಧ್ವನಿಯಿಂ ಬಾೞೆಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ ಪೊ
ಯ್ದಿನಿಸುಂ ಮಾಣದೆ ನೀಚ ಕೀಚಕನಿಕಾಯ ಧ್ವಂಸನಂ ಮಾಡಿದಂ|| ೮೦
ಪದ್ಯ-೮೦:ಪದವಿಭಾಗ-ಅರ್ಥ:ವನಿತಾಹೇತುವೆ ಕೇತುವಾಯ್ತು ನಿಮಗಂ (ನಿಮಗೂ ಹೆಣ್ಣಿನ ಕಾರಣವೇ ಕೇಡಿನ ಕೇತುಗ್ರಹವಾಯಿತು.) ಗಾಂಧರ್ವರಿಂದ ಇಂದು ನಿಮ್ಮ ನಿಷೇಕಂ ನೆರೆದತ್ತು (ಗಂಧರ್ವರಿಂದ ಈ ದಿನ ನಿಮಗೆ ಪ್ರಸ್ಥವಾಯಿತು.) ಸತ್ತಿರಿ ಎನುತ್ತುಂ ಪೊಕ್ಕು ಆರ್ದು (ಸತ್ತಿರಿ ಎನ್ನುತ್ತ ಹೊಕ್ಕು ಆರ್ಭಟಿಸಿ ) ಕಾಳಾಂಬುದ ಧ್ವನಿಯಿಂ (ಕಾಲಮೇಘದ ಧ್ವನಿಯಿಂದ) ಬಾೞೆಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ (ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ) ಪೊಯ್ದು ಇನಿಸುಂ ಮಾಣದೆ (ಹೊಡೆದು ಸ್ವಲ್ಪವೂ ಬಿಡದೆ) ನೀಚ ಕೀಚಕನಿಕಾಯ ಧ್ವಂಸನಂ (ಮಂ) ಮಾಡಿದಂ (ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು)
ಪದ್ಯ-೮೦:ಅರ್ಥ: ನಿಮಗೂ ಹೆಣ್ಣಿನ ಕಾರಣವೇ ಕೇಡಿನ ಕೇತುಗ್ರಹವಾಯಿತು. ಗಂಧರ್ವರಿಂದ ಈ ದಿನ ನಿಮಗೆ ಪ್ರಸ್ಥವಾಯಿತು. ಸತ್ತಿರಿ; ಎನ್ನುತ್ತ ಹೊಕ್ಕು ಆರ್ಭಟಿಸಿ ಕಾಲಮೇಘದ ಧ್ವನಿಯಿಂದ ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ಹೊಡೆದು ಸ್ವಲ್ಪವೂ ಬಿಡದೆ ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು.
ವ|| ಅಂತಳವಿಗೞಿಯೆ ಕೊರ್ವಿದ ಕೀಚಕವನಮೆಲ್ಲಮೊಂದಿರುಳೊಳೆ ಸಾಹಸ ಭೀಮನುದ್ದಾಮಕೋಪದವದಹನಜ್ವಾಲಾ ಸಹಸ್ರಂಗಳಿನಳ್ಕಿಮೆಳ್ಕಿದಂತಪ್ಪುದುಂ ನೇಸಱು ಮೂಡಿದಾಗಳಾ ಪಡೆಮಾತನಿರ್ದರಿರ್ದಲ್ಲಿಯೆ ಕೇಳ್ದು-
ವಚನ:ಪದವಿಭಾಗ-ಅರ್ಥ:ಅಂತು ಅಳವಿಗೞಿಯೆ ಕೊರ್ವಿದ (ಹಾಗೆ ಅಳತೆ ಮೀರಿ ಕೊಬ್ಬಿದ ) ಕೀಚಕವನಮೆಲ್ಲಮಂ ಒಂದಿರುಳೊಳೆ ಸಾಹಸ ಭೀಮನು (ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ) ಉದ್ದಾಮ ಕೋಪ ದವ ದಹನಜ್ವಾಲಾ ಸಹಸ್ರಂಗಳಿಂ (ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ) ಅಳ್ಕಿಮೆಳ್ಕಿದಂತಪ್ಪುದುಂ (ಅಳಿದು/ಸಿ ಸಾರಿಸಿದಂತೆ) ನೇಸಱು ಮೂಡಿದಾಗಳು ಆ ಪಡೆಮಾತನು ಇರ್ದರು ಇರ್ದಲ್ಲಿಯೆ ಕೇಳ್ದು- (ಸೂರ್ಯೋದಯವಾಗಲು ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ)-
ವಚನ:ಅರ್ಥ:ಹಾಗೆ ಅಳತೆ ಮೀರಿ ಕೊಬ್ಬಿದ ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ ಅಳಿಸಿ ಸಾರಿಸಿದಂತೆ ಅಗಲು ಸೂರ್ಯೋದಯವಾಗಲು, ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ-
ಮ|| ಪಡಲಿಟ್ಟಂತೆವೊಲಾಯ್ತು ಕೀಚಕಬಲಂ ಗಂಧರ್ವರಿಂದಿಂದಿರು
ಳ್ಗಡಿದೇಂ ಸಂಗಡಮಿೞ್ತುವಾಯ್ತೆ ಪೆಱವೆಣ್ಗೊಲ್ದಂಗಮೇನಾಗದಿಂ|
ದುಡಿದತ್ತಾಗದೆ ಮತ್ಸ್ಯನೊಂದು ಬಲಗೆಯ್ಯೆಂದಕ್ಕಟಾ ಎಂಬುದಂ
ನುಡಿಯಲ್ಕಾರ್ತರುಮಿಲ್ಲ ಪಾರದರದೊಳ್ ಸತ್ತಂಗೞಲ್ವನ್ನರಾರ್|| ೮೧ ||
ಪದ್ಯ-೮೧:ಪದವಿಭಾಗ-ಅರ್ಥ:ಪಡಲಿಟ್ಟಂತೆವೊಲಾಯ್ತು ಕೀಚಕಬಲಂ (ಕೀಚಕರ ಗುಂಪು/ಸಮೂಹ ಚೆಲ್ಲಾಪಿಲ್ಲಿಯಾಯಿತು) ಗಂಧರ್ವರಿಂದ, ಇಂದು ಇರುಳ್ ಗಡ ಇದೇಂ ಸಂಗಡಮಿೞ್ತುವಾಯ್ತೆ (ಈ ರಾತ್ರಿ ಗಡ-ನಿಜಕ್ಕೂ ಏನು ಸಾಮೂಹಿಕ ಮೃತ್ಯುವಾಯಿತೇ!) ಪೆಱವೆಣ್ಗೆ ಒಲ್ದಂಗಂ ಏನಾಗದು (ಪರಸ್ತ್ರೀಗೆ ಒಲಿದವನಿಗೆ ಏನುತಾನೆ ಆಗುವುದಿಲ್ಲ? ) ಇಂದು ಉಡಿದತ್ತಾಗದೆ ಮತ್ಸ್ಯನ (ವಿರಾಟನ ) ಒಂದು ಬಲಗೆಯ್ಯೆಂದು ಅಕ್ಕಟಾ (ಈ ದಿನ ವಿರಾಟನ ಒಂದು ಬಲಗೈ ಮುರಿದುಹೋಯಿತಲ್ಲವೇ, ಅಕ್ಕಟಾ) ಎಂಬುದಂ ನುಡಿಯಲ್ಕೆ ಆರ್ತರುಮಿಲ್ಲ (ಅಯ್ಯೋ ಎಂದು ಹೇಳುವ ದುಃಖಿತರೂ ಇಲ್ಲವಲ್ಲಾ) ಪಾರದರದೊಳ್ ಸತ್ತಂಗೆ ಅೞಲ್ವನ್ನರಾರ್ (ಹಾದರದಲ್ಲಿ ಸತ್ತವರಿಗೆ ಅಳುವವರಾರು! )
ಪದ್ಯ-೮೧:ಅರ್ಥ: ಕೀಚಕರ ಗುಂಪು/ಸಮೂಹ ರಾತ್ರಿ ಗಂಧರ್ವರಿಂದ ಚೆಲ್ಲಾಪಿಲ್ಲಿಯಾಯಿತು. ಈ ರಾತ್ರಿ ಗಡ ಏನು ಸಾಮೂಹಿಕ ಮೃತ್ಯವಾಯಿತೇ! ಪರಸ್ತ್ರೀಗೆ ಒಲಿದವನಿಗೆ ಏನುತಾನೆ ಆಗುವುದಿಲ್ಲ? ಈ ದಿನ ವಿರಾಟನ ಒಂದು ಬಲಗೈ ಮುರಿದುಹೋಯಿತಲ್ಲವೇ, ಅಯ್ಯೋ ಎಂದು ಹೇಳುವವರೂ ಇಲ್ಲವಲ್ಲಾ, ಹಾದರದಲ್ಲಿ ಸತ್ತವರಿಗೆ ಅಳುವವರಾರು!
ಕಂ|| ರಾವಣನುಂ ಗಡ ಸೀತಾ
ದೇವಿಗೆ ಸೋಲ್ತದಱ ಫಲಮನೆಯ್ದಿದನಿವನಾ|
ರಾವಣನಿಂ ಪಿರಿಯನೆ ಪೇ
ೞೇವುದೊ ಶುಚಿಯಲ್ಲದವನ ಗಂಡುಂ ತೊಂಡುಂ|| ೮೨||
ಪದ್ಯ-೮೨:ಪದವಿಭಾಗ-ಅರ್ಥ:ರಾವಣನುಂ ಗಡ ಸೀತಾದೇವಿಗೆ ಸೋಲ್ತದಱ ಫಲಮನು ಎಯ್ದಿದನು (ರಾವಣನೂ ಸಹ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು ಗಡ!) ಇವನು ಆ ರಾವಣನಿಂ ಪಿರಿಯನೆ ಪೇೞ್ (ಇವನು ಆ ರಾವಣನಿಗಿಂತ ದೊಡ್ಡವನೇ ಹೇಳು.) ಪೇೞ್, ಏವುದೊ ಶುಚಿಯಲ್ಲದವನ ಗಂಡುಂ ತೊಂಡುಂ (ಶುದ್ಧನಡತೆಯಿಲ್ಲದವನ ಪೌರುಷವು ಕೇವಲ ತೊಂಡು - ಪುಂಡತನ)
ಪದ್ಯ-೮೨:ಅರ್ಥ:ರಾವಣನೂ ಸಹ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು ಗಡ!. ಇವನು ಆ ರಾವಣನಿಗಿಂತ ದೊಡ್ಡವನೇ ಹೇಳು. ಶುದ್ಧನಡತೆಯಿಲ್ಲದವನ ಪೌರುಷವು ಕೇವಲ ತೊಂಡು - ಪುಂಡತನ.

ಕೌರವರಿಂದ ಗೋಗ್ರಹಣ[ಸಂಪಾದಿಸಿ]

ವ|| ಎಂದು ಪೊೞಲ ಜನಂಗಳ್ ಗುಜುಗುಜುಗೊಂಡು ಕೀಚಕನ ಪಡೆಮಾತನೆ ನುಡಿಯೆ ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೇನುಮನೆನಲಱಿಯದೆ ನಾಣ್ಚಿ ತನ್ನೊಳೆ ಮೂಗೞ್ಕೆಯನೞ್ತು ಕೆಮ್ಮನಿರ್ದಳಿತ್ತ ದುರ್ಯೋಧನನ ಗೂಢಪ್ರಣಿಧಿಗಳಾ ಮಾತಂ ಜಲಕ್ಕನಱಿದು ನಾಗಪುರಕ್ಕೆ ವಂದು ಸುಯೋಧನ ಸಭಾಮಧ್ಯದೊಳಿಂತೆಂದು ಬಿನ್ನಪಂಗೆಯ್ದರ್-
ವಚನ:ಪದವಿಭಾಗ-ಅರ್ಥ:ಎಂದು ಪೊೞಲ ಜನಂಗಳ್ ಗುಜುಗುಜುಗೊಂಡು (ಈ ರೀತಿ ಪಟ್ಟಣದ ಜನಗಳು ಗುಂಪುಕೂಡಿಕೊಂಡು) ಕೀಚಕನ ಪಡೆಮಾತನೆ ನುಡಿಯೆ (ಕೀಚಕನ ವಿಷಯವಾದ ಸುದ್ದಿಯನ್ನೇ ಆಡುತ್ತಿರಲು) ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೆ ಏನುಮನು ಎನಲಱಿಯದೆ ನಾಣ್ಚಿ ತನ್ನೊಳೆ ಮೂಗೞ್ಕೆಯನೞ್ತು(ವಿರಾಟನ ಮಹಾರಾಣಿಯಾದ ಸುದೇಷ್ಣೆಯೂ ಹೇಡಿ ಸತ್ತ ಹಾಗಾಗಲು, ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು) ಕೆಮ್ಮನಿರ್ದಳು (ಸುಮ್ಮನಿದ್ದಳು) ಇತ್ತ ದುರ್ಯೋಧನನ ಗೂಢಪ್ರಣಿಧಿಗಳು (ಈ ಕಡೆ ದುರ್ಯೋಧನನ ಗೂಢಚಾರರು) ಆ ಮಾತಂ ಜಲಕ್ಕನಱಿದು ನಾಗಪುರಕ್ಕೆ ವಂದು (ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ) ಸುಯೋಧನ ಸಭಾಮಧ್ಯದೊಳ್ ಇಂತೆಂದು ಬಿನ್ನಪಂಗೆಯ್ದರ್ (ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು)-
ವಚನ:ಅರ್ಥ:ಈ ರೀತಿ ಪಟ್ಟಣದ ಜನಗಳು ಗುಂಪುಕೂಡಿಕೊಂಡು ಕೀಚಕನ ವಿಷಯವಾದ ಸುದ್ದಿಯನ್ನೇ ಆಡುತ್ತಿರಲು ವಿರಾಟನ ಮಹಾರಾಣಿಯಾದ ಸುದೇಷ್ಣೆಯೂ ಹೇಡಿ ಸತ್ತ ಹಾಗಾಗಲು, ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು ಸುಮ್ಮನಿದ್ದಳು. ಈ ಕಡೆ ದುರ್ಯೋಧನನ ಗೂಢಚಾರರು ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು.
ಮ|| ಗುಡಿಗಂ ಬದ್ದವಣಕ್ಕಮಪ್ಪ ಪಡೆಮಾತೇಮಾತಿದಂ ಕೇಳ್ದೊಡೀ
ಗಡೆ ಮೆಚ್ಚೀಯಲೆವೇೞ್ಪುದೆಯ್ದೆ ಪರಮದ್ರೋಹರ್ಕಳಾಗಿರ್ದು ನಿ
ಮ್ಮಡಿಯೊಳ್ ಪೋಗದೆ ಕಾಡುತಿರ್ದ ಸುಭಟರ್ಕಳ್ ನೂರ್ವರುಂ ಕೀಚಕರ್
ಮಡಿದರ್ ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್|| ೮೩ ||
ಪದ್ಯ-೮೩:ಪದವಿಭಾಗ-ಅರ್ಥ:ಗುಡಿಗಂ ಬದ್ದವಣಕ್ಕಂ ಅಪ್ಪ ಪಡೆಮಾತು (‘ಬಾವುಟ ಹಾರಿಸಲೂ ಮಂಗಳವಾದ್ಯಕ್ಕೂ ಯೋಗ್ಯವಾದ ಸಮಾಚಾರ’ ) ಏ ಮಾತು ಇದಂ ಕೇಳ್ದೊಡೆ (ಅದೇನು ಅಂತಹ ಸುದ್ದಿ ಎಂದು ಕೇಳಿದರೆ,) ಈಗಡೆ ಮೆಚ್ಚ ಈಯಲೆವೇೞ್ಪುದು ಎಯ್ದೆ (ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು) ಪರಮದ್ರೋಹರ್ಕಳು ಆಗಿರ್ದು ನಿಮ್ಮಡಿಯೊಳ್ ಪೋಗದೆ ಕಾಡುತಿರ್ದ (ನಿಮ್ಮ ಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ) ಸುಭಟರ್ಕಳ್ ನೂರ್ವರುಂ ಕೀಚಕರ್ ಮಡಿದರ್ (ನೂರುಜನ ಕೀಚಕರೂ ನಿಮ್ಮ ಒಂದು ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು) ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್ (ನಿಮ್ಮ ಒಂದು ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು.)
ಪದ್ಯ-೮೩:ಅರ್ಥ: ಗುಪ್ತಚರರು,‘ಬಾವುಟ ಹಾರಿಸಲೂ ಮಂಗಳವಾದ್ಯಕ್ಕೂ ಯೋಗ್ಯವಾದ ಸಮಾಚಾರ’ ಎಂದರು. ಅದೇನು ಅಂತಹ ಸುದ್ದಿ ಎಂದು ಕೇಳಿದರೆ, ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು. ‘ನಿಮ್ಮ ಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ ನೂರುಜನ ಕೀಚಕರೂ ನಿಮ್ಮ ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು, ಎಂದರು.
ವ|| ಅದು ಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯಮಾಗಿ ಕೈಗೆವರ್ಕುಮೆಂಬುದುಂ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಅದು ಕಾರಣದಿಂದ ಆ ವಿರಾಟನ ಮಂಡಲಂ ಗೋಮಂಡಲದಂತೆ (ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ) ಹೇಳಾ ಸಾಧ್ಯಮಾಗಿ ಕೈಗೆವರ್ಕುಂ ಎಂಬುದುಂ (ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ’ ಎಂದು ಹೇಳಲು) ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ(ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿ)-
ವಚನ:ಅರ್ಥ:ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ’ ಎಂದು ಹೇಳಲು, ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿ- ಹೇಳಿದನು-
ಮ|| ಇದು ದಲ್ ಚೋದ್ಯಮತರ್ಕ್ಯಮದ್ಭುತಮಸಂಭಾವ್ಯಂ ವಿಚಾರಕ್ಕೆ ಬಾ
ದುದೆಂತೆಂದೊಡೆ ಸಂದ ಸಿಂಹಬಲನಂ ಕೊಲ್ವನ್ನರಾರ್ ಭೀಮನ
ಲ್ಲದವರ್ ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳ
ಪ್ಪುದಱಿಂ ತೋಳ್ವಲದೊಳ್ ಪೆಱಂಗಮರಿದೀ ವಿಕ್ರಾಂತಮುಂ ಗರ್ವಮುಂ|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಇದು ದಲ್ ಚೋದ್ಯಂ (ಮ) ಅತರ್ಕ್ಯಂ ಅದ್ಭುತಂ ಅಸಂಭಾವ್ಯಂ ವಿಚಾರಕ್ಕೆ ಬಾರದುದು ಎಂತೆಂದೊಡೆ (ಇದು ನಿಜವಾಗಿಯೂ ಆಶ್ಚರ್ಯಕರವಾದುದು, ತರ್ಕಿಸಲಾಗದುದು, ಅದ್ಭುತವಾದುದು, ನಡೆಯಲಾರದುದು, ವಿಚಾರ ಸಿಗದ್ದು; ಹೇಗೆಂದರೆ) ಸಂದ ಸಿಂಹಬಲನಂ (ಪ್ರಸಿದ್ಧನಾದ ಸಿಂಹಬಲನನ್ನು) ಕೊಲ್ವ ಅನ್ನರಾರ್ ಭೀಮನು ಅಲ್ಲದವರ್ (ಪ್ರಸಿದ್ಧನಾದ ಸಿಂಹಬಲನನ್ನು ಭೀಮನಲ್ಲದವರುಕೊಲ್ಲುವವರು ಬೇರೆ ಯಾರಿದ್ದಾರೆ?) ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳು ಅಪ್ಪುದಱಿಂ (ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ) ತೋಳ್ವಲದೊಳ್ ಪೆಱಂಗಂ ಅರಿದು ಈ ವಿಕ್ರಾಂತಮುಂ ಗರ್ವಮುಂ(ತೋಳುಬಲದಲ್ಲಿ ಈ ಪರಾಕ್ರಮವೂ ಗರ್ವವೂ ಇತರರಿಗೆ ಅಸಾಧ್ಯ.)
ಪದ್ಯ-೮೪:ಅರ್ಥ: ಇದು ನಿಜವಾಗಿಯೂ ಆಶ್ಚರ್ಯಕರವಾದುದು, ತರ್ಕಿಸಲಾಗದುದು, ಅದ್ಭುತವಾದುದು, ನಡೆಯಲಾರದುದು, ವಿಚಾರ ಸಿಗದ್ದು; ಹೇಗೆಂದರೆ ಪ್ರಸಿದ್ಧನಾದ ಸಿಂಹಬಲನನ್ನು ಭೀಮನಲ್ಲದವರುಕೊಲ್ಲುವವರು ಬೇರೆ ಯಾರಿದ್ದಾರೆ? ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ, ತೋಳುಬಲದಲ್ಲಿ ಈ ಪರಾಕ್ರಮವೂ ಗರ್ವವೂ ಇತರರಿಗೆ ಅಸಾಧ್ಯ.
ವ|| ಅದಱಿಂ ಪಾಂಡವರೈವರುಂ ವಿರಾಟಪುರದೊಳಿರ್ದರಾಗಲೆವೇೞ್ಕುಮವರಿರ್ದರಪ್ಪೊಡೆ-
ವಚನ:ಪದವಿಭಾಗ-ಅರ್ಥ:ಅದಱಿಂ ಪಾಂಡವರು ಐವರುಂ ವಿರಾಟಪುರದೊಳು ಇರ್ದರ್ ಆಗಲೆವೇೞ್ಕುಂ (ಇರುವುದು ನಿಜವಾಗಿರಲೇಬೇಕು) ಅವರ್ ಇರ್ದರಪ್ಪೊಡೆ-
ವಚನ:ಅರ್ಥ: ಆದುದರಿಂದ ಪಾಂಡವರೈದು ಜನವೂ ವಿರಾಟನಗರದಲ್ಲಿ ಇರುವುದು ನಿಜವಾಗಿರಲೇಬೇಕು. ಅವರು ಇರುವುದಾದರೆ-
ಚಂ|| ಪರಿಭವದೊಂದು ತುತ್ತ ತುದಿ ಕೃಷ್ಣೆಯ ಬನ್ನದೊಳಾಗೆ ಜೂದಿನೊಳ್
ಪೊರಸೞಿವಂತೆ ತಮ್ಮರಸುಗೆಟ್ಟು ಕೞಲ್ದೆರ್ದೆಗೆಟ್ಟರಣ್ಯದೊಳ್|
ತಿರಿತರುತಿರ್ದ ಕಣ್ಬಡಿಗರನ್ ಮಗುೞ್ದುಂ ಬಿಱುತೋಡಿ ಬೇಡರೊಳ್
ನೆರೆದಿರಲಲ್ಲದೊಡ್ಡಯಿಸಿ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ಪರಿಭವದ ಒಂದು ತುತ್ತ ತುದಿ ಕೃಷ್ಣೆಯ ಬನ್ನದೊಳಾಗೆ (ಸೋಲಿನ ಪರಾಕಾಷ್ಠೆಯು ದ್ರೌಪದಿಯ ಅವಮಾನದಲ್ಲಾಗಲು) ಜೂದಿನೊಳ್ ಪೊರಸೞಿವಂತೆ (ಪಾರಿವಾಳವು ನಾಶವಾಗುವಂತೆ) ತಮ್ಮ ಅರಸುಗೆಟ್ಟು ಕೞಲ್ದ ಎರ್ದೆಗೆಟ್ಟು (ಜೂಜಿನಲ್ಲಿ ತಮ್ಮ ರಾಜ್ಯವನ್ನು ಕಳೆದುಕೊಂಡು, ದುರ್ಬಲರಾಗಿ ಧೈರ್ಯಗೆಟ್ಟು) ಅರಣ್ಯದೊಳ್ ತಿರಿತರುತಿರ್ದ ಕಣ್ಬಡಿಗರನ್(ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು) ಮಗುೞ್ದುಂ ಬಿಱುತೋಡಿ (ಪುನ ಹೆದರಿ ಓಡಿಹೋಗಿ) ಬೇಡರೊಳ್ ಬೆರೆದಿರಲಲ್ಲದೆ (ಬೇಡರಲ್ಲಿ ಸೇರಿರಬೇಕಲ್ಲದೆ) ಒಡ್ಡಯಿಸಿ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ (ಗುಂಪಾಗಿ ರಾಜ್ಯದಲ್ಲಿ ಸೇರಿರುವುದು ಸಾದ್ಯವೇ?)
ಪದ್ಯ-೮೫:ಅರ್ಥ:ಸೋಲಿನ ಪರಾಕಾಷ್ಠೆಯು ದ್ರೌಪದಿಯ ಅವಮಾನದಲ್ಲಾಗಲು ಪಾರಿವಾಳವು ನಾಶವಾಗುವಂತೆ ಜೂಜಿನಲ್ಲಿ ತಮ್ಮ ರಾಜ್ಯವನ್ನು ಕಳೆದುಕೊಂಡು, ದುರ್ಬಲರಾಗಿ ಧೈರ್ಯಗೆಟ್ಟು, ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು ಪುನ ಹೆದರಿ ಓಡಿಹೋಗಿ ಬೇಡರಲ್ಲಿ ಸೇರಿರಬೇಕಲ್ಲದೆ ಗುಂಪಾಗಿ ರಾಜ್ಯದಲ್ಲಿ ಸೇರಿರುವುದು ಸಾದ್ಯವೇ? ಎಂದ ದುರ್ಯೋಧನ.
ವ|| ಎಂಬುದುಮಾ ಕೌರವನ ಮಾತಿಂಗಮರಾಪಗಾನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಕೌರವನ ಮಾತಿಂಗೆ ಅಮರಾಪಗಾನಂದನನು (ಗಂಗೆಯ ಮಗ ಭೀಷ್ಮ) ಇಂತೆಂದಂ-
ವಚನ:ಅರ್ಥ:ವ|| ಆ ದುರ್ಯೋಧನನ ಮಾತಿಗೆ ಭೀಷ್ಮನು ಹೇಳಿದನು
ಮ|| ಸ್ರ|| ರಸೆಯೊಳ್ ಕಾಲಾಗ್ನಿರುದ್ರಂ ಜಲಶಯನದೊಳಂಭೋಜನಾಭಂ ಪೊದಳ್ದಾ|
ಗಸದಿಂ ಸುತ್ತಿರ್ದಜಾಂಡೋದರದೊಳಜನಡಂಗಿರ್ಪವೋಲ್ ಕಾರಣಕ್ಕೆಂ||
ದೊಸೆದಿರ್ದರ್ ಪಾಂಡವರ್ ಕಾನನದೊಳಿರದವರ್ ನನ್ನಿಯಂ ತಪ್ಪೆಯುಂ ಸ
ಪ್ತಸಮುದ್ರಂ ಮೇರೆಯಂ ತಪ್ಪೆಯುಮೊಳರೆ ಬಿಗುರ್ತಾಂಪವರ್ ರಾಜರಾಜಾ|| ೮೬ ||
ಪದ್ಯ-೮೬:ಪದವಿಭಾಗ-ಅರ್ಥ:ರಸೆಯೊಳ್ ಕಾಲಾಗ್ನಿರುದ್ರಂ (ಕಾಲಾಗ್ನಿರುದ್ರನು ರಸಾತಳದಲ್ಲಿಯೂ) ಜಲಶಯನದೊಳ್ ಅಂಭೋಜನಾಭಂ (ವಿಷ್ಣುವು ಜಲಶಯನದಲ್ಲಿಯೂ) ಪೊದಳ್ದ ಆಗಸದಿಂ ಸುತ್ತಿರ್ದ ಅಜಾಂಡೋದರದೊಳು ಅಜನು ಅಡಂಗಿರ್ಪವೋಲ್ ( ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿ ಬ್ರಹ್ಮನು ಅಡಗಿರುವ ಹಾಗೆ) ಕಾರಣಕ್ಕೆ ಎಂದು ಒಸೆದಿರ್ದರ್ ಪಾಂಡವರ್ ಕಾನನದೊಳು ಇರ್ದರ್ (ಒಂದು ಕಾರಣಕ್ಕಾಗಿ ಪಾಂಡವರು ಇಷ್ಟಪಟ್ಟು ಕಾಡಿನಲ್ಲಿ ಇದ್ದರು.) ನನ್ನಿಯಂ ತಪ್ಪೆಯುಂ ಸಪ್ತಸಮುದ್ರಂ ಮೇರೆಯಂ ತಪ್ಪೆಯುಮೊಳರೆ ಬಿಗುರ್ತು ಆಂಪವರ್ ರಾಜರಾಜಾ
ಪದ್ಯ-೮೬:ಅರ್ಥ: ಕಾಲಾಗ್ನಿರುದ್ರನು ರಸಾತಳದಲ್ಲಿಯೂ ವಿಷ್ಣುವು ಜಲಶಯನದಲ್ಲಿಯೂ (ವ್ಯಾಪ್ತವಾದ) ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿ ಬ್ರಹ್ಮನು ಅಡಗಿರುವ ಹಾಗೆ ಒಂದು ಕಾರಣಕ್ಕಾಗಿ ಪಾಂಡವರು ಇಷ್ಟಪಟ್ಟು ಕಾಡಿನಲ್ಲಿ ಇದ್ದರು. ಅವರು ಹಾಗೆ ಏಳು ಸಮುದ್ರಗಳು ಮೇಲೆದಪ್ಪಿದರೂ ಸತ್ಯವನ್ನು ತಪ್ಪದವರೂ (ಕಥಿಣ ಪರಿಸ್ಥಿತಿಯನ್ನು) ಬಿಗುರ್ತು-ಧೃಢವಾಗಿ ಎದುರಿಸುವವರು ದುರ್ಯೋಧನ ರಾಜನೇ ಯಾರು ಇದ್ದಾರೆ? (ಯಾರೂ ಇಲ್ಲ.)ಎಂದು ಭೀಷ್ಮರು ಹೇಳಿದರು
ವ|| ಎನೆ ಕುಂಭಸಂಭವನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ ಕುಂಭಸಂಭವಂ ಇಂತು ಎಂದಂ-
ವಚನ:ಅರ್ಥ:ಎನ್ನಲು ದ್ರೋಣಾಚಾರ್ಯರು ಹೀಗೆಂದರು
ಮ|| ಕೃತಶಾಸ್ತ್ರರ್ ಧೃತಶಾಸ್ತ್ರರಪ್ರತಿಹತ ಪ್ರಾಗಲ್ಭ್ಯರೀಗಳ್ ಪೃಥಾ
ಸುತರುದ್ಯೋಗಮನೆತ್ತಿಕೊಳ್ವ ದೆವಸಂ ಸಾರ್ಚಿತ್ತು ಕಾಲಾವ|
ಸ್ಥಿತಿಯುಂ ಬಂದುದಿದರ್ಕೆ ಮಾಣ್ದಿರದೆ ಮಂತ್ರಾವಾಸದೊಳ್ ಮಂತ್ರ ನಿ
ಶ್ಚಿತನಾಗೀಗಡೆ ಕಾದಿದಲ್ಲದಿಳೆಯಂ ನೀನೆಂತುಮೇನಿತ್ತಪಯ್|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಕೃತಶಾಸ್ತ್ರರ್ (ಶಾಸ್ತ್ರವನ್ನು ತಿಳಿದು ಮಾಡಿದವರು,) ಧೃತ (ಶಾ?)ಶಸ್ತ್ರರ್ ಅಪ್ರತಿಹತ ಪ್ರಾಗಲ್ಭ್ಯರ್ (ಶಸ್ತ್ರವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು) ಈಗಳ್ ಪೃಥಾಸುತರು ಉದ್ಯೋಗಮನು ಎತ್ತಿಕೊಳ್ವ ದೆವಸಂ ಸಾರ್ಚಿತ್ತು ಕಾಲಾವಸ್ಥಿತಿಯುಂ ಬಂದುದು ( ಅವರು ಈಗ ಕುಂತಿಮಕ್ಕಳು ಕಾರ್ಯಾರಂಭಮಾಡುವ ದಿನ ಸಮೀಪಿಸಿದ್ದು ಗಡುವಿನ ಕಾಲ ಬಂದಿದೆ) ಇದರ್ಕೆ ಮಾಣ್ದಿರದೆ ಮಂತ್ರಾವಾಸದೊಳ್ ಮಂತ್ರ ನಿಶ್ಚಿತನಾಗೀಗಡೆ (ಇದಕ್ಕೆ ತಡಮಾಡದೆ ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು.) ಕಾದಿದಲ್ಲದೆ ಇಳೆಯಂ ನೀನೆಂತುಂ ಏನಿತ್ತಪಯ್ (ಯುದ್ಧಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವೆಯಾ? )
ಪದ್ಯ-೮೭:ಅರ್ಥ: ಪಾಂಡವರು ಶಾಸ್ತ್ರವನ್ನು ತಿಳಿದು ಮಾಡಿದವರು. ಶಸ್ತ್ರವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು. ಅವರು ಈಗ ಕುಂತಿಮಕ್ಕಳು ಕಾರ್ಯಾರಂಭಮಾಡುವ ದಿನ ಸಮೀಪಿಸಿದೆ. ಇದಕ್ಕೆ ತಡಮಾಡದೆ ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು. ಯುದ್ಧಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವುದಿಲ್ಲವಲ್ಲವೆ?
ವ|| ಎಂದೊಡೆ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದೊಡೆ ಕರ್ಣನು ಇಂತೆಂದಂ-
ವಚನ:ಅರ್ಥ:ಎನ್ನಲು ಕರ್ಣನು ಹೀಗೆ ಹೇಳಿದನು-
ಚಂ|| ಬಗೆಯದೆ ಸಾಮಮಂ ಬಿಸುಟು ಭೇದಮನೊಲ್ಲದುದಗ್ರದಾನಮಂ
ನೆಗೞದೆ ದಂಡಮಂ ನಿನಗೆ ಮಾಡಿದಕೃತ್ಯರನಂತು ಮಾಣ್ಬುದೇ|
ಬಗೆ ಪಗೆ ನೀಗೆಯುಂ ಮುಳಿಸು ಪೋಗೆಯುಮಾಯತಿ ಪೆರ್ಚೆಯುಂ ಜಗಂ
ಪೊಗೞೆಯುಮಾಂತರಾತಿನೃಪರಂ ತವೆ ಕೊಲ್ವುದಹೀಂದ್ರಕೇತನಾ|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಬಗೆಯದೆ ಸಾಮಮಂ ಬಿಸುಟು ಭೇದಮನು ಒಲ್ಲದೆ ಉದಗ್ರದಾನಮಂ ನೆಗೞದೆ ದಂಡಮಂ (ಸಾಮೋಪಾಯವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠರಾದ ದಾನೋಪಾಯವನ್ನು ಒಪ್ಪದೆ, ದಂಡೋಪಾಯವನ್ನೂ ಮಾಡದೆ) ನಿನಗೆ ಮಾಡಿದ ಅಕೃತ್ಯರನು ಅಂತು ಮಾಣ್ಬುದೇ (ನಿನಗೆ ಕೆಡುಕುಮಾಡಿದವರನ್ನು ರನ್ನು ಹಾಗೆಯೇ ಬಿಡುವುದೇ? ಅದು ಯೋಗ್ಯವಲ್ಲ.) ಬಗೆ (ಅಪೇಕ್ಷಿಸು) ಪಗೆ ನೀಗೆಯುಂ (ಶತ್ರು ತೊಲಗುವಂತೆಯೂ) ಮುಳಿಸು ಪೋಗೆಯುಂ ಆಯತಿ ಪೆರ್ಚೆಯುಂ (ಕೋಪವು ಹೋಗುವಂತೆಯೂ ಪೌರುಷವು ಹೆಚ್ಚುವಂತೆಯೂ) ಜಗಂ ಪೊಗೞೆಯುಂ ಆಂತ ಅರಾತಿ ನೃಪರಂ ತವೆ ಕೊಲ್ವುದು ಅಹೀಂದ್ರಕೇತನಾ(ಲೋಕವು ಹೊಗಳುವಂತೆಯೂ ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಸರ್ಪಕೇತನನೇ ಎಂದನು ಕರ್ಣ)
ಪದ್ಯ-೮೮:ಅರ್ಥ: . ದುರ್ಯೋಧನ, ಸಾಮೋಪಾಯವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠರಾದ ದಾನೋಪಾಯವನ್ನು ಒಪ್ಪದೆ, ದಂಡೋಪಾಯವನ್ನೂ ಮಾಡದೆ ನಿನಗೆ ಕೆಡುಕುಮಾಡಿದವರನ್ನು ರನ್ನು ಹಾಗೆಯೇ ಬಿಡುವುದೇ? ಅದು ಯೋಗ್ಯವಲ್ಲ. ಶತ್ರು ತೊಲಗುವಂತೆಯೂ ಕೋಪವು ಹೋಗುವಂತೆಯೂ ಪೌರುಷವು ಹೆಚ್ಚುವಂತೆಯೂ ಲೋಕವು ಹೊಗಳುವಂತೆಯೂ ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಸರ್ಪಕೇತನನೇ ಎಂದನು ಕರ್ಣ.
ವ|| ಎಂಬುದುಂ ಸುಯೋಧನನಿರ್ವರ ನುಡಿಯುಮಂ ಕೇಳ್ದು ತನ್ನ ಮನದೊಳಾದ ಕಜ್ಜಮನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಸುಯೋಧನನು ಇರ್ವರ ನುಡಿಯುಮಂ ಕೇಳ್ದು ತನ್ನ ಮನದೊಳು ಆದ ಕಜ್ಜಮನು ಇಂತೆಂದಂ-
ವಚನ:ಅರ್ಥ:. ಎನ್ನಲು ದುರ್ಯೋಧನನು ಇಬ್ಬರ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿ ತೋರಿದ ಕಾರ್ಯವನ್ನು ಸೂಚಿಸಿ ಹೀಗೆಂದನು.
ಚಂ|| ಅಱಿಯಲೆವೇೞ್ಪುದಿರ್ದೆಡೆಯನಿರ್ದೆಡೆಯಿಂ ತೆಗೆದಾಜಿರಂಗದೊಳ್
ನಿಱಿಸಲೆವೇೞ್ಪುದಂತವರನಂತವರಿರ್ಪೆಡೆಯುಂ ವಿರಾಟನಿ|
ರ್ಪಱಿಕೆಯ ಪಟ್ಟಣಂ ನಮಗಿದೇವಿರಿದಪ್ಪುದು ತಳ್ವದೆಯ್ದಿ ನಾಂ
ತುಱುವನೆ ಕೊಳ್ವಮಂತು ತುಱುಗೊಂಡೊಡೆ ಪಾಂಡವರಿರ್ಪ ಗಂಡರೇ|| ೮೯
ಪದ್ಯ-೮೯:ಪದವಿಭಾಗ-ಅರ್ಥ:ಅಱಿಯಲೆವೇೞ್ಪುದು ಇರ್ದ ಎಡೆಯನು (ಅವರು ಇರುವ ಸ್ಥಳವನ್ನು ತಿಳಿಯಲೇಬೇಕು) ಇರ್ದೆಡೆಯಿಂ ತೆಗೆದು ಆಜಿರಂಗದೊಳ್ ನಿಱಿಸಲೆವೇೞ್ಪುದು ಅಂತು ಅವರನು (ಹೀಗೆ ಅವರನ್ನು ಅವರಿರುವ ಸ್ಥಳದಿಂದ ಹೊರಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು), ಅಂತವರು ಇರ್ಪೆಡೆಯುಂ ವಿರಾಟನು ಇರ್ಪಱಿಕೆಯ ಪಟ್ಟಣಂ (ಅಂತು ಅವರು ಇರುವ ಸ್ಥಳ ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರ.) ನಮಗೆ ಇದು ಏವಿರಿದಪ್ಪುದು (ನಮಗೆ ಈ ವಿರಾಟನಗರವು ಏನು ದೊಡ್ಡದು?) ತಳ್ವದೆ ಎಯ್ದಿಂ ನಾಂ ತುಱುವನೆ ಕೊಳ್ವಂ (ತಡಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ) ಅಂತು ತುಱುಗೊಂಡೊಡೆ ಪಾಂಡವರಿರ್ಪ ಗಂಡರೇ (ಹಾಗೆ ಹಸುಗಳನ್ನು ಹಿಡಿದರೆ ಪಾಂಡವರು ಸುಮ್ಮನಿರುವ ಶೂರರೇ? ಅಲ್ಲ!.)
ಪದ್ಯ-೮೯:ಅರ್ಥ:ಕೌರವನು ಹೇಳಿದ: ಅವರು ಇರುವ ಸ್ಥಳವನ್ನು ತಿಳಿಯಲೇಬೇಕು. ಹೀಗೆ ಅವರನ್ನು ಅವರಿರುವ ಸ್ಥಳದಿಂದ ಹೊರಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು. ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರವು ಅವರಿರುವ ಸ್ಥಳ. ನಮಗೆ ಈ ವಿರಾಟನಗರವು ಏನು ದೊಡ್ಡದು? ತಡಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ. ಹಾಗೆ ಹಸುಗಳನ್ನು ಹಿಡಿದರೆ ಪಾಂಡವರು ಸುಮ್ಮನಿರುವ ಶೂರರೇ? ಅಲ್ಲ!.
ವ|| ಎಂದು ಪಿರಿದುಮಾಗ್ರಹಂಬೆರಸು ಗೋಗ್ರಹಣಪ್ರಪಂಚಮನೆ ನಿಶ್ಚಯಿಸಿ ವಿರಾಟನ ದಾಯಿಗಂ ತ್ರಿಗರ್ತಾಧೀಶಂ ಸುಶರ್ಮನುಮಂ ನಾಲ್ಭಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇೞ್ದು ತುಱುವಂ ಕೊಳಿಸಿದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ಪಿರಿದುಂ ಆಗ್ರಹಂ ಬೆರಸು ಗೋಗ್ರಹಣ ಪ್ರಪಂಚಮನೆ ನಿಶ್ಚಯಿಸಿ (ಎಂದು ವಿಶೇಷ ಹಠದಿಂದ ಕೂಡಿ ಪಶುಗಳನ್ನು ಹಿಡಿಯುವ ವಿಚಾರವನ್ನೇ ನಿಶ್ಚಯಿಸಿ,) ವಿರಾಟನ ದಾಯಿಗಂ ತ್ರಿಗರ್ತಾಶಂ ಸುಶರ್ಮನುಮಂ ( ವಿರಾಟನ ದಾಯಾದಿಯೂ ತ್ರಿಗರ್ತ ರಾಜನೂ ಆದ ಸುಶರ್ಮನನ್ನು ) ನಾಲ್ಭಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇೞ್ದು ತುಱುವಂ ಕೊಳಿಸಿದಾಗಳ್ (ನಾಲ್ಕು ಸಾವಿರ ರಥಗಳೊಡನೆ ದಕ್ಷಿಣ ದಿಕ್ಕಿಗೆ ಕಳುಹಿಸಿ ಗೋವುಗಳನ್ನು ಹಿಡಿಸಿದಾಗ)-
ವಚನ:ಅರ್ಥ:ಎಂದು ವಿಶೇಷ ಹಠದಿಂದ ಕೂಡಿ ಪಶುಗಳನ್ನು ಹಿಡಿಯುವ ವಿಚಾರವನ್ನೇ ನಿಶ್ಚಯಿಸಿ, ವಿರಾಟನ ದಾಯಾದಿಯೂ ತ್ರಿಗರ್ತ ರಾಜನೂ ಆದ ಸುಶರ್ಮನನ್ನು ನಾಲ್ಕು ಸಾವಿರ ರಥಗಳೊಡನೆ ದಕ್ಷಿಣ ದಿಕ್ಕಿಗೆ ಕಳುಹಿಸಿ ಗೋವುಗಳನ್ನು ಹಿಡಿಸಿದರು.
ಚಂ|| ಕರೆದು ವಿರಾಟನುತ್ತರನನಾತ್ಮತನೂಜನನಾ ಪೊೞಲ್ಗೆ ಕಾ
ಪಿರಿಸಿ ಧರಾತಳಂ ತಳರ್ವವೋಲ್ ನಡೆದಾಗಳೆ ಪಾಂಡುಪುತ್ರರ|
ಯ್ವರುಮಿದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮಿಲ್ಲಿ ಮಾ
ಣ್ದಿರಲಣಮಾಗ ಪೂಣ್ದವಧಿಯುಂ ನೆರೆದತ್ತು ಕಡಂಗಿ ಕಾದುವಂ|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ಕರೆದು ವಿರಾಟನು ಉತ್ತರನನು ಆತ್ಮತನೂಜನನು ಆ ಪೊೞಲ್ಗೆ ಕಾಪಿರಿಸಿ (ವಿರಾಟನು ತನ್ನ ಮಗನಾದ ಉತ್ತರನನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ) ಧರಾತಳಂ ತಳರ್ವವೋಲ್ ನಡೆದು ಆಗಳೆ (ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಅದೇ ಸಮಯ) ಪಾಂಡುಪುತ್ರರು ಅಯ್ವರುಂ ಇದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮ್(‘ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು.) ಇಲ್ಲಿ ಮಾಣ್ದು ಇರಲ್ ಅಣಂ ಆಗ (ಇಲ್ಲಿ ತಡೆದು ಕ್ಷಣವೂ ಇರಲಾಗದು.) ಪೂಣ್ದ ಅವಧಿಯುಂ ನೆರೆದತ್ತು (ಪ್ರತಿಜ್ಞೆ ಮಾಡಿದ ಗಡುವೂ ಪೂರ್ಣವಾಗಿದೆ.) ಕಡಂಗಿ ಕಾದುವಂ (ಉತ್ಸಾಹದಿಂದ ಯುದ್ಧಮಾಡೋಣ’), ಎಂದು ತೀರ್ಮಾನಿಸಿದರು.
ಪದ್ಯ-೯೦:ಅರ್ಥ:. ವಿರಾಟನು ತನ್ನ ಮಗನಾದ ಉತ್ತರನನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ, ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಪಾಂಡವರು ಐವರೂ ‘ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು. ಇಲ್ಲಿ ತಡೆದು ಕ್ಷಣವೂ ಇರಲಾಗದು. ಪ್ರತಿಜ್ಞೆ ಮಾಡಿದ ಗಡುವೂ ಪೂರ್ಣವಾಗಿದೆ. ಉತ್ಸಾಹದಿಂದ ಯುದ್ಧಮಾಡೋಣ’ ಎಂದರು ಪಾಂಡವರು.
ವ|| ಎಂದು ತಮ್ಮಯ್ವರುಮಾಳೋಚಿಸಿ ವಿಕ್ರಮಾರ್ಜುನನಂ ಪೆಱಗಣ ಕಾಪಿಂಗಿರಲ್ವೇೞ್ದು ನಾಲ್ವರುಂ ನಾಲ್ಕು ಸಮುದ್ರಂಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ತಮ್ಮ ಅಯ್ವರುಂ ಆಳೋಚಿಸಿ ವಿಕ್ರಮಾರ್ಜುನನಂ ಪೆಱಗಣ ಕಾಪಿಂಗೆ ಇರಲ್ವೇೞ್ದು(ನಗರದ ಹಿಂಗಾವಲಿಗೆ ಇರಹೇಳಿ) ನಾಲ್ವರುಂ ನಾಲ್ಕು ಸಮುದ್ರಂಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಳ್ ()-
ವಚನ:ಅರ್ಥ:ಎಂದು ತಾವು ಐದು ಜನವೂ ತಮ್ಮಲ್ಲಿ ಆಲೋಚಿಸಿ ಅರ್ಜುನನನ್ನು ನಗರದ ಹಿಂಗಾವಲಿಗೆ ಇರಹೇಳಿ ನಾಲ್ಕು ಜನರೂ ನಾಲ್ಕು ಸಮುದ್ರಗಳೇ ಮೇರೆದಪ್ಪಿದಂತೆ ವಿರಾಟನೊಡನೆ ಕೂಡಿ ಹೋಗಿ ಎದುರಿಸಿದಾಗ-
ಚಂ|| ಕಡಲ ಪೊದಳ್ದ ಪೆರ್ದೆರೆಗಳೆಯ್ದೆ ಕುಲಾದ್ರಿಗಳೊಳ್ ಪಳಂಚಿ ತೂ
ಳ್ದೊಡನೆ ಮರಲ್ದವೋಲ್ ಕೆಡೆಯೆ ಪಾಯಿಸಿದುಗ್ರರಥಂಗಳೞ್ಗಿತ||
ಳ್ತಡಿಗಿಡೆ ಪಾಯ್ದರಾತಿನೃಪರಂ ತಱಿದಾಂತಿರದಾ ಸುಶರ್ಮನಂ
ಪಿಡಿದು ನೆಗೞ್ತೆಯಂ ಪಡೆದು ಸಾಹಸದಿಂ ತುಱುವಂ ಮಗುೞ್ಚಿದರ್|| ೯೧ ||
ಪದ್ಯ-೯೧:ಪದವಿಭಾಗ-ಅರ್ಥ:ಕಡಲ ಪೊದಳ್ದ ಪೆರ್ದೆರೆಗಳು ಎಯ್ದೆ ಕುಲಾದ್ರಿಗಳೊಳ್ ಪಳಂಚಿ (ಸಮುದ್ರದಲ್ಲಿ ಹರಡಿದ ದೊಡ್ಡ ಅಲೆಗಳು ಕುಲಪರ್ವತಗಳನ್ನು) ತೂಳ್ದು ಒಡನೆ ಮರಲ್ದವೋಲ್ (ತಗುಲಿ ಹಿಂದಕ್ಕೆ ಮರಳಿದಂತೆ) ಕೆಡೆಯೆ ಪಾಯಿಸಿದ ಉಗ್ರರಥಂಗಳ್ ಅೞ್ಗಿ (ಹಾಳಾಗಿ, ತಳ್ಳಿ,) ತಳ್ತು ಅಡಿಗಿಡೆ (ಬೀಳಿಸಿ ತಳಭಾಗವು ನಾಶವಾಗಲು) ಪಾಯ್ದ ಅರಾತಿನೃಪರಂ ತಱಿದಾಂತಿರದಾ ಸುಶರ್ಮನಂ ಪಿಡಿದು (ನುಗ್ಗಿದ ಶತ್ರುರಾಜರನ್ನು ಸುಶರ್ಮನನ್ನೂ ಬಿಡದೆ) ನೆಗೞ್ತೆಯಂ ಪಡೆದು (ಪ್ರಸಿದ್ಧಿಯನ್ನು ಪಡೆದು) ಸಾಹಸದಿಂ ತುಱುವಂ ಮಗುೞ್ಚಿದರ್(ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು)
ಪದ್ಯ-೬೧:ಅರ್ಥ:ಸಮುದ್ರದಲ್ಲಿ ಹರಡಿದ ದೊಡ್ಡ ಅಲೆಗಳು ಕುಲಪರ್ವತಗಳನ್ನು ತಗುಲಿ ಹಿಂದಕ್ಕೆ ಮರಳಿದಂತೆ ಮುಂದಕ್ಕೆ ನುಗ್ಗಿಸಿದ ಭಯಂಕರವಾದ ರಥಗಳನ್ನು ಹಿಂದಕ್ಕೆ ತಳ್ಳಿ ಬೀಳಿಸಿ ತಳಭಾಗವು ನಾಶವಾಗಲು ಅಡಿಮೇಲಾಗಲು ನುಗ್ಗಿದ ಶತ್ರುರಾಜರನ್ನು ಸುಶರ್ಮನನ್ನೂ ಬಿಡದೆ ಎದುರಿಸಿ ಹಿಡಿದು ಪ್ರಸಿದ್ಧಿಯನ್ನು ಪಡೆದು ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು.

ಉತ್ತರ ದಿಕ್ಕಿನ ಗೋಗ್ರಹಣ[ಸಂಪಾದಿಸಿ]

ವ|| ಅನ್ನೆಗಮತ್ತ ಸುಯೋಧನಂ ಸಮಸ್ತ ಸಾಧನಂಬೆರಸು-
ವಚನ:ಪದವಿಭಾಗ-ಅರ್ಥ: ಅನ್ನೆಗಂ ಅತ್ತ ಸುಯೋಧನಂ ಸಮಸ್ತ ಸಾಧನಂ ಬೆರಸು (ಸಾಧನಗಳ ಒಡಗೂಡಿ)-
ವಚನ:ಅರ್ಥ:ಅಷ್ಟರಲ್ಲಿ ಆ ಕಡೆ ದುರ್ಯೋಧನನು ಸಮಸ್ತ ಸೈನ್ಯ ಸಾಧನಗಳ ಒಡಗೂಡಿ-
ಉ|| ಉತ್ತರಂ ಗೋಗ್ರಹಂ ಪಿರಿದುಮಾಗ್ರಹಮಂ ಮನದೊಳ್ ತಗುಳ್ಚೆ ದಿ
ಗ್ಭಿತ್ತಿ ವಿಭೇದಿ ಪೆರ್ಚೆ ಕದನಾನಕರಾವಮಗುರ್ವಿನುರ್ವು ಪ|
ರ್ವುತ್ತಿರೆ ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳ್ದು ತು
ಳ್ಕುತ್ತಿರೆ ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಉತ್ತರಂ ಗೋಗ್ರಹಂ ಪಿರಿದುಂ ಆಗ್ರಹಮಂ ಮನದೊಳ್ ತಗುಳ್ಚೆ (ಉತ್ತರದಿಕ್ಕಿನ ಗೋವುಗಳನ್ನು ಹಿಡಿಯಲು ಮನಸ್ಸು ಬಹಳ ಬಯಸಲು, ಅದನ್ನೇ ನಿಶ್ಚಯಿಸಿ,) ದಿಗ್ಭಿತ್ತಿ ವಿಭೇದಿ ಪೆರ್ಚೆ ಕದನ ಆನಕರಾವಂ ಅಗುರ್ವಿನುರ್ವು ಪರ್ವುತ್ತಿರೆ (ದಿಗಂತವನ್ನು ಒಡೆಯುತ್ತಿರುವ ಯುದ್ಧಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು) ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳ್ದು ತುಳ್ಕುತ್ತಿರೆ (ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚಿ ಹೊರಹೊಮ್ಮುತ್ತಿರಲು) ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ (ವಿಭು- ಪ್ರಭುವಾದ ದುರ್ಯೋಧನನು ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು.)
ಪದ್ಯ-೯೨:ಅರ್ಥ:ಉತ್ತರದಿಕ್ಕಿನ ಗೋವುಗಳನ್ನು ಹಿಡಿಯಲು ಮನಸ್ಸು ಬಹಳ ಬಯಸಲು, ದಿಗಂತವನ್ನು ಒಡೆಯುತ್ತಿರುವ ಯುದ್ಧಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚು ಹೊರಹೊಮ್ಮುತ್ತಿರಲು, ಪ್ರಭುವಾದ ದುರ್ಯೋಧನನು ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು.

ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು

ಚಂ|| ಪಸರಿಸಿ ಪೊಕ್ಕು ಕೂಕಿಱಿದು ಕಾದುವ ಬಲ್ಲಣಿಗಳ್ ಪಳಂಚೆ ಪಾ
ಯಿಸುವ ದೞಕ್ಕಗುರ್ವೆಸೆಯೆ ನೂಂಕಿದ ಬಲ್ಲಣಿಗೆತ್ತಮೆಯ್ದೆ ಚೋ|
ದಿಸುವ ರಥಕ್ಕೆ ಪೆಳ್ಪಳಿಸದೊರ್ವರಿನೊರ್ವರೆ ಮಿಕ್ಕು ಪಾರ್ದು ಸಾ
ರ್ದಿಸೆ ತುಱುಗಾಱರಂದಿನಿಸು ಬಲ್ವಲನಾದುದೊಂದು ಕಾಳೆಗಂ|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಪಸರಿಸಿ ಪೊಕ್ಕು ಕೂಕಿಱಿದು ಕಾದುವ ಬಲ್ಲಣಿಗಳ್ ಪಳಂಚೆ (ಎಲ್ಲಡೆಚದುರಿ ಹೊಕ್ಕು ಮೇಲಕ್ಕೆ ಹಾರಿ ಹೋರಾಡುವ ಬಲವಾದ ಕಾಲಾಳುಗಳು ಎದರಿಸಲು) ಪಾಯಿಸುವ ದೞಕ್ಕೆ ಅಗುರ್ವೆಸೆಯೆ (ಮುನ್ನುಗ್ಗುವ ಸೈನ್ಯಕ್ಕೆ ಭಯವುಂಟಾಗಲು) ನೂಂಕಿದ ಬಲ್ಲಣಿಗೆ ಎತ್ತಂ ಎಯ್ದೆ (ಮುಂದೆನುಗ್ಗಿದ ಬಲವಾದ ಕಾಲಾಳುಗಳಿಗೆ ಎಲ್ಲೆಡಯೂ ಹೋಗುವಂತೆ) ಚೋದಿಸುವ ರಥಕ್ಕೆ (ವೇಗವಾಗಿ ನಡೆಸುತ್ತಿರುವ ರಥಕ್ಕೆ) ಪೆಳ್ಪಳಿಸದೆ ಒರ್ವರಿಂ ಒರ್ವರೆ ಮಿಕ್ಕು ಪಾರ್ದು ಸಾರ್ದಿಸೆ (ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ ಸಮೀಪಕ್ಕೆ ಬಂದು ) ತುಱುಗಾಱರ ಅಂದಿನಿಸು ಬಲ್ವಲನಾದುದೊಂದು ಕಾಳೆಗಂ(ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು.)
ಪದ್ಯ-೯೩:ಅರ್ಥ: ಎಲ್ಲಡೆಚದುರಿ ಹೊಕ್ಕು ಮೇಲಕ್ಕೆ ಹಾರಿ ಹೋರಾಡುವ ಬಲವಾದ ಕಾಲಾಳುಗಳು ಎದರಿಸಲು, ಮುನ್ನುಗ್ಗುವ ಸೈನ್ಯಕ್ಕೆ ಭಯವುಂಟಾಗಲು ಮುಂದೆ ನುಗ್ಗಿದ ಬಲವಾದ ಕಾಲಾಳುಗಳಿಗೆ ಎಲ್ಲೆಡಯೂ ಹೋಗುವಂತೆ, ವೇಗವಾಗಿ ನಡೆಸುತ್ತಿರುವ ರಥಕ್ಕೆ ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ ಸಮೀಪಕ್ಕೆ ಬಂದು ಬಾಣಪ್ರಯೋಗಮಾಡಲು ದನಕಾಯುವವರ ಅಂದಿನ ಯುದ್ಧವು ಸ್ವಲ್ಪ ಬಲಿಷ್ಠವೇ ಆಯಿತು.

ಕುಮಾರವ್ಯಾಸ ಭಾರತದಲ್ಲಿ ಉತ್ತರಕುಮಾರನು
ಕೌರವಸೇನೆ ಎದುರಿಸಿದ ಸಂಧರ್ಭ
(ಸಂಧಿ -೫)
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ |
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ|| ೧೭||

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ|
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು||೧೯ ||

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು |
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದುರಿನಲಿ ||೨೦||

(ವಿರಾಟಪರ್ವ-ಸಂಧಿ - ೬)
(ಉತ್ತರನು ಕುರುಸೇನೆಯನ್ನು ಸಮೀಪಿಸಿದಾಗ:)
ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ|
ನರನಿಕಾಯದ ಜಲಚರೌಘದ
ತರದ ವಾದ್ಯಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ||೨ ||

ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ |
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ || ೩ ||

ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೊ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ |
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ || ೪ ||

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ || ೬ ||

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು
ಮಿಸುಕಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ || ೭ ||

ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು || ೮ ||

ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ || ೧೧||

ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ |
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ || ೧೨ ||

ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ |
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ || ೧೨ ||

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ |
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ || ೧೩ ||

ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು |
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ || ೧೮ ||


೦೦೦----
ನಿನಗೆ ತಲೆಬಾಗಿದ್ದೇನೆ ಸಾರಥಿಯೇ, ಕಳುಹಿಸಿ ಜೀವವುಳಿಸು
ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಂದವನಾಗತ್ತೇನೆ.
ಯುದ್ಧದಲ್ಲಿ ಈ ದೊಡ್ಡ ಸೈನ್ಯವನ್ನು ಸೋಲಿಸುವವರು ಉಂಟೇ?
ಅವರಿಂದ ಕೊಲ್ಲಿಸ ಬೇಡ - ನೀನೇ ಕೊಲ್ಲು, ತಗೋ
ಕಠಾರಿಯನ್ನು ಎಂದ, ಉತ್ತರ.

(ಕುಮಾರವ್ಯಾಸ ೪ ಸಂಧಿಯಲ್ಲಿ, ೨೫೯ ಪದ್ಯದಲ್ಲಿ,
ಅಧ್ಬುತ ಹಾಸ್ಯರಸವನ್ನು ಹರಿಸಿದ್ದಾನೆ.
ಉತ್ತರನ ಪೌರುಷ ಮನೆಮಾತಾಗಿದೆ)

ಕಂ|| ಮಚ್ಚರದಿನೊರ್ವರೊರ್ವರ
ನುಚ್ಚಳಿಸಿ ತಗುಳ್ದು ಗೋವರಾರ್ದಿಸೆ ಕೀೞಂ|
ಕರ್ಚಿ ಪುಡಿಯೊಳ್ ಪೊರಳ್ದುವು
ನಚ್ಚಿನ ಕಾಂಭೋಜವಾಜಿಗಳ್ ಕೆಲವಾಗಳ್|| ೯೪ ||
ಪದ್ಯ-೯೪:ಪದವಿಭಾಗ-ಅರ್ಥ:ಮಚ್ಚರದಿಂ ಒರ್ವರೊರ್ವರಂ ಉಚ್ಚಳಿಸಿ ತಗುಳ್ದು ಗೋವರು ಆರ್ದು ಇಸೆ (ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟಿಸಿ ಹೊಡೆಯಲು) ಕೀೞಂ ಕರ್ಚಿ (ಕಡಿವಾಣವನ್ನು ಕಚ್ಚಿಕೊಂಡೇ) ಪುಡಿಯೊಳ್ ಪೊರಳ್ದುವುನಚ್ಚಿನ ಕಾಂಭೋಜವಾಜಿಗಳ್ ಕೆಲವಾಗಳ್ (ಕೆಲವು ನೆಚ್ಚಿನ ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು)
ಪದ್ಯ-೯೫:ಅರ್ಥ: ಮತ್ಸರದಿಂದ ಒಬ್ಬರನ್ನೊಬ್ಬರು ಹಾರಿಸಿ ದನಕಾಯುವವರು ಆರ್ಭಟಿಸಿ ಹೊಡೆಯಲು, ಕೆಲವು ನೆಚ್ಚಿನ ಕಾಂಭೋಜದೇಶದ ಕುದುರೆಗಳು ಕಡಿವಾಣವನ್ನು ಕಚ್ಚಿಕೊಂಡೇ ಹುಡಿಯಲ್ಲಿ ಹೊರಳಿದುವು.
ವ|| ಅಂತು ಮತ್ತು ಮನದೊಳೊಡಂಬಟ್ಟಂತೆ ಮನಮನೆಡಗಲಿಸಿ ಪರಿವ ಜಾತ್ಯಶ್ವಂಗಳೆಲ್ಲ ಮೞಿಗಾಳೆಗದೊಳ್ ಸತ್ತೊಡೆ-
ವಚನ:ಪದವಿಭಾಗ-ಅರ್ಥ:ಅಂತು ಮತ್ತು ಮನದೊಳು ಒಡಂಬಟ್ಟಂತೆ (ಮನವೊಪ್ಪುವಂತೆ) ಮನಮನು ಎಡಗಲಿಸಿ ಪರಿವ (ಮೀರಿ ಓಡುವ) ಜಾತ್ಯಶ್ವಂಗಳೆಲ್ಲಂ ಅೞಿಗಾಳೆಗದೊಳ್ (ಆ ಸಣ್ಣಯುದ್ಧದಲ್ಲಿ )ಸತ್ತೊಡೆ-
ವಚನ:ಅರ್ಥ:ಹಾಗೆ ತಮ್ಮ ಮನವೊಪ್ಪುವಂತೆ ಮನಸ್ಸನ್ನೂ ಮೀರಿ ಓಡುವ ಜಾತಿಕುದುರೆಗಳೆಲ್ಲ ಆ ಸಣ್ಣಯುದ್ಧದಲ್ಲಿ ಸತ್ತಾಗ.
ಚಂ|| ತುಱು ಪರಿವಾಗಳೆಮ್ಮ ಪೆಣನಂ ತುೞಿದುಂ ಪರಿಗುಂ ದಲೆಂದು ಚಿ
ತುಱುಗೊಳೆ ಬಾೞೆಮೆಂದು ತುಱುಗೋಳೊಳೆ ಸಾವುದು ಸೈಪಿದೆಂದು ಪಾ|
ಯ್ದಱಿಕೆಯ ಗೋವರಣ್ಮಿ ಬರೆ ಪಾಯಿಸಿ ಘೋೞಯಿಲರ್ ತಗುಳ್ದು ತ
ತ್ತಱ ತಱಿದಿಕ್ಕಿ ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ತುಱು ಪರಿವಾಗಳು (ದನಗಳು ಓಡುವಾಗ) ಎಮ್ಮ ಪೆಣನಂ ತುೞಿದುಂ ಪರಿಗುಂ (ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲ,) ದಲ್ (ನಿಜಕ್ಕೂ) ಎಂದು ಚಿ ! ತುಱುಗೊಳೆ (ತುರು ಕೊಳೆ- ಕೊಳ್ಳಲು) ಬಾೞೆಮೆಂದು (ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು.) ತುಱುಗೋಳೊಳೆ ಸಾವುದು ಸೈಪಿದೆಂದು (ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ ಎಂದು) ಪಾಯ್ದು ಅಱಕೆಯ ಗೋವರ್ ಅಣ್ಮಿ ಬರೆ (ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷಪ್ರದರ್ಶನಮಾಡಿ ಬರಲು) ಪಾಯಿಸಿ ಘೋೞಯಿಲರ್ (ರಾವುತರು ಕುದರೆ ಹಾಯಿಸಿ) ತಗುಳ್ದು ತತ್ತಱ ತಱಿದಿಕ್ಕಿ (ಬೆನ್ನಟ್ಟಿ ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು.) ದೇಗುಲಕೆ ಪೆರ್ಮರನಂ ಕಡಿವಂತೆ ಮಾಡಿದರ್ (ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಮಾಡಿದರು.)
ಪದ್ಯ-೯೫:ಅರ್ಥ: ದನಗಳು ಓಡುವಾಗ ನಮ್ಮ ಹೆಣವನ್ನು ತುಳಿದುಕೊಂಡು ಓಡುತ್ತವೆಯಲ್ಲ, ದನಗಳನ್ನು ಶತ್ರುಗಳು ಹಿಡಿದರೆ ನಾವು ಬದುಕಿರಲಾರೆವು. ತುರುಗಾಳಗದಲ್ಲಿ ಸಾಯುವುದು ನಮ್ಮ ಪುಣ್ಯವೇ ಸರಿ ಎಂದು ಹಾಯ್ದು ಪ್ರಸಿದ್ಧರಾದ ಗೋಪಾಲಕರು ಪೌರುಷ ಪ್ರದರ್ಶನಮಾಡಿ ಬರಲು, ಕುದುರೆಯ ರಾವುತರು ಕುದುರೆಗಳನ್ನು ಮುನ್ನುಗ್ಗಿಸಿ ಅವರನ್ನು ಬೆನ್ನಟ್ಟಿ ದೇವಾಲಯಕ್ಕೆ ದೊಡ್ಡಮರವನ್ನು ಕಡಿಯುವಂತೆ ಚೂರುಚೂರಾಗಿ ಕತ್ತರಿಸಿದರು.
ವ|| ಆಗಳೊರ್ವ ಗೋವಳನನಿಬರ ಸಾವುಮಂ ಕಂಡು ಮನದೊಳಾದೇವಂ ಪೆರ್ಚೆಯುಂ ತುಱುವ ಪೋಗಿಂಗಾಱದೆ ವಿರಾಟಪುರಕ್ಕೆ ವಂದುತ್ತರಂಗೆ ಪೇೞುಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಒರ್ವ ಗೋವಳನು ಅನಿಬರ ಸಾವುಮಂ (ಅಷ್ಟುಮಂದಿಯ ಸಾವನ್ನು) ಕಂಡು ಮನದೊಳು ಆದೇವಂ ಪೆರ್ಚೆಯುಂ ತುಱುವ ಪೋಗಿಂಗೆ ಆಱದೆ (ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ) ವಿರಾಟಪುರಕ್ಕೆ ವಂದು ಉತ್ತರಂಗೆ ಪೇೞುಗಳ್ (ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು)-
ವಚನ:ಅರ್ಥ: ಆಗ ಒಬ್ಬ ಗೋಪಾಲಕನು ಅಷ್ಟುಮಂದಿಯ ಸಾವನ್ನು ಕಂಡು ಮನಸ್ಸಿನಲ್ಲಿ ಕೋಪವು ಹೆಚ್ಚಿಯೂ ಪಶುಗಳ ನಾಶವನ್ನು ಸಹಿಸಲಾರದೆಯೂ ವಿರಾಟನಗರಕ್ಕೆ ಬಂದು ಉತ್ತರನಿಗೆ ಆ ವಿಷಯವನ್ನು ತಿಳಿಸಿದನು.
ಚಂ|| ಪೆಱಗಣ ಕಾಪೆನ್ನನೆ ಮಹೀಪತಿ ಪೂಣಿಸಿ ಪೋದನಾಂ ಗಡಂ
ತುಱುಗೊಳೆ ಮಾಣೆನೆನ್ನಿದಿರ್ಗೆ ರಾವಣ ಕೋಟಿಯುಮಾಂತುಮೇಂ ಗೆಲಲ್|
ನೆರೆಗುಮೆ ತನ್ನಿಮಿನ್ನೆನಗೆ ಸಾರಥಿಯಪ್ಪನನೀಗಳೆಂದು ಪೊ
ಚ್ಚಱಿಸೆ ವಿರಾಟನಂದನನದೆಲ್ಲಮನಾಗಡೆ ವಿಕ್ರಮಾರ್ಜುನಂ|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ಪೆಱಗಣ ಕಾಪು ಎನ್ನನೆ (ನಗರದ ಹಿಂಗಾವಲಿಗೆ ನನ್ನನ್ನು) ಮಹೀಪತಿ ಪೂಣಿಸಿ ಪೋದನು (ರಾಜನು ನಿಯಮಿಸಿ ಹೋದನು) ಆಂ ಗಡಂ ತುಱುಗೊಳೆ ಮಾಣೆನು (ಆದರೂ ಪಶುಗಳನ್ನು ಸೆರೆಹಿಡಿಯುವುದಕ್ಕೆ ನಾನು ಬಿಡೆನು,) ಎನ್ನಿದಿರ್ಗೆ ರಾವಣ ಕೋಟಿಯುಂ ಆಂತುಮ್ ಏಂ ಗೆಲಲ್ ನೆಗುಮೆ (ನನ್ನ ಇದಿರಾಗಿ ಕೋಟಿ ರಾವಣರು ಬಂದ ಎದುರಿಸಿದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ?) ತನ್ನಿಂ ಇನ್ನು ಎನಗೆ ಸಾರಥಿಯಪ್ಪನನು ಈಗಳೆಂದು ಪೊಚ್ಚಱಿಸೆ (ನನಗೆ ಸಾರಥಿಯಾಗುವವನನ್ನು ಈಗಲೆ ತನ್ನಿರಿ ಎಂದು ಉತ್ತರಕುಮಾರನು ಉತ್ಸಾಹಿಸಲು)) ವಿರಾಟನಂದನನ ಅದೆಲ್ಲಮನು ಆಗಡೆ ವಿಕ್ರಮಾರ್ಜುನಂ ( ವಿರಾಟನ ಮಗನ ಅದೆಲ್ಲವನ್ನೂ ಅರ್ಜುನನು ಆಗ ಕೇಳುತ್ತಿದ್ದನು)
ಪದ್ಯ-೯೬:ಅರ್ಥ: ನಗರದ ಹಿಂಗಾವಲಿಗೆ ರಾಜನು ನನ್ನನ್ನು ನಿಯಮಿಸಿ ಹೋದನು. ಆದರೂ ಪಶುಗಳನ್ನು ಸೆರೆಹಿಡಿಯುವುದಕ್ಕೆ ನಾನು ಬಿಡೆನು, ನನ್ನ ಇದಿರಾಗಿ ಕೋಟಿ ರಾವಣರು ಬಂದರೆ ತಾನೆ ನನ್ನನ್ನು ಗೆಲ್ಲಲು ಸಾಧ್ಯವೇ? ನನಗೆ ಸಾರಥಿಯಾಗುವವನನ್ನು ಈಗಲೆ ತನ್ನಿರಿ ಎಂದು ಉತ್ತರಕುಮಾರನು ಉತ್ಸಾಹಿಸಲು, ವಿರಾಟನ ಮಗನ ಅದೆಲ್ಲವನ್ನೂ ಅರ್ಜುನನು ಆಗ ಕೇಳುತ್ತಿದ್ದನು.
ವ|| ಕೇಳ್ದಾ ಪೊೞ್ತೆ ಪೊೞ್ತಾಗೆ ದ್ರೌಪದಿಗೆ ಬೞಿಯನಟ್ಟಿ ಬರಿಸಿ-
ವಚನ:ಪದವಿಭಾಗ-ಅರ್ಥ:ಕೇಳ್ದು ಆ ಪೊೞ್ತೆ ಪೊೞ್ತಾಗೆ (ಆಹೊತ್ತೇ ಹೋತಾಗಿರಲು,) ದ್ರೌಪದಿಗೆ ಬೞಿಯನಟ್ಟಿ ಬರಿಸಿ (ದೂತರನ್ನು ಕಳುಹಿಸಿ ಬರಮಾಡಿದನು)-
ವಚನ:ಅರ್ಥ:ತಕ್ಷಣವೇ ದ್ರೌಪದಿಗೆ ದೂತರನ್ನು ಕಳುಹಿಸಿ ಅವಳನ್ನು ಬರಮಾಡಿದನು.
ಉ|| ಸಾರಥಿ ಮಾಡು ಮತ್ಸ್ಯಸುತನುತ್ತರನಂ ತದರಾತಿಸೈನ್ಯ ಕೂ
ಪಾರದ ಪಾರಮಂ ತಡೆಯದೆಯ್ದುವೆನೆಂಬುದುಮಂತೆ ಬಂದು ಪಂ|
ಕೇರುಹವಕ್ತ್ರೆ ಮತ್ಸ್ಯಸುತನಂ ನುಡಿದಳ್ ನಿನಗಾಜಿರಂಗದೊಳ್
ಸಾರಥಿಯಪ್ಪೊಡಪ್ಪುದು ಶಿಖಂಡಿಯೆ ನಿನ್ನೊರೆಗುಂತೆ ಗಂಡರಾರ್|| ೯೭ ||
ಪದ್ಯ-೯೭:ಪದವಿಭಾಗ-ಅರ್ಥ:ಸಾರಥಿ ಮಾಡು ಮತ್ಸ್ಯಸುತನು ಉತ್ತರನಂ (ಮತ್ಸ್ಯನ ಮಗನಾದ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು.) ತದ್ ಅರಾತಿಸೈನ್ಯ ಕೂಪಾರದ ಪಾರಮಂ (ಅವನ ಶತ್ರುಸೇನಾ ಸಮುದ್ರದ ಆಚೆಯ ತೀರವನ್ನು,) ತಡೆಯದೆ ಎಯ್ದುವೆನೆಂಬುದುಂ (ತಡಮಾಡದೆ ಸೇರುತ್ತೇನೆ, - ಗೆಲ್ಲುತ್ತೇನೆ), ಅಂತೆ ಬಂದು ಪಂಕೇರುಹವಕ್ತ್ರೆ (ಕಮಲದ ಕಣ್ನಿನ ದ್ರೌಪದಿ) ಮತ್ಸ್ಯಸುತನಂ (ಉತ್ತರನಿಗೆ) ನುಡಿದಳ್ (ದ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು) ನಿನಗೆ ಆಜಿರಂಗದೊಳ್ ಸಾರಥಿಯಪ್ಪೊಡೆ ಅಪ್ಪುದು ಶಿಖಂಡಿಯೆ, (ನಿನಗೆ ಯುದ್ಧರಂಗದಲ್ಲಿ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು,) ನಿನ್ನ ಒರೆಗೆ ಉಂತೆ (ಸುಮ್ಮನೆ) ಗಂಡರಾರ್ (ನಿನಗೆ ಸಮಾನರಾದ ಶೂರರಾಗಿದ್ದಾರೆ? -ಎಂದಳು.)
ಪದ್ಯ-೯೭:ಅರ್ಥ:ಅರ್ಜುನ ದ್ರೌಪದಿಗೆ ಹೇಳಿದ: ‘ಮತ್ಸ್ಯನ ಮಗ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು. ಅವನ ಶತ್ರುಸೇನಾಸಮುದ್ರದ ಆಚೆಯ ತೀರವನ್ನು ತಡಮಾಡದೆ ಸೇರುತ್ತೇನೆ, - ಗೆಲ್ಲುತ್ತೇನೆ, ಎಂದು ಹೇಳಿದನು. ದ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು. ನಿನಗೆ ಯುದ್ಧರಂಗದಲ್ಲಿ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು. ಸುಮ್ಮನೆ- ನಿನಗೆ ಸಮಾನರಾದ ಶೂರರಾಗಿದ್ದಾರೆ? ಎಂದಳು.
ವ||ಎಂಬುದುಂ ಬೃಹಂದಳೆಯಲ್ಲಿಗುತ್ತರಂ ತನ್ನ ತಂಗೆಯುತ್ತರೆಯನೆ ಬೞಯನಟ್ಟಿ ಬರಿಸಿ-
ವಚನ:ಪದವಿಭಾಗ-ಅರ್ಥ: ಎಂಬುದುಂ ಬೃಹಂದಳೆಯಲ್ಲಿಗೆ ಉತ್ತರಂ ತನ್ನ ತಂಗೆಯು ಉತ್ತರೆಯನೆ ಬೞಯನು ಅಟ್ಟಿ ಬರಿಸಿ-
ವಚನ:ಅರ್ಥ:ಸೈರಂಧ್ರಿಯು ಎಂದಾಗ- ಉತ್ತರನು ತನ್ನ ತಂಗಿಯಾದ ಉತ್ತರೆಯ ಮೂಲಕ ಸಮಾಚಾರವನ್ನು ಕಳುಹಿಸಿ ಬೃಹಂದಳೆಯನ್ನು ಬರಮಾಡಿದನು
ಉ|| ಸಾರಥಿಯಪ್ಪೊಡಪ್ಪನೆನಗೀತನೆ ಪೋ ಪೆಱರೇವರಿನ್ ನೆರಂ
ಬಾರೆನೆನುತ್ತೆ ತನ್ನ ರಥಮಂ ತರವೇೞ್ದಿರದೆಯ್ದೆ ಘೋರ ಕಾಂ||
ತಾರಮನೊಂದು ಬೇಗೆ ಪರಿವಂತು ರಥಂ ಪರಿದತ್ತು ವೈರಿ ಕಾಂ
ತಾರಮನೞ್ವಲಂಕದ ಬೃಹಂದಳೆ ಚೋದಿಸೆ ಚೋದ್ಯಮುಪ್ಪಿನಂ|| ೯೮ ||
ಪದ್ಯ-೯೮:ಪದವಿಭಾಗ-ಅರ್ಥ: ಸಾರಥಿಯಪ್ಪೊಡೆ ಅಪ್ಪನು ಎನಗೆ ಈತನೆ (ನನಗೆ ಸಾರಥಿಯಾಗುವುದಾದರೆ ಈತನೇ ಆಗುವನು, ಸಮರ್ಥ) ಪೋ ಪೆಱರ್ ಏವರಿನ್ ನೆರಂ ಬಾರೆನು ಎನುತ್ತೆ (ಹೋಗು, ಇತರರು ಏಕೆಬೇಕು? ಇನ್ನು ಯಾರ ನೆರವನ್ನೂ ನಾನು ಅಪೇಕ್ಷಿಸುವುದಿಲ್ಲ ಎನ್ನುತಾ) ತನ್ನ ರಥಮಂ ತರವೇೞ್ದು ಇರದೆ ಎಯ್ದೆ (ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೋದಾಗ,) ಘೋರ ಕಾಂತಾರಮನೊಂದು ಬೇಗೆ (ಬೆಂಕಿ)) ಪರಿವಂತು ರಥಂ ಪರಿದತ್ತು (ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ರಥವು ಹರಿದೋಡಿತು.) ವೈರಿ ಕಾಂತಾರಮನು ಉೞ್ವಲ್ (ಶತ್ರುಗಳೆಂಬ ಕಾಡಿನ್ನು ಸುಡಲು) ಅಂಕದ ಬೃಹಂದಳೆ ಚೋದಿಸೆ ಚೋದ್ಯಮುಪ್ಪಿನಂ (ಪ್ರಸಿದ್ಧ ಬೃಹಂದಳೆ ಪ್ರೇರೇಪಿಸಲು ಆಶ್ಚರ್ಯವುಂಟಾಗುವ ಹಾಗೆ)(ಪ್ರಸಿದ್ಧ ಬೃಹಂದಳೆ ಪ್ರೇಪಿಸಲು ಆಶ್ಚರ್ಯವುಂಟಾಗುವ ಹಾಗೆ ಶತ್ರುಗಳೆಂಬ ಕಾಡಿನ್ನು ಸುಡಲು ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ರಥವು ಹರಿದೋಡಿತು.)
ಪದ್ಯ-೯೮:ಅರ್ಥ: ನನಗೆ ಸಾರಥಿಯಾಗುವುದಾದರೆ ಈತನೇ ಆಹುವನು,ಸಮರ್ಥ; ಇತರರು ಏನು ಮಾಡಿಯಾರು? ಇನ್ನು ಯಾರ ನೆರವನ್ನೂ ನಾನು ಅಪೇಕ್ಷಿಸುವುದಿಲ್ಲ, ಎನ್ನುತಾ ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೋದಾಗ. ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ರಥವು ಹರಿದೋಡಿತು. ಶತ್ರುಗಳೆಂಬ ಕಾಡಿನ ಕಡೆಗೆ ತೇರು ಧಾವಿಸಿತು. ಪ್ರಸಿದ್ಧ ಬೃಹಂದಳೆ ಪ್ರೇರೇಪಿಸಲು ಆಶ್ಚರ್ಯವುಂಟಾಗುವ ಹಾಗೆ ಶತ್ರುಗಳೆಂಬ ಕಾಡಿನ್ನು ಸುಡಲು ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ರಥವು ಹರಿದೋಡಿತು.
ವ|| ಅಂತು ಕಿಱದಂತರಮಂ ಪೋಗೆವೋಗೆ-
ವಚನ:ಪದವಿಭಾಗ-ಅರ್ಥ:ಅಂತು ಕಿಱದು ಅಂತರಮಂ ಪೋಗೆವೋಗೆ-
ವಚನ:ಅರ್ಥ:ವ|| ಹಾಗೆ ಸ್ವಲ್ಪ ದೂರ ಹೋಗುಹೋಗುತ್ತಾ
ಚಂ|| ಕರಿಘಟೆ ನೀಳಮೇಘಘಟೆಯಂತೆ ತುರಂಗದೞಂ ಸಮುದ್ರದೊಳ್
ತರತರದಿಂದಮೇೞ್ವ ತೆರೆಯಂತೆ ರಥಂ ಮಕರಂಗಳಂತಗು
ರ್ವುರಿವರಿಯುತ್ತಮಿರ್ಪಣಿ ಬೃಹದ್ಬಡಬಾನಳನಂತೆ ತೋರೆ ಭೀ
ಕರತರಮಾದುದುತ್ತರನ ಕಣ್ಗೆ ಸುಯೋಧನಸೈನ್ಯಸಾಗರಂ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ಕರಿಘಟೆ (ಆನೆಯ ಸಮೂಹ) ನೀಳಮೇಘ ಘಟೆಯಂತೆ ತುರಂಗ ದೞಂ (ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ, ಕುದುರೆಯ ಸೈನ್ಯವು) ಸಮುದ್ರದೊಳ್ ತರತರದಿಂದಂ ಏೞ್ವ ತೆರೆಯಂತೆ (ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆ;) ರಥಂ ಮಕರಂಗಳಂತೆ (ರಥಗಳು ಮೊಸಳೆಗಳಂತೆಯೂ) ಅಗುರ್ವ ಉರಿ ವರಿಯುತ್ತಂ ಇರ್ಪ ಅಣಿ- ಕಾಲಾಳು ಸೈನ್ಯ (ಭಯಂಕರವಾದ ಬೆಂಕಿಯ ಹರಿದುಬರುತ್ತಿರುವಂತೆಯೂ, ಪದಾತಿಸೈನ್ಯವು) ಬೃಹದ್ಬಡಬಾನಳನಂತೆ ತೋರೆ (ದೊಡ್ಡ ಬಡಬಾಗ್ನಿಯಂತೆಯೂ ಕಾಣಲು) ಭೀಕರತರಮಾದುದು ಉತ್ತರನ ಕಣ್ಗೆ ಸುಯೋಧನಸೈನ್ಯಸಾಗರಂ (ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು)
ಪದ್ಯ-೯೯:ಅರ್ಥ:ಉತ್ತರನ ಎದುರು: ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ, ಕುದುರೆಯ ಸೈನ್ಯವು ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆಯೂ, ರಥಗಳು ಮೊಸಳೆಗಳಂತೆಯೂ, ಪದಾತಿಸೈನ್ಯವು ದೊಡ್ಡ ಕಿಚ್ಚಿನಂತೆ ಹರಿದುಬರುತ್ತಿರುವ ದೊಡ್ಡ ಬಡಬಾಗ್ನಿಯಂತೆಯೂ, ಕಾಣಲು ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು.
ವ|| ಆಗಳದಂ ಕಂಡುತ್ತರನೊತ್ತರಮೊತ್ತಿದಂತೆ ಬೆರ್ಚಿ ಬೆಗಡುಗೊಂಡು-
ವಚನ:ಪದವಿಭಾಗ-ಅರ್ಥ: ಆಗಳದಂ ಕಂಡು ಉತ್ತರನು ಒತ್ತರಮೊತ್ತಿದಂತೆ ಬೆರ್ಚಿ (ಒಂದೇಸಲಕ್ಕೆ ಆಕ್ರಮಿಸಲ್ಪಟ್ಟವನ ಹಾಗೆ ಬೆದರಿ) ಬೆಗಡುಗೊಂಡು-
ವಚನ:ಅರ್ಥ:ಅದನ್ನು ನೋಡಿ ಉತ್ತರನು ಒಂದೇಸಲಕ್ಕೆ ಆಕ್ರಮಿಸಲ್ಪಟ್ಟವನ ಹಾಗೆ ಬೆದರಿ ಭಯವನ್ನು ಹೊಂದಿ-
ಉ|| ನೋಡಲೞುಂಬಮೆಂದೊಡಿದನಾಂತಿಱಿದಾರ್ ತವಿಪನ್ನರೆಂದು ನಾ
ಣೋಡೆ ವಿರಾಟಸೂನು ರಥದಿಂದಿೞಿದೋಡಿದೊಡೆಯ್ದೆ ಪೂಣ್ದು ಬೆ|
ರ್ಚೋಡೆ ಕಿರೀಟಿ ತನ್ನನಱಿಪುತ್ತೆ ಶವಿದ್ರುಮದಲ್ಲಿಗಾತನಂ
ನೀಡಿರದುಯ್ದು ನೀಡಿಸಿದನಾತನಿನಲ್ಲಿಯ ಕೈದುವೆಲ್ಲಮಂ|| ೧೦೦ ||
ಪದ್ಯ-೧೦೦:ಪದವಿಭಾಗ-ಅರ್ಥ:ನೋಡಲ್ ಅೞುಂಬಮೆಂದೊಡೆ (ನೋಡುವುದಕ್ಕೇ ಅಸಾಧ್ಯವಾಗಿರುವಾಗ) ಇದನು ಆಂತು ಇಱಿದು ಅರ್ ತವಿಪನ್ನರ್ ಎಂದು (ಇದನ್ನು ಎದುರಿಸಿ ಹೊಡೆದು ನಾಶಮಾಡುವವರಾರು’ ಎಂದು) ನಾಣ್ ಓಡೆ (ನಾಚಿಕೆ ಹೊಗಲು) ವಿರಾಟಸೂನು ರಥದಿಂದಿೞಿದು ಓಡಿದೊಡೆ (ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಲು-) ಎಯ್ದೆ ಪೂಣ್ದು ಬೆರ್ಚೋಡೆ (ಹೀಗೆ ಚೆನ್ನಾಗಿ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಲು,) ಕಿರೀಟಿ ತನ್ನನು ಅಱಿಪುತ್ತೆ (ಅರ್ಜುನನು ತನ್ನ ಪರಿಚಯವನ್ನು ತಿಳಿಸುತ್ತ), ಶವಿದ್ರುಮದಲ್ಲಿಗೆ ಆತನಂ ನೀಡಿರದೆ ಉಯ್ದು (ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ) ನೀಡಿಸಿದನು ಆತನಿಂ ಅಲ್ಲಿಯ ಕೈದುವೆಲ್ಲಮಂ (ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು- )
ಪದ್ಯ-೧೦೦:ಅರ್ಥ: . ‘ನೋಡುವುದಕ್ಕೇ ಅಸಾಧ್ಯವಾಗಿರುವಾಗ, ಇದನ್ನು ಎದುರಿಸಿ ಹೊಡೆದು ನಾಶಮಾಡುವವರಾರು’ ಎಂದು ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಲು. ಚೆನ್ನಾಗಿ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಲು, ಉತ್ತರನಿಗೆ ಅರ್ಜುನನು ತನ್ನ ಪರಿಚಯವನ್ನು ತಿಳಿಸುತ್ತ, ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ, ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು- (ತೆಗೆಸಿಕೊಂಡನು)
ವ|| ಹಾಗೆ ಅರ್ಜುನನು ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ಬಾನಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ವಿಜಯಸೂಚಕವಾಗಿಯೇ ಅಂಗೀಕರಿಸಿದನು. ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ ಪೂರ್ಣವಾಗಿ
ವಚನ:ಪದವಿಭಾಗ-ಅರ್ಥ: ಅಂತು ಗಾಂಡೀವಿ ಗಾಂಡೀವಂ ಮೊದಲಾಗೆ (ಮೊದಲಾದ) ದಿವ್ಯಶರಾಸನಶರ ವಿಚಿತ್ರ ತನುತ್ರಂಗಳೆಲ್ಲಮಂ ಎಲ್ಲಮಂ (ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ಬಾಣಗಳನ್ನೂ ವಿಚಿತ್ರವಾದ ಕವಚಗಳನ್ನೂ) ತನಗೆ ಆವಗಂ ಕೊಳ್ವಂತೆ ಕೊಂಡು (ತನಗೆ ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಪಡೆದು) ಪಗೆವರ ಗಂಟಲ ಬಳೆಯನು ಒಡೆದು ಕಳೆವುದನನು ಅಕರಿಸುವಂತೆ (ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ) ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ಕಳೆದು (ಪೂರ್ಣವಾಗಿ ತೊಟ್ಟಿದ್ದ ಮುಂಗಯ್ಯಿನ ಬಳೆಗಳನ್ನು ಒಡೆದುಹಾಕಿದನು)-
ವಚನ:ಅರ್ಥ:ಹಾಗೆ ಗಾಂಡೀವಿ ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ಬಾಣಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಪಡೆದು ಪಗೆವರ ಗಂಟಲ ಬಳೆಯನೊಡೆದು ಕಳೆವುದನನುಕರಿಸುವಂತೆ ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ತೆಗೆದು ತೊಟ್ಟಿದ್ದ ಮುಂಗಯ್ಯಿನ ಬಳೆಗಳನ್ನು ಒಡೆದುಹಾಕಿದನು.
ಚಂ|| ಬಿಡೆ ಪಿಣಿಲಂ ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದಂದು ಗಂ
ಡುಡೆಯುಡೆ ಗಂಡುಗೆಟ್ಟುದು ನೆಗೞ್ತೆಯ ಗಾಂಡಿವಮಂ ತಗುಳ್ದು ಜೇ|
ವೊಡೆಯೆ ಸಿಡಿಲ್ ಸಿಡಿಲ್ದು ಪೊಡೆವಂತೆವೊಲಾಯ್ತೆನೆ ಗಂಡಗಾಡಿ ನೂ
ರ್ಮಡಿ ಮಿಗಿಲಾದುದಾ ರಥಮನೇಱಲೊಡಂ ಪಡೆಮೆಚ್ಚೆಗಂಡನಾ|| ೧೦೧ ||
ಪದ್ಯ-೧೦೧:ಪದವಿಭಾಗ-ಅರ್ಥ:ಬಿಡೆ ಪಿಣಿಲಂ (ಹೆರಳನ್ನು ಬಿಡೆ- ಬಿಚ್ಚಲು) ಕುರುಧ್ವಜಿನಿ ತೊಟ್ಟನೆ ಬಾಯನೆ ಬಿಟ್ಟುದು ಅಂದು (ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಬಾಯಿಬಿಟ್ಟು ನೋಡಿತು) ಗಂಡುಡೆಯುಂ ಉಡೆ ಗಂಡುಗೆಟ್ಟುದು (ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು (ನಪುಂಸಕತನ ಹೋಗಿ) ತನ್ನ ಪುರುಷತನ ತೋರಿತು.) ನೆಗೞ್ತೆಯ ಗಾಂಡಿವಮಂ ತಗುಳ್ದು ಜೇವೊಡೆಯೆ (ಪ್ರಸಿದ್ಧ ಗಾಂಡೀವವನ್ನು ಹಿಡಿದು ಹೆದೆಯ ಝೇಂಕಾರ ಶಬ್ದಮಾಡಲು) ಸಿಡಿಲ್ ಸಿಡಿಲ್ದು ಪೊಡೆವಂತೆವೊಲ್ ಆಯ್ತೆನೆ (ಸಿಡಿಲು ಸಿಡಿದು ಹೊಡೆದಂತೆ ಆಯಿತು, ಎನ್ನುವಾಗ) ಗಂಡಗಾಡಿ ನೂರ್ಮಡಿ ಮಿಗಿಲಾದುದು ಆ ರಥಮನು ಏಱಲೊಡಂ ಪಡೆಮೆಚ್ಚೆಗಂಡನಾ (ಪಡೆಮೆಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರುಮಡಿ ಹೆಚ್ಚಾಯಿತು.)|
ಪದ್ಯ-೧೦೧:ಅರ್ಥ: ಬೃಹನ್ನಳೆಯಾಗಿ ಕಟ್ಟಿದ್ದ ಕೂದಲಿನ ಗಂಟನ್ನು (ಹೆರಳನ್ನು) ಬಿಚ್ಚಲು ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಮತ್ತು ಭಯದಿಂದ ಬಾಯಿಬಿಟ್ಟಿತು. ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು ನಪುಂಸಕತನ ಹೋಗಿ ತನ್ನ ಪುರುಷತನ ತೋರಿತು. ಪ್ರಸಿದ್ಧ ಗಾಂಡೀವವನ್ನು ಹಿಡಿದು ಹೆದೆಯ ಝೇಂಕಾರ ಶಬ್ದಮಾಡಲು ಸಿಡಿಲು ಸಿಡಿದು ಹೊಡೆದಂತೆ ಆಯಿತು ಎನ್ನುವಾಗ, ಪಡೆಮೆಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರುಮಡಿ ಹೆಚ್ಚಾಯಿತು.
ವ|| ಅನ್ನೆಗಮತ್ತ ಪರಸೈನ್ಯಭೈರವನ ಬರವಿಂಗಳ್ಕಿ ಗಾಂಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುಧ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ-
ವಚನ:ಪದವಿಭಾಗ-ಅರ್ಥ: ಅನ್ನೆಗಂ ಅತ್ತ ಪರಸೈನ್ಯಭೈರವನ ಬರವಿಂಗೆ ಅಳ್ಕಿ (ಅಷ್ಟರಲ್ಲಿ ಆ ಕಡೆ ಪರಸೈನ್ಯಭೈರವನಾದ ಅರ್ಜುನನ ಬರವಿಕೆಯನ್ನು ಕಂಡು ಹೆದರಿ) ಗಾಂಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುಧ್ವಜಿನಿಯಂ ಕಂಡು (ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ಗಡಗಡ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ) ಸುಯೋಧನಂಗೆ ಗಾಂಗೇಯನು (ಭೀಷ್ಮನು) ಇಂತೆಂದಂ-
ವಚನ:ಅರ್ಥ: ಅಷ್ಟರಲ್ಲಿ ಆ ಕಡೆ ಪರಸೈನ್ಯಭೈರವನಾದ ಅರ್ಜುನನ ಬರವಿಕೆಯನ್ನು ಕಂಡು ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ಗಡಗಡ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು.
ಚಂ|| ಅವಧಿಯ ಲೆಕ್ಕಮಂ ನೆಱಪಿ ನನ್ನಿಗೆ ಮಾಣದೆ ಕಾದಲೆಂದು ಬಂ
ದವನಿವನರ್ಜುನಂ ತೊಡರ್ದು ನಿಲ್ಲದೆ ನೀನೊಡಗೊಂಡು ಪೋಗು ಗೋ|
ವಹಮನಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂ
ಬಿವರ್ವೆರಸಾಂಪೆನಾನಿನಿಸನೀ ಯೆಡೆಯೊಳ್ ಕದನತ್ರಿಣೇತ್ರನಂ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಅವಧಿಯ ಲೆಕ್ಕಮಂ ನೆಱಪಿ (ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ) ನನ್ನಿಗೆ ಮಾಣದೆ ಕಾದಲೆಂದು ಬಂದವನು ಇವನು ಅರ್ಜುನಂ(ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ), ತೊಡರ್ದು ನಿಲ್ಲದೆ ನೀನು ಪೋಗು, (ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಒಡಗೊಂಡು-- ಹಿಂತಿರುಗಿಹೋಗು) ಗೋವಹಮನು (ಪಶುಸಮೂಹವನ್ನು); ಅಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂಬ ಇವರ್ವೆರಸಿ ಆಂಪೆನು ಆನ್ ಇನಿಸಂ ಈ ಯೆಡೆಯೊಳ್ ಕದನತ್ರಿಣೇತ್ರನಂ (ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಇನಿಸಂ- ಸ್ವಲ್ಪಮಟ್ಟಿಗೆ ಆಂಪೆನು- ಎದುರಿಸುತ್ತೇನೆ ಎಂದನು)
ಪದ್ಯ-೧೦೨:ಅರ್ಥ:ಸತ್ಯವಾಕ್ಕಿಗೆ ತಪ್ಪದೆನಡೆದು, ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ, ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ. ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಪಶುಸಮೂಹವನ್ನು ಒಡಗೊಂಡು ಹಿಂತಿರುಗಿಹೋಗು. ಕರ್ಣ, ಕೃಪ, ದ್ರೋಣರೇ ಮುಖ್ಯರಾದ ಪ್ರವೀರರೆಂಬ ಇವರನ್ನು ಸೇರಿಕೊಂಡು ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಸ್ವಲ್ಪಮಟ್ಟಿಗೆ ಎದುರಿಸುತ್ತೇನೆ ಎಂದನು.
ವ|| ಎಂಬುದುಂ ಸುಯೋಧನಂ ಪಿರಿದುಮಾಕುಳಂಬೆರಸು ಗೋಕುಲಮಂ ಕೊಂಡುಪೋಗೆ ಪೋಗಲೀಯದುತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಸುಯೋಧನಂ ಪಿರಿದುಂ ಆಕುಳಂಬೆರಸು (ವಿಶೇಷ ಗಾಬರಿಯಿಂದ ಕೂಡಿ) ಗೋಕುಲಮಂ ಕೊಂಡುಪೋಗೆ (ಪಶುಸಮೂಹವನ್ನು ಒಡಗೊಂಡು ಹೋಗಲು) ಪೋಗಲೀಯದೆ ಉತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದು (ಹಾಗೆ ಹೋಗುವುದಕ್ಕೆ ಬಿಡದೆ ಉತ್ತರನನ್ನು ತೇರನ್ನು ನಡೆಸುವಂತೆ ಹೇಳಿ- ಸಮೀಪಕ್ಕೆ ಬಂದು-)
ವಚನ:ಅರ್ಥ:ದುರ್ಯೋಧನನು ವಿಶೇಷ ಗಾಬರಿಯಿಂದ ಕೂಡಿ ಪಶುಸಮೂಹವನ್ನು ಒಡಗೊಂಡು ಹೋಗಲು ಹಾಗೆ ಹೋಗುವುದಕ್ಕೆ ಬಿಡದೆ ಉತ್ತರನನ್ನು ತೇರನ್ನು ನಡೆಸುವಂತೆ ಹೇಳಿ (ಅರ್ಜುನನು ದುರ್ಯೋಧನನ) ಸಮೀಪಕ್ಕೆ ಬಂದನು.
ಮ|| ಪಗೆ ತೀರ್ಗುಂ ಬಗೆ ತೀರ್ಗುಮಾ ಕುರುಕುಳಪ್ರಖ್ಯಾತನಂ ಕಾದಿ ತೊ
ಟ್ಟಗೆ ಗೋವೃಂದಮನಾಂ ಮಗುೞ್ಚಿದಪೆನೆಂದಾರ್ದೆಚ್ಚು ತನ್ನಂಕದಂ|
ಬುಗಳೊಂದೊಂದಱಲೊಂದು ಲಕ್ಕ ಬಲಮಂದೞ್ಕಾಡೆ ದುರ್ಯೋಧನಂ
ಮಿಗೆ ಸೋಲ್ತೋಡೆ ಮಗುೞ್ಚಿದಂ ತುಱುಗಳಂ ವಿದ್ವಿಷ್ಟವಿದ್ರಾವಣಂ|| ೧೦೩ ||
ಪದ್ಯ-೧೦೩:ಪದವಿಭಾಗ-ಅರ್ಥ: ಪಗೆ ತೀರ್ಗುಂ ಬಗೆ ತೀರ್ಗುಂ ( ಶತ್ರುವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ.) ಆ ಕುರುಕುಳಪ್ರಖ್ಯಾತನಂ ಕಾದಿ ತೊಟ್ಟಗೆ ಗೋವೃಂದಮನು ಆ ಮಗುೞ್ಚಿದಪೆನೆಂದು ಆರ್ದು ಎಚ್ಚು (ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ಧಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಬಾಣವನ್ನು ಹೊಡೆದು) ತನ್ನ ಅಂಕದ ಅಂಬುಗಳೊಂದೊಂದಱಲಿ ಒಂದು ಲಕ್ಕ ಬಲಮಂ ಅಂದು ಅೞ್ಕಾಡೆ (ತನ್ನ ಪ್ರಸಿದ್ಧವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು) ದುರ್ಯೋಧನಂಮಿಗೆ ಸೋಲ್ತೋಡೆ ( ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದಾಗ) ಮಗುೞ್ಚಿದಂ ತುಱುಗಳಂ ವಿದ್ವಿಷ್ಟವಿದ್ರಾವಣಂ (- ಅರ್ಜುನ);(ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು.)
ಪದ್ಯ-೧೦೩:ಅರ್ಥ: ಶತ್ರುತ್ವವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ. ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ಧಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಹೊಡೆದು ತನ್ನ ಪ್ರಸಿದ್ಧವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದಾಗ ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು.
ಚಂ|| ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಿಯೊಳ್ ತೊಡಂಕಿ ನಿ
ಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಱುವ|
ಗ್ಗದ ನಿಡುಗೋಡು ಮೇಡುಮಮರುತ್ತುಮಿಱುಂಕಿದ ಕೆಚ್ಚಲೆತ್ತಮೆ
ತ್ತಿದ ಕುಡಿವಾಲಮಂದೆಸೆಯೆ ಕರ್ಬಸುಗಳ್ ಪರಿಗೊಂಡುವಾಜಿಯೊಳ್|| ೧೦೪ ||
ಪದ್ಯ-೧೦೪:ಪದವಿಭಾಗ-ಅರ್ಥ:ಅದಟರ ಚೆನ್ನಪೊಂಗರ ಸಬಂಗಳ ತೊೞ್ತುೞಿಯೊಳ್ ತೊಡಂಕಿ (ಶೂರರ ಮತ್ತು ವೀರರ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡು) ನಿಲ್ಲದೆ ಪೊಱಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ (ನಿಲ್ಲದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ) ತೋಱುವಗ್ಗದ ನಿಡುಗೋಡು ಮೇಡುಂ ಅಮರುತ್ತುಂ ಇಱುಂಕಿದ ಕೆಚ್ಚಲ್ (ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ) ಎತ್ತಮೆತ್ತಿದ ಕುಡಿವಾಲಂ ಅಂದು ಎಸೆಯೆ ಕರ್ಬಸುಗಳ್ (ಕಪ್ಪು ಹಸುಗಳು) ಪರಿಗೊಂಡವು ಆಜಿಯೊಳ್ (ಯುದ್ಧರಂಗದಲ್ಲಿ ಓಡಿಹೋದುವು.)
ಪದ್ಯ-೧೦೪:ಅರ್ಥ: . ಶೂರರ ಮತ್ತು ವೀರರ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡು ನಿಲ್ಲದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ, ಸಂಪೂರ್ಣವಾಗಿ ಮೇಲೆತ್ತಿಕೊಂಡಿರುವ ಬಾಲದ ತುದಿಯೂ ಪ್ರಕಾಶಿಸುತ್ತಿರಲು ಕರಿಯ ಹಸುಗಳು, ಯುದ್ಧರಂಗದಲ್ಲಿ ಓಡಿಹೋದುವು.
ವ|| ಅಂತು ತುಱುವಂ ಮಗುೞ್ಚಿ ಮಗುೞದೆ ತನಗಿದಿರೊಡ್ಡಿ ನಿಂದರಿನೃಪಬಲಮನರೆದು ಸದೆದು-
ವಚನ:ಪದವಿಭಾಗ-ಅರ್ಥ:ಅಂತು ತುಱುವಂ ಮಗುೞ್ಚಿ (ಹಸುಗಳನ್ನು ಹಿಂತಿರುಗಿಸಿ) ಮಗುೞದೆ ತನಗೆ ಇದಿರೊಡ್ಡಿ ನಿಂದ ಅರಿನೃಪಬಲಮನು(ಹಿಂತಿರುಗದೆ ತನಗೆ ಎದುರಿಸಿ ನಿಂತ ಶತ್ರುಸೈನ್ಯವನ್ನು ) ಅರೆದು ಸದೆದು (ಪುಡಿಮಾಡಿ ನಾಶಪಡಿಸಿದನು)-
ವಚನ:ಅರ್ಥ: ಹಾಗೆ ಹಸುಗಳನ್ನು ಹಿಂತಿರುಗಿಸಿ, ಹಿಂತಿರುಗದೆ ತನಗೆ ಎದುರಸಿ ನಿಂತ ಶತ್ರುಸೈನ್ಯವನ್ನು ಪುಡಿಮಾಡಿ ನಾಶಪಡಿಸಿದನು
ಅರ್ಉನನು ಕೌರವರನ್ನು ಸೋಲಿಸಿ - ಉತ್ತರನೊಡನೆ ವಿರಾಟನಗರ ಪ್ರವೇಶ[ಸಂಪಾದಿಸಿ]
ಚಂ|| ಪೞುವೞಿಯಂ ತಗುಳ್ದಳುರ್ವ ಬೇಗೆವೊಲೆಚ್ಚ ಶರಾಳಿಗಳ್ ಛೞಿಲ್
ಛೞಿಲೆನೆ ಪಾಯೆ ಪಾಯ್ವ ಬಿಸುನೆತ್ತರ ಸುಟ್ಟುರೆ ಚಾತುರಂಗಮಂ|
ಕೞಕುಱಮಾಗೆ ಪೇೞೆಪೆಸರಿಲ್ಲೆನೆ ಪಾಯಿಸಿ ತೇರನೆಯ್ದೆ ತೊ
ತ್ತೞದುೞಿದತ್ತು ವೈರಿಬಲಮೆಲ್ಲಮನಮ್ಮನ ಗಂಧವಾರಣಂ|| ೧೦೫ ||
ಪದ್ಯ-೧೦೫:ಪದವಿಭಾಗ-ಅರ್ಥ: ಪೞುವೞಿಯಂ ತಗುಳ್ದು ಅಳುರ್ವ (ಅರಣ್ಯಮಾರ್ಗವನ್ನು ಅನುಸರಿಸಿ ವ್ಯಾಪಿಸುವ) ಬೇಗೆವೊಲ್ ಎಚ್ಚ ಶರಾಳಿಗಳ್ -ಶರ ಆಳಿಗಳ್ (ಬಿಟ್ಟ ಅರ್ಜುನನ ಬಾಣಸಮೂಹಗಳು) ಛೞಿಲ್ಛೞಿಲೆನೆ ಪಾಯೆ (ಛಳಿಲ್ ಛಳಿಲ್ ಎಂದು ನುಗ್ಗಲು) ಪಾಯ್ವ ಬಿಸುನೆತ್ತರ (ಹರಿದುಬರುತ್ತಿರುವ ಬಿಸಿರಕ್ತದ ) ಸುಟ್ಟುರೆ (ಸುಂಟರಗಾಳಿಯಿಂದ) ಚಾತುರಂಗಮಂ ಕೞಕುಱಮಾಗೆ (ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿ) ಪೇೞೆಪೆಸರಿಲ್ಲೆನೆ (ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ)ಪಾಯಿಸಿ ತೇರನು ಎಯ್ದೆ(ತೇರನ್ನು ಚೆನ್ನಾಗಿ ಹಾಯಿಸಿ) ತೊತ್ತೞದುೞಿದತ್ತು- ತೊತ್ತಳ ತುಳಿದತ್ತು(ತುಳಿದುತುಳಿದು ಹಾಕಿತ್ತು.) ವೈರಿಬಲಮೆಲ್ಲಮಂ ಅಮ್ಮನ ಗಂಧವಾರಣಂ (ಪ್ರೀತಿಯ/ ಅಪ್ಪನ? ಸೊಕ್ಕಾನೆ- ಅರ್ಜುನ) |
ಪದ್ಯ-೧೦೫:ಅರ್ಥ: . ಅರಣ್ಯಮಾರ್ಗವನ್ನು ಅನುಸರಿಸಿ ವ್ಯಾಪಿಸುವ ಕಿಚ್ಚಿನ ಹಾಗೆ ಬಿಟ್ಟ ಅರ್ಜುನನ ಬಾಣಸಮೂಹಗಳು ಛಳಿಲ್ ಛಳಿಲ್ ಎಂದು ನುಗ್ಗಲು ಹರಿದುಬರುತ್ತಿರುವ ಬಿಸಿರಕ್ತದ ಸುಂಟರಗಾಳಿಯಿಂದ ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿ. ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ ತೇರನ್ನು ಚೆನ್ನಾಗಿ ಹಾಯಿಸಿ ಅರ್ಜುನನೆಂಬ ಸೊಕ್ಕಿದಾನೆ ಶತ್ರುಸೈನ್ಯವನ್ನೆಲ್ಲ ಸಂಪೂರ್ಣವಾಗಿ ತುಳಿದುತುಳಿದು ಹಾಕಿತ್ತು.
ಕುರುಬಲದೊಳ್ ಕರಂ ನೆಗೞ್ದ ಬೀರರ ಚೆನ್ನರ ಸಂದ ಚೆನ್ನಪೊಂ
ಗರ ತಲೆ ತಾೞಪಣ್ ಕೆದಱಿದಂತೆ ನಿರಂತರಮಾಜಿರಂಗದೊಳ್|
ಪರೆದಿರೆ ಲೋಹಿತಾಂಬುಯೊಳಾನೆಗಳಟ್ಟೆಗಳಾಡೆ ನೋಡಲ
ಚ್ಚರಿಯುಮಗುರ್ವುಮದ್ಭುತಮುಮಾಯ್ತು ರಣಂ ಕದನತ್ರಿಣೇತ್ರನಾ|| ೧೦೬ ||
ಪದ್ಯ-೧೦೬:ಪದವಿಭಾಗ-ಅರ್ಥ:ಕುರುಬಲದೊಳ್ ಕರಂ ನೆಗೞ್ದ ಬೀರರ ಚೆನ್ನರ (ಕೌರವನ ಸೈನ್ಯದಲ್ಲಿ ಬಹಳ ಪ್ರಸಿದ್ಧರಾದ ವೀರರ ಸೌಂದರ್ಯಶಾಲಿಗ) ಸಂದ ಚೆನ್ನಪೊಂಗರ ತಲೆ (ಪ್ರಸಿದ್ಧರಾದ ಶೂರರುಗಳ ತಲೆಗಳು) ತಾೞಪಣ್ ಕೆದಱಿದಂತೆ ನಿರಂತರಂ ಆಜಿರಂಗದೊಳ್ ಪರೆದಿರೆ (ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿರಲು-) ಲೋಹಿತಾಂಬುಯೊಳು ಆನೆಗಳಟ್ಟೆಗಳಾಡೆ (ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು/ತೇಲು-) ನೋಡಲು ಅಚ್ಚರಿಯುಂ ಅಗುರ್ವುಂ ಅದ್ಭುತಮುಂ ಆಯ್ತು (ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು) ರಣಂ ಕದನತ್ರಿಣೇತ್ರನಾ (ಕದನತ್ರಿಣೇತ್ರನಾದ ಅರ್ಜುನನ ಯುದ್ಧವು)
ಪದ್ಯ-೧೦೬:ಅರ್ಥ: ಕೌರವನ ಸೈನ್ಯದಲ್ಲಿ ಬಹಳ ಪ್ರಸಿದ್ಧರಾದ ವೀರರ, ಸುಂದರರ, ಪ್ರಸಿದ್ಧರಾದ ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿದುವು. ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು, ಕದನತ್ರಿಣೇತ್ರನಾದ ಅರ್ಜುನನ ಯುದ್ಧವು ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು
ವ|| ಆಗಳದಂ ಕಂಡಂಗರಾಜಂ ರಾಜರಾಜನ ನಡಪಿದುದುಮಂ ತನ್ನ ಬಲ್ಲಾಳ್ತನಮುಮಂ ನೆನೆದು ವಿಕರ್ಣಂಬೆರಸರ್ಣವನಿನಾದ ದಿಂದಾರುತ್ತುಂ ಬಂದ ಗುಣಾರ್ಣವನೊಳ್ ತಾಗೆ-
ವಚನ:ಪದವಿಭಾಗ-ಅರ್ಥ:ಆಗಳದಂ ಕಂಡು ಅಂಗರಾಜಂ (ಕರ್ಣನು) ರಾಜರಾಜನನು ಅಡಪಿದುದುಮಂ (ದುರ್ಯೋಧನನು ತನ್ನನ್ನು ಸಲಹಿದುದನ್ನೂ) ತನ್ನ ಬಲ್ಲಾಳ್ತನಮುಮಂ ನೆನೆದು (ತನ್ನ ಪರಾಕ್ರಮವನ್ನೂ ನೆನೆದು) ವಿಕರ್ಣಂಬೆರಸು ಅರ್ಣವನಿನಾದದಿಂದ ಆರುತ್ತುಂ ಬಂದ (ಸಮುದ್ರಘೋಷದಿಂದ ಆರ್ಭಟಿಸುತ್ತ ಬಂದ) ಗುಣಾರ್ಣವನೊಳ್ ತಾಗೆ (ಅರ್ಜುನನನ್ನು ಎದುರಿಸಿದಾಗ)-
ವಚನ:ಅರ್ಥ:ಆಗ ಕರ್ಣನು ಅದನ್ನು ನೋಡಿ, ದುರ್ಯೋಧನನು ತನ್ನನ್ನು ಸಲಹಿದುದನ್ನೂ ತನ್ನ ಪರಾಕ್ರಮವನ್ನೂ ನೆನೆದು ವಿಕರ್ಣನೊಡಗೂಡಿ ಸಮುದ್ರಘೋಷದಿಂದ ಆರ್ಭಟಿಸುತ್ತ ಬಂದ ಗುಣಾರ್ಣವನಾದ ಅರ್ಜುನನನ್ನು ಎದುರಿಸಿದಾಗ-.
ಚಂ|| ಸಮೆದುದು ಪೋಗು ಗೋಗ್ರಹಣದಲ್ಲಿಯೆ ಭಾರತಮೆಂಬ ಮಾತನಂ
ದಮರ ನರೋರಗರ್ ನುಡಿಯೆ ರೌದ್ರಶರಂಗಳಿನೆಚ್ಚು ಯುದ್ಧದೊಳ್|
ಸಮಸಮನಾಗಿ ಕಾದಿದೊಡೆ ಕರ್ಣನ ವಕ್ಷಮನೆಚ್ಚು ಗರ್ವಮಂ
ಸಮೆಯಿಸಿ ಕೊಂದನಂಕದ ವಿಕರ್ಣನನೊಂದೆ ವಿಕರ್ಣದಿಂ ನರಂ|| ೧೦೭ ||
ಪದ್ಯ-೧೦೭:ಪದವಿಭಾಗ-ಅರ್ಥ:ಸಮೆದುದು ಪೋಗು ಗೋಗ್ರಹಣದಲ್ಲಿಯೆ ಭಾರತಮೆಂಬ ಮಾತನು ಅಂದು ಅಮರ ನರೋರಗರ್ ನುಡಿಯೆ (ಮಹಾಭಾರತಯುದ್ಧವು ಗೋಗ್ರಹಣದಲ್ಲಿಯೆ ಮುಗಿದುಹೋಯಿತು ಹೊಗು! ಎಂಬ ಮಾತನ್ನು ಆ ದಿನ ದೇವತೆಗಳೂ ಮನುಷ್ಯರೂ ಉರಗರೂ ಹೇಳಲು,) ರೌದ್ರಶರಂಗಳಿನು ಎಚ್ಚು ಯುದ್ಧದೊಳ್ ಸಮಸಮನಾಗಿ ಕಾದಿದೊಡೆ (ಭಯಂಕರವಾದ ಬಾಣಗಳಿಂದ ಹೊಡೆದು, ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದಾಗ,) ಕರ್ಣನ ವಕ್ಷಮನು ಎಚ್ಚು ಗರ್ವಮಂ ಸಮೆಯಿಸಿ (ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಇಳಿಸಿ/ ಕಡಿಮೆಮಾಡಿ) ಕೊಂದನು ಅಂಕದ ವಿಕರ್ಣನನು ಒಂದೆ ವಿಕರ್ಣದಿಂ (ಕಿವುವರೆಗೆ ಎಳೆದ ಒಂದೇ ಬಾಣ) ನರಂ- ಅರ್ಜುನ. (ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು.)
ಪದ್ಯ-೧೦೭:ಅರ್ಥ:ಗೋಗ್ರಹಣದಲ್ಲಿಯೇ ಮಹಾಭಾರತಯುದ್ಧವು ಮುಗಿದುಹೋಯಿತು ಎಂಬ ಮಾತನ್ನು ಆ ದಿನ ದೇವತೆಗಳೂ ಮನುಷ್ಯರೂ ಉರಗರೂ (ಮೂರು ಲೋಕದವರೂ) ಹೇಳುವ ಹಾಗೆ ಅರ್ಜುನನು ಭಯಂಕರವಾದ ಬಾಣಗಳಿಂದ ಹೊಡೆದು, ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದಾಗ, ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಇಳಿಸಿ ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು.
ವ|| ಅಂತು ಕರ್ಣನ ನೋವುಮಂ ವಿಕರ್ಣನ ಸಾವುಮಂ ಕಂಡು-
ವಚನ:ಅರ್ಥ:ಹಾಗೆ ಕರ್ಣನ ನೋವನ್ನೂ ವಿಕರ್ಣನ ಸಾವನ್ನೂ ನೋಡಿ-
ಉ|| ತಕ್ಕಿನ ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರೆ
ಕ್ಕೆಕ್ಕೆಯಿನೊರ್ವರೊರ್ವರೆ ಬಿಗುರ್ತಿರದಾಂತು ನಿಶಾತ ಬಾಣ ಜಾ|
ಲಕ್ಕೆ ಸಿಡಿಲ್ದು ಜೋಲ್ದು ಸೆರಗಂ ಬಗೆದೋಡಿದರೊಂದು ಪೋೞ್ತುಮೊಂ
ದರ್ಕಮಿದಿರ್ಚಲಾಱದೆ ಮನಂಗಲಿಗಳ್ ಕದನತ್ರಿಣೇತ್ರನಾ|| ೧೦೮ ||
ಪದ್ಯ-೧೦೮:ಪದವಿಭಾಗ-ಅರ್ಥ:ತಕ್ಕಿನ (ತಕ್ಕ ಯೊಗ್ಯತೆಯ,) ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರ ಎಕ್ಕೆಕ್ಕೆಯಿಂ ಒರ್ವರೊರ್ವರೆ (ಗುಂಪುಗುಂಪಾಗಿ ಒಬ್ಬೊಬ್ಬರೂ) ಬಿಗುರ್ತು ಇರದೆ ಆಂತು (ಸುಮ್ಮನಿರದೆ ಹೆದರಿಸಿ ಆಂತುಎದುರಿಸಿ) ನಿಶಾತ ಬಾಣ ಜಾಲಕ್ಕೆ ಸಿಡಿಲ್ದು ಜೋಲ್ದು ಸೆರಗಂ ಬಗೆದು (ಅಪಾಯವೆಂದು ತಿಳಿದು) ಓಡಿದರು (ಅರ್ಜುನನ ಹರಿತವಾದ ಬಾಣ ಜಾಲಕ್ಕೆ ತಡೆಯಲಾರದೆ ಅಪಾಯವೆಂದು ತಿಳಿದು ಹೆದರಿ ಓಡಿಹೋದರು) ಬಗೆದು- ಓಡಿದರು-; ಒಂದು ಪೋೞ್ತುಂ ಒಂದರ್ಕಂ ಇದಿರ್ಚಲಾಱದೆ (ಒಂದು ಹೊತ್ತಿನ ಯುದ್ಧಕ್ಕೂ, ಒಂದರ್ಕಂ- ಒಂದಕ್ಕೂ- ಒಂದು ಬಾನಕ್ಕೂ) ಮನಂಗಲಿಗಳ್ (ಮನಂ ಕಲಿಗಳ್, ತಮ್ಮ ಮನದಲ್ಲಿಯೇ ಶೂರರಾದವರು,) ಕದನತ್ರಿಣೇತ್ರನಾ (ಅರ್ಜುನನ.)
ಪದ್ಯ-೧೦೮:ಅರ್ಥ: . ತಕ್ಕ ಯೊಗ್ಯತೆಯ ದ್ರೋಣ, ಭೀಷ್ಮ, ಕೃಪರೇ ಮುಖ್ಯರಾದ ವೀರಾಗ್ರೇಸರರೂ ಗುಂಪುಗುಂಪಾಗಿ ಒಬ್ಬೊಬ್ಬರೂ ಸುಮ್ಮನಿರದೆ ಹೆದರಿಸಿ ಎದುರಿಸಿ, ಅರ್ಜುನನ ಹರಿತವಾದ ಬಾಣ ಜಾಲಕ್ಕೆ ತಡೆಯಲಾರದೆ ಹೆದರಿ ಓಡಿಹೋದರು. ಮನಸ್ಸಿನಲ್ಲಿ ಮಾತ್ರ ಶೂರರಾದ ಅವರು ಕದನತ್ರಿಣೇತ್ರನಾದ ಅರ್ಜುನನ ಒಂದು ಹೊತ್ತಿನ ಯುದ್ಧಕ್ಕೂ ಒಂದು ಬಾಣಕ್ಖೂ, ಪ್ರತಿಭಟಿಸಿ ನಿಲ್ಲಲಾರದೆ ತಮ್ಮ ಮನದಲ್ಲಿಯೇ ಶೂರರೆಂದುಕೊಂಡವರು ಹೋದರು.
ಕಂ|| ಮನದೊಳ್ ಕರುಣಿಸಿ ಸಂಮೋ
ಹನಾಸ್ತ್ರದಿಂದೆಚ್ಚು ಬೀರರಂ ಬೀರದ ಶಾ|
ಸನಮನೆ ನಿಱಿಸುವ ಬಗೆಯಿಂ
ದನಿಬರ ಪೞವಿಗೆಯನೆೞೆದುಕೊಂಡಂ ಹರಿಗಂ|| ೧೦೯ ||
ಪದ್ಯ-೧೦೯:ಪದವಿಭಾಗ-ಅರ್ಥ: ಮನದೊಳ್ ಕರುಣಿಸಿ (ಆಗ ಅರ್ಜುನನು ಮನಸಲಅವರ ಮೇಲೆ ದಯೆ ತೋರಿ) ಸಂಮೋಹನಾಸ್ತ್ರದಿಂದೆ ಎಚ್ಚು ಬೀರರಂ (ಸಮ್ಮೋಹನಾಸ್ತ್ರವನ್ನು ಉಪಯೋಗಿಸಿ ಹೊಡೆದು,) ಬೀರದ ಶಾಸನಮನೆ ನಿಱಿಸುವ ಬಗೆಯಿಂದ (ವೀರರ ಚಲನೆಯನ್ನೇ ಎಚ್ಚರವಿಲ್ಲದಂತೆ ನಿಲ್ಲಸುವ ಕ್ರಮದಿಂದ) ಅನಿಬರ ಪೞವಿಗೆಯನು ಎೞೆದುಕೊಂಡಂ ಹರಿಗಂ(ತನ್ನ ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಹರಿಗನು -ಅರ್ಜುನನು ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು)
ಪದ್ಯ-೧೦೯:ಅರ್ಥ:ಆಗ ಅರ್ಜುನನ ಅವರ ಮೇಲೆ ದಯೆತೋರಿ ಸಮ್ಮೋಹನಾಸ್ತ್ರವನ್ನು ಉಪಯೋಗಿಸಿ ಹೊಡೆದು, ವೀರರ ಚಲನೆಯನ್ನೇ ಎಚ್ಚರವಿಲ್ಲದಂತೆ ನಿಲ್ಲಸುವ ಕ್ರಮದಿಂದ, ಅವರು ಮೈಮರೆತಿರಲು ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು
ವ|| ಅಂತು ವರ ಶಶಿ ವಿಶದಯಶಪಟಂಗಳಂ ನನ್ನಿಪಟಂಗೊಳ್ವಂತೆ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುೞ್ದು ಬರ್ಪಾಗಳ್-
ವಚನ:ಪದವಿಭಾಗ-ಅರ್ಥ: ಅಂತು ವರ ಶಶಿ ವಿಶದ (ಚಂದ್ರನಂತೆ ಬೆಳ್ಲಗಿರುವ) ಯಶಪಟಂಗಳಂ (ಯಶಸ್ಸೆಂಬ ವಸ್ತ್ರಗಳನ್ನು) ನನ್ನಿ ಪಟಂಗೊಳ್ವಂತೆ ( ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ) ವಿವಿಧ ಧ್ವಜಪಟಂಗಳಂ ಕೊಂಡು (ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು) ಗೆಲ್ಲಂಗೊಂಡು (ಜಯಪ್ರದನಾಗಿ) ತಾನುಂ ಉತ್ತರನುಂ ವಿರಾಟಪುರಕ್ಕೆ ಮಗುೞ್ದು ಬರ್ಪಾಗಳ್ (ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು)-
ವಚನ:ಅರ್ಥ:ವ|| ಹಾಗೆ ಶ್ರೇಷ್ಠವಾದ ಚಂದ್ರನಂತೆ ವಿಸ್ತಾರವಾಗಿರುವ ಯಶಸ್ಸೆಂಬ ವಸ್ತ್ರಗಳನ್ನು ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು
ಉ|| ಸೂಸುವ ಸೇಸೆ ಬೀಸುವ ಚಳಚ್ಚಮರೀರುಹಮೆಕ್ಕೆಯಿಂ ರಣಾ
ಯಾಸ ಪರಿಶ್ರಮಾಂಬು ಲವಮಂ ತವೆ ಪೀರೆ ಪುರಾಂಗನಾಮುಖಾ|
ಬ್ಜಾಸವಗಂಧದೊಳ್ ಬೆರಸಿದೊಂದೆಲರೊಯ್ಯನೆ ತೀಡೆ ಪೊಕ್ಕನಾ
ವಾಸವನಂತೆ ಮತ್ಸ್ಯಮಹಿಪಾಳಕಮಂದಿರಮಂ ಗುಣಾರ್ಣವಂ|| ೧೧೦ ||
ಪದ್ಯ-೦೦:ಪದವಿಭಾಗ-ಅರ್ಥ:ಸೂಸುವ ಸೇಸೆ (ಅವರಮೇಲೆ ಹಾಕುತ್ತಿರಿವ ಮಂತ್ರಾಕ್ಷತೆಗಳೂ) ಬೀಸುವ ಚಳಚ್ಚಮರೀರುಹಂ (ಬೀಸುತ್ತಿರುವ ಚಾಮರಗಳೂ) ಎಕ್ಕೆಯಿಂ ರಣಾಯಾಸ ಪರಿಶ್ರಮ ಅಂಬುಲವಮಂ ತವೆ ಪೀರೆ (ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು ಸಂಪೂರ್ಣವಾಗಿ ಹೀರಲು) ಪುರಾಂಗನಾಮುಖ ಅಬ್ಜಾಸವ(ಮುಖವೆಂಬ ಅಬ್ಜ-ಕಮಲದ ಆಸವ-ಮಧು) ಗಂಧದೊಳ್ (ಪುರಸ್ತ್ರೀಯರ ಮುಖಕಮಲದ ಸುಗಂಧದಿಂದ ) ಬೆರಸಿದೊಂದು ಅಲರ ಒಯ್ಯನೆ ತೀಡೆ (ಬೆರಸಿದ ಗಾಳಿಯು ನಿಧಾನವಾಗಿ ಬೀಸುತ್ತಿರಲು) ಪೊಕ್ಕನು ಆವಾಸವನಂತೆ (ಹೀಗೆ ವಿರಾಟನ ಅರಮನೆಯನ್ನು ದೇವೇಂದ್ರನಮತೆ ಅರ್ಜುನನು ಹೊಕ್ಕನು->) ಮತ್ಸ್ಯಮಹಿಪಾಳಕ ಮಂದಿರಮಂ ಗುಣಾರ್ಣವಂ|
ಪದ್ಯ-೧೧೦:ಅರ್ಥ: . ಅವರಮೇಲೆ ಹಾಕುತ್ತಿರಿವ ಮಂತ್ರಾಕ್ಷತೆಗಳೂ ಬೀಸುತ್ತಿರುವ ಚಾಮರಗಳೂ ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು ಸಂಪೂರ್ಣವಾಗಿ ಹೀರಲು, ಪುರಸ್ತ್ರೀಯರ ಮುಖಕಮಲದ ಸುಗಂಧದಿಂದ ಬೆರಸಿದ ಗಾಳಿಯು ನಿಧಾನವಾಗಿ ಬೀಸುತ್ತಿರಲು ದೇವೇಂದ್ರನಂತೆ ವಿರಾಟನ ಅರಮನೆಯನ್ನು ಅರ್ಜುನನು ಪ್ರವೇಶ ಮಾಡಿದನು-
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಅಷ್ಟಮಾಶ್ವಾಸಂ ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಎಂಟನೆಯ ಆಶ್ವಾಸ.||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ