ಪುಟ:Mysore-University-Encyclopaedia-Vol-1-Part-1.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ನೆಯ ಗುಂಪು - 8 - 13 ಗುಹೆಗಳು (ಪ್ರ.ಶ.ಪೂ. 3ನೆಯ ಶತಮಾನದಿಂದ ಪ್ರ.ಶ.ಪೂ. 1ನೆಯ ಶತಮಾನದವರೆಗೆ ಸಾತವಾಹನರ ಪೋಷಣೆ). 2ನೆಯ ಗುಂಪು - 14 - 19 ಗುಹೆಗಳು. (ಪ್ರ.ಶ.ಪೂ. 1ನೆಯ ಶತಮಾನದಿಂದ ಪ್ರ.ಶ. 6ನೆಯ ಶತಮಾನದವರೆಗೆ ವಾಕಾಟಕ ರಾಜರ ಪೋಷಣೆ.) 3ನೆಯ ಗುಂಪು - 1 - 6 ಗುಹೆಗಳು. (ಪ್ರ.ಶ. 3ನೆಯ ಶತಮಾನದಿಂದ ಪ್ರ.ಶ. 6ನೆಯ ಶತಮಾನದವರೆಗೆ). 4ನೆಯ ಗುಂಪು-20 - 30ರವರೆಗೆ. (ಪ್ರ.ಶ.4ನೆಯ ಶತಮಾನದಿಂದ ಪ್ರ.ಶ. 7ನೆಯ ಶತಮಾನದವರೆಗೆ). 7ನೆಯ ಗುಹೆಯ ನಿರ್ಮಾಣದ ಕಾಲ ನಿರ್ಣಯವಾಗಿಲ್ಲ. ಸಿಸ್ಟರ್ ನಿವೇದಿತಾ ಪ್ರ.ಶ. 3ನೆಯ ಶತಮಾನವೆಂದೂ ಮುಕುಳ್ ಡೇ ಪ್ರ.ಶ. ಮೊದಲನೆಯ ಶತಮಾನವೆಂದೂ ನಿರ್ಣಯಿಸುತ್ತಾರೆ. ಆದರೆ 9, 10ನೆಯ ಗುಹೆಗಳು ಅತಿ ಪ್ರಾಚೀನವಾದುವೆನ್ನುವುದರಲ್ಲಿ ಭಿನ್ನಾಭಿಪ್ರಾಯವೇನೂ ಇಲ್ಲ (ಪ್ರ.ಪೂ. 350 - ಪ್ರ.ಪೂ. 200). ನೀಹಾರ್ ರಂಜನ್‍ರಾಯ್ ಅವರ ಅಭಿಪ್ರಾಯದಂತೆ ಇವು ಪ್ರ.ಶ. ಮೊದಲನೆಯ ಶತಮಾನದ ಮಧ್ಯಕಾಲಕ್ಕೆ ಸೇರುತ್ತವೆ. 2, 3, 4, 5, 23, 24, 27ನೆಯ ಗುಹೆಗಳು ಮತ್ತು 21ನೆಯ ಗುಹೆಯ ಮುಂಭಾಗ ಅಸಂಪೂರ್ಣವಾದವು. ಮಿಕ್ಕವೆಲ್ಲವೂ ಸಂಪೂರ್ಣವಾದವು. 7, 8, 11ನೆಯ ಗುಹೆಗಳು ಪ್ರಾಕೃತಿಕ ಗವಿಗಳಾಗಿದ್ದು ಕೆಲವು ಮಾರ್ಪಾಡುಗಳಿಂದ ದೇವಾಲಯಗಳಾಗಿವೆ. ಈ 30 ಗುಹೆಗಳ ಪೈಕಿ 2, 9, 10, 15, 16, 19, 26, 29 ಪೂಜಾರ್ಹವಾದ ಚೈತ್ಯಗಳು. ಮಿಕ್ಕವು ಭಿಕ್ಕುಗಳ ವಾಸಕ್ಕೆ ಕೊರೆದ ವಿಹಾರ ಅಥವಾ ಸಂಗ್ರಾಮಗಳು. ಆದರೆ, 15, 25ರ ಗುಹೆಗಳು ಎರಡೂ ಉದ್ದೇಶಗಳಿಗೆ ಅನುಕೂಲವಾದವು. 8ನೆಯ ಗುಹೆ ಬೆಟ್ಟದ ಬುಡದಲ್ಲಿಯೂ 29ನೆಯದು ಬೆಟ್ಟದ ಶಿಖರದಲ್ಲೂ ನಿರ್ಮಿತವಾಗಿವೆ. 8, 9, 10, 12, 13ನೆಯ ಗುಹೆಗಳು ಬೌದ್ಧರ ಹೀನಯಾನ ಪಂಗಡಕ್ಕೂ ಮಿಕ್ಕವು ಮಹಾಯಾನ ಪಂಗಡಕ್ಕೂ ಸೇರಿವೆ. ಹೀನಯಾನ ಗುಹೆಗಳಲ್ಲಿ ಶಿಲ್ಪಚಿತ್ರಗಳು ಕಡಿಮೆ; ಮಹಾಯಾನದವುಗಳಲ್ಲಿ ಹೆಚ್ಚು. ಏಕೆಂದರೆ ಹೀನಯಾನ ಮತದಲ್ಲಿ ಬುದ್ಧನ ಸಂಕೇತಗಳಾದ ಪಾದಗಳು, ಧರ್ಮಚಕ್ರ, ದಂತಗಳು, ಸಂಪುಟಗಳಲ್ಲಿಟ್ಟು ಜೋಪಾನ ಮಾಡಿದ ಬೂದಿ - ಇವಕ್ಕೆ ಮಾತ್ರ ಆರಾಧನೆ ಸಲ್ಲತಕ್ಕದ್ದು. ದೈಹಿಕರೂಪವನ್ನು ಶಿಲ್ಪಚಿತ್ರಾದಿಗಳಲ್ಲಿ ಕೂಡ ನಿಷೇಧಿಸಲಾಗಿತ್ತು. (ದಶಧಮ್ಮಿಕಸುತ್ತ; ವಿಶುದ್ಧಿಮಗ್ಗ) ಹೀನಯಾನ ಯುಗದಲ್ಲಿ ಬುದ್ಧನ ಜನನ, ತ್ಯಾಗ, ಜ್ಞಾನಸಂಪಾದನೆ, ಮಹಾಪರಿ ನಿರ್ವಾಣ- ಇವು ಮಾತ್ರ ಶಿಲ್ಪದಲ್ಲಿ ಪ್ರದರ್ಶಿತವಾದವು. ಏಕೆಂದರೆ ಧರ್ಮಸೂತ್ರದ ಪ್ರಕಾರ ದೀಕ್ಷೆ ಪಡೆದವರು ಬಣ್ಣಗಳಿಂದ ಚಿತ್ರಿತವಾದುವನ್ನು, ಒಡವೆ ನವರತ್ನಗಳು ಮುಂತಾದ ಅಲಂಕಾರ ವಸ್ತುಗಳನ್ನು ನೋಡಲು ಕೂಡ ಪ್ರಯತ್ನಿಸಬಾರದು. ಪಂಚೇಂದ್ರಿಯಗಳಿಗೆ ಹಿತವಾದ ಸಂಗೀತ, ಸಾಹಿತ್ಯ, ಮೃಷ್ಟಾನ್ನ ಮುಂತಾದುವೆಲ್ಲವೂ ಅವರಿಗೆ ನಿಷಿದ್ಧ. ಮಹಾಯಾನ ಸಮಾರಂಭದಲ್ಲಿ (ನಾಗಾರ್ಜುನ; ಪ್ರ.ಶ. 200) ಬುದ್ಧನ ದೈಹಿಕ ನಿರೂಪಣೆ ಮತ್ತು ಅವನ ಪೂರ್ವಜನ್ಮದ ಕಥನ ರೂಢಿಗೆ ಬಂತು. ಅಜಂತದ ಗುಹೆಗಳಲ್ಲಿ ಕೆಲವು (1, 2) ಚಿತ್ರರಚನೆಯಲ್ಲೂ ಕೆಲವು (19, 26) ವಾಸ್ತುಶಿಲ್ಪದಲ್ಲೂ ಮತ್ತೆ ಕೆಲವು (16, 17) ವಾಸ್ತುಶಿಲ್ಪ, ಮೂರ್ತಿ ಶಿಲ್ಪ, ಚಿತ್ರಾಲಂಕಾರಗಳಲ್ಲೂ ಅಗ್ರಸ್ಥಾನ ಪಡೆದಿವೆ. ಹೀನಯಾನ ಕ್ಷೀಣಿಸಿದ ಅನಂತರ ಅಂದರೆ ಅಶೋಕನ ತರುವಾಯ ಮಹಾಯಾನ ವೃದ್ಧಿ ಹೊಂದಿದ ಮೇಲೆ, ಪಾರಸಿಕ, ಚೀನ, ಗಾಂಧಾರ, ಕಲಾಸಂಪ್ರದಾಯಗಳು ಹೈಂದವ ಸಂಸ್ಕøತಿಯ ಮೇಲೆ ಪರಿಣಾಮ ಬೀರಿದ ಅನಂತರ, ಚಿತ್ರದ ವಸ್ತು ವಿಸ್ತøತವಾಯಿತು. ಬುದ್ಧನ ಜೀವಿತಕ್ಕೆ ಹೊಂದಿದ ಜಾತಕ ಕಥಾನಕ, ಆರ್ಯದೇವನ ಜಾತಕಮಾಲೆ, ಅಶ್ವಷೋಷನ ಬುದ್ಧ ಚರಿತ್ರೆ, ಸೌಂದರನಂದ, ಸಾರಿಪುತ್ರ ಪ್ರಕರಣ, ಪ್ರಾಮುಖ್ಯ ಪಡೆದ ಭಿಕ್ಕುಗಳ ಜೀವಿತಗಳು, ಚರಿತ್ರಾತ್ಮಕ ಘಟನೆಗಳು, ಸಾಧಾರಣ ಜೀವಿತಗಳು, ಸಾಧಾರಣ ಜೀವಿತದಲ್ಲಿನ ಸನ್ನಿವೇಶಗಳು, ಪ್ರಕೃತಿ ಸೌಂದರ್ಯವನ್ನು ಸಾರುವ ಮೃಗ, ಪಕ್ಷಿ, ವೃಕ್ಷ, ಪುಷ್ಪಸಂಪತ್ತುಗಳು ಮುಂತಾದುವು ವರ್ಣಚಿತ್ರಗಳಲ್ಲಿಯೂ ಶಿಲ್ಪದಲ್ಲಿಯೂ ಅತ್ಯಂತ ಸೊಬಗಿನಿಂದ ರೂಪುಗೊಂಡವು. ಈ ಸಂದರ್ಭದಲ್ಲಿ ಅಜಂತ ಚಿತ್ರಕಾರನ ಮೇಲ್ಮಟ್ಟದ ಕಲಾದೃಷ್ಟಿ ಗಣನೀಯವಾದುದು. ಅವನ ಯೋಗದೃಷ್ಟಿಯಲ್ಲಿ, ಜೀವಿಗಳೆಲ್ಲ ಸಮಾನತೆ ಪಡೆದು ಅವರವರ ಸೊಬಗನ್ನು ಸ್ವೇಚ್ಛೆಯಿಂದ ಪ್ರಪಂಚಕ್ಕೆ ಬೀರುತ್ತ ಮಾನವ ಜಾತಿಯನ್ನು ಶಾಂತಿಯುತವಾದ ಉನ್ನತಮಟ್ಟಕ್ಕೆ ಎತ್ತುವುದಲ್ಲದೆ, ಎಲ್ಲರ ಜನಸ್ಥಾನವಾದ ಪರಮಾತ್ಮನಲ್ಲಿ ಐಕ್ಯತೆ ಪಡೆಯಲು ಸಹಕಾರಿಯಾಗುತ್ತಿದ್ದವು. ಅವನ ದೇವತಾರಾಧನೆಯಲ್ಲಿ ಪ್ರಕೃತಿಸೌಂದರ್ಯಾರಾಧನೆ ಮೊದಲ ಮೆಟ್ಟಿಲಾಗಿತ್ತು. ಅವನ ಕಾಂಕ್ಷೆ ಜೀವನ ಸಮನ್ವಯ; ಗುರಿ ಪರಮಾತ್ಮನನ್ನು ಸೇರುವಿಕೆ; ಅವನ ವೃತ್ತಿ ಬ್ರಹ್ಮಚರ್ಯ, ಅವನ ಮನೋಭಾವ ಬುದ್ಧನ ಮನೋಭಾವದಂತೆ ಅತಿ ಮೃದು. ಸೂರ್ಯಚಂದ್ರಾದಿಗಳ ಬೆಳಕಿನಂತೆ ಅವನ ಕರುಣೆ ವಿಶ್ವದಾದ್ಯಂತ ಹರಡುತ್ತ ಪ್ರಾಣಿಗಳಿಗೆ ಕಲ್ಯಾಣವನ್ನುಂಟುಮಾಡುವ ಚೇತನವನ್ನು ಹೊಂದಿತ್ತು. ಚಿತ್ರದ ಹಿನ್ನೆಲೆಯಾದ ಪಶು ಪಕ್ಷಿ ಪ್ರಾಣಿಗಳ ಸಮುದಾಯದ ಚಟುವಟಿಕೆಗಳಿಗೂ ಮುನ್ನೆಲೆಯಾದ ಮಾನವ ಪ್ರವೃತ್ತಿಗಳಿಗೂ (ಜಾತಕ ಕಥನ ದೃಶ್ಯಗಳು) ಇರುವ ಅನುಪಮ ಸಮ್ಮೇಳನ ಪ್ರತಿಯೊಂದು ವರ್ಣಚಿತ್ರದಲ್ಲೂ ಮನೋಜ್ಞವಾಗಿ ರೂಪಿತವಾಗಿದೆ. ಇಂಥ ಸಮ್ಮೇಳನ ಅವನ ಕಲ್ಪನಾಶಕ್ತಿಯಲ್ಲಿ, ರಚನಾವಿಧಾನದಲ್ಲಿ ನಿರ್ದಿಷ್ಟವಾಗಿ ಕಂಡುಬರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಆಧ್ಯಾತ್ಮಿಕ ಒಕ್ಕಟ್ಟನ್ನು ಇವನು ತನ್ನ ಹಲವಾರು ವರ್ಣಚಿತ್ರಗಳಲ್ಲಿ ಸಾಧಿಸಿರುತ್ತಾನೆ. ಅವನ ದಯೆ, ಸರ್ವಾಂತರ್ಯಾಮಿಯಾದ ದೇವತಾ ಸ್ವರೂಪವನ್ನು ತಾಳಿ, ಕುಂಚರೇಖೆಗಳಲ್ಲಿ ತುಂಬಿ ತುಳುಕಾಡುತ್ತಿದೆ. ಅವನ ಚಿತ್ರ ಕೇವಲ ಬಣ್ಣಗಳ ಸಮ್ಮಿಲನ ಮಾತ್ರವಲ್ಲ ತನ್ನ ಮನೋವೃತ್ತಿಯಲ್ಲಿ ಸಾಧಿಸಿದ ಮಾಧುರ್ಯವನ್ನು ತನ್ನ ಕೃತಿಗಳಲ್ಲಿ ಅವಿಚ್ಛಿನ್ನವಾಗಿ ಇಳಿಸಿದ್ದಾನೆ. ಪ್ರಾಚೀನ ಹೈಂದವ ಕಲಾಸಂಸ್ಕøತಿಯಲ್ಲಿ ಬುದ್ಧನ ಮಹಾನಿರ್ವಾಣದ (ಪ್ರ.ಶ.ಪೂ. 480) ಹಿಂದೆ ಚಿತ್ರರಚನೆಯಲ್ಲಿ 3 ಶೈಲಿಗಳಿದ್ದವೆಂದೂ ಅವುಗಳ ಮೊದಲನೆಯದಾದ ದೇವಶೈಲಿ ದೇವತೆಗಳಿಗೆ ಸಂಬಂಧಿಸಿದ್ದು, ಆ ರೀತಿಯಲ್ಲಿ ಅಜಂತದ ಅತಿ ಪ್ರಾಚೀನವಾದ ಚಿತ್ರಗಳು ರಚಿತವಾದುವೆಂದೂ ಎರಡನೆಯದು ಯಕ್ಷರ ಶೈಲಿ ಪುಣ್ಯಯಾನರಿಗೆ (ಒಳ್ಳೆಜನ, ಶೀಲವಂತರು) ಸಂಬಂಧಿಸಿದ್ದು. ಅಶೋಕನ ಕಾಲದ ಚಿತ್ರಕಾರರು (ಪ್ರ.ಶ.ಪೂ. 250) ಅದನ್ನು ಅನುಸರಿಸಿದರೆಂದೂ ಮೂರನೆಯ ನಾಗಾಶೈಲಿ ನಾಗಾರ್ಜುನರಿಂದ (ಪ್ರ.ಶ. 200) ಪೋಷಿತವಾಯಿತೆಂದೂ ಟಿಬೆಟ್ಟಿನ ಚರಿತ್ರಕಾರನಾದ ತಾರಾನಾಥ (ಪ್ರ.ಶ. 17 ಶ.) ತಿಳಿಸಿರುತ್ತಾನೆ. ದೇವಶೈಲಿಯನ್ನು ಮಗಧರಾಜನಾದ ಬುದ್ಧಪಕ್ಷನ ಕಾಲದಲ್ಲಿ (ಪ್ರ.ಶ. 5-6 ಶ.) ಶಿಲ್ಪಿ ಮತ್ತು ಚಿತ್ರಕಾರನಾದ ಬಿಂಬಸಾರ ಜೀರ್ಣೋದ್ಧಾರ ಮಾಡಿದನೆಂದೂ ಯಕ್ಷಶೈಲಿಯನ್ನು ಉದಯಪುರದ ರಾಜನಾದ ಶಿಲಾದಿತ್ಯಗಹಿಳನ ಕಾಲದಲ್ಲಿ (ಪ್ರ.ಶ. 7 ಶ.) ಶೃಂಗಧಾರನೆಂಬ ಚಿತ್ರಕಾರ ಜೀರ್ಣೋದ್ಧಾರ ಮಾಡಿದನೆಂದೂ ಮೂರನೆಯ ನಾಗಾಶೈಲಿಯನ್ನು ವಂಗದೇಶದ ರಾಜನಾದ ಧರ್ಮಪಾಲ, ಮಗ ದೇವಪಾಲರ ಕಾಲದಲ್ಲಿ (ಪ್ರ.ಶ. 9 ಶ.) ಚಿತ್ರಕಾರನಾದ ಧೀಮನ್, ಮಗ ಬಿತ್ತ್‍ಫಲೋ ಜೀರ್ಣೋದ್ಧಾರ ಮಾಡಿದರೆಂದೂ ತಾರಾನಾಥನ ಬರೆಹದಿಂದ ಗೊತ್ತಾಗುತ್ತದೆ. ಅಜಂತದ ಭಿತ್ತಿಚಿತ್ರಗಳಲ್ಲಿ ಈ ಮೂರು ಶೈಲಿಗಳು ಅಲ್ಲಲ್ಲಿ ಕಂಡುಬರುತ್ತವೆ. ಅಜಂತ ಚಿತ್ರಗಳನ್ನು ಸ್ಥೂಲವಾಗಿ 3 ಪಂಗಡಗಳಾಗಿ ವಿಂಗಡಿಸಬಹುದು : 1. ಅಶುದ್ಧಾಲಂಕಾರದವು; 2 ಶುದ್ಧರೂಪಾತ್ಮಕವಾದವು; 3 ಕಥನಾತ್ಮಕವಾದವು. 3ನೆಯ ಪಂಗಡದಲ್ಲಿ ಮತ್ತೂ 3 ಭಾಗಗಳಿವೆ. i ಸಮಕಾಲೀನ ಚರಿತ್ರಾತ್ಮಕ ಕಥನ; ii ಗೌತಮನ ಸಂಸಾರತ್ಯಾಗ, ಬುದ್ಧತ್ವ ಸಂಪಾದನೆ ಮತ್ತು ಮಹಾನಿರ್ಯಾಣಗಳ ಕಥನ ; iii ಆರ್ಯದೇವ (ಆರ್ಯಸೂರ್ಯ ಪ್ರ.ಶ. 3 ಶ.) ಜಾತಕಮಾಲೆಯಲ್ಲಿ ಅಶ್ವಘೋಷ, ಬುದ್ಧಚರಿತ್ರ, ಸೌಂದರನಂದ, ಸಾರಿಪುತ್ರ ಪ್ರಕರಣಗಳಲ್ಲಿ ಬೌದ್ಧರ ದಿವ್ಯಾವಧಾನ ಮುಂತಾದುವುಗಳಲ್ಲಿ ವರ್ಣಿಸಿದ ಚರಿತ್ರೆ - ಇವೆಲ್ಲವೂ ಸೇರಿರುತ್ತವೆ. ಶುದ್ಧಾಲಂಕಾರಕ್ಕೆ, ಅತಿ ಸಹಜವಾಗಿ, ಚಿತ್ರವಿಚಿತ್ರವಾಗಿ, ಅಸಂಖ್ಯಾತವಾಗಿ, ಮನೋಹರವಾಗಿ, ಆಕರ್ಷಕವಾಗಿ ರಚಿತವಾದ ಕಿನ್ನರ ಕಿಂಪುರುಷ ಮಾನವ ಪಶುಪಕ್ಷಿ ಪರ್ಣ ಲತಾಸಮುದಾಯಗಳನ್ನೊಳಗೊಂಡ ನಕ್ಷೆಗಳ ಸುರುಳಿಗಳು ಸೇರಿರುತ್ತವೆ. ಇವುಗಳಲ್ಲಿ ಗಮನಿಸಬೇಕಾದ್ದು ಚಿತ್ರಕಾರನ ದಯಾದ್ರ್ರಹೃದಯ ಮತ್ತು ಜೀವಕೋಟಿಯಲ್ಲಿನ ಸೂಕ್ಷ್ಮಪರಿಚಯ (1, 2ನೆಯ ಗುಹೆಗಳ ಒಳಮಾಳಿಗೆಯ ಮತ್ತು 17ನೆಯದರಲ್ಲಿರುವ ವಿಜಯನ ಸಿಂಹಳವಿಜಯದ ಅಂಚುಗಳ ಶೃಂಗಾರ). ಇವುಗಳಲ್ಲಿ ಅತಿ ಉತ್ಕøಷ್ಟವಾದದ್ದು ಈ ಅಂಚುಗಳು (ಗುಹೆ 17). ಖಗವರ್ಗಕ್ಕೆ ಸೇರಿದ ಹಂಸ, ಕೊಕ್ಕರೆ, ಬಾತು, ಕಲಹಂಸ- ಇವುಗಳ ಜಲಕ್ರೀಡೆಯ ದೃಶ್ಯಗಳು ಅಸಂಖ್ಯಾತ ಮಾದರಿಗಳಲ್ಲಿವೆ. ಶುದ್ಧರೂಪಾತ್ಮಕ ಪಂಗಡಕ್ಕೆ ಸೇರಿದವು: ಅತ್ಯುತ್ತಮವಾದ ಪ್ರಣಯದಂಪತಿಗಳು (ಗುಹೆ 17). ಬೆನ್ನು ತಿರುಗಿಸಿ ಕುಳಿತ ಬಾಲೆ (ಗುಹೆ 17). ಕಮಲಪುಷ್ಪ ಹಿಡಿದ ಆಪ್ತಸಖಿಯೊಡನಿರುವ ಕಪ್ಪು ಛಾಮೆಯದ ಯುವರಾಣಿ (ಗುಹೆ 17). ನಾಟ್ಯದ ಅನಂತರ ವಿಶ್ರಾಂತಿಗಾಗಿ ಕಂಬಕ್ಕೆ ಒರಗಿದ ಅಪ್ಸರೆ