ಪುಟ:ಯಶೋಧರ ಚರಿತೆ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

ನ ಮನಃಪ್ರಿಯೆ ಆಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ಬೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ.

ಅದರ ಪ್ರಕಾರ, ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದನು. ಏಕೆ? ಕಾಮನ ಪ್ರಭಾವದಿಂದ ಎಂಬುದು ಸ್ಪಷ್ಟ ಎಂದರೆ ಯಶೋಧರನಲ್ಲಿ ಕಾಮುಕತೆಯಿತ್ತೆಂದು ಸಾಧಿಸುವಂತಿದೆ ಈ ಮಾತು. ಹಾಗೆಯೇ ಅಮೃತಮತಿ ಆತನನ್ನು ಒಲಿದಿದ್ದಳೆ? ಬೇಟೆಗಾರನ ದೀವಕ್ಕೆ ತನ್ನಿಂದಾಗಿ ಗೋರಿಗೊಳ್ಳುವ ಪ್ರಾಣಿಯಲ್ಲಿ ಪ್ರೀತಿ ಆಸಕ್ತಿ ಉಳಿಯುವುದೇ? ಮಾತ್ರವಲ್ಲ, ಬೇಟೆಗಾರನು ಅದೇ ದೀವವನ್ನು ಇನ್ನೊಂದು ಪ್ರಾಣಿಯನ್ನಾಕರ್ಷಿಸುವುದಕ್ಕೆ ಬಳಸುತ್ತಾನೆ. ಆ ಪ್ರಾಣಿಯೂ ಹಾನಿಗೊಳಗಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪರಿಭಾವಿಸಿದರೆ, ಯಶೋಧರನು ಅಮೃತಮತಿಯಲ್ಲಿ ಆಸಕ್ತನಾಗಿದ್ದನೇ ಹೊರತು, ಅಮೃತಮತಿ ಅವನಲ್ಲಿ ಅನುರಕ್ತಿಯಾಗಿದ್ದಳು ಎನ್ನುವಂತಿಲ್ಲ. ಆದರೆ ಮುಂದೆ

ಅಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೇಯುವ ದವಳಾರದೊಳ
ಭ್ರಮುವೆರಸಭಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸಗುಂ.

ಎಂಬ ಪದ್ಯ ಬರುತ್ತದೆ. ಸಾಲದುದಕ್ಕೆ “ಖಚರದಂಪತಿಗಳಿಲ್ ತಾಮೆಸೆದರ್' ಎಂದೂ 'ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌' ಎಂದೂ ಆ 'ಹೃದಯಪ್ರಿಯ'ರ ವಿಷಯ ಮಾತು ಬರುತ್ತದೆ. ಇವುಗಳಿಂದ ಅವರಿಬ್ಬರೂ ಪರಸ್ಪರ ಪ್ರೇಮಬದ್ದರಾಗಿದ್ದರೆಂದು ವಾದಿಸಬಹುದಾದರೂ, ಮುಂದಣ ಘಟನೆಯನ್ನು ಎಣಿಸುವಾಗ ಅವೆಲ್ಲ ಬರಿಯ ಅಲಂಕಾರಿಕ ವಾಕ್ಯಗಳೆಂದು ಮಾತ್ರ ಹೇಳಬೇಕಾಗುತ್ತದೆ. ಏಕೆಂದರೆ ಕರುಮಾಡದ ಪಕ್ಕದಲ್ಲಿದ್ದ ಪಟ್ಟದಾನೆಯ ಬದಗನು ವಿನೋದಕ್ಕೆ ಹಾಡುತ್ತಿದ್ದಾಗ, ಅದನ್ನು ಕೇಳಿ ಅಮೃತಮತಿ ತನ್ನ ಮನಸ್ಸನ್ನು ತೊಟ್ಟನೆ-ಏನೂ ವಿಚಾರಮಾಡದೆ-ವಸಾಯ ದಾನ ಕೊಟ್ಟಳಂತೆ! ಅವಳ ಮನಸ್ಸು ಮಾವನ್ನು ಮೆಚ್ಚದ ಮನಸ್ಸಾಗಿತ್ತು; ಅದು ಬೇವನ್ನೆ ಬಯಸುತ್ತಿತ್ತು. ಪಂಚೇಂದ್ರಿಯಗಳಲ್ಲಿ ಶ್ರವಣೇಂದ್ರಿಯವೊಂದರ ಆಕರ್ಷಣೆ ಅವಳಿಗೆ ತೀವ್ರವಾಯಿತು. ಅನಂತರವೇ 'ನೋಡುವ ಕೊಡುವ ಚಿಂತೆ ಕಡಲ್ವರಿದುದು.' ಯಾವುದಾದರೊಂದು ವ್ಯಕ್ತಿಯ ಹೆಸರು ಕೇಳಿದಾಗ, ನಾವು ಅವನ ಹಿರಿಮೆಯನ್ನೋ ಕೀಳ್ಮೆಯನ್ನೋ ಕೇಳಿದಾಗ, ನಾವು ಅವನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದಿಲ್ಲವೆ? ಅದೇ ರೀತಿಯಲ್ಲಿ