ಪುಟ:ಯಶೋಧರ ಚರಿತೆ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಶೋಧರ ಚರಿತೆ

೧೧೭

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ-
ರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀ ವಿಲಾಸಂ೮೫

ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ-
ಕ್ಕಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಯತಾರೆ ಪೂ-
ರ್ಣಾ ಗುರುವಾಗೆ ಭೂಸತಳದೊಳೀ ಕೃತಿ ಪೆತ್ತುದು ಸುಪ್ರತಿಷ್ಠಯಂ
ಚಾಗದ ಭೋಗದಗ್ಗಳಿಕೆಯಂ ಮೆರೆದಂ ಕವಿಭಾಳಲೋಚನಂ೮೬

ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವನಂ
ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ
ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್
ಸಿರಿ ನೆರೆದಿರ್ಕೆ ನಾಳ್ಪ್ರಭು ಜನಾರ್ಧನದೇವನ ವಕ್ತ್ರಪದ್ಮದೊಳ್೮೭



೮೫. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ
ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ
ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ
ಭವ್ಯಪ್ರಭು ಸಭೆಗೆ ಮಂಗಲಕರವಾದ ಸಂಪದ್ವಿಲಾಸವು ಶೋಭಿಸುತ್ತದೆ. ೮೬.
ಶ್ರೀ ಗಿರಿದುರ್ಗ ಮಲ್ಲರಾಜನ ರಾಜ್ಯದ ವತ್ಸರವು ಉತ್ತರೋತ್ತರ ಉತ್ಕರ್ಷಕ್ಕಾಗಿ
ಇರುವಾಗ ಶುಕ್ಲ ಸಂವತ್ಸರದ ಆಶ್ವೀಜ ಕೃಷ್ಣಪಂಚಮಿ ಪುಷ್ಯ ನಕ್ಷತ್ರದ ಗುರುವಾರ
ಈ ಕೃತಿ ಒಳ್ಳೆಯ ಪ್ರತಿಷ್ಠೆಯನ್ನು ಪಡೆಯಿತು. ಈ ಲೋಕದಲ್ಲಿ ತ್ಯಾಗದ ಭೋಗದ
ಅಗ್ಗಳಿಕೆಯನ್ನು ಕವಿಭಾಳಲೋಚನನು ಮೆರೆದನು. ೮೭. ಶ್ರೇಷ್ಠನಾದ ಜಿನೇಂದ್ರನ
ಶಾಸನ (ಧರ್ಮ)ವೆಂಬ ವಸಂತದಲ್ಲಿ ಈ ಕಾವ್ಯವೆಂಬ ಕೋಗಿಲೆಯ ಧ್ವನಿ
ಪಸರಿಸಲಿ! ಅಸಹಾಯ ಶೂರನ(ಬಲ್ಲಾಳನ) ಬಾಹುವಿಗೆ ಜಯವೊದಗಲಿ!
ನಾಡೊಡೆಯನಾದ ಜನಾರ್ದನ ದೇವ (ಜನ್ನ)ನ ಮುಖ ಕಮಲದಲ್ಲಿ
ಯಾವಾಗಲೂ ಸರಸ್ವತಿಯು ಪರಿಮಳದಂತೆ ನೆಲಸಿರಲಿ! ವಿಕಾಸದ ಚೆಲುವಿನಂತೆ
ಲಕ್ಷ್ಮಿ ಸೇರಿಕೊಂಡಿರಲಿ!