ಪುಟ:Mysore-University-Encyclopaedia-Vol-1-Part-1.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೆಗಸ್ಪೋರೋಕಾರ್ಪ್ ಎಂಬ ವಂಶಾಭಿವೃದ್ಧಿಯ ಅಂಗಗಳಾಗುತ್ತವೆ. ಮೈಕ್ರೋಸ್ಪೋರೋ ಕಾರ್ಪಿನ ಒಳಾಂಗಗಳಲ್ಲಿ, ಮೈಕ್ರೋಸ್ಪೋರ್‍ಗಳೆಂಬ ಸೂಕ್ಷ್ಮಕಣಗಳು ಅಧಿಕ ಸಂಖ್ಯೆಯಲ್ಲಿ ಉತ್ಪಾದನೆಯಾಗುತ್ತವೆ. ಮೈಕ್ರೋಸ್ಪೋರೋಕಾರ್ಪ್ ಮತ್ತು ಮೈಕ್ರೋಸ್ಪೋರ್‍ಗಳಿರುವ ಒಳಾಂಗಗಳು ಬಿರಿದಾಗ ಇವು ಹೊರಕ್ಕೆ ಬರುತ್ತವೆ. ಬಿರಿದ ಮೆಗಸ್ಪೋರೊಕಾರ್ಪ್‍ಗೆ ಈ ಕಣಗಳು ಅಂಟಿಕೊಂಡಾಗ ಸೂಕ್ಷ್ಮ ಗಂಡು ಜನನಾಂಗವಾಗಿ ಅತ್ಯಂತ ಸೂಕ್ಷ್ಮವಾದ ಗಂಡು ಜನನ ಕಣಗಳನ್ನು ಉತ್ಪಾದಿಸುತ್ತವೆ. ಬಲಿತ ಮೆಗಸ್ಪೋರೋಕಾರ್ಪ್ ಬಿರಿದಾಗ ಒಳಾಂಗದಲ್ಲಿರುವ ಮೆಗಸ್ಪೋರ್ ಕಣ ಬೆಳೆದು ತತ್ತಿಯಿರುವ ಆರ್ಕಿಗೋನಿಯಂ ಎಂಬ ಹೆಣ್ಣು ಜನನಾಂಗವನ್ನು ಉತ್ಪಾದಿಸುತ್ತದೆ. ಯಾವುದೋ ಒಂದು ಗಂಡು ಕಣ ಚಲಿಸಿ ತತ್ತಿಯನ್ನು ಸೇರಿ ಗರ್ಭಧಾರಣೆಯಾಗುತ್ತದೆ. ಗರ್ಭ ಧರಿಸಿದ ತತ್ತಿ ಒಡೆದು ಭ್ರೂಣವಾಗುತ್ತದೆ. ಭ್ರೂಣ ಬೆಳೆದು ಎಲೆ, ಕಾಂಡ ಮತ್ತು ಬೇರಿರುವ ಅಜ಼ೋಲ ಸಸ್ಯವಾಗುತ್ತದೆ. ಇದರ ಜೀವನಚರಿತ್ರೆಯಲ್ಲಿ ನಿರ್ಲಿಂಗ ಮತ್ತು ಸಲಿಂಗ ಪೀಳಿಗೆಗಳ ಪರ್ಯಾಯಕ್ರಮವಿದೆ. ಇದು ವಾತಾವರಣದಲ್ಲಿನ ನೈಟ್ರೋಜನನ್ನು ಸ್ಥೀರಿಕರಿಸುವಲ್ಲಿ ಅದನ್ನು ಇತರೆ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುವಲ್ಲಿ ಅತ್ಯಂತ ಸಮರ್ಥ ಎಂದು ಇದನ್ನು ಬತ್ತದ ಗದ್ದೆಗಳಲ್ಲಿ ಬೆಳೆಯುವ ಪದ್ಧತಿ ಜನಪ್ರಿಯವಾಗಿದೆ. (ಎನ್.ಆರ್.) ಅಜ್ಜಂಪುರ : ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಒಂದು ದೊಡ್ಡ ಊರು. ಬೆಂಗಳೂರು ಪುಣೆ ರೈಲುಮಾರ್ಗದಲ್ಲಿನ ಒಂದು ನಿಲ್ದಾಣ. ತರೀಕೆರೆ ಹೊಸದುರ್ಗ ರಸ್ತೆಯಲ್ಲಿ ತರೀಕೆರೆಗೆ 22ಕಿಮೀ ದೂರದಲ್ಲಿರುವ ಈ ಊರು ಹೋಬಳಿಯ ಕೇಂದ್ರ ಸ್ಥಳವಾಗಿದ್ದು, ಪುರಸಭೆಯನ್ನು ಹೊಂದಿದೆ. ಹಿಂದೆ ಈ ಊರಿನ ಸ್ಥಳದಲ್ಲಿ ಕೆರಾಲವೆಂಬ ಹಳ್ಳಿಯಿತ್ತು. 17ನೆಯ ಶತಮಾನದಲ್ಲಿ ಶಿರಾ ರಾಜ್ಯದ ಮುಗಲ್ ಪ್ರತಿನಿದಿsಯ ಅದಿsಕಾರಿಯಾದ ಅಜೀಂಖಾನ್ ಎಂಬುವನು ಇಲ್ಲಿಗೆ ಬೇಟೆಗಾಗಿ ಬಂದಾಗ ಅವನ ಬೇಟೆನಾಯಿಗಳನ್ನು ಇಲ್ಲಿನ ಮೊಲವಿಂಡು ಪ್ರತಿಭಟಿಸಿ ಅಟ್ಟಿಸಿಕೊಂಡು ಬಂದಿತಂತೆ. ಅದನ್ನು ಕಂಡು ಚಕಿತನಾದ ಖಾನ್ ಅದೊಂದು ಗಂಡು ಮೆಟ್ಟಿನ ಭೂಮಿಯೆಂದು ಬಗೆದು ಅಲ್ಲಿ ಕೋಟೆ ಕಟ್ಟಿಸಿ, ಆ ಊರಿಗೆ ಅಜೀಂಪುರವೆಂದು ಹೆಸರಿಟ್ಟ. ಕಾಲಕ್ರಮದಲ್ಲಿ ಅದು ಅಜ್ಜಂಪುರವೆಂದು ಪ್ರಚಾರಕ್ಕೆ ಬಂತು ಎಂದು ಸ್ಥಳ ಪ್ರತೀತಿ. ಮುಂದೆ ತರೀಕೆರೆಯ ಪಾಳೆಯಗಾರ ಹನುಮಪ್ಪ ನಾಯಕ ಇಲ್ಲಿ ಶಿದಿs‹ಲವಾಗಿದ್ದ ಅಜೀಂಖಾನನ ಕೋಟೆಯನ್ನು ದುರಸ್ತು ಮಾಡಿಸಿ ವಿಜಯನಗರದ ಬುಕ್ಕರಾಯ ಕಟ್ಟಿಸಿದ್ದ ದೇವಾಲಯವನ್ನೂ ಜೀರ್ಣೋದ್ಧಾರ ಮಾಡಿಸಿದ. 1766ರಲ್ಲಿ ಹೈದರ್ ಈ ನಗರವನ್ನು ವಶಪಡಿಸಿಕೊಂಡ. ಅಂದಿನಿಂದ ಇದು ಮೈಸೂರು ರಾಜ್ಯದ ಆಡಳಿತಕ್ಕೆ ಸೇರಿತು. ಅಜ್ಜಂಪುರದಲ್ಲಿ ನೇಯ್ಗೆ ಚೆನ್ನಾಗಿಬೆಳೆದಿದೆ. ಸುತ್ತಿನ ಪ್ರದೇಶಕ್ಕೆ ಈ ಊರು ಮುಖ್ಯ ವ್ಯಾಪಾರಸ್ಥಳ. ಪ್ರತಿ ಮಂಗಳವಾರ ಇಲ್ಲಿ ದೊಡ್ಡ ಸಂತೆ ನಡೆಯುತ್ತದೆ. ಊರಿನ ಸುತ್ತಲೂ ಫಲವತ್ತಾದ ಎರೆಮಣ್ಣಿನ ಜಮೀನಿನಲ್ಲಿ ಹತ್ತಿ ಬೆಳೆಯುತ್ತದೆ. ಹಿಂದೆ ಈ ಊರಿನ ಹತ್ತಿರ ಚಿನ್ನ ತೆಗೆಯುತ್ತಿದ್ದ ಕ್ಷೇತ್ರಗಳಿದ್ದುವು. 1897ರಲ್ಲಿ ಯುರೋಪಿನ ಸಂಸ್ಥೆಯೊಂದು ಚಿನ್ನದ ಗಣಿ ಉದ್ಯಮವನ್ನು ಇಲ್ಲಿ ಆರಂಬಿsಸಿತು. ಆದರೆ ಕೆಲವು ವರ್ಷಗಳ ಅನಂತರ ಆರ್ಥಿಕ ತೊಂದರೆಯಿಂದಾಗಿ ಅದು ಕೆಲಸವನ್ನು ನಿಲ್ಲಿಸಿಬಿಟ್ಟಿತು. (ಎಸ್.ವಿ.ಎಸ್.) ಅಜ್ಜಿಕಥೆ : ಜನಪದ ಸಾಹಿತ್ಯದ ಬಹುಮುಖ್ಯವಾದ ಭಾಗಗಳಲ್ಲೊಂದು. ಅದ್ಭುತವೂ ರಮ್ಯವೂ ಆದ ಪವಾಡಗಳನ್ನೊಳಗೊಂಡ ಈ ಕಥೆಗಳನ್ನು ಯಕ್ಷಿಣಿ ಕಥೆಗಳೆಂದೂ ಕಿನ್ನರಿ ಕಥೆಗಳೆಂದೂ ಕರೆಯುತ್ತಾರೆ. ಸರ್ವಸಾಮಾನ್ಯವಾಗಿ ಅಜ್ಜಿ ಮೊಮ್ಮಕ್ಕಳಿಗೆ ಇಂಥ ಕಥೆಗಳನ್ನು ಹೇಳುವ ವಾಡಿಕೆ ಇದೆಯಾಗಿ ಇವಕ್ಕೆ ಅಜ್ಜಿಕಥೆಗಳು ಎಂಬ ಹೆಸರೂ ಒಪ್ಪುತ್ತದೆ. ಅಜ್ಜಿಯ ಕಥೆಗಳು ಯಾವ ಯಾವುದೋ ದೇಶದಲ್ಲಿ, ಯಾವ ಯಾವುದೋ ಭಾಷೆಯಲ್ಲಿ ಹುಟ್ಟಿ ಬೆಳೆದು ಪ್ರಪಂಚ ಪರ್ಯಟನ ಮಾಡಿ, ವಿವಿಧ ದೇಶಭಾಷೆಗಳಲ್ಲಿ ರೂಪತಾಳಿ, ಆಯಾ ಜನಜೀವನದ ಸಂಸ್ಕøತಿಯ ಪ್ರಭಾವದಿಂದ ಬಣ್ಣ ಬದಲಾಯಿಸಿಕೊಂಡು ಬೇರೆ ಬೇರೆ ಕಥೆಗಳಾಗಿ ಹರಡಿಕೊಂಡುವು. ಪಾಶ್ಚಾತ್ಯ ಸಾಹಿತ್ಯದಲ್ಲಿ, ಈಗ ಅಜ್ಜಿಯ ಕಥೆಯೆಂದು ಪರಿಗಣಿಸುವ ಅನೇಕ ಕಥೆಗಳು ಜನರ ಬಾಯಿಯಲ್ಲೇ ಬಹುಕಾಲದವರೆಗೂ ಉಳಿದಿದ್ದುವು. ಬಹುಕಾಲ ಅವುಗಳನ್ನು ಸಂಗ್ರಹಿಸಿ ಪ್ರಕಾಶಿಸುವ ಪ್ರಯತ್ನ ನಡೆದಿರಲಿಲ್ಲ. ಜರ್ಮನಿಯ ಜೇಕಬ್ ಮತ್ತು ವಿಲ್ಹೆಲ್ಮ್ ಗ್ರಿಮ್ ಸಹೋದರರನ್ನು ಈ ಸಾಹಸದ ಪುರೋಗಾಮಿಗಳೆಂದು ನಾವು ಕರೆಯಬಹುದು. ಆದರೆ ಕಲೆಯ ದೃಷ್ಟಿಯಿಂದ ಹ್ಯಾನ್ಸ್ ಕ್ರಿಶ್ಚಿಯನ್ ಆ್ಯಂಡರ್ಸನ್ನನ ಕಥೆಗಳು ತುಂಬ ಪ್ರಶಂಸನೀಯವಾಗಿವೆ. ಈ ಕಥೆಗಳ ಮುಖ್ಯ ಗುಣಲಕ್ಷಣಗಳ ವಿಶ್ಲೇಷಣೆÀ ಕಷ್ಟಸಾಧ್ಯ. ಆದರೂ ಯುರೋಪಿನ ಅಜ್ಜಿಕಥೆಗಳಲ್ಲಿ ಕಾಣುವ ಕೆಲವು ಮುಖ್ಯ ಮಾದರಿಗಳ ಲಕ್ಷಣಗಳನ್ನು ಸ್ಥೂಲವಾಗಿ ವಿವೇಚಿಸಬಹುದು. ಮುಖ್ಯವಾಗಿ ಇವು ಯಾವನೋ ಒಬ್ಬ ರಾಜ ಅಥವಾ ರಾಜಕುಮಾರಿಯ ಸುತ್ತಲೂ ಹೆಣೆದ ಕಥೆಗಳು; ಧೈರ್ಯ, ಸಾಹಸ, ಇಂದ್ರಜಾಲ, ಮಾಯ, ಮಾಟ-ಇವುಗಳಿಂದ ತುಂಬಿದಂಥ ಈ ಕಥೆಗಳಲ್ಲಿನ ಪಾತ್ರಗಳಾಗಲಿ, ಕಥೆಯ ಹಿನ್ನೆಲೆಯಾಗಲಿ, ಯಾವುದೊಂದು ದೇಶಕಾಲದ ಪರಿಮಿತಿಗೆ ಸೇರಿರುವುದಿಲ್ಲ. ಯುರೋಪಿನ ಅಜ್ಜಿಕಥೆಗಳನ್ನು ಮುಖ್ಯವಾಗಿ ಮೂರು ರೀತಿಯವೆಂದು ವಿಂಗಡಿಸುತ್ತಾರೆ. ಮೊದಲನೆಯದು, ಕಾಮದೇವ ಮತ್ತು ಮನೋದೇವತೆ ರೀತಿಯವು (ಕ್ಯೂಪಿಡ್ ಮತ್ತು ಸೈಕಿ ಮಾದರಿ); ಎರಡನೆಯದು, ಸ್ವಾಮಿನಿಷ್ಠೆಯುಳ್ಳ ಸೇವಕನ ರೀತಿಯವು (ಫೇತ್‍ಫುಲ್ ಜಾನ್ ಟೈಪ್); ಮೂರನೆಯ ರೀತಿಯ ಕಥೆಗಳಲ್ಲಿ ಚಿಕ್ಕವರು ನಿಸ್ಸಹಾಯಕರು, ಗುಜ್ಜಾರಿಗಳು, ದರ್ಜಿ, ಬಡ ಸಿಪಾಯಿ ಮುಂತಾದ ಸಾಮಾನ್ಯ ಜನರು ಅಸಾಧಾರಣ ಸಾಹಸಗಳಲ್ಲಿ ತೊಡಗಿ ಜಯಶೀಲರಾಗುವುದು ಇತ್ಯಾದಿ. ಮೊದಲನೆಯ ರೀತಿಯ ಕಥೆಗಳಲ್ಲಿ ಪದೇ ಪದೇ ಬರುವ ತಿರುಳಿನ ಭಾಗ ಹೀಗಿರುತ್ತದೆ: ಒಬ್ಬ ಸುಂದರ ಯುವತಿಯನ್ನು ದಿವ್ಯ ಸುಂದರ ಪುರುಷನೊಬ್ಬ ಪ್ರೀತಿಸುವುದು, ರಾತ್ರಿ ಅವನು ಪ್ರತ್ಯಕ್ಷನಾಗಿ ಅವಳು ತನ್ನ ಕಡೆ ತಿರುಗಿ ನೋಡಬಾರದೆಂಬ ಅಥವಾ ತನ್ನನ್ನು ದಿಟ್ಟಿಸಿ ನೋಡಬಾರದೆಂಬ ನಿಯಮವನ್ನು ವಿಧಿಸುವುದು, ಅವಳು ನಿಯಮವನ್ನುಪೇಕ್ಷಿಸಿ ಪ್ರಿಯನನ್ನು ಕಳೆದುಕೊಳ್ಳುವುದು, ಅವನನ್ನು ಹುಡುಕುತ್ತಾ ಹೋದಾಗ ತನಗೆ ವಿಧಿಸುವ ಹಲವಾರು ಕಠಿಣ ಕೆಲಸಗಳಲ್ಲಿ ತೊಡಗುವುದು, ಕಟ್ಟ ಕಡೆಗೆ ತನ್ನ ಪ್ರಿಯನನ್ನು ಸಂಧಿಸುವುದು ಇತ್ಯಾದಿ. ಎರಡನೆಯ ರೀತಿಯ ಕಥೆಗಳಲ್ಲಿ ಯಥಾಪ್ರಕಾರ ಒಬ್ಬ ರಾಜಕುಮಾರ. ಅವನನ್ನು ಅಪಾಯಗಳಿಂದ ರಕ್ಷಿಸುವ ನಿಷ್ಠಾವಂತ ಸೇವಕ. ವಂಚಿತನಾದ ರಾಜ ತಪ್ಪಿನಿಂದ ತನ್ನ ಸೇವಕನನ್ನು ಶಿಕ್ಷಿಸಿದಾಗ ಅವನು ಶಿಲಾರೂಪಿಯಾಗುವುದು, ರಾಜಕುಮಾರ, ಅವನ ಪ್ರಿಯೆ-ಇಬ್ಬರೂ ಪಶ್ಚಾತ್ತಾಪದಿಂದ ಕಂಬನಿಗರೆದಾಗ, ಸೇವಕನ ಶಾಪವಿಮೋಚನೆಯಾಗುವುದು ಇತ್ಯಾದಿ. ಎಲ್ಲ ಸಂದರ್ಭಗಳಲ್ಲೂ ಕಥಾನಾಯಕ, ನಾಯಕಿಯರು ಸದ್ಗುಣಸಂಪನ್ನರು. ಅವರ ವಿರೋಧಿಗಳೆಲ್ಲರೂ ದುಷ್ಟರು, ನೀಚರು, ಕುಹಕಿಗಳು, ಕಪಟಿಗಳು ಆಗಿರುತ್ತಾರೆ. ನಾಯಕ- ನಾಯಕಿಯರು ಸಾಹಸ ಕೆಲಸಗಳಲ್ಲಿ ತೊಡಗಿದಾಗ ನಿರ್ಜೀವ ವಸ್ತುಗಳೂ ಮೃಗಪಕ್ಷಿಗಳೂ ಅವರಿಗೆ ಅನಿರೀಕ್ಷಿತವಾಗಿ ಸಹಾಯಕವಾಗುತ್ತವೆ. ಈ ಕಥೆಗಳಲ್ಲಿ ಕೆಲವು ವಿಶಿಷ್ಟಸಂಖ್ಯೆಗಳಿಗೆ (ಎರಡು, ಮೂರು, ಏಳು ಇತ್ಯಾದಿ) ಪ್ರಾಧಾನ್ಯ. ವಿಭಿನ್ನ ಸ್ವಭಾವದ ಇಬ್ಬರು ರಾಕ್ಷಸರನ್ನು ಕೊಲ್ಲುವುದು, ಅದರಲ್ಲಿ ಮೂರನೆಯವನು ಅತಿಭಯಂಕರ, ಅಪ್ರತಿಮ ಸಾಹಸಿ, ಮೂವರು ರಾಜಪುತ್ರಿಯರು, ಅವರಲ್ಲಿ ಮೂರನೆಯವಳು ಅತಿ ಸುಂದರಿ, ಏಳು ಸಮುದ್ರಗಳಾಚೆಯ ದ್ವೀಪದಲ್ಲಿ ಏಳು ಸುತ್ತಿನ ಕೋಟೆ-ಇತ್ಯಾದಿ. ಇಂಥ ಪ್ರಸಂಗಗಳು ಬೇರೆ ಬೇರೆ ದೇಶದ ಕಥೆಗಳಲ್ಲಿ ತೆರತೆರನಾದ ಬದಲಾವಣೆ ಹೊಂದುತ್ತವೆ. ಈ ಕಥೆಗಳು ಎಲ್ಲಿ, ಹೇಗೆ ಹುಟ್ಟಿದವೆಂಬ ವಿಷಯದಲ್ಲಿ ಬಹಳ ಭಿನ್ನಾಭಿಪ್ರಾಯಗಳಿವೆ. ಪುರಾಣಕಥೆಗಳಿಂದ ಹುಟ್ಟಿದವೆಂಬ ವಾದವನ್ನು ವಿದ್ವಾಂಸರು ಒಪ್ಪುವುದಿಲ್ಲ. ಯಾವುದೋ ಒಂದು ಕಾಲದಲ್ಲಿ ಒಂದೇ ಮೂಲದಿಂದ ಹುಟ್ಟಿದ ಈ ಕಥೆಗಳು ಅಸಂಖ್ಯಾತ ರೂಪಗಳನ್ನು ತಾಳಿ, ಬೇರೆ ಬೇರೆಯಾಗಿರಬಹುದು. ಕೆಲವು ವಿಮರ್ಶಕರು ಅಜ್ಜಿಯ ಕಥೆಗಳು ಯುರೋಪಿನಲ್ಲಿ ಹುಟ್ಟಿ ಇಂಡೋ-ಯುರೋಪಿಯನ್ ಪರಂಪರೆಗೆ ಸೇರಿದುವೆಂದು ಅಭಿಪ್ರಾಯಪಡುತ್ತಾರೆ. 1859ರಲ್ಲಿ ಟಿ. ಬೆನ್‍ಫೆ ಎಂಬ ವಿದ್ವಾಂಸ ಅಜ್ಜಿಕಥೆಗಳು ಭಾರತದಲ್ಲಿ ಹುಟ್ಟಿದವೆಂಬುದನ್ನು ಖಚಿತವೆನ್ನುತ್ತಾನೆ. ಸುಪ್ರಸಿದ್ಧ ಕಥಾಸಾಹಿತ್ಯ ವಿದ್ವಾಂಸನಾದ ಸ್ಟಿತ್ ಥಾಮ್ಸನ್ ಪ್ರ.ಶ.ಪೂ. 1300ಕ್ಕಿಂತ ಹಿಂದೆ ಈಜಿಪ್ಟ್ ದೇಶದಲ್ಲಿ ಉಪಲಬ್ಧವಾಗಿದ್ದ ಕಥಾಸಂಗ್ರಹಗಳಲ್ಲಿ ಅಜ್ಜಿಕಥೆಯ ಮೂಲವನ್ನು ಕಾಣಬಹುದೆನ್ನುತ್ತಾನೆ. ಅಲ್ಲದೆ ಈ ಕಥೆಗಳ ಮಾದರಿಗಳನ್ನು ಒಂದು ದೇಶ ಇನ್ನೊಂದು ದೇಶದಿಂದ ಎರವಲು ಪಡೆಯಿತೆಂದು ಹೇಳುವುದು ಸರಿಯಲ್ಲ. ಕಥೆ ಹೇಳುವುದು ಕೇಳುವುದು ಮಾನವಸಹಜವಾದ ಗುಣ ಎಂಬುದನ್ನು ನಾವು ಮರೆಯುವಂತಿಲ್ಲ. ಕಲ್ಪನೆ, ಸೃಷ್ಟಿ, ಮಾಟಗಳಲ್ಲಿ ಸಾಮ್ಯವಿದ್ದರೂ ಇವು ಆಯಾ ನೆಲದಲ್ಲೇ ಸ್ವತಂತ್ರವಾಗಿ ಹುಟ್ಟಿಬಂದಿರಲೂಬಹುದು. ಅರೇಬಿಯನ್ ನೈಟ್ಸ್, ಕಥಾಸರಿತ್ಸಾಗರ, ದಶಕುಮಾರಚರಿತೆ, ವಿಕ್ರಮಾದಿತ್ಯನ ಕಥೆಗಳು- ಈ ಮೊದಲಾದವುಗಳಲ್ಲಿ ಅಜ್ಜಿಕಥೆಗಳಿಗೆ ಚಿತ್ರವಿಚಿತ್ರವಾದ ನಿದರ್ಶನಗಳಿವೆ. ಈಚೆಗೆ ಈ ಬಗೆಯ ಸಾಹಿತ್ಯದ ಬಹುಭಾಗ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಹೇಗೇ ಇರಲಿ, ಈ ಕಥೆಗಳು ಜನರ ಮನೋರಂಜನೆಗಾಗಿ ರಚಿತವಾದುವೆನ್ನುವುದ ರಲ್ಲಿ ಸಂಶಯವಿಲ್ಲ. ಈ ಕಥೆಗಳಲ್ಲಿ ಸೂಕ್ಷ್ಮವಾದ ಕಲ್ಪನಾಚಾತುರ್ಯ, ಸರಳವೂ ನೇರವೂ ಆದ ಕಥನಕಲೆ, ರಸಮಯ ಸನ್ನಿವೇಶಗಳಿರುತ್ತವೆ. ಅತ್ಯಂತ ಹಿರಿಯ ಕವಿಗಳೂ ಇಂಥ ಕಥೆಗಳಿಗೆ ಮಾರುಹೋಗಿದ್ದಾರೆ. ಇವು ಸ್ವತಂತ್ರವಾದ ಬಿಡಿಕಥೆಗಳಾಗಿದ್ದರೂ ಹಲವಾರು ಮಹಾಕಾವ್ಯಗಳಲ್ಲೂ ಪುರಾಣಕಥೆಗಳಲ್ಲೂ ಸೇರಿಹೋಗಿವೆ. ಹೋಮರನ ಒಡಿಸ್ಸಿಯಲ್ಲಿ ಬರುವ ಒಕ್ಕಣ್ಣ ರಾಕ್ಷಸ-ಪಾಲಿ ಫೀಮಸ್‍ನ ಕಥೆ, ಸಿಸಿರೋವಿನ ಗ್ರಂಥದಲ್ಲಿ ಮತ್ತು ಕಲ್ಪಿತ ಪ್ರಮಾಣಗ್ರಂಥವಾದ ಬುಕ್ ಆಫ್ ಟಾಬಿಟ್‍ನಲ್ಲಿ ಬರುವ ಗ್ರೇಟ್‍ಪುಲ್ ಡೆಡ್ ಕಥೆಗಳೂ ಗಯಟೆ ಕವಿಯ ಫೌಸ್ಟ್ ನಾಟಕದಲ್ಲಿ ಬರುವ ಜೂನಿಫರ್ ವೃಕ್ಷದ ಕಥೆಯೂ ಇದಕ್ಕೆ ಅತ್ಯುತ್ತಮ ನಿದರ್ಶನಗಳು. (ಎಚ್.ಕೆ.ಆರ್.) ಅಜ್ಞಾತನಾಮ : ನೋಡಿ: ಹುಸಿ ಹೆಸರು ಅಜ್ಞೇಯತಾವಾದ : ಒಂದು ರೀತಿಯ ಸಂದೇಹವಾದ. ನಮ್ಮ ಆಲೋಚನಾಶಕ್ತಿ ಇಂದ್ರಿಯಾನುಭವಕ್ಕಿಂತ ಮುಂದೆ ಹೋಗಲಾರದು, ಆಧ್ಯಾತ್ಮಿಕ ವಿಷಯಗಳನ್ನು, ಅದರಲ್ಲೂ ದೇವರ ಅಸ್ತಿತ್ವ ವಿಚಾರವನ್ನು ಸಕಾರಣವಾಗಿ ಸಿದ್ಧಿಸುವುದಕ್ಕಾಗುವುದಿಲ್ಲ ಎಂಬುದು ಈ ವಾದದ ಸಾರಾಂಶ. ಅಜ್ಞೇಯತಾವಾದ (ಅಗ್ನಾಸ್ಟಿಸಿಸಮ್) ಆಸ್ತಿಕ್ಯವನ್ನು ಒಪ್ಪದಿದ್ದರೂ