ಮದುವೆಗೆ ಬೇಕಾದ ರಹದಾರಿಯಾಗಿತ್ತು..ಹುಡುಗಿಯರನ್ನು ಪರೀಕ್ಷಿಸುವ ವಿಧಾನಗಳೊ!ಕುಳುಕುಂದದ,ಹಾಸನದ ಇಲ್ಲವೆ ಸೋಮೇಶ್ವರದ ಜಾನುವಾರು ಜಾತ್ರೆಯಲ್ಲೂ ಗಿರಾಕಿ ಅಂತಹ ಪರೀಕ್ಷೆ ನಡೆಸಲಾರ....!
ತುಂಗಮ್ಮನ ಮೃದು ಮನಸ್ಸು ಮುದುಡಿಕೊಂಡು ಕಹಿಯಾಯಿತು.
ಪ್ರತಿಸಾರೆಯೂ ವರಾಜಿತರಾಗುತಿದ್ದ ಆಕೆಯತಂದೆ ಮನಸ್ಸಿನ ನೆಮ್ಮದಿ ಕೆಡಿಸಿಕೊಂಡರು.ಸದಾಕಾಲವೂ ಸಹನಶೀಲರಾಗಿದ್ದ ಆ ಬಡ ಉಪಾಧ್ಯಾಯರಲ್ಲೂ ಸಿಡುಕು ಮನೆಮಾಡಿತು.
ತುಂಗಮ್ಮನಿಗೆ ತಾನು ಉಂಡ ಅನ್ನ ಮೈಸೇರಲಿಲ್ಲ ಆಕೆ ಸೊರಗಿದಳು.
ಅಂತಹ ಪರಿಸ್ಥಿತಿಯಲ್ಲಿ,ಆಕೆಯ ಬಾಳ್ವೆಯ ಕಾರಿರುಳಲ್ಲಿ ಒಮ್ಮೆಲೆ
ಚಂದ್ರೋದಯವಾಯಿತು
ಆ ವರ್ಷದ ಚಳಿಗಾಲ ಕಳೆದು ಮತ್ತೊಂದು ವರ್ಷದ ಬೇಸಗೆ ಮುಖ
ತೋರಿಸಿತ್ತು ಆದಿನ ಭಾನುವಾರ.ಸಂಜೆಯ ಹೊತ್ತು ತುಂಗಮ್ಮನ ತಂದೆ,ಸ್ನೇಹಿತರು ಯಾರನ್ನೋ ಕಾಣಬೇಕಾಗಿದೆಯೆಂದು ಹೊರ ಹೋದರು. ತುಂಗಮ್ಮನ ತಮ್ಮ,ಹೈಸ್ಕೂಲಿನ ಆಟದ ಬಯಲಿನಲ್ಲಿ ನಡೆಯುತಿದ್ದ ಕ್ರಿಕೆಟ್ ಪಂದ್ಯಾಟ ನೋಡಲು ಹೋಗಿದ್ದ. ಮನೆಯಲ್ಲಿ ತುಂಗಮ್ಮನೊಬ್ಬಳೇ "ಕಣ್ಣೀರು" ಕಾದಂಬರಿ ಕೈಯಲ್ಲಿ ಹಿಡಿದು ಕುಳಿತಿದ್ದಳು.
ಆಗ ಬಾಗಿಲುತಟ್ಟಿದ ಸದ್ದಾಯಿತು.
"ಯಾರದು?"
--ಎಂದು ಕೇಳಿದಳು ತುಂಗಮ್ಮ ಒಳಗಿಂದಲೆ.
ಉತ್ತರದ ರೂಪವಾಗಿ ಎರಡನಯ ಬಾರಿ ಬಾಗಿಲೇ ಸದ್ದು ಮಾಡಿತು.
"ಯಾರು?"
--ಎಂದು ಮತ್ತೊಮ್ಮೆ ತುಂಗಮ್ಮ ಕೇಳಿದಳು ಪರಿಚಿತರು
ಯಾರಾದರೂ ಬಂದು,ಪುಸ್ತಕ ಓದುವುದು ನಿಲ್ಲುವುದಲ್ಲಾ ಎಂದು ಆಕೆಗೆ ಕೆಡುಕೆನಿಸಿತು.
"ನಾನು"
--ಎಂದಿತು ಹೊರಗಿನೊಂದು ಸ್ವರ.