ನಳಚರಿತ್ರೆ;ಒಂದನೆಯ ಸಂಧಿ

ವಿಕಿಸೋರ್ಸ್ದಿಂದ

<ನಳಚರಿತ್ರೆ

ಕನಕದಾಸ ವಿರಚಿತ ನಳಚರಿತ್ರೆ (ಸಂಗ್ರಹ)[ಸಂಪಾದಿಸಿ]

  • (ಮೂಲದೊಂದಿಗೆ ಪರಿಶೀಲಿಸತಕ್ಕದ್ದು)
ಶ್ರೀ
ಒಂದನೆಯ ಸಂಧಿ.

ಒಂದನೆಯ ಸಂಧಿ.
ಶ್ರೀರಮಣ ಸರಸಿಜದಳಾಕ್ಷ ಮು
ರಾರಿ ಸಚರಾಚರಭರಿತ ದುರಿ
ತಾರಿ ನಿತ್ಯಾನಂದ ನಿರ್ಜರನಿಕರದಾತಾರ
ವಾರಿಜಾಂಬಕ ವರಗುಣಾಶ್ರಯ
ಮಾರಪಿತ ವೇದಾಂತನುತ ಸಾ
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ ||೧||

ಕರಿವದನ ಹೇರಂಬ ಲಂಬೋ
ದರ ಗಣಾಧಿಪ ಮೋದಕಪ್ರಿಯ
ಪರಶು ಪಾಶಾಂಕುಶರಾಂಕಿತದಿಂದ ರಂಜಿಸುವ
ಸುರನರೋರಗನಮಿತ ಗೌರೀ
ವರಕುಮಾರಕ ವಿದ್ಯೆವಾರಿಧಿ
ವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ ||೪||

ನಾರಿ ನಳಿನದಳಾಕ್ಷಿ ವರ ಜಂ
ಭಾರಿನುತೆ ಚತುರಾನನಪ್ರಿಯೆ
ಭೂರಿಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ
ನೀರೆ ನಿಗಮವಿಚಾರೆ ಘನಶೃಂ
ಗಾರೆ ಭಕ್ತರಿಗೊರವ ಕೊಡುವ ಉ
ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ ||೫||

ರಾಯರೊಳಗ್ಗಳೆಯನಾಕೌಂ
ತೇಯನಿಗೆ ರೋಮಶಮಹಾಮುನಿ
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು
ಶ್ರೀಯರಸ ವರಪುರದ ಚೆನ್ನಿಗ
ರಾಯನಂಕಿತಮಾಗಿ ಪೇಳುವೆ
ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ ||೬||

ಜನಪ ಕುರುಭೂಪಾಲನೊಳು ಜೂ
ಜಿನಲಿ ರಾಜ್ಯವ ಸೋಯು ಯಮನಂ
ದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆ
ವನಿತೆ ಧೌಮ್ಯಮುನೀಂದ್ರ ಮಂತ್ರೀ
ಜನಸಹಿತ ನಡೆತಂದು ಕಾಮ್ಯಕ
ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ ||೮||

ಧರಣಿಪತಿ ಚಿಂತಿಸುತ ಹಲುಬಿದ
ನರನ ಹದನೇನೆಂದು ತಪದಲಿ
ಮರೆದು ಕಳೆದನೊ ನಮ್ಮನಿಬರನೆನುತಲಿರಲಂದು
ಸರಪ ಕಳುಹಿದ ರೋಮಶನು ಮುನಿ
ವರನು ಗಡಣದೊಳೆಯ್ದಿ ರವಿಭಾ
ಸುರಸುತೇಜದೊಳಂದು ಕಾಮ್ಯಕ ವನಕೆ ನಡೆತಂದ ||೯||

ಅರಸನನುಜರು ಸಹಿತ ಮುನಿಮು
ಖ್ಯರನು ಕಂಡಿದಿರೆದ್ದು ಚರಣದೊ
ಳೆರಗಿ ಬಿಜಯಂಗೈಸಿ ತಂದನು ತಳಿರ ಮಂಟಪಕೆ
ವರಮುನೀಂದ್ರರಿಗರ್ಘ್ಯಪಾದ್ಯೋ
ತ್ಕರದೊಳುಪಚರಿಸುತ್ತ ದರ್ಭಾ
ಸ್ತರಣದಲಿ ಕುಳ್ಳಿರಿಸಿದನು ಭಯಭರಿತಭಕ್ತಿಯಲಿ ||೧೦||

ಧರಣಿಪತಿ ಸುಕ್ಷೇಮವೇ ನಿಜ
ತರುಣಿ ನಿನ್ನನುಜಾತತನಯರು
ವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳು
ಪರಿಣತರೆ ಪೇಳೆನಲು ನಿಮ್ಮಯ
ಪರಮ ಕರುಣಾಮೃತವೆ ನಮ್ಮನು
ಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ ||೧೩||

ಧಾರಿಣಿಯ ನೆರೆ ಸೋತು ಅನುಜರು
ವಾರಿಜಾನನೆ ಸಹಿತ ಬಂದೀ
ಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿ
ಸೇರಿ ಹತಸುಖರಾಗಿ ಬಳಲಿದ
ರಾರು ಧರಿಯೊಳಗೆನ್ನವೊಲು ಭವ
ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ ||೧೪||

ಎಲೆ ಮಹೀಪತಿ ನೀನಿನಿತು ಉ
ಮ್ಮಳಿಸಲೇಕರಸುಗಳು ಪೂರ್ವದ
ನಳ ಹರಿಶ್ಚಂದ್ರಾದಿ ರಾಘವನೃಪರು ಹಳುವದಲಿ
ಲಲನೆಯರ ತಾವಗಲಿ ಕಷ್ಟವ
ಬಳಸಿದರು ಅವರಂತೆ ನಿನಗುಪ
ಟಳಗಳುಂಟೆ ಬರಿದೆ ಮನನೋಯದಿರು ನನೀನೆಂದ ||೧೫||

ಪರಮ ಋಷಿಗಳ ನೆರವಿಯೇ ಸಭೆ
ಹರಿಯ ಕಾರುಣ್ಯಾಂಬುಧಿಯೆ ಸಿರಿ
ನರವೃಕೋದರ ಮಾದ್ರಿತನಯರು ನಿನಗೆ ಬಾಹುಬಲ
ತರುಣಿಯೇ ಭೋಗೈಕಸಂಪ
ತ್ತುರುತರದ ವನರಾಜ್ಯ ನಿನಗಿಂ
ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ ||೧೬||

ಆದಡೆಲೆ ಮುನಿನಾಥ ನಳನೃಪ
ಮೇದಿನಿಯನುಳಿದವನಿಯಲಿ ತ
ಳೋದರಿಯನೆಂತಗಲಿದನು ತಾನಾರ ದೆಸೆಯಿಂದ
ಸಾಧಿಸಿದನವನಿಯನು ಧರೆಯೆಂ
ತಾದುದಾ ನಳನೃಪಗೆ ನೀವಿದ
ನಾದರಿಸಿ ಪೇಳೆನಲು ನಗುತಿಂತೆಂದನಾ ಮುನಿಪ ||೧೭||

ವಸುಧೆಪತಿ ಕೇಳೀ ಚರಿತ್ರೆಯ
ನಿಷಧವೆಂತೆಂಬಾ ಮಹಾಪುರ
ವೆಸೆದುದಗಣಿತ ಗೋಪುರ ಪ್ರಾಕಾರಶಿಖರದಲಿ
ಮಿಸುನಿ ರತ್ನಪ್ರಭೆಗಳಲಿ ರಂ
ಜಿಸುವ ದೇವಾಲಯಗಳಿರ್ದುದು
ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ ||೧೯||

ಭೂರಮಣ ಕೇಳಾ ಪುರಾಧಿಪ
ವೀರಸೇನನೃಪಾಲ ರಿಪುಸಂ
ಹಾರನಾತನ ತನಯ ನಳನೃಪನೆಂಬುದಭಿಧಾನ
ಭೂರಿವಿಕ್ರಮ ಪರಮಧರ್ಮವಿ
ಚಾರ ಶಶಿಕುಲಮೌಳಿ ಘನಗಂ
ಭೀರ ಪಾಲಿಸುತಿರ್ದ ಸಪ್ತದ್ವೀಪದವನಿಪರರ ||೨೫||

ಭೂಮಿಪತಿ ಕೇಳಿತ್ತಲುತ್ತರ
ಭೂಮಿಯಲಿ ಪಜ್ಜಳಿಸುತಿಹ ಸು
ತ್ರಾಮಪುರದಂತೆಸೆದುದಲ್ಲಿ ವಿದರ್ಭನಗರವದು
ರಾಮಣೀಯಕರಚನೆಯಲಿ ನವ
ಹೇಮಖಚಿತ ಸುರತ್ನಸೌಧ
ಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ ||೨೭||

ಅಲ್ಲಿಗಧಿಪತಿ ಭೀಮನೃಪ ಗುಣ
ದಲ್ಲಿ ನಯದಲಿ ವೀರ್ಯವಿತರಣ
ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ
ಬಲ್ಲಿದನು ತಾನಾಗಿ ನಿಜಸುತ
ರಿಲ್ಲವೆಂದುಮ್ಮಳಿಸುತಿರೆ ಮನ
ದಲ್ಲಿಗಾಕ್ಷಣ ಬಂದನಾ ದಮನಾಖ್ಯಮುನಿವರನು ||೨೮||

ಬಂದ ಮುನಿಗವನಿಪತಿ ವಂದಿಸಿ
ನಿಂದು ಕರಗಳ ಮುಗಿದು ವಿನಯದೊ
ಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದು
ನೊಂದನುಡಿಯಲು ಸುತರ ಪಡೆಯದ
ತಂದೆಗಿದು ಸಂತಾಪವಲ್ಲವೆ
ಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ ||೨೯||

ಯೋಗದೃಷ್ಟಿಯೊಳರಿದು ಮುನಿವರ
ನಾಗ ನೃಪನೊಡನೆಂದ ಪುತ್ರನ
ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ
ಆ ಗರುವ ಮುನಿಮಂತ್ರದಿಂದ ಸ
ರಾಗದಲಿ ಶುಭದಿನ ಸುಲಗ್ನದಿ
ಯಾಗವನು ಪೂರೈಸಿದನು ಸುರನರರು ತಣಿವಂತೆ||೩೦||

ಅರಸ ಕೇಳಾ ಯಾಗಸಮನಂ
ತರದೊಳಾ ಮುನಿಮುಖ್ಯರನು ಸ
ತ್ಕರಿಸಿ ಕಳುಹಿದನವರವರನುಚಿತೋಪಚಾರದಲಿ
ತರುಣಿಗಾದುದು ಗರ್ಭ ಮಂಗಳ
ಕರ ಸುಲಗ್ನ ಸುತಾರೆಯಲಿ ನೃಪ
ನರಸಿ ಪಡೆದಳು ತಷನುಜೆಯನು ಲೋಕೈಕಸುಂದರಿಯ ||೩೧||

ಅಮರದುಂದುಭಿ ಮೊಳಗಲಿಳೆ ಸಂ
ಭ್ರಮಿಸೆ ಪುರಜನ ನಲಿಯೆ ನೃಪನಾ
ಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆ
ವಿಮಲನಾಮವ ಪಾಲಿಸೆನಲಾ
ಕಮಲಮುಖಿ ದಮಯಂತಿಯೆಂದು
ತ್ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ ||೩೨||

ನಿರಿಗುರುಳ ಪವಳಾಧರದ ಉರು
ತರದ ತೋಳ್ಗಳ ಕಂಬುಕಂಠದ
ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ
ಹರಿಯ ಮಧ್ಯದ ಹಂಸಗಮನದ
ಗುರುಕುಚದ ಕರಪಲ್ಲವದ ಸರ
ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲಿ ||೩೩||

ಗುಣದೊಳಗೆ ಶೀಲದಲಿ ಮಾತಿನ
ಭಣಿತಿಯಲಿ ಗಾಂಭೀರ್ಯದಲಿ ವಿತ
ರಣದಲನುಪಮವಿದ್ಯೆಯಲಿ ಗುರು ದೈವವಭಕ್ತಿಯಲಿ
ಪ್ರಣಿತಿಸಲು ಶರ್ವಾಣಿ ರತಿಯರಿ
ಗೆಣೆಯೆನಿಪ ಸುಂದರಿಗೆ ಸರಿಯೆ ಲೋಕದೊಳೆಂದನಾ ಮುನಿಪ ||೩೪||

ಕೇಳು ಪಾಂಡವತನಯ ಭೀಮನೃ
ಪಾಲನೋಲಗದಲ್ಲಿ ಧರಣೀ
ಪಾಲಕರರ ಚರಿತಪ್ರಸಂಗದೊಳಿರಲು ನಳನೃಪನ
ಶೀಲವನು ಸೌಂದರ್ಯವಿಭವ ವಿ
ಶಾಲಮತಿ ಲಾವಣ್ಯರೂಪು ಗು
ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು ||೩೫||

ವನಜಮುಖಯಾ ವಾರ್ತೆಯೆಲ್ಲವ
ಮನವೊಲಿದು ಕೇಳಿದಳು ಹಿಗ್ಗುತ
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ
ನೆನೆದು ಬರೆದಳು ನಳನ ರೂಪವ
ನನುನಯದಿ ಚಿತ್ರದಲಿ ಮಿಗೆ ಸಂ
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ ||೩೬||

ಆಗ ಮದನನು ತನ್ನ ಬಲವನು
ಬೇಗದಲಿ ಜೋಡಿಸಲು ಖೋಯೆಂ
ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ
ಕೋಗಿಲೆಗಳಾರ್ಭಟಿಸೆ ಗಿಳಗಳು
ಕೂಗೆ ನವಿಲುಗಳಾಡೆ ಮನ್ಮಥ
ನಾಗ ಪೂಗಣೆಗಳನು ಸಂಧಿಸಿಯೆಚ್ಚನಂಗನೆಯ ||೩೭||

ಉಣ್ಣಳನ್ನವ ಕಾಮಗತ್ತಲೆ
ಕಣ್ಣಿನಲಿ ಪೆರ್ಚಿದುದು ಸತಿಯರ
ಮನ್ನಣೆಗೆ ಮೈಗೊಡಳು ಬಲುಬೇಸರದಿ ಬಳಲುವಳು
ಬಣ್ಣಿಸಿಯೆ ಮಾತಾಡಲೊಲ್ಲಳು
ಬಣ್ಣಗುಂದಿದ ದೇಹದೊಳಗೆಳ
ವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ ||೩೮||

ಈ ಪರಿಯೊಳಾ ಕಾಮಿನಿಗೆ ಶೈ
ತ್ಯೋಪಚಾರವ ಮಾಡಿದರು ಪರಿ
ತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತ
ಚಾಪಳೆಯರಾಲೋಚಿಸುತ ಕಡು
ಪಾಪಿಯಂಗಜನೆಂದು ಬಯ್ಯುತ
ತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸಿ ||೪೧||

---@@---

ನೋಡಿ[ಸಂಪಾದಿಸಿ]

ನಳಚರಿತ್ರೆ- ಸಂಧಿಗಳು>:

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ