ಪಂಪಭಾರತ ತೃತೀಯಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ತೃತೀಯಾಶ್ವಾಸಂ[ಸಂಪಾದಿಸಿ]

  • (XII.II-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
  • ಸೂಚನೆ: ಪದ- 'ನೆಱೆಯೆ', ಎಂಬಲ್ಲಿ ಅನೇಕ ಕಡೆ 'ನೆಯೆ' ಎಂದು ಅಚ್ಚಾಗಿದೆ, (ನೆರೆಯೆ-ಬಹಳ ಎಂಬ ಅರ್ಥ; 'ಱೆ' ಅಚ್ಚಾಗಿಲ್ಲ) ಅದನ್ನು 'ನೆರೆಯೆ' ಎಂದು ಓದಿಕೊಳ್ಳಿ.
ಪಾಂಡವರು ವಾರಣಾವತ ಪಟ್ಟಣದ ಅರಗಿನ ಮನೆಯಲ್ಲಿ

ದುರ್ಯೋಧನನ ತಂತ್ರ: ಪಾಂದವರು ವಾರಣಾವತಕ್ಕೆ: ಅರಗಿನ ಮನೆ ಪ್ರವೇಶ[ಸಂಪಾದಿಸಿ]

ಕಂ|| ಶ್ರೀಯನರಾತಿಬಳಾಸೃ|
ಕ್ತೋಯಧಿಯೊಳ್ ಪಡೆದ ವೀರನುಱದರಿಗಳನಾ||
ತ್ಮೀಯಪದಸುರಿತ ನಖ|
ಚಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ|| ೧||
ಪದ್ಯ-೧:ಪದವಿಭಾಗ-ಅರ್ಥ:ಶ್ರೀಯಂ (ಜಯಲಕ್ಷ್ಮಿಯನ್ನು) ಆರಾತಿಬಳಾಸೃಕ್ ತೋಯಧಿಯೊಳ್ (ಶತ್ರು ಸೈನ್ಯದ ರಕ್ತಸಮುದ್ರದಲ್ಲಿ) ಪಡೆದ ವೀರಂ (ಪಡೆದಂಥ ಶೂರನು) ಉಱದ (ಸೇರದ) ಅರಿಗಳಂ (ಶತ್ರುಗಳನ್ನು) ಆತ್ಮೀಯ ಪದಸ್ಫುರಿತ (ತನ್ನ ಪಾದದಲ್ಲಿ ಹೊಳೆಯುವ) ನಖಚಾಯೆಗಳೊಳ್ (ಉಗುರುಕಾಂತಿಯಲ್ಲಿ) ನಿಱಿಸಿ (ಸ್ಥಾಪಿಸಿ) ನಿಂದ ಗಂಡಂ (ನಿಂತ ವೀರನು) ಹರಿಗಂ (ಅರಿಕೇಸರಿಯು/ ಅರ್ಜುನನು)
ಪದ್ಯ-೧:ಅರ್ಥ: ಶತ್ರುಸೈನ್ಯದ ರಕ್ತಸಮುದ್ರದಲ್ಲಿ ಜಯಲಕ್ಷ್ಮಿಯನ್ನು ಪಡೆದ ವೀರನೂ, ತನಗೆ ಹೊಂದಿಕೊಳ್ಳದ ಶತ್ರುಗಳನ್ನು, ತನ್ನ ಕಾಲಿನಲ್ಲಿ ಹೊಳೆಯುತ್ತಿರುವ ಉಗುರಿನ ಕಾಂತಿಯ ನೆರಳಿನಲ್ಲಿ ನಿಲ್ಲಿಸಿದ ಪರಾಕ್ರಮಶಾಲಿಯೂ ಆದವನು ಅರ್ಜುನನು- ಆ ಪಟ್ಟಣದ (ಶತ್ರುಗಳು ಅವನ ಪಾದಕ್ಕೆ ಶರಣಾಗದರು; ಅವನ ಪಾದದುಗರಿನಲ್ಲಿ ಅವರ ಮುಖ ಕಾಣುತ್ತಿತ್ತು).
ವ|| ಆ ಪೊೞಲ ಪೊಱವೋೞಲನೆಯ್ದೆ ವರ್ಪಾಗಳ್-
ವಚನ:ಪದವಿಭಾಗ-ಅರ್ಥ:ಆ ಪೊೞಲ (ನಗರದ) ಪೊಱವೋೞಲನು ಐಯ್ದೆ ವರ್ಪಾಗಳ್ (ಪಟ್ಟಣದ ಹೊರಭಾಗವನ್ನು ಸಮೀಪಿಸಿದಾಗ)-
ವಚನ:ಅರ್ಥ:ಆ ವಾರಣಾವತ ಪಟ್ಟಣದ ಹೊರಭಾಗವನ್ನು ಸಮೀಪಿಸಿದಾಗ-
ಕಂ|| ಕತ್ತುರಿಯ ಸಗಣ ನೀರ್ ಬಿಡು
ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ|
ಪತ್ತಿನ ಬಿತ್ತರದೆತ್ತಿದ
ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ|| ೨ ||
ಪದ್ಯ-೨:ಪದವಿಭಾಗ-ಅರ್ಥ:ಕತ್ತುರಿಯ ಸಗಣ ನೀರ್ (ಕತ್ತೂರಿಯ ಪರಿಮಳ ಸೇರಿಸಿದ ಸಗಣಿಯ ನೀರುಹಾಕಿ ಸಾರಿಸಿ, ಅದರ ಮೇಲೆ ) ಬಿಡು ಮುತ್ತಿನ ರಂಗವಲಿ, ಮಿಳಿರ್ವ ದುಗುಲದ ಗುಡಿ (ಅಲುಗಾಡುವ ರೇಷ್ಮೆಯ ಧ್ವಜ), ಸಂಪತ್ತಿನ ಬಿತ್ತರದ ಎತ್ತಿದ ಮುತ್ತಿನ ಮಂಡವಿಗೆ(ಎತ್ತರದ ಮುತ್ತಿನ ಮಂಟಪಗಳು) ಪೊೞಲ ಮನೆಗಳೊಳೆಲ್ಲಂ (ಎಲ್ಲಾ ನಗರದ ಮನೆಗಳಲ್ಲೂ)
ಪದ್ಯ-೨:ಅರ್ಥ: ಪಟ್ಟಣದ ಮನೆಗಳ ಎದುರಿನಲ್ಲಿ ಕಸ್ತೂರಿಯ ಪರಿಮಳ ಸೇರಿಸಿದ ಸಗಣಿಯ ನೀರುಹಾಕಿ ಸಾರಿಸಿ, ಅದರ ಮೇಲೆ, ಬಿಡಿಬಿಡಿಯಾದ ಮುತ್ತಿನ ರಂಗೋಲಿ, ಚಲಿಸುತ್ತಿರುವ ರೇಷ್ಮೆಯ ಬಟ್ಟೆಯ ಬಾವುಟಗಳು, ಸಂಪತ್ತಿನ ವಿಸ್ತಾರವಾದ ಎತ್ತರದ ಮುತ್ತಿನ ಮಂಟಪ ಇವುಗಳಿಂದ ಎಲ್ಲಾ ನಗರದ ಮನೆಗಳಲ್ಲೂ ಅಲಂಕೃತವಾಗಿದ್ದುವು
ವ|| ಅಂತಾಗಳೊಂದುತ್ತರಂ ಬಳೆಯೆ ಸೊಗಯಿಸುವ ಪೊೞಲೊಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ಧಾರ್ಥ ದೂವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ ಬದ್ಧವಣದ ಪರೆಗಳುಂ ಬೆರಸಿದಿರ್ವಂದು ಮೆಯ್ಯಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ ಪುಗಿಸೆ ಪೊಕ್ಕು ಬೀಡನೆಲ್ಲಿ ಬಿಡುವಮೆನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನಲ್ಲಿಗೆ ಬಿಜಯಂಗೆಯ್ಯಿಮೆನೆ-
ವಚನ:ಪದವಿಭಾಗ-ಅರ್ಥ:ಅಂತು ಆಗಳು ಒಂದು ಉತ್ತರಂ ಬಳೆಯೆ (ಅತಿಶಯವು ಬೆಳೆಯುತ್ತಿರಲು) ಸೊಗಯಿಸುವ ಪೊೞಲೊಳು (ಸೊಗಸಾಗಿ ಕಾಣುವ ನಗರದಲ್ಲಿ) ಅಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ(ಮೊದಲೇ ಸಿದ್ಧವಾಗಿದ್ದ) ಪುರೋಚನಂ ಗೋರೋಚನಾ ಸಿದ್ಧಾರ್ಥ ದೂವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ (ಮುತ್ತೈದೆಯರು) ಬದ್ಧವಣದ (ವರ್ಧಮಾನವೆಂಬ ವಾದ್ಯದ) ಪಗಳುಂಬೆರಸಿ ಇದಿರ್ವಂದು (ಹೊಗಳುವಿಕೆ ಸೇರಿ ಎದುರುಗೊಂಡು) ಮೆಯ್ಯಿಕ್ಕಿ ಪೊಡಮಟ್ಟು (ದೀರ್ಘದಂಡನಮಸ್ಕಾರಮಾಡಿ) ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ (ಪಟ್ಟಣವನ್ನು) ಪುಗಿಸೆ ಪೊಕ್ಕು (ಪ್ರವೇಶಮಾಡಿಸಲು ಹೊಕ್ಕು) 'ಬೀಡನು ಎಲ್ಲಿ ಬಿಡುವಮೆನೆ,' ನಿಮ್ಮ ಅಯ್ಯಂ (ನಮ್ಮ ತಂದೆ) ಧೃತರಾಷ್ಟ್ರನ ಬೆಸದಲ್ (ಅಪ್ಪಣೆಯಲ್ಲಿ) ಮುನ್ನಮೆ ಮಾಡಮಂ (ಮನೆಯನ್ನು) ಸಮೆದಿಟ್ಟೆನು ಅಲ್ಲಿಗೆ ಬಿಜಯಂಗೆಯ್ಯಿಂ ಎನೆ-
ವಚನ:ಅರ್ಥ:ಹಾಗೆ ವೈಭವದಿಂದ ಕೂಡಿ ಸೊಗಸಾಗಿ ಕಾಣುವ ಪಟ್ಟಣದಲ್ಲಿ ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆಯೆಂಬ ಎಂಟು ವಿಧ ಶೋಭೆಯ ಸ್ವಾಗತಗಳಿಂದ ಕೂಡಿ ದುರ್ಯೋಧನನ ಸೂಚನೆಯ ಪ್ರಕಾರ ಮೊದಲೇ ಸಿದ್ಧವಾಗಿದ್ದ ಪುರೋಚನನು ಗೋರಚನ (ಹಸುವಿನ ಎದೆಯಲ್ಲಿರುವ ಒಂದು ಜಾತಿಯ ಕೊಬ್ಬು) ಅಕ್ಷತೆ, ಗರಿಕೆಯ ಚಿಗುರು, ಮಾದಲಹಣ್ಣು, ಕನ್ನಡಿ, ಕಳಮಾಕ್ಷತೆ ಮೊದಲಾದವುಗಳನ್ನು ಕಯ್ಯಲ್ಲಿ ಧರಿಸಿದ್ದ ಮುತ್ತೈದೆಯರು (ಸ್ತ್ರೀಯರು) ಮಂಗಳವಾದ್ಯಗಳು ಮೊದಲಾದವುಗಳಿಂದ ಕೂಡಿ ಎದುರಿಗೆ ಬಂದು ದೀರ್ಘದಂಡನಮಸ್ಕಾರಮಾಡಿ ಪಾಂಡವರನ್ನು ಮುಂದಿಟ್ಟುಕೊಂಡು ಬಂದು ಪಟ್ಟಣವನ್ನು ಪ್ರವೇಶಮಾಡಿಸಲು ಹೊಕ್ಕು ‘ಎಲ್ಲಿ ಬೀಡುಬಿಡೋಣ’ (ಇಳಿದುಕೊಳ್ಳೋಣ) ಎಂದು ಪಾಂಡವರು ಪ್ರಶ್ನೆಮಾಡಲು ಅವನು ನಿಮ್ಮಯ್ಯನಾದ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ಮೊದಲೇ ಮನೆಯನ್ನು ಸಿದ್ಧಪಡಿಸಿದ್ದೇನೆ; ಅಲ್ಲಿಗೆ ದಯಮಾಡಿಸಿ ಎನ್ನಲು-,
ಕಂ|| ಅರಗು ಮೊದಲಾಗೆ ಘೃತ ಸ
ಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಂ ವಿ|
ಸ್ತರಿಸಿ ಸಮೆದಿಂದ್ರಭವನಮೆ
ಧರೆಗವತರಿಸಿರ್ದುದೆನಿಸುವರಗಿನ ಮನೆಯಂ|| ೩
ಪದ್ಯ-೩:ಪದವಿಭಾಗ-ಅರ್ಥ:ಅರಗು ಮೊದಲಾಗೆ ಘೃತ ಸಜ್ಜರಸಂ ಬೆಲ್ಲಂ ಸಣಂಬು ಎಂಬಿವಱಂ (ಎಂಬ ಮೊದಲಾದ ವಸ್ತುಗಳಿಂದ) ವಿಸ್ತರಿಸಿ ಸಮೆದ (ಮಾಡಲ್ಪಟ್ಟ) ಇಂದ್ರಭವನಮೆ ಧರೆಗೆ ಅವತರಿಸಿರ್ದುದು ಎನಿಸುವ ಅರಗಿನ ಮನೆಯಂ
ಪದ್ಯ-೩:ಅರ್ಥ:ಅರಗು ಮೊದಲಾದ ತುಪ್ಪ, ಸಜ್ಜರಸ (ರಾಳದರಸ), ಬೆಲ್ಲ, ಸೆಣಬು ಇವುಗಳಿಂದ ವಿಸ್ತಾರವಾಗಿ ನಿರ್ಮಿಸಿದ ದೇವೇಂದ್ರನ ಅರಮನೆಯೇ ಭೂಮಿಗಿಳಿದು ಬಂದಿದೆಯೋ ಎನಿಸುವಂತಿದ್ದ ಅರಗಿನ ಮನೆಯನ್ನು-
ವ|| ತಾನೆ ಮುಂದಿಟ್ಟೊಡಂಗೊಂಡು ಬಂದು ಪುಗಿಸೆ ಪಾಂಡವರಯ್ವರುಂ ಕೊಂತಿವೆರಸು ಕಿಱಿದಾನುಂ ಬೇಗಮಿರ್ದು ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಱಿದು ನಿಜಾನುಜ ಸಹಿತಂ ಕೊಂತಿವೆರಸೇಕಾಂತದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:ಪುರೋಚನನು - ತಾನೆ ಮುಂದಿಟ್ಟೊಡಂಗೊಂಡು ಬಂದು ಪುಗಿಸೆ (ಒಳ ಹೊಗಿಸಲು) ಪಾಂಡವರಯ್ವರುಂ ಕೊಂತಿವೆರಸು (ಕುಂತಿಯೊಡಗೂಡಿ) ಕಿಱಿದಾನುಂ ಬೇಗಂ ಇರ್ದು ದಾನ ಸನ್ಮಾನಾದಿಗಳಿಂ ಸಂತಸಂ ಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು (ಪೋಗಲ್ ಹೇಳ್ದು :ಅವನ ಮನೆಗೆ ಹೋಗುವ ಹಾಗೆ ಹೇಳಿ) ಧರ್ಮಪುತ್ರನು ಆ ಮನೆಯಂ ಪರೀಕ್ಷಿಸಿ ನೋಡಲು ಒಡಂ ಅಱಿದು (ಕೂಡಲೆ ತಿಳಿದು) ನಿಜಾನುಜ ಸಹಿತಂ ಕೊಂತಿವೆರಸಿ ಏಕಾಂತದೊಳು ಇಂತೆಂದಂ-
ವಚನ:ಅರ್ಥ:ಪುರೋಚನನು ತಾನೆ ಮುಂದೆ ಇದ್ದು ಒಡಗೊಂಡು ಬಂದು ಪ್ರವೇಶಮಾಡಿಸಲು ಅಯ್ದು ಜನ ಪಾಂಡವರೂ ಕುಂತಿಯೊಡಗೂಡಿ ಸ್ವಲ್ಪ ಕಾಲವಿದ್ದು ದಾನಸನ್ಮಾನಾದಿಗಳಿಂದ ಸಂತೋಷಪಡಿಸಿ ಪುರೋಚನನನ್ನು ಅವನ ಮನೆಗೆ ಹೋಗುವ ಹಾಗೆ ಹೇಳಿ ಧರ್ಮರಾಜನು ಆ ಮನೆಯನ್ನು ಪರೀಕ್ಷಿಸಿ ನೋಡಿ ಅದರ ರಹಸ್ಯವನ್ನು ಕೂಡಲೆ ತಿಳಿದು ತಮ್ಮಂದಿರು ಮತ್ತು ಕುಂತಿ ಒಡಗೂಡಿ, ಅವರಿಗೆ ರಹಸ್ಯವಾಗಿ ಹೀಗೆ ಹೇಳಿದನು-
ಚಂ|| ಇದು ಮನೆಯಂದಮಲ್ತುರಿವ ದಳ್ಳುರಿಯುಗ್ಗಡದಂದಮಾಗಿ ತೋ
ಱಿದಪುದು ಕಣ್ಗೆ ಸಜ್ಜರಸದೆಣ್ಣೆಯ ತುಪ್ಪದ ಕಂಪಿದೆಲ್ಲಮೆಂ|
ಬುದೆ ಬಗೆದಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಂಬುದಿಲ್ಲ ಕೂ
ರದನಿದನೊಡ್ಡಿದಂ ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ|| ೪||
ಪದ್ಯ-೦೦:ಪದವಿಭಾಗ-ಅರ್ಥ:ಇದು ಮನೆಯಂದಂ ಅಲ್ತು ಉರಿವ ದಳ್ಳುರಿಯು ಉಗ್ಗಡದ ಅಂದಮಾಗಿ (ಉರಿಯುವ ಜ್ವಾಲೆಗಳ ರೀತಿಯಲ್ಲಿ) ತೋಱಿದಪುದು ಕಣ್ಗೆ; ಸಜ್ಜರಸದ (ರಾಳದ) ಎಣ್ಣೆಯ ತುಪ್ಪದ ಕಂಪು ಇದೆಲ್ಲಂ ಎಂಬುದೆ ಬಗೆದಲ್ಲಿ (ಪರೀಕ್ಷಿಸಿದರೆ ಕಾಣುವುದು) ನೋಡುವೊಡೆಂ ಇಟ್ಟಗೆ ಕಲ್ಲು ಮರನೆಂಬುದು ಇಲ್ಲ ಕೂರದನು(ಪ್ರೀತಿಸದವನು) ಇದನು ಒಡ್ಡಿದಂ ಪಗೆಗೆ (ಇದನ್ನು ಹಗೆತನಕ್ಕಾಗಿ ಒಡ್ಡಿದ್ದಾನೆ) ಸಂತಸಮಾಗಿರೆ ಮಾರಿ ಸುಯ್ಗುಮೇ(ಶತ್ರುವಿಗೆ ಸಂತೋಷವಾದರೆ, ಮಾರಿ ದುಃಖಿಸುವಳೇ)
ಪದ್ಯ-೦೦:ಅರ್ಥ:ಇದು ಮನೆಯ ಹಾಗೆ ಕಾಣುವುದಿಲ್ಲ. ಉರಿಯುವ ಜ್ಞಾಲೆಗಳ ರೀತಿಯಲ್ಲಿ ಕಣ್ಣಿಗೆ ಕಾಣುತ್ತಿದೆ. ಎಲ್ಲಿ ಪರೀಕ್ಷಿಸಿ ನೋಡಿದರೂ ಸಜ್ಜರಸದ/ರಾಳದ ಎಣ್ಣೆಯ ತುಪ್ಪದ ವಾಸನೆಯೇ ಇದೆ. ಇಟ್ಟಿಗೆ, ಕಲ್ಲು, ಮರ ಎಂಬುವುದಿಲ್ಲ. ಶತ್ರುವಿಗೆ ಸಂತೋಷವಾಗುವುದಕ್ಕೋಸ್ಕರ ಅಹಿತನಾದ ದುರ್ಯೋಧನನು (ವಿರೋಚನನ ಮೂಲಕ) ಈ ಉಪಾಯವನ್ನು ಒಡ್ಡಿದ್ದಾನೆ. ಶತ್ರುವಿಗೆ ಸಂತೋಷವಾದರೆ, ಮಾರಿ ದುಃಖಿಸುವಳೇ? (ಅಂದರೆ ಇಲ್ಲ, ಮಾರಿಗೆ ಯಾರು ಸತ್ತರೂ ದುಃಖವಿಲ್ಲ)
ವ|| ಅದಲ್ಲದೆಯುಮತ್ಯಾದರಸ್ಸಂಭ್ರಮಮುತ್ಪಾದಯತಿಯೆಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ವಿದೆಲ್ಲಂ ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ ನಾಮಿದನಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದ ವಿನ್ನಾಣಂಗಳಂ ಪೇೞ್ದು ನಂಬಿಸಿ ನೀಮೆಂತುಂ ಬಲ್ಲಿರಂತೆ ಪೊಱಮಟ್ಟು ಪೋಗಿಮೆಂದು ಜತುಗೃಹ ಕವಾಟ ಪುಟ ಸಂಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸಮೊಳಗಣ ಪರಿಜನಮೆಲ್ಲಮಂ ಪಾರ್ವರನೂಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ವರ್ ಮಗಂದಿರ್ಗಮುಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ ಪುರೋಚನನುಮಾ ಮನೆಯೊಳೊಂದೋವರಿಯೊಳ್ ಮಱಕೆಂದಿದನಾ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿ ಪೊಱಮಡಿಸಿ ಭೀಮಸೇನಂ ಪುರೋಚನಂ ಮಱಕೆಂದಿರ್ದೋವರಿಯೊಳ್ ಕಿಚ್ಚಂ ಕೊಳಿಸಲೊಡಂ-
ವಚನ:ಪದವಿಭಾಗ-ಅರ್ಥ: ಅದಲ್ಲದೆಯುಂ 'ಅತ್ಯಾದರಃ ಸಂಭ್ರಮಂ ಉತ್ಪಾದಯತಿ'ಯೆಂಬುದು (‘ವಿಶೇಷವಾದ ಆದರವು ಭಯವನ್ನುಂಟುಮಾಡುತ್ತದೆ’) ಈ ಪುರೋಚನನೆಂಬ ಬೂತು (ಭೂತ) ಸುಯೋಧನನ ಬೆಸದಿಂ (ಆಜ್ಞೆಯಂತೆ) ನಮಗೆ ಇನಿತು ಆದರಂ ಗೆಯ್ವಿದೆಲ್ಲಂ (ಇಷ್ಟು ಆದರ ಮಾಡಿದ್ದು) ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ (ನಮ್ಮನ್ನು ಮೋಸಪಡಿಸಲಾಗಿಯೇ ಮಾಡಿದ್ದು) ನಾಂ ಇದನು ಅಱಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ(ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ’ ಎಂದು ನಿತ್ಯವೂ ಬೇಟೆಗೆ ಹೋಗುತ್ತಿರಲು) ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ (ಪುರೋಚನನು ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ) ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡು ಏಕಾಂತದೊಳ್ ವಿದುರನು ಅಟ್ಟಿದ ವಿನ್ನಾಣಂಗಳಂ ಪೇೞ್ದು (ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡುವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಕೇತಗಳನ್ನು ಹೇಳಿ) ನಂಬಿಸಿ ನೀಂ ಎಂತುಂ ಬಲ್ಲಿರಂತೆ (ನಂಬುವ ಹಾಗೆ ಮಾಡಿ ‘ನೀವು ಹೇಗೂ ತಿಳಿದವರಾಗಿದ್ದೀರಿ) ಪೊಱಮಟ್ಟು ಪೋಗಿಂ ಎಂದು (ಹಾಗೆಯೇ ಹೊರಟು ಹೋಗಿ ಎಂದು) ಜತುಗೃಹ ಕವಾಟ ಪುಟ ಸಂಗಳೊಳ್ (ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ) ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ(ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ಧಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು.) ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ (ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು) ಮುನ್ನಿನ ದಿವಸಮೊಳು ಅಗಣ ಪರಿಜನಮೆಲ್ಲಮಂ ಪಾರ್ವರನು ಊಡುವ ನೆವದೊಳೆ ಪೊಱಮಡಿಸಿ (ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿ.) ಸೂರ್ಯಾಸ್ತಮಯದೊಳ್ ಪಾರ್ವರನು ಊಡಿ (ಸಂಜೆಯಲ್ಲಿ ಬ್ರಾಹ್ಮಣರಿಗೆ ಊಟ ಮಾಡಿಸಿ), ನಿಷಾದಿತಿಯೆಂಬ ಬೇಡಿತಿಗಂ ಅಯ್ವರ್ ಮಗಂದಿರ್ಗಂ ಉಣಲಿಕ್ಕಿದೊಡೆ (ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದಾಗ) ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ (ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು.) ಪುರೋಚನನುಂ ಆ ಮನೆಯೊಳೊಂದು ಓವರಿಯೊಳ್ ಮಱಕೆಂದಿದನು (ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು.) ಆ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿ ಪೊಱಮಡಿಸಿ (ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ಮೆಲ್ಲಮೆಲ್ಲಗೆ ಸುರಂಗದಿಂದ ಹೊರಡಿಸಿ,) ಭೀಮಸೇನಂ ಪುರೋಚನಂ ಮಱಕೆಂದಿರ್ದ ಓವರಿಯೊಳ್ ಕಿಚ್ಚಂ ಕೊಳಿಸಲುಒಡಂ (ಪುರೋಚನನು ಮೈಮರೆತು ಮಲಗಿದ್ದ ಕೊಠಡಿಗೆ ಬೊಂಕಿಯನ್ನು ಹಚ್ಚಲು, ಒಡನೆ) -
ವಚನ:ಅರ್ಥ:ಅಷ್ಟೇ ಅಲ್ಲದೆ ‘ವಿಶೇಷವಾದ ಆದರವು ಭಯವನ್ನುಂಟುಮಾಡುತ್ತದೆ’ ಎಂಬುದು. ‘ಈ ಪುರೋಚನನೆಂಬ ಭೂತವು ದೂರ್ಯೋಧನನ ಆಜ್ಞೆಯ ಪ್ರಕಾರ ನಮಗಿಷ್ಟು ಆದರ ಮಾಡಿದ್ದು ನಮ್ಮನ್ನು ಮೋಸಪಡಿಸಲಾಗಿಯೇ ಮಾಡಿದ್ದಾನೆ. ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ’ ಎಂದು ನಿತ್ಯವೂ ಬೇಟೆಗೆ ಹೋಗುತ್ತಿರಲು ಪುರೋಚನನು ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡುವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಕೇತಗಳನ್ನು ಹೇಳಿ ನಂಬುವ ಹಾಗೆ ಮಾಡಿ ‘ನೀವು ಹೇಗೂ ತಿಳಿದವರಾಗಿದ್ದೀರಿ; ಹಾಗೆಯೇ ಹೊರಟು ಹೋಗಿ ಎಂದು ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ಧಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು. ಪಾಂಡವರೂ ಕೂಡ ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿದರು. ಸೂರ್ಯನು ಮುಳುಗುವ ಹೊತ್ತಿನಲ್ಲಿ ಬ್ರಾಹ್ಮಣರಿಗೆಲ್ಲ ಊಟ ಮಾಡಿಸಿ ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದಾಗ, ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು. ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು. ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ನಿಧಾನವಾಗಿ ಸುರಂಗದಿಂದ ಹೊರಡಿಸಿ ಪುರೋಚನನು ಮೈಮರೆತು ಮಲಗಿದ್ದ ಕೊಠಡಿಗೆ ಬೆಂಕಿಯನ್ನು ಹಚ್ಚಲು, ಒಡನೆ-
ಕಂ|| ಅಡೆವೊತ್ತದೆ ಕಿಱಿಕಿಱಿದನೆ
ಸುಡದಿನಿಸರೆಪೊರೆಕನಾಗದೆಯೆ ಸಸಿದಂದೊಂ|
ದೆಡೆಯೊಳಗೊಟ್ಟಿರ್ದರಳೆಯ
ನೊಡನಳುರ್ವಂತುಳುರ್ದನನಲನರಗಿನ ಮನೆಯಂ|| ೫||
ಪದ್ಯ-೦೦:ಪದವಿಭಾಗ-ಅರ್ಥ:ಅಡೆವೊತ್ತದೆ (ತಳ ಹತ್ತದೆ) ಕಿಱಕಿಱದನೆ (ಸ್ವಲ್ಪ ಸ್ವಲ್ಪ) ಸುಡದೆ ಇನಿಸು ಅರೆಪೊರೆಕನಾಗದೆಯೆ, ಸಸಿದು ಒಂದೊಂದ ಎಡೆಯೊಳಗೆ ಒಟ್ಟಿರ್ದ (ರಾಶಿಹಾಕಿದ) ಅರಳೆಯ (ಹತ್ತಿಯ) ನ ಒಡನೆ ಅಳುರ್ವಂತೆ(ವ್ಯಾಪಿಸುವಂತೆ) ಅಳುರ್ದನು(ವ್ಯಾಪಿಸಿದನು) ಅನಲನು (ಅಗ್ನಿಯು) ಅರಗಿನ ಮನೆಯಂ
ಪದ್ಯ-೦೦:ಅರ್ಥ:೫. ತಳಭಾಗ ಹತ್ತಿಕೊಳ್ಳದೆ, ಸ್ವಲ್ಪ ಸ್ವಲ್ಪವಾಗಿ ಸುಡದೆ, ಸ್ವಲ್ಪವೂ ಅರೆಕರಿಕಾಗದೆ, ಬಿಡಿಸಿಟ್ಟಿದ್ದ ಹತ್ತಿಯ ರಾಶಿಯನ್ನು ಒಟ್ಟಿಗೇ ವ್ಯಾಪಿಸುವಂತೆ ಅರಗಿನ ಮನೆಯನ್ನು ಅಗ್ನಿಯು ತಕ್ಷಣ ವ್ಯಾಪಿಸಿದನು.
ಕಂ|| ಮೇಲಾದ ಪಾಂಡುಸುತರನು
ಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ||
ಲೀಲೆಯೆ ನುಂಗುವ ಮೃತ್ಯುವ
ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಮೇಲಾದ (ಉತ್ತಮರಾದ) ಪಾಂಡುಸುತರನು ಉಪಾಲಂಭಂ ಗೆಯ್ಯುತಿರ್ಪ(ಮೋಸಮಾಡುತ್ತಿರುವ) ದುರ್ಯೋಧನನಂ ಲೀಲೆಯೆ (ಲೀಲೆಯಿಂದ) ನುಂಗುವ ಮೃತ್ಯುವ ನಾಲಗೆಯೆನೆ ನೆಗೆದುವು ಉರಿಯ ನಾಲಗೆ ಪಲವುಂ (ಅನೇಕ)
ಪದ್ಯ-೬:ಅರ್ಥ:ಉತ್ತಮರಾದ ಪಾಂಡವರನ್ನು ಮೋಸಮಾಡುತ್ತಿರುವ ದುರ್ಯೋಧನನನ್ನು ಲೀಲೆಯಿಂದಲೇ ನುಂಗುವ ಮೃತ್ಯುದೇವತೆಯ ನಾಲಗೆಯೆನ್ನುವ ಹಾಗೆ ಹಲವು ಅಗ್ನಿಜ್ವಾಲೆಗಳು ಮೇಲಕ್ಕೆ ಚಿಮ್ಮಿದವು.
ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನನ್ನೆಗಮಿತ್ತಂ-
ವಚನ:ಪದವಿಭಾಗ-ಅರ್ಥ:ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವ ಅರಗಿನ ಉರಿಯ ಬಂಬಲ್ಗಳಂ (ಜ್ವಾಲೆಯ ಗುಚ್ಛಗಳನ್ನು) ಪೊಸೆದು ಬಿದಿರ್ದು (ಕೊಡವಿ) ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನು; ಅನ್ನೆಗಂ ಇತ್ತಂ-
ವಚನ:ಅರ್ಥ:ಆಗ ಭೀಮಸೇನನು ತನ್ನ ತಲೆಯ ಮೇಲೆಯೂ ಶರೀರದ ಮೇಲೆಯೂ ಕರಗಿ ಸುರಿಯುತ್ತಿದ್ದ ಅರಗಿನ ಜ್ವಾಲೆಯ ಗುಚ್ಛಗಳನ್ನು ಹೊಸದು ಕೊಡವಿ ತೆಗೆದುಹಾಕಿ ಸುರಂಗದ ಒಳಗಿನಿಂದಲೇ ತನ್ನ ಸಹೋದರರ ಜೊತೆಯಲ್ಲಿ ಬಂದನು. ಅಷ್ಟರಲ್ಲಿ ಈ ಕಡೆ-
ಕಂ|| ಅರಗಿನ ಮನೆಯೊಳ್ ಪಾಂಡವ
ರುರಿದೞ್ಗಿದರಕ್ಕಟಯ್ಯೊ ದುರ್ಯೋಧನನೆಂ|
ಬೆರಲೆಯಿನೆಂದೞುತುಂ ತ
ತ್ಪುರಜನಮೞಲೊದಪಿ ಪರಿದು ನೋಡಿತ್ತಾಗಳ್| ೭||
ಪದ್ಯ-೭:ಪದವಿಭಾಗ-ಅರ್ಥ:ಅರಗಿನ ಮನೆಯೊಳ್ ಪಾಂಡವರು ಉರಿದು ಅೞ್ಗಿದರ್ (ಅಳಿದರು,ಸತ್ತರು )ಅಕ್ಕಟ ಅಯ್ಯೊ ದುರ್ಯೋಧನನೆಂಬ ಎರಲೆಯಿಂ ಎಂದು (ಜಿಂಕೆ, ನಂಜಿನ ಹುಳು) ಅೞುತುಂ (ಅಳುತ್ತಾ) ತತ್ ಪುರಜನಂ ಆೞಲು ಒದಪಿ (ದುಃಖತುಂಬಿ) ಪರಿದು (ಹರಿದು,ಓಡಿಬಂದು)ನೋಡಿತ್ತಾಗಳ್
ಪದ್ಯ-೭:ಅರ್ಥ:ದುರ್ಯೋಧನನೆಂಬ ವಿಷದ ಹುಳುವಿನಿಂದ ಪಾಂಡವರು ಅರಗಿನ ಮನೆಯಲ್ಲಿ ಸುಟ್ಟು ಸತ್ತರು; ಅಯ್ಯೋ ಅಕ್ಕಟಾ! ಎಂದು ಅಳುತ್ತ ಆ ಪಟ್ಟಣಿಗರೆಲ್ಲ ದುಃಖತುಂಬಿ ಓಡಿಬಂದು ನೋಡಿದರು.
ವ|| ನೋಡಿ ರೂಪಱಿಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯು ಮನವಳಯ್ವರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೆಂದು ಪುರಪ್ರಧಾನರ್ಕಳ್ ತದ್ವೃ ತ್ತಾಂತಮೆಲ್ಲಮಂ ಪೇೞ್ದು ಧೃತರಾಷ್ಟ್ರಂಗಂ ಪೇೞಲಟ್ಟಿದೊಡೆ-
ವಚನ:ಪದವಿಭಾಗ-ಅರ್ಥ:ನೋಡಿ ರೂಪ ಅಱಿಯಲು (ತಿಳಿಯಲು) ಆಗದಂತು ಕರಿಮುರಿಕನು ಆಗಿರ್ದ(ಕರುಕಲಾಗಿದ್ದ) ಬೇಡಿತಿಯುಮಂ ಅವಳ ಅಯ್ವರ್ ಮಕ್ಕಳುಮಂ (ಐದು ಮಕ್ಕಳ) ಕೊಂತಿಯುಂ ಪಾಂಡವರುಂ ಅಪ್ಪರೇ ಏನುಂ ತಪ್ಪಲ್ಲ ಎಂದು(ಏನೂ ವ್ಯತ್ಯಾಸವಿಲ್ಲ ಎಂದು) ಪುರಪ್ರಧಾನರ್ಕಳ್ (ಪಟ್ಟಣದ ಮುಖ್ಯಸ್ಥರು)ತದ್ ವೃತ್ತಾಂತಂ ಎಲ್ಲಮಂ ಪೇೞ್ದು (ಹೇಳಿ) ಧೃತರಾಷ್ಟ್ರಂಗಂ ಪೇೞಲು ಅಟ್ಟಿದೊಡೆ (ಹೇಳಲು ಕಳಿಸಿದಾಗ)-
ವಚನ:ಅರ್ಥ:ನೋಡಿ ಗುರುತಿಸಲಾಗದಷ್ಟು ಕರಿಕುಮುರುಕಾಗಿದ್ದ ಬೇಡಿತಿಯನ್ನೂ ಅವಳ ಅಯ್ದು ಜನ ಮಕ್ಕಳನ್ನೂ ಕುಂತಿ ಹಾಗೂ ಪಾಂಡವರೇ ಆಗಿದ್ದಾರೆ ಏನೂ ವ್ಯತ್ಯಾಸವಿಲ್ಲ ಎಂದು ಪಟ್ಟಣದ ಮುಖ್ಯಸ್ಥರು ಆ ವಿಚಾರವನ್ನೆಲ್ಲ ಧೃತರಾಷ್ಟ್ರನಿಗೆ ಹೇಳಿ ಕಳುಹಿಸಿದಾಗ-
ಕಂ|| ಮನದೊಳ್ ತ್ರೈಭುವನಮನಾ
ಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಮಂ|
ದಿನಿಸಂಧನೃಪಂ ತನ್ನಯ
ಜನದೊಳ್ ಕೆಲನಱಿಯೆ ಕೃತಕ ಶೋಕಂಗೆಯ್ದಂ|| ೮||
ಪದ್ಯ-೮:ಪದವಿಭಾಗ-ಅರ್ಥ:ಮನದೊಳ್ ತ್ರೈಭುವನಮನು (ಮೂರುಲೋಕಗಳನ್ನೂ) ಆಳ್ದನಿತುವರಂ (ಆಳುವಷ್ಟು) ತನಗೆ ಸಂತಸಂ ಪೆರ್ಚಿಯುಮಂ (ಹೆಚ್ಚಿದ್ದರೂ) ಅಂದು ಇನಿಸು ಅಂಧನೃಪಂ (ಕುರುಡುರಾಜನು) ತನ್ನಯ ಜನದೊಳ್ ಕೆಲನು ಅಱಿಯೆ (ಪಕ್ಕದವರು ತಿಳಿಯುವಂತೆ) ಕೃತಕ ಶೋಕಂ ಗೆಯ್ದಂ (ಮಾಡಿದನು)|
ಪದ್ಯ-೮:ಅರ್ಥ:ಅದನ್ನು ಕೇಳಿ ತನಗೆ ಆ ದಿನ ಮೂರುಲೋಕಗಳನ್ನು ಆಳುವಷ್ಟು ಸಂತೋಷ ಹೆಚ್ಚಿದ್ದರೂ, ಪಕ್ಕದವರು ತಿಳಿಯುವಂತೆ ಕುರುಡುರಾಜನು ತನ್ನ ಜನರ ಮಧ್ಯದಲ್ಲಿ ಕಪಟದುಖವನ್ನು ತೋರಿಸಿದನು.
ವ|| ಆಗಳ್ ನದೀತನೂಜ ಭಾರದ್ವಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನುಮಱಿದುಮಱಿಯದಂತೆ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ನಿಂದ ನೆಲೆಯಿಂದೆಸೆಯಂ ಪೊೞ್ತುಮನಱಿದು ತೆಂಕಮೊಗದೆ ಪಯಣಂಬೋಗಿ-
ವಚನ:ಪದವಿಭಾಗ-ಅರ್ಥ:ಆಗಳ್ ನದೀತನೂಜ (ಭೀಷ್ಮ) ಭಾರದ್ವಜ (ದ್ರೋಣ) ಕೃಪರು, ಅವಿರಳ ಬಾಷ್ಪವಾರಿ ದುರ್ದಿನ (ಬಹಳ ಕಣ್ಣೀರು ಸುರಿಸುವ ಕೆಟ್ಟದಿನದಲ್ಲಿ) ದೀನ ಆನನರು ಆಗಿರೆ (ಬಾಡಿದ ಮುಖವುಳ್ಳವರು) ವಿದುರಂ ತಾನು ಅಱಿದುಂ ಅಱಿಯದಂತೆ (ಅರಿತೂ ಅರಿಯದಂತೆ) ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ (ಆಜ್ಞೆಯಂತೆ) ವಾರಣಾವತಕ್ಕೆ ಪೋಗಿ ತದ್ ಅರ್ಧ ದಗ್ಧ ಕಳೇವರಂಗಳಂ (ಅರ್ಧಸುಟ್ಟ ದೇಹಗಳನ್ನು) ಸಂಸ್ಕರಿಸಿ ಜಳ ದಾನಾದಿ ಕ್ರಿಯೆಗಳಂ (ಶುದ್ಧಮಾಡಿ ಉತ್ತರಕ್ರಿಯೆಗಳನ್ನು) ಮಾಡಿ ಮಗುೞೆ ವಂದನು(ಹಿಂತಿರುಗಿ ಬಂದನು) ಅನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ನಿಂದ ನೆಲೆಯಿಂ ದೆಸೆಯಂ (ದಿಕ್ಕನ್ನು) ಪೊೞ್ತುಮನು ಅಱಿದು(ಹೊತ್ತನ್ನು ಅರಿತು,ತಿಳಿದು) ತೆಂಕಮೊಗದೆ (ದಕ್ಷಿಣದಿಕ್ಕಿಗೆ) ಪಯಣಂಬೋಗಿ-
ವಚನ:ಅರ್ಥ:ಆಗ ಭೀಷ್ಮದ್ರೋಣ ಕೃಪರು ಕೆಟ್ಟದಿನದಲ್ಲಿ ಬಹಳ ಕಣ್ಣೀರು ಸುರಿಸುವ ಬಾಡಿದ ಮುಖವುಳ್ಳವರಾಗಿರಲು, ವಿದುರನು ತಾನು ಅರಿತೂ ಅರಿಯದಂತೆ ದುಃಖದಿಂದ ಕೂಡಿದವನಾಗಿ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ವಾರಣಾವತಕ್ಕೆ ಹೋಗಿ ಅಲ್ಲಿ ಅರ್ಧಸುಟ್ಟಿದ್ದ ದೇಹಗಳಿಗೆ ಶುದ್ಧಮಾಡಿ ಉತ್ತರಕ್ರಿಯೆಗಳನ್ನುಮಾಡಿ ಹಿಂತಿರುಗಿ ಬಂದನು. ಅಷ್ಟರಲ್ಲಿ ಈ ಕಡೆ ಪಾಂಡವರು ಸುರಂಗದಿಂದ ಹೊರಟು ನಕ್ಷತ್ರ ಮಂಡಲಗಳ ಸ್ಥಾನಗಳಿಂದ ದಿಕ್ಕನ್ನೂ ಹೊತ್ತನ್ನೂ ತಿಳಿದು ದಕ್ಷಿಣದಿಕ್ಕಿಗೆ ಪ್ರಯಾಣ ಮಾಡಿದರು.

ಪಾಂಡವರು ವಾರಣಾವತ ಪಟ್ಟಣದಿಂದ ಹೊರಟು ಹಿಡಿಂಬವನ ಪ್ರವೇಶ[ಸಂಪಾದಿಸಿ]

ಮ|| ತ(ಕ)ಡಕುಂ ಪಿಟ್ಟೆಯುಮೊತ್ತೆ ಮೆಲ್ಲಡಿಗಳಂ ಬಳ್ಕುತ್ತುಮಳ್ಕುತ್ತುಮೋ
ರಡಿಗೊರ್ಮೊರ್ಮೆ ಕುಳುತ್ತುಮೇೞುತಿರೆ ಕಂಡಿಂತಾಗದಿನ್ನೇೞಮೆಂ|
ದೊಡನಂದಯ್ವರುಮಂ ನಿಜಾಂಸಯುಗದೊಳ್ ಪೊತ್ತೆತ್ತಿ ತಳ್ತೂಳ್ವ ಸೀ
ಱುಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ|| ೯||
ಪದ್ಯ-೯:ಪದವಿಭಾಗ-ಅರ್ಥ:ಕಡಕುಂ (ಹರಳುಕಲ್ಲು) ಪಿಟ್ಟೆಯುಂ (ಪೆಟ್ಟಿ -ಮಣ್ಣು ಹೆಂಟೆ)ಒತ್ತೆ ಮೆಲ್ಲಡಿಗಳಂ (ಮೆದುಪಾದ) ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ(ಬಳುಕುತ್ತ ಹೆದರುತ್ತ, ಒಂದೊಂದು ಹೆಜ್ಜೆಗೂ ಕೂರುತ್ತ ಏಳುತ್ತ ಇರುವುದನ್ನು) ಕಂಡು ಇಂತಾಗದು ಎನ್ನೇೞಂ (ಇನ್ನು ಏಳಿಂ) ಎಂದು, ಒಡನೆ ಅಂದು ಅಯ್ವರುಮಂ (ಐದು ಜನರನ್ನೂ) ನಿಜಾಂಸಯುಗದೊಳ್ (ನಿಜ ಆಂಸಯುಗದೊಳ್ - ತನ್ನ ಎರಡು ಹೆಗಲಮೇಲೆ) ಪೊತ್ತೆತ್ತಿ (ಹೊತ್ತು ಎತ್ತಿಕೊಂಡು) ತಳ್ತೂಳ್ವ (ತಳ್ತು ಒಳ್ವ - ಒಟ್ಟಿಗೆ ಶಬ್ದಮಾಡುವ) ಸೀಱುಡುವಿಂದ (ಜೀರುಂಡೆಗಳಿಂದ) ಅದ್ಭುತದ ಆ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ (ಜೀರುಂಡೆಗಳಿಂದ ಅದ್ಭುತವಾಗಿದ್ದ ಹಿಡಿಂಬವನುನ್ನು ವಾಯುಪುತ್ರನಾದ ಭೀಮಸೇನನು ಹೊಕ್ಕನು.)
ಪದ್ಯ-೯:ಅರ್ಥ:ಮೃದುವಾದ ತಮ್ಮ ಪಾದಗಳಿಗೆ ಕಲ್ಲು, ಹೆಂಟೆಗಳು ಒತ್ತುತ್ತಿರಲು ಬಳುಕುತ್ತ ಹೆದರುತ್ತ, ಒಂದೊಂದು ಹೆಜ್ಜೆಗೂ ಕೂರುತ್ತ ಏಳುತ್ತ ಇರುವುದನ್ನು ಭೀಮಸೇನನು ನೋಡಿ ‘ಇನ್ನು ಮುಂದೆ ಹೀಗಾಗುವುದಿಲ್ಲ ಏಳಿ ಎಂದು’ ಒಟ್ಟಿಗೆ ಆ ಅಯ್ದು ಜನರನ್ನು ತನ್ನ ಎರಡು ಭುಜದ ಮೇಲೆ ಹೊತ್ತು ಎತ್ತಿಕೊಂಡು ಒಟ್ಟಿಗೆ ಶಬ್ದಮಾಡುತ್ತಿರುವ ಜೀರುಂಡೆಗಳಿಂದ ಅದ್ಭುತವಾಗಿದ್ದ ಹಿಡಿಂಬವನುನ್ನು ವಾಯುಪುತ್ರನಾದ ಭೀಮಸೇನನು ಹೊಕ್ಕನು.
  • (ತಡಕು -ಎಸಕಪದ(ದೇ) ೧ ಹುಡುಕು ೨ ತಡವರಿಸು)
  • (ಕಡಕು - ಸಣ್ಣ ಹರಳುಕಲ್ಲು; ಡಿ.ಎಲ್.ಎನ್)
ಚಂ|| ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ
ಸ್ಪದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ|
ಪ್ರದಮದು ನಿರ್ಝರೋಚ್ಚಳಿತ ಶೀಕರ ಶೀತಳ ವಾತ ನರ್ತಿತೋ
ನ್ನದ ಶಬರೀ ಜನಾಳಕಮದಾಯತ ವೇತ್ರಲತಾವಿತಾನಕಂ|| ೧೦||
ಪದ್ಯ-೧೦:ಪದವಿಭಾಗ-ಅರ್ಥ:ಅದು ಮದದಂತಿ ದಂತ ಮುಸಲ (ದಂತದ ಒನಕೆಇಂದ) ಪ್ರವಿಭಗ್ನ (ಮರಿದ) ಮಹಾಮಹೀರುಹ ಆಸ್ಪದಂ (ದೊಡ್ಡಮರಗಳಿಗೆ ಆಶ್ರಯ) ಅದು ಸಿಂಹನಾದಜನಿತ ಪ್ರತಿಶಬ್ದ (ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ) ಮಹಾ ಭಯಾನಕ ಪ್ರದಂ, ಅದು ನಿರ್ಝರೋಚ್ಚಳಿತ ಶೀಕರ (ನಿರ್ಝರ ಉಚ್ಚಳಿತ ಶೀಕರ- ಬೆಟ್ಟದ ಝರಿಗಳಿಂದ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ) ಶೀತಳ ವಾತ ನರ್ತಿತೋನ್ನದ ಶಬರೀ ಜನಾಳಕಮದ (ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ನರ್ತಿತ ಉನ್ನದ -ಸೊಕ್ಕಿದ /ಮದಿಸಿರುವ ಬೇಡಿತಿ ಜನರ ಅಳಕಮದ -ಮುಂಗರುಳುಗಳನ್ನು /ಉಳ್ಳದ್ದು ) ಆಯತ ವೇತ್ರಲತಾವಿತಾನಕಂ(ಅಯತ ವೇತ್ರಲತಾ ವಿತಾನಕಂ -ವಿಸ್ತಾರವಾದ ಬೆತ್ತದ ಬಳ್ಳಿಗಳ ಮೇಲ್ಕಟ್ಟುಗಳಿಂದಕೂಡಿದ್ದು; ವೇತ್ರ- ಬೆತ್ತ)
ಪದ್ಯ-೧೦:ಅರ್ಥ:ಆ ಹಿಡಿಂಬವನವು ಮದ್ದಾನೆಗಳ ಒನಕೆಯಂತಿರುವ ದಂತದಿಂದ ಮುರಿದ ದೊಡ್ಡಮರಗಳಿಗೆ ಆಶ್ರಯವಾಗಿದ್ದಿತು. ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ ಭಯಂಕರವಾಗಿ ಕಂಡಿತು. ಬೆಟ್ಟ ಝರಿಗಳಿಂದ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ಸೊಕ್ಕಿರುವ ಬೇಡಿತಿಯರ ಮುಂಗುರುಳುಗಳಿಂದ ಮನೋಹರವಾಗಿತ್ತು. ವಿಸ್ತಾರವಾದ ಬೆತ್ತದ ಬಳ್ಳಿಗಳ ಮೇಲ್ಕಟ್ಟುಗಳಿಂದ ಕೂಡಿತ್ತು.
ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯ್ತಂದದಱ ಕೆೞಗಯ್ವರುಮನಿೞಿಪಿದೊಡಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ತನ್ನೊಡವುಟ್ಟಿದರ್ಗಾದ ಪ್ರವಾಸಾಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು ಕಣ್ಣ ನೀರಂ ತುಂಬಿ-
ವಚನ:ಪದವಿಭಾಗ-ಅರ್ಥ:ಆ ವನ ಅಂತರಾಳ ಮಧ್ಯಸ್ಥಿತ (ಆ ಕಾಡಿನ ಒಳಭಾಗದ ಮಧ್ಯದಲ್ಲಿ ) ವಿಶಾಳ ವಟ ವಿಟಪಿಯನು ಐಯ್ತಂದ (ವಿಸ್ತಾರವಾದ ಆಲದ ಮರದ ಹತ್ತಿರ ಬಂದು) ಅದಱ ಕೆೞಗೆ ಐಯ್ವರುಮನು ಇೞಪಿದೊಡೆ (ಅದರ ಕೆಳಗೆ ಆ ಅಯ್ದು ಜನರನ್ನು ಇಳಿಸಿದಾಗ) ಅಧ್ವಾನ ಪದ (ದಾರಿ ನೆಡೆದ) ಪರಿಶ್ರಮ ಶ್ರಾಂತರ್ ನಿದ್ರಾಭರ ಪರವಶರು ಆಗಿರೆ (ಬಳಲಿಕೆಯ ಆಯಾಸದಿಂದ ನಿದ್ರೆಯ ಭಾರಕ್ಕೆ ಒಳಗಾರದರು.) ಭೀಮಂ ಜಾವಮಿರ್ದು (ಕಾವಲು ಇದ್ದು) ತನ್ನ ಒಡವುಟ್ಟಿದರ್ಗೆ ಆದ ಪ್ರವಾಸ ಆಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು (ಮನ್ಯು-ದುಃಖ, ಮಿಕ್ಕಂ- ಮೀರಿ) ಕಣ್ಣ ನೀರಂ ತುಂಬಿ-
ವಚನ:ಅರ್ಥ:ಆ ಕಾಡಿನ ಒಳಭಾಗದ ಮಧ್ಯದಲ್ಲಿ ವಿಸ್ತಾರವಾದ ಆಲದ ಮರದ ಹತ್ತಿರಕ್ಕೆ ಬಂದು ಅದರ ಕೆಳಗೆ ಆ ಐಯ್ದು ಜನರನ್ನು ಇಳಿಸಿದಾಗ, ಅವರು ದಾರಿ ನಡೆದ ಬಳಲಿಕೆಯ ಆಯಾಸದಿಂದ ನಿದ್ರೆಯ ಭಾರಕ್ಕೆ ಒಳಗಾರದರು. ಭೀಮನು ಅವರಿಗೆ ಕಾವಲಾಗಿದ್ದು ತನ್ನ ಒಡಹುಟ್ಟಿದವರಿಗಾದ ಪ್ರಯಾಣದಾಯಾಸಕ್ಕೂ ದುರ್ದೆಶೆಗೂ ದು:ಖವು ಮಿತಿಮೀರಿ ಬರಲು, ಅವನ ಕಣ್ಣಲ್ಲಿ ನೀರುತುಂಬಿಕೊಂಡಿತು.
ಚಂ|| ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುವಮೀ ಸಮಸ್ತ ಸಾ
ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುವಮೀ ಮಹೋಗ್ರ ಕೇ|
ಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ ನೀಮುಮೀ
ಮರದಡಿಯೊಳ್ ಶಿವಾಶಿವ ರವಂಗಳಿನೆೞ್ಚಱುವಂತುಟಾದುದೇ|| ೧೧||
ಪದ್ಯ-೧೧:ಪದವಿಭಾಗ-ಅರ್ಥ:ಭರತನ ವಂಶದೊಳ್ ನೆಗೞ್ದ (ಪ್ರಸಿದ್ಧ)ಪಾಂಡುಗೆ ವುಟ್ಟಿಯುಂ (ಹುಟ್ಟಿಯೂ) ಈ ಸಮಸ್ತ ಸಾಗರ ಪರಿವೇಷ್ಟಿತ ಅವನಿಗೆ ವಲ್ಲಭನಾಗಿಯುಂ (ಸುತ್ತುವರಿದ ಅವನಿಗೆ- ಭೂಮಿಗೆ ಒಡೆಯನಾಗಿಯೂ) ಈ ಮಹೋಗ್ರ ಕೇಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ (ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ) ಮಱಕೆಂದಿ (ಮೈಮೆರೆತು) ನೀಮುಂ ಈ ಮರದಡಿಯೊಳ್ ಶಿವಾಶಿವ ರವಂಗಳಿಂ(ಶಿವ ಆಶಿವ ರವಂಗಳಿಂ- ನರಿಗಳ ಅಮಂಗಳ ಶಬ್ದಗಳಿಂದ) ಎೞ್ಚಱುವಂತುಟಾದುದೇ(ಎೞ್ಚಱುವಂತುಟು- ಎಚ್ಚರಗೊಳ್ಳುವಂತೆ ಆದುದೇ)
ಪದ್ಯ-೧೧:ಅರ್ಥ:. ಭರತವಂಶದಲ್ಲಿ ಪ್ರಸಿದ್ಧನಾದ ಪಾಂಡುರಾಜನಿಗೆ ಮಕ್ಕಳಾಗಿ ಹುಟ್ಟಿ, ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಸಮಸ್ತ ಭೂಮಂಡಲಕ್ಕೆ ಒಡೆಯನಾಗಿ ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ ಮೈಮೆರೆತು ಮಲಗಿ ನೀವು ಈ ಮರದಡಿಯಲ್ಲಿ ನರಿಗಳ ಅಮಂಗಳ ಸದ್ದಿನಿಂದ ಎಚ್ಚರಗೊಳ್ಳುವ ಹಾಗೆ ಆಯಿತೆ?
ವ|| ಎಂದು ನುಡಿಯುತ್ತಿರ್ಪನ್ನೆಗಂ ಕೋಕನದಬಾಂಧವನುದಯಾಚಳಶಿಖರ ಶೇಖರನಾದ ನಾಗಳಾ ಬನಮನಾಳ್ವ ಹಿಡಿಂಬನೆಂಬನವರ ಬರವನಱಿದು ತನ್ನ ತಂಗೆ ಹಿಡಿಂಬೆಯೆಂಬಳಂ ಕರೆದು-
ವಚನ:ಪದವಿಭಾಗ-ಅರ್ಥ:ಎಂದು ನುಡಿಯುತ್ತಿರ್ಪ ಅನ್ನೆಗಂ (ಎಂದು ಹೇಳತ್ತಿರುವಷ್ಟರಲ್ಲಿ) ಕೋಕನದ (ತಾವರೆಗಳ)ಬಾಂಧವನು (ಸೂರ್ಯನು) ಉದಯಾಚಳಶಿಖರ ಶೇಖರನಾದನು (ಉದಯ ಪರ್ವತದ ಶಿಕರಕ್ಕೆ ಬಂದನು) ಆಗಳು ಆ ಬನಮನು ಆಳ್ವ (ಆಗ ಆ ವನವನ್ನು ಆಳುವ) ಹಿಡಿಂಬನೆಂಬನು ಅವರ ಬರವನು ಅಱಿದು (ಬರುವಿಕೆಯನ್ನು ತಿಳಿದು) ತನ್ನ ತಂಗೆ (ತಂಗಿ) ಹಿಡಿಂಬೆಯೆಂಬಳಂ ಕರೆದು-
ವಚನ:ಅರ್ಥ:ಎಂದು ಹೇಳುತ್ತಿರುವಷ್ಟರಲ್ಲಿಯೇ ತಾವರೆಯ ಸಖನಾದ ಸೂರ್ಯನು ಉದಯಪರ್ವತದ ಶಿಕರಕ್ಕೆ ಬಂದನು (ಸೂರ್ಯೋದಯವಾಯಿತು). ಆಗ ಆ ಅರಣ್ಯಪ್ರದೇಶವನ್ನು ಆಳುವ ಹಿಡಿಂಬನೆಂಬುವನು ಅವರ ಬರುವಕೆಯನ್ನು ತಿಳಿದು ತನ್ನ ತಂಗಿಯಾದ ಹಿಡಿಂಬೆಯೆಂಬವಳನ್ನು ಕರೆದು-
ಕಂ|| ನಿಡಿಯರ್ ಬಲ್ಲಾಯದ ಬ
ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
ತೊಡರ್ದರ್ ನಮ್ಮಯ ಭಕ್ಷದೊ
ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨||
ಪದ್ಯ-೧೨:ಪದವಿಭಾಗ-ಅರ್ಥ:ನಿಡಿಯರ್ ಬಲ್ಲಾಯದ (ಬಲ್ ಆಯದ) ಬಲ್ಡಡಿಗರ್ (ನೀಳವಾಗಿರುವವರು, ಬಲು ಆಯಕಟ್ಟಿನವರು, ಬಲ್ ದಡಿಗರ್ -ಬಲುದಾಂಡಿಗರಾಗಿ) ವಂದಿರ್ದರಯ್ವರಾಲದ ಕೆೞಗಿಂ (ವಂದು ಇರ್ದರ್ ಅಯ್ವರು ಆಲದ ಕೆಳಗೆ ಇಂ- ಅಯ್ದು ಜನ ಆಲದಮರದ ಕೆಳಗೆ ಇದ್ದಾರೆ); ತೊಡರ್ದರ್ ನಮ್ಮಯ ಭಕ್ಷದೊಳ್ ಅಡು (ಇಂ-ಇನ್ನು ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದಿದ್ದರು. ಅಡು- ಅಡಿಗೆ ಮಾಡು, ಬೇಯಿಸು) ಪಣ್ಣಿಡು (ಸಿದ್ಧಪಡಿಸು) ಪೋಗು ನೀನುಂ ಆನುಂ ತಿಂಬಂ (ನೀನೂ ನಾನೂ ತಿನ್ನೋಣ)
ಪದ್ಯ-೧೨:ಅರ್ಥ:ನೀಳವಾಗಿರುವವರು, ಬಲು ಆಯಕಟ್ಟಿನವರು, ಬಲುದಾಂಡಿಗರಾಗಿ ಇರುವ ಅಯ್ದು ಜನ ಆಲದ ಮರದ ಕೆಳಗೆ ಇದ್ದಾರೆ. ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದರು. ಹೋಗಿ ಬೇಯಿಸಿ ಅಡುಗೆ ಮಾಡಿ ಸಿದ್ಧಪಡಿಸು; ನೀನೂ ನಾನೂ ತಿನ್ನೋಣ. (ಎಂದನು ಹಿಡಿಂಬ)

ಹಿಡಿಂಬ ವಧೆ: ಭೀಮ ಹಿಡಿಂಬೆಯರ ವಿವಾಹ -ಘಟೋತ್ಕಜನ ಜನನ[ಸಂಪಾದಿಸಿ]

ವ|| ಎಂಬುದುಮಂತೆಗೆಯ್ವೆನೆಂದು-
ವಚನ:ಪದವಿಭಾಗ-ಅರ್ಥ: ಎಂಬುದುಂ ಅಂತೆ ಗೆಯ್ವೆನೆಂದು-
ವಚನ:ಅರ್ಥ:ಹಿಡಿಂಬ ಹೇಳಲು, ಹಿಡಿಂಬೆಯು, ಹಾಗೆಯೇ ಮಾಡುತ್ತೇನೆ ಎಂದು.
ಕಂ|| ಆಗಸದೊಳಗೊಂದು ಮಹೀ
ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
ಬೇಗಂ ಬರ್ಪಳ ದಿಟ್ಟಿಗ
ಳಾಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ: ಆಗಸದೊಳಗೆ ಒಂದು ಮಹೀಭಾಗದೊಳು ಇನ್ನೊಂದು ದಾಡೆಯಾಗಿರೆ (ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು- ಅಷ್ಟು ದೊಡ್ಡದಾಗಿ ಬಾಯಿ ತೆರೆದು) ಮನದಿಂ ಬೇಗಂ ಬರ್ಪಳ (ಮನಸ್ಸಿನ ವೇಗಕ್ಕಿಂತ ಬೇಗ ಬರುವವಳ) ದಿಟ್ಟಿಗಳು ಆಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ (ಆಗ ಹತ್ತಿತು- ನೆಟ್ಟಿತು, ಭೀಮನನ್ನು -ಭೀಮನಲ್ಲಿ)
ಪದ್ಯ-೧೩:ಅರ್ಥ:ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು (ಅಂದರೆ ದೊಡ್ಡದಾಗಿ ಬಾಯಿ ತೆರೆದುಕೊಂಡು) ಮನಸ್ಸಿನ ವೇಗಕ್ಕಿಂತ ಬೇಗ ಬರುತ್ತಿದ್ದ ಅವಳ ದೃಷ್ಟಿಗಳು ಭೀಮನಲ್ಲಿ ನೆಟ್ಟಿತು.
ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು (ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ) ತನ್ನತ್ತ ಮೊಗದೆ ಬರ್ಪಳಂ (ತನ್ನ ಕಡೆಗೇ ಬರುವವಳನ್ನು) ಕಂಡು-
ವಚನ:ಪದವಿಭಾಗ-ಅರ್ಥ:ಅಂತು ಒಂಸು ಅಂಬುವೀಡಿನ ಎಡೆಯೊಳ್ (ಒಂದು ಬಾಣಹೊಗುವಷ್ಟು ದೂರದ ಸ್ಥಳದಲ್ಲಿ) ಕಾಮನಂಬು ವೀಡಿಂಗೆ ಒಳಗಾಗಿ (ಕಾಮನಬಾಣಕ್ಕೆ ಪ್ರಯೋಗಕ್ಕೆ ತುತ್ತಾಗಿ ) ತಾಂ ಕಾಮರೂಪೆಯು ಅಪ್ಪುದಱಿಂ (ತಾನು ಇಷ್ಟ ಬಂದ ರೂಪವನ್ನು ಧರಿಸುವವಳಾದುದರಿಂದ) ದಿವ್ಯಕನ್ಯಕಾ ಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ (ಎದುರಿಗೇ ) ಬರ್ಪಳಂ ಕಂಡು-
ವಚನ:ಅರ್ಥ:ಹಾಗೆ ಒಂದು ಬಾಣ ಹೋಗುವಷ್ಟು ದೂರದ ಸ್ಥಳದಲ್ಲಿ, ಕಾಮನಬಾಣಕ್ಕೆ ಪ್ರಯೋಗಕ್ಕೆ ತುತ್ತಾಗಿ, ತಾನು ಇಷ್ಟ ಬಂದ ರೂಪವನ್ನು ಧರಿಸುವವಳಾದುದರಿಂದ ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ ಭೀಮನು ತನ್ನ ಎದುರಿಗೇ ಬರುವವಳನ್ನು ನೋಡಿದನು.
ಕಂ|| ಖೇಚರಿಯೋ ಭೂಚರಿಯೊ ನಿ
ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
ಗ್ಗೊಚರವಿ ಕಾನನಮುಮ
ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಿಂ||೧೪||
ಪದ್ಯ-೧೪:ಪದವಿಭಾಗ-ಅರ್ಥ:ಖೇಚರಿಯೋ ಭೂಚರಿಯೊ ನಿಶಾಚರಿಯೋ (ಖ -ಆಕಾಶದಲ್ಲಿ ಸಂಚರಿಸುವ ವಿದ್ಯಾಧರೆಯೊ, ಮನುಷ್ಯಳೋ, ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ!) ರೂಪು ಬಣ್ಣಿಸಲ್ಕೆ ಆರ್ಗುಂ ವಾಗ್ಗೊಚರಂ; ( ವಾಕ್ ಅಗೋಚರಂ- ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ) ಕಾನನಮುಂ ಅಗೋಚರಮ್ (ಕಾಡೂ ಯಾರಿಗೂ ಪರಿಚಿತವಲ್ಲದುದು) ಇವಳು ಇಲ್ಲಿಗೆ ಏಕೆ ಬಂದಳೊ ಪೇೞಿಂ.
ಪದ್ಯ-೧೪:ಅರ್ಥ:. ಆಕಾಶದಲ್ಲಿ ಸಂಚರಿಸುವ ವಿದ್ಯಾಧರೆಯೊ, ಮನುಷ್ಯಳೋ, ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ! ಇವಳ ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ. ಈ ಕಾಡೂ ಕೂಡ ಯಾರಿಗೂ ಪರಿಚಿತವಲ್ಲದುದು. ಇವಳು ಇಲ್ಲಿಗೆ ಏಕೆ ಬಂದಳು ಹೇಳಿರಿ! ಎಂದು ಭೀಮನು ಯೋಚಿಸಿದನು.
ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಿಯ ದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಬನಂ ಹಿಡಿಂಬವನೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-
ವಚನ:ಪದವಿಭಾಗ-ಅರ್ಥ:ಎಂಬ ಅನ್ನೆಗಂ ಅಕೆ (ಎಂದು ಹೇಳುವಷ್ಟರಲ್ಲಿ ಆಕೆ) ಮದನನ ಕೆಯ್ಯಿಂ ಬರ್ದುಂಕಿದ ಅರಲಂಬು ಬರ್ಪಂತೆ ಬಂದು (ಮನ್ಮಥನ ಕಯ್ಯಿಂದ ಬದುಕಿಬಂದ ಪುಷ್ಪಬಾಣದ ಹಾಗೆ) ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇ ಎನೆಂಬೆ ಯೇಕೆ ಬಂದೆ ಯೆಂದೊಡೆ (ನೀನು ಯಾರಿಗೆ ಮಗಳು? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ) ಆಕೆಯೆಂದಳು ಎರಡಱಿಯದೊಲ್ದು (ಎರಡು ಅಱಿಯದೆ ಒಲ್ದು- ಕಪಟವಿಲ್ಲದೆ ಪ್ರೀತಿಸಿದ್ದರೀದ) ನಿನ್ನೊಳು ಎರಡಂ ನುಡಿಯಲಾಗದು ಎನಗೆ (ನಿನ್ನಲ್ಲಿ ಎರಡು ಬಗೆ ಅಥವಾ ಸುಳ್ಳನ್ನು ಹೇಳಬಾರದು.) ಬನಂ ಹಿಡಿಂಬವನ ಎಂಬುದು ಇದನಾಳ್ವಂ ಹಿಡಿಂಬನೆಂಬ ಅಸುರನು ಎಮ್ಮಣ್ಣನು ಆನುಂ ಹಿಡಿಂಬೆಯೆನೆಂಬೆನು, ಆತನ ಬೆಸದಿಂ ನಿಮ್ಮ ಇನಿಬರುಮಂ(ಈ ಕಾಡು ಹಿಡಿಂಬವನ ಎಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣನು; ನನ್ನ ಹೆಸರೂ ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮೆಲ್ಲರನ್ನು-)-
ವಚನ:ಅರ್ಥ:ಅಷ್ಟರಲ್ಲಿ ಅವಳು ಮನ್ಮಥನ ಕಯ್ಯಿಂದ ಬದುಕಿಬಂದ ಪುಷ್ಪಬಾಣದ ಹಾಗೆ ಬಂದು, ಭೀಮಸೇನನ ಪಕ್ಕದಲ್ಲಿ ಕುಳಿತುಕೊಂಡಿರಲು ಭೀಮಸೇನನು ಅವಳನ್ನು ಕುರಿತು ನೀನು ಯಾರಿಗೆ ಮಗಳು? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ? ಎನ್ನುಲು ಆಕೆ ಅವನನ್ನು ಕುರಿತು, ಕಪಟವಿಲ್ಲದೆ ಪ್ರೀತಿಸಿದ್ದರಿಂದ, ನಿನ್ನಲ್ಲಿ ಎರಡು ಬಗೆ ಅಥವಾ ಸುಳ್ಳನ್ನು ಹೇಳಬಾರದು.ಈ ಕಾಡು ಹಿಡಿಂಬವನ ಎಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣನು; ನನ್ನ ಹೆಸರೂ ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮೆಲ್ಲರನ್ನು-)-
ಕಂ|| ಪಿಡಿದಡಸಿ ತಿನಲ್ ಬಂದಿ
ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
ಪಡೆನೋಡಲ್ ಬಂದವರಂ
ಗುಡಿವೊಱೆಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫||
ಪದ್ಯ-೧೫:ಪದವಿಭಾಗ-ಅರ್ಥ: ಪಿಡಿದು ಅಡಸಿ ತಿನಲ್ ಬಂದಿರ್ದ ಎಡೆಯೊಳ್ (ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ) ನಿನಗಾಗಿ ಮದನನು ಎನ್ನನೆ ತಿನೆ ಕೇಳ್ (ಮನ್ಮಥನು ನನ್ನನ್ನೇ ತಿನ್ನಲು ಕೇಳು- ) ಪಡೆನೋಡಲ್ ಬಂದವರಂ ಗುಡಿವೊಱಿಸಿದರು ಎಂಬುದು ಆಯ್ತು ನಿನ್ನ ಎನ್ನ ಎಡೆಯೊಳ್ (“ಪಡೆ -ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಯಂತೆ, ನಿನ್ನ ನನ್ನ ವಿಚಾರದಲ್ಲಿ, ಸಂಬಂಧದಲ್ಲಿ.)
ಪದ್ಯ-೧೫:ಅರ್ಥ:(ನಿಮ್ಮನು) ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ ಮನ್ಮಥನು ನನ್ನನ್ನೇ ತಿನ್ನಲು, ಕೇಳು- ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಯಂತೆ, ನಿನ್ನ ನನ್ನ ವಿಚಾರದಲ್ಲಿ, ಸಂಬಂಧದಲ್ಲಿ ಆಯಿತು.
ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-
ವಚನ:ಪದವಿಭಾಗ-ಅರ್ಥ:ಎಂದು ಈ ಮಱಲುಂದಿದರ್ ಆರ್ಗೆ ಎಂದೊಡೆ(ಮೈಮರೆತು ಮಲಗಿದವರು ಯಾರು? ಎಂದು ಕೇಳಿದಾಗ) ಎನ್ನ ತಾಯ್, ಇವರುಂ ಒಡವುಟ್ಟಿದರ್ ಎಂದೊಡೆ,(ತಾಯಿ ಮತ್ತು ಒಡಹುಟ್ಟಿದವರು ಎಂದಾಗ) ಹಿಡಿಂಬಂ ಬಂದು ಅವರಂ ತಿಂದೊಡಂ ತಿನ್ಗೆ (ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ); ನೀನು ಎನ್ನ ಪೆಗಲನು ಏಱು ಗಗನತಳಕ್ಕೆ ಉಯ್ವೆನು ಎನೆ (ನೀನು ನನ್ನ ಹೆಗಲನ್ನು ಏರು, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎನ್ನಲು,) ಭೀಮಸೇನನು ಆ ಮಾತಿಂಗೆ ಮುಗುಳ್ನಗೆ ನಕ್ಕು-
ವಚನ:ಅರ್ಥ:ಎಂದು ‘ಈ ಮೈಮರೆತು ಮಲಗಿರುವವರಾರು’ ಎಂದು ಕೇಳಿದಳು. ಅವರು ನನ್ನ ತಾಯಿ ಮತ್ತು ಒಡಹುಟ್ಟಿದವರು ಎಂದಾಗ ಉತ್ತರಕೊಡಲು ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ; ನೀನು ನನ್ನ ಹೆಗಲನ್ನು ಏರಿಕೋ, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎನ್ನಲು, ಹಿಡಿಂಬೆಯ ಆ ಮಾತಿಗೆ ಭೀಮಸೇನನು ಹುಸಿನಗೆ ನಕ್ಕು-
ಚಂ|| ಅೞಿಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ
ಯೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ|
ಡ್ಡೞಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ
ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ಅೞಿಪಿದೆಯ್ ([ಅಳಿಪಿದೆ-ಹಾಳುಮಾಡಿದೆ!? ಅಥವಾ ತಪ್ಪಿದೆ] ಮೋಹಗೊಂಡ ಸತ್ಯವನ್ನು ಹೇಳಿದೆ!) ಅಂತುಮಲ್ಲದೆ ನಿಶಾಚರಿಯೈ, ನಿನಗಪ್ಪುದು ಅಪ್ಪುದು, ಈ (ಯ) ಅೞಿನುಡಿ (ಅಲ್ಲದೆ ನೀನು ರಾಕ್ಷಸಿಯು!; ಈ ಕೆಟ್ಟಮಾತು ನಿನಗೆ ತಕ್ಕುದು ತಕ್ಕದು.) ಬರ್ಕೆ ನಿನ್ನ ಪಿರಿಯಣ್ಣನೆ ( ನಿನ್ನ ಹಿರಿಯಣ್ಣನೇ ಬರಲಿ,) ಪಣ್ಣನೆ ನೋೞ್ಪಂ (ಸ್ವಲ್ಪ ಅವನನ್ನು ನೋಡುವೆನು) ಆತನ ಒಡ್ಡೞಿಯದ (ಒಡ್ಡು- ಮುಂದಾಳುತನ, ಅಳಿಯದ) ಗಂಡವಾತನು ಎನುತ ಅಂತಿರೆ (ಅವನ ಕುಂದದ ಪೌರುಷವನ್ನು ಪರೀಕ್ಷಿಸಿ ನೋಡೋಣ ಎನ್ನುತ, ಹಾಗಿರಲು) ತಂಗೆಯ ಮಾಣ್ದುದರ್ಕೆ (ತಂಗಿಯು ತಡಮಾಡಿದುದಕ್ಕೆ) ಅವಂ ಮೊೞಗಿ ಸಿಡಿಲ್ದದೊಂದು ಸಿಡಿಲ ಏೞ್ಗೆಯಿನೆ ಐಯ್ತರೆ (ಅವನು- ಹಿಡಿಂಬನು ಸಿಡಿಲಿಂತೆ ಘರ್ಜಿಸಿ ಸಿಡಿಲವೇಗದಿಂದ) ವಂದು ಭೀಮನಂ (ಬಂದು ಭೀಮನನ್ನು)
ಪದ್ಯ-೧೬:ಅರ್ಥ:(ತಪ್ಪಿದೆ- ಹಾಳುಮಾಡಿದೆ!?- ಡಿಎಲ್ಎನ್) ನೀನು ನನ್ನಲ್ಲಿ ಮೋಹಗೊಂಡ ಸತ್ಯವನ್ನು ಹೇಳಿದೆ!; ಅಲ್ಲದೆ ನೀನು ರಾಕ್ಷಸಿಯಾಗಿದ್ದೀಯೆ; ಈ ಕೆಟ್ಟಮಾತು ನಿನಗೆ ತಕ್ಕುದು ತಕ್ಕದು. ನಿನ್ನ ಹಿರಿಯಣ್ಣನೇ ಬರಲಿ, ಅವನ ಕುಂದದ ಪೌರುಷವನ್ನು ಪರೀಕ್ಷಿಸಿ ನೋಡೋಣ ಎನ್ನುತ, ಹಾಗಿರಲು, ತಂಗಿಯು ತಡಮಾಡಿದ್ದಕ್ಕೆ ಅವನು- ಹಿಡಿಂಬನು ಸಿಡಿಲಿಂತೆ ಘರ್ಜಿಸಿ ಸಿಡಿಲವೇಗದಿಂದ ಬಂದು ಭೀಮನನ್ನು-
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವ ದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:ಕಂಡು ಕಣ್ಗಳಿಂ ಕೆಂಡದ ತಂಡಂಗಳುಂ ಉರಿಯ ತಂಡಂಗಳುಂ ಸೂಸೆ (ನೋಡಿ ಕಣ್ಣುಗಳಿಂದ, ಕೆಂಡದ ರಾಶಿಯ ಉರಿಯ ಮೊತ್ತವೂ ಹೊರ ಚಿಮ್ಮುತ್ತರಲು) ನೀನೊರ್ವಯ್ ಎನ್ನೊಳಗೇಂ ಕಾದುವೆ? (ನೀನೊಬ್ಬನೆ! ನನ್ನಲ್ಲಿ ಹೇಗೆ ಕಾದುತ್ತೀಯೆ?) ಈ ಮಱಲುಂದಿದರನ್ ಎತ್ತ್ ಇನಿಬರುಮನು ಒರ್ಮೆಯೆ ಪೊಸೆದು ಮುಕ್ಕುವೆನು ಎನೆ (ಈ ಮೈಮರೆತು ಮಲಗಿದವರನ್ನು ಎಬ್ಬಿಸು, ಇವರೆಲ್ಲರನ್ನೂ ಒಂದೇ ಸಲ ಹೊಸೆದು ಮುಕ್ತುತ್ತೇನೆ ಎನ್ನಲು), ಸಾಹಸಭೀಮಂ ಮಲ್ಲಂತಿಗೆಯನು ಅಪ್ಪೊಡಂ ಸಡಲಿಸದೆ (ಸಾಹಸಭೀಮನು ತನ್ನ ಮಲ್ಲ ಚಡ್ಡಿಯನ್ನು (ಕಾಚ) ಸರಿಪಡಿಸದೆ, ಅವನ ಅನವಯವದೊಳು ಇಂತೆಂದಂ(ಅನ ಅವಯವದೊಳು; ಅನಾಯಾಸವಾಗಿ ಅವನನ್ನು ಕುರಿತು ಹೀಗೆಂದನು)-
ವಚನ:ಅರ್ಥ:ನೋಡಿ ಕಣ್ಣುಗಳಿಂದ, ಕೆಂಡದ ರಾಶಿಯ ಉರಿಯ ಮೊತ್ತವೂ ಹೊರ ಚಿಮ್ಮುತ್ತರಲು, ನೀನೊಬ್ಬನೆ! ನನ್ನಲ್ಲಿ ಹೇಗೆ ಕಾದುತ್ತೀಯೆ? ಈ ಮೈಮರೆತು ಮಲಗಿದವರನ್ನು ಎಬ್ಬಿಸು, ಇವರೆಲ್ಲರನ್ನೂ ಒಂದೇ ಸಲ ಹೊಸೆದು ಮುಕ್ತುತ್ತೇನೆ ಎನ್ನಲು. ಸಾಹಸಭೀಮನು ತನ್ನ ಮಲ್ಲ ಚಡ್ಡಿಯನ್ನು (ಕಾಚ)ಸರಿಪಡಿಸದೆ, ಅನಾಯಾಸವಾಗಿ ಅವನನ್ನು ಕುರಿತು ಹೀಗೆಂದನು
ಕಂ|| ಏಂ ಗಾವಿಲನಯೊ ನಿನ್ನಂ
ನಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕು ಮಾ
ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್|| ೧೭||
ಪದ್ಯ-೧೭:ಪದವಿಭಾಗ-ಅರ್ಥ:ಏಂ ಗಾವಿಲನಯೊ ನಿನ್ನಂ ನಂಗುವುದರ್ಕೆ ಇವರನು ಎತ್ತವೇೞ್ಕುಮೆ (ಎಂತಹ ದಡ್ಡನಯ್ಯಾ? ನಿನ್ನಿಂದ/ನೀನು ನುಂಗುವುದಕ್ಕಾಗಿ ಇಷ್ಟು ಜನವನ್ನೂ ಎಬ್ಬಿಸಬೇಕೆ?) ನೆರಮಂ ಸಂಗಳಿಸಲ್ವೇೞ್ಕು (ಸಹಾಯವನ್ನು ಒದಗಿಸಿಕೊಳ್ಳಬೇಕು? ಬೇಕಾಗಿಲ್ಲ!) ಮಾತಂಗವಿರೋಧಿಗೆ (ಆನೆಯ ಶತ್ರುವಿಗ- ಸಿಂಹಕ್ಕೆ) ಕುರಂಗ (ಜಿಂಕೆ) ಸಂಗರ ಧರೆಯೊಳ್ (ಲೋಕದಲ್ಲಿ ಜಿಂಕೆಯಡನೆ ಯುದ್ಧ)|
ಪದ್ಯ-೦೦:ಅರ್ಥ:ಎಂತಹ ದಡ್ಡನಯ್ಯಾ? ನಿನ್ನಿಂದ/ನೀನು ನುಂಗುವುದಕ್ಕಾಗಿ ಇಷ್ಟು ಜನವನ್ನೂ ಎಬ್ಬಿಸಬೇಕೆ? ಜಿಂಕೆಯೊಡನೆ ಯುದ್ಧಮಾಡುವಾಗ ಗಜವಿರೋಯಾದ ಸಿಂಹಕ್ಕೆ ಸಹಾಯವನ್ನು ಒದಗಿಸಿಕೊಳ್ಳಬೇಕೇ? ಎಂದನು.
ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯತಂಬರಂಬರಂ ಸಿಡಿಲ್ದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಹಿಡಿಂಬನು ಆಡಂಬರಂಗೆಯ್ದು (ಅಬ್ಬರಿಸಿ) ತುಂಬುರುಕೊಳ್ಳಿಯತ (ತೂಬರಮರದ ಕೊಳ್ಳಿಯ ಹಾಗೆ) ಅಂಬರ ಅಂಬರಂ ಸಿಡಿಲ್ದು(ಆಕಾಶದ ಎತ್ತರಕ್ಕೆ ನೆಗೆದು) -
ವಚನ:ಅರ್ಥ:ಹಿಡಿಂಬನು ಅಬ್ಬರಿಸಿ ತೂಬರಮರದ ಕೊಳ್ಳಿಯ ಹಾಗೆ ಆಕಾಶದ ಎತ್ತರಕ್ಕೆ ನೆಗೆದು-
ಚಂ|| ಕಡುಪಿನೆ ಪೊತ್ತು ಪಾಸರೆಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ|
ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದು ದೈತ್ಯನಂ
ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮||
ಪದ್ಯ-೧೮:ಪದವಿಭಾಗ-ಅರ್ಥ:ಕಡುಪಿನೆ (ತೀವ್ರವಾಗಿ)ಪೊತ್ತು ಪಾಸರೆಯನು ಐಯ್ತರೆ (ಒಂದು ಹಾಸುಬಂಡೆಯನ್ನು ಹೊತ್ತು ವೇಗವಾಗಿ ಬರಲು) ಭೀಮನುಂ ಒತ್ತಿ ಕಿಱ್ತು ಬೇರೊಡನೆ ಮಹೀಜಂ(ಮರ) ಒಂದನು ಇಡೆಯುಂ ಬಿಡೆ (ಬಿಡೆಯವಿಲ್ಲದೆ) ಪೊಯ್ಯೆಯುಮ್ (ಭೀಮನೂ ಬಲವಂತವಾಗಿ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಕೊಡೆಯುವುದರಿಂದಲೂ) ಆ ಬನಂ ಪಡಲ್ವಡುತಿರೆ (ಆ ಕಾಡು ಚೆಲ್ಲಾಪಿಲ್ಲಿಯಾಗುತ್ತಿರಲು), ಕಲ್ಲೊಳಂ ಮರದೊಳಂ ಬಡಿದು ಒಯ್ಯನೆ ಜೋಲ್ದು ದೈತ್ಯನಂ ಪಿಡಿದು (ಕಲ್ಲಿನಿಂದಲೂ ಮರದಿಂದಲೂ ಬಡಿದು ಮೆಲ್ಲನೆ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು) ಮೃಣಾಳನಾಳಮನೆ ಸೀಳ್ವವೊಲ್ ಒರ್ಮೆಯೆ ಸೀಳ್ದು ಬೀಸಿದಂ(ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು.)
ಪದ್ಯ-೧೮:ಅರ್ಥ:ಒಂದು ಹಾಸುಬಂಡೆಯನ್ನು ಹೊತ್ತು ವೇಗವಾಗಿ ಬರಲು, ಭೀಮನೂ ಬಲವಂತವಾಗಿ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಕೊಡೆಯುವುದರಿಂದಲೂ ಆ ಕಾಡು ಚೆಲ್ಲಾಪಿಲ್ಲಿಯಾಗುತ್ತಿರಲು, ಕಲ್ಲಿನಿಂದಲೂ ಮರದಿಂದಲೂ ಬಡಿದು ಮೆಲ್ಲನೆ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು, ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು.
ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪ್ರತ್ರನುವಿಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರುದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನಸಂಪತ್ತುಮಂ ಶ್ರೀಯುಮಂ ಮೆರೆದು ಮಜ್ಜನ ಭೋಜನತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-
ವಚನ:ಪದವಿಭಾಗ-ಅರ್ಥ:ಆಗಳಾ ಕಳಕಳಕ್ಕೆ ಮಱಲುಂದಿದ ಅಯ್ವರುಂ ಎೞ್ಚತ್ತು ಇದೇನೆಂದು ಬೆಸಗೊಳೆ (ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಕೇಳಲು), ತದ್ವೃತ್ತಾಂತಂ ಎಲ್ಲಮನು ಅಱಪಿ (ಆ ವಿಚಾರವನ್ನೆಲ್ಲಾ ತಿಳಿಸಿ), ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳು ಒಪ್ಪೊಡಂಬಡಂ ನುಡಿಯೆ(ಹಿಡಿಂಬೆಯು ಕಪಟವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು ) ಕೊಂತಿಯುಂ ಧರ್ಮಪ್ರತ್ರನುವಿಕೆ ಸಾಮಾನ್ಯ ವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡ ಈಕೆಯಂ ಕೆಯ್ಕೊಳ್ವುದೆ ಕಜ್ಜಂ ಎಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ, (ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ; ರಾಕ್ಷಸಸ್ತ್ರೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ ಎಂದು ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದಾಗ-.) ಹಿಡಿಂಬೆ ನೀಂ ಇಲ್ಲಿರಲ್ವೇಡ (ಹಿಡಿಂಬೆಯು ನೀವು ಇಲ್ಲಿರುವುದು ಬೇಡ;), ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರುದುಱುಗಲ ನಡುವೆ (ಬೆಟ್ಟದ ಮೇಲೆ ಕರ್ರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ನಡುವೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು) ಸುಧಾ ಧವಳಿತ ಉತ್ತುಂಗ (ಸುಣ್ಣಬಳಿದ ಎತ್ತರದ) ರಮ್ಯ ಹರ್ಮ್ಯಂಗಳಂ (ಅರಮನೆಗಳನ್ನು) ಕಾಣ್ಬಿರಪ್ಟೊಡೆ ಅದು (ಎತ್ತರವೂ ಮನೋಹರವೂ ಆಗಿ ನಿಮ್ಮ ಕಣ್ಣಿಗೆ ಕಾಣುತ್ತಿರುವ ಅದು) ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು(ಆ ಉಪ್ಪರಿಗೆ ಮನೆಗಳು ಹಿಡಿಂಬ ಪುರವೆಂಬುದು ನಮ್ಮ ಪಟ್ಟಣ,ಅಲ್ಲಿಗೆ ಹೋಗೋಣ ಬನ್ನಿ ಎಂದು) ಮುಂದಿಟ್ಟು ಒಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ (ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ಹಾಗೆ ಮಾಡಿಸಿ), ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು ಮಜ್ಜನ (ಸ್ನಾನ) ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಂ ಎಲ್ಲಮಂ ಕಳೆದು ಭೀಮಸೇನನುಂ ತಾನುಂ (ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ (ತೋರಿಸಿ), ಸ್ನಾನ, ಭೋಜನ, ತಾಂಬೂಲ ಗಂಧಾದಿಲೇಪನಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಹೋಗಲಾಡಿಸಿ ಸತ್ಕರಿಸಿದಳು. ಭೀಮಸೇನನೂ ತಾನೂ,)-
ವಚನ:ಅರ್ಥ:ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಕೇಳಲು, ಆ ವಿಚಾರವನ್ನೆಲ್ಲಾ ತಿಳಿಸಿ, ಹಿಡಿಂಬೆಯು ಕಪಟವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು, ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ; ರಾಕ್ಷಸಸ್ತ್ರೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ ನಿನಗೆ ಯೋಗ್ಯವಾದ ಕಾರ್ಯ ಎಂದು, ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದರು. ಆಗ ಹಿಡಿಂಬೆಯು ನೀವು ಇಲ್ಲಿರುವುದು ಬೇಡ; ಬೆಟ್ಟದ ಮೇಲೆ ಕರ್ರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ಮಧ್ಯೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು ಎತ್ತರವೂ ಮನೋಹರವೂ ಆಗಿ ನಿಮ್ಮಕಣ್ಣಿಗೆ ಕಾಣುತ್ತಿರುವ ಆ ಉಪ್ಪರಿಗೆ ಮನೆಗಳು ನಮ್ಮಪಟ್ಟಣ (ರಾಜಧಾನಿ), ಅಲ್ಲಿಗೆ ಹೋಗೋಣ ಬನ್ನಿ ಎಂದು ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ (ತೋರಿಸಿ), ಸ್ನಾನ, ಭೋಜನ, ತಾಂಬೂಲ ಗಂಧಾದಿಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಹೋಗಲಾಡಿಸಿ ಸತ್ಕರಿಸಿದಳು. ಭೀಮಸೇನನೂ ತಾನೂ-ಹಿಡಿಂಬೆಯೂ-
ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞಿ
ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ|
ಲ್ಲಿಯೆ ತೊಡರ್ದದಲ್ಲಿಯೆ ನಿಂ
ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯||
ಪದ್ಯ-೧೯:ಪದವಿಭಾಗ-ಅರ್ಥ:ಎಲ್ಲಿ ಕೊಳನು ಎಲ್ಲಿ, ತಣ್ಬುೞಿಲು ಎಲ್ಲಿ (ಎಲ್ಲಿ ತಂಪಾದ ತೋಪುಗಳುಂ), ಲತಾಭವನಮ್ ಎಲ್ಲಿ, ಧಾರಾಗೃಹಮ್ (ಏಕಪ್ರಕಾರವಾಗಿ ನೀರು ಹರಿಯುವ ಮನೆಗಳುಂಟೋ) ಅಂತು ಅಲ್ಲಿಯೆ ತೊಡರ್ದದು ಅಲ್ಲಿಯೆ ನಿಂದು ಅಲ್ಲಿಯೆ ರಮಿಯಿಸಿದಳು ಆಕೆ ಮರುದಾತ್ಮಜನೊಳ್ (ಆಕೆ ಹಿಡಿಂಬೆಯು ಅಲ್ಲಲ್ಲಿಯೇ ನಿಂತು ವಾಯುಪುತ್ರನಲ್ಲಿ ರಮಿಸಿದಳು)
ಪದ್ಯ-೧೯:ಅರ್ಥ:ಎಲ್ಲಿ ಸರೋವರಗಳುಂಟೋ, ಎಲ್ಲಿ ತಂಪಾದ ತೋಪುಗಳುಂಟೋ, ಎಲ್ಲಿ ಬಳ್ಳಿಮಾಡಗಳುಂಟೋ, ಎಲ್ಲಿ ಸದಾ ನೀರು ಹರಿಯುವ ಮನೆಗಳುಂಟೋ, ಅಲ್ಲಲ್ಲಿಯೇ ಸೇರಿಕೊಂಡು ಅಲ್ಲಲ್ಲಿಯೇ ನಿಂತು ಹಿಡಿಂಬೆಯು ವಾಯುಪುತ್ರನಲ್ಲಿ ರಮಿಸಿದಳು.
ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡಾಕೆಗಂ ಭೀಮಂಗಂ
ವಚನ:ಪದವಿಭಾಗ-ಅರ್ಥ:ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡಾಕೆಗಂ ಭೀಮಂಗಂ
ವಚನ:ಅರ್ಥ:ಹಾಗೆ ರಮಿಸಿ ಉದ್ಯಾನವನ ನಗರಕ್ಕೆ ಮರಳಿ ಬಂದಾಗ ಆಕೆಗೂ ಭೀಮನಿಗೂ-
ಕಂ|| ಕಾರಿರುಳ ತಿರುಳ ಬಣ್ಣಂ
ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
ಪೇರೊಡಲೆಸೆದಿರೆ ಪುಟ್ಟಿದ
ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦||
ಪದ್ಯ-೨೦:ಪದವಿಭಾಗ-ಅರ್ಥ:ಕಾರಿರುಳ ತಿರುಳ ಬಣ್ಣಂ ಕೂರಿದುವು ಎನೆ (ಇಲ್ಲಿ ಮೊನಚಾಯಿತು/ಒಟ್ಟಾಯಿತು ಎನ್ನುವಂತೆ) ತೊಳಪ (ಹೊಳೆಯುವ) ದಾಡೆ ಮಿಳಿರ್ವುರಿಗೇಸಂ (ಅಲುಗಾಡುವ ಕೆಂಗೂದಲು,) ಪೇರ್ ಒಡಲು ಎಸೆದಿರೆ (ದೊಡ್ಡ ದೇಹವೂ ಪ್ರಕಾಶಮಾನವಾಗಿರಲು) ಪುಟ್ಟಿದನು ಆರುಂ ಉಗುರ್ವಿಸೆ ಮಗಂ ಘಟೋತ್ಕಚನೆಂಬಂ(ಯಾರಿಗೇ ಆದರೂ ಭಯವನ್ನುಂಟುಮಾಡುವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು.)|
ಪದ್ಯ-೨೦:ಅರ್ಥ:ಕಗ್ಗತ್ತಲೆಯಿಂದ ಕೂಡಿದ ರಾತ್ರಿಯ ಬಣ್ಣವು ಇಲ್ಲಿ ಮೊನಚಾಯಿತು ಎನ್ನುವ ಹಾಗೆ ತೊಳಗುತ್ತಿರುವ ಕೋರೆಹಲ್ಲೂ ಅಲುಗಾಡುತ್ತಿರುವ ಕೆಂಗೂದಲೂ ದೊಡ್ಡ ದೇಹವೂ ಪ್ರಕಾಶಮಾನವಾಗಿರಲು ಯಾರಿಗೇ ಆದರೂ ಭಯವನ್ನುಂಟುಮಾಡುವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು.
ವ|| ಅಂತು ಪುಟ್ಟುವುದುವಿಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ತೃಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-
ವಚನ:ಪದವಿಭಾಗ-ಅರ್ಥ:ಅಂತು ಪುಟ್ಟುವುದು ವಿಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ (ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭಧಾರಣೆ, ಕೂಡಲೇ ಹೆರಿಗೆ, ಕೂಡಲೇ ಯೌವನಪ್ರಾಪ್ತಿಯಾಗುವುದು) ಕಾರಣದಿಂದ ಆಗಳೆ ಷೋಡಶವರ್ಷದ ಕುಮಾರನಾಗಿರೆ (ಆಗಲೇ ಹದಿನಾರುವರ್ಷದ ಬಾಲಕನಾಗಿರಲು) ಪಾಂಡಮರುಂ ಅಲ್ಲಿ ಮೂಱು ವರುಷಂ ಇರ್ದು ತೃಣದ್ವೈಪಾಯನ ಉಪದೇಶದಿಂದ ಏಕಚಕ್ರಕ್ಕೆ- ವೋಪ ಕಜ್ಜಮನು ಆಳೋಚಿಸಿ (ಹೋಗುವ ಕಾರ್ಯವನ್ನು ಆಲೋಚಿಸಿದರು)-
ವಚನ:ಅರ್ಥ:|| ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭಧಾರಣೆ, ಕೂಡಲೇ ಹೆರಿಗೆ, ಕೂಡಲೇ ಯೌವನಪ್ರಾಪ್ತಿಯಾಗುವುದು, ಘಟೋದ್ಜನು ಆಗಲೇ ಹದಿನಾರುವರ್ಷದ ಬಾಲಕನಾಗಿರಲು ಪಾಂಡವರು ಅಲ್ಲಿ ಮೂರುವರ್ಷಕಾಲವಿದ್ದು ವೇದವ್ಯಾಸರ ಉಪದೇಶದ ಪ್ರಕಾರ ಏಕಚಕ್ರನಗರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿದರು.

ಏಕಚಕ್ರನಗರ ಪ್ರವೇಶ - ಬಕಾಸುರ ವಧೆ[ಸಂಪಾದಿಸಿ]

ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ
ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|
ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ
ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧||
ಪದ್ಯ-೨೦:ಪದವಿಭಾಗ-ಅರ್ಥ:ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ (ಕರೆದು, ಹತ್ತಿರಕ್ಕೆ ಬರಲು) ಮನೋಮುದಂ ಬೆರಸು ಒಸೆದಿರ್ದೆವು ಇನ್ನೆವರಂ(ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು.) ಇನ್ನು ಇರಲಾಗದು ಪೋಪೆವೆಂದೊಡೆ ಆದರದೊಳೆ ಕೊಟ್ಟ ವಸ್ತುಗಳನು ಒಂದುಮನು ಒಲ್ಲದೆ (ಕೊಟ್ಟ ಯಾವ ವಸ್ತುವನ್ನೂ ಸ್ವೀಕರಿಸದೆ) ಕೂರ್ತು ಬುದ್ಧಿವೇಱ್ದು ಇರಿಸಿ ( ಪ್ರೀತಿಯಿಂದ ಬುದ್ಧಿಹೇಳಿ ಅವರನ್ನು ಅಲ್ಲಿಯೇ ಬಿಟ್ಟು) ಸುಖಪ್ರಯಾಣದೊಳೆ ಪಾಂಡವರು ಎಯ್ದಿದರ್ (ಸೇರಿದರು) ಏಕಚಕ್ರಮಂ
ಪದ್ಯ-೨೦:ಅರ್ಥ:ಹಿಡಿಂಬೆಯನ್ನು ಬರಮಾಡಿಕೊಂಡು ಘಟೋತ್ಕಚನನ್ನೂ ಹತ್ತಿರಕ್ಕೆ ಕರೆದು ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು. ಇನ್ನು ಇರಬಾರದು ಹೋಗುತ್ತೇನೆ ಎಂದು ಹೇಳಿ ಅವರು ಆದರದಿಂದ ಕೊಟ್ಟ ಯಾವ ವಸ್ತುವನ್ನೂ ಸ್ವೀಕರಿಸದೆ ಅಲ್ಲೆಯೇ ಬಿಟ್ಟು ಪ್ರೀತಿಯಿಂದ ಬುದ್ಧಿಹೇಳಿ ಸುಖಪ್ರಯಾಣದಿಂದ ಪಾಂಡವರು ಏಕಚಕ್ರಪುರವನ್ನು ಸೇರಿದರು
ರಗಳೆ|| ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ|

(ಸುಂದರ ಮಾಟದ ಬೆಟ್ಟಗಳು)

ಕಲ್ಪತರುಗಳೊಳ್ ಪೋಲ್ವ ಮರಗಳಿಂ ನಂದನಂಗಳೊಳ್ ಸುೞಿದ ಬಿರಯಿಯಿಂ|

(ಕಲ್ಪತರುಗಳನ್ನು ಹೋಲುವ ಮರಗಳು ನಂದನಂಗಳಲ್ಲಿ ಸುಳಿದ ವಿರಹಿಗಳು)

ಕಂಪು ಕಣ್ಮಲೆಯೆ ಪೂತ ಸುರಯಿಯಿಂ||

(ಸುಗಂಧ ಬೀರುತ್ತಿರುವ ಹೂವುಗಳನ್ನು ಬಿಟ್ಟಿರುವ ಸುರಗಿಯ ಮರಗಳಿಂದಲೂ)

ಸುತ್ತಲುಂ ಪರಿವ ಜರಿವೊನಲ್ಗಳಿಂ

(ಜರಿ ಪೊನಲ್ಗಳಿಂದ- ಸುತ್ತಲೂ ಹರಿಯುತ್ತಿರುವ ಸುಂದರವಾದ ಪ್ರವಾಹಗಳಿಂದ,)

ದೆತ್ತಲುಂ ನಲಿವ ಪೊಸ ನವಿಲ್ಗಳಿಂ|

(ಎತ್ತಲೂ - ಎಲ್ಲೆಡೆಯಲ್ಲಿಯೂ ಕುಣಿಯುತ್ತಿರುವ ನವಿಲುಗಳು,)

ಬೆಳೆದು ಮಗಮಗಿಪ ಗಂಧಶಾಳಿಯಿಂ

(ಶಾಲಿ-ಭತ್ತ:-ಬೆಳೆದಿರುವ ಸುಗಂಧಯುಕ್ತವಾದ ಬತ್ತದ ಗದ್ದೆಗಳು,)

ದಲ್ಲಿ ಸುಱಿವ ಗಿಳಿವಿಂಡಿನೋಳಿಯಿಂ||

(ಅಲ್ಲಿ ಸುಳಿವ:-ಸುಳಿಯುತ್ತಿರುವ ಗಿಳಿಗಳ ಹಿಂಡು)

ಈಂಟುಜಳಧಿಯೆನಿಪಗೞ ನೀಳ್ಪಿನಿಂ

(ಈಂಟು ಜಳಯೆನಿಪ:- ಕುಡಿಯುವ ನೀರಿನ ಸಮುದ್ರಂತಿರುವ ಆಳವಾದ ಕಂದಕ )

ನೆಗೆದು ಸೊಗಯಿಸುವ ಕೋಂಟೆಯೊಳ್ಪ್ಪಿನಿಂ|

(ಕೋಂಟೆಯ ಒಳ್ಪ್ಪಿನಿಂ:- ಮೇಲೆದ್ದುನಿಂತ ಸೊಗಸಾದ ಕೋಟೆ, )

ವಿವಿಧ ದೇವ ಗೃಹದಾಟಪಾಟದಿಂ|

(ವಿವಿಧರೀತಿಯ ದೇವಾಲಯಗಳು, ಆಟಪಾಟಗಳು,)

ಮಱುಗಿ ಬಟ್ಟೆಯರ ನೋೞ್ಪ ನೋಟದಿಂ||

(ದುಃಖದಿಂದ ನೋಡುತ್ತಿರುವ ದಾರಿಹೋಕರ ನೋಟಗಳು)

ಪಂಚರತುನದೊಳೆ ನೆರೆದ ಪಸರದಿಂ

(ಪಂಚರತ್ನಗಳಿಂದ ತುಂಬಿದ ಅಂಗಡಿಗಳು ಕುಬೇರರನ್ನೂ ಮೀರಿಸುವ ವಣಿಕರು)

ತೋರಣಂಗಳೊಳೆ ತೊಡರ್ದ ತಿಸರದಿಂ|

(ತೋರಣಗಳಲ್ಲಿ ಸೇರಿಕೊಂಡಿರುವ ಮೂರೆಳೆಯಹಾರಗಳಿಂದಲೂ )

ಧನದರನ್ನರಿವರೆನಿಪ ಪರದರಿಂ|

(ಧನದರನ್ನರ್ ಇವರೆನಿಪ=ಕುಬೇರನಂತಹವರಿವರು ಎನ್ನಿಸಿಕೊಂಡ ವ್ಯಾಪಾರಿಗಳಿಂದಲೂ )

ದೇವರನ್ನರಿವರೆನಿಪ ಬಿರುದರಿಂ||

(ದೇವರನ್ನರ್ ಇವರೆನಿಪ= ದೇವರಂತಹರಿವರು ಎನ್ನಿಸಿಕೊಂಡಿರುವ ಬಿರುದಾಂಕಿತರಿಂದಲೂ)

ನೆರೆಯೆ ಸೊಗಯಿಪಾ ಯೇಕಚಕ್ರಮಂ|

(ಪೂರ್ಣವಾಗಿ ಸೊಗಾಗಿರುವ ಏಕಚಕ್ರಪುರವನ್ನು)

ಮೆಚ್ಚಿದಂ ಹರಿಗನಮಿತ ವಿಕ್ರಮಂ| ೨೨||

(ಹರಿಗನು ಅಮಿತ ವಿಕ್ರಮಂ=ಎಲ್ಲೆಯಿಲ್ಲದ ಪರಾಕ್ರಮವುಳ್ಳ ಹರಿಗನು (ಅರ್ಜುನ-ಅರಿಕೇಸರಿಯು) ಮೆಚ್ಚಿದನು)

ಪದ್ಯ-೦೦:ಪದವಿಭಾಗ-ಅರ್ಥ:(ಮೇಲೆ ಕೊಟ್ಟಿದೆ)
ಪದ್ಯ-೦೦:ಅರ್ಥ:ಅಲ್ಲಿ ಸುಂದರವಾಗಿಕಾಣುವ ಕೃತಕಪರ್ವತಗಳಿಂದಲೂ ಕಲ್ಪವೃಕ್ಷವನ್ನೇ ಹೋಲುವ ಮರಗಳಿಂದಲೂ ನಂದನವನಗಳಲ್ಲಿ ಸುಳಿದಾಡುತ್ತಿರುವ ವಿರಹಿಗಳಿಂದಲೂ ಸುಗಂಧ ಬೀರುತ್ತಿರುವ ಹೂವುಗಳನ್ನು ಬಿಟ್ಟಿರುವ ಸುರಗಿಯ ಮರಗಳಿಂದಲೂ, ಸುತ್ತಲೂ ಹರಿಯುತ್ತಿರುವ ಸುಂದರವಾದ ಕೃತಕಪರ್ವತಗಳು, ಕಲ್ಪವೃಕ್ಷದಂತಿರುವ ಮರಗಳು, ನಂದನವನಗಳಲ್ಲಿ ವಿರಹಿಸುವ ವಿರಹಿಗಳು ಮನೋಹರವಾದ ವಾಸನೆಯಿಂದ ಕೂಡಿದ ಸುರಗಿಯ ಹೂವುಗಳು, ಅಲ್ಲಲ್ಲೆ ಹರಿಯುವ ನದಿಗಳು, ಎಲ್ಲೆಡೆಯಲ್ಲಿಯೂ ಕುಣಿಯುತ್ತಿರುವ ನವಿಲುಗಳು, ಕೊಬ್ಬಿ ಬೆಳೆದಿರುವ ಸುಗಂಧಯುಕ್ತವಾದ ಬತ್ತದ ಗದ್ದೆಗಳು, ಅದಕ್ಕೆ ಸುಳಿಯುತ್ತಿರುವ ಗಿಳಿಗಳ ಹಿಂಡು, ಸಮುದ್ರವನ್ನೂ ಹೀಯ್ಯಾಳಿಸುವಷ್ಟು ಆಳವಾದ ಕಂದಕ, ಮೇಲೆದ್ದುಸೊಗಸುವ ಕೋಟೆ, ವಿವಿಧರೀತಿಯ ದೇವಾಲಯಗಳು, ಬಹಳ ಆಸಕ್ತಿಯಿಂದ ನೋಡುತ್ತಿರುವ ದಾರಿಹೋಕರ ನೋಟಗಳು, ಪಂಚರತ್ನಗಳಿಂದ ತುಂಬಿದ ಅಂಗಡಿಗಳು ಕುಬೇರರನ್ನೂ ಮೀರಿಸುವ ವಣಿಕರು- ಇವುಗಳಿಂದ ಶೋಭಾಯಮಾನವಾದ ಏಕಚಕ್ರಪುರವನ್ನು ಅತ್ಯಂತ ಪರಾಕ್ರಮಿಯಾದ ಅರ್ಜುನನು ನೋಡಿ ಸಂತೋಷಪಟ್ಟನು. ಝರಿಯ ಪ್ರವಾಹಗಳಿಂದಲೂ ಎಲ್ಲ ಕಡೆಯಲ್ಲಿಯೂ ನಲಿದಾಡುತ್ತಿರುವ ಹೊಸನವಿಲುಗಳಿಂದಲೂ ಕೊಬ್ಬಿ ಬೆಳೆದು ವಾಸನೆಯನ್ನು ಬೀರುತ್ತಿರುವ ಕಂಪು ಬತ್ತದಿಂದಲೂ ಅಲ್ಲಿ ಸಂಚರಿಸುತ್ತಿರುವ ಗಿಳಿಯ ಹಿಂಡುಗಳ ಸಮೂಹದಿಂದಲೂ ಕುಡಿಯುವುದಕ್ಕೆ ಯೋಗ್ಯವಾದ ಸಮುದ್ರವೆನಿಸಿಕೊಂಡಿರುವ ಕಂದಕಗಳ ದೀರ್ಘತೆಯಿಂದಲೂ ಮೇಲಕ್ಕೆದ್ದ ಕೋಟೆಯ ಸೊಗಸಾಗಿ ಕಾಣುವ ಶ್ರೇಷ್ಠತೆಯಿಂದಲೂ, ಬಗೆ ಬಗೆಯ ದೇವಾಲಯ ಕ್ರೀಡಾವಿನೋದಗಳಿಂದಲೂ ದಾರಿಹೋಕರನ್ನು ಕರುಣೆಯಿಂದ ನೋಡುವ ನೋಟದಿಂದಲೂ ಅಯ್ದು ರೀತಿಯ ರತ್ನಗಳಿಂದ ತುಂಬಿದ ಅಂಗಡಿಗಳಿಂದಲೂ ತೋರಣಗಳಲ್ಲಿ ಸೇರಿಕೊಂಡಿರುವ ಮೂರೆಳೆಯಹಾರಗಳಿಂದಲೂ ಕುಬೇರನಂತಹವರಿವರು ಎನ್ನಿಸಿಕೊಂಡ ವ್ಯಾಪಾರಿಗಳಿಂದಲೂ ದೇವರಂತಹರಿವರು ಎನ್ನಿಸಿಕೊಂಡಿರುವ ಬಿರುದಾಂಕಿತರಿಂದಲೂ ಪೂರ್ಣವಾಗಿ ಸೊಗಾಗಿರುವ ಏಕಚಕ್ರಪುರವನ್ನು ಎಲ್ಲೆಯಿಲ್ಲದ ಪರಾಕ್ರಮವುಳ್ಳ ಹರಿಗನು (ಅರ್ಜುನ-ಅರಿಕೇಸರಿಯು) ಮೆಚ್ಚಿದನು
ವ|| || ಅಂತು ಮೆಚ್ಚಿ ತಮ್ಮುತಯ್ವರುಮಿನ್ನವು ಪೊೞಲ್ಗಳಿಲ್ಲೀ ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯಮೆಂಬ ನಾಲ್ಕು ಪೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಯಾಲೆಯೊಳ್ ಬೀಡಂ ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ-
ವಚನ:ಪದವಿಭಾಗ-ಅರ್ಥ: ಅಂತು ಮೆಚ್ಚಿ ತಮ್ಮುತ (ತಾವು) ಅಯ್ವರುಮ್ ಇನ್ನವು ಪೊೞಲ್ಗಳು (ಇಂತಹ- ಪಟ್ಟಣಗಳು) ಇಲ್ಲಿ ಈ ಪೊೞಲ್ಗೆ (ನಗರಕ್ಕೆ) ನಾಲ್ಕು ಯುಗದೊಳಂ ವಸುಮತಿ, ಪದ್ಮನಗರಂ, ಏಕಚಕ್ರಂ ಬಹುಧಾನ್ಯಂ ಎಂಬ ನಾಲ್ಕು ಪೆಸರಾದುದು ಏಂದು ಮನಂಗೊಂಡು(ಸಂತೋಷಪಡಟ್ಟು) ನೋಡುತ್ತುಂ ಬಂದು ಚತುರ್ವೇದಪಾರಗರ (ನಾಲ್ಕು ವೇದಗಳಲ್ಲಿಯೂ ಪಂಡಿತರಾದವರ) ಮನೆಯ ಮುಂದಣ ಚತುಶ್ಯಾಲೆಯೊಳ್ (ತೊಟ್ಟಿಯಲ್ಲಿ) ಬೀಡಂ ಬಿಟ್ಟು ಧರಾಮರ (ಧರೆಯ ಅಮರರು- ಬ್ರಾಹ್ಮಣರ) ವೇಷದೊಳೊಂದು ವರುಷಂ ಇರ್ಪ ಅನ್ನೆಗಂ ಒಂದು ದಿವಸಂ-
ವಚನ:ಅರ್ಥ:ಹೀಗೆ ಮೆಚ್ಚಿ ತಾವು ಐದು ಜನಗಳೂ, ಇಂತಹ ಪಟ್ಟಣಗಳು ಈ ಪಟ್ಟಣಕ್ಕೆ ನಾಲ್ಕು ಯುಗದಲ್ಲಿಯೂ ಕ್ರಮವಾಗಿ ವಸುಮತಿ, ಪದ್ಮನಗರ, ಏಕಚಕ್ರ, ಬಹುಧಾನ್ಯ ಎಂಬ ಹೆಸರುಗಳಾದುವು. ಎಂದು ಸಂತೋಷಪಟ್ಟು ನೋಡುತ್ತ ಬಂದು ನಾಲ್ಕು ವೇದಗಳಲ್ಲಿಯೂ ಪಂಡಿತರಾದವರೊಬ್ಬರ ಮನೆಯ ಮುಂಭಾಗದ ತೊಟ್ಟಿಯಲ್ಲಿ ಬೀಡುಬಿಟ್ಟು ಬ್ರಾಹ್ಮಣವೇಷದಿಂದ ಒಂದು ವರ್ಷ ಕಾಲವಿದ್ದರು. ಆಗ ಒಂದು ದಿನ-
ಕಂ|| ತುಂಬಿದ ರಕ್ತತೆಯಿಂ ನಿಜ
ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆ|
ಟ್ಟಂಬೋಲ್ ತೇಜಂ ಮಸುಳ್ವಿನ
ಮಂಬರಮಂ ಬಿಸುಟನಾಗಳಂಬುಜಮಿತ್ರಂ|| ೨೩||
ಪದ್ಯ-೨೩:ಪದವಿಭಾಗ-ಅರ್ಥ:(ಸೂರ್ಯನು)ತುಂಬಿದ ರಕ್ತತೆಯಿಂ (ಕೆಂಪು ಬಣ್ಣದಿಂದ- ಪ್ರೀತಿಯಿಂದ), ನಿಜ ಬಿಂಬಂ ವಾರುಣಿಯನು ಒಸೆದು ಸೇವಿಸೆ (ತನ್ನ ಬಿಂಬವು ವರುಣನ ದಿಕ್ಕಾದ ಪಶ್ಚಿಮವನ್ನು ಒಸೆದು ಪ್ರೀತಿಸಿ ಸೇರಲು-/ ವಾರುಣ -ಮದ್ಯವನ್ನು ಪ್ರೀತಿಸಿ ಸೇವಿಸೆ-ಕುಡಿಯಲು) ನಾಣ್ಗೆಟ್ಟಂಬೋಲ್ (ನಾಣ್ ಕೆಟ್ಟ ಅಂಬೊಲು-ನಾಚಿಕೆ ಬಿಟ್ಟವನಂತೆ) ತೇಜಂ ಮಸುಳ್ವಿನಂ (ಕಾಂತಿ ಕುಂದುತ್ತಿರಲು) ಅಂಬರಮಂ ಬಿಸುಟನು ಆಗಳ್ ಅಂಬುಜಮಿತ್ರಂ(ಆಕಾಶವನ್ನು ಬಿಟ್ಟನು - ಬಟ್ಟೆಯನ್ನು ಬಿಸಾಡಿದನು - ಆಗ ಕಮಲ ಸಖನಾದ ಸೂರ್ಯನು)
ಪದ್ಯ-೨೩:ಅರ್ಥ:ಆ ಒಂದು ದಿನ, ತುಂಬಿರುವ ಕೆಂಪು ಬಣ್ಣದಿಂದ ತನ್ನ ಬಿಂಬವು ಪಶ್ಚಿಮದಿಕ್ಕನ್ನು ಪ್ರೀತಿಸಿ ಸೇವೆಗಾಗಿ ಕಾಂತಿ ಮಂಕಾಗುತ್ತಿರಲು, ಕಮಲಸಖನಾದ ಸೂರ್ಯನು ಆಕಾಶವನ್ನು ಬಿಟ್ಟನು. (ಸೂರ್ಯನು ಅಸ್ತಮಿಸಿದನು ಎಂಬುದು ಭಾವ) (ಅಂಬರ = ಆಕಾಶ , ಬಟ್ಟೆ)
ಶ್ಲೇಷಾಲಂಕಾರ:ಶ್ಲೇಷೆ: ಪ್ರೇಮದಿಂದ/ ಅನುರಾಗದಿಂದ ಪ್ರೀತಿಸಿ ಮದ್ಯಪಾನವನ್ನು ಮಾಡಲು ನಾಚಿಕೆಗೆಟ್ಟವನಂತೆ ಆಗ ಬಟ್ಟೆಯನ್ನು ಬಿಸುಟನು.
ವ|| ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್-
ವಚನ:ಪದವಿಭಾಗ-ಅರ್ಥ:ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರ ಅರ್ಜುನ ನಕುಲ ಸಹದೇವರ್ ಪೋದರು ಅನ್ನೆಗಂ (ಹೋದರು. ಆಗ) ಇತ್ತ ಬೀಡಿನೊಳು (ಅವರು ಇದ್ದ ಮನೆಯಲ್ಲಿ) ಇರ್ದ (ಇದ್ದ )ಕೊಂತಿಯ ಭೀಮನ ಕರ್ಣೋಪಾಂತದೊಳ್ (ಕಿವಿಯೊಳಗೆ- ಹತ್ತಿರ)
ವಚನ:ಅರ್ಥ:ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಈ ಕಡೆ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ-
ಕಂ|| ಸಾರೆಯೊಳೞ್ವ ಮಹಾ ದ್ವಿಜ
ನಾರಿಯ ಮಮತಾವಿಪೂರಿತೋರ್ಜಿತ ರವದಿಂ|
ಕಾರುಣ್ಯಾಕ್ರಂದನಮನಿ
ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್|| ೨೪||
ಪದ್ಯ-೨೪:ಪದವಿಭಾಗ-ಅರ್ಥ:ಸಾರೆಯೊಳ್ ಅೞ್ವ (ಹತ್ತಿರದಲ್ಲಿ ಅಳುವ) ಮಹಾ ದ್ವಿಜನಾರಿಯ (ಮಹಾಬ್ರಾಹ್ಮಣನ ಹೆಂಡತಿಯ) ಮಮತಾ ವಿಪೂರಿತ ಓರ್ಜಿತ ರವದಿಂ (ಮಮತೆಯಿಂದ ಕೂಡಿದ ದೊಡ್ಡ ಶಬ್ದದಿಂದ,) ಕಾರುಣ್ಯ ಆಕ್ರಂದನಂ ಅನಿವಾರಿತಂ ಒರ್ಮೊದಲೆ (ಕೂಡಲೆ) ಬಂದು ತೀಡಿತ್ತು ಆಗಳ್ (ಕರುಣೆಯಿಂದ ಕೂಡಿದ ಅಳುವಿನ ಸದ್ದು, ತಡೆ ಇಲ್ಲದೆ ಕೂಡಲೆ ಬಂದು ಆಗ ಮುಟ್ಟಿತ್ತು )|
ಪದ್ಯ-೨೪:ಅರ್ಥ:ಹತ್ತಿರದಲ್ಲಿದ್ದ ಮಹಾಬ್ರಾಹ್ಮಣನ ಹೆಂಡತಿಯ ಮಮತೆ ಕರುಣೆಗಳಿಂದ ಕೂಡಿದ ತಡೆಯಿಲ್ಲದೆ ಅಳುವ ಶಬ್ದವು ಆಗ ಬಂದು (ಕುಂತಿ ಭೀಮರಿಗೆ) ಮುಟ್ಟಿತ್ತು.
ವ|| ಅದಂ ಕೇಳ್ದೇನಾನುಮೊಂದು ಕಾರಣಮಾಗಲೆವೇೞ್ಕುಮೀ ಪುಯ್ಯಲನಾರಯ್ದು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿ-
ವಚನ:ಪದವಿಭಾಗ-ಅರ್ಥ:ಅದಂ ಕೇಳ್ದು ಏನಾನುಮ್ (ಯಾವುದಾದರೂ) ಒಂದು ಕಾರಣಂ ಆಗಲೆವೇೞ್ಕುಂ (ಆಗಿರಲೇಬೇಕು) ಈ ಪುಯ್ಯಲನು (ಬೊಬ್ಬೆಯನ್ನು) ಆರಯ್ದು ಬರ್ಪೆನು (ವಿಚಾರಮಾಡಿ ಬರುವೆನು) ಎಂದು ಭೀಮನನು ಇರಿಸಿ ಕೊಂತಿ ತಾನೆ ಪೋಗಿ (ಹೋಗಿ)-
ವಚನ:ಅರ್ಥ:(ಆಳುವನ್ನು) ಅದನ್ನು ಕೇಳಿ ಇದಕ್ಕೆ ಏನಾದರೂ ಒಂದು ಕಾರಣವಿರಬೇಕು. ಈ ಪ್ರಲಾಪವನ್ನು ವಿಚಾರಮಾಡಿ ಬರುತ್ತೇನೆ ಎಂದು ಭೀಮನನ್ನು ಅಲ್ಲಿ ಬಿಟ್ಟು ಕುಂತಿಯು ಹೋಗಿ (ನೋಡಿದಳು)
ಚಂ|| ಅೞೆ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
ಯೞಿದು ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನಾದ ಶೋಕದಿಂ|
ಗೞಗೞ ಕಣ್ಣನೀರ್ ಸುರಿಯೆ ಚಿಂತಿಪ ಪಾರ್ವನ ಶೋಕದೊಂದು ಪೊಂ
ಪುೞಿಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ|| ೨೫||
ಪದ್ಯ-೨೫:ಪದವಿಭಾಗ-ಅರ್ಥ:ಅೞೆ (ಅಳುತ್ತಿರಲು) ಕುಡಲಾದ ಕೂಸು (ಕೊಡಲು -ಕನ್ಯಾದಾನಕ್ಕಿರುವ ಮಗಳು), ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ (ಬ್ರಾಹ್ಮಣನ ಹೆಂಡತಿ ನೆಲದಲ್ಲಿ ಹೊರಳುತ್ತಿರಲು) ಬಾಯೞಿದು ಕೊರಲ್ಗೆ ಪಾಯ್ದು (ಅತ್ತು, ಕೊರಳು ತಬ್ಬಿಕೊಂಡು) ಪರಿದಾಡುವ ಬಾಲಕನಾದ ಶೋಕದಿಂ (ದುಃಖದಿಂದ ಓಡಾಡುವ ಬಾಲಕನ್ನು)|

ಗೞಗೞ ಕಣ್ಣನೀರ್ ಸುರಿಯೆ (ಗಳಗಳನೆ ಕಣ್ಣೀರು ಸುರಿಯುತ್ತಿರಲು) ಚಿಂತಿಪ ಪಾರ್ವನ ಶೋಕದೊಂದು ಪೊಂಪುೞಿಯನೆ (ಚಿಂತಿಸುವ ಬ್ರಾಹ್ಮಣನ ಅಧಿವಾದ ಶೋಕದಲ್ಲಿರುವ ಸ್ಥಿತಿಯನ್ನು) ನೋಡಿ ನಾಡೆ(ಬಹಳ) ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ(ಬಹಳ ಕರುಣೆಯುಂಟಾಗಿರಲು ಕುಂತಿಯು ದುಃಖದಿಂದ (ಬ್ರಾಹ್ಮಣನನ್ನು ಕುರಿತು ಪ್ರಶ್ನಿಸಿದಳು)

ಪದ್ಯ-೨೫:ಅರ್ಥ:ಮದುವೆಗೆ ಇರುವ ಬ್ರಾಹ್ಮಣನ ಮಗಳು ಅಳುತ್ತಿದ್ದಳು. ಅವನ ಹೆಂಡತಿಯು ನೆಲದ ಮೇಲೆ ಹೊರಳಾಡುತ್ತಿದ್ದಳು. ಕೊರಳನ್ನು ತಬ್ಬಿಕೊಂಡು ಅತ್ತು ಓಡಾಡುವ ಬಾಲಕನು ತನಗುಂಟಾದ ದುಖದಿಂದ ಗಳಗಳನೆ ಕಣ್ಣೀರನ್ನು ಸುರಿಸುತ್ತಿದ್ದನು. ಚಿಂತಿಸುತ್ತಿದ್ದ ಬ್ರಾಹ್ಮಣನ ದುಖಾತಿಶಯವನ್ನು ನೋಡಿ ತನಗೆ ಬಹಳ ಕರುಣೆಯುಂಟಾಗಿರಲು ಕುಂತಿಯು ದುಖದಿಂದ (ಬ್ರಾಹ್ಮಣನನ್ನು ಕುರಿತು ಪ್ರಶ್ನಿಸಿದಳು-)
ವ|| ನಿನಗಿಂತೀ ಪಿರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತೆಂದಂ ಬಕನೆಂಬನೊರ್ವಸುರನೀ ಪೊೞಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚಮೊಂದು ಮನೆಯೊಳೆರಡೆಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮನದರ್ಕೆ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನದೊಂದು ದಿವಸ ತಪ್ಪಿದೊಡೀ ಪೊೞಲನಿತುಮಂ ತಿಂಬಂ ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳಾನುಮೆಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪೆಂಡಿತಿಯನೀವೆನೆಪ್ಪೊಡಾಕೆಯಿಂ ಬಿೞಿಯಮೀ ಕೂಸುಗಳಂ ನಡಪುವರಿಲ್ಲೀ ಮಗಳನೀವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ ಮಗನನೀವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದಱಂದೆನ್ನನೆ ಕುಡಲ್ವೇೞ್ಕುಮೆಂಬುದುಂ ಕೊಂತಿಯಿಂತೆಂದಳ್-
ವಚನ:ಪದವಿಭಾಗ-ಅರ್ಥ:ನಿನಗೆ ಇಂತು ಈ ಪಿರಿದು ಶೋಕಂ ಎಂತಾದುದು ಎಂಬುದುಂ (ನಿನಗೆ ಇಷ್ಟು ಈ ದೊಡ್ಡ ದುಃಖ ಹೇಗಾಯಿತು ಎನ್ನಲು,) ಆ ಪಾರ್ವಂ ಕೊಂತಿಗೆ ಇಂತು ಎಂದಂ(ಬ್ರಾಹ್ಮಣನು ಕುಂತಿಗೆ ಹೀಗೆ ಹೇಳಿದನು-) ಬಕನೆಂಬನು ಓರ್ವ ಅಸುರನು ಈ ಪೊೞಲ (ನಗರದ) ತೆಂಕಣ (ದಕ್ಷಿಣ) ಬೆಟ್ಟದೊಳು ಇರ್ಪನು ಆತಂಗೆ ನಿಚ್ಚಂ (ನಿತ್ಯವೂ) ಒಂದು ಮನೆಯೊಳ್ ಎರಡೆಮ್ಮೆವೋಱಿಯೊಳ್ ಪೂಡಿದ (ಎರಡು ಕೋಣ ಹೂಡಿದ -ಗಾಡಿಯಲ್ಲಿ) ಪನ್ನಿರ್ಕಂಡುಗದ ಅಕ್ಕಿಯ (ಹನ್ನರಡು ಖಂಡುಗದ ಅಕ್ಕಿಯ) ಕೂೞುಮನು (ಅನ್ನವನ್ನು) ಅದರ್ಕೆ ತಕ್ಕ ಪರಿಕರಮುಮನು ಒರ್ವ ಮಾನಸಂ (ತುಂಬಿದ ಹನ್ನೆರಡು ಖಂಡಗದಕ್ಕಿಯನ್ನೂ ಅದಕ್ಕೆ ಬೇಕಾಗುವಷ್ಟು ವ್ಯಂಜನಪದಾರ್ಥಗಳನ್ನೂ ಒಬ್ಬ ಮನುಷ್ಯನು) ಕೊಂಡು ಪೋಪನು (ಅವನ್ನು ತೆಗೆದುಕೊಂಡು ಹೋಗುತ್ತಾನೆ) ಅಂತು ಆತಂ ಬೆರಸ ಅದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನು (ಅವನ ಸಮೇತ ಆ ಪದಾರ್ಥವೆಲ್ಲವನ್ನೂ ತಿಂದರೂ ತೃಪ್ತನಾಗದೆ, ಹಲ್ಲನ್ನು ಕಡಿಯುತ್ತಾನೆ.) ಅದೊಂದು ದಿವಸ ತಪ್ಪಿದೊಡೆ ಈ ಪೊೞಲನು ಇತುಮಂ ತಿಂಬಂ (ಒಂದು ದಿವಸ ತಪ್ಪಿದರೂ ಈ ಪಟ್ಟಣವೆಲ್ಲವನ್ನೂ ತಿನ್ನುತ್ತಾನೆ) ನಾಳಿನ ಬಾರಿಯು ಎಮ್ಮ ಮೇಲೆ ಬಂದುದು; ಎಮ್ಮ ಮನೆಯೊಳು ಆನುಂ ಎಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಂ ಇಂತ ಈ ನಾಲ್ವರೆ ಮಾನಸರು (ನಾಲ್ಕೇ ಜನರು) ಎಮ್ಮ ಪೆಂಡಿತಿಯನು ಈವೆನೆ ಎಪ್ಪೊಡಾಕೆಯಿಂ ಬಿೞಿಯಮೀ ಕೂಸುಗಳಂ ನಡಪುವರಿಲ್ಲ (ಹೆಂಡತಿಯನ್ನು ಕೊಡೋಣವೆಂದರೆ ಅವಳು ಹೋದಬಳಿಕ ಈ ಮಕ್ಕಳನ್ನು ಸಾಕುವವರಿಲ್ಲ.) ಈ ಮಗಳನು ಈವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ (ಮಗಳನ್ನು ಕೊಡೋಣವೆಂದರೆ ಕನ್ಯೆ ಪರರ ವಸ್ತು;) ಮಗನನು ಈವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಂ ಅಕ್ಕುಂ( ಮಗನನ್ನು ಕೊಡೋಣವೆಂದರೆ ಸಂತತಿಯು ಹರಿಯುವುದು ಮತ್ತು ಪಿಂಡಹಾಕುವವರಿಲ್ಲ.) ಅದಱಂದ ಎನ್ನನೆ ಕುಡಲ್ವೇೞ್ಕುಂ ಎಂಬುದುಂ (ಆದುದರಿಂದ ನನ್ನನ್ನೇ ಕೊಡಬೇಕಾಗಿದೆ ಎಂದನು) ಕೊಂತಿಯಿಂತೆಂದಳ್- '
ವಚನ:ಅರ್ಥ:ನಿನಗೆ ಈಬಗೆಯ ಈ ದೊಡ್ಡ ದುಃಖ ಹೇಗಾಯಿತು ಎನ್ನಲು ಬ್ರಾಹ್ಮಣನು ಕುಂತಿಗೆ ಹೀಗೆ ಹೇಳಿದನು- ಬಕನೆಂಬ ರಾಕ್ಷಸನೊಬ್ಬನು ಈ ಪಟ್ಟಣಕ್ಕೆ ದಕ್ಷಿಣದ ಬೆಟ್ಟದಲ್ಲಿದ್ದಾನೆ. ಅವನಿಗೆ ನಿತ್ಯವೂ ಒಂದೊಂದು ಮನೆಯಿಂದ ಎರಡು ಕೋಣಗಳನ್ನು ಹೂಡಿರುವ ಗಾಡಿಯಲ್ಲಿ ತುಂಬಿದ ಹನ್ನೆರಡು ಖಂಡಗದಕ್ಕಿಯನ್ನೂ ಅದಕ್ಕೆ ಬೇಕಾಗುವಷ್ಟು ವ್ಯಂಜನಪದಾರ್ಥಗಳನ್ನೂ ಒಬ್ಬ ಮನುಷ್ಯನು ಅವನ್ನು ತೆಗೆದುಕೊಂಡು ಹೋಗುತ್ತಾನೆ. (ಬಕನು) ಅವನ ಸಮೇತ ಆ ಪದಾರ್ಥವೆಲ್ಲವನ್ನೂ ತಿಂದರೂ ತೃಪ್ತನಾಗದೆ ಹಲ್ಲನ್ನು ಕಡಿಯುತ್ತಾನೆ. ಒಂದು ದಿವಸ ತಪ್ಪಿದರೂ ಈ ಪಟ್ಟಣವೆಲ್ಲವನ್ನೂ ತಿಂದುಹಾಕುತ್ತಾನೆ. ನಾಳೆಯ ಸರದಿ ನನ್ನ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನೂ ನನ್ನ ಹೆಂಡತಿಯೂ ಮಗನೂ ಮಗಳೂ ಈ ನಾಲ್ಕೇ ಜನ (ಇರುವವರು). ಹೆಂಡತಿಯನ್ನು ಕೊಡೋಣವೆಂದರೆ ಅವಳು ಹೋದಬಳಿಕ ಈ ಮಕ್ಕಳನ್ನು ಸಾಕುವವರಿಲ್ಲ. ಮಗಳನ್ನು ಕೊಡೋಣವೆಂದರೆ ಕನ್ಯೆ ಪರರ ವಸ್ತು; ಮಗನನ್ನು ಕೊಡೋಣವೆಂದರೆ ಸಂತತಿಯು ಹರಿದು ಹೋಗುತ್ತದೆ ಮತ್ತು ಪಿಂಡಹಾಕುವವರಿಲ್ಲ. ಆದುದರಿಂದ ನನ್ನನ್ನೇ ಕೊಡಬೇಕಾಗಿದೆ ಎಂದನು. ಅದಕ್ಕೆ ಕುಂತಿಯು ಹೀಗೆಂದಳು
ಕಂ|| ನಿಮ್ಮೀ ನಾಲ್ವರೊಳೊರ್ವರು
ಮಿಮ್ಮಿಡುಕಲ್ವೇಡ ಮಕ್ಕಳೊಳರೆನಗಯ್ವರ್|
ತಮ್ಮೊಳಗೆಸೆವಯ್ವರೊಳಂ
ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ|| ೨೬||
ಪದ್ಯ-೨೬:ಪದವಿಭಾಗ-ಅರ್ಥ:ನಿಮ್ಮ ಈ ನಾಲ್ವರೊಳು ಒರ್ವರುಂ ಇಂ ಮಿಡುಕಲ್ವೇಡ (ಒಬ್ಬರೂ ಇನ್ನು ನಡುಗಬೇಡಿ) ಮಕ್ಕಳ್ ಒಳರ್ ಎನಗೆ ಅಯ್ವರ್ (ನನಗೆ ಅಯ್ದು ಮಕ್ಕಳಿದ್ದಾರೆ) ತಮ್ಮೊಳಗೆ ಎಸೆವ (ಶೋಭಿಸುವ) ಅಯ್ವರೊಳಂ ನಾಂ ಮಾಣದೆ (ತಪ್ಪದೆ) ಬಕನ ಬಾರಿಗ ಓರ್ವನಂ ಈವೆಂ (ಕೊಡುವೆನು)
ಪದ್ಯ-೨೬:ಅರ್ಥ:ನಿಮ್ಮ ಈ ನಾಲ್ಕು ಜನಗಳಲ್ಲಿ ಯಾರೂ ಇನ್ನು ಭಯಪಡಬೇಡಿ. ನನಗೆ ಅಯ್ದು ಮಕ್ಕಳಿದ್ದಾರೆ. ಶೋಭಿಸುವ ಆ ಅಯ್ವರಲ್ಲಿ ಒಬ್ಬನನ್ನು ನಾನು ಬಕನ ಸರದಿಗೆ ತಪ್ಪದೆ ಕೊಡುತ್ತೇನೆ. (ಎಂದಳು ಕುಂತಿ)
ವ||ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹಮೆಲ್ಲಾ ಜೀವಕ್ಕಂ ಸಮಾನಮೆಂಬುದುಂ ನೀಮಱೆಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮೆಂದು ಬಂದು ತದ್ವ ತ್ತಾಂತಮೆಲ್ಲಮಂ ಭೀಮಸೇನಂಗಱಿಪಿದೊಡೆ ನಾಳಿನುಣಿಸನೆನಗೆ ದೊರೆಕೊಳಿಸಿ ಬಂದುದು ಕರಮೊಳ್ಳಿತಾಯ್ತೆಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವ ತ್ತಾಂತಮೆಲ್ಲಮಂ ಕೇಳ್ದು ನಮಗೀ ಪೊೞಲೊಳೊಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-
ವಚನ:ಪದವಿಭಾಗ-ಅರ್ಥ:ಎಂಬುದುಂ (ಹೇಳಿದಾಗ) ಪಾರ್ವನು ಇಂತೆನಲ್ವೇಡ (ಹೀಗೆ ಹೇಳಬೇಡ) ಮಕ್ಕಳೊಳು ಆದ ಮೋಹಂ ಎಲ್ಲಾ ಜೀವಕ್ಕಂ ಸಮಾನಮೆಂಬುದುಂ (ಮಕ್ಕಳ ಮೇಲಿನ ಮೋಹ ಎಲ್ಲ ಜೀವಕ್ಕೂ ಸಮಾನ) ನೀಂ ಅಱೆಯಿರ್ (ಅರಿತಿಲ್ಲ) ಉಸಿರದಿರಿಂ (ಮಾತು ಬೇಡ) ಅದರ್ಕೆ ತಕ್ಕ ಸವಕಟ್ಟಂ (ತಕ್ಕ ಸಿದ್ಧತೆ ಮಾಡಿ) ಮಾಡಿಂ ಎಂದು, (ಕುಂತಿ)ಬಂದು ತದ್ (ಆ) ವೃತ್ತಾಂತಂ ಎಲ್ಲಮಂ ಭೀಮಸೇನಂಗೆ ಅಱಿಪಿದೊಡೆ (ಹೇಳಿದಾಗ ಅವನು) ನಾಳಿನ ಉಣಿಸುನು ಎನಗೆ ದೊರೆಕೊಳಿಸಿ (ದೊರಕಿಸಿಕೊಂಡು) ಬಂದುದು ಕರಂ (ಬಹಳ) ಒಳ್ಳಿತು ಆಯ್ತೆಂದು ನಗುತಿರ್ಪ ಅನ್ನೆಗಂ ಮತ್ತಿನ (ಉಳಿದ) ನಾಲ್ವರುಂ ಬಂದು ತದ್ವ- ಆ ತ್ತಾಂತಮೆಲ್ಲಮಂ ಕೇಳ್ದು ನಮಗೀ ಪೊೞಲೊಳು (ನಗರದಲ್ಲಿ) ಒಂದು ಪರೋಪಕಾರಾರ್ಥಂ ಸಯ್ಪಿನಿಂ (ಪುಣ್ಯದಿಂದ) ದೊರೆಕೊಂಡುದು ಎಂದು ಇರುಳೆಲ್ಲಂ (ರಾತ್ರಿಯೆಲ್ಲಾ) ಬಕನ ಪಡೆಮಾತನೆ (ಸುದ್ದಿಯನ್ನೇ) ನುಡಿಯುತ್ತಿರ್ಪ ಅನ್ನೆಗಂ ಆ ಸಮಯಕ್ಕೆ-
ವಚನ:ಅರ್ಥ:ಅದನ್ನು ಕೇಳಿ ಬ್ರಾಹ್ಮಣನು ಹೀಗೆ ಹೇಳಬೇಡ. ಮಕ್ಕಳ ಮೇಲಿನ ಮೋಹವು ಎಲ್ಲಾ ಜೀವಕ್ಕೂ ಸಮಾನ ಎಂದನು. ಕುಂತಿಯು ನಿಮಗೆ ತಿಳಿಯದು; ಮಾತಾಡಬೇಡಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿ, ಎಂದು ಹೇಳಿ ಆ ವಿಚಾರವೆಲ್ಲವನ್ನೂ ಭೀಮಸೇನನಿಗೆ ತಿಳಿಸಲು, ನಾಳೆಯ ಊಟವನ್ನು ನನಗೆ ಸಿದ್ಧಪಡಿಸಿ ಬಂದುದು ಬಹಳ ಒಳ್ಳೆಯದಾಯಿತು ಎಂದು ನಗುತ್ತಿರವಾಗ. ಉಳಿದ ನಾಲ್ಕು ಜನರೂ ಬಂದು ಆ ವಿಷಯವೆಲ್ಲವನ್ನೂ ಕೇಳಿ, ನಮಗೆ ಈ ಪಟ್ಟಣದಲ್ಲಿ ಇತರರಿಗೆ ಉಪಕಾರ ಮಾಡುವ ಸಂದರ್ಭವು ಪುಣ್ಯದಿಂದ ಪ್ರಾಪ್ತವಾಯಿತು ಎಂದು ರಾತ್ರಿಯೆಲ್ಲ ಬಕನ ವಿಷಯವಾದ ಮಾತನ್ನೇ ಆಡುತ್ತಿದ್ದರು. ಅಷ್ಟರಲ್ಲಿ-
ಕಂ|| ಓಡೆ ತಮೋಬಳಮಗಿದ
ಳ್ಳಾಡೆ ನಿಶಾಚರಬಲಂ ರಥಾಂಗಯುಗಂಗಳ್|
ಕೂಡೆ ಬಗೆ ಕೂಡೆ ನೇಸಱ್
ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ|| ೨೭||
ಪದ್ಯ-೨೭:ಪದವಿಭಾಗ-ಅರ್ಥ:ಓಡೆ ತಮೋಬಳಂ (ಕತ್ತಲೆಯ ಸೈನ್ಯ ಓಡಲು/ ಓಡಿತು.ಚೆನ್ನಾಗಿ ಬೆಳಗಾಯಿತು.); ಅಗಿದು ಅಳ್ಳಾಡೆ ನಿಶಾಚರಬಲಂ (ಹೆದರಿ ರಾಕ್ಷಸಸಮೂಹವು ನಡುಗಿತು) ರಥಾಂಗಯುಗಂಗಳ್ ಕೂಡೆ ಬಗೆ(ಮನಸ್ಸು) ಕೂಡೆ(ಚಕ್ರವಾಕಮಿಥುನವು ಕೂಡಲು ಮನಸ್ಸು ಮಾಡಿತು.); ನೇಸಱ್ (ಸೂರ್ಯ) ಮೂಡಿದುದು, ಬಕಂಗೆ ಮಿೞ್ತು ಮೂಡುವ ತೆಱದಿಂ (ಬಕನಿಗೆ ಮೃತ್ಯು ಮೂಡವ ರೀತಿಯಲ್ಲಿ.)
ಪದ್ಯ-೨೭:ಅರ್ಥ:ಕತ್ತಲೆಯ ರಾಶಿಯು ಓಡಿತು; ರಾಕ್ಷಸಸಮೂಹವು ಹೆದರಿ ನಡುಗಿತು; ಚಕ್ರವಾಕಮಿಥುನವು ಕೂಡಲು ಮನಸ್ಸು ಮಾಡಿತು; ಬಕನಿಗೆ ಸಾವು ಹುಟ್ಟುವ ರೀತಿಯಲ್ಲಿ ಸೂರ್ಯ ಮೂಡಿದನು.
ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಱಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೊೞಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದೆಡೆಗೆಯ್ತಂದು-
ವಚನ:ಪದವಿಭಾಗ-ಅರ್ಥ:ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಱಲೆಂದು (ತೋರಿಸಲೆಂದು) ಬಂದು ಪಾರ್ವನ (ಬ್ರಾಹ್ಮಣನ) ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ (ಬ್ರಾಹ್ಮಣನ ಮನೆಯ ಮುಂಭಾಗದಲ್ಲಿದ್ದ ಗಾಡಿಯ ಅನ್ನವನ್ನು ತೆಗೆದುಕೊಂಡು ನಿಂತನು.) ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ (ಬ್ರಾಹ್ಮಣಿತಿಯೂ ಬ್ರಾಹ್ಮಣನೂ ಹರಸಿ ತಲೆಯ ಮೇಲೆ ಅಕ್ಷತೆಯನ್ನು ಚೆಲ್ಲಿ ಕಳುಹಿಸಲು-) ಪೊೞಲಿಂ ಬಂಡಿಯನು ಅಟ್ಟಿಕೊಂಡು ರಕ್ಕಸನು ಇರ್ದೆಡೆಗೆ ಐಯ್ತಂದು (ಬಂದು)-
ವಚನ:ಅರ್ಥ:ಆಗ ಸಾಹಸಭೀಮನು ಪರಾಕ್ರಮವನ್ನು ತೋರಬೇಕೆಂದು ಬಂದು ಬ್ರಾಹ್ಮಣನ ಮನೆಯ ಮುಂಭಾಗದಲ್ಲಿದ್ದ ಗಾಡಿಯ ಅನ್ನವನ್ನು ತೆಗೆದುಕೊಂಡು ನಿಂತನು. ಬ್ರಾಹ್ಮಣಿತಿಯೂ ಬ್ರಾಹ್ಮಣನೂ ಹರಸಿ ತಲೆಯ ಮೇಲೆ ಅಕ್ಷತೆಯನ್ನು ಚೆಲ್ಲಿ ಕಳುಹಿಸಲು, ಪಟ್ಟಣದಿಂದ ಬಂಡಿಯನ್ನು ಹೊಡೆದುಕೊಂಡು ರಾಕ್ಷಸನಿದ್ದ ಸ್ಥಳಕ್ಕೆ ಭೀಮನು ಬಂದು/ ಬಂದನು.
ಕಂ|| ದಾಡೆಗಳನರೆಯೊಳಿಂಬಿಂ
ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|
ನೋಡುತ್ತಿರ್ದಾ ಬಕನಂ
ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮||
ಪದ್ಯ-೨೮:ಪದವಿಭಾಗ-ಅರ್ಥ:ದಾಡೆಗಳನು ಅರೆಯೊಳು (ಬಂಡೆಯಮೇಲೆ) ಇಂಬಿಂ (ಸಾವಕಾಶವಾಗಿ) ತೀಡುತ್ತುಂ (ಮಸೆಯುತ್ತಾ)ತೀವ್ರಮಾಗೆ (ಹರಿತವಾಗಲು) ಬಂಡಿಯ ಬರವಂ ನೋಡುತ್ತಿರ್ದ ಆ ಬಕನಂ ನಾಡೆಯೆ ಅಂತರದೆ (ಚೆನ್ನಾಗಿ ದೂರದಲ್ಲಿ) ಕಂಡು ಮುಳಿದಂ (ಸಿಟ್ಟುಗೊಂಡನು) ಭೀಮಂ
ಪದ್ಯ-೨೮:ಅರ್ಥ:ತನ್ನ ಕೋರೆಹಲ್ಲುಗಳನ್ನು ಬಂಡೆಯಮೇಲೆ ಮೇಲೆ ಹರಿತವಾಗುವ ಹಾಗೆ ನಿಧಾನವಾಗಿ ಮಸೆಯುತ್ತ ಬಂಡಿಯ ಬರವನ್ನೇ ಎದಿರುನೋಡುತ್ತಿದ್ದ ಆ ಬಕನನ್ನು ಬಹಳ ದೂರದಿಂದಲೇ ಕಂಡು ಭೀಮನು ಸಿಟ್ಟಾದನು.
ಕಂ|ಕಡೆಗಣ್ಣೊಳೆ ರಕ್ಕಸನಂ
ನಡೆ ನೋಡಿ ಕೊಲಲ್ಕೆ ಸತ್ತ್ವಮಪ್ಪಂತಿರೆ ಮುಂ|
ಪೊಡೆವೆಂ ಕೂೞಂ ಬೞಿಯಂ
ಪೊಡೆವೆಂ ರಕ್ಕಸನನೆಂದು ಸಾಹಸಭೀಮಂ|| ೨೯||
ಪದ್ಯ-೨೯:ಪದವಿಭಾಗ-ಅರ್ಥ:ಕಡೆಗಣ್ಣೊಳೆ ರಕ್ಕಸನಂ ನಡೆ ನೋಡಿ ಕೊಲಲ್ಕೆ (ಕೊಲ್ಲಲು) ಸತ್ತ್ವಮಪ್ಪಂತಿರೆ (ಶಕ್ತಿ ಬರುವಂತೆ) ಮುಂಪೊಡೆವೆಂ ಕೂೞಂ (ಕೂಳನ್ನು ಮುಂ -ಮೊದಲೇ ಪೊಡೆವೆಂ-ಹೊಡೆಯುವೆನು) ಬೞಿಯಂ ಪೊಡೆವೆಂ (ನಂತರ ಹೊಡೆಯುವೆನು) ರಕ್ಕಸನನು ಎಂದು ಸಾಹಸಭೀಮಂ
ಪದ್ಯ-೨೯:ಅರ್ಥ:ಕಡೆಗಣ್ಣಿನಿಂದಲೇ ರಾಕ್ಷಸನನ್ನು ಚೆನ್ನಾಗಿ ನೋಡಿ ಕೊಲ್ಲುವುದಕ್ಕೆ ಮೊದಲು ಅನ್ನವನ್ನು ಹೊಡೆಯುತ್ತೇನೆ (ತೃಪ್ತಿಯಾಗಿ ತಿನ್ನುತ್ತೇನೆ); ಆಮೇಲೆ ಆ ರಾಕ್ಷಸನನ್ನು ಹೊಡೆಯುತ್ತೇನೆ ಎಂದು ಸಾಹಸಭೀಮನು- (ಅನ್ನವನ್ನು ಹೊಡೆ-ತಿನ್ನು; ರಕ್ಕಸನನ್ನು ಹೊಡೆ- ಕೊಲ್ಲು)
ವ|| ಅಂತು ತನ್ನ ತಂದ ಬಂಡಿಯ ಕೂೞೆಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು ರಕ್ತಸನಿವನ ಪಾಂಗಂ ಮೆಚ್ಚಲಾರೆನೆನ್ನುಮಿಂತು ಸಮೆಯೆ ತುತ್ತುಗುಮೆಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು-
ವಚನ:ಪದವಿಭಾಗ-ಅರ್ಥ:ಅಂತು ತನ್ನ ತಂದ ಬಂಡಿಯ ಕೂೞೆ(ಳ್) ಎಲ್ಲಮಂ(ಅನ್ನವನೆಲ್ಲಾ) ಪತ್ತೆಂಟು (ಹತ್ತೆಂಟು) ತುತ್ತಿನೊಳೆ ಸಮೆಯೆ(ಮುಗಿಸುವಂತೆ) ತುತ್ತುವುದಂ (ನುಂಗುವುದನ್ನು) ಕಂಡು ರಕ್ತಸನು ಇವನ ಪಾಂಗಂ (ರೀತಿಯನ್ನು) ಮೆಚ್ಚಲಾರೆನು ಎನ್ನುಂ ಇಂತು ಸಮೆಯೆ (ಮೆಲ್ಲಗೆ) ತುತ್ತುಗುಮೆಂದು (ನುಂಗುವನೆಂದು) ಬಕಂ ಬಕವೇಷದಿಂ (ಬಕಪಕ್ಷಿಯ ರೂಪದಲ್ಲಿ) ಪೆಱಗಣ ದೆಸೆಗೆ (ಹಿಂದುಗಡೆ) ಮೆಲ್ಲನೆ ಓಸರಿಸಿ ಬಂದು-
ವಚನ:ಅರ್ಥ:ತಾನು ತಂದ ಬಂಡಿಯ ಅನ್ನವೆಲ್ಲವನ್ನೂ ಹತ್ತೆಂಟು ತುತ್ತುಗಳಲ್ಲಿಯೇ ಮುಗಿಸುವ ಹಾಗೆ ಬಾಯಿಗೆ ತುಂಬಿಕೊಳ್ಳುವುದನ್ನು ರಾಕ್ಷಸನು ನೋಡಿ ಇವನ ರೀತಿಯನ್ನು ನಾನು ಮೆಚ್ಚಲಾರೆ. ನನ್ನನ್ನು ಇವನು ಪೂರ್ಣವಾಗಿ ನುಂಗಿ ಬಿಡುವಂತಿದೆ, ಎಂದು ಬಕಪಕ್ಷಿಯ ರೂಪದಿಂದ ಹಿಂದುಗಡೆಗೆ ಮೆಲ್ಲಗೆ ಸರಿದು ಬಂದು-
ಕಂ||ಎರಡುಂ ಕೆಲನುಮನೆರಡುಂ
ಕರ ಪರಿಘದಿನಡಸಿ ಗುರ್ದಿ ಪೆಱಪಿಂಗುವನಂ|
ಮುರಿದಡಸಿ ಪಿಡಿದು ಘಟ್ಟಿಸಿ
ಪಿರಿಯರೆಯೊಳ್ ಪೊಯ್ದನಸಗವೊಯ್ಲಂ ಭೀಮಂ|| ೩೦||
ಪದ್ಯ-೩೦:ಪದವಿಭಾಗ-ಅರ್ಥ:ಬಕನು ಭೀಮನ ಎರಡುಂ ಕೆಲನುಮಂ (ಎರಡು ಪಕ್ಕಗಳನ್ನೂ)ಎರಡುಂ ಕರ-ಪರಿಘದಿನಂ(ಗದೆಯಿಂತಿದ್ದ ಎರಡು ಕೈಗಳಿಂದ) ಅಡಸಿ (ಹಿಡಿದು ) ಗುರ್ದಿ ಪೆಱಪಿಂಗುವನಂ (ಹಿಂದಕ್ಕೆ ಸರಿಯುವವನನ್ನು) ಮುರಿದಡಸಿ (ಹಿಂತಿರುಗಿ ಗಟ್ಟಿಯಾಗಿ) ಪಿಡಿದು ಘಟ್ಟಿಸಿ (ಅಪ್ಪಳಿಸಿ) ಪಿರಿಯ ಅರೆಯೊಳ್ ಪೊಯ್ದನು (ದೊಡ್ಡಬಂಡೆಯ ಮೇಲೆ ಹೊಡೆದನು,) ಅಸಗವೊಯ್ಲಂ (ಅಗಸಬಡಿದಂತೆ) ಭೀಮಂ
ಪದ್ಯ-೩೦:ಅರ್ಥ:ಬಕನು ಭೀಮನ, ಎರಡು ಪಕ್ಕಗಳನ್ನೂ ತನ್ನ ಗದೆಯಿಂತಿದ್ದ ಎರಡು ಕೈಗಳಿಂದ ಹಿಡಿದು ಗುದ್ದಿ ಹಿಂತಿರುಗಿದನು. ಹಾಗೆ ಹಿಂದಕ್ಕೆ ಸರಿಯುವವನನ್ನು ಭೀಮನು ಹಿಂತಿರುಗಿ ಭೀಮನು ಘಟ್ಟಿಯಾಗಿ ಹಿಡಿದುಕೊಂಡು ದೊಡ್ಡ ಬಂಡೆಯ ಮೇಲೆ ಬಡಿದು- ಅಗಸನು (ಬಟ್ಟೆಯನ್ನು) ಬಡಿತದಂತೆ ಬಡಿದನು
ವ|| ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೊಗೆದು ಸೆಣಸೆ-
ವಚನ:ಪದವಿಭಾಗ-ಅರ್ಥ:ಅಂತು ಪೊಯ್ದೊಡೆ (ಹೊಡೆದಾಗ) ಪೊಡೆಸೆಂಡಂ (ಪುಟಚೆಂಡು)ಪೊಯ್ದಂತೆ ಮೇಗೆ ಒಗೆದು ಸೆಣಸೆ-
ವಚನ:ಅರ್ಥ:ಹಾಗೆ ಹೊಡೆದಾಗ, ಬಕನು ಪುಟಚೆಂಡನ್ನು ಹೊಡೆದಂತೆ ಮೇಲಕ್ಕೆ ಹಾರಿದನು.
ಉ|| ಬಾರಿಯನಿಟ್ಟು ಕೂಡೆ ಪೊೞಲಂ ತವೆ ತಿಂದನನಾರ್ತರಿಲ್ಲಣಂ
ಬಾರಿಸಲಾರುಮಿನ್ ಜವನ ಬಾರಿಯೊಳಿಕ್ಕುವವನೆಂದು ಪರ್ವೆ ಭೋ|
ರ್ಭೋರೆನೆ ಬೀಸೆ ತದ್ವದನ ಗಹ್ವರದಿಂ ಬಿಸುನೆತ್ತರುಣ್ಮೆ ಭೋ
ರ್ಭೋರೆನೆ ಕೊಂದನಂಕದ ಬಳಾಧಿಕನಂ ಬಕನಂ ವೃಕೋದರಂ|| ೩೧||
ಪದ್ಯ-೩೧:ಪದವಿಭಾಗ-ಅರ್ಥ:ಬಾರಿಯನು ಇಟ್ಟು ಕೂಡೆ (ಸರದಿಯನ್ನು ಕಾದು, ಅವಕಾಶ ಸಿಕ್ಕ ಕೂಡಲೆ) ಪೊೞಲಂ (ಪಟ್ಟಣವನ್ನು) ತವೆ ತಿಂದನನು (ಪೂರಾ ತಿಂದವನನ್ನು) ಆರ್ತರಿಲ್ಲ (ಶಕ್ತರು ಆಗಲಿಲ್ಲ) ಅಣಂ ಬಾರಿಸಲ್ ಆರುಂ ಇನ್ (ಸ್ವಲ್ಪವೂ ತಡೆಯಲು ಯಾರೂ; ಇನ್ನು) ಜವನ ಬಾರಿಯೊಳು ಇಕ್ಕುವೆಂ (ಯಮನ ಬಾರಿಗೆ ಕೊಡುತ್ತೇನೆ,) ಎಂದು ಪರ್ವೆ (ಬಹಳ- ಹರುವೆ ವಿಸ್ತಾರ) ಭೋರ್ಭೋರೆನೆ ಬೀಸೆ ತದ್ ವದನ ಗಹ್ವರದಿಂ(ಬೋರ್ ಬೋರ್ ನೆ ಬೀಸಲು, ಅವನ ಬಾಯಿ-ಗವಿಯಿಂದ) ಬಿಸುನೆತ್ತರು ಉಣ್ಮೆ (ಬಿಸಿರಕ್ತ ಚಿಮ್ಮಲು) ಭೋರ್ಭೋರೆನೆ (ತಕ್ಷಣ) ಕೊಂದಂ ಅಂಕದ (ಬಲಿಷ್ಠ ಪ್ರಸಿದ್ಧ) ಬಳಾಧಿಕನಂ ಬಕನಂ (ಅಧಿಕಬಲಶಾಲಿಯಾದ ಬಕನನ್ನು ಕೊಂದನು) ವೃಕೋದರಂ (ಭೀಮನು)
ಪದ್ಯ-೦೦:ಅರ್ಥ:ಭೀಮನು ಸ್ವಲ್ಪ ಅವಕಾಶ ಮಾಡಿಕೊಂಡು ಅಲ್ಪಕಾಲದಲ್ಲಿ ಪಟ್ಟಣವನ್ನೇ ನಾಶಮಾಡಿದ ಇವನನ್ನು ಸ್ವಲ್ಪ ಮಾತ್ರವೂ ತಡೆಯಲು ಶಕ್ತರಾಗಲಿಲ್ಲ. ಇನ್ನು ಇವನನ್ನು ನಾನು ಯಮನ ಸರದಿಗೆ ಕಳುಹಿಸುತ್ತೇನೆ ಎಂದು, ಬಹಳವಾಗಿ ಭೋರ್ ಎಂದು ಶಬ್ದಮಾಡುತ್ತ ಅವನನ್ನು ಬೀಸಲು ಅವನ ಮುಖವೆಂಬ ಗವಿಯಿಂದ ಬಿಸಿರಕ್ತ ಚಿಮ್ಮಲು, ಅಧಿಕಬಲಶಾಲಿಯಾದ ಆ ಬಕಾಸುರನನ್ನು ಅತಿಶಯವಾದ ಶಕ್ತಿಯುಳ್ಳ ಭೀಮನು ಕ್ಷಣಮಾತ್ರದಲ್ಲಿ ಕೊಂದನು.
ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆೞೆವಂತೆ ರಕ್ಕಸನ ಕರಿಯ ಪಿರಿಯೊಡಲನೆೞೆದು ತಂದು ಪೊೞಲ ನಡುವಿಕ್ಕಿದಾಗಳ್ ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಗಳಂ ಪೊಯ್ಸಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗೞ್ದು ತಮ್ಮಾಳ್ದನುಮನಿಷ್ಟ ದೈವಮುಮಂ ಕೊಂಡಾಡುವಂತಯ್ವರುಮಂ ಕೊಂಡಾಡೆ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿಧಿತಟನಿಕಟ ವರ್ತಿಯಾದನಾಗಳೊರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲೆಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೋದಪಿರೆಂದೊಡುತ್ತರಾಪಥದೆ ಹಸ್ತಿನಪುರದಿಂ ಬಂದೆಮೆಂದೊಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನ ರಿರ್ಪಂದಮಾವುದೆಂದು ಬೆಸಗೊಳೆ-
ವಚನ:ಪದವಿಭಾಗ-ಅರ್ಥ:ಅಂತು ಕೊಂದು ನೀಲಗಿರಿಯನೆ ಪಿಡಿದೆೞೆವಂತೆ (ನೀಲಪರ್ವತವನ್ನೇ ಹಿಡಿದೆಳೆದಂತೆ) ರಕ್ಕಸನ ಕರಿಯ ಪಿರಿಯ ಒಡಲನು ಎೞೆದು (ದೊಡ್ಡ ದೇಹವನ್ನು ಎಳೆದು) ತಂದು ಪೊೞಲ (ಪಟ್ಟಣದ) ನಡುವೆ ಇಕ್ಕಿದಾಗಳ್ (ಇಟ್ಟಾಗ) ಪೊೞಲ್ ಎಲ್ಲಂ ಚೋದ್ಯಂಬಟ್ಟು (ಆಶ್ಚರ್ಯಪಟ್ಟು) ಬದ್ದವಣದ ಪಗಳಂ ಪೊಯ್ಸಿ (ಮಂಗಳ ವಾದ್ಯಗಳನ್ನು ಬಾಜನ ಮಾಡಿಸಿ) ಸಾಹಸಭೀಮನ ಸಾಹಸಮನು ಅಳವಲ್ಲದೆ ಪೊಗೞ್ದು (ಅಳತೆಯಿಲ್ಲದಷ್ಟು ಹೊಗಳಿ) ತಮ್ಮಾಳ್ದನುಮನು ಇಷ್ಟ ದೈವಮುಮಂ ಕೊಂಡಾಡುವಂತೆ ಅಯ್ವರುಮಂ ಕೊಂಡಾಡೆ (ತಮ್ಮ ಇಷ್ಟದೈವವನ್ನು ಕೊಂಡಾಡುವಂತೆ ಅಯ್ದು ಜನರನ್ನೂ ಕೊಂಡಾಡಲು) ಕೆಲವು ದಿವಸಂ ಇರ್ಪ ಅನ್ನೆಗಂ ಒಂದು ದಿವಸಂ ಆಶಿಶಿರಕಿರಣನು (ಉಷ್ಣ ಕಿರಣ ಸೂರ್ಯನು) ಅಪರಜಲನಿಧಿ ತಟನಿಕಟ ವರ್ತಿಯಾದನು (ಪಶ್ಚಿಮಮುದ್ರ ತಟಕ್ಕೆ ಹತ್ತಿರವಾದನು- ಸಂಜೆಯಾಯಿತು.) ಆಗಳ್ ಒರ್ವ ಪಾರ್ವಂ ವಿಸ್ತೀರ್ಣಜೀರ್ಣ (ಜೀರ್ಣ -ಹರಿದ) ಕರ್ಪಟ ಆವೃತ (ಸುತ್ತಿದ ಬಟ್ಟೆ) ಕಟಿತಟನುಂ(ಸೊಂಟದಲ್ಲಿ) ಆಗಿ ಬಂದು ಕಣ್ಮುಚ್ಚಲು (ನಿದ್ದೆಮಾಡಲು)ಎಡೆವೇಡೆ (ಸ್ಥಳ ಕೇಳೆ) ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನನಮಂ ಪಾಸಿ (ಹಾಸಿ) ಪಟ್ಟಿರ್ದನಂ (ಮಲಗಿದವನನ್ನು) ಧರ್ಮಪುತ್ರನು, ಆವ ನಾಡಿಂ ಬಂದಿರಿ ಎಲ್ಲಿಗೆ ಪೋದಪಿರಿ ಎಂದೊಡೆ ಉತ್ತರಾಪಥದೆ ಹಸ್ತಿನಪುರದಿಂ ಬಂದೆಂ ಎಂದೊಡೆ ಅಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನ ರಿರ್ಪಂದಂ ಆವುದು ಎಂದು ಬೆಸಗೊಳೆ (ಧರ್ಮರಾಜನು ಅಲ್ಲಿ ಪಾಂಡವರ ಸುದ್ದಿಯೇನು? ಧೃತರಾಷ್ಟ್ರ ದುರ್ಯೋಧನರಿರುವ ರೀತಿ ಯಾವುದು ಎಂದು ಕೇಳಿದನು. ಕೇಳಿದಾಗ)-
ವಚನ:ಅರ್ಥ:ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದೆಳೆದಂತೆ ರಾಕ್ಷಸನ ಕರಿಯ ಹಿರಿಯ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಮಂಗಳ ವಾದ್ಯಗಳನ್ನು ಬಾಜನ ಮಾಡಿಸಿ ಸಾಹಸಭೀಮನ ಪರಾಕ್ರಮವನ್ನು ಅಳತೆಯಿಲ್ಲದಷ್ಟು ಹೊಗಳಿ ತಮ್ಮ ಸ್ವಾಮಿಯನ್ನು ಇಷ್ಟದೈವವನ್ನು ಕೊಂಡಾಡುವಂತೆ ಅಯ್ದು ಜನರನ್ನೂ ಕೊಂಡಾಡಿದರು. ಅಲ್ಲಿ ಪಾಂಡವರು ಕೆಲವು ದಿನವಿರುವಷ್ಟರಲ್ಲಿ ಒಂದು ದಿನ ಸೂರ್ಯಾಸ್ತವಾಯಿತು. ಆ ಸಮಯದಲ್ಲಿ ಒಬ್ಬ ಬ್ರಾಹ್ಮಣನು ವಿಶೇಷವಾಗಿ ಹರಿದುಹೋದ ಬಟ್ಟೆಯಿಂದ ಮುಚ್ಚಿದ ಸೊಂಟ ಪ್ರದೇಶವನ್ನುಳ್ಳವನಾಗಿ ಬಂದು ಮಲಗಲು ಸ್ಥಳವನ್ನು ಕೇಳಿದನು. ಅವರು ಕೊಟ್ಟ ಜಿಂಕೆಯ ಚರ್ಮವನ್ನೇ ಹಾಸಿಕೊಂಡು ಮಲಗಿದ್ದ ಅವನನ್ನು ಧರ್ಮರಾಜನು ಯಾವ ನಾಡಿನಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದನು. ಅವನು ಉತ್ತರಾಪಥದ ಹಸ್ತಿನಾಪಟ್ಟಣದಿಂದ ಬಂದೆವು ಎಂದನು. ಧರ್ಮರಾಜನು ಅಲ್ಲಿ ಪಾಂಡವರ ಸುದ್ದಿಯೇನು? ಧೃತರಾಷ್ಟ್ರ ದುರ್ಯೋಧನರಿರುವ ರೀತಿ ಯಾವುದು ಎಂದು ಕೇಳಿದನು.
ಮ|| ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
ನನದೊಳ್ ಮೞ್ಗಿದರೆನ್ನ ಪುಣ್ಯಮಱಿಯರ್ ವೇಮಾಱ(?)ರಿನ್ನಾರೊ ಬೇ|
ರನೆ ಕಿೞ್ತಿಕ್ಕಿದೆನೀಗಳಾಯ್ತು ಧರೆ ನಿರ್ದಾಯಾದ್ಯಮೆಂದಾ ಸುಯೋ
ಧನನಾಳುತ್ತಿರೆ ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ|| ೩೨||
ಪದ್ಯ-೩೨:ಪದವಿಭಾಗ-ಅರ್ಥ: ಮನದೊಳ್ ಕೂರದ (ಪ್ರೀತಿಸದ) ಪಾಂಡುರಾಜಸುತರುಂ ಲಾಕ್ಷಾಗೃಹ ಉಗ್ರಾಗ್ನಿಯಾನನದೊಳ್ (ಉಗ್ರ ಅಗ್ನಿ ಮುಖದಲ್ಲಿ) ಮೞ್ಗಿದರ್(ಸತ್ತರು) ಎನ್ನ ಪುಣ್ಯಂ! ಅಱಿಯರ್ (ಅಸಾಧ್ಯರು) ವೇಮಾಱರ್ (ಮೋಸಹೋಗದವರು) ಇನ್ನಾರೊ (ಇನ್ನು ಯಾರು ಇದ್ದಾರೆ-) ಬೇರನೆ ಕಿೞ್ತಿಕ್ಕಿದೆಂ (ಬೇರನ್ನೇ ಕಿತ್ತು ಇಕ್ಕಿದೆನು) ಈಗಳಾಯ್ತು ಧರೆ ನಿರ್ದಾಯಾದ್ಯಮು ಎಂದು ಆ ಸುಯೋಧನನಾಳುತ್ತಿರೆ (ಈಗ ಈ ರಾಜ್ಯವು ದಾಯಾದಿಗಳಿಲ್ಲದ ಹಾಗಾಯಿತು- ಎಂದು ದುರ್ಯೋಧನನು ರಾಜ್ಯಭಾರ ಮಾಡುತ್ತಿರಲು,) ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ(ಪ್ರಸಿದ್ಧವಾದ ಹಸ್ತಿನಪುರವು ಯಾವಾಗಲೂ ಬಹಳ ಸಂತೋಷಭರಿತವಾಗಿದೆ ಎಂದನು)
ಪದ್ಯ-೩೨:ಅರ್ಥ:ಅದಕ್ಕೆ ಅವನು ನನ್ನ ಶತ್ರುಗಳಾದ ಪಾಂಡಸುತರು ಅರಗಿನ ಮನೆಯ ಭಯಂಕರವಾದ ಬೆಂಕಿಯ ಮುಖದಲ್ಲಿ ಸತ್ತರು. ಇದು ನನ್ನ ಪುಣ್ಯ, ಅಸಾಧ್ಯರಾದವರು, ಮೋಸಹೋಗದಿರುವವರು ಇನ್ನು ಯಾರಿದ್ದಾರೆ, ಎನ್ನುವ ಹಾಗೆ ಈ ವೈರಿಗಳನ್ನು ಬೇರುಸಹಿತ ಕಿತ್ತುಹಾಕಿದೆನು. ಈಗ ಈ ರಾಜ್ಯವು ದಾಯಾದಿಗಳಿಲ್ಲದ ಹಾಗಾಯಿತು- ಎಂದು ದುರ್ಯೋಧನನು ರಾಜ್ಯಭಾರ ಮಾಡುತ್ತಿದ್ದಾನೆ, ಪ್ರಸಿದ್ಧವಾದ ಹಸ್ತಿನಪುರವು ಯಾವಾಗಲೂ ಪೂರ್ಣವಾಗಿ ಸಂತೋಷಭರಿತವಾಗಿದೆ ಎಂದನು.
ವ|| ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೊಳಾದ ಪರಿಭವಮಂ ನೆನೆದಾತನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜನಂಗೆ ಪೆಂಡಿತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಪೂಣ್ದು ಪೋಗಿ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಠಿಗೆಯ್ಸೆ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿೞ್ತಬಾಳುಮತ್ತಪರಮುಮಭೇದ್ಯ ಕವಚಮುಂಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣೆಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಮಯ್ದು ದಿವ್ಯ ಶರಮೊಳವಾ ಬಿಲ್ಲನೇಱಿಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನನೆಚ್ಚನು ಮಾಕೆಗೆ ಗಂಡನಕ್ಕುಮೆಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲೆಂಬರದಱಿಂದೆನ್ನುಂ ಪಾಂಡವರೊಳರೆಂಬ ಮಾತುಗಳಂ ಬುದ್ಧಿಯೊಡೆಯರಾರಾನುಂ ನುಡಿವರ್ ದ್ರುಪದನುಮೀಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬೞಿಯನಟ್ಟಿದೊಡೆ ದುರ್ಯೋಧನಾದಿಗಳ್ ಮೊದಲಾದನೇಕ ದೇಶಾಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೊೞಲಾ ಪೊೞಲ್ಗೆ ವಂದಿರ್ದರಾನಲ್ಲಿಂದಂ ಬಂದೆನೆಂದು ಪೇೞೆ ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳಾಳೋಚಿಸಿ-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ (ಹೆಸರ) ಪಾಂಚಾಳದೇಶದ ಅರಸಂ ದ್ರುಪದನೆಂಬಂ- ದ್ರೋಣನೊಳಾದ ಪರಿಭವಮಂ (ಸೋಲನ್ನು) ನೆನೆದು ಆತನಂ ಕೊಲ್ವನ್ನನು ಒರ್ವ ಮಗನುಮಂ, ವಿಕ್ರಮಾರ್ಜನಂಗೆ ಪೆಂಡಿತಿಯಪ್ಪನ್ನಳು ಒರ್ವ ಮಗಳುಮಂ, ಪಡೆದಲ್ಲದಿದೆ ಇರೆನೆಂದು, ಪೂಣ್ದು (ಪ್ರತಿಜ್ಞೆಮಾಡಿ) ಪೋಗಿ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಠಿ ಗೆಯ್ಸೆ (ಮಾಡಿಸಿ) ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ (ಜ್ವಾಲೆಗಳ ಮಧ್ಯದಲ್ಲಿ) ಕಿೞ್ತಬಾಳುಂ (ರೆಯಿಂದ ಹೊರಸೆಳೆದ ಕತ್ತಿ) ಮತ್ತು ಪರಮುಂ ಅಭೇದ್ಯ ಕವಚಮುಂ ಬೆರಸಿ (ಕತ್ತಿ ಕವಚ ಸೇರಿ) ಒಗೆದ (ಶೋಭಿಸುವ)ಧೃಷ್ಟದ್ಯುಮ್ನನೆಂಬ ಮಗನುಮಂ; ಜ್ವಾಳಾಮಾಳಿನಿಯು ಒಗೆವಂತೆ ಒಗೆದ(ಶೋಭಿಸುವ) ಕೃಷ್ಣೆಯೆಂಬ ಮಗಳುಮಂ ಪಡೆದನು ಆ ಹೋಮಾಗ್ನಿಯೊಳ್; ಪುಟ್ಟಿದೊಂದು (ಅದರಲ್ಲಿಹುಟ್ಟಿದ) ದಿವ್ಯ ಚಾಪಮುಂ ಅಯ್ದು ದಿವ್ಯ ಶರಮೊಳವು(ಬಾಣಗಳಿದ್ದವು); ಬಿಲ್ಲನೇಱಿಸಿ (ಬಿಲ್ಲನ್ನು ಏರಿಸಿ) ಆ ಸರಲ್ಗಳಿಂದ (ಬಾಣಗಳೀಂದ) ಆತನ ಮನೆಯ ಮುಂದೆ ನಭದೊಳ್ (ಎತ್ತರದಲ್ಲಿ) ನಲಿನಲಿದಾಡುವ ಜಂತ್ರದ ಮೀನನೆಚ್ಚನುಂ (ಹೊಡೆದವನು) ಆಕೆಗೆ ಗಂಡನಕ್ಕುಂ ಎಂದು ಆದೇಶಮಂ(ಮಾಡಿದ್ದಾನೆ) ಅಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರು ಇಲ್ಲೆಂಬರು; ಅದಱಿಂದ (ಅದರಿಂದ) ಇನ್ನುಂ ಪಾಂಡವರು ಉಳರು ಎಂಬ(ಇದ್ದಾರ ಎಂಬ ಮಾತು) ಮಾತುಗಳಂ ಬುದ್ಧಿಯೊಡೆಯರು (ಬುದ್ಧಿವಂತರು) ಆರಾನುಂ (ಎಲ್ಲರೂ) ನುಡಿವರ್; ದ್ರುಪದನುವಂ ಈಗಳು ಆ ಕೂಸಿಂಗೆ (ಹುಡುಗಿಗೆ) ಸಯಂಬರಮಂ ಮಾಡಲೆಂದು ನೆಲದೊಳು ಉಳ್ಳ ಅರಸು ಮಕ್ಕಳೆಲ್ಲರ್ಗಂ (ಭೂಮಿಯ ಮೇಲಿರುವ) ಬೞಿಯನು ಅಟ್ಟಿದೊಡೆ (ದೂತರನ್ನು ಕಳಿಸಲು) ದುರ್ಯೋಧನಾದಿಗಳ್ ಮೊದಲಾದ ಅನೇಕ ದೇಶಾಶ್ವರರು ಎಲ್ಲಂ ಛತ್ರವತಿಯೆಂಬುದು ದ್ರುಪದನ ಪೊೞಲು (ನಗರ) ಆ ಪೊೞಲ್ಗೆ ವಂದಿರ್ದರು ಆನು ಅಲ್ಲಿಂದಂ ಬಂದೆನು ಎಂದು ಪೇೞೆ (ಹೇಳಲು- ಹೇಳಿದನು) ತದ್ ವೃತ್ತಾಂತಮ್ ಎಲ್ಲಮಂ ಕೇಳ್ದು ತಮ್ಮೊಳು ಆಳೋಚಿಸಿ-
ವಚನ:ಅರ್ಥ: ಅಷ್ಟೇ ಅಲ್ಲದೆ ಯಜ್ಞಸೇನನೆಂಬ ಮೊದಲಿನ ಹೆಸರಿನಿಂದ ಕೂಡಿದ ಪಾಂಚಾಲದೇಶದ ರಾಜನಾದ ದ್ರುಪದನೆಂಬುವನು ದ್ರೋಣನಿಂದಾದ ಸೋಲನ್ನು ನೆನೆಸಿಕೊಂಡು ಅವನನ್ನು ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದೇ ಇರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ಪಯೋವ್ರತನೆಂಬ ದೇವಋಷಿಯಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದನು. ಹೋಮಕುಂಡದಲ್ಲಿ ಧಗಧಗಿಸಿ ಉರಿಯುವ ಜ್ವಾಲೆಗಳ ಸಮೂಹದಲ್ಲಿ ಒರೆಯಿಂದ ಹೊರಸೆಳೆದ ಕತ್ತಿಯನ್ನೂ ಗುರಾಣಿಯನ್ನೂ (ಭೇದಿಸಲಾಗದ) ಒಡೆಯಲಾಗದ ಕವಚವನ್ನೂ ಕೂಡಿಕೊಂಡು ಧೃಷ್ಟದ್ಯುಮ್ನನೆಂಬ ಮಗನೂ ಜ್ವಾಲಾಮಾಲಿನೀದೇವಿಯಂತಿರುವ ಕೃಷ್ಣೆಯೆಂಬ ಮಗಳೂ ಹುಟ್ಟಿದರು. ಆ ಹೋಮಾಗ್ನಿಯಲ್ಲಿಯೇ ಒಂದು ಶ್ರೇಷ್ಠವಾದ ಬಿಲ್ಲೂ ಅಯ್ದು ಶ್ರೇಷ್ಠವಾದ ಬಾಣಗಳೂ ಉದ್ಭವಿಸಿದವು. ಆ ಬಿಲ್ಲನ್ನು ಹೆದೆಯೇರಿಸಿ ಆ ಬಾಣಗಳಿಂದ ಆತನ ಮನೆಯ ಮುಂದೆ ಆಕಾಶದಲ್ಲಿ ನಲಿನಲಿದು ಆಡುವ ಯಂತ್ರದ ಮೀನನ್ನು ಹೊಡೆಯುವವನು ಆಕೆಗೆ ಗಂಡನಾಗುತ್ತಾನೆ ಎಂಬುದು (ಆದೇಶ) ನಿಯಮ. ಅಂತಹ ಸಾಹಸ ಪುರುಷನು ವಿಕ್ರಮಾರ್ಜುನನಲ್ಲದೆ ಬೇರೆಯವರಿಲ್ಲ ಎನ್ನುವುದರಿಂದ ಪಾಂಡವರು ಇನ್ನೂ ಇದ್ದಾರೆ ಎಂಬ ಮಾತುಗಳನ್ನು ಬುದ್ಧಿವಂತರೆಲ್ಲರೂ ಹೇಳುತ್ತಿದ್ದಾರೆ. ಈಗ ದ್ರುಪದನು ಆ ಕನ್ಯೆಗೆ ಸ್ವಯಂವರವನ್ನು ಮಾಡಬೇಕೆಂದು ಭೂಮಿಯಲ್ಲಿರುವ ಎಲ್ಲ ರಾಜಕುಮಾರರಿಗೂ ದೂತರ ಮೂಲಕ ಸಮಾಚಾರವನ್ನು ಕಳುಹಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ರಾಜರುಗಳೆಲ್ಲ ದ್ರುಪದನ ಆ ಛತ್ರಪತಿ ಎಂಬ ಪಟ್ಟಣಕ್ಕೆ ಬಂದಿದ್ದಾರೆ. ನಾನು ಅಲ್ಲಿಂದಲೇ ಬಂದೆ ಎಂದು ಹೇಳಿದನು. ಆ ವೃತ್ತಾಂತವನ್ನೆಲ್ಲ ಕೇಳಿ ಪಾಂಡವರು ತಮ್ಮಲ್ಲಿ ಆಲೋಚಿಸಿದರು.
ಮ|| ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಮುಗ್ರಾರಿ ವಂ
ಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱ ತದ್ದ್ರೌಪದೀ|
ಲಲನಾವ್ಯಾಜದಿನೀಗಳೊಂದೆ ಪೊೞಲೊಳ್ ಸಂದಿರ್ದ ಭಾಸ್ವತುಹೃ
ದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ|| ೩೩||
ಪದ್ಯ-೩೩:ಪದವಿಭಾಗ-ಅರ್ಥ:ತಲೆಯೊಳ್ ಸೀರೆಯನು ಇಕ್ಕಿ ಕೆಮ್ಮನೆ ಇನಿತಂ (ತಲೆಯ ಮೇಲೆ ಬಟ್ಟೆಯನ್ನೂ ಹಾಕಿಕೊಂಡು ಎಷ್ಟು ಕಾಲ ಸುಮ್ಮನೆ) ಪೂಣ್ದು ಇರ್ಪಂ ಉಗ್ರಾರಿ ವಂಶ (ಉಗ್ರ ಶತ್ರುವಂಶದ)ಲತಾವಲ್ಲರಿಗಳ್ಗೆ(ಬಳ್ಳಿಗಳ ಕುಡಿಗಳಿಗೆ) ದಾವಶಿಖಿವೊಲ್ ಮೆಯ್ ತೋಱಿ (ಕಾಡುಗಿಚ್ಚಿನಹಾಗೆ ಪ್ರಕಟವಾಗಿ) ತದ್ ದ್ರೌಪದೀ ಲಲನಾ ವ್ಯಾಜದಿಂ(ನೆವದಿಂದ) ಈಗಳು ಒಂದೆ ಪೊೞಲೊಳ್ ಸಂದಿರ್ದ (ಪಟ್ಟಣದಲ್ಲಿ ಸೇರಿರುವ) ಭಾಸ್ವತ್ (ಹೊಳೆಯುವ) ಹೃದ್ಬಲಕಂ (ಹೃತ್ ಬಲ- ಮಿತ್ರ ಸೈನ್ಯಕ್ಕೂ) ಮಾರ್ವಲಕಂ (ಮಾರ್ ಬಲ-ಶತ್ರುಸೈನ್ಯಕ್ಕೂ) ಗುಣಾರ್ಣವ (ಅರ್ಜುನನ ಹೇಳಿದ -ನಮ್ಮ) ಶರಪ್ರಾಗಲ್ಭ್ಯಮಂ ತೋಱುವಂ(ಬಾಣಕೌಶಲವನ್ನು ತೋರಿಸೋಣ )
ಪದ್ಯ-೩೩:ಅರ್ಥ:ಅರ್ಜುನ ಹೇಳಿದ, ನಾವು ತಲೆಯ ಮೇಲೆ ಬಟ್ಟೆಯನ್ನೂ ಹಾಕಿಕೊಂಡು (ತಲೆಮರೆಸಿಕೊಂಡು) ಎಷ್ಟು ಕಾಲ ಸುಮ್ಮನೆ ಪ್ರತಿಜ್ಞೆ ಮಾಡಿಕೊಂಡಿರುವುದು? ಉಗ್ರ ಶತ್ರುಗಳೆಂಬ ಬಳ್ಳಿಯ ಕುಡಿಗಳಿಗೆ ಕಾಡುಗಿಚ್ಚಿನಂತೆ ನಮ್ಮನ್ನು ಪ್ರಕಟವಾಗಿ ಆ ದ್ರೌಪದೀಕನ್ಯೆಯ ನೆವದಿಂದ, ಈಗ ಒಂದೇ ಪಟ್ಟಣದಲ್ಲಿ ಸೇರಿರುವ ಪ್ರತಾಪಶಾಲಿಗಳಾದ ಮಿತ್ರವರ್ಗಕ್ಕೂ ಶತ್ರುವರ್ಗಕ್ಕೂ ನಮ್ಮ ಬಾಣಕೌಶಲವನ್ನು ತೋರಿಸೋಣ.

ದ್ರುಪದನ ರಾಜ್ಯಕ್ಕೆ ಪಾಂಡವರ ಪ್ರವೇಶ[ಸಂಪಾದಿಸಿ]

ವ|| ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರೋಪದೇಶ ಮೊಡಂಬಡೆ ಪಾಂಡವರೇಕಚಕ್ರದಿಂ ಪೊಱಮಟ್ಟು ಶಕುನಂಗಳೆಲ್ಲಮುತ್ತರೋತ್ತರಂ ತಿರ್ದುವಿನ ಮುತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾ ನದೀತಟನಿಕಟವರ್ತಿಯಪ್ಪಂಗದರ್ಪಣವೆಂಬಡವಿಯೊಳಗನೆ ಬರೆವರೆ ದಿನಕರಬಿಂಬಾಂಬುಜಮಂಬರಸರೋವರದಿಂ ಪತ್ತುವಿಡುವುದುಂ ಕವಿದ ಕೞ್ತಲೆಯಗುರ್ವಾಗೆ ತಮೋಪಶಮನನಿಮಿತ್ತಮುರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ವಾಗಳಾ ಬನಮನಾಳ್ವ ಕುಬೇರನಾಯಕ ನಂಗದಪರ್ಣನೆಂಬ ಗಂಧರ್ವಂ ಜಳಕ್ರೀಡೆಯಾಡುತಿರ್ದನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳುಚ್ಚಳಿಸುವ ನೀರ ಸಪ್ಪುಳುಮಂ ಕೇಳ್ದು ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆಯ್ತಂದು-
ವಚನ:ಪದವಿಭಾಗ-ಅರ್ಥ:(ದ್ರುಪದನ ಛತ್ರವತೀಪುರಕ್ಕೆ ಹೋಗುವುದೆಂದು) ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ (ತಾವು ಯೋಚಿಸಿದ ರೀತಿಯಲ್ಲಿ) ಪರಾಶರಮುನೀಂದ್ರ (ವ್ಯಾಸಮನಿ)ಉಪದೇಶ ಮೊಡಂಬಡೆ (ಹೊಂದಲು) ಪಾಂಡವರು ಏಕಚಕ್ರದಿಂ ಪೊಱಮಟ್ಟು (ಹೊರಟು) ಶಕುನಂಗಳೆಲ್ಲಂ ಉತ್ತರೋತ್ತರಂತೆ ಇರ್ದುವಿನಂ (ಇರಲು) ಉತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾ ನದೀತಟ ನಿಕಟವರ್ತಿಯಪ್ಪ ಅಂಗದರ್ಪಣವೆಂಬ ಅಡವಿಯೊಳಗನೆ ಬರೆವರೆ (ಬರುವಾಗ) ದಿನಕರಬಿಂಬ ಅಂಬುಜಂ (ಸೂರ್ಯಕಿರಣವೆಂಬ ಕಮಲ) ಅಂಬರ ಸರೋವರದಿಂ ಪತ್ತುವಿಡುವುದುಂ(ಬಿಟ್ಟುಬಿಡು-ತೊಲಗಲು) ಕವಿದ ಕೞ್ತಲೆಯು ಅಗುರ್ವಾಗೆ (ಕತ್ತಲೆಯು ಭಯಾನಕವಾಗಲು) ತಮ ಉಪಶಮನ ನಿಮಿತ್ತಂ (ಕತ್ತಲೆಯನ್ನು ಹೋಗಿಸಲು)ಉರಿವ ಕೊಳ್ಳಿಯಂ ಪಿಡಿದು (ಹಿಡಿದು) ಜಗುನೆಯಂ (ಯಮುನೆಯನ್ನು) ಪಾಯ್ವಾಗಳು (ದಾಟುವಾಗ) ಆ ಬನಮನಾಳ್ವ ಕುಬೇರನಾಯಕನ್ ಅಂಗದಪರ್ಣನೆಂಬ ಗಂಧರ್ವಂ ಜಳಕ್ರೀಡೆಯಾಡುತಿರ್ದನ್ (ಆ ಕಾಡನ್ನು ಆಳುತ್ತಿದ್ದ ಕುಬೇರನಾಯಕನಾಗಿದ್ದ ಅಂಗದಪರ್ಣನೆಂಬ ಹೆಸರಿನ ಗಂಧರ್ವನು ನೀರಾಟವಾಡುತ್ತಿದ್ದನು. ) ಅನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ/ಅರ್ಜುನನ ಪಾದ ಅಭಿಘಾತದೊಳ್ ಉಚ್ಚಳಿಸುವ (ಕಾಲಿನ ತುಳಿತದಿಂದ ಮೇಲಕ್ಕೆ ಹಾರುವ) ನೀರ ಸಪ್ಪುಳುಮಂ ಕೇಳ್ದು, ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆ (ಸುಮ್ಮನಿರದೆ-ತಡೆಯದೆ) ಎಯ್ತಂದು (ಬಂದು)-
ವಚನ:ಅರ್ಥ:(ದ್ರುಪದನ ಛತ್ರವತೀಪುರಕ್ಕೆ ಹೋಗುವುದೆಂದು) ಎಂದು ನಿಶ್ಚಯಿಸಿ, ತಾವು ಯೋಚಿಸಿದ ರೀತಿಯಲ್ಲಿ ವ್ಯಾಸಮಹರ್ಷಿಗಳ ಉಪದೇಶವೂ ಹೊಂದಲು, ಪಾಂಡವರು ಏಕಚಕ್ರಪುರದಿಂದ ಹೊರಟರು. ಶಕುನಗಳೆಲ್ಲ ತಮ್ಮ ಅಭಿವೃದ್ಧಿಯನ್ನೇ ಸೂಚಿಸಿದುವು. ಉತ್ತರದಿಕ್ಕಿಗೆ ಅಭಿಮುಖವಾಗಿ ಪ್ರಯಾಣಮಾಡಿ ಕೆಲವು ದಿವಸವಾದ ಮೇಲೆ ಯಮುನಾನದಿಯ ದಡಕ್ಕೆ ಹತ್ತಿರವಿರುವ ಅಂಗದಪರ್ಣವೆಂಬ ಕಾಡನಲ್ಲಿ ಬರುವಾಗ, ಸೂರ್ಯಾಸ್ತವಾಯಿತು. ಕವಿದ ಕತ್ತಲೆಯು ಭಯಾನಕವಾಗಲು, ಕತ್ತಲೆಯನ್ನು ಹೋಗಲಾಡಿಸಲು, ಉರಿಯುವ ಕೊಳ್ಳಿಯನ್ನು ಹಿಡಿದು ಯಮುನಾನದಿಯನ್ನು ಹಾಯುವಾಗ, ಆ ಕಾಡನ್ನು ಆಳುತ್ತಿದ್ದ ಕುಬೇರನಾಯಕನಾಗಿದ್ದ ಅಂಗದಪರ್ಣನೆಂಬ ಹೆಸರಿನ ಗಂಧರ್ವನು ನೀರಾಟವಾಡುತ್ತಿದ್ದನು. ಎಲ್ಲರಿಗಿಂತ ಮುಂದೆ ಬರುತ್ತಿದ್ದ ವಿಕ್ರಮಾರ್ಜುನನ ಕಾಲಿನ ತುಳಿತದಿಂದ ಮೇಲಕ್ಕೆ ಹಾರುವ ನೀರಿನ ಶಬ್ದವನ್ನು ಕೇಳಿ ಅವರು ಹಿಡಿದಿದ್ದ ಕೊಳ್ಳಿಯ ಬೆಳಗನ್ನು ನೋಡಿ ಬೆಳಕನ್ನು ಕಂಡ ಪತಂಗದ ಹುಳುವಿನಂತೆ ಸುಮ್ಮನಿರದೆ ಅವರ ಮೇಲೆ ಬಿದ್ದನು.
ಮ|| ಬನಮೆನ್ನಾಳ್ವ ಬನಂ ನಿಶಾಬಲದಿಂತಸ್ಮದ್ಬಲಂ ಧೂರ್ತನಯ್
ನಿನಗೀ ಪೊೞ್ತೞೊಳಿತ್ತ ಬರ್ಪದಟನಿಂತಾರಿತ್ತರೆಂದಾಂತೊಡಾ|
ತನನಾ ಕೊಳ್ಳಿಯೊಳಿಟ್ಟೊಡಂತದು ಲಯಾಂತೋಗ್ರಾಗ್ನಿಯಂತೞ್ವೆ ಬಂ
ದೆನಸುಂ ಮಾಣದೆ ಬಾಗಿದಂ ಪದಯುಗಕ್ಕಾರೂಢಸರ್ವಜ್ಞನಾ|| ೩೪ ||
ಪದ್ಯ-೩೪:ಪದವಿಭಾಗ-ಅರ್ಥ:ಬನಂ ಎನ್ನ ಆಳ್ವ ಬನಂ, (ನಾನು ಆಳುವ ವನವು) ನಿಶಾಬಲದಿ ಇಂತು ಅಸ್ಮದ್ಬಲಂ(ಕತ್ತಲೆಯಬಲ ಮತ್ತೆ ಅಸ್ಮತ -ನನ್ನಬಲ) ಧೂರ್ತನಯ್ ನಿನಗೆ ಈ ಪೊೞ್ತೞೊಳ್ ಇತ್ತ ಬರ್ಪ ಅದಟನು (ಈ ಹೊತ್ತಿನಲ್ಲಿ ಇತ್ತ ಬರುವಷ್ಟು ಪರಾಕ್ರಮವನ್ನು) ಇಂತು ಆರಿತ್ತರ್ ಎಂದು ಆಂತೊಡ್ (ಪ್ರತಿಭಟಿಸಲು) ಆತನನು ಆ ಕೊಳ್ಳಿಯೊಳು ಇಟ್ಟೊಡೆ (ಕೊಳ್ಳಿಯಿಂದ ಹೊಡೆದಾಗ) ಅಂತದು ಲಯಾಂತ ಉಗ್ರ ಅಗ್ನಿಯಂತೆ ಅೞ್ವೆ (ಅದು ಪ್ರಳಯಕಾಲದ ಘೋರವಾದ ಬೆಂಕಿಯಂತೆ ಸುಡಲು) ಬಂದು ಎನಸುಂ ಮಾಣದೆ (ತಡೆಯದೆ) ಬಾಗಿದಂ (ನಮಿಸಿದನು) ಪದಯುಗಕ್ಕೆ ಆರೂಢಸರ್ವಜ್ಞನಾದ ಅರ್ಜುನನ(ಅವನು ಸ್ವಲ್ಪವೂ ಸಾವಕಾಶ ಮಾಡದೆ ಬಂದು ಆರೂಢಸರ್ವಜ್ಞನಾದ ಅರ್ಜುನನ ಎರಡು ಪಾದಗಳಿಗೆ ನಮಸ್ಕಾರ ಮಾಡಿದನು)
ಪದ್ಯ-೩೪:ಅರ್ಥ:ಈ ಕಾಡು ನಾನು ಆಳುವ ಕಾಡು. ಈ ರಾಕ್ಷಸ ಬಲವಿದು ನನ್ನ ಸೈನ್ಯ, ನೀನು ದುಷ್ಟನಾಗಿದ್ದೀಯೆ; ಈ ಹೊತ್ತಿನಲ್ಲಿ ಹೀಗೆ ಬರುವಷ್ಟು ಪರಾಕ್ರಮವನ್ನು ನಿನಗೆ ಕೊಟ್ಟವರಾರು ಎಂದು ಪ್ರತಿಭಟಿಸಲು, ಅರ್ಜುನನು ಅವನನ್ನು ಆ ಕೊಳ್ಳಿಯಿಂದಲೇ ಹೊಡೆದನು. ಅದು ಪ್ರಳಯಕಾಲದ ಘೋರವಾದ ಬೆಂಕಿಯಂತೆ ಸುಟ್ಟಿತು. ಅವನು ಸ್ವಲ್ಪವೂ ಸಾವಕಾಶ ಮಾಡದೆ ಬಂದು ಆರೂಢಸರ್ವಜ್ಞನಾದ ಅರ್ಜುನನ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು
ವ|| ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸಱುವರುಮಂ ತನ್ನ ಬೀಡಿಂಗೊಡಗೊಂಡೊಯ್ದತಿ ಪ್ರೀತಿಯಿಂ ಬಿರ್ದನಿಕ್ಕಿ-
ವಚನ:ಪದವಿಭಾಗ-ಅರ್ಥ:ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸು ಅಱುವರುಮಂ (ಪ್ರತಿಭಟಿಸಿ ನಮಿಸಿದ ಗಂಧರ್ವನು ಕುಂತಿಯಿಂದ ಕೂಡಿದ ಆರು ಜನವನ್ನೂ) ತನ್ನ ಬೀಡಿಂಗೆ ಒಡಗೊಂಡೊಯ್ದು ಅತಿ ಪ್ರೀತಿಯಿಂ ಬಿರ್ದನಿಕ್ಕಿ (ಪ್ರೀತಿಯಿಂದ ಆತಿಥ್ಯವನ್ನು ಮಾಡಿದನು.)-
ವಚನ:ಅರ್ಥ:ಹಾಗೆ ಪ್ರತಿಭಟಿಸಿ ನಮಿಸಿದ ಗಂಧರ್ವನು ಕುಂತಿಯಿಂದ ಕೂಡಿದ ಆರು ಜನವನ್ನೂ ತನ್ನ ಬೀಡಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಪ್ರೀತಿಯಿಂದ ಆತಿಥ್ಯವನ್ನು ಮಾಡಿದನು. ಅಲ್ಲದೆ
ಕಂ|| ಇದು ನಿನ್ನ ಕೊಟ್ಟ ತಲೆ ನಿನ
ಗಿದನಿತ್ತಪೆನೆಂದು ನುಡಿಯಲಾಗದು ಮಾರ್ಕೊ|
ಳ್ಳದಿರೆಂದು ಗಿಳಿಯ ಬಣ್ಣದ
ಕುದುರೆಯನಯ್ನೂರನಿತ್ತನಂಗದಪರ್ಣಂ|| ೩೫||
ಪದ್ಯ-೩೫:ಪದವಿಭಾಗ-ಅರ್ಥ:ಇದು ನಿನ್ನ ಕೊಟ್ಟ (ಉಳಿಸಿದ) ತಲೆ. ನಿನಗೆ ಇದನು ಇತ್ತಪೆನೆಂದು (ಕೊಡುತ್ತೇನೆಂದು) ನುಡಿಯಲಾಗದು ಮಾರ್ಕೊಳ್ಳದಿರು (ಮರುನುಡಿಯಬೇಡ) ಎಂದು ಗಿಳಿಯ ಬಣ್ಣದ ಕುದುರೆಯನು ಅಯ್ನೂರನು ಇತ್ತನು ಅಂಗದಪರ್ಣಂ. (ಪ್ರತಿಮಾತಾಡಬೇಡ ಎಂದು ಅಂಗದಪರ್ಣನು ಗಿಳಿಯ ಬಣ್ಣದ ಅಯ್ನೂರು ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು.)
ಪದ್ಯ-೩೫:ಅರ್ಥ:ಇದು ನೀನು ಕೊಟ್ಟ (ಬದುಕಿಸಿದ-ಉಳಿಸಿದ) ತಲೆ ಇದನ್ನು ನಿನಗೆ ಪ್ರತಿಯಾಗಿ ಕೊಡುತ್ತಿದ್ದೇನೆಂದು ಹೇಳಕೂಡದು. ಪ್ರತಿಮಾತಾಡಬೇಡ ಎಂದು ಅಂಗದಪರ್ಣನು ಗಿಳಿಯ ಬಣ್ಣದ ಅಯ್ನೂರು ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು.
ವ|| ಇತ್ತೊಡಿವ(ನ್ನ)ನ್ನೆಗಮೆಮಗಾಗಿರ್ಕೆಂದು ಪ್ರಿಯಂ ನುಡಿದಂಗದಪರ್ಣನನಿರವೇೞ್ದು ಮಾರ್ತಾಂಡೋದಯಮೆ ನಿಜೋದಯಮಾಗೆ ಪಯಣಂಬೋಗಿ-
ವಚನ:ಪದವಿಭಾಗ-ಅರ್ಥ:ಇತ್ತೊಡೆ ಇವನ್ನ ಅನ್ನಗಂ ಎಮಗಾಗಿ ಇರ್ಕೆ ( ಇವು ನಮ್ಮದಾಗಿ ಇರಲಿ) ಎಂದು ಪ್ರಿಯಂ ನುಡಿದು ಅಂಗದಪರ್ಣನನು ಇರವೇೞ್ದು (ಅಲ್ಲಿರಲು ಹೇಳಿ) ಮಾರ್ತಾಂಡ (ಸೂರ್ಯ) ಉದಯಮೆ ನಿಜ (ತಮ್ಮ) ಉದಯಮಾಗೆ ಪಯಣಂಬೋಗಿ (ಉದಯವಾಗಲು ಪ್ರಯಾಣ ಹೋಗಿ)-
ವಚನ:ಅರ್ಥ:ನಾವು ಅಪೇಕ್ಷಿಸುವವರೆಗೆ ಇವು ನಮ್ಮದಾಗಿ ನಿಮ್ಮಲ್ಲಿರಲಿ ಎಂದು ಪ್ರಿಯವಾದ ಮಾತನಾಡಿ ಅಂಗದಪರ್ಣನನ್ನು ಅಲ್ಲಿರಲು ಹೇಳಿ, ಸೂರ್ಯೋದಯವೇ ತಮ್ಮ ಅಭಿವೃದ್ಧಿ ಸೂಚಕವಾಗಿರಲು ಪಾಂಡವರು ಮುಂದೆ ಪ್ರಯಾಣ ಮಾಡಿ-
ಕಂ|| ಪುಣ್ಯನದೀನದ ನಗ ಲಾವ(ರಾರ)
ವಣ್ಯ ವಿಭೂಷಣೆಯನೊಲ್ದು ನೋಡುತ್ತುಮಿಳಾ|
ಪುಣ್ಯ ಸ್ತ್ರೀಯಂ ಸಂಚಿತ
ಪುಣ್ಯರ್ ಪಾಂಚಾಲದೇಶಮಂ ಪುಗುತಂದರ್|| ೩೬||
ಪದ್ಯ-೩೬:ಪದವಿಭಾಗ-ಅರ್ಥ: ಪುಣ್ಯನದೀ ನದ ನಗರ ಅರಣ್ಯ ವಿಭೂಷಣೆಯನು ಒಲ್ದು (ಸುಂದರ ಅಲಂಕಾರವನ್ನು ಒಲಿದು) ನೋಡುತ್ತುಂ ಇಳಾ(ಭೂಮಿ)ಪುಣ್ಯ ಸ್ತ್ರೀಯಂ ಸಂಚಿತಪುಣ್ಯರ್ ಪಾಂಚಾಲದೇಶಮಂ ಪುಗುತಂದರ್ (ಪುಗು-ಹೊಗು; ಹೊಕ್ಕರು)
ಪದ್ಯ-೩೬:ಅರ್ಥ:ಪವಿತ್ರವಾದ ನದಿ, ನದ- ಬೆಟ್ಟದಿಂದ ಬೀಳುವ ನದಿ-ಜರಿ, ನಗರ, (ಅರಣ್ಯ) ಸುಂದರ ಅಲಂಕಾರವನ್ನು ಪಡೆದ ಪುಣ್ಯಭೂಮಿಯೂ ಆದ ಆ ಪ್ರದೇಶಗಳನ್ನು ಒಲಿದು ನೋಡುತ್ತ ಪುಣ್ಯಶಾಲಿಗಳಾದ ಪಾಂಡವರು ಪಾಂಚಾಲ ದೇಶವನ್ನು ಹೊಕ್ಕರು.
ವ||ಅಂತು ತದ್ವಿಷಯವಿಳಾಸಿನಿಗೆ ಪಿಡಿದ ಕನಕಚ್ಛತ್ರದಂತೆ ಸೊಗಯಿಸುವ ಛತ್ರವತೀಪುರದ ಪೊಱವೊೞಲನೆಯ್ತರ್ಪಾಗಳ್-
ವಚನ:ಪದವಿಭಾಗ-ಅರ್ಥ: ಅಂತು ತದ್ ವಿಷಯ (ಆ ದೇಶ) ವಿಳಾಸಿನಿಗೆ ಪಿಡಿದ (ಹಿಡಿದ) ಕನಕಚ್ಛತ್ರದಂತೆ (ಚಿನ್ನದ ಕೊಡೆಯಂತೆ) ಸೊಗಯಿಸುವ ಛತ್ರವತೀ ಪುರದ(ನಗರದ) ಪೊಱವೊೞಲನು(ಹೊರಹೊಳಲನು- ಹೊರಭಾಗವನ್ನು) ಅಯ್ತರ್ಪಾಗಳ್ (ಐತರು ಐತರ್ಪ ಆಗಳ್- ಬಂದುಸೇರಿದಾಗ)-
ವಚನ:ಅರ್ಥ:ಆ ದೇಶವೆಂಬ ಸ್ತ್ರೀಗೆ ಹಿಡಿದ ಚಿನ್ನದ ಕೊಡೆಯಂತೆ ಸೌಂದರ್ಯದಿಂದ ಕೂಡಿದ ಛತ್ರಪತಿಪುರದ ಹೊರವಲಯವನ್ನು ಬಂದು ಸೇರಿದಾಗ,
ಉ|| ಪಾಡುವ ತುಂಬಿ ಕೋಡುವ ಪುೞಿಲ್ ನಡಪಾಡುವ ರಾಜಹಂಸೆ ಬಂ
ದಾಡುವ ತೊಂಡುವೆಣ್ಬುರುಳಿ ತೀಡುವ ತೆಂಬೆರಲೊಲ್ದು ನಲ್ಲರೊಳ್|
ಕೂಡುವ ನಲ್ಲರಾರೆರ್ದೆಗಮಾರ ಮನಕ್ಕಮನಂಗರಾಗಮಂ
ಮಾಡೆ ಮನಕ್ಕೆ ಬಂದುವರಿಕೇಸರಿಗಲ್ಲಿಯ ನಂದನಾಳಿಗಳ್|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ಪಾಡುವ ತುಂಬಿ, ಕೋಡುವ ಪುೞಲ್ (ತೋಪು), ನಡಪಾಡುವ ರಾಜಹಂಸೆ, ಬಂದು ಆಡುವ ತೊಂಡುವೆಣ್ಬುರುಳಿ (ಹೆಣ್ಣು ಬುರುಳಿ-ಗಿಳಿ) ತೀಡುವ ತೆಂಬೆರಲು (ತಂಗಾಳಿ) ಒಲ್ದು ನಲ್ಲರೊಳ್ ಕೂಡುವ ನಲ್ಲರ್ ಆರ ಎರ್ದೆಗಂ ಆರ ಮನಕ್ಕಂ ಅನಂಗರಾಗಮಂ (ಪ್ರೇಮಭಾವವನ್ನು) ಮಾಡೆ ಮನಕ್ಕೆ ಬಂದುವು ಅರಿಕೇಸರಿಗೆ ಅಲ್ಲಿಯ ನಂದನ ಆಳಿಗಳ್ (ತೋಟದ ಸಾಲುಗಳು)|
ಪದ್ಯ-೩೭:ಅರ್ಥ:. ಅಲ್ಲಿ ಹಾಡುತ್ತಿರುವ ದುಂಬಿ, ತಂಪಾಗಿರುವ ತೋಪು, ನಡೆದಾಡುತ್ತಿರುವ ರಾಜಹಂಸೆ, ಬಂದು ಮಾತನಾಡುವ ತುಂಟಹೆಣ್ಣು ಗಿಳಿ, ಬೀಸುವ ತಂಗಾಳಿ, ಪ್ರೇಯಸಿಯರಲ್ಲಿ ಕೂಡುವ ಪ್ರಿಯರು – ಇವು ಯಾರ ಹೃದಯಕ್ಕೂ ಯಾರದೇ ಮನಸ್ಸಿಗೂ ಪ್ರೇಮಭಾವವನ್ನುಂಟುಮಾಡುತ್ತಿರಲು ಅಲ್ಲಿಯ ತೋಟದ ಸಾಲುಗಳು ಅರಿಕೇಸರಿಯ/ಅರ್ಜುನನ ಮನಸ್ಸನ್ನ ಆಕರ್ಷಿಸಿದುವು.
ವ|| ಅಂತು ನೋಡುತ್ತಂಬರೆವರೆ
ವಚನ:ಪದವಿಭಾಗ-ಅರ್ಥ:ಅಂತು ನೋಡುತ್ತಂ ಬರೆವರೆ
ವಚನ:ಅರ್ಥ:ಅಂತು ನೋಡುತ್ತಾ ಬರುವಾಗ-
ಚಂ|| ಮದಗಜಬೃಂಹಿತಧ್ವನಿ ತುರಂಗಮಹೇಷಿತಘೋಷಮಾದಮೊ
ರ್ಮೊದಲೆ ಪಯೋಧಿಮಂಥನಮಹಾರವಮಂ ಗೆಲೆ ತಳ್ತ ಬಣ್ಣವ|
ಣ್ಣದ ಗುಡಿ ತೊಂಬೆಗೊಂಚಲೆಲೆಯಿಕ್ಕಿದ ಕಾವಣಮೆಲ್ಲಿಯುಂ ಪೊದ
ೞ್ದೊದವಿರೆ ಕಣ್ಗೆ ಕಂಡುವಖಿಳಾವನಿಪಾಳರ ಬಿಟ್ಟ ಬೀಡುಗಳ್|| ೩೮||
ಪದ್ಯ-೦೦:ಪದವಿಭಾಗ-ಅರ್ಥ:ಮದಗಜ ಬೃಂಹಿತ (ಘೀಳಿಡುವ) ಧ್ವನಿ, ತುರಂಗಮ ಹೇಷಿತ ಘೋಷಂ (ಕುದುರೆಗಳ ಕೆನೆತದ ಶಬ್ದ) ಆದಂ ಓರ್ಮೊದಲೆ (ಒಟ್ಟಿಗೆ) ಪಯೋಧಿ ಮಂಥನ ಮಹಾರವಮಂ (ಸಮುದ್ರಮಥನದ ಮಹಾ ಶಬ್ದ) ಗೆಲೆ (ಮೀರಿಸಲು) ತಳ್ತ (ಸೇರಿರುವ)ಬಣ್ಣವಣ್ಣದ ಗುಡಿ (ಬಾವುಟ) ತೊಂಬೆ(ಕುಚ್ಚು) ಗೊಂಚಲು ಎಲೆಯಿಕ್ಕಿದ ಕಾವಣಂ (ಹಸಿರೆಲೆ ಚಪ್ಪರ) ಎಲ್ಲಿಯುಂ ಪೊದೞ್ದು ಒದವಿರೆ(ವ್ಯಾಪಿಸಿ ಇರಲು) ಕಣ್ಗೆ ಕಂಡುವ ಅಖಿಳ ಅವನಿಪಾಳರ (ಅವನಿಪಾಲರು - ಎಲ್ಲಾ ರಾಜರ) ಬಿಟ್ಟ ಬೀಡುಗಳ್(ವಸತಿಗಳು)|
ಪದ್ಯ-೦೦:ಅರ್ಥ:ದ್ರುಪದನ ಛತ್ರಪತಿಪುರದ ಹೊರವಲಯದಲ್ಲಿ, ಮದ್ದಾನೆಗಳ ಘೀಳಿಡುವ ಸದ್ದು, ಕುದುರೆಗಳ ಕೆನೆತದ ಸದ್ದು, ಅವು ಒಟ್ಟುಗೂಡಿ ಸಮುದ್ರಮಥನದ ದೊಡ್ಡ ಶಬ್ದವನ್ನು ಮೀರಿದ್ದಿತು. ಕುದುರೆಗಳ ಕೆನೆತದ ಶಬ್ದ ಕುಚ್ಚು, ಹೂಗೊಂಚಲು ಚಿಗುರುಗಳಿಂದ ಕೂಡಿದ ಚಪ್ಪರಗಳು ಎಲ್ಲೆಲ್ಲಿಯೂ ವ್ಯಾಪಿಸಿ ಒಪ್ಪಿದ್ದವು. ಸಮಸ್ತ ರಾಜರು ಇಳಿದುಕೊಂಡಿದ್ದ ಬೀಡುಗಳು ಕಣ್ಣಿಗೆ ಕಂಡವು.
ವ|| ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆ-
ವಚನ:ಪದವಿಭಾಗ-ಅರ್ಥ:ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆ-
ವಚನ:ಅರ್ಥ:ಹಾಗೆ ನೋಡುತ್ತಲೂ ಮೆಚ್ಚುತ್ತಲೂ ಬರುತ್ತಿರಲು-
ಉ|| ಈ ತ್ರಿಜಗಂಗಳೊಳ್ ನೆಗೞ್ದ ಪೆಂಡಿರುಮಂ ಗೆಲೆವಂದ ಪದ್ಮಿನೀ
ಪತ್ರವಿಚಿತ್ರನೇತ್ರೆಗೆ ಸಯಂಬರದೊಳ್ ವರನಪ್ಪೆವಾದೊಡೀ|
ಧಾತ್ರಿಯನಾಳ್ವೆಮಾಮೆ ವಲಮೆಂದು ತೆರಳ್ದ ಸಮಸ್ತ ರಾಜಕ
ಚ್ಛತ್ರದಿನಂದು ಛತ್ರವತಿಯೆಂಬಭಿಧಾನಮನಾಳ್ದುದಾ ಪೊೞಲ್|| ೩೯||
ಪದ್ಯ-೩೯:ಪದವಿಭಾಗ-ಅರ್ಥ:ಈ ತ್ರಿಜಗಂಗಳೊಳ್ ನೆಗೞ್ದ ಪೆಂಡಿರುಮಂ ಗೆಲೆವಂದ (ಈ ಮೂರು ಲೋಕದ ಸುಪ್ರಸಿದ್ಧ ಹೆಂಗಸರನ್ನೂ ಅಂದದಲ್ಲಿ ಗೆದ್ದ) ಪದ್ಮಿನೀ ಪತ್ರವಿಚಿತ್ರ ನೇತ್ರೆಗೆ(ಕಮಲಪತ್ರದಂತೆ ಸುಂದರ ಕಣ್ಣುಳ್ಳ ದ್ರೌಪದಿಗೆ) ಸಯಂಬರದೊಳ್ ವರನಪ್ಪೆವಾದೊಡೆ (ವರನಾಗುವುದಾದರೆ) ಈ ಧಾತ್ರಿಯನು ಆಳ್ವೆಂ, ಆಮೆವಲಂ(ನಾವೇಸರಿ) (ನಾವು ನಿಶ್ಚಯವಾಗಿಯೂ ಈ ಭೂಮಿಯನ್ನು ಆಳುವವರೇ ಸರಿ) ಎಂದುದು(ಎಂದುಕೊಂಡರು.) ತೆರಳ್ದ (ಅಲ್ಲಿ ಸೇರಿದ) ಸಮಸ್ತ ರಾಜಕಚ್ಛತ್ರದಿಂ(ಎಲ್ಲಾ ಬಿಳ್ಗೊಡೆಗಳಿಂದ) ಅಂದು ಛತ್ರವತಿಯೆಂಬ ಅಭಿಧಾನಮನು (ಹೆಸರನ್ನು) ಆಳ್ದುದು ಸಾರ್ಥಕವಾಗಿ ಧರಿಸಿತು) ಆ ಪೊೞಲ್ (ಆ ನಗರ)
ಪದ್ಯ-೩೯:ಅರ್ಥ:ಈ ಮೂರು ಲೋಕದ ಸುಪ್ರಸಿದ್ಧ ಹೆಂಗಸರನ್ನೂ ಅಂದದಲ್ಲಿ ಗೆದ್ದ, ಕಮಲಪತ್ರದಂತೆ ಸುಂದರ ಕಣ್ಣುಳ್ಳ ದ್ರೌಪದಿಗೆ ಸ್ವಯಂವರದಲ್ಲಿ ವರನಾಗುವುದಾದರೆ ನಾವು ನಿಶ್ಚಯವಾಗಿಯೂ ಈ ಭೂಮಿಯನ್ನು ಆಳುವವರೇ ಸರಿ, ಎಂದುಕೊಂಡುದು (ರಾಜಸಮೂಹ). ಒಟ್ಟಾಗಿ ಅಲ್ಲಿ ಸೇರಿದ ಎಲ್ಲಾ ಬಿಳ್ಗೊಡೆಗಳಿಂದ ಅಂದು ಆ ನಗರ ಛತ್ರವತಿಯೆಂಬ ಹೆಸರನ್ನು ಸಾರ್ಥಕವಾಗಿ ಧರಿಸಿತು.
ವ|| ಅಂತು ಸೊಗಯಿಸುವ ಪೊೞಲಂ ಪೊಕ್ಕೆಲ್ಲಿಯುಂ ಬೀಡು ಬಿಡಿಲೆಡೆವಡೆಯದೊಂದು ಭಾರ್ಗವಪರ್ಣಶಾಲೆಯೊಳೆಡೆ ಮಾಡಿಕೊಂಡು ಬ್ರಹ್ಮಲೋಕಮಿರ್ಪಂತಿರ್ದ ಬ್ರಹ್ಮಸಭೆಯೊಳಗೆ ದೇವ ಬ್ರಾಹ್ಮಣರಾಗಿರ್ದರನ್ನೆಗಂ ದ್ರುಪದನಿತ್ತಲ್-
ವಚನ:ಪದವಿಭಾಗ-ಅರ್ಥ: ಅಂತು ಸೊಗಯಿಸುವ (ಸುಂದರ) ಪೊೞಲಂ (ನಗರವನ್ನು) ಪೊಕ್ಕು ಎಲ್ಲಿಯುಂ ಬೀಡು ಬಿಡಲು ಎಡೆವಡೆಯದೆ (ಸ್ಥಳ ಸಿಕ್ಕದೆ) ಒಂದು ಭಾರ್ಗವ ಪರ್ಣಶಾಲೆಯೊಳ್ ಎಡೆ ಮಾಡಿಕೊಂಡು (ಒಂದು ಕುಂಬಾರನ ಗುಡಿಸಲಿನಲ್ಲಿ ಸ್ಥಳಾವಕಾಶವನ್ನು ಮಾಡಿಕೊಂಡು) ಬ್ರಹ್ಮಲೋಕಂ ಇರ್ಪಂತಿರ್ದ (ಹಾಗಿದ್ದ ) ಬ್ರಹ್ಮಸಭೆಯೊಳಗೆ ದೇವ ಬ್ರಾಹ್ಮಣರಾಗಿ ಇರ್ದರ್ (ಇದ್ದರು) ಅನ್ನೆಗಂ ದ್ರುಪದನಿತ್ತಲ್ (ಆ ಸಮಯದಲ್ಲಿ ದ್ರುಪದನು ಇತ್ತ-)
ವಚನ:ಅರ್ಥ:ಆ ದಿನ ಆ ಸುಂದರ ನಗರವನ್ನು ಪ್ರವೇಶಿಸಿ ಎಲ್ಲಿಯೂ ಬೀಡುಬಿಡಲು ಸ್ಥಳ ಸಿಕ್ಕದೆ ಒಂದು ಕುಂಬಾರನ ಗುಡಿಸಲಿನಲ್ಲಿ ಸ್ಥಳಾವಕಾಶವನ್ನು ಮಾಡಿಕೊಂಡು ಬ್ರಹ್ಮಲೋಕದ ಹಾಗಿದ್ದ ಬ್ರಾಹ್ಮಣರ ಸಭೆಯಲ್ಲಿ ದೇವಬ್ರಾಹ್ಮಣರಂತೆ ಇರುತ್ತಿದ್ದರು. ಆ ಸಮಯದಲ್ಲಿ ದ್ರುಪದನು ಇತ್ತ-

ದ್ರೌಪದೀ ಸ್ವಯಂವರ[ಸಂಪಾದಿಸಿ]

ಚಂ|| ನೆರೆದ ಸಮಸ್ತ ರಾಜಕಮನಾದರದಿಂದಿದರ್ಗೊಂಡನೇಕ ರ
ತ್ನ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನೋಳಿಯಿಂ ನರೇ|
ಶ್ವರರ್ಗಿರಲೆಂದು ಚೌಪಳಿಗೆಗಳ್ ಪಲವಂ ಸಮೆದಲ್ಲಿ ರತ್ನದಿಂ
ಬೆರಸಿದ ಬಣ್ಣದೊಳ್ ಮೆರೆಯೆ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ|| ೪೦||
ಪದ್ಯ-೪೦:ಪದವಿಭಾಗ-ಅರ್ಥ:(ದ್ರುಪದನು) ನೆರೆದ ಸಮಸ್ತ ರಾಜಕಮಂ (ಸೇರಿದ ಎಲ್ಲಾ ರಾಜರನ್ನೂ) ಆದರದಿಂದ ಇದರ್ಗೊಂಡು, ಅನೇಕ ರತ್ನ ರಚಿತಮಾಗೆ ಮಾಡಿಸಿ (ಅನೇಕ ರತ್ನ ರಚಿತವಾಗುವಂತೆ ಮಾಡಿಸಿ) ಸಯಂಬರಸಾಲೆಯನು ಓಳಿಯಿಂ (ಸ್ವಯಂವರಶಾಲೆಯ ಸಾಲುಗಳನ್ನು) ನರೇಶ್ವರರ್ಗೆ(ರಾಜರಿಗೆ) ಇರಲೆಂದು ಚೌಪಳಿಗೆಗಳ್ ಪಲವಂ ಸಮೆದು (ಅನೇಕ ತೊಟ್ಟಿಗಳನ್ನು ಮಾಡಿಸಿ) ಅಲ್ಲಿ ರತ್ನದಿಂಬೆರಸಿದ ಬಣ್ಣದೊಳ್ (ಅಲ್ಲಿ ರತ್ನದಿಂದ/ ಕೂಡಿದ ಕೆಂಪು ಬಣ್ಣದಲ್ಲಿ ) ಮೆರೆಯೆ(ಶೋಭಿಸಲು) ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ( ರಂಗಭೂಮಿಯನ್ನು ಗಟ್ಟಿಸಿ)
ಪದ್ಯ-೪೦:ಅರ್ಥ:ದ್ರುಪದನು ಸೇರಿದ ಎಲ್ಲಾ ರಾಜರನ್ನೂ ಆದರದಿಂದ ಬರಮಾಡಿಕೊಂಡು, ಅನೇಕ ರತ್ನ ರಚಿತವಾಗುವಂತೆ ಮಾಡಿಸಿ, ಸ್ವಯಂವರಶಾಲೆಯ ಸಾಲುಗಳನ್ನು ರಾಜರಿಗೆ ಇರಲೆಂದು ಅನೇಕ ತೊಟ್ಟಿಗಳನ್ನು ಮಾಡಿಸಿ, ಅಲ್ಲಿ ರತ್ನದಿಂದ/ ಕೂಡಿದ ಕೆಂಪು ಬಣ್ಣದಲ್ಲಿ ಶೋಭಿಸಲು ರಂಗಭೂಮಿಯನ್ನು ಕಟ್ಟಿಸಿ ಗಟ್ಟಿಸಿ- ಗಟ್ಟಿ ನೆಲ ಮಾಡಿಸಿದನು.
ವ|| ಆ ನೆಲೆಯ ಚೌಪಳಿಗೆಗಳೊಳನೇಕ ಪ್ರಾಸಾದದ ಮೇಲೆ ಚಿತ್ರದ ಪೞವಿಗೆಗಳಂ ತುಱುಗಲುಂ ಬಂಬಲ್ಗಳುಮಾಗೆ ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪೞಿಯ ಸಕಳವಟ್ಟೆಗಳಂ ಸುತ್ತಿಸಿ ಮುತ್ತಿನ ಮಂಡವಿಗೆಗಳನೆಡೆಯಱದತ್ತಿಸಿ ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನೆೞಲೆ ಕಟ್ಟಿಸಿ ಮತ್ತಮಾ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗಱಿಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳುಪಾಶ್ರಯಂಬಡೆದು-
ವಚನ:ಪದವಿಭಾಗ-ಅರ್ಥ: ಆ ನೆಲೆಯ ಚೌಪಳಿಗೆಗಳೊಳು ಅನೇಕ ಪ್ರಾಸಾದದ ಮೇಲೆ (ಆ ನೆಲೆ/ಸ್ಥಿರವಾದ ತೊಟ್ಟಿಯ ಮನೆಗಳ ಉಪ್ಪರಿಗೆಗಳ ಮೇಲೆ) ಚಿತ್ರದ ಪೞವಿಗೆಗಳಂ (ಬಾವುಟ) ತುಱುಗಲುಂ ಬಂಬಲ್ಗಳುಂ ಆಗೆ (ಬಾವುಟಗಳೂ ಗುಂಪುಗುಂಪಾಗಿರುವಂತೆ) ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ (ರೇಷ್ಮೆಯ ಧ್ವಜಗಳೂ) ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪೞಿಯ ಸಕಳವಟ್ಟೆಗಳಂ (ಸುತ್ತಿದ್ದ ಕಸೂತಿಯ ಚಿತ್ರಕಾರ್ಯ ಮಾಡಿರುವ ಜರತಾರಿವಸ್ತ್ರಗಳೂ ಚಿತ್ರದಿಂದ ಕೂಡಿದ ಬಟ್ಟೆಗಳೂ) ಸುತ್ತಿಸಿ ಮುತ್ತಿನ ಮಂಡವಿಗೆಗಳನು(ಮಂಟಪಗಳನ್ನೂ) ಎಡೆಯಱಿದು ಅತ್ತಿಸಿ (ಜಾಗನೋಡಿ ಇಟ್ಟು ) ಪೊನ್ನ ಮಾಂಗಾಯ ಗೊಂಚಲ್ಗಳುಮಂ (ಚಿನ್ನದ ಮಾವಿನ ಕಾಯಿನ ಗೊಂಚಲೂ) ಮುತ್ತಿನ ಬುಂಭುಕಂಗಳುಂ (ಮುತ್ತಿನ ಕುಚ್ಚುಗಳನ್ನೂ,) ಅೞಲೆ (ಜೋಲುವಂತೆ) ಕಟ್ಟಿಸಿ ಮತ್ತಂ ಆ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗಱಿಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳುಪಾಶ್ರಯಂಬಡೆದು-
ವಚನ:ಅರ್ಥ:ಆ ಸ್ಥಿರವಾದ ತೊಟ್ಟಿಯ ಮನೆಗಳ ಉಪ್ಪರಿಗೆಗಳ ಮೇಲೆ. ಅನೇಕ ಚತಿತ್ರವಾದ ಬಾವುಟಗಳೂ ಗುಂಪುಗುಂಪಾಗಿ ಕಟ್ಟಿಸಿದ ಹಸಿರುಹಾರದಿಂದ ಕೂಡಿದ ತೋರಣಗಳೂ ರೇಷ್ಮೆಯ ಧ್ವಜಗಳೂ ಕಂಬಕ್ಕೆ ಕಟ್ಟಿಸಿ, ಸುತ್ತಿದ್ದ ಕಸೂತಿಯ ಚಿತ್ರಕಾರ್ಯ ಮಾಡಿರುವ ಜರತಾರಿವಸ್ತ್ರಗಳೂ ಚಿತ್ರದಿಂದ ಕೂಡಿದ ಬಟ್ಟೆಗಳೂ ಸೂಕ್ತಸ್ಥಾನಗಳಲ್ಲಿ ನಿರ್ಮಿಸಿದ ಮಂಟಪಗಳಲ್ಲಿ ಜೋಲಾಡುವಂತೆ ಕಟ್ಟಿಸಿದ್ದ ಚಿನ್ನದ ಮಾವಿನ ಕಾಯಿನ ಗೊಂಚಲನ್ನೂ, ಮುತ್ತಿನ ಕುಚ್ಚುಗಳನ್ನೂ ಜೋಲುವಂತೆ ಕಟ್ಟಿಸಿ, ಮತ್ತೆ ಆ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗರಿಗೆಯನಗನು ಉದ್ದನೆಯದಾಗಿ ಇಟ್ಟು, ಬಿಳಿಬಣ್ನವನ್ನು ತಳೆದು/ಹಚ್ಚಿ ಕಪ್ಪು ಬಣ್ನದ ಉಪಾಶ್ರಯ/ಹಿನ್ನಲೆ ಇಟ್ಟು ವಿವಿಧ ಬಣ್ಣಗಳನ್ನುಂಟುಮಾಡಿ ಸುವರ್ಣಚ್ಛಾಯೆಯನ್ನು/ ಬಂಗಾರದ ಬಣ್ಣವನ್ನು ಅಳವಡಿಸಿದುವು.
ಕಂ|| ತುಱುಗಿದ ಪೂಗೊಂಚಲ ಕಾ
ಯ್ತೆಱಗಿದ ಮಾವುಗಳ ಬೆಳೆದ ಕೌಂಗಿನ ಗೊನೆ ತ|
ಳ್ತೆಱಗಿರೆ ಮಾಡದೊಳಲ್ಲಿಯೆ
ತಿಱಿದುಕೊಳಲ್ಕಿಂಬಿನೆಸಕಮೆಸೆದುದುಪವನಂ|| ೪೧||41|
ಪದ್ಯ-೪೧:ಪದವಿಭಾಗ-ಅರ್ಥ: ತುಱುಗಿದ ಪೂಗೊಂಚಲ (ಒತ್ತಾಗಿ ಸೇರಿರುವ ಹೂಗೊಂಚಲೂ) ಕಾಯ್ತೆಱಗಿದ ಮಾವುಗಳ ಬೆಳೆದ ಕೌಂಗಿನ ಗೊನೆ (ಕಾಯಿಗಳ ಭಾರದಿಂದ ಬಗ್ಗಿರುವ ಮಾವುಗಳೂ ಪುಷ್ಪವಾಗಿ ಬೆಳೆದ ಅಡಿಕೆಯ ಗೊನೆಗಳೂ) ತಳ್ತೆಱಗಿರೆ ಮಾಡದೊಳಲ್ಲಿಯೆ ತಿಱಿದುಕೊಳಲ್ಕೆ (ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳಲು) ಇಂಬಿನೆಸಂ ಎಸೆದುದು ಉಪವನಂ (ಅನುಕೂಲವಾಗಿರುವ ರೀತಿಯಲ್ಲಿ ಆ ಉಪವನವು ಪ್ರಕಾಶಮಾನವಾಗಿದ್ದಿತು)
ಪದ್ಯ-೪೧:ಅರ್ಥ:ಒತ್ತಾಗಿ ಸೇರಿರುವ ಹೂಗೊಂಚಲೂ ಕಾಯಿಗಳ ಭಾರದಿಂದ ಬಗ್ಗಿರುವ ಮಾವುಗಳೂ ಪುಷ್ಪವಾಗಿ ಬೆಳೆದ ಅಡಿಕೆಯ ಗೊನೆಗಳೂ ಗುಂಪಾಗಿ ಕೂಡಿ ಆ ಉಪ್ಪರಿಗೆಯಲ್ಲಿಯೇ ಸೇರಿ ಬಾಗಿರಲು ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳಲು ಅನುಕೂಲವಾಗಿರುವ ರೀತಿಯಲ್ಲಿ ಆ ಉಪವನವು ಪ್ರಕಾಶಮಾನವಾಗಿದ್ದಿತು.
ಕಂ||ನಾಳೆ ಸಯಂಬರಮೆನೆ ಪಾಂ
ಚಾಳಮಹೀಪಾಳನಖಿಳ ಭೂಭೃನ್ನಿಕರ|
ಕ್ಕೋಳಿಯೆ ಸಾಱಿದೊಡವನೀ
ಪಾಲರ್ ಕೆಯ್ಗೆಯ್ಯಲೆಂದು ಪಱಿವಱಿಯಾದರ್|| ೪೨||
ಪದ್ಯ-೪೨:ಪದವಿಭಾಗ-ಅರ್ಥ:ನಾಳೆ ಸಯಂಬರಂ ಎನೆ (ನಾಳೆ ಸ್ವಯಂವರವೆಂದು) ಪಾಂಚಾಳಮಹೀಪಾಳನು (ಪಾಂಚಾಲರಾಜನಾದ ದ್ರುಪದನು) ಅಖಿಳ (ಎಲ್ಲಾ) ಭೂಭೃನ್ನಿಕರಕ್ಕೆ (ರಾಜರ ಸಮೂಹಕ್ಕೆ) ಓಳಿಯೆ (ಸಾಲಾಗಿ) ಸಾಱಿದೊಡೆ (ಸಾರಿದಾಗ), ಅವನೀಪಾಲರ್ (ರಾಜರು) ಕೆಯ್ಗೆಯ್ಯಲೆಂದು (ಕಯ್ ಗೈಯಲು ಎಂದು- ತಮ್ಮ ಶಕ್ತಿ ತೋರಲು) ಪಱಿವಱಿಯಾದರ್(ಸಡಗರದಿಂದ ಕೂಡಿದರು /ಉತ್ಸಾಹಗೊಂಡರು )
ಪದ್ಯ-೪೨:ಅರ್ಥ:ಆಗ ಪಾಂಚಾಲರಾಜನಾದ ದ್ರುಪದನು ಸಮಸ್ತ ರಾಜಸಮೂಹಕ್ಕೆ ಕ್ರಮವಾಗಿ ನಾಳೆಯ ದಿನ ಸ್ವಯಂವರವೆಂದು ಡಂಗುರ ಹೊಡೆಯಿಸಿದನು. ರಾಜರು ತಮ್ಮ ತಮ್ಮ ಶಕ್ತಿಪ್ರದರ್ಶನ ಮಾಡಲು ವಿಶೇಷ ಉತ್ಸಾಹಗೊಂಡರು
ವ|| ಆಗಿ ಮಱುದಿವಸಂ ನೇಸಱು ಮೂಡೆ-
ವಚನ:ಪದವಿಭಾಗ-ಅರ್ಥ:ಆಗಿ ಮಱುದಿವಸಂ (ಮರುದಿವಸ) ನೇಸಱು (ಸೂರ್ಯ ಮೂಡಲು) ಮೂಡೆ-
ವಚನ:ಅರ್ಥ:ಮಾರನೆಯ ದಿನ ಸೂರ್ಯೋದಯವಾಗಲು-.
ಕಂ|| ತಂತಮ್ಮ ರಾಜ್ಯ ಚಿಹ್ನಂ
ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ|
ತಂತಮ್ಮೆಸೆವ ವಿಳಾಸಂ
ತಂತಮ್ಮಿರ್ಪೆಡೆಯೊಳೀಳಿಯಿಂ ಕುಳ್ಳಿರ್ದರ್|| ೪೩||
ಪದ್ಯ-೪೩:ಪದವಿಭಾಗ-ಅರ್ಥ:ತಂತಮ್ಮ ರಾಜ್ಯ ಚಿಹ್ನಂ, ತಂತಮ್ಮ ಮಹಾ ವಿಭೂತಿ (ಐಶ್ವರ್ಯ), ತಂತಮ್ಮ ಬಲಂ (ಶಕ್ತಿ) ತಂತಮ್ಮ ಎಸೆವ ವಿಳಾಸಂ (ಶೋಭಿಸುವ ಚಿಹ್ನೆ) ತಂತಮ್ಮ ಇರ್ಪ ಎಡೆಯೊಳು(ತಾವಿದ್ದ ಸ್ಥಳಗಳಲ್ಲಿ) ಈಳಿಯಿಂ (ಸಾಲಾಗಿ) ಕುಳ್ಳಿರ್ದರ್
ಪದ್ಯ-೪೩:ಅರ್ಥ:ರಾಜರು ತಮ್ಮ ತಮ್ಮ ರಾಜ್ಯಚಿಹ್ನೆ ವೈಭವ ಸೈನ್ಯ ವಿಳಾಸ/ ಚಿಹ್ನೆಗಳಿಂದ ಕೂಡಿ ತಾವಿದ್ದ ಸ್ಥಳಗಳಲ್ಲಿ ಸಾಲಾಗಿ ಕುಳಿತರು.
ವ|| ಆಗಳ್ ದ್ರುಪದಂ ತನ್ನ ಪುರಕ್ಕಮಂತಪುರಕ್ಕಂ ಪರಿವಾರಕ್ಕಂ-
ವಚನ:ಪದವಿಭಾಗ-ಅರ್ಥ:ಆಗಳ್ ದ್ರುಪದಂ ತನ್ನ ಪುರಕ್ಕಂ ಅಂತಪುರಕ್ಕಂ ಪರಿವಾರಕ್ಕಂ (ಇವರಿಗೆಲ್ಲಾ)
ವಚನ:ಅರ್ಥ:ಆಗ ದ್ರುಪದನು ತನ್ನ ಪಟ್ಟಣಕ್ಕೂ ರಾಣಿವಾಸಕ್ಕೂ ಪರಿವಾರಕ್ಕೂ -
ಕಂ|| ಸಾಸಿರ ಪೊಂಗೆಯ್ದುಂ ಚಿ
ಕಾಸಟಮೆಂದೊಂದು ಲಕ್ಕಗೆಯ್ವುದಿದರ್ಕಂ||
ಮಾಸರಮುಡಲೆಂದಧಿಕ ಅಧಿಕ
ಳಾಸದಿನುಡಲಿಕ್ಕಿ ನೆರೆಯೆ ಬಿಯಮಂ ಮೆರೆದಂ|| ೪೪||
ಪದ್ಯ-೪೪:ಪದವಿಭಾಗ-ಅರ್ಥ:ಸಾಸಿರ ಪೊಂಗೆಯ್ದುಂ (ಪೊನ್ನು ಗೆಯಿದಂ-ಕೊಟ್ಟರೂ-) ಚಿಕಾಸಟಮ್(ಸಾಮಾನ್ಯ) ಎಂದು ಅಲ್ಲ, ಒಂದು ಲಕ್ಕಗೆಯ್ವುದೆ ಇದರ್ಕಂ (ಇದು ಲಕ್ಷ ಬೆಲೆಯುಳ್ಳದ್ದು) ಮಾಸರಂ (ಚಂದವಾಗಿ) ಉಡಲು ಎಂದು ಅಧಿಕ ವಿಳಾಸದಿಂ ಉಡಲೆಂದು ಇಕ್ಕಿ (ಸಂತೋಷದಿಂದ ಉಡಲೂ ಕೊಟ್ಟು) ನೆರೆಯೆ (ಬಹಳ/ ಪೂರ್ಣ) ಬಿಯಮಂ ವೆಚ್ಚಮಾಡಿ ಮೆರೆದಂ(ಪ್ರಕಾಶಿಸಿದನು)
ಪದ್ಯ-೪೪:ಅರ್ಥ:. ಸಹಸ್ರಹೊನ್ನನ್ನು ಕೊಟ್ಟರೂ ಇದು ಲಭ್ಯವಾಗುವುದಿಲ್ಲ. ಹತ್ತಿಯ ಬಟ್ಟೆಯಾದರೂ ಇದು ಲಕ್ಷ ಬೆಲೆಯುಳ್ಳದ್ದು ಎಂಬ ವಸ್ತ್ರಗಳನ್ನು ಮಧುರವಾಗಿ ಧರಿಸಲೂ ಸಂತೋಷದಿಂದ ಉಡಲೂ ಕೊಟ್ಟು ವಿಶೇಷವಾಗಿ ತನ್ನ ಔದಾರ್ಯವನ್ನು ಪ್ರಕಾಶಿಸಿದನು.

ಕುಮಾರವ್ಯಾಸ ನಲವತ್ತು ಪದ್ಯಗಳಲ್ಲಿ ದ್ರೌಪದಿಯ
ಸೌಂದರ್ಯ ವರ್ಣನೆ ಮಾಡಿದ್ದಾನೆ.
«»
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ|
ಸರಸ ವೀಣಾಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರ ವಿರಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ.||(೧-೧೩-೧೭)

ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಲಿಯೋ ಲತಾಂಗಿಯ
ಸುಳಿವೋ ಲಾವಣ್ಯೈಕರಸಸಾಕಾರ ವಿಭ್ರಮವೊ||
ಲಲಿತ ಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರೆಂದುದು ಸುರಸ್ತೋಮ||(೧-೧೩-೪೭)

ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ತಾವೈರಾಗ್ಯದಲಿ ಹೊಗುವನೆ ತಪೋವನವ||
ಸಾಕು ಗೌತಮ ಮನಿಯ ಮುಳಿಸಿನ
ಕಾಕುನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ||()೧-೧೩-೪೮)

(ಅರ್ಥ:ಅಂದು ದ್ರೌಪದಿ ಹುಟ್ಟಿದ್ದರೆ-
'ಶಿವ ಇವಳನ್ನು ನೋಡಿದ್ದರೆ ತಪಸ್ಸು ಬಿಡುತ್ತಿದ್ದ;
ಮನ್ಮಥನು ಬಾಣಹೊಡೆಯುವುದು ತಪ್ಪಿ
ಅವನು ಭಸ್ಮವಾಗಿ ದೇಹತ್ಯಾಗ ತಪ್ಪುತ್ತಿತ್ತು.
ಇಂದ್ರನು ತಾನು ಅಹಲ್ಯೆಯ ತಂಟೆಗೆ
ಹೋಗದೆ ಗೌತಮನ ಶಾಪ ತಪ್ಪುತ್ತಿತ್ತು
ತನಗೆ ಈ ದ್ರೌಪದಿಯೇ ಸಾಕಾಗಿತ್ತು' ಎಂದ ಇಂದ್ರ.)

ವ|| ಅಂತು ಮೆದು ಕೂಸಂ ನೆಯೆ ಕೆಯ್ಗೆಯ್ಸಿಮೆಂದು ಮುನ್ನಂ ಕೆಯ್ಗೆಯ್ಸುತಿರ್ದ ತಱದ ಗುಱುಗೆಯರಪ್ಪಂತಪುರ ಪುರಂಧ್ರಿಯರಂ ಕರೆದು ಪೇೞ್ವುದುಮಂತೆಗೆಯ್ವೆಮೆಂದು-
ವಚನ:ಪದವಿಭಾಗ-ಅರ್ಥ:ಅಂತು ಮೆದು ಕೂಸಂ (ಮದುಮಗಳನ್ನು) ನೆಯೆ (ಪೂರ್ಣ) ಕೆಯ್ಗೆಯ್ಸಿಮೆಂದು (ಅಲಂಕರಿಸಿ ಎಂದು) ಮುನ್ನಂ ಕೆಯ್ಗೆಯ್ಸುತಿರ್ದ (ಹಿಂದೆ ಅಲಂಕರಿಸುತ್ತಿದ್ದ) ತಱದ (ರೀತಿಯ) ಗುಱುಗೆಯರಪ್ಪ ಅಂತಪುರ (ಅಂತಃಪುರ ಗರತಿಯರ) ಪುರಂಧ್ರಿಯರಂ ಕರೆದು ಪೇೞ್ವುದುಂ ಅಂತೆ ಗೆಯ್ವೆಮೆಂದು-
ವಚನ:ಅರ್ಥ:ಹಾಗೆಯೇ ಕನ್ಯೆಯನ್ನು ಪೂರ್ಣವಾಗಿ ಅಲಂಕರಿಸಿ ಎಂದು ಹೇಳಿದನು. ಹಾಗೆ ಹೇಳುವುದಕ್ಕೆ ಮುಂಚೆಯೇ (ತಾವಾಗಿಯೇ) ಅಲಂಕರಿಸುತ್ತಿದ್ದ ಶಕ್ತರೂ ಅನುಭವಶಾಲಿಗಳೂ ಆದ ರಾಣಿ ವಾಸದ ಸ್ತ್ರೀಯರು ಹಾಗೆಯೇ ಮಾಡುತ್ತೇವೆಂದರು.
ಕಂ|| ಈ ಪೊೞ್ತಿಂಗೀ ರುತುವಿಂ
ಗೀ ಪಸದನಮಿಂತುಟಪ್ಪ ಮೆಯ್ವಣ್ಣಕ್ಕಿಂ|
ತೀ ಪೂವಿನೊಳೀ ತುಡುಗೆಯೊ
ಳೀ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ|| ೪೫||
ಪದ್ಯ-೪೫:ಪದವಿಭಾಗ-ಅರ್ಥ:ಈ ಪೊೞಂಗೆ ಈ ರುತುವಿಂಗೆ ಈ ಪಸದನಂ ಇಂತುಟಪ್ಪ ಮೆಯ್ವಣ್ಣಕ್ಕೆ ಇಂತು ಈ ಪೂವಿನೊಳು ಈ ತುಡುಗೆಯೊಳು ಈ ಪುಟ್ಟಿಗೆಯೊಳ್ (ಸೀರೆಯಲ್ಲಿ) ಬೆಡಂಗುವಡೆದು ಎಸೆದು ಇರ್ಕುಂ(ಚೆಲುವನ್ನು ಪಡೆದು ಪ್ರಕಾಶಿಸುತ್ತದೆ)
ಪದ್ಯ-೪೫:ಅರ್ಥ:ಈ ಹೊತ್ತಿಗೆ ಈಬಗೆಯ ಅಲಂಕಾರ, ಅದೇ ರೀತಿ- ಈ ಋತುವಿಗೆ ಇಂತಹ ಅಲಂಕಾರ; ಇಂತಹ ಮೈಬಣ್ಣಕ್ಕೆ ಇಂತಹ ಹೂವು ಈ ಆಭರಣ ಈ ಸೀರೆ ಉಚಿತವಾಗಿ ಚೆಲುವನ್ನು ಪಡೆದು ಪ್ರಕಾಶಿಸುತ್ತದೆ ಎಂದು ಅಲಂಕರಿಸಿದರು.
ವ|| ಎಂದು ನೆರೆಯ ಪಸದನಂಗೊಳಿಸಿ-
ವಚನ:ಪದವಿಭಾಗ-ಅರ್ಥ:ಎಂದು ನೆರೆಯ ಪಸದನಂಗೊಳಿಸಿ-
ವಚನ:ಅರ್ಥ: ಎಂದು ನಿಷ್ಕರ್ಷಿಸಿ ಪೂರ್ಣವಾಗಿ ಅಲಂಕಾರ ಮಾಡಿದರು.ಅಲಂಕಾರಗೊಳಿಸಿ -
ಚಂ|| ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ ನಡು ಬಳ್ಕಿದಪ್ಪುದೀ
ನಡುಗುವುಲ್ಲವೇ ತೊಡೆ ನಿತಂಬದ ಬಿಣ್ಪಿನೊಳೇವುದಕ್ಕ ಪೋ|
ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಮೆಂ
ತುಡಿಸುವುದಕ್ಕ ನೂಪುರಮನೀ ತೊಡವೇವುದೊ ರೂಪೆ ಸಾಲದೆ|| ೪೬||
ಪದ್ಯ-೪೬:ಪದವಿಭಾಗ-ಅರ್ಥ:ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ (ಭಾರದಿಂದ) ನಡು ಬಳ್ಕಿದಪ್ಪುದು ಈ ನಡುಗುವುಲ್ಲವೇ, ತೊಡೆ ನಿತಂಬದ ಬಿಣ್ಪಿನೊಳು ಭಾರದಲ್ಲಿ (ನಡುಗುವುದು) ಏವುದು(ಯಾವುದು) ಅಕ್ಕ ಪೋ, ಬಿಡು ಕಟಿಸೂತ್ರಮಂ (ಸೊಂಟದ ಉಡ್ಯಾಣವನ್ನು ಬಿಡು/ಬೇಡ ಹೋಗಲಿ), ತೊಡೆಯ ಬಿಣ್ಪು (ಭಾರ) ಪದಾಂಬುರುಹಕ್ಕೆ ತಿಣ್ಣಂ (ಪಾದಕ್ಕೆ ಭಾರವು)ಎಂತು ಉಡಿಸುವುದು ಅಕ್ಕ ನೂಪುರಮನು ಈ ತೊಡವು ಏವುದೊ (ಈವೊಡವೆಗಳು ಏಕೋ!) ರೂಪೆ ಸಾಲದೆ
ಪದ್ಯ-೪೬:ಅರ್ಥ:ಹಾರವನ್ನು ತೊಡಿಸದಿದ್ದರೂ ಮೊಲೆಯ ಭಾರದಿಂದಲೇ ಸೊಂಟವು ಬಳಕುತ್ತದೆ. ಪಿರ್ರೆ (ಪೃಷ್ಠಭಾಗ)ಯ ಭಾರದಿಂದಲೇ ತೊಡೆ ನಡುಗುವುದಲ್ಲವೇ? (ಆದುದರಿಂದ) ಒಡ್ಯಾಣದ ಭಾರ ಬೇರೆಯೇತಕ್ಕೆ? ಅದನ್ನು ತೊಡದೆ ಬಿಡು. ತೊಡೆಯ ಭಾರವೇ ಪಾದಕಮಲಗಳಿಗೆ ಭಾರವಾಗಿದೆ (ಹೀಗಿರುವಾಗ) ಕಾಲಂದಿಗೆಯನ್ನೇಕೆ ತೊಡಿಸುವುದು. ಈಕೆಗೆ ಆಭರಣಗಳೇತಕ್ಕೆ ರೂಪೇ ಸಾಲದೆ?
ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು ಮಂಗಳವಸದನ ಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಱಂ ತುಡಿಸಲೆವೇೞ್ಕುಮೆಂದು ನೆರೆಯೆ ಪಸದನಂಗೊಳಿಸಿ
ವಚನ:ಪದವಿಭಾಗ-ಅರ್ಥ:ಎಂದು ಎಂದು ಓರ್ವರು ಓರ್ವರುಂ ಆಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು (ಹೊಗಳಿ) ಮಂಗಳವಸದನಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಱಿಂ (ಮದುವಣಗಿತ್ತಿಯಾದುದರಿಂದ) ತುಡಿಸಲೆವೇೞ್ಕುಂ (ತೊಡಿಸಲೇ ಬೇಕು) ಎಂದು ನೆರೆಯೆ (ಬಹಳ) ಪಸದನಂಗೊಳಿಸಿ (ಅಲಂಕಾರಮಾಡಿ-)
ವಚನ:ಅರ್ಥ:ಎಂದು ಒಬ್ಬೊಬ್ಬರೂ ಆಕೆಯ ಸೌಂದರ್ಯವನ್ನು ಹೊಗಳಿ ಮಂಗಳಾಲಂಕಾರಮಾಡಿದರು. ಹೊಸ ಮದುವಣಗಿತ್ತಿಯಾದುದರಿಂದ ಆಭರಣವನ್ನೂ ತೊಡಿಸಲೇ ಬೇಕೆಂದು ಪೂರ್ಣವಾಗಿ ಅಲಂಕಾರಮಾಡಿದರು-ಅಲಂಕಾರಮಾಡಿ-
ಕಂ|| ಮಸೆದುದು ಮದನನ ಬಾಳ್ ಕೂ
ರ್ಮಸೆಯಿಟ್ಟುದು ಕಾಮನಂಬು ಬಾಯ್ಗೂಡಿದುದಾ|
ಕುಸುಮಾಸ್ತ್ರನ ಚಕ್ರಮಿದೆಂ
ಬೆಸಕಮನಾಳ್ದತ್ತು ಪಸದನಂ ದ್ರೌಪದಿಯಾ|| ೪೭||
ಪದ್ಯ-೪೭:ಪದವಿಭಾಗ-ಅರ್ಥ:ಕಂ|| ಮಸೆದುದು ಮದನನ ಬಾಳ್(ಮನ್ಮಥನ ಕತ್ತಿಯನ್ನು ಮಸೆದಂತಾಯಿತು) ಕೂರ್ಮಸೆಯಿಟ್ಟುದು ಕಾಮನಂಬು (ಕಾಮನ ಬಾಣ ಹರಿತವಾಯಿತು) ಬಾಯ್ಗೂಡಿದುದಾ (ಚಕ್ರದ ಬಾಯಿಹರಿತವಾಯಿತು) ಕುಸುಮಾಸ್ತ್ರನ ಚಕ್ರಂ ಇದು ಎಂಬ ಎಸಕಮನು ಆಳ್ದತ್ತು (ಕುಸುಮಾಸ್ತ್ರನಾದ ಮನ್ಮಥನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು) ಪಸದನಂ(ಪ್ರಸಾದನ-ಅಲಂಕಾರವು) ದ್ರೌಪದಿಯಾ
ಪದ್ಯ-೪೭:ಅರ್ಥ:ಆ ದ್ರೌಪದಿಯ ಅಲಂಕಾರವು ಮನ್ಮಥನ ಕತ್ತಿಯನ್ನು ಮಸೆದಂತಾಯಿತು, ಕಾಮನ ಬಾಣವು ಹರಿತವಾತು, ಕುಸುಮಾಸ್ತ್ರನಾದ ಮನ್ಮಥನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು ಎನ್ನುವ ಶೋಭೆಯನ್ನು ಅವಳ ಸೌಂದರ್ಯವು ಪಡೆಯಿತು.
ವ|| ಅಂತು ನೆರೆಯೆ ಪಸದನಂಗೊಳಿಸಿ ಬಿಡುಮುತ್ತಿನ ಸೇಸೆಯನಿಕ್ಕಿ ತಾಯ್ಗಂ ತಂದೆಗಂ ಪೊಡಮಡಿಸಿ-
ವಚನ:ಪದವಿಭಾಗ-ಅರ್ಥ:ಅಂತು ನೆರೆಯೆ (ಬಹಳ) ಪಸದನಂಗೊಳಿಸಿ (ಅಲಂಕರಿಸಿ) ಬಿಡುಮುತ್ತಿನ ಸೇಸೆಯನು ಇಕ್ಕಿ ತಾಯ್ಗಂ ತಂದೆಗಂ ಪೊಡಮಡಿಸಿ (ನಮಸ್ಕಾರ ಮಾಡಿಸಿ)
ವಚನ:ಅರ್ಥ:ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿ ಬಿಡಿಮುತ್ತಿನ ಮಂತ್ರಾಕ್ಷತೆಯನ್ನು ಅವಳ ತಲೆಯ ಮೇಲೆ ಚೆಲ್ಲಿ ತಾಯಿಗೂ ತಂದೆಗೂ ನಮಸ್ಕಾರ ಮಾಡಿಸಿ-
ಕಂ|| ನಿಟ್ಟಿಸೆ ಹೋಮಾನಲನೊಳ್
ಪುಟ್ಟಿದ ನಿನಗಕ್ಕ ಪರಕೆ ಯಾವುದೊ ನಿನ್ನಂ|
ಪುಟ್ಟಿಸಿದ ಬಿದಿ ನೆಗೞ್ತೆಯ
ಜೆಟ್ಟಿಗನೊಳ್ ನೆರಪುಗೀಗಳರಿಕೇಸರಿಯೊಳ್|| ೪೮||
ಪದ್ಯ-೪೮:ಪದವಿಭಾಗ-ಅರ್ಥ:ನಿಟ್ಟಿಸೆ (ನೋಡಿದರೆ) ಹೋಮ ಅನಲನೊಳು ಪುಟ್ಟಿದ (ಹೋಮದ ಬೆಂಕಿಯಲ್ಲಿ ಹುಟ್ಟಿದ) ನಿನಗೆ ಅಕ್ಕ ಪರಕೆ (ಹರಕೆ)ಯಾವುದೊ! ನಿನ್ನಂ ಪುಟ್ಟಿಸಿದ ಬಿದಿ (ದೈವ-ವಿಧಿ) ನೆಗೞ್ತೆಯ ಜೆಟ್ಟಿಗನೊಳ್ (ಪ್ರಸಿದ್ಧ ವೀರನೊಡನೆ - ವೀರಕೇಸರಿ/ ಅರ್ಜುನನೊಡನೆ) ನೆರಪುಗೆ (ಸೇರಿಸಲಿ ) ಈಗಳ್ ಅರಿಕೇಸರಿಯೊಳ್
ಪದ್ಯ-೦೪೮:ಅರ್ಥ:ನೋಡಿದರೆ ಹೋಮದ ಬೆಂಕಿಯಲ್ಲಿ ಹುಟ್ಟಿದ(ಯಜ್ಞ ಕುಂಡದಲ್ಲಿ) ಹುಟ್ಟಿದ ನಿನಗೆ ಅಕ್ಕಾ! ಪ್ರತ್ಯೇಕವಾದ ಹರಕೆ ಯಾಕಮ್ಮ, ನಿನ್ನನ್ನು ಹುಟ್ಟಿಸಿದ ಆ ದೈವವು ಸುಪ್ರಸಿದ್ಧ ಪರಾಕ್ರಮಿಯಾದ ಅರಿಕೇಸರಿಯಲ್ಲಿ ನಿನ್ನನ್ನು ಸೇರಿಸಲಿ
ವ|| ಎಂದು ಪರಸಿ ಕನಕತೃನಕಖಚಿತಮುಂ ಮೌಕ್ತಿಕಸ್ತಂಭಮುಮಪ್ಪ ಸರ್ವತೋಭದ್ರಮೆಂಬ ಸಿವಿಗೆಯನೇಱಿಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆಡುಂ ಕೆಲದೊಳ್ ಸುತ್ತಿಱಿದು ಬಳಸಿ ಬರೆ ತಲೆವರಿದೋಜೆಯ ಪಿಡಿಯನೇಱ ಪೆಂಡವಾಸದೊಳ್ವೆಂಡಿರ್ ಬಳಸಿ ಬರೆ ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆೞಲೆಡೆವಱಿಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆರೆಯೆ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಱಿ ಬರೆ ಮುಂದೆ ಪರಿವ ಧವಳಚ್ಛತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೊೞಗುವ ಮಂಗಳತೂರ್ಯಂಗಳೆಸೆಯೆ ಪೆಱಪೆಱಗೆ ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ-
ವಚನ:ಪದವಿಭಾಗ-ಅರ್ಥ:ಎಂದು ಪರಸಿ ಕನಕತ್ಕನಕ ಖಚಿತಮುಂ (ಹೊಳೆಯುವ ಚಿನ್ನದ) ಮೌಕ್ತಿಕಸ್ತಂಭಮುಂ ಅಪ್ಪ (ಮುತ್ತಿನ ಕಂಬಗಳನ್ನುಳ್ಳ) ಸರ್ವತೋಭದ್ರಂ ಎಂಬ ಸಿವಿಗೆಯನು ಏಱಿಸಿ (ಪಲ್ಲಕ್ಕಿಯಲ್ಲಿ ಏರಿಸಿ-ಕುಳ್ಳಿರಿಸಿ) ಚಾಮರದ ಕುಂಚದ ಅಡಪದ ಡವಕೆಯ (ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ) ವಾರ ವಿಳಾಸಿನಿಯರು ಎರಡುಂ ಕೆಲದೊಳ್ (ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ) ಸುತ್ತಿಱಿದು ಬಳಸಿ ಬರೆ (ಸುತ್ತ ಗುಂಪುಗೂಡಿ ಬಳಸಿ ಬರುತ್ತಿರಲು) ತಲೆವರಿದ (ಮುಂದೆಹೋಗುತ್ತಿರುವ) ಪಿಡಿಯನೇಱ (ಓಜೆಯ ಪಿಡಿಯಂ ಏಱ- ಹೆಣ್ಣಾನೆಯನ್ನು ಹತ್ತಿಕೊಂಡು) ಪೆಂಡವಾಸದ ಒಳ್ವೆಂಡಿರ್ (ರಾಣಿವಾಸದ ಸಭ್ಯಸ್ತ್ರೀಯರು) ಬಳಸಿ ಬರೆ, (ಸುತ್ತ ಬರುತ್ತಿರಲು)ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ (ಎತ್ತಿಹಿಡಿದ ಚಿನ್ನದ ಪದ್ಮಾಕೃತಿಯ ಸೀಗುರಿಗಳ)ನೆೞಲ್ (ನೆರಳು ಬೀಳಲು) ಎಡೆವಱಿಯದೆ (ಸ್ಥಳವಿಲ್ಲದಂತೆ) ಬರೆ (ಬರುತ್ತಿರಲು), ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ (ಪೂರ್ಣವಾಗಿ ಅಲಂಕಾರಮಾಡಿದ ) ನೆರೆಯೆ ಪಣ್ಣಿದ (ಚೆನ್ನಾಗಿ ಮಾಡಿದ) ಮದಾಂಧ ಗಂಧಸಿಂಧುರಂಗಳನು ಏಱಿ ಬರೆ (ಮದ್ದಾನೆಗಳನ್ನೇರಿ ಬರುತ್ತಿರಲು) ಮುಂದೆ ಪರಿವ (ಹರಿವ-ಚಲಿಸುವ) ಧವಳಚ್ಛತ್ರ (ಬೆಳ್ಗೊಡೆ) ಚಂದ್ರಾದಿತ್ಯ ಪಾಳಿಕೇತನ (ಸೂರ್ಯ ಚಂದ್ರರ ಲಾಂಛನಗಳು) ಆದಿ (ಮೊದಲಾದ) ರಾಜ್ಯ ಚಿಹ್ನಂಗಳುಂ ಮೊೞಗುವ (ಮೊಳಗುವ) ಮಂಗಳತೂರ್ಯಂಗಳು ಎಸೆಯೆ (ಮಂಗಳವಾದ್ಯಗಳು ಶೋಭಿಸಲು) ಪೆಱಪೆಱಗೆ (ಹಿಂದು ಹಿಂದೆಯೇ) ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ-
ವಚನ:ಅರ್ಥ:ಎಂದು ಹರಸಿ ಹೊಳೆಯುವ ಚಿನ್ನದಿಂದ ಕೆತ್ತಲ್ಪಟ್ಟುದ್ದೂ, ಮುತ್ತಿನ ಕಂಬಗಳನ್ನುಳ್ಳದ್ದೂ, ಸರ್ವತೋಭದ್ರವೆಂಬ ಹೆಸರುಳ್ಳ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ ಸುತ್ತ ಗುಂಪುಗೂಡಿ ಬಳಸಿ ಬರುತ್ತಿರಲು, ಮುಂದೆ ಹೋಗುತ್ತಿರುವ ಹೆಣ್ಣಾನೆಯನ್ನು ಹತ್ತಿಕೊಂಡು ರಾಣಿವಾಸದ ಸಭ್ಯಸ್ತ್ರೀಯರು ಸುತ್ತ ಬರುತ್ತಿರಲು, ಎತ್ತಿಹಿಡಿದ ಚಿನ್ನದ ಪದ್ಮಾಕೃತಿಯ ಸೀಗುರಿಗಳು ಬೀಳಲು ಸ್ಥಳವಿಲ್ಲದಂತೆ ಜೊತೆಯಲ್ಲಿಯೇ ಬರುತ್ತಿರಲು ದ್ರುಪದನೂ ಧೃಷ್ಟದ್ಯುಮ್ನನೂ ಮುತ್ತು ಮಾಣಿಕ್ಯಾಭರಣಗಳಿಂದ ಪೂರ್ಣವಾಗಿ ಅಲಂಕಾರಮಾಡಿದ ಮದ್ದಾನೆಗಳನ್ನೇರಿ ಬರುತ್ತಿರಲು ಮುಂಭಾಗದಲ್ಲಿ ಹರಿದುಹೋಗುತ್ತಿದ್ದ ಬಿಳಿಯ ಕೊಡೆ, ಚಂದ್ರ, ಸೂರ್ಯ, ಧ್ವಜಸಮೂಹವೇ ಮೊದಲಾದ ರಾಜಚಿಹ್ನೆಗಳೂ ಶಬ್ದಮಾಡುತ್ತಿದ್ದ ಮಂಗಳವಾದ್ಯಗಳೂ ಪ್ರಕಾಶಿಸುತ್ತಿರಲು ಹಿಂದು ಹಿಂದೆಯೇ ದ್ರೌಪದಿಯು ಶೃಂಗಾರಸಾಗರವೇ ಎಲ್ಲೇ ಮೀರಿ ಬರುವಂತೆ ಬರಲು-(ಬಂದಳು)
ಕಂ|| ಪರೆದುಗುವ ಪಂಚ ರತ್ನದ
ಪರಲ್ಗಳುದಿರ್ದೆಸೆಯೆ ಸೌಧದೊಳೆ ಕೆದಱಿದ ಕ|
ಪ್ಪುರವಳ್ಕುಗಳೆಸೆಯೆ ಸಯಂ
ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದಳ್|| ೪೯||
ಪದ್ಯ-೪೯:ಪದವಿಭಾಗ-ಅರ್ಥ:ಪರೆದುಗುವ (ಎಲ್ಲೆಲ್ಲಿಯೂ ಸುರಿದಿದ್ದ ) ಪಂಚ ರತ್ನದ ಪರಲ್ಗಳು ಉದಿರ್ದು ಎಸೆಯೆ (ಪಂಚ ರತ್ನದ ಹರಳುಗಳು ಉದಿರಿದ್ದು ಶೋಭಿಸಲು) ಸೌಧದೊಳೆ ಕೆದಱಿದ ಕಪ್ಪುರವ ಅಳ್ಕುಗಳು ಎಸೆಯೆ (ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು) ಸಯಂಬರ ಸಾಲೆಯನು ಎಸೆವ ಲೀಲೆಯಿಂ ಪುಗುತಂದಳ್(ಸ್ವಯಂವರ ಗೃಹವನ್ನು ಲೀಲೆಯವಿಲಾಸದಿಂದ ಪ್ರವೇಶಿಸಿದಳು)
ಪದ್ಯ-೪೯:ಅರ್ಥ:ಎಲ್ಲೆಲ್ಲಿಯೂ ಸುರಿದಿದ್ದ ಪಂಚರತ್ನದ ಹರಳುಗಳೂ ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು, ಸ್ವಯಂವರ ಗೃಹವನ್ನು ಲೀಲೆಯವಿಲಾಸದಿಂದ ಪ್ರವೇಶಿಸಿದಳು.
ವ|| ಆಗಳ್-
ವಚನ:ಅರ್ಥ:ಆಗ-
ಕಂ|| ನುಡಿವುದನೆ ಮರೆದು ಪೆಱತಂ
ನುಡಿಯೆ ಕೆಲರ್ ನೋಡದಂತೆ ನೋಡೆ ಕೆಲರ್ ಪಾ|
ವಡರ್ದವೊಲಿರೆ ಕೆಲರೊಯ್ಯನೆ
ತುಡುಗೆಯನೋಸರಿಸೆ ಕೆಲರುದಗ್ರಾವನಿಪರ್|| ೫೦||
ಪದ್ಯ-೫೦:ಪದವಿಭಾಗ-ಅರ್ಥ: (ಅವಳ ಸೌದರ್ಯವನ್ನು ನೋಡಿ ದಿಗ್‍ಭ್ರಮೆಯಿಂದ) ನುಡಿವುದನೆ ಮರೆದು (ಹೇಳಬೇಕಾದ್ದನ್ನೇ/ಮಾತನಾಡಲು ಮರೆತರು) ಪೆಱತಂನುಡಿಯೆ ಕೆಲರ್ (ಕೆಲವರು ಮರೆತು ಮತ್ತೇನೋ ಹೇಳಿದರು) ನೋಡದಂತೆ ನೋಡೆ ಕೆಲರ್ (ಕೆಲವರು ನೋಡಿಯೂ ನೋಡದಂತೆ) ಪಾವಡರ್ದವೊಲಿರೆ (ಹಾವು ಮೈಮೇಲೆ ಹತ್ತಿಂದಂತೆ ಸ್ತಬ್ಧರಾಗಿದ್ದರು,) ಕೆಲರ ಒಯ್ಯನೆ ತುಡುಗೆಯನು ಓಸರಿಸೆ ಕೆಲರು ಉದಗ್ರ ಅವನಿಪರ್(ಕೆಲವು ರಾಜರು ತಾವು ಚಂದಕಾಣಲು ತಮ್ಮ ಒಡವೆ ಉಡುಪುಗಳನ್ನು ಸರಿಪಡಿಸಿಕೊಂಡರು.)
ಪದ್ಯ-೫೦:ಅರ್ಥ:(ಅವಳ ಸೌದರ್ಯವನ್ನು ನೋಡಿ ದಿಗ್‍ಭ್ರಮೆಯಿಂದ) ಹೇಳಬೇಕಾದ್ದನ್ನೇ/ಮಾತನಾಡಲು ಮರೆತರು, ಕೆಲವರು ಮರೆತು ಮತ್ತೇನೋ ಹೇಳಿದರು, ಕೆಲವರು ನೋಡಿಯೂ ನೋಡದಂತೆ, ಹಾವು ಮೈಮೇಲೆ ಹತ್ತಿಂದಂತೆ ಸ್ತಬ್ಧರಾಗಿದ್ದರು, ಕೆಲವು ಪ್ರಸಿದ್ಧ ರಾಜರು ತಾವು ಚಂದಕಾಣಲು ತಮ್ಮ ಒಡವೆ ಉಡುಪುಗಳನ್ನು ಸರಿಪಡಿಸಿಕೊಂಡರು.
ಕಂ||ಒಡನೆ ನೆರೆದರಸುಮಕ್ಕಳ
ನಿಡುಗಣ್ಗಳ ಬಳಗಮೆಱಗೆ ತನ್ನಯ ಮೆಯ್ಯೊಳ್|
ನಡೆ ಬಳಸಿ ಪಲರುಮಂಬಂ
ತುಡೆ ನಡುವಿರ್ದೊಂದು ಪುಲ್ಲೆಯಿರ್ಪಂತಿರ್ದಳ್|| ೫೧||
ಪದ್ಯ-೦೦:ಪದವಿಭಾಗ-ಅರ್ಥ:ಒಡನೆ ನೆರೆದ ಅರಸುಮಕ್ಕಳ ನಿಡುಗಣ್ಗಳ(ನೀಳಕಣ್ಣುಗಳ) ಬಳಗಮೆಱಗೆ (ಬಳಗಂ ಎರಗೆ- ದ್ರೌಪತಿಯಮೇಲೆ ಬೀಳಲು) ತನ್ನಯ ಮೆಯ್ಯೊಳ್ ನಡೆ ಬಳಸಿ (ತನ್ನ ಮೈಯಲ್ಲಿ ಎರಗಿ ನೆಡೆ-ನಾಟಿಕೊಳ್ಳಲು,ಸುತ್ತಲೂ ) ಪಲರುಂ ಅಂಬಂ ತುಡೆ(ಹಲವರು ಬಾಣ ತೊಡಲು) ನಡುವೆ ಇರ್ದ ಒಂದು ಪುಲ್ಲೆಯಿರ್ಪಂತೆ ಇರ್ದಳ್ (ಪುಲ್ಲೆ- ಜಿಂಕೆ)
ಪದ್ಯ-೦೦:ಅರ್ಥ:ಒಟ್ಟಿಗೆ ಅಲ್ಲಿ ಸೇರಿದ್ದ ರಾಜಕುಮಾರರ ನೀಳವಾದ ಕಣ್ಣುಗಳ ಸಮೂಹವು ತನ್ನ ಶರೀರದ ಮೇಲೆ ಎರಗಿ ನಾಟಿಕೊಳ್ಳಲು, ಸುತ್ತಲೂ ನಿಂತು ಅನೇಕರು ಪ್ರಯೋಗಮಾಡಿದ ಬಾಣಗಳ ಮಧ್ಯೆ ಸಿಕ್ಕಿದ ಹುಲ್ಲೆಯಂತೆ ದ್ರೌಪದಿ ಇದ್ದಳು.
ಕ||ಮೊನೆಯಂಬುಗಳೊಳೆ ಪೂಣ್ದಪ
ನನಿಬರುಮಂ ಕಿಱಿದು ಬೇಗದಿಂ ಹರಿಗನದ|
ರ್ಕೆನಗೆಡೆವೇೞ್ಕುಮೆ ಎಂಬವೊ
ಲನಿಬರುಮಂ ಪೂಣ್ದನತನು ನನೆಯಂಬುಗಳಿಂ|| ೫೨||
ಪದ್ಯ-೦೦:ಪದವಿಭಾಗ-ಅರ್ಥ:ಮೊನೆಯ ಅಂಬುಗಳೊಳೆ ಪೂಣ್ದಪಂ (ಚೂಪಾದ ಬಾಣಗಳಲ್ಲಿ ಹೂತುಬಿಡುವನು) ಅನಿಬರುಮಂ(ಎಲ್ಲರನ್ನೂ) ಕಿಱಿದು ಬೇಗದಿಂ(ಬಹಳಬೇಗ) ಹರಿಗನು ಅದರ್ಕೆ ಎನಗೆ ಎಡೆವೇೞ್ಕುಮೆ (ಅವಕಾಶ ಬೇಕೇ) ಎಂಬವೊಲ್ ಅನಿಬರುಮಂ (ಎಲ್ಲರನ್ನೂ) ಪೂಣ್ದನು (ಹೂಳಿದನು) ಅತನು(ಆತನು- ಮನ್ಮಥನು) ನನೆಯಂಬುಗಳಿಂ (ಹೂವಿನ ಬಾಣಗಳಿಂದ)
ಪದ್ಯ-೦೦:ಅರ್ಥ: ಅರಿಗನು ಅಲ್ಪಕಾಲದಲ್ಲಿಯೇ ಎಲ್ಲರನ್ನೂ ಚೂಪಾದದ ಬಾಣಗಳಿಂದ ಹೂಳಿಬಿಡುತ್ತಾನೆ. ಅದಕ್ಕಾಗಿ ನಾನು ಬಾಣಬಿಡುವುದಕ್ಕೆ ಸ್ಥಳಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂಳಿದನು.
ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ-
ವಚನ:ಪದವಿಭಾಗ-ಅರ್ಥ:ಆಗಳ್ ಪಾಂಡವರ್ ತಮ್ಮಂ ಪೆಱರ್ ಅಱಯದಂತು (ಬೇರೆಯವರು ತಿಳಿಯದಂತೆ) ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ-
ವಚನ:ಅರ್ಥ:ಆಗ ಪಾಂಡವರು ತಮ್ಮನ್ನು ಇತರರು ತಿಳಿದಂತೆ (ಗುರುತಿಸದಂತೆ) ಬ್ರಾಹ್ಮಣವೇಷದಿಂದಲೇ ಬ್ರಹ್ಮಸಭೆಯಲ್ಲಿ ಬಂದು (ಕುಳಿತಿದ್ದರು)-
ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ
ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|
ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ
ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ ||
ಪದ್ಯ-೦೦:ಪದವಿಭಾಗ-ಅರ್ಥ:ಇಳೆಯೊಳು ಉದಗ್ರ (ಭೂಮಿಯಲ್ಲಿ ಶ್ರೇಷ್ಠರಾದ ) ವೀರ ಭಟ ತುಂಗ ಮತಂಗಜ(ಎತ್ತರವಾದ ಮದ್ದಾನೆ ) ವಾಜಿ ರಾಜಿ (ಕುದುರೆ ಸಮೂಹ) ಚೌಪಳಿಗೆಗಳೊಳ್ (ಚಚ್ಚೌಕವಾದ ಮಂಟಪಗಳಲ್ಲಿ ಉಪ್ಪರಿಗೆಗಳಲ್ಲಿ) ಧರಾಧರ ಧುರಂಧರ ಬಂಧುರ(ಸುಂದರ) ರಾಜಕಂ( ಭೂಮಿಯ ಒಡೆಯರಾದ ಸುಂದರ ರಾತರ ಸಮೂಹ) ವಿಯತ್ತಳದೊಳು(ಆಕಾಶದಲ್ಲಿ) ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮು ಅವ್ವಳಿಸಿರೆ (ಸಮೂಹವು ಒತ್ತಾಗಿಸೇರಿರಲು) ಮೂಱು (ಮೂರು) ಲೋಕಮನೆ ಪೋಲ್ತುದು (ಹೋಲುತ್ತಿತ್ತು) ಮೂನೆಲೆಯಿಂ (ಮೂರು ನೆಲೆಗಳಿಂದ -ಭೂಮಿಯಲ್ಲಿ, ಉಪ್ಪರಿಗೆಯಲ್ಲಿ, ಆಕಾಶದಲ್ಲಿ) ಸ್ವಯಂಬರಂ
ಪದ್ಯ-೦೦:ಅರ್ಥ: ಭೂಮಿಯಲ್ಲಿ (ನೆಲದ ಮೇಲೆ) ಶ್ರೇಷ್ಠರಾದ ಭಟರೂ ಎತ್ತರವಾದ ಮದ್ದಾನೆ ಮತ್ತು ಕುದುರೆಯ ಸಮೂಹಗಳೂ ಚಚ್ಚೌಕವಾದ ಮಂಟಪಗಳಲ್ಲಿ ರಾಜಶ್ರೇಷ್ಠರ ಮನೋಹರವಾದ ಸಮೂಹವೂ ಅಂತರಿಕ್ಷ ಪ್ರದೇಶದಲ್ಲಿ ಕಿಂಪುರುಷ, ಕಿನ್ನರ, ಖೇಚರ, ಸಿದ್ಧಪುರುಷರ ಸಮೂಹವೂ ತುಂಬಿರಲು ಈ ಮೂರುನೆಲೆಗಳಿಂದ ಸ್ವಯಂವರ ಮಂಟಪವು ಮೂರುಲೋಕವನ್ನೂ ಹೋಲುತ್ತಿತ್ತು
ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ-
ವಚನ:ಪದವಿಭಾಗ-ಅರ್ಥ:ಆಗಳ್ ವಿದಿತ (ತಿಳಿದು)ವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ (ಪಕ್ಕದಲ್ಲಿದ್ದ)ಸುಂದರ ಮಾಲೆಯೆಂಬ ಚೇಟಿ-
ವಚನ:ಅರ್ಥ:ಆಗ ಅಲ್ಲಿದ್ದ ರಾಜರ ವಿಷಯವನ್ನು ತಿಳಿದುಕೊಂಡು ಪಕ್ಕದಲ್ಲಿದ್ದ ಸುಂದರಮಾಲೆಯೆಂಬ ಚೇಟಿಯು ದ್ರೌಪದಿಗೆ ಅವರ ಪರಿಚಯ ಮಾಡಿಸಿದಳು
ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ
ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|
ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ
ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪ್ರತ್ರೇಕ್ಷಣೇ|| ೫೪||
ಪದ್ಯ-೦೦:ಪದವಿಭಾಗ-ಅರ್ಥ:ಕನಕ ಉಚ್ಚಾಸನ ಸಂಸ್ಥಿತಂ ನೃಪನು ಅವಂ(ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವ ಅವನು) ಬೆಂಗೀಶನು(ವಂಗದೇಶದ ದೊರೆ), ಉತ್ತುಂಗ ಪೀನ(ದಪ್ಪ) ನಿಜ ಅಂಸ(ಭುಜದ ಮೇಲೆ) ಅರ್ಪಿತ ಲಂಬಹಾರನು ಅವನು ಆ ಪಾಂಡ್ಯಂ(ಎತ್ತರವೂ ದಪ್ಪವೂ ಆದ ಭುಜದಮೇಲೆ ಉದ್ದವಾದ ಹಾರವುಳ್ಳವನು ಪಾಂಡ್ಯ,) ಮನಂಗೊಂಡು (ಮನಮೆಚ್ಚಿ) ನಿನ್ನನೆ ಕಿೞ್ಗಣ್ಣೊಳೆ (ಕೆಳಕಣ್ಣಿನಲ್ಲಿ) ನೋಡುತಿರ್ಪವನು ಅವಂ ಚೇರಮ್ಮನು, ಆದಿತ್ಯತೇಜಂ ಅವಂ ನೋಡು ಕಳಿಂಗದೇಶದ ಅರಸಂ, ಪಂಕೇಜ ಪ್ರತ್ರೇಕ್ಷಣೇ(ಕಮಲಪತ್ರ ಕಣ್ಣಿನವಳೇ)
ಪದ್ಯ-೦೦:ಅರ್ಥ: ಎಲೌ ಕಮಲಪತ್ರ ಕಣ್ಣಿನವಳೇ- ದ್ರೌಪದಿಯೇ ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವ ಅವನು ವಂಗದೇಶದ ದೊರೆ, ಎತ್ತರವೂ ದಪ್ಪವೂ ಆದ ಭುಜದಮೇಲೆ ಉದ್ದವಾದ ಹಾರವುಳ್ಳವನು ಪಾಂಡ್ಯ, ವಿಶೇಷ ಆಕರ್ಷಿತನಾಗಿ ಕೆಳಗಣ್ಣಿನಲ್ಲಿ ನಿನ್ನನ್ನೇ ನೋಡುತ್ತಿರುವವನು ಚೇರಮ, ಸೂರ್ಯತೇಜಸ್ಸುಳ್ಳ ಆತ ಕಳಿಂಗದೇಶದರಸನು ನೋಡು. ಎಂದಳು ಚೇಟಿ.
ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂ ಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ-
ವಚನ:ಪದವಿಭಾಗ-ಅರ್ಥ:ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳ್ ಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ (ದಿಕ್ಕುಗಳೆಲ್ಲವೂ) ಧವಳಿಸಿದನ್ನವಾಗೆ (ಬಿಳಿಪಾದಂತಾಗಿರಲು) ಪೊಗಳುತೆ ವರ್ಪವರ (ಹೊಗಳುತ್ತ ಬರುವವರ) ಸರಂಗಳೊಳಂ (ಸ್ವರ) ಪಾಡುವ ಪಾಠಕಾಱರ (ಹೊಗಳುಭಟ್ಟರ) ಇಂಚರಂಗಳೊಳೆಲ್ಲಂ (ಮಧುರವಾದ ಧ್ವನಿಯಿಂದ) ದಿಗ್ಭಿತ್ತಿಗಳ್ (ದಿಗಂತಗಳೆಲ್ಲವೂ) ತೆಕ್ಕನೆ ತೀವೆ (ತಕ್ಷಣ ತುಂಬಲು) ಮಣಿಮಯಪೀಠದ ಮೇಲೆ ಕಾಲನು ಅವಷ್ಟಂಭದಿಂ ನೀಡಿ(ಠೀವಿಯಿಂದ ನೀಡಿ )-
ವಚನ:ಅರ್ಥ:ಮತ್ತೆ ಈ ಕಡೆ ಬೀಸುವ ಚಾಮರಗಳ ಹೊಳಪಿನಿಂದಲೂ ಎತ್ತಿದ ಬೆಳುಗೊಡೆಗಳ ಬೆಳುಪಿನಿಂದಲೂ ದಿಕ್ಕುಗಳಲ್ಲಿ ಬಿಳಿಯಬಣ್ಣದಿಂದ ಕೂಡಿದುದಾಗಿರಲು ಹೊಗಳುತ್ತ ಬರುವವರ ಸ್ವರಗಳಿಂದಲೂ ಹಾಡುತ್ತಿರುವವರ ಹೊಗಳುಭಟ್ಟರ ಮಧುರವಾದ ಧ್ವನಿಗಳಿಂದಲೂ ದಿಗಂತಗಳೆಲ್ಲವೂ ಇದ್ದಕ್ಕಿದ್ದ ಹಾಗೆ ತುಂಬಿರಲು ರತ್ನಖಚಿತವಾದ ಆಸನದ ಮೇಲೆ ತನ್ನ ಕಾಲನ್ನು ಠೀವಿಯಿಂದ ನೀಡಿ
ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ
ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|
ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್
ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫||
ಪದ್ಯ-೦೦:ಪದವಿಭಾಗ-ಅರ್ಥ:ಅಲರಂಬಿಂದೆ (ಅರಲು ಅಂಬು- ಹೂಬಾಣದಿಂದ) ಉಱದ ಎನ್ನ ಮೆಲ್ಲೆರ್ದೆಯನು ಇಂತು ಉರ್ಚಿತ್ತು (ಬೇಧಿಸಿತು)ಇದು ಎಂಬಂತೆ(ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ) ನೆಯ್ದಿಲ ಕಾವಂ (ನೈದಿಲೆ ಹೂವಿನ ತೊಟ್ಟು ಒಂದನ್ನು) ತಿರುಪುತ್ತುಂ ಒಂದನು, ಅನಿಬರ್ ()ಎಲ್ಲಾ ತಮ್ಮಂದಿರುಂ ತನ್ನ ಎರೞ್ಕೆಲದೊಳ್ (ಎರಳ್ ಕೆಲದೊಳ್- ಎರಡು ಪಕ್ಕದಲ್ಲಿ) ಬಂದು ಇರೆ; ನೋಡಿ ಸೋಲ್ತು(ಸೋತು) ನಿನಗೆ, ಆ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ(ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವವನು) ಸುಯೋಧನನೃಪಂ ನೀನು ಆತನಂ ನೋಡುಗೇ(ನೋಡುವವಳಾಗು)
ಪದ್ಯ-೦೦:ಅರ್ಥ: ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ ನೆಯ್ದಿಲ ನೈದಿಲೆ ಹೂವಿನ ತೊಟ್ಟನ್ನು ಒಂದು ಕೈಯಲ್ಲಿ ತಿರುಗಿಸುತ್ತಲೂ ಅಷ್ಟು ಜನ ತಮ್ಮಂದಿರೂ ತನ್ನ ಎರಡು ಪಕ್ಕದಲ್ಲಿಯೂ ಬಂದಿರಲು ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವ ಅವನು ದುರ್ಯೋಧನ ಭೂಪತಿ; ಆತನನ್ನು ನೀನು ನೋಡು
ವ|| ಮತ್ತಿತ್ತ ಮಿಂಚಂ ತಟ್ಟಿ ಮೆಡಱಿದಂತೆ ಸುತ್ತಿಱಿದ ಕಾಲ್ಗಾಪಿನ ಕಡಿತಲೆಯ ಬಳಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇಱಿ-
ವಚನ:ಪದವಿಭಾಗ-ಅರ್ಥ:ಮತ್ತೆ ಅತ್ತ ಮಿಂಚಂ ತಟ್ಟಿ ಮೆಡಱಿದಂತೆ (ಮಿಂಚನ್ನು ತಡಿಕೆಯಾಗಿ ಹೆಣೆದಹಾಗೆ) ಸುತ್ತಿಱಿದ (ಸುತ್ತ ಇರಿದ-ಕತ್ತಿಯ?ನ್ನು ಹಿಡಿದಿರುವ?) ಕಾಲ್ಗಾಪಿನ(ಕಾವಲಿನ) ಕಡಿತಲೆಯ (ಕತ್ತಿಯನ್ನು ಹೊಂದಿದ)ಬಳಸಿದ ಅಗಣ್ಯ (ಬಹಳ) ಪಣ್ಯಾಂಗನಾ ಜನದ (ವೇಶ್ಯೆಯರ) ನಡುವೆ ಮಣಿಮಯ ಪೀಠಂಗಳನು ಏಱಿ (ಹತ್ತಿ)-
ವಚನ:ಅರ್ಥ:ಈ ಕಡೆ ಮಿಂಚನ್ನು ತಡಿಕೆಯಾಗಿ ಹೆಣೆದಹಾಗೆ ಮುಸುಕಿದ್ದಾರೆಯೋ ಎನ್ನುವಂತಿರುವ ಅಸಂಖ್ಯಾತರಾದ ವೇಶ್ಯಾಸ್ತ್ರೀಯರ ಮಧ್ಯೆ ಮತ್ತು ಕತ್ತಿಹಿಡಿದ ಕಾವಲುಗಾರರ ನಡುವೆ ರತ್ನಖಚಿತವಾದ ಪೀಠದ ಮೇಲೆ-(ಕುಳಿತಿರುವವರು)
ಕಂ|| ಆಯತ ಯದುವಂಶ ಕುಲ
ಶ್ರೀಯಂ ತೞ್ಕೈಸಿದದಟರತಿರಥರವರ|
ತ್ಯಾಯತಭುಜಪರಿಘರ್ ನಾ
ರಾಯಣ ಬಲದೇವರೆಂಬರಂಬುಜವದನೇ|| ೫೬||
ಪದ್ಯ-೦೦:ಪದವಿಭಾಗ-ಅರ್ಥ:ಆಯತ (ವಿಸ್ತಾರವಾದ) ಯದುವಂಶ ಕುಲಶ್ರೀಯಂ ತೞ್ಕೈಸಿದ (ತಳ್ಕೈಸಿದ - ಆಲಂಗಿಸಿದ) ಅದಟರು ಅತಿರಥರು ಅವರ ಅತ್ಯಾಯತ (ಬಹಳ ದೀರ್ಘವಾದ) ಭುಜಪರಿಘರ್ (ಪರಿಘದಂತಿರುವ ಭುಜವುಳ್ಳವರು) ನಾರಾಯಣ ಬಲದೇವರೆಂಬರ್ (ಕೃಷ್ಣ ಬಲರಾಮರು) ಅಂಬುಜವದನೇ(ದ್ರೌಪದಿಯೇ)()
ಪದ್ಯ-೦೦:ಅರ್ಥ: ಕುಳಿತಿರುವವರು ವಿಸ್ತಾರವಾದ ಯದುಲಕ್ಷ್ಮಿಯನ್ನು ಆಲಿಂಗನಮಾಡಿಕೊಂಡಿರುವ ಶೂರರೂ ಪರಾಕ್ರಮಿಗಳೂ ದೀರ್ಘವಾದ ಪರಿಘಾಯುಧದಂತಿರುವ ತೋಳುಗಳನ್ನುಳ್ಳವರೂ ಆದವರು ಕೃಷ್ಣಬಲರಾಮರೆಂಬುವರು.
ವ|| ಎಂದು ಕಿಱಿದಂತರಂ ಪೋಗಿ-
ವಚನ:ಪದವಿಭಾಗ-ಅರ್ಥ:ಎಂದು ಕಿಱಿದು (ಸ್ವಲ್ಪ) ಅಂತರಂ ಪೋಗಿ-
ವಚನ:ಅರ್ಥ: ಎಂದು ಸ್ವಲ್ಪದೂರ ಹೋಗಿ
ಉ|| ಇಂತಿವರಿನ್ನರೀ ದೊರೆಯರೆಂದೆಱಿವಂತಿರೆ ಪೇೞ್ದುವೇೞ್ದು ರಾ
ಜಾಂತರದಿಂದೆ ರಾಜಸುತೆಯಂ ನಯದಿಂದವಳುಯ್ದಳಂತು ಸ|
ದ್ಭ್ರಾಂತ ಸಮೀರಣೋತ್ಥಿತ ವಿಶಾಲ ವಿಳೋಳ ತರಂಗ ರೇಖೆ ಪ
ದ್ಮಾಂತರದಿಂದಮಿಂಬಱಿದು ಮಾನಸಹಂಸಿಯನುಯ್ವಮಾರ್ಗದಿಂ|| ೫೭||
ಪದ್ಯ-೦೦:ಪದವಿಭಾಗ-ಅರ್ಥ:ಇಂತು ಇವರು ಇನ್ನರು (ಇಂತಹವರು) ಈ ದೊರೆಯರು(ಯೋಗ್ಯತೆಯುಳ್ಳವರು) ಎಂದು ಎಱಿವಂತಿರೆ ಪೇೞ್ದುವೇೞ್ದು (ತಿಳಿಯುವ ಹಾಗೆ ಹೇಳಿ ಹೇಳಿ) ರಾಜಾಂತರದಿಂದೆ ರಾಜಸುತೆಯಂ (ರಾಜಕುಮಾರಿ ದ್ರೌಪದಿಯನ್ನು) ನಯದಿಂದ ಅವಳು ಉಯ್ದಳು ಅಂತು(ಕರೆದುಕೊಂಡು ಹೋದಳು, ಅಂತು- ಹೇಗೆಂದರೆ-) ಸದ್ಭ್ರಾಂತ (ಚೆನ್ನಾಗಿ ಬೀಸಿದ ) ಸಮೀರಣೋತ್ಥಿತ (ಸಮೀರಣಯಿಂದ-ಗಾಳಿ ಉತ್ಥಿತ-ಮೇಲೆದ್ದ) ವಿಶಾಲ ವಿಳೋಳ (ಓಲಾಡುವ) ತರಂಗ ರೇಖೆ (ಅಲೆಗಳ ಸಾಲಿನಂತೆ) ಪದ್ಮಾಂತರದಿಂದ (ಒಂದು ಕಮಲದಿಂದ ಮತ್ತೊಂದು ಪದ್ಮಕ್ಕೆ) ಇಂಬಱಿದು (ಸಮಯತಿಳಿದು) ಮಾನಸಹಂಸಿಯಂ ಉಯ್ವಮಾರ್ಗದಿಂ(ಕರೆದುಕೊಂಡು ಹೋಗುವ ರೀತಿಯಿಂದ)
ಪದ್ಯ-೦೦:ಅರ್ಥ: ಇವರು ಇಂತಹವರು, ಈ ಯೋಗ್ಯತೆಯುಳ್ಳವರು ಎಂದು ಚೆನ್ನಾಗಿ ತಿಳಿಯುವ ಹಾಗೆ ಹೇಳಿ ಹೇಳಿ, ರಾಜರೊಬ್ಬರಿಂದ ಮುಂದಕ್ಕೆ ಆ ದ್ರೌಪದಿಯನ್ನು ಚೆನ್ನಾಗಿ ಬೀಸಿದ ಗಾಳಿಯಿಂದ ಮೇಲಕ್ಕೆದ್ದ ವಿಶಾಲವೂ ಚಂಚಲವೂ ಆದ ಅಲೆಗಳ ಸಾಲು ಹದವರಿತು ಕಮಲದಿಂದ ಮೇಲಕ್ಕೆ ರಾಜಹಂಸವನ್ನು ಸೆಳೆದೊಯ್ಯುವ/ಕರೆದುಕೊಂಡು ಹೋಗುವ ರೀತಿಯಲ್ಲಿ ಈ ಚೇಟಿಯು ಕರೆದುಕೊಂಡು ಹೋದಳು.
ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುೞೆವರೆ ದ್ರುಪದನಿದಳೆಲ್ಲ ಮೇನಿಂ ಹೋಮಾಗ್ನಿಸಂಭವಮಪ್ಪ ದಿವ್ಯಚಾಪಮನೇಱಿಸಿಯುವಿಯಯ್ದು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮೀನನಿಸಲಾರ್ಪೊಡೆ ಬಂದೇಱಿಸಿಯು ಮೆಚ್ಚು ಗೆಲ್ಲಂಗೊಡೆನ್ನ ಮಗಳಂ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಱಿಸಿದಪೆವೆಂದನಿಬರಾನುಮರಸುಮಕ್ಕಳ್ ಬಂದು-
ವಚನ:ಪದವಿಭಾಗ-ಅರ್ಥ:ಅಂತು ನೆರೆದ ಅರಸುಮಕ್ಕಳ ಆರುಮಂ ಮೆಚ್ಚದೆ (ಯಾರನ್ನೂ ಮೆಚ್ಚದೆ) ಮಗುೞೆ ವರೆ (ಹಿಂತಿರುಗಿಬರಲು) ದ್ರುಪದನು ಇದಳು ಎಲ್ಲಮ್ ಏನಿಂ (ಇದರಿಂದ ಏನಿದೆ!) ಹೋಮಾಗ್ನಿ ಸಂಭವಮಪ್ಪ ದಿವ್ಯಚಾಪಮನು (ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು) ಏಱಿಸಿಯುವಿಯ (ಧನುವಿನ ಹೆದೆಯನ್ನು ಏರಿಸಿ ) ಅಯ್ದು ಶರದೊಳು (ಐದು ಬಾಣದಲ್ಲಿ) ಆಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮೀನಂ ಇಸಲಾರ್ಪೊಡೆ (ಮೇಲೆ ಹೊಳೆಯುವ ಯಂತ್ರದ ಮೀನನ್ನು ಹೊಡೆಯಲು ಶಕ್ತರಾದರೆ) ಬಂದು ಏಱಿಸಿಯು ಮೆಚ್ಚು ಗೆಲ್ಲಂಗೊಡು ಎನ್ನ ಮಗಳಂ ಮದುವೆಯಪ್ಪುದು ಎಂಬುದುಂ ಆಮಾಮೆ (ಆಂ ಆಮೆ- ನಾನು ನಾನೇ) ಬಿಲ್ಲನು ಏಱಿಸಿದಪೆವು ಎಂದು ಅನಿಬರಾನುಂ (ಎಷ್ಟೊ ಜನ) ಅರಸುಮಕ್ಕಳ್ ಬಂದು-
ವಚನ:ಅರ್ಥ:ಹಾಗೆ ಅಲ್ಲಿ ಸೇರಿದ್ದ ರಾಜಕುಮಾರರಲ್ಲಿ ಯಾರನ್ನೂ ಮೆಚ್ಚದೆ ದ್ರೌಪದಿಯು ಹಿಂದಿರುಗಿ ಬರಲು ದ್ರುಪದನು ಇದರಲ್ಲೇನಿದೆ, ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು ಹೆದೆಯೇರಿಸಿ ಈ ಅಯ್ದು ಬಾಣಗಳಿಂದ ಆಕಾಶದಲ್ಲಿ ನಲಿದು ಹೊಳೆಯುತ್ತಿರುವ ಯಂತ್ರದ ಮೀನನ್ನು ಹೊಡೆಯಲು ಸಮರ್ಥನಾದರೆ ಬಂದು ಬಿಲ್ಲನ್ನು ಹೂಡಿ ಜಯವನ್ನು ಪಡೆದು ನನ್ನ ಮಗಳನ್ನು ಮದುವೆಯಾಗಬಹುದು ಎಂಬುದಾಗಿ ಸಾರಿದನು. ನಾನು, ನಾನೇ, ಬಿಲ್ಲನ್ನು ಏರಿಸುತ್ತೇವೆಂದು ಎಷ್ಟೋ ಜನ ರಾಜಕುಮಾರರು ಬಂದು -(ಬಂದರು).
ಉ|| ಏಱಿಪೆವೆಂದರ್ ನೆಲದಿನೆತ್ತಲುಮಾಱದೆ ಬಿೞ್ದು ನೆತ್ತರಂ
ಕಾಱಿಯುಮೆತ್ತಿ ಕಯ್ಯುಡಿದುಮಾಗಳೆ ಕಾಲುಡಿದುಂ ಬೞಲ್ದು ಪ
ಲ್ಲಾಱ ಪೊಡರ್ಪುಗೆಟ್ಟುಸಿರಲಪ್ಪೊಡಮಾಱದೆ ಪೋದೊಡಾಗಳಾ
ನೇಱಿಪೆನೆಂದು ಪೊಚ್ಚಱಸಿ ಬಂದು ಸುಯೋಧನನುಗ್ರಚಾಪಮಂ|| ೫೮||
ಪದ್ಯ-೦೦:ಪದವಿಭಾಗ-ಅರ್ಥ:ಏಱಿಪೆವ್ ಎಂದರ್, ನೆಲದಿಂ ಎತ್ತಲುಂ ಆಱದೆ ಬಿೞ್ದು (ಎತ್ತಲೂ ಸಮರ್ಥರಾಗದೆ ಬಿದ್ದು ), ನೆತ್ತರಂ ಕಾಱಿಯುಂ, ಎತ್ತಿ ಕಯ್ಯುಡಿದುಂ ಆಗಳೆ ಕಾಲುಡಿದುಂ, (ಕೈಮುರಿದು ಕಾಲುಮುರಿದು ) ಬೞಲ್ದು (ಬಳಲಿ) ಪಲ್ಲಾಱ (ಹಲ್ಲು ಆರಿ-ಒಣಗಿ) ಪೊಡರ್ಪುಗೆಟ್ಟು () ಉಸಿರಲು ಅಪ್ಪೊಡಮಾಱದೆ (ಮಾತಾಡಲಾರದೆ) ಪೋದೊಡೆ (ಹೋದರೆ) ಆಗಳ್ ಆನ್ ಏಱಿಪೆನೆಂದು ಪೊಚ್ಚಱಸಿ (ನಾನು ಹದೆ ಏರಿಸುವೆನೆಂದು ಶಕ್ತಿಯುತವಾಗಿ) ಬಂದು ಸುಯೋಧನನು ಉಗ್ರಚಾಪಮಂ
ಪದ್ಯ-೦೦:ಅರ್ಥ: ಏರಿಸುತ್ತೇನೆ ಎಂದವರು ಅದನ್ನು ನೆಲದಿಂದ ಎತ್ತಲೂ ಸಮರ್ಥರಾಗದೆ ಬಿದ್ದು ರಕ್ತವನ್ನು ಕಾರಿ, ಕೈಮುರಿದು ಕಾಲುಮುರಿದು ಬಳಲಿ ಬಾಯೊಣಗಿ ಶಕ್ತಿಗುಂದಿ ಉಸಿರು ಕಟ್ಟಿ, ಹೋಗಲು ದುರ್ಯೋಧನನು ನಾನು ಏರಿಸುತ್ತೇನೆಂದು ಜಂಭದಿಂದ ಬಂದನು. ಆ ಭಯಂಕರವಾದ ಬಿಲ್ಲನ್ನು-
ವ|| ಮೂಱು ಸೂೞು ಬಲವಂದು ಪೊಡಮಟ್ಟು-
ವಚನ:ಪದವಿಭಾಗ-ಅರ್ಥ:ಮೂಱು ಸೂೞು(ಮೂರು ಸಲ) ಬಲವಂದು (ಪ್ರದಕ್ಷಿಣೆ ಮಾಡಿ) ಪೊಡಮಟ್ಟು(ನಮಸ್ಕರಿಸಿ)-
ವಚನ:ಅರ್ಥ:ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ-
ಕಂ|| ಪಿಡಿದಾರ್ಪ ಭರದಿನೆತ್ತ
ಲ್ಕೊಡರಿಸಿದೊಡೆ ನೆಲದಿನಣಮೆ ತಳರದೆ ಬಿಲ್ ನಿ|
ಲ್ತೊಡೆ ಗುಡು ಗುಡು ಗುಡು ಗೊಳ್ಳೆಂ
ಡೊಡನಾರೆ ಸುಯೋಧನಂ ಕರಂ ಸಿಗ್ಗಾದಂ|| ೫೯||
ಪದ್ಯ-೦೦:ಪದವಿಭಾಗ-ಅರ್ಥ:ಪಿಡಿದು ಆರ್ಪ (ಕೈಲಾಗುವಷ್ಟು) ಭರದಿಂ ಎತ್ತಲ್ಕೆ ಒಡರಿಸಿದೊಡೆ (ಪ್ರಯತ್ನಪಟ್ಟಾಗ) ನೆಲದಿಂ ಅಣಮೆ (ಕೊಂಚವೂ) ತಳರದೆ (ಅಲುಗದೆ) ಬಿಲ್ ನಿಲ್ತೊಡೆ (ಅದು ನೆಲದಿಂದ ಕೊಂಚವೂ ಅಲುಗದೆ ನಿಂತಾಗ-) ಗುಡು ಗುಡು ಗುಡು ಗೊಳ್ಳೆಂಡು ಒಡನೆ ಆರೆ (ಕೂಗಿದಾ) ಸುಯೋಧನಂ ಕರಂ (ಬಹಳ) ಸಿಗ್ಗಾದಂ (ಲಜ್ಜಿತನಾದನು).
ಪದ್ಯ-೦೦:ಅರ್ಥ:(ಬಿಲ್ಲನ್ನು) ಹಿಡಿದು ತನ್ನ ಕೈಲಾಗುವಷ್ಟುಶಕ್ತಿ ಉಪಯೋಗಿಸಿ ವೇಗದಿಂದ ಎತ್ತಲು ಪ್ರಯತ್ನಪಟ್ಟಾಗ, ಅದು ನೆಲದಿಂದ ಕೊಂಚವೂ ಅಲುಗದೆ ನಿಂತಾಗ- ಗುಡುಗುಡುಗುಡುಗೊಳ್ಳೆಂದು ನೋಡುತ್ತಿದ್ದವರು ಕೂಗಿದಾಗ, ದುರ್ಯೋಧನನು ವಿಶೇಷವಾಗಿ ಲಜ್ಜಿತನಾದನು.
ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳ್ದನ ಸಿಗ್ಗಾದ ಮೊಗಮಂ ಕಂಡು-
ವಚನ:ಪದವಿಭಾಗ-ಅರ್ಥ:ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನು ಆಳ್ದನ ಸಿಗ್ಗಾದ (ಸ್ವಾಮಿಯ ನಾಚಿಕೆಯ) ಮೊಗಮಂ ಕಂಡು-
ವಚನ:ಅರ್ಥ:ದುರ್ಯೋಧನನು ಕರ್ಣನ ಮುಖವನ್ನು ನೋಡಿದನು. ಕರ್ಣನು ಸ್ವಾಮಿಯ ನಾಚಿದ ಮೊಗವನ್ನು ನೋಡಿ
ಕಂ|| ಆನೇಱಿಪೆನೆಂದಾ ಕಾ
ನೀನಂ ಬಂದೆತ್ತಿ ಬಿಲ್ಲನೇಱಿಸಿ ತೆಗೆಯಲ್|
ತಾನಾರ್ತನಿಲ್ಲ ತೆಗೆವಂ
ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ|| ೬೦||
ಪದ್ಯ-೦೦:ಪದವಿಭಾಗ-ಅರ್ಥ: ಆನು ಏಱಿಪೆನು (ಹೆದೆಏರಿಸುತ್ತೇನೆ) ಎಂದು ಆ ಕಾನೀನಂ (ಮದುವೆಗೆ ಮೊದಲೇ ಹುಟ್ಟಿದವನು- ಕರ್ಣ) ಬಂದು ಎತ್ತಿ ಬಿಲ್ಲನೇಱಿಸಿ ತೆಗೆಯಲ್|ತಾನು ಆರ್ತನಿಲ್ಲ (ಸಮರ್ಥನಾಗಲಿಲ್ಲ) ತೆಗೆವಂತೆ (ಬಿಲ್ಲನ್ನು ಸೆಳೆಯಲು) ಆ ನೃಪತಿಗಳು ಅರಿಗನ (ಅರಿಕೇಸರಿಯ/ ಅರ್ಜುನನ) ಇದಿರೊಳೇಂ ಪುಟ್ಟಿದರೇ(ಅರ್ಜುನನ ಎದುರಾಗಿ ಅವನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು?)
ಪದ್ಯ-೦೦:ಅರ್ಥ:ಕರ್ಣನು, ನಾನು ಹೆದೆ ಏರಿಸುತ್ತೇನೆಂದು ಬಂದು ಎತ್ತಿ ಏರಿಸಲು ಶಕ್ತನಾಗಲಿಲ್ಲ. ಹಾಗೆ ಬಿಲ್ಲನ್ನು ಸೆಳೆಯಲು, ಆ ರಾಜರುಗಳು ಅರ್ಜುನನ ಎದುರಾಗಿ ಅವನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು?
ವ|| ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಲುಂಬೆಱಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪೆಡೆಯೊಳಿರೆ ಪಾಂಚಾಳರಾಜನೀ ನೆರೆದರ ಸುಮಕ್ಕಳೊಳಾರುವಿ ಬಿಲ್ಲನೇಱಿಸಲಾರ್ತರಿಲ್ಲಮೀ ಜನವಡೆಯೊಳುಆರಾನುಂ ಈ ಬಿಲ್ಲನೇಱಿಸಲಾರ್ಪೊಡೆ ಬನ್ನಿಮೆಂದು ಸಾಱುವುದುಂ|
ವಚನ:ಪದವಿಭಾಗ-ಅರ್ಥ:ಅಂತು ಆ ಬಿಲ್ಲಂ ಪಿಡಿದವರೆಲ್ಲಂ (ಹಿಡಿದವರೆಲ್ಲರೂ) ಬಿಲ್ಲುಂ ಬೆಱಗುಮಾಗಿ (ಬಿಲ್ಲಿನಿಂದ ಅಚ್ಚರಿಪಟ್ಟು ತಳಮಳಗೊಂಡು) ಸಿಗ್ಗಾಗಿ (ನಾಚಿಕೆಪಟ್ಟು) ಪೋಗಿ ತಂತಮ್ಮ ಇರ್ಪೆಡೆಯೊಳು ಇರೆ (ತಾವು ತಾವು ಇದ್ದ ಸ್ಥಳಗಳಲ್ಲಿಯೇಇರಲು,) ಪಾಂಚಾಳರಾಜನು ಈ ನೆರೆದ(ಗುಂಪಿನಲ್ಲಿ) ಅರಸುಮಕ್ಕಳೊಳು ಆರುವಿ (ಯಾರೂ) ಬಿಲ್ಲನು ಏಱಿಸಲು ಆರ್ತರಿಲ್ಲಂ; ಈ ಜನವಡೆಯೊಳು (ಗುಂಪಿನಲ್ಲಿ ) ಆರಾನುಂ (ಯಾರಾದರೂ) ಈ ಬಿಲ್ಲನು ಏಱಿಸಲು (ಬಿಲ್ಲನ್ನು ಹೆದೆ ಏರಿಸುವ) ಆರ್ಪೊಡೆ (ಸಮರ್ಥರಾದರೆ) ಬನ್ನಿಂ ಎಂದು ಸಾಱುವುದುಂ-
ವಚನ:ಅರ್ಥ:ಹಾಗೆ ಆ ಬಿಲ್ಲನ್ನು ಹಿಡಿದವರೆಲ್ಲರೂ ಅಚ್ಚರಿಪಟ್ಟು ತಳಮಳಗೊಂಡು, ಲಜ್ಜಿತರಾಗಿ ಹೋಗಿ ತಾವು ತಾವು ಇದ್ದ ಸ್ಥಳಗಳಲ್ಲಿದ್ದರು. ಆಗ ದ್ರುಪದನು ಇಲ್ಲಿರುವ ರಾಜಕುಮಾರರಲ್ಲಿ ಈ ಬಿಲ್ಲನ್ನೇರಿಸಲು ಯಾರೂ ಶಕ್ತರಾಗಲಿಲ್ಲ. ಈ ಜನದ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನು ಹೆದೆ ಏರಿಸುವ ಶಕ್ತಿಯಿದ್ದರೆ ಬನ್ನಿ ಎಂದು ಸಾರಿದನು.

ಸ್ಪರ್ಧೆಗೆ ಅರ್ಜುನನ ಪ್ರವೇಶ[ಸಂಪಾದಿಸಿ]

ಚಂ|| ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ
ರ್ವಿಸುವಿನಮಾಗಳೊರ್ಮೊದಲೆ ಮೂಡುವ ಬಾಳ ದೀನೇಶಬಿಂಬದೊಂ|
ದೆಸಕದಿನಾ ದ್ವಿಜನ್ಮಸಭೆಯಂ ಪೊಱಮಟ್ಟೊಡೆ ಮಾಸಿದಂದಮುಂ
ಪಸದನದಂತೆ ಕಣ್ಗೆಸೆದು ತೋಱಿದುದಾ ಕದನತ್ರಿಣೇತ್ರನಾ|| ೬೧||
ಪದ್ಯ-೦೦:ಪದವಿಭಾಗ-ಅರ್ಥ:ಮುಸುಕಿದ (ಮುಚ್ಚಿಕೊಂಡ) ನೀರದಾವಳಿಗಳಂ (ನೀರದ-ಮೋಡಗಳ ಸಾಲನ್ನು) ಕಿರಣಂಗಳೊಳು ಒತ್ತಿ (ಕಿರಣಗಳಲ್ಲಿ ಒತ್ತಿ) ತೇಜಂ ಅರ್ವಿಸುವಿನಂ ಆಗಳ್ ಒರ್ಮೊದಲೆ ಮೂಡುವ(ಪ್ರಕಾಶವು ವ್ಯಾಪಿಸುತ್ತಿರಲು ಆಗ ಒಟ್ಟಿಗೆ ಹುಟ್ಟುವ) ಬಾಳ ದೀನೇಶಬಿಂಬದ ಒಂದು ಎಸಕದಿಂ ಆ (ಬಾಲ ಸೂರ್ಯನಬಿಂಬದ ಶೋಭೆಯಿಂದ) ದ್ವಿಜನ್ಮ ಸಭೆಯಂ (ಬ್ರಾಹದಮಣರ ಸಭೆಯಿಂದ) ಪೊಱಮಟ್ಟೊಡೆ (ಹೊರಬಂದರೆ,) ಮಾಸಿದ ಅಂದಮುಂ (ರೀತಿಯುಲ್ಲಿ) ಪಸದನದಂತೆ (ಅಲಂಕಾರದಂತೆ) ಕಣ್ಗೆ ಎಸೆದು ತೋಱಿದುದು (ಕಣ್ಣಿಗೆ ಪ್ರಕಾಶಮಾನವಾಗಿ ತೋರಿತು. ಹೇಗೆಂದರೆ-) ಕದನತ್ರಿಣೇತ್ರನಾ (ಕದನ ತ್ರಿಣೇತ್ರನಾ- ಯುದ್ಧದಲ್ಲಿ ರುದ್ರನಂತಿರುವ ಅರ್ಜುನನಾ)
ಪದ್ಯ-೦೦:ಅರ್ಥ: ಮುಚ್ಚಿಕೊಂಡಿರುವ ಮೋಡಗಳ ಸಮೂಹವನ್ನು ಕಿರಣಗಳಿಂದ ಒತ್ತಿ ತೇಜಸ್ಸು ಪ್ರಕಾಶಮಾನವಾಗುತ್ತಿರಲು ಇದ್ದಕ್ಕಿದ್ದ ಹಾಗೆ ಉದಯವಾಗುವ ಬಾಲಸೂರ್ಯ ಬಿಂಬದೊಂದು ರೀತಿಯಲ್ಲಿ ಬ್ರಾಹ್ಮಣ ಸಭೆಯಿಂದ ಅರ್ಜುನನು ಹೊರಟುಬಂದನು. ಮಲಿನವಾಗಿದ್ದ ಆ ಕದನತ್ರಿಣೇತ್ರನ/ ಅರ್ಜುನನ ರೀತಿಯು ಅಲಂಕಾರಮಾಡಿದಂತೆಯೇ, ಕಣ್ಣಿಗೆ ಪ್ರಕಾಶಮಾನವಾಗಿ ತೋರಿತು.

ಕುಮಾರವ್ಯಾಸನ ಹಾಸ್ಯಭರಿತ ವರ್ಣನೆ:
ಏಳಿ ಭುಜಬಲವುಳ್ಳವರು ವಿಪ್ರಾಳಿಯಲಿ ಬಿಲುವಿಡಿದು
ಯಂತ್ರದ ಕೋಲುಗಳ ಕೇಣಿಪುದು ಎಂದು,
ದೃಷ್ಟದ್ಯುಮ್ನನು ಸಾರಿದಾಗ:
ವಿಪ್ರವೇಷದ ಅರ್ಜುನನು ಸ್ಪರ್ಧೆಯ ಬಿಲ್ಲನ್ನು
ಎತ್ತಲು ಹೊರಟು ಎದ್ದುನಿಂತಾಗ-

"'ಮೆಲ್ಲನೆ ಧೋತ್ರದರ್ಭೆಯಗೂಡ ಸಂವರಸುತ್ತ/ ಸರಿಪಡಿಸಿಕೊಂಡ"';
ಆಗ ಉಳಿದ ಬ್ರಾಹ್ಮಣ ವಟುಗಳು/ಹುಡುಗರು ಇವನನ್ನು ಅಪಹಾಸ್ಯಮಾಡುವರು;
ಅರ್ಜುನ ಪಂಚೆ ಸರಿಪಡಿಸಿಕೊಳ್ಳಲು ಮಾತ್ರಾ
ಎದ್ದನೆಂದು ಭಾವಿಸಿದರು. ಆದರೆ ಹಾಸ್ಯಕ್ಕಾಗಿ ಛೇಡಿಸುವರು:

ಏ‍ನು ಸಿದ್ಧಿಯ ಉಪಾದ್ಯರೆದ್ದಿರಿ (ಉಪಾದ್ಯರು ಎದ್ದಿರಿ)
ದೇನು ಧನುವಿಂಗಲ್ಲಲೇ ತಾ

(ಎದ್ದಿರಿ, ಇದೇನು ಸುಮ್ಮನೆ ಎದ್ದಿರಾ, ಬಿಲ್ಲಿಗಾಗಿ ಅಲ್ಲ ಅಲ್ಲವೇ?)

ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ||

(ತಾನ್- ಏನು ಮನಸಸ್ಸಿನ ಅಂಗವಣೆ- ಬಯಕೆ? ಸುಂದರಿಯನ್ನು ಬಯಸಿದಿರಾ?)

ವೈನತೇಯನ ವಿಗಡಿಸಿದ ವಿಷ
ವೇನು ಸದರವೋ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ದೂರ್ತ ವಟುನಿಕರ||(೧-೧೫-೧೦)

ಅವನು ನಿಜವಾಗಿ ಬಿಲ್ಲೆತ್ತಲು ಹೊರಟಿದ್ದಾನೆಂದು ತಿಳಿದಾಗ
ದಿಗ್ಭ್ರಮೆಗೊಳ್ಳುವರು. ಗರುಡನಂತಿರುವ ಮಾಗಧ ದುರ್ಯೋಧನ ಕರ್ಣರನ್ನು
ವಿಗಡಿಸಿದ/ಭಂಗಪಡಿಸಿದ ವಿಷಸರ್ಪದಂತಿದೆ ಧನು
ಅದನ್ನು ಪಳಗಿಸುವ ಹಾವಾಡಿಗ-ಸದರವೋ ಸುಲಭವಲ್ಲ ಎಂದರು;

ಉದ್‍ಭ್ರಮಿತನು ಇವ- ಶ್ರೋತ್ರೀಯರ ಸಭೆಗೆ ಹಳಿವ (ಕಳಂಕ) ತರುವ ಎಂದರು.
ವ|| ಅಂತು ಪೊಱಮಡುವರಾತಿಕಾಲಾನಲನಂ ಕಂಡು ಕಡ್ಡುವಂದ ದೊಡ್ಡರೆಲ್ಲಂ ಮುಸುಱಿ-
ವಚನ:ಪದವಿಭಾಗ-ಅರ್ಥ:ಅಂತು ಪೊಱಮಡುವ ಆರಾತಿಕಾಲ ಅನಲನಂ (ಶತ್ರುನಾಶಕ/ಪ್ರಳಯಕಾಲದ ಅಗ್ನಿಯನ್ನು/ ಅರ್ಜುನನ್ನು) ಕಂಡು ಕಡ್ಡುವಂದ (ಗಡ್ಡಬಂದ) ದೊಡ್ಡರೆಲ್ಲಂ (ವೃದ್ಧರೆಲ್ಲರೂ) ಮುಸುಱ (ಮುತ್ತಿ)-
ವಚನ:ಅರ್ಥ:ಹಾಗೆ ಹೊರಟು ಬರುವ ಪ್ರಳಯಕಾಲದ ಅಗ್ನಿಯಂತಿರುವ ಅರ್ಜುನನ್ನು ಕಂಡು ಗಡ್ಡಬಂದ ವೃದ್ಧರೆಲ್ಲ ಮುತ್ತಿಕೊಂಡು-
ಕಂ|| ಸಂಗತಸತ್ವರ್ ಕುರು ರಾ
ಜಂಗಂ ಕರ್ಣಂಗಮೇಱಿಸಲ್ಕರಿದನಿದಂ|
ತಾಂ ಗಡಮೇಱಿಪನೀ ಪಾ
ರ್ವಂಗಕ್ಕಟ ಮೆಯ್ಯೊಳೊಂದು ಮರುಳುಂಟಕ್ಕುಂ|| ೬೨||
ಪದ್ಯ-೦೦:ಪದವಿಭಾಗ-ಅರ್ಥ: ಸಂಗತಸತ್ವರ್ (ಸಶಕ್ತರಾದ) ಕುರು ರಾಜಂಗಂ ಕರ್ಣಂಗಂ (ಸಶಕ್ತರಾದ ಕುರುರಾಜ ದುರ್ಯೋಧನ ಕರ್ಣರಿಗೆ) ಏಱಿಸಲ್ಕೆ ಅರಿದನ್ ಇದಂ ತಾಂ (ಏರಿಸುವುದಕ್ಕೆ ಅಸಾಧ್ಯವಾದ ಇದನ್ನು ಇವನು) ತಾಂ ಗಡಂ ಏಱಿಪಂ? (ತಾನು ಬಿಲ್ಲನ್ನು ಎತ್ತುವನೇ ಗಡ!) ಈ ಪಾರ್ವಂಗೆ ಅಕ್ಕಟ ಮೆಯ್ಯೊಳೊಂದು ಮರುಳು (ಭೂತ) ಉಂಟಕ್ಕುಂ (ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಪಿಶಾಚಿ ಸೇರಿಕೊಂಡಿರಬೇಕು)- (ಎಂದರು)
ಪದ್ಯ-೦೦:ಅರ್ಥ: ಸತ್ವಶಾಲಿಗಳಾದ ದುರ್ಯೋಧನ ಕರ್ಣರಿಗೂ ಏರಿಸುವುದಕ್ಕೆ ಅಸಾಧ್ಯವಾದ ಇದನ್ನು ಇವನು ಈ ಹಾರುವನು ಏರಿಸುತ್ತಾನೆಯೇ ಅಬ್ಬಾ! ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಭೂತ/ಪಿಶಾಚಿ ಸೇರಿಕೊಂಡಿರಬೇಕು, ಎಂದರು
ವ|| ಎಂದು ಬಾಯ್ಗೆ ವಂದುದನೆ ನುಡಿಯೆ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಯ್ಯೊಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇರೆ ನೂಂಕಿ-
ವಚನ:ಪದವಿಭಾಗ-ಅರ್ಥ:ಎಂದು ಬಾಯ್ಗೆ ವಂದುದನೆ ನುಡಿಯೆ; ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟು ಅವಯವದಿಂ (ಶ್ರಮವಿಲ್ಲದೆ) ಎಡಗೆಯ್ಯೊಳು (ಎಡದ ಕೈಯಲ್ಲಿ) ಎತ್ತಿಕೊಂಡು ತನ್ನ ಬಗೆದ ಕಜ್ಜಮಂ (ತಾನು ನಿಶ್ಚಯಿಸಿದ ಕಾರ್ಯವನ್ನು) ಗೊಲೆಗೊಳಿಸುವಂತೆ (ಕೊನೆಗೊಳಿಸುವಂತೆ), ಆ ಬಿಲ್ಲ ಗೊಲೆಯನೇರೆ ನೂಂಕಿ (ಆ ಬಿಲ್ಲಿನ ತುದಿಯನ್ನು ಎಳೆದು ಏರಿಸಿ ಕಟ್ಟಿ)-
ವಚನ:ಅರ್ಥ:ಎಂದು ಬಾಯಿಗೆ ಬಂದುದನ್ನು ಆಡಲು- (ಆಡಿದರು)ಅರ್ಜುನನು ರಂಗಸ್ಥಳದ ಮಧ್ಯಭಾಗದಲ್ಲಿ ನಿಂತುಕೊಂಡು ಧನಸ್ಸಿಗೆ ನಮಸ್ಕಾರಮಾಡಿ ಶ್ರಮವಿಲ್ಲದೆ ಎಡಗೈಯ್ಯಿಂದಲೇ ಎತ್ತಿಕೊಂಡು ತಾನು ಕೈಹಾಕಿದ ಕಾರ್ಯವನ್ನು ಸುಗಮವಾಗಿ ಮುಗಿಸುವಂತೆ ಆ ಬಿಲ್ಲಿನ ತುದಿಯನ್ನು ಎಳೆದು ಏರಿಸಿ ಕಟ್ಟಿ-
ಮ|| ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು ಬೆ
ಕ್ಕಸಮಾಗಿರ್ಪಿನಮೊಂದೆ ಸೂೞೆ ತೆಗೆದಾಕರ್ಣಾಂತಮಂ ತಾಗೆ ನಿ
ಟ್ಟಿಸಲಾರ್ಗಾರ್ಗಿಸಲಕ್ಕುಮೆಂಬೆಸಕದಾ ಮೀನಂ ಸಮಂತೆಚ್ಚು ಮೆ
ಚ್ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ|| ೬೩||
ಪದ್ಯ-೬೩:ಪದವಿಭಾಗ-ಅರ್ಥ:(ಅರ್ಜುನನ ಬಾಣ ಪ್ರಯೋಗ)ದೆಸೆ ಕಂಪಂಗೊಳೆ (ದಿಕ್ಕುಗಳು ಕಂಪಿಸಲು) ಕೊಂಡು ದಿವ್ಯಶರಮಂ (ದಿವ್ಯ ಬಾಣವನ್ನು) ಕರ್ಣಾದಿಗಳ್ ಕಂಡು ಬೆಕ್ಕಸಮಾಗಿರ್ಪಿನಂ (ಬೆಕ್ಕಸ ಬೆರಗಾಗಲು) ಒಂದೆ ಸೂೞೆ (ಒಂದೇ ಸಲಕ್ಕೆ) ತೆಗೆದು ಆಕರ್ಣಾಂತಮಂ ತಾಗೆ (ತೆಗೆದು ಕಿವಿಗೆ ತಾಗುವಂತೆ ಕಿವಿಯವರೆಗೆ ಎಳೆದು ) ನಿಟ್ಟಿಸಲು ಆರ್ಗಾರ್ಗೆ ಇಸಲು ಅಕ್ಕುಂ (ನೋಡಲು ಯಾರಿಗೆ ಆಗುತ್ತದೆ) ಎಂಬ ಎಸಕದ (ಹೊಳೆಯುವ) ಆ ಮೀನಂ ಸಮಂತೆಚ್ಚು (ಸರಿಯಾಗಿ ಕೊಡೆದು) ಮೆಚ್ಚಿಸಿದಂ- ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ(ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು)
ಪದ್ಯ-೬೩:ಅರ್ಥ:ಅರ್ಜುನನು, ದಿಕ್ಕುಗಳು ಕಂಪಿಸವ ಹಾಗೆ ದಿವ್ಯ ಬಾಣವನ್ನು ತೆಗೆದುಕೊಂಡು ಕರ್ಣನೇ ಮೊದಲಾದವರು ನೋಡಿ ಬೆಕ್ಕಸ ಬೆರಗಾಗಲು ಒಂದೇ ಸಲಕ್ಕೆ ಕಿವಿಮುಟ್ಟುವವರೆಗೆ ಸೆಳೆದು ಇದನ್ನು ಯಾರಿಗೆ ನೋಡುವುದಕ್ಕೂ ಹೊಡೆಯುವುದಕ್ಕೂ ಸಾಧ್ಯ ಎಂಬಂತಿದ್ದ ಹೊಳೆಯುವ ಮೀನನ್ನು ಛೇದಿಸಿ ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಸಂತೋಷ ಪಡಿಸಿದನು
ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯು ಮೆಚ್ಚ ಮೀನೆ ಮೀನಕೇತನಂ ಆಗೆಯುಂ, ಸಹಜಮನೋಜನಂ ಮನೋಜನೆಂದೆ ಬಗೆದು-
ವಚನ:ಪದವಿಭಾಗ-ಅರ್ಥ:ಆಗಳು ಆ ಪಿಡಿದ ಬಿಲ್ಲೆ ಕರ್ಬಿನ (ಮನ್ಮಥನ ಕಬ್ಬಿನ ಬಿಲ್ಲು) ಬಿಲ್ಲಾಗೆಯುಂ ಅಂಬುಗಳೆ ಪೂವಿನ ಅಂಬುಗಳಾಗೆಯು ಮೆಚ್ಚ ಮೀನೆ ಮೀನಕೇತನಮಾಗೆಯುಂ ಸಹಜಮನೋಜನಂ ಮನೋಜನೆಂದೆ ಬಗೆದು-
ವಚನ:ಅರ್ಥ:ಆಗ ದ್ರೌಪದಿಯು- ಅವನು ಹಿಡಿದ ಬಿಲ್ಲನ್ನೇ ಕಬ್ಬಿನ ಬಿಲ್ಲನ್ನಾಗಿಯೂ, ಬಾಣಗಳನ್ನೇ ಪುಷ್ಪಬಾಣಗಳನ್ನಾಗಿಯೂ, ಹೊಡೆದ ಮೀನನ್ನೇ ಮೀನಿನ ಬಾವುಟವನ್ನಾಗಿಯೂ, ಸಹಜಮನೋಜನಾದ ಅರ್ಜುನನನ್ನೇ ಮನ್ಮಥನನ್ನಾಗಿಯೂ ಭಾವಿಸಿದಳು.
ಚಂ|| ನಡೆ ಕಡೆಗಣ್ ಮನಂ ಬಯಸೆ ತಳ್ತಮರ್ದಪ್ಪಲೆ ತೋಳ್ಗಳಾಸೆಯೊಳ್
ತೊಡರ್ದಿರೆ ಪೊಣ್ಮೆ ಘರ್ಮಜಲಮುಣ್ಮೆ ಭಯಂ ಕಿಡೆ ನಾಣ್ ವಿಕಾರದೊಳ್|
ತೊಡರ್ದಿರೆ ಕೆಯ್ತವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ
ತಡೆಯದೆ ನೀಡೆ ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್|| ೬೪||
ಪದ್ಯ-೬೪:ಪದವಿಭಾಗ-ಅರ್ಥ:ನಡೆ ಕಡೆಗಣ್ (ಕುಡಿನೋಟ ಅವನಲ್ಲಿ ನಡೆ -ನೆಟ್ಟಿತು) ಮನಂ ಬಯಸೆ ತಳ್ತು (ಸೇರಿಸಿ) ಅಮರ್ದಪ್ಪಲೆ (ಅಮರ್ದು-ಗಾಢವಾಗಿ ಅಪ್ಪಲೆ- ಅಪ್ಪಿಕೊಳ್ಳಲು) ತೋಳ್ಗಳು ಆಸೆಯೊಳ್ ತೊಡರ್ದಿರೆ (ತೋಳುಗಳು ಅವನ ಗಾಢಾಲಿಂಗನಮಾಡಲು ಆಸೆಯಲ್ಲಿ ಸಿಲುಕಲು) ಪೊಣ್ಮೆ ಘರ್ಮಜಲಂ ಉಣ್ಮೆ ಭಯಂ (ಹೊಮ್ಮಲು- ಬೆವರುಹನಿ, ಭಯವಾಯಿತು,) ಕಿಡೆ ನಾಣ್ (ನಾಚಿಕೆ ಕಿಡೆ-ಹೋಯಿತು) ವಿಕಾರದೊಳ್ ತೊಡರ್ದಿರೆ (ಅಂಗವಿಕಾರಗಳು ಶರೀರದಲ್ಲಿ ತಲೆದೋರಲು) ಕೆಯ್ತು ಉಮ್ಮಳಿಪ ಕನ್ನೆಗೆ (ಉದ್ವೇಗಗೊಂಡ ದ್ರೌಪದಿ ಕನ್ಯೆಗೆ) ಸುಂದರಮಾಲೆ ಮಾಲೆಯಂ ತಡೆಯದೆ ನೀಡೆ (ಸುಂದರಮಾಲೆ ಎಂಬ ಚೇಟಿ ಮಾಲೆಯನ್ನು ತಡೆಯದೆ ಕೈಗೆ ಕೊಡಲು); ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್(ಬಿಡದೆ ಸತಿಯಾದ ದ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು).
ಪದ್ಯ-೬೪:ಅರ್ಥ:ಕುಡಿನೋಟ ಅವನಲ್ಲಿ ನೆಟ್ಟಿತು. ಮನಸ್ಸು ಅವನನ್ನು ಬಯಸಿತು, ತೋಳುಗಳು ಅವನ ಗಾಢಾಲಿಂಗನಮಾಡಲು ಆಸೆಯಲ್ಲಿ ಸಿಲುಕಲು,. ಮೈಯಲ್ಲಿ ಬೆವರು ಹುಟ್ಟಿತು, ಭಯವು ಉಂಟಾಯಿತು, ನಾಚಿಕೆ ಹೋಯಿತು, ಅಂಗವಿಕಾರಗಳು ಶರೀರದಲ್ಲಿ ತಲೆದೋರಿದುವು. ಉದ್ವೇಗಗೊಂಡ ದ್ರೌಪದಿ ಕನ್ಯೆಗೆ ಸುಂದರಮಾಲೆಯೆಂಬ ಚೇಟಿ ಸ್ವಯಂವರ ಮಾಲೆಯನ್ನು ಸಾವಕಾಶಮಾಡದೆ ಅವಳ ಕೈಲಿತ್ತಳು. ಸತಿಯಾದ ದ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು.
ವ|| ಆಗಳ್ ದ್ರುಪದಂ ಬದ್ದವಣದ ಪಗಳಂ ಬಾಜಿಸಲ್ವೇೞ್ದು ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನೇಱಿಸಿ ಧೃಷ್ಟದ್ಯುಮ್ನ ಯುಧಾಮನ್ಯೂತ್ತಮೌಜಶ್ಯಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊೞಲ್ಗೊಡಗೊಂಡುವರ್ಪುದುಮಿತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳಾಲೋಚಿಸಿ ಪೇೞಿಮೇಗೆಯ್ವಮೆನೆ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ದ್ರುಪದಂ ಬದ್ದವಣದ ಪರೆಗಳಂ ಬಾಜಿಸಲ್ ವೇೞ್ದು (ಆಗ ದ್ರುಪದನು ಮಂಗಳವಾದ್ಯಗಳನ್ನು ಬಾರಿಸಲು ಹೇಳಿ) ಸುರತ ಮಕರ ಧ್ವಜನಂ(ಸುರತಮಕರಧ್ವಜ-ಅರಿಕೇಸರಿ/ ಅರ್ಜುನನನ್ನು) ದ್ರೌಪದಿಯೊಡನೆ ಸಿವಿಗೆಯನು ಏಱಸಿ (ದ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ), ಧೃಷ್ಟದ್ಯುಮ್ನ ಯುಧಾಮನ್ಯು ಉತ್ತಮೌಜ ಶಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂ ಬೆರಸು (ಮಕ್ಕಳು ಮತ್ತು ತಮ್ಮಂದಿರೊಡನೆ) ನೆಲಂ ಮೂರಿವಿಟ್ಟಂತೆ ಬರೆ (ಜನರು ನೆಲ ಬಾಯಿಬಿಟ್ಟಂತೆ ಒತ್ತೊತ್ತಾಗಿ ಬರಲು) ಮುಂದಿಟ್ಟು ಪೊೞಲ್ಗೆ ಒಡಗೊಂಡು ಬರ್ಪುದುಂ(ಮುಂದಿಟ್ಟುಕೊಂಡು ಪಟ್ಟಣಕ್ಕೆ ಬರಲು/ ಬಂದನು) ಇತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳು ಆಳಾಲೋಚಿಸಿ ಪೇೞಿಂ ಏಗೆಯ್ವಂ ಎನೆ ಕರ್ಣನು ಇಂತೆಂದಂ (ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು.)-
ವಚನ:ಅರ್ಥ:ಆಗ ದ್ರುಪದನು ಮಂಗಳವಾದ್ಯಗಳನ್ನು ವಾದನಮಾಡಿಸಿ ಸುರತಮಕರಧ್ವಜನಾದ ಅರ್ಜುನನನ್ನು ದ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ ಧೃಷ್ಟದ್ಯುಮ್ನ, ಯುಧಾಮನ್ಯು, ಉತ್ತಮೌಜ, ಶಿಖಂಡಿ ಮತ್ತು ಚೇಕಿತಾನರೆಂಬ ತನ್ನ ಮಕ್ಕಳೂ ಮತ್ತು ತಮ್ಮಂದಿರೊಡಗೂಡಿ ನೆಲವು ಬಾಯಿಬಿಟ್ಟ ಹಾಗೆ ಅರ್ಜುನನನ್ನು ಮುಂದಿಟ್ಟುಕೊಂಡು ಜನರು ನೆಲ ಬಾಯಿಬಿಟ್ಟಂತೆ ಒತ್ತೊತ್ತಾಗಿ ಮುಂದಿಟ್ಟುಕೊಂಡು ಪಟ್ಟಣಕ್ಕೆ ಬರಲು/ ಬಂದನು. ಇತ್ತ, ದುರ್ಯೋಧನನು ಕರ್ಣ, ಶಲ್ಯ, ಶಕುನಿ, ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು.
ಮ|| ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇವೋದರೆಂ
ಬಿನಮೇಂ ಪೋಪಮೆ ನಾಡ ಕೂಟಕುಳಿಗಳ್ಗೇದೋಸಮೇಂ ಬನ್ನಮೊಂ|
ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ
ನಿನಗಂ ದೋರ್ವಲದಿಂದಮೊಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ|| ೬೫||
ಪದ್ಯ-೦೦:ಪದವಿಭಾಗ-ಅರ್ಥ:ಜನಮೆಲ್ಲಂ ನೆರೆದು (ಜನರೆಲ್ಲ ಸೇರಿ) ಅಕ್ಕಟ ಅಣ್ಣರಿವರ್ ಇಂದೇ ವಂದರ್ ಏವೋದರ್ ಎಂಬಿನಂ ಏಂ ಪೋಪಮೆ(ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ ತಿರಸ್ಕಾರದಿಂದ ನಮ್ಮ ಬಗೆಗೆ ಹೇಳುವಂತೆ ಹೋಗುವುದೇ) ನಾಡ ಕೂಟಕುಳಿಗಳ್ಗೆ (ನಾಡಗುಂಪಿನ ಜನಕ್ಕೆ) ಏದೋಸಂ (ಏನು ದೋಷ- ತಪ್ಪು) ಎಂ ಬನ್ನಂ (ಏನು ಸೋಲು) ಒಂದನೆ ಕೇಳು (ಒಂದು ವಿಷಯವನ್ನು ಕೇಳು) ಅಂತರನಿಕ್ಕಿ (ಅಂತರನು ಇಕ್ಕಿ- ಎದುರಿಸಿದವರನ್ನು ಹೊಡೆದೋಡಿಸಿ) ಮಿಕ್ಕ (ಈಗ ಕೈಮೀರಿಹೋದ) ವಿಜಯಶ್ರೀಕಾಂತೆಗಂ (ವಿಜಯಲಕ್ಷ್ಮಿಗೂ) ಕಾಂತೆಗಂ ನಿನಗಂ (ದ್ರೌಪದಿಗೂ ನಿನಗೂ) ದೋರ್ವಲದಿಂದಂ ಒಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ (ತೋಳುಬಲದಿಂದ ಒಂದೇ ಹಸೆಮಣೆಯಮೇಲೆ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ? ಎಂದನು ಕರ್ಣ).
ಪದ್ಯ-೦೦:ಅರ್ಥ: ಜನವೆಲ್ಲ ಒಟ್ಟುಗೂಡಿ ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ (ಸುಮ್ಮನೆ ಬಂದರು ಹೋದರು, ಎಂದು) ತಿರಸ್ಕಾರದಿಂದ ನಮ್ಮ ಬಗೆಗೆ ನಾಡಗುಂಪಿನ ಜನ ಹೇಳುವಂತೆ ನಾವು ಹೋಗುವುದೇ? ಒಂದು ವಿಷಯವನ್ನು ಕೇಳು, ಪರಾಕ್ರಮಿಗಳಾದ ನಮಗೆ ಈ ತೆರನಾದ ಸೋಲು ಅವಮಾನಕರ, ನನ್ನ ಅಭಿಪ್ರಾಯವಿದು 'ಎದುರಿಸಿದವರನ್ನು ಹೊಡೆದೋಡಿಸಿ ಈಗ ಕೈಮೀರಿರುವ ವಿಜಯಲಕ್ಷ್ಮಿಗೂ ಈ ದ್ರೌಪದಿಗೂ ನಿನಗೂ ನನ್ನ ಬಾಹುಬಲದಿಂದ ಒಂದೇ ಹಸೆಮಣೆಯಮೇಲೆ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ?' ಎಂದನು ಕರ್ಣ.
ವ|| ಎನೆ ಶಲ್ಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ-(ಎನ್ನಲು) ಶಲ್ಯನು ಇಂತು ಎಂದಂ-
ವಚನ:ಅರ್ಥ:ಎನ್ನಲು ಶಲ್ಯನು ಹೀಗೆ ಹೇಳಿದನು.
ಚಂ|| ಕುಡುವೊಡೆ ನಿಸ್ತ್ರಪಂ ಕುಡುವುದೇಱಿಸಿದಂ ಬೆಸೆಕೋಲನೆಂದು ಪೇೞ್
ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್|
ತೊಡರ್ದ ಪರಾಭವಂ ದ್ರುಪದನಂ ತಱಿದೊಟ್ಟದೆ ಕೆಮ್ಮಗಾನಿದಂ
ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳ್ಗಳ ಕೊರ್ವದೇವುದೋ|| ೬೬||
ಪದ್ಯ-೦೦:ಪದವಿಭಾಗ-ಅರ್ಥ: ಕುಡುವೊಡೆ (ಕನ್ಯಾದಾನ ಕೊಡಬೇಕಾದರೆ) ನಿಸ್ತ್ರಪಂ (ಲಜ್ಜೆ ಇಲ್ಲದೆ) ಕುಡುವುದು (ಕೊಡುವುದು), ಏಱಿಸಿದಂ ಬೆಸೆಕೋಲನು ಎಂದು (ಹತ್ತಿಯನ್ನು (ಪಿಡಿಯುವ) ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು ಏರಿಸಿದನೆಂಬ ಕಾರಣದಿಂದ) ಪೇೞು (ಹೇಳು) ಕುಡುವುದೆ ಕನ್ನೆಯಂ ದ್ವಿಜಕುಲಂಗೆ(ಬ್ರಾಹ್ಮಣವಂಶದವನಿಗೆ ಕನ್ಯೆಯನ್ನು ಕೊಡುವುದೇ?) ಇದು ವಿಶ್ವನರೇಂದ್ರ ವೃಂದದೊಳ್ ತೊಡರ್ದ ಪರಾಭವಂ (ಈ ಪರಾಭವವು ಸಮಸ್ತ ರಾಜವೃಂದಕ್ಕೂ ಸೋಲು,) ದ್ರುಪದನಂ ತಱಿದೊಟ್ಟದೆ (ದ್ರುಪದನನ್ನು ತರಿದು ಹಾಕದೆ) ಕೆಮ್ಮಗೆ ಆನ್ ಇದಂ(ನಾನು ಇದನ್ನು ಸುಮ್ಮನೆ) ಕಡೆಗಣಿಸಿರ್ದೊಡೆ (ಕಡೆಗಣಿಸಿದರೆ) ಎನ್ನ ಕಡುಗೊರ್ವಿದ ತೋಳ್ಗಳ ಕೊರ್ವು ಅದು ಏವುದೋ(ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ ಕೊಬ್ಬು ಅದೇತಕ್ಕೋ!)
ಪದ್ಯ-೦೦:ಅರ್ಥ:ಕನ್ಯಾದಾನ ಕೊಡಬೇಕಾದರೆ ಲಜ್ಜೆಯಾಗದ ರೀತಿಯಲ್ಲಿ ದಾನಮಾಡಬೇಕು. ಹತ್ತಿಯನ್ನು ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು (ಸಮಾನ್ಯ ಕೋಲನ್ನು) ಹೆದೆ ಏರಿಸಿದನೆಂಬ ಕಾರಣದಿಂದ ಬ್ರಾಹ್ಮಣವಂಶದವನಿಗೆ ಕನ್ಯೆಯನ್ನು ಕೊಡುವುದೇ? ಈ ಪರಾಭವವು ಸಮಸ್ತ ರಾಜವೃಂದಕ್ಕೂ ತೊಡರಿಕೊಂಡ ಸೋಲು, ಆದುದರಿಂದ ಈಗ ನಾನು ಈ ದ್ರುಪದನನ್ನು ತರಿದು ಹಾಕದೆ ಸುಮ್ಮನಿದ್ದರೆ ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ ಕೊಬ್ಬು ಅದೇತಕ್ಕೋ? ಸಾರ್ಥಕತೆಯೇನು? ಎಂದನು ಶಲ್ಯ.
ವ|| ಎಂದು ಕೆಳರ್ದು ನುಡಿದು ಸಯಂಬರಕೆ ನೆರೆದರಸುಮಕ್ಕಳೆಲ್ಲರನುತ್ಸಾಹಿಸಿ ನೋಡೆ ನೋಡೆ-
ವಚನ:ಪದವಿಭಾಗ-ಅರ್ಥ:ಎಂದು ಕೆಳರ್ದು (ಕೋಪಿಸಿ) ನುಡಿದು ಸಯಂಬರಕೆ ನೆರೆದರಸುಮಕ್ಕಳೆಲ್ಲರನುತ್ಸಾಹಿಸಿ ನೋಡೆ ನೋಡೆ-
ವಚನ:ಅರ್ಥ:ಎಂದು ಕೋಪಿಸಿ ನುಡಿದು, ಸ್ವಯಂವರಕ್ಕೆ ಸೇರಿದ್ದ ಎಲ್ಲ ರಾಜಕುಮಾರರನ್ನೂ ಪ್ರೋತ್ಸಾಹಿಸಿ ನೋಡುನೋಡುತ್ತಿದ್ದಂತೆಯೇ
ಉ|| ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ
ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕೆ ಕೈ|
ಮಿಕ್ಕಿರೆ ಬಂದುದೊಂದಣಿ ರಣಾನಕ ರಾವಮಳುಂಬಮಾದುದಾರ್
ಮಿಕ್ಕು ಬರ್ದುಂಕುವನ್ನರಿವರ್ಗೆಂಬಿನೆಗಂ ಮಸಗಿತ್ತು ರಾಜಕಂ|| ೬೭||
ಪದ್ಯ-೦೦:ಪದವಿಭಾಗ-ಅರ್ಥ:ಪಕ್ಕರೆ ಇಕ್ಕಿ ಬಂದುವು ಹಯಂ ಘಟೆ ಪಣ್ಣಿದುವು ಆಯುಧಂಗಳಿಂ ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲ್ ಆದ ಅಳುರ್ಕೆ ಕೈ ಮಿಕ್ಕಿರೆ ಬಂದುದು ಒಂದು ಅಣಿ ರಣಾನಕ ರಾವಂ ಅಳುಂಬಂ ಆದುದು ಆರ್-ಮಿಕ್ಕು ಬರ್ದುಂಕುವನ್ನರ್ ಇವರ್ಗೆಂಬಿನೆಗಂ ಮಸಗಿತ್ತು ರಾಜಕಂ.
ಪಕ್ಕರೆಯಿಕ್ಕಿ (ಜೀನು ಹಾಕಿಕೊಂಡು) ಬಂದುವು ಹಯಂ; ಘಟೆ ಆನೆಗಳು ಪಣ್ಣಿದುವು (ಆನೆಗಳು ಸಿದ್ಧವಾದವು;) ಆಯುಧಂಗಳಿಂ ತೆಕ್ಕನೆ ತೀವಿ (ಚೆನ್ನಾಗಿ ತುಂಬಿ) ಬಂದುವು ರಥಂ; ಪುಲಿವಿಂಡುವೊಲ್ ಆದ ಅಳುರ್ಕೆ (ಉಂಟಾದ ವ್ಯಾಪ್ತಿ, ಹರವು) ಕೈ ಮಿಕ್ಕಿರೆ (ಕೈಮೀರಿರಲು) ಬಂದುದು ಒಂದು ಅಣಿ (ಬಂದುದು ಒಂದು ಸಾಲು ಕಾಲಾಳು ಸೈನ್ಯ) ರಣಾನಕ ರಾವಂ (ಒಂದು ರಣವಾದ್ಯದ ಆರ್ಭಟ), ಅಳುಂಬಮಾದುದು (ಅತಿಶಯವಾಯಿತು), ಆರ್ ಮಿಕ್ಕು ಬರ್ದುಂಕವನ್ನರ್ ಇವರ್ಗೆ ಎಂಬಿನಗಂ (ಇವರನ್ನು ಮಿಕ್ಕಿ-ಮೀರಿ ಬದುಕುವವರು ಯಾರು ಎನ್ನುವಂತೆ), ಮಸಗಿತ್ತು ರಾಜಕಂ (ರಾಜರ ಸಮೂಹ) ವಿಜೃಂಭಿಸಿತು.
ಪದ್ಯ-೦೦:ಅರ್ಥ: ಜೀನುಗಳನ್ನು ಧರಿಸಿದ ಕುದುರೆಗಳು ಬಂದುವು. ಆನೆಗಳ ಸಮೂಹವು ಯುದ್ಧಸನ್ನದ್ಧವಾದವು. ಆಯುಧಗಳಿಂದ ತುಂಬಿದ ರಥಗಳು ಬಂದವು. ಕಾಲಾಳುಸೈನ್ಯದ ಸಾಲೊಂದು ಹುಲಿಯ ಹಿಂಡಿನ ಹಾಗೆ ಕೈಮೀರಿ ಮುಂದೆ ಬಂದಿತು. ರಣವಾದ್ಯದ ಆರ್ಭಟ ವಿಜೃಂಭಿಸಿತು. ಇದನ್ನು ಮೀರಿ ಯಾರು ಬದುಕುತ್ತಾರೆ ಎನ್ನುವ ಹಾಗೆ ರಾಜಸಮೂಹವು ಆರ್ಭಟಿಸಿ ಬಂದಿತು.
ವ|| ಅಂತು ನೆಲಂ ಮೂರಿವಿಟ್ಟಂತೆ ತಳರ್ದು-
ವಚನ:ಪದವಿಭಾಗ-ಅರ್ಥ:ಅಂತು ನೆಲಂ ಮೂರಿವಿಟ್ಟಂತೆ (ಬಾಯಿ ಬಿಟ್ಟಂತೆ) ತಳರ್ದು (ಹೊರಟು)-
ವಚನ:ಅರ್ಥ:ಹಾಗೆ ನೆಲವು ಪ್ರಸರಿಸಿ ತುಂಬಿದ, ಬಾಯಿ ಬಿಟ್ಟ ಹಾಗೆ ನಡೆದುಬಂದು,
ಚಂ|| ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳೋಳಿವಟ್ಟ ಬೆ
ಳ್ನೊರೆಗಳ ಪಿಂಡನೆತ್ತಿಸಿದ ಬೆಳ್ಗೊಡೆಗಳ್ ಮಕರಂಗಳ ಭಯಂ|
ಕರ ಕರಿಗಳ್ ತೆಱಂಬೊಳೆವ ವಿಂಗಳನುಳ್ಕುವ ಕೈದುಗಳ್ ನಿರಾ
ಕರಿಸಿರೆ ಮೇರೆದಪ್ಪಿ ಕವಿದತ್ತು ನರಾಪಸೈನ್ಯಸಾಗರಂ|| ೬೮||
ಪದ್ಯ-೦೦:ಪದವಿಭಾಗ-ಅರ್ಥ:ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳೋಳಿವಟ್ಟ ಬೆಳ್ನೊರೆಗಳ ಪಿಂಡನೆತ್ತಿಸಿದ ಬೆಳ್ಗೊಡೆಗಳ್ ಮಕರಂಗಳ ಭಯಂಕರ ಕರಿಗಳ್ ತೆಱಂಬೊಳೆವ ವಿಂಗಳನುಳ್ಕುವ ಕೈದುಗಳ್ ನಿರಾಕರಿಸಿರೆ ಮೇರೆದಪ್ಪಿ ಕವಿದತ್ತು ನರಾಪಸೈನ್ಯಸಾಗರಂ
ಪದ್ಯ-೦೦:ಅರ್ಥ: ತೆರೆಗಳ ಬಂಬಲಂ (ಸಮೂಹ ವು-) ಮಿಳಿರ್ವ ಕೇತನರಾಜಿಗಳ್ (ಅಲುಗುವ ಬಾವುಟಗಳು); ಓಳಿವಟ್ಟ (ಸಾಲಾದ) ಬೆಳ್ನೊರೆಗಳ (ಬಿಳಿನೊರೆಗಳು) ಪಿಂಡನೆತ್ತಿಸಿದ ಬೆಳ್ಗೊಡೆಗಳ್ (ಗುಂಪಾಗಿರುವ ಬಿಳಿಕೊಡೆಗಳು) ; ಮಕರಂಗಳ ಭಯಂ|

ಕರ ಕರಿಗಳ್ (ಬಯಂಕರ ಆನೆಗಳು ಮೊಸಳೆಗಳು) ತೆಱಂಬೊಳೆವ (ಬಗೆಬಗೆಯಾಗಿ ಹೊಳೆಯುವ) ಮೀಂಗಳನು ಉಳ್ಕುವ ಕೈದುಗಳ್ (ಝಳಪಿಸಿವ/ಹೊಳೆಯುವ ಆಯುಧಗಳು) ನಿರಾಕರಿಸಿರೆ (ರಾಜರನ್ನು ನಿರಾಕರಿಸಿದ್ದರಿಂದ ) ಮೇರೆದಪ್ಪಿ ಕವಿದತ್ತು ನರಾಪಸೈನ್ಯಸಾಗರಂ (ರಾಜರ ಸೇನಾಸಮುದ್ರವು ಮೇರೆಯನ್ನು ಮೀರಿ ದ್ರುಪದನನ್ನು ಮುತ್ತಿತು.)

ವ|| ಅಂತು ಕವಿದ ರಿಪುಬಳಜಳನಿಯ ಕಳಕಳರವಮಂ ಕೇಳ್ದು ಪೊೞಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಕವಿದ ರಿಪುಬಳ ಜಳನಿಧಿಯ (ಹಾಗೆ ಮುತ್ತಿದ ಶತ್ರು ಸೈನ್ಯ ಸಮುದ್ರದ) ಕಳಕಳರವಮಂ ಕೇಳ್ದು (ಕಲರವ ಸದ್ದನ್ನು ಕೇಳಿ) ಪೊೞಲಂ ಪುಗಲು ಒಲ್ಲದೆ ನಿಂದ ಮನುಜಮಾಂಧಾತನಂ (ನಗರ ಪ್ರವೇಶ ಮಾಡಲು ಒಪ್ಪದೇ ನಿಂತ ಮನುಜಮಾಂಧಾತನಾದ ಅರ್ಜುನನ್ನು ಕುರಿತು ) ಪಾಂಚಾಳರಾಜನು ಇಂತೆಂದಂ (ದ್ರುಪದನು ಹೀಗೆ ಹೇಳಿದನು) (ಮನುಜಮಾಂಧಾತ –ಅರಿಕೇಸರಿಯ ಬಿರುದು)
ವಚನ:ಅರ್ಥ:ಹಾಗೆ ಮುತ್ತಿದ ಶತ್ರುಸೇನಾಸಮುದ್ರದ ಕಳಕಳಶಬ್ದವನ್ನು ಕೇಳಿ ಪುರಪ್ರವೇಶ ಮಾಡದೇ ನಿಂದ ಮನುಜಮಾಂಧಾತನಾದ ಅರ್ಜುನನನ್ನು ಕುರಿತು ಪಾಂಚಾಲರಾಜನಾದ ದ್ರುಪದನು ಹೀಗೆಂದನು-
ಮ|| ಧನುವಂ ನೀಂ ತೆಗೆದೆಚ್ಚು ವಿನನಳವಂ ಕೆಯ್ಕೊಂಡುದರ್ಕಂ ಕರಂ
ನಿನಗೀ ಕನ್ನಿಕೆ ಸೋಲ್ತುದರ್ಕಮೆರ್ದೆಯೊಳ್ ಕೋಪಾಗ್ನಿ ಕೈಗಣ್ಮೆ ಬಂ|
ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದಿನ್ ಕಾವನಾ
ವನೊ ನೀನಲ್ಲದೆ ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ|| ೬೯||
ಪದ್ಯ-೦೦:ಪದವಿಭಾಗ-ಅರ್ಥ: ಧನುವಂ ನೀಂ (ನೀನು ಬಿಲ್ಲನ್ನು ) ತೆಗೆದ ಎಚ್ಚು (ಹೊಡೆದು) ಮೀನನಉ ಅಳವಂ ಕೆಯ್ಕೊಂಡುದರ್ಕಂ (ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ), ಕರಂ (ವಿಶೇಷವಾಗಿ) ನಿನಗೆ ಈ ಕನ್ನಿಕೆ ಸೋಲ್ತುದರ್ಕಂ (ಈ ಕನ್ಯೆ ನಿನಗೆ ವಿಶೇಷವಾಗಿ ಸೋತುದಕ್ಕೂ) ಎರ್ದೆಯೊಳ್ ಕೋಪಾಗ್ನಿ ಕೈಗಣ್ಮೆ (ಎದೆಯಲ್ಲಿ ಕೋಪಾಗ್ನಿ ಹೆಚ್ಚಿ) ಬಂದು ಇನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದು (ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ ಮೇಲೆದ್ದಿದೆ.) ಇನ್ ಕಾವನು ಆವನೊ ನೀನಲ್ಲದೆ ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ (ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟ ವಿದ್ರಾವಣನೇ(ರಾಜ ವೀರಕೇಸರಿಯ ಬಿರುದು) ಅರ್ಜುನನೇ ನನ್ನ ತಲೆಯನ್ನು ಕಾಯಬೇಕು ಎಂದನು)
ಪದ್ಯ-೦೦:ಅರ್ಥ: ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ ಈ ಕನ್ಯೆ ನಿನಗೆ ವಿಶೇಷವಾಗಿ ಸೋತು ಅನಳಾದುದಕ್ಕೂ ಎದೆಯಲ್ಲಿ ಕೋಪಾಗ್ನಿ ಹೆಚ್ಚಿ ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ ಮೇಲೆದ್ದಿದೆ. ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟ ವಿದ್ರಾವಣನನಾದ ಅರ್ಜುನನೇ ನನ್ನ ತಲೆಯನ್ನು ಕಾಯಬೇಕು ಎಂದನು.
ವ|| ಎಂಬುದುಮರಾತಿಕಾಳಾನಳನಿದರ್ಕೇನುಂ ಚಿಂತಿಸಲ್ವೇಡ ನೀಮೆನ್ನ ಕಾಳೆಗಮಂ ಪೆಱಗಿರ್ದು ನೋಡಿಮೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆರೆದಿಸೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ಆರಾತಿಕಾಳಾನಳನು ಇದರ್ಕೇನುಂ ಚಿಂತಿಸಲ್ವೇಡ (ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ) ನೀಂ ಎನ್ನ ಕಾಳೆಗಮಂ ಪೆಱಗಿರ್ದು ನೋಡಿಂ ಎಂದು (ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು) ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ (ಪ್ರತಿಜ್ಞೆಮಾಡಿ) ಪುಗುವ (ಹೊಗುವ) ಆರಾತಿಬಲಮಂ (ಶತ್ರುಸೈನ್ಯವನ್ನು) ಮಾರ್ಕೊಂಡು (ಎದುರಿಸಿ) ತೆಗೆನೆರೆದು ಇಸೆ (ಬಾಣವನ್ನು ತೆಗೆದು ಕಿವಿಯವರೆಗೆ ಎಳೆದು ಹೊಡೆಯಲು)-
ವಚನ:ಅರ್ಥ:ಅರಾತಿಕಾಲಾನಳನು (ರಾಜ ವೀರಕೇಸರಿಯ ಬಿರುದು:) ಅರ್ಜುನನು ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ; ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು ಪ್ರತಿಜ್ಞೆಮಾಡಿ ಪ್ರವೇಶಮಾಡಿದ ಶತ್ರುಸೈನ್ಯವನ್ನು ಎದುರಿಸಿ ಬಾಣವನ್ನು ತೆಗೆದು ಕಿವಿಯವರೆಗೆ ಎಳೆದು ಹೊಡೆಯಲು-
ಚಂ|| ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ಬಿಲ್ ತೆರಳ್ದು ದು
ರ್ಧರ ಹಯಮೞ್ಗಿ ಸಂದಣಿಸಿ ಸಂದಣಿ ಕೊೞ್ಗುದಿಗೊಂಡುದಗ್ರ ಭೀ|
ಕರ ರಥಮೞ್ಗಿ ದಂತಿಘಟೆಗಳ್ ಪೆಱಗಿಟ್ಟೊಡೆ ಕಟ್ಟೆಗಟ್ಟಿದಂ
ತಿರೆ ತಳರ್ದತ್ತರಾತಿಬಲಮಾಂಪವರಾರ್ ಕದನತ್ರಿಣೇತ್ರನಂ|| ೭೦||
ಪದ್ಯ-೦೦:ಪದವಿಭಾಗ-ಅರ್ಥ:ಸರಳ ಪೊದಳ್ದ (ಬಾಣಗಳ ವ್ಯಾಪಿಸಿದ) ಬಲ್ಸರಿಯ (ದೊಡ್ಡ ಮಳೆಯ) ಕೋಳ್ಗೆ ಇರಲಾಱದೆ (ಬಾಳಗಳ ಸುರಿ ಮಳೆಗೆ ಎದುರಿಸಲಾರದೆ) ಬಿಲ್ ತೆರಳ್ದು (ಬಿಲ್ಲುಗಾರರಸೈನ್ಯ ಹಿಮ್ಮೆಟ್ಟಿ) ದುರ್ಧರ ಹಯಮೞ್ಗಿ ಸಂದಣಿಸಿ (ಎದುರಿಸಲಾರದ ಅಳುಕಿ/ಹಾಳಾಗಿ) ಸಂದ ಅಣಿ (ಬಂದ ಲಾಲಾಳು ಸೈನ್ಯ -ಸಂದಣಿಸಿ- ಒಟ್ಟಾಗಿ) ಕೊೞ್ಗುದಿಗೊಂಡುದಗ್ರ ಭೀಕರ (ಕೋಳ್ ಕುದಿಗೊಂಡುದು ಉಗ್ರ -ಉಗ್ರ ಬಾಣದ ಏಟಿನಿಂದ ನೊಂದು) ರಥಮೞ್ಗಿ (ರಥಂ ಅಳ್ಗಿ - ರಥಗಳು ಅಳಿದು ನಾಶವಾಗಿ) ದಂತಿಘಟೆಗಳ್ ಪೆಱಗಿಟ್ಟೊಡೆ (ಆನೆಯ ಸೈನ್ಯ ಹಿಂದೆಸರಿಯಲು) ಕಟ್ಟೆಗಟ್ಟಿದಂತಿರೆ (ಅದು ಕಟ್ಟೆಯನ್ನು ಕಟ್ಟಿದಂತೆ ಇತ್ತು;) ತಳರ್ದತ್ತು ಆರಾತಿಬಲಂ ಆಂಪವರ್ ಆರ್(ಆರಾತಿ-ಶತ್ರು ಸೈನ್ಯವು ತಳರ್ದತ್ತು ತೆರಳಿತು, ಹಿಂದೆಸರಿಯಿತು) ಆಂಪವರಾರ್ ಕದನತ್ರಿಣೇತ್ರನಂ (ಕದನರುದ್ರನಾದ ಅರ್ಜುನನ್ನು ಎದುರಿಸುವವರು ಯಾರು? ಯಾರೂ ಇಲ್ಲ.)
ಪದ್ಯ-೦೦:ಅರ್ಥ: ಒಟ್ಟಿಗೆ ಸೇರಿದ ಬಾಣಗಳ ಸುರಿಮಳೆಗೆ ತಡೆಯಲಾರದೆ ಬಿಲ್ಲುಗಾರರಸೈನ್ಯ ಹಿಮ್ಮೆಟ್ಟಿತು, ಪ್ರತಿಭಟಿಸಲಾಗದೆ ಕುದುರೆಗಳು ನಾಶವಾದವು. ಗುಂಪುಕೂಡಿದ ಬಿಲ್ಲಾಳಿನ ಸಾಲುಗಳು ಬಿಲ್ಲಿನ ಪೆಟ್ಟಿನಿಂದ ನೊಂದಿತು. ರಥಗಳು ನಾಶವಾಗಿ ಆನೆಯ ಸಮೂಹವು ಹಿಮ್ಮೆಟ್ಟಿ ಓಡಿತು, ಹಿಂದೆ ಇದ್ದ ಆನೆಯ ಗುಂಪುಗಳು ಕಟ್ಟೆಯನ್ನು ಕಟ್ಟಿದ ಹಾಗಿರಲು ಶತ್ರುಸೈನ್ಯವು ಸರಿದೋಡಿತು. ಕದನತ್ರಿಣೇತ್ರನಾದ ಅರ್ಜುನನನ್ನು ಎದುರಿಸುವವರು ಯಾರು? ಯಾರೂ ಇಲ್ಲ.
ವ|| ಆಗಳ್ ಕರ್ಣನರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಱಿದುಂ ಪೊೞ್ತು ಕಾದೆ-
ವಚನ:ಪದವಿಭಾಗ-ಅರ್ಥ:ಆಗಳ್ ಕರ್ಣನು ಆರ್ಣವನಿನಾದದಿಂದ ಆರ್ದು (ಸಮುದ್ರಘೋಷದಂತೆ ಆರ್ಭಟಿಸಿ) ಗುಣಾರ್ಣವನೊಳ್ ಬಂದು ತಾಗಿ (ಅರಿಕೇಸರಿಯ ಬಿರುದನ್ನು ಉಪಯೋಗಿಸಿದೆ: ಅರ್ಜುನನೊಡನೆ ಯುದ್ಧಕ್ಕೆ ನಿಂತನು) ಶಲ್ಯಂ ಭೀಮಸೇನನೊಳ್ ತಾಗಿ (ಶಲ್ಯನು ಭೀಮಸೇನನನ್ನು) ಕಿಱಿದುಂ ಪೊೞ್ತು ಕಾದೆ (ಸ್ವಲ್ಪ ಹೊತ್ತು ಕಾದಲು/ ಯುದ್ಧಮಾಡಲು)-
ವಚನ:ಅರ್ಥ:ಆಗ ಕರ್ಣನು ಸಮುದ್ರಘೋಷದಂತೆ ಆರ್ಭಟಿಸಿ, ಅರ್ಜುನನೊಡನೆಯೂ, ಶಲ್ಯನು ಭೀಮಸೇನನೊಡನೆಯೂ ಯುದ್ಧಕ್ಕೆ ನಿಂತರು/ ತಾಗಿದರು
ಚಂ|| ಅರಿದು ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನೆಂದು ನೊಂದು ನಿ
ತ್ತರಿಸದೆ ಪಾರ್ವನೊಳ್ ಕಲಹಮಾಗದು ಚಿ ದೊರೆಯಲ್ತಿದೆಂದು ಭಾ|
ಸ್ಕರಸುತನೊಯ್ಯನೋಸರಿಸೆ ಮದ್ರಮಹೀಶನುಮಂ ಮರುತ್ಸುತಂ
ವಿರಥನೆ ಮಾಡಿ ತಳ್ತು ನೆಲಕಿಕ್ಕಿದನೊರ್ಮೆಯ ಮಲ್ಲಯುದ್ಧದೊಳ್|| ೭೧ ||
ಪದ್ಯ-೭೧:ಪದವಿಭಾಗ-ಅರ್ಥ:(ಕರ್ಣನು) ಅರಿದು (ಅಸಾಧ್ಯ) ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನು ಎಂದು ನೊಂದು(ಹಾರುವನ/ಬ್ರಾಹ್ಮಣನ ಬಿಲ್ವಿದ್ಯೆಯನ್ನು ಗೆಲುವುದು ಅಸಾಧ್ಯ ಎಂದು ವ್ಯಥೆಪಟ್ಟು), ನಿತ್ತರಿಸದೆ (ನಿಭಾಯಿಸಲಾರದೆ- ಎದುರಿಸಿ ನಿಲ್ಲಲಾರದೆ), ಪಾರ್ವನೊಳ್ ಕಲಹಮಾಗದು ಚಿ ದೊರೆಯಲ್ತಿದು ಎಂದು (ಚಿ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ' ಎಂದು) ಭಾಸ್ಕರಸುತನು ಒಯ್ಯನೆ ಓಸರಿಸೆ (ಕರ್ಣನು ಮೆಲ್ಲಗೆ ಹಿಮ್ಮೆಟ್ಟಲು) ಮದ್ರಮಹೀಶನುಮಂ ಮರುತ್ಸುತಂ ವಿರಥನೆ ಮಾಡಿ (ಭೀಮನು ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ) ತಳ್ತು (ಹಿಡಿದು/ ತಳ್ಳಿ?) ನೆಲಕಿಕ್ಕಿದನು ಒರ್ಮೆಯ ಮಲ್ಲಯುದ್ಧದೊಳ್ (ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ ನೆಲಕ್ಕೆ ಅಪ್ಪಳಿಸಿದನು)
ಪದ್ಯ-೭೧:ಅರ್ಥ: ಕರ್ಣನು ಬ್ರಾಹ್ಮಣನ ಬಿಲ್ವಿದ್ಯೆಯನ್ನು ಎದುರಿಸಿ ನಿಲ್ಲಲಾರದೆ, ಗೆಲ್ಲುವುದು ಅಸಾಧ್ಯ ಎಂದು ವ್ಯಥೆಪಟ್ಟು, 'ಚಿ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ' ಎಂದು ಮೆಲ್ಲಗೆ ಹಿಮ್ಮೆಟ್ಟಲು/ ಹಿಮ್ಮೆಟ್ಟಿದನು, ಭೀಮನು ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ, ಹಿಡಿದು, ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ ಅಪ್ಪಳಿಸಿದನು.
ವ|| ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗೆ ಸುಟ್ಟಿತೋಱಿ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುೞಿದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದಂ ಕಂಡು ಮನಂಗೆಟ್ಟು-
ವಚನ:ಪದವಿಭಾಗ-ಅರ್ಥ:ಆಗಳು ಆ ಬಲದ ನಡುವೆ ಇರ್ದ ನಾರಾಯಣಂ ಬಲದೇವಂಗೆ (ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ) ಸುಟ್ಟಿತೋಱಿ (ಬೆರಳಿನಿಂದ ಸುಟ್ಟಿ/ಗುರಿಮಾಡಿ ಸೂಚಿಸಿ ತೋರಿಸಿ) ಭೀಮಾರ್ಜುನರ್ಕಳ್ ಇವರು ಅಮೋಘಂ ಅಪ್ಪರೆಂದು (ನಿಶ್ಚಯವಾಗಿಯೂ ಅವರೇ) ಅವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದ ಆಗಳು (ಸಂತೋಷಪಟ್ಟ ಆ ಸಮಯದಲ್ಲಿ ) ಉೞಿದ ಅರಸು ಮಕ್ಕಳೆಲ್ಲಂ (ಉಳಿದ ರಾಜಕುಮಾರರೆಲ್ಲ) ಕರ್ಣ ಶಲ್ಯರ್ ಮೊಗಂದಿರಿದುದಂ (ಹಿಮ್ಮೆಟ್ಟಿದುದನ್ನು)ಕಂಡು ಮನಂಗೆಟ್ಟು (ದೈರ್ಯ ಕುಂದಿ)-
ವಚನ:ಅರ್ಥ:ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ ಇವರು ಭೀಮಾರ್ಜುನರು ಎಂದು ಬೆರಳಿನಿಂದ ಸುಟ್ಟಿ/ಗುರಿಮಾಡಿ ಸೂಚಿಸಿ ತೋರಿಸಿ, ಇವರು ನಿಶ್ಚಯವಾಗಿಯೂ ಅವರೇ ಎಂದು, ಅವರ ಪರಾಕ್ರಮಕ್ಕೆ ಸಂತೋಷಪಟ್ಟನು/ ಸಂತೋಷಪಟ್ಟ ಆ ಸಮಯದಲ್ಲಿ ಉಳಿದ ರಾಜಕುಮಾರರೆಲ್ಲ ಕರ್ಣಶಲ್ಯರು ಮುಖತಿರುಗಿಸಿ ಹಿಮ್ಮೆಟ್ಟಿದುದನ್ನು ನೋಡಿ ದೈರ್ಯಗುಂದಿ-
ಕಂ|| ಕರಮೊಸೆದಾ ದ್ರುಪದಜೆಯೊಳ್
ನೆರೆದೊಸಗೆಗೆ ತಮ್ಮ ಬೀರಮಂ ಬಿಂಕಮುಮಂ|
ತೆಱವುಂ ತೆಲ್ಲಂಟಿಯುಮೆಂ
ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್|| ೭೨||
ಪದ್ಯ-೭೨:ಪದವಿಭಾಗ-ಅರ್ಥ:ಕರಂ (ಬಹಳ) ಒಸೆದು (ಸಂತೋಷಪಟ್ಟು ) ಆ ದ್ರುಪದಜೆಯೊಳ್ ನೆರೆದ ಒಸಗೆಗೆ (ಆ ದ್ರೌಪದಿಯೊಡನೆ ಸೇರಿದ ಸಂತೋಷಕ್ಕೆ) ತಮ್ಮ ಬೀರಮಂ ಬಿಂಕಮುಮಂ ತೆಱವುಂ (ತಮ್ಮ ಶೌರ್ಯವನ್ನೂ, ಗರ್ವವನ್ನೂ ತಪ್ಪು ಕಾಣಿಕೆಯೆಂದು) ತೆಲ್ಲಂಟಿಯುಮೆಂದು (ಬಳುವಳಿಯೆಂದೂ) ಅರಿಕೇಸರಿಗೆ ಆಗಳ್ ಈವವೋಲ್ ಬೆನ್ನಿತ್ತರ್ (ಅರಿಕೇಸರಿಗೆ ಕೊಡುವ ಹಾಗೆ ಬೆನ್ನುತಿರುಗಿಸಿ ಪಲಾಯನ ಮಾಡಿದರು.) (ಅರ್ಜುನ ದ್ರೌಪದಿಯರ ವಿವಾಹಕ್ಕೆ ಅವರು/ ರಾಜಕುಮಾರರು ಕೊಟ್ಟ ಉಡುಗೊರೆ-ಬಳುವಳಿ ಯಾವುದೆಂದರೆ ಅವರ ಶೌರ್ಯ ಗರ್ವ/ ಗೌರವ)
ಪದ್ಯ-೭೨:ಅರ್ಥ:ದ್ರೌಪದಿಯೊಡನೆ ಅರ್ಜುನನು ಬಂದು ಸೇರಿದ ಸಂತೋಷಕ್ಕಾಗಿ ತಮ್ಮ ಪರಾಕ್ರಮವನ್ನೂ ಅಹಂಕಾರವನ್ನೂ ತಪ್ಪು ಕಾಣಿಕೆಯನ್ನಾಗಿಯೂ/ ಬಳುವಳಿಯನ್ನಾಗಿಯೂ ಅರಿಕೇಸರಿಗೆ/ಅರ್ಜುನನಿಗೆ ಕೊಡುವ ಹಾಗೆ ಬೆನ್ನುತಿರುಗಿಸಿ ಪಲಾಯನ ಮಾಡಿದರು.
ವ|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱಿ ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ವಿಕ್ರಾಂತತುಂಗಂ (ಅರ್ಜುನನು) ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱಿ (ಕಯ್ಯನ್ನು ಊರಿ) ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗೆ ()ದ್ರೌಪದಿಗೆ ಇಂತೆಂದಂ (ಇಂತು ಎಂದಂ-ಹೇಳಿದನು)-
ವಚನ:ಅರ್ಥ:ವಿಕ್ರಾಂತತುಂಗನಾದ ಅರ್ಜುನನು ಬಿಲ್ಲಿನ ತುದಿಯ ಮೇಲೆ ಕಯ್ಯನ್ನೂರಿಕೊಂಡು ಹುಸಿನಗೆ ನಗುತ್ತ ದ್ರೌಪದಿಗೆ ಹೀಗೆ ಹೇಳಿದನು
ಕಂ|| ನಿನ್ನನುೞುಗಿಸಲುಮಾಜಿಯೊ
ಳೆನ್ನಂ ಬೆಂಕೊಂಡು ಕಾದಲುಂ ಬಂದೀಗಳ್|
ಬಿನ್ನನೆ ಮೊಗದಿಂ ಬೀರರ್
ಬೆನ್ನಿತ್ತುದನಿನಿಸು ನೋಡ ಸರಸಿರುಹಮುಖೀ|| ೭೩||
ಪದ್ಯ-೦೦:ಪದವಿಭಾಗ-ಅರ್ಥ:ನಿನ್ನನು ಉೞುಗಿಸಲುಂ (ಒಲಿಸುವುದಕ್ಕೂ) ಆಜಿಯೊಳ್ ಎನ್ನಂ (ನನ್ನೊಡನೆ ಯುದ್ಧದಲ್ಲಿ) ಬೆಂಕೊಂಡು (ಬೆನ್ನಟ್ಟಿ ಬಂದು) ಕಾದಲುಂ (ಯುದ್ಧಮಾಡುವುದಕ್ಕೂ) ಬಂದು ಈಗಳ್ ಬಿನ್ನನೆ ಮೊಗದಿಂ ಬೀರರ್ ಬೆನ್ನಿತ್ತುದನು ಇನಿಸು ನೋಡ ಸರಸಿರುಹಮುಖೀ (ಈಗ ಪೆಚ್ಚು ಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಕಮಲನಯನೇ ಎಂದನು ಅರ್ಜುನ.)
ಪದ್ಯ-೦೦:ಅರ್ಥ: ಎಲೌ ಕಮಲಮುಖಿಯಾದ ದ್ರೌಪದಿಯೇ ಈ ವೀರರು ನಿನ್ನನ್ನು ಒಲಿಸುವುದಕ್ಕೂ ನನ್ನೊಡನೆ ಯುದ್ಧಮಾಡುವುದಕ್ಕೂ ಬೆನ್ನಟ್ಟಿ ಬಂದು ಈಗ ಪೆಚ್ಚು ಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಕಮಲನಯನೇ ಎಂದನು ಅರ್ಜುನ.
ವ|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪ್ಪುದುಮಂ (ಬಂದಿರುವವರು ಪಾಂಡವರಾಗಿ) ತನ್ನಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲದಱಿದು ಮಹಾವಿಭೂತಿಯಿಂ ಪೊೞಲಂ ಪುಗಿಸಿ-
ವಚನ:ಪದವಿಭಾಗ-ಅರ್ಥ: ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪ್ಪುದುಮಂ (ಪಾಂಡವರೆಮಬುದನ್ನು) ತನ್ನ ಅಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲದಱಿದು (ನಿಶ್ಚಯವಾಗಿ ತಿಳಿದು) ಮಹಾವಿಭೂತಿಯಿಂ ಪೊೞಲಂ ಪುಗಿಸಿ(ಮಹಾವೈಭವದಿಂದ ಪುರವನ್ನು ಪ್ರವೇಶಮಾಡಿಸಿ) -
ವಚನ:ಅರ್ಥ:ಅಷ್ಟರಲ್ಲಿ ದ್ರುಪದನು ಅಲ್ಲಿಗೆ ಬಂದಿರುವವರು ಪಾಂಡವರೆಮಬುದನ್ನು ತನ್ನ ಅಳಿಯನು ವಿಕ್ರಮಾರ್ಜುನನಾಗಿರುವುದನ್ನೂ ನಿಶ್ಚಯವಾಗಿ ತಿಳಿದು ಮಹಾವೈಭವದಿಂದ ಪುರವನ್ನು ಪ್ರವೇಶಮಾಡಿಸಿ- (ಪ್ರವೇಶಮಾಡಿಸಿದನು.)
ಚಂ|| ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ್ ತಳ
ತ್ತಳಿಸೆ ವಿಚಿತ್ರಕೇತುತತಿಗಳ್ ಮಿಳಿರ್ದಾಡೆ ಪುರಾಂಗನಾಜನಂ|
ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ
ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ|| ೭೪||
ಪದ್ಯ-೭೪:ಪದವಿಭಾಗ-ಅರ್ಥ:ಪೊೞಲೊಳಗೆ ಒಪ್ಪೆ ಕನ್ನಡಿಯ ಕಂಚಿನ ತೋರಣದ ಓಳಿಗಳ್ ತಳತ್ತಳಿಸೆ (ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ ತೋರಣದ ಸಮೂಹಗಳು ಥಳಿಥಳಿಸಿ ಶೋಭಿಸಿದವು) ವಿಚಿತ್ರಕೇತುತತಿಗಳ್ ಮಿಳಿರ್ದಾಡೆ (ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಲು-) ಪುರಾಂಗನಾ(ಸ್ತ್ರೀಯರು) ಜನಂಗಳ ಜಯ ಜೀಯಮಾನ ರವಂ{ಪುರದ ಸ್ತ್ರೀಜನರು ಜಯಜಯವೆಂದು ಘೋಷಿಸುವ ಸದ್ದು} ಇಕ್ಕುವ ಸೇಸೆ (ಚೆಲ್ಲುವ ಮಂತ್ರಾಕ್ಷತೆ) ಮನೋನುರಾಗಮಂ ಬಳೆಯಿಸೆ (ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಲು) ಪೊಕ್ಕನು (ಹೊಕ್ಕನು) ಆ ದ್ರುಪದಮಂದಿರಮಂ ಪರಸೈನ್ಯಭೈರವಂ (ಶತ್ರುಸೈನ್ಯಕ್ಕೆ ಭೈರವನಂತಿರುವ ಅರ್ಜುನನು)
ಪದ್ಯ-೭೪:ಅರ್ಥ: ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ ತೋರಣದ ಸಮೂಹಗಳು ಥಳಿಥಳಿಸಿ ಶೋಭಿಸಿದವು. ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಲು- ಪುರದ ಸ್ತ್ರೀಜನರು ಜಯಜಯವೆಂದು ಘೋಷಿಸುವ ಸದ್ದು, ಚೆಲ್ಲುವ ಮಂತ್ರಾಕ್ಷತೆ, ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಿದುವು. ಶತ್ರುಸೈನ್ಯಕ್ಕೆ ಭೈರವನಂತಿರುವ ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು.

ಅರ್ಜುನ ದ್ರೌಪತಿಯರ ವಿವಾಹ[ಸಂಪಾದಿಸಿ]

ವ||ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದಱ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪೆಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿಹುತ ಹುತವಹಸಮಕ್ಷದೊಳ್ ಕೆಯ್ನೀರೆರೆದು ಪ್ರಾಣಿಗ್ರಹಂಗೆಯ್ಸೆ-
ವಚನ:ಪದವಿಭಾಗ-ಅರ್ಥ: ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ (ನೆಲಗಟ್ಟಿನಿಂದ ಕೂಡಿದ) ರಾಜಾವರ್ತದ (ಇಂದ್ರನೀಲಮಣಿ) ಕಂಬದೊಳಂ ಪವಳದ ಜಂತೆಯೊಳಂ (ತೊಲೆ?) ಪದ್ಮರಾಗದ ಬೋದಿಗೆಯೊಳಂ ಇಂದ್ರನೀಲದ ಭದ್ರದೊಳಂ ಕರ್ಕೇತನದ (ಚಿನ್ನದ) ಜಾಳರಿಗೆಯೊಳಂ (ಜಾಲರಿ) ಪಳುಕಿನ (ಹೊಳೆಯುವ)ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಂ ಒಪ್ಪುವ (ಶೋಭಿಸುವ) ವಿವಾಹಗೇಹಮಂ ಸಮೆಯಿಸಿಯು (ವಿವಾಹಗೃಹವನ್ನು ಸಿದ್ಧಗೊಳಿಸಿ) ಅದಱ ನಡುವಣ ಆರ್ದ್ರಮೃತ್ತಿಕಾ (ಒದ್ದೆಮಣ್ಣಿನಿಂದ ) ವಿರಚಿತಮಪ್ಪ (ಮಾಡಿದ) ಚತುರಾಂತರದೊಳ್ (ಹಸೆಮಣೆ ಜಗುಲಿಯಲ್ಲಿ) ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ (ಚಚ್ಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲಿನ) ದುಗುಲದ ಪೆಸೆಯೊಳ್ ( ರೇಷ್ಮೆಯ ಹಸೆಯಲ್ಲಿ) ಗುಣಾರ್ಣವನನು (ಅರ್ಜುನನ್ನು) ಆ ದ್ರುಪದಜೆಯನೊಡನೆ ಕುಳ್ಳಿರಿಸಿ, ಹಿತ ಪುರೋಹಿತ ಪ್ರಾಜ್ಯ ಆಜ್ಯಾಹುತಿಹುತ (ಶುದ್ಧ ತುಪ್ಪದ ಆಹುತಿ ಹುತ-ಅಗ್ನಿಗೆ ಹಾಕಿ) ಹುತವಹ ಸಮಕ್ಷದೊಳ್ (ಅಗ್ನಿಸಮಕ್ಷಮದಲ್ಲಿ) ಕೆಯ್ನೀರೆರೆದು ಪ್ರಾಣಿಗ್ರಹಂ ಗೆಯ್ಸೆ (ಕೈನೀರು ಎರೆದು- ಕೈನೀರು ಬಿಟ್ಟು- ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಲು)-
ವಚನ:ಅರ್ಥ:ಆಗ ದ್ರುಪದನು ಪಚ್ಚೆಯೆಂಬ ರತ್ನದಿಂದ ಮಾಡಿದ ನೆಲಗಟ್ಟಿನಿಂದಲೂ ಎಳೆಯ ಇಂದ್ರನೀಲಮಣಿಯಿಂದ ಮಾಡಿದ ಕಂಭಗಳಿಂದಲೂ ಹವಳದ ಜಂತಿಗಳಿಂದಲೂ ಪದ್ಮರಾಗದ ಬೋದಿಗೆಗಳಿಂದಲೂ ಇಂದ್ರನೀಲದ ಉಪ್ಪರಿಗೆಗಳಿಂದಲೂ ಚಿನ್ನದ ಜಾಲರಿಗಳಿಂದಲೂ ಸ್ಪಟಿಕದ ಚಿತ್ರಿತವಾದ ಗೋಡೆಗಳಿಂದಲೂ ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಮೇಲ್ಮಹಡಿಯಿಂದಲೂ ವಿವಾಹಗೃಹವನ್ನು ಸಿದ್ಧಗೊಳಿಸಿ, ಅದರ ಮಧ್ಯೆ ಹಸಿಯ ಮಣ್ಣಿನಿಂದ ಮಾಡಿದ ಚಚ್ಚೌಕದ ಹಸೆಯ ಜಗಲಿಯಲ್ಲಿ ಚಚ್ಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲೆ ರೇಷ್ಮೆಯ ಹಸೆಯಲ್ಲಿ ಗುಣಾರ್ಣವನನ್ನೂ ದ್ರೌಪದಿಯನ್ನೂ ಕುಳ್ಳಿರಿಸಿದನು. ಬಂಧುಗಳು, ಪುರೋಹಿತರು, ಶುದ್ಧವಾದ ತುಪ್ಪದ ಹವಿಸ್ಸನ್ನು ಹೋಮಮಾಡಿಸಿದರು. ದ್ರುಪದನು ಅಗ್ನಿಸಮಕ್ಷಮದಲ್ಲಿ ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಲು-.
ಚಂ|| ಇಡಿದಿರೆ ಮಂಜಿನೊಳ್ ತುಱುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್
ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ|
ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಪಲ್ಲವಂ
ಬಿಡಿದು ಬೆಡಂಗನಾಳ್ದುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ|| ೭೫||
ಪದ್ಯ-೭೫:ಪದವಿಭಾಗ-ಅರ್ಥ:ಇಡಿದಿರೆ ಮಂಜಿನೊಳ್ ತುಱುಗಿ (ಮಂಜಿನಿಂದ ತುಂಬಿದ, ತುರುಗಿ ದಟ್ಟವಾಗಿ ವ್ಯಾಪ್ತವಾದ) ತೆಂಕಣಗಾಳಿಯೊಳು ಆದ ಸೋಂಕಿನೊಳ್(ದಕ್ಷಿಣಮಾರುತ ಸ್ಪರ್ಶದಿಂದ) ನಡುಗುವ ಅಶೋಕವಲ್ಲರಿಯ ಪಲ್ಲವದೊಳ್ (ಅಶೋಕಲತೆಯ ಚಿಗುರಿನಲ್ಲಿ) ನವಚೂತಪಲ್ಲವಂ (ಹೊಸದಾದ ಮಾವಿನ ಚಿಗುರು) ತೊಡರ್ದವೊಲ್ ಆಗೆ (ಸೇರಿಕೊಂಡ ಹಾಗೆ) ಘರ್ಮಜಲದಿಂ ನಡುಪ ಆಕೆಯ ಪಾಣಿಪಲ್ಲವಂ (ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು) ಬಿಡಿದು(ಹಿಡಿದು) ಬೆಡಂಗನು ಆಳ್ದುದು (ಸೊಬಗನ್ನು ಹೊಂದಿತು) ಗುಣಾರ್ಣವನೊಪ್ಪುವ ಪಾಣಿಪಲ್ಲವಂ (ಎಲೆಯಚಿಗುರಿನಂತಿರುವ ಕೈ)
ಪದ್ಯ-೭೫:ಅರ್ಥ: ಮಂಜಿನಿಂದ ತುಂಬಿದ, ತುರುಗಿ ದಟ್ಟವಾಗಿ ವ್ಯಾಪ್ತವಾದ, ದಕ್ಷಿಣಮಾರುತ ಸ್ಪರ್ಶದಿಂದ ಅಲುಗಾಡುತ್ತಿರುವ ಅಶೋಕಲತೆಯ ಚಿಗುರಿನಲ್ಲಿ ಹೊಸದಾದ ಮಾವಿನ ಚಿಗುರು ಸೇರಿಕೊಂಡ ಹಾಗೆ ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು ಹಿಡಿದು ಗುಣಾರ್ಣವನ/ ಅರ್ಉನನ ಸುಂದರವಾದ ಎಲೆಯಚಿಗುರಿನಂತಿರುವ ಕೈ ಸೊಬಗನ್ನು ಹೊಂದಿತು.
ವ|| ಅಂತೊರ್ವರೊರ್ವರ ಕಿಱುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು ಕನಕಗಿರಿಯ ಬಲಗೊಳ್ವ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞು ಬಲವಂದು ನಿಂದಿಂ ಬೞಿಯಮಾಕೆ ಪುರೋಹಿತನ ಪೇೞ್ದೋಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು-
ವಚನ:ಪದವಿಭಾಗ-ಅರ್ಥ:ಅಂತು ಒರ್ವರೊರ್ವರ (ಹಾಗೆ ಒಬ್ಬರು ಇನ್ನೊಬ್ಬರ) ಕಿಱುಕುಣಿಕೆಗಳಂ ಪಿಡಿದು (ಕಿರುಬೆರಳನ್ನು ಹಿಡಿದುಕೊಂಡು) ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ (ಹೋಮಕುಂಡದ ಅಗ್ರಭಾಗಕ್ಕೆ) ವಂದು (ಬಂದು) ಕನಕಗಿರಿಯ ಬಲಗೊಳ್ವ (ಪ್ರದಕ್ಷಿಣೆ ಮಾಡುವ) ಪತಂಗ ದಂಪತಿಯಂತೆ (ಸೂರ್ಯದಂಪತಿಗಳ ಹಾಗೆ) ಆ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞು ಬಲವಂದು (ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ) ನಿಂದಿಂ ಬೞಿಯಂ (ನಿಂತ ಬಳಿಕ) ಆಕೆ ಪುರೋಹಿತನ ಪೇೞ್ದೋಜೆಯೊಳ್ (ಪೇೞ್ದ ಓಜೆಯೊಳ್ ಹೇಳಿದ ರೀತಿಯಲ್ಲಿ) ಲಾಜೆಯನು (ಅರಳನ್ನು) ಅಗ್ನಿಕುಂಡದೊಳ್ ಸುರಿದು-
ವಚನ:ಅರ್ಥ:ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದುಕೊಂಡು ರತಿಯೂ ಕಾಮದೇವನೂ ಬರುವ ಹಾಗೆ ಹೋಮಕುಂಡದ ಅಗ್ರಭಾಗಕ್ಕೆ ಬಂದು ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುವ ಸೂರ್ಯದಂಪತಿಗಳ ಹಾಗೆ ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ನಿಂತ ಬಳಿಕ ದ್ರೌಪದಿಯು ಆ ಪುರೋಹಿತನು ಹೇಳಿದ ಕ್ರಮದಲ್ಲಿ ಅರಳನ್ನು ಅಗ್ನಿಕುಂಡದಲ್ಲಿ ಸುರಿದು,- (ಲಾಜಹೋಮವನ್ನು ಮಾಡಿದಳು)
ಚಂ|| ಅದಱ ಪೊದಳ್ದು ನೀಳ್ದ ಪೋಗೆಯಂ ಲುಳಿತಾಳಕ್ಕೆ ತನ್ನ ವಕ್ತ್ರ ಪ
ದ್ಮದಿನೊಸೆದಾಂತೊಡಾಕೆಯ ಕಪೋಲದೊಳಾ ನವ ಧೂಮಲೇಖೆ ಬೆ|
ಳ್ಪಿದಿರ್ಗೊಳೆ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ
ಸದೆ ತೆಗೆದಂತೆ ಕಣ್ಗೆಸೆದು ತೋಱಿದುದಾ ಕದನತ್ರಿಣೇತ್ರನಾ|| ೭೬||
ಪದ್ಯ-೭೬:ಪದವಿಭಾಗ-ಅರ್ಥ: ಅದಱ ಪೊದಳ್ದು (ಅದರಿಂದ ಹೊರಟ) ನೀಳ್ದ ಪೋಗೆಯಂ (ಉದ್ದ ಹೊಗೆಯನ್ನ)ಲುಳಿತಾಳಕ್ಕೆ (ಸುಳಿಕೂದಲಿನ ಆ ದ್ರೌಪದಿ) ತನ್ನ ವಕ್ತ್ರ ಪದ್ಮದಿಂ (ಮುಖ ಕಮಲದಿಂದ) ಒಸೆದು (ಸಂತಸದಿಂದ) ಆಂತೊಡೆ (ಧರಿಸಿದರೆ) ಆಕೆಯ ಕಪೋಲದೊಳು (ಅವಳ ಕೆನ್ನೆಯಲ್ಲಿ) ಆ ನವ ಧೂಮಲೇಖೆ (ಆ ಹೊಸಹೊಗೆಯ ಗೆರೆಯು) ಬೆಳ್ಪಿದಿರ್ಗೊಳೆ ಗಾಡಿವೆತ್ತು (ಸೊಗಸನ್ನು ಹೊಂದಿ ) ಅಡರ್ದು (ಮೇಲೇರಿ) ಕತ್ತುರಿಯೊಳ್ ಮದವಟ್ಟೆಯಂ ವಿಳಾಸದೆ ತೆಗೆದಂತೆ(ಪ್ರೀತಿಯ ಆಧಿಕ್ಯವನ್ನು ತೋರಿಸಲು ಕಸ್ತೂರಿಯಿಂದ ರಚಿಸಿದ ಪತ್ರಲೇಖೆಯನ್ನು ಬರೆದಹಾಗೆ) ಕಣ್ಗೆಸೆದು ತೋಱಿದುದು ಆ ಕದನತ್ರಿಣೇತ್ರನಾ (ಕದನತ್ರಿಣೇತ್ರನಾ/ ಅರ್ಜುನನ ಕಣ್ಣಿಗೆ ಸೊಗಸಾಗಿ ಕಂಡಿತು)
ಪದ್ಯ-೭೬:ಅರ್ಥ:ಗುಂಗರು ಕೂದಲಿನ ಆ ದ್ರೌಪದಿಯು ದಟ್ಟವೂ ದೀರ್ಘವೂ ಆದ ಅರಳಿನ ಹೊಗೆಯನ್ನು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿರುವ ಅವಳ ಕೆನ್ನೆಯಲ್ಲಿ ಆ ಹೊಸಹೊಗೆಯ ಗೆರೆಯು ಸೊಗಸನ್ನು ಹೊಂದಿ ಊರ್ಧ್ವಮುಖವಾಗಿ ಪ್ರೀತಿಯ ಆಧಿಕ್ಯವನ್ನು ತೋರಿಸಲು ಕಸ್ತೂರಿಯಿಂದ ರಚಿಸಿದ ಪತ್ರಲೇಖೆ (ಕಪೋಲಪತ್ರ – ಅಲಂಕಾರಕ್ಕಾಗಿ ಕನ್ನೆಯ ಮೇಲೆ ಬರೆದುಕೊಳ್ಳುವ ಚಿತ್ರ)ಯಂತೆ ಆ ಕದನತ್ರಿಣೇತ್ರನ/ಅರ್ಜುನನ ಕಣ್ಣಿಗೆ ಸೊಗಸಾಗಿ ಕಂಡಿತು.
ವ|| ಅಂತು ಸೊಗಯಿಸೆ ಪಾಡುವ ಮಂಗಳವಂಗಳುಮೋದುವ ಋಚೆಗಳುಂ ಪರಸುವ ಪರಕೆಗಳುಮೆಸೆಯೆ ಪಸೆಯೊಳಿರ್ದು-
ವಚನ:ಪದವಿಭಾಗ-ಅರ್ಥ:ಅಂತು ಸೊಗಯಿಸೆ ಪಾಡುವ ಮಂಗಳವಂಗಳುಂ (ಹಾಡುತ್ತಿರುವ ಮಂಗಳಧ್ವನಿಗಳು) ಓದುವ ಋಚೆಗಳುಂ (ವೇದಮಂತ್ರಗಳೂ) ಪರಸುವ ಪರಕೆಗಳುಂ ಎಸೆಯೆ ( ಹರಕೆಗಳೂ ಶೋಭಿಸಲು) ಪಸೆಯೊಳಿರ್ದು--
ವಚನ:ಅರ್ಥ:ಸೊಗಸಾಗಿರುವ ಹಾಗೆ ಹಾಡುತ್ತಿರುವ ಮಂಗಳಧ್ವನಿಗಳೂ ಪಠಿಸುತ್ತಿರುವ ವೇದಮಂತ್ರಗಳೂ ಹರಸುವ ಹರಕೆಗಳೂ ಶೋಭಿಸಲು ಹಸೆಯಲ್ಲಿದ್ದ ತುಂಟಸಖಿಯರು ಗುಣಾರ್ಣವನಿಗೆ ಹೀಗೆಂದು ಸೂಚಿಸಿದರು.--
ಚಂ|| ಪರಿಜೆಯನಂಟು (?) ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋ
ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ|
ತಿರಿಪುವ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ
ಬೆರಸಿದ ನಾಣುಮಂ ಕ್ರಮದೆ ಪಿಂಗಿಸು ಬೇಸಱದಿರ್ ಗುಣಾರ್ಣವಾ|| ೭೭||
ಪದ್ಯ-೭೭:ಪದವಿಭಾಗ-ಅರ್ಥ:ಪರಿಜೆಯನಂಟು (?)(ಚಲ್ಲಾಟದ ನೆವದಲ್ಲಿ) ಕೆನ್ನೆಗಳನು ಒಯ್ಯನೆ ನೀವುವ (ಕೆನ್ನೆಯನ್ನು ಸವರುವ) ಚಿನ್ನಪೂವನು ಓಸರಿಸುವ (ಚಿನ್ನದ ಹೂವನ್ನು ಓರೆಮಾಡು) ಹಾರಮಂ ಪಿಡಿದು ನೋಡುವ (ಹಾರವನ್ನು ಹಿಡಿದು ಪರೀಕ್ಷೆಮಾಡುವ), ಕಟ್ಟಿದ ನೂಲ ತೊಂಗಲಂ (ನೂಲಿನ ಕುಚ್ಚು) ತಿರಿಪುವ, ಕೆಯ್ತದೊಂದು ನೆವದಿಂ (ಕೆಲಸದ ನೆವದಿಂದ) ಲಲಿತಾಂಗಿಯ ಶಂಕೆಯಂ (ಸಂಶಯವನ್ನೂ) ಭಯಂಬೆರಸಿದ ನಾಣುಮಂ (ನಾಚಿಕೆಯನ್ನೂ) ಕ್ರಮದೆ ಪಿಂಗಿಸು (ಕ್ರಮಕ್ರಮವಾಗಿ ಹೋಗಲಾಡಿಸು.) ಬೇಸಱದಿರ್ ಗುಣಾರ್ಣವಾ (ನೀನು ಬೇಸರಪಡಬೇಡ ಅರ್ಜುನಾ)
ಪದ್ಯ-೭೭:ಅರ್ಥ: ಚಲ್ಲಾಟದ ನೆವದಲ್ಲಿ, ಕೆನ್ನೆಯನ್ನು ಸವರು, ಚಿನ್ನದ ಹೂವನ್ನು ಓರೆಮಾಡು, ಹಾರವನ್ನು ಹಿಡಿದು ಪರೀಕ್ಷೆಮಾಡು, ಅಲಂಕಾರಕ್ಕಾಗಿರುವ ನೂಲಿನ ಕುಚ್ಚನ್ನು ತಿರುಗಿಸು, ಕಾರ್ಯಗಳ (ಚೇಷ್ಟೆಯ) ನೆಪದಿಂದ ಕೋಮಲಶರೀರೆಯಾದ ಆ ದ್ರೌಪದಿಯ ಸಂಶಯವನ್ನೂ ಭಯದಿಂದ ಕೂಡಿದ ನಾಚಿಕೆಯನ್ನೂ ಅರ್ಜುನನೇ ನೀನು ಕ್ರಮಕ್ರಮವಾಗಿ ಹೋಗಲಾಡಿಸು. ಈ ಕಾರ್ಯದಲ್ಲಿ ನೀನು ಬೇಸರಪಡಬೇಡ,
ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ್ ಬುದ್ಧಿವೇೞೆ-
ವಚನ:ಪದವಿಭಾಗ-ಅರ್ಥ:ಎಂದು ಕೆಲದೊಳಿರ್ದ (ಪಕ್ಕದಲ್ಲಿದ್ದ) ದಂಡುರುಂಬೆಗಳ್ ಬುದ್ಧಿವೇೞೆ (ತುಂಟದಾಸಿಯರು ಬುದ್ಧಿಹೇಳಲು)-
ವಚನ:ಅರ್ಥ:ಎಂದು ಪಕ್ಕದಲ್ಲಿದ್ದ ತುಂಟದಾಸಿಯರು ಬುದ್ಧಿಹೇಳಲು-
ಉ|| ಕಾಂತೆ ಪೊದಳ್ದ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ
ತ್ಕಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗೆ ಸ|
ಯ್ತಂತಿರು ನಾಣ್ಚದೆಂದಣುಗೆಯರ್ ಪಿಡಿದೞ್ಕಳೊಳೆತ್ತಿ ಬುದ್ಧಿ ವೇ
ೞ್ದಂತೆ ಕದಂಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಕಾಂತೆ ಪೊದಳ್ದ ನಾಣ ಭರದಿಂದ (ದ್ರೌಪದಿಯು ಲಜ್ಜಾಭಾರದಿಂದ) ಅಧರೀಕೃತ (ಕಡಿಮೆ ಮಾಡಿದ್ದ) ಚಂದ್ರಬಿಂಬ ಸತ್ಕಾಂತಿಯನು ಆನನಾಂಬುಜಮನು (ಚಂದ್ರಬಿಂಬದ ಕಾಂತಿಯನ್ನೂ ಕಡಿಮೆಮಾಡಿದ್ದ ತನ್ನ ಮುಖಕಮಲವನ್ನು) ಒಯ್ಯನೆ ಬಾಗಿರೆ (ಮೆಲ್ಲಗೆ ಬಾಗಿಸಲು) ಕಾದಲಂಗೆ ಸಯ್ತಂತಿರು (ಪ್ರೀತಿಯವನಿಗೆ ಸರಿಯಾಗಿರು), ನಾಣ್ಚದೆಂದು ಅಣುಗೆಯರ್ ಪಿಡಿದು ಅೞ್ಕಳೆತ್ತಿ (ನಾಚಿಕೆ ಪಡಬೇಡ ಎಂದು, ಹುಡುಗಿಯರು ಅವಳ ಮುಖವನ್ನು, ಅಳ್ಕಳೊಳ್ ಎತ್ತಿ -ಪ್ರೀತಿಯಿಂದ ಎತ್ತಿ), ಬುದ್ಧಿ ವೇೞ್ದಂತೆ (ಬುದ್ಧಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ) ಕದಂಪಿನೊಳ್ (ಅವಳ ಕೆನ್ನೆಯಲ್ಲಿ) ಪೊಳೆದುವು ಆಕೆಯ ಹಾರ ಮರೀಚಿ ಮಾಲೆಗಳ್ (ಅವಳ ಕೆನ್ನೆಯಲ್ಲಿ ಅವಳ ಹಾರದ ಕಾಂತಿಕಿರಣಗಳ ಸಾಲುಗಳು ಹೊಳೆದವು.)
ಪದ್ಯ-೭೮:ಅರ್ಥ: ದ್ರೌಪದಿಯು ಲಜ್ಜಾಭಾರದಿಂದ ಚಂದ್ರಬಿಂಬದ ಕಾಂತಿಯನ್ನೂ ಕೀಳುಮಾಡಿದ್ದ ತನ್ನ ಮುಖಕಮಲವನ್ನು ಮೆಲ್ಲಗೆ ಬಗ್ಗಿಸಿರಲು ಅವಳ ಸಖಿಯರು ಪ್ರೀತಿಯಿಂದ ಅವಳ ಮುಖವನ್ನೆತ್ತಿ ‘ನಿನ್ನ ಪ್ರಿಯನಿಗೆ ಸರಿಯಾಗಿರು’ ಎಂದು ಬುದ್ಧಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ಅವಳ ಕೆನ್ನೆಯಲ್ಲಿ ಅವಳ ಹಾರದ ಕಾಂತಿಕಿರಣಗಳ ಸಾಲುಗಳು ಹೊಳೆದವು.
ವ|| ಅಂತೊಪ್ಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆೞ್ದು ನಿಂದಿರ್ದು ()-
ವಚನ:ಪದವಿಭಾಗ-ಅರ್ಥ:ಅಂತು ಒಪ್ಪುವ ವಿವಾಹಮಂಗಳದ ಒಸಗೆಯೊಳ್ ಮಂಗಳ ಪಾಠಕರು ಎೞ್ದು ನಿಂದಿರ್ದು(ಎದ್ದು ನಿಂತಿದ್ದು)-
ವಚನ:ಅರ್ಥ:ಹಾಗೆ ಶೋಭಿಸುವ ಮದುವೆಯ ಶುಭೋತ್ಸವದಲ್ಲಿ ಹೊಗಳುಭಟರು ಎದ್ದು ನಿಂತಿದ್ದು-
ಶಾ|| ಇಂದ್ರಾನೋಕಹಮೊಪ್ಪುವಿಂದ್ರತುರಂಗಂ ಸಂದಿಂದ್ರಗೇಹಂ ಪೊದ
ಳ್ದಿಂದ್ರಾನೇಕಪಮೊಪ್ಪುವಿಂದ್ರನಖಿಳೇಂದ್ರೈಶ್ಚರ್ಯಮಿಂದ್ರಾಣಿ ಸಂ|
ದಿಂದ್ರಾನರ್ಘ್ಯವಿಭೂಷಣಂಗಳರಿಭೂಪಾಳಾವಳೀದುಸ್ತಮ
ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೭೯||
ಪದ್ಯ-೭೯:ಪದವಿಭಾಗ-ಅರ್ಥ:ಇಂದ್ರಾನೋಕಹಂ (ಇಂದ್ರನ ಮರವಾದ ಕಲ್ಪವೃಕ್ಷವೂ ) ಒಪ್ಪುವ ಇಂದ್ರತುರಂಗಂ (ಇಂದ್ರನ ಕುದುರೆಯಾದ ಉಚ್ಛೆ ಶ್ರಸ್ಸೂ) ಸಂದಿಂದ್ರಗೇಹಂ (ಗೇಹ - ಮನೆ; ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ) ಪೊದಳ್ದ ಇಂದ್ರಾನೇಕಪಂ (ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ) ಒಪ್ಪುವ ಇಂದ್ರನಖಿಳೇಂದ್ರೈಶ್ಚರ್ಯಂ (ಇಂದ್ರನ ಸಕಲ ಐಶ್ವರ್ಯಗಳೂ) ಇಂದ್ರಾಣಿ (ಇಂದ್ರನ ಪತ್ನಿ) ಸಂದ ಇಂದ್ರಾನರ್ಘ್ಯ ವಿಭೂಷಣಂಗಳ (ಇಂದ್ರನ ಬೆಲೆಯಿಲ್ಲದ ಆಭರಣಗಳೂ) ಅರಿಭೂಪಾಳ ಆವಳೀ ದುಸ್ತಮಶ್ಚಂದ್ರಂಗೆ *ಈಗೆ (ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ) ಅಗರಿಗಂಗೆ (ಅರಿಗ-ಅರಿಕೇಸರಿ/ ಅರಜುನನಿಗೆ) ಮಂಗಳಮಹಾಶ್ರೀಯಂ ಜಯಶ್ರೀಯುಮಂ (ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ *ಕೊಡಲಿ)
ಪದ್ಯ-೭೯:ಅರ್ಥ: ಇಂದ್ರನ ಮರವಾದ ಕಲ್ಪವೃಕ್ಷವೂ ಪ್ರಕಾಶಮಾನವಾದ ಇಂದ್ರನ ಕುದುರೆಯಾದ ಉಚ್ಛೆ ಶ್ರಸ್ಸೂ ಸುಪ್ರಸಿದ್ಧವಾದ ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ ಇಂದ್ರನ ಸಕಲ ಐಶ್ವರ್ಯಗಳೂ ಇಂದ್ರನ ರಾಣಿಯಾದ ಶಚೀದೇವಿಯೂ ಇಂದ್ರನ ಬೆಲೆಯಿಲ್ಲದ ಆಭರಣಗಳೂ, ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ಅವನಿಗೆ ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ ಕೊಡಲಿ
ವ|| ಎಂದು ಮಂಗಳವೃತ್ತಂಗಳನೋದೆ ಕಿಱಿದುಂ ಬೇಗಮಿರ್ದೆತ್ತಿದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬೞಿಯಂ ಯಕ್ಷಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿಮಿರ್ದು ತಂಬುಲಮಂ ಕೊಂಡು-
ವಚನ:ಪದವಿಭಾಗ-ಅರ್ಥ:ಎಂದು ಮಂಗಳವೃತ್ತಂಗಳಂ ಓದೆ ಕಿಱಿದುಂ ಬೇಗಂ(ಸ್ವಲ್ಪ ಕಾಲ) ಇರ್ದೆತ್ತಿದ ಬೋನದೊಳ್ (ಬಡಿಸಿದ ಭೋಜನದಲ್ಲಿ) ಕಲ್ಯಾಣ ಅಮೃತಾಹಾರಮನು ಆರೋಗಿಸಿ (ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ) ಬೞಿಯಂ (ಅನಂತರ) ಯಕ್ಷಕರ್ದಮದ ಕೆಯ್ಗಟ್ಟಿಯೊಳ್ (ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ) ಕೆಯ್ಯಂ ತಿೞುರ್ದು (ಕಯ್ಯನ್ನು ಬಳಿದುಕೊಂಡು )ತಂಬುಲಮಂ ಕೊಂಡು-
ವಚನ:ಅರ್ಥ:ಎಂದು ಮಂಗಳಗೀತೆಗಳನ್ನು ಓದಲು/ಹೇಳಲು ಸ್ವಲ್ಪ ಕಾಲವಾದ ಮೇಲೆ ಬಡಿಸಿದ ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ಕಯ್ಯನ್ನು ಬಳಿದುಕೊಂಡು ತಾಂಬೂಲವನ್ನು ಸ್ವೀಕರಿಸಿ-
ಕಂ|| ಕವಿ ಗಮಕಿ ವಾದಿ ವಾಗ್ಮಿ
ಪ್ರವರರ ಪಂಡಿತರ ನೆಗೞ್ದ ಮಾತಱಿವರ ಸ|
ಬ್ಬವದವರೊಡನಂತೊಸೆದ
ನ್ನವಾಸದೋಲಗದೊಳಿರ್ದನಾಗಳ್ ಹರಿಗಂ|| ೮೦||
ಪದ್ಯ-೮೦:ಪದವಿಭಾಗ-ಅರ್ಥ:ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ (ಪ್ರಸಿದ್ಧರಾದ) ಮಾತ ಅಱಿವರ (ಮಥು ತಿಳಿದವರ) ಸಬ್ಬವದವರೊಡನೆ (ವಿನೋದಗಾರರೊಡನೆ) ಅಂತೆ ಒಸೆದು (ಹಾಗೆ ಶೋಭಿಸಿ) ಅನ್ನವಾಸದ ಓಲಗದೊಳು (ಭೋಜನ ಶಾಲೆಯ ಸಭೆಯಲ್ಲಿ) ಇರ್ದನು ಆಗಳ್ ಹರಿಗಂ (ಅರ್ಜುನನು)
ಪದ್ಯ-೮೦:ಅರ್ಥ: ಹರಿಗನು/ ಅರ್ಜುನನು, ಕವಿಗಳು, ಗಮಕಿಗಳು, ವಾದಿಗಳು, ವಾಗ್ಮಿಗಳು, ಶ್ರೇಷ್ಠರಾದ ಪಂಡಿತರು ಪ್ರಸಿದ್ಧರಾದ ಸಂಭಾಷಣಕಾರರು, ಹಾಸ್ಯಗಾರರು ಇವರೊಡನೆ ಸಂತೋಷದಿಂದ ಭೋಜನಶಾಲೆಯ ಓಲಗದಲ್ಲಿದ್ದನು.
ವ|| ಆ ಪ್ರಸ್ತಾವದೊಳ್-
ವಚನ:ಅರ್ಥ:ಆ ಸಂದರ್ಭದಲ್ಲಿ -
ಉ|| ಬೇಸರೆ ಲೋಕಮಂ ತಗುಳ್ದು ಸುಟ್ಟೞಲಿಂದೆ ಖರಾಂಶು ನಾರಕಾ
ವಾಸದೊಳಾೞ್ವವೋಲಪರರ್ವಾಯೊಳಾೞ್ವುದುಮಿತ್ತ ವಂದ ಸಂ|
ಧ್ಯಾಸಮಯಾತ್ತರಕ್ತರುಚಿ ಪಿಂಗೆ ಬೞಿಕ್ಕುದಯಾದ್ರಿಯೊಳ್ ಪದಂ
ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ|| ೮೧||
ಪದ್ಯ-೮೦:ಪದವಿಭಾಗ-ಅರ್ಥ:ಬೇಸರೆ ಲೋಕಮಂ ತಗುಳ್ದು (ಜನ ಬೇಸರ ಪಡುವಹಾಗೆ) ಸುಟ್ಟೞಲಿಂದೆ (ಬಿಸಿಲಿನಿಂಸ ಸುಟ್ಟ ಅಳಲಿಂದ-ದುಃಖದಿಂದ) ಖರಾಂಶು (ಸೂರ್ಯನು) ನಾರಕ ಆವಾಸದೊಳು ಆೞ್ವವೋಲ್ (ನರಕಲೋಕದಲ್ಲಿ ಆಳ್ವವೋಲ್/ ಮುಳುಗುವ ಹಾಗೆ) ಅಪರ ವಾರ್ಧಿಯೊಳ್ ಆೞ್ವುದುಂ (ಪಶ್ಚಿಮ ಸಮುದ್ರದಲ್ಲಿ ಮುಳುಗುತ್ತಲು) ಇತ್ತ ವಂದ (ಬಂದ) ಸಂಧ್ಯಾಸಮಯಾತ್ತ ರಕ್ತರುಚಿ (ಸಂಜೆಸಮಯದ ಕೆಂಪು ಬಣ್ಣ) ಪಿಂಗೆ (ಹಿಂದೆ ಸರಿಯಲು) ಬೞಿಕ್ಕ ಉದಯಾದ್ರಿಯೊಳ್ (ಬಳಿಕ ಉದಯಾಚಲದಲ್ಲಿ )ಪದಂಗಾಸಿದ (ಹದವಾಗಿ- ಚೆನ್ನಾಗಿ ಕಾಯಿಸಿದ?) ಪೊನ್ನ ಪುಂಜಿಯವೊಲು (ಚಿನ್ನದ ಪುಂಜಿ- ಮುದ್ದೆಯಂತೆ) ಇರ್ದುದು ಕಣ್ಗೆ ಹಿಮಾಂಶುಮಂಡಲಂ (ಚಂದ್ರ ಮಂಡಲವು ಕಣ್ಣಿಗೆ ಇರ್ದುದು-ಕಾಣುತ್ತಿತ್ತು)
ಪದ್ಯ-೮೦:ಅರ್ಥ:ಲೋಕವನ್ನು ಬೆನ್ನಟ್ಟಿ ಅದು ದುಃಖಪಡುವಂತೆ ಸುಟ್ಟು ದುಖದಿಂದ ಸೂರ್ಯನು ನರಕವಾಸದಲ್ಲಿ ಮುಳುಗುವ ಹಾಗೆ ಪಶ್ಚಿಮಸಮುದ್ರದಲ್ಲಿ ಮುಳುಗಿದನು. ಸಂಧ್ಯಾಕಾಲದಲ್ಲುಂಟಾದ ಕೆಂಪುಕಾಂತಿಯು ಹಿಂಜರಿಯಿತು. ಅನಂತರ ಚಂದ್ರಮಂಡಲವು ಹದವಾಗಿ ಕಾಸಿದ (ಶುಭ್ರಮಾಡಿದ) ಶುದ್ಧಚಿನ್ನದ ಮುದ್ದೆಯ (ಗಂಟೆಯ) ಹಾಗೆ ಕಣ್ಣಿಗೆ ಕಾಣಿಸುತ್ತತ್ತು.
ವ|| ಆಗಳ್ ದ್ರುಪದಂ ನಿಜಾಂತಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿಱಿದುಂ ಬೇಗಮಿರ್ದೋಲಗಮುಮಂ ಪರೆಯಲ್ವೇೞ್ದು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇರೆಬೇರೆ ಮಾಡಂಗಳಂ ಬೀಡುವೇೞ್ದು ಗುಣಾರ್ಣವನಂ ಸೆಜ್ಜೆಗೆ ಬಿಜಯಂಗೆಯ್ಯಿಮೆನೆ ಕಾಮಂ ಕಳನೇಱುವಂತೆ ಸೆಜ್ಜೆಯನೇಱಿ ಸೆಡೆದಿರ್ದ ನಲ್ಲಳಂ ನೋಡಿ-
ವಚನ:ಪದವಿಭಾಗ-ಅರ್ಥ: ಆಗಳ್ ದ್ರುಪದಂ ನಿಜ (ತನ್ನ) ಅಂತಪುರ ಪರಿವಾರಂ ಬೆರಸು (ಒಡಗೂಡಿಕೊಂಡು) ಉದಾರಮಹೇಶ್ವರನಲ್ಲಿಗೆ (ಅರ್ಜುನನ ಬಳಿಗೆ) ಓಲಗಕ್ಕೆ ವಂದು ನೃತ್ಯ ವಾದ್ಯ ಗೀತ ಆತೋದ್ಯಂಗಳೊಳ್ (ವಾದ್ಯಗಳಲ್ಲಿ) ಕಿಱಿದುಂ ಬೇಗಂ ಇರ್ದು ಓಲಗಮುಮಂ ಪರೆಯಲ್ವೇೞ್ದು (ಕಿರಿದಿ-ಸ್ವಲ್ಪಕಾಲ ಇದ್ದು ಸಭೆಯನ್ನು ವಿಸರ್ಜಿಸುವಂತೆ ಹೇಳಿ) ಮತ್ತಿನ (ಉಳಿದ) ನಾಲ್ವರ್ಗಂ ಕೊಂತಿಗಂ ಬೇವೇ ಮಾಡಂಗಳಂ (ಬೇರೆ ಮನೆಗಳನ್ನು) ಬೀಡುವೇೞ್ದು ( ಹೇಳ್ದು- ಹೇಳಿ ಬಿಡಾರವನ್ನು ನಿಯಮಿಸಿ), ಗುಣಾರ್ಣವನಂ (ಅರ್ಜುನನ್ನು) ಸೆಜ್ಜೆಗೆ ಬಿಜಯಂಗೆಯ್ಯಿಂ ಎನೆ (ಶಯ್ಯಾಸ್ಥಳಕ್ಕೆ ದಯಮಾಡಿಸಿ ಎನ್ನಲು- ಎಂದನು.) ಕಾಮಂ (ಮನ್ಮಥನು) ಕಳನ ಏಱುವಂತೆ (ಕಳನಂ/ ಯುದ್ಧರಂಗವನ್ನು ಏರು-ಪ್ರವೇಶ ಮಾಡುವ ಹಾಗೆ ) ಸೆಜ್ಜೆಯನೇಱಿ (ಹಾಸಿಗೆಯ ಮೇಲೆ ಕುಳಿತು) ಸೆಡೆದಿರ್ದ ನಲ್ಲಳಂ(ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು) ನೋಡಿ -
ವಚನ:ಅರ್ಥ:ಆಗ ದ್ರುಪದನು ತನ್ನ ಅಂತಪುರದ ಪರಿವಾರನ್ನು ಒಡಗೂಡಿಕೊಂಡು ಉದಾರಮಹೇಶ್ವರನಾದ(ಅರಿಕೇಸರಿಯ ಬಿರುದು) ಅರ್ಜುನನ ಸಭಾಗೃಹಕ್ಕೆ ಬಂದು ನೃತ್ಯ, ವಾದ್ಯ, ಗೀತ, ಮಂಗಳವಾದ್ಯಗಳಲ್ಲಿ ಭಾಗಿಯಾಗಿ ಸಭೆಯನ್ನು ವಿಸರ್ಜಿಸುವಂತೆ ಹೇಳಿ ಧರ್ಮರಾಜನೇ ಮೊದಲಾದ ಉಳಿದ ನಾಲ್ಕು ಜನಗಳಿಗೂ ಕುಂತೀದೇವಿಗೂ ಬೇರೆಬೇರೆ ಮನೆಗಳನ್ನು ಬಿಡಾರವನ್ನಾಗಿ ಮಾಡಿಸಿ ಗುಣಾರ್ಣವನನ್ನು ಶಯ್ಯಾಸ್ಥಳಕ್ಕೆ ದಯಮಾಡಿಸಿ ಎಂದನು. ಅರ್ಜುನನು ಮನ್ಮಥನು ಯುದ್ಧರಂಗವನ್ನು ಪ್ರವೇಶ ಮಾಡುವ ಹಾಗೆ ಹಾಸಿಗೆಯ ಮೇಲೆ ಕುಳಿತು ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು ನೋಡಿ-
ಉ|| ನೋಟದೊಳೞ್ಕಜಂಬಡೆದು ಮೆಲ್ನುಡಿಯೊಳ್ ಬಗೆವೊಕ್ಕು ಜಾಣೊಳ
ಳ್ಳಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ವೊಣರ್ಚಿ ಬಾ|
ಯ್ಗೂಟದೊಳೞ್ಕಱಂ ಪಡೆದು ಕೂಟದೊಳುಣ್ಮಿದ ಬೆಚ್ಚ ತೞ್ಕೆಯೊಳ್
ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ|| ೮೨||
ಪದ್ಯ-೮೨:ಪದವಿಭಾಗ-ಅರ್ಥ:ನೋಟದೊಳ್ ಅೞ್ಕಜಂಬಡೆದು (ನೋಟದಿಂದ ಪ್ರೀತಿಯನ್ನು ಗಳಿಸಿ) ಮೆಲ್ನುಡಿಯೊಳ್ ಬಗೆವೊಕ್ಕು (ಮೃದುವಾದ ಮಾತಿನಿಂದ ಅವಳ, ಬಗೆ ಹೊಕ್ಕು-ಮನಸ್ಸನ್ನು ಹೊಕ್ಕು- ಗೆದ್ದು) ಜಾಣೊಳ್ ಅಳ್ಳಾಟಮನೆಲ್ಲಮಂ (ಅಲುಗಾಟ-ನಡುಕವೆಲ್ಲವನ್ನೂ) ಕಿಡಿಸಿ (ಹೋಗಲಾಡಿಸಿ), ಸೋಂಕಿನೊಳು ಒಯ್ಯನೆ ಮೆಯ್ವೊಣರ್ಚಿ(ಮೆಲ್ಲನೆ ಹತ್ತಿರ ಸಾರಿ ಮೈಗೆ ಮೈ ತಾಗಿಸಿ) ಬಾಯ್ಗೂಟದೊಳ್ ಅೞ್ಕಱಂ ಪಡೆದು (ಮತ್ತುಕೊಟ್ಟು -ಪಡೆದು) ಕೂಟದೊಳ್ ಉಣ್ಮಿದ (ಕೂಡುವಿಕೆಯಲ್ಲಿ ಹುಟ್ಟಿದ) ಬೆಚ್ಚ ತೞ್ಕೆಯೊಳ್ ಕೂಟ ಸುಖಂಗಳಂ ಪಡೆದನು. ಏಂ ಚದುರಂಗಳ (ಏನು ಚದುರನೋ) ಬದ್ದೆದಲ್ಲೞಂ(ಬದ್ದೆದಲ್ಲಳ-ಅರಿಕೇಸರಿಯ ಹೆಸರು/ ಅರ್ಜುನನು)
ಪದ್ಯ-೮೨:ಅರ್ಥ: . ನೋಟದಿಂದ ಪ್ರೀತಿಯನ್ನು ಗಳಿಸಿ, ಮೃದುವಾದ ಮಾತಿನಿಂದ ಅವಳ ಮನಸ್ಸನ್ನು ಗೆದ್ದು, ಜಾಣತನದಿಂದ ಅವಳ ನಡುಕವನ್ನು/ ಭಯವನ್ನು ಹೋಗಲಾಡಿಸಿ, ಮೆಲ್ಲನೆ ಸೋಂಕುವುದರಿಂದ ಅವಳ ಮೈಯಲ್ಲಿ ತನ್ನ ಮೈಯ್ಯನ್ನು ಸೇರಿಸಿ ತುಟಿಗಳೆರಡನ್ನೂ ಸೇರಿಸಿ ಮುತ್ತಿಟ್ಟು ಬಿಗಿಯಾಗಿ ಆಲಿಂಗನಮಾಡಿಕೊಂಡು ರತಿಸುಖವನ್ನೂ ಪಡೆದನು. ಅರ್ಜುನನು ಏನು ಚದುರನೋ?
ಉ||ಬೇಡಿಸುವಪ್ಪುಗಳ್ಗೊರೆವ ಲಲ್ಲೆಯ ಮೆಲ್ನುಡಿಗಳ್ಗೆ ಕೂಡೆ ನಾ
ಣೂಡಿದ ಕೆಂದುಗಳ್ಗೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್|
ನಾಡೆ ಪೊದಳ್ದು ನೀಳ್ದವರ ಸುಯ್ಗಳ ಗಾಳಿಯೊಳೊಯ್ಯನೊಯ್ಯನ
ಳ್ಳಾಡುವುದಾಯ್ತು ತತ್ಸುರತಮಂದಿರದುಜ್ಜ ಳದೀಪಿಕಾಂಕುರಂ|| ೮೩||
ಪದ್ಯ-೮೩:ಪದವಿಭಾಗ-ಅರ್ಥ:ಬೇಡಿಸುವ ಅಪ್ಪುಗಳ್ಗೆ ಒರೆವ ಲಲ್ಲೆಯ ಮೆಲ್ನುಡಿಗಳ್ಗೆ ಕೂಡೆ (ಬಯಸುವ ಆಲಿಂಗನಗಳಿಗೂ ಆಡುತ್ತಿರುವ ಪ್ರೀತಿಯ ಮೃದುನುಡಿಗೂ ಕೂಡಲೆ) ನಾಣೂಡಿದ ಕೆಂದುಗಳ್ಗೆ (ನಾಣ್ ಊಡಿದ- ನಾಚಿಕೆ ತುಂಬಿದ ಮಲಗಾಟಕ್ಕೆ) ಬಗೆಗೊಂಡ ಇನಿಸಂ ತಲೆದೂಗುವಂತೆವೋಲ್ (ದೀಪಗಳು- ಮನಸ್ಸು ಒಪ್ಪಿ ತಲೆಯನ್ನು ತೂಗುವಹಾಗೆ) ನಾಡೆ (ನೋಡಲು) ಪೊದಳ್ದು (ವ್ಯಾಪಿಸಿ) ನೀಳ್ದ ಅವರ ಸುಯ್ಗಳ (ಉದ್ದವಾದ ಅವರ-ದ್ರೌಪದಿ ಅರ್ಜುನರ ಉಸಿರಾಟದ), ಗಾಳಿಯೊಳು ಒಯ್ಯನೊಯ್ಯನೆ ಅಳ್ಳಾಡುವುದಾಯ್ತು (ಅಲುಗಾಡುವುದಾಯಿತು) ತತ್ ಸುರತಮಂದಿರದ ಉಜ್ಜಳದೀಪಿಕ ಅಂಕುರಂ (ಆ ಶಯ್ಯಾಗೃಹದ ಪ್ರಕಾಶನಮಾನವಾದ ದೀಪದ ಕುಡಿಗಳು)
ಪದ್ಯ-೮೩:ಅರ್ಥ: ಬಯಸುವ ನಾಚಿಕೆ ತುಂಬಿದ ಮಲಗಾಟಕ್ಕೆ /ಆಲಿಂಗನಗಳಿಗೂ, ಆಡುತ್ತಿರುವ ಪ್ರೀತಿಯ ಮೃದುನುಡಿಗೂ ಕೂಡಲೆ, ನಾಚಿಕೆ ತುಂಬಿದ ಮಲಗಾಟಕ್ಕೆ ಕೂಡಿದ ಸುರತಕ್ರೀಡೆಗೂ ಮೆಚ್ಚಿ ದೀಪಗಳು ಮನಸ್ಸು ಒಪ್ಪಿ ತಲೆಯನ್ನು ತೂಗುವಹಾಗೆ ವಿಶೇಷವಾಗಿ ವ್ಯಾಪಿಸಿ ಉದ್ದವಾದ ಅವರ-ದ್ರೌಪದಿ ಅರ್ಜುನರ ಉಸಿರಾಟದಿಂದ ರತಿಕ್ರೀಡಾಮಂದಿರದ ಪ್ರಕಾಶಮಾನವಾದ ದೀಪದ ಕುಡಿಯು ಅವರ ಉಸಿರಿನ ಗಾಳಿಯಿಂದ ನಿಧಾನವಾಗಿ ಅಳ್ಳಾಡುತ್ತಿದ್ದವು.
ವ|| ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ-
ವಚನ:ಪದವಿಭಾಗ-ಅರ್ಥ:ಅಂತು ಆ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತೆ ಅವರ್ಗೆ ಕೆಂದಿನೊಳೆ (ಸುರತಕ್ರೀಡೆಯಲ್ಲಿಯೇ ) ಬೆಳಗಾಗೆ-
ವಚನ:ಅರ್ಥ:ಹಾಗೆ ಆ ರಾತ್ರಿಯ ನಾಲ್ಕು ಜಾವಗಳೂ ಕಾಮನ ಜಾಗರಣೆಯಂತೆ ಸುರತಕ್ರೀಡೆಯಲ್ಲಿಯೇ ಕಳೆದು ಬೆಳಗಾಯಿತು.
ಚಂ|| ನಿನಗಿನಿಸಪ್ಪೊಡಂ ಮನದೊಳೋವದ ಕೞ್ತಲೆಯೆಂಬ ಪಾಪ ಕ
ರ್ಮನ ಮಱಿಗಳ್ ಕರಂ ಪಲವುಮಂ ಸೆರೆಗೆಯ್ದೆವಿವೆಂದು ತಮ್ಮನ|
ಣ್ಪಿನೊಳವನೊಪ್ಪಿಪಂತೆ ಮುಗುಳೊಳ್ ಮಱಸುಂದಿದ ತುಂಬಿ ಪಾರಿ ಕೋ
ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗೆದಂ ದಿವಾಕರಂ|| ೮೪||
ಪದ್ಯ-೮೪:ಪದವಿಭಾಗ-ಅರ್ಥ:ನಿನಗೆ ಇನಿಸು ಅಪ್ಪೊಡಂ (ಸೂರ್ಯನೇ, ನಿನಗೆ ಸ್ವಲ್ಪವಾದರೂ) ಮನದೊಳು ಓವದ ಕೞ್ತಲೆಯೆಂಬ (ಪ್ರಿಯವಲ್ಲದ ಕತ್ತಲೆಯೆಂಬ ) ಪಾಪ ಕರ್ಮನ (ಪಾಪಿಷ್ಠನ) ಮಱಿಗಳ್ (ಮರಿಗಳನ್ನು) ಕರಂ ಪಲವುಮಂ (ವಿಶೇಷವಾಗಿ ಹಲವು) ಸೆರೆಗೆಯ್ದೆವ್ ಇವು ಎಂದು (ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ ಎಂದು) ತಮ್ಮನಣ್ಪಿನೊಳವನೊಪ್ಪಿಪಂತೆ (ತಮ್ಮ ನಣ್ಪಿನೊಳ್-ಪ್ರೇಮದಿಂದ ಅವನು ಒಪ್ಪಿಪಂತೆ/ ಮರಿದುಂಬಿಗಳನ್ನು ಒಪ್ಪಿಸುವಂತೆ) ಮುಗುಳೊಳ್ ಮಱಸುಂದಿದ (ತಾವರೆ ಮೊಗ್ಗಿನಲ್ಲಿ ಮೈಮರೆತು ನಿದ್ರಿಸಿದ) ತುಂಬಿ ಪಾರಿ (ತುಂಬಿ ಹಾರಿಹೋಗಲು) ಕೋಕನದ ಕುಲಂಗಳು (ತಾವರೆಯ ಸಮೂಹಗಳು) ಉಳ್ಳ ಅಲರ್ದುವು (ಚೆನ್ನಾಗಿ ಅರಳಿದವು,) ಎಂಬಿನಂ (ಎನ್ನುವಹಾಗೆ) ಅಂದು ಒಗೆದಂ ದಿವಾಕರಂ(ಸೂರ್ಯನು ಒಗೆದಂ-ಹುಟ್ಟಿದನು)
ಪದ್ಯ-೮೪:ಅರ್ಥ:ಸೂರ್ಯನೇ ನಿನಗೆ ಸ್ವಲ್ಪವಾದರೂ ಪ್ರಿಯವಲ್ಲದ ಕತ್ತಲೆಯೆಂಬ ಪಾಪಿಷ್ಠನ ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ. ಇದೋ ಇಲ್ಲಿ ಇದೆ, ಒಪ್ಪಿಸಿಕೋ ಎಂದು ತಮ್ಮ ಸ್ನೇಹದಿಂದ ಒಪ್ಪಿಸುವ ಹಾಗೆ ಮೊಗ್ಗುಗಳಲ್ಲಿ ಮಲಗಿದ್ದ ತುಂಬಿಗಳು ಹಾರಿಹೋಗಲು ಕಮಲಸಮೂಹಗಳು ಚೆನ್ನಾಗಿ ಅರಳಿದುವು, ಅಂದು ಸೂರ್ಯನು ಹುಟ್ಟಿದನು.
ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗೆ-
ವಚನ:ಪದವಿಭಾಗ-ಅರ್ಥ:ಅಂತು ಮಾರ್ತಾಂಡನುಂ (ಸೂರ್ಯನೂ) ಪ್ರಚಂಡ ಮಾರ್ತಾಂಡನುಂ ಉದಿತ ಉದಿತರಾಗೆ-
ವಚನ:ಅರ್ಥ:ಹೀಗೆ ಸೂರ್ಯನು ಉದಯವಾಗುತ್ತಿರಲು, ಮತ್ತು ಪ್ರಚಂಡ ಮಾರ್ತಾಂಡನಾದ ಅರ್ಜುನನು ಏಳಿಗೆ ಹೊಇಂದುತ್ತಿರಲು-
ಮ|| ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ
ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಕಣಂ ದ್ರೌಪದೀ|
ಕುಚಕುಂಭಾರ್ಪಿತ ಕುಂಕುಮದ್ರವ ವಿಲಿಪ್ತೋರಸ್ಥಳಂ ದಾಂಟೆ ಕೀ
ರ್ತಿ ಚತುರ್ವಾಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ|| ೮೫
ಪದ್ಯ-೮೫:ಪದವಿಭಾಗ-ಅರ್ಥ:ಕಚಭಾರ ಆಳಸಗಾಮಿನೀ ಪರಿವೃತಂ (ಕಚ-ಕೂದಲು;ಕೂದಲಿನ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ) ಗಂಗಾತರಂಗ (ಗಂಗೆಯ ಅಲೆಗಳನ್ನು) ಉಪಮಾನ (ಹೋಲುವ) ಚಳತ್ ಚಾಮರ ವಾತ (ಅಲುಗುವ ಚಾಮರಗಳ ಗಾಳಿಯಿಂದ) ಪೀತ (ಕುಡಿಯಲ್ಪಟ್ಟ) ನಿಜ ಘರ್ಮಾಂಭಕಣಂ (ತನ್ನ ಬೆವರಿನ ಹನಿಯನ್ನುಳ್ಳವನೂ) ದ್ರೌಪದೀಕುಚ ಕುಂಭಾರ್ಪಿತ ಕುಂಕುಮದ್ರವ (ದ್ರೌಪದಿಯ ಕುಂಭದಂತಿರುವ ಕುಚಗಳಿಗೆ ಅರ್ಪಿತವಾದ/ಹಚ್ಚಿದ ಕುಂಕುಮದ ನೀರಿನಿಂದ) ವಿಲಿಪ್ತ ಓರಸ್ಥಳಂ (ಪೂಸಿರುವ ಎದೆಯು ಪ್ರದೇಶವುಳ್ಳವನೂ) ದಾಂಟೆ ಕೀರ್ತಿ ಚತುರ್ವಾಧಿಯನು (ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು )ಇರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ(ಅರ್ಜುನನು ಆ ದಿನ ಅಲ್ಲಿ ಸುಖದಿಂದಿದ್ದನು.)
ಪದ್ಯ-೮೫:ಅರ್ಥ:ಕೂದಲಿನ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ, ಗಂಗೆಯ ಅಲೆಗಳ ಹಾಗೆ ಅಲುಗಾಡುತ್ತಿರುವ ಚಾಮರದ ಗಾಳಿಯಿಂದ ಕುಡಿಯಲ್ಪಟ್ಟ ತನ್ನ ಬೆವರಿನ ಹನಿಯನ್ನುಳ್ಳವನೂ, ದ್ರೌಪದಿಯ ಕುಂಭದಂತಿರುವ ಕುಚಗಳಿಗೆ ಲೇಪನ ಮಾಡಿದ್ದ ಕುಂಕುಮಕೇಸರಿಯ ದ್ರವದಿಂದ ಪೂಸಿರುವ ಎದೆಯುಳ್ಳವನೂ ಆದ ಅರ್ಜುನನು ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು ಆ ದಿನ ಅಲ್ಲಿ ಸುಖದಿಂದಿದ್ದನು.
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ರೌಪದೀಕಲ್ಯಾಣವರ್ಣನಂ ತೃತೀಯಾಶ್ವಾಸಂ
ವ|| ಇದು ವಿವಿಧ ವಿದ್ವಾಂಸರಿಂದ ಸ್ತುತಿಸಲ್ಪಟ್ಟ ಜಿನನ ಪಾದಕಮಲದ ವರಪ್ರಸಾದದಿಂದ ಹುಟ್ಟಿದುದೂ ಪ್ರಸನ್ನವೂ ಗಂಭೀರವೂ ಆದ ಮಾತುಗಳನ್ನು ರಚಿಸುವುದರಲ್ಲಿ ಜಾಣನಾದ ಕವಿತಾಗುಣಾರ್ಣವನಿಂದ ವಿರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ದ್ರೌಪದೀಕಲ್ಯಾಣ ವರ್ಣನಾತ್ಮಕವಾದ ಮೂರನೆಯ ಆಶ್ವಾಸ.
♦♣♣♣♣♣♣♣♣♣♣♣♣♣♣♣♣♣♣♣♦

[೧] [೨]

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಪಂಪ ಭಾರತ - ಗದ್ಯಾನುವಾದ (ಲೇಖಕರು- ಎನ್ .ಅನಂತರಂಗಾಚಾರ್) ಕೃಪೆ:- ಕಣಜ
  2. ಪಂಪ ಭಾರತ ಡಿ.ಎಲ್.ನರಸಿಂಹಾಚಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರ