ಪಂಪಭಾರತ ಪ್ರಥಮಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪ್ರಥಮಾಶ್ವಾಸಂ[ಸಂಪಾದಿಸಿ]

(ಮೂಲ = ೧೯೩೧ ರಮುದ್ರಣ- ಪಂಪ ಬಾರತ - ವಿಕ್ರಾಮಾರ್ಜುನ ವಿಜಯ)
(IIX-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
  • ಪೀಠಿಕೆ ಸ್ತುತಿಗಳು:

ನಾರಾಯಣ ಸ್ತುತಿ:

ಉ|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ
ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ|
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ ||೧||
ಪದವಿಭಾಗ:ಶ್ರೀಯಂ ಆರಾತಿ(ಶತ್ರು) ಸಾಧನ (ಸಾಧನವೆಂಬ) ಪಯೋನಿಧಿಯೊಳ್(ಪಯೋನಿಧಿಯಿಂದ - ಸಮುದ್ರದಿಂದ) ಪಡೆದುಂ ಧರಿತ್ರಿಯಂ ಜೀಯೆನೆ(ಜೀಯ ಎಂದು) ಬೇಡಿಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿಕೊಂಡುಂ ಆತ್ಮೀಯ ಸುಪುಷ್ಪಪಟ್ಟಮನು (ಕಿರೀಟ) ಒಡಂಬಡೆ ತಾಳ್ದಿಯುಂ (ಧರಿಸು) ಇಂತು ಉದಾತ್ತ ನಾರಾಯಣನಾದ ದೇವನು ಎಮಗೆ ಈಗೆ (ಈಗೆ=ಕೊಡಲಿ) ಅರಿಕೇಸರಿ ಸೌಖ್ಯಕೋಟಿಯಂ.
೧.ಅರ್ಥ:ಅಮೃತಮಥನ ಕಾಲದಲ್ಲಿ ಹುಟ್ಟಿದ ಲಕ್ಷ್ಮಿಯನ್ನು ಶ್ರಮವಿಲ್ಲದೆ ಪಡೆದ, ಬಲಿಚಕ್ರವರ್ತಿಯಿಂದ ಬೇಡಿ ಭೂಮಿಯನ್ನು ಪಡೆದ, ಪುಷ್ಪಪಟ್ಟವೆಂಬ ಸಾಮಾನ್ಯ ತಲೆಯಲ್ಲಿ ಧರಿಸಿದ ಕಿರೀಟವನ್ನು ಪಡೆದ ನಾರಾಯಣನಂತಲ್ಲದೆ ಶತ್ರುಸೈನ್ಯವೆಂಬ ಸಮುದ್ರದ ಮಂಥನದಿಂದ ಜಯಲಕ್ಷ್ಮಿಯನ್ನು ಬೇಡದೆ ಶತ್ರುರಾಜರುಗಳನ್ನು ಸೋಲಿಸಿ, ಭೂಮಿಯನ್ನೂ ತನ್ನ ಯೋಗ್ಯತೆಗೆ ಅನುಗುಣವಾದ ಸುಪುಷ್ಪಪಟ್ಟವೆಂಬ ಶಿರೋಭೂಷಣವನ್ನು ಪಡೆದು ಉದಾತ್ತ ನಾರಾಯಣನು ಎನಿಸಿಕೊಂಡಿರುವ ದೇವನಾದ ಅರಿಕೇಸರಿಯು ನಮಗೆ ಸೌಖ್ಯರಾಶಿಯನ್ನು ಕೊಡಲಿ.
  • ಟಿಪ್ಪಣಿ:ಇಲ್ಲಿ ಕವಿ ತನ್ನ ಪೋಷಕನಾದ ಅರಿಕೇಸರಿ ದೊರೆಯನ್ನು ನಾರಾಯಣನಿಗೆ ಹೋಲಿಸಿ, ಸ್ತುತಿ ಮಾಡಿದ್ದಾನೆ.

---@@@---

ಶಿವಸ್ತುತಿ:
ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಮು
ಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ|
ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ || ೨ ||
ಪದವಿಭಾಗ:ಮುಳಿಸು ಲಲಾಟನೇತ್ರಶಿಖಿ (ಶಿವ) ಮೆಚ್ಚೆ ವಿನೂತ ರಸಪ್ರಸಾದಂ (ಮೆಚ್ಚಿಕೆಯ ಆನಂದದ ಕೊಡಿಗೆ) ಉಜ್ಜಳ ಜಸಮ್ (ಉಜ್ವಲ ಕೀರ್ತಿ/ ಯಶಸ್ಸು), ಅಂಗಸಂಗತ (ಮೈಗೆ ಬಳಿದ) ಲಸತ್ ಭಸಿತಂ (ಶೋಭೆಯ ಭಸ್ಮ) ಪ್ರಭುಶಕ್ತಿ ಶಕ್ತಿ (ರಾಜನ ಆಳ್ವಿಕೆ ಶಕ್ತಿ, ಪಾರ್ವತಿ ಶಕ್ತಿದೇವಿಗೆ ಸಮ)ನಿರ್ಮಳ ಮಣಿಭೂಷಣಂ ಫಣಿವಿಭೂಷಣಂ (ಮಣಿಕಂಠಹಾರ ರಾಜನ ಶಿವನಂತೆ ಸರ್ಪ ಹಾರವುಳ್ಳವನು) ಆಗೆ (ಆಗಿರಲು) ನೆಗೞ್ತೆಯಂ (ಕೀರ್ತಿಯನ್ನು) ಪುದುಂಗೊಳಿಸಿದಂ (ತನ್ನಲ್ಲಿ ಸೇರಿಸಿಕೊಂಡನು)ಈಶ್ವರಂ ನೆಗೞ್ದ (ಪ್ರಸಿದ್ಧ) ಉದಾರ ಮಹೇಶ್ವರನು ಈಗೆ (ಕೊಡಲಿ)ಭೋಗಮಂ(ಸುಖವನ್ನು).
೨.ಅರ್ಥ: ಅರಿಕೇಸರಿಯ ಕೋಪವೇ ಈಶ್ವರನ ಹಣೆಗಣ್ಣಿನ ಬೆಂಕಿಯಾಗಿರಲು ಅವನ ಮೆಚ್ಚಿಗೆಯೇ ಶ್ಲಾಘ್ಯವೂ ರಸಯುಕ್ತವೂ ಆದ ಅವನ ಪ್ರಸಾದ. ಅರಿಕೇಸರಿಯ ಯಶಸ್ಸೇ ಈಶ್ವರನು ಶರೀರಕ್ಕೆ ಲೇಪಿಸಿಕೊಂಡಿರುವ ಕಾಂತಿಯುಕ್ತವಾದ ವಿಭೂತಿಯಾಗಿರಲು ಅರಿಕೇಸರಿಯ ಶಕ್ತಿತ್ರಯಗಳಲ್ಲಿ ಒಂದಾದ ಪ್ರಭುಶಕ್ತಿ ಈಶ್ವರನ ಶಕ್ತಿದೇವತೆಯಾಗಿರಲು ಇವನ ನಿರ್ಮಲವಾದ ರತ್ನಭೂಷಣಗಳೇ ಅವನ ನಾಗಭೂಷಣವಾಗಿರಲು ವಿಶೇಷ ಪ್ರಸಿದ್ಧಿಯನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ಈಶ್ವರನೂ ಉದಾರಮಹೇಶ್ವರನೆಂದು ಪ್ರಸಿದ್ದಿಯನ್ನು ಪಡೆದಿರುವ ಅರಿಕೇಸರಿಯೂ ಸೌಖ್ಯರಾಶಿಯನ್ನು ಕೊಡಲಿ.
  • ಟಿಪ್ಪಣಿ:ಇಲ್ಲಿ ಕವಿ ತನ್ನ ಪೋಷಕನಾದ ಅರಿಕೇಸರಿ ದೊರೆಯನ್ನು ಶಿವನಿಗೆ ಹೋಲಿಸಿ, ಸ್ತುತಿ ಮಾಡಿದ್ದಾನೆ.

---@@@---

ಸೂರ್ಯ ಸ್ತುತಿ:
ಉ|| ಚಂಡ ವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ|
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ|| ೩ ||
ಪದವಿಭಾಗ:3.ಚಂಡ - ಕ್ರೂರ, ವಿರೋಧಿ - ಶತ್ರು, ಸಾಧನ- ಸೈನ್ಯವಾದ,, ತಮಸ್ತಮಂ ಕತ್ತಲೆಯನ್ನು, ಓಡೆ – ಓಡಿಸಲು, ವಿಶಿಷ್ಟ ಪದ್ಮಿನೀ ಷಂಡಂ (ಸಮೂಹ) ಅರಲ್ದು - ಕಮಲಗಳ ಸಮೂಹ / ಪದ್ಮಿನೀ ಜಾತಿಯ ಸ್ತ್ರೀ ಸಮೂಹ ಅರಳಿ, ರಾಗದಿಂ ಒರ/ಱಲ್ದಿರೆ - ಪ್ರೀತಿಯಿಂದ ಒಲಿದಿರಲು, ಹಾಡುತ್ತಿರಲು, ಯಾಚಕ ಭೃಂಗಕೋಟಿ - ಬೇಡುವವರು ಎಂಬ ದುಂಬಿಗಳ ಸಮೂಹ, ಕೈ ಕೊಂಡು – ಒಪ್ಪಿ ನಿರಂತರಂ ತಗುಳ್ದು – ಎಡಬಿಡದೆ ಹಿಂಬಾಲಿಸಿ, ಕೀರ್ತಿಸೆ- ಹೊಗಳುತ್ತಿರಲು, ಮಿಕ್ಕು ಎಸೆವ - ಬಹಳ ಪ್ರಕಾಶಿಸುವ, ಪ್ರಚಂಡ ಮಾರ್ತಾಂಡನು – ತೀಕ್ಷ್ಣವಾದ ಸೂರ್ಯನು ಅಥವಾ ಚಂಡಮಾರ್ತಾಂಡನೆಂಬ ಬಿರುದುಳ್ಳ ಅರಿಕೇಸರಿಯು, ಅಲರ್ಚುಗೆ – ಅರಳಿಸಲಿ-> ಎನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ - ನನ್ನ ಹೃದಯಕಮಲವನ್ನು ತನ್ನ ಮಾತಿನ ಕಿರಣದಿಂದ.
೩.ಅರ್ಥ: ಕ್ರೂರಿಗಳಾದ ಶತ್ರುಸೈನ್ಯವೆಂಬ ಕತ್ತಲೆಯ ಮೊತ್ತವು ಓಡಿಹೋಗುತ್ತಿರುವ ವಿಶೇಷ ಗುಣಗಳಿಂದ ಕೂಡಿದ ತಾವರೆಯ ಸಮೂಹವು (ಅರಿಕೇಸರಿಯ ಪರವಾಗಿ ಪದ್ಮಿನಿ ಜಾತಿಯ ಸ್ತ್ರೀಯರ ಸಮೂಹವು) ಅರಳಿ ಪ್ರೀತಿಸಿ ಸಂತೋಷದಿಂದಿರಲು, ತಿರುಕನೆಂಬ ದುಂಬಿಗಳ ಸಮೂಹವು ತೃಪ್ತಿಯಿಂದ ಎಡಬಿಡದೆ ಹಿಂಬಾಲಿಸಿ ಹೊಗಳುತ್ತಿರಲು ಅತ್ಯಧಿಕವಾಗಿ ಪ್ರಕಾಶಿಸುತ್ತಿರುವ ಸೂರ್ಯನೂ ಪ್ರಚಂಡ ಮಾರ್ತಂಡನೆಂಬ ಬಿರುದಿನಿಂದ ಕೂಡಿದ ಅರಿಕೇಸರಿಯೂ ತಮ್ಮ ಮಾತೆಂಬ ಕಿರಣದಿಂದ ನನ್ನ ಹೃದಯಕಮಲವನ್ನು ಅರಳಿಸಲಿ.

---@@@---

ಅರಿಕೇಸರಿಗೂ ಮನ್ಮಥನಿಗೂ ಹೋಲಿಕೆ:
ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು ಸ
ನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು ಸಂ|
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳು ||೪||
ಪದವಿಭಾಗ: ಸಹಜದ ಚೆಲ್ವಿನೊಳ್, ಹುಟ್ಟಿನಿಂದಲೇ ಬಂದ ಸೌದರ್ಯದಲ್ಲಿ, ರತಿಯ ಸೋಲದ ಕೇಳಿಕೆಯೊಳ್ – ರತಿದೇವಿಯ ಸೋಲದ ರತಿ ಕ್ರೀಡೆಯಲ್ಲಿ, ಪೊದೞ್ದು ಸನ್ನಿಹಿತವೆನಿಪ್ಪ – ವ್ಯಾಪಿಸಿರುವ ಚೆನ್ನಾಗಿ ಅಲಂಕಾರಗೊಂಡಿರುವ, ಅಪೂರ್ವ ಶುಭಲಕ್ಷಣ ದೇಹದೊಳ್ ಒಳ್ಪನು ಆಳ್ದು- ಒಳ್ಳೆಯತನವನ್ನು ಹೊಂದಿರುವ, ಸಂದಹಿಕಟಕ ಪ್ರಸಾದದೆ - ಸರ್ಪಭೂಷಣನಾದ ಶಿವನ ಆಶೀರ್ವಾದದಿಂದ ಮನೋಜನುಮಂ – ಮನ್ಮಥನನ್ನು ಕೂಡ, ಗೆಲೆವಂದನು ಆಗಳುಂ – ಗೆಲ್ಲಲು ಬಂದವನಾದ ಸಹಜ ಮನೋಜನ ಓಜಂ - ಸಹಜ ಮನ್ಮಥನಿಗೆ ಗುರುವಾದ ಅರಿಕೇಸರಿಯು , ಎಮಗೆ ಈಗೆ ವಿಚಿತ್ರ ರತೋತ್ಸವಂಗಳು- ನಮಗೆ ನಾನಾ ಬಗೆಯ ಆನಂದಗಳನ್ನು ಈಗೆ- ಕೊಡಲಿ (ಮನೋಜ= ಮನಸ್ಸಿನಲ್ಲಿ ಜನಿಸಿದವ,ಮನ್ಮಥ)
೪.ಅರ್ಥ : ತನ್ನ ಹುಟ್ಟಿನಿಂದಲೇ ಸಹಜವಾಗಿ ಬಂದ ಸೌಂದರ್ಯದಿಂದಲೂ ಎಂದೂ ಸೋಲದ ರತಿಕ್ರೀಡೆಯಿಂದಲೂ ಅಪೂರ್ವವಾದ ಶುಭಲಕ್ಷಣಗಳಿಂದ ಕೂಡಿದ ಶರೀರದ ವೈಭವದಿಂದಲೂ ಸರ್ಪಭೂಷಣನಾದ ಈಶ್ವರನ ಪ್ರಸಾದದಿಂದಲೂ ಕೂಡಿ ಸಹಜ ಮನ್ಮಥನಿಗೂ ಆಚಾರ್ಯನಾಗಿರುವ ಅರಿಕೇಸರಿಯು ಯಾವಾಗಲೂ ರಮಣೀಯವೂ ವೈವಿಧ್ಯಮಯವೂ ಆದ ಸುಖ ಸಂತೋಷಗಳನ್ನು ದಯಪಾಲಿಸಲಿ. (ಮನ್ಮಥನು ಶರೀರವಿಲ್ಲದವನು; ಈಶ್ವರನ ಕೋಪಕ್ಕೆ ಪಾತ್ರನಾದವನು; ಆರಿಕೇಸರಿ ಶಿವನ ಪ್ರಸಾದ/ಆಶೀರ್ವಾದ ಉಳ್ಳವನು. ದೇಹ ಉಳ್ಳವನು ; ಹಾಗಾಗಿ ಅವನೇ ಮನ್ಮಥನಿಗಿಂತ ಹೆಚ್ಚಿನವ)

---@@@---

ಸರಸ್ವತಿಯ ಸ್ತೋತ್ರ:
ಚಂ|| ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾವನುಮಿಲ್ಲೆನಲ್ ತದ
ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ|
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ|| ೫ ||
ಪದವಿಭಾಗ:ಕ್ಷಯಮಣಮಿಲ್ಲ :ಕ್ಷಯಂ ಅಣಂ ಇಲ್ಲ = ವಿದ್ಯೆಗೆ/ಭಾಷೆ; ಸಾಹಿತ್ಯಕ್ಕೆ ಸ್ವಲ್ಪಯೂ ವಿನಾಶವಿಲ್ಲ; ಕೇೞ್ದು ಕಡೆಗಂಡವನು ಆವನುಂ ಇಲ್ಲೆನಲ್:=ಕೇಳಿ ಅದರ ಅದರ ಕೊನೆಯನ್ನು/ ಪಾರವನ್ನು ಕಂಡವನು ಯಾರೂ ಇಲ್ಲ;ತದಕ್ಷಯನಿದಿ ತಾನೆü= ಅದು ತನಗೆ ತಾನೇ ಅಕ್ಷಯ ನಿಧಿಯಾಗಿದೆ.; ತನ್ನನು ಒಸೆದು ಓಲಗಿಪಂಗೆ = ತನ್ನನ್ನು ಒಲಿದು ಸೇವಿಸುವವನಿಗೆ. ಅರಿದಿಲ್ಲ ಎನಿಪ್ಪ ಅಸಾಧ್ಯವಾದುದು ಇಲ್ಲ ಎನ್ನಿಸುವ; ವಾಙ್ಮಯಂ ಅನಿತರ್ಕಂ (ಅನಿತು: ಎಲ್ಲಾ) = ಎಲ್ಲಾ ಸಾಹಿತ್ಯಕ್ಕೂ ; ಅಂಬಿಕೆ ಸರಸ್ವತಿ = ತಾಯಿ ಸರಸ್ವತಿ ; ಮನ್ಮುಖಪದ್ಮರಂಗದೇಳ್ಗೆಯನ್ = ನನ್ನ ಮುಖವೆಂಬ ರಂಗಸ್ಥಳದ ಏಳಿಗೆಯನ್ನು; ಎಡೆಗೊಂಡು= ಒಳಗೊಂಡು; ಕೊನೆದು ಈಗೆ ಅರಿಗಂಗೆ ವಿಶುದ್ಧ ಬುದ್ಧಿಯಂ= ಅರಿಗಂಗೆ/ ಅರಿಕೇಸರಿಗೆ ನಿರ್ಮಲವಾದ ಬುದ್ಧಿಯನ್ನು, - ಕೊಂಡು ಕೊನೆದು ಈಗೆ=ಹರ್ಷಗೊಂಡು ಕೊಡಲಿ.
೫.ಅರ್ಥ: ಸ್ವಲ್ಪವೂ ನಾಶವಿಲ್ಲದ, ಯಾರಿಂದಲೂ ಅದರ ಕೊನೆಯನ್ನು ತಿಳಿಯುವುದಕ್ಕಾಗದ, ತನಗೆ ತಾನೆ ಅಕ್ಷಯ ನಿಧಿಯಾಗಿರುವ, ಅವಳನ್ನು ಸೇವಿಸಿದವರಿಗೆ ಅಸಾಧ್ಯವಾವುದೂ ಇಲ್ಲವೆನಿಸುವ, ಸಮಸ್ತ ವಾಙ್ಮಯಕ್ಕೂ ತಾಯಿಯಾದ ಸರಸ್ವತೀದೇವಿಯು ಕಮಲದಂತಿರುವ ನನ್ನ ಮುಖದ ಮುಖವೆಂಬ ರಂಗಸ್ಥಳದ ಏಳಿಗೆಯನ್ನೊಳಗೊಂಡು ಅರಿಕೇಸರಿಗೆ ಸಂತೋಷದಿಂದ ನಿಷ್ಕಲ್ಮಷವಾದ ಬುದ್ಧಿಯನ್ನು ದಯಪಾಲಿಸಲಿ.

(ಸರಸ್ವತಿಯು ತನಗೂ ಅರಿಕೇಸರಿಗೂ ಏಳಿಗೆಯನ್ನು ಕೊಡಲಿ.) ---@@@---

ದುರ್ಗಾದೇವಿಯ ಸ್ತೋತ್ರ:

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ (ಲ )ಮೃಣಾಳಮಾಗೆ ಮಿ||
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಿಸುತಿಂತೆ ತನ್ನ ಕೂ
ರಸಿಯೊಳಡುರ್ತು ಕೊಂದಸಿಯಳಿ(ರ್ಕ)ಸಿಯೊಳ್ ಪಡೆಮೆಚ್ಚೆ ಗಂಡನಾ|| ೬ ||
ಪದವಿಭಾಗ:ತಿಸುಳದೊಳು ಉಚ್ಚಳಿಪ್ಪ = ತ್ರಿಶೂಲದಲ್ಲಿ ಮೇಲಕ್ಕೆ ಚಿಮ್ಮುವ; ಪೊಸ ನೆತ್ತರೆ =ಹೊಸ ರಕ್ತವೇ ; ಕೆಂದಳಿರಾಗೆ -ಕೆಂಪು ತಳಿರು = ಕೆಂಪು ಚಿಗುರಾಗಲು; ; ಕಣ್ಗಗುರ್ವಿಸುವಿನಮೊಕ್ಕು - ಕಣ್ಗೆ ಅಗುರ್ವಿಸುವಿನಂ ಒಕ್ಕು = ಕಣ್ಣಿಗೆ ಭಯವನ್ನುಂಟುಮಾಡುತ್ತಿರಲು; ನೇಲ್ವ ಕರುಳೋಳಿಯೆ (ಕರುಳು ಓಳಿಯ) = ನೇತಾಡುವ ಕರುಳುಗಳ ಸಾಲೇ,; ಬಾಳ (ಲ)ಮೃಣಾಳಮಾಗೆ = ಎಳೆಯ ತಾವರೆ ದಂಟಾಗಲು,; ಮಿಕ್ಕ ಅಸುರರ = ಹದ್ದು ಮೀರಿದ ರಾಕ್ಷಸರ,; ಮೆಯ್ಯೊಳಾದ = ದೇಹದಲ್ಲಿ ಉಂಟಾದ,; ವಿರಹಾಗ್ನಿಯನು ಅಱಿಸುತೆ ಇಂತೆ = ವಿರಹ / ಅಗಲಿಕೆ ಎಂಬ ಗ್ನಿಯನ್ನು, ನಂದಿಸುತ್ತಾ, ಹೀಗೆಯೇ; ತನ್ನ ಕೂರಸಿಯೊಳ್ = ತನ್ನ ಹರಿತವಾದ ಕತ್ತಿಯಲ್ಲಿ (ಕತ್ತಿಯೊಡನೆ),; ಅಡುರ್ತು = ಸಮೀಪಿಸಿ ಮೇಲೆ ಬಿದ್ದು,; ಕೊಂದಸಿಯಳ್ =ಕೊಂದ ಕೃಶಾಂಗಿಯಾದ,; (ಇರ್ಕ್ವಸಿಯೊಳ್->) ಪಡೆಮೆಚ್ಚೆ ಗಂಡನಾ = ಪಡೆಮೆಚ್ಚೆ ಗಂಡ ಎಂಬ ಬಿರುದುಳ್ಳ ಅರಿಕೇಸರಿಯ ,; ಅಸಿಯೋಳ್ = ಕತ್ತಿಯಲ್ಲಿ,; ಇರ್ಕೆ= ನೆಲಸಿ ಇರಲಿ.
  • ಟಿಪ್ಪಣಿ: ಕಾಮ ಸಂತಾಪವನ್ನು ಶಮನಗಲಿಸಲು ವಿರಹಿಗಳು ಚಿಗುರನ್ನೂ, ತಾವರೆಯ ದಂಟನ್ನೂ ಉಪಯೋಗಿಸುವರು ಎಂದು ಕವಿಗಳ ನಂಬುಗೆ; ತ್ರಿಪುರ ಸುಂದರಿಯನ್ನು ಮೋಹಿಸಿ ಬಂದ ಶಂಬು ನಿಶಂಬು ರಾಕ್ಷಸರ ಕಾಮವನ್ನು ತಣಿಸಲು ಅವರ ಬಿಸಿನೆತ್ತರನ್ನೂ ಕರುಳ ಮಾಲೆಯನ್ನೂ ಧರಿಸಿದಳು,; ಕಾಳಿಯಾಗಿ ಅವರನ್ನು ಸಂಹರಿಸಿದಳು. ಆ ದೇವತೆ ಅರಿಕೇಸರಿ ರಾಜನ ಕತ್ತಿಯಲ್ಲಿ ನೆಲಸಲಿ ಎಂದು ಪ್ರಾರ್ಥನೆ! (ಪಡೆಮೆಚ್ಚೆ ಗಂಡ = ಸೈನ್ಯವು ಮೆಚ್ಚುವ ಶೂರ)
೬.ಅರ್ಥ: ತನ್ನ ತ್ರಿಶೂಲದಿಂದ ಮೇಲಕ್ಕೆ ಚಿಮ್ಮುತ್ತಿರುವ ಹೊಸರಕ್ತವೇ ಕೆಂಪಾದ ಚಿಗುರಾಗಿರಲು ಕಣ್ಣಿಗೆ ಭಯವನ್ನುಂಟುಮಾಡುತ್ತ ಹೊರಕ್ಕೆ ಸೂಸಿ ನೇತಾಡುತ್ತಿರುವ ಕರುಳುಗಳ ಸಮೂಹವೇ ಎಳೆಯ ತಾವರೆಯ ದಂಟಾಗಿರಲು ಹದ್ದುಮೀರಿದ ರಾಕ್ಷಸರ ದೇಹದಲ್ಲುಂಟಾದ ಅಗಲಿಕೆಯೆಂಬ ಬೆಂಕಿಯನ್ನು ಅವು ಆರಿಸುತ್ತ ತನ್ನ ಹರಿತವಾದ ಕತ್ತಿಯನ್ನು ಆಶ್ರಯಿಸಿಕೊಂಡಿರುವ ಕೃಶಾಂಗಿಯಾದ ದುರ್ಗಿಯು ಪಡೆಮೆಚ್ಚಗಂಡನೆಂಬ ಬಿರುದುಳ್ಳ ಅರಿಕೇಸರಿಯ ಕತ್ತಿಯಲ್ಲಿ ನೆಲೆಸಲಿ / ಸೇರಿಸಿಕೊಂಡಿರಲಿ.

---@@@---

ವಿನಾಯಕನನ್ನು ಕುರಿತು ಪ್ರಾರ್ಥನೆ:
ಮಲ್ಲಿಕಾಮಾಲೆ || ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ||
ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ|
ತಾನ್ನಿಮಿರ್ಚುದೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ|| ೭ ||
ಪದವಿಭಾಗ:ಎನ್ನ ದಾನಂ= ನನ್ನ ಮದದ ನೀರು,; ಇದು ಆಗಳುಂ = ಇದು ಯಾವಾಗಲೂ,; ಮಧುಪಾಶ್ರಯಂ/ ಮಧುಪ ಆಶ್ರಯಂ= ದುಂಬಿಗಳಿಗೆ ಆಸ್ರಯ ಕೊಡುವುದು; ; ಧರೆಗೆ = ಲೋಕಕ್ಕೆ , ಅವ್ಯವಚ್ಛಿನ್ನ = ಸದಾ ; ದಾನಂ = ರಾಜನು ಮಾಡುವ ದಾನವು, ಇದಾಗಳುಂ = ಇದು ಯಾವಾಗಲೂ,; ವಿಬುಧಾಶ್ರಯಂ = ಪಂಡಿತರಿಗೆ ಆಶ್ರಯವಾದದ್ದು,; (ಗೆಲೆವಂದಂ ಎನೆ)- ಗೆದ್ದನು ಎನ್ನುವಂತೆ,) ಎನ್ನಂ = ನನ್ನನ್ನು ನಿಜೋನ್ನತಿಯಿಂದಂ = ತನ್ನ ಹಿರಿಮೆಯಿಂದ ; ಈ ಪತಿಯೆಂದು ಗೆಲೆವಂದಂ ಎನೆ = ಗೆದ್ದನೆಂದು ಮೆಚ್ಚಿ =ಮೆಚ್ಚಿ,; ,;ವಿನಾಯಕನು , ಎನ್ನಂ=ನನ್ನನ್ನು ಈ ಪತಿ = ರಾಜನಾದ ಅರಿಕೇಸರಿ ವಿನಾಯಕಂ ತಾನ್ನಿಮಿರ್ಚುದೆ = ತಾನು (ಕವಿ) ಸರಿಯಾಗಿ ವಿಸ್ತರಿಸಲಿ ಎಂದು,; ಕಬ್ಬಮಂ ನಯದಿಂ = ನಯವಾಗಿ,; ಗುಣಾರ್ಣವ ಭೂಪನಾ= ಗುಣಾರ್ಣವಾ ಎಂಬ ಬಿರುದಿದ್ದ ರಿಕೇಸರಿ ರಾಜನ,; ಕಬ್ಬಮಂ = ಅವನ ಪ್ರಶೆಂಶಾ ರೂಪವಾದ ಈ ಕಾವ್ಯವನ್ನು, ನಯದಿಂದ/ ಚೆನ್ನಾಗಿ , ತಾಂ ನಿಮಿರ್ಚುಗೆ= ತಾನು (ಕವಿ) ಸರಿಯಾಗಿ ವಿಸ್ತರಿಸಲಿ (ನಿರ್ಮಿಸಲಿ) ಎಂದು.
7.ಅರ್ಥ: (ವಿನಾಯಕನ ಮುಖ ಆನೆಯದಾಗಿದ್ದು, ಅವನ ಮುಖದ ಮದೋದಕ) ನನ್ನ ಮದದ ನೀರು ಇದು ಯಾವಾಗಲೂ,; ದುಂಬಿಗಳಿಗೆ ಆ ಶ್ರ ಯ ಕೊಡುವುದು; ಆದರೆ ಲೋಕಕ್ಕೆ ಸದಾ ರಾಜನು ಮಾಡುವ ದಾನವು, ಇದು ಯಾವಾಗಲೂ, ಪಂಡಿತರಿಗೆ ಆಶ್ರಯವಾದದ್ದು,; (ಗೆಲೆವಂದಂ ಎನೆ)- ಗೆದ್ದನು ; ಇದು ಮೇಲು; ಎನ್ನುವಂತೆ,) ನನ್ನನ್ನು ತನ್ನ ಹಿರಿಮೆಯಿಂದ ಗೆದ್ದನೆಂದು ಮೆಚ್ಚಿ,; ವಿನಾಯಕನು ನನ್ನನ್ನು ಈ ರಾಜನಾದ ಅರಿಕೇಸರಿ ವಿನಾಯಕಂ ತಾನು (ಕವಿ) ಸರಿಯಾಗಿ ವಿಸ್ತರಿಸಲಿ ಎಂದು ನಯವಾಗಿ, ಗುಣಾರ್ಣವಾ ಎಂಬ ಬಿರುದಿದ್ದ ರಿಕೇಸರಿ ರಾಜನ ಅವನ ಪ್ರಶೆಂಶಾ ರೂಪವಾದ ಈ ಕಾವ್ಯವನ್ನು, ನಯದಿಂದ/ ಚೆನ್ನಾಗಿ, ತಾನು (ಕವಿ) ಸರಿಯಾಗಿ ವಿಸ್ತರಿಸಲಿ (ನಿರ್ಮಿಸಲಿ) ಎಂದು ಆಶೀರ್ವದಿಸಲಿ.
  • (ತಾತ್ಪರ್ಯ: ವಿನಾಯಕ ಅರಿಕೇಸರಿಯನ್ನು ತನಗಿಂತ ಉತ್ತಮ ಎಂದು ಮೆಚ್ಚಿದನು;)
೭. (ಹೀಗೂ ಹೇಳಬಹುದು.) ಮಧುಪಾಶ್ರಯಂ (ಅಂದರೆ ದುಂಬಿಗಳಿಗೆ ಅವಲಂಬನವಾದುದು- ಬಾಹ್ಯಾರ್ಥದಲ್ಲಿ; ಧ್ವನಿಯಲ್ಲಿ – ಮದ್ಯಪಾನ ಮಾಡುವವರಿಗೆ ಅವಲಂಬನವಾದುದು) ಅರಿಕೇಸರಿಯ ದಾನವು (ವಸ್ತುಗಳನ್ನು ಪ್ರದಾನ ಮಾಡುವುದು-ಕೊಡುಗೆಯು) ವಿಬುಧಾಶ್ರಯಂ ಅಂದರೆ ವಿದ್ವಾಂಸರಿಗೆ ಅವಲಂಬನವಾದುದು. ಆದುದರಿಂದ ಈ ರಾಜನಾದ ಅರಿಕೇಸರಿಯು ತನ್ನ ಮೇಲ್ಮೆಯಿಂದ ನನ್ನನ್ನು ಗೆದ್ದಿದ್ದಾನೆ ಎಂಬ ಮೆಚ್ಚಿಗೆಯಿಂದ ವಿನಾಯಕನು ಗುಣಾರ್ಣವನೆಂಬ ಬಿರುದಾಂಕಿತನಾದ ಈ ಅರಿಕೇಸರಿಯ ವಿಷಯಕವಾದ ಈ ಕಾವ್ಯವನ್ನು ನಯವಾಗಿ ವಿಸ್ತರಿಸಲಿ ಎಂದು ಆಶೀರ್ವದಿಸಲಿ.

ಉತ್ತಮ ಕಾವ್ಯದ ಲಕ್ಷಣಗಳು ಮತ್ತು ಕಾವ್ಯರಚನೆಯ ಉದ್ದೇಶ[ಸಂಪಾದಿಸಿ]

ಚಂ|| ಬಗೆ ಪೊಸತು ಅಪ್ಪುದಾಗಿ ಮೃದುಬಂಧದೊಳ/ ಳೊದುವುದೊಂದಿ ದೇಸಿಯೊಳ್|
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ||
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊರೆಯಿಂ ಬೞಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್|| ೮ ||
ಪದ ವಿಭಾಗ-ಅರ್ಥ: ಕಾವ್ಯ ಹೇಗಿರಬೇಕೆಂದು ಹೇಳುತ್ತಾನೆ: ಬಗೆ ಪೊಸತು ಅಪ್ಪುದು ಆಗಿ=ಚಿಂತನೆ ಹೊಸತು ಇರುವುದು ಆಗಿರಬೇಕು; ಮೃದು ಬಂಧದೊಳ್ ಒಂದುವುದು, ಒಂದಿ ದೇಸಿಯೊಳ್= ಮೃದುವಾದ ಶಬ್ದಗಳ ಜೋಡಣೆಯಲ್ಲಿರಬೇಕು; ಹಾಗೆ ಸೇರಿ, ದೇಸಿಯಲ್ಲಿ ಎಂದರೆ ಕನ್ನಡ ಶೈಲಿಯಲ್ಲಿ ; ಪುಗುವುದು= ಹೊಗಬೇಕು; ಪೊಕ್ಕ ಮಾರ್ಗದೊಳೆ= ಹಾಗೆ ಹೋದಮೇಲೆ ಮಾರ್ಗದ ಕ್ರಮದಲ್ಲೇ (ಸಂಸ್ಕøತ ರೀತಿಯಲ್ಲಿ); ತಳ್ವುದು= ಹೋಗಿ ಹೋದಿಕೊಳ್ಲಬೇಕು; ತಳ್ತೊಡೆ= ಹಾಗೆ ಹೋದರೆ; ಕಾವ್ಯಬಂಧಂ = ಕಾವ್ಯರಚನೆಯು; (ಒಪ್ಪುಗುಂ->.) ಎಳಮಾವು ಕೆಂದಳಿರ ಪೂವಿನ ಬಿಣ್ಪೊ(ಣ್ಪೊರೆ)ಯಿಂ= ಎಳೆಯ ಮಾವಿನ ಮರವು ಕೆಂಪಾದ ಚಿಗುರಿನ ಹೂವಿನ ಬಲುಭಾರದಿಂದ; ಬೞಲ್ದು = ಜೋತುಬಿದ್ದು; ತುಂಬಿಗಳಿನೆ ತುಂಬಿ; ದುಂಬಿಗಳಿಂದ ಆವೃತವಾಗಿ; ಕೋಗಿಲೆಯ ಬಗ್ಗಿಸೆ = ಕೋಗಿಲೆಯು ಕೂಗುತ್ತಿರಲು; ಸುಗ್ಗಿಯೊಳ = ಸುಗ್ಗಿಯಕಾಲದಲ್ಲಿ; ಒಪ್ಪುವಂತೆವೋಲ್ = ಸೊಗಸಾಗಿ ಕಾಣುವ ಹಾಗೆ (ಒಪ್ಪುಗುಂ =) ಶೋಭಿಸುತ್ತದೆ.
೮.ಅರ್ಥ: ಕಾವ್ಯವು ನವನವೋಜ್ವಲವಾಗಿರಬೇಕು (ಹೊಸಬಗೆಯಾಗಿರಬೇಕು). ಮೃದು ಶಬ್ದಗಳ ಜೋಡಣೆಯಿಂದ ಕೂಡಿರಬೇಕು. ಅಚ್ಚಗನ್ನಡ ಶೈಲಿಯಲ್ಲಿ ರಚಿತವಾಗಿರಬೇಕು. ಸಂಸ್ಕೃತ ಶೈಲಿಯೊಂದಿಗೆ ಹೊಂದಿಕೊಂಡಿರಬೇಕು. ಹೀಗೆ ಸೇರಿಕೊಂಡಿದ್ದರೆ ಕಾವ್ಯರಚನೆಯ ವಸಂತಕಾಲದಲ್ಲಿ ಮಾವಿನ ಮರವು ಕೆಂಪಾದ ಚಿಗುರು ಮತ್ತು ಹೂವುಗಳ ಭಾರದಿಂದ ಜೋತುಬಿದ್ದು ತುಂಬಿಗಳಿಂದ ಆವೃತವಾಗಿ ಕೋಗಿಲೆಯ ಕೂಜನದಿಂದ ಪ್ರಕಾಶಿಸುವ ಹಾಗೆ ಶೋಭಾಯಮಾನವಾಗಿರುತ್ತದೆ
ಉ|| ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ ವೃತ್ತ್ವಿ ವಿ
ನ್ಯಾಸಮನೇಕ ಲಕ್ಷಣಗುಣಪ್ರಭವಂ ಮೃದುಪಾದಮಾದ ವಾ|
ಕ್ಛ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ|
ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ|| ೯ ||
ಪದ ವಿಭಾಗ- ಅರ್ಥ: ಆ ಸಕಳಾರ್ಥ ಸಂಯುತಂ= ಉಲ್ಲೇಖಿಸಿದ ಎಲ್ಲಾ ಅರ್ಥಗಳಿಂದ ಕೂಡಿದ, ಅಮಳಂಕೃತಿಯುಕ್ತಂ = ಅಲಂಕಾರಗಳಿಂದ ಸೇರಿರುವ; ಉದಾತ್ತ ವೃತ್ತ್ವಿ= ಉತ್ತಮ ವೃತ್ತಿಗಳ; ವಿನ್ಯಾಸಮನೇಕ ಲಕ್ಷಣಗುಣಪ್ರಭವಂ= ಅನೇಕ ಕಾವ್ಯಲಕ್ಷಣ ವಿನ್ಯಾಸದಿಂದ ಕೂಡಿದ ಮೃದುಪಾದಂ ಅದ = ಮೃದುವಾದ ಪದ್ಯ ಪಾದಗಳನ್ನು ಹೊಂದಿದ; ವಾ|ಕ್ಛ್ರೀ ಸುಭಗಂ =ವಾಕ್ ಸಂಪತ್ತಿನಿಂದ ಸುಂದರವಾದ; ಕಳಾಕಳಿತಮೆಂಬ = ಕಲಾನ್ವಿತ ಎಂದು ಎನಿಸಿಕೊಳ್ಳುವ,ನೆಗೞ್ತೆಯನಉ ಆಳ್ದ ಕಬ್ಬಮಂ = ಪ್ರಸಿದ್ಧಿ ಪಡೆದ ಕಾವ್ಯವನ್ನೂ, , ಕೂಸುಮಂ = ಹೆಣ್ಣುಮಗುವನ್ನೂ, (ಕಾವ್ಯ ಕನ್ನಿಕೆಯನ್ನು )ಈವುದು; ಈವುದು ಅರಿಕೇಸರಿಗೆ ಅಲ್ಲದ ವಸ್ತುಗೆ ಈವುದೇ? ಕೂಡದು; ಅರಿಕೇಸರಿಗೆ ಕೊಡುವುದು,
೯.ಅರ್ಥ: ಸಮಸ್ತನಾದ ಅರ್ಥಗಳನ್ನೊಳಗೊಂಡಿರುವುದೂ ಅಲಂಕಾರಗಳಿಂದ ಕೂಡಿದುದೂ ಉತ್ತಮವಾದ ವೃತ್ತಿ ವಿನ್ಯಾಸದಿಂದ ಯುಕ್ತವಾದುದೂ ಮೃದುಪದಪಾದಗಳನ್ನುಳ್ಳ ವಾಕ್ಸಂಪತ್ತಿನಿಂದ ಸುಂದರವಾಗಿ ಕಲಾನ್ವಿತವಾದುದೂ ಆದ ಕಾವ್ಯವನ್ನು (ಕಾವ್ಯ ಕನ್ನಿಕೆಯನ್ನು) ರಾಜ ಅರಿಕೇಸರಿಗೆ ಕೊಡಬೇಕು. ಬೇರೆಯವರಿಗೆ ಕೊಡುವುದೇ – ಕೂಡದು.!

---@@@---

ಚಂ|| ಕವಿಗಳ ನಾಮಧಾರಕ ನರಾಪರೋಳಿಯೊಳೀತನೊಳ್ಳಿದಂ
ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ|
ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯು ಗುಣಾರ್ಣವಂ|| ೧೦||
ಪದ ವಿಭಾಗ -ಅರ್ಥ: ಕವಿಗಳ ನಾಮಧಾರಕ ನರಾ(ಧಿ)ಪರೋಳಿಯೊಳೀತನೊಳ್ಳಿದಂ-> ನಾಮಧಾರಕ ಕವಿಗಳ ನರಾಧಿಪರ ಓಳೀಯೊಳ್ ಈತನು ಒಳ್ಳಿದಂ ಕವಿ =ಹೆರಿಗೆ ಮಾತ್ರಾ ಕವಿಗಳು ಮತ್ತು ಹೆಸರಿಗೆ ಮಾತ್ರಾ ರಾಜ ಎನ್ನಸಿಕೊಂಡವರಲ್ಲಿ ಈತನು ಹಾಗಲ್ಲದೆ ಓಳ್ಳೆಯವನು. ನೃಪನೀತನು –ಈತನು ರಾಜ, ಒಳ್ಳಿದನು ಎನಲ್ ದೊರೆಯಲ್ತು = ಈ ರಾಜನು ಒಳ್ಳೆಯವನು ಎನ್ನಲು ಯೋಗ್ಯವಲ್ಲ (ಯೋಗ್ಯವಲ್ಲ? ವಿಶೇಷವಲ್ಲ) ಸರಿಸಾಟಿಯಿಲ್ಲದವನು. ನೆಗೞ್ತೆವೆತ್ತ ಸತ್ಕವಿಗಳ ಕವಿತಾಗುಣಾರ್ಣವಂ = ಪ್ರಸಿದ್ಧರಾದ ಒಳ್ಳೆಯ ಕವಿಗಳಲ್ಲಿ (ತಾನು) ಕವಿತಾಗಣಾರ್ಣವನು ಮತ್ತು ;; ಷೋಡಶ ಅವನಿಪರ ಓಳಿಯೊಳ್= ಹದಿನಾರು ಕವಿಗಳ ಸಮೂಹದಲ್ಲಿ ರಾಜನು; ಗುಣಾರ್ಣವಂ= ಗುಣಾರ್ಣವನು ಕವಿತೆಯೊಳು ಅಗ್ಗಳಂ = ತಾನು ಕವಿತ್ವದಲ್ಲಿ ಶ್ರೇಷ್ಠನು. ಗುಣದೊಳು ಅಗ್ಗಳಂ ಅಲ್ಲಿಯುಂ ಗುಣಾರ್ಣವಂ =ರಾಜನು ಗುಣದಲ್ಲಿ ಹದಿನಾರ ರಾಜರಿಗಿಂತ ಶ್ರೇಷ್ಠನು. ಕವಿ ತನಗಿದ್ದ ಕವಿತಾಗುಣಾಣ್ವ ಎಂಬ ಬಿರುದನ್ನೂ, ತನ್ನ ಪೋಷಕ ಅರಿಕೇಸರಿಗೆ ಗುಣಾರ್ಣವ ಎಂಬ ಬಿರುದುಗಳನ್ನು ಸಮರ್ಥಿಸಿಕೊಳ್ಳತ್ತಾನೆ.
೧೦.ಅರ್ಥ: ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡಿರುವವರ ಸಾಲಿನಲ್ಲಿ ಕವಿಯೆಂದಾಗಲಿ ಸಾಮಾನ್ಯವಾಗಿ ರಾಜರೆಂಬ ಹೆಸರನ್ನು ಮಾತ್ರ ಧರಿಸಿರುವವರ ಗುಂಪಿನಲ್ಲಿ ರಾಜನೆಂದಾಗಲಿ ಕರೆಸಿಕೊಳ್ಳುವುದು ವಿಶೇಷವೇನೂ ಇಲ್ಲ. ಸತ್ಕವಿಗಳ ಸಾಲಿನಲ್ಲಿ ಪಂಪನು ಕವಿತಾಗುಣಾರ್ಣವನೆಂದೂ, ಷೋಡಷರಾಜರ ಶ್ರೇಣಿಯಲ್ಲಿ ಅರಿಕೇಸರಿಯು ಗುಣಾರ್ಣವನೆಂದೂ ಪ್ರಸಿದ್ಧರಾಗಿದ್ದಾರೆ.

---@@@---

ಚಂ|| ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ
ರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ ವರ್ಣಕಂ|
ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ
ಡಿತರೆ ತಗುಳ್ದು ಬಿಚ್ಚೞಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ|| ೧೧
ಪದ ವಿಭಾಗ -ಅರ್ಥ:ಕತೆ ಪಿರಿದು ಆದೊಡಂ ಕತೆಯ ಮೆಯೈ (ಗ) ಕೆಡಲೀಯದೆ ಮುಂ (ಮೊದಲು) ಸಮಸ್ತ ಭಾರತಮಂ ಅಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರು ಇಲ್ಲ==[ಸಮಸ್ತ ಭಾರತ ಕತೆ ದೊಡ್ಡದು ಆದರೂ, ಕತೆಯ ಒಡಲಿಗೆ ಕೆಡುವುದಕ್ಕೆ ಅವಕಾಶಕೊಡದೆ ಮೊದಲು ಸಮಸ್ತ ಭಾರತವನ್ನು ಅಪೂರ್ವವಾಗಿ ಚೆನ್ನಾಗಿ ಹೇಳಿದ ಕವೀಶ್ವರರು ಇಲ್ಲ] ;;ವರ್ಣಕಂ ಕತೆಯೊಳು ಒಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ==[ಹದಿನೆಂಟು ವರ್ಣನೆಗಳು ಕತೆಯಲ್ಲಿ ಒಪ್ಪುವಂತೆ ಕಥೆಯಲ್ಲಿರುವಂತೆ, ಹೇಳುವುದಾದರೆ ಪಂಪನೆ ಹೇಳಬೇಕೆಂದು – ಅವನೇ ಶಕ್ತನೆಂದು ];; ಪಂಡಿತರೆ ತಗುಳ್ದು ಬಿಚ್ಚೞಿಸೆ (ವಿಸ್ತರಿಸೆ) ಪೇೞಲು ಒಡರ್ಚಿದೆನು ಈ ಪ್ರಬಂಧಮಂ==[ಪಂಡಿತರು ಮತ್ತೆಮತ್ತೆ ವಿಸ್ತರಿಸಿ ಹೇಳಲು; ನಾನು/ ತಾನು, ಈ ಕಾವ್ಯವನ್ನು ಹೇಳಲು ತೊಡಗಿದೆನು. ಎಂದು ಕವಿ ಹೇಳು ತ್ತಾನೆ ].
೧೧.ಅರ್ಥ:ಸಮಸ್ತ ಭಾರತ ಕತೆ ದೊಡ್ಡದು ಆದರೂ, ಕತೆಯ ಒಡಲಿಗೆ ಕೆಡುವುದಕ್ಕೆ ಅವಕಾಶಕೊಡದೆ ಮೊದಲು ಸಮಸ್ತ ಭಾರತವನ್ನು ಅಪೂರ್ವವಾಗಿ ಚೆನ್ನಾಗಿ ಹೇಳಿದ ಕವೀಶ್ವರರು ಇಲ್ಲ. ಹದಿನೆಂಟು ವರ್ಣನೆಗಳು ಕತೆಯಲ್ಲಿ ಒಪ್ಪುವಂತೆ ಕಥೆಯಲ್ಲಿರುವಂತೆ, ಹೇಳುವುದಾದರೆ ಪಂಪನೆ ಹೇಳಬೇಕೆಂದು – ಅವನೇ ಶಕ್ತನೆಂದು ಪಂಡಿತರು ಮತ್ತೆಮತ್ತೆ ವಿಸ್ತರಿಸಿ ಹೇಳಲು; ನಾನು/ ತಾನು, ಈ ಕಾವ್ಯವನ್ನು ಹೇಳಲು ತೊಡಗಿದೆನು, ಎಂದು ಕವಿ ಹೇಳುತ್ತಾನೆ.

---@@@---

ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ
ಳ್ಗಳ ಕೃತಿಬಂಧಮುಂ ಬರೆಪಕಾಱಂ ಕೈಗಳ ಕೇಡು ನುಣ್ಣನ|
ಪ್ಪಳಕದ ಕೇಡು ಪೇೞಿಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ|
ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ|| ೧೨
ಪದವಿಭಾಗ - ಅರ್ಥ: ಲಲಿತಪದಂ ಪ್ರಸನ್ನ ಕವಿತಾಗುಣಂ ಇಲ್ಲದೆ ಪೂಣ್ದು ಪೇೞ್ದ ಬೆಳ್ಗಳ(ಅಜ್ಞರ) ಕೃತಿಬಂಧಮುಂ==[ಸುಂದರವಾದ ಪದಗಳು, ಪ್ರಸನ್ನತೆಯನ್ನು(ಆನಂದ) ಕೊಡುವ ಕವಿತಾಗುಣವು ಇಲ್ಲದೆ ಹೊಣೆಹೊತ್ತ ಕಷ್ಟಕ್ಕೆ ಹೇಳಿದ ತಿಳಿಯದವರ ಕಾವ್ಯ ರಚನೆಯು];; ಬರೆಪಕಾಱಂ (ರಂ) ಕೈಗಳ ಕೇಡು, ನುಣ್ಣನಪ್ಪಳಕದ ಕೇಡು, ಪೇೞಿಸಿದೊಡರ್ಥದ ಕೇಡೆನೆ==[ಬರಹಗಾರರ ಕೈಗಳಿಗೆ ಕಷ್ಟವಾದುದೇ ಫಲ! ನುಣ್ಣನೆಯ ಬರೆಯುವ ತಾಳೆಯೋಲೆಗಳ ಹಾನಿ! ಹೇಳಿಸಿದರೆ/ ಓದಿಸಿದರೆ ಅದರ ಅರ್ಥದಲ್ಲಿ ರಸವಿಲ್ಲದೆ ಹಾನಿ.];; ಪೇೞ್ದು ಬೀಗಿ ಪೊಟ್ಟಳಿಸಿ (ಜಂಬ) ನೆಗೞ್ತೆಗೆ/ ನೆಗಳ್ತಿಗೆ ಆಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ==[ಈ ಬಗೆಯ ಕಾವ್ಯವನ್ನು ಹೇಳಿ ಬೀಗಿ,ಗರ್ವಿಸಿ ಕೀರ್ತಿಗೆ ಬಯಸುವ ಕೆಟ್ಟಕವಿಯು ಲೆಕ್ಕವೇ?].
೧೨:ಅರ್ಥ: ಸುಂದರವಾದ ಪದಗಳು, ಪ್ರಸನ್ನತೆಯನ್ನು(ಆನಂದ) ಕೊಡುವ ಕವಿತಾಗುಣವು ಇಲ್ಲದೆ ಹೊಣೆಹೊತ್ತ ಕಷ್ಟಕ್ಕೆ ಹೇಳಿದ ತಿಳಿಯದವರ ಕಾವ್ಯ ರಚನೆಯು ಬರಹಗಾರರ ಕೈಗಳಿಗೆ ಕಷ್ಟವಾದುದೇ ಫಲ! ನುಣ್ಣನೆಯ ಬರೆಯುವ ತಾಳೆಯೋಲೆಗಳ ಹಾನಿ! ಹೇಳಿಸಿದರೆ/ ಓದಿಸಿದರೆ ಅದರ ಅರ್ಥದಲ್ಲಿ ರಸವಿಲ್ಲದೆ ಹಾನಿ.ಈ ಬಗೆಯ ಕಾವ್ಯವನ್ನು ಹೇಳಿ ಬೀಗಿ,ಗರ್ವಿಸಿ ಕೀರ್ತಿಗೆ ಬಯಸುವ ಕೆಟ್ಟಕವಿಯು ಲೆಕ್ಕವೇ?].

ಕವಿಯ ವಿನಯ[ಸಂಪಾದಿಸಿ]

ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತರ್ವಾಯನೀಸುವೆಂ ಕವಿ
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ|
ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮೞ್ತಿಗಂ
ದೋಷಮೆ ಕಾಣೆನೆನ್ನಱವ ಮಾೞ್ಕೆಯ ಪೇೞ್ವೆನಿದಾವ ದೋಷಮೋ|| ೧೩
ಪದವಿಭಾಗ: ಆರ್ಥ:- ಅರ್ಥ:ವ್ಯಾಸಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯಂ ಈಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ==[ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯದ ಕ್ಷೀರ ಸಮುದ್ರವನ್ನು ಈಜುವೆನು, ಕವಿ ವ್ಯಾಸನೇ ನಾನು ಅಥವಾ ಅವನ ಸಮಾನನು ಎಂಬ ಗರ್ವವವು ನನಗಿಲ್ಲ! ];; ಗುಣಾರ್ಣವನ ಒಳ್ಪು, ಮನ್ ಮನೋವಾಸಮನು ಐಯ್ದೆ ಪೇೞ್ದಪೆನು(ಪೇಳ್ದಪೆನು) ಅದಲ್ಲದೆ ಗರ್ವಮೆ ದೋಷಂ; ಅೞ್ತಿಗಂ ದೋಷಮೆ?; ಕಾಣೆಂ; ಎನ್ನ ಅಱವ ಮಾೞ್ಕೆಯ ಪೇೞ್ವೆನು; ಇದು ಆವ ದೋಷಮೋ ==[ಗುಣಾರ್ಣವ/ ಅರಿಕೇಸರಿಯ ಒಳ್ಳೆಯತನ ನನ್ನ ಮನೋ ಮಂದಿರವನ್ನು ಹೊಗಲು ಹೇಳುವೆನು; ಅದಲ್ಲದೆ ಗರ್ವವೆ ದೋಷವಾಗುವುದು. ಪ್ರೀತಿಗೂ ದೋಷವೇ? ಹಾಗೆ ಕಾಣೆನು; ನನ್ನ ತಿಳಿವು ಇದ್ದ ಮಟ್ಟಿಗೆ ಹೇಳುವೆನು; ಇದು ಯಾವ ದೋಷವೋ!ದೋಷವಿಲ್ಲ.]
೧೩.ತಾತ್ಪರ್ಯ:-ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯದ ಕ್ಷೀರ ಸಮುದ್ರವನ್ನು ಈಜುವೆನು, ಕವಿ ವ್ಯಾಸನೇ ನಾನು ಅಥವಾ ಅವನ ಸಮಾನನು ಎಂಬ ಗರ್ವವವು ನನಗಿಲ್ಲ! ಗುಣಾರ್ಣವ/ ಅರಿಕೇಸರಿಯ ಒಳ್ಳೆಯತನವು ನನ್ನ ಮನೋ ಮಂದಿರವನ್ನು ಹೊಗಲು ಹೇಳುವೆನು (ಅವನ ಪ್ರೀತಿಗಾಗಿ ಈ ಕಥೆಯನ್ನು ಹೇಳುವೆನು); ಅದಲ್ಲದೆ ಗರ್ವವೆ ದೋಷವಾಗುವುದು. ಪ್ರೀತಿಗೂ ದೋಷವೇ? ಹಾಗೆ ಕಾಣೆನು; ನನ್ನ ತಿಳಿವು ಇದ್ದ ಮಟ್ಟಿಗೆ ಹೇಳುವೆನು; ಇದು ಯಾವ ದೋಷವೋ! ದೋಷವಿಲ್ಲ.
ಚಂ|| ವಿಪುಳ ಯಶೋವಿತಾನ ಗುಣವಿಲ್ಲದನಂ ಪ್ರಭು ಮಾಡಿ ಪೂರ್ವ ಭೂ
ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ|
ಮಿಪರುಮನೊಳ್ಪಿನೊಳ್ ತಗುಳೆವಂದೊಡೆ ಕಥೆಯೊಳ್ ತಗುಳ್ಚಿ ಪೋ
ಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್|| ೧೪
ಪದವಿಭಾಗ - ಅರ್ಥ:ವಿಪುಳ ಯಶೋವಿತಾನ ಗುಣವಿಲ್ಲದನಂ ಪ್ರಭು ಮಾಡಿ ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ ಈತನು ಉದಾತ್ತ ಪೂರ್ವ ಭೂಮಿಪರುಮಂ ಓಳ್ಪಿನೊಳ್ ತಗುಳೆವಂದೊಡೆ (ತಗಲಿಕೊಂಡರೆ, ಹಿಂಬಾಲಿಸಿದರೆ)==[ಕೆಲವು ಕವಿಗಳು,ವಿಫುಲ ಕೀರ್ತಿಯ ಗುಣವಿಲ್ಲದನನ್ನು ಕಾವ್ಯ ನಾಯಕನನ್ನು ಮಾಡಿ ಹಿಂದಿನ ರಾಜರ ಪದವಿಗಳನ್ನು ಅವರಲ್ಲಿ ಸೇರಿಸಿ ಹೋಲಿಸುತ್ತಾರೆ; ಈತ ಅರಿಕೇಸರಿ ರಾಜನಿಗೆ, ಉದಾತ್ತರಾದ ಹಿಂದಿನ ರಾಜರನ್ನು ಒಳ್ಳೆಯತನದಲ್ಲಿ ಹೋಲಿಸಿದರೆ,];; ಕಥೆಯೊಳ್ ತಗುಳ್ಚಿ (ಸೇರಿಸಿ,ತಗಲಿಸಿ,ಹೊಂದಿಸಿ) ಪೋಲಿಪೊಡೆ ಎನಗೆ ಅೞ್ತಿಯಾದುದು (ಅಳ್ತಿ=ಪ್ರೀತಿ) ಗುಣಾರ್ಣವ ಭೂಭುಜನಂ(ಅರಿಕೇಸರಿರಾಜ) ಕಿರೀಟಿಯೊಳ್==[ಮಹಾಭಾರತದ ಕಥೆಯಲ್ಲಿ ಸೇರಿಸಿ,ಅಥವಾ ಹೊಂದಿಸಿ ಹೋಲಿಸುವುದಾದರೆ ನನಗೆ ಅರಿಕೇಸರಿರಾಜನ್ನು ಕಿರೀಟಿಯಲ್ಲಿ -ಅರ್ಜುನನಿಗೆ ಹೋಲಿಸುವುದು ಪ್ರೀತಿಯಾಗಿರುವುದು].
೧೪.ತಾತ್ಪರ್ಯ:-ಕೆಲವು ಕವಿಗಳು,ವಿಫುಲ ಕೀರ್ತಿಯ ಗುಣವಿಲ್ಲದನನ್ನು ಕಾವ್ಯ ನಾಯಕನನ್ನು ಮಾಡಿ ಹಿಂದಿನ ರಾಜರ ಪದವಿಗಳನ್ನು ಅವರಲ್ಲಿ ಸೇರಿಸಿ ಹೋಲಿಸುತ್ತಾರೆ; ಈತ ಅರಿಕೇಸರಿ ರಾಜನಿಗೆ, ಉದಾತ್ತರಾದ ಹಿಂದಿನ ರಾಜರನ್ನು ಒಳ್ಳೆಯತನದಲ್ಲಿ ಹೋಲಿಸಿದರೆ, ಮಹಾಭಾರತದ ಕಥೆಯಲ್ಲಿ ಸೇರಿಸಿ,ಅಥವಾ ಹೊಂದಿಸಿ ಹೋಲಿಸುವುದಾದರೆ, ನನಗೆ ಅರಿಕೇಸರಿರಾಜನ್ನು ಕಿರೀಟಿಯಲ್ಲಿ ಅಥವಾ ಅರ್ಜುನನಿಗೆ ಹೋಲಿಸುವುದು ಪ್ರೀತಿಯಾಗಿರುವುದು].

ಅರಿಕೇಸರಿರಾಜನ ವಂಶ ವಿವರಣೆ[ಸಂಪಾದಿಸಿ]

ಕಂ|| ಶ್ರೀಮಚ್ಚಳುಕ್ಯ ವಂಶ
ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ|
ಡೀ ಮಹಿಯೊಳಾತ್ಮವಂಶಶಿ
ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದ||೧೫||
೧೫.ಪದವಿಭಾಗ - ಅರ್ಥ: ಶ್ರೀಮತ್ ಚಳುಕ್ಯವಂಶ ವ್ಯೋಮ ಅಮೃತಕಿರಣನು (ಚಂದ್ರ) ಎನಿಪ ಕಾಂತಿಯನು ಒಳಕೊಂಡ ಈ ಮಹಿಯೊಳು ಆತ್ಮವಂಶ ಶಿಖಾಮಣಿ ಜಸಂ ಎಸೆಯೆ ಯುದ್ಧಮಲ್ಲಂ ನೆಗೞ್ದ==[ ಶ್ರೀಮತ್ ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನು ಎನ್ನಿಸಿ ಕಾಂತಿಯನ್ನು ಹೊಂದಿ, ಈ ಲೋಕದಲ್ಲಿ ತನ್ನ ವಂಶಕ್ಕೆ ತಲೆಯಮಣಿಯಾದ ಚೂಡಾರತ್ನದಂತೆ ಯುದ್ಧಮಲ್ಲನೆಂಬುವವನು ಯಶಸ್ಸು ಶೋಭಿಸಲು ಪ್ರಸಿದ್ದನು]
ಆತ ನಿಜಭುಜವಿಜಯ
ಖ್ಯಾತಿಯನಾಳ್ದಾಳ್ದನಧಿಕಬಲನವನಿಪತಿ|
ವ್ರಾತ ಮಣಿಮಕುಟಕಿರಣ
ದ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ||೧೬||
೧೬.ಪದವಿಭಾಗ - ಅರ್ಥ: ಆತ ನಿಜ ಭುಜವಿಜಯಖ್ಯಾತಿಯನು ಆಳ್ದು ಆಳ್ದನು ಅತಿಬಲನು ಅವನಿಪತಿವ್ರಾತ ಮಣಿಮಕುಟಕಿರಣದ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ==[ಆತನು ತನ್ನ ಭುಜಬಲದಿಂದ ಜಯಿಸಿ ಕೀರ್ತಿಯನ್ನು ಹೊಂದಿ ಆಳಿದನು. ಆಳ್ದನು ಅಧಿಕಬಲನು ರಾಜರ ಸಮೂಹದ ಮಣಿಮಕುಟದ/ ಕಿರೀಟದ ಕಿರಣಗಳ ಬೆಳಗಿಸಲ್ಪಟ್ಟ ಪಾದ ವುಳ್ಳವನು 'ಸಪಾದಲಕ್ಷ'ವೆಂಬ ಭೂಮಿಯನ್ನು ಆಳಿದನು.] (ಎಲ್ಲಾ ರಾಜರೂ ಅವನ ಪಾದಕ್ಕೆ ಕಿರೀಟ ಸಮೇತ ನಮಿಸುತ್ತಿದ್ದರು ಎಂದು ಭಾವ)
ಏನಂ ಪೇೞ್ವುದೊ ಸಿರಿಯು
ದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂ|
ತಾ ನೃಪತಿ ನಿಚ್ಚಲಯ್ನೂ
ಱಾನೆಯನವಗಾಹಮಿರಿಸುವಂ ಬೋದನದೊಳ್||೧೭||
೧೭.ಪದವಿಭಾಗ - ಅರ್ಥ::ಏನಂ ಪೇೞ್ವುದೊ ಸಿರಿಯ ಉದ್ದಾನಿಯನು (ಅತಿಶಯವನ್ನು) ಎಣ್ಣೆಯೊಳೆ ತೀವಿ ದೀರ್ಘಿಕೆಗಳನು (ಬಾವಿಗಳನ್ನು) ಅಂತು ಆ ನೃಪತಿ ನಿಚ್ಚಲುಂ ಅಯ್ನೂಱು ಆನೆಯನು ಅವಗಾಹಂ ಇರಿಸುವಂ (ಮುಳುಗಿಸಿ ಸ್ನಾನ ಮಾಡಿಸುವನು) ಬೋದನದೊಳ್ ==[ಏನೆಂದು ಹೇಳುವುದೊ! ಅವನ ಸಂಪತ್ತಿನ ಅತಿಶಯವನ್ನು! ಬಾವಿಗಳನ್ನು ಎಣ್ಣೆಯಿಂದ ತುಂಬಿ, ಹಾಗೆಯೇ ಆ ನೃಪತಿಯು ನಿತ್ಯವೂ ಬೋದನಬೆಂಬ ಅವನ ರಾಜಧಾನಿಯಲ್ಲಿ ಐದುನೂರು ಅನೆಗಳನ್ನು ಮುಳುಗಿಸಿ ಮುಳುಗಿಸಿ ಸ್ನಾನ ಮಾಡಿಸುವನು].
ಶ್ರೀಪತಿಗೆ ಯುದ್ಧಮಲ್ಲ ಮ
ಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳ|
ಕ್ಷ್ಮಾಪಾಲ ಮೌಳಿಮಣಿ ಕಿರ
ಣಾಪಾಳಿತ ನಖಮಯೂಖರಂಜಿತ ಚರಣಂ|| ೧೮||
೧೮.ಪದವಿಭಾಗ - ಅರ್ಥ:ಶ್ರೀಪತಿಗೆ ಯುದ್ಧಮಲ್ಲ ಮಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನು ಅಖಿಳ ಕ್ಷ್ಮಾಪಾಲ(ರಾಜ) ಮೌಳಿಮಣಿ ಕಿರಣ ಆಪಾಳಿತ (ಪೋಷಿತ) ನಖ ಮಯೂಖ(ಕಾಂತಿ), ರಂಜಿತ ಚರಣಂ==[ಸಂಪತ್ತಿನ ಒಡೆಯ ಯುದ್ಧಮಲ್ಲ ರಾಜನಿಗೆ ಕೀರ್ತಿ ಹುಟ್ಟಲು,ಹುಟ್ಟಿದನು ಎಲ್ಲಾ ರಾಜರ ಕಿರೀಟದ ರತ್ನಗಳ ಕಿರಣಗಳ ಕಾಂತಿಯಿಂದ ಪೋಷಿತವಾದ ಉಗುರುಗಳ ಕಾಂತಿಯಿಂದ ಶೋಬಿಸುವ ಪಾದಗಳು ಇರುವ,]
ಅರಿಕೇಸರಿಯೆಂಬಂ ಸುಂ
ದರಾಂಗನತ್ಯಂತ ವಸ್ತುವಂ ಮದಕರಿಯಂ|
ಹರಿಯಂ ಪಡಿವಡೆಗುರ್ಚಿದ
ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ|| ೧೯||
೧೯.ಪದವಿಭಾಗ - ಅರ್ಥ::ಅರಿಕೇಸರಿಯೆಂಬಂ ಸುಂದರಾಂಗನು ಅತ್ಯಂತ ವಸ್ತುವಂ ಮದಕರಿಯಂ|ಹರಿಯಂ ಪಡಿವಡೆಗೆ (ಎದುರಿಸಿದ ಪಡೆಗೆ) ಉರ್ಚಿದ ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ==[ಅರಿಕೇಸರಿಯೆಂಬಂ ಸುಂದರಾಂಗನು ಹುಟ್ಟಿದನು. ಆ ಅರಿಕೇಸರಿ ಅತ್ಯಂತ ಬೆಲೆಬಾಳುವ ವಸ್ತುವನ್ನು ಪಡೆದನು; ಮದದ ಆನೆಯನ್ನೂ ಕುದುರೆಗಳನ್ನೂ ಅವನನ್ನು ಎದುರಿಸಿದ ಸೈನ್ಯಕ್ಕೆ ಒರೆಯಿಂದ ತೆಗೆದ ಕತ್ತಿಯನ್ನೇ ತೋರಿಸಿ (ಯುದ್ಧಮಾಡಿ), ಆ ರಾಜನು ಗೆಲುವನ್ನು ಪಡೆದನು.]
ನಿರುಪಮ ದೇವನ ರಾಜ್ಯದೊ
ಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ|
ಬೆರಸೊತ್ತಿಕೊಂಡು ಗರ್ವದೆ
ಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್|| ೨೦||
೨೦.ಪದವಿಭಾಗ-ಅರ್ಥ:-ನಿರುಪಮ ದೇವನ ರಾಜ್ಯದೊಳು ಅರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ ಬೆರಸಿ ಒತ್ತಿಕೊಂಡು ಗರ್ವದೆ ಬರೆಯಿಸಿದಂ ಪೆಸರನು ಅಖಿಳ ದಿಗ್ ಭಿತ್ತಿಗಳೊಳ್==[ರಾಷ್ಟ್ರಕೂಟರನಿರುಪಮ ದೇವನ ರಾಜ್ಯದಲ್ಲಿ ಅರಿಕೇಸರಿಯು ವೆಂಗಿಯೆಂಬ ದೇಶವನ್ನೂ ತ್ರಿಕಳಿಂಗಪ್ರದೇಶವನ್ನೂ ಸೇರಿಕೊಂಡು ಗೆದ್ದುಕೊಂಡು, ಠೀವಿಯಿಂದ ತನ್ನ ಹೆಸರನ್ನು ಎಲ್ಲಾ ದಿಕ್ಕುದೆಸೆಗಳಲ್ಲಿಯೂ ಬರೆಸಿದನು].
ಕ್ಷತ್ರಂ ತೇಜೋಗುಣಮಾ
ಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞ್ದಾದಿ|
ಕ್ಷತ್ರಿಯರೊಳಮಿಲ್ಲೆನಿಸಿದು
ದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ|| ೨೧||
೨೧.ಪದವಿಭಾಗ-ಅರ್ಥ:- ಕ್ಷತ್ರಂ ತೇಜೋಗುಣಂ ಕ್ಷತ್ರಿಯರೊಳ್ ನೆಲಸಿ ನಿಂದುದು ಆ ನೆಗೞ್ದ ಆದಿ ಕ್ಷತ್ರಿಯರೊಳಂ ಇಲ್ಲ ಎನಿಸಿದುದು ಈ ತ್ರಿಜಗದೊಳು ಎಸಗಿದ ಎಸಕಂ (ಮಾಡಿದ ಕಾರ್ಯಗಳು) ಅರಿಕೇಸರಿಯಾ==[ಕ್ಷತ್ರಿಯ ತೇಜೋಗುಣವು ಆ ಕ್ಷತ್ರಿಯವಂಶದಲ್ಲಿ ಗಟ್ಟಿಯಾಗಿ ನೆಲಸಿ ನಿಂತಿದೆ. ಅರಿಕೇಸರಿಯು ಮಾಡಿದ ಕಾರ್ಯಗಳು ಈ ಮೂರು ಜಗತ್ತಿನಲ್ಲಿ ಆ ಪ್ರಸಿದ್ಧರಾದ ಹಿಂದಿನ ಕ್ಷತ್ರಿಯರಲ್ಲಿ ಯಾರೂ ಇಲ್ಲ ಎನ್ನಿಸಿದುದು].
ಅರಿಕೇಸರಿಗಾತ್ಮಜರರಿ
ನರಪ ಶಿರೋದಳನ ಪರಿಣತೋಗ್ರಾಸಿ ಭಯಂ|
ಕರಕರರಾಯಿರ್ವರೊಳಾರ್
ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್|| ೨೨||
೨೨.ಪದವಿಭಾಗ-ಅರ್ಥ:-ಅರಿಕೇಸರಿಗೆ ಆತ್ಮಜರು ಅರಿನರಪ (ಶತ್ರು ರಾಜರ) ಶಿರೋದಳನ (ಶಿರ ಉದಳನ=ಸೀಳು) ಪರಿಣತ ಉಗ್ರ ಅಸಿ(ಕತ್ತಿ) ಭಯಂಕರ ಕರರು (ಬಾಹುಗಳನ್ನು ಉಳ್ಳವರು) ಆ ಯಿರ್ವರೊಳು ಆರ್ ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್==[ಅರಿಕೇಸರಿಗೆ ಇಬ್ಬರು ಮಕ್ಕಳು; ಶತ್ರು ರಾಜರ ತಲೆಯನ್ನು ಸೀಳುವುದರಲ್ಲಿ ಪರಿಣತರು. ಉಗ್ರವಾದ ಕತ್ತಿಯಿಂದ ಕತ್ತರಿಸಬಲ್ಲ ಭಯಂಕರ ಬಾಹುಗಳನ್ನು ಉಳ್ಳವರು. ಆ ಇಬ್ಬರಲ್ಲಿ ಯಾರು ದೊರೆಯಾಗುವರು ಎನ್ನಲು, ನರಸಿಂಹ ಭದ್ರದೇವರು (ದೊರೆಯಾಗಿ) ಪ್ರಸಿದ್ದರಾದರು]
ಕಂ|| ಅವರೊಳ್ ನರಸಿಂಗಂಗತಿ
ಧವಳಯಶಂ ಯುದ್ಧಮಲ್ಲನಗ್ರಸುತಂ ತ|
ದ್ಭುವನ ಪ್ರದೀಪನಾಗಿ
ರ್ದವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ|| ೨೩||
೨೩.ಪದವಿಭಾಗ-ಅರ್ಥ:- ಅವರೊಳ್ ನರಸಿಂಗಂಗೆ ಅತಿಧವಳ (ನಿರ್ಮಲ) ಯಶಂ ಯುದ್ಧಮಲ್ಲನು ಅಗ್ರಸುತಂ, ತದ್ ಭುವನ ಪ್ರದೀಪನಾಗಿರ್ದ ಅವಾರ್ಯವೀರ್ಯಂಗೆ (ಸರಿಸಾಟಿಯಿಲ್ಲದ ಶೂರನಿಗೆ) ( ಬದ್ದೆಗಂ (ಬದ್ದೆಗನು) ಪಿರಿಯ ಮಗಂ==[ಅವರಲ್ಲಿ ನರಸಿಂಗನಿಗೆ ಬಹಳ ನಿರ್ಮಲವಾದ ಕೀರ್ತಿಯುಳ್ಳ (ಇಮ್ಮಡಿ) ಯುದ್ಧಮಲ್ಲನು ಹಿರಿಯ ಮಗನು;, ಆ ಲೋಕಕ್ಕೆ ಬೆಳಕಿನಂತಿದ್ದ ಸರಿಸಾಟಿಯಿಲ್ಲದ ಶೂರನಿಗೆ ಬದ್ದೆಗನು-ಭದ್ರದೇವನು ಹಿರಿಯ ಮಗನು].
ಪುಟ್ಟಿದೊಡಾತನೊಳಱವೊಡ
ವುಟ್ಟಿದುದಱವಿಂಗೆ ಪೆಂಪು ಪೆಂಪಿನೊಳಾಯಂ|
ಕಟ್ಟಾಯದೊಳಳವಳವಿನೊ
ಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ|| ೨೪||
೨೪.ಪದವಿಭಾಗ-ಅರ್ಥ:-ಪುಟ್ಟಿದೊಡೆ ಆತನೊಳು ಅಱವು (ಜ್ಞಾನ) ಒಡವುಟ್ಟಿದುದು,-> ಅಱವಿಂಗೆ ಪೆಂಪು, -> ಪೆಂಪಿನೊಳು ಆಯಂ(ಆದಾಯ, ಸಾಮರ್ಥ್ಯ), ಕಟ್ಟಾಯದೊಳ್ ಅಳವು(ಶೌರ್ಯ) ಅಳವಿನೊಳ್ ಒಟ್ಟಜೆ (ಅತಿಶಯತ್ವ, ಪರಾಕ್ರಮ) ಪುಟ್ಟಿದುದು; ಪೋಲ್ವರಾರ್ (ಹೋಲುವವರು ಯಾರು? ಇಲ್ಲ.) ಬದ್ದೆಗನಂ==[ಹುಟ್ಟಿದರೆ, ಆತನಲ್ಲಿ ಜ್ಞಾನ ಒಡಹುಟ್ಟಿತು,-> ಆ ಜ್ಞಾನಕ್ಕೆ ಪೆಂಪು (ಘನತೆ) ಹುಟ್ಟಿತು, -> ಪೆಂಪಿನಿಂದ ಆದಾಯ, ಸಾಮರ್ಥ್ಯಗಳು ಬಂದವು,, ವಸಾಮರ್ಥ್ಯ ಶೌರ್ಯ ದಿಂದ ಅತಿಶಯತ್ವ, ಪರಾಕ್ರಮಗಳು ಹುಟ್ಟಿದವು; ಇವನಿಗೆ/ ಬದ್ದೆಗನಿಗೆ ಹೋಲುವವರು ಯಾರು? ಯಾರೂ ಇಲ್ಲ].
ಬಲ್ವರಿಕೆಯೊಳರಿನೃಪರ ಪ
ಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ|
ಸೊಲ್ವಿನಮಾವರ್ಜಿಸಿದಂ
ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ|| ೨೫||
೨೫.ಪದವಿಭಾಗ-ಅರ್ಥ:-(ಈ ಭದ್ರದೇವನು)ಬಲ್ವರಿಕೆಯೊಳ್ (ಬಲವಾದ ಧಾಳಿಯಲ್ಲ) ಅರಿನೃಪರ ಪಡಲ್ವಡೆ (ಚದುರುವಂತೆ) ತಳ್ತು ಇಱಿದು (ತಾಗಿ-ಇರಿದು ,ಹೋರಾಡಿ) ರಣದೊಳು ಆ ವಿಕ್ರಮಮಂ (ಶೌರ್ಯವನ್ನ) ಸೊಲ್ವಿನಮ್ (ಸೊಲ್- ಎಲ್ಲರೂ ಮಾತಾಡುವ) ಆವರ್ಜಿಸಿದಂ(ಆರ್ಜಿಸು-ಸಂಪಾದಿಸು) ನಾಲ್ವತ್ತೆರಡು ಅಱಿಕೆ(ಪ್ರಸಿದ್ಧ) (ಗಾ) ಕಾಳೆಗಂಗಳೊಳು ಈತಂ==[ಈ ಭದ್ರದೇವನು ಬಲವಾದ ಧಾಳಿಯಲ್ಲಿ ಶತ್ರು ರಾಜರ ಸೈನ್ಯ ಚದುರುವಂತೆ ತಾಗಿ-ಇರಿದು ,ಹೋರಾಡಿ ಯುದ್ಧದಲ್ಲಿ ಆ ಶೌರ್ಯವನ್ನು ಕುರಿತು ಎಲ್ಲರೂ ಮಾತಾಡುವರು. ಈತನು ನಾಲ್ವತ್ತೆರಡು ಪ್ರಸಿದ್ಧ ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು].
ಚಂ|| ವನಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂ
ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗು|
ರ್ವೆನಲಿಱಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ
ಮನನತಿಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ|| ೨೬||
೨೬.ಪದವಿಭಾಗ-ಅರ್ಥ:- ವನಧಿಪರೀತ ಭೂತಳದೊಳು ಈತನೆ ಸೋಲದ ಗಂಡನೆಂಬ ಪೆಂಪಿನ ಪೆಸರಂ ನಿಮಿರ್ಚಿದುದುಂ (ವಿಸ್ತರಿಸು)==[ಸಮುದ್ರದಿಂದ ಸುತ್ತುವರಿದ ಭೂಮಿಯಲ್ಲಿ ಈತನೆ ಸೋಲದ ವೀರನೆಂಬ ಘನತೆಯ ಕೀರ್ತಿಯನ್ನು ನಿವಿಸ್ತರಿಸಿದುದೂ];; ಅಲ್ಲದೆ ವಿಕ್ರಮದಿಂದೆ ನಿಂದು ಅಗುರ್ವೆನಲ್ (ಅಗುರ್-ಭಯ) ಇಱಿದು (ಇರಿದು-ಹೋರಾಡಿ ) ಆಂತರಂ (ಎದುರಾದವರು) ಮೊಸಳೆಯಂ ಪಿಡಿವಂತಿರೆ ನೀರೊಳು ಒತ್ತಿ ಭೀಮನನು ಅತಿಗರ್ವದಿಂ ಪಿಡಿಯೆ ಮೆಯ್ಗಲಿ (ಮೆಯ್ ಕಲಿ-ಶೂರ) ಬದ್ದೆಗನ್ ಅನ್ನನ್ ಆವನೋ==[ಅಲ್ಲದೆ ಪರಾಕ್ರಮದಿಂದ ನಿಂತು ಭಯಪಡಿಸುವಂತೆ ಹೋರಾಡಿ ಎದುರಾದವರನ್ನು ಮೊಸಳೆಯು ನೀರಿನಲ್ಲಿ ಹಿಡಿದಂತೆ ಇರಲು, ಸೋಲಿಸಿ ರಾಜ ಭೀಮನನ್ನು ಬಹಳ ದರ್ಪದಿಂದ ಹಿಡಿಯಲು, ದೈಹಿಕಶೂರನಾದ ಬದ್ದೆಗನ ಹಾಗೆಇರುವ ಶೂರನು ಯಾವನೋ? ಯಾರೂ ಇಲ್ಲ.]
೨೬.ತಾತ್ಪರ್ಯ:ಸಮುದ್ರದಿಂದ ಸುತ್ತುವರಿದ ಭೂಮಿಯಲ್ಲಿ ಈತನೆ ಸೋಲದ ವೀರನೆಂಬ ಘನತೆಯ ಕೀರ್ತಿಯನ್ನು ನಿವಿಸ್ತರಿಸಿದುದೂ ಅಲ್ಲದೆ ಪರಾಕ್ರಮದಿಂದ ನಿಂತು ಭಯಪಡಿಸುವಂತೆ ಹೋರಾಡಿ ಎದುರಾದವರನ್ನು ಮೊಸಳೆಯು ನೀರಿನಲ್ಲಿ ಹಿಡಿದಂತೆ ಇರುವ (ಇವನು) ರಾಜ ಭೀಮನನ್ನು ಸೋಲಿಸಿ, ಬಹಳ ದರ್ಪದಿಂದ ಹಿಡಿಯಲು, ದೈಹಿಕ ಶೂರನಾದ ಬದ್ದೆಗನ ಅಂದರೆ ಭದ್ರದೇವನ ಹಾಗೆ ಇರುವ ಶೂರನು ಯಾವನೋ? ಯಾರೂ ಇಲ್ಲ.
ಮ|| ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್
ನೆಗೞ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು|
ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀ
ಜಗದೊಳ್ ಬದ್ದೆಗನನ್ನನಾವನಿೞಿಕುಂ ಭ್ರೂಕೋಟಿಯಂ ಕೋಟಿಯಂ|| ೨೭||
೨೭.ಪದವಿಭಾಗ-ಅರ್ಥ:- ಮುಗಿಲಂ ಮುಟ್ಟಿದ ಪೆಂಪು (ಹಿರಿಮೆ) ಪೆಂಪನೊಳಕೊಂಡು ಉದ್ಯೋಗಂ ಉದ್ಯೋಗದೊಳ್ ನೆಗೞ್ದ ಆಜ್ಞಾಫಲಂ/ ತೊಡರ್ದ ಆಜ್ಞಾಫಲಂ ಆಜ್ಞೆಯೊಳ್ ತೊಡರ್ದ (ಶ್ರೇಷ್ಠ ತಿಳುವಳಿಕೆಯುಳ್ಳ ಆಜ್ಞೆಯಲ್ಲಿ ) ಅಗುರ್ವು (ಭಯ) ಒದೊಂದು ಅಗುರ್ವಿಂದ ಅಗುರ್ವುಗೊಳು ಉತ್ತಿರ್ಪ(ಬಲಿಷ್ಠ, ಹೆಚ್ಚಿನ?) ಅರಿ ಮಂಡಳಂ ಜಸಕೆ ಅಡರ್ಪಪ್ಪ ಅನ್ನೆಗಂ ಸಂದನು==[ಮುಗಿಲ ಎತ್ತರಕ್ಕೆ ಮುಟ್ಟಿದ ಅವನ ಹಿರಿಮೆ, ಘನತೆಯನ್ನು ಒಳಗೊಂಡು, ರಾಜಕಾರ್ಯ ಮತ್ತು ಇತರೆ ಕಾರ್ಯದಲ್ಲಿ ಮಾಡಿದ ತಿಳುವಳಿಕೆಯುಳ್ಳ ಆಜ್ಞೆಯಲ್ಲಿ ಇರುವ ಭಯವು,ಬಲಿಷ್ಠ ಶತ್ರು ಸಮೂಹವನ್ನು ಒಂದೊಂದು ಭಯದಿಂದ ಒಂದೊಂದು ಭಯವು(ಹೆಚ್ಚುವಂತೆ ಉಂಟಾಗುವಂತಿರುತ್ತಿತ್ತು. ಈ ಯಶಸ್ಸಿಗೆ ಆಶ್ರಯವಾಗುವ ಮಟ್ಟಕ್ಕೆ ಏರಿದನು.];; ಈ ಜಗದೊಳ್ (ಬದ್ದೆಗನನ್ನನಾವನಿೞಕುಂ) ಬದ್ದೆಗನನು ಅನ್ನನು ಆವನ್ (ಇರುವನು); ಇೞಿಕುಂ (ಇಳಿಕುಂ-ಇಳಿಸಿಬಿಡುವನು) ಭ್ರೂಕೋಟಿಯಂ (ಹುಬ್ಬಿನ ತುದಿಯ ಸನ್ನೆಯಿಂದ) ಕೋಟಿಯಂ.==[ಈ ಜಗತ್ತಿನಲ್ಲಿ ಬದ್ದೆಗನ ಅಂಥವನು ಯಾವನು ಇರುವನು?; ಹುಬ್ಬಿನ ತುದಿಯ ಸನ್ನೆಯಿಂದ ಕೋಟಿ ಜನರನ್ನು ಇಳಿಸಿಬಿಡುವನು/ ನಮಸ್ಕರಿಸುವಂತೆ ಮಾಡುವನು].
೨೭.ತಾತ್ಪರ್ಯ:- ಮುಗಿಲ ಎತ್ತರಕ್ಕೆ ಮುಟ್ಟಿದ ಅವನ ಹಿರಿಮೆ, ಘನತೆಯನ್ನು ಒಳಗೊಂಡು, ರಾಜಕಾರ್ಯ ಮತ್ತು ಇತರೆ ಕಾರ್ಯದಲ್ಲಿ ಮಾಡಿದ ಶ್ರೇಷ್ಠ ತಿಳುವಳಿಕೆಯುಳ್ಳ ಆಜ್ಞೆಯಲ್ಲಿ ಇರುವ ಭಯವು, ಬಲಿಷ್ಠ ಶತ್ರು ಸಮೂಹವನ್ನು ಒಂದೊಂದು ಭಯದಿಂದ ಒಂದೊಂದು ಭಯವು ಹೆಚ್ಚುವಂತೆ ಉಂಟಾಗುವಂತಿರುತ್ತಿತ್ತು. ಈ ಯಶಸ್ಸಿಗೆ ಆಶ್ರಯವಾಗುವ ಮಟ್ಟಕ್ಕೆ ಏರಿದನು. ಈ ಜಗತ್ತಿನಲ್ಲಿ ಬದ್ದೆಗನಂಥವನು ಯಾವನು ಇರುವನು?; ಹುಬ್ಬಿನ ತುದಿಯ ಸನ್ನೆಯಿಂದ ಕೋಟಿ ಜನರನ್ನು ಇಳಿಸಿಬಿಡುವನು/ ನಮಸ್ಕರಿಸುವಂತೆ ಮಾಡುವನು].

ಭದ್ರದೇವನ ಮಗ[ಸಂಪಾದಿಸಿ]

ಕಂ|| ಮೇರುವ ಪೊನ್ ಕಲ್ಪಾಂಘ್ರಿಪ
ದಾರವೆ ರಸದೊಱವು ಪರುಸವೇದಿಯ ಕಣಿ ಭಂ|
ಡಾರದೊಳುಂಟೆನೆ ಕುಡುವ ನಿ
ವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ|| ೨೮||
೨೮.ಪದವಿಭಾಗ-ಅರ್ಥ:-ಆತನ ಭಂಡಾರದೊಳ್, ಮೇರುವ ಪೊನ್ ಕಲ್ಪ ಅಂಘ್ರಿಪದ ಅರವೆ ರಸದ ಒಱವು (ಒರತೆ,ಊಟೆ, ಜಲ) ಪರುಸವೇದಿಯ (ಸ್ಪರ್ಶಮಣಿ) ಕಣಿ ಭಂಡಾರದೊಳುಂಟೆನೆ ಕುಡುವ ನಿವಾರಿತ (ನಿರಂತರ) ದಾನಕ್ಕೆ ಪೋಲ್ವರಾರ್ ಬದ್ದೆಗನಂ==[ಆತನ ಭಂಡಾರದಲ್ಲಿ, ಮೇರುಪರ್ವತದಷ್ಟು ಚಿನ್ನ, ಕಲ್ಪವೃಕ್ಷದ ತೋಟ, ಸಿದ್ಧರಸದ ಊಟೆ, ಮುಟ್ಟಿದ್ದೆಲಾ ಚಿನ್ನವಾಗುವ ಸ್ಪರ್ಶಮಣಿಯ ಗಣಿ, ಇವು ಅವನ ಭಂಡಾರದಲ್ಲಿ ಉಂಟು ಎನ್ನಲು ಕೊಡುವ ನಿರಂತರ ದಾನಕ್ಕೆ ಬದ್ದೆಗನನ್ನು/ ಭದ್ರದೇವನನ್ನು ಹೊಲುವವರಾರು? ಯಾರೂ ಇಲ್ಲ.]
ತರಳ|| ಸುರಭಿ ದೇವತೆಯೆಂಬ ಕಾಪಿನೆ ಮಾಣ್ದುದೇಱುವುದೊಂದೆಂ
ದಿರದೆ ಮಾಣ್ದುದು ದೇವ ವಾರಣವೇೞೆ ಉಂಟವು ಪೋದೊಡಾ|
ಖರಕರಂಗರಿದೆಂದೆ ಮಾಣ್ದಿರೆ ಮಾಣ್ದುವಾ ಹರಿ ನೀನೆ ಪೇ
ೞರಿಯವೆಂದಿವು ಭದ್ರದೇವರ ಚಾಗದೊಳ್ಪೊಱಗಾದುವೇ|| ೨೯||
೨೯.ಪದವಿಭಾಗ-ಅರ್ಥ:-ಸುರಭಿ ದೇವತೆಯೆಂಬ ಕಾಪಿನೆ ಮಾಣ್ದುದು ಏಱುವುದೊಂದು ಒಂದಿರದೆ ಮಾಣ್ದುದು ದೇವ ವಾರಣವೇೞೆ ಉಂಟವು (ಇದ್ದದ್ದೆಲ್ಲಾ)ಪೋದೊಡೆ ಆಖರಕರಂಗೆ (ಆಖರ-ಅಕ್ಕರೆ,ಪ್ರೀತಿ,ಕರ) ಅರಿದೆಂದೆ ಮಾಣ್ದಿರೆ ಮಾಣ್ದುವಾ ಹರಿ ನೀನೆ ಪೇೞು ಅರಿಯವೆಂದ ಇವು (ಅರಿಯಲಾರದ ಇವು? ಅಪೂರ್ವವಾದ ಇವು) ಭದ್ರದೇವರ ಚಾಗದೊಳ್ ಪೊಱಗಾದುವೇ.==[ಕಾಮಧೇನು ದೇವತೆಯೆಂಬ ಕಾಪಿನೆ ನಿಂತಿತು. ಯಾವುದೇ ಒಂದು, ಒಂದೂ ಇರದೆ ಇರಲಿಲ್ಲ. ದಾನ ಮಾಡದ ದೇವ ಇಂದ್ರನಲ್ಲಿ ಇದ್ದದ್ದೆಲ್ಲಾ ದೂರ್ವಾಸರ ಶಾಪದಿಂದ ಹೋದರೆ (ಹರಿಯ ಸಹಾಯದಿಂದ ಮತ್ತೆ ಸಿಕ್ಕಿತು, ಆದರೆ ಬದ್ದೆಗನಿಗೆ ಕೊಟ್ಟಿದ್ದು ಹಿಂದಕ್ಕೆ ಬರುವುದಿಲ್ಲ,). ಆದ್ದರಿಂದ ಯಾರು ಹೆಚ್ಚು!) ಅಕ್ಕರೆಯಿಂದ ದಾನ ಮಾಡುವವನಿಗೆ ಅಸಾಧ್ಯವಾದುದು ಎಂಬುದು ಇಲ್ಲದಿರಲು, ದಾನವು ನಿಂತೀತೇ, ಹರಿ ನೀನೆ ಹೇಳು ಅಸಾಧ್ಯವಾದ ಮತ್ತು ಅಪೂರ್ವವಾದ ಇವು ಇರಲಿ ಇಲ್ಲದಿರಲಿ ಭದ್ರದೇವರ ತ್ಯಾಗದಲ್ಲಿ ಕಡಿಮೆಯಾಯಿತೇ?] (ಅರ್ಥ ಸಂಧಿಗ್ಧವಾಗಿದೆ).

ಭದ್ರದೇವನ ಮಗ ಯುದ್ಧಮಲ್ಲ ನರಸಿಂಹ[ಸಂಪಾದಿಸಿ]

ಕಂ|| ಆ ಬದ್ದೆಗಂಗೆ ವೈರಿತ
ಮೋಬಳ ದಶಶತಕರಂ ವಿರಾಜಿತ ವಿಜಯ|
ಶ್ರೀ ಬಾಹು ಯುದ್ಧಮಲ್ಲನಿ
ಳಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ|| ೩೦
ಆತ್ಮಭವನಾನರಾಧಿಪ
ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ|
ಹಾತ್ಮರನಿೞಿಸಿ ನೆಗೞ್ದ ಮ
ಹಾತ್ಮಂ ನರಸಿಂಹನಱಿವಿನೊಳ್ ಪರಮಾತ್ಮಂ|| ೩೧

(ಯುಗ್ಮ ಪದ್ಯ; ಎರಡೂಪದ್ಯಸೇರಿ ಒಂದೇವಾಕ್ಯ.)

೩೦.ಪದವಿಭಾಗ-ಅರ್ಥ:-ಆ ಬದ್ದೆಗಂಗೆ ವೈರಿ ತಮೋಬಳ/ಲ (ಕತ್ತಲೆಗೆ ವೈರಿ- ಸೂರ್ಯ) ದಶಶತಕರಂ ವಿರಾಜಿತ ವಿಜಯಶ್ರೀ ಬಾಹು ಯುದ್ಧಮಲ್ಲನು ಇಳಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ (ಖಡ್ಗ)==[ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನಾದ, ಶೋಭಿತ ವಿಜಯಶ್ರೀಯಿಂದ ಕೂಡಿದ ತೋಳುಗಳುಳ್ಳವನಾದ, ಯುದ್ಧಮಲ್ಲನು ಭೂಮಿಯನ್ನು ಬಹು ವಿಧದಲ್ಲಿ ರಕ್ಷಣೆಮಾಡುವುದರಲ್ಲಿ ಸಮರ್ಥ ಖಡ್ಗವುಳ್ಳವನು].
೩೧.ಪದವಿಭಾಗ-ಅರ್ಥ:-ಆತ್ಮಭವನು ಆ ನರಾಧಿಪನು ಆತ್ಮಜನು ಆ ನಹುಷ ಪೃಥು ಭಗೀರಥ ನಳ ಮಾಹಾತ್ಮರನು ಇೞಿಸಿ(ಕಡೆಗಣಿಸಿ) ನೆಗೞ್ದ ಮಹಾತ್ಮಂ ನರಸಿಂಹನು ಅಱಿವಿನೊಳ್(ಅರವಿನಲ್ಲಿ-ಜ್ಞಾನದಲ್ಲಿ) ಪರಮಾತ್ಮಂ==[ಮಗನು, ಆ ರಾಜನಾದ ಆತ್ಮಜನು ಆ ನಹುಷ, ಪೃಥು, ಭಗೀರಥ, ನಳ,ಮೊದಲಾದ ಮಾಹಾತ್ಮರನ್ನು ಕಡೆಗಣಿಸಿ ಪ್ರಸಿದ್ಧ ಮಹಾತ್ಮನು, ನರಸಿಂಹನು ಅವನು ಜ್ಞಾನದಲ್ಲಿ ಪರಮಾತ್ಮನಿಗೆ ಸಮಾನನು].
೩೦,೩೧. ತಾತ್ಪರ್ಯ:-ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನಾದ, ಶೋಭಿತ ವಿಜಯಶ್ರೀಯಿಂದ ಕೂಡಿದ ತೋಳುಗಳುಳ್ಳವನಾದ, ಯುದ್ಧಮಲ್ಲನು ಭೂಮಿಯನ್ನು ಬಹು ವಿಧದಲ್ಲಿ ರಕ್ಷಣೆಮಾಡುವುದರಲ್ಲಿ ಸಮರ್ಥ ಖಡ್ಗವುಳ್ಳವನು. ಮಗನು, ಆ ರಾಜನಾದ ಆತ್ಮಜನು ಆ ನಹುಷ, ಪೃಥು, ಭಗೀರಥ, ನಳ,ಮೊದಲಾದ ಮಾಹಾತ್ಮರನ್ನು ಕಡೆಗಳಣಿಸಿ ಪ್ರಸಿದ್ಧ ಮಹಾತ್ಮನು, ನರಸಿಂಹನು ಅವನು ಜ್ಞಾನದಲ್ಲಿ ಪರಮಾತ್ಮನಿಗೆ ಸಮಾನನು.
ಮಾಂಕರಿಸದಱಿವು ಗುರು ವಚ
ನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂ|
ಕಿಂಕೊಳೆ ಮಾೞ್ಪೆಡೆಗಣಮೆ ನಿ
ರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ|| ೩೨||
೩೨.ಪದವಿಭಾಗ-ಅರ್ಥ:-ಮಾಂಕರಿಸದು (ಉಪೇಕ್ಷೆಮಾಡುವುದಿಲ್ಲ) ಅಱಿವು (ತಿಳಿವು) ಗುರು ವಚನ ಅಂಕುಶಮಂ, ಪಾೞಿಯೆಡೆಗೆ(ಪಾರಿ-ಮದ ವೇರಿದ ಆನೆ) ಪೊಣರ್ದು ಅರಿಬಲಮಂ (ಶತ್ರು ಸೈನ್ಯ) ಕಿಂಕೊಳೆ ಮಾೞ್ಪೆಡೆಗೆ (ಮಾಳ್ಪೆಡೆಗೆ- ಹಿಂಸೆ ಮಾಡುವ ಸಮಯಕ್ಕೆ)ಅಣಮೆ (ಬಹಳ) ನಿರಂಕುಶಮೆನಿಸಿದುದು ಮುನಿಸು (<-)ಭದ್ರಾಂಕುಶನಾ(ಭದ್ರಜಾತಿಯ ಆನೆಗೆ ಅಂಕುದಂತಿರುವ ನರಸಿಂನ)=
ಭದ್ರಜಾತಿಯ ಆನೆಗೆ ಅಂಕುಶದಂತಿರುವ ನರಸಿಂನ ಅರಿವು ಅಥವಾ ತೀಳಿವು, ಗುರು ವಚನವನ್ನು ಅಥವಾ ತಿಳಿದವರ ಮಾತನ್ನು ಉಪೇಕ್ಷೆಮಾಡವುದಾಗಿರಲಿಲ್ಲ. ಆದರೆ ಅದೇ ಭದ್ರಾಂಕುಶನು ಮದ ವೇರಿದ ಆನೆಯಂತಿರುವ ಶತ್ರು ಸೈನ್ಯವನ್ನು ಎದುರಿಸುವಾಗ ಹಿಂಸೆ ಮಾಡುವ ಸಮಯಕ್ಕೆ ನರಸಿಂಹನ ಮುನಿಸು/ಸಿಟ್ಟು ನಿರಂಕುಶವಾಗಿರುತ್ತಿತ್ತು.
ಮಾಂಕರಿಸದಱಿವು ಗುರು ವಚ
ನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂ|
ಕಿಂಕೊಳೆ ಮಾೞ್ಪೆಡೆಗಣಮೆ ನಿ
ರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ|| ೩೨||
೩೨.ಪದವಿಭಾಗ-ಅರ್ಥ:-ಮಾಂಕರಿಸದು (ಉಪೇಕ್ಷೆಮಾಡುವುದಿಲ್ಲ) ಅಱಿವು (ತಿಳಿವು) ಗುರು ವಚನ ಅಂಕುಶಮಂ, ಪಾೞಿಯೆಡೆಗೆ(ಪಾರಿ-ಮದ ವೇರಿದ ಆನೆ) ಪೊಣರ್ದು ಅರಿಬಲಮಂ (ಶತ್ರು ಸೈನ್ಯ) ಕಿಂಕೊಳೆ ಮಾೞ್ಪೆಡೆಗೆ (ಮಾಳ್ಪೆಡೆಗೆ- ಹಿಂಸೆ ಮಾಡುವ ಸಮಯಕ್ಕೆ)ಅಣಮೆ (ಬಹಳ) ನಿರಂಕುಶಮೆನಿಸಿದುದು ಮುನಿಸು (<-)ಭದ್ರಾಂಕುಶನಾ(ಭದ್ರಜಾತಿಯ ಆನೆಗೆ ಅಂಕುದಂತಿರುವ ನರಸಿಂನ)=
ಭದ್ರಜಾತಿಯ ಆನೆಗೆ ಅಂಕುಶದಂತಿರುವ ನರಸಿಂನ ಅರಿವು ಅಥವಾ ತಿಳುವಳಿಕೆಯು, ಗುರು ವಚನವನ್ನು ಅಥವಾ ತಿಳಿದವರ ಮಾತನ್ನು ಉಪೇಕ್ಷೆಮಾಡವುದಾಗಿರಲಿಲ್ಲ. ಆದರೆ ಅದೇ ಭದ್ರಾಂಕುಶನು ಮದ ವೇರಿದ ಆನೆಯಂತಿರುವ ಶತ್ರು ಸೈನ್ಯವನ್ನು ಎದುರಿಸುವಾಗ ಹಿಂಸೆ ಮಾಡುವ ಸಮಯಕ್ಕೆ ನರಸಿಂಹನ ಮುನಿಸು/ಸಿಟ್ಟು ನಿರಂಕುಶವಾಗಿರುತ್ತಿತ್ತು.
ತಱಿಸಂದು ಲಾೞರೊಳ್ ತ
ಳ್ತಿಱಿದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ|
ತಿಱುನೀರಿಕ್ಕುವುದೆನಿಸಿದ
ತಱಿಸಲವಿನ ಚಲದ ಬಲದ ಕಲಿ ನರಸಿಂಹಂ|| ೩೩
೩೩.ಪದವಿಭಾಗ-ಅರ್ಥ:-ತಱಿಸಂದು (ತರಿಸಂದು-ಪಟ್ಟುಹಿಡಿದು) ಲಾೞರೊಳ್(ಲಾಳ-ಲಾಟದೇಶದಲ್ಲಿ- ದಕ್ಷಿಣ ಗುಜರಾತು)) ತಳ್ತಿಱಿದೇಱಂ(ತಳ್ತು-ತಾಗಿ, ಇರಿದು ಏರಂ) ಪೇೞೆ (ಏರಂ ಪೇರೆ -ವಿಷಯ ಕೇಳಿ/ ಹೇಳಿದರೆ?) ಕೇಳ್ದು ಮಂಡಲಂ ಇನ್ನುಂ ತಿಱುನೀರು (ಸತ್ತವರಿಗೆ ತರ್ಪಣದ ನೀರು) ಇಕ್ಕುವುದು ಎನಿಸಿದ ತಱಿಸಲವಿನ (ಸ್ಥಿರ) ಚಲದ (ಛಲದ) ಬಲದ ಕಲಿ ನರಸಿಂಹಂ=
=ದಕ್ಷಿಣ ಗುಜರಾತಿನ ಧಾಳಿಯುಭಯಂಕರವಾಗಿತ್ತು: ಲಾಟದೇಶದಲ್ಲಿ ಪಟ್ಟುಹಿಡಿದು ಯುದ್ಧಹೂಡಿ, ಶತ್ರುಗಳನ್ನು ಇರಿದು ಕೆಡವಿದ ವಿಷಯ ಕೇಳಿ/ ಹೇಳಿದರೆ; ಕೇಳಿ ಆ ಮಂಡಲದಲ್ಲಿ ಇನ್ನೂ ಸತ್ತವರಿಗೆ ತರ್ಪಣದ ನೀರು ಕೊಡುವುದು ನೆಡೆದಿದೆ,ಎಂಬ ಸುದ್ದಿ ಇದೆ. ಈ ಬಗೆಯ ಸ್ಥಿರವಾದ ಛಲವುಳ್ಳ ಬಲದ ಕಲಿ ನರಸಿಂಹನು.
ಸಿಂಗಂ ಮಸಗಿದವೋಲ್ ನರ
ಸಿಂಗಂ ತಳ್ತಿಱಿಯೆ ನೆಗೞ್ದ ನೆತ್ತರ್ ನಭದೊಳ್|
ಕೆಂಗುಡಿ ಕವಿದಂತಾದುದಿ
ದೇಂ ಗರ್ವದ ಪೆಂಪೊ ಸಕಲಲೋಕಾಶ್ರಯನಾ|| ೩೪
೩೪.ಪದವಿಭಾಗ-ಅರ್ಥ:-ಸಿಂಗಂ ಮಸಗಿದವೋಲ್ ನರಸಿಂಗಂ ತಳ್ತು ಇಱಿಯೆ ನೆಗೞ್ದ (ಹಾರಿದ) ನೆತ್ತರ್ ನಭದೊಳ್ ಕೆಂಗುಡಿ(ಕೆಂಪು ಬಾವುಟ) ಕವಿದಂತಾದುದು ಇದೇಂ ಗರ್ವದ ಪೆಂಪೊ ಸಕಲಲೋಕಾಶ್ರಯನಾ=
=ಸಿಂಹವು ಕೆರಳಿ ಆಕ್ರಮಿಸಿದಂತೆ ನರಸಿಂಗನು ಯುದ್ಧದಲ್ಲಿ ತಾಗಿ/ ಎದುರುಬಿದ್ದು ಇರಿಯಲು, ಹಾರಿದ ರಕ್ತ ಆಕಾಶದಲ್ಲಿ ಕೆಂಪು ಬಾವುಟ ಕವಿದಂತಾಗಿತ್ತು. ಇದೇನು ಎಲ್ಲಾ ಜನರಿಗೂ ಆಶ್ರಯನಾದ ನರಸಿಂಹನ ಪರಾಕ್ರಮದ ಹಿರಿಮೆಯೋ!
ಏೞುಂ ಮಾಳಮುಮಂ ಪಾ
ೞೇೞೆ ತಗುಳಿಱಿದು ನರಗನುರಿಪಿದೊಡೆ ಕರಿಂ|
ಕೇೞಸಿದಾತನ ತೇಜದ
ಬೀೞಲನನುಕರಿಪುವಾದುವೊಗೆದುರಿವುರಿಗಳ್||೩೫||
೩೫.ಪದವಿಭಾಗ-ಅರ್ಥ:-ಏೞುಂ ಮಾಳಮುಮಂ (ಏೞುಂ-ಏಳು ಮಾಳವಮಂ - (ಮಾಳವರಾಜ್ಯದ ಭಾಗಗಳನ್ನು ಆಕ್ರಮಿಸಲು),ಪಾೞೇೞೆ (ಪಾಳೇಳೆ) ಮೇಲಕ್ಕೆ ಹಾರಿಹೋಗುವಂತೆ) ತಗುಱಿ (ಬೆನ್ನಟ್ಟಿ) ಇರಿದು, ನರಗನು ಉರಿಪಿದೊಡೆ (ಸುಟ್ಟರೆ) ಕರಿಂ ಕೇೞಸಿದು (ಸುಟ್ಟು ಕರುಕುಲಾದ) ಆತನ ತೇಜದ ಬೀೞಲನು (ತೇಜಸ್ಸಿನ ಬಿಳಲು-ಬೇರು) ಅನುಕರಿಪುವಾದು (ಅನುಕರಿಸು-ಹೋಲಿಸು?,ಅನಕರಿಸಲಾಗದ್ದು), ಯಾರೂ ಹಾಗೆ ಮಾಡಲು ಆಗದು.) ಒಗೆದ(ಉಂಟಾದ) ಉರಿವುರಿಗಳ್=
=[ಮಾಳವರಾಜ್ಯದ ಏಳು ಭಾಗಗಳನ್ನು ಆಕ್ರಮಿಸಿದಾಗ ಮೇಲಕ್ಕೆ ಹಾರಿಹೋಗುವಂತೆ ಬೆನ್ನಟ್ಟಿ ನರಗನು/ ನರಸಿಂಹನು ಸುಟ್ಟರೆ ಅದು, ಸುಟ್ಟು ಕರುಕುಲಾಯಿತು- ಆತನ/ಮಾಳವನ ತೇಜಸ್ಸಿನ/ಕೀರ್ತಿಯ ಬಿಳಲು/ ಬೇರು ನಾಶವಾಯಿತು; ಹೀಗೆ ಉಂಟಾದ ಜ್ವಾಲೆಗಳು ಹೇಗಿತ್ತೆಂದರೆ, ಯಾರೂ ಅನುಕರಣೆಮಾಡಲಾಗದ್ದು, ಯಾರೂ ಹಾಗೆ ಮಾಡಲು ಆಗದು]. (ಉತ್ಪ್ರೇಕ್ಷಾಲಂಕಾರಗಳು)
ವಿಜಯಾರಂಭ ಪುರಸ್ಸರ
ವಿಜಯಗಜಂಗಳನೆ ಪಿಡಿದು ಘೂರ್ಜರ ರಾಜ|
ಧ್ವಜಿನಿಯನಿಱಿದೋಡಿಸಿ ಭುಜ
ವಿಜಯದೆ ವಿಜಯನುಮನಿೞಿಸಿದಂ ನರಸಿಂಹಂ|| ೩೬
೩೬.ಪದವಿಭಾಗ-ಅರ್ಥ:-ವಿಜಯಾರಂಭ (ವಿಜಯ ಆರಂಭ-ವಿಜಯಯಾತ್ರೆಯ ಕಾರ್ಯ) ಪುರಸ್ಸರ (ಪುರಸ್ಕಾರ) ವಿಜಯಗಜಂಗಳನೆ (ವಿಜಯ ಸೂಚಕ ಆನೆಗಳನ್ನು) ಪಿಡಿದು ಘೂರ್ಜರ ರಾಜ ಧ್ವಜಿನಿಯನು (ಸೈನ್ಯ) ಇಱಿದು ಓಡಿಸಿ ಭುಜವಿಜಯದೆ ವಿಜಯನುಮಂ ಇೞಿಸಿದಂ(ವಿಜನುಮಂ-ಅರ್ಜುನನ್ನೂ ಇಳಿಸಿದಂ -ಕಡಿಮೆಯವನಾಗಿ ಮಾಡಿದನು) ನರಸಿಂಹಂ=
=[ವಿಜಯಯಾತ್ರೆಯ ಆರಂಭಕಾರ್ಯದಲ್ಲಿ ಗೌರವದ ವಿಜಯ ಸೂಚಕವಾದ ಆನೆಗಳನ್ನು ಹಿಡಿದು ಘೂರ್ಜರ ರಾಜನ ಸೈನ್ಯವನ್ನು ಹೊಡೆದೋಡಿಸಿ ಬಾಹುಬಲದ ಗೆಲುವಿನಿಂದ ಅರ್ಜುನನ್ನೂ ನರಸಿಂಹನು ಮೀರಿಸಿದನು. (ಕಡಿಮೆಯವನಾಗಿ ಮಾಡಿದನು)].
ಸಿಡಿಲವೊಲೆಱಗುವ ನರಗನ
ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ|
ಕೆಡೆದೆಡೆಯೊಳ್ ಕೆಡೆಯದೆ ನಿಂ
ದೆಡೆಯೊಳ್ ನಿಲ್ಲದೆಯುಮೋಡಿದಂ ಮಹಿಪಾಲಂ||೩೭||
೩೭.ಪದವಿಭಾಗ-ಅರ್ಥ:-ಸಿಡಿಲವೊಲ್ ಎಱಗುವ ನರಗನಪಡೆಗೆ ಅಗಿದು (ಹೆದರಿ) ಉಮ್ಮಳದಿಂ ಉಂಡೆಡೆಯೊಳು (ಊಟಮಾಡಿದ ಸ್ಥಳದಲ್ಲಿ/ ಊಟಕ್ಕೆ ಹಾಕಿದ ಎಲೆ) ಉಣ್ಣದೆಯುಂ ಕೆಡೆದ (ಮಲಗಿದ೦ ಎಡೆಯೊಳ್ ಕೆಡೆಯದೆ, ನಿಂದೆಡೆಯೊಳ್ ನಿಲ್ಲದೆಯುಂ ಓಡಿದಂ ಮಹಿಪಾಲಂ==[ಸಿಡಿಲಿನಂತೆ ಧಾಳಿಮಾಡುವ ನರಸಿಂಹನ ಸೈನ್ಯಕ್ಕೆ ಹೆದರಿ ಸಂಕಟದಿಂದ ಉಂಡೆಡೆಯಲ್ಲಿ ಉಣ್ಣದೆ, ಮಲಗಿದಲ್ಲಿ ಮಲಗದೆ, ನಿಂತಲ್ಲಿ ನಿಲ್ಲದೆ, ಮಹಿಪಾಲನೆಂಬ ರಾಜನು ಓಡಿದನು].
ಗಂಗಾವಾರ್ಧಿಯೊಳಾತ್ಮತು
ರಂಗಮುಮಂ ಮಿಸಿಸಿ ನೆಗೞ್ದ ಡಾಳಪ್ರಿಯನೊಳ್|
ಸಂಗತ ಗುಣನಸಿಲತೆಯನ
ಸುಂಗೊಳೆ ಭುಜವಿಜಯಗರ್ವದಿಂ ಸ್ಥಾಪಿಸಿದಂ||೩೮||
೩೮.ಪದವಿಭಾಗ-ಅರ್ಥ:-ಗಂಗಾವಾರ್ಧಿಯೊಳ್ ಆತ್ಮ ತುರಂಗಮುಮಂ ಮಿಸಿಸಿ (ಮೀಸಿಸಿ -ಸ್ನಾಮಾಡಿಸಿ) ನೆಗೞ್ದ ಡಾಳಪ್ರಿಯನೊಳ್ (ಕಾಳಪ್ರಿಯ ಎಂಬ ಊರಿನಲ್ಲಿ?) ಸಂಗತಗುಣನ ಅಸಿಲತೆಯನು (ಲತೆಯಂತಿರುವ ಕತ್ತಿ) ಅಸುಂಗೊಳೆ (ಅಸು-ಪ್ರಾಣ, ಕೊಳೆ-ಕೊಳ್ಳಲು,ತೆಗೆಯಲು) ಭುಜವಿಜಯಗರ್ವದಿಂ ಸ್ಥಾಪಿಸಿದಂ=
=[ಆ ನರಸಿಂಹ ರಾಜನು ಗಂಗಾನದಿಯಲ್ಲಿ ತನ್ನ ಕುದುರೆಯನ್ನು ಸ್ನಾನ ಮಾಡಿಸಿ ಪ್ರಸಿದ್ಧವಾದ ಕಾಳಪ್ರಿಯ ಎಂಬ ಊರಿನಲ್ಲಿ ಗುಣದಿಂದ ಕೂಡಿದ ಲತೆಯಂತಿರುವ ಕತ್ತಿಯನ್ನು ಶತ್ರುಗಳ ಪ್ರಾಣವನ್ನು ತೆಗೆಯಲು ತನ್ನ ಭುಜದ ವಿಜಯದ ಪರಾಕ್ರಮದಿಂದ ಸ್ಥಾಪಿಸಿದನು.ಕಾಳ ಪ್ರಿಯ ಎಂಬಲ್ಲಿ ತನ್ನ ವಿಜಯದ ಶಾಸನವನ್ನು ಕಂಬದಲ್ಲಿ ಬರೆಸಿ ಸ್ಥಾಪಿಸಿದನು. ರಾಜ್ಯವನ್ನು ಗಂಗಾನದಿಯವರೆಗೂ ವಿಸ್ತರಿಸಿದನು ಎಂದು ಭಾವ.(ಉಜ್ಜಯನಿಯ ಮಹಾಕಾಲೇಶ್ವರ ದೇವಾಲಯ ಪ್ರದೇಶವಿರಬಹುದು)].
ಕಂ|| ಆ ನರಸಿಂಹಮಹೀಶ ಮ
ನೋನಯನಪ್ರಿಯೆ ವಿಳೋಳನೀಳಾಳಕೆ ಚಂ|
ದ್ರಾನನೆ ಜಾಕವ್ವೆ ದಲಾ
ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ|| ೩೯||
೩೯.ಪದವಿಭಾಗ-ಅರ್ಥ:-ಕಂ|| ಆ ನರಸಿಂಹಮಹೀಶ ಮನ ನಯನ ಪ್ರಿಯೆ (ಮನದ ಕಣ್ಣಿಗೆ ಪ್ರಿಯೆ) ವಿಳೋಳನೀಳಾಳಕೆ (ವಿಳೋಳ- ವಿಲೋಲ, ನೀಳ ಆಳಿಕೆ-ಅಲುಗಾಡುವ ಕರಿಯ ಮುಂಗುರುಳಿನ) ಚಂದ್ರಾನನೆ, ಜಾಕವ್ವೆ ದಲ್ ಜಾನಕಿಗೆ ಅಗ್ಗಳಮೆ (ಹೆಚ್ಚಿನವಳು) ಕುಲದೊಳಂ ಶೀಲದೊಳಂ=

=[ಆ ನರಸಿಂಹ ರಾಜನ ಪತ್ನಿ ಅವನ ಮನಸ್ಸಿಗೂ ಕಣ್ಣಿಗೂ ಪ್ರಿಯಳಾದ ಅಲುಗಾಡುವ ಕರಿಯ ಮುಂಗುರುಳಿನ ಚಂದ್ರನಂತೆ ಮುಖವುಳ್ಳ ಜಾಕವ್ವೆ! ದಲ್- ಅವಳೇ ಕುಲದಲ್ಲಿಯೂ, ಶೀಲದಲ್ಲಿಯೂ ಜಾನಕಿದೇವಿಗೆ ಹೆಚ್ಚಿನ ಗುಣವತಿ ಅವನ ಪತ್ನಿ.]. (ಜಾನಕಮ್ಮ,-ಜಾನಕವ್ವ -ಜಾಕವ್ವೆ)

ಪೊಸತಲರ್ದ ಬಿಳಿಯ ತಾವರೆ
ಯೆಸೞ್ಗಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್|
ನಸು ಮಸುಳ್ದು ತೋರ್ಪಳೆನೆ ಪೋ
ಲಿಸುವೊಡೆ ಜಾಕವ್ವೆಗುೞದ ಪೆಂಡಿರ್ ದೊರೆಯೇ|| ೪೦||
೪೦.ಪದವಿಭಾಗ-ಅರ್ಥ:-(ಜಾಕವ್ವೆಯ ಸೌಂದರ್ಯ ವರ್ಣನೆ):ಪೊಸತು ಅಲರ್ದ ಬಿಳಿಯ ತಾವರೆಯ ಎಸೞ್ಗಳ ನಡುವಿರ್ಪ ಸಿರಿಯುಂ ಆಕೆಯ ಕೆಲದೊಳ್,ನಸು ಮಸುಳ್ದು (ಮಸುಕಾಗಿ) ತೋರ್ಪಳು ಎನೆ ಪೋಲಿಸುವೊಡೆ ಜಾಕವ್ವೆಗೆ, ಉೞದ ಪೆಂಡಿರ್ ದೊರೆಯೇ (ಸಮಾನರೇ-ಅಲ್ಲ!)==[(ಜಾಕವ್ವೆಯ ಸೌಂದರ್ಯ ವರ್ಣನೆ):ಹೊಸದಾಗಿ ಅರಳಿದ ಬಿಳಿಯ ತಾವರೆಯ ಎಸಳುಗಳ ನಡುವೆ ಇರುವ ಸಾಕ್ಷಾತ್ ಲಕ್ಷ್ಮಿಯೇ, ಆಕೆಯ ಪಕ್ಕದಲ್ಲಿಟ್ಟು ಹೋಲಿಸಿದರೆ ಸ್ವಲ್ಪ,ಮಬ್ಬಾಗಿ -ಮಸುಕಾಗಿ ಕಾಣುವಳು. ಅಷ್ಟು ಸುಂದರಿ; ಎನ್ನುವಾಗ ಜಾಕವ್ವೆಗೆ ಉಳಿದ ಅರಸನ ಹೆಂಡಿರು ಸಮಾನರೇ-ಅಲ್ಲ!].
ಆ ಜಾಕವ್ವೆಗಮಾ ವಸು
ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ|
ರಾಜಿತನೆನಿಪರಿಕೇಸರಿ
ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ|| ೪೧ ||
೪೧.ಪದವಿಭಾಗ-ಅರ್ಥ:ಆ ಜಾಕವ್ವೆಗುಂ ಆ ವಸುಧಾ (ಭೂಮಿ) ಜಯ ಸದ್ ವಲ್ಲಭಂಗಂ (ಭೂಮಿ ಪತಿ) ಅತಿ ವಿಶದ ಯಶೋರಾಜಿತನು (ಯಶ-ಕೀರ್ತಿ) ಎನಿಪ ಅರಿಕೇಸರಿರಾಜಂ ತೇಜೋಗ್ನಿಮಗ್ನ (ರೂಪತಳೆದ ಮುಳುಗಿದ,)ರಿಪು ನೃಪಶಲಭಂ==[ಆ ಜಾಕವ್ವೆಗೂ ಮತ್ತು ಆ ಭೂಮಿಯನ್ನೆಲ್ಲಾ ಗೆದ್ದ ಭೂಪತಿಯಾದ ಜಾಕವ್ವೆಯ ಪತಿಗೂ, ಅತಿ ನಿರ್ಮಲವಾದ ಕೀರ್ತಿಯಿಂದ ಶೋಭಿತನೂ ಆಗಿರುವ ಅರಿಕೇಸರಿರಾಜನಿಗೂ, ತನ್ನ ತೇಜಸ್ಸೆಂಬ ಅಗ್ನಿಯ ರೂಪತಳೆದವನಿಗೆ ಶತ್ರು ನೃಪರೆಂಬ ಪತಂಗಗಳನ್ನು ಹೊಂದಿದ ಅರಿಕೇಸರಿ- ಇಮ್ಮಡಿ ಅರಿಕೇಸರಿ ಎಂಬ ದೊರೆ].
ಮಗನಾದನಾಗಿ ಚಾಗದ
ನೆಗೞ್ತೆಯೊಳ್ ಬೀರದೇೞ್ಗೆಯೊಳ್ ನೆಗೞೆ ಮಗಂ|
ಮಗನೆನೆ ಪುಟ್ಟಲೊಡಂ ಕೋ
ೞ್ಮೊಗಗೊಂಡುದು ಭುವನಭವನಮರಿಕೇಸರಿಯೊಳ್|| ೪೨||
೪೨.ಪದವಿಭಾಗ-ಅರ್ಥ:ಮಗನು ಆದನು ಆಗಿ ಚಾಗದ ನೆಗೞ್ತೆಯೊಳ್ (ಚಾಗ-ತ್ಯಾಗ, ನೆಗಳ್- ಕಾರ್ಯ) ಬೀರದ (ಬೀರ- ವೀರ)ಏೞ್ಗೆಯೊಳ್ (ಉನ್ನತಿ) ನೆಗೞೆ (ನೆಗಳ್- ಪ್ರಸಿದ್ಧಿ)ಮಗಂ, ಮಗನು ಎನೆ ಪುಟ್ಟಲು ಒಡಂ (ಕೂಡಲೆ) ಕೋೞ್ಮೊಗಗೊಂಡುದು (ಕೋಳ್ ಮೊಗ-ಕೊಂಡುದು, ಕೋಡು -ಹೆಚ್ಚುಗಾರಿಕೆ ಮುಖದಲ್ಲಿ ಬಂದಿತು) ಭುವನ (ಲೋಕ) ಭವನಂ ಅರಿಕೇಸರಿಯೊಳ್==[(ಅರಿಕೇಸರಿ ಎಂಬ) ಮಗನು ಹುಟ್ಟಿದನು. ಹಾಗೆ ಹುಟ್ಟಿದವನು ದಾನಮಾಡುವ ಕಾರ್ಯದಲ್ಲಿ ಮತ್ತು ಶೌರ್ಯದ ಉನ್ನತಿಯಲ್ಲಿ ಪ್ರಸಿದ್ಧನಾಗಲು, ಮಗನೆಂದರೆ ಇವನೇ ಮಗನು ಎನ್ನುವಂತೆ ಹುಟ್ಟಲು, ಒಡನೆ ಈ ಲೋಕ ಮಂದಿರದಲ್ಲಿ ಅರಿಕೇಸರಿಯ ಕಾರಣದಿಂದ ಮುಖದಲ್ಲಿ ಕೋಡು ಮೂಡಿದಂತಾಯಿತು. (ತಲೆಯಲ್ಲಿ ಕೋಡುಮೂಡಿದಂತೆ - ಬಹಳ ಹೆಚ್ಚುಗಾರಿಕೆ ಪಡೆದನು.]
  • ಟಿಪ್ಪಣಿ::(ನಿನಗೇನು ಹೆಚ್ಚುಗಾರಿಕೆ ಬಂದಿದೆಯಾ? ಎನ್ನಲು,- ನಿನಗೇನು ಕೋಡು ಬಂದಿದೆಯಾ ಎನ್ನುವರು. ಈ ನುಡಿಗಟ್ಟು ಎಂಟು ನೂರು ವರ್ಷದ ಹಿಂದೆಯೇ ಇತ್ತು ಎಂದಾಯಿತು.)
೪೧-೪೨.ತಾತ್ಪರ್ಯ:ಆ ಜಾಕವ್ವೆಗೂ ಮತ್ತು ಆ ಭೂಮಿಯನ್ನೆಲ್ಲಾ ಗೆದ್ದ ಭೂಪತಿಯಾದ ಜಾಕವ್ವೆಯ ಪತಿಗೂ, ಅತಿ ನಿರ್ಮಲವಾದ ಕೀರ್ತಿಯಿಂದ ಶೋಭಿತನೂ ಆಗಿರುವ ಅರಿಕೇಸರಿರಾಜನಿಗೂ, ತನ್ನ ತೇಜಸ್ಸೆಂಬ ಅಗ್ನಿಯ ರೂಪತಳೆದವನಿಗೆ ಶತ್ರು ನೃಪರೆಂಬ ಪತಂಗಗಳನ್ನು ಹೊಂದಿದ ಅರಿಕೇಸರಿ- ಇಮ್ಮಡಿ ಅರಿಕೇಸರಿ ಎಂಬ ದೊರೆ ಮಗನು ಹುಟ್ಟಿದನು. ಹಾಗೆ ಹುಟ್ಟಿದವನು ದಾನಮಾಡುವ ಕಾರ್ಯದಲ್ಲಿ ಮತ್ತು ಶೌರ್ಯದ ಉನ್ನತಿಯಲ್ಲಿ ಪ್ರಸಿದ್ಧನಾಗಲು, ಮಗನೆಂದರೆ ಇವನೇ ಮಗನು ಎನ್ನುವಂತೆ ಹುಟ್ಟಲು, ಒಡನೆ ಈ ಲೋಕ ಮಂದಿರದಲ್ಲಿ ಅರಿಕೇಸರಿಯ ಕಾರಣದಿಂದ ಮುಖದಲ್ಲಿ ಕೋಡು ಮೂಡಿದಂತಾಯಿತು. (ತಲೆಯಲ್ಲಿ ಕೋಡುಮೂಡಿದಂತೆ - ಬಹಳ ಹೆಚ್ಚುಗಾರಿಕೆ ಪಡೆದನು.)

ಇಮ್ಮಡಿ ಅರಿಕೇಸರಿ[ಸಂಪಾದಿಸಿ]

ತರಳವೃತ್ತ|| ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ
ಮದಗಜಾಂಕುಶದಿಂದೆ ಪೆರ್ಚಿಸಿ ನಾಭಿಯಂ ಮದದಂತಿ ದಂ|
ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಱಿಸೆ ಬಾಳಕಾ
ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಱಿದಂ|| ೪೩||
೪೩.ಪದವಿಭಾಗ-ಅರ್ಥ:ತರಳ||ಚಿಕ್ಕಂದಿನಿಂದ ಅರಿಕೇಸರಿಗೆ 'ಗಜಪ್ರಿಯ' ಆನೆಗಳಲ್ಲಿ ಆಸಕ್ತಿಯುಳ್ಳವನು -ಎಂಬ ಬಿರುದು ಇತ್ತು. ಅದನ್ನು ಹೊಗಳಲು ಈ ಪದ್ಯ ಬಂದಿದೆ.
ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ ತಳಿದು ಆಗಳು ಆ ಮದಗಜ ಅಂಕುಶದಿಂದೆ ಪೆರ್ಚಿಸಿ (ಹೆಚ್ಚಿಸಿ?- ಕತ್ತರಿಸಿ) ನಾಭಿಯಂ ಮದದಂತಿ ದಂತದೊಳೆ, ಕಟ್ಟಿದ ತೊಟ್ಟಿಲಂ ನಯದಿಂದಂ ಏಱಿಸೆ (ಏರಿಸೆ) ಬಾಳಕಾಲದೊಳೆ (ಬಾಲನಾದಾಗಲೇ) ತೊಟ್ಟಿಲಿಗಂ ಗಜಪ್ರಿಯನು ಅಪ್ಪುದಂ ಸಲೆ ತೋಱಿದಂ (ತೋರಿದನು)=
ಅರ್ಥ=[ಆರಿಕೇಸರಿ ಜನನವಾದಾಗ, ಆನೆಯ ಮದದ ನೀರಲ್ಲಿಯೇ ಲೋಕರೂಢಿಯಂತೆ ಬೆಚ್ಚುನೀರನ್ನು -ದೃಷ್ಠಿನಿವಾರಣೆಗಾಗಿ ತಳಿದು/ ಚಿಮುಕಿಸಿ, ಆಗ ಆ ಮದಗಜದ ಅಂಕುಶದಿಂದ ಹೊಕ್ಕುಳು ಬಳ್ಳಿಯನ್ನು ಕತ್ತರಿಸಿ, ಮದದಾನೆಯ ದಂತದಿಂದ ಕಟ್ಟಿದ್ದ ತೊಟ್ಟಿಲಲ್ಲಿ ಅವನನ್ನು ನಯವಾಗಿ ಹಾಕಿರಲು, ಬಾಲಕನಾಗಿದ್ದಾಗಲೇ ತೊಟ್ಟಿಲಲ್ಲಿ ಇದ್ದ ಮಗು ಗಜಪ್ರಿಯನೆಂಬುದನ್ನು ಚೆನ್ನಾಗಿ ತೋರಿಸಿದನು].
ಕಂ|| ರುಂದ್ರಾಂಭೋಧಿ ಪರೀತ ಮ|
ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ||
ದಿಂದ್ರಂ ತಾನೆನೆ ಸಲೆ ನೆಗ
ೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ|| ೪೪
೪೪.:ಪದವಿಭಾಗ-ಅರ್ಥ:ಕಂ|| ರುಂದ್ರ ಅಂಭೋಧಿ ಪರೀತ (ಸುತ್ತುವರಿದ) ಮಹೀಂದ್ರರು ಅದು ಆರು ಇನ್ನರು ಈ ನರೇಂದ್ರಂ ಸಾಕ್ಷಾತ್ ಇಂದ್ರಂ ತಾನು ಎನೆ ಸಲೆ ನೆಗೞ್ದು ಇಂದ್ರೇಂದ್ರನ ತೋಳೆ ತೊಟ್ಟಿಲಾಗಿ ಇರೆ ಬಳೆದಂ=
ಅರ್ಥ=[ವಿಸ್ತಾರವಾದ ಕಡಲು ಸುತ್ತುವರಿದ ಭೂಮಿಗೆ ರಾಜರು ಅದು ಯಾರು ಇದ್ದಾರೆ? ಯಾರೂ ಇಲ್ಲ. ಈ ನರೇಂದ್ರನು ಸಾಕ್ಷಾತ್ ಇಂದ್ರನೇ ತಾನು ಎಂಬಂತೆ ಬಹಳ ಪ್ರಸಿದ್ಧನಾಗಿ, ಇಂದ್ರರಾಜನ ತೋಳುಗಳೇ ತೊಟ್ಟಿಲಾಗಿ ಇರಲು, ಬೆಳೆದನು].
ಅಮಿತಮತಿ ಗುಣದಿನತಿ ವಿ
ಕ್ರಮಗುಣದಿಂ ಶಾಸ್ತ್ರಪಾರಮುಂ ರಿಪುಬಳ ಪಾ|
ರಮುಮೊಡನೆ ಸಂದುವೆನಿಸಿದ
ನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ|| ೪೫
೪೫.:ಪದವಿಭಾಗ-ಅರ್ಥ:ಅಮಿತಮತಿ ಗುಣದಿಂ ಅತಿ ವಿಕ್ರಮಗುಣದಿಂ ಶಾಸ್ತ್ರಪಾರಮುಂ (ಪಾರ- ಆಚೆಯ ತೀರ) ರಿಪುಬಳ ಪಾರಮುಂ ಒಡನೆ ಸಂದುವು ಎನಿಸಿದನು ಅಮೇಯ (ಅಳತೆಗೆ ಮೀರಿದ)ಬಲಶಾಲಿ ಮನುಜ ಮಾರ್ತಾಂಡ ನೃಪಂ=
ಅರ್ಥ=[ಬಹಳ ಬುದ್ಧಿಶಕ್ತಿಯ ಗುಣದಿಂದ, ಅತಿ ಪರಾಕ್ರಮಗುಣದಿಂದ, ಶಾಸ್ತ್ರಜ್ಞಾದ ಆಚೆಯ ತೀರ ಹೊಂದಿ, ಶತ್ರುಬಲನ್ನೂ ಮೀರಿನೆಡೆದು, ಈ ಎಲ್ಲವೂ ಜೊತೆಜೊತೆಗೇ ಲಭಿಸಿದವು ಎನಿಸಿದನು ಅಳತೆಗೆ ಮೀರಿದ ಬಲಶಾಲಿ ಮಾನವ ಮಾರ್ತಾಂಡ ನೃಪನು].
ಉಡೆವಣಿ ಪಱಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ|
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ|| ೪೬
೪೬.:ಪದವಿಭಾಗ-ಅರ್ಥ:ಉಡೆವಣಿ (ಸೊಂಟದ ಉಡುದಾರಕ್ಕೆ ಕಟ್ಟಿದ ಒಡವೆಯನ್ನು) ಪಱಯದ (ತೆಗೆಯದ) ಮುನ್ನಮೆ ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡಲ್ವಡಿಸಿ (ಶತ್ರು ಸೈನ್ಯವನ್ನು ಚೆಲ್ಲಾಪಿಲ್ಲಿ ಮಾಡಿ) ಪರಬಲದ ನೆತ್ತರ ಕಡಲ ಒಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ=
ಅರ್ಥ=[ ಸೊಂಟದ ಉಡುದಾರಕ್ಕೆ ಕಟ್ಟಿದ ಒಡವೆಯನ್ನು ತೆಗೆಯಯುವುದಕ್ಕೂ ಮೊದಲೇ ಯುದ್ಧಕ್ಕೆ ಆರಂಬಿಸಿ, ಛಲವು ಹೆಚ್ಚಲು, ಶತ್ರುಸೈನ್ಯಗಳನ್ನು ಪಡಲ್ವಡಿಸಿ ಚೆಲ್ಲಾಪಿಲ್ಲಿ ಮಾಡಿ ಆ ಸೈನ್ಯದ ರಕ್ತದ ಕಡಲಿನ ಒಳಗಿನ ಜಿಗುಳೆಯು ಬೆಳೆಯುವ ತೆರದಲ್ಲಿ ಕುಮಾರನು ಬೆಳೆದನು.]
ಮೇಲೆೞ್ದ ಬಲಂ ಕೋಟಿಗೆ
ಮೇಲಪ್ಪೊಡಮನ್ಯವನಿತೆ ನೆಗೞ್ದೂರ್ವಶಿಗಂ|
ಮೇಲಪ್ಪೊಡಮಕ್ಕೆಂದುಂ
ಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ|| ೪೭||
೪೭:ಪದವಿಭಾಗ-ಅರ್ಥ:ಮೇಲೆ ಎೞ್ದ ಬಲಂ (ಸೈನ್ಯ) ಕೋಟಿಗೆ ಮೇಲಪ್ಪೊಡಂ, ಅನ್ಯವನಿತೆ ನೆಗೞ್ದ ಊರ್ವಶಿಗಂ ಮೇಲಪ್ಪೊಡಂ ಅಕ್ಕೆಂದುಂ/ಅಕ್ಕು ಎಂದುಂ ಸೋಲವು ಕಣ್ ಪರಬಲ ಅಬ್ಧಿಗಂ ಪರವಧುಗಂ==[ಮೇಲೆ ಬಿದ್ದ ವೈರಿ ಸೈನ್ಯವು ಕೋಟಿಗೂ ಮೇಲಿದ್ದರೂ,, ಪರವನಿತೆಯು ಪ್ರಸಿದ್ಧ ರೂಪವತಿಯಾದ ಊರ್ವಶಿಗೂ ಮೀರಿಸಿದವಳಾಗಿದ್ದರೂ, ಇವಳು ತನಗೆ ಆಗಲಿ(ಬೇಕು) ಎಂದು, ರಾಜನ ಕಣ್ಣು, ಶತ್ರು ಸೈನ್ಯ ಸಮುದ್ರಕ್ಕಾಗಲಿ, ಪರವಧುಗಾಗಲಿ ಎಂದೂ ಕೂಡಾ ಸೋಲುವುದಿಲ್ಲವು].
ಧುರದೊಳ್ ಮೂಱುಂ ಲೋಕಂ
ನೆರೆದಿರೆಯುಂ ಕುಡುವ ಪೋೞ್ತರೊಳ್ ಮೇರುವೆ ಮುಂ|
ದಿರೆಯುಂ ಬೀರದ ಬಿಯದಂ
ತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ|| ೪೮||
೪೮.:ಪದವಿಭಾಗ-ಅರ್ಥ:ಧುರದೊಳ್ ಮೂಱುಂ ಲೋಕಂ ನೆರೆದಿರೆಯುಂ (ನರೆದಿರೆ-ನೆರೆದಿದ್ದರೂ) ಕುಡುವ (ದಾನಮಾಡುವ)ಪೋೞ್ತರೊಳ್ (ಪೊಳ್ತು-ಹೊತ್ತು)ಮೇರುವೆ ಮುಂದೆ ಇರೆಯುಂ, ಬೀರದ (ಬೀರ-ಶೂರ, ಶೌರ್ಯದ) ಬಿಯದ (ವ್ಯಯದ) ಅಂತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ=
=[ಪ್ರಿಯಗಳ್ಳನು ಎಂಬ ಬಿರುದುಳ್ಳ ಅರಿಕೇಸರಿಯು, ಯುದ್ಧದಲ್ಲಿ ಮೂರು ಲೋಕವೂ ಒಟ್ಟು ಸೇರಿದ್ದರೂ, ಮತ್ತು ದಾನಮಾಡುವ ಹೊತ್ತಿನಲ್ಲಿ ಮೇರು ಪರ್ವತವೇ (ಅಷ್ಟು ಸಂಪತ್ತು) ಮುಂದೆ ಇದ್ದರೂ, ತನ್ನ ಶೌರ್ಯದ ಅಂತರಕ್ಕೆ, ಹಾಗೆಯೇ ಕೊಡುವ/ ವ್ಯಯದ ಅಂತರಕ್ಕೆ/ಅಂತಸ್ಥಿಗೆ ಚಿಕ್ಕದು ಎಂದು ಚಿಂತಿಸುವನು].
ಸಮನೆನಿಸುವರ್ ಪ್ರಶಸ್ತಿ
ಕ್ರಮದೊಳ್ ಸ್ವಸ್ತಿ ಸಮಗತ (ಸಮಧಿಗತ) ಪಂಚಮಹಾ ಶ|
ಬ್ದ ಮಹಾ ಸಾಮಂತರೆನಲ್
ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್|| ೪೯||
೪೯.:ಪದವಿಭಾಗ-ಅರ್ಥ:ಸಮನೆನಿಸುವರ್ ಪ್ರಶಸ್ತಿ (ಬಿರುದು) ಕ್ರಮದೊಳ್ ಸ್ವಸ್ತಿ ಸಮ ಅಧಿಗತ ಪಂಚಮಹಾ ಶಬ್ದ ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್=
=[ಸಮನೆನಿಸುವರ್ ಪ್ರಶಸ್ತಿ (ಬಿರುದಾವಳಿ ಹೇಳುವ ಕ್ರಮದಲ್ಲಿ ಸ್ವಸ್ತಿ/ ಶುಭವಾಗಲಿ, ಘೋಶಗಳಾದ ಶೃಂಗ (ಕಹಳೆ), ತಮ್ಮಟೆ,ಶಂಖ, ಭೇರಿ, ಜಯಘಂಟೆ ಈ ಪಂಚಮಹಾ ಶಬ್ದಗಳನ್ನು ಪಡೆದ ಮಹಾ ಸಾಮಂತರು ಅರಿಕೇಸರಿಯೊಡನೆ ಸಮಾನರು ಎನ್ನಿಸುವವರು, ಗುಣದಲ್ಲಿ ಅರಿಗನನನ್ನು ಸಾಮಂತರು ಸಮಾನರು ಎನ್ನಿಸುವರೇ? ಇಲ್ಲ.]
ಉ|| ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋ
ಳ್ಪೋಗದ ಮಂಡಲಂಗಳನೆ ಕೊಂಡು ಜಗತ್ತ್ರಿತಯಂಗಳೊಳ್ ಜಸ|
ಕ್ಕಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್
ಮೇಗು ಪೊದೞ್ದ ಚಾಗದೊಳಮೊಂದಿದ ಬೀರದೊಳಂ ಗುಣಾರ್ಣವಂ|| ೫೦||
೫೦:ಪದವಿಭಾಗ-ಅರ್ಥ:ಚಾಗದ (ತ್ಯಾಗ)ಕಂಬಮಂ ನಿಱಿಸಿ (ಇರಿಸಿ-ನಿಲ್ಲಿಸಿ) ಬೀರದ (ವೀರದ) ಶಾಸನಮಂ ನೆಗೞ್ಚಿ ಕೋಳ್ (ಕೊಳ್ಳ್- ಪಡೆ, ಪೊಗದ-ಪಡೆಯದ) ಪೋಗದ ಮಂಡಲಂಗಳನೆ ಕೊಂಡು ಜಗತ್ತ್ರಿತಯಂಗಳೊಳ್ ಜಸಕ್ಕೆ ಆಗರಮಾದ ಬದ್ದೆಗನಿಂ ಆ ನರಸಿಂಹನಿಂ ಅತ್ತ ನಾಲ್ವೆರಲ್ (ನಾಲ್ ವೆರಳ್- ನಾಲ್ಕು ಬೆರಳು)ಮೇಗು ಪೊದೞ್ದ (ಪೊದಳು- ವ್ಯಾಪಿಸು) ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ=
=ಅರ್ಥ:[ದಾನದ ಶಿಲಾಸ್ಥಂವನ್ನು ನಿಲ್ಲಿಸಿ, ಪ್ರತಾಪದ ವಿವರದ ಶಾಸನವನ್ನು ಮಾಡಿಸಿ, ಪಡೆದುಕೊಳ್ಳಬೇಕಾದ ವಶವಾಗದ ಮಂಡಲಂಗಳನ್ನು ವಶಪಡಿಸಿಕೊಂಡು, ಮೂರು ಲೋಕದಲ್ಲಿ ಕೀರ್ತಿಗೆ ಆಗರನಾದ ಬದ್ದೆಗನಿಗಿಂತಲೂ, ಆ ನರಸಿಂಹನಿಗಿಂತಲೂ, ಗುಣಾರ್ಣವ ಬಿರುದಿನ ಅರಿಕೇಸರಿ, ದಾನದಲ್ಲಿಯೂ, ಅವನು ಹೊಂದಿರುವ ಪರಾಕ್ರಮದಲ್ಲೂ, ಅದರಿಂದ ಅತ್ತ ನಾಲ್ಕು ಬೆರಳು ಮೇಲೆ ವ್ಯಾಪಿಸಿದ್ದಾನೆ.]

ಕವಿಯ ಕಥಾನೀತಿ ನಿರೂಪಣೆ[ಸಂಪಾದಿಸಿ]

ಮ||ಸ್ರ|| ಎನೆ ಸಂದುಂ ವೀರವೈರಿಕ್ಷಿತಿಪಗಜಘಟಾಟೋಪಕುಂಭಸ್ಥಳೀಳೇ
ದನನುಗ್ರೋದ್ಘಾಸಿ ಭಾಸ್ವದ್ಭುಜಪರಿಘನನಾರೂಢಸರ್ವಜ್ಞನಂ ವೈ|
ರಿ ನರೇಂದ್ರೋದ್ಧಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ ಸಂದ
ರ್ಜುನನೊಳ್ ಪೋಲ್ವೀ ಕಥಾಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ|| ೫೧
೫೦.:ಪದವಿಭಾಗ-ಅರ್ಥ: ಎನೆ ಸಂದುಂ (ಎನೆ- ಈ ರೀತಿ, ಸಂದು-ಆಗಿ-ಕೀರ್ತಿಶಾಲಿಯಾಗಿ) ವೀರವೈರಿಕ್ಷಿತಿಪ (ವೀರ ಶತ್ರು ಕ್ಷಿತಿಪ-ರಾಜರ) ಗಜಘಟಾಟೋಪಕುಂಭಸ್ಥಳ (ಆಟಾಟೊಪದ ಆನೆಯ ಕುಂಭಸ್ಥಳವನ್ನು) ಈಳೇದನನು (ಸೀಲುವವನಾದ) ಉಗ್ರೋದ್ಘಾಸಿ (ಉಗ್ರವಾದ ಅಸಿ-ಕತ್ತಯುಳ್ಳ) ಭಾಸ್ವದ್ಭುಜ (ಭಾಸ್ವತ್ -ಪ್ರಕಾಶಮಾನ ಭುಜದ) ಪರಿಘನನಾರೂಢಸರ್ವಜ್ಞನಂ ( ಪರಿಘನಂ- ಕಬ್ಬಿಣದ ಒನಕೆಯನ್ನು, ಆರೂಢಸರ್ಜ್ಞನು ಎಂಬ ಬಿರುದುಳ್ಳ) ವೈರಿ ನರೇಂದ್ರೋದ್ಧಾಮ ದರ್ಪೋದ್ದಳನನನೆ (ವೈರಿ ರಾಜರ, ಉದ್ದಾಮ ದರ್ಪಅತಿ ಗರ್ವವನ್ನು, ಉದ್ದಳನನೆ-ಬೇದಿಸುವವನನ್ನೇ) ಕಥಾನಾಯಕಂ ಮಾಡಿ (ಕಥಾನಾಯಕನನ್ನಾಗಿ ಮಾಡಿ) ಸಂದ ಅರ್ಜುನನೊಳ್ ಪೋಲ್ವ ಈ (ಪ್ರಸಿದ್ಧನಾದ ಅರ್ಜುನನೊಡನೆ ಹೋಲುವ ಈ) ಕಥಾಭಿತ್ತಿಯನು ಅನುನಯದಿಂ (ಈ ಕಥಾಚಿತ್ರವನ್ನು ಪ್ರೀತಿಯಿಂದ) ಪೇೞಲೆಂದು ಎತ್ತಿಕೊಂಡೆಂ (ಹೇಳಲೆಂದು ಎತ್ತಿಕೊಂಡೆನು.)
೫೦.:ಅರ್ಥ:ಈ ರೀತಿ, ಕೀರ್ತಿಶಾಲಿಯಾಗಿ ವೀರ ಶತ್ರುರಾಜರ ಆಟಾಟೊಪದ ಆನೆಯ ಕುಂಭಸ್ಥಳವನ್ನು ಸೀಳುವವನಾದ, ಉಗ್ರವಾದ ಕತ್ತಿಯುಳ್ಳ, ಪ್ರಕಾಶಮಾನ ಭುಜದ ಕಬ್ಬಿಣದ ಒನಕೆಯನ್ನು ಹೊಂದಿದ 'ಆರೂಢಸರ್ಜ್ಞನು' ಎಂಬ ಬಿರುದುಳ್ಳ, ವೈರಿ ರಾಜರ, ಉದ್ದಾಮ ಗರ್ವವನ್ನು, ಬೇದಿಸುವವನನ್ನೇ ಕಥಾನಾಯಕನನ್ನಾಗಿ ಮಾಡಿ, ಪ್ರಸಿದ್ಧನಾದ ಅರ್ಜುನನೊಡನೆ ಹೋಲುವ, ಈ ಕಥಾಚಿತ್ರವನ್ನು ಪ್ರೀತಿಯಿಂದ ಹೇಳಲೆಂದು ಎತ್ತಿಕೊಂಡೆನು.

ಭಾರತ ಕಥಾರಂಭ[ಸಂಪಾದಿಸಿ]

ವಚನ||ವ|| ಅದೆಂತೆನೆ-ಸಮುನ್ಮಿಷ ರತ್ನಮಾಲಾ ಪ್ರಭಾಭಿದರುಣ ಜಲಪ್ಲವಾವಿಳ ವಿಳೋಳವೀಚೀರಯ ಪ್ರದಾರಿತ ;ಕುಳಾಚಲೋದಧಿಪರೀತಮಾಗಿರ್ದ ಜಂಬೂದ್ವೀಪದೊಳಗುಂಟು ನಾಡು ಕುರುಜಾಂಗಣನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್-
ವಚನ:ಪದವಿಭಾಗ-ಅರ್ಥ:ಅದೆಂತೆನೆ-ಸಮುನ್ಮಿಷತ್(ಪ್ರಕಾಶಿಸುವ) ರತ್ನಮಾಲಾ (ವಿವಿಧ ರತ್ನಗಳ) ಪ್ರಭಾಭಿದ್ ಅರುಣ ಜಲಪ್ಲವ (ಕೆಂಪು ಜಲಾವರಿಸಿದ) ಆವಿಳ (ಕದರಿದ) ವಿಳೋಳ ವೀಚೀರಯ(ಅಲ್ಲೋಲಕಲ್ಲೋಲ ಅಲೆಗಳ ವೇಗದಿಂದ) ಪ್ರದಾರಿತ (ಸೀಳಲ್ಲಟ್ಟ) ಕುಳಾಚಲ ಉದಧಿಪರೀತಂ ಆಗಿರ್ದ (ಕುಲಪರ್ವತಗಳಿಂದ ನೀರಿನಿಂದ ಸಯತ್ತುವರಿದ) ಜಂಬೂದ್ವೀಪದೊಳಗೆ ಉಂಟು ನಾಡು ಕುರುಜಾಂಗಣ ನಾಮದಿಂ (ಜಂಬೂದ್ವೀಪದಲ್ಲಿ ಕುರುಜಾಂಗಣ ಎಂಬ ಹೆಸರಿನ ದೇಶ ಇದೆ.) ಅಂತಾ ಕುರುಜಾಂಗಣ ವಿಷಯದೊಳ್-
ಅರ್ಥ:ಅದು ಹೇಗೆಂದರೆ ವಿಶೇಷವಾಗಿ ಪ್ರಕಾಶಿಸುತ್ತಿರುವ ವಿಧವಿಧವಾದ ರತ್ನಗಳ ಕಾಂತಿಯಿಂದ ಭೇದಿಸಲ್ಪಟ್ಟ ಕೆಂಪುನೀರಿನಿಂದ ಕಲುಷಿತವೂ ಚಂಚಲವೂ ಆವರಿಸಿದ, ಕದಡಿದ ಅಲ್ಲೋಲಕಲ್ಲೋಲ ಅಲೆಗಳ ವೇಗದಿಂದ ಸೀಳಲ್ಲಟ್ಟ ಕುಲಪರ್ವತಗಳಿಂದ ನೀರಿನಿಂದ ಸಯತ್ತುವರಿದ ಜಂಬೂದ್ವೀಪದಲ್ಲಿ ಕುರುಜಾಂಗಣ ಎಂಬ ಹೆಸರಿನ ದೇಶ ಇದೆ. ಹಾಗಿರುವ ಕುರುಜಾಂಗಣ ದೇಶದಲ್ಲಿ,-

ಕುರುಜಾಂಗಣ ದೇಶದ ವರ್ಣನೆ[ಸಂಪಾದಿಸಿ]

ಚಂ||ಜಲಜಲನೊೞ್ಕುತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೈ
ದಿಲ ಪೊಸವೂ ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತಂ ಕೆಂ|
ಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ವ ಶುಕಾಳಿ ತೋರೆ ಕೆ
ಯ್ವೊಲಗಳಿನೊಪ್ಪಿ ತೋಱಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್|| ೫೨||
೫೨:ಪದವಿಭಾಗ-ಅರ್ಥ: ಜಲಜಲನೆ ಒೞ್ಕುತಿರ್ಪ(ಹರಿಯುವ) ಪರಿಕಾಲ್ ಪರಿಕಾಲೊಳು ಅಳುರ್ಕೆಗೊಂಡ (ವ್ಯಾಪಿಸಿದ)ನೈದಿಲ ಪೊಸವೂ ಪೊದೞ್ದ (ಹರಡಿದ) ಪೊಸ ನೈದಿಲ ಕಂಪನೆ ಬೀಱಿ ಕಾಯ್ತಂ (ಕಾಯಿಬಿಟ್ಟ) ಕೆಂಗೊಲೆಯೊಳೆ (ಕೆಂಪು ಗೊಂಚಲ)ಜೋಲ್ವ ಶಾಳಿ (ಶಾಲಿ-ಭತ್ತ) ನವಶಾಳಿಗೆ ಪಾಯ್ವ (ಹಾಯುವ)ಶುಕ ಆಳಿ ತೋರೆ ಕೆಯ್ ವೊ/ಹೊಲಗಳಿನೊಪ್ಪಿ ತೋಱಿ ಸಿರಿ ನೋಡುಗುಂ ಆ ವಿಷಯಾಂತರಾಳದೊಳ್ (ದೇಶದ ಹರಹು)|
೫೨:ಅರ್ಥ:ಜಳಜಳನೆಂದು ಹರಿಯುವ ನೀರ ಕಾಲುವೆಗಳು, ಈ ಪರಿಕಾಲುವೆಗಳಲ್ಲಿ ತುಂಬಿರುವ ನೈದಿಲೆಯ ಹೂಸ ಹೂವುಗಳು ಹರಡಿದ ಸುವಾಸನೆಯನ್ನು ಸೂಸಿ, ಕಾಯಿಬಿಟ್ಟ ಕೆಂಪು ಗೊಂಚಲಿನಲ್ಲಿ ಜೋಲುವ ಭತ್ತದ ಹೊಸತೆನೆಗೆ ಎರಗುವ ಗಿಳಿಹಿಂಡು,ಕಾಣಲು, ಕೈಯ ಹೊಲಗಳು ಚಂದವಾಗಿ ಕಾಣಲು ಸಿರಿ/ಲಕ್ಷ್ಮಿಯು ಆ ನಾಡನ ವಿಸ್ರಾವನ್ನು ನೋಡುವಳು.
ಬೆಳೆದೊಱಗಿರ್ದ ಕೆಯ್ವೊಲನೆ ಕೆಯ್ವೊಲನಂ ಬಳಸಿರ್ದ ಪೂತ ಪೂ
ಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ|
ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾಲುಳಿತ ಕುಂತಳದಂತೆವೊಲೊಪ್ಪಿ ತೋಱುಗುಂ|| ೫೩ ||
೫೩:ಪದವಿಭಾಗ-ಅರ್ಥ:ಆ ದೇಶವು, ಬೆಳೆದು ಒರೆಗಿರ್ದ ಕೆಯ್ವೊಲನೆ (ಗದ್ದೆ) ಕೆಯ್ವೊಲನಂ ಬಳಸಿರ್ದ ಪೂತ (ಹೂತ-ಹೂವುಬಿಟ್ಟ) ಪೂಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನ ಆವಳಿಗಳೆ ನಂದನ ಆವಳಿಗಳಂ ಬಳಸಿರ್ದ ಮದಾಳಿ (ಮದ ಆಳಿ- ದುಂಬಿಯ ಸಮೂಹ) ಸಂಕುಲಂಗಳೆ ವಿಷಯಾಂಗನಾ (ದೇಶವೆಂಬ ಅಂಗನೆ- ಹೆಣ್ಣು) ಲುಳಿತ (ಡೊಂಕಾದ) ಕುಂತಳದಂತೆವೊಲು (ಕೂದಲು ಮುಂಗುರುಳಿನಂತೆ) ಒಪ್ಪಿ ತೋಱುಗುಂ(ಚಂದವಾಗಿ ತೋರುವುದು.)
೫೩:ಅರ್ಥ:ಆ ದೇಶವು, ಬೆಳೆದು ಬಾಗಿದ ಗದ್ದೆಗಳೇ, ಗದ್ದೆಗಳನ್ನು ಬಳಸಿರುವ ಹೂವುಬಿಟ್ಟ ಹೂವಿನ ಕೊಳಗಳೇ, ಹೂವುಬಿಟ್ಟ ಹೂವಿನ ಕೊಳಗಳಿಂದ ಆವರಿಸಿದ ವಿಚಿತ್ರ ತೋಟಗಳ ಸಾಲುಗಳೇ, ತೋಟಗಳ ಸಾಲುಗಳಿಂದ ಆವರಿಸಿದ ದುಂಬಿಗಳ ಸಮೂಹವೇ, ದೇಶವೆಂಬ ಹೆಣ್ಣಿನ ಸುರುಳಿಸುತ್ತಿರುವ ಕೂದಲು ಮುಂಗುರುಳಿನಂತೆ ಚಂದವಾಗಿ ತೋರುವುದು.
ಚಂ|| ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ
ಬೆಳೆವುದು ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಂ|
ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ
ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್|| ೫೪
೫೪::ಪದವಿಭಾಗ-ಅರ್ಥ:ಲಳಿತ (ಲಲಿತ-ಸುಂದರ) ವಿಚಿತ್ರ ಪತ್ರ ಫಲ ಪುಷ್ಪಯುತ ಅಟವಿ, ಸೊರ್ಕಿದ ಆನೆಯಂ ಬೆಳೆವುದು, ದೇವಮಾತೃಕಂ ಎನಿಪ್ಪ ಪೊಲಂ(ದೇವ ಮಾತೃಕ ದೇವರದಯೆ ಎಂಬ ಹೊಲ), ನವಗಂಧ ಶಾಳಿಯಂ (ಶಾಲಿ-ಭತ್ತ) ಬೆಳೆವುದು, ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ (ಪ್ರೇಮ) ಬಳೆವುದು ನಾಡ ಕಾಡ ಬೆಳಸು ಇಂಬೆಳಸು (ಇಂಪು- ಸವಿ ಬೆಳಸು) ಆ ವಿಷಯಾಂತರ ಆಳದೊಳ್ (ವಿಷಯ-ನಾಡು).
ಅರ್ಥ:ಸುಂದರವಾದ ನಾನಾಬಗೆಯ ಎಲೆ, ಹಣ್ಣು,ಹೂವುಗಳಿಂದ ಕುಡಿದ ಕಾಡು, ಅದು ಮದದ ಆನೆಯನ್ನು ಬೆಳಸುತ್ತದೆ; ದೇವರ ಕರುಣೆಯ ಮಳೆಯಿಂದ ಬೆಳೆಯುವ ಹೊಲ ಹೊಸ ಸುವಾಸನೆಯ ಭತ್ತವನ್ನು ಬೆಳೆಯುವುದು (ಪರಿಮಳ ಸಾಲೆ ಭತ್ತ, ಆಗಲೂ ಇತ್ತು); ರಮಣೀಯವಾದ ಉದ್ಯಾನ ವನಗಳ ಸಾಲು, ವಿಯೋಗಿ ಜನರಿಗೆ ಪ್ರೇಮವನ್ನು ಹೆಚ್ಚಿಸುವುದು. ಹೀಗೆ ಕುರುಜಾಂಗಣದ ನಾಡಿನ ಕಾಡಿನ ಒಳಗೆ ಸವಿಯಾದ ಬೆಳೆಗಳು.
ಕಂ|| ಆವಲರುಂ ಪಣ್ಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ|
ಮ್ಯಾವುಗಳುಮೆಂದೊಡಿನ್ ಪೆಱ
ತಾವುದು ಸಂಸಾರ ಸಾರಸರ್ವಸ್ವ ಫಲಂ|| ೫೫||
೫೫:ಪದವಿಭಾಗ-ಅರ್ಥ: ಆವ ಅಲರುಂ ಪಣ್ಣುಂ (ಯಾವುದೇ ಹೂವು ಹಣ್ಣು) ಬೀತು ಓವವು (ಕಾಲಕ್ಕೆ ಸರಿಯಾಗಿ ಇಲ್ಲದೆ ಹೋಗುವುದು) ಗಡ! (ಅಯಾಕಾಲದಲ್ಲಿ ಬೀತುಹೋಗುವ ಈ ಬಗೆಯವು ಸಸ್ಯ ಜನರನ್ನು ಓವವು- ಕಾಪಾಡಲಾರವು ಗಡ!), ಬೀಯವು ಅಲ್ಲಿ (ಕುರು ಭೂಮಿಯಲ್ಲಿ ಹಾಗೆ ಬೀಯುವುದಿಲ್ಲ - ಸದಾಕಾಲವೂ ಇರುವುದು) ಮಲ್ಲಿಗೆಗಳುಂ ಮಾವುಗಳುಂ ಎಂದೊಡೆ (ಎಂದಮೇಲೆ ಇನ್ನು) ಇನ್ ಪೆಱತಾವುದು (ಹೆರತು-ಹೊರೆತು- ಬೇರೆ ಯಾವುದು) ಸಂಸಾರ ಸಾರಸರ್ವಸ್ವ ಫಲಂ.
೫೫:ಅರ್ಥ:ಯಾವುದೇ ಹೂವು ಹಣ್ಣುಗಳು ಅಯಾಕಾಲದಲ್ಲಿ ಬೀತುಹೋಗುವದು. ಈ ಬಗೆಯವು ಸಸ್ಯಗಳು ಜನರನ್ನು ಕಾಪಾಡಲಾರವು ಗಡ!, ಕುರು ಭೂಮಿಯಲ್ಲಿ ಹಾಗೆ ಬೀಯುವುದಿಲ್ಲ -ಮಲ್ಲಿಗೆಗಳು, ಮಾವುಗಳು, ಸದಾಕಾಲವೂ ಇರುವುದು; ಎಂದಮೇಲೆ ಇನ್ನು ಯಾವ ಫಲ ತಾನೆ ಬೇಕು ಸಂಸಾರ ಸುಖ ಸರ್ವಸ್ವಕ್ಕೆ. (ಕವಿಗೆ ಹೂವು ಮಾವು ಇದ್ದರೆ ಸುಖ ಸಂತೊಷಕ್ಕೆ ಸಾಕು ಎಂದು ಭಾವ)
ಮಿಡಿದೊಡೆ ತನಿಗರ್ವು ರಸಂ
ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ|
ಗಿಡುವುವು ತುಂಬಿಗಳೞ್ಕಮೆ
ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್|| ೫೬||
೫೬:ಪದವಿಭಾಗ-ಅರ್ಥ: ಆ ದೇಶದ ಕಬ್ಬು, ಹಣ್ಣು, ಹೂವುಗಳು, ಮಿಡಿದೊಡೆ (ಬೆರಳಿಂದ ಹೊಡೆದರೆ) ತನಿಗರ್ವು (ಹೊಸ ಕಬ್ಬು) ರಸಂಬಿಡುವುವು, ಬಿರಿದೊಂದು ಮುಗುಳ (ಹೂವ) ಕಂಪಿನೊಳೆ ಮೊಗಂಗಿಡುವುವು (ಮುಗಂ ಗಿ/ಕಿಡುವುವು ಮುಖ ಕೆಡಿಸಿ/ತೆಗೆಯುವುವು:ಡಿಎಲ್‍ಎನ್:- ಮುಖ ಕೆಡಿಸಿ ತೆಗೆಯುವುವು;ಅಥವಾ ಮುಗಂಗೆ ಇಡುವುವು -ಹೂವನ್ನು ಮುಖಕ್ಕೆ ಇಡುವುವು) ತುಂಬಿಗಳ್; ಅೞ್ಕಮೆ ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್, (ಅಳ್ಕೆಮೆ-ಹಿಂಜರಿಕೆ; ಅಳ್ಕು - ಹಿಂಜರಿ)
೫೩:ಅರ್ಥ: ಆ ದೇಶದ ಕಬ್ಬು, ಹಣ್ಣು, ಹೂವುಗಳು, ಬೆರಳಿಂದ ಹೊಡೆದರೆ ರಸ ಬಿಡುವುವು, ಹೊಸ ಕಬ್ಬು ಸುರಿಸುವುವು, ತುಂಬಿಗಳು ಬಿರಿದ ಹೂಮೊಗ್ಗಿನ ಪರಿಮಳಕ್ಕೆ ತೃಪ್ತಿಯಾಗಿ ಮುಖ ತಿರುಗಿಸಿಹೋಗುವುವು; (ಅಥವಾ ಹೂವನ್ನು ಮುಖಕ್ಕೆ ಇಡುವುವು); ಗಿಳಿಗಳು ಒಂದು ಹಣ್ಣಿನ ರಸ ಕುಡಿದು ತೃಪ್ತಿಯಾಗಿ ಹಿಂತಿರುಗುವುವು.
ಸುತ್ತಿಱಿದ ರಸದ ತೊಱೆಗಳೆ
ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ|
ನ್ಮತ್ತ ಮದಕರಿ ವನಂಗಳೆ
ಸುತ್ತಲುಮಾ ನೆಲದ ಸಿರಿಯನೇನಂ ಪೊಗೞ್ವೆಂ|| ೫೭||
೫೭.:ಪದವಿಭಾಗ-ಅರ್ಥ:ಸುತ್ತಿಱಿದ (ಸುತ್ತವರಿದ-ಬಳಸಿರುವ) ರಸದ ತೊಱೆಗಳೆ (ಸಿದ್ಧರಸದ ನದಿಗಳೇ, ಸಿದ್ಧರಸದಲ್ಲಿ ಕಬ್ಬಿಣ ಅದ್ದಿದರೆ ಚಿನ್ನವಾಗುವುದೆಂಬ ನಂಬಿಗೆ) ಮುತ್ತಿನ ಮಾಣಿಕದ ಪಲವುಂ ಆಗರಮೆ ( ಆಗರ- ಮನಯೇ) ಮದೋನ್ಮತ್ತ ಮದಕರಿ ವನಂಗಳೆ ಸುತ್ತಲುಂ ಆ ನೆಲದ ಸಿರಿಯನು ಏನಂ ಪೊಗೞ್ವೆಂ (ಹೊಗಳಲಿ).
ಅರ್ಥ:ಆ ಕುರು ನಾಡಿನಲ್ಲಿ, ಸುತ್ತುವರಿದ ಬಳಸಿರುವ ಸಿದ್ಧರಸದ ನದಿಗಳೇ, ಅಲ್ಲಿ ಮುತ್ತು ಮಾಣಿಕ್ಯಗಳಿಂದ ಮಾಡಿದ ಅನೇಕ ಮನೆಗಳೇ, ಸುತ್ತಲೂ ಮದೋನ್ಮತ್ತನಾದ ಮದ್ದಾನೆಗಳು ಇರುವ ಕಾಡುಗಳೇ, ಆ ನೆಲದ ಸಂಪತ್ತನ್ನು ಏನೆಂದು ಹೊಗಳಲಿ!
ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯ(ದೇಶ)ಕ್ಕೆ ರಾಜದ್ರಾಜಧಾನಿಯಾಗಿರ್ದು (ರಾಜತ್ -ಪ್ರಕಾಶಮಾನವಾದ ರಾಜಧಾನಿ) ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತೆ ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರ ಮೆಂಬುದು ಪೊೞಲಲ್ಲಿ-
ವಚನ:ಅರ್ಥ: ಹಾಗೆ ಸೊಗಯಿಸುತ್ತಿರುವ ಕುರುಜಾಂಗಣ ದೇಶಕ್ಕೆ ಪ್ರಕಾಶಮಾನವಾದ ರಾಜಧಾನಿ ಹಸ್ತಿನಾಪುರ. ಅದು ಈಶ್ವರನ ಜಟೆಯ ಸಮೂಹಕ್ಕೆ ಚಂದ್ರಲೇಖೆಯ ಹಾಗೆಯೂ, ದಿಗ್ಗಜಗಳ ಗಂಡಸ್ಥಲಕ್ಕೆ ಮದಲೇಖೆಯ ಹಾಗೆಯೂ, ವಿಷ್ಣುವಿನ ವಿಶಾಲವಾದ ವಕ್ಷಸ್ಥಳಕ್ಕೆ ಕೌಸ್ತುಭಮಣಿಯ ಹಾಗೆಯೂ ಸೊಗಯಿಸುತ್ತಿದೆ. ಆ ಪಟ್ಟಣದಲ್ಲಿ:-
ರಗಳೆ|| ಅದರ ಪೊಱವೊೞಲ ವಿಶಾಲ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂ
ನನೆಯ ಕೊನೆಯ ತಳಿರ ಮುಗುಳ ವನಲತಾನಿಕುಂಜದಿಂ ಪ್ರಸೂನ ರಜದ ಪುಂಜದಿಂ
ಗಗನತಳಮೆ ಪಱಿದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ
ಸುರಿವ ಸುರಿಯಿಯಲರ ಮುಗುಳ್ಗೆ ಮೊಗಸಿದಳಿಕುಳಂಗಳಿಂ ತೊದಲ್ವ ಶಿಶು ಶಕುಂಗಳಿಂ
ತೆಗೆಯೆ ಬೀರರವದೆ ಮೇಲೆ ಪರಿವ ಮದಗಜಗಳಿಂ ಚಳತ್ತುರಂಗಮಂಗಳಿಂ
ಲವಣ ಜಳ ಬಳಸಿದಂತೆ ಬಳಸಿದಗೞ ನೀಳದಿಂದುದಗ್ರ ಕನಕಶಾಳದಿಂ
ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗಮಾದ ರಾಗದಿಂ
ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿಕೇತನಂಗಳಿಂ
ಧನದ ಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ ಪೊದೞ್ದ ಕಾವಣಂಗಳಿಂ
ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧ ಹೃದಯಹಾರಿಯಿಂ
ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ
ಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾ ವಿನೋದನೀಡದಿಂ
ಕನಕಶೈಲಮೆನಿಸಿ ನೆಗೞ್ದ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ|| ೫೮||
ವ|| ಅಂತು ಮೂಱುಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳ್ಪಿದಂತೆ ಸಮಸ್ತವಸ್ತುವಿಸ್ತಾರಹಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ ನೆಗೞ್ದ ಭರತಕುಲತಿಲಕರ ವಂಶಾವತಾರಮೆಂತಾದುದೆಂದೊಡೆ-
೫೮:ರಗಳೆ|ಪದವಿಭಾಗ: ಅರ್ಥ: ಅದರ ಪೊಱವೊೞಲ(ಪಟ್ಟನದ ಹೊರಭಾಗದಲ್ಲಿ) ವಿಶಾಲ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂ (ಹಣ್ಣುಗಳಿಂದ ಕಿಕ್ಕಿರಿದ ಮರಗಳಿಂದಲೂ,) ನನೆಯ (ಹೂವಿನ) ಕೊನೆಯ (ಕುಡಿ)ತಳಿರ ಮುಗುಳ ವನಲತಾನಿಕುಂಜದಿಂ (ಬಳ್ಳಿಯ ಮಾಡದಿಂದ) ಪ್ರಸೂನ (ಹೂವಿನ)ರಜದ ಪುಂಜದಿಂ (ಹೂವಿನ ಪರಾಗ))ಗಗನತಳಮೆ ಪಱಿದು ಬಿೞ್ದುದೆನಿಪ (ಆಕಾಶಪ್ರದೇಶವೇ ಹರಿದು ಕೆಳಗೆ ಬಿದ್ದಿದೆಯೋ )ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ(ವಿಶೇಷವಾದ ಸರೋವರಗಳಿಂದಲೂ ಹಾದುತ್ತಿರುವ ಕೋಗಿಲೆಗಳಿಂದಲೂ) ಸುರಿವ ಸುರಿಯಿಯಲರ (ಸುರಗಿಯ ಹೂವಿನ) ಮುಗುಳ್ಗೆ ಮೊಗಸಿದ (ಮುತ್ತಿಕೊಂಡ) ಅಳಿಕುಳಂಗಳಿಂ (ದುಂಬಿಯ ಸಮೂಹದಿಂದಲೂ )ತೊದಲ್ವ ಶಿಶು ಶಕುಂಗಳಿಂ (ತೊದಲು ಮಾತನಾಡುತ್ತಿರುವ ಗಿಳಿಯ ಮರಿಗಳಿಂದಲೂ) ತೆಗೆಯೆ ಬೀರ ರವದೆ ಮೇಲೆ ಪರಿವ ಮದಗಜಗಳಿಂ (ವೀರಶಬ್ದಗಳಿಂದ ಮುನ್ನಡೆಸಲು ಮುಂದಕ್ಕೆ ನುಗ್ಗುತ್ತಿರುವ ಮದ್ದಾನೆಗಳಿಂದಲೂ) ಚಳತ್ ತುರಂಗಮಂಗಳಿಂ (ಚಲಿಸುತ್ತಿರುವ ಕುದುರೆಗಳಿಂದಲೂ) ಲವಣ ಜಳ ಬಳಸಿದಂತೆ ಬಳಸಿದ ಅಗೞ ನೀಳದಿಂದ ಉದಗ್ರ (ಎತ್ತರದ) ಕನಕ ಶಾಳದಿಂದ(ಲವಣಸಮುದ್ರವೇ ಬಳಸಿಕೊಂಡಂತೆ ಸುತ್ತುವರಿದಿರುವ ಕಂದಕಗಳ ಹರವಿನಿಂದಲೂ, ಎತ್ತರವಾದ ಚಿನ್ನದ ಗೋಡೆಯಿಂದಲೂ,) ಒಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ (ಒಳಭಾಗದಲ್ಲಿ ಕುಲಪರ್ವತವೆನಿಸಿಕೊಳ್ಳುವ ದೇವಸ್ಥಾನಗಳ ಐಶ್ವರ್ಯದಿಂದಲೂ) ಸರಾಗಮಾದ ರಾಗದಿಂದ ಅವಮನು ಏಳಿಪಂತು ಮಿಳಿರ್ವ (ಅಲುಗಾಡುವ) ವಿವಿಧ ಕೇತನಂಗಳಿಂ ಸದ್ ಅನಿಕೇತನಂಗಳಿಂ (ಸ್ವರ್ಗವನ್ನೇ ಹಾಸ್ಯಮಾಡುವ ಹಾಗೆ ಚಲಿಸುತ್ತಿರುವ ಧ್ವಜಗಳಿಂದಲೂ) ಧನದ ಭವನಮೆನಿಪ ಸಿರಿಯ ಬಚ್ಚರ ಆಪಣಂಗಳಿಂ ಪೊದೞ್ದ ಕಾವಣಂಗಳಿಂ(ದಾನಮಾಡುವವರ ಮನೆಗಳಿಂದಲೂ, ಕುಬೇರ ಭವನಗಳು ಎನಿಸಿ ಕೊಂಡಿರುವ ಸಂಪದ್ಯುಕ್ತವಾದ ವೈಶ್ಯರ ಅಂಗಡಿಗಳಿಂದಲೂ, ವ್ಯಾಪಿಸಿಕೊಂಡಿರುವ ಚಪ್ಪರಗಳಿಂದಲೂ ) ವಿಟಜನಕ್ಕೆ ತೊಡರ್ವ ಚಾರಿಯೆನಿಪ (ಸಂಕೋಲೆ) ಸೂಳೆಗೇರಿಯಿಂ ವಿದಗ್ಧ (ಕಾಮತಪ್ತ) ಹೃದಯ ಹಾರಿಯಿಂ (ವಿಟ ಜನರು ಸಿಕ್ಕಿಕೊಳ್ಳುವ ಸಂಕೋಲೆಯಂತೆಯೂ ಪಂಡಿತರ ಹೃದಯವನ್ನೂ ಸೂರೆಗೊಳ್ಳುವಂತೆಯೂ ಇರುವ ಸೂಳೆಗೇರಿಯಿಂದಲೂ ) ಕನಕ ಗೋಪುರಂಗಳೊಳು ಅಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ (ಚಿನ್ನದ ಗೋಪುರದೊಳಗಿರುವ ಎರಡು ಕಡೆಯ ನೃತ್ಯಶಾಲೆಗಳಿಂದಲೂ ವಿಲಾಸವತಿಯರಾದ ಸ್ತ್ರೀಯರ ಸಮೂಹದಿಂದಲೂ)ಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ (ಸಂಭೋಗ ಸುಖಾತಿಶಯದಿಂದ ಕೂಡಿದ ಲತಾಗೃಹದಿಂದಲೂ), ಮಹಾ ವಿನೋದನು ಈಡದಿಂಕನಕಶೈಲಂ ಎನಿಸಿ ನೆಗೞ್ದ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ(ಲತಾಗೃಹದಿಂದಲೂ ಆರಾಮಗೃಹಗಳಿಂದಲೂ ಮೇರುಪರ್ವತವೆನಿಸಿಕೊಂಡು ಪ್ರಸಿದ್ಧಿಯಾಗಿರುವ ಅರಮನೆಗಳಿಂದಲೂ ಭಂಡಾರಗಳಿಂದಲೂ) (ತುಂಬಿತ್ತು)
೫೮:ಅರ್ಥ:-ಆ ಪಟ್ಟಣದ ಹೊರಭಾಗದಲ್ಲಿರುವ ಚಿನ್ನದಿಂದ ಮಾಡಿದ ಕೃತಕಪರ್ವತಗಳಿಂದಲೂ ಹಣ್ಣುಗಳಿಂದಲೂ ತುಂಬಿರುವ ಗಿಡಗಳಿಂದಲೂ ಹೂವು, ಕುಡಿ, ಚಿಗುರು, ಮೊಗ್ಗುಗಳಿಂದ ಕೂಡಿದ ತೋಟದ ಬಳ್ಳಿಚಪ್ಪರಗಳಿಂದಲೂ, ಹೂವಿನ ಪರಾಗದ ರಾಶಿಗಳಿಂದಲೂ ಆಕಾಶವೇ ಹರಿದು ಕೆಳಗೆ ಬಿದ್ದಿದೆಯೋ ಎನ್ನಿಸಿಕೊಳ್ಳುವ ವಿಶೇಷವಾದ ಕೊಳಗಳಿಂದಲೂ, ಹಾಡುತ್ತಿರುವ ಕೋಗಿಲೆಗಳಿಂದಲೂ, ತಾನಾಗಿ ಸುರಿಯುತ್ತಿರುವ ಸುರಗಿಯ ಹೂವಿನ ಮೊಗ್ಗುಗಳಿಗೆ ಮುತ್ತಿಕೊಂಡಿರುವ ದುಂಬಿಯ ಸಮೂಹದಿಂದಲೂ, ತೊದಲು ಮಾತನಾಡುತ್ತಿರುವ ಗಿಳಿಯ ಮರಿಗಳಿಂದಲೂ, ವೀರ ಶಬ್ದಮಾಡತ್ತಾ ಮುನ್ನಡೆಯುವ, ಮುಂದಕ್ಕೆ ನುಗ್ಗುತ್ತಿರುವ ಮದ್ದಾನೆಗಳಿಂದಲೂ, ಚಲಿಸುತ್ತಿರುವ ಕುದುರೆಗಳಿಂದಲೂ, ಲವಣಸಮುದ್ರವೇ ಬಳಸಿಕೊಂಡಂತೆ ಸುತ್ತುವರಿದಿರುವ ಕಂದಕಗಳ ಹರವಿನಿಂದಲೂ, ಎತ್ತರವಾದ ಚಿನ್ನದ ಗೋಡೆಯಿಂದಲೂ, ಒಳಭಾಗದಲ್ಲಿ ಕುಲಪರ್ವತವೆನಿಸಿಕೊಳ್ಳುವ ದೇವಸ್ಥಾನಗಳ ಐಶ್ವರ್ಯದಿಂದಲೂ, ಸ್ವರ್ಗವನ್ನೇ ಹಾಸ್ಯಮಾಡುವ ಹಾಗೆ ಚಲಿಸುತ್ತಿರುವ ಧ್ವಜಗಳಿಂದಲೂ, ದಾನಮಾಡುವವರ ಮನೆಗಳಿಂದಲೂ, ಕುಬೇರನ ಭವನಗಳು ಎನ್ನಿಸಿದ ಸಂಪದ್ಯುಕ್ತವಾದ ವೈಶ್ಯರ ಅಂಗಡಿಗಳಿಂದಲೂ, ವ್ಯಾಪಿಸಿಕೊಂಡಿರುವ ಚಪ್ಪರಗಳಿಂದಲೂ, ವಿಟ ಜನರು ಸಿಕ್ಕಿಕೊಳ್ಳುವ ಸಂಕೋಲೆಯಂತೆಯೂ ಪಂಡಿತರ (ಕಾಮತಪ್ತ?) ಹೃದಯವನ್ನೂ ಸೂರೆಗೊಳ್ಳುವಂತೆಯೂ ಇರುವ ಸೂಳೆಗೇರಿಯಿಂದಲೂ, ಚಿನ್ನದ ಗೋಪುರದೊಳಗಿರುವ ಎರಡು ಕಡೆಯ ನೃತ್ಯಶಾಲೆಗಳಿಂದಲೂ ವಿಲಾಸವತಿಯರಾದ ಸ್ತ್ರೀಯರ ಸಮೂಹದಿಂದಲೂ ಸಂಭೋಗ ಸುಖಾತಿಶಯದಿಂದ ಕೂಡಿದ ಲತಾಗೃಹದಿಂದಲೂ ಆರಾಮಗೃಹಗಳಿಂದಲೂ ಮೇರುಪರ್ವತವೆನಿಸಿಕೊಂಡು ಪ್ರಸಿದ್ಧಿಯಾಗಿರುವ ಅರಮನೆಗಳಿಂದಲೂ ಭಂಡಾರಗಳಿಂದಲೂ ತುಂಬಿತ್ತು.|| ೫೮||

ಕುರುವಂಶ ವಿವರ[ಸಂಪಾದಿಸಿ]

ವ|| ಅಂತು ಮೂಱುಲೋಕದ ಚೆಲ್ವೆಲ್ಲಮಂ ವಿಧಾತ್ರನು (ಬ್ರಹ್ಮನು) ಒಂದೆಡೆಗೆ ತೆರಳ್ಪಿದಂತೆ (ರಾಶೀ ಹಾಕಿದಂತೆ) ಸಮಸ್ತವಸ್ತುವಿಸ್ತಾರಹಾರಂ ಆಗಿರ್ದ ಹಸ್ತಿನಪುರವೆ ನಿಜವಂಶ ಅವಳಂಬಂ ಆಗೆ ನೆಗೞ್ದ ಭರತಕುಲತಿಲಕರ ವಂಶಾವತಾರಂ ಎಂತಾದುದು ಎಂದೊಡೆ-
ವಚನ:ಅರ್ಥ: ಮೂರುಲೋಕದ ಸೌಂದರ್ಯವನ್ನು ಬ್ರಹ್ಮನು ಒಂದು ಕಡೆ ರಾಶಿ ಮಾಡಿದ ಹಾಗೆ ಸಮಸ್ತ ವಸ್ತು ವಿಸ್ತಾರದಿಂದ ಮನೋಹರವಾಗಿದ್ದ ಹಸ್ತಿನಾಪಟ್ಟಣದಲ್ಲಿ ಭರತವಂಶಶ್ರೇಷ್ಠರು ರಾಜ್ಯಭಾರ ಮಾಡುತ್ತಿದ್ದರು. ಅವರ ಹುಟ್ಟು ಹೇಗಾಯಿತೆಂದರೆ:
ಕಂ|| ಜಳರುಹನಾಭನ ನಾಭಿಯ
ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ|
ಲ್ಲುಳಿತಾಳಿ ಜಲಜಮಾಯ್ತಾ
ಜಳಜದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ|| ೫೯||
೫೯.:ಪದವಿಭಾಗ-ಅರ್ಥ:[ಜಳರುಹನಾಭನ (ಜಲರುಹ-ಕಮಲ ನಾಭ ವಿಷ್ಣುವಿನ) ನಾಭಿಯಜಳ ಬುದ್ಬುದದೊಳಗೆ (ಜಲರುಹ- ಕಮಲದ ಹೊಕ್ಕಳ ಉಕ್ಕೇಳುವ ಜಲದಲ್ಲಿ) ಸುರಭಿ ಪರಿಮಳ ಮಿಳಿತ ಓಲ್ಲುಳಿತ ಅಳಿ (ದುಂಬಿಗಳಿಂದ ಕುಳಿತ) ಜಲಜಂ ಆಯ್ತು (ಕಮಲವು ಆಯ್ತು- ಹುಟ್ಟಿತು) ಆಜಳಜದೊಳು ಒಗೆದಂ ಹಿರಣ್ಯಗರ್ಭ ಬ್ರಹ್ಮಂ.]=
೫೯.ಅರ್ಥ:=[ಕಮಲ ನಾಭ ವಿಷ್ಣುವಿನ, ಕಮಲದ ಹೊಕ್ಕಳಲ್ಲಿ ಉಕ್ಕೇಳುವ ಜಲದಲ್ಲಿ ಪರಿಮಳದಿಂದ ಕೂಡಿದ ಚಲಿಸುವ ದುಂಬಿಗಳಿಂದ ಆವೃತವಾದ ಕಮಲವು ಹುಟ್ಟಿತು. ಆ ಕಮಲದಲ್ಲಿ ಹುಟ್ಟಿದನು ಹಿರಣ್ಯಗರ್ಭನೆಂಬ ಬ್ರಹ್ಮನು.]
ಕಮಲೋದ್ಭವನಮಳಿನ ಹೃ
ತ್ಕಮಲದೊಳೊಗೆದರ್ ಸುರೇಂದ್ರ ಧಾರಕರಾವಾ|
ಗಮಳರ್ ನೆಗೞ್ದಿರ್ದರ್ ಪುಲ
ಹ ಮರೀಚ್ಯತ್ರ್ಯಂಗಿರ ಪುಳಸ್ತ್ಯ ಕ್ರತುಗಳ್|| ೬೦
೬೦.:ಪದವಿಭಾಗ-ಅರ್ಥ:-[ಕಮಲೋದ್ಭವನ ಅಮಳಿನ (ಅಮಲ-ಪರಿಶುದ್ಧ) ಹೃತ್ಕಮಲದೊಳು ಒಗೆದರ್ (ಹುಟ್ಟಿದರು) ಸುರೇಂದ್ರ (ದೇವತೆಗಳ ಒಡೆಯ. ಸು-ರೆಂದ್ರ-ಕಿವಿ; ಕಮಂಡಲ?)ಧಾರಕರ್ (ಕಮಂಡಲ ಹಿಡಿದ ಋಷಿಗಳು) ವಾಗಮಳರ್ (ವಾಗ್ಮಿಗಳು) ನೆಗೞ್ದು ಇರ್ದರ್ (ಪ್ರಸಿದ್ಧರು) ಪುಲಹ, ಮರೀಚಿ, ಅತ್ರಿ, ಅಂಗಿರ, ಪುಳಸ್ತ್ಯ ಕ್ರತುಗಳ್ ಇದ್ದರು.]=
೬೦.ಅರ್ಥ:=[ಆ ಬ್ರಹ್ಮನ ಪರಿಶುದ್ಧ ಹೃದಯಕಮಲದಲ್ಲಿ ಕಮಂಡಲ ಹಿಡಿದ ಋಷಿಗಳು ಹುಟ್ಟಿದರು; ಅವರು ವಾಗ್ಮಿಗಳು, ಪ್ರಸಿದ್ಧರು, ಅವರು- ಪುಲಹ, ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ ಕ್ರತು, ಇವರು ಬ್ರಹ್ಮನ ಮಾನಸ ಪುತ್ರರು.]
ವಚನ|| ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದಱುವರ್ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯಂ ಸೂರ್ಯನಾತನಿಂದವ್ಯವಚ್ಛಿನ್ನಮಾಗಿ ಬಂದಂ ವಂಶ ಸೂರ್ಯವಂಶಮೆಂಬುದಾಯ್ತು-
ವ.:ಪದವಿಭಾಗ-ಅರ್ಥ:ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ ಸಂಭವದೊಳ್ ಪುಟ್ಟಿದಱು ಅವರ್ ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನು ಅನೇಕ ಭುವನ ಉತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನು ಅತನ ಮಗನು ಅವಾರ್ಯ ವೀರ್ಯಂ ಸೂರ್ಯನು ಆತನಿಂದ ಅವ್ಯವಚ್ಛಿನ್ನಮಾಗಿ (ವಂಸ ಕಡಿಯದೆ) ಬಂದಂ ವಂಶ ಸೂರ್ಯವಂಶಮೆಂಬುದಾಯ್ತು-]
ವ|ಅರ್ಥ: ಹಾಗೆ ಹಿರಣ್ಯಗರ್ಭ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಆರು ಜನ ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕ ಲೋಕಗಳ ಉತ್ಪತ್ತಿಯೆಂಬ ನಾಟಕಕ್ಕೆ ಸೂತ್ರಧಾರನಾದನು. ತಡೆಯಿಲ್ಲದೆ ಪರಾಕ್ರಮದಿಂದ ಕೂಡಿದವನು ಅವನ ಮಗ ಸೂರ್ಯನು. ಆತನಿಂದ ಏಕಪ್ರಕಾರವಾಗಿ ನಡೆದುಬಂದ ವಂಶ ಸೂರ್ಯವಂಶದಾಯಿತು.]
ಕಂ|| ಅತ್ರಿಯ ಪಿರಿಯ ಮಗಂ ಭುವ
ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ|
ಕ್ಷತ್ರಕುಲಪೂಜ್ಯನಮಳ ಚ
ರಿತ್ರಂ ಪ್ರೋದ್ದಾಮ ಸೋಮವಂಶಲಲಾಮಂ|| ೬೧|61|
೬೧.:ಪದವಿಭಾಗ-ಅರ್ಥ: [ಅತ್ರಿಯ ಪಿರಿಯ (ಹಿರಿಯ?) ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ (ಚಂದ್ರನು) ಸಕಲ ಕ್ಷತ್ರಕುಲಪೂಜ್ಯನು ಅಮಳ ಚರಿತ್ರಂ ಪ್ರೋದ್ದಾಮ (ಅತಿಶಯ) ಸೋಮವಂಶ ಲಲಾಮಂ (ಆಭರಣನು)]
೬೧/61.:ಅರ್ಥ:[ಅತ್ರಿಯ ಹಿರಿಯ ಮಗನು ಮೂರು ಲೋಕದಲ್ಲೂ ಸಂಗೀತದಲ್ಲಿ ಹಾಡಲ್ಪಟ್ಟ ಕೀರ್ತಿವಂತ ಚಂದ್ರನು; ಅವನು ಸಕಲ ಕ್ಷತ್ರಿಯ ಕುಲಕ್ಕೆ ಪೂಜ್ಯನು ಶುದ್ಧ ಚರಿತ್ರನು; ಅತಿಶಯವಾದ ಸೋಮವಂಶಕ್ಕೆ ಶ್ರೇಷ್ಠನು.]
ಆ ಸೋಮವಂಶಜರ್ ಪಲ
ರಾಸುಕರಂಬೆರಸು ನೆಗೞ್ದ ಜಸದಿಂ ಜಗಮಂ|
ಬಾಸಣಿಸಿ ಪೋದೊಡೆ ಅಕ ವಿ
ಳಾಸಂ ದೌಷ್ಯಂತಿ ಭರತನೆಂಬಂ ನೆಗೞ್ದಂ|| ೬೨||
೬೨.:ಪದವಿಭಾಗ-ಅರ್ಥ:[ಆ ಸೋಮವಂಶಜರ್ ಪಲರ್ (ಹಲವರು) ಅಸುಕರಂ ಬೆರಸು (ಅತಿಶಯ, ತೀವ್ರದಿಂದ ಕೂಡಿ) ನೆಗೞ್ದ ಜಸದಿಂ (ಉಂಟಾದ ಕೀರ್ತಿಯಿಂದ) ಜಗಮಂ ಬಾಸಣಿಸಿ (ಮುಚ್ಚಿ, ಬಿಟ್ಟು) ಪೋದೊಡೆ ಅಕ(ತಿ?)ವಿಳಾಸಂ (ಅತ್ಯಂತ ವಿಳಾಸದಿಂದ )ದೌಷ್ಯಂತಿ ಭರತನೆಂಬಂ ನೆಗೞ್ದಂ]=
೬೨.:ಅರ್ಥ:=[ಆ ಸೋಮವಂಶದಲ್ಲಿ ಹುಟ್ಟಿದ ಅನೇಕರು ಅತಿಶಯ ಪ್ರಸಿದ್ಧವಾದ ಕೀರ್ತಿಯಿಂದ ಲೋಕವನ್ನೆಲ್ಲ ಮುಚ್ಚಿ ಮರಣ ಹೊಂದಲಾಗಿ, ಅತ್ಯಂತ ವಿಳಾಸದಿಂದ ಕೂಡಿದ ದುಷ್ಯಂತನ ಮಗನಾದ ಭರತನೆಂಬುವನು ಪ್ರಸಿದ್ಧನಾದನು.]
ಚಾರುಚರಿತ್ರಂ ಭರತನ
ಪಾರಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋ|
ಭಾರಂ ಕುಲಮುಂ ಕಥೆಯುಂ
ಭಾರತಮೆನೆ ನೆಗೞ್ದನಂತು ನೆಗೞ್ವುದು ಭೂಪರ್|| ೬೩||

:೬೩.:ಪದವಿಭಾಗ-ಅರ್ಥ:{ಚಾರುಚರಿತ್ರಂ (ಉತ್ತಮ ನಡತೆಯುಳ್ಳ,) ಭರತನು ಅಪಾರಗುಣಂ ತನ್ನ ಪೆಸರೊಳು ಅಮರ್ದು ಎಸೆಯೆ ಯಶೋಭಾರಂ ಕುಲಮುಂ ಕಥೆಯುಂ ಭಾರತಂ ಎನೆ ನೆಗೞ್ದನು ಅಂತು ನೆಗೞ್ವುದು ಭೂಪರ್] =

೬೩.:-ಅರ್ಥ:=[ಸಚ್ಚರಿತ್ರನೂ ಅಪಾರಗುಣಯುತನೂ ಯಶಸ್ಸಿನ ಭಾರದಿಂದ ಕೂಡಿದವನೂ ಆದ ಭರತನು ತನ್ನ ಕುಲವೂ ಕಥೆಯೂ ತನ್ನ ಹೆಸರಿನಲ್ಲಿ ಸೇರಿ ಭಾರತವೆಂದು ಪ್ರಸಿದ್ಧಿಯಾಗುವ ಹಾಗೆ ಪ್ರಖ್ಯಾತನಾದನು. ಭರತಕುಲ-ವಂಶ, ಭಾರತ ಕಥೆ-ಹೀಗೆ)
ಭರತನನೇಕಾಧ್ವರ ಭರ
ನಿರತಂ ಜಸಮುೞಿಯೆ ಕೞಿಯೆ ಭೂಪರ್ ಪಲರಾ|
ದರಿಸಿದ ಧರಣೀಭರಮಂ
ಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ|| ೬೪||
೬೪.:ಪದವಿಭಾಗ-ಅರ್ಥ:[ಭರತನು ಅನೇಕ ಅಧ್ವರ ಭರನಿರತಂ ಜಸಮುೞಿಯೆ ಕೞಿಯೆ (ಸಾಯಲು) ಭೂಪರ್ ಪಲರು (ಹಲವರು) ಆದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನೆಂಬನು ಅಪ್ರತಿಮಬಲಂ]=
೬೪.:-ಅರ್ಥ:=[ಅನೇಕ ಯಜ್ಞ ಕಾರ್ಯಗಳಲ್ಲಿ ಆಸಕ್ತನಾದ ಭರತನು ಕೀರ್ತಿಶೇಷನಾಗಿ ಸಾಯಲು, ಅನೇಕ ರಾಜರು ಪ್ರೀತಿಸಿದ ಭೂಭೂರವನ್ನು (ರಾಜ್ಯಭಾರವನ್ನು) ಅಪ್ರತಿಮಬಲನಾದ ಪ್ರತಿಮನೆಂಬುವನು ಧರಿಸಿದರನು.]
ಅಂತಾ ಪ್ರತಿಮಂಗೆ ಸುತರ್
ಶಂತನು ಬಾಹ್ಲಿಕ ವಿನೂತ ದೇವಾಪಿಗಳೋ|
ರಂತೆ ಧರೆ ಪೊಗೞೆ ನೆಗೞ್ದರ
ನಂತ ಬಳರ್ ಪರಬಳ ಪ್ರಭೇದನ ಶೌರ್ಯರ್|| ೬೫||
೯೫.:ಪದವಿಭಾಗ-ಅರ್ಥ:[ಅಂತು ಆ ಪ್ರತಿಮಂಗೆ ಸುತರ್ ಶಂತನು, ಬಾಹ್ಲಿಕ, ವಿನೂತ, ದೇವಾಪಿಗಳು ಓರಂತೆ ಧರೆ ಪೊಗೞೆ ನೆಗೞ್ದರು ಅನಂತ ಬಳರ್ (ಬಲರು) ಪರಬಳ (ಶತ್ರು ಶೈನ್ಯ)ಪ್ರಭೇದನ ಶೌರ್ಯರ್]=
೬೫.:-ಅರ್ಥ:=[ಹಾಗೆ ಆ ಪ್ರತಿಮನಿಗೆ ಕೊನೆಯಿಲ್ಲದ ಬಲವುಳ್ಳವರೂ ಶತ್ರುಸೈನ್ಯವನ್ನು ವಿಶೇಷವಾಗಿ ಭೇದಿಸುವ ಶೌರ್ಯವುಳ್ಳವರೂ ಆದ ಬಾಹ್ಲಿಕ, ವಿನೂತ ದೇವಾಪಿಗಳು ಸಾಲಾಗಿ ಮಕ್ಕಳು.]
ವ|| ಅವರೊಳಗೆ ದೇವಾಪಿ ನವಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ ಪ್ರತಿಮನುಂ ಪ್ರತಾಪಪ್ರಸರಪ್ರಕಟ ಪಟುವಾಗಿ ಪಲವುಕಾಲಮರಸುಗೆಯ್ದು ಸಂಸಾರಾಸಾರತೆಗೆ ಪೇಸಿ ತಪೋವನಕ್ಕಭಿಮುಖನಾಗಲ್ಬಗೆದು-
ಪದವಿಭಾಗ-ಅರ್ಥ:[ಅವರೊಳಗೆ ದೇವಾಪಿ ನವಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ; ಪ್ರತಿಮನುಂ ಪ್ರತಾಪಪ್ರಸರಪ್ರಕಟ ಪಟುವಾಗಿ ಪಲವುಕಾಲಂ ಅರಸುಗೆಯ್ದು ಸಂಸಾರ ಅಸಾರತೆಗೆ ಪೇಸಿ ತಪೋವನಕ್ಕೆ ಅಭಿಮುಖನಾಗಲ್ ಬಗೆದು-]=
ಅರ್ಥ:ವ|| =[ಅವರಲ್ಲಿ ದೇವಾಪಿಯು ಹೊಸದಾದ ಯವ್ವನ ಪ್ರಾರಂಭದಲ್ಲಿಯೇ ತಪಸ್ಸು ಮಾಡುವುದರಲ್ಲಿ ಆಸಕ್ತನಾದನು. ಪ್ರತಿಮನೂ ಕೂಡ ಪ್ರತಾಪವನ್ನು ಪ್ರಕಟಿಸುವುದರಲ್ಲಿ ಸಮರ್ಥನಾಗಿ ಅನೇಕಕಾಲ ರಾಜ್ಯಭಾರಮಾಡಿ ಸಂಸಾರದ ಅಸಾರತೆಗೆ ಅಸಹ್ಯಪಟ್ಟು ತಪೋವನಕ್ಕೆ ಹೋದನು.]
ಕಂ|| ಕಂತು ಶರ ಭವನನಾ ಪ್ರಿಯ
ಕಾಂತಾ ಭ್ರೂವಿಭ್ರಮ ಗೃಹಾಗ್ರಹವಶದಿಂ|
ಭ್ರಾಂತಿಸದುಪಶಾಂತಮನಂ
ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ|| ೬೬||
೬೬.ಪದವಿಭಾಗ-ಅರ್ಥ:ಕಂತು ಶರ ಭವನನ (ಮನ್ಮಥನ ಬಾಣಗಳ ಮನೆ- ಬತ್ತಳಿಕೆಯ) ಆ ಪ್ರಿಯಕಾಂತಾ ಭ್ರೂವಿಭ್ರಮ (ಪ್ರಿಯವಾದ ಹೆಣ್ಣಿನ ಹುಬ್ಬೆಂಬ ಗ್ರಹ) ಗೃಹಾಗ್ರಹವಶದಿಂ (ಗ್ರಹದ ಆಗ್ರಹ-ಒತ್ತಾಯಕ್ಕೆ ) ಭ್ರಾಂತಿಸದೆ ಉಪಶಾಂತಮನಂ (ಬಹಳ ಶಾಂತ ಮನಸ್ಸಿನವನಾಗಿ) ಶಂತನುಗೆ ಇತ್ತಂ (ಕೊಟ್ಟನು) ಸಮಸ್ತ ರಾಜ್ಯಶ್ರೀಯಂ.
೬೬.ಅರ್ಥ:[ಮನ್ಮಥನ ಬಾಣಗಳಿಗೆ ವಾಸಸ್ಥಾನವಾದ ಬತ್ತಳಿಕೆಯ ಹಾಗಿದ್ದ ಆ ಪ್ರತಿಮನು ತನ್ನ ಪ್ರೀತಿಪಾತ್ರರಾದ ಸ್ತ್ರೀಯರ ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶನಾಗಿ (ವಶವಾಗದೆ) ಭ್ರಮೆಗೊಳ್ಳದೆ ಬಹಳ ಶಾಂತ ಮನಸ್ಸಿನವನಾಗಿ ಸಮಸ್ತರಾಜ್ಯ ಸಂಪತ್ತನ್ನೂ ಶಂತನುವಿಗೆ ಕೊಟ್ಟನು.]
ಶಂತನುಗಮಮಳ ಗಂಗಾ
ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ|
ಭ್ರಾಂತಿಯೊಳೆ ಬಂದು ನಿರ್ಜಿತ
ಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ|| ೬೭ ||
೬೭.ಪದವಿಭಾಗ-ಅರ್ಥ:[ಶಂತನುಗಂ ಅಮಳ (ಪವಿತ್ರ)ಗಂಗಾ ಕಾಂತೆಗಮಂ ಎಂಟನೆಯ ವಸು ವಸಿಷ್ಠನ ಶಾಪ ಭ್ರಾಂತಿಯೊಳೆ ಬಂದು ನಿರ್ಜಿತ (ಮೀರಿದ) ಕಂತುವು (ಮನ್ಮಥ) ಎನಲ್ಕೆ ಅಂತು ಪುಟ್ಟಿದಂ ಗಾಂಗೇಯಂ]=
೬೭.ಅರ್ಥ:=[ಶಂತನುವಿಗೂ ಪರಿಶುದ್ಧಳಾದ ಗಂಗಾದೇವಿಗೂ ಎಂಟನೆಯ ವಸುವು ವಸಿಷ್ಠನ ಶಾಪದಿಂದ ರೂಪಿನಲ್ಲಿ ಮನ್ಮಥನನ್ನು ಸೋಲಿಸುವ ಸೌಂದರ್ಯದಿಂದ ಕೂಡಿ ಭೀಷ್ಮನು ಹುಟ್ಟಿದನು]
ವ|| ಅಂತು ಭುವನಕ್ಕೆಲ್ಲಮಾಯಮುಮಳವುಮಱವುಮಣ್ಮುಂ ಪುಟ್ಟುವಂತೆ ಪುಟ್ಟಿ ನವಯೌವನಂ ನೆರೆಯೆ ನೆಯೆ-
ವ.ಪದವಿಭಾಗ-ಅರ್ಥ:[ಅಂತು ಭುವನಕ್ಕೆಲ್ಲಂ ಆ ಯಮುಂ (ಐಶ್ವರ್ಯ)ಅಳವುಂ (ಶಕ್ತಿ) ಅಱವುಂ (ಜ್ಙಾನ) ಅಣ್ಮುಂ (ಪ್ರತಾಪ) ಪುಟ್ಟುವಂತೆ ಪುಟ್ಟಿ ನವಯೌವನಂ ನೆರೆಯೆನೆರೆಯೆ-]=
ವ.ಅರ್ಥ:=[ಹೀಗೆ ಲೋಕಕ್ಕೆಲ್ಲ ಆ ಐಶ್ವರ್ಯ, ಶಕ್ತಿ, ಜ್ಙಾನ, ಪ್ರತಾಪಗಳೇ ಹುಟ್ಟುವಂತೆ ಹುಟ್ಟಿ ನವಯೌವನವಂತನಾಗಿ ಬೆಳೆಯಲು-]
ಶಾ|| ಸೌಲಪ್ರಾಂಶು ವಿಶಾಲಲೋಲನಯನಂ ಪ್ರೋದ್ಯದ್ವೃಷಸ್ಕಂಧನು
ನ್ಮೀಲತ್ಪಂಕಜವಕ್ತ್ರನಾಯತ ಸಮಗ್ರೋರಸ್ಥಳಂ ದೀರ್ಘ ಬಾ|
ಹಾಲಂಬಂ ಭುಜವೀರ್ಯವಿಕ್ರಮಯುತಂ ಗಂಗಾತ್ಮಜನ್ಮಂ ಜಯ
ಶ್ರೀಲೋಲಂ ಜಮದಗ್ನಿರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ|| ೬೮
ಪದವಿಭಾಗ-ಅರ್ಥ:ಸೌಲಪ್ರಾಂಶು (ಸಾಲ ಮರದಂತೆ ಎತ್ತರವುಳ್ಳ)ವಿಶಾಲಲೋಲನಯನಂ (ವಿಶಾಲ ಕಣ್ಣಿವನು), ಪ್ರೋದ್ಯದ್ ವೃಷಸ್ಕಂಧನು (ಎತ್ತರದ ಗೂಳಿಯ ಭುಜದವನು) ಉನ್ಮೀಲತ್ ಪಂಕಜವಕ್ತ್ರನು ಆಯತ (ಕಮಲದಂತೆ ಮುಖವುಳ್ಳವನು, ವಿಸ್ತಾರ) ಸಮಗ್ರೋರಸ್ಥಳಂ (ಆಯತ-ವಿಸ್ತಾರ ತುಂಬಿದ ಎದೆಯವನು) ದೀರ್ಘ ಬಾಹು ಆಲಂಬಂ (ಉದ್ದವಾದ ತೋಳಿಗೆ ಆಶ್ರಯನಾಗಿ) ಭುಜವೀರ್ಯವಿಕ್ರಮಯುತಂ (ಬಾಹುಗಳ ಶೌರ್ಯ ವಿಕ್ರಮನು ಆದ) ಗಂಗಾತ್ಮ ಜನ್ಮಂ ಜಯ ಶ್ರೀಲೋಲಂ (ಗಂಗೆಯ ಮಗ ಭೀಷ್ಮನು ಜಯವೆಂಬ ಲಕ್ಷ್ಮಿಯಲ್ಲಿ ಆಸಕ್ತನು ) ಜಮದಗ್ನಿರಾಮ ಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ (ಜಮದಗ್ನಿಯ ಮಗ ಪರಷುರಾಮ ಮುನಿಯ ಬಳಿ ಧನುರ್ವಿದ್ಯೆಯನ್ನು ಕಲಿತನು.)
೬೮.ಅರ್ಥ:=[ಸಾಲ ಮರದಂತೆ ಎತ್ತರವುಳ್ಳ, ವಿಶಾಲ ಕಣ್ಣಿವನು, ಎತ್ತರದ ಗೂಳಿಯ ಭುಜದವನು, ಕಮಲದಂತೆ ಮುಖವುಳ್ಳವನು, ವಿಸ್ತಾರವಾದ ತುಂಬಿದ ಎದೆಯವನು, ಉದ್ದವಾದ ತೋಳಿಗೆ ಆಶ್ರಯನಾಗಿ ಬಾಹುಗಳ ಶೌರ್ಯ ವಿಕ್ರಮನು ಆದ ಗಂಗೆಯ ಮಗ ಭೀಷ್ಮನು ಜಯವೆಂಬ ಲಕ್ಷ್ಮಿಯಲ್ಲಿ ಆಸಕ್ತನಾಗಿದ್ದು, ಜಮದಗ್ನಿಯ ಮಗ ಪರಷುರಾಮ ಮುನಿಯ ಬಳಿ ಧನುರ್ವಿದ್ಯೆಯನ್ನು ಕಲಿತನು.]
ವಚನ|| ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳಾರಿಂದಮೀತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾಪರಿಕಲಿತ ಕಂಠಲುಂಠನುಮಾಗಿ ಪ್ರಮಾಣನಿಜಭುಜದಂಡದಂಡಿತಾರಾತಿಮಂಡಲನುಮಾಗಿ ಗಾಂಗೇಯಂ ಸುಖದೊಳರಸು ಗೆಯ್ಯುತ್ತಿರ್ಪ ನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ತಾವತಿಯೆಂಬ ತೊರೆಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಣ್ಬೇಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ ಕ್ಷರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೋಪಳಲ್ಲಿಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗನೆಡೆಗೊಂಡು ಜಗುನೆಯಂ ಪಾಯ್ವಾಗಳುಗಿಬಗಿ ಮಾಡಿದಾಗಳದಱ ಕೈಯಿಂ ಬರ್ದುಂಕಿ ತೊರೆಯೊಳಗೆ ಬಿೞ್ದೊಡದನೊಂದು ಬಾಳೆವಿನ್ನುಂಗಿ ಗರ್ಭಮಂ ತಾಳ್ದಿದೊಡೊಂದು ದಿವಸಮಾ ಮೀನನೊರ್ವ ಜಾಲಗಾಱಂ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಱಿದೊಡದಂ ವಿದಾರಿಸಿ ನೋೞ್ಪನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸ್ಯಗಂಯುಂ ಮತ್ಸ ಗಂಧನುಮೆಂದು ಪೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮೆ ಬ್ರಹ್ಮರ ಮೊಮ್ಮನಪ್ಪ ಪರಾಶರ ಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊರೆಯ ತಡಿಯೊಳೋಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡೆಮ್ಮನೀ ತೊರೆಯಂ ಪಾಯಿಸೆಂಬುದುಂ ಸಾಸಿರ್ವರೇಱಿದೊಡಲ್ಲದೀಯೋಡಂ ನಡೆಯದೆಂಬುದುಮಾಮನಿಬರ ಬಿಣ್ಪುಮಪ್ಪೆ ಮೇಱಿಸಂದೊಡಂತೆ ಗೆಯ್ವೆನೆಂದೋಡಮೇಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನೞ್ಕರ್ತು ನೋಡಿ-
ಪದವಿಭಾಗ-ಅರ್ಥ:ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳು (ಮೊದಲೆ ಬಿಲ್ಲು ವಿದ್ಯೆಯಲ್ಲಿ) ಆರಿಂದಂ ಈತನೆ (ಎಲ್ಲರಿಗಿಂತ ಇವನೇ) ಭಾರ್ಗವನೆನಿಸಿದ (ಉತ್ತಮ ಬಿಲ್ಲುಗಾರನೆನಿಸಿದ) ಭಾರ್ಗವಂಗೆ ತಾನೆ ಭಾರ್ಗವನಾಗಿ (ತಾನೇ ಗುರುವಾಗಿ) ಯುವರಾಜ ಕಂಠಿಕಾ (ಯುವರಾಜ ಪದವಿಗೆ) ಪರಿಕಲಿತ ಕಂಠಲುಂಠನುಮಾಗಿ (ಸೇರಿದ, ಕಂಠದ ಅಲುಗಾಟವುಳ್ಳವನಾಗಿ ) ಪ್ರಮಾಣ ನಿಜಭುಜದಂಡ ದಂಡಿತ ಆರಾತಿ (ಶತ್ರು) ಮಂಡಲನುಮಾಗಿ (ಉದ್ದ ಗಾತ್ರದ ತನ್ನ ಭುಜದ ದಂಡದಿಂದ ಶತ್ರುಸೈನ್ಯವನ್ನು ದಂಡಿಸಿದವನಾಗಿ,) ಗಾಂಗೇಯಂ ಸುಖದೊಳು ಅರಸು ಗೆಯ್ಯುತ್ತಿರ್ಪ ಅನ್ನೆಗಂ(ಭೀಷ್ಮನು ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು,) , ಆ ಸಮಯದಲ್ಲಿ ಇತ್ತ ಗಂಗಾದೇಶದೊಳು ಉಪರಿಚರವಸುವೆಂಬ ಅರಸಂ ಮುಕ್ತಾವತಿಯೆಂಬ ತೊರೆಯೊಳ್ (ನದಿಯಲ್ಲಿ) ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನು ಆತಂ ಕಂಡು ಕಣ್ಬೇಟಂಗೊಂಡು (ಮೋಹಗೊಂಡು) ಮದುವೆಯಂ ನಿಂದು ಒಂದು ದಿವಸಂ ಇಂದ್ರನ ಓಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದೆ ಆಕೆಯಂ ನೆನೆದು ಇಂದ್ರಿಯ ಕ್ಷರಣೆಯಾದೊಡೆ ಅದನೊಂದು ಕದಳೀಪತ್ರದೊಳ್ ಪುದಿದು (ಸುತ್ತಿ) ತನ್ನ ನಡಪಿದ (ಸಾಕಿದ) ಗಿಳಿಯ ಕೈಯೊಳು ಓಪಳಲ್ಲಿಗೆ (ಪ್ರಿಯಳಲ್ಲಿಗೆ) ಅಟ್ಟಿದೊಡೆ (ಕಳಿಸಿದರೆ) ಅದಂ ತರ್ಪರೆ ಗಿಳಿಯನು ಒಂದು ಗಿಡುಗನು ಎಡೆಗೊಂಡು (ಆಕ್ರಮಿಸಿ) ಜಗುನೆಯಂ ಪಾಯ್ವಾಗಳು (ಯಮುನೆಯನ್ನು ದಾಟುವಾಗ) ಉಗಿಬಗಿ ಮಾಡಿದಾಗಳು (ಉಗುರಿನಿಂದ ಪರಚಿದಾಗ) ಅದಱ ಕೈಯಿಂ ಬರ್ದುಂಕಿ (ಜಾರಿ )ತೊರೆಯೊಳಗೆ ಬಿೞ್ದೊಡೆ ಅದನೊಂದು ಬಾಳೆವಿನ್ನುಂಗಿ (ಬಾಳೆ ಮೀನು ನುಂಗಿ) ಗರ್ಭಮಂ ತಾಳ್ದಿದೊಡೆ ಒಂದು ದಿವಸಮ್ ಆಮೀನನು(ಮೀನನ್ನು) ಓರ್ವ ಜಾಲಗಾಱಂ ಜಾಲದೊಳ್ (ಬೆಸ್ತನ ಬಲೆಯಲ್ಲಿ )ಪಿಡಿದು ಅಲ್ಲಿಗೆ ಅರಸಪ್ಪ ದಾಶನಲ್ಲಿಗೆ ಉಒಯ್ದು ತೋಱಿದೊಡೆ (ತೋರಿಸಿದಾಗ) ಅದಂ ವಿದಾರಿಸಿ ನೋೞ್ಪ ಅನ್ನೆಗಂ (ಅದನ್ನು ಸೀಳಿ ನೋಡಿದಾಗ), ಬಾಳೆಯ ಗರ್ಭದೊಳು ಇರ್ದ (ಇದ್ದ) ಬಾಳೆಯಂ (ಬಾಲೆಯನ್ನು) ಬಾಳನುಮಂ (ಬಾಲಕನನ್ನು) ಕಂಡು ಎತ್ತಿಕೊಂಡು ಮತ್ಸ್ಯಗಂಯುಂ ಮತ್ಸ ಗಂಧನುಮೆಂದು (ಮತ್ಸ್ಯಗಂಧಿ ಮತ್ತು ಮತ್ಸ್ಯಗಂದನೆಂದು) ಪೆಸರನಿಟ್ಟು ನಡಪಿ (ಸಲಹಿ) ಯಮುನಾನದೀತೀರದೊಳು ಇರ್ಪನ್ನೆಗಂ (ರುವಾಗ) ಅಲ್ಲಿಗೆ ಒರ್ಮೆ (ಒಮ್ಮೆ) ಬ್ರಹ್ಮರ ಮೊಮ್ಮನಪ್ಪ ಬ್ರಹ್ಮನ ಮೊಮ್ಮಗನಾದ) ಪರಾಶರ ಮುನೀಂದ್ರನು ಉತ್ತರಾಪಥಕ್ಕೆ (ಉತ್ತರದೇಶಕ್ಕೆ) ಪೋಗುತ್ತುಂ ಬಂದು ತೊರೆಯ (ನದಿಯ) ತಡಿಯೊಳು ಓಡಮಂ (ದಡದಲ್ಲಿ ದೋಣಿಯನ್ನು) ನಡೆಯಿಸುವ ಮತ್ಸ್ಯಗಂಧಿಯಂ (ಮತ್ಸ್ಯಗಂಧಿಯನ್ನು) ಕಂಡು ಎಮ್ಮನು ಈ ತೊರೆಯಂ ಪಾಯಿಸೆಂಬುದುಂ (ನಮ್ಮನ್ನು ಈ ನದಿಯನ್ನು ದಾಟಿಸು ಎಂದು ಕೇಳಿದನು.) ಸಾಸಿರ್`ವರು ಏಱಿದೊಡೆ ಅಲ್ಲದು ಈ ಯೋಡಂ ನಡೆಯದೆಂಬುದುಂ (ಸಾವಿರ ಜನರು ಹತ್ತದ ಹೊರತು ಈ ದೋಣಿಯು ನಡೆಯುವುದಿಲ್ಲ ಎಂದಳು.) ಮಾಮ್ ಅನಿಬರ ಬಿಣ್ಪುಮಪ್ಪೆಂ ಏಱಿಸು ಎಂದೊಡೆ(ನಾವು ಅಷ್ಟು ಜನರ ಭಾರವಾಗುತ್ತೇವೆ ಏರಿಸು/ ದೋಣಿ ನೆಡೆಸು ಎಂದನು) ಅಂತೆ ಗೆಯ್ವೆನು ಎಂದೋಡೆ ಏಱಿಸಿ (ದೋಣಿಯನ್ನು) ನಡೆಯಿಸುವಲ್ಲಿ ದಿವ್ಯಕನ್ನೆಯನು ಅೞ್ಕರ್ತು (ಪ್ರೀತಿಸಿ) ನೋಡಿ-(ಹಾಗೆಯೇ ಮಾಡುತ್ತೇನೆ ಎಂದು ಹತ್ತಿಸಿಕೊಂಡು ನಡೆಸುತ್ತಿರುವಾಗ ಆ ದಿವ್ಯಕನ್ಯೆಯನ್ನು ಪ್ರೀತಿಸಿ ನೋಡಿ)
ಅರ್ಥ:ವಚನ:ಹಾಗೆ ಕಲಿತು ಮೊದಲೆ ವಿದ್ಯೆಯಲ್ಲಿ ಎಲ್ಲರಿಗಿಂತ ಇವನೇ ಉತ್ತಮ ಬಿಲ್ಲುಗಾರನೆನಿಸಿದ; ಭಾರ್ಗವನಿಗೆ ತಾನೇ ಗುರುವಾಗಿ, ಯುವರಾಜ ಪದವಿಗೆ ಸೇರಿದ, ಕಂಠದ ಅಲುಗಾಟವುಳ್ಳವನಾಗಿ ಉದ್ದ ಗಾತ್ರದ ತನ್ನ ಭುಜದ ದಂಡದಿಂದ ಶತ್ರುಸೈನ್ಯವನ್ನು ದಂಡಿಸಿದವನಾಗಿ, ಭೀಷ್ಮನು ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಆ ಸಮಯದಲ್ಲಿ ಇತ್ತ ಗಂಗಾಪ್ರದೇಶದಲ್ಲಿ ಉಪರಿಚರವಸುವೆಂಬ ಅರಸನು ಮುಕ್ತಾವತಿಯೆಂಬ ನದಿಯಲ್ಲಿ ವಿಶ್ರಮಿಸಿದಾಗ ಕೋಳಾಹಳವೆಂಬ ಪರ್ವತಕ್ಕೆ ಹುಟ್ಟಿದ ಗಿರಿಜೆಯೆಂಬ ಕನ್ನೆಯನ್ನು, ಆತನು ಕಂಡು ಮೋಹಗೊಂಡು ಮದುವೆಯನ್ನು ಮಾಡಿಕೊಂಡನು. ಒಂದು ದಿವಸ ಇಂದ್ರನ ಓಲಗಕ್ಕೆ ಹೋಗಿ ಋತುಕಾಲಪ್ರಾಪ್ತೆಯಾಗಿದ್ದ ಪ್ರಿಯಳಲ್ಲಿಗೆ ಬರಲು ಆಗದೆ, ಆಕೆಯನ್ನು ನೆನೆದು ಇಂದ್ರಿಯ ಸ್ಕಲನವಾದಾಗ ಅದನ್ನು ಒಂದು ಬಾಳೆಎಲೆಯಲ್ಲಿ ಸುತ್ತಿ, ತನ್ನ ಸಾಕಿದ ಗಿಳಿಯ ಕೈಯಲ್ಲಿ ಪ್ರಿಯಳಲ್ಲಿಗೆ ಕಳಿಸಿದರೆ; ಅದನ್ನು ತರವಾಗ ಗಿಳಿಯನ್ನು ಒಂದು ಗಿಡುಗನು ಆಕ್ರಮಿಸಿ ಯಮುನೆಯನ್ನು ದಾಟುವಾಗ ಉಗುರಿನಿಂದ ಪರಚಿದಾಗ ಅದರ ಕೈಯಿಂದ ಜಾರಿ ನದಿಯೊಳಗೆ ಬಿದ್ದಾಗ ಅದನ್ನು ಒಂದು ಬಾಳೆಮೀನು ನುಂಗಿ ಗರ್ಭಧರಿಸಿತು. ಒಂದು ದಿವಸ ಮೀನನ್ನು ಒಬ್ಬ ಬೆಸ್ತನು ಬಲೆಯಲ್ಲಿ ಹಿಡಿದು ಅಲ್ಲಿಗೆ ಅರಸನಾಗಿದ್ದ ದಾಶನ ಬಳಿಗೆ ವಯ್ದು ತೋರಿಸಿದನು. ಅದನ್ನು ಸೀಳಿ ನೋಡಿದಾಗ ಬಾಳೆಯ ಗರ್ಭದಲ್ಲಿ ಇದ್ದ ಮಗು-ಬಾಲೆಯನ್ನು ಬಾಲಕನನ್ನು ಕಂಡು ಎತ್ತಿಕೊಂಡು ಮತ್ಸ್ಯಗಂಧಿ ಮತ್ತು ಮತ್ಸ್ಯಗಂದನೆಂದು ಹೆಸರನಿಟ್ಟು ಸಲಹಿ) ಯಮುನಾ ನದೀತೀರದಲ್ಲಿ ಇದ್ದನು. ಹೀಗಿರುವಾಗ ಅಲ್ಲಿಗೆ ಒಮ್ಮೆ ಬ್ರಹ್ಮನ ಮೊಮ್ಮಗನಾದ ಪರಾಶರ ಮುನೀಂದ್ರನು ಉತ್ತರದೇಶಕ್ಕೆ ಹೋಗಲು ಬಂದು ನದಿಯ ದಡದಲ್ಲಿ ದೋಣಿಯನ್ನು ನಡೆಯಿಸುವ ಮತ್ಸ್ಯಗಂಧಿಯನ್ನು ಕಂಡು, ನಮ್ಮನ್ನು ಈ ನದಿಯನ್ನು ದಾಟಿಸು ಎಂದು ಕೇಳಿದನು. ಅವಳು ಸಾವಿರ ಜನರು ಹತ್ತದ ಹೊರತು ಈ ದೋಣಿಯು ನಡೆಯುವುದಿಲ್ಲ ಎಂದಳು. ಆಗ ಋಷಿಯು ನಾವು ಅಷ್ಟು ಜನರ ಭಾರವಾಗುತ್ತೇವೆ ಏರಿಸು/ ದೋಣಿ ನೆಡೆಸು ಎಂದನು. ಹಾಗೆಯೇ ಮಾಡುತ್ತೇನೆ ಎಂದು ಹತ್ತಿಸಿಕೊಂಡು ನಡೆಸುತ್ತಿರುವಾಗ ಆ ದಿವ್ಯಕನ್ಯೆಯನ್ನು ಪ್ರೀತಿಸಿ ನೋಡಿ;

ವ್ಯಾಸ ಅಥವಾ ಕೃಷ್ಣದ್ವೈಪಾಯನನ ಜನನ[ಸಂಪಾದಿಸಿ]

ಮ|| ಮನದೊಳ್ ಸೋಲ್ತು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತೆ ಯೋ
ಜನ ಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ|
ಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ
ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೇಗೆಯ್ಡೊಡಂ ತೀರದೇ|| ೬೯||
ಪದ್ಯ-೬೯:ಪದವಿಭಾಗ-ಅರ್ಥ:ಮ|| ಮನದೊಳ್ ಸೋಲ್ತು ಮುನೀಂದ್ರನು (ಪರಾಶರ ಮುನಿಶ್ರೇಷ್ಠನು ) ಆಕೆಯ ಒಡಲ ಈ ದುರ್ಗಂಧ ವೋಪಂತೆ (ಆಕೆಯ ದೇಹದ ಕೆಟ್ಟ ವಾಸನೆ ಹೋಗುವಂತೆ ಮಾಡಿ) ಯೋಜನಗಂಧಿತ್ವಮನು ಇತ್ತು (ಒಂದು ಯೋಜನ ದೂರದವರೆಗೂ ಇರುವ ಸುವಾಸನೆಯನ್ನು ಕೊಟ್ಟು) ಕಾಂಡಪಟದಂತೆ ಇರ್ಪ ಅನ್ನೆಗಂ ಮಾಡಿ ಮಂಜನು (ಮಂಜನ್ನು ತೆರೆಯ ಹಾಗೆ ಮಾಡಿ), ಅಲಂಪು ಅೞ್ಕಱನೀಯೆ (ಅಳ್ಕರ-ಪ್ರೀತಿ) ಕೂಡುವ ಎಡೆಯೊಳ್ (ಸಂತೋಷವು ಪ್ರೀತಿಯನ್ನುಂಟು ಮಾಡಲು - ಬೆರೆಯುವ ಅಥವಾ ಸಮಾಗಮ ಸಮಯದಲ್ಲಿ) ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದನು (ಜ್ಞಾನದ ಆಕಾರವೇ ಆಗಿರುವ ಮಹಾ ಮುನಿಯು ಹುಟ್ಟಿದನು.) ಅಂತು ದಿವ್ಯಮುನಿಗಳ್ಗೆ ಏಗೆಯ್ಡೊಡಂ ತೀರದೇ(ಶ್ರೇಷ್ಠರಾದ ಋಷಿಗಳಿಗೆ ಏನು ಮಾಡಿದರೂ ತೀರದೇ - ನೆಡೆಯುತ್ತದೆ - ದೋಷವಿಲ್ಲ! )
ಪದ್ಯ-೬೯:ಅರ್ಥ:ಮ|| ಪರಾಶರ ಮುನಿಶ್ರೇಷ್ಠನು ಆಕೆಯ ದೇಹದ ಕೆಟ್ಟ ವಾಸನೆ ಹೋಗುವಂತೆ ಮಾಡಿ, ಒಂದು ಯೋಜನ ದೂರದವರೆಗೂ ಇರುವ ಸುವಾಸನೆಯನ್ನು ಕೊಟ್ಟು ಮಂಜನ್ನು ತೆರೆಯ ಹಾಗೆ ಮಾಡಿ, ಬೆರೆಯುವ ಅಥವಾ ಸಮಾಗಮ ಸಮಯದಲ್ಲಿ ಸಂತೋಷವು ಪ್ರೀತಿಯನ್ನುಂಟು ಮಾಡಲಾಗಿ, ಜ್ಞಾನದ ಆಕಾರವೇ ಆಗಿರುವ ಮಹಾ ಮುನಿಯು ಹುಟ್ಟಿದನು. ಶ್ರೇಷ್ಠರಾದ ಋಷಿಗಳಿಗೆ ಏನು ಮಾಡಿದರೂ ತೀರದೇ - ನೆಡೆಯುತ್ತದೆ - ದೋಷವಿಲ್ಲ! ಅಲ್ಲವೇ! (ಕವಿಯ ಮಾತು)
ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ ಕಪಾಳ್ವ ಹಸ್ತನುಂ ಕೃಷ್ಣಮೃಗ ತ್ವಕ್ವ್ವ ರಿಧಾನನುಮಾಗೆ ವ್ಯಾಸಭಟ್ಟಾರಕಂ ಪುಟ್ಟುವುದು ಮಾತನನೊಡಗೊಂಡು ಸತ್ಯವತಿಗೆ ಪುನ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್-
ವ.:ಪದವಿಭಾಗ-ಅರ್ಥ:ವ|| ಅಂತು (ಹಾಗೆ) ನೀಲಾಂಬುದ ಶ್ಯಾಮನುಂ (ನೀಲಮೋಡದ ಹಾಗೆ ಕಪ್ಪು ಬಣ್ಣದ) ಕನಕ ಪಿಂಗಳ ಜಟಾಬಂಧಕಳಾಪನುಂ (ಹಳದಿ ಕೆಂಪು ಮಿಶ್ರ ಬಣ್ಣದ ಜಟೆಯ ಗುಚ್ಚಗಳುಳ್ಳ), ದಂಡ ಕಪಾಳ್ವ ಹಸ್ತನುಂ (ಕೈಯಲ್ಲಿ ಯೋಗದಂಡವನ್ನೂ ಕಮಂಡಲುವನ್ನೂ ಹಿಡಿದವನನ್ನು) ಕೃಷ್ಣಮೃಗ ತ್ವಕ್ವ್ವ ರಿಧಾನನುಂ ಆಗೆ (ಕಪ್ಪು ಜಿಂಕೆಯಚರ್ಮದ ಹೊದಿಕೆಯುಳ್ಲವನೂ ಆದ) ವ್ಯಾಸಭಟ್ಟಾರಕಂ ಪುಟ್ಟುವುದುಂ (ಪೂಜ್ಯನಾದ ವ್ಯಾಸ ಋಷಿಯು ಹುಟ್ಟುತ್ತಲು,) ಆತನನೊಡಗೊಂಡು ಸತ್ಯವತಿಗೆ ಪುನ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನು ಇತ್ತಲ್-(ಆ ಋಷಿಮಗನನ್ನು ಕರೆದುಕೊಂಡು ಸತ್ಯವತಿಗೆ ಪುನಃ ಕನ್ಯಾಭಾವವನ್ನು ದಯಮಾಡಿ ಕೊಟ್ಟು ಪರಾಶರ ಮುನಿಯು ಹೊರಟು ಹೋದನು. ಇತ್ತಲಾಗಿ )
ವ.:ಅರ್ಥ:ವ|| ಹಾಗೆ ನೀಲಮೋಡದ ಹಾಗೆ ಕಪ್ಪು ಬಣ್ಣದ ಹಳದಿ ಕೆಂಪು ಮಿಶ್ರ ಬಣ್ಣದ ಜಟೆಯ ಗುಚ್ಚಗಳುಳ್ಳ, ಕೈಯಲ್ಲಿ ಯೋಗದಂಡವನ್ನೂ ಕಮಂಡಲುವನ್ನೂ ಹಿಡಿದ ಕಪ್ಪು ಜಿಂಕೆಯಚರ್ಮದ ಹೊದಿಕೆಯುಳ್ಲವನೂ ಆದ ಪೂಜ್ಯನಾದ ವ್ಯಾಸಋಷಿಯು ಹುಟ್ಟುತ್ತಲು, ಆ ಋಷಿಮಗನನ್ನು ಕರೆದುಕೊಂಡು ಸತ್ಯವತಿಗೆ ಪುನಃ ಕನ್ಯಾಭಾವವನ್ನು ದಯಮಾಡಿ ಕೊಟ್ಟು ಪರಾಶರ ಮುನಿಯು ಹೊರಟು ಹೋದನು. ಇತ್ತಲಾಗಿ,

ಶಂತನು ಮತ್ತು ಯೋಜನಗಂಧಿ ಸತ್ಯವತಿ ವಿವಾಹ[ಸಂಪಾದಿಸಿ]

ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೊಱಲ್ತರ್ಪಂ ಪಳಂಚಲೈ ತ
ನ್ಮೃ ಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು ಕಂಡೋಲ್ದು ನ|
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀನ್ ಬಾ ಪೋಪಮೆಂದಂಗೆ ಮೆ
ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ|| ೭೦
ಪದ್ಯ ೭೦:ಪದವಿಭಾಗ-ಅರ್ಥ:ಮೃಗಯಾವ್ಯಾಜದಿಂ ಒರ್ಮೆ ಶಂತನು (ಶಂತನು ಮೃಗಬೇಟೆಯ ಕಾರಣದಿಂದ )ತೊಱಲ್ತರ್ಪಂ (ಸುತ್ತಾಡಿ ಬರುತ್ತಿರಲು,)ಪಳಂಚಲೈ (ತಾಗು, ಮುಟ್ಟು) ತನ್ಮೃ ಗಶಾಬಾಕ್ಷಿಯ (ಆ ಜಿಂಕೆಮರಿಯಕಣ್ಣಿನಂತಿರುವ ಯೋಜನಗಂಧಿಯ) ಕಂಪು ತಟ್ಟಿ (ಸುವಾಸನೆಯು ಅವನನ್ನು ಮುಟ್ಟಲು) ಮಧುಪಂಬೋಲ್ ಸೋಲ್ತು (ದುಂಬಿಯ ಹಾಗೆ ಸೋತುಹೋಗಿ) ಕಂಡೋಲ್ದು (ಕಂಡು ಪ್ರೀತಿಸಿ) ನಲ್ಮೆಗೆ ದಿಬ್ಯಂಬಿಡಿವಂತೆವೋಲ್ (ಪ್ರೀತಿಗೆ ಪ್ರಾಮಾಣಿಸುವಂತೆ) ಪಿಡಿದು ನೀನ್ ಬಾ ಪೋಪಂ ಎಂದಂಗೆ (ಅವಳ ಕೈ ಹಿಡಿದು, ನೀನು ಬಾ ಹೋಗೊಣ ಎಂದವನಿಗೆ, ಅವಳು) ಮೆಲ್ಲಗೆ (ತತ್ ಕನ್ಯಕೆ) ತ್ಕನ್ಯಕೆ ನಾಣ್ಚಿ (ಆ ಕನ್ಯೆ ನಾಚಿಕೊಂಡು )ಬೇಡುವೊಡೆ ನೀವು ಎಮ್ಮ ಅಯ್ಯನಂ ಬೇಡಿರೇ (ನೀವು ನನ್ನನ್ನು ಬಯಸುವುದಾದರೆ ನನ್ನ ತಂದೆಯನ್ನು ಕೇಳಿರಿ ಎಂದಳು.)|| ೭೦||
ಪದ್ಯ ೭೦:ಅರ್ಥ:ಒಂದು ದಿನ ಬೇಟೆಯ ನೆಪದಿಂದ ಸುತ್ತಾಡಿ ಬರುತ್ತಿರುವಾಗ ಶಂತನುವು, ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಧಿಯ ಸುವಾಸನೆಯು ಅವನನ್ನು ಮುಟ್ಟಲಾಗಿ, ಆದರಿಂದ ಅವನು ದುಂಬಿಯ ಹಾಗೆ ಸೋತು ಹೋಗಿ ಅವಳನ್ನು ಪ್ರೀತಿಸಿದನು. ತನ್ನ ಪ್ರೀತಿಗೆ ಸಾಕ್ಷಿಯಾಗಿ ದಿವ್ಯವನ್ನು ಹಿಡಿಯುವ ಹಾಗೆ ಅವಳ ಕೈಹಿಡಿದು ‘ನೀನು ಬಾ ಹೋಗೋಣ’ ಎನ್ನಲು ಆ ಕನ್ಯೆಯು ನಾಚಿಕೊಂಡು ಮೆಲ್ಲಗೆ, 'ನೀವು ನನ್ನನ್ನು ಬಯಸುವುದಾದರೆ ನಮ್ಮ ತಂದೆಯನ್ನು ಕೇಳಿರಿ,' ಎಂದಳು.
ವಚನ||ಎಂಬುದುಂ ಶಂತನು ಪೊೞಲ್ಗೆ ಮಗುೞ್ದು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡೆವೆಮ್ಮ ಮಗಳ್ಗೆ ಪುಟ್ಟದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವ ತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-
ಪದವಿಭಾಗ-ಅರ್ಥ:ವ||ಎಂಬುದುಂ ಶಂತನು ಪೊೞಲ್ಗೆ (ನಗರಕ್ಕೆ) ಮಗುೞ್ದು ವಂದು (ಹಿಂತಿರುಗಿಬಂದು) ಅವರ ಅಯ್ಯನಪ್ಪ (ತಂದೆ) ದಾಶರಾಜನಲ್ಲಿಗೆ ಕೂಸಂ ಬೇಡೆ (ಕನ್ಯೆಯನ್ನು ಮದುವೆ ಮಾಡಿಕೊಡಬೇಕೆಂದು ಕೇಳಲು) ಪೆರ್ಗಡೆಗಳನು ಅಟ್ಟಿದೊಡೆ (ಹೆಗ್ಗಡೆಗಳನ್ನು ಕಳಿಸಿದಾಗ) ಗಾಂಗೇಯಂ (ಭೀಶ್ಮನು) ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಂ ಇರ್ದಂತೆ ಎನ್ನ ಮಗಳಂ ಕುಡೆವೆಮ್ಮ (ಕುಡೆವು - ಕೊಡುವುದಿಲ್ಲ); ಮಗಳ್ಗೆ ಪುಟ್ಟದಾತಂ ರಾಜ್ಯಕ್ಕೆ ಒಡೆಯನುಂ, ಪಿರಿಯ ಮಗನುಂ ಕ್ರಮಕ್ಕೆ ಅರ್ಹನುಂ ಅಪ್ಪೊಡೆ, ಕುಡುವೆಂ ಎನೆ ತದ್ವ ತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-
ವಚನ:ಅರ್ಥ:-ಶಂತನು ಪಟ್ಟಣಕ್ಕೆ ಹಿಂದಿರುಗಿಬಂದು ಅವಳ ತಂದೆಯಾದ ದಾಶರಾಜನಲ್ಲಿಗೆ ಕನ್ಯೆಯನ್ನು ಬೇಡುವುದಕ್ಕಾಗಿ ಹೆಗ್ಗಡೆಗಳನ್ನು ಕಳುಹಿಸಿದಾಗ. ದಾಶರಾಜನು ಭೀಷ್ಮನು ರಾಜನ ಹಿರಿಯಮಗನು ಕ್ರಮಪ್ರಾಪ್ತವಾದ ಹಕ್ಕುದಾರಿಕೆಗೆ ಅರ್ಹನು. ತನ್ನ ಮಗಳಿಗೆ ಹುಟ್ಟಿದವನು ರಾಜ್ಯಕ್ಕೆ ಒಡೆಯನಾಗುದಾದರೆ ಕೊಡುವೆನು, ಎಂದನು,ಆ ಸಮಾಚಾರವನ್ನು ಶಂತನು ಮಂತ್ರಿಗಳಿಂದ ಕೇಳಿ,-
ಮ|| ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನಿರ್ದಂತೆ ನೋ|
ಡ ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಮಿತ್ತಂ ನಿಜ|
ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ
ಕಮನಾವರ್ತಿಸೆ ಬೞ್ದೊಡೆನ್ನ ಕುಲಮುಂ ತಕ್ಕೂರ್ಮೆಯುಂ ಮಾಸದೇ|| ೭೧||
ಪದ್ಯ-೭೧:ಪದವಿಭಾಗ-ಅರ್ಥ:ಕ್ರಮಮಂ (ಪರಂಪರಾಗತ ಪದವಿಯನ್ನು) ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನು ಇರ್ದಂತೆ (ಪರಾಕ್ರಮದಿಂದ ರಾಜ್ಯವನ್ನು ತಾಳುವ- ನೋಡಿಕೊಳ್ಳುವ ಮಗ ಗಂಗಾಪುತ್ರ ಭೀಷ್ಮನು ಇರುವಾಗ,) ನೋಡ ಮರುಳ್ ಶಂತನು (ನೋಡೋ ಮರುಳು ಶಂತನು) ತನ್ನದೊಂದು ಸವಿಗಂ ಸೋಲಕ್ಕಂ ಇತ್ತಂ ನಿಜ

ಕ್ರಮಮಂ(ತನ್ನ ಒಂದು ಸವಿ/ಚಪಲಕ್ಕೆ ಮತ್ತು ಮೋಹಕ್ಕೆ ಒಳಗಾಗಿ ತನ್ನ ಸಹಜವಾದ ಪದ್ದತಿಯನ್ನು) ತನ್ನಯ ಬೇಟದಾಕೆಯ ಮಗಂಗೆ ಎಂಬೊಂದು ಅಪಖ್ಯಾತಿ (ತಾನು ಕಾಮಿಸಿದವಳ ಮಗನಿಗೆ (ಇತ್ತಂ) ಕೊಟ್ಟನು,) ಲೋಕಮನಾವರ್ತಿಸೆ (ಎಂಬ ಈ ಮಾತುಎಂಬ ಈ ಅಪಕೀರ್ತಿ ಲೋಕವನ್ನು ವ್ಯಾಪಿಸಿದಾಗ) ಬೞ್ದೊಡೆ ಎನ್ನ (ಬಾಳಿದರೆ ನನ್ನ) ಕುಲಮುಂ ತಕ್ಕು ಊರ್ಮೆಯುಂ ಮಾಸದೇ(ಕುಲದ ಯಶಸ್ಸೂ, ತಕ್ಕದಾದ ಯೋಗ್ಯತೆಯೂ ಮಾಸದೇ? ಯಶಸ್ಸಿಗೆ ಕುಂದುಂಟಾಗುವುದು ).

ಪದ್ಯ-೭೧:ಅರ್ಥ:ಪರಂಪರಾಗತ ಪದವಿಯನ್ನು ಪರಾಕ್ರಮದಿಂದ ರಾಜ್ಯವನ್ನು ತಾಳುವ- ನೋಡಿಕೊಳ್ಳುವ ಮಗ ಗಂಗಾಪುತ್ರ ಭೀಷ್ಮನು ಇರುವಾಗ, ನೋಡೋ ಮರುಳು ಶಂತನು ತನ್ನ ಒಂದು ಸವಿ/ಚಪಲಕ್ಕೆ ಮತ್ತು ಮೋಹಕ್ಕೆ ಒಳಗಾಗಿ ತನ್ನ ಸಹಜವಾದ ಪದ್ದತಿಯನ್ನು, ತಾನು ಕಾಮಿಸಿದವಳ ಮಗನಿಗೆ (ಇತ್ತಂ) ಕೊಟ್ಟನು, ಎಂಬ ಈ ಮಾತು, ಎಂಬ ಈ ಅಪಕೀರ್ತಿ ಲೋಕವನ್ನು ವ್ಯಾಪಿಸಿದಾಗ, ಬಾಳಿದರೆ ನನ್ನ ಕುಲದ ಯಶಸ್ಸೂ, ತಕ್ಕದಾದ ಯೋಗ್ಯತೆಯೂ ಮಾಸದೇ? ತನ್ನ ಮತ್ತು ತನ್ನಕುಲದ ಯಶಸ್ಸಿಗೆ ಕುಂದುಂಟಾಗುವುದು.
ವಚನ|| ಎಂದು ತನ್ನ ನಾಣ್ಗಾಪನೆ ಬಗೆದ (ದು)ತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದೆಗಿಡೆ ತದ್ವ ತ್ತಾಂತಮೆಲ್ಲಮಂ ಗಾಂಗೇಯನಱದು-
ವಚನ:ಪದವಿಭಾಗ-ಅರ್ಥ:ಎಂದು ತನ್ನ ನಾಣ್ಗಾಪನೆ ಬಗೆದು (ಲಜ್ಜೆ ಸಂತಾಪವನ್ನು ತೋರಿಸಿಕೊಳ್ಳದೆ, ಯೋಚಿಸಿ,) ತನುಪರಿತಾಪಿತ ಶರೀರನುಮಾಗಿ ಶಂತನು ಕರಂಗಿ ಎರ್ದೆ ಕಿಡೆ(ದೇಹದಲ್ಲಿ ಸಂತಾಪವನ್ನು ಹೊಂದಿ ಕರಗಿ ಎದೆಗೆಟ್ಟನು -ಚಿತ್ತದ ಸ್ಥಿರತೆಯನ್ನು ಕಳೆದುಕೊಂಡನು.) ತದ್ವ ತ್ತಾಂತಮೆಲ್ಲಮಂ ಗಾಂಗೇಯನು ಅಱದು-(ಈ ಎಲ್ಲಾವಿಚಾರವನ್ನು ಭೀಷ್ಮನು ತಿಳಿದನು.)
ವಚನ:ಅರ್ಥ:ಶಂತನು ಎಂದು ಭಾವಿಸಿ ತನ್ನ ಲಜ್ಜೆ ಸಂತಾಪವನ್ನು ತೋರಿಸಿಕೊಳ್ಳದೆ, ಯೋಚಿಸಿ, ದೇಹದಲ್ಲಿ ಸಂತಾಪವನ್ನು ಹೊಂದಿ ಕರಗಿ ಎದೆಗೆಟ್ಟನು -ಚಿತ್ತದ ಸ್ಥಿರತೆಯನ್ನು ಕಳೆದುಕೊಂಡನು.ಈ ಎಲ್ಲಾ ವಿಚಾರವನ್ನು ಭೀಷ್ಮನು ತಿಳಿದನು.
ಉ|| ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲೊಲ್ಲಂದಂಗಜೋ
ತ್ಪನ್ನ ವಿಮೋಹದಿಂದೞದಪಂ ಪತಿ ಸತ್ತೊಡೆ ಸತ್ತ ಪಾಪಮೆ|
ನ್ನನ್ನರಕಂಗಳೊಳ್ ತಡೆಯದೞ್ದ್ದುಗುಮೇವುದು ರಾಜ್ಯಲಕ್ಷ್ಮಿ ಪೋ
ತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನಿಂದೆ ಮಾಡುವೆಂ|| ೭೨||
ಪದ್ಯ-೭೨:ಪದವಿಭಾಗ-ಅರ್ಥ:ಎನ್ನಯ ದೂಸಱಿಂ (ನನ್ನ ಕಾರಣದಿಂದ) ನೃಪತಿ ಬೇಡಿದುದಂ (ರಾಜ ಶಂತನು, ತಾನು ಕೇಳಿದ್ದನ್ನು) ಕುಡಲು ಒಲ್ಲಂದೆ ಅಂಗಜ ಉತ್ಪನ್ನ ವಿಮೋಹದಿಂದ ಅೞದಪಂ (ಕೊಡಲು ಒಪ್ಪದ ಕಾರಣ ಕಾಮನಿಂದ ಹುಟ್ಟಿದ ಅತಿಮೋಹದ ಸಂಕಟದಿಂದ ಸಾಯುವನು.) ಪತಿ ಸತ್ತೊಡೆ (ಒಡೆಯನು-ತಂದೆ ಸತ್ತರೆ) ಸತ್ತ ಪಾಪಂ ಎನ್ನಂ ನರಕಂಗಳೊಳ್ ತಡೆಯದೆ ಅೞ್ದ್ದುಗುಂ ಏವುದು ರಾಜ್ಯಲಕ್ಷ್ಮಿ? (ಸತ್ತ ಪಾಪವು ನನ್ನನ್ನು ನರಕದಲ್ಲಿ ತಡೆಯದೆ ಅದ್ದುವುದು- ಮುಳುಗಿಸುತ್ತದೆ. ಈ ರಾಜ್ಯ ಲಕ್ಷ್ಮಿ ಯಾವುದು- ಯಾವ ಲೆಕ್ಕ!) ಪೋ ತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನು ಇಂದೆ ಮಾಡುವೆಂ(ಹೋಗು! ತನ್ನ ತಂದೆ ಹೇಳಿದ್ದನ್ನೇ ಕೊಟ್ಟು ವಿವಾಹವನ್ನು ಇಂದೇ ಮಾಡುವೆನು, ಎಂದು ಭೀಷ್ಮನು ನಿಶ್ಚಯಿಸಿದನು.)
ಪದ್ಯ-೭೨:ಅರ್ಥ:ನನ್ನ ಕಾರಣದಿಂದ ರಾಜ ಶಂತನು, ತಾನು ಕೇಳಿದ್ದನ್ನು ದಾಶರಾಜನು ಕೊಡಲು ಒಪ್ಪದ ಕಾರಣ ಕಾಮನಿಂದ ಹುಟ್ಟಿದ ಅತಿಮೋಹದ ಸಂಕಟದಿಂದ ಸಾಯುವನು. ಒಡೆಯನು-ತಂದೆ ಸತ್ತರೆ, ಸತ್ತ ಪಾಪವು ನನ್ನನ್ನು ನರಕದಲ್ಲಿ ತಡೆಯದೆ ಅದ್ದುವುದು- ಮುಳುಗಿಸುತ್ತದೆ. ಈ ರಾಜ್ಯ ಲಕ್ಷ್ಮಿ ಯಾವುದು- ಯಾವ ಲೆಕ್ಕ! (ಹೋಗಲಿ!?) ಹೋಗು! ತನ್ನ ತಂದೆ ಹೇಳಿದ್ದನ್ನೇ ಕೊಟ್ಟು ವಿವಾಹವನ್ನು ಇಂದೇ ಮಾಡುವೆನು, ಎಂದು ಭೀಷ್ಮನು ನಿಶ್ಚಯಿಸಿದನು.
ವಚನ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆವಂದಾತನ ಮನದ ತೊಡರ್ಪಂ ಪಿಂಗೆ ನುಡಿದು-
ವಚನ:ಪದವಿಭಾಗ-ಅರ್ಥ:ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆ ವಂದು ಆತನ ಮನದ ತೊಡರ್ಪಂ ತಡಕು -ಸಿಕ್ಕನ್ನು, ಪಿಂಗೆ (ಹಿಂಗೆ - ಹೋಗುವಹಾಗೆ)ನುಡಿದು-
ವಚನ:ಅರ್ಥ:ತಂದೆಗೆ ಮದುವೆ ಮಾಡಬೇಕು, ಎಂದು ನಿಶ್ಚಯಿಸಿ ಗಾಂಗೇಯನು ದಾಶರಾಜನ ಬಳಿಗೆ ಬಂದು ಆತನ ಮನಸ್ಸಿನಲ್ಲಿರುವ ಸಂಶಯದ ಸಿಕ್ಕು ಹೋಗುವಂತೆ, ಹೇಳಿದನು:-
ಉ|| ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್
ಕೂಡುಗೆ ರಾಜ್ಯಲಕ್ಷ್ಮಿ ಮೊರೆಯಲ್ತೆನಗಂತದು ಪೆಂಡಿರೆಂಬರೊಳ್|
ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಮೆಂದು ರಾಗದಿಂದ
ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ:ನೀಡಿರದೆ (ತಡವಿಲ್ಲದೆ) ಈವುದು ಈ ನಿಜ ತನೂಜೆಯನು (ನನ್ನ ತಂದೆಗೆ ಈ ನಿನ್ನ ಮಗಳನ್ನು ಕೂಡಲೆ ಕೊಡುವುದು.) ಈ ವಧುಗೆ ಆದ ಪುತ್ರರೊಳ್ ಕೊಡುಗೆ ರಾಜ್ಯಲಕ್ಷ್ಮಿ (ಈ ಕನ್ಯೆಗೆ ಹುಟ್ಟಿದ ಮಕ್ಕಳಿಗೆ ರಾಜ್ಯವು ಸೇರಲಿ.), ಮೊರೆಯಲ್ತು ಎನಗೆ ಅಂತು ಅದು(ಅಂತು-ಹಾಗೆ ನನಗೆ ರಾಜ್ಯ ಸಂಬಂಧವಿಲ್ಲ.) ಪೆಂಡಿರೆಂಬರೊಳ್ ಕೂಡುವನಲ್ಲೆಂ ಇಂದು ಮೊದಲಾಗಿರೆ ನಿಕ್ಕುವಂ ಎಂದು(ಇಂದು ಮೊದಲಾಗಿ ಹೆಂಗಸು ಎಂಬುವರಲ್ಲಿ ಸೇರುವವನಲ್ಲ; ಇದು ನಿಶ್ಚಯ -ಎಂದು ಪ್ರತಿಜ್ಞೆ ಮಾಡಿ) ರಾಗದಿಂದ ಕೂಡಿದಂ ಉಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ(ಸಂತೋಷದಿಂದ ಭೀಷ್ಮನು ದಾಸರಾಜನ ಮಗಳು ಯೋಜನಗಂಧಿಯಾದ ಸತ್ಯವತಿ ಎಂಬ ಸಾಧ್ವಿಯನ್ನು ಕರೆದುಕೊಂಡು ಹೋಗಿ, ತನ್ನ ತಂದೆಯೂ ಮತ್ತು ರಾಜನೂ ಆದ ಶಂತನುವಿಗೆ ಕೂಡಿದನು- ವಿವಾಹ ಮಾಡಿದನು).
ಪದ್ಯ-೭೩:ಅರ್ಥ:ನನ್ನ ತಂದೆಗೆ ಈ ನಿನ್ನ ಮಗಳನ್ನು ಕೊಡುವುದು. ಈ ಕನ್ಯೆಗೆ ಹುಟ್ಟಿದ ಮಕ್ಕಳಿಗೆ ರಾಜ್ಯವು ಸೇರಲಿ. ಹಾಗೆಯೇ ನನಗೆ ಈ ರಾಜ್ಯ ಸಂಬಂಧವಿಲ್ಲ. ಇಂದು ಮೊದಲಾಗಿ ಹೆಂಗಸು ಎಂಬುವರಲ್ಲಿ ಸೇರುವವನಲ್ಲ; ಇದು ನಿಶ್ಚಯ -ಎಂದು ಪ್ರತಿಜ್ಞೆ ಮಾಡಿ, ಸಂತೋಷದಿಂದ ಭೀಷ್ಮನು ದಾಸರಾಜನ ಮಗಳು ಯೋಜನಗಂಧಿಯಾದ ಸತ್ಯವತಿ ಎಂಬ ಸಾಧ್ವಿಯನ್ನು ಕರೆದುಕೊಂಡು ಹೋಗಿ, ತನ್ನ ತಂದೆಯೂ ಮತ್ತು ರಾಜನೂ ಆದ ಶಂತನುವಿಗೆ ವಿವಾಹ ಮಾಡಿದನು.
ವಚನ|| ಅಂತು ಶಂತನುವುಂ ಸತ್ಯವತಿಯುಮನ್ಯೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-
ವಚನ:ಪದವಿಭಾಗ-ಅರ್ಥ:|| ಅಂತು ಶಂತನುವುಂ ಸತ್ಯವತಿಯುಂ ಅನ್ಯೋನ್ಯ ಆಸಕ್ತಚಿತ್ತರಾಗಿ ಕೆಲವು ಕಾಲಂ ಇರ್ಪ ಅನ್ನೆಗಂ ಅವರ ಬೇಟದ ಕಂದಲ್ಗಳಂತೆ (ಪ್ರೀತಿಯ ಮೊಳಕೆ ಅಥವಾ ಮೊಳಕೆಗಳಂತೆ) ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪ ಅನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದು ಉಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕೆ ಅಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಂ ಇರ್ಪ ಅನ್ನೆಗಂ ಓರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕರುಕ್ಷೇತ್ರಮಂ ಕಳಂಬೇೞ್ದು (ಯುದ್ಧರಂಗವಾಗಿ ಮಾಡಿಕೊಂಡು)ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-
ವಚನ:ಅರ್ಥ:ಹೀಗೆ ಶಂತನುವೂ ಸತ್ಯವತಿಯೂ ಅನ್ಯೋನ್ಯ ಪ್ರೀತಿಯುಳ್ಳವರಾಗಿ ಕೆಲವು ಕಾಲ ಇರುವಾಗ ಅವರ ಪ್ರೇಮದ ಮೊಳಕೆಗಳಂತೆ) ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳು ಹುಟ್ಟಿ ಮಹಾಪ್ರಚಂಡರೂ, ಪ್ರತಾಪಿಗಳೂ ಆಗಿ ಬಳೆಯುತ್ತಿದ್ದ ಸಮಯದಲ್ಲಿ, ಶಂತನು ಪರಲೋಕ ವಾಸಿಯಾದನು. ಗಾಂಗೇಯನು ಅದಕ್ಕೆ ಉಚಿತ ಪರಲೋಕ ಕ್ರಿಯೆಗಳನ್ನು ಮಾಡಿ ಮುಂಚೆ ತಾನು ನುಡಿದ ಪ್ರತಿಜ್ಞೆಯೆಂಬ ಕಟ್ಟಡಕ್ಕೆ ತಳಪಾಯ ಕಟ್ಟುವಂತೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ರಾಜ್ಯಭಾರವನ್ನು ಮಾಡಿಸುತ್ತಿದ್ದನು. ಹಾಗೆ ಇದ್ದ ಸಮಯದಲ್ಲಿ ಒಬ್ಬ ಗಂಧರ್ವನ ಜೊತೆ ಚಿತ್ರಾಂಗದನು ದ್ವಂದ್ವಯುದ್ಧವನ್ನು ಹೂಡಿ ಕರುಕ್ಷೇತ್ರವನ್ನು ಕಣವಾಗಿ ಮಾಡಿ ಕದನ ಮಾಡಿದಾಗ ಚಿತ್ರಾಂಗಧನು ಸತ್ತನು. ಆಗ ವಿಚಿತ್ರವೀರ್ಯನನ್ನು ಗಾಂಗೇಯನು ರಾಜ್ಯಭಾರ ಧುರಂಧರನನ್ನಾಗಿ ಮಾಡಿದನು (ರಾಜ್ಯದ ಪಟ್ಟಕಟ್ಟಿದನು).-

ವಿಚಿತ್ರವೀರ್ಯನಿಗೆ ಅಂಬಿಕೆ ಅಂಬಾಲಿಕೆಯರೊಡನೆ ವಿವಾಹ[ಸಂಪಾದಿಸಿ]

ಮ|| ಸಕಳ ಕ್ಷತ್ರಿಯ ಮೋಹದಿಂ ನಿಜಭುಜ ಪ್ರಾರಂಭದಿಂ ಪೋಗಿ ತಾ
ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ|
ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ
ಬಿಕೆಯಂಬಾಲೆಯರೆಂಬ ಬಾಲೆಯ ರನೇಂ ಭೀಷ್ಮಂ ಯಶೋಭಾಗಿಯೋ|| ೭೪ ||
ಪದ್ಯ-೭೪:ಪದವಿಭಾಗ-ಅರ್ಥ:ಸಕಳ ಕ್ಷತ್ರಿಯ ಮೋಹದಿಂ (ಎಲ್ಲಾಕ್ಷತ್ರಿಯರಿಗೂ ಇರುವ ಸಹಜವಾದ ಆಸೆಯಿಂದ) ನಿಜಭುಜ ಪ್ರಾರಂಭದಿಂ ಪೋಗಿ ತಾಗಿ(ತನ್ನ ಭುಜಬಲಪರಾಕ್ರಮದಿಂದ ಕಾಶೀರಾಜ್ಯಕ್ಕೆ ಹೋಗಿ, ಯುದ್ಧಮಾಡಿ) ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನ ಅಂಕದ ಒಂದು ಉಗ್ರಸಾಯಕದಿಂ ನಾಯಕರಂ ಪಡಲ್ವಡಿಸುತುಂ(ಕಾಶಿರಾಜನ ಕಡೆ ಕಾಶೀರಾಜನ ಮಕ್ಕಳು ಕೆಲವರು ನೋವು ಹೊಂದುವ ಹಾಗೆ ತನ್ನ ಪ್ರಬಲ ಬಾಣದಿಂದ, ನಾಯಕರನ್ನು ಹೆದರಿಸುತ್ತಾ ಚದುರಿಸುತ್ತ,) ತಾಂ ತಂದನು ಅಂದು ಅಂಬೆ ಅಂಬಿಕೆ ಅಂಬಾಲೆಯರೆಂಬ ಬಾಲೆಯರನು ಏಂ ಭೀಷ್ಮಂ ಯಶೋಭಾಗಿಯೋ(ತಾನು ಅಂಬೆಅಂಬಿಕೆ ಅಂಬಾಲಿಕೆಯರೆಂಬ ಕಾಶಿರಾಜನ ಹೆಣ್ಣುಮಕ್ಕಳನ್ನು ಅಪಹರಿಸಿಕೊಂಡು ತಂದನು. ಭಿಷ್ಮನು ಏನು ಕೀರ್ತಿಭಾಜನನೋ!)
ಪದ್ಯ-೭೪:ಅರ್ಥ:ಎಲ್ಲಾ ಕ್ಷತ್ರಿಯರಿಗೂ ಇರುವ ಸಹಜವಾದ ಆಸೆಯಿಂದ, ತನ್ನ ಭುಜಬಲ ಪರಾಕ್ರಮದಿಂದ ಕಾಶೀರಾಜ್ಯಕ್ಕೆ ಹೋಗಿ, ಯುದ್ಧಮಾಡಿ ಕಾಶೀರಾಜನ ಮಕ್ಕಳು ಕೆಲವರು ನೋವು ಹೊಂದುವ ಹಾಗೆ ಮಾಡಿ, ತನ್ನ ಪ್ರಬಲ ಬಾಣದಿಂದ, ನಾಯಕರನ್ನು ಹೆದರಿಸುತ್ತಾ ಚದುರಿಸುತ್ತ, ತಾನು ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಕಾಶಿರಾಜನ ಹೆಣ್ಣುಮಕ್ಕಳನ್ನು ಅಪಹರಿಸಿಕೊಂಡು ತಂದನು. ಭಿಷ್ಮನು ಏನು ಕೀರ್ತಿಭಾಜನನೋ!)
ವಚನ| ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗಾ ಮೂವರ್ಕನ್ನೆಯರಂ ಪಾಣಿ ಗ್ರಹಣಂಗೆಯ್ವಾಗಳೆಲ್ಲರಿಂ ಪಿರಿಯಾಕೆ ನಿನ್ನನಲ್ಲದೆ ಪೆಱರನೊಲ್ಲೆನೆಂದಿರ್ದೊಡೆ ಮತ್ತಿನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನಂಬೆಯನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗೆ ಆ ಮೂವರ್ ಕನ್ನೆಯರಂ ಪಾಣಿ ಗ್ರಹಣಂ ಗೆಯ್ವಾಗಳು ಎಲ್ಲರಿಂ ಪಿರಿಯಾಕೆ ನಿನ್ನನು ಅಲ್ಲದೆ ಪೆಱರನು ಒಲ್ಲೆನು ಎಂದಿರ್ದೊಡೆ ಮತ್ತೆ ಇನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನು ಅಂಬೆಯನು ಇಂತು ಎಂದಂ-
ವಚನ:ಅರ್ಥ:ಹೀಗೆ ಬಾಲೆಯರನ್ನು ತಂದು ತನ್ನ ತಮ್ಮ ವಿಚಿತ್ರವೀರ್ಯನಿಗೆ ಆ ಮೂವರು ಕನ್ನೆಯರನ್ನು ಪಾಣಿಗ್ರಹಣವನ್ನು ಮಾಡುವಾಗ ಎಲ್ಲರಿಂಗಿಂತ ಹಿರಿಯವಳು ಅಂಬೆ, ಗೆದ್ದವನು ನೀನು ಅದರಿಂದ ನಿನ್ನನು ಅಲ್ಲದೆ ಬೇರೆಯವರನ್ನು ಮದುವೆಯಾಗುವುದಿಲ್ಲ ಎಂದು ಹೇಳಲು, ಮತ್ತೆ ಇನ್ನಿಬ್ಬರನ್ನು ತಮ್ಮನಿಗೆ ಮದುವೆಯನ್ನು ಮಾಡಿ ಗಾಂಗೇಯನು ಅಂಬೆಯನ್ನು ಕುರಿತು ಹೀಗೆ ಹೇಳಿದನು.-
ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ
ದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋ|
ತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತವೀಗಳಬ್ದೆಯೆಂ|
ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ ಪಂಕಜಾನನೇ|| ೭೫
ಪದ್ಯ-೭೫:ಪದವಿಭಾಗ-ಅರ್ಥ:ಅತ್ತ ಸುರೇಶ್ವರ ಆವಸಥಂ (ಅತ್ತಲಾಗಿ ಇಂದ್ರನ ಸ್ವರ್ಗ) ಇತ್ತ ಮಹೀತಳಂ ಉತ್ತ (ಈಕಡೆ ಭೂಲೋಕ, ಮಧ್ಯೆ) ಪನ್ನಗೋದಾತ್ತ (ಹಾವಿನ ಪಾತಾಳ) ಸಮಸ್ತ ಲೋಕಂ ಅಱಿದಂತಿರೆ ಪೂಣ್ದ (ಪಾತಾಳವೇ ಮೊದಲಾದ ಸಮಸ್ತ ಲೋಕವೂ ತಿಳಿಯುವ ಹಾಗೆ ಪ್ರತಿಜ್ಞೆಮಾಡಿದ) ಎನಗೆ ಆಗದು ಅಂಗಜ (ಕಾಮ) ಉತ್ಪತ್ತಿ ಸುಖಕ್ಕೆ ಸೋಲಲು (ನನಗೆ ಕಾಮನಿಂದಾದ ಸುಖಕ್ಕೆ ಸೋಲಲು ಆಗದು,) ಅೞಿಗುಂ ಪುರುಷವ್ರತಂ, ಈಗಳು ಅಬ್ದೆಯೆಂದು ಅತ್ತಿಗೆಯೆಂಬ (ಪ್ರೀತಿಯವಳು) ಮಾತನು ಎನಗೆ ಏನು ಎನಲು ಅಕ್ಕುಮೊ ಪಂಕಜಾನನೇ (ನನ್ನ ಬ್ರಹ್ಮಚರ್ಯ ವ್ರತವು ಅಳಿಗು - ನಷ್ಟವಾಗುವುದು,. ಈಗ ತಾಯಿಯೆಂದು ಕರೆದು ಆಮೇಲೆ ಪ್ರೀತಿಸಿದವಳು ನಲ್ಲಳು ಎನ್ನಲು ಎಲೆ ಪಂಕಜಾನನೇ, ಆಗುವುದೋ- ಇಲ್ಲ. ನಿನ್ನನ್ನು ಮದುವೆಯಾಗಲಾರೆ.)
ಪದ್ಯ-೭೫:ಅರ್ಥ:ಅಂಬೆಯನ್ನು ಕುರಿತು,'ಅತ್ತಲಾಗಿ ಇಂದ್ರನ ಸ್ವರ್ಗ, ಈ ಕಡೆ ಭೂಲೋಕ, ಹಾವಿನ ಪಾತಾಳ, ಪಾತಾಳವೇ ಮೊದಲಾದ ಸಮಸ್ತ ಲೋಕವೂ ತಿಳಿಯುವ ಹಾಗೆ ಪ್ರತಿಜ್ಞೆಮಾಡಿದ ನನಗೆ ಕಾಮನಿಂದಾದ ಸುಖಕ್ಕೆ ಸೋಲಲು ಆಗದು, ನನ್ನ ಬ್ರಹ್ಮಚರ್ಯ ವ್ರತವು ಅಳಿಗು - ನಷ್ಟವಾಗುವುದು. ಈಗ ತಾಯಿಯೆಂದು ಕರೆದು ಆಮೇಲೆ ಪ್ರೀತಿಸಿದವಳು - ನಲ್ಲಳು ಎನ್ನಲು, ಎಲೆ ಪಂಕಜಾನನೇ, ಆಗುವುದೋ- ಇಲ್ಲ. ನಿನ್ನನ್ನು ಮದುವೆಯಾಗಲಾರೆ,' ಎಂದನು ಭೀಷ್ಮ.

ಅಂಬೆಯ ತೊಳಲಾಟ[ಸಂಪಾದಿಸಿ]

ವ|| ಎಂದು ನುಡಿದ ಗಾಂಗೇಯನ ನುಡಿಯೋಳವಸರಮಂ ಪಸರಮಂ ಪಡೆಯದೆ ತನಗೆ ಕಿಱಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಮೆಂದೊಡಾತನಿಂತೆಂದಂ-
ವಚನ:ಪದವಿಭಾಗ-ಅರ್ಥ:[ಎಂದು ನುಡಿದ ಗಾಂಗೇಯನ ನುಡಿಯೋಳು ಅವಸರಮಂ (ಅವಕಾಶವನ್ನು) ಪಸರಮಂ (ಸಲಿಗೆಯನ್ನು- ಇಷ್ಟವನ್ನು) ಪಡೆಯದೆ, ತನಗೆ ಕಿಱಿಯಂದು ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಂ (ಅಂಗೀಕಾರ ಮಾಡಬೇಕು)ಎಂದೊಡೆ ಆತನು ಇಂತೆಂದಂ]
ವಚನ:ಅರ್ಥ:=[ಎಂದು ಹೇಳಿದ ಭೀಷ್ಮನ ಮಾತಿನಲ್ಲಿ ಅಂಬೆಯು ಯಾವ ಇಷ್ಟಾರ್ಥವನ್ನು ಪಡೆಯಲಾರದೆ ತನ್ನ ಬಾಲ್ಯದಲ್ಲಿ ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನಲ್ಲಿಗೆ ಹೋಗಿ ನೀನು ನನ್ನನ್ನು ಅಂಗೀಕಾರ ಮಾಡಬೇಕು ಎನ್ನಲು ಆತನು ಹೀಗೆಂದು ಹೇಳಿದನು.
ಕಂ|| ಬಂಡಣದೊಳೆನ್ನನೋಡಿಸಿ
ಕೊಂಡುಯ್ದಂ ನಿನ್ನನಾ ಸರಿತ್ಸುತನಾನುಂ|
ಪೆಂಡತಿಯೆನಾದೆನದಱಿಂ
ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ|| ೭೬||
ಪದ್ಯ-೭೬:ಪದವಿಭಾಗ-ಅರ್ಥ:ಬಂಡಣದೊಳು (ಯುದ್ಧದಲ್ಲಿ)ಎನ್ನನು ಓಡಿಸಿ, ಕೊಂಡು ಒಯ್ದಂ ನಿನ್ನನು ಆ ಸರಿತ್ಸುತನು ಆನುಂ ಪೆಂಡತಿಯೆನಾದೆನು ಅದಱಿಂ ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರು ಅಬಲೇ|
ಪದ್ಯ-೭೬:ಅರ್ಥ:ಯುದ್ಧದಲ್ಲಿ ನನ್ನನ್ನು ಸೋಲಸಿ ಓಡಿಸಿ, ನಿನ್ನನ್ನು ಅಪಹರಿಸಿಕೊಂಡು ಹೋದನು ಆ ಗಂಗೆಯಮಗನು. ಹಾಗಾಗಿ ನಾನೂ ಹೆಂಗಸಾದೆನು. ಅದರಿಂದ ಹೆಂಗಸರು ಹೆಂಗಸರನ್ನು ಅದು ಹೇಗೆ ಮದುವೆಯಾಗುವರು ಅಬಲೇ? ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ, ಎಂದನು ಸಾಲ್ವ.
ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗಂ ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾಱದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನೆನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೋಡಿಸಿ ಕೊಂಡು ಬಂದೆನ್ನ ಂ ಮದುವೆಯಂ ನಿಲಲೊಲ್ಲ ದ್ವ ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನನೆನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದಂಬೆ ಕಣ್ಣ ನೀರಂ ತುಂಬೆ-
ವಚನ:ಪದವಿಭಾಗ-ಅರ್ಥ:ಎಂದು ಸಾಲ್ವ ಅಲಂ ತನ್ನ ಪರಿಭವದೊಳು (ಸೋಲು) ಆದ ಸಿಗ್ಗಂ ಸಾಲ್ವಿನಂ (ಸಾಲುವಷ್ಷ್ಟು) ಉಂಟುಮಾಡಿದೊಡೆ ಆತನ ಮನಮನು ಒಡಂಬಡಿಸಲಾಱದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನು ಎನ್ನ ಸ್ವಯಂವರದೊಳ್ ನೆರೆದ ಅರಸುಮಕ್ಕಳು ಎಲ್ಲರುಮನು ಓಡಿಸಿ ಕೊಂಡು ಬಂದು ಎನ್ನ ಮದುವೆಯಂ ನಿಲಲೊಲ್ಲದೆ (ವ)ಅಟ್ಟಿ ಕಳೆದೊಡೆ ಎನ್ನ ದೆವಸಮುಂ ಜವ್ವನಮುಂ ಅಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದೆ ಆತನನು ಎನ್ನಂ ಪಾಣಿಗ್ರಹಣಂ ಗೆಯ್ವಂತು (ಕಯ್ಯನ್ನು ಹಿಡಿಯುವ) ಮಾಡು; ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದು ಅಂಬೆ ಕಣ್ಣ ನೀರಂ ತುಂಬೆ-
ವಚನ:ಅರ್ಥ:ಸಾಲ್ವನು ಅಂಬೆಯನ್ನು ವಿವಾಹವಾಗಲಾರೆ ಎಂದು ತನಗೆ ಸೋಲಿನಲ್ಲಿ ಉಂಟಾದ ನಾಚಿಕೆಯನ್ನು ಸಾಕಾಗುವಷ್ಟು ಪ್ರದರ್ಶಿಸಲು. ಅವನ ಮನಸ್ಸನ್ನು ಒಪ್ಪಿಸಲಾರದೆ ಅಂಬೆ ಪರಶುರಾಮನ ಹತ್ತಿರಕ್ಕೆ ಹೋಗಿ ಭೀಷ್ಮನು ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ ತನ್ನನ್ನು ಅಪಹರಿಸಿಕೊಂಡು ಬಂದು ನನ್ನನ್ನು ಮದುವೆ ಮಾಡಿಕೊಳ್ಳದೆ ಓಡಿಸಿದನು. ನನ್ನ ಯೌವನವು ಕಾಡಿನಲ್ಲಿ ಬಿಟ್ಟ ಹೂವಿನಂತೆ ವ್ಯರ್ಥವಾಗದ ಹಾಗೆ ಆತನು ನನ್ನ ಕಯ್ಯನ್ನು ಹಿಡಿಯುವ ಹಾಗೆ ಮಾಡು; ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ (ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ), ಬೆಂಕಿಯನ್ನು ದಯಪಾಲಿಸು, ಎಂಬುದಾಗಿ ಅಂಬೆಯು ಕಣ್ಣಿನಲ್ಲಿ ನೀರುತುಂಬಿ ಹೇಳಿದಳು.
ಮ|| ನಯಮಂ ನಂಬುವೊಡೆನ್ನ ಪೇೞ್ದ ಸತಿಯಂ ಕೈಕೊಂಡನಂತಲ್ಲದು
ರ್ಣಯಮಂ ನಚ್ಚುವೊಡೆನ್ನನುಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನಾ|
ರಯೆ ಕಜ್ಜಂ ಪೆಱತಿಲ್ಲ ಶಂತನು ಸುತಂಗೆನ್ನಂ ಕರಂ ನಂಬಿದಂ
ಬೆಯೊಳೆನ್ನ ಅಂಬೆವಲಂ ವಿವಾಹವಿಧಿಯಂ ಮಾಳ್ಪೆಂ ಪೆಱರ್ ಮಾೞ್ಪರೇ|| ೭೭||
ಪದ್ಯ-೭೭:ಪದವಿಭಾಗ-ಅರ್ಥ:ನಯಮಂ ನಂಬುವೊಡೆ ಎನ್ನ ಪೇೞ್ದ ಸತಿಯಂ ಕೈಕೊಂಡಂ (ಅದಕ್ಕೆ ಪರಶುರಾಮನು, ಭೀಷ್ಮನು ಗುರು ಎಂದು, ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ ಹೆಣ್ಣನ್ನು ಮದುವೆಯಾಗುತ್ತಾನೆ.) ಅಂತಲ್ಲದೆ (ಮೇಣ್) ದುರ್ಣಯಮಂ ನಚ್ಚುವೊಡೆ ಎನ್ನನು ಉಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನು (ಎದುರಿಸುವನು)(ಹಾಗಲ್ಲದೆ ಅವಿನಯವನ್ನೇ ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ),ಆರಯೆ ಕಜ್ಜಂ ಪೆಱತಿಲ್ಲ (ವಿಚಾರ ಮಾಡಿದರೆ (ಭೀಷ್ಮನಿಗೆ) ಬೇರೆ ಕಾರ್ಯ- ಮಾರ್ಗ ಇಲ್ಲ.) ಶಂತನು ಸುತಂಗೆನ್ನಂ ಕರಂ ನಂಬಿದ ಅಂಬೆಯೊಳು, ಎನ್ನ ಅಂಬೆವಲಂ (ಬಾಣ) ವಿವಾಹವಿಧಿಯಂ ಮಾಳ್ಪೆಂ, ಪೆಱರ್ ಮಾೞ್ಪರೇ (ಶಂತನು ಮಗನಿಗೆ ನನ್ನನ್ನು ಬಹಳ ನಂಬಿದ ಅಂಬೆಯಲ್ಲಿ ಅವನ ಮದುವೆಯನ್ನು ಮಾಡಿಸುತ್ತೇನೆ; ಅವನು ಒಪ್ಪದಿದ್ದರೆ ನನ್ನ ಬಾಣವೇ ವಿವಾಹವಿಧಿಯನ್ನು ಮಾಡಿಸುವುದು/ ಬಾಣದ ಮೂಲಕ ಮಾಡುವೆನು. ಬೇರೆಯವರು ಮಾಡುವರೇ? ಅದು ಆಗದು, ತಾನೇ ಮಾಡಬೇಕು.)
ಪದ್ಯ-೭೭:ಅರ್ಥ:ಅದಕ್ಕೆ ಪರಶುರಾಮನು, ಭೀಷ್ಮನು ತನ್ನನ್ನು ಗುರು ಎಂದು, ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ ಹೆಣ್ಣನ್ನು ಮದುವೆಯಾಗುತ್ತಾನೆ. ಹಾಗಲ್ಲದೆ ಅವಿನಯವನ್ನೇ ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ವಿಚಾರ ಮಾಡಿದರೆ (ಭೀಷ್ಮನಿಗೆ) ಬೇರೆ ಕಾರ್ಯ- ಮಾರ್ಗ ಇಲ್ಲ. ಶಂತನು ಮಗನಿಗೆ ನನ್ನನ್ನು ಬಹಳ ನಂಬಿದ ಅಂಬೆಯಲ್ಲಿ ಅವನ ಮದುವೆಯನ್ನು ಮಾಡಿಸುತ್ತೇನೆ; ಅವನು ಒಪ್ಪದಿದ್ದರೆ ನನ್ನ ಬಾಣವೇ ವಿವಾಹವಿಧಿಯನ್ನು ಮಾಡಿಸುವುದು/ ಬಾಣದ ಮೂಲಕ ಮಾಡುವೆನು. ಬೇರೆಯವರು ಮಾಡುವರೇ? ಅದು ಆಗದು, ತಾನೇ ಮಾಡಬೇಕು.
ವಚನ|| ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳ್ದಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಘ್ಯಮಂ ಕೊಟ್ಟು ಪೊಡಮಟ್ಟು-
ವಚನ:ಪದವಿಭಾಗ-ಅರ್ಥ:ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳ್ದು ಇದಿರ್ವಂದು ಕನಕ ರಜತ ಪಾತ್ರಂಗಳೊಳು ಅರ್ಘ್ಯಮಂ ಕೊಟ್ಟು ಪೊಡಮಟ್ಟು-
ವಚನ:ಅರ್ಥ:ಎಂದು ಹಸ್ತಿನಾಪುರಕ್ಕೆ ಬರುತ್ತಿರುವ ಪರಶುರಾಮನ ಆಗಮನವನ್ನು ಭೀಷ್ಮನು ಕೇಳಿ ಎದುರಾಗಿ ಬಂದು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಅರ್ಘ್ಯವನ್ನು ಕೊಟ್ಟು ನಮಸ್ಕಾರಮಾಡಿ-
ಮ|| ಬೆಸನೇನೆಂದೊಡೆ ಪೇೞ್ವೆನೆನ್ನ ಬೆಸನಂ ಕೈಕೊಳ್ವುದೀ ಕನ್ನೆಯಂ
ಪಸುರ್ವಂದರ್ ಪಸೆಯೆಂಬಿವಂ ಸಮದು ನೀಂ ಕೈಕೊಳ್ ಕೊಳಲ್ಕಾಗದಂ|
ಬೆಸಕಂ ಚಿತ್ತದೊಳುಳ್ಳೊಡೀಗಳಿವರೆಮ್ಮಾಚಾರ್ಯರೆಂದೋವದೇ
ರ್ವೇಸನಂ ಮಾಣದೆ ಕೈದುಗೊಳ್ಳೆರಡರೊಳ್ ಮೆಚ್ಚಿತ್ತೆನೇನೆಂದಪಯ್|| ೭೮||
ಪದ್ಯ-೭೮:ಪದವಿಭಾಗ-ಅರ್ಥ:ಬೆಸನೇನ್ ಎಂದೊಡೆ (ಬೆಸನು ಏನ್ - ಕೆಲಸ ಏನು, ಅಪ್ಪಣೆ ಏನು? ಎಂದು ಭೀಷ್ಮನು ಕೇಳಿದರೆ), ಪೇೞ್ವೆನ್ ಎನ್ನ ಬೆಸನಂ ಕೈಕೊಳ್ವುದು ಈ ಕನ್ನೆಯಂ ಪಸುರ್ವಂದರ್ ಪಸೆಯೆಂಬಿವಂ ಸಮದು ನೀಂ ಕೈಕೊಳ್ (ಹೇಳುವೆನು, ನನ್ನ ಆಜ್ಞೆಯನ್ನು ಒಪ್ಪು, ಈ ಕನ್ಯೆಯನ್ನು ಹಸಿರುಚಪ್ಪರ ಹಸೆಮಣೆ ಇವುಗಳನ್ನು ಮಾಡಿಸಿ/ ಏರ್ಪಡಿಸಿ, ನೀನು ಪರಿಗ್ರಹಿಸು), ಕೊಳಲ್ಕಾಗದಂಬೆಸಕಂ ಚಿತ್ತದೊಳು ಉಳ್ಳೊಡೆ ಈಗಳ್ ಇವರ್ ಎಮ್ಮ ಆಚಾರ್ಯರೆಂದು ಓವದೆ ಏರ್ವೇಸನಂ (ಯುದ್ಧಕಾರ್ಯ)) ಮಾಣದೆ ಕೈದುಗೊಳ್ಳ್ (ಬಿಡದೆ ಶಸ್ತ್ರ ಹಿಡಿ) ಎರಡರೊಳ್ ಮೆಚ್ಚಿತ್ತೆನೆ, ಏನೆಂದಪಯ್?=[ಈಕೆಯನ್ನು ಸ್ವೀಕರಿಸುವುದಿಲ್ಲ ಎಂಬ ಕಾರ್ಯ/ವಿಚಾರ ಮನಸ್ಸಿನಲ್ಲಿ ಇದ್ದರೆ, ಈಗ ಇವರು ನನ್ನ ಗುರುಗಳು ಎಂದು ಭಕ್ತಿಯನ್ನು ತೋರದೆ ಕೈದು/ ಆಯುಧವನ್ನುಹಿಡಿ; (ಯುದ್ಧಕಾರ್ಯಕ್ಕೆ) ಎರಡರಲ್ಲಿ ನೀನು ಇಷ್ಟಪಟ್ಟಿದ್ದನ್ನು ಕೊಟ್ಟಿದ್ದೇನೆ, ಏನು ಹೇಳುವೆ?]
ಪದ್ಯ-೭೮:ಅರ್ಥ:ಕೆಲಸ ಏನು, ಅಪ್ಪಣೆ ಏನು? ಎಂದು ಭೀಷ್ಮನು ಕೇಳಿದರೆ, ಅದಕ್ಕೆ ಪರಶುರಾಮನು ನನ್ನ ಆಜ್ಞೆಯನ್ನು ನೀನು ಅಂಗೀಕಾರಮಾಡಬೇಕು. ಹಸುರುವಾಣಿ ಚಪ್ಪರ ಮತ್ತು ಹಸೆಮಣೆಗಳನ್ನು ಸಿದ್ಧಪಡಿಸಿ ಈ ಕನ್ಯೆಯನ್ನು ಸ್ವೀಕರಿಸು, ಸ್ವೀಕರಿಸಕೂಡದೆಂಬ ಕಾರ್ಯ (ವಿಚಾರ) ಮನಸ್ಸಿನಲ್ಲಿರುವಾದದರೆ ಈಗಲೇ ಇವರು ನಮ್ಮ ಗುರುಗಳು ಎಂಬ ಭಕ್ತಿಪ್ರದರ್ಶನ ಮಾಡದೆ ಯುದ್ಧೋದ್ಯೋಗವನ್ನು ಕೈಕೊಂಡು ಶಸ್ತ್ರಧಾರಣೆ ಮಾಡು. ಎರಡರಲ್ಲಿ ಇಷ್ಟಪಟ್ಟಿದ್ದನ್ನು ಕೊಟ್ಟಿದ್ದೇನೆ, ಏನು ಹೇಳುವೆ? ಎಂದನು.
ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದೆನಗೆ ವೀರಶ್ರೀಯುಂ ಕೀರ್ತಿಶ್ರೀಯುಓ ಅಲ್ಲದುೞಿದ ಪೆಂಡಿರ್ ಮೊರೆಯಲ್ಲ ನೀವಿದನೇಕಾಗ್ರಹಂಗೆಯ್ವಿರೆಂದೊಡೆಂತುಮೆಮ್ಮೊಳ್ ಕಾದಲ್ವೇೞ್ವುದೆಂದು-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದು, ಎನಗೆ ವೀರಶ್ರೀಯುಂ ಕೀರ್ತಿಶ್ರೀಯುಂ ಅಲ್ಲದೆ ಉೞಿದ ಪೆಂಡಿರ್ ಮೊರೆಯಲ್ಲ (ಸಂಬಂದವಿಲ್ಲ) ನೀವು ಅದನು ಏಕೆ ಆಗ್ರಹಂ ಗೆಯ್ವಿರಿ (ಒತ್ತಾಯ ಮಾಡುವಿರಿ)ಎಂದೊಡೆ ಇಂತುಂ ಎಮ್ಮೊಳ್ ಕಾದಲ್ ವೇೞ್ವುದೆಂದು-
ವಚನ:ಅರ್ಥ:ಎಂದು ಹೇಳಿದ ಪರಶುರಾಮನ ಮಾತನ್ನು ಭೀಷ್ಮನು ಕೇಳಿ ನನಗೆ ವೀರಲಕ್ಷ್ಮಿ ಮತ್ತು ಯಶೋಲಕ್ಷ್ಮಿಯರಲ್ಲದೆ ಉಳಿದ ಹೆಂಗಸರಲ್ಲಿ ಸಂಬಂಧವಿಲ್ಲ. ಏಕೆ ಕೋಪಿಸಿ ಕೊಳ್ಳುತ್ತೀರಿ, ಹೀಗಾದರೆ ನಮ್ಮೊಡನೆ ಯುದ್ಧಮಾಡುವುದು ಎಂದನು ಪರಷುರಾಮ.
ಮ|| ಕೆಳರ್ದಂದುಗ್ರ ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ
ಕಳವೇೞ್ದೀ ರ್ವರುಮೈಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂ|
ಕುಳದಿಂದೊರ್ವರನೊರ್ವರೆಚ್ಚು ನಿಜಪೀಠಾಂಭೋಜದಿಂ ಬ್ರಹ್ಮನು
ಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್|| ೭೯
ಪದ್ಯ-೭೯:ಪದವಿಭಾಗ-ಅರ್ಥ:ಕೆಳರ್ದು ಅಂದು ಉಗ್ರ (ಅಂದು ಕೆರಳಿ ಉಗ್ರ) ರಣಾಗ್ರಹ ಪ್ರಣಯದಿಂದ ಆಗಳ್ =[ಆಗ ಯುದ್ದದ ಅಪೇಕ್ಷೆಯ ಪ್ರೀತಿಯಿಂದ] ಕುರುಕ್ಷೇತ್ರಮಂ ಕಳವೇೞ್ದು ಈರ್ವರುಂ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂಕುಳದಿಂದ ಓರ್ವರನೊರ್ವರೆಚ್ಚು =[ಇಬ್ಬರೂ ಭಯಂಕರವಾದ ಯುದ್ಧಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರನ್ನೊಬ್ಬರು, ಬಾಣಪ್ರಯೋಗಮಾಡಿ ಘಾತಿಸಿ,] ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್==[ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ ಹಾರಿಹೋಗುವಂತೆ ಮಾಡಿ, ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು.]
ಪದ್ಯ-೭೯:ಅರ್ಥ:ಆಗ ಯುದ್ದದ ಅಪೇಕ್ಷೆಯ ಪ್ರೀತಿಯಿಂದ ಇಬ್ಬರೂ ಭಯಂಕರವಾದ ಯುದ್ಧಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರನ್ನೊಬ್ಬರು, ಬಾಣಪ್ರಯೋಗಮಾಡಿ ಘಾತಿಸಿ, ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ ಹಾರಿಹೋಗುವಂತೆ ಮಾಡಿ, ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು.
ಶಿಖರಿಣಿ|| ಅತರ್ಕ್ಯಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂ
ಪ್ರತಾಪಂ ಪೋಗೀತಂಗೆಣೆಯೆ ದಿವಿಜರ್ ವಾಯುಪಥದೊಳ್|
ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಸುಗಿದಂ ಭಾರ್ಗವನಿದೇಂ
ಪ್ರತಿಜ್ಞಾ ಗಾಂಗೇಯಂಗದಿರದಿರ‍್ ನಿಲ್ವನ್ನರೊಳರೇ|| ೮೦||
ಪದ್ಯ-೮೦:ಪದವಿಭಾಗ-ಅರ್ಥ: ಅತರ್ಕ್ಯಂ ವಿಕ್ರಾಂತಂ ಭುಜಬಲಂ ಅಸಾಮಾನ್ಯಮಧಿಕಂ ಪ್ರತಾಪಂ=[ಈತನದು ತರ್ಕಕ್ಕೆ ಮೀರಿದ ಭುಜಬಲ ಮತ್ತ ಅಸಮಾನ್ಯ ಪರಾಕ್ರಮ,] ಪೋಗು ಈತಂಗೆ ಎಣೆಯೆ ದಿವಿಜರ್=[ಹೋಗೋ! ಈತನಿಗೆ ದೇವತೆಗಳು ಸಾಟಿಯೇ?] ವಾಯುಪಥದೊಳ್ ಶಿತಾಸ್ತ್ರಂಗಳ್ ಪೊಂಕಂಗಿಡಿಸೆ (ಪಂಕ- ಗರ್ವ ಕೆಡಿಸೆ) ಸುಗಿದಂ (ಹೆದರಿದನು) ಭಾರ್ಗವನು ಇದೇಂ ಪ್ರತಿಜ್ಞಾ ಗಾಂಗೇಯಂಗೆ ಅದಿರದೆ ಇದಿರ‍್ ನಿಲ್ವನ್ನರ್ ಒಳರೇ==[ಆಕಾಶದಲ್ಲಿ ಹರಿತವಾದ ಬಾಣಗಳು ಪರಷುರಾಮನ ಗರ್ವವನ್ನು ಕೆಡಿಸಲು, ಹೆದರಿದನು ಭಾರ್ಗವನು, ಇದೇನು ಪ್ರತಿಜ್ಞಾಬದ್ಧ ಗಾಂಗೇಯನಿಗೆ ಹೆದರದೆ ಎದಿರು ನಿಲ್ಲುವವರು ಇದ್ದಾರೆಯೇ?]
ಪದ್ಯ-೮೦:ಅರ್ಥ:ಈತನದು ತರ್ಕಕ್ಕೆ ಮೀರಿದ ಭುಜಬಲ ಮತ್ತ ಅಸಮಾನ್ಯ ಪರಾಕ್ರಮ, ಹೋಗೋ! ಈತನಿಗೆ ದೇವತೆಗಳು ಸಾಟಿಯೇ? ಆಕಾಶದಲ್ಲಿ ಹರಿತವಾದ ಬಾಣಗಳು ಪರಷುರಾಮನ ಗರ್ವವನ್ನು ಕೆಡಿಸಲು, ಹೆದರಿದನು ಭಾರ್ಗವನು, ಇದೇನು ಪ್ರತಿಜ್ಞಾಬದ್ಧ ಗಾಂಗೇಯನಿಗೆ ಹೆದರದೆ ಎದಿರು ನಿಲ್ಲುವವರು ಇದ್ದಾರೆಯೇ? ಪರಷುರಾಮನು ಸೋತುಹೋದನು]

ಪರಷುರಾಮನ ಸೋಲು- ಅಂಬೆಯ ಅಗ್ನಿ ಪ್ರವೇಶ- ವಿಚಿತ್ರವೀರ್ಯನ ಮರಣ[ಸಂಪಾದಿಸಿ]

ವಚನ|| ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞಿದುಸಿರಲಪ್ಪೊಡಮಾಱದೆ ಮೂರ್ಛೆವೋಗಿರ್ದನಂ ಕಂಡಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನು ಮವಾರ್ಯವೀರ್ಯನುಮಾಗಿ ಕೆಲವು ರಾಜ್ಯಲಕ್ಷ್ಮಿಯಂ ತಾಳ್ದಿ ರಾಜಯಕ್ಷ್ಮ ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ (ಜ) ಮಾದುದರ್ಕೆ ಮಮ್ಮಲಮಱುಗಿ ಯೋಜನಗಂ ಸಿಂಧುಪುತ್ರನನಿಂತೆಂದಳ್-
ವಚನ:ಪದವಿಭಾಗ-ಅರ್ಥ:ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞದು ಉಸಿರಲಪ್ಪೊಡೆ ಮಾಱದೆ ಮೂರ್ಛೆವೋಗಿರ್ದನಂ ಕಂಡು ಅಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ (ಸಾವಿಗೆ ಕಾಣವಾಗಿ) ಪುಟ್ಟುವೆನು ಅಕ್ಕೆ ಎಂದು ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳು. ಇತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನುಂ ಅವಾರ್ಯವೀರ್ಯನುಮಾಗಿ (ತಡೆಇಲ್ಲದ ಪ್ರತಾದವನು) ಕೆಲವು ರಾಜ್ಯಲಕ್ಷ್ಮಿಯಂ ತಾಳ್ದಿ (ರಾಜ್ಯಭಾರ ಮಾಡಿ) ರಾಜಯಕ್ಷ್ಮ ತಪ್ತಶರೀರನು (ಕ್ಷಯರೋಗದಿಂದ ಬೆಂದ ಶರೀರ) ಆತ್ಮಜ ವಿಗತಜೀವಿಯಾಗಿ (ಮಕ್ಕಳಿಲ್ಲದವನಾಗಿ) ಪರಲೋಕಪ್ರಾಪ್ತನಾದೊಡೆ ( ಪ್ರಾಣ ಬಿಟ್ಟಾಗ) ಗಾಂಗೇಯನುಂ ಸತ್ಯವತಿಯುಂ ಅತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ(ಜ) ಮಾದುದರ್ಕೆ ಮಮ್ಮಲಮಱುಗಿ ಯೋಜನಗಂ ಸಿಂಧುಪುತ್ರನನು ಇಂತೆಂದಳ್-
ವಚನ:ಅರ್ಥ:ಹಾಗೆ ಗಾಂಗೇಯನಲ್ಲಿ ಪರಶುರಾಮನು ಕಾದಿ ಶಕ್ತಿಗುಂದಿ ಮಾತನಾಡಿವುದಕ್ಕೂ ಆಗದೆ ಮೂರ್ಛೆಹೋಗಿದ್ದವನನ್ನು ಕಂಡು ಅಂಬೆಯೆಂಬ ಗಯ್ಯಾಳಿ ನಿನ್ನ ಸಾವಿಗೆ ಕಾರಣವಾಗಿ ಹುಟ್ಟುತ್ತೇನೆ, ಆಗಲಿ ಎಂದು ಕೋಪದ ಬೆಂಕಿಯಿಂದ ಅಗ್ನಿಪ್ರವೇಶಮಾಡಿ ದ್ರುಪದನ ಮಹಾರಾಣಿಗೆ ಮಗನಾಗಿ ಹುಟ್ಟಿ ಕಾರಣಾಂತರದಿಂದ ಶಿಖಂಡಿಯಾಗಿದ್ದಳು. ಈ ಕಡೆ ವಿಚಿತ್ರವೀರ್ಯನು ಭೀಷ್ಮರ ಸಹಾಯದಿಂದ ತಡೆಯಿಲ್ಲದ ಪರಾಕ್ರಮವುಳ್ಳವನಾಗಿ ಕೆಲವು ಕಾಲ ರಾಜ್ಯಲಕ್ಷ್ಮಿಯನ್ನು ಧರಿಸಿ ಕ್ಷಯರೋಗದಿಂದ ಸುಡಲ್ಪಟ್ಟವನು, ಮಕ್ಕಳಿಲ್ಲದೆಯೇ ಸತ್ತನು. ಭೀಷ್ಮನೂ ಸತ್ಯವತಿಯೂ ಅತ್ಯತಿಯವಾದ ದುಖಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವಾರಾಗಿ ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ರಾಜ್ಯಕ್ಕೆ ರಾಜನೇ ಇಲ್ಲದಂತಾದುದಕ್ಕೆ ವಿಷೇಷವಾಗಿ ದುಖಪಟ್ಟು ಯೋಜನಗಂಧಿಯಾದ ಸತ್ಯವತಿಯು ಭೀಷ್ಮನಿಗೆ ಹೀಗೆಂದುಳು-
ಮ|| ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನ
ನ್ನಿಗೆ ಬನ್ನಂ ಬರಲೀಯದಾರ್ತೆಸಗಿದೀ ವಿಖ್ಯಾತಿಯುಂ ಕೀರ್ತಿಯುಂ|
ಮುಗಿಲಂ ಮುಟ್ಟಿದುದಲ್ತೆ ನಮ್ಮ ಕುಲದೊಳ್ ಮಕ್ಕಳ್ಪೆಱರ್ ನೀನೇ ಜ
ಟ್ಟಿಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ|| ೮೧||
ಪದ್ಯ-೮೦:ಪದವಿಭಾಗ-ಅರ್ಥ: ಸತ್ಯವತಿಯು ಮಗನನ್ನು ಕುರಿತು, 'ಮಗನ್ ಎಂಬಂತು ಧರಿತ್ರಿ (ಸತ್ಯವತಿಯು ಮಗನನ್ನು ಕುರಿತು, 'ಲೋಕವು 'ಮಗ ಎಂದರೆ ಇವನೇ ಮಗ,' ಎನ್ನುವ ಹಾಗೆ) ನಿನ್ನ ಅನುಜರಂ ಕೈಕೊಂಡು (ನಿನ್ನ ತಮ್ಮಂದಿರನ್ನು ಸ್ವೀಕರಸಿ,) ಮುಂಪೂಣ್ದ ನನ್ನಿಗೆ ಬನ್ನಂ ಬರಲೀಯದೆ ಆರ್ತು ಎಸಗಿದ ಈ ವಿಖ್ಯಾತಿಯುಂ ಕೀರ್ತಿಯುಂ ಮುಗಿಲಂ ಮುಟ್ಟಿದುದಲ್ತೆ =[ನಿನ್ನ ತಮ್ಮಂದಿರನ್ನು ಸ್ವೀಕರಿಸಿ ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ ಭಂಗಬರದ ಹಾಗೆ ಸಮರ್ಥನಾಗಿ ಮಾಡಿದ ನಿನ್ನ ಖ್ಯಾತಿಯೂ ಯಶಸ್ಸೂ ಮುಗಿಲನ್ನು ಮುಟ್ಟಿತಲ್ಲವೇ!(ಅತ್ಯುನ್ನತವಾಯಿತಲ್ಲವೇ! ];;ನಮ್ಮ ಕುಲದೊಳ್ ಮಕ್ಕಳ್ ಪೆಱರ್; ನೀನೇ ಜಟ್ಟಿಗನೈ; ಮುನ್ನಿನ ಒರಂಟುವೇಡ ಮಗನೇ ಕೈಕೊಳ್ ಧರಾಭಾರಮಂ=[ನಮ್ಮ ವಂಶಕ್ಕೆ ಬೇರೆ ಮಕ್ಕಳೇ? ಬೇಡ, ನೀನೇ ಶೂರನಾಗಿದ್ದೀಯೇ. ಹಿಂದಿನ ಒರಟುತನ ಬೇಡ. ಮಗನೇ ನೀನೇ ರಾಜ್ಯಭಾರವನ್ನು ವಹಿಸಿಕೊ, ಎಂದಳು.]|
ಪದ್ಯ-೮೦:ಅರ್ಥ:ಸತ್ಯವತಿಯು ಮಗನನ್ನು ಕುರಿತು, 'ಲೋಕವು 'ಮಗ ಎಂದರೆ ಇವನೇ ಮಗ,' ಎನ್ನುವ ಹಾಗೆ ನಿನ್ನ ತಮ್ಮಂದಿರನ್ನು ಸ್ವೀಕರಿಸಿ,ನಿನ್ನ ತಮ್ಮಂದಿರನ್ನು ಸ್ವೀಕರಿಸಿ ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ ಭಂಗಬರದ ಹಾಗೆ ಸಮರ್ಥನಾಗಿ ಮಾಡಿದ ನಿನ್ನ ಖ್ಯಾತಿಯೂ ಯಶಸ್ಸೂ ಮುಗಿಲನ್ನು ಮುಟ್ಟಿತಲ್ಲವೇ!(ಅತ್ಯುನ್ನತವಾಯಿತಲ್ಲವೇ! ನಮ್ಮ ವಂಶಕ್ಕೆ ಬೇರೆ ಮಕ್ಕಳೇ? ಬೇಡ, ನೀನೇ ಶೂರನಾಗಿದ್ದೀಯೇ. ಹಿಂದಿನ ಒರಟುತನ ಬೇಡ. ಮಗನೇ ನೀನೇ ರಾಜ್ಯಭಾರವನ್ನು ವಹಿಸಿಕೊ, ಎಂದಳು.
ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದೆನೆಂದು ಸತ್ಯವತಿಗಮರಾ ಪಗಾನಂದನನಿಂತೆಂದಂ||
ವಚನ:ಪದವಿಭಾಗ-ಅರ್ಥ:ಎಂದು ನಿನ್ನ ನಾನು ಇನಿತಂ ಕೈಯೊಡ್ಡಿ ಬೇಡಿದೆನೆಂದು ಸತ್ಯವತಿಗೆ ಅಮರಾಪಗಾ ನಂದನಂ (ಗಂಗೆಯ ಮಗ ಭೀಷ್ಮನು)ಇಂತು ಎಂದಂ|
ವಚನ:ಅರ್ಥ:ಎಂದು ಭೀಷ್ಮನನ್ನು ಕೈಯೊಡ್ಡಿ ಇಷ್ಟನ್ನು ಬೇಡಿದ ಸತ್ಯವತಿಗೆ, ದೇವಗಂಗಾನದಿಯ ಮಗನಾದ ಭೀಷ್ಮನು ಹೀಗೆಂದನು-
ಕಂ|| ಕಿಡುಗುಮೆ ರಾಜ್ಯಂ ರಾಜ್ಯದ
ತೊಡರ್ಪದೇವಾೞ್ತೆ ಬಾೞ್ತೆ ನನ್ನಿಯ ನುಡಿಯಂ|
ಕಿಡೆ ನೆಗೞೆ ನಾನುಮೆರಡಂ
ನುಡಿದೊಡೆ ಹಠಿ ಹರ ಹಿರಣ್ಯಗರ್ಭರ್ ನಗರೇ|| ೮೨||
ಪದ್ಯ-೮೨:ಪದವಿಭಾಗ-ಅರ್ಥ:ಕಿಡುಗುಮೆ ರಾಜ್ಯಂ[ರಾಜ್ಯವು ಕೆಡತಕ್ಕುದೇ (ಅಶಾಶ್ವತವಾದುದರಿಂದ)] ರಾಜ್ಯದ ತೊಡರ್ಪದು ಏವಾೞ್ತೆ ಬಾೞ್ತೆ;=[ರಾಜ್ಯದ ತೊಡಕು ನನಗೇಕೆ? ನನ್ನ ಬದುಕು] ನನ್ನಿಯ ನುಡಿಯಂ ಕಿಡೆ, ನೆದೞೆ ನಾನುಂ ಎರಡಂ ನುಡಿದೊಡೆ ಹಠಿ ಹರ ಹಿರಣ್ಯಗರ್ಭರ್ ನಗರೇ=[ಸತ್ಯಪ್ರತಿಜ್ಞೆಗೆ ವಿರೋಧವಾಗುವಂತೆ ನಡೆದರೆ (ನಾನೂ ಎರಡು ಮಾತನ್ನಾಡಿದರೆ) ತ್ರಿಮೂರ್ತಿಗಳಾದ ಬ್ರಹ್ಮವಿಷ್ಣುಮಹೇಶ್ವರರು ನಗುವುದಿಲ್ಲವೇ?].
ಪದ್ಯ-೮೨:ಅರ್ಥ:. ರಾಜ್ಯವು ಕೆಡತಕ್ಕುದೇ (ಅಶಾಶ್ವತವಾದುದರಿಂದ); ರಾಜ್ಯದ ತೊಡಕು ನನಗೇಕೆ? ನನ್ನ ಬದುಕು ಸತ್ಯಪ್ರತಿಜ್ಞೆಗೆ ವಿರೋಧವಾಗುವಂತೆ ನಡೆದರೆ (ನಾನೂ ಎರಡು ಮಾತನ್ನಾಡಿದರೆ) ತ್ರಿಮೂರ್ತಿಗಳಾದ ಬ್ರಹ್ಮವಿಷ್ಣುಮಹೇಶ್ವರರು ನಗುವುದಿಲ್ಲವೇ?
ಚಂ|| ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಣದೀಧಿತಿ
ಕ್ರಮಮನಗಾಧ ವಾರಿಯೆ ಗುಣ್ಪನಿಳಾವಧು ತನ್ನ ತಿಣ್ಪನು|
ತ್ತಮ ಕುಲಶೈಲಮುನ್ನತಿಯನೇಳಿದವಾಗೆ ಬಿಸುೞ್ಪೊಡಂ ಬಿಸು
ೞ್ಕೆ ಮ ಬಿಸುಡೆಂ ಮದೀಯ ಪುರುಷವ್ರತಮೊಂದುಮನೀಗಳಂಬಿಕೇ| ೮೩||
ಪದ್ಯ-೮೩:ಪದವಿಭಾಗ-ಅರ್ಥ:ಹಿಮಕರನು ಆತ್ಮಶೀತರುಚಿಯಂ, (ಚಂದ್ರನು ಶೀತವನ್ನು), ದಿನನಾಯಕನು ಉಷ್ಣದೀಧಿತಿಕ್ರಮಮನು (ಸೂರ್ಯನು ಬಿಸಿಯನ್ನು), ಅಗಾಧ ವಾರಿಧಿಯೆ ಗುಣ್ಪಂ (ಸಮುದ್ರವು ಆಳವನ್ನು) ಇಳಾವಧು ತನ್ನ ತಿಣ್ಪನು(ಭೂತಾಯಿ ತನ್ನ ಭಾರವನ್ನು), ಉತ್ತಮ ಕುಲಶೈಲಂ ಉನ್ನತಿಯನು (ಎತ್ತರವನ್ನು) ಏಳಿದವಾಗೆ (ಬೇಡವೆಂದು) ಬಿಸುೞ್ಪೊಡಂ ಬಿಸುೞ್ಕೆ (ಬಿಸಾಡಿದರೆ ಬಿಸುಡಲಿ); ಮಬಿಸುಡೆಂ (ಬಿಸುಡೆನು) ಮದೀಯ ಪುರುಷವ್ರತಮಂ ಒಂದುಮನು (ನನ್ನ ಬ್ರಹ್ಮಚರ್ಯ ವ್ರತವನ್ನು)ಈಗಳು ಅಂಬಿಕೇ (ತಾಯೇ)
ಪದ್ಯ-೮೩:ಅರ್ಥ:ಚಂದ್ರನು ತನ್ನ ಶೀತಕಿರಣವನ್ನೂ, ಸೂರ್ಯನು ತನ್ನ ಬಿಸಿ ಕಿರಣ ತೀವ್ರತೆಯನ್ನೂ, ಅತ್ಯಂತ ಆಳವಾದ ಸಮುದ್ರವು ತನ್ನ (ಗಾಂಭೀರ್ಯ) ಆಳವನ್ನೂ, ಈ ಭೂದೇವಿಯು ತನ್ನ ಭಾರವನ್ನೂ, ಶ್ರೇಷ್ಠವಾದ ಕುಲಪರ್ವತಗಳು ತಮ್ಮ ಔನ್ನತ್ಯವನ್ನೂ, ಹಾಸ್ಯಾಸ್ಪದವಾಗುವಂತೆ ಬಿಸುಟರೂ ಬಿಸಾಡಲಿ. ಎಲೆ ತಾಯೀ ನಾನು ನನ್ನ ಬ್ರಹ್ಮಚರ್ಯ ವ್ರತವೊಂದನ್ನು ಮಾತ್ರ ಬಿಸುಡುವುದಿಲ್ಲ/ ತೊರೆಯುವುದಿಲ್ಲ. ಎಂದನು ಭೀಷ್ಮ.
ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯ್ದು ತಪ್ಪಿದನಿಲ್ಲ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ನುಡಿದ ಪ್ರತಿಜ್ಞೆಯನು ಏಗೆಯ್ದು (ಏನು ಮಾಡಿದರೂ) ತಪ್ಪಿದನಿಲ್ಲ-
ವಚನ:ಅರ್ಥ:ಹೀಗೆ ಹೇಳಿದ ಭೀಷ್ಮ ತನ್ನ ಮಾಡಿದ ಪ್ರತಿಜ್ಞೆಯನ್ನು ಏನು ಮಾಡಿದರೂ ತಪ್ಪಿದವನಾಗಲಿಲ್ಲ.
ಕಂ|| ರಂಗತ್ತರಂತ ರ್ವಾರ್ಧಿ ಚ
ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ|
ಗಂಗೇಯನುಂ ಪ್ರತಿಜ್ಞಾ
ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ|| ೮೪
ಪದ್ಯ-೮೪:ಪದವಿಭಾಗ-ಅರ್ಥ:ರಂಗತ್ತರಂಗವಾರ್ಧಿ ಚಯಂಗಳ್ (ನರ್ತಿಸುವ ಅಲೆಗಳುಳ್ಳ ಕಡಲುಗಳ ಸಮೂಹ) ತಂತಮ್ಮ ಮೇರೆಯಂ ದಾಂಟುವೊಡಂ (ತಮ್ಮ ತಮ್ಮ ಎಲ್ಲೆಯನ್ನು ಮೀರಿದರೂ), ಗಂಗೇಯನುಂ ಪ್ರತಿಜ್ಞಾಗಾಂಗೇಯನುಂ (ಅರಕೇಸರಿ) ಒರ್ಮೆ ನುಡಿದುದಂ ತಪ್ಪುವರೇ(ಭೀಷ್ಮನೂ ಅರಿಕೇಸರಿಯೂ ಒಂದು ಬಾರಿ ಮಾಡಿದ ಭಾಷೆಯನ್ನು ತಪ್ಪುತ್ತಾರಯೇ? ಇಲ್ಲ.)
ಪದ್ಯ-೮೪:ಅರ್ಥ:ನರ್ತಿಸುವ ಅಲೆಗಳುಳ್ಳ ಕಡಲುಗಳ ಸಮೂಹ ತಮ್ಮ ತಮ್ಮ ಎಲ್ಲೆಯನ್ನು ಮೀರಿದರೂ, ಭೀಷ್ಮನೂ ಅರಿಕೇಸತಿಯೂ ಒಂದು ಬಾರಿ ಮಾಡಿದ ಭಾಷೆಯನ್ನು ತಪ್ಪುತ್ತಾರಯೇ? ಇಲ್ಲ.

ವ್ಯಾಸರ ಯೋಗಶಕ್ತಿಯಿಂದ ಧೃತರಾಷ್ಟ್ರ, ಪಾಂಡು, ವಿದುರರ ಜನನ[ಸಂಪಾದಿಸಿ]

ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯ್ದುಂಮೊಡಂಬಡಿಸಲಾಱದೆ ಸತ್ಯವತಿ ತಾನುಮಾತನುಮಾಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದ ಸೋಮವಂಶವಿಗಳೆಮ್ಮ ಕುಲಸಂತತಿ ಗಮಾರುಮಿಲ್ಲದೆಡೆವಱಿದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು-
ವಚನ:ಪದವಿಭಾಗ-ಅರ್ಥ:ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನಂ ಏಗೆಯ್ದುಂ ಒಡಂಬಡಿಸಲಾಱದೆ ಸತ್ಯವತಿ ತಾನುಂ ಆತನುಂ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನು ಏಗೆಯ್ವುದು ಏನಂ ತೀರ್ಚುವುದು ಎಂದೊಡೆ, ಸತ್ಯವತಿ ಇಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದ ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶವಿಗಳು ಎಮ್ಮ ಕುಲಸಂತತಿಗಂ ಆರುಮಿಲ್ಲದೆ ಎಡೆವಱಿದು ಕಿಡುವಂತಾಗಿರ್ದುದು ಅದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳ್ ಆಂಬಿಕೆಗಂ ಅಂಬಾಲೆಗಂ ಪುತ್ರರು ಅಪ್ಪಂತು ವರಪ್ರಸಾದಮಂ ದಯೆಗೆಯ್ವುದು ಎನೆ ಅಂತೆಗೆಯ್ವೆನೆಂದು-
ವಚನ:ಅರ್ಥ:ಹಾಗೆ ಸ್ಥಿರಪ್ರತಿಜ್ಞೆಯುಳ್ಳ ಗಾಂಗೇಯನನ್ನು ಏನು ಮಾಡಿದರೂ ಒಪ್ಪಿಸಲಾರದೆ ಸತ್ಯವತಿಯು ತಾನೂ ಆತನೂ ಆಲೋಚಿಸಿ ನಿಷ್ಕೃಷ್ಟವಾದ ಮಂತ್ರಾಲೋಚನೆಮಾಡಿ ಕೃಷ್ಣದ್ವೆ ಪಾಯನ ವ್ಯಾಸರನ್ನು ನೆನೆದು ಬರಿಸಲಾಗಿ ವ್ಯಾಸಮುನೀಂದ್ರನು ಏನು ಮಾಡಬೇಕು ಏನನ್ನು ಈಡೇರಿಸಬೇಕು ಎನ್ನಲು, ಸತ್ಯವತಿಯು ಹೀಗೆಂದಳು- ಹಿರಣ್ಯಗರ್ಭ ಬ್ರಹ್ಮನಿಂದ ಹಿಡಿದು ಏಕಪ್ರಕಾರವಾಗಿ ನಡೆದುಬಂದ ನಮ್ಮ ಸೋಮವಂಶವು ಈಗ ನಮ್ಮ ಸಂತತಿಗೆ ಯಾರೂ ಇಲ್ಲದೆ ಮಧ್ಯೆ ಹರಿದುಹೋಗಿ ನಾಶವಾಗುವಂತಾಗಿದೆ. ಆದಕಾರಣದಿಂದ ನಿನ್ನ ತಮ್ಮನಾದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಅಂಬಿಕೆಗೂ ಅಂಬಾಲಿಕೆಗೂ ಮಕ್ಕಳಾಗುವ ಹಾಗೆ ವರಪ್ರಸಾದವನ್ನು ಕರುಣಿಸಬೇಕು ಎಂದಳು. ವ್ಯಾಸನು ಹಾಗೆಯೇ ಆಗಲೆಂದು ಒಪ್ಪಿದನು.
ಚಂ|| ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ ಯೋ
ಗದ ಬಲಮುಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ|
ಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂ
ತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ|| ೮೫||
ಪದ್ಯ-೮೫:ಪದವಿಭಾಗ-ಅರ್ಥ: ತ್ರಿದಶ ನರ ಸುರ ಉರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ(ದೇವತೆಗಳು ಮನುಷ್ಯರು ರಾಕ್ಷಸರು ಮತ್ತು (ಪಾತಾಳಲೋಕದ) ಸರ್ಪಗಳು ಮೊದಲಾದವರ ಗುಂಪಿಗೆ ಪ್ರಭುವೂ ನಿಷ್ಕೃಷ್ಟವಾದ ತತ್ವಜ್ಞಾನಿಯೂ ಯೋಗಿಯೂ ಆದ ವ್ಯಾಸಮಹರ್ಷಿಯು), ಯೋಗದ ಬಲಮುಣ್ಮಿ ಪೊಣ್ಮಿ ನಿಲೆ(ತನ್ನ ಯೋಗಶಕ್ತಿಯು ಹುಟ್ಟಿ ಬಲಗೊಂಡುಕಾಣುವಂತೆ ಸ್ಥಿರವಾಗಿ ನಿಲ್ಲಲು), ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರಂ ನಯದೆ ನೋಡೆ (ಮಕ್ಕಳು ಬೇಕೆಂಬ ವರವನ್ನು ಬೇಡುವವರಾಗಿ ತನ್ನ ಎದುರಿನಲ್ಲೇ ನಿಂತಿರುವವರನ್ನು ಪ್ರೀತಿಯಿಂದ ನೋಡಲಾಗಿ ) ಮುನೀಂದ್ರನ ದಿವ್ಯದೃಷ್ಟಿಮಂತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ(ಆ ಋಷಿಶ್ರೇಷ್ಠನ ದಿವ್ಯದೃಷ್ಟಿಯಂತ್ರದಿಂದ ಆ ಇಬ್ಬರು ಸ್ತ್ರೀಯರಲ್ಲಿಯೂ ಹೊಸದಾಗಿ ಗರ್ಭಸೌಂದರ್ಯವು ತುಂಬಿತು. (ಇಬ್ಬರಿಗೂ ಗರ್ಭಧಾರಣೆ ಆಯಿತು) )
ಪದ್ಯ-೮೫:ಅರ್ಥ:ದೇವತೆಗಳು ಮನುಷ್ಯರು ರಾಕ್ಷಸರು ಮತ್ತು (ಪಾತಾಳಲೋಕದಲ್ಲಿರವ) ಸರ್ಪಗಳು ಮೊದಲಾದವರ ಗುಂಪಿಗೆ ಪ್ರಭುವೂ ನಿಷ್ಕೃಷ್ಟವಾದ ತತ್ವಜ್ಞಾನಿಯೂ ಯೋಗಿಯೂ ಆದ ವ್ಯಾಸಮಹರ್ಷಿಯು, ತನ್ನ ಯೋಗಶಕ್ತಿಯು ಹುಟ್ಟಿ ಬಲಗೊಂಡುಕಾಣುವಂತೆ ಸ್ಥಿರವಾಗಿ ನಿಲ್ಲಲು, ಮಕ್ಕಳು ಬೇಕೆಂಬ ವರವನ್ನು ಬೇಡುವವರಾಗಿ ತನ್ನ ಎದುರಿನಲ್ಲೇ ನಿಂತಿರುವವರನ್ನು ಪ್ರೀತಿಯಿಂದ ನೋಡಲಾಗಿ, ಆ ಋಷಿಶ್ರೇಷ್ಠನ ದಿವ್ಯದೃಷ್ಟಿಯಂತ್ರದಿಂದ ಆ ಇಬ್ಬರು ಸ್ತ್ರೀಯರಲ್ಲಿಯೂ ಹೊಸದಾಗಿ ಗರ್ಭಸೌಂದರ್ಯವು ತುಂಬಿತು. (ಇಬ್ಬರಿಗೂ ಗರ್ಭಧಾರಣೆ ಆಯಿತು).
ವ|| ಅಂತು ದಿವ್ಯಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞುಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕು ಮಂಬಿಕೆಯ ಸೂೞುಯ್ತೆಯಪ್ಪಾಕೆ ದರಸಹಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಂದಾಕೆಯ ಮಗಂ ವಿದುರನೆಂಬ ನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪೇೞ್ದು ಮುನಿಪುಂಗವಂ ಪೋದನಿತ್ತಂ-
ವಚನ:ಪದವಿಭಾಗ-ಅರ್ಥ:ಅಂತು ದಿವ್ಯಸಂಯೋಗದೊಳು ಇರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದ ಅಂಬಿಕೆಗೆ ಪೇೞ್ದೊಡೆ ಆಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲು ಅಲಸಿ ತನ್ನ ಸೂೞುಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲು ಅಟ್ಟಿದೊಡೆ ಆಕೆಗೆ ವರದನಾಗಿ(ವರಕೊಡುವವನಾಗಿ)=[ಹಾಗೆ ದಿವ್ಯವಾದ (ಋಷಿ ಶ್ರೇಷ್ಠನ) ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಇನ್ನೊಬ್ಬ ಮಗನ ವರವನ್ನು ಕೇಳು ಎಂದು ಅಂಬಿಕೆಗೆ ಹೇಳಲು ಅವಳು ವ್ಯಾಸಭಟ್ಟಾರಕನ ಹತ್ತಿರ ಹೋಗುವುದಕ್ಕೆ ಆಯಾಸಪಟ್ಟು ತನ್ನ ದಾಸಿಯನ್ನು ತನ್ನ ಹಾಗೆಯೇ ಅಲಂಕರಿಸಿ ವರವನ್ನು ಪ್ರಾರ್ಥಿಸುವಂತೆ ಹೇಳಿ ಕಳುಹಿಸಲು (ವ್ಯಾಸಮಹರ್ಷಿಯು) ಅವಳಿಗೂ ವರವನ್ನು ಕೊಟ್ಟು ]; ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಂ ಇಂತೆಂದನು ಎನ್ನ ವರಪ್ರಸಾದ ಕಾಲದೊಳ್ ಎನ್ನಂ ಕಂಡು ಅಂಬಿಕೆ ಕಣ್ಣಂ ಮುಚ್ಚಿದಳು ಅಪ್ಪುದಱಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನು ಅಕ್ಕುಂ, ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳು ಅಪ್ಪುದಱಿಂದ ಆಕೆಗೆ ಪಾಂಡುರೋಗ ಸಂಗತನುಂ ಅನೇಕ ಭದ್ರಲಕ್ಷಣಲಕ್ಷಿತನುಂ ಅತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಂ,=[ಸತ್ಯವತಿ ಮತ್ತು ಭೀಷ್ಮರನ್ನು ಕುರಿತು ನನ್ನ ವರಪ್ರಸಾದ ಕಾಲದಲ್ಲಿ ನನ್ನನ್ನು ನೋಡಿ ಅಂಬಿಕೆಯು ಕಣ್ಣನ್ನು ಮುಚ್ಚಿದಳಾದುದರಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರನಾಗಿಯೂ ಹುಟ್ಟುಗುರುಡನಾಗಿಯೂ ಹುಟ್ಟುತ್ತಾನೆ. ಅಂಬೆಯು ನನ್ನ ರೂಪವನ್ನು ಕಂಡು ಮುಖವನ್ನು ಬೆಳ್ಳಗೆ ಮಾಡಿಕೊಂಡುದರಿಂದ ಆಕೆಯ ಮಗನು ಪಾಂಡುರೋಗದಿಂದ ಕೂಡಿದವನೂ ಅನೇಕ ಶುಭಲಕ್ಷಣಗಳಿಂದ ಗುರುತುಮಾಡಲ್ಪಟ್ಟವನೂ (ಕೂಡಿದವನೂ) ಅತ್ಯಂತ ಶೌರ್ಯಶಾಲಿಯೂ ಆಗಿ ಪಾಂಡುರಾಜನೆಂಬ ಮಗನಾಗುತ್ತಾನೆ.]; ಅಂಬಿಕೆಯ ಸೂೞುಯ್ತೆಯಪ್ಪ ಆಕೆ ದರಸಹಿತ(ಹುಸಿನಗೆ) ವದನಾರವಿಂದೆಯಾಗಿ ಬರವಂ ಕೈಕೊಂಡಳು ಅಪ್ಪುದಱಂದ ಆಕೆಯ ಮಗಂ ವಿದುರನೆಂಬನು ಅನಂಗ ಆಕಾರನುಂ(ಮನ್ಮಥನ ಆಕಾರನು) ಆಚಾರವಂತನುಂ ಬುದ್ಧಿವಂತನುಂ ಅಕ್ಕುಮೆಂದು ಪೇೞ್ದು ಮುನಿಪುಂಗವಂ ಪೋದನು ಇತ್ತಂ-=[ಅಂಬಿಕೆಯ ದಾದಿಯಾದವಳು ಹುಸಿನಗೆಯಿಂದ ಕೂಡಿದ ಮುಖ ಕಮಲವುಳ್ಳವಳಾಗಿ ಬಂದುದರಿಂದ ಆಕೆಯ ಮಗನಾದ ವಿದುರನು ಮನ್ಮಥಾಕಾರವುಳ್ಳವನೂ ಆಚಾರವಂತನೂ ಬುದ್ಧಿವಂತನೂ ಆಗುವನು ಎಂದು ಹೇಳಿ ಮುನಿಶ್ರೇಷ್ಠನು ಹೋದನು. ಇತ್ತ-];
ವಚನ:ಅರ್ಥ:ಹಾಗೆ ದಿವ್ಯವಾದ (ಋಷಿ ಶ್ರೇಷ್ಠನ) ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಇನ್ನೊಬ್ಬ ಮಗನ ವರವನ್ನು ಕೇಳು ಎಂದು ಅಂಬಿಕೆಗೆ ಹೇಳಲು ಅವಳು ವ್ಯಾಸಭಟ್ಟಾರಕನ ಹತ್ತಿರ ಹೋಗುವುದಕ್ಕೆ ಆಯಾಸಪಟ್ಟು ತನ್ನ ದಾಸಿಯನ್ನು ತನ್ನ ಹಾಗೆಯೇ ಅಲಂಕರಿಸಿ ವರವನ್ನು ಪ್ರಾರ್ಥಿಸುವಂತೆ ಹೇಳಿ ಕಳುಹಿಸಲು (ವ್ಯಾಸಮಹರ್ಷಿಯು) ಅವಳಿಗೂ ವರವನ್ನು ಕೊಟ್ಟು, ಸತ್ಯವತಿ ಮತ್ತು ಭೀಷ್ಮರನ್ನು ಕುರಿತು ನನ್ನ ವರಪ್ರಸಾದ ಕಾಲದಲ್ಲಿ ನನ್ನನ್ನು ನೋಡಿ ಅಂಬಿಕೆಯು ಕಣ್ಣನ್ನು ಮುಚ್ಚಿದಳಾದುದರಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರನಾಗಿಯೂ ಹುಟ್ಟುಗುರುಡನಾಗಿಯೂ ಹುಟ್ಟುತ್ತಾನೆ. ಅಂಬೆಯು ನನ್ನ ರೂಪವನ್ನು ಕಂಡು ಮುಖವನ್ನು ಬೆಳ್ಳಗೆ ಮಾಡಿಕೊಂಡುದರಿಂದ ಆಕೆಯ ಮಗನು ಪಾಂಡುರೋಗದಿಂದ ಕೂಡಿದವನೂ ಅನೇಕ ಶುಭಲಕ್ಷಣಗಳಿಂದ ಗುರುತುಮಾಡಲ್ಪಟ್ಟವನೂ (ಕೂಡಿದವನೂ) ಅತ್ಯಂತ ಶೌರ್ಯಶಾಲಿಯೂ ಆಗಿ ಪಾಂಡುರಾಜನೆಂಬ ಮಗನಾಗುತ್ತಾನೆ. ಅಂಬಿಕೆಯ ದಾದಿಯಾದವಳು ಹುಸಿನಗೆಯಿಂದ ಕೂಡಿದ ಮುಖ ಕಮಲವುಳ್ಳವಳಾಗಿ ಬಂದುದರಿಂದ ಆಕೆಯ ಮಗನಾದ ವಿದುರನು ಮನ್ಮಥಾಕಾರವುಳ್ಳವನೂ ಆಚಾರವಂತನೂ ಬುದ್ಧಿವಂತನೂ ಆಗುವನು ಎಂದು ಹೇಳಿ ಮುನಿಶ್ರೇಷ್ಠನು ಹೋದನು. ಇತ್ತ-
ಪೃಥ್ವಿ|| ವರಂಬಡೆದ ಸಂತಸಂ ಮನದೊಳಾಗಲೊಂದುತ್ತರೋ
ತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿಯಾ|
ದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂ
ಡುರಾಜ ವಿದುರರ್ಕಳಂ ಕ್ರಮದೆ ಮೂವರು ಮೂವರಂ|| ೮೬||
ಪದ್ಯ-೮೬:ಪದವಿಭಾಗ-ಅರ್ಥ:(ಆ ಮೂವರು ಸ್ತ್ರೀಯರೂ )ವರಂಬಡೆದ ಸಂತಸಂ ಮನದೊಳಾಗಲು (ವರ ಪಡೆದ ಸಂತೋಷ ಮನಸ್ಸಿನಲ್ಲಿ ತುಂಬಲು), ಒಂದು ಉತ್ತರೋತ್ತರಂ ಬಳೆವ ಮಾೞ್ಕೆಯಿಂ (ಒಂದು ಸಂತತಿತ ಸತತ ಮುಂದುವರಿಯುವ ಕ್ರಿಯೆಯಿಂದ),ಬಳೆವ ಗರ್ಭಮಂ ತಾಳ್ದಿಂ ಅದರಂ ಬೆರಸು(ಹಾಗೆಯೇ ಬೆಳೆಯುತ್ತಿರುವ ಗರ್ಭವನ್ನು ಧರಿಸಿ, ಅದನ್ನು ಹೊಂದಿದರು ), ಪೆತ್ತರು ಅಂದು ಧೃತರಾಷ್ಟ್ರ ವಿಖ್ಯಾತ ಪಾಂಡುರಾಜ ವಿದುರರ್ಕಳಂ ಕ್ರಮದೆ ಮೂವರು ಮೂವರಂ(ಮೂವರೂ ಧೃತರಾಷ್ಟ್ರ, ವಿಖ್ಯಾತನಾದ ಪಾಂಡುರಾಜ, ವಿದುರ ಎಂಬ ಮೂವರನ್ನು ಕ್ರಮವಾಗಿ ಅಂದು ಪಡೆದರು).
ಪದ್ಯ-೮೬:ಅರ್ಥ:ಆ ಮೂವರು ಸ್ತ್ರೀಯರೂ ವರ ಪಡೆದ ಸಂತೋಷ ಮನಸ್ಸಿನಲ್ಲಿ ತುಂಬಲು, ಒಂದು ಸಂತತಿ ಸತತ ಮುಂದುವರಿಯುವ ಕ್ರಿಯೆಯಿಂದ, ಹಾಗೆಯೇ ಬೆಳೆಯುತ್ತಿರುವ ಗರ್ಭವನ್ನು ಧರಿಸಿ, ಅದನ್ನು ಹೊಂದಿದರು. ಮೂವರೂ ಧೃತರಾಷ್ಟ್ರ, ವಿಖ್ಯಾತನಾದ ಪಾಂಡುರಾಜ, ವಿದುರ ಎಂಬ ಮೂವರನ್ನು ಕ್ರಮವಾಗಿ ಅಂದು ಪಡೆದರು.
ಕಂ|| ಆ ವಿವಿಧ ಲಕ್ಷಣಂಗಳೊ
ಳಾವರಿಸಿದ ಕುಲದ ಬಲದ ಚಲದಳವಿಗಳೊಳ್|
ಮೂವರುಮನಾದಿ ಪುರುಷರ್
ಮೂವರುಮೆನಲಲ್ಲದತ್ತ ಮತ್ತೇನೆಂಬರ್|| ೮೭||
ಪದ್ಯ-೮೭:ಪದವಿಭಾಗ-ಅರ್ಥ: ಆ ವಿವಿಧ ಲಕ್ಷಣಂಗಳೊಳು ಆವರಿಸಿದ ಕುಲದ ಬಲದ ಚಲದ ಅಳವಿಗಳೊಳ್(ಆ ವಿವಿಧ ಲಕ್ಷಣಂಗಳಿಂದ ಕೂಡಿದ ವಂಶದ, ಶೌರ್ಯ, ಛಲದ ಪ್ರಮಾಣಗಳಲ್ಲಿ ) ಮೂವರುಂ ಅನಾದಿ (ಆದಿ?) ಪುರುಷರ್ ಮೂವರುಂ ಎನಲು ಅಲ್ಲದೆ ಅತ್ತ ಮತ್ತೇನೆಂಬರ್(ಆ ಮೂವರುಮನಾದಿ= ಆ ಮೂವರುಂ- ಅನಾದಿ; ಆ ಮೂವರನ್ನೂ ಆನಾದಿ ಪುರುಷರಾದ ತ್ರಿಮೂರ್ತಿಗಳೂ ಆದ ಬ್ರಹ್ಮವಿಷ್ಣು ಶಿವರೆಂದು ಹೇಳದೆ ಮತ್ತೇನೆಂದು ಹೇಳುವುದು).
ಪದ್ಯ-೮೭:ಅರ್ಥ:ಆ ವಿವಿಧ ಲಕ್ಷಣಂಗಳಿಂದ ಕೂಡಿದ ವಂಶದ, ಶೌರ್ಯ, ಛಲದ ಪ್ರಮಾಣಗಳಲ್ಲಿ ಆ ಮೂವರನ್ನೂ ಆನಾದಿ ಪುರುಷರಾದ ತ್ರಿಮೂರ್ತಿಗಳೂ ಆದ ಬ್ರಹ್ಮವಿಷ್ಣು ಶಿವರೆಂದು ಹೇಳದೆ ಮತ್ತೇನೆಂದು ಹೇಳುವುದು.
ವ|| ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯವಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಳತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು-
ವಚನ:ಪದವಿಭಾಗ-ಅರ್ಥ:ಅಂತವರ್ಗೆ ಜಾತಕರ್ಮ ನಾಮಕರಣ ಅನ್ನಪ್ರಾಶನ ಚೌಲ ಉಪನಯವಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಉ ಅತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು-
ವಚನ:ಅರ್ಥ:|| ಹಾಗೆ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ್ಯ ಉಪನಯನವೇ ಮೊದಲಾದ ಹದಿನಾರು ಕರ್ಮಗಳನ್ನು ಪ್ರಧಾನವಾಗಿ ಭೀಷ್ಮನು ತಾನೇ ಮುಂದೆ ನಿಂತು ಮಾಡಿ ಅವರನ್ನು ಶಸ್ತ್ರವಿದ್ಯೆಯಲ್ಲಿಯೂ ಶಾಸ್ತ್ರವಿದ್ಯೆಯಲ್ಲಿಯೂ ಪಂಡಿತರನ್ನಾಗಿ ಮಾಡಿದನು. ಧೃತರಾಷ್ಟ್ರನಿಗೆ ಗಾಂಧಾರರಾಜನಾದ ಸೌಬಲನ ಮಗಳೂ ಶಕುನಿಯ ಒಡಹುಟ್ಟಿದವಳೂ ಆದ ಗಾಂಧಾರಿಯನ್ನು ಮದುವೆ ಮಾಡಿದನು.

ಕರ್ಣನ ಜನನ ಮತ್ತು ಏಳಿಗೆ[ಸಂಪಾದಿಸಿ]

ಕಂ || ಮತ್ತಿತ್ತ ನೆಗೞ್ತೆಯ ಪುರು
ಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ |
ಮತ್ತಗಜಗಮನೆ ಯದುವಂ
ಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್ || ೮೮||
ಪದ್ಯ-೮೮:ಪದವಿಭಾಗ-ಅರ್ಥ:ಮತ್ತೆ ಇತ್ತ ನೆಗೞ್ತೆಯ (ಪ್ರಸಿದ್ಧ)ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ಮತ್ತಗಜಗಮನೆ ಯದುವಂಶೋತ್ತಮೆ ಯೆನೆ ಕುಂತಿ ಕುಂತಿಭೋಜನ ಮನೆಯೊಳ್
ಪದ್ಯ-೮೮:ಅರ್ಥ:ಈ ಕಡೆ ಪ್ರಸಿದ್ಧನಾದ ಶ್ರೀಕೃಷ್ಣನ ತಾತನಾದ ಶೂರನೆಂಬ ಯದುವಂಶದ ರಾಜನಿಗೆ ಮದಗಜಗಮನೆಯೂ ಯದುವಂಶಶ್ರೇಷ್ಠಳೂ ಆದ ಕುಂತಿಯೆಂಬ ಮಗಳು ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರಲು;
ಬಳೆಯುತ್ತಿರ್ಪನ್ನೆಗಮಾ
ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂ |
ಗೊಳೆ ಕೊಟ್ಟಂ ದುರ್ವಾಸಂ
ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ || ೮೯||
ಪದ್ಯ-೮೯:ಪದವಿಭಾಗ-ಅರ್ಥ:ಬಳೆಯುತ್ತಿರ್ಪ ಅನ್ನೆಗಂ ಆ ನಳಿನಾಸ್ಯೆಯು ಗೆಯ್ದ ಒಂದು ಶುಶ್ರೂಷೆ ಮನಂಗೊಳೆ ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ
ಪದ್ಯ-೮೯:ಅರ್ಥ:ಆ ಕಮಲಮುಖಿಯಾದ ಕುಂತಿಯು ಮಾಡಿದ ಶುಶ್ರೂಷೆಯಿಂದ ಮೆಚ್ಚಿದ ದುರ್ವಾಸನೆಂಬ ಋಷಿಯು ಪ್ರಕಾಶಮಾನವಾದ (ಅಯ್ದು?) ಮಂತ್ರಾಕ್ಶರಗಳನ್ನು ದಯಮಾಡಿ ಕೊಟ್ಟನು.
ವ|| ಅಂತು ಕೊಟ್ಟಯ್ದು ಮಂತ್ರಾಕ್ಷರಂಗಳನು ಆಹ್ವಾನಂ ಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ-
ವಚನ:ಪದವಿಭಾಗ-ಅರ್ಥ:ಅಂತು ಕೊಟ್ಟಯ್ದು ಮಂತ್ರಾಕ್ಷರಂಗಳನು ಆಹ್ವಾನಂ ಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೆ ಒಣದು ದಿವಸಂ ಕೊಂತಿ-
ವಚನ:ಅರ್ಥ:|| ಹಾಗೆ ಕೊಟ್ಟು ಈ ಅಯ್ದುಮಂತ್ರಗಳನ್ನು ನೀನು ಉಚ್ಚರಿಸಿ ಕರೆದರೆ ನಿನ್ನ ಮನಸ್ಸಿಗೆ ಬಂದ ಹೋಲಿಕೆಯ ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಮಾಡಿದನು. . ಒಂದು ದಿನ ಕುಂತಿಯು --
ಕಂ|| ಪುಚ್ಚವಣಂ ನೋಡುವೆನೆ
ನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂ|
ದುಚ್ಚಸ್ತನಿ ಗಂಗೆಗ ಶಫ
ರೋಚ್ಚಳಿತ ತರತ್ತರಂಗೆಗೊರ್ವಳೆ ಬಂದಳ್|| ೯೦||
ಪದ್ಯ-೬೯:ಪದವಿಭಾಗ-ಅರ್ಥ:ಪುಚ್ಚವಣಂ (ಪರೀಕ್ಷೆಮಾಡಿ) ನೋಡುವೆನು ಎನ್ನ ಇಚ್ಚೆಯೊಳು ಈ ಮುನಿಯ ವರದ ಮಹಿಮೆಯನು ಎನುತೆ ಅಂದು ಉಚ್ಚಸ್ತನಿ (ಎತ್ತರದ ಸ್ತನವುಳ್ಳವಳು) ಗಂಗೆಗ ಶಫರ ಉಚ್ಚಳಿತ (ಮೀನು ಹಾರುತ್ತಿರುವ) ತರತ್ತರಂಗೆಗೆ (ಅಲೆಗಳ ಗಂಗೆಗೆ:ಗ-ಅಧ್ಯಾಹಾರ) ಓರ್ವಳೆ ಬಂದಳ್
ಪದ್ಯ-೬೯:ಅರ್ಥ:ಕುಂತಿಯು, ಈ ಋಷಿಯ ಕೊಟ್ಟ 'ವರ'ದ ಮಹಿಮೆಯನ್ನು ನನಗೆ ಇಷ್ಟ ಬಂದಂತೆ ಪರೀಕ್ಷೆ ಮಾಡಿ ನೋಡುತ್ತನೆಂದು ಮೀನುಗಳಿಂದ ಮೇಲಕ್ಕೆ ;ಹಾರಿಸಲ್ಪಟ್ಟ ಚಂಚಲವಾದ ಗಂಗಾನದಿಗೆ ಒಬ್ಬಳೇ ಬಂದಳು.
ಬಂದು ಸುರನದಿಯ ನೀರೊಳ್
ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ|
ಕ್ಕೆಂದಾಹ್ವಾನಂಗೆಯ್ಯಲೊ
ಡಂ ದಲ್ ಧರೆಗಿೞಿದನಂದು ದಶಸತಕಿರಣಂ|| ೯೧
ಪದ್ಯ-೯೧:ಪದವಿಭಾಗ-ಅರ್ಥ:ಬಂದು ಸುರನದಿಯ(ಗಂಗೆಯ) ನೀರೊಳ್ ಮಿಂದು ಇನನಂ (ಸ್ನಾನ ಮಾಡಿ ಸೂರ್ಯನನ್ನು)ನೋಡಿ ನಿನ್ನ ದೊರೆಯನೆ (ಸಮಾನನಾದ) ಮಗನು ಅಕ್ಕೆಂದು (ಆಗಲಿ) ಆಹ್ವಾನಂ ಗೆಯ್ಯಲು ಒಡಂ (ಒಡನೆ) ದಲ್ (ಅದೆ! ನಿಜಕ್ಕೂ) ಧರೆಗಿೞಿದನು ಅಂದು ದಶಸತಕಿರಣಂ (ಸಹಸ್ರಕಿರಣ ಸೂರ್ಯ ಭೂಮಿಗೆ ಇಳಿದುಬಂದ)|
ಪದ್ಯ-೬೯:ಅರ್ಥ:ಬಂದು ಗಂಗಾನದಿಯ ನೀರಿನಲ್ಲಿ ಸ್ನಾನಮಾಡಿ ಸೂರ್ಯನನ್ನು ನೋಡಿ ನಿನಗೆ ಸಮನಾದ ಮಗನಾಗಲಿ ಎಂದು ಕರೆದಾಗಲೇ ಸೂರ್ಯನು ಭೂಮಿಗಿಳಿದು ಪ್ರತ್ಯಕ್ಷವಾದನು.
ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿೞಿದು ತನ್ನ ಮುಂದೆ ನಿಂದರವಿಂದ ಬಾಂಧವನಂ ನೋಡಿ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ನಭೋಭಾಗದಿಂ (ಆಕಾಶದಿಂದ) ಭೂಮಿಭಾಗಕ್ಕೆ ಇೞಿದು ತನ್ನ ಮುಂದೆ ನಿಂದ ಅರವಿಂದ ಬಾಂಧವನಂ (ಕಮಲದ ಸಖ -ಸುರ್ಯ) ನೋಡಿ ನೋಡಿ-
ವಚನ:ಅರ್ಥ:ಹೀಗೆ ಆಕಾಶದಿಂದ ಭೂಮಿಗೆ ಇಳಿದು ತನ್ನ ಮುಂದೆ ನಿಂತಿರುವ ಸೂರ್ಯನನ್ನು ದಿಟ್ಟಿಸಿ ಮತ್ತೆ ಮತ್ತೆ ನೋಡಿ,
ಕಂ|| ಕೊಡಗೂಸುತನದ ಭಯದಿಂ
ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊ|
ೞ್ಕುಡಿಯಲೊಡಗೂಡೆ ಗಂಗೆಯ
ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ|| ೯೨||
ಪದ್ಯ-೯೨:ಪದವಿಭಾಗ-ಅರ್ಥ:ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲ್(ಪ್ರವಾಹವು) ಒೞ್ಕುಡಿಯಲ್ (ಉಕ್ಕಿಹರಿಯಲು) ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು(ಕರೆ -ತೀರ,ಕಣ್ಮು- ತುಂಬು, ಉಕ್ಕಿಹರಿಯಿತು?) ದಡಗಳನ್ನು ಮೀರಿಯರಿಯಿತು. ನಾಣ ಪೆಂಪೇಂ ಪಿರಿದೋ(ನಾಚಿಕೆಯ ಘನತೆ ಎಷ್ಟು ದೊಡ್ಡದೋ! )
ಪದ್ಯ-೯೨:ಅರ್ಥ:ತಾನು ಇನ್ನೂ ಕನ್ಯೆ ಎಂಬ ಭಯದಿಂದ ನಡುಗುವ ಆ ಕನ್ಯೆಯ ಬೆವರಿನ ನೀರಿನ ಪ್ರವಾಹವು ತುಂಬಿ ಹರಿದು ಉಕ್ಕಿಹರಿಯಲು ಗಂಗಾನದಿಯ ಮಡುವೂ ದಡವನ್ನು ಮೀರಿ ಹರಿಯಿತು. ಆಕೆಯ ನಾಚಿಕೆಯ ಘನತೆ ಎಷ್ಟು ಹಿರಿದೊ!
ವ|| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕುಮುಮಂ ಕಿಡೆನುಡಿದಿಂತೆಂದಂ-

ವಚನ:ಪದವಿಭಾಗ-ಅರ್ಥ:ಆಗಳು ಆದಿತ್ಯನು ಆಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕುಮುಮಂ ಕಿಡೆನುಡಿದಿಂತೆಂದಂ (ಕಿಡಿದು ಕೆಡಿಸಿ- ಭಯ ಹೋಗುವಂತೆ ನುಡಿದ)-

ವಚನ:ಅರ್ಥ:ಆಗ ಸೂರ್ಯನು ಅವಳ ಮನಸ್ಸಿನ ಸಂದೇಹವೂ, ನಡುಗುತ್ತಿರುವ ಶರೀರದ ನಡುಕವೂ ಹೋಗುವ ಹಾಗೆ ನಯದಿಂದ ಹೇಳಿದನು.
ಕಂ|| ಬರಿಸಿದ ಕಾರಣಮಾವುದೊ
ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂ|
ಮರುಳಿಯೆನೆಯಱಿದುಮಱಿಯದೆ
ಬರಿಸಿದೆನ್ನಿನ್ನೇೞಿಮೆಂದೊಡಾಗದು ಪೋಗಲ್|| ೯೩||
ಪದ್ಯ-೯೩:ಪದವಿಭಾಗ-ಅರ್ಥ:ಬರಿಸಿದ ಕಾರಣಂ ಆವುದೊ ತರುಣಿ? ಮುನೀಶ್ವರನ ಮಂತ್ರಂ ಏ ದೊರೆಯೆಂದು (ಏನು ತರದ್ದು- ಎಂಥಾದ್ದು) ಆಂ ಮರುಳಿಯೆನೆ (ನಾನು ಮರುಳಿ ತಿಳಿಯದವಳು) ಅಱಿದುಂ ಅಱಿಯದೆ (ತಿಳಿದೂ ತಿಳಿಯದೆ) ಬರಿಸಿದೆನು ಇನ್ನು ಏೞಿಂ ಎಂದೊಡೆ ಆಗದು ಪೋಗಲ್ (ಬರಮಾಡಿಕೊಂಡೆನು, ಇನ್ನು ಏಳಿರಿ - ಇಲ್ಲಿಂದ ಹೋಗಿ ಎಂದಾಗ, ಹೋಗುವುದಕ್ಕೆ-) (ಆಗದು)
ಪದ್ಯ-೯೩:ಅರ್ಥ:ಎಲೆ ತರುಣಿ ನನ್ನನ್ನು ಕರೆಸಿದ ಕಾರಣವೇನು, ಎಂದು ಸೂರ್ಯನು ಪ್ರಶ್ನಿಸಲು, ಕುಂತಿಯು ಆ ಋಷಿಶ್ರೇಷ್ಠನು ಕೊಟ್ಟ ಮಂತ್ರವು ಎಂಥಾದ್ದು ಎಂದು ಪರೀಕ್ಷಿಸಿಸಲು ನಿನ್ನನ್ನು ತಿಳಿದೂ ತಿಳಿಯದೆ ಬರಿಸಿದೆನು.ನಾನು ಅರಿಯದವಳು. ಇನ್ನು ಇಲ್ಲಿಂದ ಹೋಗಿ ಎಂದಳು.
ಮುಂ ಬೇಡಿದ ವರಮಂ ಕುಡ
ದಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗ|
ಕ್ಕಂಬುದುಮೊದವಿದ ಗರ್ಭದೊ
ಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ|| ೯೪||
ಪದ್ಯ-೯೪:ಪದವಿಭಾಗ-ಅರ್ಥ:ಮುಂ ಬೇಡಿದ ವರಮಂ ಕುಡದೆ (ಕೊಡದೆ ಇರುವುದು ಆಗದು) ಅಂಬುಜಮುಖಿ, ಪುತ್ರನು ಎನ್ನ ದೊರೆಯಂ ನಿನಗಕ್ಕೆ ಎಂಬುದುಂ (ನನ್ನಂತೆಯೇ ಇರುವ ಮಗನು ನಿನಗಾಗುವನು, ಎಂದಾಗ,) ಒದವಿದ ಗರ್ಭದೊಳು ಅಂಬುಜಮಿತ್ರನನೆ ಪೋಲ್ವ ಮಗನು ಒಗೆತಂದಂ(ಸೂರ್ಯನನ್ನೇ ಹೋಲುವ ಮಗನು ಹುಟ್ಟಿಬಮದನು.)
ಪದ್ಯ-೯೪:ಅರ್ಥ:. ಸೂರ್ಯನು, ಎಲೌ ಕಮಲಮುಖಿ ಕುಂತಿಯೇ, ನೀನು ಮೊದಲು ಬೇಡಿದ ವರವನ್ನು ಕೊಡದೆ ನಾನು ಹೋಗಲಾಗುವುದಿಲ್ಲ. ನಿನಗೆ ನನ್ನ ಸಮಾನನಾದ ಮಗನಾಗಲಿ ಎಂದನು. ಆಗ ಉಂಟಾದ ಗರ್ಭದಲ್ಲಿ ಕಮಲಸಖನಾದ ಸೂರ್ಯನನ್ನು ಹೋಲುವ ಮಗನು ಹುಟ್ಟಿಬಂದನು.
ಒಡವುಟ್ಟಿದ ಮಣಿಕುಂಡಲ
ಮೊಡವುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ |
ತೊಡರ್ದಿರೆಯುಂ ಬಂದಾಕೆಯ
ನಡುಕಮನೊಡರಿಸಿದನಾಗಳಾ ಬಾಲಿಕೆಯಾ || ೯೫||
ಪದ್ಯ-೯೫:ಪದವಿಭಾಗ-ಅರ್ಥ:ಒಡವುಟ್ಟಿದ ಮಣಿಕುಂಡಲಂ ಒಡವುಟ್ಟಿದ ಸಹಜ ಕವಚಂ ಅಮರ್ದಿರೆ (ಸೇರಿಕೊಂಡಿರಲು) ತನ್ನೊಳ್ ತೊಡರ್ದಿರೆಯುಂ (ಅಂಟಿಕೊಂಡಿರಲು) ಬಂದು ಆಕೆಯ ನಡುಕಮನು ಒಡರಿಸಿದನು (ಉಂಟುಮಢಿದನು)ಆಗಳು ಆ ಬಾಲಿಕೆಯಾ(ಯುಂ)
ಪದ್ಯ-೯೫:ಅರ್ಥ:ಜೊತೆಯಲ್ಲಿಯೇ ಹುಟ್ಟಿದ ಮಣಿಕುಂಡಲಗಳೂ (ರತ್ನಖಚಿತವಾದ ಕಿವಿಯ ಆಭರಣಗಳು) ಜೊತೆಯಲ್ಲಿಯೇ ಹುಟ್ಟಿದ ಕವಚವೂ ತನ್ನಲ್ಲಿ ಸೇರಿ ಅಮರಿಕೊಂಡಿರಲು ಆ ಮಗನು ಹುಟ್ಟಿಬಂದು, ಆಗ ಆ ಬಾಲಿಕೆಗೆ ನಡುಕವನ್ನುಂಟು ಮಾಡಿದನು.
ವ|| ಅಂತು ನಡನಡನಡುಗಿ ಜಲದೇವತೆಗಳಪ್ಪೊಡಂ ಮನಂಗಾಣ್ಬರೆಂದು ನಿಧಾನಮ ನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ್ತ ಗಂಗಾದೇವಿಯುಮಾ ಕೂಸಂ ಮುೞುಗಲೀಯದೆ ತನ್ನ ತೆರೆಗಳೆಂಬ ನಳಿತೋಳ್ಗಳಿನೊಯ್ಯನೊಯ್ಯನೆ ತೞ್ಕೈಸಿ ತರೆ ಗಂಗಾತೀರ ದೊಳಿರ್ಪ ಸೂತನೆಂಬಂ ಕಂಡು-

ವಚನ:ಪದವಿಭಾಗ-ಅರ್ಥ:ಅಂತು ನಡನಡ ನಡುಗಿ, ಜಲದೇವತೆಗಳು ಅಪ್ಪೊಡಂ (ಆದರೂ) ಮನಂಗಾಣ್ಬರು ಎಂದು ನಿಧಾನಮ ನೀಡಾಡುವಂತೆ (ನಿಧಿಯನ್ನು ಎಸೆಯುವಂತೆ) ಕೂಸಂ ಗಂಗೆಯೊಳು ಈಡಾಡಿ ಬಂದಳು ಇತ್ತ (ಮಗುವನ್ನು ಗಂಗೆಯಲ್ಲಿ ಹಾಕಿ ಬಂದಳು. ಇತ್ತ) ಗಂಗಾದೇವಿಯುಂ ಆ ಕೂಸಂ ಮುೞುಗಲೀಯದೆ (ಮುಳುಗಲು ಬಿಡದೆ) ತನ್ನ ತೆರೆಗಳೆಂಬ ನಲಿತೋಳ್ಗಳಿಂ (ಕೋಮಲ ತೋಲುಗಳಿಂದ)ಒಯ್ಯನೊಯ್ಯನೆ (ಮೆಲ್ಲಮೆಲ್ಲನೆ) ತೞ್ಕೈಸಿ ತರೆ (ಅಪ್ಪಿಕೊಂಡು ತರಲು) ಗಂಗಾತೀರದೊಳು ಇರ್ಪ ಸೂತನು ಎಂಬಂ ಕಂಡು-

ವಚನ:ಅರ್ಥ:ಹಾಗೆ ಬಹಳವಾಗಿ ನಡುಗಿ ಜಲದೇವತೆಗಳಾದರೂ ನನ್ನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ ಎಂದು ತನ್ನ ನಿಧಿಯನ್ನೇ (ಐಶ್ವರ್ಯವನ್ನೇ) ಬಿಸಾಡುವಂತೆ ಮಗುವನ್ನು ಗಂಗೆಯಲ್ಲಿ ಹಾಕಿ ಬಂದಳು. ಈ ಕಡೆ ಗಂಗಾದೇವಿಯು ಆ ಕೂಸನ್ನು ಮುಳುಗುವುದಕ್ಕೆ ಅವಕಾಶಕೊಡದೆ ತನ್ನ ಅಲೆಗಳೆಂಬ ಕೋಮಲವಾದ ತೋಳುಗಳಿಂದ ನಿಧಾನವಾಗಿ ತಬ್ಬಿಕೊಂಡು ತರಲು ಗಂಗಾತೀರದಲ್ಲಿದ್ದ ಸೂತನೆಂಬುವನು ಅದನ್ನು ಕಂಡನು.
ಉ|| ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂ
ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳ ರಶ್ಮಿಯೋ ಕರಂ |
ಮೇಲಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲೆನೆ ಪಾಯ್ದು ನೀರೊಳಾ
ಬಾಳನನಾದಮಾದರದೆ ಕೊಂಡೊಸೆದಂ ನಿಧಿಗಂಡನಂತೆವೋಲ್ || ೯೬||
ಪದ್ಯ-೯೬:ಪದವಿಭಾಗ-ಅರ್ಥ:ಉ|| ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ (ಬಾಲ ಸೂರ್ಯನ ಬಿಂಬ ) ಮೇಣ್ ಫಣೀಂದ್ರ ಆಳಯದಿಂದಂ (ಪಾತಾಳದ ನಾಗೇಂದ್ರನ ಮನೆಯಿಂದ) ಉರ್ಚಿದ ಫಣಾಮಣಿ(ಹೊರಬಂದ ಹೆಡೆಯ ಮಣಿಗಳ) ಮಂಗಳ ರಶ್ಮಿಯೋ ( ಮಂಗಳ ಕಿರಣವೋ!) ಕರಂ ಮೇಲಿಸಿದಪ್ಪುದು ಎನ್ನೆರ್ದೆಯನು ಎಂದು (ಬಹಳ ಪ್ರೀತಿಯುಂಟು ಮಾಡುವುದು, ನನ್ನ ಎದೆಯನ್ನು ಎಂದು) ಬೊದಿಲ್ಲೆನೆ ಪಾಯ್ದು ನೀರೊಳು (ದೊಪ್ಪನೆ ನೀರಿನಲ್ಲಿ ಹಾರಿ) ಆ ಬಾಳನನು ಅದಂ ಆದರದೆ ಕೊಂಡು(ಆ ಬಾಲಕನನ್ನು ಪ್ರೀತಿಯಿಂದ ಎತ್ತಿಕೊಂಡು) ಒಸೆದಂ ನಿಧಿಗಂಡನಂತೆವೋಲ್ (ನಿಧಿ ಕಂಡನಂತೆವೊಲ್- ನಿಧಿ ಸಿಕ್ಕಿದವನಂತೆ ಸಂತಸಪಟ್ಟನು.)
ಪದ್ಯ-೯೬:ಅರ್ಥ:ಬಾಲ ಸೂರ್ಯಮಂಡಲದ ಬಿಂಬ ಗಂಗೆಯ ನೀರಿನಲ್ಲಿ ನೆಲಸಿತ್ತೋ! ಅಥವಾ ಪಾತಾಳದ ನಾಗಲೋಕದ ನಾಗೇಂದ್ರನ ಮನೆಯಿಂದ ಭೇದಿಸಿಕೊಂಡು ಬಂದ ಹೊರಬಂದ ಹೆಡೆಯ ಮಣಿಗಳ ಮಂಗಳಕಿರಣಗಳೋ! ಇದು ನನ್ನ ಹೃದಯವನ್ನು ವಿಶೇಷವಾಗಿ ಆಕರ್ಷಿಸುತ್ತಿದೆ ಎಂದು ಗಂಗೆಯ ನೀರಿನಲ್ಲಿ ಬೊದಿಲ್ ಎಂದು ಶಬ್ದವಾಗುವ ಹಾಗೆ ಥಟ್ಟನೆ ಹಾರಿ ಅತ್ಯಂತ ಪ್ರೇಮಾವತಿಶಯದಿಂದ ಆ ಬಾಲಕನನ್ನು ಪ್ರೀತಿಯಿಂದ ಎತ್ತಿಕೊಂಡು ನಿಧಿ ಸಿಕ್ಕಿದವನಂತೆ ಸಂತಸಪಟ್ಟನು.
ವ|| ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡಾಕೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ-
ವಚನ:ಪದವಿಭಾಗ-ಅರ್ಥ:ಅಂತು ಕಂಡು ಮನಂಗೊಂಡು (ಮೆಚ್ಚಿ) ಎತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ (ಉಡಿಯಲ್ಲಿ) ಕೂಸನು ಇಟ್ಟೊಡೆ ಆಕೆ ರಾಗಿಸಿ (ಪ್ರೀತಿಸಿ) ಸುತನ ಸೂತಕಮಂ ಕೊಂಡಾಡೆ (ಕೊಂಡು ಆಡೆ?) (ಮಗ ಹುಟ್ಟಿದ ಸೂತಕ ಕೈಗೊಂಡು ಆಚರಿಸಿದಳು.)
ವಚನ:ಅರ್ಥ:ಮಗುವನ್ನು ಕಂಡು ಮೆಚ್ಚಿ ಎತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ಪ್ರಿಯಳ ಮಡಲಿನಲ್ಲಿ ಕೂಸನ್ನು ಇಡಲಾಗಿ, ಆಕೆ ಪ್ರೀತಿಸಿ ಮಗನು ಹುಟ್ಟಿದ ಮೈಲಿಗೆಯನ್ನು ಆಚರಿಸಿದಳು.
ಕಂ|| ಅಗುೞ್ದರಲಾ ಕುೞಿಯೊಳ್ ತೊ
ಟ್ಟಗೆ ನಿಧಿಗಂಡಂತೆ ವಸುಧೆಗಸದಳಮಾಯ್ತಾ |
ಮಗನಂದಮೆಂದು ಲೋಗರ್
ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್ || ೯೭ ||
ಪದ್ಯ-೯೭:ಪದವಿಭಾಗ-ಅರ್ಥ:ಅಗುೞ್ದರಲು ಆ ಕುೞಿಯೊಳ್ ತೊಟ್ಟಗೆ (ತಟ್ಟನೆ)ನಿಧಿಗಂಡಂತೆ (ನಿಧಿ ಕಂಡಂತೆ) ವಸುಧೆಗೆ ಅಸದಳಮ್ ಆಯ್ತು ಆ ಮಗನ ಅಂದಂ ಎಂದು ಲೋಗರ್ ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್
ಪದ್ಯ-೯೭:ಅರ್ಥ:. ಅಗೆಯುತ್ತಿರುವ ಗುಳಿಯಲ್ಲಿ ಅಕಸ್ಮಾತ್ ನಿಧಿ ದೊರೆತಂತಾಯಿತು. ಈ ಮಗುವಿನ ಸೌಂದರ್ಯ ಈ ಭೂಮಿಯಲ್ಲಿ ಅತಿಶಯವು ಎಂದು ಜನರು ಆಡಿಕೊಳ್ಳುತ್ತಿರಲು ಆಗ ಮಗುವಿಗೆ ವಸುಷೇಣನೆಂಬ ಹೆಸರಾಯಿತು
ಅಂತು ವಸುಷೇಣನಾ ಲೋ
ಕಾಂತಂಬರಮಳವಿ ಬಳೆಯೆ ಬಳೆದೆಸಕಮದೋ ||
ರಂತೆ ಜನಂಗಳ ಕರ್ಣೋ
ಪಾಂತದೊಳೊಗೆದೆಸೆಯೆ ಕರ್ಣನೆಂಬನುಮಾದಂ || ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ಮಗುವಿಗೆ ವಸುಷೇಣನೆಂಬ ಹೆಸರಾಯಿತು ಅಂತು ವಸುಷೇಣನು ಆ ಲೋಕಾಂತ ಅಂಬರಂ (ಲೋಕದ ಕೊನೆಯ ತುದಿಯ ವರೆಗೂ ಹಬ್ಬಿತು,) ಅಳವಿ ಬಳೆಯೆ, (ಪರಾಕ್ರಮವು ಬೆಳೆಯಲು) ಬಳೆದ ಎಸಕಮ್ )(ಬೆಳೆದ ರೀತಿ) ಅದು ಓರಂತೆ (ಕ್ರಮವಾಗಿ)ಜನಂಗಳ ಕರ್ಣೋಪಾಂತದೊಳು (ಕಿವಿಗಳಿಂದ ಕಿವಿಗಳಿಗೆ) ಒಗೆದು ಎಸೆಯೆ (ಬಿದ್ದು ಪ್ರಕಾಶಿಸಲು)ಕರ್ಣನೆಂಬನುಂ ಆದಂ.
ಪದ್ಯ-೯೮:ಅರ್ಥ:ಹಾಗೆಯೇ ವಸುಷೇಣನ ಪರಾಕ್ರಮವು ಲೋಕದ ಎಲ್ಲೆಯವರೆಗೆ ಬೆಳೆಯಲು ಆ ಬೆಳೆದ ರೀತಿ ಒಂದೇ ಪ್ರಕಾರವಾಗಿ ಜನಗಳ ಕರ್ಣ(ಕಿವಿ)ಗಳಿಂದ ಕಿವಿಗಳಿಗೆ ಬಿದ್ದು ಹರಡುತ್ತಿರಲು ವಸುಷೇಣನಿಗೆ ಕರ್ಣನೆಂಬ ಹೆಸರುಳ್ಳವನೂ ಆದನು.
ವ|| ಆಗಿಯಾತಂ ಶಸ್ತ್ರಶಾಸ್ತ್ರವಿದ್ಯೆಯೊಳತಿಪರಿಣತನಾಗಿ ನವಯೌವನಾಂಭದೊಳ್-
ವಚನ:ಪದವಿಭಾಗ-ಅರ್ಥ:ಆಗಿಯು ಆತಂ ಶಸ್ತ್ರಶಾಸ್ತ್ರವಿದ್ಯೆಯೊಳು ಅತಿಪರಿಣತನಾಗಿ ನವಯೌವನಾರಂಭದೊಳ್-
ವಚನ:ಅರ್ಥ:ಆತನು ಶಸ್ತ್ರ ಮತ್ತು ಶಾಸ್ತ್ರವಿದ್ಯೆಗಳಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆಯಲು, ಅವನಿಗೆ ಯವ್ವನೋದಯವೂ ಆಯಿತು.
ಚಂ|| ಪೊಡೆದುದು ಬಿಲ್ಲ ಜೇರೊಡೆಯೆ ವಿಱುವ ವೈರಿ ನರೇಂದ್ರರಂ ಸಿಡಿ
ಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದೆಡರಂ ನಿರಂತರಂ|
ಕಡಿಕಡಿದಿತ್ತ ಪೊನ್ನ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋ
ಡೆಡರದೆ ಬೇಡಿಮೋಡಿಮಿದು ಚಾಗದ ಬೀರದ ಮಾತು ಕರ್ಣನಾ|| ೯೯||
ಪದ್ಯ-೯೯:ಪದವಿಭಾಗ-ಅರ್ಥ:ಚಂ|| ಪೊಡೆದುದು(ಪೊಡೆ-ಹೊಡೆ) ಬಿಲ್ಲ ಜೇರೊಡೆಯೆ ವಿಱುವ (ಬರುವ?) ವೈರಿ ನರೇಂದ್ರರಂ; ಸಿಡಿಲ್ ಒಡೆದವೊಲ್ ಅಟ್ಟಿ ಮುಟ್ಟಿ ಕಡಿದು ಇಕ್ಕಿದುದು ಆದ ಎಡರಂ (ಬಡತನವನ್ನು) ನಿರಂತರಂ ಕಡಿಕಡಿದು ಇತ್ತ ಪೊನ್ನ (ಕೊಟ್ಟ ಹೊನ್ನು) ಬುಧ ಮಾಗಧ ವಂದಿಜನಕ್ಕೆ(ವಿದ್ವಾಂಸರಿಗೆ, ಕೀರ್ತಿಸುವವರಿಗೆ, ಹೊಗಳುಭಟ್ಟರಿಗೆ) ಕೊಟ್ಟ ಕೋಡು ಎಡರುದೆ(ಕೊಡಿವಿಕೆಗೆ ಭಂಗವಾಗದೆ -ಅಡರು-ಅಡಚಣೆ, ಅಡ್ಡಿ) ಬೇಡಿಂ ಓಡಿಂ(ಬೇಡಿದ್ದನ್ನು ತೆಗೆದುಕೊಂಡು ಓಡಿ) ಇದು ಚಾಗದ(ತ್ಯಾಗದ) ಬೀರದ (ವೀರದ-ಶೌರ್ಯದ) ಮಾತು ಕರ್ಣನಾ|| ೯೯
ಪದ್ಯ-೯೯:ಅರ್ಥ:ಅವನ ಬಿಲ್ಲಿನ ಟಂಕಾರವೇ ಬರುವ ಶತ್ರುರಾಜರನ್ನು ಹೋಗಿ ಹೊಡೆಯಿತು. ನಿರಂತರವಾಗಿ ದಾನ ಮಾಡಿದ ಅವನ ಚಿನ್ನದ ರಾಶಿಯೇ – ವಿದ್ವಾಂಸರಿಗೂ ವಂದಿಮಾಗಧರಿಗೂ ಕೊಟ್ಟ ದಾನವೆ ಅವರಿಗಿದ್ದ ದಾರಿದ್ರ್ಯರನ್ನು ಸಿಡಿಲುಹೊಡೆದ ಹಾಗೆ ಅಟ್ಟಿಮೆಟ್ಟಿ ಕತ್ತರಿಸಿಹಾಕಿತು. ಅವನಲ್ಲಿಗೆ ಹೋಗಿ ಬೇಡಿದ್ದನ್ನು ತೆಗೆದುಕೊಂಡು ಓಡಿ ಎಂಬಂತೆ, ಕರ್ಣನಾ ತ್ಯಾಗದ ಮತ್ತು ಶೌರ್ಯದ ಮೇಲ್ಮೆ ಲೋಕಪ್ರಸಿದ್ಧವಾಯಿತು.
ವ|| ಅಂತು ಭುವನ ಭವನಕ್ಕೆಲ್ಲಹ ನೆಗೞ್ದ ಕರ್ಣನ ಪೊಗೞ್ತೆಂ ನೆಗೞ್ತೆಯುಮುನೀಂದ್ರಂ ಕೇಳ್ದು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮಱಿದುವಿಂತಲ್ಲದೀತನನಾತಂ ಗೆಲಲ್ ಬಾರದೆಂದು-
ವಚನ:ಪದವಿಭಾಗ-ಅರ್ಥ:ಅಂತು ಭುವನ ಭವನಕ್ಕೆ ಎಲ್ಲ ಅಹ (ಹೀಗೆ ಲೋಕ ಲೋಕದಲ್ಲಿ)ನೆಗೞ್ದ (ಪ್ರಸಿದ್ಧವಾದ )ಕರ್ಣನ ಪೊಗೞ್ತೆಂ (ಹೊಗಳಿಕೆ)ನೆಗೞ್ತೆಯುಮುನು (ಪ್ರಸಿದ್ಧಯನ್ನು)ಇಂದ್ರಂ ಕೇಳ್ದು ಮುಂದೆ ತನ್ನ ಅಂಶದೊಳ್ ಪುಟ್ಟುವ ಅರ್ಜುನಂಗಂ ಆತಂಗಂ ದ್ವಂದ್ವಯುದ್ಧಂ ಉಂಟೆಂಬುದಂ ತನ್ನ ದಿವ್ಯಜ್ಞಾನದಿಂದಂ ಅಱಿದುಂ (ತಿಳಿದು) ಇಂತಲ್ಲದೆ ಈತನನು ಆತಂ ಗೆಲಲ್ ಬಾರದೆಂದು-
ವಚನ:ಅರ್ಥ:ಹೀಗೆ ಲೋಕಪ್ರಸಿದ್ಧವಾದ ಕರ್ಣನ ಹೊಗಳಿಕೆಯನ್ನೂ ಪ್ರಸಿದ್ಧಿಯನ್ನೂ ಇಂದ್ರನು ಕೇಳಿ ಮುಂದೆ ತನ್ನ ಅಂಶದಲ್ಲಿ ಹುಟ್ಟುವ ಅರ್ಜುನನಿಗೂ ಈತನಿಗೂ ದ್ವಂದ್ವಯುದ್ಧವುಂಟಾಗುತ್ತದೆ ಎಂದು ತನ್ನ ದಿವ್ಯಜ್ಞಾನದಿಂದ ತಿಳಿದು, ಹೀಗಲ್ಲದೆ ಆತನು ಈತನನ್ನು ಗೆಲ್ಲಲಾಗುವುದಿಲ್ಲ ಎಂದು-
ಕಂ|| ಬೇಡಿದೊಡೆ ಬಲದ ಬರಿಯುಮ
ನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ |
ಗೂಡಿದ ವಟುವಾಕೃತಿಯೊಳೆ
ಬೇಡಿದನಾ ಸಹಜಕವಚಮಂ ಕುಂಡಳಮಂ || ೧೦೦||
ಪದ್ಯ-೧೦೦:ಪದವಿಭಾಗ-ಅರ್ಥ:ಬೇಡಿದೊಡೆ ಬಲದ ಬರಿಯುಮಂ (ಪಕ್ಕೆಲುಬನ್ನೂ) ಈಡಾಡುಗುಂ ಉಗಿದು (ಕಿತ್ತು ಕೊಡುವನು) ಕರ್ಣನೆಂದು ಆಗಳೆ ಕೈ ಗೂಡಿದ ವಟುವಾಕೃತಿಯೊಳೆ (ಬ್ರಹ್ಮಚಾರಿಯ ವೇಷದಲ್ಲಿ)ಬೇಡಿದನು ಆ ಸಹಜಕವಚಮಂ ಕುಂಡಳಮಂ||
ಪದ್ಯ-೧೦೦:ಅರ್ಥ:ಬೇಡಿದರೆ ಕರ್ಣನು ಬಲಪಾರ್ಶ್ವದ ಪಕ್ಕೆಯನ್ನು ಕತ್ತರಿಸಿ ದಾನವಾಗಿ ಎಸೆಯುತ್ತಾನೆ ಎಂದು ಭಾವಿಸಿ ಆಗಲೇ ಪಡೆದ ಬ್ರಹ್ಮಚಾರಿಯ ವೇಷದಲ್ಲಿಯೇ ಬಂದು ಇಂದ್ರನು ಕರ್ಣನೊಡನೆ ಹುಟ್ಟಿಬಂದ ಕವಚವನ್ನೂ ಕುಂಡಲವನ್ನೂ ಬೇಡಿದನು.
ಬೇಡಿದುದನರಿದುಕೊಳ್ಳೆನೆ
ಬೇಡಿದುದಂ ಮುಟ್ಟಲಾಗದೆನಗೆನೆ ನೆಗೞ್ದ |
ಲ್ಲಾಡದೆ ಕೊಳ್ಳೆಂದರಿದೀ
ಡಾಡಿದನಿಂದ್ರಂಗೆ ಕವಚಮಂ ರಾಧೇಯಂ || ೧೦೧
ಪದ್ಯ-೧೦೧:ಪದವಿಭಾಗ-ಅರ್ಥ:ಬೇಡಿದುದನು ಅರಿದುಕೊಳ್ಳು (ಕತ್ತರಿಸುಕೊ)ಎನೆ ಬೇಡಿದುದಂ ಮುಟ್ಟಲಾಗದು ಎನಗೆ ಎನೆ ನೆಗೞ್ದು ಅಲ್ಲಾಡದೆ ಕೊಳ್ಳೆಂದು ಅರಿದು ಈಡಾಡಿದನು ಇಂದ್ರಂಗೆ ಕವಚಮಂ ರಾಧೇಯಂ
ಪದ್ಯ-೧೦೧:ಅರ್ಥ:. ನೀನು ಬೇಡಿದುದನ್ನು ಕತ್ತರಿಕೊ ಎಂದು ಕರ್ಣನು ಹೇಳಲು, ಇಂದ್ರನು ಬೇಡಿದುದನ್ನು ನೀನು ಕೊಡುರುದಕ್ಕೆ ಮೊದಲು ನಾನು ಮುಟ್ಟಲಾಗದು ಎನ್ನಲು, ಸ್ವಲ್ಪವೂ ಅಲುಗಾಡದೆ/ಚಂಚಲತೆ ತೋರದೆ, ತೆಗೆದುಕೋ ಎಂದು ಹೇಳಿ ಕರ್ಣನು ಕವಚವನ್ನು ಕತ್ತರಿಸಿ ಲಕ್ಷ್ಯವಿಲ್ಲದೆ ನಿರ್ಯೋಚನೆಯಿಂದ ಇಂದ್ರನಿಗೆ ಕೊಟ್ಟನು.
ಎಂದುಂ ಪೋಗೆಂದನೆ ಮಾ
ಣೆಂದನೆ ಪೆಱತೊಂದನೀವೆನೆಂದನೆ ನೊಂದಃ |
ಎಂದನೆ ಸೆರಗಿಲ್ಲದೆ ಪಿಡಿ
ಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ || ೧೦೨
ಪದ್ಯ-೧೦೨:ಪದವಿಭಾಗ-ಅರ್ಥ:ಎಂದುಂ ಪೋಗು (ಹೋಗು)ಎಂದನೆ ಮಾಣ್ (ತಡೆ-ಬೇಡ)ಎಂದನೆ ಪೆಱತೊಂದನು ಈವೆನು (ಬೇರೊದನು ಕೊಡವೆನು) ಎಂದನೆ ನೊಂದು ಅಃ ಎಂದನೆ ಸೆರಗಿಲ್ಲದೆ(ಸೆರಗು-ಭಯ, ಇಲ್ಲದೆ) ಪಿಡಿಯೆಂದನು (ಹಿಡಿ-ತಗೋ ಎಂದನು) ಇದೇಂ ಕಲಿಯೊ ಚಾಗಿಯೋ (ತ್ಯಾಗಿಯೋ) ರವಿತನಯಂ
ಪದ್ಯ-೧೦೨:ಅರ್ಥ:ಕರ್ಣನು ಬೇಡಿದ ಇಂದ್ರನಿಗೆ ಇಲ್ಲ ಹೋಗು ಎಂದು ಹೇಳಿದನೆ? ಸ್ವಲ್ಪ ತಡೆ ಎಂದು ಹೇಳಿದನೆ? (ಕೇಳಿದ ಪದಾರ್ಥವನ್ನಲ್ಲದೆ) ‘ಬೇರೊಂದನ್ನು ಕೊಡುತ್ತೇನೆ ಎಂದನೆ? (ಕತ್ತರಿಸುವಾಗ) ನೋವಿನಿಂದ ಅಃ/ಆ ಎಂದನೆ? ಹೆದರಿಕೆಯಿಲ್ಲದೆ ಹಿಡಿ ತೆಗೆದುಕೋ ಎಂದನು. ಕರ್ಣನು ಅದೆಂತಹ ಶೂರನೋ, ಹಾಗೆಯೇ ತ್ಯಾಗಿಯೋ!
ವ|| ಅಂತು ತನ್ನ ಸಹಜಕವಚಮಂನೆತ್ತರ್ ಪನ ಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟೊಡಿಂದ್ರನಾತನ ಕಲಿತನಕೆ ಮೈಚ್ಚಿ-
ವಚನ:ಪದವಿಭಾಗ-ಅರ್ಥ:ಅಂತು ತನ್ನ ಸಹಜಕವಚಮಂ ನೆತ್ತರ್ ಪನ ಪನ ಪನಿಯೆ (ಹನಿಯುತ್ತಿರಲು) ತಿದಿಯುಗಿವಂತೆ ಉಗಿದು ಕೊಟ್ಟೊಡೆ ಇಂದ್ರನು ಆತನ ಕಲಿತನಕೆ ಮೈಚ್ಚಿ
ವಚನ:ಅರ್ಥ:ಹಾಗೆ ರಕ್ತವು ಪನ ಪನ ಹರಿಯುತ್ತಿರಲು ತನ್ನ ಸಹಜಕವಚವನ್ನು ಚರ್ಮದ ಚೀಲವನ್ನು ಸೀಳುವಂತೆ ಸೀಳಿ, ಕೊಡಲು, ಇಂದ್ರನು ಆತನ ಶೌರ್ಯಕ್ಕೆ ಮೆಚ್ಚಿ.
ಕಂ|| ಸುರ ದನುಜ ಭುಜಗ ವಿದ್ಯಾ
ಧರ ನರಸಂಕುಲದೊಳಾರನಾದೊಡಮೇನೋ |
ಗರ ಮುಟ್ಟೆ ಕೊಲ್ಗುಮಿದು ನಿಜ
ವಿರೋಧಿಯಂ ಧುರದೊಳೆಂದು ಶಕ್ತಿಯನಿತ್ತಂ || ೧೦೩||
ಪದ್ಯ-೧೦೩:ಪದವಿಭಾಗ-ಅರ್ಥ:ಸುರ ದನುಜ ಭುಜಗ ವಿದ್ಯಾಧರ ನರಸಂಕುಲದೊಳು ಆರನು ಆದೊಡಮೇನೋ (ಯಾರಾದರೇನೋ) ಗರಮುಟ್ಟೆ (ಗ್ರಹ ಬಡಿದಂತೆ/ ಹಾವುಕಚ್ಚಿದಂತೆ?)ಕೊಲ್ಗುಂ ಇದು, ನಿಜ ವಿರೋಧಿಯಂ (ನಿನ್ನ ಶತ್ರುವನ್ನು) ಧುರದೊಳು ಎಂದು ಶಕ್ತಿಯನು ಇತ್ತಂ (ಕೊಟ್ಟನು)
ಪದ್ಯ-೧೦೩:ಅರ್ಥ:. ನಿನ್ನ ಶತ್ರುವನ್ನು, ಅವರು ದೇವತೆಗಳು, ರಾಕ್ಷಸರು, ನಾಗಗಳು, ವಿದ್ಯಾಧರರು, ಮನುಷ್ಯರು ಇವರಲ್ಲಿ ಯಾರಾದರೂ ಸರಿಯೆ, ಈ ಶಕ್ತ್ಯಾಯುಧವು ಗ್ರಹ ಬಡಿದ ಹಾಗೆ ಅವರನ್ನು ಕೊಲ್ಲುತ್ತದೆ ಎಂದು, ಅವನಿಗೆ ಶಕ್ತ್ಯಾಯುಧವನ್ನು ಕೊಟ್ಟನು.
ವ|| ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಬುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ-
ವಚನ:ಪದವಿಭಾಗ-ಅರ್ಥ:ಅಂತು ಇಂದ್ರನು ಇತ್ತ (ಕೊಟ್ಟ) ಶಕ್ತಿಯಂ ಕೈಕೊಂಡು ನಿಜಬುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ-
ವಚನ:ಅರ್ಥ:ಹಾಗೆ ಇಂದ್ರನು ಕೊಟ್ಟ ಶಕ್ತ್ಯಾಯುಧವನ್ನು ಸ್ವೀಕರಿಸಿ, ತನ್ನ ಬಾಹುಬಲವನ್ನು ಪ್ರಕಟಮಾಡಬೇಕೆಂದು ಪರಶುರಾಮನ ಹತ್ತಿರಕ್ಕೆ ಹೋದನು. ಹೋಗಿ-
ಕಂ|| ಕೂರಿಸೆ ಗುರು ಶುಶ್ರೂಷೆಯೊ
ಳಾ ರಾಮನನುಗ್ರ ಪರಶು ಪಾಟಿತ ರಿಪು ವಂ |
ಶಾರಾಮನನಿಷುವಿದ್ಯಾ
ಪಾರಗನೆನಿಸಿದುದು ಬಲ್ಮೆ ವೈಕರ್ತನನಾ || ೧೦೪
ಪದ್ಯ-೧೦೪:ಪದವಿಭಾಗ-ಅರ್ಥ:ಕೂರಿಸೆ ಗುರು ಶುಶ್ರೂಷೆಯೊಳು ಆ ರಾಮನನು ಉಗ್ರ ಪರಶು ಪಾಟಿತ (ಉಗ್ರ ಕೊಡಲಿಯಿಂದ ಸೀಳಿದ)ರಿಪುವಂಶ ಆರಾಮನನು(ಶತ್ರುಗಳ ವಂಶದ ತೋಟವನ್ನು) ಇಷುವಿದ್ಯಾಪಾರಗನು ಎನಿಸಿದುದು ಬಲ್ಮೆ(ಅವನ ಪ್ರೌಢಿಮೆ ಇಷು/ಬಿಲ್ಲು ವಿದ್ಯಾಪಾರಂಗತನು ಎನ್ನಿಸಿತು) ವೈಕರ್ತನನು ಆ ( ಆ ಕರ್ಣನನ್ನು -ವೈಕರ್ತ- ಕವಚವನ್ನು ಕತ್ತರಿಸಿಕೊಟ್ಟವನು)
ಪದ್ಯ-೧೦೪:ಅರ್ಥ:ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವನ್ನುಳ್ಳ ಆ ಪರಶುರಾಮನನ್ನು ಕರ್ಣನು ಗುರುಶುಶ್ರೂಷೆಯ ಮೂಲಕ ಅವರಿಂದ ಕರ್ಣನು ಗಳಿಸಿದ ಪ್ರೀತಿ ಅವನನ್ನು ಧನುರ್ವಿದ್ಯೆಯಲ್ಲಿ ಪಾರಂಗತನೆನ್ನುವ ಹಾಗೆ ಮಾಡಿತು.
ವ|| ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮರೆದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮ ನುಳಿಯನೂಱಿ ಕೊಂಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱಿಯದಂತೆ ಗುರುಗೆ ನಿದ್ರಾಭಿಗಾತಮಕ್ಕುಮೆಂದು ತಲೆಯನು ಗುರಿಸುತ್ತುಮಿರೆಯಿರೆ-
ವಚನ:ಪದವಿಭಾಗ-ಅರ್ಥ: ಅಂತು ಧನುರ್ಧರ ಅಗ್ರಗಣ್ಯನಾಗಿರ್ದು ಒಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮರೆದು (ನಿದ್ರಿಸಿ)ಒಱಗಿದ(ಮಲಗಿದ) ಆ ಪ್ರಸ್ತಾವದೊಳ್ (ಸಮಯದಲ್ಲಿ)ಆ ಮುನಿಗೆ ಮುನಿಸಂ (ಸಿಟ್ಟು)ಮಾಡಲೆಂದು ಇಂದ್ರನು ಉಪಾಯದೊಳು ಅಟ್ಟಿದ ವಜ್ರಕೀಟಂಗಳ್ (ಕಡಿದುಂಬಿ) ಕರ್ಣನ ಎರಡುಂ ತೊಡೆಯುನು ಉಳಿಯನು ಊಱಿ (ಚೂಪಾದ ಕೊಂಡಿಯನ್ನು ಊರಿ) ಕೊಂಡಂತಿಯೊಳ್ (ಕೊಡಲಿಯಲ್ಲಿ -ಕೊಡತಿಯಲ್ಲಿ?) ಬೆಟ್ಟಿದಂತೆ (ಹೊಡೆದಹಾಗೆ) ಅತ್ತಮಿತ್ತಂ ಉರ್ಚಿ ಪೋಗೆಯುಂ (ಅತ್ತ ಇತ್ತ ಚುಚ್ಚಿ / ಭೇದಿಸಿಕೊಂಡು ಹೋಗಲು) ಅದನು ಅಱಿಯದಂತೆ (ಅರಿಯದಂತೆ) ಗುರುಗೆ ನಿದ್ರಾಭಿಗಾತಂ (ನಿದ್ರಾಭಂಗ) ಅಕ್ಕುಮೆಂದು (ಆಗುವುದೆಂದು) ತಲೆಯನು ಉಗುರಿಸುತ್ತುಂ ಇರೆಯಿರೆ (ತಲೆಯನ್ನು ಉಗುರಿನಿಂದ ಸವರುತ್ತಿರಲು )-
ವಚನ:ಅರ್ಥ:ಅವನು ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ಕರ್ಣನ ತೊಡೆಯ ಮೇಲೆ ತಲೆಯನ್ನು ಇಟ್ಟು ನಿದ್ರೆಯಲ್ಲಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು ಮಾಡಬೇಕೆಂದು ಇಂದ್ರನು ಉಪಾಯದಿಂದ ಕೊಡಲಿಯಲ್ಲಿ ಹೊಡೆದ ಹಾಗೆ ಆ ಕಡೆಯಿಂದ ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು.
ಕಂ|| ಆತಿ ವಿಶದ ವಿಶಾಲೋರು
ಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನ |
ಕ್ಷತದೊಡನೆೞ್ಚಱಿಸಿದುದು
ತ್ಥಿತಮಾ ವಂದಸ್ರ ಮಿಶ್ರ ಗಂಧಂ ಮುನಿಯಂ|| ೧೦೫||
ಪದ್ಯ-೧೦೫:ಪದವಿಭಾಗ-ಅರ್ಥ:ಆತಿ ವಿಶದ ವಿಶಾಲೋರುಕ್ಷತದಿಂದೆ ಒಱೆದ ಅನಿತು ಜಡೆಯುಮಂ ನಾಂದಿ(ಅತಿ ಸ್ಪಷ್ಟ ಅಗಲ ಗಾಯದಿಂದ ಒರೆದು/ಜಿನುಗಿ ಅಷ್ಟೂ ಜಡೆಯನ್ನೂ,ನಾದಿ/ ಒದ್ದೆ ಮಾಡಿ) ಮನ ಕ್ಷತದೊಡನೆ (ಮನದ ಖಾತಿ, ಹಿಂಸೆಯೊಡನೆ)ಎೞ್ಚಱಿಸಿದುದು ಉತ್ಥಿತಮ (ಅಧಿಕವಾದ)ಆ ವಂದಸ್ರ ಮಿಶ್ರ ಗಂಧಂ (ಸುರಿದ ರಕ್ತದ ವಾಸನೆ) ಮುನಿಯಂ
ಪದ್ಯ-೧೦೬:ಅರ್ಥ:ತೊಡೆಯ ಅಗಲವಾದ ಗಾಯದಿಂದ ಜಿನುಗಿ ಹೆಚ್ಚುತ್ತಿರುವ ರಕ್ತವು ವಾಸನೆಯು ಜಡೆಯಷ್ಟನ್ನೂ ಒದ್ದೆಮಾಡಿ ಅದರ ವಾಸನೆಯು ಋಷಿಯನ್ನು ಮನದ ಕೋಪದೊಡನೆ ಎಚ್ಚರವಾಗುವ ಹಾಗೆ ಮಾಡಿತು.
ವ|| ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮರೆದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮ ನುಳಿಯನೂಱ ಕೊಂಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱ(ಱಿ?)ಯದಂತೆ ಗುರುಗೆ ನಿದ್ರಾಬಿಗಾತಮಕ್ಕುಮೆಂದು ತಲೆಯನು ಗುರಿಸುತ್ತುಮಿರೆಯಿರೆ-
ವಚನ:ಪದವಿಭಾಗ-ಅರ್ಥ: ಅಂತು ಧನುರ್ಧರ ಅಗ್ರಗಣ್ಯನಾಗಿರ್ದು ಒಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮರೆದು (ನಿದ್ರಿಸಿ)ಒಱಗಿದ(ಮಲಗಿದ) ಆ ಪ್ರಸ್ತಾವದೊಳ್ (ಸಮಯದಲ್ಲಿ)ಆ ಮುನಿಗೆ ಮುನಿಸಂ (ಸಿಟ್ಟು)ಮಾಡಲೆಂದು ಇಂದ್ರನು ಉಪಾಯದೊಳು ಅಟ್ಟಿದ ವಜ್ರಕೀಟಂಗಳ್ (ಕಡಿದುಂಬಿ) ಕರ್ಣನ ಎರಡುಂ ತೊಡೆಯುನು ಉಳಿಯನು ಊಱ (ಚೂಪಾದ ಕೊಂಡಿಯನ್ನು ಊರಿ?) ಕೊಂಡಂತಿಯೊಳ್ (ಕೊಡಲಿಯಲ್ಲಿ -ಕೊಡತಿಯಲ್ಲಿ?) ಬೆಟ್ಟಿದಂತೆ (ಹೊಡೆದಹಾಗೆ) ಅತ್ತಮಿತ್ತಂ ಉರ್ಚಿ ಪೋಗೆಯುಂ (ಅತ್ತ ಇತ್ತ ಚುಚ್ಚಿ / ಭೇದಿಸಿಕೊಂಡು ಹೋಗಲು) ಅದನು ಅಱ(ಱಿ?)ಯದಂತೆ (ಅರಿಯದಂತೆ) ಗುರುಗೆ ನಿದ್ರಾಬಿಗಾತಂ (ನಿದ್ರಾಭಂಗ) ಅಕ್ಕುಮೆಂದು (ಆಗುವುದೆಂದು) ತಲೆಯನು ಉಗುರಿಸುತ್ತುಂ ಇರೆಯಿರೆ (ತಲೆಯನ್ನು ಉಗುರಿನಿಂದ ಸವರುತ್ತಿರಲು )-
ವಚನ:ಅರ್ಥ:ಅವನು ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ಕರ್ಣನ ತೊಡೆಯ ಮೇಲೆ ತಲೆಯನ್ನು ಇಟ್ಟು ನಿದ್ರೆಯಲ್ಲಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು ಮಾಡಬೇಕೆಂದು ಇಂದ್ರನು ಉಪಾಯದಿಂದ ಕೊಡಲಿಯಲ್ಲಿ ಹೊಡೆದ ಹಾಗೆ ಆ ಕಡೆಯಿಂದ ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು.
ವ|| ಅಂತೆೞ್ಚತ್ತು ನೆತ್ತರ ಪೊನಲೊಳ್ ನಾಂದು ನನೆದ ಮೆಯ್ಯುಮಂ ತೊಯ್ದು ತಳ್ಪೊಯ್ದ ಜಡೆಯುಮಂ ಕಂಡೀ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರ ಮವಸಾನಕಾಲದೊಳ್ ಬೆಸಕೆಯ್ಯದಿರ್ಕೆಂದು ಶಾಪಮನಿತ್ತನಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-
ವಚನ:ಪದವಿಭಾಗ-ಅರ್ಥ:ಅಂತು ಎೞ್ಚತ್ತು ನೆತ್ತರ ಪೊನಲೊಳ್ (ಹಾಗೆ ಎಚ್ಚರಾಗಿ, ರಕ್ತದಹೊಳೆಯಲ್ಲಿ) ನಾಂದು ನನೆದ ಮೆಯ್ಯುಮಂ (ರಕ್ತದಲ್ಲಿ ನಾದಿ ನೆನೆದ ಮೈಯನ್ನು) ತೊಯ್ದು ತಳ್ಪೊಯ್ದ ಜಡೆಯುಮಂ ಕಂಡು (ರಕ್ತದಲ್ಲಿ ತೊಯಿದ ತಟ್ಟುವ? ಜಟೆಯನ್ನು ಕಂಡು) ಈ ಕ್ಷತ್ರಿಯಂಗಲ್ಲದೆ ಆಗದು ಪಾರ್ವನೆಂದು ಎನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ (ಈ ನೋವು ತಡೆಯವುದು ಕ್ಷತ್ರಿಯನಿಗಲ್ಲದೆ ಬ್ರಾಹ್ಮಣನಿಗೆ ಆಗದು. ನನ್ನಲ್ಲಿ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆಯನ್ನು ಪಡೆದುದಕ್ಕೆ ಶಿಕ್ಷೆಯು ಬೇರೆ ಇಲ್ಲ-) ನಿನಗೆ ಆನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಂ ಅವಸಾನ ಕಾಲದೊಳ್ ಬೆಸಕೆಯ್ಯದೆ ಇರ್ಕೆಂದು ಶಾಪಮನಿತ್ತನು (ನಿನಗೆ ನಾನು ಕೊಟ್ಟ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರವು ನಿನ್ನ ಅಂತಿಮ ಕಾಲದಲ್ಲಿ ಕೆಲಸ ಮಾಡದೆ ಇರಲಿ, ಎಂದುಶಾಪವನ್ನು ಕೊಟ್ಟನು.)ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳು ಇರ್ಪನ್ನೆಗಂ ಇತ್ತಲ್ ಕುಂತಿಗೆ ಅವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-
ವಚನ:ಅರ್ಥ:ರಕ್ತದಲ್ಲಿ ನಾದಿ ನೆನೆದ ಮೈಯನ್ನು ರಕ್ತದಲ್ಲಿ ತೊಯಿದ ತಟ್ಟುವ? ಜಟೆಯನ್ನು ಕಂಡು ಈ ನೋವು ತಡೆಯವುದು ಕ್ಷತ್ರಿಯನಿಗಲ್ಲದೆ ಬ್ರಾಹ್ಮಣನಿಗೆ ಆಗದು. ನನ್ನಲ್ಲಿ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆಯನ್ನು ಪಡೆದುದಕ್ಕೆ ಶಿಕ್ಷೆಯು ಬೇರೆ ಇಲ್ಲ- ನಿನಗೆ ನಾನು ಕೊಟ್ಟ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರವು ನಿನ್ನ ಅಂತಿಮ ಕಾಲದಲ್ಲಿ ಕೆಲಸ ಮಾಡದೆ ಇರಲಿ, ಎಂದು ಶಾಪವನ್ನು ಕೊಟ್ಟನು. ಹಾಗೆ ಕರ್ಣನು ಶಾಪಹತನಾಗಿ ಪುನ ಬಂದು ಸೂತನ ಮನೆಯಲ್ಲಿರಲು ಈ ಕಡೆ ಕುಂತಿಗೆ ಅವರ ಮಾವನಾದ ಕುಂತೀಭೋಜನು ಸ್ವಯಂವರವನ್ನು ಏರ್ಪಡಿಸಿದನು

ಕುಂತಿಯ ವಿವಾಹ - ಪಾಂಡವರ ಜನನ[ಸಂಪಾದಿಸಿ]

ಚಂ|| ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆ
ಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆಂದು ಬಂದಂ ಚೆ |
ನ್ನಿಗರುಮನಾಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃ
ಷ್ಟಿಗೆವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್ || ೧೦೬||
ಪದ್ಯ-೧೦೬:ಪದವಿಭಾಗ-ಅರ್ಥ:ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆಲ್ವುಗಳ ವಿಲಾಸದ ಉರ್ಮೆಗಳೊಳು (ಉರ್ಮೆ-ಅತಿಶಯ) ಆವು (ನಾವು)ಎವಗೆ ಆಗಿಪೆವೆಂದು (ನಮಗೆ ವಶ ಮಾಡಿಕೊಳ್ಲುವೆವು ಎಂದು)ಬಂದಂ ಚೆನ್ನಿಗರುಮಂ (ಸುಂದರರನ್ನು) ಅಸೆಕಾಱರುಮಂ (ಆಸೆಪಟ್ಟವರನ್ನು೦ ಒಲ್ಲದೆ ಚೆಲ್ವು ಇಡಿದಿರ್ದ (ಸುಂದರನಾದ) ರೂಪು ದೃಷ್ಟಿಗೆವರೆ (ಕಣ್ಣಿಗೆಇಷ್ಟವಾದ) ಪಾಂಡುರಾಜನನೆ ಕುಂತಿ ಮನಂಬುಗೆ (ಮನಸ್ಸಿಗೆ ಹೊಗಲು) ಮಾಲೆ ಸೂಡಿದಳ್ (ಸೂಡು, ಸೂಡಿಸು- ಮುಡಿಸು, ತೊಡಿಸಿದಳು)
ಪದ್ಯ-೧೦೬:ಅರ್ಥ:ಸೊಗಸಾಗಿರುವ ತಮ್ಮ ಯವ್ವನ, ಐಶ್ವರ್ಯ, ಸೌಂದರ್ಯ ಮತ್ತು ಶೃಂಗಾರಚೇಷ್ಟೆಗಳ ಅತಿಶಯದಿಂದ ನಾವು ಕುಂತಿಯನ್ನು ನಮ್ಮವಳನ್ನಾಗಿ ಮಾಡಿಕೊಳ್ಳುತ್ತೇನೆ ಎಂಬುದಾಗಿ ಬಂದಿದ್ದ ಸೌಂದರ್ಯಶಾಲಿಗಳನ್ನೂ ಕಾಮುಕರನ್ನೂ ಬಯಸದೆ, ಕುಂತಿಯು ಪಾಂಡುವಿನ ಸುಂದರವಾದ ರೂಪವು ತನ್ನ ಕಣ್ಣಿಗೆ ಹಿತವಾಗಿದ್ದು ಮನಸ್ಸನ್ನು ಹೊಗಲು ಪಾಂಡುರಾಜನಿಗೇ ವರಣಮಾಲೆಯನ್ನು ತೊಡಿಸಿದಳು (ಹಾಕಿದಳು).
ವ|| ಅಂತು ಸ್ವಯಂಬರದೊಳ್ ನೆರೆದರಸುಮಕ್ಕಳೊಳಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ-
ವಚನ:ಪದವಿಭಾಗ-ಅರ್ಥ:ಅಂತು ಸ್ವಯಂಬರದೊಳ್ ನೆರೆದ ಅರಸು ಮಕ್ಕಳೊಳು ಅಪ್ಪುಕೆಯ್ದ (ಒಪ್ಪಿಕೊಂಡ) ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನ ಒಡವುಟ್ಟಿದ ಮಾದ್ರಿಯುಮನು ಒಂದೆ ಪಸೆಯೊಳು ಇರಿಸಿ (ಹಸೆಮಣೆಯ ಮೇಲೆ ಕೂರಿಸಿ) ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ (ಬ್ರಹ್ಮನು ಮುದ್ದಾಡುವಂತೆ, ಇಷ್ಟಪಡುವಂತೆ) ತಾಂ ಮದುವೆಯಂ ಮಾಡಿ-
ವಚನ:ಅರ್ಥ:ಹಾಗೆ ಸ್ವಯಂವರದಲ್ಲಿ ತುಂಬಿದ್ದ ರಾಜಕುಮಾರರಲ್ಲಿ ಪಾಂಡುವನ್ನೇ ಆಯ್ದುಕೊಂಡ ಕುಂತಿಯೊಡನೆ, ಮದ್ರರಾಜನ ಮಗಳೂ ಶಲ್ಯನೊಡನೆ ಹುಟ್ಟಿದವಳೂ ಆದ ಮಾದ್ರೀದೇವಿಯನ್ನೂ ಒಂದೇ ಹಸೆಮಣೆಯಲ್ಲಿ ಕೂರಿಸಿ ಭೀಷ್ಮನು, ಬ್ರಹ್ಮನೆ ಮೆಚ್ಚುವಂತೆ ತಾನೇ ಮದುವೆಯನ್ನು ಮಾಡಿದನು.
ಚಂ|| ತಳಿರ್ಗಳಸಂ ಮುಕ್ಕುಂದರವಮೆತ್ತಿದ ಮುತ್ತಿನ ಮಂಟಪಂ ಮನಂ
ಗೊಳಿಪ ವಿತಾನಪಙ್ಕ್ತಿ ಪಸುರ್ವಂದಲಳೊಲ್ದೆಡೆಯಾಡುರೆಯ್ದೆಯರ್ |
ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹಮಂ
ಗಳಮದು ಕುಂತಿ ಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ || ೧೦೭||
ಪದ್ಯ-೧೦೭:ಪದವಿಭಾಗ-ಅರ್ಥ:ತಳಿರ್ ಕಳಸಂ ಮುಕ್ಕುಂದರವಂ (ಮಾವಿನ ಚಿಗುರೆಲೆಯ ಕಳಸ, ಮುಕುಂದವಾದ್ಯದ ಶಬ್ದ,) ತಳಿರ ಎತ್ತಿದ ಮುತ್ತಿನ ಮಂಟಪಂ (ಎತ್ತರದ ಮುತ್ತಿನ - ತಳಿರ ಮಂಟಪ,) ಮನಂಗೊಳಿಪ ವಿತಾನಪಙ್ಕ್ತಿ (ಮನಸ್ಸನು ಆಕರ್ಶಿಸುವ ಮೆಟ್ಟಿಲುಗಳು,) ಪಸುರ್ವಂದಲೊಳ್ (ಹಸಿರು ಚಪ್ಪರದಲ್ಲಿ) ಒಲ್ದೆಡೆಯಾಡುರೆಯ್ದೆಯರ್ (ಒಲ್ದು ಎಡೆಯಾಡುವ ಐದೆಯರ್ -ಪ್ರೀತಿಯಿಂದ ನೆಡೆದಾಡುವ ಮುತ್ತೈದೆಯರು,) ಬಳಸಿದ ವೇದಪಾರಗರ ಸಂದಣಿಯೆಂಬ ಇವಱಿಂ ವಿವಾಹಮಂಗಳಂ(ಬಳಸಿದ/ ಸುತ್ತುವರಿದ ವೇದ ಪಠಿಸುವವರ ಸಮೂಹ ಈ ರೀತಿಯಿರುವ ) ಅದು ಕುಂತಿ ಮಾದ್ರಿಗಳೊಳ್ ಅಚ್ಚರಿಯಾದುದು ಪಾಂಡುರಾಜನಾ (ಪಾಂಡುರಾಜನೊಡನೆ ಕುಂತಿ ಮಾದ್ರಿಗಳ ವಿವಾಹ ಆಶ್ಚರ್ಯಕರವಾಗಿ ನೆಡೆಯಿತು.).
ಪದ್ಯ-೧೦೭:ಅರ್ಥ:ಮಾವಿನ ಚಿಗುರೆಲೆಯ ಕಳಸ, ಮುಕುಂದವಾದ್ಯದ ಶಬ್ದ, ಎತ್ತರದ ಮುತ್ತಿನ - ತಳಿರ ಮಂಟಪ, ಮನಸ್ಸನು ಆಕರ್ಶಿಸುವ ಮೆಟ್ಟಿಲುಗಳು, ಹಸಿರು ಚಪ್ಪರದಲ್ಲಿ ಪ್ರೀತಿಯಿಂದ ನೆಡೆದಾಡುವ ಮುತ್ತೈದೆಯರು, ಸುತ್ತುವರಿದ ವೇದ ಪಠಿಸುವವರ ಸಮೂಹ ಈ ರೀತಿಯಿರುವ ಪಾಂಡುರಾಜನೊಡನೆ ಕುಂತಿ ಮಾದ್ರಿಗಳ ವಿವಾಹ ಆಶ್ಚರ್ಯಕರವಾಗಿ ನೆಡೆಯಿತು.
ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊರೆಯಲ್ಲದೆ ಬಟ್ಟಿತಪ್ಪ ಬಾ
ಯ್ದೆರೆ, ತನು ರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತೆಳ್ವಸಿಱು ಕರಂ |
ನೆರೆದ ನಿತಂವಿಂಬಮಿಂಬುವಡೆದೊಳ್ದೊಡೆ ನಕ್ಕರವದ್ದಿ ತಾನೆ ಪೋ
ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್ || ೧೦೮
ಪದ್ಯ-೧೦೮:ಪದವಿಭಾಗ-ಅರ್ಥ:ತುಱುಗೆಮೆ ನೀಳ್ದ ಪುರ್ವು (ದಟ್ಟ ಕೂದಲಿನ ಉದ್ದ ಹುಬ್ಬು) ನಿಡುಗಣ್, ಪೊರೆಯಲ್ಲದೆ ಬಟ್ಟಿತಪ್ಪ ಬಾಯ್ದೆರೆ (ನೀಳವಾದ ಕಣ್ನ, ಭಾರವಿಲ್ಲದ ದುಂಡಾದ ತುಟಿಗಳು), ತನು ರೇಖೆಗೊಂಡ ಕೊರಲ್ (ಸಣ್ಣ ಗೆರೆಗಳಿರುವ ಕೊರಳು,) ಒಡ್ಡಿದ ಪೆರ್ಮೊಲೆ (ಚಾಚಿದ ದಪ್ಪ ಮೊಲೆ,) ತೆಳ್ವಸಿಱು (ತೆಳ್ವ್ + ಅಸರ್/ ಬಸಿರ್? ತೆಳುವಾದ ಹೊಟ್ಟೆ) ಕರಂನೆರೆದ ನಿತಂಬಂ(ತುಂಬಿಕೊಂಡಿರುವ ಪೃಷ್ಠ) ಇಂಬುವಡೆದೊಳ್ದೊಡೆ (ಹೊಂದಿಕೊಂಡಿರುವ ಒಳತೊಡೆ +? ಕಿರುತೊಡೆ)) ನಕ್ಕರವದ್ದಿ (=?ನೆಕ್ಕರವಟ್ಟೆ -ನೇರವಾದ ದೇಹ?) ತಾನೆ ಪೋ ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ(ತಾನೇ ಹೋಗು ಎಂದು ಲೋಕವು ಹೋಗಳಿತು.) ಪೊಗೞ್ವನ್ನರೆ ಕುಂತಿ ಮಾದ್ರಿಗಳ್(ಹೊಗಳಿಕೆಗೆ ಯೋಗ್ಯರೇಸರಿ ಕುಂತಿ ಮಾದ್ರಿಗಳು.)
ಪದ್ಯ-೧೦೮:ಅರ್ಥ:ಆ ವಧುಗಳಿಗೆ, ದಟ್ಟ ಕೂದಲಿನ ಉದ್ದ ಹುಬ್ಬು, ನೀಳವಾದ ಕಣ್ನ, ಭಾರವಿಲ್ಲದ ದುಂಡಾದ ತುಟಿಗಳು, ಸಣ್ಣ ಗೆರೆಗಳಿರುವ ಕೊರಳು,ಚಾಚಿದ ದಪ್ಪ ಮೊಲೆ, ? ತೆಳುವಾದ ಹೊಟ್ಟೆ, ತುಂಬಿಕೊಂಡಿರುವ ಪೃಷ್ಠ, ಹೊಂದಿಕೊಂಡಿರುವ ಒಳತೊಡೆ, ನೇರವಾದ ದೇಹ, ಇವೆಲ್ಲಾ ತಾನೇ/ ವಧುಗಳಿಗೆ, -ಪತಿಯೊಡನೆ ಹೋಗು ಎಂದು ಲೋಕವು ಹೋಗಳಿತು. ಹೊಗಳಿಕೆಗೆ ಯೋಗ್ಯರೇ ಸರಿ ಕುಂತಿ ಮಾದ್ರಿಗಳು.
ವ|| ಅಂತಾಕೆಗಳಿರ್ವರುಮೆರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ-
ವಚನ:ಪದವಿಭಾಗ-ಅರ್ಥ:ಅಂತು ಆಕೆಗಳು ಈರ್ವರುಂ ಎರಡುಂ ಕೆಲದೊಳು ಇರೆ ಕಲ್ಪಲತೆಗಳ ಎರಡಱ ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ, ಧೃತರಾಷ್ಟ್ರನು ಅಂಗಹೀನೆಂದು, ವಿವಾಹದ ಒಸಗೆಯೊಡನೆ ಪಟ್ಟಬಂಧದ ಒಸಗೆಯಂ ಮಾಡಿ ನೆಲನನು ಆಳಿಸೆ-(ಧೃತರಾಷ್ಟ್ರನು ಅಂಗಹೀನನು ಕಣ್ಣಿಲ್ಲದವನು ಎಂದು, ವಿವಾಹದೊಡನೆ ಪಟ್ಟಬಂಧದ -ರಾಜ್ಯಪಟ್ಟಾಭಿಷೇಕ ಮಾಡಿ ರಾಜ್ಯವಾಳಲು ಹೇಳಿದನು ಭೀಷ್ಮ)
ವಚನ:ಅರ್ಥ:ಹಾಗೆ ಅವರಿಬ್ಬರೂ ಎರಡು ಪಕ್ಕಗಳಲ್ಲಿರಲು ಧೃತರಾಷ್ಟ್ರನು ಅಂಗಹೀನು (ಕಣ್ಣಿಲ್ಲದವನು) ಎಂಬ ಕಾರಣದಿಂದ, ಎರಡು ಕಲ್ಪಲತೆಗಳ ಮಧ್ಯೆಯಿರುವ ಕಲ್ಪವೃಕ್ಶದಂತಿದ್ದ ಪಾಂಡುರಾಜನಿಗೆ ವಿವಾಹಮಂಗಳದೊಡನೆ ಪಟ್ಟಾಭಿಷೇಕವೂ ಆಗಿ ರಾಜ್ಯವಾಳಲು ಹೇಳಿದನು ಭೀಷ್ಮ .
ಉ||ಮೀಱುವೆರೆಂಬ ಮಾಂಡಳಿಕರೀಯದರೆಂಬದಟರ್ ವಯಲ್ಗೆ ಮೆ
ಯ್ದೋಱುರೆವೆಂಬ ಪೂಣಿಗರಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾ|
ಯ್ಪಾಱೆ ನಭಕ್ಕೆ ಪಾಱಿದುದು ಗಂಡರ ನೆತ್ತಿಯೊಳೆತ್ತಿ ಬಾಳನಿ
ನ್ನೂಱುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ|| ೧೦೯

ಪದ್ಯ-೧೦೯:ಪದವಿಭಾಗ-ಅರ್ಥ:ಮೀಱುವೆರೆಂಬ ಮಾಂಡಳಿಕರು ಈಯದರೆ ಎಂಬ ಅದಟರ್ ವಯಲ್ಗೆ (ಕಾಳಗದ ಬಯಲಿಗೆ)ಮೆಯ್ದೋಱುರೆವೆಂಬ (ಮೈ (ದ)ತೋರುವರೆಂಬ) ಪೂಣಿಗರು(ಪರಾಕ್ರಮಿಗಳು) ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾರೆ (ಅಡಗಿ, ಕುಗ್ಗಿ, ಜೋತುಬಿದ್ದು, ಕಾಯ್ಪು/ಸಿಟ್ಟು ಆರಿಹೋಗಿ) ನಭಕ್ಕೆ ಪಾಱದುದು (ಪಾಂಡುರಾಜನ ತೇಜದ ದಳ್ಳುರಿ ಆಕಾಶಕ್ಕೆ ಏರತು.) ಗಂಡರ ನೆತ್ತಿಯೊಳೆತ್ತಿ ಬಾಳನುನಿನ್ನೂ(ಬಾಳು/ಕತ್ತಿಯನ್ನು ಶೂರರ/ ಶತ್ರುಗಳ ನೆತ್ತಿಯಲ್ಲಿ ಒತ್ತಿ ಇನ್ನೂ ಉರುಗುಂ ) ಊಱುಗುಂ ಎಂದೊಡೆ (ನಾಟುತ್ತದೆ, ಎಂದರೆ) ಏಂ ಪಿರಿದೊ()ಹಿರಿದೋ ತೇಜದ ದಳ್ಳುರಿ ಪಾಂಡುರಾಜನಾ|

ಪದ್ಯ-೧೦೯:ಅರ್ಥ:. ಪಾಂಡುರಾಜನ ಆಜ್ಞೆಯನ್ನು ಮೀರಿ ನಡೆಯುತ್ತೇವೆ ಎಂಬ ಸಾಮಂತರಾಜರೂ, ಕಪ್ಪಕಾಣಿಕೆಗಳನ್ನು ಕೊಡುವುದಿಲ್ಲವೆಂದ ಶೂರರೂ, ಕಾಳೆಗದಲ್ಲಿ ಪ್ರತಿಭಟಿಸಿ ಯುದ್ಧಮಾಡುವೆವು ಎಂದು ಪ್ರತಿಜ್ಞೆಮಾಡಿದವರೂ ಅಡಗಿ, ಕುಗ್ಗಿ, ಜೋತುಬಿದ್ದು, ಸಿಟ್ಟು ಆರಿಹೋಗಿ ಕುಗ್ಗಿ, ಕೆಳಕ್ಕೆ ಬಿದ್ದು ಕೋಪವಿರಹಿತರಾಗಲು ಪಾಂಡುರಾಜನ ತೇಜಸ್ಸೆಂಬ ಜಾಜ್ವಲ್ಯಮಾನವಾದ ಬೆಂಕಿಯ ಆಕಾಶಕ್ಕೆ ಚಿಮ್ಮಿತು. ಪಾಂಡುರಾಜನ ಕತ್ತಿಯು ಇನ್ನೂ ಪರಾಕ್ರಮಿಗಳ ಹಣೆಯಲ್ಲಿ ನಾಡಲ್ಪಡುತ್ತಿವೆ ಎಂದಾಗ ಅವನ ತೇಜಸ್ಸು ಎಷ್ಟು ಹಿರಿದೋ! (ಎಂದರೆ ಅವನ ಪ್ರತಾಪವು ಯಾವ ತಡೆಯೂ ಇಲ್ಲದೆ ಅಭಿವೃದ್ಧಿಯಾಗಿ ಅವನ ಮೇಲ್ಮೆಯು ಅತ್ಯತಿಶಯವಾದುದು ಎಂದು ಭಾವ)
ಮ|| ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ ಪ್ರತಾಪಕ್ಕಗು
ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊzೞ್ದಾಜ್ಞೆಗಂ |
ಪೆಸರ್ಗಂ ಮುನ್ನಮೆ ರೂಪುವೋದುದು ವಿಯಚ್ಚಕ್ರಂ ಸಮಂತೆಂಬಿನಂ
ಜಸಮಾ ಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ || ೧೧೦(110)
ಪದ್ಯ-೧೧೦:ಪದವಿಭಾಗ-ಅರ್ಥ:ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ (ಸಮುದ್ರದಿಂದ ಸುತ್ತುವರಿದ ಧರಾ/ಭೂಮಿಯು ಆಜ್ಞೆಯನ್ನು ಪಾಲಿಸಿತು), ಪ್ರತಾಪಕ್ಕೆ ಅಗುರ್ವಿಸೆ (ಹೆದರಿ) ಗೋಳುಂಡೆ (ಹೆದರಿ ಗೋಳು/ದುಃಖ ಎಂಬ ಉಂಡೆಯನ್ನು )ಗೊಳುತ್ತುಮಿರ್ದುದು (ನುಂಗುತ್ತಿತ್ತು) ದಿಶಾಚಕ್ರಂ ಪೊದೞ್ದಾಜ್ಞೆಗಂ (ಪೊದಳ್ದ ಆಜ್ಞೆಗೆ- ವ್ಯಾಪಿಸಿದ ಅವನ ಆಜ್ಞೆಗೆ )|

ಪೆಸರ್ಗಂ (ಕೀರ್ತಿಗೆ) ಮುನ್ನಮೆ ರೂಪುವೋದುದು (ಗೂಡಾಗಿ ಪರಿಣಮಿಸಿತು) ವಿಯಚ್ಚಕ್ರಂ(ಆಕಾಶ), ಸಮಂತು (ಚೆನ್ನಾಗಿ) ಎಂಬಿನಂ (ಎನ್ನುತ್ತಿರಲು) ಜಸಮ್ ಆ ಪಾಂಡುರಮ್ (ಬೆಳ್ಳಗೆ) ಆದುದು - ಆಯಿತು, (ಪಾಂಡುವಿನ ಕೀರ್ತಿ ಮೇಲಿಂ ಕೆಳವರೆಗೂ ಬೆಳ್ಳಗಾಯಿತು- ಪ್ರಕಾಶಿಸಿತು) ಆ ನೃಪರೊಳು ಆರು ಆ ಪಾಂಡುರಾಜ ಜಂಬರಂ(ರಾಜರಲ್ಲಿ ಆ ಪಾಂಡುರಾಜನ ಸಮಾನ ಆರು/ ಯಾರು?- ಯಾರೂ ಇಲ್ಲ.)

ಪದ್ಯ-೧೧೦:ಅರ್ಥ:ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವು ಅವನ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿತು. ಅವನ ಶೌರ್ಯಕ್ಕೆ ಹೆದರಿ ದಿಙ್ಮಂಡಲದಲ್ಲಿದ್ದ ರಾಜರೆಲ್ಲ ಗೋಳುಪಡುತ್ತಿದ್ದರು. ಸಂಪೂರ್ಣವಾಗಿ ಎಲ್ಲ ಕಡೆಗೂ ವ್ಯಾಪಿಸುವ ಅವನ ಆಜ್ಞೆಗೂ ಯಶಸ್ಸಿಗೂ ಆಕಾಶಮಂಡಲವು ಗೂಡಾಗಿ ಪರಿಣಮಿಸಿತು. (ಆವಾಸಸ್ಥಾನವಾಯಿತು), ಎನ್ನುವಾಗ ಅವನ ಧವಳಕೀರ್ತಿ (ಬಿಳಿಕೀರ್ತಿ) ಸರ್ವಲೋಕವ್ಯಾಪ್ತಿಯಾಯಿತು. ರಾಜರುಗಳಲ್ಲಿ ಪಾಂಡುರಾಜನಿಗೆ ಸಮನಾಗುವವರಾರಿದ್ದಾರೆ? ಯಾರೂ ಇಲ್ಲ.

ಪಾಂಡುರಾಜನು ಶಾಪಗ್ರಸ್ತನಾಗಿ ವಾನಪ್ರಸ್ತಕ್ಕೆ ಹೋದುದು[ಸಂಪಾದಿಸಿ]

ವ|| ಅಂತು ಪಾಂಡುರಾಜನಧಿಕತೆಜನುಮವನತವೈರಿಭೂಭೃತ್ಸಮಾಜನುಮಾಗಿ ನೆಗೞುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲೞ್ತಿಯಿಂ ಪೋಗಿ-
ವಚನ:ಪದವಿಭಾಗ-ಅರ್ಥ:ಅಂತು ಪಾಂಡುರಾಜನು ಅಧಿಕತೇಜನುಂ ಅವನತವೈರಿಭೂಭೃತ್ಸಮಾಜನುಂ (ಅವನತ-ನಮಸ್ಕಕರಿಸಿದ,ವೈರಿ ಭೂ ಬೃತ್ ಸಮಾಜನು) ಆಗಿ ನೆಗೞುತ್ತಿರ್ದ (ಉತ್ತಮವಾಗಿದ್ದ) ಒಂದು ದಿವಸಂ ತೋಪಿನ (ಕಾಡು ಬೇಟೆಯಾಡುವ ಸ್ಥಳ) ಬೇಂಟೆಯನಾಡಲು ಅೞ್ತಿಯಿಂ ಪೋಗಿ-
ವಚನ:ಅರ್ಥ:ಹಾಗೆ ಆ ಪಾಂಡುರಾಜನು ನಿರ್ಮಲ ತೇಜಸ್ಸುಳ್ಳವನೂ, ನಮಸ್ಕರಿಸಲ್ಪಟ್ಟ ಶತ್ರುರಾಜ ಸಮೂಹ ವನ್ನುಳ್ಳವನೂ (ಎಲ್ಲಾರಾಜರೂ ನಮಸ್ಕರಿಸುತ್ತಿದ್ದರು ಎಂದು ಭಾವ) ಆಗಿ ;ರಾಜ್ಯಭಾರಮಾಡುತ್ತಿದ್ದು, ಒಂದು ದಿವಸ ತೋಪಿನ ಬೇಟೆಯನ್ನು ಆಡಲು ಆಸಕ್ತನಾಗಿ ಕಾಡಿಗೆ ಹೋದನು.
ಚಂ||ಇನಿಯಳನೞ್ತಿಯಿಂದೆ ಮೃಗಿ ಮಾಡಿ ಮನೋಜಸುಖಕ್ಕೆ ಸೋಲ್ತಲಂ
ಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ ಮೆ |
ಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂ
ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ || ೧೧೧ (111)
ಪದ್ಯ-111:ಪದವಿಭಾಗ-ಅರ್ಥ: ಇನಿಯಳನು ಅೞ್ತಿಯಿಂದೆ ಮೃಗಿ ಮಾಡಿ ಮನೋಜಸುಖಕ್ಕೆ (ಕಿಂದಮ ಋಷಿಯು ಪತ್ನಿಯನ್ನು ಜಿಂಕೆ ಮಾಡಿಕೊಂಡು ಕಾಮಸುಖಕ್ಕೆ) ಸೋಲ್ತು ಅಲಂಪಿನೆ ನೆರೆಯಲ್ಕೆ (ಅವಳಿಗೆ ಸೋತು/ಆಸೆಪಟ್ಟು ಆನಣದದಿಂದ ಕೂಡಿರಲು) ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ (ಆ ದಿವ್ಯಮುನಿಯೂ ಜಿಂಕೆಯಾಗಿ ಅರಳಿ/ ಹಿಗ್ಗಿ ಹೆಣ್ಣಿನ ಜಿಂಕೆಯೊಡನೆ ಕೂಡಿರಲು) ಮೆಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನು ಎಚ್ಚು(ಮೆಲ್ಲಗೆ ಜಿಂಕೆ ಎಂದು ಹತ್ತಿರ ಹೋಗಿ ಆಯವನ್ನು ನೋಡಿ ಪಾಡುರಾಜನು ಬಾಣದಿಂದ ಹೊಡೆದನು) ಭೋಂಕನೆ ಮೃಗಚಾರಿಯಂ ತನಗೆ ಮಾಣದೆ ತಂದನು ಅದೊಂದು ಮಾರಿಯಂ (ಬಗ್ಗನೆ ಮೃಗವಾಗಿದ್ದ ಋಷಿಯನ್ನು ಹೊಡೆದು ತನಗೆ ಒಂದು ಮಾರಿಯನ್ನು ಮೃತ್ಯುವನ್ನು ತಂದುಕೊಂಡನು.)
ಪದ್ಯ-111:ಅರ್ಥ:ಅಲ್ಲಿ ಕಿಂದಮನೆಂಬ ಋಷಿಯೊಬ್ಬನು ತನ್ನ ಪ್ರಿಯಳನ್ನು ಹೆಣ್ಣು ಜಿಂಕೆಯನ್ನಾಗಿ ಮಾಡಿ ಕಾಮವಶನಾಗಿ ಸಂತೋಷದಿಂದ ಅವಳೊಡನೆ ಕೂಡಿ ಋಷಿಶ್ರೇಷ್ಠನಾದ ತಾನೂ ಗಂಡುಜಿಂಕೆಯ ಆಕಾರವನ್ನು ತಾಳಿ ಉತ್ಸಾಹದಿಂದ ಅದರೊಡನೆ ಕೂಡಿದ್ದನು. ಪಾಂಡುರಾಜನು ಅದು ಜಿಂಕೆಯೆಂದು ಮೆಲ್ಲಗೆ ಅದರ ಹತ್ತಿರ ಬಂದು ಅದರ ಮರ್ಮಸ್ಥಾನವನ್ನು ನೋಡಿ ಗುರಿಯಿಟ್ಟು ಆ ಮೃಗರೂಪದಲ್ಲಿದ್ದ ಆ ಋಷಿಯನ್ನು ತಟ್ಟನೆ ಬಾಣದಿಂದ ಹೊಡೆದು, ತನಗೆ ಒಂದು ಮಾರಿಯನ್ನು/ ಮೃತ್ಯುವನ್ನು ತಂದುಕೊಂಡನು.
ವ|| ಆಗಳ್ ಪ್ರಳಯದುಳ್ಕಮುಳ್ಕುವಂತೆ ತನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಮುಕ್ಕೆ ಪೇೞಿಮೆನ್ನನಾವನೆಚ್ಚನೆಂಬ ಮುನಿದು ಮುನಿದ ಸರಮಂ ಕೇಳ್ದು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-
ವಚನ:ಪದವಿಭಾಗ-ಅರ್ಥ:ಆಗಳ್ ಪ್ರಳಯದ ಉಳ್ಕಮ್(ಉಲ್ಕೆಯು) ಉಳ್ಕುವಂತೆ (ಉರಿಯುವಂತೆ) ತನ್ನೆಚ್ಚಂಬು (ತಾನು ಹೊಡೆದ ಬಾಣ) ಮುನಿಕುಮಾರನ ಕಣ್ಣೊಳಂ ಎರ್ದೆಯೊಳಂ ಅಕ್ಕೆ(ಇರಲು) ಪೇೞಿಂ ಎನ್ನನು ಆವನು ಎಚ್ಚನು (ಹೊಡೆದನು)ಎಂಬ ಮುನಿದು ಮುನಿದ ಸರಮಂ ಕೇಳ್ದು ಬಿಲ್ಲನಂಬುಮನು(ಬಿಲ್ಲು ಬಾಣಗಳನ್ನು) ಈಡಾಡಿ (ಬಿಸಾಡಿ) ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-
ವಚನ:ಅರ್ಥ:ಆಗ ತಾನು ಹೊಡೆದ ಬಾಣವು ಋಷಿಪುತ್ರನ ಕಣ್ಣಿನಲ್ಲಿಯೂ ಎದೆಯಲ್ಲಿಯೂ ಪ್ರಳಯಕಾಲದ ಉಲ್ಕಾಪಾತದಂತೆ ಹೊಳೆಯುತ್ತಿರಲು ‘ನನ್ನನ್ನು ಯಾರು ಹೊಡೆದನು ಹೇಳಿ’ ಎಂಬ ಋಷಿಯ ಕೋಪಧ್ವನಿಯನ್ನು ಕೇಳಿ ಬಿಲ್ಲು ಬಾಣಗಳನ್ನು ಎಸೆದು ತನ್ನ ಮುಂದೆ ನಿಂತ ರಾಜನನ್ನು ಮುನಿ ನೋಡಿ,
ಉ|| ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನನಿಂ
ತನ್ನಯ ಮೆಚ್ಚುದರ್ಕೆ ಪೆಱತಿಲ್ಲದು ದಂಡಮೊಱಲ್ದು ನಲ್ಲಳೊಳ್ |
ನೀನ್ನಡೆನೊಡಿಯುಂ ಬಯಸಿ ಕೂಡಿಯುಮಾರಡೆ ಸಾವೆಯಾಗಿ ಪೋ
ಗಿನ್ನೆನೆ ರೌದ್ರಶಾಪಪರಿತಾಪವಿಳಾಪದೊಳಾ ಮಹೀಶ್ವರಂ || ೧೧೨
ಪದ್ಯ-೧೧೨:ಪದವಿಭಾಗ-ಅರ್ಥ:ಸನ್ನತದಿಂ ರತಕ್ಕೆ ಎಳಸಿ (ಬಗ್ಗಿ ರತಿಕ್ರೀಡೆಗೆ ಬಯಸಿ) ನಲ್ಲಳೊಳ್ ಓತೊಡಗೂಡಿದ ಎನ್ನನು ಇಂತನ್ನಯಂ (ಪತ್ನಿಯಲ್ಲಿ ಒಟ್ಟುಗೂಡಿದ ನನ್ನನ್ನು) ಎಚ್ಚುದರ್ಕೆ(ಹೊಡೆದುದಕ್ಕೆ) ಪೆಱತು ಇಲ್ಲದು ದಂಡಮು(ಬೇರೆ ಇಲ್ಲ ಶಿಕ್ಷೆ) ಒಱಲ್ದು ನಲ್ಲಳೊಳ್ ನೀನು ನೆಡೆನೊಡಿಯುಂ ಬಯಸಿ ಕೂಡಿಯುಂ ಆರಡೆ ಸಾವೆಯಾಗಿ ಪೋಗಿನ್ನು ಎನೆ,(ಪ್ರೀತಿಸಿ ನಲ್ಲೆಯೊಡನೆ ನೀನು ಚೆನ್ನಾಗಿ ನೋಡಿ/ ಅಪೇಕ್ಷೆಪಟ್ಟು ಕೂಡಿದರೆ ಸಾಯುವೆ ಹೋಗು ಇನ್ನು ಎನ್ನಲು,) ರೌದ್ರಶಾಪ ಪರಿತಾಪ ವಿಳಾಪದೊಳು ಆ ಮಹೀಶ್ವರಂ (ರಾಜನು ಭಯಂಕರ ಶಾಪದಿಂದ ಸಂಕಟದಿಂದ ರೋದನದಲ್ಲಿ ಇದ್ದನು.)
ಪದ್ಯ-೧೧೨:ಅರ್ಥ:ರತಿಕ್ರೀಡೆಯ ಸುಖಕ್ಕೆ ಆಸೆಪಟ್ಟು ಪ್ರಿಯಳಲ್ಲಿ ಪ್ರೇಮದಿಂದ ಸೇರಿಕೊಂಡಿದ್ದ ನನ್ನನ್ನು ಹೀಗೆ ಹೊಡೆದುದಕ್ಕೆ ನಿನಗೆ ಬೇರೆ ಶಿಕ್ಷೆಯಿಲ್ಲ, ನೀನು ಇನ್ನು ಮೇಲೆ ನಿನ್ನ ಪ್ರಿಯಳಲ್ಲಿ ಪ್ರೀತಿಸಿ ನೋಡಿದಾಗ ಅಥವಾ ಆಸೆಪಟ್ಟು ಕೂಡಿದಾಗ ಸಾಯುತ್ತೀಯೆ! ಹೋಗು, ಎಂದು ಶಪಿಸಿದನು. ಈ ಭಯಂಕರವಾದ ಶಾಪದಿಂದುಂಟಾದ ದುಖದ ಸಂಕಟದಿಂದ ರೋದನದಲ್ಲಿ ಇದ್ದನು ಆ ಪಾಂಡುರಾಜನು.
ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು
ವಚನ:ಪದವಿಭಾಗ-ಅರ್ಥ:ಎನ್ನ ಗೆಯ್ದ (ನಾನು ಮಾಡಿದ) ಕಾಮಾಕ್ರಾಂತಕ್ಕೆ (ಕಾಮಕ್ರೀಡೆಯ ವಿಘ್ನಕ್ಕೆ) )ಕಾಮಕೃತಮೇಂ ಪಿರಿದಲ್ತು(ಸ್ವೇಚ್ಛಾರದಿಂದ ಆಗಿದ್ದು - ಏನೂ ಹೆಚ್ಚಲ್ಲ.)
ವಚನ:ಅರ್ಥ:ನಾನು ಮಾಡಿದ ಕಾಮಕ್ರೀಡೆಯ ವಿಘ್ನಕ್ಕೆ ಸ್ವೇಚ್ಛಾರದಿಂದ ಆಗಿದ್ದು -ಶಾಪ ಏನೂ ಹೆಚ್ಚಲ್ಲ, ಎಂದು ಪಾಂಡು ಭಾವಿಸಿದ.
ಕಂ|| ಎತ್ತ ವನಮೆತ್ತ ಮೃಗಯಾ
ವೃತ್ತಕವೀ ತಪಸಿಯೆತ್ತ ಮೃಗಮೆಂದೆಂತಾ|
ನೆತ್ತೆಚ್ಚೆನಾತ್ಮಕರ್ಮಾ
ಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ ||೧೧೩||113||
ಪದ್ಯ-೬೯:ಪದವಿಭಾಗ-ಅರ್ಥ:ಎತ್ತ ವನಂ ಎತ್ತ ಮೃಗಯಾವೃತ್ತಕವು ಈ ತಪಸಿಯೆತ್ತ, ಮೃಗಮೆಂದೆಂ ತಾನು ಎತ್ತು ಎಚ್ಚೆನು(ಎಲ್ಲಿಯ ಕಾಡು! ಎಲ್ಲಿಯ ಬೇಟೆಕಾರ್ಯ! ಈ ತಪಸ್ವಿ ಎಲ್ಲಿಯವ!, ಜಿಂಕೆ ಎಂದೇ ತಾನು ಬಿಲ್ಲನ್ನು ಎತ್ತಿ ಹೊಡೆದೆನು ಎಚ್ಚೆನು) ಆತ್ಮಕರ್ಮಾಯತ್ತಂ (ನನ್ನ ಕರ್ಮ ಫಲ) ಪೆಱತಲ್ತು (ಬೇರೆಯಲ್ಲ)ಇದೆಲ್ಲಮ ಅಘಟಿತಘಟಿತಂ (ಇದೆಲ್ಲವೂ ಸಂಬಂಧವಿಲ್ಲದ ಘಟನೆ, ಆಗಬಾರದ ಕಾರ್ಯ!)
ಪದ್ಯ-೬೯:ಅರ್ಥ:ಎಲ್ಲಿಯ ಕಾಡು! ಎಲ್ಲಿಯ ಬೇಟೆಕಾರ್ಯ! ಈ ತಪಸ್ವಿ ಎಲ್ಲಿಯವ!, ಜಿಂಕೆ ಎಂದೇ ತಾನು ಬಿಲ್ಲನ್ನು ಎತ್ತಿ ಹೊಡೆದೆನು, ನನ್ನ ಕರ್ಮ ಫಲ! ಬೇರೆಯಲ್ಲ! ಇದೆಲ್ಲವೂ ಸಂಬಂಧವಿಲ್ಲದ ಘಟನೆ, ಆಗಬಾರದ ಕಾರ್ಯ! ಎಂದು ಪಾಂಡು ಸಂಕಟಪಟ್ಟನು.
ವ|| ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತವಸ್ತುಗಳಂ ದೀನಾನಾಥಜನಂಗಳ್ಗೆ ಸೂಗೊಟ್ಟು ನಿಜಪರಿರಾರಮಂ ಬರಿಸಿ-
ವಚನ:ಪದವಿಭಾಗ-ಅರ್ಥ:ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತವಸ್ತುಗಳಂ ದೀನಾನಾಥ ಜನಂಗಳ್ಗೆ ಸೂಗೊಟ್ಟು ನಿಜ ಪರಿರಾರಮಂ ಬರಿಸಿ-
ವಚನ:ಅರ್ಥ:ಎಂದು ಯೋಚಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಆ ಸಮಾಚಾರವನ್ನೆಲ್ಲ ಹೇಳಿ ಸಮಸ್ತವಸ್ತುಗಳನ್ನೂ ದೀನರೂ ಅನಾಥರೂ ಆದ ಜನಗಳಿಗೆ ದಾನಮಾಡಿ ತನ್ನ ಪರಿವಾರವನ್ನು ಬರಮಾಡಿ-
ಉ|| ಸಾರಮನಂಗ ಜಂಗಮಲತಾ ಲಲಿತಾಂಗಿಯರಿಂದಮಲ್ತೆ ಸಂ
ಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಿಮಿ|
ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದು
ರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್|| ೧೧೪

ಪದ್ಯ-೬೯:ಪದವಿಭಾಗ-ಅರ್ಥ:ಸಾರಮು (ಸಂಸಾರವು) ಅನಂಗ (ಮನ್ಮಥನ) ಜಂಗಮಲತಾ (ನೆಡದಾಡುವ ಬಳ್ಳಿ) ಲಲಿತಾಂಗಿಯರಿಂದಂ ಅಲ್ತೆ (ಸುಂದರ ದೇಹದಿಂದ ಅಲ್ಲವೇ) ಸಂಸಾರಂ ಇದೆಂಬುದು ಇನ್ನೆನಗೆ ತಪ್ಪುದು ತನ್ನ ಮುನಿ ಶಾಪದಿಂದಂ (ಇದು ಸಂಸಾರ ಎನ್ನುವುದು ನನಗೆ ಇನ್ನು ತಪ್ಪಿತು ತನ್ನ ಮುನಿ ಶಾಪದಿಂದ), ಇನ್ನಾರುಂ ಇದರ್ಕೆ ವಕ್ರಿಸದಿರಿಂ (ಇfನರೂ ಇದಕ್ಕೆ ಅಡ್ಡಬರದಿರಿ) ವನವಾಸದೊಳ್ ಇರ್ಪೆನು (ವನವಾಸದಲ್ಲಿರುತ್ತೇನೆ), ಎಂದು ದುರ್ವಾರ ಪರಾಕ್ರಮಂ ತಳರೆ (ಹೊರಡಲು) ಬಾರಿಸಿವಾರಿಸಿ ಕುಂತಿ ಮಾದ್ರಿಯರ್(ಕುಂತಿ ಮಾದ್ರಿಯರು ಬಾರಿಬಾರಿ ಹೇಳಿ ತಡೆದರು.)

ಪದ್ಯ-೬೯:ಅರ್ಥ:ಸಂಸಾರವು ಸಾರವತ್ತಾಗಿರುವುದು ಮನ್ಮಥನ ನಡೆದಾಡುವ ಬಳ್ಳಿಗಳಂತಿರುವ ಸುಂದರದೇಹದ ತರುಣಿಯರಿಂದಲ್ಲವೇ? ಆ ಋಷಿಶಾಪದಿಂದ ಇನ್ನು ಅದು ನನಗೆ ತಪ್ಪಿತು. ವನವಾಸದಲ್ಲಿರುತ್ತೇನೆ! ಇದಕ್ಕೆ ಮತ್ತಾರೂ ಅಡ್ಡಿಮಾಡಬೇಡಿ ಎಂದು ಅಪ್ರತಿಮ ಪರಾಕ್ರಮಿಯಾದ ಆ ಪಾಂಡುರಾಜನು ಕಾಡಿಗೆ ಹೊರಡಲು, ಕುಂತಿ ಮಾದರಿಯರು ಅವನನ್ನು ತಡೆದರು.(ತಡೆಯಲು ಪಾಂಡು ಹೊರಟೇ ಬಿಟ್ಟನು.)
ವ|| ಬೆನ್ನ ಬೆನ್ನನೆ ಬರೆ ಚಿನ್ನ ಬಿನ್ನನೆ ಪೋಗಿ-
ವಚನ:ಪದವಿಭಾಗ-ಅರ್ಥ:ಬೆನ್ನ ಬೆನ್ನನೆ (ಬೆನ್ನ ಹಿಂದೆ ಬರಲು)ಬರೆ , ಚಿನ್ನ ಬಿನ್ನನೆ (ಮೌನವಾಗಿ)ಪೋಗಿ
ವಚನ:ಅರ್ಥ:ಅವನ ಬೆನ್ನ ಹಿಂದೆ ಹಿಂದೆಯೇ ಮೌನವಾಗಿ ಬಂದರು.
ಖಚರುಪ್ಲುತ ತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ
ಭಂಗಮಂ ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ|
ತ್ತುಂಗಮಂ ಮುನಿಮುಖ್ಯಮುಖಾಂಭೋಜೋದರ ನಿರ್ಗತಮಂತ್ರ ಪೂ
ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ|| ೧೧೫
ಪದ್ಯ-೧೧೫:ಪದವಿಭಾಗ-ಅರ್ಥ:ತುಂಗ(ಎತ್ತರದ) ವನ್ಯ ಮತಂಗಜ ದಂತಾಘಾತ ನಿಪಾತಿತ(ಎತ್ತರವಾದ ಕಾಡಾನೆಯ ದಂತದ ಪೆಟ್ಟಿನಿಂದ ಉರುಳಿಸಲ್ಪಟ್ಟು) ಸಲ್ಲಕೀಭಂಗಮಂ (ಆನೆಯಿಂದ ಮುರಿದ ಬೇಲದ ಮರಗಳನ್ನುಳ್ಳುದೂ) ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತ ಓತ್ತುಂಗಮಂ(ಮುತ್ತು ಮತ್ತು ರತ್ನಗಳನ್ನೊಳಗೊಂಡ ನೀಲವೂ ಸ್ಥೂಲವೂ ಆದ ಕಲ್ಲುಬಂಡೆಗಳಿಂದ ಪ್ರಕಾಶಮಾನವಾದುದೂ ಬಹಳ ಎತ್ತರವಾದುದೂ) ಮುನಿಮುಖ್ಯ ಮುಖಾಂಭೋಜ ಉದರ (ಮನಿಮುಖ್ಯರ ಮಖಕಮಲದಿಂದ ಒಳಗಿನಿಂದ), ನಿರ್ಗತಮಂತ್ರ ಪೂತಾಂಗಮಂ (ಹೊರಟ ಮಂತ್ರಗಳಿಂದ ಪೂತ / ಪವಿತ್ರವಾದ) ನೃಪನು ಎಯ್ದಿದನು ಉದ್ಯಚ್ಛೃಂಗಮನು ಆ ಶತಶೃಂಗಮಂ(ಎತ್ತರ ಶಿಖರವನ್ನು ಆ ಶತಶೃಂಗವೆಂಬ ಪರ್ವತವನ್ನು ಪಾಂಡುರಾಜನು ತಲುಪಿದನು)
ಪದ್ಯ-೧೧೫:ಅರ್ಥ:ಎತ್ತರವಾದ ಕಾಡಾನೆಯ ದಂತದ ಪೆಟ್ಟಿನಿಂದ ಉರುಳಿಸಲ್ಪಟ್ಟು ಮುರಿದ ಬೇಲದ ಮರಗಳನ್ನುಳ್ಳುದೂ ಮುತ್ತು ಮತ್ತು ರತ್ನಗಳನ್ನೊಳಗೊಂಡ ನೀಲವೂ ಸ್ಥೂಲವೂ ಆದ ಕಲ್ಲುಬಂಡೆಗಳಿಂದ ಪ್ರಕಾಶಮಾನವಾದುದೂ ಬಹಳ ಎತ್ತರವಾದುದೂ ಋಷಿಶ್ರೇಷ್ಠರ ಮುಖಕಮಲಗಳಿಂದ ಹೊರಹೊರಟ ಮಂತ್ರಗಳಿಂದ ಪವಿತ್ರವಾದ ಶರೀರವುಳ್ಳದೂ ಎತ್ತರವಾದ ಲೋಡುಗಳಿಂದ ಕೂಡಿದುದೂ ಆದ ಶತಶೃಂಗ ಪರ್ವತವನ್ನು ಪಾಂಡುರಾಜನು ಬಂದು ಸೇರಿದನು.
ವ|| ಆ ಪರ್ವತದ ವಿಪುಳ ವನೋಪಕಂಠಗಳೊಳ್ ತಾಪಸಕನ್ಯೆಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡುದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವಱ ಮಱಿಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮನಾಗಳಾಪಳುವಂಗಳಿಂದೆ ಪಾಯ್ವ ಪುಲಿಗಳ ಮಱಿಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೀಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪೋಧನರದ ತಪಪ್ರಭಾವಕ್ಕೆ ಚೋದ್ಯಂಬಟ್ಟು-
ವಚನ:ಪದವಿಭಾಗ-ಅರ್ಥ:ಆ ಪರ್ವತದ ವಿಪುಳ ವನ ಉಪಕಂಠಗಳೊಳ್ (ತಪ್ಪಲಿನಲ್ಲಿ) ತಾಪಸಕನ್ಯೆಯರ್ ನಡಪಿದ ಎಳಲತೆಗಳೊಳ್ ಎಱಗಿ ತುಱುಗಿ (ನೆಟ್ಟ ಬಳ್ಳಿಗಳಲ್ಲಿ ಹೂವು ಹಣ್ನುತುಂಬಿ) ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ (ಸಂವೇದ ಪಾಠದೋತೆ ಮೊರೆಯುವ ದುಂಬಿಗಳು) ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು(ಹಣ್ನು ಬಿಟ್ಟು ಬಾಗಿದ ಮರಗಳು) ಪುಗಿಲ್ ಪುಗಿಲ್ ಎಂದು ಇತ್ತ ಬನ್ನಿಂ ಇರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ('ಪುಗಿಲ್ ಪುಗಿಲ್' ಎಂದು ಇತ್ತ ಬನ್ನಿ. ಇರಿ ಎಂಬ ಹೊಂಬಣ್ಣದ ಕೋಗಿಲೆಗಳು) ಮುನಿಕುಮಾರರು ಒದುವ ವೇದವೇದಾಂಗಂಗಳಂ ತಪ್ಪುವಿಡುದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ(ತಪ್ಪು ಹಿಡಿದು ಹೇಳುವ ಗಿಳಿಗಳು) ಸುರಭಿಗಳ ತೊರೆದ ಮೊಲೆಗಳನು ಉಣ್ಬ ಅವಱ ಮಱಿಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ(ದನಗಳು ಸುರಿಸುವ ಹಾಲನ್ನು ಉಣ್ಣುವ ಕರುಗಳನ್ನು ಓಡಿಸಿ ಆ ಮೊಲೆಗಳನ್ನುನ್ನುವ ಸಿಂಹದ ಮರಿಗಳು ) ತಮ್ಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮಂ ಆಗಳು ಆ ಪಳುವಂಗಳಿಂದೆ ಪಾಯ್ವ ಪುಲಿಗಳ ಮಱಿಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡ ತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೀಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪೋಧನರದ ತಪಪ್ರಭಾವಕ್ಕೆ ಚೋದ್ಯಂಬಟ್ಟು-
ವಚನ:ಅರ್ಥ: ಆ ಪರ್ವತದ ತಪ್ಪಲು ಪ್ರದೇಶದಲಿ ತಾಪಸಕನ್ಯೆಯರು ಸಾಕಿ ಬೆಳೆಸಿದ ಬಳ್ಳಿಗಳನ್ನು ಮುತ್ತಿ ಗುಂಪುಗೂಡೆ ಸಾಮವೇದಧ್ವನಿಯ ಶಬ್ದಮಾಡುತ್ತಿರುವ ದುಂಬಿಗಳನ್ನೂ ಫಲಭಾರದಿಂದ ಬಾಗಿದ ಆ ಆಶ್ರಮದ ಗಿಡಗಳ ಮೇಲಿದ್ದು ‘ಪ್ರವೇಶಿಸಿ, ಬನ್ನಿ, ಇಲ್ಲಿ ವಾಸಿಸಿ’ ಎನ್ನುತ್ತಿರುವ ಹೊಂಬಣ್ಣದ ಕೋಗಿಲೆಗಳನ್ನೂ ಋಷಿಕುಮಾರರು ಅಧ್ಯಯನ ಮಾಡುತ್ತಿರುವ ವೇದವೇದಾಂಗಗಳಲ್ಲಿ ತಪ್ಪನ್ನು ಕಂಡುಹಿಡಿದು ಆಕ್ಷೇಪಿಸಿ ಸರಿಪಡಿಸುವ ಪದ್ಮರಾಗವೆಂಬ ರತ್ನದ ಬಣ್ಣದಿಂದ ಕೂಡಿದ ಶ್ರೇಷ್ಠವಾದ ಗಿಳಿಗಳನ್ನೂ ಹಸುಗಳ ಹಾಲು ತುಂಬಿದ ಕೆಚ್ಚಲುಗಳನ್ನು ಉಣ್ಣುತ್ತಿರುವ ಅವುಗಳ ಕರುಗಳನ್ನು ಓಡಿಸಿ ಹಾಲುಕುಡಿಯುತ್ತಿರುವ ಸಿಂಹದ ಮರಿಗಳನ್ನೂ ತಮ್ಮೊಡನೆ ನಲಿದಾಡುತ್ತಿರುವ ಸಿಂಹದ ಮರಿಗಳನ್ನು ಹಿಡಿದೆಳೆಯುವ ಆನೆಯ ಮರಿಗಳನ್ನೂ ಆಗಾಗ ಅಲ್ಲಿ ಎಡೆಯಾಡುತ್ತಿರುವ ಹುಲಿಯ ಮರಿಗಳ ಜೊತೆಯಲ್ಲಿ ಆಡುತ್ತಿರುವ ಜಿಂಕೆಯ ಮರಿಗಳನ್ನೂ ಮತ್ತು ಕುರುಡರಾದ ಮುದಿತಪಸ್ವಿಗಳ ಕೈ ಹಿಡಿದು ಅವರ ಗುಹೆಗಳನ್ನು ಪ್ರವೇಶಮಾಡಿಸುವರು. ಹಾಗೆಯೇ ಅಲ್ಲಿಂದ ಹೊರಡಿಸುವ ಚಪಳವಾದ ಕಪಿಗಳನ್ನೂ ಹೋಮಾಗ್ನಿಯು ನಂದಿಹೋಗದಂತೆ ತಮ್ಮ ರಕ್ಕೆಯ ಗಾಳಿಯಿಂದ ಬೀಸಿ ಉರಿಸುತ್ತಿರುವ ರಾಜಹಂಸಗಳನ್ನೂ ಮುನೀಂದ್ರ ಸಮೂಹದೊಡನೆ ದಾಳಿಯ ಹೂವನ್ನು ಕುಯ್ಯುವ ಮತ್ತು ಜೊತೆಯಲ್ಲಿ ಬರುವ ಕಪಿಗಳನ್ನೂ ನೋಡಿ ಆ ತಪೋವನದ ತಪಸ್ಸನ್ನೇ ಧನವನ್ನಾಗಿ ಉಳ್ಳ ಆ ಋಷಿಶ್ರೇಷ್ಠರ ತಪಸ್ಸಿನ ಪ್ರಭಾವಕ್ಕೆ ಆಶ್ಚರ್ಯಪಟ್ಟನು.
ಚಂ|| ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊ
ಯ್ಯನೆ ಮಱಿದುಂಬಿಗಳ್ ಮೊರೆವುವೞ್ಕಱೊಳೊಲ್ದೆಱಪಂತೆ ತಳ್ತ ಪೂ|
ವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇ
ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ|| ೧೧೬
ಪದ್ಯ-೬೯:ಪದವಿಭಾಗ-ಅರ್ಥ:ವಿನಯದಿಂ ಇತ್ತ ಬನ್ನಿಂ ಮಿರಿಂ ಎಂಬವೊಲು ಇಂಚರದಿಂದಂ ಒಯ್ಯನೊಯ್ಯನೆ ಮಱಿದುಂಬಿಗಳ್ ಮೊರೆವುವು (ದುಂಬಿಗಳು ಕರೆಯುವಂತೆ ಮೊರೆಯುತ್ತವೆ) ಅೞ್ಕಱೊಳು ಒಲ್ದೆಱಪಂತೆ ತಳ್ತ ಪೂವಿನ ಪೊಸ ಗೊಂಚಲಿಂ ಮರನು (ತಳಿತ ಹೋವಿನ ಗೊಂಚಲು ಅಳ್ಕರ -ಪ್ರೀತಿಯಿಂದ ಒಲಿದು ಬಾಗಿವೆ) ಇದೇನು ಎಸೆದಿರ್ದುವೊ (ಇದೇನು ಶೋಭೆಯೋ!) ಕಲ್ತುವಾಗದೇ ವಿನಯಮಂ ಈ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದ ಆ(ಆ ಬೆಟ್ಟಗಳ ಮರಗಳು ತಪೋಧನರಿಂದ ವಿನಯವನ್ನು ಕಲಿತ ಹಾಗಿದೆ)
ಪದ್ಯ-೬೯:ಅರ್ಥ:ಇದೇನು! ಇಲ್ಲಿಯ ದುಂಬಿಯ ಮರಿಗಳು ವಿನಯದಿಂದ ಈ ಕಡೆ ಬನ್ನಿ, ಇಲ್ಲಿರಿ ಎನ್ನುವ ಹಾಗೆ ಮನೋಹರವಾಗಿ ಶಬ್ದಮಾಡುತ್ತಿವೆ. ಈ ಪರ್ವತದ ಮರಗಳೂ ತಾವು ಹೊತ್ತಿರುವ ಹೊಸಹೂವಿನ ಗೊಂಚಲಿನ ಭಾರದಿಂದ ಪ್ರೀತಿಯಿಂದ ಒಲಿದು ಬಾಗಿ ತಪೋಧನರಿಂದ ವಿನಯವನ್ನು ಕಲಿತ ಹಾಗಿದೆ!
ವ|| ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-
ವಚನ:ಪದವಿಭಾಗ-ಅರ್ಥ:ಎಂದು ಮೆಚ್ಚುತ್ತುಂ ಎನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮ ಅನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ(ಬಿಟ್ಟು) ತದ್ ಆಶ್ರಮದೊಳು ಆಶ್ರಮಕ್ಕೆ ಗುರುವಾಗೆ ಪಾಂಡುರಾಜನು ಇರ್ಪ ಅನ್ನೆಗಮ್ ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪಾರಾಶರಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು
ವಚನ:ಅರ್ಥ:ಪಾಂಡುವು ಎಂದು ಆ ಪ್ರದೇಶವನ್ನು ಮೆಚ್ಚುತ್ತ ತಾನು ವಾಸವಾಗಿರಲು ಈ ತಪೋವನವೇ ಪವಿತ್ರವಾದುದು ಎಂದು ಆ ತಪೋವನದ ಮುನಿಜನರ ವಿಶೇಷ ಪ್ರೀತಿಯನ್ನು ಹೆಚ್ಚಿಸಿ ಕಾಮದಲ್ಲಿ ತನಗಿದ್ದ ಪ್ರೀತಿಯನ್ನು ಬಿಟ್ಟು. ಆ ಆಶ್ರಮದಲ್ಲಿ ಪಾಂಡುರಾಜನು ಆಶ್ರಮದ ಗುರುವಾಗಿ ಇದ್ದನು. ಈ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರುಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸಿ- ಬಯಸಿದಳು.
ಚಂ|| ವಿಸಸನದೊಳ್ ವಿರೋಧಿನೃಪರಂ ತಱಿದೊಟ್ಟಲುಮರ್ಥಿಗರ್ಥಮಂ
ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್|
ಪಸರಿಸಲುಂ ಕರಂ ನೆಱೆವ ಮಕ್ಕಳನೀಯದೆ ನೋಡೆ ನಾಡೆ ನೋ
ಯಸಿದಪುದಿಕ್ಷುಪುಷ್ಪದವೊಲೆನ್ನಯ ನಿಷ್ಫಲ ಪುಷ್ಪದರ್ಶನಂ|| ೧೧೭||
ಪದ್ಯ-೬೯:ಪದವಿಭಾಗ-ಅರ್ಥ:ವಿಸಸನದೊಳ್ (ಕಾಳಗದಲ್ಲಿ) ವಿರೋಧಿ ನೃಪರಂ ತಱಿದೊಟ್ಟಲುಂ (ಕಡಿದು ಒಟ್ಟಲು) ಮರ್ಥಿಗೆ ಅರ್ಥಮಂ ಕಸವಿನ ಲೆಕ್ಕಮೆಂದು ಕುಡಲುಂ (ಬೇಡಿದವರಿಗೆ ಧನವನ್ನು ಕಸವೆಂದು ತಿಳಿದುಕೊಡಲು) ವಿಪುಳಾಯತಿಯಂ ದಿಗಂತದೊಳ್ ಪಸರಿಸಲುಂ (ವಿಶೇಷ ಕೀರ್ತಿಯನ್ನು ಹರಡಲು) ಕರಂ ನೆಱೆವ ಮಕ್ಕಳನೀಯದೆ (ಬಹಳ ಸಮರ್ಥ ಮಕ್ಕಳನ್ನು ಕೊಡದೆ) ನೋಡೆ ನಾಡೆ ನೋಯಸಿದಪುದು ಇಕ್ಷುಪುಷ್ಪದವೊಲು (ಕಾಯಿ ಬಿಡದ ಕಬ್ಬಿನ ಹೋವಿನಂತೆ) ಎನ್ನಯ ನಿಷ್ಫಲ ಪುಷ್ಪದರ್ಶನಂ(ಮಗುವಾಗದ ನನ್ನ ಮುಟ್ಟಿನ ದರ್ಶನ ವ್ಯರ್ಥವಾಗುವುದು).
ಪದ್ಯ-೬೯:ಅರ್ಥ:.ಯುದ್ಧದಲ್ಲಿ ಶತ್ರುರಾಜರನ್ನು ಕಡಿದೊಟ್ಟಲು ಸಾಮರ್ಥ್ಯವುಳ್ಳ, ಯಾಚಕರಿಗೆ ದ್ರವ್ಯವನ್ನು ಕಸಕ್ಕೆ ಸಮನಾಗಿ ಎಣಿಸಿ ದಾನಮಾಡುವ, ತಮ್ಮ ಪರಾಕ್ರಮವನ್ನು ದಿಕ್ಕುಗಳ ಕೊನೆಗೂ ಹರಡಲು ಸಮರ್ಥರಾದ ಮಕ್ಕಳನ್ನು ಕೊಡದೆ ನಾಡು ನೋಡು ನೋಡುತ್ತಿರುವ ಹಾಗೆಯೇ ನನ್ನ ಮಕ್ಕಳಾಗದ ತಿಂಗಳ ಮುಟ್ಟು ಕಾಯಿಬಿಡದ ಕಬ್ಬಿನ ಹೂವಿನಂತೆ ನಿಷ್ಫಲವಾಯಿತು.
ವ|| ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಚಿಂತಾಕ್ರಾಂತೆಯಾಗಿ ಇರ್ದ ಕುಂತಿಯಂ ಕಂಡು ಪಾಂಡುರಾಜನು ಏಕಾಂತದೊಳು ಇಂತೆಂದಂ-
ವಚನ:ಅರ್ಥ:ಹೀಗೆ ಮಕ್ಕಳಿಲ್ಲ ಎಂಬ ಚಿಂತೆಯಿಂದ ಕೂಡಿದ್ದ ಕುಂತಿಯನ್ನು ನೋಡಿ ಪಾಂಡುರಾಜನು ರಹಸ್ಯವಾಗಿ ಹೀಗೆಂದು ಹೇಳಿದನು;
ಉ|| ಚಿಂತೆಯಿದೇನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿ
ನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ|
ತ್ಯಂತ ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿ
ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ|| ೧೧೮
ಪದ್ಯ-೬೯:ಪದವಿಭಾಗ-ಅರ್ಥ:ಚಿಂತೆ ಇದು ಏನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡೆ (ಮಕ್ಕಳೇ ವಾರ್ತೆ/ ಮುಖ್ಯವಾದರೆ) ಇನ್ನು ಇಂತು ಇರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ(ಬಗೆ-ಈರ್ಪಿನಿಂ ಮನಸ್ಸು ತೃಪ್ತಿಯಾಗುವಂತೆ ಮುನಿಗಳನ್ನು ಮೆಚ್ಚಿಸು) ನಿಜ ಅತ್ಯಂತ ಪತಿವ್ರತಾಗುಣದಿಂ ಅರ್ಚಿಸಿ ಮೆಚ್ಚಿಸು ನೀಂ ದಿಗಂತ ವಿಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ(ತನು ಭವರು -ಮಕ್ಕಳನ್ನು ಪಡೆ)
ಪದ್ಯ-೬೯:ಅರ್ಥ:ಸಣ್ಣನಡುವಿನ ಎಲೌ ಕುಂತಿಯೇ ಈ ಚಿಂತೆಯೇಕೆ ನಿನಗೆ? ನಮ್ಮ ವಂಶಕ್ಕೆ ನೇರವಾಗಿ ಪುತ್ರಸಂತಾನದ ಪ್ರಾಪ್ತಿಯಾಗಬೇಕಾದರೆ ಇನ್ನು ಮೇಲೆ ನೀನು ಹೀಗಿರಬೇಡ; ಋಷಿಶ್ರೇಷ್ಠರಿಂದ ನಿನ್ನ ಇಷ್ಪಾರ್ಥಸಿದ್ಧಿಯಾಗುವ ಹಾಗೆ ನಿನ್ನ ವಿಶೇಷ ಪತಿವ್ರತಾಗುಣದಿಂದ ಪೂಜೆಮಾಡಿ ಅವರನ್ನು ಮೆಚ್ಚಿಸು. ದಿಕ್ಕುಗಳ ಕೊನೆಯವರೆಗೆ ಹಬ್ಬುವ ಯಶದ ಮಕ್ಕಳನ್ನು ಪಡೆ ಎಂದನು.

ಧರ್ಮಜನ ಜನನ[ಸಂಪಾದಿಸಿ]

ವ|| ಎಂದೊಡೆ ಕೊಂತಿಯಿಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡು ದೊಳ್ಳಿತ್ತೆಂಬುದಂ ದಿವ್ಯಮುನಿವಾಕ್ಯಮಮೋಘವಾಕ್ಯಮಕ್ಕುಮದರ್ಕೇನುಂ ಚಿಂತಿಸಲ್ವೇಡ ಎಂದೊಡಂತೆ ಗೆಯ್ವೆನೆಂದು ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-
ವಚನ:ಪದವಿಭಾಗ-ಅರ್ಥ:ಎಂದೊಡೆ ಕೊಂತಿಯಿಂತು ಎಂದಳು, 'ಎನ್ನ ಕನ್ನಿಕೆಯಾ ಕಾಲದೊಳ್ ನಾನು ಎನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು(ಬೆಳೆಯುವಾಗ) ದುರ್ವಾಸ ಮಹಾಮುನಿಯರು ಎಮ್ಮ ಮನೆಗೆ ನಿಚ್ಚಕ್ಕಂ (ನಿತ್ಯವೂ) ಬರ್ಪರು ಅವರು ಎನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವದರ್ಕಂ(ಸೇವೆ ಮಾಡಿದ್ದಕ್ಕೆ) ಮೆಚ್ಚಿ ಮಂತ್ರಾಕ್ಷರಂಗಳನು ಅಯ್ದಂ (೫) ವರವಿತ್ತರ್; ಈಯಯ್ದು ಮಂತ್ರಕೆ ಐಯ್ವರ್ ಮಕ್ಕಳಂ(೦ಪಡೆಯುವೆ) ನಿನ್ನ ಬಗೆಗೆ ಬಂದವರನು ಆಹ್ವಾನಂ ಗೆಯ್ಯಲು ಅವರ ಪೋಲ್ವೆಯ (ಹೋಲುವ) ಮಕ್ಕಳಂ ಪಡೆವೆಯೆಂದು ಬೆಸಸಿದೊಡೆ (ಹೇಳಿದಾಗ) ಈಗಳು ಎನ್ನ ಪುಣ್ಯದಿಂ ದೊರೆಕೊಂಡುದು(ಈಗ ಲಭ್ಯವಾಯಿತು, ಅವಶ್ಯಕವಾಯಿತು) ಒಳ್ಳಿತ್ತು ಎಂಬುದಂ (ಎಂದು ಕುಂತಿ ಪಾಂಡುವಿಗೆ ಹೇಳಿದಾಗ, ಅವನು) ದಿವ್ಯಮುನಿವಾಕ್ಯಮ್ ಅಮೋಘವಾಕ್ಯಂ ಅಕ್ಕುಮ್ (ಆಯಿತು)ಅದರ್ಕೇನುಂ ಚಿಂತಿಸಲ್ವೇಡ ಎಂದೊಡೆ ()ಅದಕ್ಕೇನು ಚಿಂತಿಸಬೇಡ ಎಂದಾಗ) ಅಂತೆ ಗೆಯ್ವೆನೆಂದು (ಮಾಡುವೆನೆಂದು) ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು (ಶುಭ್ರವಾದ ಬಟ್ಟೆ, ಉಟ್ಟು)ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳು ಇರ್ದು(ದರ್ಭೆಯಮೇಲೆ ಮಲಗಿ)-
ವಚನ:ಅರ್ಥ:|| ಎಂದು ಪಾಂಡು ಹೇಳಲು, ಕುಂತಿಯು ಹೀಗೆಂದಳು- ನಾನು ಕನ್ನಿಕೆಯಾಗಿ ನನ್ನ ಮಾವನಾದ ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರುವಾಗ ದುರ್ವಾಸ ಮಹರ್ಷಿಗಳು ನಮ್ಮ ಮನೆಗೆ ಪ್ರತಿದಿನವೂ ಬರುತ್ತಿದ್ದರು. ಅವರು ನನ್ನ ವಿನಯ ಭಕ್ತಿ ಸೇವೆಗೆ ಮೆಚ್ಚಿ ಅಯ್ದು (೫)ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟರು. ಈ ಅಯ್ದು ಮಂತ್ರದಿಂದ ನಿನ್ನ ಮನಸ್ಸಿಗೆ ಬಂದವರನ್ನು ನೆನೆದು ಕರೆಯಲು ಅವರನ್ನು ಹೋಲುವ ಅಯ್ದು ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಕೊಡಿಸಿದರು. ಈಗ ಅದು ನನ್ನ ಪುಣ್ಯದಿಂದ ದೊರೆಕೊಂಡುದು ಪ್ರಯೋಜನವಾಯಿತು ಎಂದು ಹೇಳಿದಳು. ಪಾಂಡುವು ‘ದಿವ್ಯಋಷಿಗಳ ಮಾತು ಬಹುಬೆಲೆಯುಳ್ಳದ್ದು ; ಅದಕ್ಕೇನೂ ಚಿಂತಿಸಬೇಡ, ಹಾಗೆಯೇ ಮಾಡು’ ಎಂದನು. ಕುಂತಿಯು ಹಾಗೆಯೇ ಮಾಡುತ್ತೇನೆಂದು ಹೇಳಿ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಶುಭ್ರವಸ್ತ್ರವನ್ನು ಧರಿಸಿ ಮುತ್ತಿನ ಆಭರಣವನ್ನು ತೊಟ್ಟು ದರ್ಭೆಯ ಮೇಲೆ ಮಲಗಿ-
ಉ|| ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ
ತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋ|
ಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾ
ತ್ಮಾನುಗತಾರ್ಥಮೆಂದೊಡನಗೀವುದು ನಿನ್ನನೆ ಪೋಲ್ವ ಪುತ್ರನಂ|| ೧೧೯||
ಪದ್ಯ-೧೧೯:ಪದವಿಭಾಗ-ಅರ್ಥ: ಜ್ಞಾನದಿಂ ಇರ್ದು ನಿಟ್ಟಿಪೊಡೆ (ನೋಡಿದರೆ) ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮಂ, ಓದಿಯೋದಿ (ಪಠಿಸಿ) ಯಮರಾಜನನು ಅದ್ಭುತ ತೇಜನಂ ಸರೋಜಾನನೆ (ಕುಂತಿ) ಜಾನದಿಂ ಬರಿಸೆ (ಧ್ಯಾನದಿಂದ ಬರಿಸಲು)ಬಂದು ಯಮಂ ಬೆಸನು ಆವುದು(ಬೇಡಿಕೆ ಏನು,) ಆವುದು ಆತ್ಮಾನುಗತ ಆರ್ಥಮಂ (ಮನಸ್ಸಿನ ಅಪೇಕ್ಷೆ ಯಾವುದು) ಎಂದೊಡೆ ಎನಗೆ ಈವುದು ನಿನ್ನನೆ ಪೋಲ್ವ ಪುತ್ರನಂ(ನನಗೆ ನಿನ್ನನ್ನೇ ಹೋಲುವ ಮಗನನ್ನು ಕೊಡುವುದು, ಎಂದಳು.)
ಪದ್ಯ-೧೧೯:ಅರ್ಥ:ಋಷಿಶ್ರೇಷ್ಠನಾದ ದುರ್ವಾಸನು ಕೊಟ್ಟ ಮಂತ್ರಸಮೂಹವನ್ನು ಜ್ಞಾನದಿಂದ ಏಕಾಗ್ರಚಿತ್ತದಿಂದ ಪಠಸಿ ಕಮಲಮುಖಿಯಾದ ಆ ಕುಂತಿಯು ಅದ್ಭುತವಾದ ತೇಜಸ್ಸಿನಿಂದ ಕೂಡಿದ ಯಮರಾಜನನ್ನು ಕರೆಸಿದಳು. ಯಮನು ಬಂದು ‘ಮಾಡಬೇಕಾದ ಕಾರ್ಯ ಯಾವುದು? ನಿನ್ನ ಇಷ್ಟಾರ್ಥವೇನು’ ಎಂದನು. ‘ನಿನ್ನನ್ನು ಹೋಲುವ ಮಗನನ್ನು ನನಗೆ ಕೊಡುವುದು, ಎಂದಳು.' ಎಂದಳು.
ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ತಥಾಸ್ತು! ಎಂದು ತನ್ನ ಅಂಶಮನಾಉ ಆಕೆಯ ಗರ್ಭದೊಳು ಅವತರಿಸಿ ಯಮಭಟ್ಟಾರಕನು ಅಂತರ್ಧಾನಕ್ಕೆ ಸಂದನು ಅನ್ನೆಗಂ ಆ ಕಾಂತೆಗೆ-
ವಚನ:ಅರ್ಥ:ಯಮನು ‘ತಥಾಸ್ತು’ ಎಂದು ತನ್ನ ಅಂಶವನ್ನು ಅವಳ ಗರ್ಭದಲ್ಲಿ ಇಳಿಸಿಟ್ಟು ಮಾಯವಾದನು. ಆಗ ಕುಂತಿಗೆ-
ಚಂ|| ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂ
ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿ|
ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿ
ಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ|| ೧೨೦||
ಪದ್ಯ-೧೨೦:ಪದವಿಭಾಗ-ಅರ್ಥ:ಹಿಮ ಧವಳ ಆತಪತ್ರಮ‍ ಎನೆ ಪೋಲೆ ಮುಖೇಂದುವ ಬೆಳ್ಪು (ಕುಂತಿಯ ಚಂದ್ರನನಂತಿರುವ ಮುಖದಲ್ಲಿ ಬಿಳುಪು ಮೂಡಿತು), ಪೂರ್ಣ ಕುಂಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು (ಸ್ತನಗಳು ದಪ್ಪವಾದವು,) ಪತಾಕೆಯೊಂದು ವಿಭ್ರಮಮನೆ (ವಿಲಾಸವನ್ನು) ಪೋಲೆ(ಹೋಲಲು) ಪುರ್ವಿನ (ಹುಬ್ಬಿನ)ಪೊಡರ್ಪು ()ಅಲುಗಾಟ ಒಳಕೊಂಡುದು ಅವಳ್ಗೆ (ಹುಬ್ಬುಗಳು ದಟ್ಟವಾಗಿ ಕಂಪಿಸುತ್ತಿತ್ತು ಶೋಭಿಸಿತು)ಗರ್ಭ ಚಿಹ್ನಮೆಗಳ ಗರ್ಭದ ಅರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ(ಈ ಗರ್ಭ ಚಿಹ್ನೆಯು ರಾಜಲಕ್ಷಣದ ಗುರುತು.)
ಪದ್ಯ-೧೨೦:ಅರ್ಥ:ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳನೆ ಕೊಡೆಯನ್ನು ಸೂಚಿಸಿತು. ಸ್ತನಗಳು ಕೊಡಗಳ ಆಕಾರವನ್ನು ಪಡೆದವು. ಹುಬ್ಬಿನ ವಿಸ್ತಾರವು ಧ್ವಜದ ವಿಸ್ತಾರವನ್ನು ತೋರಿಸಿತು. ಅವಳ ಗರ್ಭದಲ್ಲಿರುವ ಮಗುವಿನ ರಾಜ್ಯಚಿಹ್ನವನ್ನು ಸೂಚಿಸುವಂತೆ ಅವಳಿಗೆ ಗರ್ಭಚಿಹ್ನೆಗಳುಂಟಾದವು.
ವ|| ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯೆ ಬಂಧುಜನದ ಮನೋರಥಂಗಳು ಮೊಂಬತ್ತನೆಯ ತಿಂಗಳುಮೊಡನೊಡನೆ ನೆರೆಯೆ-
ವಚನ:ಪದವಿಭಾಗ-ಅರ್ಥ:ಅಂತು ಕೊಂತಿಯ ಗರ್ಭಭಾರಮುಂ (ಗರ್ಭವು) ತಾಪಸ ಆಶ್ರಮದ ಅನುರಾಗಮುಮ ಒಡನೊಡನೆ ಬಳೆಯೆ ಬಂಧುಜನದ ಮನೋರಥಂಗಳುಂ ಒಂಬತ್ತನೆಯ ತಿಂಗಳುಂ ಒಡನೊಡನೆ ನೆರೆಯೆ(ತುಂಬಲು)-
ವಚನ:ಅರ್ಥ: ಹಾಗೆ ಕುಂತಿಯ ಗರ್ಭವು ಆ ತಪಸ್ವಿಗಳ ಆಶ್ರಮದ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗಿ ಅವಳ ಬಂಧುಜನದ ಇಷ್ಟಾರ್ಥವೂ ಒಂಬತ್ತನೆಯ ತಿಂಗಳೂ ಒಟ್ಟಿಗೆ ಪೂರ್ಣವಾದುವು.
ಕಂ|| ವನನಿಧಿಯಿಂದಂ ಚಂದ್ರಂ
ವಿನತೋದರದಿಂ ಗರುತ್ಮನುದಯಾಚಳದಿಂ|
ದಿನಪನೊಗೆವಂತೆ ಪುಟ್ಟಿದ
ನನಿವಾರ್ಯ ಸುತೇಜನೆನಿಪನಿನಜನ ತನಯಂ|| ೧೨೧||
ಪದ್ಯ-೧೨೧:ಪದವಿಭಾಗ-ಅರ್ಥ:ವನನಿಧಿಯಿಂದಂ ಚಂದ್ರಂ (ಸಮುದ್ರದಿಂದ ಚಂದ್ರನೂ,) ವಿನತೆ ಉದರದಿಂ ಗರುತ್ಮಂ (ವಿನುತೆಯಿಂದ ಗರುಡನೂ,) ಉದಯಾಚಳದಿಂ ದಿನಪನು ಒಗೆವಂತೆ (ಉದಯಗಿರಿಯಿಂದ ಸೂರ್ಯನು ಹುಟ್ಟಿದಂತೆ) ಪುಟ್ಟಿದನು(ಹುಟ್ಟಿದನು) ಅನಿವಾರ್ಯ ಸುತೇಜನು (ಪ್ರಬಲ ತೇಜಸ್ಸುವುಳ್ಳ ) ಎನಿಪಂ ಇನಜನ (ಇನ-ಸೂರ್ಯ ಜ ಮಗ =ಯಮ) ತನಯಂ (ಮಗ).
ಪದ್ಯ-೧೨೧:ಅರ್ಥ:ಸಮುದ್ರದಿಂದ ಚಂದ್ರನೂ, ವಿನತಾದೇವಿಯಿಂದ ಗರುಡನೂ, ಉದಯಪರ್ವತದಿಂದ ಸೂರ್ಯನೂ, ಹುಟ್ಟುವಂತೆ ತೇಜೋಮೂರ್ತಿಯಾದ ಯಮನ ಮಗನು ಜನಿಸಿದನು
ಪುಟ್ಟುವುದುಂ ಧರ್ಮಮುಮೊಡ
ವುಟ್ಟಿದುದೀತನೊಳೆ ಧರ್ಮನಂಶದೊಳೀತಂ|
ಪುಟ್ಟಿದನೆಂದಾ ಶಿಶುಗೊಸೆ
ದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರುಂ|| ೧೨೨ ||
ಪದ್ಯ-೧೨೨:ಪದವಿಭಾಗ-ಅರ್ಥ:ಪುಟ್ಟುವುದುಂ (ಹುಟ್ಟುತ್ತಲೂ) ಧರ್ಮಂ ಒಡವುಟ್ಟಿದುದು ಈತನೊಳೆ(ಈತನ ಜೊತೆಯಲ್ಲಿ ಧರ್ಮವೂ ಹುಟ್ಟಿತು) ಧರ್ಮನ ಅಂಶದೊಳು ಈತಂ ಪುಟ್ಟಿದನೆಂದು ಆ ಶಿಶುಗೆ ಒಸೆದು (ಒಸೆ-ಪ್ರೀತಿ)ಇಟ್ಟುದು ಮುನಿಸಮಿತಿ ಧರ್ಮಸುತನು ಎನೆ ಪೆಸರುಂ
ಪದ್ಯ-೧೨೨:ಅರ್ಥ:.ಕುಂತಿಗೆ ಇವನು ಹುಟ್ಟಲು ಇವನೊಡನೆಯೇ ಧರ್ಮವೂ ಹುಟ್ಟಿತು. ಯಮಧರ್ಮನ ಅಂಶದಿಂದ ಈತ ಹುಟ್ಟಿದ್ದಾನೆ ಎಂದು ಆ ಋಷಿಸಮೂಹವು ಆ ಮಗುವಿಗೆ ಪ್ರೀತಿಯಿಂದ ಧರ್ಮಸುತನೆಂಬ ಹೆಸರನ್ನಿಟ್ಟಿತು.
ವ|| ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಪೆಸರನು(ಹೆಸರನ್ನು) ಇಟ್ಟು ಪರಕೆಯಂ ಕೊಟ್ಟು
ವಚನ:ಅರ್ಥ:ಹಾಗೆ ಹೆಸರನಿಟ್ಟು ಋಷಿಗಳು ಹರಕೆಯನ್ನು ಕೊಟ್ಟರು;
ಕಂ|| ಸಂತಸದಿನಿರ್ದು ಮಕ್ಕಳ
ಸಂತತಿಗೀ ದೊರೆಯರಿನ್ನುಮಾಗದೊಡೆಂತುಂ|
ಸಂತಸಮೆನಗಿಲ್ಲೆಂದಾ
ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್|| ೧೨೩
ಪದ್ಯ-೧೨೩:ಪದವಿಭಾಗ-ಅರ್ಥ:ಸಂತಸದಿನಿರ್ದು(ಸಂತಸದಿಂ ಇರ್ದು) ಮಕ್ಕಳಸಂತತಿಗೆ ಈ ದೊರೆಯರು (ಸಮಾನರು) ಇನ್ನುಂ ಆಗದೊಡೆ (ಇನ್ನು ಯಾರೂ ಹುಟ್ಟದಿದ್ದರೆ)ಎಂತುಂ ಸಂತಸಂ ಎನಗೆ ಇಲ್ಲೆಂದು (ತನಗೆ ಅಷ್ಟೊಂದು ಸಂತಸ ಇನ್ನು ಬೇರೆ ಇಲ್ಲ ಎಂದು)ಆ ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲ್ ಇರ್ದಳ್,(ಮೊದಲಿನಂತೆ ಇನ್ನೂ ಮಗನನ್ನು ಬಯಸಿ ಇದ್ದಳು)
ಪದ್ಯ-೧೨೩:ಅರ್ಥ:ಕುಂತಿಯು ಸಂತೋಷದಿಂದಿದ್ದು, ಮಕ್ಕಳ ಸಂತತಿಗೆ ಇವನಿಗೆ ಸಮಾನರಾದ ಇನ್ನೂ ಇತರರ ಯಾರೂ ಹುಟ್ಟದಿದ್ದರೆ ತನಗೆ ಅಷ್ಟೊಂದು ಸಂತಸ ಬೇರೆ ಇನ್ನಿಲ್ಲ ಎಂದು ಎಂದು ಮೊದಲಿನಂತೆ ಇನ್ನೂ ಮಗನನ್ನು ಬಯಸಿ ಇದ್ದಳು.

ಭೀಮನ ಜನನ[ಸಂಪಾದಿಸಿ]

ಮಂತ್ರಾಕ್ಷರ ನಿಯಮದಿನಭಿ
ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ|
ಮಂತ್ರಂ ಪೇೞೆನೆ ಕುಡು ರಿಪು
ತಂತ್ರಕ್ಷಯಕರನನೆನಗೆ ಹಿತನಂ ಸುತನಂ|| ೧೨೪||
ಪದ್ಯ-೧೨೪:ಪದವಿಭಾಗ-ಅರ್ಥ:ಮಂತ್ರಾಕ್ಷರ ನಿಯಮದಿಂ ಅಭಿಮಂತ್ರಿಸಿ ಬರಿಸಿದೊಡೆ (ಪನಃ ಮಗನನ್ನು ಬಯಸಿ ವಾಯದೇವನನ್ನು ಕರೆದಾಗ) ವಾಯುದೇವಂ ಬಂದೇಂ ಮಂತ್ರಂ ಪೇೞೆನೆ (ವಾಯುವು ಬಂದು ಏನೆಂದು ಕೇಳಲು)ಕುಡು ರಿಪುತಂತ್ರಕ್ಷಯಕರನನು ಎನಗೆ ಹಿತನಂ ಸುತನಂ(ನನಗೆ ವೈರಿನಾಶಮಾಡವ ಮಗನನ್ನು ಕೊಡು ಎಂದಳು)
ಪದ್ಯ-೧೨೪:ಅರ್ಥ:ಮಂತ್ರಾಕ್ಷರವನ್ನು ಜಪಿಸುವ ವಿಧಿಯಿಂದ ವಾಯುದೇವನನ್ನು ಆಹ್ವಾನಿಸಲಾಗಿ ಅವನು ‘ಇಷ್ಟಾರ್ಥವೇನು ಹೇಳು’ ಎನ್ನಲು ‘ವೈರಿಸೈನ್ಯವನ್ನು ನಾಶಪಡಿಸುವ ಹಿತನಾದ ಮಗನನ್ನು ಕೊಡು’ ಎಂದಳು.
ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅದೇವಿರಿದು ಇತ್ತೆನು ಎಂದು (ಅದೇನು ಹಿರಿದು ದೊಡ್ಡದು ಇತ್ತೆನು -ಕೊಟ್ಟೆನು) ವಿಯತ್ತಳಕ್ಕೊಗೆದೊಡೆ(ವಿಯತ್ತಳಕ್ಕೆ-ಆಕಾಶಕ್ಕೆ ಒಗೆದೊಡೆ) ಆತನ ಅಂಶಂ ಅಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ (ಸೇರಿತು)
ವಚನ:ಅರ್ಥ:ವಾಯುದೇವನು ‘ಇದೇನು ಮಹಾ ದೊಡ್ಡದು. ಕೊಟ್ಟಿದ್ದೇನೆ’ ಎಂದು ಹೇಳಿ ಆಕಾಶಕ್ಕೆ ನೆಗೆಯಲು, ಆತನ ಅಂಶವು ಅವಳ ಗರ್ಭದಲ್ಲಿ ಚಂದ್ರಬಿಂಬದಂತೆ ಸೇರಿತು.
ಚಂ|| ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವಾನನೇಂ
ದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬ|
ಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ
ಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ|| ೧೨೫||
ಪದ್ಯ-೧೨೫:ಪದವಿಭಾಗ-ಅರ್ಥ:ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವು (ಹೊಟ್ಟೆಮೇಲಿನ ೩ನೆರಿ ಶತ್ರುಗಳನ್ನು ಕೆಡಿಸುವುವು) ಆನನೇಂದುವ ಕಡುವೆಳ್ಪು (ಆನನ ಇಂದು ಮುಖಚಂದ್ರ ಬೆಳ್ಳಗಾಯಿತು) ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು (ಮಗವಿನ ಕೀರ್ತಿಯ ಬೆಳಕು) ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನು ಒಳಕೊಂಡುದು (ನಡು ದಪ್ಪವಾಯಿತು,) ಪೊಂಗೊಡನಂ ತಮಾಳ ಪಲ್ಲವದೊಳೆ (ಹೊಂಗೆಯ ಚಿಗುರು) ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ(ಎದೆಯು ಚಿನ್ನದ ಕಳಸದಂತೆ ಹೊಂಗೆಯ ಚಿಗರಿಟ್ಟಂತೆ ಕಪ್ಪು ಮೊಲೆತೊಟ್ಟು ಹೊಂದಿತು.)
ಪದ್ಯ-೧೨೫:ಅರ್ಥ:ಅವಳ ಹೊಟ್ಟೆಯ ಮೇಲಿನ ಮೂರು ಮಡಿಕೆಯರೇಖೆಗಳು ವೈರಿರಾಜರ ನಾಶದ ಸೂಚಕವಾದುವು. ಅವಳ ಮುಖದಲ್ಲಿರುವ ಹೆಚ್ಚಾದ ಬಿಳುಪುಬಣ್ಣವು ಗರ್ಭದಲ್ಲಿರುವ ಮಗುವಿನ ಯಶಸ್ಸಿನ ಬಿಳಿಯ ಬಣ್ಣವು. ಮೊದಲು ಬಳುಕುತ್ತಿದ್ದ ನಡುವು ದಪ್ಪವಾಯಿತು. ಅವಳ ಮೊಲೆಯ ತೊಟ್ಟು ಚಿನ್ನದ ಕಲಶವನ್ನು ಹೊಂಗೆಯ ಚಿಗುರಿನಿಂದ ಮುಚ್ಚಿದಹಾಗೆ ಕಪ್ಪುಬಣ್ಣವನ್ನು ತಾಳಿತು.
ಕಂ|| ಆ ಸುದತಿಯ ಮೃದು ಪದ ವಿ
ನ್ಯಾಸಮುಮಂ ಶೇಷನಾನಲಾರದೆ ಸುಯ್ದಂ|
ಬೇಸಱಿನೆಂದೊಡೆ ಗರ್ಭದ
ಕೂಸಿನ ಬಳೆದಳವಿಯಳವನಳೆವರುಮೊಳರೇ|| ೧೨೬||
ಪದ್ಯ-೧೨೬:ಪದವಿಭಾಗ-ಅರ್ಥ:ಆ ಸುದತಿಯ ಮೃದು ಪದ ವಿನ್ಯಾಸಮುಮಂ ಶೇಷನು ಆನಲಾರದೆ ಸುಯ್ದಂ ಬೇಸಱಿಂ (ಕುಂತಿ ನೆಡೆದಾಗ ಭೂಮಿಯನ್ನು ಹೊತ್ತ ಶೇಷನು ಬಳಲಿದನು) (ನ) ಎಂದೊಡೆ ಗರ್ಭದಕೂಸಿನ ಬಳೆದ ಅಳವಿಯ ಅಳವನು (ಮಗವಿನ ಬೆಳದ ಪ್ರಮಾಣವನ್ನು) ಅಳೆವರುಮೊಳರೇ (ಅಳೆಯುವವರು ಉಂಟೇ?)
ಪದ್ಯ-೬೯:ಅರ್ಥ:ಸುಂದರವಾದ ದಂತಪಂಕ್ತಿಯಿಂದ ಕೂಡಿದ ಆ ಕುಂತಿಯು ಮೃದುವಾದ ಹೆಜ್ಜೆಯಿಡುವುದನ್ನು ಆದಿಶೇಷನು ಭಾರವನ್ನು ತಾಳಲಾರದೆ ಕಷ್ಟದಿಂದ ಉಸುಗುಟ್ಟಿದನು, ಎಂದರೆ ಗರ್ಭದಲ್ಲಿರುವ ಕೂಸು ಬೆಳೆದ ಅಳತೆಯ ಪ್ರಮಾಣವನ್ನು ಅಳೆಯುವವರೂ ಇದ್ದಾರೆಯೇ? (ಇಲ್ಲ ಎಂದು ಅರ್ಥ).
ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-
ವಚನ:ಪದವಿಭಾಗ-ಅರ್ಥ:ಅಂತು ಗರ್ಭನಿರ್ಭರ ಪ್ರದೇಶದೊಳು ಆರಾತಿಗಳ್ಗೆ ಅಂತಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ
ವಚನ:ಅರ್ಥ:ಹೀಗೆ ಗರ್ಭವು ಅಲ್ಲಿ ಬೆಳೆಯುತ್ತಿದ್ದಂತೆ ಶತ್ರುಗಳಿಗೆ ಅವಸಾನಕಾಲವು ಉಂಟಾಗುವ ಹಾಗೆ ಹೆರಿಗೆಯ ಕಾಲವು ಸಮೀಪಿಸಲು;
ಕಂ|| ಶುಭ ತಿಥಿ ಶುಭ ನಕ್ಷತ್ರಂ
ಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾ|
ಪ್ರಭುವೊಗೆದನುದಿತ ಕಾಯ
ಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರಂ|| ೧೨೭ ||
ಪದ್ಯ-೧೨೭:ಪದವಿಭಾಗ-ಅರ್ಥ:ಶುಭ ತಿಥಿ ಶುಭ ನಕ್ಷತ್ರಂ ಶುಭ ವಾರಂ ಶುಭ ಮುಹೂರ್ತಂ ಎನೆ ಗಣಕನು ಇಳಾಪ್ರಭು ಒಗೆದನು (ಭೂಮಿಗೆ ಪ್ರಭು ಹುಟ್ಟಿದನು) ಉದಿತ ಕಾಯ

ಪ್ರಭೆಯು(ಹುಟ್ಟಿದ ಶರೀರಕಾಂತಿ) ಒಗೆದಿರೆ ದಳಿತ (ಸೀಳಲ್ಪಟ್ಟ?- ನಾಶಕ)ಶತ್ರುಗೋತ್ರಂ (ಶತ್ರು ಸಂಹಾರಕ)ಪುತ್ರಂ.

ಪದ್ಯ-೧೨೭:ಅರ್ಥ:ಗಣಿಕರು/ಜೋತಿಷಲೆಕ್ಕಿಗರು ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತ ಎಂದು ಹೇಳುತ್ತಿರಲು ಜೊತೆಗೇ ಹುಟ್ಟಿದ ಶರೀರಕಾಂತಿಯು ಹರಡುತ್ತಿರಲು ಭೂಮಿಗೆ ಪ್ರಭುವೂ ಶತ್ರುಸಂಹಾರಕನೂ ಆದ ಮಗನು ಹುಟ್ಟಿದನು.
ಭೀಮಂ ಭಯಂಕರಂ ಪೆಱ
ತೇ ಮಾತೀ ಕೂಸಿನಂದವೀತನ ಪೆಸರುಂ|
ಭೀಮನೆ ಪೋಗೆನೆ ಮುನಿಜನ
ವೀ ಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ|| ೧೨೮||
ಪದ್ಯ-೧೨೮:ಪದವಿಭಾಗ-ಅರ್ಥ:;ಭೀಮಂ ಭಯಂಕರಂ ಪೆಱತೇ ಮಾತು ಈ ಕೂಸಿನಂದವು (ಮಗುವಿನ ರೀತಿ ಅತಿಭಯಂಕರವಾದುದು; ಬೇರೆಯ ಮಾತೇನು?) ಈತನ ಪೆಸರುಂ ಭೀಮನೆ ಪೋಗೆನೆ (ಈತನ ಹೆಸರು ಕೂಡ ಭೀಮನೆಂದೇ -ಹೊಗಲಿ) ಮುನಿಜನವು ಈ ಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ (ಶಿಶುವಿಗೆ ಹೆಸರು ಅನ್ವರ್ಥವಾಗಿಯೇ (ಅರ್ಥಕ್ಕೆ ಹೊಂದಿಕೊಳ್ಳುವ ಹಾಗೆ) 'ಭೀಮ' ಎಂದಾಯಿತು)
ಪದ್ಯ-೧೨೮:ಅರ್ಥ:೧೨೮. ಈ ಮಗುವಿನ ರೀತಿ ಅತಿಭಯಂಕರವಾದುದು. ಬೇರೆಯ ಮಾತೇನು? ಅವನ ಹೆಸರು ಕೂಡ ಭೀಮನೆಂದೇ ಆಗಲಿ ಎಂದು ಋಷಿಗಳು ಹೇಳಲು ಅದೇ ರೀತಿ ಆ ಶಿಶುವಿಗೆ ಹೆಸರು ಅನ್ವರ್ಥವಾಗಿಯೇ 'ಭೀಮ' ಎಂದಾಯಿತು

ದುರ್ಯೋಧನಾದಿ ಕೌರವರ ಜನನ[ಸಂಪಾದಿಸಿ]

ವ|| ಅಂತು ಭರತಕುಲತಿಲಕರಪ್ಪಿರ್ವರ್ಮಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ-
ವಚನ:ಪದವಿಭಾಗ-ಅರ್ಥ:ಅಂತು ಭರತಕುಲತಿಲಕರು ಅಪ್ಪ ಇರ್ವರ್ ಮಕ್ಕಳಂ ಪೆತ್ತು (ಇಬ್ಬರುಮಕ್ಕಳನ್ನು ಹೆತ್ತು) ಕೊಂತಿ ಸಂತಸದಂತ ಮನಂ ಐಯ್ದು ಇರ್ಪುದುಂ(ಸಂತಸದ ಮನಸ್ಸಿನಲ್ಲಿ ಇರಲು) ಅತ್ತ ಧೃತರಾಷ್ಟ್ರನ ಮಹಾದೇವಿಯಪ್ಪ (ಪತ್ನಿ) ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ (ಕೇಳಿ, ತನ್ನಗರ್ಭ ಜನನ ತಡವಾದುದಕ್ಕೆ ಕೋಪಗೊಂಡು) ಕಿಂಕಿರಿವೋಗಿ (ಬೇಸರವಾಗಿ)-
ವಚನ:ಅರ್ಥ:ಆ ಕಡೆ ಧೃತರಾಷ್ಟ್ರನ ಮಹಾರಾಣಿ ಗಾಂಧಾರಿಯು ಕೇಳಿ ತನ್ನ ಗರ್ಭವು ತಡವಾದುದಕ್ಕೆ ಕೋಪಿಸಿ ಕಿರಿಕಿರಿಯಾಗಿ-
ಕಂ|| ಸಂತತಿಗೆ ಪಿರಿಯ ಮಕ್ಕಳ
ನಾಂ ತಡೆಯದೆ ಪಡೆವೆನೆಂದೊಡೆನ್ನಿಂ ಮುನ್ನಂ|
ಕೊಂತಿಯೆ ಪಡೆದಳ್ ಗರ್ಭದ
ಚಿಂತೆಯದಿನ್ನೇವುದೆಂದು ಬಸಿಱಂ ಪೊಸೆದಳ್|| ೧೨೯
ಪದ್ಯ-೧೨೯:ಪದವಿಭಾಗ-ಅರ್ಥ:ಸಂತತಿಗೆ ಪಿರಿಯ ಮಕ್ಕಳ ನಾಂ ತಡೆಯದೆ ಪಡೆವೆನೆಂದೊಡೆ ಎನ್ನಿಂ ಮುನ್ನಂ (ನನಗಿಂತ ಮೊದಲೇ ಕುಂತಿಯು ಮಗು ಪಡೆದಳು) ಕೊಂತಿಯೆ ಪಡೆದಳ್; ಗರ್ಭದ ಚಿಂತೆಯದು ಇನ್ನು ಏವುದೆಂದು ಬಸಿಱಂ ಪೊಸೆದಳ್(ಇನ್ನು ಗರ್ಭದ ಚಿಂತೆ ಯಾವದಕ್ಕೆ? ಎಂದು ಹೊಟ್ಟೆಯನ್ನು ಹೊಸೆದಳು- ಕಿವುಚಿದಳು.)
ಪದ್ಯ-೧೨೯:ಅರ್ಥ:ವಂಶಕ್ಕೆ ಹಿರಿಯ ಮಕ್ಕಳನ್ನು ನಾನು ತಡಮಾಡದೆ ಮೊದಲು ಪಡೆಯುತ್ತೇನೆಂದಿದ್ದರೆ ನನಗಿಂತ ಮುಂಚೆ ಕುಂತಿಯೇ ಪಡೆದಳು. ಇನ್ನು ಮೇಲೆ ಗರ್ಭದ ಚಿಂತೆಯಾಕೆ, ಎಂದು ಹೊಟ್ಟೆಯನ್ನು ಕಿವುಚಿದಳು.
ಪೊಸೆದೊಡೆ ಪಾಲ್ಗಡಲಂ ಮಗು
ೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಮಂ|
ದಸದಳಮೊಗೆದಂತೊಗೆದುವು
ಬಸಿಱಿಂ ನೂಱೊಂದು ಪಿಂಡಮರುಣಾಕೀರ್ಣಂ|| ೧೩೦ ||
ಪದ್ಯ-೧೩೦:ಪದವಿಭಾಗ-ಅರ್ಥ:ಪೊಸೆದೊಡೆ ಪಾಲ್ಗಡಲಂ ಮಗುೞ್ದು ಅಸುರರ್ (ದಾನವರು)ಪೊಸೆದಲ್ಲಿ (ಗರ್ಭವನ್ನು ಕಿವುಚಿದಾಗ, ದಾನವರು ಹಾಲುಕಡಲು ಕಡೆದಾಗ) ಕಾಳಕೂಟಂ ಅಂಕುರಮ್ ಅಂದು ಅಸದಳಂ ಒಗೆದಂತೆ (ಅಂದು ಕಾಳಕೂಟ ವಿಷ ಹುಟ್ಟಿದಂತೆ) ಒಗೆದುವು (ಹುಟ್ಟಿದವು) ಬಸಿಱಿಂ ನೂಱೊಂದು ಪಿಂಡಂ ಅರುಣಾಕೀರ್ಣಂ (ನೂರಾ ಒಂದು ಭ್ರೂಣಗಳು ರಕ್ತದಿಂದ ತುಂಬಿದವು ಹುಟ್ಟಿದವು.)|
ಪದ್ಯ-೧೩೦:ಅರ್ಥ: ಹಾಲಿನಸಮುದ್ರವನ್ನು ದಾನವರು ಕಡೆಯಲು ಅಂದು ಕಾಲಕೂಟವೆಂಬ ವಿಷದ ಮೊಳಕೆ ಅತಿಶಯವಾಗಿ ಹುಟ್ಟಿದ ಹಾಗೆ ಗಾಂಧಾರಿಯ ಗರ್ಭದಿಂದ ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದುವು.
ವ|| ಅವಂ ಕಂಡು ಕಿನಿಸಿ ಪರ್ಚೆೞ್ದೆವೆಲ್ಲವಂ ಪೊಱಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ-
ವಚನ:ಪದವಿಭಾಗ-ಅರ್ಥ:ಅವಂ ಕಂಡು ಕಿನಿಸಿ (ಸಿಟ್ಟುಗೊಂದು) ಪರ್ಚೆೞವೆಲ್ಲವಂ ಪೊಱಗೆ ಬಿಸುಟು (ಚೂರೆಲ್ಲವನ್ನೂ ಹೊರಗೆ ಬಿಸಾಡಿ) ಬನ್ನಿಂ ಎಮಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ (ವ್ಯಾಸರು ಗಾಂಧಾರಿಯನ್ನು ಗದರಿಸಿ)-
ವಚನ:ಅರ್ಥ:ಅವನ್ನು ನೋಡಿ ಸಿಟ್ಟಿನಿಂದ, ಇವುಗಳೆಲ್ಲವನ್ನೂ ಹೊರಗೆ ಬಿಸಾಡಿಬನ್ನಿ ಎಂದು ಹೇಳಲು, ವ್ಯಾಸಮಹರ್ಷಿಯು ಬಂದು ಗಾಂಧಾರಿಯನ್ನು ಗದರಿಸಿ-
ಚಂ|| ಒದವುಗೆ ನಿನ್ನ ಸಂತತಿಗೆ ನೂರ್ವರುದಗ್ರ ಸುತರ್ಕಳೊಂದೆ ಗ
ರ್ಭದೊಳೆನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆಯೆಂದು ಮಾ|
ಣದೆ ಮುನಿ ನೂಱುಪಿಂಡಮುಮನಾಗಳೆ ತೀವಿದ ಕಮ್ಮನಪ್ಪ ತು
ಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ|| ೧೩೧
ಪದ್ಯ-೬೯:ಪದವಿಭಾಗ-ಅರ್ಥ:ಒದವುಗೆ (ಒದಗಲಿ- ಹುಟ್ಟಲಿ) ನಿನ್ನ ಸಂತತಿಗೆ ನೂರ್ವರು ಉದಗ್ರ (ಶ್ರೇಷ್ಠ) ಸುತರ್ಕಳ್ ಒಂದೆ ಗರ್ಭದೊಳು ಎನೆ (ಹೇಳಲು), ಕೆಮ್ಮನಿಂತು(ಸುಮ್ಮನೆ ,ವ್ಯರ್ಥವಾಗಿ) ಪೊಸೆದು ಇಕ್ಕಿದೆ ಪೊಲ್ಲದುಗೆಯ್ದೆ (ಕೆಟ್ಟದು, ಹಾಳುಮಾಡಿದೆ) ಎಂದು ಮಾಣದೆ (ಹಾಗೆಯೇ ಬಿಡದೆ) ಮುನಿ ನೂಱುಪಿಂಡಮುಮನು ಆಗಳೆ ತೀವಿದ ಕಮ್ಮನಪ್ಪ (ಸುವಾಸನೆಯ) ತುಪ್ಪದ ಕೊಡದೊಳ್ ಸಮಂತು( ತುಪ್ಪದ ಕೊಡದಲ್ಲಿ ಓರಣವಾಗಿ) ಮಡಗಿ ಇಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ (ಲೋಕಕ್ಕೆ ಅಚ್ಚರಿಯಾಗುವಂತಿತ್ತು)
ಪದ್ಯ-೬೯:ಅರ್ಥ:‘ನಿನ್ನ ಸಂತತಿಗೆ ಒಂದೇ ಗರ್ಭದಲ್ಲಿ ನೂರುಜನ ಶ್ರೇಷ್ಠರಾದ ಮಕ್ಕಳು ಹುಟ್ಟುವರು; ಹೀಗೆ ನಿಷ್ಪ್ರಯೋಜನವಾಗಿ ಹೀಗೆ ಹೊಟ್ಟೆಯನ್ನು ಕಿವುಚಿಬಿಟ್ಟೆ, ಕೆಟ್ಟಕೆಲಸವನ್ನು ಮಾಡಿದೆ’ ಎಂದು ಬಿಡದೆ ಆ ಋಷಿಯು ಆ ನೂರು ಭ್ರೂಣಗಳನ್ನು ಆಗಲೇ ಸುವಾಸನೆಯ ತುಪ್ಪದಿಂದ ತುಂಬಿದ ಕೊಡದಲ್ಲಿ ಸುರಕ್ಷಿತವಾಗಿ ಇಡಿಸಿದನು. ಅದು ಲೋಕಕ್ಕೆ ಅಚ್ಚರಿಯಾಗುವಂತಿತ್ತು.
ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಂ-
ವಚನ:ಪದವಿಭಾಗ-ಅರ್ಥ:ಅಂತು ನೂರ್ವರೊಳು ಒರ್ವನು ಅಗುರ್ಬು ಪರ್ಬಿ (ಭಯವು ಹಬ್ಬಿ)ಪರಕಲಿಸೆ (ಹರಡಲು) ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ (ಘೃತಘಟ-ತುಪ್ಪದ ಕೊಡ ವಿಘಟ-ಒಡೆದುಕೊಂಡು) ಪುಟ್ಟುವುದುಂ (ಹುಟ್ಟಿದನು)-
ವಚನ:ಅರ್ಥ:|| ಆ ನೂರು ಪಿಂಡಗಳಲ್ಲಿ ಒಬ್ಬನು - ಭಯವು ಹಬ್ಬಿ ಹರಡುವ ಹಾಗೆ ತುಂಬಿದ ಪ್ರಾಯವುಳ್ಳವನಾಗಿ ತುಪ್ಪದ ಕೊಡವನ್ನು (ಮಡಕೆ) ;ಒಡೆದುಕೊಂಡು ಹುಟ್ಟಿಬಂದನು.
ಕಂ|| ಪ್ರತಿಮೆಗಳೞ್ತುವು ಮೊೞಗಿದು
ದತಿ ರಭಸದೆ ಧಾತ್ರಿ ದೆಸೆಗಳುರಿದುವು ಭೂತ|
ಪ್ರತತಿಗಳಾಡಿದುವೊಳಱಿದು
ವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್|| ೧೩೨||
ಪದ್ಯ-೧೩೨:ಪದವಿಭಾಗ-ಅರ್ಥ:ಪ್ರತಿಮೆಗಳೞ್ತುವು (ಅರಮನೆಯ ವಿಗ್ರಹಗಳು ಅತ್ತವು), ಮೊೞಗಿದುದತಿ ರಭಸದೆ ಧಾತ್ರಿ (ಭೂಮಿ ದೊಡ್ಡದಾಗಿ ಗುಡುಗಿತು), ದೆಸೆಗಳುರಿದುವು (ದಿಕ್ಕುಗಳಲ್ಲಿ ಬೆಂಕಿ ತೋರಿತು), ಭೂತಪ್ರತತಿಗಳು ಆಡಿದುವು (ಪಿಶಾಚಿಗಳು ಕುಣಿದವು) ಒಳಱಿದುವು(ವದರಿದವು, ಕೂಗಿಕೊಂಡವು) ಅತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್(ಶಿವಾ ನಿವಹಂಗಳ್/ ನರಿಗಳು ಉತ್ತಮ ಸ್ಥಾನಗಳಲ್ಲಿ ಕೂಗಿದವು.)
ಪದ್ಯ-೬೯:ಅರ್ಥ:ಅರಮನೆಯ ವಿಗ್ರಹಗಳು ಅತ್ತವು, ಭೂಮಿ ದೊಡ್ಡದಾಗಿ ಗುಡುಗಿತು, ದಿಕ್ಕುಗಳಲ್ಲಿ ಬೆಂಕಿ ತೋರಿತು, ಪಿಶಾಚಿಗಳು ಕುಣಿದವು, ನರಿಗಳು ಉತ್ತಮ ಸ್ಥಾನಗಳಲ್ಲಿ ಕೂಗಿದವು.
ವ|| ಅಂತೊಗೆದನೇಕೋತ್ಪಾತಂಗಳಂ ಕಂಡು ಮುಂದಱಿವ ಚದುರ ವಿದುರನಿಂತೆಂದಂ-
ವಚನ:ಪದವಿಭಾಗ-ಅರ್ಥ: ಅಂತು ಒಗೆದ ಅನೇಕ ಉತ್ಪಾತಂಗಳಂ ಕಂಡು ಮುಂದಱಿವ (ಮುಂದಿನದನ್ನು ತಿಳಿಯುವ) ಚದುರ ವಿದುರನು ಇಂತೆಂದಂ-
ವಚನ:ಅರ್ಥ:ಹಾಗೆ ಉಂಟಾದ ಅನೇಕ ಉತ್ಪಾತ -ಅಪಶಕುನಗಳನ್ನು ಕಂಡು ಭವಿಷ್ಯಜ್ಞಾನಿಯೂ ಬುದ್ಧಿವಂತನೂ ಆದ ವಿದುರನು ಹೀಗೆ ಹೇಳಿದನು.
ಕಂ|| ಈತನೆ ನಮ್ಮ ಕುಲಕ್ಕಂ
ಕೇತು ದಲಾನಱಿವೆನಲ್ಲದಂದೇಕಿನಿತು|
ತ್ಪಾತಂ ತೋರ್ಪುವು ಬಿಸುಡುವು
ದೀತನ ಪೆಱಗುೞಿದ ಸುತರೆ ಸಂತತಿಗಪ್ಪರ್|| ೧೩೩
ಪದ್ಯ-೬೯:ಪದವಿಭಾಗ-ಅರ್ಥ:ಈತನೆ ನಮ್ಮ ಕುಲಕ್ಕಂ ಕೇತು (ಕೇತುವಿನಂತೆ ಕೆಡುಕಿ) ದಲ್ (ನಿಜ!) ಆನು ಅಱಿವೆನು (ಅರಿವೆನು) ಅಲ್ಲದಂದು (ಇಲ್ಲದಿದ್ದರೆ)ಏಕೆ ಇನಿತು ಉತ್ಪಾತಂ ತೋರ್ಪುವು, ಬಿಸುಡುವುದು ಈತನ, ಪೆಱಗೆ ಉೞದ (ಈತನ ನಂತರ ಉಳಿದ) ಸುತರೆ ಸಂತತಿಗೆ ಅಪ್ಪರ್ (ವಂಶಕ್ಕೆ ಆಗುವರು)
ಪದ್ಯ-೬೯:ಅರ್ಥ:ಈತನು ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ ಇದ್ದ ಹಾಗೆ; ಹಾಗಿಲ್ಲದಿದ್ದರೆ ಏಕೆ ಇಷ್ಟು ಕೆಟ್ಟ ನಿಮಿತ್ತಗಳಾಗುತ್ತಿದ್ದುವು. ಇವನನ್ನು ಹೊರಗೆ ಎಸೆಯುವುದು. ಇವನ ನಂತರ ಹುಟ್ಟಿದ (ನೂರು) ಮಕ್ಕಳೇ (ಅದರಲ್ಲಿ ಒಬ್ಬಳು ಮಗಳು) ವಂಶೋದ್ಧಾರಕರಾಗುತ್ತಾರೆ. ಎಂದನು ವಿದುರ.
ವ|| ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಮೇಗೆಯ್ದುಮೊಡಂಬಡದಿರ್ದೊಡುತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದಂ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಗಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು-
ವಚನ:ಪದವಿಭಾಗ-ಅರ್ಥ:ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಂ ಏಗೆಯ್ದುಂ ಒಡಂಬಡದಿರ್ದೊಡೆ ( ಪುತ್ರಮೋಹದ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ ಮಗುವನ್ನು ಎಸೆಯಲು ಒಪ್ಪದಿರಲು) ಉತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದಂ ಬಳೆಯಿಸಿ ಬದ್ದವಣಮಂ ಬಾಜಿಸಿ (ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ವಾದ್ಯವನ್ನು ಬಾರಿಸಿ,) ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಗಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು (ದುರ್ಯೋಧನನೆಂದು. ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಶಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು. )-
ವಚನ:ಅರ್ಥ:ವಿದುರನು ಮಗುವನ್ನು ಬಿಡಿ, ಎಂಬುದಾಗಿ ಹೇಳಿದರೂ ಪುತ್ರಮೋಹದ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ ಮಗುವನ್ನು ಎಸೆಯಲು ಒಪ್ಪದಿರಲು ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ವಾದ್ಯವನ್ನು ಬಾರಿಸಿ, ಮಂಗಳ ಹಾಡಿಸಿ ಕೂಸಿಗೆ ದುರ್ಯೋಧನನೆಂದು. ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಶಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು.

ಕಥಾನಾಯಕ ಅರ್ಜುನನ ಜನನ[ಸಂಪಾದಿಸಿ]

ಮ|| ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾ
ಲಕನಿನ್ನೊರ್ವನನುಗ್ರವೈರಿ ಮದವನ್ಮಾತಂಗ ಕುಂಭಾರ್ದ್ರ ಮೌ|
ಕ್ತಿಕ ಲಗ್ನೋಜ್ಜ ಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ
ಯಕ ಸಂಪೂರ್ಣ ಕಳಾಪ್ರವೀಣನನಿಳಾಭಾರ ಕ್ಷಮಾಕ್ಷೂಣನಂ|| ೧೩೪||
ಪದ್ಯ-೬೯:ಪದವಿಭಾಗ-ಅರ್ಥ:(ಇತ್ತಕಡೆ:-)ಸುಕಖ ಇರ್ಪ ಅನ್ನೆಗಂ (ಹಸ್ತಿನಾವತಿಯಲ್ಲಿ ಅವರು ಸುಖವಾಗಿದ್ದರು ಆಗ) ಇತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ (ಆತಪೋವನದಲ್ಲಿ) ದಿವ್ಯ ಬಾಲಕನು, ಇನ್ನೊರ್ವನನು ಉಗ್ರವೈರಿ ಮದವನ್ ಮಾತಂಗ (ಶತ್ರುಗಳೆಂಬ ಮದದ ಆನೆಗಳ) ಕುಂಭ ಆರ್ದ್ರ (ಕುಂಭಸ್ಥಳದಲ್ಲಿ ಒದ್ದೆಯಾದ) ಮೌಕ್ತಿಕ ಲಗ್ನ (ಮುತ್ತು ಅಂಟಿದ) ಉಜ್ಜಲ ಬಾಣನಂ(ಅಸಾಧಾರಣ ಬಿಲ್ಲುಗಾರನನ್ನು) ಪ್ರವಿಲಸತ್ (ಶೋಭಿಸುವ) ಗೀರ್ವಾಣ ದಾತವ್ಯ (ದೇವತೆಗಳಿಂದ ಕೊಟ್ಟವನು) ಸಾಯಕ ಸಂಪೂರ್ಣ ಕಳಾಪ್ರವೀಣನಂ (ಬಾಣವಿದ್ಯೆಯ ಸಂಪೂರ್ಣ ಪ್ರವೀಣನನ್ನು), ನಿಳಾಭಾರ ಕ್ಷಮ ಅಕ್ಷೂಣನಂ(ಭೂಮಿ ರಾಜ್ಯಬಾರ ಹೊರುವ ಸಮರ್ಥ, ಕೊರತೆಇರದ ಮಗನನ್ನು ಕುಂತಿ ಬಯಸಿದಳು )
ಪದ್ಯ-೬೯:ಅರ್ಥ:ಇತ್ತಕಡೆ:-ಅತ್ತ ಹಸ್ತಿನಾವತಿಯಲ್ಲಿ ಅವರು ಸುಖವಾಗಿದ್ದರು. ಆಗ ಇತ್ತ ಕುಂತಿ ಆತಪೋವನದಲ್ಲಿ ದಿವ್ಯ ಬಾಲಕ, ಇನ್ನೊಬ್ಬನನ್ನು, ಶತ್ರುಗಳೆಂಬ ಮದದ ಆನೆಗಳ ಕುಂಭ ಕುಂಭಸ್ಥಳದಲ್ಲಿ ಒದ್ದೆಯಾದ ಮುತ್ತು ಅಂಟಿದ, ಅಸಾಧಾರಣ ಬಿಲ್ಲುಗಾರನನ್ನು, ಶೋಭಿಸುವ ದೇವತೆಗಳಿಂದ ಕೊಟ್ಟವನೂ, ಬಾಣವಿದ್ಯೆಯ ಸಂಪೂರ್ಣ ಪ್ರವೀಣನನ್ನು, ಭೂಮಿ ರಾಜ್ಯಬಾರ ಹೊರುವ ಸಮರ್ಥ, ಕೊರತೆ ಇರದ ಮಗನನ್ನು ಕುಂತಿ ಬಯಸಿದಳು.

ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆನೆಂಬುದ್ಯೋಗಮನೆತ್ತಿಕೊಂಡು ಪಾಂಡುರಾಜನಂ ತಾನುಂ-

ವಚನ:ಪದವಿಭಾಗ-ಅರ್ಥ:ಅಂತು ಸರ್ವಲಕ್ಷಣ ಸಂಪೂರ್ಣನು ಅಪ್ಪ ಮಗನನು ಅಮೋಘಂ ಪಡೆವೆನು ಎಂಬ ಉದ್ಯೋಗಮನು ಎತ್ತಿಕೊಂಡು ಪಾಂಡುರಾಜನಂ ತಾನುಂ
ವಚನ:ಅರ್ಥ:ಹಾಗೆಯೇ ಸರ್ವಲಕ್ಷಣ ಸಂಪೂರ್ಣನೂ ಆದ ಮಗನನ್ನು ಶ್ರೇಷ್ಠ ರೀತಿಯಲ್ಲಿ ಪಡೆಯಬೇಕೆಂಬ ಕಾರ್ಯದಲ್ಲಿ ತೊಡಗಿ ಪಾಂಡುರಾಜನೂ ತಾನೂ
ಚಂ|| ಎಱಗಿಯುಮೊರ್ಮೆ ದಿವ್ಯ ಮುನಿಗಾರ್ತುಪವಾಸಮನಿರ್ದುಮೊರ್ಮೆ ಕೊ
ಯ್ದಱಿಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೊರ್ಮೆ ನೋಂತುಮೋ||
ದಱಿವರ ಪೇೞ್ದ ನೋಂಪಿಗಳನೊರ್ಮೆ ಪಲರ್ಮೆಯುಮಿಂತು ತಮ್ಮ ಮೆ
ಯ್ಮರೆವಿನಮಿರ್ವರುಂ ನಮೆದರೇನವರ್ಗಾದುದೊ ಪುತ್ರದೋಹಳಂ|| ೧೩೫||
ಪದ್ಯ-೧೩೫:ಪದವಿಭಾಗ-ಅರ್ಥ:ಎಱಗಿಯುಂ(ಎರಗಿ-ನಮಿಸಿ) ಒರ್ಮೆ ದಿವ್ಯ ಮುನಿಗೆ ಆರ್ತು(ಆಗಿ) ಉಪವಾಸಮನು ಇರ್ದುಂ, ಒರ್ಮೆ ಕೊಯ್ದ ಅಱಿಕೆಯ (-ಹೊಸ ಉತ್ತಮ) ಪೂಗಳಿಂ ಶಿವನನು ಅರ್ಚಿಸಿಯುಂ (ಪೂಜಿಸಿ) ಬಿಡದೆ ಒರ್ಮೆ ನೋಂತುಂ (ವ್ರತಹಿಡಿದು) ಓದಱಿವರ (ಶಾಸ್ತ್ರ ಓದಿದವರ) ಪೇೞ್ದ ನೋಂಪಿಗಳನು (ವ್ರತಗಳನ್ನು) ಒರ್ಮೆ ಪಲರ್ಮೆಯುಂ (ಹೀಗೆ ಹಲವುಸಲ) ಇಂತು ತಮ್ಮ ಮೆಯ್ಮರೆವಿನಂ ಇರ್ವರುಂ(ಮೈಮರೆಯುವಂತೆ ಇಬ್ಬರೂ) ನಮೆದರು (ನವೆದರು ಬಳಲಿದರು) ಏನು ಅವರ್ಗೆ ಆದುದೊ ಪುತ್ರದೋಹಳಂ (ಮಕ್ಕಳ ಬಯಕೆ).
ಪದ್ಯ-೧೩೫:ಅರ್ಥ:ಒಂದು/ಅನೇಕ ಸಲ ಮುನಿಗಳಿಗೆ ನಮಸ್ಕಾರ ಮಾಡಿಯೂ ಮತ್ತೊಂದು ಸಲ ಉಪವಾಸವಿದ್ದೂ ಬೇರೊಂದು ಸಲ ಪ್ರಸಿದ್ಧರಾದ ಹೂವುಗಳನ್ನು ಕೊಯ್ದು ಶಿವನನ್ನು ಆರಾಸಿಯೂ ಇನ್ನೊಂದು ಸಲ ಶಾಸ್ತ್ರಜ್ಞರು ಹೇಳಿದ ವ್ರತಗಳನ್ನು ನಿರಂತರ ನಡೆಯಿಸಿಯೂ ಒಂದು ಸಲವೂ ಅನೇಕಸಲವೂ ತಮ್ಮ ಶರೀರವು ಕೃಶವಾಗುವ ಹಾಗೆ ಇಬ್ಬರೂ ನಮೆದರು. ಅವರಿಗೆ ಮಕ್ಕಳನ್ನು ಪಡೆಯಬೇಕೆಂಬ ಆಶೆ ಹೆಚ್ಚಿನದಾಯಿತು.
ಆಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂ
ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದೇಕ ಪಾದದೊಳ್|
ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮ ಕ್ರಮಂಗಳಂ
ಸರಿಸಿದರಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ|| ೧೩೬||
ಪದ್ಯ-೧೩೬:ಪದವಿಭಾಗ-ಅರ್ಥ:ಆಲಸದೆ ಮಾಡಿ ಬೇಸಱದೆ ಸಾಲ್ಗುಂ (ಇದು ಸಾಕು) ಇದು ಎನ್ನದೆ, ಮೆಯ್ಸೊಗಕ್ಕೆ (ಮೈಸುಖಕ್ಕೆ)ಪಂಬಲಿಸದೆ, ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದು, ಏಕ ಪಾದದೊಳ್ಬಲಿದು ಉಪವಾಸದೊಳ್ ನಮೆದು (ಕಷ್ಟಪಟ್ಟು) ನೋಂಪಿಗಳೊಳ್ (ವ್ರತದಲ್ಲಿ)ನಿಯಮ ಕ್ರಮಂಗಳಂ ಸರಿಸಿದರು (ಸಲ್ಲಿಸಿದರು) ಅಂತು ನೋನದೆ (ವ್ರತ ಮಾಡದೆ)ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ!(ಪಡೆಯಲಾಗುವುದೇ? ಇಲ್ಲ.)
ಪದ್ಯ-೧೩೬:ಅರ್ಥ:. ಆಲಸ್ಯ ಮಾಡದೆ ವ್ರತಮಾಡಿ, ಬೇಸರಿಕೆಯಿಂದ ಇದು ಸಾಕು ಎನ್ನದೆ, ದೇಹಸುಖಕ್ಕೆ ಹಂಬಲಿಸದೆ, ನಿದ್ದೆಗೆಟ್ಟು, ದೀರ್ಘವಾದ ಜಾಗರಣೆಗಳಲ್ಲಿ ಸೇರಿಕೊಂಡು, ಒಂದು ಕಾಲಿನಲ್ಲಿ ನಿಂತುಕೊಂಡು, ಉಪವಾಸದಿಂದ ಕೃಶರಾಗಿ ವ್ರತಗಳಲ್ಲಿ ನಿಯಮವನ್ನು ತಪ್ಪದೆ ಪಾಲಿಸಿದರು. ಹಾಗೆ ವ್ರತಮಾಡದೆ ಗುಣಸಮುದ್ರನಾದ ಅರ್ಜುನನನ್ನು (ಆ ಬಿರುದಿನಿಂದ ಕೂಡಿದ ಅರಿಕೇಸರಿಯನ್ನು) ಪಡೆಯಲು ಸಾಧ್ಯವೇ? ಇಲ್ಲ.
ವ|| ಅಂತೊಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳೊಂದುದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು-
ವಚನ:ಪದವಿಭಾಗ-ಅರ್ಥ:ಅಂತು ಒಂದು ವರ್ಷಂಬರಂ ಭರಂಗೆಯ್ದು ನೋಂತು (ಒಂದು ವರ್ಷ ವ್ರತಮಾಡಿ) ಪೂರ್ವಕ್ರಮದೊಳು (ಹಿಂದೆ ಮಾಡಿದಂತೆ)ಒಂದುದಿವಸಂ ಉಪವಾಸಮನು ಇರ್ದು ಅಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನು (ಶುಭ್ರಬಟ್ಟೆಯನ್ನು) ಉಟ್ಟು ದರ್ಭಶಯನದೊಳಿರ್ದು-
ವಚನ:ಅರ್ಥ:|| ಹಾಗೆ ಒಂದು ವರ್ಷದವರೆಗೆ ಶ್ರದ್ಧೆಯಿಂದ ವ್ರತಮಾಡಿ ಹಿಂದಿನ ರೀತಿಯಲ್ಲಿಯೇ ಒಂದು ದಿವಸ ಉಪವಾಸವಿದ್ದು ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿ ಶುಭ್ರವಸ್ತ್ರವನ್ನುಟ್ಟು ದರ್ಭೆಯ ಹಾಸಿಗೆಯ ಮೇಲಿದ್ದು ವ್ರತವನ್ನು ಪಾಲಿಸಿದಳು.
ಮ|| ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಪೇನಮು
ಜ್ಜ ಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ|
ಗಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳೆಂಬೊಂದು ಪಂ
ಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ|| ೧೩೭||
ಪದ್ಯ-೧೩೭:ಪದವಿಭಾಗ-ಅರ್ಥ:ಸುಲಿಪಲ್ ಮಿಂಚಿನ ಗೊಂಚಲು (ಬಿಟ್ಟ ಹಲ್ಲು ಮಿಂಚಿನ ಗೊಂಚಲು )ಉಟ್ಟ ದುಗುಲಂ ಗಂಗಾನದೀ ಪೇನಮ್ (ನೊರೆ) ಉಜ್ಜಲ ಮುಕ್ತಾಭರಣಂ ತರತ್ತರಳ ತಾರ ಉದಾರ (ಹೊಳೆಯುವ ಮುತ್ತನಹಾರದ ಹೊಳೆಯುವ ಅಲುಗಾಟ) ಭಾ ಭಾರಂ ಅಂಗಲತಾ ಲಾಲಿತ ಸಾಂದ್ರ ಚಂದನರಸಂ (ಲಲಿತ ಅಂಗದಲ್ಲಿ ಚಂದನ ಪರಿಮಳ) ಬೆಳ್ದಿಂಗಳೆಂಬೊಂದು ಪಂಬಲ (ಕುಂತಿಯ ಬೆಳುತಿಂಗಳ ಬಯಕೆ ಅವಳ ಬಿಳಿ ಬಟ್ಟೆಯಲ್ಲಿ ತೃಪ್ತಿ ಹೋದಿ ಕಣ್ಣಿಗೆ ಒಪ್ಪಿತು) ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ|
ಪದ್ಯ-೧೩೭:ಅರ್ಥ:. ಕುಂತಿಯ ಬಿಟ್ಟ ಶುಭ್ರ ಹಲ್ಲು ಮಿಂಚಿನ ಗೊಂಚಲು, ಧರಿಸಿರುವ ರೇಷ್ಮೆಯ ವಸ್ತ್ರವೇ ಗಂಗಾನದಿಯ ಬಿಳಿಯ ನೊರೆ, ಚಂಚಲವಾಗಿ ಅಲುಗಾಡುತ್ತಿರುವ ಮುತ್ತಿನಹಾರದ ಕಾಂತಿಪ್ರಸರವೂ ಅಂಗಕ್ಕೆ ಲೇಪಿಸಿಕೊಂಡಿರುವ ಗಟ್ಟಿಯಾದ ಶ್ರೀಗಂಧದ ರಸವೂ ಬೆಳುದಿಂಗಳ ಬಯಕೆಗೆ ತೃಪ್ತಿನೀಡಿ (ಎಂಬ ಸಂದೇಹಕ್ಕೆ ಅವಕಾಶವಾಗಿರಲು?) ಆ ಕುಂತೀದೇವಿಯ ಬಿಳಿಯ ಬಣ್ಣದ ಅಲಂಕಾರವು ಕಣ್ಣಿಗೆ ಮನೋಹರವಾಗಿದ್ದಿತು.
ವ|| ಅಂತು ತನ್ನ ಕೈಕೊಂಡು ಬೆಳ್ಪಸದನದೊಳ್ ಕೀರ್ತಿಶ್ರೀಯಂ ವಾಕ್ಶ್ರೀಯುಮನನುಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸೆ-
ವಚನ:ಪದವಿಭಾಗ-ಅರ್ಥ:ಅಂತು ತನ್ನ ಕೈಕೊಂಡು ಬೆಳ್ಪಸದನದೊಳ್ (ಬೆಳ್ ವಸನದಲ್ಲಿ) ಕೀರ್ತಿಶ್ರೀಯಂ ವಾಕ್ಶ್ರೀಯುಂನು (ವಾಕ್ ಶ್ರೀ- ಸರಸ್ವತಿ) ಅನುಕರಿಸಿ ಮಂತ್ರಾಕ್ಷರ ನಿಯಮದೊಳು ಇಂದ್ರನಂ ಬರಿಸೆ (ಕರೆದು ಬರುವಂತೆಮಾಡಿದಳು)-
ವಚನ:ಅರ್ಥ:|| ಹಾಗೆ ತಾನು ಧರಿಸಿದ ಬಿಳಿಯ ಬಣ್ಣದ ಅಲಂಕಾರದಲ್ಲಿ ಯಶೋಲಕ್ಷ್ಮಿಯನ್ನೂ ವಾಕ್‌ ಲಕ್ಷ್ಮಿಯಾದ ಸರಸ್ವತಿಯನ್ನೂ ಅನುಕರಿಸಿ ಮಂತ್ರಾಕ್ಷರಗಳನ್ನು ಸಕ್ರಮವಾಗಿ ಪಠಿಸಿ ಇಂದ್ರನನ್ನು ಕರೆದು ಬರುವಂತೆಮಾಡಿದಳು.
ಕಂ|| ನೆನೆದ ಮನಂ ಪೆಱಗುೞಿದ
ತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ|
ತ್ತೆನೆ ನೆಯ್ದಿಲ್ಗೊಳನಲರ್ದ
ತ್ತೆನೆ ಕಣ್ಗಳ ಬಳಗಮಾಗಳಿಂದ್ರಂ ಬಂದಂ|| ೧೩೮||
ಪದ್ಯ-೧೩೮:ಪದವಿಭಾಗ-ಅರ್ಥ:ನೆನೆದ ಮನಂ ಪೆಱಗುೞದತ್ತೆನೆ(ಪೆರೆಗೆ -ಹೆಚ್ಚಿಗೆ, ೞದತ್ತು ಎನೆ -ಉಳಿದಿತ್ತು ಎನ್ನುವಾಗ; ನೆನೆಯುವುದು (ಇನ್ನೂ ಇತ್ತು ಎನ್ನವಷ್ಟರಲ್ಲಿ) ಬೆಳಗುವ ರತ್ನದೀಪ್ತಿ ಸುರಧನು (ಕಾಮನಬಿಲ್ಲು ಕಾಣಿಸಿತು ಎನ್ನಲು) ನೆಗೆದತ್ತು ಎನೆ ನೆಯ್ದಿಲ್ಗೊಳನಲರ್ದತ್ತೆನೆ (ನೆಯ್ದಿಲ್ -ನೈದಿಲೆ, ಕೊಳಂ -[ನ]- ಅಲರ್ದತ್ತು ಎನೆ- ಕಮಲದಕೊಳ ಅರಳಿದಂತೆ?) ಕಣ್ಗಳ ಬಳಗಂ ಆಗಳು ಇಂದ್ರಂ ಬಂದಂ (ಇಂದ್ರನಿಗೆ ಸಾವಿರ ಕಣ್ಣು ಎಂದು ನಂಬುಗೆ, ಅದನ್ನೆಲ್ಲಾ ಅರಳಿಸಿಕೊಂಡು ಇಂದ್ರ ಬಂದ)
ಪದ್ಯ-೧೩೮:ಅರ್ಥ:ಧ್ಯಾನಮಾಡಿದ ಮನಸ್ಸಿನಿಗಿಂತ ವೇಗವಾಗಿ ಎನ್ನುವ ಹಾಗೆಯೂ, ಪ್ರಕಾಶಮಾನವಾದ ರತ್ನಕಾಂತಿಯು ಮೋಡಿದ ಕಾಮನಬಿಲ್ಲಾಗಿ ತೋರಿತು ಎನ್ನುವ ಹಾಗೆಯೂ, ಅವನ ಸಾವಿರ ಕಣ್ಣುಗಳ ಸಮೂಹವು ನೆಯ್ದಿಲೆಯ ಕೊಳವು ಅರಳಿತು ಎನ್ನುವ ಹಾಗೆಯೂ, ಇರಲು ಆಗ ಇಂದ್ರನು ಬಂದನು.
ಬೆಸನೇನೇಗೆಯ್ವುದೊ ನಿನ
ಗೊಸೆದೇನಂ ಕುಡುವುದೆಂದೊಡೆಂದಳ್ ಮಕ್ಕಳ್|
ಒಸಗೆಯನೆನಗೀವುದು ನಿ
ನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ|| ೧೩೯||
ಪದ್ಯ-೧೪೦:ಪದವಿಭಾಗ-ಅರ್ಥ:ಇಂದ್ರನು ಬಂದವನು, ಬೆಸನೇನು (ಏನು ಕಾರ್ಯ?) ಏಗೆಯ್ವುದೊ(ಏನು ಮಾಢುವುದೊ?) ನಿನಗ ಒಸೆದು ಏನಂ ಕುಡುವುದು ಎಂದೊಡೆ, ಎಂದಳ್ ಮಕ್ಕಳ್ ಒಸಗೆಯನು ಎನಗೆ ಈವುದು (ಕೊಡುವುದು) ನಿನ್ನೆ ಎಸಕದ (ನಿನ್ನ ರೀತಿಯ ಶೂರ) ಮಸಕಮನೆ ಪೋಲ್ವ (ಶ್ರೇಷ್ಟತೆಯನ್ನು? ಹೊಂದಿದ) ಮಗನಂ ಮಘವಾ (ಇಂದ್ರನೇ)
ಪದ್ಯ-೧೪೦:ಅರ್ಥ:ಇಂದ್ರನು ಬಂದವನು, ಏನು ಕಾರ್ಯ? ಏನನ್ನು ಕೊಡಬೇಕು? ಎಂದು ಕೇಳಿದನು, ಇಂದ್ರನೇ ಮಕ್ಕಳ ನಲಿವನ್ನೂ ನಿನ್ನ ಪರಾಕ್ರಮಕ್ಕೆ ಸಮನಾದ ಶೌರ್ಯವುಳ್ಳ ಮಗನನ್ನು ಕೊಡಬೇಕು ಎಂದಳು.
ವ|| ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಶುಕ್ತಿಕಾಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನಿಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಆಕೆಯ ಬಗೆದ ಬಗೆಯೊಳು (ಮನಸ್ಸಿನಲ್ಲಿ ಯೋಚಿಸಿದ) ಒಡಂಬಡುವಂತೆ (ಒಪ್ಪುವಂತೆ) ಕುಲಗಿರಿಗಳ ಬಿಣ್ಪುಮಂ (ಭಾರ) ಧರಾತಳದ ತಿಣ್ಪುಮನು(ಭೂಮಿಯ ತೂಕ) ಆದಿತ್ಯನ ತೇಜದ ಅಗುಂತಿಯುಮಂ(ಅತಿಶಯತೆ), ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನ ಉದಾರಶಕ್ತಿಯುನು, ಈಶ್ವರನ ಪ್ರಭುಶಕ್ತಿಯುಮಂ, ಜವನ (ಯಮನ) ಬಲ್ಲಾಳ್ತನಮುಮಂ (ಶೌರ್ಯ) ಸಿಂಹದ ಕಲಿತನಮುಮನು ಅವರವರ ದೆಸೆಗಳಿಂ ತೆಗೆದು ಒಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ (ಗರ್ಬದ) ಶುಕ್ತಿಕಾಪುಟ (ಮುತ್ತಿಚಿಪ್ಪಿನ) ಉದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನು (ಆ ಎಲ್ಲ ಶಕ್ತಿ ತುಂಬಿದ ಮುತ್ತಿನಂಥ ಹನಿಯನ್ನು) ಇಂದ್ರಂ ಸಂಕ್ರಮಿಸಿ (ಬೆರಸಿ-ಸೇರಿಸಿ) ನಿಜನಿವಾಸಕ್ಕೆ ಪೋದನು ಅನ್ನೆಗಮಿತ್ತ ಕೊಂತಿಯುಂ ಅದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-
ವಚನ:ಅರ್ಥ:ಇಂದ್ರನು ಕುಂತಿಯು ಆಸೆಪಟ್ಟಂತೆಯೇ ಕುಲಪರ್ವತಗಳ ಭಾರವನ್ನೂ, ಭೂಮಿಯ ತೂಕವನ್ನೂ, ಸೂರ್ಯನ ತೇಜಸ್ಸಿನ ಆಧಿಕ್ಯವನ್ನೂ, ಚಂದ್ರನ ಕಾಂತಿಯನ್ನೂ, ಮನ್ಮಥನ ಸೌಭಾಗ್ಯವನ್ನೂ, ಕಲ್ಪವೃಕ್ಷದ ಔದಾರ್ಯವನ್ನೂ, ಈಶ್ವರನ ಪ್ರಭುಶಕ್ತಿಯನ್ನೂ, ಯಮನ ಶೌರ್ಯವನ್ನೂ, ಸಿಂಹದ ಪರಾಕ್ರಮವನ್ನೂ, ಅವು ಒಂದೊಂದರಿಂದಲೂ ತೆಗೆದು ಒಟ್ಟಿಗೆ ಶೇಖರಿಸಿ ಕುಂತಿಯ ಶ್ರೇಷ್ಠವಾದ ಮುತ್ತಿನ ಚಿಪ್ಪಿನಂತಿರುವ ಗರ್ಭದ ಒಳಗಡೆ ತನ್ನ ದಿವ್ಯಾಂಶವೆಂಬ ಮುತ್ತಿನ ಹನಿಯನ್ನು ಬೆರಸಿಟ್ಟು ಇಂದ್ರನು ತನ್ನ ನಿವಾಸಕ್ಕೆ ಹೋದನು.
ಚಂ|| ಕುಡಿವುದನೇೞುಮಂಬುಯುಮಂ ಕುಲಶೈಲಕುಳಂಗಳಂ ತಗು
ಳ್ದಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ|
ಪೊಡರ್ವುದನಂತೆ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂ
ಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್|| ೧೪೦||
ಪದ್ಯ-೦೦:ಪದವಿಭಾಗ-ಅರ್ಥ:ಕುಡಿವುದು ಏನು ಏೞು ಅಂಬುಯುಮಂ(ತಣು ಏಳು ಸಮುದ್ರವನ್ನು ಕುಡಿದಂತೆ) ಕುಲಶೈಲಕುಳಂಗಳಂ ತಗುಳ್ದು ಅಡರ್ವುದನು ( ಸಪ್ತಕುಲಪರ್ವತಗಳನ್ನು ತಾನು ಹತ್ತುವುದನ್ನೂ) ಒಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ|

ಪೊಡರ್ವುದನು (ಬಾಲಸೂರ್ಯನು ತನ್ನ ಮಡಿಲಲ್ಲಿ ಸಂತೋಷವಾಗಿ ಹೊರಳುವುದನ್ನೂ), ಅಂತೆ ದಿಕ್ಕರಿಗಳಂ ಅಂಬುಜಪತ್ರ ಪುಟಾಂಬುವಿಂ ಬೆಡಂಗಡಸಿರೆ ಮಜ್ಜನಣ ಅಂಬುಗಿಪುದಂ (ತಾವರೆಯ ಎಸಳಿನ ದೊನ್ನೆಇಂದ ಸ್ನಾನ ಮಾಡುವುದನ್ನೂ,) ಸತಿ ಕಂಡೊಸೆದಳ್ ನಿಶಾಂತದೊಳ್

ಪದ್ಯ-೦೦:ಅರ್ಥ:(ಕುಂತಿ ಕಂಡ ಕನಸುಗಳು)- ರಾತ್ರಿಯ ಕೊನೆಯ ಭಾಗದಲ್ಲಿ ತಾನು ಸಪ್ತಸಮುದ್ರಗಳನ್ನು ಕುಡಿಯುವುದನ್ನೂ, ಸಪ್ತಕುಲಪರ್ವತಗಳನ್ನು ಸೇರಿ ಹತ್ತುವುದನ್ನೂ ಬಾಲಸೂರ್ಯನು ತನ್ನ ಮಡಲಿನಲ್ಲಿ ಸಂತೋಷವಾಗಿ ಹೊರಳುವುದನ್ನೂ, ಹಾಗೆಯೇ ದಿಗ್ಗಜಗಳನ್ನೂ, ತಾವರೆಯ ಎಸಳಿನ ದೊನ್ನೆಇಂದ ಸ್ನಾನ ಮಾಡುವುದನ್ನೂ ಸ್ವಪ್ನದಲ್ಲಿ ಕಂಡು ಸಂತೋಷಪಟ್ಟಳು.
ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗ ಮಱಿಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-
ವಚನ:ಪದವಿಭಾಗ-ಅರ್ಥ:ಅಂತು ಕಂಡು ಮುನಿಕುಮಾರರು ಓದುವ ವೇದನಿನಾದದಿಂ ವಿಗತ ನಿದ್ರೆಯಾಗಿ (ಎಚ್ಚರಾಗಿ) ಪಾಂಡುರಾಜಂಗ ಅಲ್ಲಿಯ ಮುನಿಜನಂಗಳ್ಗಂ ಅಱಿಪಿದೊಡೆ ಅವರು ಆ ಕನಸುಗಳ್ಗೆ ಸಂತೋಷಂಬಟ್ಟು-
ವಚನ:ಅರ್ಥ:ಹಾಗೆ ಕನಸನ್ನು ಕಂಡ ನಂತರ ಋಷಿಕುಮಾರರು ಪಠಿಸುವ ವೇದಘೋಷದಿಂದ ಎಚ್ಚೆತ್ತು ಪಾಂಡುರಾಜನಿಗೂ, ಅಲ್ಲಿದ್ದ ಋಷಿಮುನಿಗಳಿಗೂ, ಆ ಕನಸಿನ ವಿಷಯವನ್ನು ತಿಳಿಸಿದಳು; ಅವರು ಆ ಕನಸುಗಳಿಗೆ ಸಂತೋಷಪಟ್ಟು ಅದರ ಅರ್ಥವನ್ನು ವಿವರಿಸಿದರು
ಚಂ|| ಕುಡಿವುದಱಂದಮಭ್ಧಿಗಳನಬ್ಧಿಪರೀತ ಮಹೀಶನಂ ತಗು
ಳ್ದಡರ್ವುದಱಿಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನೞ್ಕಱಿಂ|
ಪೊಡರ್ವುದಱಿಂದಮೆಂದುಮುದಿತೋದಿತನಂ ದಿಗಿಭಂಗಳೆಂಟುಮೊ
ಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ|| ೧೪೧
ಪದ್ಯ-೦೦:ಪದವಿಭಾಗ-ಅರ್ಥ:ಕುಡಿವುದಱಿಂದಂ ಅಭ್ಧಿಗಳನು ಅಬ್ಧಿಪರೀತ ಮಹೀಶನಂ (ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ) ತಗುಳ್ದು ಅಡರ್ವುದಱಿಂ ಕುಲಾದ್ರಿ ಪರಿವೇಷ್ಟಿತನಂ (ಪರ್ವತ ಹತ್ತುವುದು- ಅದನ್ನು ಬಳಸಿದ ರಾಜ್ಯವನ್ನೂ,) ತರುಣ ಅರ್ಕನು ಅೞ್ಕಱಿಂ (ಪ್ರೀತಿಯನ್ನೂ,) ಪೊಡರ್ವುದಱಿಂದಂ ಎಂದುಂ ಮತ್ತು ಉದಿತೋದಿತನಂ (ಏಕಪ್ರಕಾರದ ಅಭಿವೃದ್ಧಿಯನ್ನು) ದಿಕ್ (ಗ)ಇಭಂಗಳೆಂಟುಂ ಒಳ್ಪೊಡರಿಸಿ(ಮಂಗಳವನ್ನೂ,) ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ(ಸುಂದರ ಮಗನನ್ನೂ)
ಪದ್ಯ-೦೦:ಅರ್ಥ:ಕುಂತಿ ಕನಸು ಕಂಡ ಫಲಗಳು: ಸಪ್ತಸಮುದ್ರಗಳನ್ನು ಕುಡಿಯುವುದು- ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ; ಕುಲಪರ್ವತಗಳನ್ನು ಹತ್ತುವುದರಿಂದ ಕುಲಪರ್ವತಗಳಿಂದ ಸುತ್ತುವರಿಯಲ್ಪಟ್ಟ ರಾಜ್ಯವನ್ನುಳ್ಳವನನ್ನೂ, ಬಾಲಸೂರ್ಯನು ಮಡಿಲಿನಲ್ಲಿ ಹೊರಳಾಡುವುದರಿಂದ ಏಕಪ್ರಕಾರದ ಅಭಿವೃದ್ಧಿಯನ್ನು ಪಡೆಯುವನನ್ನೂ ಎಂಟು ದಿಗ್ಗಜಗಳನ್ನೂ ಶೋಭಯಿಂದ ಸ್ನಾನ ಮಾಡಿಸುವುದನ್ನು ಕಂಡುದರಿಂದ ಕಮಲದಂತೆ ಆಕರ್ಷಕವಾದ ಸೌಂದರ್ಯವುಳ್ಳ ಮಗನನ್ನು ಪಡೆಯವುದನ್ನೂ ತೋರಿಸುವುದು ಎಂದು ಮುನಿಗಳು ಹೇಳಿದರು.
ವ||ಇಂತಪ್ಪ ಮಗನಂ ನೀನಮೋಘಂ ಪಡೆವೆಯೆಂದು ಮುನಿಜನಂಗಳ್ ಪೇೞ್ವ ಶುಭ ಸ್ವಪ್ನಫಲಂಗಳೊಡನೊಡನೆ ಗರ್ಭಚಿಹ್ನಂಗಳುಂ ತೋರೆ ಪಗೆವರ ಪೆಂಡಿರ ಮೊಗಂಗಳುಮಾಕೆಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಮೊಡನೊಡನೆ ಕೆಟ್ಟುವಾಕೆಯ ಬಾಸೆಗಳುಂ ಪಗೆವರ ಬಾೞ್ವಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕೆಟ್ಟುವಾ ಸಮಯದೊಳ್
ವಚನ:ಪದವಿಭಾಗ-ಅರ್ಥ:ಇಂತಪ್ಪ ಮಗನಂ ನೀನು ಅಮೋಘಂ ಪಡೆವೆಯೆಂದು ಮುನಿಜನಂಗಳ್ ಪೇೞ್ವ ಶುಭ ಸ್ವಪ್ನಫಲಂಗಳ ಒಡನೊಡನೆ ಗರ್ಭಚಿಹ್ನಂಗಳುಂ ತೋರಿ ಪಗೆವರ ಪೆಂಡಿರ ಮೊಗಂಗಳುಂ (ಶತ್ರುಗಳ ಹೆಂಡಿರ ಮುಖಗಳು ಬಾಡಿದವು) ಆಕೆಯ ಕುಚಚೂಚುಕಂಗಳುಂ (ಮೊಲೆತೊಟ್ಟುಗಳು) ಒಡನೊಡನೆ ಕಂದಿದುವು ಆಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಂ ಒಡನೊಡನೆ ಕೆಟ್ಟುವು ಆಕೆಯ ಬಾಸೆಗಳುಂ ಪಗೆವರ (ಶತ್ರುಗಳು) ಬಾೞ್ವ ಆಸೆಗಳುಂ ಒಡನೊಡನೆ ಅಸಿಯವಾದುವು ಆಕೆಯ ಮಂದಗಮನಮುಂ ಪಗೆವರ ಮನಂಗಳುಂ ಒಡನೊಡನೆ ಅಲಸಿಕೆಯ ಕೈಕೊಂಡುವು ಆಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಂ ಒಡನೊಡನೆ ಕೆಟ್ಟುವು ಆ ಸಮಯದೊಳ್-
ವಚನ:ಅರ್ಥ:ಕುಂತಿಗೆ, ನೀನು ಮಗನನ್ನು ಪಡೆಯುತ್ತೀಯೆ ಎಂದು ಮುನಿಗಳು ಹೇಳಿದ ಶುಭಸ್ವಪ್ನಫಲಗಳ ಜೊತೆಯಲ್ಲಿಯೇ ಅವಳಿಗೆ ಗರ್ಭಚಿಹ್ನೆಗಳೂ ತೋರಲಾಗಿ ಶತ್ರುರಾಜರ ಸ್ತ್ರೀಯರ ಮುಖವೂ ಆಕೆಯ ಮೊಲೆಯ ತೊಟ್ಟುಗಳೂ ಒಟ್ಟಿಗೆ ಕಂದಿದುವು (ಕಪ್ಪಾದವು). ಆಕೆಯ ಹೊಟ್ಟೆಯ ಮೂರು ಮಡಿಪುಗಳೂ ಶತ್ರುರಾಜರ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳ ಜೊತೆ ಜೊತೆಯಲ್ಲಿಯೇ ನಾಶವಾದುವು. ಆಕೆಯ ಬಾಸೆಗಳೂ (ಹೊಕ್ಕುಳಿನಿಂದ ಎದೆಯವರೆಗಿರುವ ಕೂದಲಿನ ಸಾಲು) ಶತ್ರುಗಳ ಬಾಳುವ ಆಸೆಗಳೂ ಜೊತೆ ಜೊತೆಯಲ್ಲಿಯೇ ಕೃಶವಾದುವು. ಆಕೆಯ ಮಂದಗಮನವೂ ಶತ್ರುಗಳ ಮನಸ್ಸೂ ಜೊತೆ ಜೊತೆಯಲ್ಲಿಯೇ ಆಲಸ್ಯವನ್ನು ಹೊಂದಿದುವು.
ಉ|| ಉರ್ಚಿದ ಬಾಳೊಳಾತ್ಮ ಮುಖಬಿಂಬಮನೞ್ತಿಯೆ ನೋಡಲುಂ ಮನಂ
ಪೆರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲುಂ ಮನಂ|
ಬೆರ್ಚದೆ ಸಿಂಹ ಪೋತಕಮನೋವಲುಮಾಕೆಯ ದೋಹಳಂ ಕರಂ
ಪೆರ್ಚಿದುದಾ ಗುಣಾರ್ಣವನ ಮುಂದಣ ಬೀರಮನಂದೆ ತೋರ್ಪವೋಲ್|| ೧೪೨
ಪದ್ಯ-೦೦:ಪದವಿಭಾಗ-ಅರ್ಥ:ಉರ್ಚಿದ ಬಾಳೊಳು (ಒರೆಯಿದ ತೆಗೆದ ಕತ್ತಿ), ಆತ್ಮ ಮುಖಬಿಂಬಮನು ಅೞ್ತಿಯೆ ನೋಡಲುಂ ಮನಂ ಪೆರ್ಚಿ(ತನ್ನ ಮುಖವನ್ನು ನೋಡಿಕೊಂಡು ಸಂತಸ), ಧನುರ್ಲತಾ ಗುಣ ನಿನಾದಮನು ಆಲಿಸಿ ಕೇಳಲುಂ ಮನಂ ಬೆರ್ಚದೆ (ಬಿಲ್ಲಿನ ಠೇಂಕಾರದಿಂದ ಮನವು ಹೆದರದೆ) ಸಿಂಹ ಪೋತಕಮನು (ಮರಿಯನ್ನು)ಓವಲುಂ(ಸಾಕಲು) ಆಕೆಯ ದೋಹಳಂ(ಬಯಕೆ) ಕರಂ (ಬಹಳ) ಪೆರ್ಚಿದುದು (ಹೆಚ್ಚಿತು) ಆ ಗುಣಾರ್ಣವನ ಮುಂದಣ ಬೀರಮಂ (ಶೌರ್ಯವನ್ನು) ಅಂದೆ ತೋರ್ಪವೋಲ್
ಪದ್ಯ-೦೦:ಅರ್ಥ:(ಕುಂತಿಯ ಬಸಿರು ಬಯಕೆಗಳು) ಮುಂದಿನ ಗುಣಾರ್ಣವ ಅರ್ಜುನನ (ಅರಿಕೇಸರಿಗೆ ಹೋಲಿಕೆ) ಶೌರ್ಯವನ್ನು ಆ ದಿನವೇ ತೋರ್ಪಡಿಸುವಂತೆ ಕುಂತಿಯ ಬಸಿರ ಬಯಕೆಯು ಒರೆಗಳೆದ ಕತ್ತಿಯಲ್ಲಿ ತನ್ನ ಮುಖಮಂಡಲವನ್ನು ನೋಡಿಕೊಳ್ಳಳು ಸಂತಸ, ಉತ್ಸಾಹದಿಂದ ಬಿಲ್ಲಿನ ಟಂಕಾರ ಶಬ್ದವನ್ನು ಮನವಿಟ್ಟು ಕೇಳುವುದರೆ ಸ್ವಲ್ಪವೂ ಹೆದರದೆ ಇರುವುದು, ಸಿಂಹದ ಮರಿಯನ್ನು ತಂದುಸಾಕುವ ಬಯಕೆ ಇವು ಬಹಳ ಹೆಚ್ಚಿತು
ವ||ಮತ್ತಮೇೞುಂ ಸಮುದ್ರಂಗಳ ನೀರನೊಂದುಮಾಡಿ ಮೀಯಲುಂ ವೇಳಾ ವನ ಲತಾಗೃಹೋದರ ಪುಳಿನಸ್ಥಳ ಪರಿಸರಪ್ರದೇಶ ದೊಳ್ ತೊೞಲಲುಮೞ್ತಿಯಾಗೆ-
ವಚನ:ಪದವಿಭಾಗ-ಅರ್ಥ:ಮತ್ತಂ ಏೞುಂ ಸಮುದ್ರಂಗಳ ನೀರನು ಒಂದುಮಾಡಿ ಮೀಯಲುಂ (ಸ್ನಾನ ಮಾಡಲು) ವೇಳಾವನ (ಸಮುದ್ರತೀರದ ವನ) ಲತಾಗೃಹ ಓದರ (ಒಳಗೆ) ಪುಳಿನಸ್ಥಳ (ಮರಳಿನ)ಪರಿಸರ ಪ್ರದೇಶದೊಳ್ ತೊೞಲಲುಂ ಅೞ್ತಿಯಾಗೆ (ತಿರುಗಾಡಲು ಆಸೆಯಾಗಲ)-
ವಚನ:ಅರ್ಥ:ಕುಂತಿಗೆ, ಮತ್ತು ಏಳು ಸಮುದ್ರಗಳ ನೀರನ್ನು ಒಟ್ಟಿಗೆ ಸೇರಿಸಿ ಸ್ನಾನಮಾಡಲೂ ಸಮುದ್ರದ ಅಂಚಿನಲ್ಲಿರುವ ಕಾಡಿನಲ್ಲಿಯೂ ಬಳ್ಳಿಮಂಟಪಗಳ ಒಳಭಾಗದಲ್ಲಿಯೂ ಮರಳುದಿಣ್ಣೆಗಳ ಸುತ್ತಲೂ ತಿರುಗಾಡಲೂ ಆಸೆಯಾಯಿತು
ಕಂ|| ಬಳೆದ ನಿತಂಬದೆ ಕಾಂಚೀ
ಕಳಾಪಮಂ ಕಟ್ಟಲಣಮೆ ನೆರೆಯದಿದೆಂದ|
ಗ್ಗಳಿಸಿ ಕುಳಿಕೆಗಳಿನೇಂ ಕ
ಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ|| ೧೪೩
ಪದ್ಯ-೦೦:ಪದವಿಭಾಗ-ಅರ್ಥ:ಬಳೆದ ನಿತಂಬದೆ (ಸೊಂಟದ ಹಿಂಭಾಗದಲ್ಲಿ) ಕಾಂಚೀಕಳಾಪಮಂ (ಒಡ್ಯಾಣವನ್ನು) ಕಟ್ಟಲಣಮೆ(ಕಟ್ಟಲು ಆಗದು, ದಪ್ಪವಾಗಿದೆ) ನೆರೆಯದು (ಆಗದು)ಇದು ಎಂದು ಅಗ್ಗಳಿಸಿ (ಹೆಚ್ಚಿ)ಕುಳಿಕೆಗಳಿನೇಂ (ದಾರದ ಕುಳಿಕೆ ಸೇರಿಸಿದೆ) ಕಣ್ಗೊಳಿಸಿದುದೋ (ಕಣ್ಣಿಗೆ ಸೊಗಸಿತೋ) ಸುಭಗೆಯಾದ (ಸೌಭಾಗ್ಯವತಿ) ಸುದತಿಯ ಗರ್ಭಂ
ಪದ್ಯ-೦೦:ಅರ್ಥ:ಕುಂತಿಯ ಬೆಳೆದ ಪೃಷ್ಠಭಾಗದಿಂದ ಒಡ್ಯಾಣ/ಡಾಬನ್ನು ಕಟ್ಟಲೂ ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಆ ಸೌಭಾಗ್ಯಶಾಲಿನಿಯಾದ ಕುಂತಿಯ ಗರ್ಭವು ಬೆಳೆದು ನೂಲಿನ ಕುಳಿಕೆಗಳಿಂದ ಕಟ್ಟಿದುದು ಅತಿ ಮನೋಹರವಾಯಿತು.
ವ|| ಅಂತು ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬೆಳೆದು-
ವಚನ:ಪದವಿಭಾಗ-ಅರ್ಥ:ಅಂತು ತೆಕ್ಕನೆ ತೀವಿದ (ತುಂಬಿದ) ಮೆಯ್ಯೊಳು ಅಲರ್ದ (ಅರಳಿದ) ಸಂಪಗೆಯ ಅರಲಂತೆ (ಹೂವು) ಬೆಳರ್ತ(ಬಿಳಿ) ಬಣ್ಣಂ ಗುಣಾರ್ಣವಂಗೆ/ಅರ್ಜುನ/ ಅರಿಕೇಸರಿಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬೆಳೆದು-
ವಚನ:ಅರ್ಥ:|| ಗರ್ಭಿಣಿ ಕುಂತಿಯು ಹಾಗೆ ಪೂರ್ಣವಾಗಿ ತುಂಬಿಕೊಂಡ ಮೈಯಲ್ಲಿ ಅರಳಿದ ಸಂಪಗೆಯ ಹೂವಿನಂತೆ ಇತ್ತು. ಬಿಳುಪಾದ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆ ಸೊಗಸಾಗಿ ಬಳೆದಿತ್ತು.
ಕಂ|| ತುಡುಗೆಗಳೊಳ್ ಸರಿಗೆಯುಮಂ
ಕಡುವಿಣ್ಣಿತ್ತೆನಿಸಿ ನಡೆದುಮೋರಡಿಯನಣಂ|
ನಡೆಯಲುಮಾಱದೆ ಕೆಮ್ಮನೆ
ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ|| ೧೪೪ ||
ಪದ್ಯ-೦೦:ಪದವಿಭಾಗ-ಅರ್ಥ:ತುಡುಗೆಗಳೊಳ್ (ಆಭರಣಗಳು) ಸರಿಗೆಯುಮಂ (ಸರಿಗೆ- ಒಂಗೆಳೆಸರ) ಕಡು ವಿಣ್ಣಿತ್ತೆನಿಸಿ(ಬಹಳ ಬಾರ) ನಡೆದುಂ ಓರಡಿಯನು(ಒಂದು ಹೆಜ್ಜೆ) ಅಣಂ (ಆಗದು)| ನಡೆಯಲುಂ ಆಱದೆ (ಆಗದೆ) ಕೆಮ್ಮನೆ (ಸುಮ್ಮನೆ) ಬಿಡದೆ ಆರಯ್ವ ಅನಿತುಮ್ ( ಆರೈಕೆ, ಶುಶ್ರೂಷೆ)ಆಗೆ ಬಳೆದುದು ಗರ್ಭಂ
ಪದ್ಯ-೦೦:ಅರ್ಥ:ಅವಳು ಧರಿಸಿರುವ ಆಭರಣಗಳಲ್ಲಿ ಒಂದು ಸರಿಗೆಯೂ ಬಹುಭಾರ ಎನಿಸಿತು; ಓಡಾಡಲು ಒಂದು ಹೆಜ್ಜೆಯನ್ನೂ ಇಡಲಾರದೆ ಸುಮ್ಮನೆ ಆರೈಕೆ ಮಾಡತ್ತಿರಲು, ಗರ್ಭವು ಬೆಳೆಯಿತು
ವ|| ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳೆಲ್ಲಂ ತಂತಮ್ಮುಚ್ಚ ಸ್ಥಾನಂಗಳೊಳಿರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್-
ವಚನ:ಪದವಿಭಾಗ-ಅರ್ಥ:ಅಂತು ಆ ಬಳೆದ ಗರ್ಭದೊಳ್ ಸಂಪೂರ್ಣ ಪ್ರಸವಸಮಯಂ ದೊರೆಕೊಳೆ (ಬರಲು) ಗ್ರಹಂಗಳೆಲ್ಲಂ ತಂತಮ್ಮ ಉಚ್ಚ ಸ್ಥಾನಂಗಳೊಳು ಇರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ (ಗ್ರಹಸ್ಥಿತಿಯಲ್ಲಿ ಆರು ಉತ್ತಮ ಗುಣಗಳು)ಶುಭಲಗ್ನೋದಯದೊಳ್-
ವಚನ:ಅರ್ಥ:ಹಾಗೆ ಬೆಳೆದ ಗರ್ಭತುಂಬಿದ ಹೆರಿಗೆಯ ಕಾಲವು ಪ್ರಾಪ್ತವಾಗಲು ಗ್ರಹಗಳೆಲ್ಲ ತಮ್ಮ ತಮ್ಮ ಉಚ್ಚಸ್ಥಾನಗಳಲ್ಲಿದ್ದು ಲಗ್ನ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಂಶಾಂಶಗಳೆಂಬ ಷಡ್ವರ್ಗಗಳ ಸಿದ್ಧಿಯು ಆಗಿ ಶುಭಲಗ್ನ ಉದಯದಲ್ಲಿ-
ಕಂ|| ಭರತಕುಲ ಗಗನ ದಿನಕರ
ನರಾತಿಕುಳಕಮಳಹಿಮಕರಂ ಶಿಶು ತೇಜೋ|
ವಿರಚನೆಯುಂ ಕಾಂತಿಯುಮಾ
ವರಿಸಿರೆ ಗರ್ಭೋದಯಾದ್ರಿಯಿಂದುದಯಿಸಿದಂ|| ೧೪೫||
ಪದ್ಯ-೦೦:ಪದವಿಭಾಗ-ಅರ್ಥ:ಭರತಕುಲ ಗಗನ ದಿನಕರನು (ಸೂರ್ಯನು) ಆರಾತಿ ಕುಳಕಮಳ ಹಿಮಕರಂ( ಆತ್ರು ಕುಲ ಕಮಲಕ್ಕೆ ಚಂದ್ರನು) ಶಿಶು ತೇಜೋ ವಿರಚನೆಯುಂ ಕಾಂತಿಯುಂ ಆವರಿಸಿರೆ ಗರ್ಭ ಉದಯಾದ್ರಿಯಿಂದ ಉದಯಿಸಿದಂ (ಗರ್ಭವೆಂಬ ಉದಯ ಗಿರಿಯಲ್ಲಿ ಜನಿಸಿದನು)
ಪದ್ಯ-೦೦:ಅರ್ಥ:ಭರತವಂಶವೆಂಬ ಆಕಾಶಕ್ಕೆ ಸೂರ್ಯನೂ ಶತ್ರುಗಳ ವಂಶವೆಂಬ ತಾವರೆಗೆ ಚಂದ್ರನೂ ಆದ ಶಿಶುವು ಗರ್ಭವೆಂಬ ಉದಯ ಗಿರಿಯಲ್ಲಿ ಜನಿಸಿದನು.
ಉದಯಿಸುವುದುಮಮೃತಾಂಶುವಿ
ನುದಯದೊಳಂಭೋಧಿ ವೇಲೆ ಭೋರ್ಗರೆವವೊಲೊ|
ರ್ಮೊದಲೆಸೆದುವು ಘನಪಥದೊಳ್
ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್|| ೧೪೬||
ಪದ್ಯ-೧೪೬:ಪದವಿಭಾಗ-ಅರ್ಥ:ಉದಯಿಸುವುದುಂ (ಹುಟ್ಟುತ್ತಲು) ಅಮೃತಾಂಶುವಿನ (ಚಂದ್ರನ) ಉದಯದೊಳು ಅಂಭೋಧಿ ವೇಲೆ (ಸಮುದ್ರದ ಕರೆ) ಭೋರ್ಗರೆವವೊಲ್ ಒರ್ ಮೊದಲೆಸೆದುವು ಘನಪಥದೊಳ್ ತ್ರಿದಶಕರ ಆಹತಿಯಿನೊಡನೆ ಸುರದುಂದುಭಿಗಳ್
ಪದ್ಯ-೧೪೬:ಅರ್ಥ:ಕುಂತಿಗೆ ಮಗನು ಹುಟ್ಟುತ್ತಲು ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವತೆಗಳ ಮಂಗಳವಾದ್ಯಗಳು ಆ ಕೂಡಲೇ ಒಟ್ಟಿಗೆ ಮೊಳಗಿದವು
ವ|| ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ಮೊೞಗುವ ಸುರದುಂದುಭಿಗಳುಂ ಪರಸುವ (ಹರಸುವ) ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳು ಎಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು (ಮುತ್ತಿಕೊಂಡು)-
ವಚನ:ಅರ್ಥ:ಹಾಗೆ ಶಬ್ದಮಾಡುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡವು.
ಕಂ|| ದೇವರ ಪಗಳ ರವದೊಳ್
ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತ|
ದ್ದೇವ ವಿಮಾನಾವಳಿಯೊಳ್
ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ|| ೧೪೭ ||
ಪದ್ಯ-೧೪೭:ಪದವಿಭಾಗ-ಅರ್ಥ:ದೇವರ ಪರೆಗಳ (ಹರಸುವ)ರವದೊಳ್ದೇವರ ಸುರಿವ ಅರಲ (ಹೂವಯುಗಳ) ಸರಿಯ ಬೆಳ್ಸರಿಯೊಳ್ (ಬೀಳುವ ಬಿಳಿ ಧಾರೆಯಲ್ಲಿ) ತದ್ದೇವ ವಿಮಾನಾವಳಿಯೊಳ್ ತೀವಿದುದು(ತುಂಬಿತು) ಒರ್ಮೊದಲೆ (ಒಟ್ಟಿಗೆ) ಗಗನದಿಂ ಧರೆ ಮಧ್ಯಂ(ಭೂಮಿಯ ಮಧ್ಯಭಾಗವು)
ಪದ್ಯ-೧೪೮:ಅರ್ಥ:ದೇವತೆಗಳ ವಾದ್ಯಧ್ವನಿಯಿಂದ ಮತ್ತು ದೇವತೆಗಳು ಸುರಿಸುತ್ತಿರುವ ಹೂವುಗಳ ಪ್ರವಾಹದಿಂದಲೂ, ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು.
ವ|| ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-
ವಚನ:ಪದವಿಭಾಗ-ಅರ್ಥ:ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜ ಅಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಂ, ಏಕಾದಶರುದ್ರರುಂ, ದ್ವಾದಶ ಆದಿತ್ಯರುಂ, ಅಷ್ಟವಸುಗಳುಂ, ಅಶ್ವಿನೀ ದೇವರುಂ, ಮೊದಲಾಗೆ ಮೂವತ್ತಮೂರು ದೇವರುಂ ಇಂದ್ರಂ ಬೆರಸು (ಸೇರಿ) ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-
ವಚನ:ಅರ್ಥ:ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ಯ, ಪುಲಸ್ತ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನ್ಮೋತ್ಸವವನ್ನು ಮಾಡಿ,(ಮಾಡಿದರು.)
ಕಂ|| ನೋಡುವನಾ ಬ್ರಹ್ಮಂ ಮುಂ
ಡಾಡುವನಮರೇಂದ್ರನಿಂದ್ರನಚ್ಚರಸೆಯರೆ|
ೞ್ದಾಡುವರೆಂದೊಡೆ ಪೊಗೞಲ್ಕೇ
ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ|| ೧೪೮||
ಪದ್ಯ-೦೦:ಪದವಿಭಾಗ-ಅರ್ಥ:ನೋಡುವನು ಆ ಬ್ರಹ್ಮಂ, ಮುಂಡಾಡುವನು ಅಮರೇಂದ್ರನು, ಇಂದ್ರನ ಅಚ್ಚರಸೆಯರು ಎೞ್ದಾಡುವರು (ಮಗುವನ್ನು ಎತ್ತಿಕೊಳ್ಲಲು ಎಳೆಯುವರು) ಎಂದೊಡೆ ಪೊಗೞಲ್ಕೇವೇಡ (ಹೊಗಳಬೇಡವೇ?) ಗುಣಾರ್ಣವನ ಜನ್ಮದಿನದ ಬೆಡಂಗಂ (ಸೊಗಸನ್ನು)
ಪದ್ಯ-೦೦:ಅರ್ಥ:ಆ ಬ್ರಹ್ಮನೂ ಸಹ ಮಗುವನ್ನು ನೋಡುತ್ತಾನೆ; ದೇವೇಂದ್ರನು ಮುದ್ದಾಡುತ್ತಾನೆ, ಅಪ್ಸರಸ್ತ್ರೀಯರು ಮಗುವನ್ನು ಎತ್ತಿಕೊಳ್ಳಲು ಎಳೆದಾಡುವರು ಎಂದ ಮೇಲೆ ಗುಣಾರ್ಣವನ ಜನ್ಮೋತ್ಸವದ ಸೊಗಸನ್ನು ಹೊಗಳಬೇಡವೇ?
ವ|| ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳಿತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕ್ಷಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ
ವಚನ:ಪದವಿಭಾಗ-ಅರ್ಥ:ಅಂತು ಪಿರಿದುಂ ಒಸಗೆಯಂ ಮಾಡಿ, ದೇವಸಭೆಯುಂ ಬ್ರಹ್ಮಸಭೆಯುಂ ಒಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳು ಒಳಿತಂ ಸಕಲ ಭುವನ ಸಂಸ್ತೂಯಮಾನಂ, ಚಾಳುಕ್ಯವಂಶೋದ್ಭವಂ, ಶ್ರೀಮದರಿಕೇಸರಿ, ವಿಕ್ರಮಾರ್ಜುನನು, ಉದಾತ್ತನಾರಾಯಣಂ, ಪ್ರಚಂಡ ಮಾರ್ತಾಂಡನು, ಉದಾರಮಹೇಶ್ವರಂ, ಕದನತ್ರಿಣೇತ್ರಂ, ಮನುಜ ಮಾಂಧಾತಂ, ಪ್ರತಿಜ್ಞಾ ಗಾಂಗೇಯಂ, ಶೌಚಾಂಜನೇಯನು, ಅಕಳಂಕರಾಮಂ, ಸಾಹಸಭೀಮಂ, ಪ್ರತ್ಯಕ್ಷಜೀಮೂತವಾಹನಂ, ಜಗದೇಕಮಲ್ಲಂ, ಪರಸೈನ್ಯ ಭೈರವಂ, ಅತಿರಥ ಮಥನಂ, ವೈರಿಗಜಘಟಾವಿಘಟನಂ, ವಿದ್ವಿಷ್ಟ ವಿದ್ರಾವಣನು(ಶತ್ರುಗಳನ್ನು ಓಡುವಂತೆ ಮಾಡುವವನು), ಆರಾತಿ ಕಾಳಾನಳಂ, ರಿಪುಕುರಂಗಕಂಠೀರವಂ, ವಿಕ್ರಾಂತತುಂಗಂ, ಪರಾಕ್ರಮಧವಳಂ, ಸಮರೈಕಮೇರು, ಶರಣಾಗತ ಜಲನಿಧಿ ವಿನಯವಿಭೂಷಣಂ, ಮನುನಿದಾನನನೂನದಾನಿಲೋಕೈಕಕಲ್ಪದ್ರುಮಂ| ಜಲನಿ ವಿನಯವಿಭೂಷಣಂ, ಮನುನಿದಾನನನೂನದಾನಿ ಲೋಕೈಕ ಕಲ್ಪದ್ರುಮಂ ಗಜಾಗಮ, ರಾಜಪುತ್ರನಾರೂಢಸರ್ವಜ್ಞಂ, ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ, ವಿಬುಧ ವನಜವನ ಕಳಹಂಸಂ, ಸುರತಮಕರಧ್ವಜಂ, ಸಹಜಮನೋಜಂ, ಆಂಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪಂ ಸಂಸಾರಸಾರೋದಯಂ ಮಱುವಕ್ಕದಲ್ಲೞಂ ನೋಡುತ್ತೆ ಗೆಲ್ವಂ ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆ ಗಂಡಂ ಪ್ರಿಯಗಳ್ಳಂ ಗಣನಿ ಗುಣಾರ್ಣವಂ ಸಾಮಂತಚೂಡಾಮಣಿಯೆಂದಿಂತಿವು ಮೊದಲಾಗೆ ಪಲವುಂ ಅಷ್ಪೋತ್ತರಶತನಾಮಂಗಳನಿಟ್ಟು ವಿಶೇಷ ಆಶೀರ್ವಚನಂಗಳಿಂ ಪರಸಿ-
ವಚನ:ಅರ್ಥ:ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನುಳ್ಳ ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ಧದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು ಹೀಗೆ ನೂರಾಎಂಟು ಹೆಸರುಗಳನ್ನಿಟ್ಟು ವಿಶೇಷ ಆಶೀರ್ವಚನಗಳಿಂದ ಹರಸಿದರು. (ಇವೆಲ್ಲ ಕವಿಯ ಪೋಷಕ ಅರಿಕೇಸರಿಯ ಬಿರುದುಗಳು ಕಾವ್ಯದ ಅರ್ಜುನ ನಾಯಕನಿಗೆ ಹೋಲಿಸಿ ಹೇಳಿದವು.)
ಉ|| ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ಮೀಱಿದು
ದ್ವೃಪ್ತ ವಿರೋಧಿ ಸಾಧನಮನಾಹವದೊಳ್ ತಱದೊಟ್ಟು ವಿಶ್ವದಿ|
ಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ
ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ|| ೧೪೯||
ಪದ್ಯ-೦೦:ಪದವಿಭಾಗ-ಅರ್ಥ:ಸಪ್ತ ಸಮುದ್ರ ಮುದ್ರಿತ ಧರಾತಳಮಂ (ಏಳು ಸಮುದ್ರ ಗಡಿಯುಳ್ಳ ಭೂಮಿಯನ್ನು.) ಬೆಸಕೆಯ್ಸು (ವಶಪಡಿಸಿಕೊಂಡು,) ಮೀಱಿದ ಉದ್ವೃತ್ತ ವಿರೋಧಿ ಸಾಧನಮನು ಆಹವದೊಳ್ ತಱದೊಟ್ಟು (ಅರಸನ ಮಾತನ್ನು ಕೇಳದ ಗರ್ವಿಷ್ಠ ಶತ್ರುಗಳನ್ನು ಯುಧದ್ಧಲ್ಲಿ ಕತ್ತರಿಸಿ ರಾಶಿಹಾಕಿ,) ವಿಶ್ವದಿಗ್ವ್ಯಾಪ್ತ (ವಿಶ್ಚ+ ದಿಕ್+ ವ್ಯಾಪ್ತ ಎಲ್ಲಾಕಡೆ ವ್ಯಾಪಿಸಿದ) ಯಶೋವಿಳಾಸಿನಿಗೆ (ಯಶ+ ವಿಳಾಸಿನಿಗೆ ಕೀರ್ತಿವನಿತೆಗೆ) ವಲ್ಲಭನಾಗು (ಪತಿಯಾಗು.) ನಿರಂತರ ಸುಖವ್ಯಾಪ್ತಿಗೆ ನೀನೆ ಮೊತ್ತಮೊದಲಾಗು ಅರಿಕೇಸರಿ ಲೋಕಂ ಉಳ್ಳಿನಂ(ಅರಿಕೇಸರಿಯೇ, ಸದಾಕಾಲ ಲೋಕವಿರುವವರೆಗೂ, ಎಲ್ಲಾ ಬಗೆಯ ಸುಖಹೊಂದುವುದಕ್ಕೆ ನೀನೇ ಮೊದಲಿಗನಾಗು. ಎಂದು ದೇವತೆಗಳು ಹರಸಿದರು.).
ಪದ್ಯ-೦೦:ಅರ್ಥ:ಅರಿಕೇಸರಿಯೇ ನೀನು ಲೋಕವಿರುವವರೆಗೆ ಸದಾಕಾಲ ಏಳು ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಮಿಯನ್ನು ನಿನ್ನ ವಶಪಡಿಸಿಕೊಂಡು. ನಿನ್ನನ್ನು ಮಾತನ್ನು ಕೇಳದ ಗರ್ವಿಷ್ಠರಾದ ಶತ್ರುಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಕೀರ್ತಿವನಿತೆಗೆ ಪತಿಯಾಗಿ ನಿರಂತರವಾದ ಸುಖಭೋಗ ಹೊಂದುವುದಕ್ಕೆ ನೀನೆ ಮೊತ್ತಮೊದಲಿಗನಾಗು ಎಂದು ದೇವತೆಗಳು ಹರಿಸಿದರು

||ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪ್ರಥಮಾಶ್ವಾಸಂ ||

ಉದಯಿಸುವುದುಮಮೃತಾಂಶುವಿ
ನುದಯದೊಳಂಭೋಧಿ ವೇಲೆ ಭೋರ್ಗರೆವವೊಲೊ|
ರ್ಮೊದಲೆಸೆದುವು ಘನಪಥದೊಳ್
ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್|| ೧೪೬||
ಪದ್ಯ-೧೪೬:ಪದವಿಭಾಗ-ಅರ್ಥ:ಉದಯಿಸುವುದುಂ (ಹುಟ್ಟುತ್ತಲು) ಅಮೃತಾಂಶುವಿನ (ಚಂದ್ರನ) ಉದಯದೊಳು ಅಂಭೋಧಿ ವೇಲೆ (ಸಮುದ್ರದ ಕರೆ) ಭೋರ್ಗರೆವವೊಲ್ ಒರ್ ಮೊದಲೆಸೆದುವು ಘನಪಥದೊಳ್ ತ್ರಿದಶಕರ ಆಹತಿಯಿನೊಡನೆ ಸುರದುಂದುಭಿಗಳ್
ಪದ್ಯ-೧೪೬:ಅರ್ಥ:ಕುಂತಿಗೆ ಮಗನು ಹುಟ್ಟುತ್ತಲು ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವತೆಗಳ ಮಂಗಳವಾದ್ಯಗಳು ಆ ಕೂಡಲೇ ಒಟ್ಟಿಗೆ ಮೊಳಗಿದವು
ವ|| ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ಮೊೞಗುವ ಸುರದುಂದುಭಿಗಳುಂ ಪರಸುವ (ಹರಸುವ) ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳು ಎಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು (ಮುತ್ತಿಕೊಂಡು)-
ವಚನ:ಅರ್ಥ:ಹಾಗೆ ಶಬ್ದಮಾಡುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡವು.
ಕಂ|| ದೇವರ ಪಗಳ ರವದೊಳ್
ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತ|
ದ್ದೇವ ವಿಮಾನಾವಳಿಯೊಳ್
ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ|| ೧೪೭ ||
ಪದ್ಯ-೧೪೭:ಪದವಿಭಾಗ-ಅರ್ಥ:ದೇವರ ಪರೆಗಳ (ಹರಸುವ)ರವದೊಳ್ದೇವರ ಸುರಿವ ಅರಲ (ಹೂವಯುಗಳ) ಸರಿಯ ಬೆಳ್ಸರಿಯೊಳ್ (ಬೀಳುವ ಬಿಳಿ ಧಾರೆಯಲ್ಲಿ) ತದ್ದೇವ ವಿಮಾನಾವಳಿಯೊಳ್ ತೀವಿದುದು(ತುಂಬಿತು) ಒರ್ಮೊದಲೆ (ಒಟ್ಟಿಗೆ) ಗಗನದಿಂ ಧರೆ ಮಧ್ಯಂ(ಭೂಮಿಯ ಮಧ್ಯಭಾಗವು)
ಪದ್ಯ-೧೪೮:ಅರ್ಥ:ದೇವತೆಗಳ ವಾದ್ಯಧ್ವನಿಯಿಂದ ಮತ್ತು ದೇವತೆಗಳು ಸುರಿಸುತ್ತಿರುವ ಹೂವುಗಳ ಪ್ರವಾಹದಿಂದಲೂ, ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು.
ವ|| ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-
ವಚನ:ಪದವಿಭಾಗ-ಅರ್ಥ:ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜ ಅಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಂ, ಏಕಾದಶರುದ್ರರುಂ, ದ್ವಾದಶ ಆದಿತ್ಯರುಂ, ಅಷ್ಟವಸುಗಳುಂ, ಅಶ್ವಿನೀ ದೇವರುಂ, ಮೊದಲಾಗೆ ಮೂವತ್ತಮೂರು ದೇವರುಂ ಇಂದ್ರಂ ಬೆರಸು (ಸೇರಿ) ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-
ವಚನ:ಅರ್ಥ:ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ಯ, ಪುಲಸ್ತ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನ್ಮೋತ್ಸವವನ್ನು ಮಾಡಿ,(ಮಾಡಿದರು.)
ಕಂ|| ನೋಡುವನಾ ಬ್ರಹ್ಮಂ ಮುಂ
ಡಾಡುವನಮರೇಂದ್ರನಿಂದ್ರನಚ್ಚರಸೆಯರೆ|
ೞ್ದಾಡುವರೆಂದೊಡೆ ಪೊಗೞಲ್ಕೇ
ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ|| ೧೪೮||
ಪದ್ಯ-೦೦:ಪದವಿಭಾಗ-ಅರ್ಥ:ನೋಡುವನು ಆ ಬ್ರಹ್ಮಂ, ಮುಂಡಾಡುವನು ಅಮರೇಂದ್ರನು, ಇಂದ್ರನ ಅಚ್ಚರಸೆಯರು ಎೞ್ದಾಡುವರು (ಮಗುವನ್ನು ಎತ್ತಿಕೊಳ್ಲಲು ಎಳೆಯುವರು) ಎಂದೊಡೆ ಪೊಗೞಲ್ಕೇವೇಡ (ಹೊಗಳಬೇಡವೇ?) ಗುಣಾರ್ಣವನ ಜನ್ಮದಿನದ ಬೆಡಂಗಂ (ಸೊಗಸನ್ನು)
ಪದ್ಯ-೦೦:ಅರ್ಥ:ಆ ಬ್ರಹ್ಮನೂ ಸಹ ಮಗುವನ್ನು ನೋಡುತ್ತಾನೆ; ದೇವೇಂದ್ರನು ಮುದ್ದಾಡುತ್ತಾನೆ, ಅಪ್ಸರಸ್ತ್ರೀಯರು ಮಗುವನ್ನು ಎತ್ತಿಕೊಳ್ಳಲು ಎಳೆದಾಡುವರು ಎಂದ ಮೇಲೆ ಗುಣಾರ್ಣವನ ಜನ್ಮೋತ್ಸವದ ಸೊಗಸನ್ನು ಹೊಗಳಬೇಡವೇ?
ವ|| ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳಿತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕ್ಷಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ --**---
ವಚನ:ಪದವಿಭಾಗ-ಅರ್ಥ:ಅಂತು ಪಿರಿದುಂ ಒಸಗೆಯಂ ಮಾಡಿ, ದೇವಸಭೆಯುಂ ಬ್ರಹ್ಮಸಭೆಯುಂ ಒಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳು ಒಳಿತಂ ಸಕಲ ಭುವನ ಸಂಸ್ತೂಯಮಾನಂ, ಚಾಳುಕ್ಯವಂಶೋದ್ಭವಂ, ಶ್ರೀಮದರಿಕೇಸರಿ, ವಿಕ್ರಮಾರ್ಜುನನು, ಉದಾತ್ತನಾರಾಯಣಂ, ಪ್ರಚಂಡ ಮಾರ್ತಾಂಡನು, ಉದಾರಮಹೇಶ್ವರಂ, ಕದನತ್ರಿಣೇತ್ರಂ, ಮನುಜ ಮಾಂಧಾತಂ, ಪ್ರತಿಜ್ಞಾ ಗಾಂಗೇಯಂ, ಶೌಚಾಂಜನೇಯನು, ಅಕಳಂಕರಾಮಂ, ಸಾಹಸಭೀಮಂ, ಪ್ರತ್ಯಕ್ಷಜೀಮೂತವಾಹನಂ, ಜಗದೇಕಮಲ್ಲಂ, ಪರಸೈನ್ಯ ಭೈರವಂ, ಅತಿರಥ ಮಥನಂ, ವೈರಿಗಜಘಟಾವಿಘಟನಂ, ವಿದ್ವಿಷ್ಟ ವಿದ್ರಾವಣನು(ಶತ್ರುಗಳನ್ನು ಓಡುವಂತೆ ಮಾಡುವವನು), ಆರಾತಿ ಕಾಳಾನಳಂ, ರಿಪುಕುರಂಗಕಂಠೀರವಂ, ವಿಕ್ರಾಂತತುಂಗಂ, ಪರಾಕ್ರಮಧವಳಂ, ಸಮರೈಕಮೇರು, ಶರಣಾಗತ ಜಲನಿಧಿ ವಿನಯವಿಭೂಷಣಂ, ಮನುನಿದಾನನನೂನದಾನಿಲೋಕೈಕಕಲ್ಪದ್ರುಮಂ| ಜಲನಿ ವಿನಯವಿಭೂಷಣಂ, ಮನುನಿದಾನನನೂನದಾನಿ ಲೋಕೈಕ ಕಲ್ಪದ್ರುಮಂ ಗಜಾಗಮ, ರಾಜಪುತ್ರನಾರೂಢಸರ್ವಜ್ಞಂ, ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ, ವಿಬುಧ ವನಜವನ ಕಳಹಂಸಂ, ಸುರತಮಕರಧ್ವಜಂ, ಸಹಜಮನೋಜಂ, ಆಂಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪಂ ಸಂಸಾರಸಾರೋದಯಂ ಮಱುವಕ್ಕದಲ್ಲೞಂ ನೋಡುತ್ತೆ ಗೆಲ್ವಂ ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆ ಗಂಡಂ ಪ್ರಿಯಗಳ್ಳಂ ಗಣನಿ ಗುಣಾರ್ಣವಂ ಸಾಮಂತಚೂಡಾಮಣಿಯೆಂದಿಂತಿವು ಮೊದಲಾಗೆ ಪಲವುಂ ಅಷ್ಪೋತ್ತರಶತನಾಮಂಗಳನಿಟ್ಟು ವಿಶೇಷ ಆಶೀರ್ವಚನಂಗಳಿಂ ಪರಸಿ-
ವಚನ:ಅರ್ಥ:ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನುಳ್ಳ ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ಧದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು ಹೀಗೆ ನೂರಾಎಂಟು ಹೆಸರುಗಳನ್ನಿಟ್ಟು ವಿಶೇಷ ಆಶೀರ್ವಚನಗಳಿಂದ ಹರಸಿದರು. (ಇವೆಲ್ಲ ಕವಿಯ ಪೋಷಕ ಅರಿಕೇಸರಿಯ ಬಿರುದುಗಳು ಕಾವ್ಯದ ಅರ್ಜುನ ನಾಯಕನಿಗೆ ಹೋಲಿಸಿ ಹೇಳಿದವು.)
ಉ|| ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ಮೀಱಿದು
ದ್ವೃಪ್ತ ವಿರೋಧಿ ಸಾಧನಮನಾಹವದೊಳ್ ತಱಿದೊಟ್ಟು ವಿಶ್ವದಿ|
ಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ
ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ|| ೧೪೯||
ಪದ್ಯ-೦೦:ಪದವಿಭಾಗ-ಅರ್ಥ:ಸಪ್ತ ಸಮುದ್ರ ಮುದ್ರಿತ ಧರಾತಳಮಂ (ಏಳು ಸಮುದ್ರ ಗಡಿಯುಳ್ಳ ಭೂಮಿಯನ್ನು.) ಬೆಸಕೆಯ್ಸು (ವಶಪಡಿಸಿಕೊಂಡು,) ಮೀಱಿದ ಉದ್ವೃತ್ತ ವಿರೋಧಿ ಸಾಧನಮನು ಆಹವದೊಳ್ ತಱದೊಟ್ಟು (ಅರಸನ ಮಾತನ್ನು ಕೇಳದ ಗರ್ವಿಷ್ಠ ಶತ್ರುಗಳನ್ನು ಯುಧದ್ಧಲ್ಲಿ ಕತ್ತರಿಸಿ ರಾಶಿಹಾಕಿ,) ವಿಶ್ವದಿಗ್ವ್ಯಾಪ್ತ (ವಿಶ್ಚ+ ದಿಕ್+ ವ್ಯಾಪ್ತ ಎಲ್ಲಾಕಡೆ ವ್ಯಾಪಿಸಿದ) ಯಶೋವಿಳಾಸಿನಿಗೆ (ಯಶ+ ವಿಳಾಸಿನಿಗೆ ಕೀರ್ತಿವನಿತೆಗೆ) ವಲ್ಲಭನಾಗು (ಪತಿಯಾಗು.) ನಿರಂತರ ಸುಖವ್ಯಾಪ್ತಿಗೆ ನೀನೆ ಮೊತ್ತಮೊದಲಾಗು ಅರಿಕೇಸರಿ ಲೋಕಂ ಉಳ್ಳಿನಂ(ಅರಿಕೇಸರಿಯೇ, ಸದಾಕಾಲ ಲೋಕವಿರುವವರೆಗೂ, ಎಲ್ಲಾ ಬಗೆಯ ಸುಖಹೊಂದುವುದಕ್ಕೆ ನೀನೇ ಮೊದಲಿಗನಾಗು. ಎಂದು ದೇವತೆಗಳು ಹರಸಿದರು.).
ಪದ್ಯ-೦೦:ಅರ್ಥ:ಅರಿಕೇಸರಿಯೇ ನೀನು ಲೋಕವಿರುವವರೆಗೆ ಸದಾಕಾಲ ಏಳು ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಮಿಯನ್ನು ನಿನ್ನ ವಶಪಡಿಸಿಕೊಂಡು. ನಿನ್ನನ್ನು ಮಾತನ್ನು ಕೇಳದ ಗರ್ವಿಷ್ಠರಾದ ಶತ್ರುಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಕೀರ್ತಿವನಿತೆಗೆ ಪತಿಯಾಗಿ ನಿರಂತರವಾದ ಸುಖಭೋಗ ಹೊಂದುವುದಕ್ಕೆ ನೀನೆ ಮೊತ್ತಮೊದಲಿಗನಾಗು ಎಂದು ದೇವತೆಗಳು ಹರಿಸಿದರು.[೧][೨]
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಪ್ರಥಮಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಒಂದನೆಯ ಆಶ್ವಾಸವು||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಪಂಪ ಭಾರತ - ಗದ್ಯಾನುವಾದ (ಲೇಖಕರು- ಎನ್ .ಅನಂತರಂಗಾಚಾರ್) ಕೃಪೆ:- ಕಣಜ
  2. ಪಂಪ ಭಾರತ ಡಿ.ಎಲ್.ನರಸಿಂಹಾಚಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರ