ಪುಟ:ಅಜಿತ ಕುಮಾರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

"ಮಗು, ಅಜಿತ ! ಆ ಮರದ ಬುಡಕ್ಕೆ ಹೋಗು; ಅಲ್ಲಿ ಒಂದು ಹಾಸುಗಲ್ಲಿದೆ. ಅದನ್ನೆತ್ತಿ ಅದರ ಬುಡದಲ್ಲಿ ಇದ್ದುದನ್ನು ತೆಗೆದುಕೊಂಡು ಬಾ,” ಎಂದು ಹೇಳಿದಳು.

ತತ್‌ಕ್ಷಣವೇ ಅಜಿತನು ಚಿಕ್ಕ ಚಿಕ್ಕ ಗಿಡಗಳನ್ನು ಅತ್ತಿತ್ತ ತಳ್ಳುತ್ತ ಮುಂದುವರಿಸಿ, ಆ ಮರದ ಬುಡವನ್ನು ಸೇರಿದನು. ತಾಯಿಯು ಹೇಳಿದಂತೆ, ನಿಜವಾಗಿ ಅಲ್ಲಿಯೊಂದು ದೊಡ್ಡ ಹಾಸುಗಲ್ಲು ಇತ್ತು, ಎಷ್ಟೋ ವರುಷಗಳಿಂದ ಅದನ್ನು ಯಾರೂ ಅಲುಗಾಡಿಸಿದಂತೆ ಕಾಣಿಸಲಿಲ್ಲ. ಮರದ ಬೇರುಗಳು ಅದನ್ನು ಆವರಿಸಿಕೊಂಡಿದ್ದುವು ; ಮೇಲ್ಗಡೆ ಪಾಚಿ ಬೆಳೆದಿತ್ತು.

ಇದನ್ನು ಕಂಡೊಡನೆ ಅಜಿತನು ಸಂತೋಷದಿಂದ ಅದನ್ನು ಎತ್ತುವುದ ಕ್ಕೆಂದು ಕೈ ನೀಡಿದನು; ಚೆನ್ನಾಗಿ ಬಲದಿಂದ ಕುಲುಕಿದನು; ಅವನ ಮೈಯೆಲ್ಲವೂ ಬೆವರಿನಿಂದ ತೊಯಿದು ಹೋಯಿತು, ಆದರೂ ಆ ಕಲ್ಲು ಎಳ್ಳಿನಷ್ಟು ಅಲುಗಾಡಲಿಲ್ಲ, ಕೊನೆಗೆ ಆತನು ನಿರಾಶೆಯಿಂದ ತಾಯಿಯ ಬಳಿಗೆ ಬಂದು, "ಅಮ್ಮಾ, ಕಲ್ಲನ್ನು ಕಂಡೆನು. ಅದನ್ನು ಎತ್ತುವುದಕ್ಕೆ ಸಾಧ್ಯವಿಲ್ಲ, ನಾನು ಬಿಡು, ಈ ತಾರಾಂಗಣದವರು ಯಾರೂ ಎತ್ತಲಾರರು ಎಂದು ಎಣಿಸುತ್ತೇನೆ !” ಎಂದು ಹೇಳಿದನು.

ಇದನ್ನು ಕೇಳಿ ನೇತ್ರವತಿಯು ವ್ಯಸನದಿಂದ, “ ಇರಲಿ, ಚಿಂತೆ ಇಲ್ಲ ! ದೇವತೆಗಳು ತುಂಬ ಸಹನೆಯುಳ್ಳವರು. ಇದು ಆಗುವ ಸಮಯಕ್ಕೇನೆ ಆಗುವುದು, ಇನ್ನು ಬರುವ ವರುಷ ನೋಡೋಣ. ಈ ದೇಶದಲ್ಲಿ ಎಲ್ಲರಿಗಿಂತಲೂ ನೀನೆ ಬಲಿಷ್ಠನಾಗುವ ಕಾಲ ಬಂದೀತು !” ಎಂದು ಹೇಳಿ, ಅಜಿತನ ಕೈಯನ್ನು ಹಿಡಿದುಕೊಂಡು, ದೇವಸ್ಥಾನಕ್ಕೆ ಹೋಗಿ, ವರುಣನನ್ನು ಪ್ರಾರ್ಥಿಸಿ, ಮಗನೊಡನೆ ಮನೆಗೆ ಹೋದಳು.

ಒಂದು ವರುಷ ಕಾಲವಾದ ಮೇಲೆ ಅವಳು ಪುನಃ ಅಜಿತನನ್ನು ಆ ವರುಣನ ಗುಡಿಗೆ ಕರೆದುಕೊಂಡು ಬಂದು, ಕಲ್ಲನ್ನು ಎತ್ತುವುದಕ್ಕೆ ಹೇಳಿ