ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೦

ಜನಪದ ಕಥೆಗಳು

ಬರಮಾಡಿಕೊಂಡು, ಆಕೆಯ ತಲೆಯ ಮೇಲಿನ ಗಂಟು ಇಳುಹಿ ಒಳಗೊಯ್ದು ಇಟ್ಟಳು. ಮಗನೊಡನೆ ತಾಯಿ ಗಂಟು ಬಿಚ್ಚಿ ನೋಡಿದಳು. ಬೆಳ್ಳಿ ಬಂಗಾರ ರೂಪಾಯಿ ಎಲ್ಲಾ ಇದ್ದವು. ಹಿಗ್ಗಿನಿಂದ ಅತ್ತೆ ಸೊಸೆಂದನ್ನು ಕೇಳಿದಳು - "ಇದನ್ನೆಲ್ಲ ಎಲ್ಲಿಂದ ತಂದಿ ?"

"ನನ್ನನ್ನು ನೀವು ಸುಟ್ಟು ಬ೦ದಿರಿ. ಬಳಿಕ ನಾನು ಆ ಲೋಕಕ್ಕೆ ಹೋದೆ. ಅಲ್ಲಿ ಮಾವನವರು ಭೆಟ್ಟೆಯಾದರು. ಮನೆಯ ಕಡೆಯ ಸುದ್ದಿ ಕೇಳಿದರು. ಹೆಂಡತಿ, ಮಗ ಇನ್ನೂ ತಾಪತ್ರಯದಲ್ಲಿಯೇ ಇದ್ದಾರೆಂಬ ಸಂಗತಿ ಕೇಳಿ, ಇಷ್ಟೆಲ್ಲ ದ್ರವ್ಯವನ್ನು ಕೊಟ್ಟು ಕಳಿಸಿದ್ದಾರೆ. ಇದೆಲ್ಲ ತೀರಿದ ಬಳಿಕ ಮತ್ತೆ ಬರಲು ತಿಳಿಸಿದ್ದಾರೆ. ಅಲ್ಲಿ ನಾನು ಬಹಳ ಹೊತ್ತು ಇರಲಿಲ್ಲ. ಆದರೂ ಅಲ್ಲಿ ಬಹಳ ವೈಭವ, ಬಹಳ ಸಡಗರ" ಎಂದು ಸತ್ಯಸಂಗತಿಯೇ ಅನಿಸುವಂತೆ ಹೇಳಿದಳು.

"ಈ ಸಾರೆ ನಾನೇ ಹೋಗುತ್ತೇನೆ. ನೀನು ಮನೆಯಲ್ಲಿರು" ಎಂದಳು ಅತ್ತೆ.

"ಇಪ್ಪೆಲ್ಲ ತೀರಿದ ಬಳಿಕ ಹೋಗುವೆಯಂತೆ ಅತ್ತೆ."

"ಛೇ ಛೇ ! ಇದೆಲ್ಲ ತೀರುವುದು ಎಂದೋ ಏನೋ ! ಕೊಡುವೆನೆಂದ ಕ್ಷಣಕ್ಕೆ ಹೋಗಿಬಿಟ್ಟರಾಯ್ತು" ಎಂದು ನಿಶ್ಚಯಿಸಿ, ಅತ್ತೆ ಮಗನನ್ನು ಕರೆದು ಹೇಳಿದಳು-

"ಗಾಡಿಯಲ್ಲಿ ಕುಳ್ಳು-ಕಟ್ಟಿಗೆ ಹೇರು. ಮರೆಯದೆ ಕಡ್ಡಿಪೆಟ್ಟಿಗೆ ತಗೋ. ಸುಡುಗಾಡಿಗೆ ಬಂಡಿ ಹೊಡೆಗ ಸುಡುಗಾಡಿನಲ್ಲಿ ಕುಳಿತು, ಮಗ ಸೊಸೆಂಯಂದಿರ ಕೈಯಿಂದ ಕುಳ್ಳು-ಪೆಟ್ಟಿಗೆ ಒಟ್ಟಿಸಿಕೊಂಡು, ಮನೆಯ ಕಡೆಗೆ ಜೋಕೆ ಎಂದು ಹೇಳಿ, ಬೆಂಕಿ ಹಚ್ಚಲು ತಿಳಿಸಿದಳು.

ಬೆಂಕಿ ಹತ್ತಿಕೊಂಡಿತು. ಅತ್ತೆ ಸುಟ್ಟುಕೊಂಡು ಹೋದಳು. ಗಂಡಹೆಂಡಿರು ಮನೆಗೆ ಬಂದು, ಸುಖದಿಂದ ಬಾಳ್ವೆಮಾಡತೊಡಗಿದರು.

 •