ನಾನು ನೋಡಲಿಲ್ಲ. ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದ ಪಾಪನ ಅವಸ್ಥೆಗೆ ಕೊರಗಿ ಕೊರಗಿ ಒಂದು ವರ್ಷ ತುಂಬುವ ಮೊದಲೇ ನಮ್ಮ ತಂದೆ ಅಮ್ಮನ ದಾರಿ ಹಿಡಿದರು. ಮತ್ತೊಂದು ತಿಂಗಳಾಗುವುದರೊಳಗೆ ಮೊದಲೇ ಹೃದ್ರೋಗವಿದ್ದ ಚಿಕ್ಕಮ್ಮನೂ ಅವರನ್ನು ಹಿಂಬಾಲಿಸಿದರು. ಉಳಿದವರು ನಾನು-ಪಾಪ ; ಪಾಪ- ನಾನು.
"ಇದೇ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿಯ ಅನುಭವವೂ ಆಯ್ತು, ಪಾಪನ ಗಂಡನ ವಿಲಾಯತಿಯ ಓದಿಗಾಗಿ ಮಾಡಿಟ್ಟಿದ್ದ ಸಾಲಕ್ಕೆ ಮನೆ ಹೊಲ ಎಲ್ಲಾ ಮಾರಾಟವಾಯು, ಉಳಿದುದು ಅದೇ ವರ್ಷ ನನಗೆ ದೊರೆತ ಬಿ. ಎ. ಡಿಗ್ರಿ ಒಂದು. ನಮ್ಮ ತಂದೆ ಬದುಕಿದ್ದರೆ ನಾನು ಮೆಡಿಕಲ್ ಕಾಲೇಜು ಸೇರುತ್ತಿದ್ದೆ. ಅವರ ಮರಣದಿಂದ ಓದುವ ಹಂಬಲವೆಲ್ಲಾ ಮೂಲೆಪಾಲಾಗಿ ಹೊಟ್ಟೆಯ ಹಂಬಲ ಒಂದೇ ಉಳಿಯಿತು. ವಸಂತ, ನಮ್ಮ ಆ ಕಷ್ಟದ ದಿನಗಳಲ್ಲಿ ಪಾಪನ ಸಹನಶೀಲತೆ, ಶಾಂತತೆ, ತನ್ನನ್ನು ಮರೆತು ನನಗಾಗಿ ದುಡಿಯುವ ಅವಳ ಶಕ್ತಿ ಎಲ್ಲಾ ನೆನಸಿ: ಕೊಂಡರೆ ನನ್ನ ಪುಟ್ಟ ತಂಗಿಯಲ್ಲಿ ಇಷ್ಟೊಂದು ಶಕ್ತಿ ಎಲ್ಲಿ ಅಡಗಿತ್ತು ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ.
'ಕೆಟ್ಟ ಪಟ್ಟಣ ಸೇರು' ಎಂದು ಒಂದು ಗಾದೆಯಿದೆ ವಸಂತ, ನಾವೂ ಊರು ಬಿಡುವುದು ಎಂದು ನಿಶ್ಚಯಿಸಿದೆವ. ಆ ಊರಲ್ಲಿ ನಮ್ಮದೆನ್ನಲು ಏನೂ ಇರಲಿಲ್ಲ. ಮತ್ತೆ ಪಾಪನ ದುರವಸ್ಥೆಯನ್ನು ಕರಿತು ಟೀಕಿಸುವವರ ಮುಂದೆ ಯಾವ ಆಸೆಗಾಗಿ ಇರಬೇಕು ಹೇಳು. ನಮ್ಮೂರನ್ನು ಬಿಡುವ ಹಿಂದಿನ ದಿವಸ ಒಂದು ಸಾರ್ವಜನಿಕ ಸಭೆ ಕೂಡಿತ್ತು. ಇದ್ದ ಸ್ವಲ್ಪ ಸಾಮಾನುಗಳನ್ನೆಲ್ಲಾ ಕಟ್ಟಿ ಮುಗಿಸಿದ್ದ ನಾವು ಬೇರೇನೂ ಕೆಲಸವಿಲ್ಲದುದರಿಂದ ಆ ಸಭೆಗೆ ಹೋದೆವು. ಸಭೆ ಸುರು ವಾಗುವ ಮೊದಲು 'ವಂದೇ ಮಾತರಮ್ ' ಹಾಡಬೇಕಾದ ಹುಡುಗಿ ಅದೇಕೋ ಬಂದಿರಲಿಲ್ಲ. ನಮ್ಮ ಪಾಪಸಿಗೆ ಬಹಳ ಚೆನ್ನಾಗಿ ಹಾಡಲು ಬರುತ್ತೆ. ಅವಳ ಸಂಗೀತದ ಸಲುವಾಗಿ ನಮ್ಮ ತಂದೆ ಬಹಳ ಮುತುವರ್ಜಿ
ವಹಿಸಿದ್ದರು. ಅದು ಆ ಸಭೆಯು ಕಾರ್ಯದರ್ಶಿಗಳಿಗೆ ತಿಳಿದ ವಿಷಯ.