ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 237 ಕಣ್ಮುಚ್ಚಿ ನಿದ್ದೆ ಹೋಗುವವನಂತೆ ತದೇಕಚಿತ್ತನಾಗಿ ಹರಿಯ ಧ್ಯಾನವನ್ನು ಮಾಡುತ್ತ ಹರಿಯ ಮಂದಿರಕ್ಕೆ ಹೋಗಬೇಕೆಂದು ತಪ್ಪುಹೆಜ್ಜೆಗಳನ್ನು ಹಾಕುತ್ತ ಹರಿನಾಮ ಗಳನ್ನು ಪಠಿಸುತ್ತಿರಬೇಕೆಂದು ತೊದಲ್ನುಡಿಗಳನ್ನಾಡುತ್ತ ಸರಿಹುಡುಗರೊಡನೆ ಆಡುವುದಕ್ಕೆ ಹೋಗಿ ಚಂಡು ಬುಗುರಿ ಗಜ್ಜುಗ ಹಿಳ್ಳೆ ಮೊದಲಾದ ಆಟಗಳನ್ನು ಆಡದೆ ತುಲಸೀ ಗಿಡಗಳಿರುವೆಡೆಗೆ ಹೋಗಿ ಅವುಗಳ ಬುಡದಲ್ಲಿ ದಸಿಯಿಂದ ಕೆದಕಿ ಪಾತಿಕಟ್ಟಿ ನೀರನ್ನು ಹೊಯ್ತು ಭಕ್ತಿಯಿಂದ ಬಲಗೊಂಡು ನಮಸ್ಕರಿಸಿ ಅವುಗಳ ಮುಂಗಡೆಯಲ್ಲಿ ಸಂತೋಷದಿಂದ ಕುಣಿದಾಡುತ್ತ ಇನ್ನೂ ವಿವಿಧವಾದ ಹರಿಪ್ರಿಯ ಕೃತ್ಯಗಳನ್ನು ಮಾಡುತ್ತ ಆಹೋರಾತ್ರಿಗಳಲ್ಲೂ ಹರಿಧ್ಯಾನ ಹರಿಸ್ತುತಿ ಹರಿಕೀರ್ತನೆ ಹರಿವಂದನೆ ಹರಿದಾಸ್ಯ ಇತ್ಯಾದಿಗಳಿಂದ ಕೂಡಿ ಐದು ವರ್ಷಗಳ ವರೆಗೂ ಲೀಲೆ ಯಿಂದ ಬೆಳೆದನು. ತರುವಾಯ ಹಿರಣ್ಯಕಶಿಪುವು ಮಗನನ್ನು ನೋಡಿ ಸಂತೋಷದಿಂದ ಕೂಡಿದವ ನಾಗಿ ಬಾಚಿ ತಬ್ಬಿಕೊಂಡು ಮುದ್ದಿಸಿ--ಇವನಿಗೆ ಓದುಬರಹಗಳನ್ನು ಕಲಿಯುವ ಕಾಲವಾಯಿತೆಂದು ತಿಳಿದು ಕೂಡಲೆ ಕುಲಗುರುವಾದ ಶುಕ್ರಾಚಾರ್ಯನನ್ನು ಕರಿಸಿ ಶುಭದಿವಸ ಯುಕ್ತವಾದ ಸುಲಗ್ನದಲ್ಲಿ ಹಣ್ಣು ಕಾಯಿ ಕಜ್ಜಾಯ ಈ ಮೊದಲಾದು ವುಗಳ ರಾಶಿಯನ್ನು ಊರಗಲಕ್ಕೆ ಸುರಿಸಿ ಮಗನ ವಿದ್ಯಾಭ್ಯಾಸಕ್ಕೆ ನಿರ್ವಿಘ್ನತೆಯುಂ ಟಾಗುವುದಕ್ಕೋಸ್ಕರವಾಗಿ ಪ್ರಥಮದಲ್ಲಿ ವಿನಾಯಕನ ಪೂಜೆಯನ್ನು ಮಾಡಿಸಿ ಪ್ರಹ್ಲಾದನನ್ನು ಗುರುವಾದ ಶುಕ್ರಾಚಾರ್ಯನ ವಶಕ್ಕೊಪ್ಪಿಸಿ ಓದುವ ಮಠಕ್ಕೆ ಕಳುಹಿಸಿಕೊಟ್ಟನು. ಆ ಮೇಲೆ ಶುಕ್ರಾಚಾರ್ಯನು ಪ್ರಹ್ಲಾದನನ್ನು ಕರೆದುಕೊಂಡು ಹೋಗಿ ಅವನಿಗೆ ನೆಲದ ಮೇಲೆ ಓಂ ನಮಶ್ನಿವಾಯ ಎಂಬ ಅಕ್ಷರಗಳನ್ನು ಬರೆದು ಅವನ ಕೈ ಹಿಡಿದು ಕೊಂಡು ಹತ್ತೆಂಟುಸಾರಿ ತಿದ್ದಿಸಿ-ಎಲ್ಲಿ ? ನೋಡೋಣ ನಾನು ತೋರಿಸಿಕೊಟ್ಟಂತೆ ನೀನೇ ಬರೆ ಎಂದು ಹೇಳಲು, ಆಗಲಾ ಪ್ರಹ್ಲಾದನು-ಸರಸಿ ಜಾಂಬಕ ವಿಷ್ಣು ದಾಮೋದರ ಲಕ್ಷ್ಮೀಶ ಪೀತಾಂಬರ ಮುರಾರಿ ಶೌರಿ ಹರಿ ನಾರಾ ಯಣ ಅಸುರಾರಿ ಹೃಷಿಕೇಶ ಗರುಡವಾಹನ ಕೃಷ್ಣ ವಿಶ್ವಂಭರ ಜನಾರ್ದನ ಎಂದು ಬರೆದು ಸಂತೋಷದಿಂದ ಓದುತ್ತಿದ್ದನು. ಶುಕ್ರಾಚಾರ್ಯನು ಅದನ್ನು ಕಂಡು-- ಓಹೋ ! ಮೋಸವಾಯಿತು. ಇನ್ನೇನು ಗತಿ ? ಇವನ ತಂದೆಯಾದ ಹಿರಣ್ಯಕಶಿಪುವ ಇವನು ಹೀಗೆ ಬರೆಯುವುದನ್ನು ಕಂಡರೆ ಏನನ್ನೂ ಅರಿಯದ ಈ ಹುಡುಗನಿಗೆ ಮಾರಿ ಯಾದ ಗುರುವು ನನಗೆ ಮಹಾ ವಿರೋಧಿಯಾದ ವಿಷ್ಣು ವಿನ ಹೆಸರುಗಳನ್ನು ಬರೆದು ಓದಿಸಿ ಕಲಿಸಿದನು ಎಂದು ತಿಳಿದು ಕೊಂಡು ನನ್ನನ್ನು ಸುಮ್ಮನೆ ಬಿಡನು ಎಂದು ಯೋಚಿಸಿ ಭಯದಿಂದ ಕೂಡಿದವನಾಗಿ ಆ ಪ್ರಹ್ಲಾದನನ್ನು ಕುರಿತು-ಅಪ್ಪಾ ಮಗುವೇ, ಹೀಗೆ ಬರೆಯಬೇಡ, ನಾನು ಹೇಳಿದಂತೆ ಚೆನ್ನಾಗಿ ಬರೆ ಎಂದು ಗದರಿಸಿ ಹೇಳಲು ; ಪುನಃ ಪ್ರಹ್ಲಾದನು ಮರಳಿನ ಮೇಲೆ ಶಂಖಚಕ್ರಾದಿ ಧಾರಿಯಾದ ಹರಿಯ ಮೂರ್ತಿಯನ್ನು ಸ್ಪಷ್ಟವಾಗಿ ಬರೆದು ಭಕ್ತಿಯಿಂದ ನೋಡಿ ನಲಿಯುತ್ತ ವಂದಿಸುತ್ತ ಇರಲು ; ಆಗ ಶುಕ್ರಾಚಾರ್ಯನು-ಇದು ಬೇಡವೆಂದು ಹೇಳಿ ಮಗ್ಗಿ ಯನ್ನು